Updated News From Kaup

ಕಾಪು : ಕುತ್ಯಾರು, ಮೂಡಬೆಟ್ಟುವಿನಲ್ಲಿ ಮರ ಬಿದ್ದು ಹಾನಿ ; ತಹಶಿಲ್ದಾರ್ ಡಾ. ಪ್ರತಿಭಾ ಆರ್. ಭೇಟಿ

Thumbnail
Posted On: 16 Jul 2024, 08:35 PM

ಕಾಪು : ತಾಲೂಕಿನಲ್ಲಿ ಮಳೆ ಗಾಳಿಗೆ ಕುತ್ಯಾರು ಗ್ರಾಮದಲ್ಲಿ ಮನೆಯೊಂದಕ್ಕೆ ಮತ್ತು ಮೂಡಬೆಟ್ಟು ಗ್ರಾಮದಲ್ಲಿ ರಸ್ತೆಗೆ ಮರ ಬಿದ್ದು ತೊಂದರೆಯಾಗಿದ್ದು ತಾಲೂಕು ಆಡಳಿತ ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸಿದೆ. ಕುತ್ಯಾರು ಗ್ರಾಮದ ವಾಮನ ಆಚಾರ್ಯ ಇವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿ ಆಗಿದ್ದು, ತಹಶಿಲ್ದಾರ್ ಪ್ರತಿಭಾ ಆರ್ ರವರು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡುವ ಭರವಸೆ ನೀಡಿರುತ್ತಾರೆ. ಮೂಡಬೆಟ್ಟು ಗ್ರಾಮದ ಕಲ್ತಟ ಎಂಬಲ್ಲಿ ರಸ್ತೆಗೆ ಮರ ಬಿದ್ದು ಓಡಾಟ ಬಂದ್ ಆಗಿ, ಮಳೆ ಗಾಳಿಗೆ ಮರ ಮತ್ತು ಎಲೆಕ್ಟ್ರಿಕ್ ಕಂಬ ರಸ್ತೆಗೆ ಉರುಳಿ ಬಿದ್ದು ಸಾರ್ವಜನಿಕರಿಗೆ ತೊಂದರೆ ಆಗಿತ್ತು. ತಹಶಿಲ್ದಾರ್ ಡಾ.ಪ್ರತಿಭಾ ಆರ್ ತಕ್ಷಣವೇ JCB ತರಿಸಿ ಮರ ಮತ್ತು ಕಂಬವನ್ನು ತೆರವುಗೊಳಿಸಿರುತ್ತಾರೆ.

ಶಿರ್ವ : ಬಂಟಕಲ್ ಇಂಜಿನಿಯರಿಂಗ್ ಕಾಲೇಜಿಗೆ "ಹ್ಯಾಕಥಾನ್"ನಲ್ಲಿ ಪ್ರಶಸ್ತಿ

Thumbnail
Posted On: 16 Jul 2024, 11:46 AM

ಶಿರ್ವ : ಎ. ಜೆ. ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಐಇಇಇ (IEEE) ವಿದ್ಯಾರ್ಥಿ ಘಟಕವು ಜುಲೈ 13ರಂದು ಆಯೋಜಿಸಿದ್ದ “ಸಂಕಲ್ಪಾ 2024” (8 ಗಂಟೆಗಳ ಹ್ಯಾಕಥಾನ್)ದಲ್ಲಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೂರನೇ ವರ್ಷದ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಶೀನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳಾದ ಪ್ರಥಮ್ ಎಲ್ ಕಾಮತ್, ರಾಹುಲ್ ಮೆಂಡನ್, ಅಕ್ಷಯ್ ನಾಯಕ್ ಭಾಗವಹಿಸಿ ಪ್ರಥಮ ಸ್ಥಾನಗಳಿಸಿರುತ್ತಾರೆ. ಈ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ಇಂಜಿನಿಯರಿಂಗ್ ಕಾಲೇಜಿನ ಒಟ್ಟು 36 ತಂಡಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿರುತ್ತಾರೆ.

