Updated News From Kaup
ಕಲ್ಪನೆ ಕನ್ನಡ ಆಲ್ಬಂ ಸಾಂಗ್ ಬಿಡುಗಡೆ
Posted On: 04 Sep 2024, 10:35 PM
ಕಾಪು : ಕಲ್ಪನೆ ಕನ್ನಡ ಆಲ್ಬಂ ಸಾಂಗ್ magical star manglore ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ನಟ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಆಲ್ಬಂ ಸಾಂಗ್ ಬಿಡುಗಡೆ ಮಾಡಿದರು. ಈ ಹಾಡಿಗೆ ನಿರ್ದೇಶನ ಹಾಗೂ ಸಾಹಿತ್ಯ ಆರ್. ಕೆ ಮುಲ್ಕಿ, ಗಾಯನ , ನಟನೆ ಮತ್ತು ಪ್ರೊಡ್ಯೂಸಿಂಗ್ ಗಣೇಶ್ ಆಚಾರ್ಯ, ಎಡಿಟಿಂಗ್ ಮತ್ತು ಪೋಸ್ಟರ್ ಡಿಸೈನಿಂಗ್ ಎಸ್. ಕೆ ಮುಲ್ಕಿ, ನಟನೆಯಲ್ಲಿ ಪ್ರೀತಾ ಡಿಸೋಜ ಮತ್ತು ಹಿತು ಮಂಗಳೂರು, ಡಿಓಪಿ ಸಚ್ಚು ವರು ಎಸ್ ಬಿ ಎಸ್ ಇವರು ಪ್ರಸ್ತುತ ಪಡಿಸಿರುವ ಹೊಚ್ಚ ಹೊಸ ಆಲ್ಬಮ್ ಸಾಂಗ್ ಇದಾಗಿದೆ. ಈ ಲಿಂಕ್ ಮುಖಾಂತರ ವಿಡಿಯೋ ವೀಕ್ಷಿಸಲು ಅವಕಾಶವಿದೆ.
ಅದಮಾರು ಮಠದ ಹಿರಿಯ ಸ್ವಾಮೀಜಿಗೆ ಜೈ ತುಲುನಾಡ್ ಸಂಘಟನೆಯಿಂದ ಮನವಿ
Posted On: 04 Sep 2024, 07:33 PM
ಕಾಪು : ಜೈ ತುಲುನಾಡ್ (ರಿ.) ಸಂಘಟನೆಯ ವತಿಯಿಂದ ಉಡುಪಿಯ ಅದಮಾರು ಮಠದ ಸ್ವಾಮೀಜಿಗೆ ಅದಮಾರು ಮಠದ ಅಧೀನ ದೇವಸ್ಥಾನ, ಶಿಕ್ಷಣ ಸಂಸ್ಥೆ ಶಾಖಾಮಠದಲ್ಲಿ ತುಳುನಾಡಿನ ಮಣ್ಣಿನ ಭಾಷೆಯಾದ ತುಲುಲಿಪಿಯಲ್ಲಿ ನಾಮ ಫಲಕ ಅಳವಡಿಸಲು ಹಾಗೂ ಅಧೀನ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ಉಚಿತವಾಗಿ ತುಲು ಲಿಪಿಯನ್ನು ಕಲಿಸಲು ಸಹಕಾರ ಇದರ ಬಗ್ಗೆ ಮನವಿಯನ್ನು ನೀಡಲಾಯಿತು. ಜೈ ತುಲುನಾಡ್ (ರಿ.) ಸಂಘದ 10ನೇ ವರ್ಷದ ಸಂಭ್ರಮಾಚರಣೆಯ ಹೊಸ್ತಿಲಲ್ಲಿದ್ದು ಸಂಘದ 10 ವರ್ಷದ ಕಾರ್ಯವೈಖರಿಯ ಬಗ್ಗೆ ತಿಳಿಸಲಾಯಿತು. ಹಿರಿಯ ಸ್ವಾಮಿಗಳು ಯಾವುದೇ ಒಂದು ಫಲಾಪೇಕ್ಷೆ ಇಲ್ಲದೇ ತುಲುಭಾಷೆಯ,ಲಿಪಿಯ ಉಳಿವಿಗಾಗಿ ಶ್ರಮಿಸುತ್ತಿರುವ ಸಂಘಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಜೈ ತುಲು ನಾಡ್ (ರಿ.) ಇದರ ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿಯಾದ ಪ್ರಜ್ಞಾಶ್ರೀ ಎಂ. ಕೊಡವೂರ್, ಸಂಘಟನಾ ಕಾರ್ಯದರ್ಶಿಯಾದ ಸಂತೋಷ್.