Updated News From Kaup

ಉಚ್ಚಿಲ ದಸರಾ ಉತ್ಸವ - 2024 ವಿಜ್ರಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ : ಡಾ. ಜಿ. ಶಂಕರ್

Thumbnail
Posted On: 18 Jul 2024, 07:53 PM

ಉಚ್ಚಿಲ : ಕಳೆದ 2 ವರ್ಷಗಳಲ್ಲಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ವೈಭವೋಪೇತ ಹಾಗೂ ಶಿಸ್ತುಬದ್ಧವಾಗಿ ನಡೆದ ಉಚ್ಚಿಲ ದಸರಾವನ್ನು ಈ ಬಾರಿ ಅಕ್ಟೋಬರ್ 3 ರಿಂದ 12ರವರೆಗೆ ಸರ್ವರ ಸಹಕಾರದೊಂದಿಗೆ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ವಿಜ್ರಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ. ದಸರಾ ಯಶಸ್ಸಿಗೆ ಭಕ್ತಾದಿಗಳ ಸಹಕಾರ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ. ಶಂಕರ್ ಹೇಳಿದರು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಕ್ಷೇತ್ರಾಡಳಿತ ಸಮಿತಿ, ಉಚ್ಚಿಲ ದಸರಾ ಸಮಿತಿಯ ಸಹಯೋಗದೊಂದಿಗೆ ಬುಧವಾರ ಉಚ್ಚಿಲ ಮೊಗವೀರ ಭವನದ ಶಾಲಿನಿ ಜಿ. ಶಂಕರ್ ವೇದಿಕೆಯಲ್ಲಿ ನಡೆದ ಉಚ್ಚಿಲ ದಸರಾ-2024 ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ದಸರಾ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ದಿನಂಪ್ರತಿ ಚಂಡಿಕಾ ಯಾಗ, ಭಜನೆ, ಸಹಸ್ರ ಸುಮಂಗಲೆಯರಿಂದ ಪ್ರತಿನಿತ್ಯ ಸಾಮೂಹಿಕ ಕುಂಕುಮಾರ್ಚನೆ, ಖ್ಯಾತ ಕಲಾವಿದರು ಹಾಗೂ ಸ್ಥಳೀಯ ಮಹಿಳೆಯರಿಂದ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಿತ್ಯ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ಸಾರ್ವಜನಿಕ ಉಪಹಾರದ ವ್ಯವಸ್ಥೆ ಮಾಡಲಾಗುವುದು. ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮುದ್ದು ಮಕ್ಕಳಿಗಾಗಿ ಶ್ರೀ ಶಾರದಾ ಮಾತೆ ಛದ್ಮವೇಷ ಸ್ಪರ್ಧೆ, ಮಹಿಳೆಯರಿಗಾಗಿ ಹುಲಿಕುಣಿತ ಸ್ಪರ್ಧೆ ನಡೆಯಲಿದೆ. ಮಾತ್ರವಲ್ಲದೆ ಕುಸ್ತಿ ಹಾಗೂ ದೇಹದಾರ್ಡ್ಯ ಸ್ಪರ್ಧೆ ಆಯೋಜಿಸಲಾಗುವುದು. ಸಾಮೂಹಿಕ ದಾಂಡಿಯ ನೃತ್ಯ, ಅವಿಭಜಿತ ದ.ಕ. ಜಿಲ್ಲೆ ವಿವಿಧ ತಂಡಗಳಿಂದ ಸಾಮೂಹಿಕ ಕುಣಿತ ಭಜನೆ ಇರಲಿದೆ. ಅ.12 ರಂದು ಶೋಭಾಯಾತ್ರೆಯು ಹೊರಡಲಿದ್ದು, ಕಾಪು ದೀಪಸ್ಥಂಭ ಬಳಿಯ ಸಮುದ್ರ ತೀರದಲ್ಲಿ ವಿಗ್ರಹಗಳ ವಿಸರ್ಜನೆ ಮಾಡಲಾಗುವುದು. ಶೋಭಾಯಾತ್ರೆಯಲ್ಲಿ ನವ ನವೀನ ಮಾದರಿಯ ಟ್ಯಾಬ್ಲೋಗಳು, ಹುಲಿವೇಷ ತಂಡಗಳು, ಭಜನಾ ತಂಡಗಳು, ಚೆಂಡೆ ಬಳಗ ಸೇರಿದಂತೆ ವಿವಿಧ ವೇಷ ಭೂಷಣಗಳು ಇರಲಿದೆ. ವಿಸರ್ಜನೆಯ ಸಂದರ್ಭದಲ್ಲಿ ಸಮುದ್ರ ಮಧ್ಯೆ ಬೋಟುಗಳಿಂದ ವಿದ್ಯುತ್ ದೀಪಾಲಂಕಾರ, ಲೇಸರ್ ಶೋ, ಮಹಿಳೆಯರಿಂದ ಏಕಕಾಲದಲ್ಲಿ ಸಾಮೂಹಿಕ ಮಂಗಳಾರತಿಯ ಕಾರ್ಯಕ್ರಮವಿರುತ್ತದೆ. ಕಾಶಿಯ ಶ್ರೀ ವಿಶ್ವನಾಥ ಕ್ಷೇತ್ರದಿಂದ ಆಗಮಿಸುವ ಅರ್ಚಕರಿಂದ ಬ್ರಹತ್ ಗಂಗಾರತಿ ಬೆಳಗಿಸುವ ಕಾರ್ಯಕ್ರಮ, ಆಕರ್ಷಕ ಸುಡು ಮದ್ದು ಪ್ರದರ್ಶನ ಆಯೋಜಿಸಲಾಗುವುದು ಎಂದರು. ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ ಮಾತನಾಡಿ, ವಿಭಿನ್ನವಾಗಿ ಹಾಗೂ ವಿಶ್ವಕ್ಕೆ ಮಾದರಿಯಾಗಿ ಉಚ್ಚಿಲ ದಸರಾ ನಡೆಸಲಾಗುತ್ತದೆ. ಹಿಂದಿನಂತೆ ಮಹಾಲಕ್ಷ್ಮೀ ಬ್ಯಾಂಕ್ ಮತ್ತು ಮೀನು ಮಾರಾಟ ಫೆಡರೇಶನ್ ಉಚ್ಚಿಲ ದಸರಾದ ಭಾಗವಾಗಲಿದೆ. ಈ ಬಾರಿ ಮಹಿಳಾ ಹುಲಿ ವೇಷ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಸಂಸ್ಥೆಯ ವತಿಯಿಂದ ನಡೆಸಲಾಗುವುದು ಎಂದರು. ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 2 ವರ್ಷಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಉಚ್ಚಿಲ ದಸರಾ ಮಹೋತ್ಸವವನ್ನು ಈ ಬಾರಿ ನಾಡಿಗೆ ಮಾದರಿಯಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಈ ಬಾರಿ ಸುಮಾರು ರೂ.4 ಕೋ. ವೆಚ್ಚದ ಬಜೆಟ್ ನಿರ್ಧರಿಸಲಾಗಿದ್ದು, ಜಾತಿ ಮತ ಬೇಧ ಮರೆತು ಸರ್ವರ ಸಹಕಾರ ಹಾಗೂ ವಿವಿಧ ಗ್ರಾಮಸಭೆಗಳು, ಮೀನುಗಾರ ಸಂಘಟನೆಗಳ ಬೆಂಬಲದೊಂದಿಗೆ ನಡೆಸಲು ನಿರ್ಧರಿಸಲಾಗಿದೆ ಎಂದರು. ದ.ಕ.ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೇಂಗ್ರೆ ಮಾತನಾಡಿ, ಮೊಗವೀರ ಸಮಾಜದ ವೀರ ಪರಂಪರೆಯ ಪ್ರತೀಕವಾಗಿ ಈ ಬಾರಿ ಉಚ್ಚಿಲ ದಸರಾದಲ್ಲಿ ಕುಸ್ತಿ ಹಾಗೂ ದೇಹದಾರ್ಡ್ಯ ಸ್ಪರ್ಧೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು ಅದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ ಎಂದರು. ದಸರಾ ಸಮಿತಿಗೆ ಪುನರಾಯ್ಕೆ: ಕಳೆದ ಬಾರಿ ಉಚ್ಚಿಲ ದಸರಾ ಯಶಸ್ವಿಯ ವಿನಯ ಕರ್ಕೇರ ಮಲ್ಪೆಯವರನ್ನು ಈ ಬಾರಿ ಉಚ್ಚಿಲ ದಸರಾ-2024 ಸಮಿತಿಯ ಅಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡಲಾಯಿತು. ಅವರು ಈ ಬಾರಿಯ ದಸರಾ ಮಹೋತ್ಸವದ ವಿವಿಧ ಸಮಿತಿಗಳನ್ನು ಘೋಷಿಸಿದರು. ಶ್ರೀ ಕ್ಷೇತ್ರ ಉಚ್ಚಿಲದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ್ ಎಸ್.ಸುವರ್ಣ, ಹಿರಿಯ ಮೊಗವೀರ ಮುಖಂಡರಾದ ಹರಿಯಪ್ಪ ಕೋಟ್ಯಾನ್, ದಯಾನಂದ ಸುವರ್ಣ, ಮಹಾಜನ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಉಷಾರಾಣಿ ಬೋಳೂರು, ಮಹಾಜನ ಸಂಘದ ಕೋಶಾಕಾರಿ ರತ್ನಾಕರ ಸಾಲ್ಯಾನ್, ಜತೆ ಕಾರ್ಯದರ್ಶಿ ಸುಜಿತ್ ಎಸ್. ಸಾಲ್ಯಾನ್, ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಜಯಂತ್ ಅಮೀನ್ ಕೋಡಿ, ಚೇತನ್ ಬೇಂಗ್ರೆ, ಮನೋಜ್ ಪಿ. ಕಾಂಚನ್, ಸುಗುಣಾ ಕರ್ಕೇರ, ಉದಯಕುಮಾರ್ ಹಟ್ಟಿಯಂಗಡಿ, ವರದರಾಜ್ ಬಂಗೇರ, ಸತೀಶ್ ಅಮೀನ್ ಬಾರ್ಕೂರು, ಮನೋಹರ್ ಬೋಳೂರು, ಯುವರಾಜ್ ಕಿದಿಯೂರು ಉಪಸ್ಥಿತರಿದ್ದರು. ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್‌ಕುಮಾರ್ ಮಟ್ಟು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಭಾರತ ಸ್ಕೌಟ್ಸ್, ಗೈಡ್ಸ್ ಸ್ಥಳೀಯ ಸಂಸ್ಥೆ ಕಲ್ಯಾಣಪುರ - ವಾರ್ಷಿಕ ಮಹಾಸಭೆ, ಪುನಶ್ಚೇತನ ಕಾರ್ಯಾಗಾರ

