Updated News From Kaup
ಕಾಪು : ಮನೆಯೇ ಗ್ರಂಥಾಲಯ ನಲ್ವತ್ತೈದನೇ ಸರಣಿ ಕಾರ್ಯಕ್ರಮ
Posted On: 05 Jul 2024, 10:47 AM
ಕಾಪು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಮತ್ತು ಕಾಪು ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಪೊಲಿಪು ನಮಸ್ತೇ ಹೋಂ ಸ್ಟೇ ರೆಸಾರ್ಟ್ ನಲ್ಲಿ ಜರಗಿದ ಮನೆಯೇ ಗ್ರಂಥಾಲಯದ ನಲವತ್ತೈದನೇ ಸರಣಿ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಸಿಎ ದೇವ್ ಆನಂದ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಾತು ಕಡಿಮೆ ಮಾಡಿ, ಕೃತಿಯ ಮೂಲಕವಾಗಿ ಜನರ ನಡುವೆ ಗುರುತಿಸಿಕೊಳ್ಳುವಲ್ಲಿ ರೋಟರಿ ಸಂಸ್ಥೆ ಹಾಗು ಕಸಾಪ ಪ್ರಯತ್ನ ಶೀಲವಾಗಿದೆ. ಜನರಲ್ಲಿ ವಿಷಯ ಸಂಗ್ರಹಣೆ, ಪುಸ್ತಕ ಓದುವ ಹವ್ಯಾಸದೊಂದಿಗೆ ಜ್ಞಾನ ವೃದ್ಧಿಗೆ ಪೂರಕವಾಗಿ ಸ್ಪಂದಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು. ಕಾರ್ಯಕ್ರಮದ ಸಂಚಾಲಕ ಸಾಹಿತಿ ಡಾ. ವಿರೂಪಾಕ್ಷ ದೇವರಮನೆ ಮಾತನಾಡಿ, ಜನರಲ್ಲಿ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸುವಲ್ಲಿ ಮನೆಯೇ ಗ್ರಂಥಾಲಯ ಕಾರ್ಯಕ್ರಮ ಸಹಕಾರಿಯಾಗಲಿದೆ. ಸಾಹಿತ್ಯ ಪ್ರೀತಿಯನ್ನು ಎಲ್ಲೆಡೆಗೆ ಪಸರಿಸುವ ಉದ್ದೇಶ ಇದರ ಹಿಂದೆ ಅಡಗಿದೆ. ಸಾಹಿತ್ಯ ಅಭಿರುಚಿ, ಆರೋಗ್ಯ ಮಾಹಿತಿ, ಒತ್ತಡ ನಿವಾರಣೆ, ಪೌರಾಣಿಕ, ಇತಿಹಾಸ ವಿಚಾರಗಳನ್ನೊಳಗೊಂಡ ವಿವಿಧ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಒದಗಿಸಲಾಗುತ್ತಿದೆ ಎಂದರು. ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ ಹೆಚ್. ಪಿ ಮಾತನಾಡಿ, ಮನೆಯೇ ಗ್ರಂಥಾಲಯ ಸರಣಿಯ 45 ನೇ ಕಾರ್ಯಕ್ರಮ ಇದಾಗಿದ್ದು ಮನೆಗಳು ಮಾತ್ರವಲ್ಲದೇ, ಸಾರ್ವಜನಿಕ ಪ್ರದೇಶಗಳು, ಬಸ್ ತಂಗುದಾಣ, ರೆಸಾರ್ಟ್, ಅಂಗಡಿಗಳಿಗೂ ವಿಸ್ತರಿಸಲಾಗುತ್ತಿದೆ ಎಂದರು. ಕಾಪು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಮಾತನಾಡಿ, ಮೊಬೈಲ್ ಬದಿಗಿಟ್ಟು, ಪುಸ್ತಕ ಪ್ರೇಮವನ್ನು ಹೆಚ್ಚಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ಸಾಹಿತ್ಯದ ಕೆಲಸ ಮಾಡುತ್ತಿರುವ ಕಸಾಪದ ಮುಖ್ಯ ಗುರಿಯಾಗಿರುವ ಮಾತೃಭಾಷೆಯನ್ನು ಬೆಳೆಸುವ ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಮೂಲಕವಾಗಿ ಅಂತರಾಷ್ಟ್ರೀಯ ಸಂಸ್ಥೆಯೂ ಕೈ ಜೋಡಿಸಿರುವುದು ಶ್ಲಾಘನೀಯ ಎಂದರು. ಮಣಿಪಾಲ ರೋಟರಿ ಕ್ಲಬ್ ನ ಉಪಾಧ್ಯಕ್ಷೆ ಶಶಿಕಲಾ ರಾಜವರ್ಮ, ರೇಖಾ ದೇವ್ ಆನಂದ್, ಪೊಲಿಪು ಸರಕಾರಿ ಪ.ಪೂ. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ರೇಷ್ಮಾ, ನಮಸ್ತೇ ಹೋಂ ಸ್ಟೇ ರೆಸಾರ್ಟ್ ನ ಪಾಲುದಾರ ವಿನೋದ್ ಕುಮಾರ್, ಉಡುಪಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ರಂಜನಿ ವಸಂತ್ ಮೊದಲಾದವರು ಉಪಸ್ಥಿತರಿದ್ದರು. ಸಂಚಾಲಕ ರಾಘವೇಂದ್ರ ಪ್ರಭು ವಂದಿಸಿ, ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಬೇಡಿಕೆಗಳ ಬಗ್ಗೆ ವಿಧಾನಸಭಾ ಸ್ಪೀಕರ್ ಗೆ ಮನವಿ ಸಲ್ಲಿಸಿದ ಅಖಿಲ ಭಾರತ ದೈವರಾಧಕರ ಒಕ್ಕೂಟ
Posted On: 05 Jul 2024, 10:35 AM
ಮಂಗಳೂರು : ಕರ್ನಾಟಕ ಸರ್ಕಾರದ ವಿಧಾನಸಭಾ ಸ್ಪೀಕರಾದ ಯು ಟಿ ಖಾದರ್ ಅವರನ್ನು ಅಖಿಲ ಭಾರತ ದೈವರಾಧಕರ ಒಕ್ಕೂಟದ ಪ್ರತಿನಿಧಿಗಳು ಶುಕ್ರವಾರ ಮಂಗಳೂರಿನಲ್ಲಿ ಭೇಟಿಯಾದರು. ಈ ಸಂದರ್ಭ ಒಕ್ಕೂಟದ ಸಂಸ್ಥಾಪಕ ವಿನೋದ್ ಶೆಟ್ಟಿ ಅವರು ದೈವಾರಾಧಾನ ಕ್ಷೇತ್ರದಲ್ಲಿ ದೈವ ಚಾಕರಿ ವರ್ಗದವರಿಗೆ ಸರ್ಕಾರದಿಂದ ಸವಲತ್ತು, ಅನುದಾನ ಮತ್ತು ದೈವಾರಾಧನೆ ಅಕಾಡೆಮಿ ಮಾಡಬೇಕಾಗಿ ಬೇಡಿಕೆಯನ್ನು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್, ಮುಂದಿನ ದಿನಗಳಲ್ಲಿ ಬೇಕಾದ ರೀತಿಯಲ್ಲಿ ವ್ಯವಸ್ಥೆ ಮಾಡಿ ಅದರ ಬಗ್ಗೆ ಉನ್ನತ ಸಭೆ ನಡೆಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಗೌರವ ಹಿತೈಷಿ ಹಾಗೂ ರಾಜಕೀಯ ಮುಖಂಡರಾದ ಗಣೇಶ್ ದೇವಾಡಿಗ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತಿಯಿದ್ದರು.
