Updated News From Kaup
ಕಾಪು ತಾಲ್ಲೂಕಿನಲ್ಲಿ ಡೆಂಗ್ಯೂ ಜಾಗೃತಿ ಕಾರ್ಯಕ್ರಮ ; ಜಾಗೃತಿ ಮೂಡಿಸಿದ ತಹಶಿಲ್ದಾರ್
Posted On: 06 Jul 2024, 06:20 AM
ಕಾಪು : ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಶುಕ್ರವಾರ "ಡ್ರೈ ಡೇ" ಆಚರಿಸಲು ಸರ್ಕಾರ ಸೂಚಿಸಿದೆ. ಅದರಂತೆ ತಹಶಿಲ್ದಾರ್ ಪ್ರತಿಭಾ ಆರ್ ಮತ್ತು ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವಾ ನೇತೃತ್ವದಲ್ಲಿ ಕಾಪು ತಾಲ್ಲೂಕಿನ ಕಟಪಾಡಿ ಪ್ರದೇಶದ ಮನೆಗಳ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರದ ಕುರಿತು ಜಾಗೃತಿ ಮೂಡಿಸಲಾಯಿತು. ಮನೆಗಳ ಬಳಿ ಡ್ರಮ್ಗಳಲ್ಲಿ , ಬಕೆಟ್ಗಳಲ್ಲಿ ಸಂಗ್ರಹಿಸಿಟ್ಟಿದ್ದ ನೀರಿನಲ್ಲಿ ಸೊಳ್ಳೆಗಳ ಲಾರ್ವಾ ಬೆಳವಣಿಗೆ ಆಗಿರುವುದನ್ನು ಪತ್ತೆ ಹಚ್ಚಲಾಯಿತು. ತಕ್ಷಣ ಆ ನೀರನ್ನು ಖಾಲಿ ಮಾಡಿ ಆ ಮನೆಗಳವರಿಗೆ ಈ ರೀತಿ ನೀರು ಸಂಗ್ರಹಿಸಿಡದಂತೆ ಜಾಗೃತಿ ಮೂಡಿಸಲಾಯಿತು. ಡೆಂಗ್ಯೂ ಕುರಿತು ಮುಂಜಾಗ್ರತಾ ಕ್ರಮಗಳ ಕುರಿತು ಕರಪತ್ರಗಳನ್ನು ಹಂಚಲಾಯಿತು. ಗ್ರಾಮ ಪಂಚಾಯತಿ ಮತ್ತು ಪುರಸಭೆ ಸ್ವಚ್ಚತಾ ಸಿಬ್ಬಂದಿಗಳಿಗೆ ಚರಂಡಿ ಮುಂತಾದೆಡೆ ನೀರು ನಿಲ್ಲದಂತೆ ಸ್ವಚ್ಚಗೊಳಿಸಲು ತಿಳಿಸಲಾಗಿದೆ. ತೆಂಗಿನ ಚಿಪ್ಪು, ಹಳೆಯ ಟೈರು, ಪ್ಲಾಸ್ಟಿಕ್ ಡಬ್ಬ ಎಲ್ಲಿಯೂ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ತಹಶಿಲ್ದಾರ್ ಪ್ರತಿಭಾ ಆರ್ ಸೂಚಿಸಿದ್ದಾರೆ. ಯಾವುದೇ ರೀತಿಯ ಜ್ವರ ಬಂದರೂ ತಕ್ಷಣ ವೈದ್ಯರ ಸಲಹೆಪಡೆಯಲು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸುಲ್ವಾ ಸಲಹೆ ನೀಡಿದ್ದಾರೆ. ಒಟ್ಟಾರೆ ಕಾಪು ತಾಲ್ಲೂಕಿನಲ್ಲಿ ಡೆಂಗ್ಯೂ ಜ್ವರದ ನಿಯಂತ್ರಣಕ್ಕಾಗಿ ಸರ್ವ ಸಿದ್ದತೆ ಮಾಡುಕೊಳ್ಳಲಾಗಿದೆ ಎಂದು ತಹಶಿಲ್ದಾರ್ ಪ್ರತಿಭಾ ಆರ್ ತಿಳಿಸಿದ್ದಾರೆ. ವೈದ್ಯರಾದ ಡಾ.ಶೈನಿ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಚಂದ್ರಕಲಾ, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭಾರೀ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ಜುಲೈ 6 ರಂದು ರಜೆ ಘೋಷಣೆ
Posted On: 05 Jul 2024, 11:52 PM
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜುಲೈ 6 ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ , ಸರಕಾರಿ ಅನುದಾನಿತ ಮತ್ತು ಖಾಸಗಿ,ಪ್ರಾಥಮಿಕ ಪ್ರೌಢಶಾಲೆ , ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಿದೆ.
ನಾಳೆ (ಜು.6) : ಭಾರೀ ಮಳೆ ಹಿನ್ನೆಲೆ ಉಡುಪಿ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ
Posted On: 05 Jul 2024, 09:38 PM
ಉಡುಪಿ : ಭಾರೀ ಮಳೆ ಹಿನ್ನೆಲೆ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ನಾಳೆ (ಜುಲೈ6) ಜಿಲ್ಲಾಧಿಕಾರಿ ಕೆ.ವಿದ್ಯಾ ಕುಮಾರಿಯವರು ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಈ ಮೊದಲು ಜಿಲ್ಲೆಯ ಎರಡು ತಾಲೂಕುಗಳಿಗೆ ಮಾತ್ರ ರಜೆ ಘೋಷಿಸಲಾಗಿತ್ತು. ಆದರೆ ಇದೀಗ ಉಡುಪಿ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಕೆ.ವಿದ್ಯಾ ಕುಮಾರಿಯವರು ರಜೆ ಘೋಷಿಸಿ ಆದೇಶಿಸಿದ್ದಾರೆ. ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೊಮ, ಇಂಜಿನಿಯರಿಂಗ್, ಐಟಿಐ ವಿದ್ಯಾಸಂಸ್ಥೆಗಳಿಗೆ ರಜೆ ಇಲ್ಲ ಎಂದು ತಿಳಿಸಿದ್ದಾರೆ.
ಕಾಪು : ಫೈಝಲ್ ಇಸ್ಲಾಂ ಶಾಲೆಯಲ್ಲಿ ವನಮಹೋತ್ಸವ ಆಚರಣೆ
Posted On: 05 Jul 2024, 09:34 PM
ಕಾಪು : ಇಲ್ಲಿನ ಫೈಝಲ್ ಇಸ್ಲಾಂ ಶಾಲೆಯಲ್ಲಿ ಶುಕ್ರವಾರ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಾಲಾ ಮುಖ್ಯಶಿಕ್ಷಕಿ ಕೈರುನಿಸ ಹಾಗೂ ಅರೆಬಿಕ್ ವಿಭಾಗದ ಮುಖ್ಯಸ್ಥ ಪರ್ವೆಜ್ ಮೌಲಾನ ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಶಿಕ್ಷಕ ವೃಂದದವರು, ಮಕ್ಕಳು ಉಪಸ್ಥಿತರಿದ್ದರು.
ಇನ್ನಂಜೆ : ಪಾಂಗಾಳ ಗ್ರಾಮದ ಬೀಡುವಿನ ಗದ್ದೆ ಕೃತಕ ನೆರೆ - ಖಾಸಗಿ ಜಮೀನಿನ ಚರಂಡಿಯಿಂದ ಸಮಸ್ಯೆ ಬಗೆ ಹರಿಯುತ್ತಿಲ್ಲ - ಮಾಲಿನಿ ಶೆಟ್ಟಿ
Posted On: 05 Jul 2024, 06:54 PM
ಇನ್ನಂಜೆ : ಇಲ್ಲಿನ ಗ್ರಾಮಪಂಚಾಯತ್ ವ್ಯಾಪ್ತಿಯ ಪಾಂಗಾಳ ಗ್ರಾಮದ ಬೀಡುವಿನ ಗದ್ದೆಗಳಲ್ಲಿ ಹಾಗೂ ಮನೆಯ ಅಂಗಳದಲ್ಲಿ ಕೃತಕ ನೆರೆಗೆ ಖಾಸಗಿ ಜಮೀನಿನಲ್ಲಿ ಚರಂಡಿ ಇರುವುದರಿಂದ ಸಮಸ್ಯೆ ಬಗೆಹರಿಯದಾಗಿದ್ದು ಖಾಸಗಿ ಜಾಗದವರ ಅನುಮತಿ ಇಲ್ಲದೆ ಗ್ರಾಮ ಪಂಚಾಯತ್ ಗೆ ಅವರ ಗದ್ದೆಯಲ್ಲಿ ಚರಂಡಿ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ ಪ್ರಕಟನೆಯ ಮೂಲಕ ತಿಳಿಸಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಏನೂ ಕ್ರಮ ಕೈಗೊಳ್ಳಲಿಲ್ಲ ಎಂದು ಸುದ್ದಿ ಹರಡಿದೆ. ಇದು ಸತ್ಯಕ್ಕೆ ದೂರವಾದದ್ದು. ಸುಮಾರು 5 ವರ್ಷದ ಮುಂಚೆ ಉಪಾಧ್ಯಕ್ಷೆಯಾಗಿ ಇದ್ದಾಗ ಮಳೆಗಾಲದಲ್ಲಿ ತುಂಬು ನೆರೆ ಬಂದ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಒಮ್ಮೆ ಒತ್ತಾಯ ಪೂರ್ವಕವಾಗಿ ಚರಂಡಿಗೆ ಅಡ್ಡ ಹಾಕಿದ ತಡೆಗೋಡೆಯನ್ನು ತೆಗೆದು ಹಾಕಿ ಸಮಸ್ಯೆ ಪರಿಹಾರ ಮಾಡಿದ್ದು ಈಗ ಪುನಃ ಖಾಸಗಿ ಜಾಗದವರು ಅಲ್ಲಿ ನೀರು ಹರಿಯಲು ತಡೆಗೋಡೆ ನಿರ್ಮಿಸಿದ್ದಾರೆ. ನಿರಂತರ ನಾವು ಹಲವು ರೀತಿಯಲ್ಲಿ ಪ್ರಯತ್ನ ಮಾಡಿದರೂ ಒಂದು ಮನೆಯವರು ಖಾಸಗಿ ಜಾಗ ಬಿಡಲು ನಿರಾಕರಿಸಿದ್ದಾರೆ. ಮೊನ್ನೆ ತಹಸೀಲ್ದಾರ್ ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಜಾಗದವರಲ್ಲಿ ವಿನಂತಿ ಮಾಡಿದರೂ ಅವರು ಕೇಳುತ್ತಿಲ್ಲ. ಜಿಲ್ಲಾಧಿಕಾರಿಗೆ ಕೂಡ ಪಂಚಾಯತ್ ಮೂಲಕವು ಮನವಿ ಸಲ್ಲಿಸಿದ್ದೇವೆ ಮಾತ್ರವಲ್ಲದೆ ಪಂಚಾಯತ್ ಸದಸ್ಯರು ಖುದ್ದಾಗಿ ಮನೆಯವರನ್ನು ಕರೆದುಕೊಂಡು ಹೋಗಿ ಸಮಸ್ಯೆಯನ್ನು ತಿಳಿಸಿದ್ದಾರೆ. ಶಾಸಕರು ಕೂಡ ನಿರಂತರ ಈ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. ನಿರಂತರ ಈ ಸಮಸ್ಯೆಯನ್ನು ಬಗೆ ಹರಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಪಡುಬಿದ್ರಿ : ಗಣಪತಿ ಪ್ರೌಢಶಾಲೆ ಮತ್ತು ಎಸ್ ಬಿ ವಿ ಪಿ ಹಿ. ಪ್ರಾ. ಶಾಲೆಯಲ್ಲಿ ಸ್ಥಾಪಕರ ಸಂಸ್ಮರಣೆ, ಗುರುವಂದನೆ ಕಾರ್ಯಕ್ರಮ
Posted On: 05 Jul 2024, 06:16 PM
