Updated News From Kaup
ಕಟಪಾಡಿ : ರೋಟರಿ ಕ್ಲಬ್ ಶಂಕರಪುರ - ಆಟಿಡೊಂಜಿ ದಿನ ; ಪ್ಲಾಸ್ಟಿಕ್ ದುಷ್ಪರಿಣಾಮ ಕರಪತ್ರ ಬಿಡುಗಡೆ
Posted On: 26 Jul 2024, 10:54 AM
ಕಟಪಾಡಿ : ರೋಟರಿ ಕ್ಲಬ್ ಶಂಕರಪುರ ವತಿಯಿಂದ ಶಂಕರಪುರದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರೋಟರಿ 3182 ರ ಟೀಚರ್ಸ್ ಸಪೋರ್ಟ್ ಜಿಲ್ಲಾ ಚಯರ್ ಮ್ಯಾನ್ ಆದ ಬಾಲಕೃಷ್ಣ ಶೆಟ್ಟಿ ಕಾರ್ಕಳ ಇವರು ಭಾಗವಹಿಸಿ ಮಾತನಾಡಿ, ಪ್ಲಾಸ್ಟಿಕ್ ದುಷ್ಪರಿಣಾಮದ ಕರಪತ್ರ ಬಿಡುಗಡೆಗೊಳಿಸಿದರು. ಅತಿಥಿಯಾಗಿ ವಲಯ 5 ರ ಸಹಾಯಕ ಗವರ್ನರ್ ಅನಿಲ್ ಡೆಸಾ, ಕ್ಲಬ್ ಕಮುನಿಟಿ ನಿರ್ದೇಶಕ ಸಂದೀಪ್ ಬಂಗೇರ ಮತ್ತು ಕಾರ್ಯದರ್ಶಿ ಅನಿಲ್ದಾ ನೋರೋನ್ನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಶಂಕರಪುರ ಅಧ್ಯಕ್ಷರಾದ ಮಾಲಿನಿ ಶೆಟ್ಟಿ ಇನ್ನಂಜೆ ವಹಿಸಿದ್ದರು. ಈ ಸಂದರ್ಭ ರೋಟರಿ ಕ್ಲಬ್ ಶಂಕರಪುರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಗಿಲ್ ವಿಜಯ ದಿನ - ಭಾರತೀಯರು ಎಂದು ಮರೆಯದ ಈ ದಿನಕ್ಕೆ ಇಂದು 25 ವಷ೯
Posted On: 26 Jul 2024, 10:40 AM
"ಕಾರ್ಗಿಲ್ ವಿಜಯ್ ದಿವಸ್" ಪ್ರತಿ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಅಥವಾ ಕಾರ್ಗಿಲ್ ವಿಜಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತೀಯರಿಗೆ ಇದು ಎಂದು ಮರೆಯದ ದಿನವಾಗಿದೆ. ಕಾರ್ಗಿಲ್ ಯುದ್ಧ ಭಾರತೀಯ ಪ್ರತಿಯೋಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ. ಯುದ್ಧದ ಗತಿ : 1999 ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಭಾರತೀಯ ಯೋಧರು ಹುತಾತ್ಮರಾದರು. ಈ ಯುದ್ಧ ನಡೆಯಲು ಮುಖ್ಯ ಕಾರಣ ಪಾಕಿಸ್ತಾನದ ಮೋಸದಾಟ. ಕಾರ್ಗಿಲ್ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಇದೆ. ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ಮೈನಸ್ ಡಿಗ್ರಿ ಸೆಲ್ಸಿಯಸ್ ಇಳಿಯುತ್ತದೆ. ಇದರಿಂದ ಇಲ್ಲಿ ಗಡಿ ಕಾಯುವುದು ಭಾರತಕ್ಕೆ ಸವಾಲಿನ ಕೆಲಸ. ಚಳಿಗಾಲದಲ್ಲಿ ಭಾರತೀಯ ಸೈನಿಕರು ಮತ್ತು ಪಾಕ್ ಸೈನಿಕರು ಇಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಚಳಿಗಾಲ ಮುಗಿದ ಬಳಿಕ ಇಲ್ಲಿಗೆ ಮತ್ತೆ ಗಡಿ ಕಾಯುವುದಕ್ಕೆ ಹೋಗುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಾಗಿತ್ತು. 1999 ರಲ್ಲಿ ಈ ಸಂದರ್ಭವನ್ನೇ ಬಳಸಿಕೊಂಡ ಪಾಕಿಸ್ತಾನ, ಕಾಶ್ಮೀರದ ಹೋರಾಟಗಾರರ ಹೆಸರಿನಲ್ಲಿ ಪಾಕ್ ಸೈನಿಕರು, ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಆಪರೇಷನ್ ವಿಜಯ ಕಾರ್ಯಚರಣೆ : ಆಪರೇಷನ್ ವಿಜಯ ಹೆಸರಿನಲ್ಲಿ ಕಾರ್ಯಚರಣೆ ಆರಂಭದಲ್ಲಿ ಪಾಕಿಸ್ತಾನೀಯರು ಭಾರತದ ಒಳಗೆ ಸುಮಾರು ದೂರ ನುಸುಳಿದ್ದರು. ಆದರು ಅದು ಭಾರತೀಯ ಸೇನೆಯ ಅರಿವಿಗೆ ಬಂದಿರಲಿಲ್ಲ. ಆದರೆ ಪಾಕಿಸ್ತಾನಿಯರನ್ನು ಕಂಡ ಕಾಶ್ಮೀರದ ಕೆಲವು ಕುರಿಗಾಹಿ ಜನರು, ಭಾರತೀಯ ಸೇನೆಗೆ ವಿಷಯ ಮುಟ್ಟಿಸಿದ್ದರು. ತಕ್ಷಣವೇ ಕಾರ್ಯ ಪ್ರರುತ್ತಾರದ ಸೇನಾಧಿಕಾರಿಗಳು, ಐದು ಯೋಧರನ್ನು ಗಸ್ತು ತಿರುಗಲೆಂದು ಕಳುಹಿಸಿಕೊಟ್ಟರು. ಆದರೆ ಆಕ್ರಮಣ ಮನಸ್ಥತಿಯಲ್ಲಿದ್ದ ಪಾಕ್ನ ಸೇನೆ, ಭಾರತದ ಆ ಐದು ಯೋದರನ್ನು ಚಿತ್ರಹಿಂಸೆ ನೀಡಿ ಕೊಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ, ತಕ್ಷಣವೇ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲು ನಿರ್ಧರಿಸಿತು. ಇದಕ್ಕಾಗಿ ಸೇನೆಯನ್ನು ಸಿದ್ಧಗೊಳಿಸಿತು. ಭಾರತ ಸರ್ಕಾರ ಇಪ್ಪತ್ತು ಸಾವಿರ ಭಾರತೀಯ ಸೈನಿಕರನ್ನ ಸಜ್ಜುಗೊಳಿಸಿ ಮೇ 3 ರಿಂದ ಆಪರೇಷನ್ ವಿಜಯ ಹೆಸರಿನಲ್ಲಿ ಕಾರ್ಯಚರಣೆ ಆರಂಭ ಮಾಡಿತು. ಆಪರೇಷನ್ ಸಫೇದ್ ಸಾಗರ್ : ಅತ್ತ ಪಾಕಿಸ್ತಾನವು ಕೂಡಾ ಭಾರತದ ಮೇಲೆ ದಾಳಿ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿತ್ತು. ಅದರಂತೆ ಪಾಕ್ ಸುಮಾರು 5,000 ಕ್ಕೂ ಹೆಚ್ಚು ಸೈನಿಕರನ್ನ ಕಳುಹಿಸಿಕೊಟ್ಟಿತ್ತು. ಇದಕ್ಕೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆ ಶಸ್ತ್ರಸಜ್ಜಿತವಾಗಿ ಮುನ್ನುಗ್ಗಿತ್ತು. ಎತ್ತರದ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆ ಇದ್ದರೂ ಶೆಲ್ ದಾಲಿಯ ಮೂಲಕ ಭಾರತೀಯ ಸೇನೆ ಪಾಕಿಸ್ತಾನಿಯ ಬಂಕರ್ಗಳತ್ತ ದೃಷ್ಟಿ ಇರಿಸಿತ್ತು. ಭಾರತಕ್ಕೆ ಬೋಫೋರ್ಸ್ ಫಿರಂಗಿ, ವಾಯುಪಡೆಯ ಮಿಗ್-27, ಮಿಗ್-29 ಯುದ್ಧ ವಿಮಾನಗಳು ಸಾಕಷ್ಟು ಬಲ ತುಂಬಿದ್ದವು. ಭಾರತೀಯ ಸೇನೆ, ಪಾಕಿಸ್ತಾನದ ಸೈನಿಕರ ಮೇಲೆ ದಾಳಿ ಮಾಡಲು ಇಂಡಿಯನ್ ಮಿಗ್ -21, ಮಿಗ್ -27 ಮತ್ತು ಮಿರಾಜ್ 2000 ನಂತಹ ಯುದ್ಧ ವಿಮಾನಗಳನ್ನು ಬಳಸಿತು. ಪಾಕ್ ಶತ್ರುಗಳನ್ನು ನಿರ್ಮೂಲನೆ ಮಾಡಲು ಐಎಎಫ್ ಯೋಧರು ಈ ವಿಮಾನಗಳಿಂದ ರಾಕೆಟ್ ಮತ್ತು ಕ್ಷಿಪಣಿಗಳನ್ನು ಹಾರಿಸಿದರು. ಆಪರೇಷನ್ ತಲ್ವಾರ್ : ತೈಲ ಮತ್ತು ಇಂಧನ ಪೂರೈಕೆಯನ್ನು ನಿಲ್ಲಿಸಲು ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಬಂದರುಗಳನ್ನು ನಿರ್ಬಂಧಿಸಲು ಭಾರತೀಯ ನೌಕಾಪಡೆ 'ಆಪರೇಷನ್ ತಲ್ವಾರ್' ಅನ್ನು ಪ್ರಾರಂಭಿಸಿತು. ಇದರಿಂದಾಗಿ ಪಾಕಿಸ್ತಾನೀಯರ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಯಶಸ್ವಿಯಾಯಿತು. ಪಾಕಿಸ್ತಾನಿಗಳನ್ನು ಬಗ್ಗು ಬಡಿದ ಭಾರತೀಯ ಸೈನಿಕರು, ಜುಲೈ 24 ರಂದು ಪಾಕಿಗಳನ್ನು ಹಿಮ್ಮೆಟ್ಟಿಸಿ ಭಾರತ ಯುದ್ಧ ಗೆದ್ದಿತು. ಬಳಿಕ ಪ್ರತೀ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಅನ್ನು ಆಚರಣೆ ಮಾಡಲಾಗುತ್ತದೆ. ಆದರೆ ದೇಶದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ವಿಜಯ ದಿವಸ್ ಮಾಡಬಾರದು ಎಂದು ಆಗ್ರಹಿಸಿರುವುದು ಸೈನಿಕರಿಗೆ ಮಾಡಿದ ಮೋಸವಾಗಿದೆ. ಸೈನಿಕರ ಮಾನಸಿಕ ಸ್ಥಿತಿಯನ್ನು ಕುಗ್ಗಿಸುವ ಪ್ರಯತ್ನ ನಿರಂತವಾಗಿ ನಡೆಯುತ್ತಿದೆ ಆದರೂ ನಮ್ಮ ವೀರ ಯೋಧರು ದೇಶದ ಸೇವೆಯನ್ನು ಚಾಚುತಪ್ಪದೆ ಮಾಡುತ್ತಿದ್ದಾರೆ. ನಾವೆಲ್ಲರೂ ಸೈನಿಕರ ಮನೋಬಲ ಹೆಚ್ಚಿಸುವ ಕಾಯ೯ ನಿರಂತರವಾಗಿ ಮಾಡಬೇಕಾಗಿದೆ.. ಮರೆತು ಹೋದ ಕಾಗಿ೯ಲ್ ದಿನ. ಈ ದಿನವನ್ನು ಶಾಲಾ ಕಾಲೇಜಿನಲ್ಲಿ ಎಲ್ಲಾ ಕಡೆಗಳಲ್ಲಿಯೂ ಮಾಡಬೇಕು ಆದರೆ ಎಷ್ಟೋ ಜನರಿಗೆ ಈ ದಿನ ಮರೆತೇ ಹೋಗಿದೆ. ಸಾಮಾನ್ಯರಿಗೆ ಬಿಡಿ ಸಕಾ೯ರಕ್ಕೆ ಕೂಡ ಮರೆತು ಹೋದ ಪ್ರಸಂಗ ಬಹಳಷ್ಟಿದೆ. ಈ ದಿನ ನಮ್ಮ ದೇಶದ ಸ್ವಾಭಿಮಾನದ ದಿನವಾಗಲಿ ಎಲ್ಲಾ ಹುತಾತ್ಮ ಸೈನಿಕರಿಗೆ ವೀರ ಸ್ವಗ೯ ಪ್ರಾಪ್ತಿಯಾಗಲಿ ನಮ್ಮ ದೇಶ ಮತ್ತೊಮ್ಮೆ ವಿಶ್ವ ಗುರುವಾಗಲಿ' ಲೇಖನ : ರಾಘವೇಂದ್ರ ಪ್ರಭು ಕವಾ೯ಲು
ಕಾಪು : ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ವನಮಹೋತ್ಸವ ಆಚರಣೆ
Posted On: 25 Jul 2024, 07:45 PM
ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಕಾಪು ಜೇಸೀಸ್ ನ ಸಹಕಾರದಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು. ಶಾಲಾ ಮಕ್ಕಳಿಗೆ ಗಿಡ ವಿತರಿಸಿ ಮಾತನಾಡಿದ ಕಾಪು ಜೇಸೀಸ್ ನ ಅಧ್ಯಕ್ಷರಾದ ಸುಖಾಲಾಕ್ಷಿ ಬಂಗೇರ, ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಾದ ತಾವು ಪರಿಸರದ ಬಗ್ಗೆ, ಕಾಳಜಿ ವಹಿಸಬೇಕು. ಪ್ರತಿಯೊಬ್ಬರೂ ತಮ್ಮ ಮನೆ, ಶಾಲೆಗಳಲ್ಲಿ ಗಿಡ ನೆಟ್ಟು ಅದನ್ನು ಪೋಷಿಸಬೇಕು ಹಾಗೂ ಸುಂದರ ಪರಿಸರವನ್ನು ನಿರ್ಮಿಸಿ ಅರೋಗ್ಯವಂತ ಸಮಾಜವನ್ನು ರೂಪಿಸಬೇಕು ಎಂಬ ಸಂದೇಶವನ್ನು ನೀಡಿದರು. ಆಡಳಿತಾಧಿಕಾರಿಗಳಾದ ಆಲ್ಬನ್ ರೋಡ್ರಿಗಸ್ ರವರು ಧಾರ್ಮಿಕ ನಂಬಿಕೆಯೊಂದಿಗೆ ನಾವು ಪರಿಸರವನ್ನು ರಕ್ಷಿಸುತ್ತಿದ್ದೇವೆ. ಪ್ರತಿಯೊಬ್ಬರು ಕೂಡಾ ಇದರ ಮಹತ್ವವನ್ನು ಅರಿತು ಸುಂದರ ವಾತಾವರಣವನ್ನು ನಿರ್ಮಿಸಬೇಕೆಂಬ ಕಿವಿ ಮಾತನ್ನು ಹೇಳಿದರು. ಸಮಾರಂಭದಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್. ಸ್ಕೌಟ್ಸ್, ಕಬ್-ಬುಲ್ ವಿದ್ಯಾರ್ಥಿಗಳು, ಹಾಗೂ ವಿವಿಧ ಘಟಕಗಳ ನಿರ್ದೇಶಕರುಗಳಾದ ತೇಜಶ್ರೀ, ವೀಣಾ ನಾಯಕ್, ಉದಯಕುಮಾರ್, ಕನ್ನಡ ಮಾಧ್ಯಮ ವಿಭಾಗದ ಮುಖ್ಯಸ್ಥೆ ಕೃಪಾ, ಜೇಸಿಯ ಪೂರ್ವಾಧ್ಯಕ್ಷ ರಮೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ನೀಲಾನಂದ್ ನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್ ನಿರೂಪಿಸಿದರು. ಪ್ರಾಥಮಿಕ ಶಾಲಾ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಸ್ಥ ಗೇಬ್ರಿಯಲ್ ಮಸ್ಕರೇನಸ್ ವಂದಿಸಿದರು.
ಪಡುಬಿದ್ರಿ : ಪತ್ರಿಕಾ ದಿನಾಚರಣೆ, ದಿ.ಜಯಂತ್ ಪಡುಬಿದ್ರಿ ಸಂಸ್ಮರಣೆ, ದತ್ತಿನಿಧಿ ವಿತರಣೆ
Posted On: 25 Jul 2024, 07:28 PM
ಪಡುಬಿದ್ರಿ : ಪತ್ರಕರ್ತರು ನಿರ್ಭೀತ ವರದಿ ಮಾಡುವ ಎದೆಗಾರಿಕೆ ಹಾಗೂ ನ್ಯಾಯ ನಿಷ್ಟುರವಾಗಿ ಸಮಾಜಮುಖಿ ಚಿಂತನೆಗಳನ್ನು ಮಂಡಿಸುವ ಗುಣಗಳನ್ನು ಹೊಂದಿರಬೇಕು ಎಂದು ತುಳು ಜಾನಪದ ಸಂಶೋಧಕ ಡಾ.ವೈ. ಎನ್. ಶೆಟ್ಟಿ ಹೇಳಿದರು. ಅವರು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪಡುಬಿದ್ರಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಪತ್ರಿಕಾ ದಿನಚರಣೆ ಹಾಗೂ ದಿ. ಜಯಂತ್ ಪಡುಬಿದ್ರಿ ಸಂಸ್ಮರಣೆ- ದತ್ತಿನಿಧಿ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಿಸಿ ಉಪನ್ಯಾಸಗೈದರು. ಪತ್ರಕರ್ತರಲ್ಲಿ ಹಲವಾರು ಮಂದಿ ಆದರ್ಶ ವ್ಯಕ್ತಿತ್ವದವರಿದ್ದಾರೆ. ಈ ಪೈಕಿ ಹಿರಿಯ ಪತ್ರಕರ್ತ ದಿ. ಜಯಂತ್ ಅವರನ್ನು ಪರಿಗಣಿಸಬಹುದು ಎಂದು ಅವರು ನುಡಿದರು. ಪತ್ರಕರ್ತ ಜಯಂತ್ ಪಡುಬಿದ್ರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂಸ್ಮರಣೆಗೈಯಲಾಯಿತು. ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೂರು ವಿವಿಧ ದಿನಪತ್ರಿಕೆಗಳನ್ನು ಮತ್ತು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ ಕಸಪಾ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ನೀಡಿದ್ದ 120 ಸಾಹಿತ್ಯಿಕ ಕೃತಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಪತ್ರಕರ್ತ ಜಯಂತ್ ಪಡುಬಿದ್ರಿ ದತ್ತಿನಿಧಿಯನ್ನು ಕಾಲೇಜಿನ 12 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಹಿರಿಯ ಪತ್ರಕರ್ತ ರಾಮಚಂದ್ರ ಆಚಾರ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ತನ್ನ ಆಧುನಿಕತೆಗೆ ತಕ್ಕಂತೆ ವಿವಿಧ ರೂಪಗಳನ್ನು ಪಡೆದುಕೊಂಡಿದೆ. ಮಾದ್ಯಮ ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಅಜಯ್ ಕುಮಾರ್ ಎಸ್, ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಗೀತಾ ಮಾತನಾಡಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಕಾಪು, ಕೋಶಾಧಿಕಾರಿ ಹೇಮನಾಥ್ ಪಡುಬಿದ್ರಿ ಉಪಸ್ಥಿತರಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಪುಂಡಲೀಕ ಮರಾಠೆ ಕಾರ್ಯಕ್ರಮ ನಿರ್ವಹಿಸಿದರು. ರಾಕೇಶ್ ಕುಂಜೂರು ವಂದಿಸಿದರು.
ಪಡುಬಿದ್ರಿ : ಕಡಲಬ್ಬರಕ್ಕೆ ಸಿಲುಕಿದ ಮೀನುಗಾರರ ವಿಶ್ರಾಂತಿ ಗೃಹ, ತೆಂಗಿನಮರಗಳು
Posted On: 25 Jul 2024, 06:00 PM
ಪಡುಬಿದ್ರಿ : ಇಲ್ಲಿನ ಕಡಲ ಕಿನಾರೆಯ ನಡಿಪಟ್ಣ ಪ್ರದೇಶದಲ್ಲಿ ಮೀನುಗಾರರ ವಿಶ್ರಾಂತಿ ಗೃಹ, ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಕಡಲ ಅಲೆಗಳ ಅಪ್ಪಳಿಸುವಿಕೆ ಹೆಚ್ಚಾಗುತ್ತಿದ್ದು ನಡಿಪಟ್ಣ ವಿಷ್ಣು ಭಜನಾ ಮಂದಿರ ಸಮೀಪದ ಮೀನುಗಾರರ ವಿಶ್ರಾಂತಿ ಗೃಹ ಪತನಗೊಂಡಿದೆ. ಇದರ ಜೊತೆಗೆ ಕೆಲವೊಂದು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಇತ್ತೀಚಿಗೆ ಇಲ್ಲಿಗೆ ಸಮೀಪದ ನಾಡದೋಣಿ ಮಹೇಶ್ವರಿ ಡಿಸ್ಕೊ ಫಂಡ್ ನ ಮೀನುಗಾರಿಕಾ ಶೆಡ್ ಗೂ ಹಾನಿಯಾಗಿ, ಸಮೀಪದ ತೆಂಗಿನ ಮರಗಳು ಸಮುದ್ರ ಪಾಲಾಗಿತ್ತು. ಇಲ್ಲಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಸಹಿತ ಜಿಲ್ಲಾಧಿಕಾರಿ, ತಹಶಿಲ್ದಾರ್ ಭೇಟಿ ನೀಡಿ, ತಾತ್ಕಾಲಿಕ ಪರಿಹಾರ ಎಂಬಂತೆ ತಡೆಕಲ್ಲುಗಳನ್ನು ಹಾಕುವ ಪ್ರಕ್ರಿಯೆ ಶುರುವಾಗಿತ್ತು. ಆ ಸಂದರ್ಭದಲ್ಲಿ ಸ್ಥಳೀಯರು ವಿಷ್ಣು ಭಜನಾ ಮಂದಿರದ ಸಮೀಪದ ಕಡಲ್ಕೊರೆತದ ಮುನ್ಸೂಚನೆ ನೀಡಿದ್ದರು. ಕಡಲ್ಕೊರೆತಕ್ಕೆ ಶಾಶ್ವತ ತಡೆಗೋಡೆ ಭರವಸೆಯಾಗಿ ಉಳಿದು ಈ ಭಾಗದ ಜನರು ಭಯದಿಂದ ಇರುವಂತಾಗಿದೆ. ಈ ಭಾಗದಲ್ಲಿ ತಕ್ಷಣ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ಬಂದು ನೋಡಿ ಭರವಸೆ ನೀಡುವುದು ನಮಗೆ ಬೇಕಿಲ್ಲ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಾರ್ಕಳ : ಕ್ರಿಯೇಟಿವ್ ಕಾಲೇಜಿನಲ್ಲಿ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ
Posted On: 25 Jul 2024, 07:05 AM
ಕಾರ್ಕಳ : ಇಲ್ಲಿನ ಕ್ರಿಯೇಟಿವ್ ಪಿಯು ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ ಜರುಗಿತು. ಮಾಹಿತಿ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸುಬ್ರಹ್ಮಣ್ಯ ಎಚ್, ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ಇವರು ಮಾತನಾಡಿ, ಶಿಕ್ಷಣ ಪಡೆದಾಗ ಜ್ಞಾನ ಮೂಡುತ್ತದೆ. ಆಗ ಸಮಾಜದಲ್ಲಿ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕಲು ಸಾಧ್ಯ ಎಂದರು. ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ಸಂತೋಷ್ ರವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ತಮ್ಮ ಹಕ್ಕುಗಳು ಮತ್ತು ಕಾನೂನು ಅರಿವು ಹೊಂದುವುದು ಅತ್ಯಗತ್ಯವಾಗಿದೆ ಎಂದರು. ಸಭಾಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ರವರು ಮಾತನಾಡಿ, ಜೀವಿಸಲು ಗಾಳಿ, ನೀರು, ಆಹಾರ ಎಷ್ಟು ಅಗತ್ಯವೋ ಸಮಾಜದಲ್ಲಿ ಬದುಕಬೇಕಾದರೆ ಕಾನೂನಿನ ಅರಿವು ಅಷ್ಟೇ ಅವಶ್ಯಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯ ರವೀಂದ್ರ ಹಾಗೂ ಘನಶ್ಯಾಮ್ ರವರು ಉಪಸ್ಥಿತರಿದ್ದರು. ಕಾನೂನು ಅರಿವು ಮಾಹಿತಿ ಕಾರ್ಯಕ್ರಮದಲ್ಲಿ ಉಪನ್ಯಾಸಕ ವರ್ಗದವರು, ವಸತಿ ನಿಲಯ ಪಾಲಕರು ಹಾಗೂ ಮೇಲ್ವಿಚಾರಕರು, ಬೋಧಕೇತರ ಸಿಬ್ಬಂದಿ ವರ್ಗದವರು, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕನ್ನಡ ಭಾಷಾ ಉಪನ್ಯಾಸಕರಾದ ಶಿವಕುಮಾರ ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಉಮೇಶ್ ರವರು ವಂದಿಸಿದರು.
ಉಡುಪಿ : ಆಟಿಡೊಂಜಿ ದಿನ ಮತ್ತು ಬಲೆ ತುಲುಟು ಪುದರ್ ಬರೆಕ ಅಭಿಯಾನ
Posted On: 25 Jul 2024, 06:53 AM
ಉಡುಪಿ : ಕರಾವಳಿ ಯುವಕ/ಯುವತಿ ಮಂಡಲ(ರಿ.) ಬಡಾನಿಡಿಯೂರ್ ಇವರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಕಳ ಭುವನೇಂದ್ರ ಕಾಲೇಜಿನ ಉಪನ್ಯಾಸಕರಾದ ಸುಲೋಚನಾ ಪಚ್ಚಿನಡ್ಕ ತುಳುನಾಡಿನ ಆಟಿ ತಿಂಗಳ ಆಚರಣೆಗಳ ಮಹತ್ವದ ಬಗ್ಗೆ ತಿಳಿಸಿದರು. ಈ ಸಂಧರ್ಭದಲ್ಲಿ ಜೈ ತುಲುನಾಡ್(ರಿ.) ಉಡುಪಿ ಘಟಕದ ವತಿಯಿಂದ ಬಲೆ ತುಲುಟು ಪುದರ್ ಬರೆಕ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ತುಲು ಭಾಷೆಯ ಉಳಿವಿಗಾಗಿ ಯಾವುದೇ ಒಂದು ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿರುವ ಜೈ ತುಲುನಾಡ್(ರಿ.) ಸಂಘಟನೆಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಜೈ ತುಲುನಾಡ್ (ರಿ.) ಕೇಂದ್ರ ಘಟಕದ ಮಾಜಿ ಅಧ್ಯಕ್ಷರಾದ ವಿಶು ಶ್ರೀಕೇರ ಮಾತನಾಡಿ, ಸಂಘವು ತುಲು ಭಾಷಾ ಉಳಿವಿಗಾಗಿ ನಡೆಸುತ್ತಿರುವ ಕಾರ್ಯವೈಖರಿಯ ಬಗ್ಗೆ ತಿಳಿಸಿದರು. ಈ ಸಂಧರ್ಭದಲ್ಲಿ ಕರಾವಳಿ ಮಹಿಳಾ ಮಂಡಲ ಅಧ್ಯಕ್ಷರಾದ ನಳಿನಿ ಸದಾಶಿವ, ಗೌರವಾಧ್ಯಕ್ಷೆ ಅಶ್ವಿನಿ ಉಮೇಶ್, ಕರಾವಳಿ ಯುವಕ ಮಂಡಲದ ಅಧ್ಯಕ್ಷರಾದ ನಾಗೇಂದ್ರ ಮೆಂಡನ್, ಸ್ಥಾಪಕಧ್ಯಕ್ಷರಾದ ಶಿವಾನಂದ ಸುವರ್ಣ ಗೌರವಾಧ್ಯಕ್ಷರಾದ ಗಂಗಾಧರ್ ಮೈಂದನ್, ಮಹಿಳಾ ಮಂಡಲ ಸ್ಥಾಪಕದ್ಯಕ್ಷರಾದ ಶೋಭಾ ಸಾಲ್ಯಾನ್, ಜೈ ತುಲುನಾಡ್(ರಿ.) ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿಯಾದ ಪ್ರಜ್ಞಾಶ್ರೀ.ಎಂ ಕೊಡವೂರ್, ಸಂಘಟನಾ ಕಾರ್ಯದರ್ಶಿ ಯಾದ ಸಂತೋಷ್. ಎನ್. ಎಸ್ ಕಟಪಾಡಿ,ಕಾರ್ಯಕಾರಿ ಸಮಿತಿಯಸದಸ್ಯರಾದ ಸಾಗರ್ ಉಡುಪಿ, ವಿಶಾಂತ್ ಪೂಜಾರಿ ಉದ್ಯಾವರ,ತುಲುಲಿಪಿ ಶಿಕ್ಷಕಿಯಾದ ಸುಶೀಲಾ ಜಯಕರ್ ಕೊಡವೂರ್, ಮಾಜಿ ಸಂಘಟನಾ ಕಾರ್ಯದರ್ಶಿಯಾದ ಶೇಖರ್ ಶ್ರೀಗಂಗೆ, ಉಡುಪಿ ಹಾಗೂ ಕಾರ್ಕಳ ಘಟಕದ ಸದಸ್ಯರಾದ ಶಿವಪ್ರಸಾದ್ ಮಣಿಪಾಲ್, ಸುನಿಲ್ ಕುಮಾರ್ ಕಾರ್ಲ, ಸುರೇಶ್ ಶ್ರೀದುರ್ಗಾ, ಸುಹಾನಿ ಸುಜನ್ ಉಪಸ್ಥಿತರಿದ್ದರು.
ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ಅಪ್ಪ ಸೇವೆ
Posted On: 22 Jul 2024, 08:25 PM
ಉಚ್ಚಿಲ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ವಾರ್ಷಿಕ ಸಾಮೂಹಿಕ ಅಪ್ಪ ಸೇವೆ ಸೋಮವಾರ ಸಂಜೆ ಸಂಪನ್ನಗೊಂಡಿತು. ಅರ್ಚಕ ಗೋವಿಂದ ಭಟ್ ನೇತೃತ್ವದಲ್ಲಿ ಪೂಜಾ ವಿಧಿ - ವಿಧಾನ ನೆರವೇರಿತು. ಮಹಾ ಮಂಗಳಾರತಿಯ ನಂತರ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತಾಧಿಕಾರಿ, ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್, ದೇವಳದ ಅರ್ಚಕ ವೃಂದ, ಸಿಬ್ಬಂದಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಪಡುಬಿದ್ರಿ ರೋಟರಿ ಕ್ಲಬ್ 2025-26 ಸಾಲಿನಲ್ಲಿ ಬೆಳ್ಳಿ ಹಬ್ಬ ಸಂಭ್ರಮ - ಅಧ್ಯಕ್ಷರಾಗಿ ವೃೆ.ಸುಧೀರ್ ಕುಮಾರ್ ಆಯ್ಕೆ
Posted On: 22 Jul 2024, 07:03 AM
ಪಡುಬಿದ್ರಿ : ರೋಟರಿ ಕ್ಲಬ್ 2025-26 ಸಾಲಿನಲ್ಲಿ 25 ರ ಸಂವತ್ಸರದ ಆಚರಣೆಯಲ್ಲಿದ್ದು ಇದರ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾಗಿ ವೃೆ.ಸುಧೀರ್ ಕುಮಾರ್ ಆಯ್ಕೆಗೊಂಡಿರುತ್ತಾರೆ. ಉಪಾಧ್ಯಕ್ಷರಾಗಿ ಮಾಧವ ಸುವರ್ಣ, ಕಾರ್ಯದರ್ಶಿಯಾಗಿ ರಮೀಜ್ ಹುಸೇನ್, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ಪಡುಬಿದ್ರಿ, ಕೋಶಾಧಿಕಾರಿ ಪಿ .ಕೃಷ್ಣ ಬಂಗೇರ, ಸಮಿತಿ ಸದಸ್ಯರಾಗಿ ವೆೃ .ಸುಕುಮಾರ್, ಗಣೇಶ್ ಅಚಾರ್ಯ ಉಚ್ಚಿಲ, ಅಬ್ದುಲ್ ಹಮೀದ್, ರಿಯಾಜ್ ಮುದರಂಗಡಿ, ಗಣೇಶ್ ಅಚಾರ್ಯ ಎರ್ಮಾಳ್, ಕೇಶವ ಸಾಲ್ಯಾನ್, ಮಹಮ್ಮದ್ ನಿಯಾಜ್, ಗೀತಾ ಅರುಣ್, ತಸ್ನೀನ್ ಅರಾ, ಜ್ಯೋತಿ ಮೆನನ್, ಸುನಿಲ್ ಕುಮಾರ್ ಆಯ್ಕೆಯಾಗಿರುತ್ತಾರೆ.
ಯುವವಿಚಾರ ವೇದಿಕೆ ಕೊಳಲಗಿರಿ ಉಪ್ಪೂರು : ರಜತ ಸಂಭ್ರಮ - ವನಮಹೋತ್ಸವ ಕಾರ್ಯಕ್ರಮ
Posted On: 22 Jul 2024, 06:53 AM
ಉಡುಪಿ : ಯುವವಿಚಾರ ವೇದಿಕೆ (ರಿ.) ಕೊಳಲಗಿರಿ ಉಪ್ಪೂರು ಇದರ ರಜತ ಸಂಭ್ರಮದ ಎರಡನೇ ಕಾರ್ಯಕ್ರಮವಾದ ವನಮಹೋತ್ಸವವು ಜರಗಿತು. ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ ಇದರ ಮಾಲಕರು, ಜಯಂಟ್ಸ್ ಗ್ರೂಪ್ ನ ಸಂಚಾಲಕರಾಗಿರುವ ಮಧುಸೂಧನ್ ಹೇರೂರು ಇವರು ವನಮಹೋತ್ಸವ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಹಸಿರೇ ಉಸಿರು ಅದಕ್ಕಾಗಿ ಗಿಡ ನೆಟ್ಟು ಪಾಲಿಸಿ ಪೋಷಿಸಿ ಹಾಗೂ ಸಂರಕ್ಷಿಸಿ, ಪ್ರತಿಯೊಂದು ಗಿಡಗಳಿಗೂ ದೈವೀಕ ಶಕ್ತಿ ಇದ್ದು ಗಿಡಗಳೊಂದಿಗೆ ನಾವಿದ್ದಾಗ ಮಾತ್ರ ಆಯಾ ಶಕ್ತಿಗಳ ಸಂಚಲನ ಸಾಧ್ಯ ಎಂದು ತಿಳಿಸಿದರು. ಭವಿಷ್ಯದ ಬದುಕಿಗೆ ವೃಕ್ಷ ಬೆಳೆಸುವ ಸಂಕಲ್ಪದೊಂದಿಗೆ ಗಿಡ ನೆಡುವ ಮತ್ತು ಗಿಡ ವಿತರಣಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಸಹಭಾಗಿತ್ವ ಬ್ರಹ್ಮಾವರದ ಸುವರ್ಣ ಎಂಟರ್ಪ್ರೈಸಸ್ ವಹಿಸಿದ್ದು, ಕಾರ್ಯಕ್ರಮದಲ್ಲಿ ಸಮಾಜ ಸೇವಕರು ಹಾಗೂ ಉಪ್ಪೂರು ವ್ಯ. ಸೇ. ಸ. ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರ, ಜಯಕರ್ ಆಚಾರ್ ಮುಟ್ಟಿಕಲ್, ಸ್ಪಂದನ ವಿಶೇಷ ಚೇತನ ಸಂಸ್ಥೆಯ ಜನಾರ್ಧನ್ ಗಿಡ ನೆಟ್ಟು ಶುಭ ಹಾರೈಸಿದರು. ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಸ್ವಾಗತಿಸಿದರು. ಸುಬ್ರಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್ ವಂದಿಸಿದರು. ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