ಎನ್.ಎಸ್ ಕಟಪಾಡಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಾಗರ್ ಬನ್ನಂಜೆ, ಸದಸ್ಯರಾದ ಕಿನ್ನು ಒಡಿಪು, ಸುಪ್ರಿಯಾ ಕೊಡವೂರ್, ಶಿವಪ್ರಸಾದ್ ಮಣಿಪಾಲ್, ಅಂಬಿಕಾ ಕನ್ನರ್ಪಾಡಿ, ಯೋಗಿನಿ ಕೊರಂಗ್ರಪಾಡಿ ಉಪಸ್ಥಿತರಿದ್ದರು.
ಕಾಪು : ಸರಕಾರಿ ಉರ್ದು ಸಂಯುಕ್ತ ಪ್ರೌಢಶಾಲೆ ಮಲ್ಲಾರು - ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ
Posted On: 04 Sep 2024, 07:17 PM
ಕಾಪು : ತಾಲೂಕಿನ ಸರಕಾರಿ ಉರ್ದು ಸಂಯುಕ್ತ ಪ್ರೌಢಶಾಲೆ ಮಲ್ಲಾರು ಇಲ್ಲಿ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಬುಧವಾರ ಆಚರಿಸಲಾಯಿತು. ಶಿಕ್ಷಕರಿಗೆ ಮನೋರಂಜನಾತ್ಮಕ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸುವ ಮೂಲಕ ಗುರುವಂದನೆ ಸಲ್ಲಿಸಲಾಯಿತು. ಬಶೀರ್ ಅಹ್ಮದ್ ಸಭಾಧ್ಯಕ್ಷತೆ ವಹಿಸಿದ್ದರು. ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಫೂರ್ ಅಹ್ಮದ್, ಉಪಾಧ್ಯಕ್ಷರಾದ ಮಹೇಶ್ ಬೆಳಪು, ಕಾರ್ಯದರ್ಶಿಯಾದ ಅಲ್ತಾಫ್ ಮಲ್ಲಾರ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವೀಣಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಕಾತುನ್ ಬಿ, ಮೌಲಾನಾ ಶಾಲೆಯ ಮುಖ್ಯೋಪಾಧ್ಯಾಯರಾದ ವಿದ್ಯಾ, ಕಾಪು ಪುರಸಭಾ ಸದಸ್ಯರಾದ ನೂರುದ್ದೀನ್, ದಾನಿಗಳಾದ ಷಫೀಕಾಝಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ರಾಜೇಂದ್ರ ಸ್ವಾಗತಿಸಿದರು. ಹಸೀನಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಕಾತುನ್ ಬಿ ವಂದಿಸಿದರು.
ಉದ್ಯಮಿ ಪಡುಬಿದ್ರಿ ಅನಂತ್ ರಾಜ್ ಹುಟ್ಟು ಹಬ್ಬದ ನಿಮಿತ್ತ ಕೌಡೂರು ಹೊಸ ಬೆಳಕು ವೃದ್ಧಾಶ್ರಮಕ್ಕೆ ಪರಿಕರಗಳ ಹಸ್ತಾಂತರ
Posted On: 04 Sep 2024, 07:04 PM
ಪಡುಬಿದ್ರಿ : ಬೆಂಗಳೂರಿನ ಖ್ಯಾತ ಉದ್ಯಮಿ ರಾಜ್ ಅಸೋಸಿಯೇಟ್ಸ್ ಸಂಸ್ಥೆ ಅಡಳಿತ ನಿರ್ದೇಶಕ ಪಡುಬಿದ್ರಿ ಅನಂತ್ ರಾಜ್ ರವರ 75ನೇ ಹುಟ್ಟು ಹಬ್ಬದ ಸಲುವಾಗಿ ಅವರ ಸುಪುತ್ರಿ ಶ್ರುತಿ ಅನಂತ್ ರಾಜ್ ರವರು ರೂ. 51,320 ಮೌಲ್ಯದ ಪರಿಕರಗಳನ್ನು ಕೌಡೂರಿನ ಹೊಸ ಬೆಳಕು ವೃದ್ಧಾಶ್ರಮಕ್ಕೆ ಕೊಡುಗೆಯಾಗಿ ನೀಡಿದರು. ಇದೇ ಸಂದರ್ಭ ಪಡುಬಿದ್ರಿ ಬಾಲಪ್ಪ ಗುರಿಕಾರ ನಟರಾಜ್ ರಾವ್ ರವರು 7 ಕಾಟ್ ,7 ಬೆಡ್ 7 ದಿಂಬುಗಳನ್ನು ವೃದ್ಧಾಶ್ರಮಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ನಿಕಟ ಪೂರ್ವ ಕಾರ್ಯದರ್ಶಿ ಪವನ್ ಸಾಲ್ಯಾನ್, ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಹೊಸ ಬೆಳಕು ಸಂಸ್ಥೆಯ ಆಡಳಿತ ನಿರ್ದೇಶಕಿ ತನುಲಾ ಉಪಸ್ಥಿತರಿದ್ದರು.
ಕಾಪು : ಶ್ರೀ ಹೊಸ ಮಾರಿಗುಡಿಯಲ್ಲಿ ನವದುರ್ಗಾ ಲೇಖನ ಸಂಕಲ್ಪ ಸ್ವೀಕಾರಕ್ಕೆ ಚಾಲನೆ
Posted On: 04 Sep 2024, 07:00 PM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ, ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾಗಿರುವ ನವದುರ್ಗಾ ಲೇಖನ ಸಂಕಲ್ಪ ಸ್ವೀಕಾರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ. ಮೂ. ಶ್ರೀನಿವಾಸ ತಂತ್ರಿಗಳ ಉಪಸ್ಥಿತಿಯಲ್ಲಿ ಮಂಗಳ ಗೌರಿ ನವದುರ್ಗಾ ಲೇಖನ ಸಂಕಲ್ಪ ಪೂಜೆ ನೆರವೇರಿತು. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶ್ರೀ ವಿನಯ್ ಗುರೂಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವಶೆಟ್ಟಿ, ಕಾರ್ಯಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ನವದುರ್ಗಾ ಯಜ್ಞ ಲೇಖನ ಸಮಿತಿಯ ಅಧ್ಯಕ್ಷ ರಘುಪತಿ ಭಟ್ ದೇವಸ್ಥಾನದ ಅಭಿವೃದ್ಧಿ ಕಾರ್ಯ ಹಾಗೂ ನವದುರ್ಗ ಲೇಖನದ ಯಜ್ಞದ ಬಗ್ಗೆ ಮಾಹಿತಿಯನ್ನು ನೀಡಿದರು. ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ರವಿ ಸುಂದರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ನಾಡೋಜ ಜಿ ಶಂಕರ್, ಶಾಸಕರಾದ ಯಶ್ ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಆಂಧ್ರ ಪ್ರದೇಶದ ಶಾಸಕ ಅಮಿಲಿನೆನಿ ಸುರೇಂದ್ರ ಬಾಬು, ತಹಶೀಲ್ದಾರ್ ಡಾ.ಪ್ರತಿಭಾ ಆರ್. , ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.