ಪಡುಬಿದ್ರಿ : ಇಲ್ಲಿನ ಗಣಪತಿ ಪ್ರೌಢಶಾಲೆ ಮತ್ತು ಶ್ರೀ ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಥೆಯ ಸ್ಥಾಪಕರಾದ ಶ್ರೀ ವಿಬುಧೇಶತೀರ್ಥ ಶ್ರೀಪಾದರ ಸಂಸ್ಮರಣೆ ಮತ್ತು ಗುರುವಂದನ ಕಾರ್ಯಕ್ರಮವನ್ನು ಆಚರಿಸಲಾಯಿತು. ಅತಿಥಿಯಾಗಿ ಆಗಮಿಸಿದ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ನಾರಾಯಣ ಹೆಬ್ಬಾರರು ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ವಿಬುಧೇಶತೀರ್ಥರ ಕೊಡುಗೆ ಅನನ್ಯವಾದುದು. ಶಿಸ್ತುಬದ್ಧವಾದ, ದೇಶಪ್ರೇಮವನ್ನು ಬೆಳೆಸುವ ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ಧಿ ಸಾಧ್ಯವೆಂದು ಅವರು ಭಾವಿಸಿದ್ದರು ಎಂದು ನುಡಿದರು. ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಸ್ಥಾಪಕರಾದ ಶ್ರೀ ವಿಬುಧೇಶತೀರ್ಥರ ಜೀವನ ಸಾಧನೆಗಳನ್ನು ಸ್ಮರಿಸಿ ಅವರ ಭಾವಚಿತ್ರಕ್ಕೆ ಮುಖ್ಯ ಅಭ್ಯಾಗತರು, ಅಧ್ಯಾಪಕರು, ವಿಧ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ನಿಕಟಪೂರ್ವ ಕಾರ್ಯದರ್ಶಿಗಳಾದ ರಾಘವೇಂದ್ರ ನಾವುಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ನಾರಾಯಣ ಹೆಬ್ಬಾರರನ್ನು ಗೌರವಿಸಿ, ಸಮ್ಮಾನಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಅನುರಾಧಾ. ಪಿ.ಎಸ್. ಸ್ವಾಗತಿಸಿದರು. ಅಧ್ಯಾಪಕ ಡಾ. ರಾಘವೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಅಶೋಕ ಕೆ. ವಂದಿಸಿದರು.
ಕಾಪು : ಮನೆಯೇ ಗ್ರಂಥಾಲಯ ನಲ್ವತ್ತೈದನೇ ಸರಣಿ ಕಾರ್ಯಕ್ರಮ
Posted On: 05 Jul 2024, 10:47 AM
ಕಾಪು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಮತ್ತು ಕಾಪು ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಪೊಲಿಪು ನಮಸ್ತೇ ಹೋಂ ಸ್ಟೇ ರೆಸಾರ್ಟ್ ನಲ್ಲಿ ಜರಗಿದ ಮನೆಯೇ ಗ್ರಂಥಾಲಯದ ನಲವತ್ತೈದನೇ ಸರಣಿ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಸಿಎ ದೇವ್ ಆನಂದ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಾತು ಕಡಿಮೆ ಮಾಡಿ, ಕೃತಿಯ ಮೂಲಕವಾಗಿ ಜನರ ನಡುವೆ ಗುರುತಿಸಿಕೊಳ್ಳುವಲ್ಲಿ ರೋಟರಿ ಸಂಸ್ಥೆ ಹಾಗು ಕಸಾಪ ಪ್ರಯತ್ನ ಶೀಲವಾಗಿದೆ. ಜನರಲ್ಲಿ ವಿಷಯ ಸಂಗ್ರಹಣೆ, ಪುಸ್ತಕ ಓದುವ ಹವ್ಯಾಸದೊಂದಿಗೆ ಜ್ಞಾನ ವೃದ್ಧಿಗೆ ಪೂರಕವಾಗಿ ಸ್ಪಂದಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು. ಕಾರ್ಯಕ್ರಮದ ಸಂಚಾಲಕ ಸಾಹಿತಿ ಡಾ. ವಿರೂಪಾಕ್ಷ ದೇವರಮನೆ ಮಾತನಾಡಿ, ಜನರಲ್ಲಿ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸುವಲ್ಲಿ ಮನೆಯೇ ಗ್ರಂಥಾಲಯ ಕಾರ್ಯಕ್ರಮ ಸಹಕಾರಿಯಾಗಲಿದೆ. ಸಾಹಿತ್ಯ ಪ್ರೀತಿಯನ್ನು ಎಲ್ಲೆಡೆಗೆ ಪಸರಿಸುವ ಉದ್ದೇಶ ಇದರ ಹಿಂದೆ ಅಡಗಿದೆ. ಸಾಹಿತ್ಯ ಅಭಿರುಚಿ, ಆರೋಗ್ಯ ಮಾಹಿತಿ, ಒತ್ತಡ ನಿವಾರಣೆ, ಪೌರಾಣಿಕ, ಇತಿಹಾಸ ವಿಚಾರಗಳನ್ನೊಳಗೊಂಡ ವಿವಿಧ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಒದಗಿಸಲಾಗುತ್ತಿದೆ ಎಂದರು. ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ ಹೆಚ್. ಪಿ ಮಾತನಾಡಿ, ಮನೆಯೇ ಗ್ರಂಥಾಲಯ ಸರಣಿಯ 45 ನೇ ಕಾರ್ಯಕ್ರಮ ಇದಾಗಿದ್ದು ಮನೆಗಳು ಮಾತ್ರವಲ್ಲದೇ, ಸಾರ್ವಜನಿಕ ಪ್ರದೇಶಗಳು, ಬಸ್ ತಂಗುದಾಣ, ರೆಸಾರ್ಟ್, ಅಂಗಡಿಗಳಿಗೂ ವಿಸ್ತರಿಸಲಾಗುತ್ತಿದೆ ಎಂದರು. ಕಾಪು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಮಾತನಾಡಿ, ಮೊಬೈಲ್ ಬದಿಗಿಟ್ಟು, ಪುಸ್ತಕ ಪ್ರೇಮವನ್ನು ಹೆಚ್ಚಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ಸಾಹಿತ್ಯದ ಕೆಲಸ ಮಾಡುತ್ತಿರುವ ಕಸಾಪದ ಮುಖ್ಯ ಗುರಿಯಾಗಿರುವ ಮಾತೃಭಾಷೆಯನ್ನು ಬೆಳೆಸುವ ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಮೂಲಕವಾಗಿ ಅಂತರಾಷ್ಟ್ರೀಯ ಸಂಸ್ಥೆಯೂ ಕೈ ಜೋಡಿಸಿರುವುದು ಶ್ಲಾಘನೀಯ ಎಂದರು. ಮಣಿಪಾಲ ರೋಟರಿ ಕ್ಲಬ್ ನ ಉಪಾಧ್ಯಕ್ಷೆ ಶಶಿಕಲಾ ರಾಜವರ್ಮ, ರೇಖಾ ದೇವ್ ಆನಂದ್, ಪೊಲಿಪು ಸರಕಾರಿ ಪ.ಪೂ. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ರೇಷ್ಮಾ, ನಮಸ್ತೇ ಹೋಂ ಸ್ಟೇ ರೆಸಾರ್ಟ್ ನ ಪಾಲುದಾರ ವಿನೋದ್ ಕುಮಾರ್, ಉಡುಪಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ರಂಜನಿ ವಸಂತ್ ಮೊದಲಾದವರು ಉಪಸ್ಥಿತರಿದ್ದರು. ಸಂಚಾಲಕ ರಾಘವೇಂದ್ರ ಪ್ರಭು ವಂದಿಸಿ, ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಬೇಡಿಕೆಗಳ ಬಗ್ಗೆ ವಿಧಾನಸಭಾ ಸ್ಪೀಕರ್ ಗೆ ಮನವಿ ಸಲ್ಲಿಸಿದ ಅಖಿಲ ಭಾರತ ದೈವರಾಧಕರ ಒಕ್ಕೂಟ
Posted On: 05 Jul 2024, 10:35 AM
