Updated News From Kaup
ಕಾಪು : ಪೈಪ್ ಲೈನ್ ಅವಾಂತರ - ಕುಸಿಯುವ ಹಂತದಲ್ಲಿ ಸಾರ್ವಜನಿಕ ಬಾವಿ, ಟ್ರಾನ್ಸ್ಫಾರ್ಮರ್

Posted On: 14-06-2024 05:28PM
ಕಾಪು : ಇಲ್ಲಿನ ಕೊಪ್ಪಲಂಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ದರ್ಕಾಸು ಮನೆ ಬಳಿ ಪೈಪ್ ಲೈನ್ ಉದ್ದೇಶಕೋಸ್ಕರ ಗುಂಡಿ ತೆಗೆದಿದ್ದು ಇದರಿಂದ ಸಾರ್ವಜನಿಕ ಬಾವಿ ಜೊತೆಗೆ ಟ್ರಾನ್ಸ್ಫಾರ್ಮರ್ ಕೂಡ ಕುಸಿಯುವ ಹಂತದಲ್ಲಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದ ದರ್ಕಾಸು ಸುಂದರ ಕರ್ಕೇರ ಇವರ ಮನೆಯ ಹತ್ತಿರವಿರುವ ಈ ಬಾವಿಯ ಸಮೀಪ ಗ್ಯಾಸ್, ನೀರಿನ ಪೈಪ್ ಲೈನ್ ಗೆ ಹೊಂಡ ತೋಡಿದ್ದು ಮತ್ತು ಬೋರ್ವೆಲ್ ಕೊರೆಯಲಾಗಿದ್ದು ಇದರಿಂದ ಬಾವಿ ಕುಸಿಯುವ ಹಂತಕ್ಕೆ ತಲುಪಿರುವುದರ ಜೊತೆಗೆ ಟ್ರಾನ್ಸ್ಫಾರ್ಮರ್ ನ್ನು ಕೂಡ ಆದಷ್ಟು ಬೇಗ ತೆರವು ಇಲ್ಲವೇ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾಗಿದೆ.
ಈ ಬಗ್ಗೆ ಕಾಪು ಪುರಸಭೆಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯ ನಿವಾಸಿ ಹರೀಶ್ ತಿಳಿಸಿದ್ದಾರೆ.
ಜೊತೆಗೆ ಸಾರ್ವಜನಿಕ ಬಾವಿಯ ನೀರೂ ಕಲುಷಿತವಾಗಿದ್ದು ಅದರ ಬಗ್ಗೆಯೂ ಗಮನಹರಿಸಬೇಕಾಗಿದೆ.
ಉಡುಪಿ : ಸಂಸದ ಕೋಟಾರಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಪೈಪೋಟಿ ಶುರು ; ಗೀತಾಂಜಲಿ ಸುವರ್ಣ ಹೆಸರು ಮುಂಚೂಣಿಯಲ್ಲಿ

Posted On: 14-06-2024 07:28AM
ಉಡುಪಿ : ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗುತ್ತಿದ್ದಂತೆ ಅವರಿಂದ ತೆರವಾದ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪೈಪೋಟಿ ಶುರುವಾಗಿದ್ದು ಒಂದೆಡೆ ಜಾತಿ ಲೆಕ್ಕಾಚಾರ ಮತ್ತೊಂದೆಡೆ ಪಕ್ಷದ ಹಿರಿತನ ಜೊತೆಗೆ ತೆರೆಮರೆಯ ಕಸರತ್ತು ನಡೆಯುತ್ತಿದೆ.
ಈ ನಡುವೆ ಬಿಲ್ಲವ ಸಮುದಾಯದ ಗೀತಾಂಜಲಿ ಸುವರ್ಣ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಸಾರ್ವಜನಿಕ ವಲಯದಲ್ಲಿ ಬೆರೆಯುತ್ತಾ, ಸಮಾಜ ಸೇವೆಯಲ್ಲಿಯೂ ತಮನ್ನು ತಾವು ತೊಡಗಿಸಿಕೊಳ್ಳುವ ಗುಣ ಅವರಲ್ಲಿದೆ.