ಜುಲೈ 7 : ಕಳತ್ತೂರು ಕುಕ್ಕುಂಜ ಕೆ.ಕೆ ಬಾಯ್ಸ್ ವತಿಯಿಂದ ಕೆಸರ್ ಡೊಂಜಿ ದಿನ ಕಾರ್ಯಕ್ರಮ
Posted On: 05 Jul 2024, 07:06 AM
ಕಾಪು : ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳತ್ತೂರುವಿನ ಕುಕ್ಕುಂಜದ ಸಮೀಪದ ಗದ್ದೆಯಲ್ಲಿ ಕಳತ್ತೂರು, ಕುಕ್ಕುಂಜದ ಗ್ರಾಮಸ್ಥರಿಗೆ ಕೆ.ಕೆ ಬಾಯ್ಸ್ ವತಿಯಿಂದ ಜುಲೈ 7 ರಂದು ಕೆಸರ್ ಡೊಂಜಿ ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಗ್ರಾಮಸ್ಥರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ಕಾರ್ಯಕ್ರಮ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುವರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತರಾಗಿ ಜಯಕರ್ ಶೆಟ್ಟಿ ಇಂದ್ರಾಳಿ ನೇಮಕ
Posted On: 05 Jul 2024, 07:02 AM
ಉಡುಪಿ : ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿಯ ಮುಖ್ಯ ಆಯುಕ್ತರನ್ನಾಗಿ ಬಡಗು ಬೆಟ್ಟು ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರು ಹಾಗೂ ಮೇಲ್ವಿಚಾರಕರಾದ ಜಯಕರ್ ಶೆಟ್ಟಿ ಇಂದ್ರಾಳಿಯವರನ್ನು ಜುಲೈ 3ರಂದು ಮೂಡಬಿದ್ರಿಯ ಸ್ಕೌಟ್ಸ್- ಗೈಡ್ಸ್ ಭವನದಲ್ಲಿ ನಡೆದ ಸಮಾಲೋಚನಾ ಕಾರ್ಯಾಗಾರದಲ್ಲಿ ನೇಮಕ ಮಾಡಲಾಯಿತು. ಈ ಸಂದರ್ಭ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯಾ ಅಧ್ಯಕ್ಷತೆ ವಹಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತರಾದ ಡಾ. ಮೋಹನ್ ಆಳ್ವ, ಉಡುಪಿ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಪು : ಪೊಲಿಪು ಸರಕಾರಿ ಪ್ರಾಥಮಿಕ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭೋತ್ಸವ
Posted On: 02 Jul 2024, 04:42 PM
ಕಾಪು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೊಲಿಪು ಇದರ ಸರಕಾರಿ ಪ್ರಾಥಮಿಕ ಆಂಗ್ಲ ಮಾಧ್ಯಮ ವಿಭಾಗ ಇದರ ಪ್ರಾರಂಭೋತ್ಸವ ಕಾರ್ಯಕ್ರಮ ಮಂಗಳವಾರ ಜರಗಿತು. ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶೋಭಾ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಪು ಪುರಸಭಾ ಸದಸ್ಯ, ಆಂಗ್ಲ ಮಾಧ್ಯಮ ವಿಭಾಗದ ಕಾರ್ಯದರ್ಶಿಯಾದ ಕಿರಣ್ ಆಳ್ವ, ಕಾಪು ಪುರಸಭಾ ಸದಸ್ಯೆ ರಾಧಿಕಾ ಸುವರ್ಣ, ಆಂಗ್ಲ ಮಾಧ್ಯಮ ಸಮಿತಿ ಅಧ್ಯಕ್ಷರಾದ ಪ್ರವೀಣ್ ಡಿ ಕುಂದರ್, ಕಾಪು ಬಿಲ್ಲವ ಸಹಕಾರಿ ಸಂಘದ ಗೌರವಾಧ್ಯಕ್ಷರಾದ ಪ್ರಭಾಕರ ಪೂಜಾರಿ, ಪೊಲಿಪು ಮೋಗವೀರ ಮಹಾಸಭಾ ಅಧ್ಯಕ್ಷರಾದ ಶ್ರೀಧರ್ ಕಾಂಚನ್, ಪೊಲಿಪು ಹಳೆ ವಿದ್ಯಾರ್ಥಿ ಸಂಘ ಹಾಗೂ ಶತ ವಜ್ರ ಸ್ವರ್ಣ ಸಂಭ್ರಮ ಸಮಿತಿ ಅಧ್ಯಕ್ಷರಾದ ಸರ್ವೋತ್ತಮ ಕುಂದರ್, ಪೊಲಿಪು ಮೋಗವೀರ ಮಹಿಳಾ ಮಂಡಳಿ ಉಪಾಧ್ಯಕ್ಷರಾದ ಸುನಿತಾ ಚಂದ್ರಶೇಖರ್, ಪೊಲಿಪು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಧನಂಜಯ್ ಸಾಲ್ಯಾನ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯಲ್ಲಮ್ಮ, ಕಾಪು ಪುರಸಭೆಯ ಮುಖ್ಯಾಧಿಕಾರಿಗಳಾದ ನಾಗರಾಜ್, ಶಾಲಾ ಮುಖ್ಯೋಪಾಧ್ಯಾಯರಾದ ಗಾಯತ್ರಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸರ್ವ ಸದಸ್ಯರು, ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಶಂಕರಪುರ : ಪತ್ರಿಕಾ ದಿನಾಚರಣೆ ; ಪತ್ರಕರ್ತರಿಗೆ ಗೌರವಾರ್ಪಣೆ
Posted On: 01 Jul 2024, 07:57 PM
ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರದಲ್ಲಿ ಸೋಮವಾರ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಶ್ರೀ ಸಾಯಿಈಶ್ವರ್ ