Updated News From Kaup

ಕಟಪಾಡಿ : ಕೆ ಸುಧಾಕರ ಪೈ ನಿಧನ

Thumbnail
Posted On: 17 Jul 2024, 08:14 PM

ಕಟಪಾಡಿ : ಇಲ್ಲಿಯ ವಿಜಯಾ ಇಂಡಸ್ಟ್ರೀಸ್ ಮತ್ತು‌ ವಿಜಯ‌ ಸೋಲಾರ್ ಸಂಸ್ಥೆಯ ಸ್ಥಾಪಕ ಕೆ.ಪುರುಷೋತ್ತಮ ಪೈ ಅವರ ಪುತ್ರ ದುಬೈ ಉದ್ಯಮಿ ಕೆ ಸುಧಾಕರ ಪೈ(58) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ತಂದೆ , ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಕಟಪಾಡಿಯ ಪ್ರಮುಖ ಉದ್ಯಮಿ ಕೆ. ಸತ್ಯೇಂದ್ರ ಪೈ ಅವರ ಕಿರಿಯ ಸಹೋದರರಾಗಿದ್ದ ಅವರು ಸುಮಾರು 35 ವರ್ಷಗಳಿಂದ ದುಬೈಯಲ್ಲಿ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದು ಪ್ರಸ್ತುತ ದುಬೈನ ಟೆಕ್ನೋ ಮೆರೈನ್ ಪ್ರೈ ಲಿ. ಸಂಸ್ಥೆಯ ಪಾಲುದಾರರಾಗಿದ್ದರು. ಕೊಡುಗೈ ದಾನಿಯಾಗಿದ್ದ ಇವರು ಶಿಕ್ಷಣ ಸಂಸ್ಥೆ ಮತ್ತು ದೇವಸ್ಥಾನಗಳಿಗೆ ದೇಣಿಗೆ ನೀಡುತ್ತಿದ್ದರು.

ಒಂದು ಜಿಲ್ಲೆ ಒಂದು ತಾಣ ಕಾಪು ತಾಲೂಕು ಆಯ್ಕೆ

Thumbnail
Posted On: 17 Jul 2024, 12:18 PM

ಕಾಪು : ಇಲ್ಲಿನ ಲೈಟ್‌ಹೌಸ್ ಅಭಿವೃದ್ಧಿಗೆ ಹಿಂದಿನ ಸರಕಾರ ಮಂಜೂರು ಮಾಡಿದ್ದ 5 ಕೋಟಿ ರೂ. ಅನುದಾನವನ್ನು ತಡೆ ಹಿಡಿಯಲಾಗಿದೆ. ಇದರಿಂದ ಬೀಚ್‌ಗೆ ಬರುವ ಪ್ರವಾಸಿಗರಿಗೆ ಮೂಲಸೌಕರ್ಯ ಇಲ್ಲವಾಗಿದೆ. ಕಾಪು ಲೈಟ್‌ ಹೌಸ್ ಮತ್ತು ಅಂತಾರಾಷ್ಟ್ರೀಯ ಮಾನ್ಯತೆಯ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಒದಗಿಸಿ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿಧಾನಸಭೆಯಲ್ಲಿ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, 2022-23ರಲ್ಲಿ ಹಿಂದಿನ ಸರಕಾರದಿಂದ 5 ಕೋ.ರೂ. ಮಂಜೂರು ಮಾಡಿದ್ದರೂ ನಿಧಿ ಇಲ್ಲದ ಕಾರಣ ತಡೆಹಿಡಿಯಲಾಗಿತ್ತು. ಪ್ರಸ್ತುತ 'ಒಂದು ಜಿಲ್ಲೆ ಒಂದು ತಾಣ' ಯೋಜನೆಯಡಿ ಕಾಪು ತಾಲೂಕನ್ನು ರಾಜ್ಯ ಸರಕಾರ ಆಯ್ಕೆ ಮಾಡಿದ್ದು ಅಭಿವೃದ್ಧಿ ಪಡಿಸಲಾಗುವುದು ಎಂದರು. ಕಾಪು ಲೈಟ್‌ಹೌಸ್ ಬೀಚ್ ಮತ್ತು ಅನತಿ ದೂರದಲ್ಲಿರುವಪಡುಬಿದ್ರಿ ಬ್ಲೂಫ್ಲ್ಯಾಗ್‌ ಬೀಚ್‌ನ ಮೂಲಸೌಕರ್ಯ ವೃದ್ಧಿಗೂ ಗಮನಹರಿಸಬೇಕೆಂಬ ಕಾಪು ಶಾಸಕರ ಆಗ್ರಹಕ್ಕೆ ಉತ್ತರಿಸಿದ ಸಚಿವರು, ಒಂದು ಬೀಚ್ ಆದರೆ ತತ್‌ಕ್ಷಣ ಬಜೆಟ್‌ನಲ್ಲಿ ಅಳವಡಿಸಿಕೊಂಡು ಅಭಿವೃದ್ಧಿ ಸಾಧ್ಯವಿದೆ. ಎರಡೂ ಕಡೆ ಅಭಿವೃದ್ಧಿಗೆ ಮುಂದಿನ ಹಂತದ ಬಜೆಟ್‌ನಲ್ಲಿ ಗಮನ ಹರಿಸೋಣ ಎಂದರು.

ಕಟಪಾಡಿ : ಕಾರುಗಳ ನಡುವೆ ಸರಣಿ ಅಪಘಾತ

Thumbnail
Posted On: 17 Jul 2024, 11:44 AM

ಕಟಪಾಡಿ : ಉಡುಪಿಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಕರ್ತವ್ಯ ನಿರತ ಪೊಲೀಸ್ ಸೇರಿದಂತೆ ಐದು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಉಡುಪಿಯಿಂದ ಬರುತ್ತಿದ್ದ ವಾಹನಗಳನ್ನು ಕಟಪಾಡಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಕಾರಣಕ್ಕಾಗಿ ನಿಲ್ಲಿಸಿದ್ದು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಹಿಂದಿನಿಂದ ಬಂದ ಸ್ವಿಫ್ಟ್ ಕಾರು ಅದರ ಎದುರು ನಿಂತಿದ್ದ 2 ಕಾರುಗಳಿಗೆ ಢಿಕ್ಕಿ ಹೊಡೆದಿದೆ. ಆ ಎರಡೂ ಕಾರುಗಳು ಮುಂದೆ ಚಲಿಸಿ, ಸಂಚಾರ ನಿಯಂತ್ರಿಸಲು ನಿಂತಿದ್ದ ಪೊಲೀಸ್ ಸಿಬಂದಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಕಟಪಾಡಿ ಹೊರ ಠಾಣಾ ಸಿಬಂದಿಯೋರ್ವರು ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ನಾಲ್ಕು ಮಂದಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಡುಬಿದ್ರಿ : ನಡಿಪಟ್ಣದಲ್ಲಿ ಕಡಲ್ಕೊರೆತಕ್ಕೆ ತಡೆಕಲ್ಲು - ಡಿ.ಸಿ, ತಹಶಿಲ್ದಾರ್ ಭೇಟಿ

Thumbnail
Posted On: 16 Jul 2024, 11:01 PM

ಪಡುಬಿದ್ರಿ : ಇಲ್ಲಿನ ನಡಿಪಟ್ಣದಲ್ಲಿ ಕಡಲ್ಕೊರೆತ ಉಂಟಾಗಿದ್ದ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಕಾಪು ತಾಲ್ಲೂಕು ತಹಶಿಲ್ದಾರರಾದ ಡಾ.ಪ್ರತಿಭಾ ಆರ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಾಯದಂಚಿನಲ್ಲಿದ್ದ ಮೀನುಗಾರಿಕಾ ಶೆಡ್ ಸಮೀಪ ತಡೆಗೋಡೆಯಾಗಿ ಕಲ್ಲುಗಳನ್ನು ಹಾಕಲಾಗಿದೆ. ಈ ಸಂದರ್ಭ ಸ್ಥಳೀಯರು ಉಪಸ್ಥಿತರಿದ್ದರು.

ಜುಲೈ 18 : ಪಲಿಮಾರು ಗ್ರಾಮ ಪಂಚಾಯತ್ ವಿಶೇಷ ಗ್ರಾಮ ಸಭೆ

Thumbnail
Posted On: 16 Jul 2024, 09:04 PM

ಪಲಿಮಾರು : ಇಲ್ಲಿನ ಗ್ರಾಮ ಪಂಚಾಯತ್ ನ ವಿಶೇಷ ಗ್ರಾಮ ಸಭೆ ಜುಲೈ 18 ರಂದು ಪೂರ್ವಾಹ್ನ ಗಂಟೆ 11ಕ್ಕೆ ಪಲಿಮಾರು ಗ್ರಾಮ ಪಂಚಾಯತ್ ನ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚ್ಚಿಲ : ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾಗಿ ಗಿರಿಧರ್ ಎಸ್. ಸುವರ್ಣ ಮೂಳೂರು ಆಯ್ಕೆ

Thumbnail
Posted On: 16 Jul 2024, 08:52 PM

ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ 2024-2027 ನೇ ಸಾಲಿನ ಕ್ಷೇತ್ರಾಡಳಿತ ಸಮಿತಿಗೆ ಅಧ್ಯಕ್ಷರಾಗಿ ಗಿರಿಧರ್ ಎಸ್. ಸುವರ್ಣ ಮೂಳೂರು ಇವರು ಸರ್ವಾನುಮತದಿಂದ ನಿಯುಕ್ತಿಗೊಂಡಿರುತ್ತಾರೆ. ಕಾರ್ಯದರ್ಶಿಯಾಗಿ ನಾರಾಯಣ ಸಿ. ಕರ್ಕೇರ, ಕಾಡಿಪಟ್ಣ, ಕೋಶಾಧಿಕಾರಿಯಾಗಿ ಸುಧಾಕರ್ ಕುಂದರ್ ಬಂಕೇರಕಟ್ಟ ಮಲ್ಪೆ, ಸಮಿತಿ ಸದಸ್ಯರಾಗಿ ಮೋಹನ್ ಬಂಗೇರ ಕಾಪು, ದಿನೇಶ್ ಎರ್ಮಾಳ್ ಆಯ್ಕೆಯಾಗಿರುತ್ತಾರೆ.

ಕಾಪು : ಕುತ್ಯಾರು, ಮೂಡಬೆಟ್ಟುವಿನಲ್ಲಿ ಮರ ಬಿದ್ದು ಹಾನಿ ; ತಹಶಿಲ್ದಾರ್ ಡಾ. ಪ್ರತಿಭಾ ಆರ್. ಭೇಟಿ

Thumbnail
Posted On: 16 Jul 2024, 08:35 PM

ಕಾಪು : ತಾಲೂಕಿನಲ್ಲಿ ಮಳೆ ಗಾಳಿಗೆ ಕುತ್ಯಾರು ಗ್ರಾಮದಲ್ಲಿ ಮನೆಯೊಂದಕ್ಕೆ ಮತ್ತು ಮೂಡಬೆಟ್ಟು ಗ್ರಾಮದಲ್ಲಿ ರಸ್ತೆಗೆ ಮರ ಬಿದ್ದು ತೊಂದರೆಯಾಗಿದ್ದು ತಾಲೂಕು ಆಡಳಿತ ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸಿದೆ. ಕುತ್ಯಾರು ಗ್ರಾಮದ ವಾಮನ ಆಚಾರ್ಯ ಇವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿ ಆಗಿದ್ದು, ತಹಶಿಲ್ದಾರ್ ಪ್ರತಿಭಾ ಆರ್ ರವರು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡುವ ಭರವಸೆ ನೀಡಿರುತ್ತಾರೆ. ಮೂಡಬೆಟ್ಟು ಗ್ರಾಮದ ಕಲ್ತಟ ಎಂಬಲ್ಲಿ ರಸ್ತೆಗೆ ಮರ ಬಿದ್ದು ಓಡಾಟ ಬಂದ್ ಆಗಿ, ಮಳೆ ಗಾಳಿಗೆ ಮರ ಮತ್ತು ಎಲೆಕ್ಟ್ರಿಕ್ ಕಂಬ ರಸ್ತೆಗೆ ಉರುಳಿ ಬಿದ್ದು ಸಾರ್ವಜನಿಕರಿಗೆ ತೊಂದರೆ ಆಗಿತ್ತು. ತಹಶಿಲ್ದಾರ್ ಡಾ.ಪ್ರತಿಭಾ ಆರ್ ತಕ್ಷಣವೇ JCB ತರಿಸಿ ಮರ ಮತ್ತು ಕಂಬವನ್ನು ತೆರವುಗೊಳಿಸಿರುತ್ತಾರೆ.

ಶಿರ್ವ : ಬಂಟಕಲ್ ಇಂಜಿನಿಯರಿಂಗ್ ಕಾಲೇಜಿಗೆ "ಹ್ಯಾಕಥಾನ್"ನಲ್ಲಿ ಪ್ರಶಸ್ತಿ

Thumbnail
Posted On: 16 Jul 2024, 11:46 AM

ಶಿರ್ವ : ಎ. ಜೆ. ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಐಇಇಇ (IEEE) ವಿದ್ಯಾರ್ಥಿ ಘಟಕವು ಜುಲೈ 13ರಂದು ಆಯೋಜಿಸಿದ್ದ “ಸಂಕಲ್ಪಾ 2024” (8 ಗಂಟೆಗಳ ಹ್ಯಾಕಥಾನ್)ದಲ್ಲಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೂರನೇ ವರ್ಷದ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಶೀನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳಾದ ಪ್ರಥಮ್ ಎಲ್ ಕಾಮತ್, ರಾಹುಲ್ ಮೆಂಡನ್, ಅಕ್ಷಯ್ ನಾಯಕ್ ಭಾಗವಹಿಸಿ ಪ್ರಥಮ ಸ್ಥಾನಗಳಿಸಿರುತ್ತಾರೆ. ಈ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ಇಂಜಿನಿಯರಿಂಗ್ ಕಾಲೇಜಿನ ಒಟ್ಟು 36 ತಂಡಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿರುತ್ತಾರೆ.

ಉಡುಪಿ : ಮನೆಯೇ ಗ್ರಂಥಾಲಯ ಸುವರ್ಣ ಸಂಭ್ರಮ- ಗಾಂಧಿ ಆಸ್ಪತ್ರೆಯಲ್ಲಿ ಸುಸಜ್ಜಿತ ಗ್ರಂಥಾಲಯ

Thumbnail
Posted On: 16 Jul 2024, 11:12 AM

ಉಡುಪಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ ನಡೆಯುತ್ತಿರುವ ವಿನೂತನ ಕಾರ್ಯಕ್ರಮ "ಮನೆಯೇ ಗ್ರಂಥಾಲಯ" ಇದರ ಸುವರ್ಣ ಸಂಭ್ರಮವು ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ನಡೆಯಿತು. ಕನ್ನಡದ ಪ್ರಸಿದ್ಧ ವಿಮರ್ಶಕ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡ್ಕ ಅವರು ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ ಅವರಿಗೆ ಪುಸ್ತಕಗಳನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಗ್ರಂಥಾಲಯ ಮಾಡುವ ಮೂಲಕ ರೋಗಿಗಳ ಸ್ವಸ್ಥ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ರೋಗಿಗಳ ಮನಸ್ಥಿತಿಗೆ ಅನುಗುಣವಾಗಿ ವಿವಿಧ ರೀತಿಯ ಆರೋಗ್ಯಕ್ಕೆ, ಸಮಾಜಕ್ಕೆ, ಪರಿಸರಕ್ಕೆ ಸಂಬಂಧಿಸಿದ ವಿವಿದ ಬಗೆಯ ಪುಸ್ತಕಗಳು ಲಭ್ಯವಾಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ ಅವರನ್ನು ಕ. ಸಾ. ಪ ಉಡುಪಿ ತಾಲೂಕು ಘಟಕದ ವತಿಯಿಂದ ಗೌರವಿಸಲಾಯಿತು. ಉಡುಪಿ ಕರಾವಳಿ ಐ ಎಂ ಎ ಇದರ ಅಧ್ಯಕ್ಷೆ ಡಾ. ರಾಜಲಕ್ಷ್ಮೀ, ಕೋಶಾಧಿಕಾರಿ ಡಾ. ಆಮ್ನಾ ಹೆಗ್ಡೆ, ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಕ ಸಾ ಪ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು, ರಂಜನಿ ವಸಂತ್, ಖಜಾಂಚಿ ರಾಜೇಶ್ ಭಟ್ ಪಣಿಯಾಡಿ, ಪದ್ಮಾಸಿನಿ, ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ಸಂಧ್ಯಾ ಶೆಣೈ, ಸತೀಶ್ ಕೊಡವೂರು, ಲಕ್ಷ್ಮಿ ಹರೀಶ್ಚಂದ್ರ, ಪಂಚಮಿ, ಹಫೀಜ್ ರಹೆಮಾನ್, ಸುಭೋದ್, ಶಶಿಕಾಂತ್ ಶೆಟ್ಟಿ, ಪ್ರಭಾಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ ಅವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.

ಪಡುಬಿದ್ರಿ : ನಡಿಪಟ್ಣದಲ್ಲಿ ಕಡಲ್ಕೊರೆತ ; ಅಪಾಯದಂಚಿನಲ್ಲಿ ಮೀನುಗಾರಿಕಾ ಶೆಡ್

Thumbnail
Posted On: 16 Jul 2024, 10:21 AM

ಪಡುಬಿದ್ರಿ : ಇಲ್ಲಿನ ಕಡಲ ತೀರದ ನಡಿಪಟ್ಣದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಇದರ ಪರಿಣಾಮವಾಗಿ ಪಡುಬಿದ್ರಿಯ ಸುಮಾರು 50 ಕುಟುಂಬದ ಜೀವನವನ್ನು ಅವಲಂಬಿಸಿರುವ ನಾಡದೋಣಿ ಮಹೇಶ್ವರಿ ಡಿಸ್ಕೊ ಫಂಡ್ ನ ಮೀನುಗಾರಿಕೆಯ ಶೆಡ್ ಅಪಾಯದಂಚಿನಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಆದಷ್ಟು ಬೇಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.