ಇವರು ಭಾರತೀಯ ಜನತಾ ಪಕ್ಷದಲ್ಲಿ ವಿವಿಧ ಜವಾಬ್ದಾರಿಯನ್ನು ವಹಿಸಿರುವ ಇವರು, 2 ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಜನರ ಕಷ್ಟ ಸುಖದಲ್ಲಿ ಬೆರೆತವರು. ಸಮಾಜ ಸೇವೆಗೆ ದಿನದ 24 ಗಂಟೆಯು ಸ್ಪಂದಿಸುವ ಗೀತಾಂಜಲಿ ಸುವರ್ಣ ಅವರಿಗೆ ಈ ಬಾರಿಯ ವಿಧಾನ ಪರಿಷತ್ ಸದಸ್ಯರಾಗಿ ಅವಕಾಶ ನೀಡಿದರೆ ಮಹಿಳೆಯರಿಗೂ ಪ್ರಾಶಸ್ತ್ಯ ನೀಡಿದಂತಾಗುತ್ತದೆ. ಈ ಬಗ್ಗೆ ಪಕ್ಷದ ಹಿರಿಯರು, ನಾಯಕರು ವರಿಷ್ಟರ ಗಮನಕ್ಕೆ ತರಬೇಕೆಂದು ಸಾರ್ವಜನಿಕರ ಹಾಗೂ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಜೂನ್ 25 ರಂದು ಕಾಪು ಮಾರಿಯಮ್ಮನ ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಿಸಲು ಸ್ವರ್ಣ ಸಂಕಲ್ಪ

Posted On: 14-06-2024 07:26AM
ಕಾಪು : ಇಲ್ಲಿ ನೆಲೆ ನಿಂತಿರುವ ಶ್ರೀ ಮಾರಿಯಮ್ಮ ದೇವಿಯು ಅತ್ಯಂತ ಪ್ರಸಿದ್ಧಿಯನ್ನು ಹೊಂದಿದ್ದು ಜಗತ್ತಿನಾದ್ಯಂತ ನೆಲೆಸಿರುವ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದ್ದಾಳೆ. ಇದೀಗ ಕಾಪು ಹೊಸ ಮಾರಿಗುಡಿ ದೇವಸ್ಥಾನವು ಭಕ್ತರ ಮತ್ತು ಅಭಿವೃದ್ಧಿ ಸಮಿತಿಯ ಆಶಯದಂತೆ ಧಾರ್ಮಿಕ ಆಕರ್ಷಕ ಶ್ರದ್ಧಾ ಕೇಂದ್ರವಾಗಿ ನವ ನಿರ್ಮಾಣಗೊಳ್ಳುತ್ತಿದೆ. ನೂತನ ದೇಗುಲದಲ್ಲಿ 2025 ರ ಮಾರ್ಚ್ 2 ರಂದು ಅಮ್ಮನ ದಿವ್ಯ ಗದ್ದುಗೆಯು ಪ್ರತಿಷ್ಠಾಪನೆಗೊಳ್ಳಲಿದ್ದು, ತದನಂತರ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ. ಅಮ್ಮನ ಗದ್ದುಗೆ ಮತ್ತು ಉಚ್ಚಂಗಿ ದೇವಿಯ ಪೀಠ ಸ್ವರ್ಣಮಯವಾಗಬೇಕೆಂಬ ಆಶಯದಿಂದ ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಹೇಳಿದರು. ಅವರು ಕಾಪು ಶ್ರೀ ಹೊಸ ಮಾರಿಗುಡಿ ದೇವಳದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳ ಜೊತೆಗೂಡಿ ಸ್ವರ್ಣ ಗದ್ದುಗೆ ಸಮರ್ಪಣಾ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು.
ಭಕ್ತರು ಹೊಸ ಚಿನ್ನದೊಂದಿಗೆ ಉಪಯೋಗಿಸಿದ ಚಿನ್ನದ ಆಭರಣವನ್ನು ಹರಕೆಯ ರೂಪದಲ್ಲಿ ಸಮರ್ಪಿಸುತ್ತಿದ್ದು ಇದಕ್ಕಾಗಿ ಅಮ್ಮನಲ್ಲಿ ನುಡಿಯನ್ನು ಕೇಳಿದಾಗ ಸಂತೋಷದಿಂದ ಸ್ವೀಕರಿಸಿ ಸ್ವರ್ಣ ನೀಡಿದ ಭಕ್ತರ ಕಷ್ಟಕಾರ್ಪಣ್ಯಗಳನ್ನು ನನ್ನ ಕಾಲಬುಡಕ್ಕೆ ಹಾಕಿಕೊಳ್ಳುತ್ತೇನೆ ಎಂಬುವುದಾಗಿ ನುಡಿಯಾಗಿದೆ. ಜೂನ್ 25 ರಂದು ಬೆಳಿಗ್ಗೆ ಗಂಟೆ 09:09 ಕ್ಕೆ ಸರಿಯಾಗಿ ದೇವಳದಲ್ಲಿ ಸ್ವರ್ಣಗೌರಿ ಪೂಜೆ ಮತ್ತು ಸ್ವರ್ಣ ಸಮರ್ಪಿಸುವ ಭಕ್ತಾದಿಗಳಿಗೆ ಸ್ವರ್ಣ ಸಂಕಲ್ಪವನ್ನು ಹಮ್ಮಿಕೊಳ್ಳಲಾಗಿದೆ. ನಂತರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಸ್ವರ್ಣ ಗದ್ದುಗೆ ಮಾದರಿ ಅನಾವರಣಗೊಳ್ಳಲಿದೆ ಎಂದರು.
ಸ್ವರ್ಣ ಸಮರ್ಪಣಾ ಸಮಾರಂಭ ಮತ್ತು ಸನ್ನಿಧಾನದಲ್ಲಿ ಹೊರತುಪಡಿಸಿ ಬೇರೆ ಎಲ್ಲಿಯೂ ಸ್ವರ್ಣವನ್ನು ಪಡೆದುಕೊಳ್ಳಲಾಗುವುದಿಲ್ಲ. ಸ್ವರ್ಣ ಸಂಕಲ್ಪದಲ್ಲಿ ಭಾಗವಹಿಸುವ ಭಕ್ತರು ಮುಂಗಡವಾಗಿ ತಮ್ಮ ಹೆಸರನ್ನು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿಯಲ್ಲಿ ನೋಂದಾಯಿಸಬೇಕು. ನಿಗದಿತ ಸ್ವರ್ಣ ಸಮರ್ಪಿಸಿದ ಭಕ್ತಾದಿಗಳಿಗೆ ವಿಶೇಷ ಅವಕಾಶಗಳನ್ನು ಕಲ್ಪಿಸಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಈ ಪುಣ್ಯ ಅವಕಾಶವನ್ನು ಭಕ್ತರೆಲ್ಲರೂ ಸದುಪಯೋಗಪಡಿಸಿಕೊಂಡು ಸ್ವರ್ಣ ಸಮರ್ಪಣಾ ಸಮಾರಂಭದಲ್ಲಿ ಅಥವಾ ಸನ್ನಿಧಾನದಲ್ಲಿ ಸ್ವರ್ಣ ಸಮರ್ಪಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು.
ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಪ್ರಧಾನ ಕಾರ್ಯಾಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾರ್ಯಾಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಪ್ರಸನ್ನ ಆಚಾರ್ಯ (ದೇವಿ ಜುವೆಲ್ಲರ್ಸ್ ಕಾಪು), ಕಾರ್ಯದರ್ಶಿ ರವಿ ಭಟ್ ಮಂದಾರ, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಾಹಕ ಜಯರಾಮ್ ಆಚಾರ್ಯ, ಸಂದೀಪ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಕಳ : ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೈಗಾರಿಕಾ ಕೇಂದ್ರಗಳ ಭೇಟಿ

Posted On: 13-06-2024 06:47AM
ಕಾರ್ಕಳ : ವಾಣಿಜ್ಯ ವಿಭಾಗದ ವಿಧ್ಯಾರ್ಥಿಗಳಿಗೆ ಕಾಲೇಜಿನ ಆರಂಭದ ದಿನದಿಂದಲು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ಕಾರ್ಕಳದ ಪವರ್ ಪಾಯಿಂಟ್ ಬ್ಯಾಗ್ ಇಂಡಸ್ಟ್ರಿ ಹಾಗೂ ಮೂಡಬಿದ್ರೆಯ ಪವರ್ ಪಾಯಿಂಟ್ ಬ್ಯಾಟರಿ ಇಂಡಸ್ಟ್ರಿಗೆ ಭೇಟಿ ನೀಡಿ, ಇಲ್ಲಿ ವಿದ್ಯಾರ್ಥಿಗಳು ಉತ್ಪಾದನಾ ಪ್ರಕ್ರಿಯೆ , ಹೂಡಿಕೆ ಹಾಗೂ ವಿತರಣೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಪಡೆದರು.
ಮಕ್ಕಳಲ್ಲಿ ನಮ್ಮ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಯನ್ನು ಉಳಿಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್ ಗೆ ಭೇಟಿ ನೀಡಲಾಯಿತು.
ಕೈಗಾರಿಕಾ ಭೇಟಿ, ರಾಷ್ಟ್ರೀಯ ಸೇವಾ ಯೋಜನೆ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದು ಈ ಸಂಸ್ಥೆಯ ವಿಶೇಷ. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಉಮೇಶ್, ಚಂದ್ರಕಾಂತ್, ಮಹೇಶ್ ಶೆಣೈ, ಸುಧಿಕ್ಷಾ ಪೈ, ಕೃಪಾ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.
ಪಲಿಮಾರು: ವಿದ್ಯುತ್ ಲೈನ್ ಯೋಜನೆ - ಇನ್ನದಲ್ಲಿ ಬೃಹತ್ ಪ್ರತಿಭಟನೆ ; ತಾತ್ಕಾಲಿಕ ಸ್ಥಗಿತಕ್ಕೆ ಆದೇಶ

Posted On: 13-06-2024 06:44AM
ಪಲಿಮಾರು : ಇನ್ನ ಗ್ರಾಮ ಪಂಚಾಯಿತಿ ಬಳಿ ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿ ಮತ್ತು ಸುತ್ತಮುತ್ತಲಿನ ಯೋಜನಾ ಸಂತ್ರಸ್ಥರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ರೈತ ಪರ ಸಂಘ, ಸಂಸ್ಥೆಗಳು ಬುಧವಾರ ಬೃಹತ್ ಪ್ರತಿಭಟನಾ ಸಭೆ ನಡೆಸಿದರು.
ಈ ಸಂದರ್ಭ ಪ್ರತಿಭನಾಕಾರರು ಹಕ್ಕೊತ್ತಾಯ ಮಂಡಿಸಿದರು. ಪ್ರತಿಭನಾ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಲೈನ್ ಯೋಜನೆಯನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು.
ಕೃಷಿಕರಿಗೆ ತೊಂದರೆ ಉಂಟು ಮಾಡುವ ಯಾವುದೇ ಯೋಜನೆಗಳಿಗೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಇಂಧನ ಸಚಿವರಾದ ಕೆ.ಜೆ ಜಾರ್ಜ್ ಅವರೊಂದಿಗೆ ಮಾತನಾಡುತ್ತೇನೆ. ಆ ಬಳಿಕ ಸಭೆ ಎಲ್ಲರನ್ನೂ ಸೇರಿಸಿ ಸಭೆ ನಡೆಸುವುದಾಗಿ ಹೇಳಿದರು. ಈ ಯೋಜನೆಗೆ ಎರಡು ವರ್ಷಗಳ ಹಿಂದೆಯೇ ಒಪ್ಪಿಗೆ ಸಿಕ್ಕಿತ್ತು. ಇಲ್ಲಿನ ಸ್ಥಳೀಯ ಶಾಸಕರು ಒಪ್ಪಿಗೆ ನೀಡುವ ಸಂದರ್ಭದಲ್ಲಿ ಇಂಧನ ಸಚಿವರಾಗಿದ್ದರು. ಮುಂದಿನ ಭವಿಷ್ಯಕ್ಕಾಗಿ ಅಭಿವೃದ್ಧಿ ಬೇಕು. ಆದರೆ ಜನರ ಜೀನವದಲ್ಲಿ ಚೆಲ್ಲಾಟವಾಡುವ ಇಂತಹ ಯೋಜನೆ ಬೇಡ ಎಂದರು.
ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಮಾಜಿ ಸಚಿವ ವಿನಯಕುಮಾರ ಸೊರಕೆ, ಪರಿಸರ ಹೋರಾಟಗಾರ ಪ್ರೇಮಾನಂದ ಕಲ್ಮಾಡಿ, ನಂದಳಿಕೆ ಟೋಲ್ಗೇಟ್ ಹೋರಾಟ ಸಮಿತಿಯ ಆಧ್ಯಕ್ಷ ಸುಹಾಸ್ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲೆಯ ಕಿಸಾನ್ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಮನೋಹರ್ ಶೆಟ್ಟಿ, ರಾಜು ಗೌಡ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮತ್ತಿತರರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಿತಾ ಶೆಟ್ಟಿ, ವಿವಿಧ ಪಕ್ಷದ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.
ಉಡುಪಿ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಕುರಿತು ಇಲಾಖಾಧಿಕಾರಿಗಳ ಸಭೆ

Posted On: 12-06-2024 06:12PM
ಉಡುಪಿ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಸಂಬಂಧಿಸಿದಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ಕಚೇರಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ದಾರಿ ದೀಪಗಳ ಸಮರ್ಪಕ ನಿರ್ವಹಣೆ ಮಾಡಬೇಕು ಮತ್ತು ಪಡುಬಿದ್ರಿ, ಕಟಪಾಡಿ ಭಾಗದಲ್ಲಿ ದಿನೇ ದಿನೇ ಅಪಘಾತಗಳು ಹೆಚ್ಚುತ್ತಿದ್ದು ಅಪಘಾತ ತಡೆಗೆ ಬ್ಯಾರಿಕೇಡ್ ಹಾಗೂ ರಿಫ್ಲೆಕ್ಟರ್ ಗಳನ್ನು ಅಳವಡಿಸುವಂತೆ ಮತ್ತು ಹೆಜಮಾಡಿಯ ಕನ್ನಂಗಾರ್ ಸುಜ್ಲಾನ್ ಗೇಟ್ ಬಳಿ ಸರ್ವಿಸ್ ರಸ್ತೆ ನಿರ್ಮಿಸುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಮತ್ತು ರಾಷ್ಟ್ರೀಯ ಹೆದ್ದಾರಿಯ ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಹಾಗೂ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಗ್ಯಾಸ್ ಪೈಪ್ ಲೈನ್ ಗುಂಡಿಗಳನ್ನು ತೆಗೆದಿದ್ದು ಮಳೆಗಾಲ ಸಮಯದಲ್ಲಿ ಇದರಲ್ಲಿ ನೀರು ತುಂಬಿ ಅಪಘಾತ ಸಂಭವಿಸುತ್ತದೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಜಿಲ್ಲಾಧಿಕಾರಿಗಳಾದ ವಿದ್ಯಾ ಕುಮಾರಿ, ಸಹಾಯಕ ಆಯುಕ್ತರಾದ ರಶ್ಮಿ, ಪೋಲಿಸ್ ವರಿಷ್ಠಾಧಿಕಾರಿಗಳಾದ ಡಾ. ಅರುಣ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊರಗಜ್ಜನ ಅಭಯ - ಕೈ ಸೇರಿದ ಕಳವಾದ ದ್ವಿಚಕ್ರ ವಾಹನ ; ಭಕ್ತನಿಂದ ನಿತ್ಯವೂ ಸ್ವಚ್ಛತೆಯ ಕಾಯಕದ ಪ್ರಮಾಣ

Posted On: 12-06-2024 04:55PM
ಉಡುಪಿ : ಇಲ್ಲಿಯ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಕೆಲಸಕಿದ್ದ ಪ್ರವೀಣ್ ಸೇರಿಗಾರ್ ರ ದ್ವಿಚಕ್ರ ವಾಹನ ಕಳವಾಗಿ ಮಾನಸಿಕವಾಗಿ ಕುಗ್ಗಿದಾಗ ಹೋಟೆಲ್ ಪಕ್ಕದ ಅಂಗಡಿಯಾತ ನೀಡಿದ ಸಲಹೆಯಂತೆ ಹತ್ತಿರದ ಕೊರಗಜ್ಜ ಸನ್ನಿಧಿಗೆ ಭೇಟಿಯಿತ್ತು ಹರಕೆ ಹೇಳಿಕೊಂಡಾದ ಬಳಿಕ 15 ದಿವಸದಲ್ಲಿ ಕಳಕೊಂಡ ವಾಹನ ಗೋವಾದಲ್ಲಿ ಪತ್ತೆಯಾದ ಬಗ್ಗೆ ಪೋಲೀಸರು ಮಾಹಿತಿ ನೀಡುತ್ತಾರೆ. ಇದರಿಂದ ಸಂತಸಗೊಂಡ ಆ ವ್ಯಕ್ತಿ ನನಗೆ ದೈವ ಕೈ ಬಿಡ್ಲಿಲ್ಲ ಎಂಬ ಖುಷಿಯಿಂದ ದೈವಸ್ಥಾನಕ್ಕೆ ಭೇಟಿ ಕೊಟ್ಟು ಹೇಳಿದ ಹರಕೆಯನ್ನು ಒಪ್ಪಿಸುತ್ತಾರೆ. ಮುಂದೆ ದಿನನಿತ್ಯ ದೈವಸ್ಥಾನಕ್ಕೆ ಸಂಜೆ 5ಗಂಟೆಗೆ ಬಂದು ದೈವ ಸನ್ನಿಧಿಯ ಸ್ವಚ್ಛತೆಯನ್ನು ಮಾಡುತ್ತಾರೆ. ಇದರಿಂದ ನೆಮ್ಮದಿ ಕೂಡ ಸಿಗುತ್ತದೆ ಎನ್ನುತ್ತಾರೆ.
ಪ್ರವೀಣ್ ಸೇರಿಗಾರ್ ರ ಇಷ್ಟಾರ್ಥ ಪೂರೈಸಿದ ಕ್ಷೇತ್ರವೇ ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಸಾವಿರಾರು ವರ್ಷಗಳ ಇತಿಹಾಸವಿರುವ ಅನಂತೇಶ್ವರ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಉಡುಪಿ ತೆಂಕು ಪೇಟೆ ವುಡ್ ಲ್ಯಾಂಡ್ ಹೋಟೆಲ್ ಹತ್ತಿರದ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನವಾಗಿದೆ. ಅಷ್ಟ ಮಠಗಳಿಗೂ ಈ ದೈವಸ್ಥಾನಕ್ಕೆ ನಿಕಟ ಸಂಬಂಧವಿದೆ. ವರ್ಷದಲ್ಲಿ 12 ಸಂಕ್ರಮಣ ಪೂಜೆ, ಎರಡು ಮಾರಿಪೂಜೆ, ಕಾಲಾವಧಿ ಮೂರು ದಿವಸ ನೇಮೋತ್ಸವ ಹಾಗೂ ಭಕ್ತರ ಹರಕೆಯ ದರ್ಶನ ಸೇವೆ ಕೋಲಸೇವೆ ಜರಗುತ್ತದೆ.
ಪ್ರತಿ ತಿಂಗಳು ಸಂಕ್ರಮಣ ದಿವಸ ವಿಶೇಷ ಪೂಜೆ ಬೆಳಿಗ್ಗೆ 8:30 ರಿಂದ ಆರಂಭಗೊಂಡು ಮಧ್ಯಾಹ್ನ 2 ಗಂಟೆವರೆಗೆ ದೈವಸ್ಥಾನ ತೆರೆದಿರುತ್ತದೆ ಈ ಸಂದರ್ಭದಲ್ಲಿ ಊರ ಪರ ಊರ ಭಕ್ತಾದಿಗಳು ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾಗುತ್ತಾರೆ.
ಕಾಪು : ದಂಡತೀರ್ಥ ವಿದ್ಯಾ ಸಂಸ್ಥೆಯಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ

Posted On: 12-06-2024 04:49PM
ಕಾಪು : ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಬಾಲ ಕಾರ್ಮಿಕ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು.
ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಆಲ್ಬನ್ ರೋಡ್ರಿಗಸ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿಧರು. ಈ ಸಂದರ್ಭ ಮಾತನಾಡಿದ ಅವರು ಭಾರತದಲ್ಲಿರುವ ಬಡ ಕುಟುಂಬದ ಬಗ್ಗೆ ತಿಳಿಸಿ, ಆರ್ಥಿಕ ಅಸಮಾನತೆಯನ್ನು ಸರಿದೂಗಿಸುವುದಕ್ಕಾಗಿ ಜನರು ತಮ್ಮ ಮಕ್ಕಳನ್ನು ದುಡಿಮೆಗೆ ಕಳುಹಿಸುತ್ತಿದ್ದಾರೆ. ಆದರೆ ಇದು ಕಾನೂನು ಪ್ರಕಾರ ಅಪರಾಧವಾಗಿರುತ್ತದೆ. ಇದರ ಬಗ್ಗೆ ನಾವು ಎಚ್ಚರವಹಿಸಬೇಕಾಗಿದೆ ಎಂದರು.
ಸಂಸ್ಥೆಯ ಪ್ರಾಂಶುಪಾಲ ನೀಲಾನಂದ ನಾಯ್ಕ, ಶಿಕ್ಷಣ ಸಂಯೋಜಕರಾದ ಶಿವಣ್ಣ ಬಾಯಾರ್ ಹಾಗೂ ಶಿಕ್ಷಕ -ಶಿಕ್ಷಕೇತರರು ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರಿಗೆ ಉಡುಪಿಯಲ್ಲಿ ಅಭಿನಂದನೆ

Posted On: 11-06-2024 09:13PM
ಉಡುಪಿ : 2ನೇ ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜ ಇವರನ್ನು ಉಡುಪಿ ಜಿಲ್ಲಾ ಕ್ರೈಸ್ತ ಸಮುದಾಯದವರು ಡಾನ್ ಬಾಸ್ಕೋ ಸಭಾಭವನದಲ್ಲಿ ಅಭಿನಂದಿಸಿದರು. ಅಭಿನಂದನಾ ಭಾಷಣ ಮಾಡಿದ ಉಡುಪಿ ಶೋಕ ಮಾತ ದೇವಾಲಯದ ಪ್ರಧಾನ ಧರ್ಮಗುರು ಫಾ. ಚಾರ್ಲ್ಸ್ ಮಿನೇಜಸ್, ಐವನ್ ಡಿಸೋಜರವರು ಸಮಾಜ ಮತ್ತು ಪಕ್ಷಕ್ಕೆ ನೀಡಿದ ಸೇವೆಗೆ ಸಿಕ್ಕ ಪ್ರತಿಫಲ. ಸರ್ಕಾರ ನಮ್ಮ ಕ್ರೈಸ್ತ ಸಮಾಜಕ್ಕೆ ನೀಡಿದ ಕೊಡುಗೆ. ಐವನ್ ಡಿಸೋಜ ಇವರ ಸೇವೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಲಿ ಎಂದು ಶುಭ ಹಾರೈಸಿದರು.

ಕ್ರೈಸ್ತ ಬಾಂಧವರ ಸನ್ಮಾನ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜ, ಈ ಹುದ್ದೆಯು ಕ್ರೈಸ್ತ ಸಮುದಾಯದ ಕೊಡುಗೆಯನ್ನು ಗುರುತಿಸಿ ಕಾಂಗ್ರೆಸ್ ಸರಕಾರ ಈ ಹುದ್ದೆಯನ್ನು ನೀಡಿದೆ. ಈ ಹುದ್ದೆಯನ್ನು ಪಡೆದ ನಾನು ಧನ್ಯನು. ನನ್ನ ಅವಧಿಯಲ್ಲಿ ಸಮಾಜದ ಕುಂದು ಕೊರತೆಗಳನ್ನು ನನ್ನ ಕೈಲಾದ ಮಟ್ಟಿಗೆ ಸರಿಪಡಿಸಲು ಪ್ರಯತ್ನಿಸುತ್ತೇನೆ. ಹಾಗೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ. ಸಮಾಜದ ಎಲ್ಲಾ ವರ್ಗದ ಹಾಗೂ ಧರ್ಮದ ಜನರನ್ನು ಒಗ್ಗೂಡಿಸಿ ಅವರ ದ್ವನಿಯಾಗಿ ವಿಧಾನ ಪರಿಷತ್ ಮತ್ತು ಸರಕಾರದ ಮಟ್ಟದಲ್ಲಿ ನನ್ನ ಕೊಡುಗೆಯನ್ನು ಕೊಡಲು ಬದ್ದನಿದ್ದೇನೆ. ಕಳೆದ ಅವಧಿಯಲ್ಲಿ ಜಾತಿ ಧರ್ಮ ನೋಡದೆ ಮುಖ್ಯಮಂತ್ರಿ ನಿದಿಯಿಂದ ಧಾಖಲೆಯ ಮಟ್ಟದಲ್ಲಿ ಪರಿಹಾರ ನಿಧಿಯನ್ನು ಅಗತ್ಯವಿದ್ದವರಿಗೆ ತಲುಪಿಸಿದ್ದೇನೆ. ನನ್ನಿಂದ ಕೆಲಸ ತೆಗೆಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಉಡುಪಿ ಶೋಕ ಮಾತ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ಫಾ| ಚಾರ್ಲ್ಸ್ ಮಿನೆಜಸ್, ಸಂತ ಮೇರಿ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರಾದ ಫಾ| ವಿಜಯ್ ಡಿಸೋಜ, ಐವನ್ ಡಿಸೋಜರವರ ಧರ್ಮಪತ್ನಿ ಡಾ. ಕವಿತಾ, ಪಾಲನ ಮಂಡಳಿಯ ಉಪಾಧ್ಯಕ್ಷ ಮ್ಯಾಕ್ಷಿಮ್ ಡಿಸೋಜ ಮತ್ತಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಜಿತೇಂದ್ರ ಪುರ್ತಾಡೋ, ಮೇರಿ ಡಿಸೋಜ, ಗ್ರೇಸಿ ಕರ್ಡೊಜ,ವಿಲ್ಸನ್ ರೋಡ್ರಿಗಸ್ ಶಿರ್ವ, ಮೆಲ್ವಿನ್ ಅರಾನ್ಹ, ಚಾರ್ಲ್ಸ್ ಅಂಬ್ಲರ್, ಕಥೋಲಿಕ್ ಸಭಾ ಉಡುಪಿ ಜಿಲ್ಲಾ ಅಧ್ಯಕ್ಷ ಸಂತೋಷ್ ಕರ್ನೆಲಿಯೋ, ಲೆಸ್ಲಿ ಕರ್ನೆಲಿಯೋ, ಪ್ರಶಾಂತ್ ಜತ್ತನ್ನ, ರೋಜಾರಿಯೋ ಡಿಸೋಜ, ಅನಿತಾ ಡಿಸೋಜ ಬೆಲ್ಮಣ್ ಮತ್ತಿತರರು ಹಾಜರಿದ್ದರು. ಸಮಾರಂಭದಲ್ಲಿ ಹಾಜರಿದ್ದ ಪ್ರಮುಖರು ಐವನ್ ಡಿಸೋಜರಿಗೆ ಸರಕಾರ ತನ್ನ ಸಂಪುಟದಲ್ಲಿ ಉನ್ನತ ಹುದ್ದೆಯನ್ನು ನೀಡಬೇಕಾಗಿ ಅಭಿಪ್ರಾಯ ಮಂಡಿಸಿದರು. ಅಭಿನಂದನ ಸಮಾರಂಭದ ಬಳಿಕ ಐವನ್ ಡಿಸೋಜರು ಧರ್ಮಧ್ಯಕ್ಷರನ್ನು ಭೇಟಿ ಮಾಡಿ ಆಶೀರ್ವಾಚನ ಪಡೆದರು.