Thumbnail
Posted On: 18 Jul 2024, 07:40 PM

ಉಡುಪಿ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕಲ್ಯಾಣಪುರ ಇದರ ವಾರ್ಷಿಕ ಮಹಾಸಭೆ ಮತ್ತು ಪುನಶ್ಚೇತನ ಕಾರ್ಯಾಗಾರ ಜರಗಿತು. ಜಿಲ್ಲಾ ಮುಖ್ಯ ಆಯುಕ್ತರಾಗಿ ಆಯ್ಕೆಯಾದ ಇಂದ್ರಾಳಿ ಜಯಕರ ಶೆಟ್ಟಿಯವರು ಮಾತನಾಡಿ, ಶಿಸ್ತು, ತಾಳ್ಮೆ, ಸೇವೆ ಹಾಗೂ ಎಲ್ಲಾ ದಳ ನಾಯಕರ ಸಹಕಾರವಿದ್ದರೆ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆಯನ್ನು ಉತ್ತುಂಗಕ್ಕೆ ಏರಿಸಲು ಹಾಗೂ ಮಾದರಿ ಜಿಲ್ಲೆಯನ್ನಾಗಿ ಮಾಡಲು ನಿಮ್ಮೆಲ್ಲರ ಸಹಕಾರದಿಂದ ಸಾಧ್ಯ ಎಂದು ತಿಳಿಸಿದರು. ವಾರ್ಷಿಕ ಮಹಾಸಭೆ ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಅಲನ್ ಲುವಿಸ್ ರವರು ವಹಿಸಿದ್ದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಫ್ಲೋರಿನ ಡಿಸಿಲ್ವ ವಾರ್ಷಿಕ ವರದಿ , ನಡಾವಳಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಜಿಲ್ಲಾ ಗೈಡ್ ಆಯುಕ್ತ ಜ್ಯೋತಿ ಜೆ ಪೈ. ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಡಾ.ಜಯರಾಮ್ ಶೆಟ್ಟಿ ಹಾಗೂ ಖಜಾಂಚಿ ವಿಜಯ ಮಾಯಾಡಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆಯಾದ ಸುಮನ ಶೇಖರ್ ಜಿಲ್ಲಾ ಸಂಸ್ಥೆಗಳ ಚಟುವಟಿಕೆಗಳ ಬಗ್ಗೆ, ರಾಜ್ಯ ಸಂಸ್ಥೆ ನೀಡಿರುವ ವಾರ್ಷಿಕ ಯೋಜನಾ ಪುಸ್ತಕ ಹಸ್ತಾಂತರಿಸಿ ಅದರ ಬಗ್ಗೆ ವಿವರಿಸಿದರು. ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರವನ್ನು ಜಿಲ್ಲಾ ಕಾರ್ಯದರ್ಶಿ ಆನಂದ ಬಿ ಅಡಿಗ ನೆರವೇರಿಸಿದರು. ಸತ್ಯಾವತಿ ಸ್ವಾಗತಿಸಿದರು. ಕಬ್ ಮಾಸ್ಟರ್ ಶ್ರೀಪಾದ ಕಾರ್ಯಕ್ರಮ ನಿರ್ವಹಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ ಕಾಪುಗೆ ಸಹಾಯಕ ಜಿಲ್ಲಾ ಆಯುಕ್ತರಾಗಿ ಸಮಾಜ ಸೇವಕ ಫಾರೂಕ್ ಚಂದ್ರನಗರ ನೇಮಕ

Thumbnail
Posted On: 18 Jul 2024, 07:29 PM

ಕಾಪು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಪು ಸ್ಥಳೀಯ ಸಂಸ್ಥೆಯ ಸಹಾಯಕ ಜಿಲ್ಲಾ ಆಯುಕ್ತರಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತ ಕಾಪುವಿನ ಸಮಾಜ ಸೇವಕ ಫಾರೂಕ್ ಚಂದ್ರನಗರ ಆಯ್ಕೆಯಾಗಿದ್ದಾರೆ ಎಂದು ಕಾಪು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಯಾದ ಮರಿಯ ಅನಿತಾ ಮೆಂಡೋನ್ಸ ತಿಳಿಸಿದ್ದಾರೆ. ಇವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ಶಿಕ್ಷಕರು ಶುಭ ಹಾರೈಸಿದ್ದಾರೆ.

ನಾಳೆ (ಜುಲೈ 19) : ರೆಡ್ ಅಲಟ್೯ - ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

Thumbnail
Posted On: 18 Jul 2024, 07:23 PM

ಉಡುಪಿ : ಜಿಲ್ಲೆಯಾದ್ಯಂತ ನಿರಂತರ ಮಳೆಯಿಂದ ರೆಡ್ ಅಲಟ್೯ ಇರುವ ಕಾರಣ ಶುಕ್ರವಾರ (ಜುಲೈ 19) ರಂದು ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ನೀಡಿದ್ದಾರೆ.

ಕಟಪಾಡಿ : ಕೆ ಸುಧಾಕರ ಪೈ ನಿಧನ

Thumbnail
Posted On: 17 Jul 2024, 08:14 PM

ಕಟಪಾಡಿ : ಇಲ್ಲಿಯ ವಿಜಯಾ ಇಂಡಸ್ಟ್ರೀಸ್ ಮತ್ತು‌ ವಿಜಯ‌ ಸೋಲಾರ್ ಸಂಸ್ಥೆಯ ಸ್ಥಾಪಕ ಕೆ.ಪುರುಷೋತ್ತಮ ಪೈ ಅವರ ಪುತ್ರ ದುಬೈ ಉದ್ಯಮಿ ಕೆ ಸುಧಾಕರ ಪೈ(58) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ತಂದೆ , ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಕಟಪಾಡಿಯ ಪ್ರಮುಖ ಉದ್ಯಮಿ ಕೆ. ಸತ್ಯೇಂದ್ರ ಪೈ ಅವರ ಕಿರಿಯ ಸಹೋದರರಾಗಿದ್ದ ಅವರು ಸುಮಾರು 35 ವರ್ಷಗಳಿಂದ ದುಬೈಯಲ್ಲಿ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದು ಪ್ರಸ್ತುತ ದುಬೈನ ಟೆಕ್ನೋ ಮೆರೈನ್ ಪ್ರೈ ಲಿ. ಸಂಸ್ಥೆಯ ಪಾಲುದಾರರಾಗಿದ್ದರು. ಕೊಡುಗೈ ದಾನಿಯಾಗಿದ್ದ ಇವರು ಶಿಕ್ಷಣ ಸಂಸ್ಥೆ ಮತ್ತು ದೇವಸ್ಥಾನಗಳಿಗೆ ದೇಣಿಗೆ ನೀಡುತ್ತಿದ್ದರು.