ಮಂಗಳೂರು : ಕರ್ನಾಟಕ ಸರ್ಕಾರದ ವಿಧಾನಸಭಾ ಸ್ಪೀಕರಾದ ಯು ಟಿ ಖಾದರ್ ಅವರನ್ನು ಅಖಿಲ ಭಾರತ ದೈವರಾಧಕರ ಒಕ್ಕೂಟದ ಪ್ರತಿನಿಧಿಗಳು ಶುಕ್ರವಾರ ಮಂಗಳೂರಿನಲ್ಲಿ ಭೇಟಿಯಾದರು. ಈ ಸಂದರ್ಭ ಒಕ್ಕೂಟದ ಸಂಸ್ಥಾಪಕ ವಿನೋದ್ ಶೆಟ್ಟಿ ಅವರು ದೈವಾರಾಧಾನ ಕ್ಷೇತ್ರದಲ್ಲಿ ದೈವ ಚಾಕರಿ ವರ್ಗದವರಿಗೆ ಸರ್ಕಾರದಿಂದ ಸವಲತ್ತು, ಅನುದಾನ ಮತ್ತು ದೈವಾರಾಧನೆ ಅಕಾಡೆಮಿ ಮಾಡಬೇಕಾಗಿ ಬೇಡಿಕೆಯನ್ನು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್, ಮುಂದಿನ ದಿನಗಳಲ್ಲಿ ಬೇಕಾದ ರೀತಿಯಲ್ಲಿ ವ್ಯವಸ್ಥೆ ಮಾಡಿ ಅದರ ಬಗ್ಗೆ ಉನ್ನತ ಸಭೆ ನಡೆಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಗೌರವ ಹಿತೈಷಿ ಹಾಗೂ ರಾಜಕೀಯ ಮುಖಂಡರಾದ ಗಣೇಶ್ ದೇವಾಡಿಗ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತಿಯಿದ್ದರು.
ಜುಲೈ 7 : ಕಳತ್ತೂರು ಕುಕ್ಕುಂಜ ಕೆ.ಕೆ ಬಾಯ್ಸ್ ವತಿಯಿಂದ ಕೆಸರ್ ಡೊಂಜಿ ದಿನ ಕಾರ್ಯಕ್ರಮ
Posted On: 05 Jul 2024, 07:06 AM
ಕಾಪು : ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳತ್ತೂರುವಿನ ಕುಕ್ಕುಂಜದ ಸಮೀಪದ ಗದ್ದೆಯಲ್ಲಿ ಕಳತ್ತೂರು, ಕುಕ್ಕುಂಜದ ಗ್ರಾಮಸ್ಥರಿಗೆ ಕೆ.ಕೆ ಬಾಯ್ಸ್ ವತಿಯಿಂದ ಜುಲೈ 7 ರಂದು ಕೆಸರ್ ಡೊಂಜಿ ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಗ್ರಾಮಸ್ಥರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ಕಾರ್ಯಕ್ರಮ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುವರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತರಾಗಿ ಜಯಕರ್ ಶೆಟ್ಟಿ ಇಂದ್ರಾಳಿ ನೇಮಕ
Posted On: 05 Jul 2024, 07:02 AM
ಉಡುಪಿ : ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿಯ ಮುಖ್ಯ ಆಯುಕ್ತರನ್ನಾಗಿ ಬಡಗು ಬೆಟ್ಟು ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರು ಹಾಗೂ ಮೇಲ್ವಿಚಾರಕರಾದ ಜಯಕರ್ ಶೆಟ್ಟಿ ಇಂದ್ರಾಳಿಯವರನ್ನು ಜುಲೈ 3ರಂದು ಮೂಡಬಿದ್ರಿಯ ಸ್ಕೌಟ್ಸ್- ಗೈಡ್ಸ್ ಭವನದಲ್ಲಿ ನಡೆದ ಸಮಾಲೋಚನಾ ಕಾರ್ಯಾಗಾರದಲ್ಲಿ ನೇಮಕ ಮಾಡಲಾಯಿತು. ಈ ಸಂದರ್ಭ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯಾ ಅಧ್ಯಕ್ಷತೆ ವಹಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತರಾದ ಡಾ. ಮೋಹನ್ ಆಳ್ವ, ಉಡುಪಿ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