ಶಿರ್ವ ಗ್ರಾಮ ಪಂಚಾಯತ್ ಸದಸ್ಯ ಮೆಲ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿ, ಇಫ್ಕಾ ಸಂಘಟನೆಯ ಮಾಜಿ ಅಧ್ಯಕ್ಷ ಲುವಿಸ್ ಲೋಬೊ ವಂದಿಸಿದರು.
ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರಿಗೆ ರಕ್ಷಣಾಪುರ ಕಾಪುವಿನ ಅಮ್ಮ ರಕ್ಷೆಯಾಗಿದ್ದಾಳೆ : ಕೇರಳ ಕೈಮುಕ್ಕು ನಾರಾಯಣನ್ ನಂಬೂದರಿ

Posted On: 11-06-2024 11:57AM
ಕಾಪು : ಕರಾವಳಿಯ ಬಹುತೇಕ ದೈವಜ್ಞರು, ಜ್ಯೋತಿಷಿಗಳಿಗೆ ಗುರುಗಳಾಗಿ ಪ್ರಸಿದ್ಧರಾಗಿರುವ ಕೇರಳ ಕೈಮುಕ್ಕು ನಾರಾಯಣನ್ ನಂಬೂದರಿ ಅವರು ರವಿವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇಗುಲದ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕಾಪು ಶ್ರೀ ಮಾರಿಯಮ್ಮ ದೇವಿಯ ಸನ್ನಿಧಾನವು ಅತ್ಯಂತ ಜಾಗೃತ ಸಾನಿಧ್ಯವಾಗಿದ್ದು ಕ್ಷೇತ್ರ ವೈಭವೋಪೇತವಾಗಿ ಬೆಳಗುತ್ತಿದೆ. ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರಿಗೆ ರಕ್ಷಣಾಪುರ ಕಾಪುವಿನಲ್ಲಿ ನೆಲೆಸಿರುವ ಮಾರಿಯಮ್ಮ ರಕ್ಷೆಯಾಗಿದ್ದಾಳೆ ಎಂದು ಹೇಳಿದರು.
ಕಾಪು ಮಾರಿಗುಡಿ ಅತ್ಯುತ್ತಮ ರೀತಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದೆ. ಕೆಂಪು ಇಳಕಲ್ ಶಿಲೆಯೊಂದಿಗೆ ನಿರ್ಮಾಣಗೊಳ್ಳುತ್ತಿರುವ ದೇವಸ್ಥಾನವು ದೇಶ ವಿದೇಶಗಳ ಭಕ್ತರನ್ನು ತನ್ನತ್ತ ಸೆಳೆಯುತ್ತಿದ್ದು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ, ಉಡುಪಿ ಕ್ಷೇತ್ರ ವನ್ನು ಸಂದರ್ಶಿಸುವ ಭಕ್ತರು ಕಾಪು ಮಾರಿಯಮ್ಮನ ಸನ್ನಿದಿಗೂ ಭೇಟಿ ನೀಡುವ ಪುಣ್ಯಕಾಲ ನಮ್ಮ ಮುಂದಿದೆ ಎಂದರು.
ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕ್ಷೇತ್ರದ ಪ್ರಧಾನ ತಂತ್ರಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿ ಜೀರ್ಣೋದ್ಧಾರ ಕಾಮಗಾರಿ ನಡೆದು ಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ, ಅಭಿವೃದ್ಧಿ ಸಮಿತಿಯ ಗೌರವ ಸಲಹೆಗಾರ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಉಪಾಧ್ಯಕ್ಷ ಮಾಧವ ಆರ್. ಪಾಲನ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಪ್ರಚಾರ ಸಮಿತಿಯ ಸಂಚಾಲಕ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಾಹಕ ಜಯರಾಮ್ ಆಚಾರ್ಯ, ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಸಂಚಾಲಕ ರಾಧಾರಮಣ ಶಾಸ್ತ್ರೀ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.