ಒಂದು ಜಿಲ್ಲೆ ಒಂದು ತಾಣ ಕಾಪು ತಾಲೂಕು ಆಯ್ಕೆ

Thumbnail
Posted On: 17 Jul 2024, 12:18 PM

ಕಾಪು : ಇಲ್ಲಿನ ಲೈಟ್‌ಹೌಸ್ ಅಭಿವೃದ್ಧಿಗೆ ಹಿಂದಿನ ಸರಕಾರ ಮಂಜೂರು ಮಾಡಿದ್ದ 5 ಕೋಟಿ ರೂ. ಅನುದಾನವನ್ನು ತಡೆ ಹಿಡಿಯಲಾಗಿದೆ. ಇದರಿಂದ ಬೀಚ್‌ಗೆ ಬರುವ ಪ್ರವಾಸಿಗರಿಗೆ ಮೂಲಸೌಕರ್ಯ ಇಲ್ಲವಾಗಿದೆ. ಕಾಪು ಲೈಟ್‌ ಹೌಸ್ ಮತ್ತು ಅಂತಾರಾಷ್ಟ್ರೀಯ ಮಾನ್ಯತೆಯ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಒದಗಿಸಿ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿಧಾನಸಭೆಯಲ್ಲಿ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, 2022-23ರಲ್ಲಿ ಹಿಂದಿನ ಸರಕಾರದಿಂದ 5 ಕೋ.ರೂ. ಮಂಜೂರು ಮಾಡಿದ್ದರೂ ನಿಧಿ ಇಲ್ಲದ ಕಾರಣ ತಡೆಹಿಡಿಯಲಾಗಿತ್ತು. ಪ್ರಸ್ತುತ 'ಒಂದು ಜಿಲ್ಲೆ ಒಂದು ತಾಣ' ಯೋಜನೆಯಡಿ ಕಾಪು ತಾಲೂಕನ್ನು ರಾಜ್ಯ ಸರಕಾರ ಆಯ್ಕೆ ಮಾಡಿದ್ದು ಅಭಿವೃದ್ಧಿ ಪಡಿಸಲಾಗುವುದು ಎಂದರು. ಕಾಪು ಲೈಟ್‌ಹೌಸ್ ಬೀಚ್ ಮತ್ತು ಅನತಿ ದೂರದಲ್ಲಿರುವಪಡುಬಿದ್ರಿ ಬ್ಲೂಫ್ಲ್ಯಾಗ್‌ ಬೀಚ್‌ನ ಮೂಲಸೌಕರ್ಯ ವೃದ್ಧಿಗೂ ಗಮನಹರಿಸಬೇಕೆಂಬ ಕಾಪು ಶಾಸಕರ ಆಗ್ರಹಕ್ಕೆ ಉತ್ತರಿಸಿದ ಸಚಿವರು, ಒಂದು ಬೀಚ್ ಆದರೆ ತತ್‌ಕ್ಷಣ ಬಜೆಟ್‌ನಲ್ಲಿ ಅಳವಡಿಸಿಕೊಂಡು ಅಭಿವೃದ್ಧಿ ಸಾಧ್ಯವಿದೆ. ಎರಡೂ ಕಡೆ ಅಭಿವೃದ್ಧಿಗೆ ಮುಂದಿನ ಹಂತದ ಬಜೆಟ್‌ನಲ್ಲಿ ಗಮನ ಹರಿಸೋಣ ಎಂದರು.

ಕಟಪಾಡಿ : ಕಾರುಗಳ ನಡುವೆ ಸರಣಿ ಅಪಘಾತ

Thumbnail
Posted On: 17 Jul 2024, 11:44 AM

ಕಟಪಾಡಿ : ಉಡುಪಿಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಕರ್ತವ್ಯ ನಿರತ ಪೊಲೀಸ್ ಸೇರಿದಂತೆ ಐದು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಉಡುಪಿಯಿಂದ ಬರುತ್ತಿದ್ದ ವಾಹನಗಳನ್ನು ಕಟಪಾಡಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಕಾರಣಕ್ಕಾಗಿ ನಿಲ್ಲಿಸಿದ್ದು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಹಿಂದಿನಿಂದ ಬಂದ ಸ್ವಿಫ್ಟ್ ಕಾರು ಅದರ ಎದುರು ನಿಂತಿದ್ದ 2 ಕಾರುಗಳಿಗೆ ಢಿಕ್ಕಿ ಹೊಡೆದಿದೆ. ಆ ಎರಡೂ ಕಾರುಗಳು ಮುಂದೆ ಚಲಿಸಿ, ಸಂಚಾರ ನಿಯಂತ್ರಿಸಲು ನಿಂತಿದ್ದ ಪೊಲೀಸ್ ಸಿಬಂದಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಕಟಪಾಡಿ ಹೊರ ಠಾಣಾ ಸಿಬಂದಿಯೋರ್ವರು ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ನಾಲ್ಕು ಮಂದಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಡುಬಿದ್ರಿ : ನಡಿಪಟ್ಣದಲ್ಲಿ ಕಡಲ್ಕೊರೆತಕ್ಕೆ ತಡೆಕಲ್ಲು - ಡಿ.ಸಿ, ತಹಶಿಲ್ದಾರ್ ಭೇಟಿ

Thumbnail
Posted On: 16 Jul 2024, 11:01 PM

ಪಡುಬಿದ್ರಿ : ಇಲ್ಲಿನ ನಡಿಪಟ್ಣದಲ್ಲಿ ಕಡಲ್ಕೊರೆತ ಉಂಟಾಗಿದ್ದ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಕಾಪು ತಾಲ್ಲೂಕು ತಹಶಿಲ್ದಾರರಾದ ಡಾ.ಪ್ರತಿಭಾ ಆರ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಾಯದಂಚಿನಲ್ಲಿದ್ದ ಮೀನುಗಾರಿಕಾ ಶೆಡ್ ಸಮೀಪ ತಡೆಗೋಡೆಯಾಗಿ ಕಲ್ಲುಗಳನ್ನು ಹಾಕಲಾಗಿದೆ. ಈ ಸಂದರ್ಭ ಸ್ಥಳೀಯರು ಉಪಸ್ಥಿತರಿದ್ದರು.

ಜುಲೈ 18 : ಪಲಿಮಾರು ಗ್ರಾಮ ಪಂಚಾಯತ್ ವಿಶೇಷ ಗ್ರಾಮ ಸಭೆ

Thumbnail
Posted On: 16 Jul 2024, 09:04 PM

ಪಲಿಮಾರು : ಇಲ್ಲಿನ ಗ್ರಾಮ ಪಂಚಾಯತ್ ನ ವಿಶೇಷ ಗ್ರಾಮ ಸಭೆ ಜುಲೈ 18 ರಂದು ಪೂರ್ವಾಹ್ನ ಗಂಟೆ 11ಕ್ಕೆ ಪಲಿಮಾರು ಗ್ರಾಮ ಪಂಚಾಯತ್ ನ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚ್ಚಿಲ : ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾಗಿ ಗಿರಿಧರ್ ಎಸ್. ಸುವರ್ಣ ಮೂಳೂರು ಆಯ್ಕೆ

Thumbnail
Posted On: 16 Jul 2024, 08:52 PM

ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ 2024-2027 ನೇ ಸಾಲಿನ ಕ್ಷೇತ್ರಾಡಳಿತ ಸಮಿತಿಗೆ ಅಧ್ಯಕ್ಷರಾಗಿ ಗಿರಿಧರ್ ಎಸ್. ಸುವರ್ಣ ಮೂಳೂರು ಇವರು ಸರ್ವಾನುಮತದಿಂದ ನಿಯುಕ್ತಿಗೊಂಡಿರುತ್ತಾರೆ. ಕಾರ್ಯದರ್ಶಿಯಾಗಿ ನಾರಾಯಣ ಸಿ. ಕರ್ಕೇರ, ಕಾಡಿಪಟ್ಣ, ಕೋಶಾಧಿಕಾರಿಯಾಗಿ ಸುಧಾಕರ್ ಕುಂದರ್ ಬಂಕೇರಕಟ್ಟ ಮಲ್ಪೆ, ಸಮಿತಿ ಸದಸ್ಯರಾಗಿ ಮೋಹನ್ ಬಂಗೇರ ಕಾಪು, ದಿನೇಶ್ ಎರ್ಮಾಳ್ ಆಯ್ಕೆಯಾಗಿರುತ್ತಾರೆ.