ಉಡುಪಿ : ಮನೆಯೇ ಗ್ರಂಥಾಲಯ ಸುವರ್ಣ ಸಂಭ್ರಮ- ಗಾಂಧಿ ಆಸ್ಪತ್ರೆಯಲ್ಲಿ ಸುಸಜ್ಜಿತ ಗ್ರಂಥಾಲಯ

Thumbnail
Posted On: 16 Jul 2024, 11:12 AM

ಉಡುಪಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ ನಡೆಯುತ್ತಿರುವ ವಿನೂತನ ಕಾರ್ಯಕ್ರಮ "ಮನೆಯೇ ಗ್ರಂಥಾಲಯ" ಇದರ ಸುವರ್ಣ ಸಂಭ್ರಮವು ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ನಡೆಯಿತು. ಕನ್ನಡದ ಪ್ರಸಿದ್ಧ ವಿಮರ್ಶಕ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡ್ಕ ಅವರು ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ ಅವರಿಗೆ ಪುಸ್ತಕಗಳನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಗ್ರಂಥಾಲಯ ಮಾಡುವ ಮೂಲಕ ರೋಗಿಗಳ ಸ್ವಸ್ಥ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ರೋಗಿಗಳ ಮನಸ್ಥಿತಿಗೆ ಅನುಗುಣವಾಗಿ ವಿವಿಧ ರೀತಿಯ ಆರೋಗ್ಯಕ್ಕೆ, ಸಮಾಜಕ್ಕೆ, ಪರಿಸರಕ್ಕೆ ಸಂಬಂಧಿಸಿದ ವಿವಿದ ಬಗೆಯ ಪುಸ್ತಕಗಳು ಲಭ್ಯವಾಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ ಅವರನ್ನು ಕ. ಸಾ. ಪ ಉಡುಪಿ ತಾಲೂಕು ಘಟಕದ ವತಿಯಿಂದ ಗೌರವಿಸಲಾಯಿತು. ಉಡುಪಿ ಕರಾವಳಿ ಐ ಎಂ ಎ ಇದರ ಅಧ್ಯಕ್ಷೆ ಡಾ. ರಾಜಲಕ್ಷ್ಮೀ, ಕೋಶಾಧಿಕಾರಿ ಡಾ. ಆಮ್ನಾ ಹೆಗ್ಡೆ, ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಕ ಸಾ ಪ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು, ರಂಜನಿ ವಸಂತ್, ಖಜಾಂಚಿ ರಾಜೇಶ್ ಭಟ್ ಪಣಿಯಾಡಿ, ಪದ್ಮಾಸಿನಿ, ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ಸಂಧ್ಯಾ ಶೆಣೈ, ಸತೀಶ್ ಕೊಡವೂರು, ಲಕ್ಷ್ಮಿ ಹರೀಶ್ಚಂದ್ರ, ಪಂಚಮಿ, ಹಫೀಜ್ ರಹೆಮಾನ್, ಸುಭೋದ್, ಶಶಿಕಾಂತ್ ಶೆಟ್ಟಿ, ಪ್ರಭಾಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ ಅವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.

ಪಡುಬಿದ್ರಿ : ನಡಿಪಟ್ಣದಲ್ಲಿ ಕಡಲ್ಕೊರೆತ ; ಅಪಾಯದಂಚಿನಲ್ಲಿ ಮೀನುಗಾರಿಕಾ ಶೆಡ್

Thumbnail
Posted On: 16 Jul 2024, 10:21 AM

ಪಡುಬಿದ್ರಿ : ಇಲ್ಲಿನ ಕಡಲ ತೀರದ ನಡಿಪಟ್ಣದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಇದರ ಪರಿಣಾಮವಾಗಿ ಪಡುಬಿದ್ರಿಯ ಸುಮಾರು 50 ಕುಟುಂಬದ ಜೀವನವನ್ನು ಅವಲಂಬಿಸಿರುವ ನಾಡದೋಣಿ ಮಹೇಶ್ವರಿ ಡಿಸ್ಕೊ ಫಂಡ್ ನ ಮೀನುಗಾರಿಕೆಯ ಶೆಡ್ ಅಪಾಯದಂಚಿನಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಆದಷ್ಟು ಬೇಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಪಡುಬಿದ್ರಿ ಸಿ.ಎ.ಸೊಸೈಟಿ : ನೂತನ ಎಲೆಕ್ಟ್ರಿಕಲ್ ಸ್ಕೂಟರ್ ಡೀಲರ್ ಶಿಪ್ ಯೋಜನೆಗೆ ಚಾಲನೆ