ನಾಳೆ (ಸೆ. 3) : ಕಾಪು ಹೊಸ ಮಾರಿಗುಡಿಯಲ್ಲಿ ನವದುರ್ಗಾ ಲೇಖನ ಯಜ್ಞ ಸಮಿತಿ ಉದ್ಘಾಟನೆ ಮತ್ತು ಲೇಖನ ಸಂಕಲ್ಪ
Posted On: 02 Sep 2024, 10:09 PM
ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಜೀರ್ಣೋದ್ದಾರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸೆಪ್ಟೆಂಬರ್ 3ರಂದು ನವದುರ್ಗಾ ಲೇಖನ ಯಜ್ಞ ಮತ್ತು ನವಚಂಡಿಕಾಯಾಗ ಜರಗಲಿದೆ. ದೇವಸ್ಥಾನದ ಪ್ರಧಾನ ತಂತ್ರಿಗಳಾದ ವಿದ್ವಾನ್ ಕೆ ಪಿ ಕುಮಾರಗುರು ತಂತ್ರಿ ಅವರ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಇವರ ಉಪಸ್ಥಿತಿಯಲ್ಲಿ ಮಂಗಳ ಗೌರಿ ಪೂಜೆ ಮತ್ತು ಲೇಖನ ಸಂಕಲ್ಪಕ್ಕೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 8.30 ಕ್ಕೆ ಅಮ್ಮನ ಸನ್ನಿಧಾನದಲ್ಲಿ ಪ್ರಾರ್ಥನೆ, 8:40 ಕ್ಕೆ ಲೇಖನ ಸಂಕಲ್ಪಕ್ಕೆ ಭಕ್ತಾದಿಗಳನ್ನು ಮಂಗಳ ಗೌರಿ ಮಂಟಪಕ್ಕೆ ಕರೆದೊಯ್ಯುವುದು, 8:50 ಕ್ಕೆ ಲೇಖನ ಸಂಕಲ್ಪದ ಭಕ್ತರು ಆಸೀನರಾಗುವುದು, 9ಕ್ಕೆ ಮಂಗಳ ಗೌರಿ ಪೂಜೆ ಮತ್ತು ಲೇಖನ ಸಂಕಲ್ಪ ಆರಂಭ, 10.15 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಅವದೂತ ವಿನಯ್ ಗುರೂಜಿ, ಗೌರಿಗದ್ದೆ ಉದ್ಘಾಟಿಸಲಿದ್ದಾರೆ. 12 ಗಂಟೆಗೆ ಮಹಾ ಮಂಗಳಾರತಿ, ಮಧ್ಯಾಹ್ನ 1 ಗಂಟೆಗೆ ಪ್ರಸಾದ ಭೋಜನ ವಿತರಣೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ಕಾರ್ಕಳ : ಕ್ರಿಯೇಟಿವ್ ಕಾಲೇಜಿನ ಸಹಕಾರದೊಂದಿಗೆ ಒಂದು ದಿನದ ಸ್ವಚ್ಛತಾ ಕಾರ್ಯಕ್ರಮ
Posted On: 01 Sep 2024, 10:25 PM
ಕಾರ್ಕಳ : ಇಲ್ಲಿನ ಪರಿಸರದಲ್ಲಿ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ರಾಷ್ಟ್ರೀಯ ಸೇವಾ ಯೋಜನೆ ಪ್ರಾಂತೀಯ ಕೇಂದ್ರ ಬೆಂಗಳೂರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ರಾಷ್ಟ್ರೀಯ ಸೇವಾ ಯೋಜನೆ ಕೋಶ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳ ಇದರ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಸ್ವಚ್ಛತಾ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ಸುನಿಲ್ ಕುಮಾರ್, ಎಲ್ಲರೂ ಸ್ವಚ್ಛತೆಯನ್ನು ಕಾಪಾಡುವುದರಿಂದ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ. ಸ್ವಚ್ಛತೆ ಇರುವ ಕಡೆ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ತಡೆಗಟ್ಟಬಹುದಾಗಿದೆ. ನಮ್ಮ ಮನೆ, ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿದಾಗಲೇ ಸ್ವಚ್ಛ ಭಾರತವಾಗಿ ಮೂಡಿ ಬರಲು ಸಾಧ್ಯ ಎಂದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಬಿ ಗಣನಾಥ ಶೆಟ್ಟಿಯವರು ಮಾತನಾಡಿ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡುವುದು ನಮ್ಮೆಲ್ಲರ ಕರ್ತವ್ಯ. ಪ್ರಕೃತಿಯನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕಾದರೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಇದು ನಾವು ಅವರಿಗೆ ನೀಡುವ ಉತ್ತಮ ಉಡುಗೊರೆಯಾಗಿದೆ. ಮಕ್ಕಳು ಬೆಳಗಿದರೆ ಸಮಾಜ ಬೆಳಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಹಿರ್ಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎ ಮತ್ತು ಬಿ ಘಟಕದ ಅಧ್ಯಕ್ಷರುಗಳಾದ ಸತೀಶ್ ಪೂಜಾರಿ ಹಾಗೂ ಸುಭಾಷ್, ಸಂಸ್ಥೆಯ ಸಂಸ್ಥಾಪಕರಲ್ಲಿ ಓರ್ವರಾದ ಆದರ್ಶ ಎಂ ಕೆ, ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್, ರಾಷ್ಟ್ರೀಯ ಸೇವಾ ಯೋಜನಾ ಸಂಯೋಜನಾಧಿಕಾರಿಗಳು, ಅರ್ಥಶಾಸ್ತ್ರ ಉಪನ್ಯಾಸಕರಾದ ಉಮೇಶ್, ಬೋಧಕ ಮತ್ತು ಬೋಧಕೇತರ ವೃಂದದವರು, ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್ ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಜೋಡುರಸ್ತೆಯಿಂದ ಹಿರ್ಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಜೂರುವರೆಗೆ, ಮಾವಿನಕಟ್ಟೆಯಿಂದ ಕಾನಂಗಿ ವೆಂಕಟೇಶ್ವರ ದೇವಸ್ಥಾನದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ, ವಾಹನ ಸಂಚಾರಕ್ಕೆ ಅಡಚಣೆಯಾಗುವಂತಿದ್ದ ಗಿಡಗಂಟಿಗಳ ನಿರ್ಮೂಲನೆ ಮಾಡಿ ವಾಹನಗಳ ಸುಲಲಿತ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಶ್ರೀ ನಾರಾಯಣಗುರು ಯುವ ವೇದಿಕೆ ಉಡುಪಿ ವತಿಯಿಂದ ನಾರಾಯಣ ಗುರು ಧ್ವಜಸ್ತಂಭ ಉದ್ಘಾಟನೆ
Posted On: 01 Sep 2024, 10:16 PM
ಉದ್ಯಾವರ : ನಾರಾಯಣ ಗುರುಗಳ ತತ್ವ ಸಂದೇಶ ಸಾರುವ ಬ್ರಹ್ಮಶ್ರೀ ನಾರಾಯಣಗುರು ಧ್ವಜಸ್ತಂಭದ ಧ್ವಜಾರೋಹಣ ಕಾರ್ಯಕ್ರಮವನ್ನು ರಾಷ್ಟ್ರೀಯ ಬಿಲ್ಲವ ಮಹಿಳಾ ಮಹಾಮಂಡಲದ ಅಧ್ಯಕ್ಷರಾದ ಗೀತಾಂಜಲಿ ಸುವರ್ಣ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಶ್ರೀ ನಾರಾಯಣ ಗುರುಗಳ ಆದರ್ಶ, ಸರ್ವ ಧರ್ಮಗಳ ಬಗ್ಗೆ ಅವರ ಕಾಳಜಿ, ಕೆಳ ವರ್ಗದ ಜನರ ಬಗ್ಗೆ ಅವರಿಗಿದ್ದ ದೂರಗಾಮಿ ಆಲೋಚನೆಗಳಿಂದ ಇಂದು ನಮ್ಮಂತ ಹಿಂದುಳಿದ ವರ್ಗ ಗೌರವದಿಂದ ಬಾಳುವಂತೆ ಮಾಡಿದೆ ಎಂದು ತಿಳಿಸಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಾಮನ ಬಂಗೇರ ಮಾತನಾಡಿ, ಶ್ರೀ ನಾರಾಯಣಗುರು ಯುವ ವೇದಿಕೆಯಿಂದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಸಮಾಜಮುಖಿ ಕೆಲಸ ನಾರಾಯಣ ಗುರುಗಳ ಆಶಯಕ್ಕೆ ಪೂರಕವಾಗಿದೆ ಮತ್ತು ಇದರಿಂದ ನಾರಾಯಣ ಗುರುಗಳ ಸಂದೇಶವನ್ನು ನಾವು ಅನುಸರಿಸಿದಂತೆ ಆಗುತ್ತದೆ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀ ನಾರಾಯಣಗುರು ಯುವ ವೇದಿಕೆ ಗೌರವಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಗಿರೀಶ್ ಕುಮಾರ್ ಉದ್ಯಾವರ, ರಾಘು ಸನಿಲ್, ರಿಯಝ್ ಪಳ್ಳಿ, ದಿವಾಕರ್ ಬೊಳ್ಜೆ, ಸಚಿನ್ ಬೊಳ್ಜೆ, ಸಾಯಿನಾಥ್ ಉದ್ಯಾವರ, ಹರೀಶ್ ಪೂಜಾರಿ ಏಣಗುಡ್ಡೆ, ಸತೀಶ್ ಪೂಜಾರಿ ಬೀರಪ್ಪಾಡಿ, ರೊಯ್ಸ್ ಫೆರ್ನಾಂಡಿಸ್, ಸುಹೈಲ್ ಅಬ್ಬಾಸ್, ದಿನೇಶ್ ಪೂಜರಿ, ಸುಪ್ರೀತ್ ಸುವರ್ಣ, ಕಿಶೋರ್ ಕುಮಾರ್, ಗುಣಕರ್ ಸನಿಲ್, ಪ್ರಕಾಶ್ ಬಂಗೇರ, ಜಯ ಪೂಜಾರಿ, ಹರೀಶ್, ಕೇಶವ ಸನಿಲ್ ಮುಂತಾದವರು ಉಪಸ್ಥಿತರಿದ್ದರು.
ಬಂಟಕಲ್ಲು : ಬದುಕಿನಲ್ಲಿ ದುರಾಸೆಗೆ ಒಳಗಾಗದೆ ಇದ್ದುದರಲ್ಲೇ ತೃಪ್ತಿವಂತರಾಗುವ - ಜಸ್ಟಿಸ್ ಸಂತೋಷ್ ಹೆಗ್ಡೆ
Posted On: 01 Sep 2024, 10:09 PM
ಬಂಟಕಲ್ಲು : ಕಲಿಕೆಗೆ ಕೊನೆಯಿಲ್ಲ. ಜನನದಿಂದ ಮರಣದವರೆಗೆ ಕಲಿಕೆ ನಿರಂತರ. ಬದುಕಿನಲ್ಲಿ ದುರಾಸೆಗೆ ಒಳಗಾಗದೆ ಇದ್ದುದರಲ್ಲೇ ತೃಪ್ತಿವಂತರಾಗುವ. ಮಾನವರಾಗಿ ಮಾನವೀಯ ಗುಣ ನಮ್ಮಲ್ಲಿರಬೇಕು ಎಂದು ಸವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯ ಮೂರ್ತಿ, ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಹೇಳಿದರು. ಅವರು ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2024-25ನೇ ಸಾಲಿನ ಪ್ರಥಮ ವರ್ಷದ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗಾಗಿ ಭಾನುವಾರ ವಿದ್ಯಾಲಯದ ಆವರಣದಲ್ಲಿ ನಡೆದ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ವಿವಿಧ ಹಗರಣಗಳು ನಡೆದಿದ್ದು, ಭೃಷ್ಟಾಚಾರ ಸಮಾಜಲ್ಲಿ ಬೇರೂರಿದೆ. ಅದನ್ನು ಬುಡ ಸಮೇತ ಕೀಳಬೇಕಾಗಿದೆ. ಭೃಷ್ಟಾಚಾರದ ನಿರ್ಮೂಲನೆಗೆ ವಿದ್ಯಾರ್ಥಿಗಳು ಸಹಿತ ನಾಗರಿಕರು ಚಿಂತಿಸಬೇಕಾಗಿದೆ. ಕರ್ನಾಟಕ ಲೋಕಾಯುಕ್ತಕ್ಕೆ ಬಂದ ನಂತರ ಬಹಳಷ್ಟು ಅನ್ಯಾಯ, ಅಕ್ರಮಗಳನ್ನು ಕಂಡಿದ್ದೇನೆ. ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಿ ಎಂದರು. ಈ ಸಂದರ್ಭ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್ ಮಾತನಾಡಿ, 14 ವರ್ಷಗಳಿಂದ ಸಂಸ್ಥೆಯು ಉತ್ತಮ ಬೆಳವಣಿಗೆಯನ್ನು ಕಾಣಲು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಅವಿರತ ಶ್ರಮವಾಗಿದೆ. ನಮ್ಮ ಸಂಸ್ಥೆಯನ್ನು ಅಟೊನೊಮಸ್ ಆಗಿ ಮಾಡುವುದು ನಮ್ಮ ಮುಂದಿನ ಯೋಜನೆಯಾಗಿದೆ ಎಂದರು. ಈ ಸಂದರ್ಭ ಸಂಸ್ಥೆಯ ವಿದ್ಯಾರ್ಥಿ ಅದ್ವೈತ್ ಆಚಾರ್ಯ ತಾನು ಬಿಡಿಸಿದ ಜಸ್ಟಿಸ್ ಸಂತೋಷ್ ಹೆಗ್ಡೆಯವರ ಚಿತ್ರವನ್ನು ಅವರಿಗೆ ಉಡುಗೊರೆಯಾಗಿ ನೀಡಿದನು. ಈ ಸಂದರ್ಭದಲ್ಲಿ ಪೋಷಕರು ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷರಾದ ಪಿ ಶ್ರೀನಿವಾಸ ತಂತ್ರಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಹರೀಶ್ ಬೆಳ್ಮಣ್, ಸಂಸ್ಥೆಯ ಉಪ ಪ್ರಾಂಶುಪಾಲ ಡಾ. ಗಣೇಶ್ ಐತಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಅಭಿಷೇಕ್ ಕಿಣಿ ಪ್ರಾರ್ಥಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ರವರು ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳನ್ನು ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಲೊಲಿಟ ಪ್ರಿಯ ಕ್ಯಾಸ್ತಲಿನೊ ಪರಿಚಯಿಸಿದರು. ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೀತಿ ಮತ್ತು ಸಚಿನ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಡಾ. ದೀಪಿಕಾ ಬಿ ವಿ ವಂದಿಸಿದರು.
ಚೆನ್ನೈಯಲ್ಲಿ ಗೌರವ ಡಾಕ್ಟರೇಟ್ ಪುರಸ್ಕೃತರಾದ ಕಾಪುವಿನ ಮೊಹಮ್ಮದ್ ಫಾರೂಕ್ ಚಂದ್ರನಗರ
Posted On: 01 Sep 2024, 08:26 PM
ಕಾಪು : ಸಮಾಜ ಸೇವೆಯನ್ನು ಪರಿಗಣಿಸಿ ಕಾಪುವಿನ ಮೊಹಮ್ಮದ್ ಫಾರೂಕ್ ಚಂದ್ರನಗರ ಇವರಿಗೆ ಭಾನುವಾರ ಚೆನ್ನೈ ನ ಭಾರತೀಯ ವಿದ್ಯಾ ಕೇಂದ್ರ ಭವನದಲ್ಲಿ ಪೀಪಲ್ ಫೋರಂ ಆಫ್ ಇಂಡಿಯಾ ಭಾರತ್ ಸೇವಕ್ ಸಮಾಜ್ ಸಂಘಟಿಸಿದ ಕಾರ್ಯಕ್ರಮದಲ್ಲಿ ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವವಿದ್ಯಾಲಯ ಚೆನ್ನೈ ಘಟಕದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ ಸ್ಥಾಪಕರು ಹಾಗೂ ಕುಲಪತಿಗಳಾದ ಡಾ. ಪಿ. ಮ್ಯಾನುವಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ ಉಪಕುಲಪತಿಗಳು ಹಾಗೂ ತಮಿಳುನಾಡಿನ ನಿವೃತ್ತ ನ್ಯಾಯಾಧೀಶರಾದ ಡಾ. ಕೆ ವೆಂಕಟೇಶನ್, ತಮಿಳುನಾಡಿನ ನಿವೃತ್ತ ಸ್ಪೆಷಲ್ ಕಮಿಷನರ್ ಹಾಗೂ ಪ್ರಿನ್ಸಿಪಲ್ ಸೆಕ್ರೆಟರಿ ಕೆ ಸಂಪತ್ ಕುಮಾರ್, ವರ್ಲ್ಡ್ ಫೀಸ್ ಇನ್ಸ್ಟಿಟ್ಯೂಟ್ ಯುನೈಟೆಡ್ ನೇಶನ್ ಸ್ಥಾಪಕ ಡಾ. ಪರ್ವಿಂದರ್ ಸಿಂಗ್, ಅಪೋಲೋ ಪ್ಯಾರ ಮೆಡಿಕಲ್ ಮತ್ತು ನರ್ಸಿಂಗ್ ಕೌನ್ಸಿಲ್ ನಿರ್ದೇಶಕಿ ಪ್ರೊ. ಡಾ. ಎಂ. ರಜಿನಿ, ಚೆನ್ನೈನ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಡಾ. ಕೆ. ರಾಜಾರಾಮ್, ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಡಾ. ವಿಪಿನ್ ಗೌರ್, ಜಿಎಚ್ಪಿಯು ತಮಿಳುನಾಡು ಮತ್ತು ಪಾಂಡಿಚೆರಿ ಉಪ ನಿರ್ದೇಶಕ ಡಾ.ಕೆ.ವಲರ್ಮತಿ, ಪುದುಚೇರಿ ನಿವೃತ್ತ ಎಸ್ಪಿ ಡಾ. ಎನ್. ರಾಮಚಂದ್ರನ್, ಜಿಎಚ್ಪಿಯು ಎಸ್ ಎಸ್ ಮೀಡಿಯಾ ಅಂಡ್ ಪ್ರೊಡಕ್ಷನ್ ಕೊಲ್ಕತ್ತಾ ರಿಜನ್ ಉಪ ನಿರ್ದೇಶಕ ಸುಭಾಸಿಶ್ ಸಹ, ಜಿಎಚ್ಪಿಯು ಕರ್ನಾಟಕ ಉಪ ನಿರ್ದೇಶಕ ಡಾ. ಎಂ. ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.