Thumbnail
Posted On: 16 Jul 2024, 09:35 AM

ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.), ಇ- ಅಶ್ವ ಆಟೋಮೇಟಿವ್ ಇವರೊಂದಿಗೆ ಆರಂಭಿಸಿರುವ ನೂತನ ಯೋಜನೆ ಎಲೆಕ್ಟ್ರಿಕಲ್ ಸ್ಕೂಟರ್ ಡೀಲರ್ ಶಿಪ್ ಸೋಮವಾರದಂದು ಸೊಸೈಟಿಯ ಸಿಟಿ ಶಾಖೆಯ ಆವರಣದಲ್ಲಿ ಶುಭಾರಂಭಗೊಂಡಿತು. ಇ–ಅಶ್ವ ಆಟೋಮೇಟೀವ್ ನ ಪಾಲುದಾರರಾದ ಕಪಿಲ್ ಕುಮಾರ್ ಹಾಗೂ ಜಗದೀಪ್ ಡಿ. ಸುವರ್ಣ ಸ್ಕೂಟರ್ ನ ಕೀಯನ್ನು ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಇವರಿಗೆ ಹಸ್ತಾಂತರಿಸುವ ಮೂಲಕ ಯೋಜನೆಯು ಚಾಲನೆಗೊಂಡಿತು. ಈ ಸಂದರ್ಭ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಭಾರಿಗೆ ಸಹಕಾರಿ ಸಂಸ್ಥೆಯೊಂದು ಎಲೆಕ್ಟ್ರಿಕ್ ಸ್ಕೂಟರ್ ನ ಡೀಲರ್ಶಿಪನ್ನು ಪಡೆದು, ಈಗಾಗಲೇ ಉತ್ತರಭಾರತದಲ್ಲಿ ಹೆಸರುವಾಸಿಯಾಗಿರುವ ಇ – ಅಶ್ವ ಆಟೋಮೇಟಿವ್ ಇದರ ಜನಸ್ನೇಹಿಯಾದ ಎಲೆಕ್ಟ್ರಿಕಲ್ ಸ್ಕೂಟರನ್ನು ಜಿಲ್ಲೆಗೆ ಪರಿಚಯಿಸುತ್ತಿದ್ದು ಸೊಸೈಟಿಯ ಮುಖಾಂತರ ಖರೀದಿಸುವವರಿಗೆ ರೂ.9,999/- ಡಿಸ್ಕೌಂಟ್ ಹಾಗೂ ಸಾಲ ಸೌಲಭ್ಯವನ್ನು ಕೂಡಾ ನೀಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಬಿ.ಜೆ.ಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷರಾಗಿರುವ ಪ್ರಕಾಶ್ ಶೆಟ್ಟಿ ಮಾತನಾಡಿ ಈಗಾಗಲೇ ಸರಕಾರ ವಾಯುಮಾಲಿನ್ಯ ರಹಿತ ಎಲೆಕ್ಟ್ರಿಕಲ್ ವಾಹನಗಳ ಖರೀದಿ ಹಾಗೂ ಮಾರಾಟಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಈ ಯೋಜನೆಯು ಯಶಸ್ವಿಯಾಗಲಿ ಎಂದು ಹಾರೈಸಿದರು. ಪಡುಬಿದ್ರಿ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪಾತ್ರಿ ಹರಿದಾಸ್ ಭಟ್ ರವರು ನೂತನ ಯೋಜನೆಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸೊಸೈಟಿಯ ನಿರ್ದೇಶಕರಾದ ರಸೂಲ್ ವೈ.ಜಿ, ಗಿರೀಶ್ ಪಲಿಮಾರು, ಶಿವರಾಮ ಎನ್ ಶೆಟ್ಟಿ, ಮಾಧವ ಆಚಾರ್ಯ, ಗ್ರಾಹಕರಾದ ಫೆಲಿಕ್ಸ್, ಪ್ರವೀಣ್, ಸೊಸೈಟಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ ವಂದಿಸಿದರು.

ಜನತೆಯ ಸಂಕಷ್ಟಗಳಿಗೆ ಹಾಗೂ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತೇನೆ : ಐವನ್ ಡಿಸೋಜ

Thumbnail
Posted On: 16 Jul 2024, 09:31 AM

ಹೆಜಮಾಡಿ : ಅವಿನಾಭಾವ ಸಂಬಂಧವಿರುವ ಕಾಪು ಕ್ಷೇತ್ರದ ಹೆಜಮಾಡಿ ಭಾಗದಲ್ಲಿ ಅಭಿನಂದನೆ ಸ್ವೀಕರಿಸುವುದು ನನ್ನ ಭಾಗ್ಯ. ಈ ಭಾಗದ ಜನತೆಯ ಸಂಕಷ್ಟಗಳಿಗೆ ಹಾಗೂ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತೇನೆ. ನಿಮ್ಮ ಪ್ರೀತಿಗೆ ಅಭಾರಿಯಾಗಿದ್ದೇನೆ. ನಾನು ಹಾಗು ಪತ್ನಿ ಡಾ. ಕವಿತಾರವರು ಸದಾ ಜನರ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತೇವೆ ಎಂದು ಐವನ್ ಡಿಸೋಜಾರವರು ಹೇಳಿದರು. ಅವರು ಹೆಜಮಾಡಿ ಬಿಲ್ಲವ ಸಂಘದಲ್ಲಿ ಸಾರ್ವಜನಿಕ ಅಭಿನಂದನಾ ಸಮಿತಿ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಗೌರವವನ್ನು ಸ್ವೀಕರಿಸಿ ಮಾತನಾಡಿದರು. ವಿವಿಧ ಸಂಘಸಂಸ್ಥೆಗಳ ಗೌರವ : ಹೆಜಮಾಡಿ ಅಟೋ ರಿಕ್ಷಾ ಯೂನಿಯನ್, ಹೆಜಮಾಡಿ ಬಸ್ತಿಪಡ್ಪು ಶ್ರೀ ದೃೆವರಾಜ ಕೋರ್ದಬ್ಬು ಸಮಿತಿ, ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್, ನಡಿಕುದ್ರು ಜಾರಂದಾಯ ಸೇವಾ ಸಮಿತಿ, ಹೆಜಮಾಡಿ ಹಾಲು ಉತ್ಪಾದಕರ ಘಟಕ, ಹೆಜಮಾಡಿ ಮೊಗವೀರ ಮಹಾಸಭಾ, ಹೆಜಮಾಡಿ ಬಂದರು ಅಭಿವೃದ್ಧಿ ಸಮಿತ, ಆಲಡೆ ಶ್ರೀ ಅಬ್ಬಗ ದಾರಗ ಸೇವಾ ಸಮಿತಿ ಹಾಗೂ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯವರು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರನ್ನು ಸನ್ಮಾನಿಸಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾಪು ಕ್ಷೇತ್ರದಲ್ಲಿ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಐವನ್ ಡಿ ಸೋಜಾರವರು ತನ್ನ ಬದ್ಧತೆ ಹಾಗೂ ಪ್ರಾಮಾಣಿಕ, ನಿಷ್ಠೆಯ ಸೇವೆಯಿಂದ ದ್ವಿತೀಯ ಬಾರಿಗೆ ವಿಧಾನ ಪರಿಷತ್ ಗೆ ಆಯ್ಕೆಗೊಂಡಿರುವುದು ಅಭಿನಂದನೀಯ ಹಾಗೂ ಹೆಮ್ಮೆಯ ವಿಷಯವಾಗಿದೆ. ಕಾಪು ಕ್ಷೇತ್ರ ಅಭಿವೃದ್ಧಿಯನ್ನು ಹೊಂದಲು ಐವನ್ ಡಿಸೋಜ ರವರ ಕೂಡುಗೆ ಅಪಾರ ಎಂದರು. ಹೆಜಮಾಡಿಯ ನಾರಾಯಣಗುರು ‌ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ನಿರ್ಮಿಸಲು ಅನುದಾನ, ಅಟೋ ರಿಕ್ಷಾ ಪಾರ್ಕ್ ಗೆ ತಗಡು ಚಪ್ಪರ ಹಾಗೂ ಇಂಟರ್ ಲಾಕ್ ಅಳವಡಿಸಲು ಅನುದಾನ ಒದಗಿಸುವಂತೆ ರಿಕ್ಷಾ ಯೂನಿಯನ್ ನವರು ಮತ್ತು ಹೆಜಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೃೆದ್ಯರನ್ನು ನೇಮಿಸುವಂತೆ ಹಾಗೂ ಜೌಷಧಿ ಹಾಗು ವೃೆದ್ಯೆಕೀಯ ಸಲಕರಣೆಗಳನ್ನು ಒದಗಿಸುವಂತೆ ಹೆಜಮಾಡಿ ಗ್ರಾ.ಪಂ ಸದಸ್ಯೆ ನಿರ್ಮಲಾ ರವರು ಮನವಿಯನ್ನು ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಗುಲಾಂ ಮೊಹಮ್ಮದ್ ವಹಿಸಿದ್ದರು. ಈ ಸಂದರ್ಭದಲ್ಲಿ ಬೆಳಪು ಗ್ರಾ.ಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ , ಮಾಜಿ.ತಾ.ಪಂ.ಸದಸ್ಯ ನವೀನಚಂದ್ರ ಜೆ ಶೆಟ್ಟಿ . ಕನ್ನಂಗಾರ್ ಮಸೀದಿ ಧರ್ಮ ಗುರು ಅಶ್ರಫ್ ಸಖಾಫಿ, ಗ್ರಾ.ಪಂ ಅಧ್ಯಕ್ಷೆ ರೇಷ್ಮಾ ಮೆಂಡನ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಸುವರ್ಣ, ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜ್ಮಾಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ರಾಲ್ಫಿ ಡಿ ಕೋಸ್ತಾ , ಉಡುಪಿ ಜಿಲ್ಲಾ ಮೀನುಗಾರ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ದಲಿತ ಮುಖಂಡ ರಾಜು ಹೆಜ್ಮಾಡಿ , ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕರ್ಕೇರ , ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್ , ಕೆ.ಪಿ.ಸಿ.ಸಿ ಕೋ-ಅರ್ಡೀನೇಟರ್ ಅಬ್ದುಲ್ ಅಜೀಜ್ ಹೆಜ್ಮಾಡಿ, ಮಾಜಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಲಿಡಿಯೋ ಪೋರ್ಟಾಡೂ , ಉಪಸ್ಥಿತರಿದ್ದರು. ಕೇಶವ್ ಸಾಲ್ಯಾನ್ ಸ್ವಾಗತಿಸಿದರು. ಶೇಖರ್ ಹೆಜ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ನಂಬಿಯಾರ್ ಕಂಚಿನಡ್ಕ ನಿರೂಪಿಸಿದರು. ಸಂತೋಷ್ ಪಡುಬಿದ್ರಿ ವಂದಿಸಿದರು.

ಮೂಳೂರು - ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು

Thumbnail
Posted On: 15 Jul 2024, 08:22 PM

ಉಚ್ಚಿಲ : ರಾ.ಹೆ. 66ರ ಮೂಳೂರು ಪೆಟ್ರೋಲ್ ಪಂಪ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಗೂಡಂಗಡಿಯೊಂದರ ಮುಂಭಾಗದ ಮರಕ್ಕೆ ಡಿಕ್ಕಿ ಹೊಡೆದಿದ್ದು ಚಾಲಕ ಗಾಯಗೊಂಡಿರುತ್ತಾನೆ. ಸ್ಥಳೀಯರ ಸಹಕಾರದಿಂದ ಗಾಯಾಳುವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಸದಾ ಎಳನೀರು ಕುಡಿಯಲು ಆಗಮಿಸುವ ಗಿರಾಕಿಗಳು ಇರುವ ಗೂಡಂಗಡಿ ಇದಾಗಿದ್ದು, ಎದುರಿನಲ್ಲಿದ್ದ ಮರಕ್ಕೆ ಗುದ್ದಿದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ ಎಂದು ಗೂಡಂಗಡಿ ಮಾಲಕರು ತಿಳಿಸಿದ್ದಾರೆ.

ಜುಲೈ 16 (ನಾಳೆ) : ಮಳೆ ಹಿನ್ನೆಲೆಯಲ್ಲಿ ಉಡುಪಿ, ದ.ಕ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

Thumbnail
Posted On: 15 Jul 2024, 07:40 PM

ಕಾಪು : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ವಿದ್ಯಾರ್ಥಿಗಳ ಹಿತರಕ್ಷಣೆಯಿಂದ ಉಭಯ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಮಂಗಳವಾರ (ಜುಲೈ 16)ದಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಜುಲೈ 17 : ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲ - 'ಉಚ್ಚಿಲ ದಸರಾ-2024'ರ ಪೂರ್ವಭಾವಿ ಸಭೆ

Thumbnail
Posted On: 15 Jul 2024, 09:32 AM

ಉಚ್ಚಿಲ : ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲದ ಈ ಬಾರಿಯ ದಸರಾ ಉತ್ಸವದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಜುಲೈ 17ರಂದು ಅಪರಾಹ್ನ ಗಂಟೆ 3 ಕ್ಕೆ ಉಚ್ಚಿಲದ ಮೊಗವೀರ ಭವನದಲ್ಲಿ ಸಭೆ ನಡೆಸಲು ನಿರ್ಣಯಿಸಲಾಗಿದೆ. ಕಳೆದ ಬಾರಿಯ ಉಚ್ಚಿಲ ದಸರಾ ಭಕ್ತಾಭಿಮಾನಿಗಳ ಸಹಕಾರ-ಸಹಯೋಗದೊಂದಿಗೆ ವಿಶ್ವದಾದ್ಯಂತ ಪ್ರಖ್ಯಾತಿಗೊಂಡಿದ್ದು ಈ ಬಾರಿಯ ಉತ್ಸವವು ಅಕ್ಟೋಬರ್ 3ರಿಂದ 12ರವರೆಗೆ ನಡೆಯಲಿದೆ. ಈ ಪ್ರಯುಕ್ತ ಎಲ್ಲಾ ಸಂಯುಕ್ತ ಸಭೆಗಳು, ಗ್ರಾಮಸಭೆಗಳು, ಸಮಾಜದ ವಿವಿಧ ಸಂಘಟನೆಗಳು, ಅವಿಭಜಿತ ದ.ಕ. ಜಿಲ್ಲೆಯ ಎಲ್ಲಾ ಮೀನುಗಾರಿಕಾ ಸಂಘಗಳು, ಸಮಾಜದ ಪ್ರಮುಖರು, ಮಹಿಳಾ ಸಂಘಟನೆಗಳು ಸೇರಿದಂತೆ ಎಲ್ಲಾ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಸರ್ವ ಭಕ್ತಾಭಿಮಾನಿಗಳು ಸದ್ರಿ ಸಭೆಯಲ್ಲಿ ಭಾಗವಹಿಸಿ ಈ ಬಾರಿಯ ಉತ್ಸವವನ್ನು ಶಿಸ್ತುಬದ್ಧವಾಗಿ ಹಾಗೂ ಆಕರ್ಷಕವಾಗಿ ಆಚರಿಸಲು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ದೇವಳದ ಆಡಳಿತ ಮಂಡಳಿ, ದಸರಾ ಉತ್ಸವ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.

ಜುಲೈ 15 : ಭಾರಿ ಮಳೆ ಹಿನ್ನೆಲೆ - ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

Thumbnail
Posted On: 15 Jul 2024, 06:44 AM

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜುಲೈ 15ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ ಸರಕಾರಿ ಅನುದಾನಿತ ಮತ್ತು ಖಾಸಗಿ ,ಪ್ರಾಥಮಿಕ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.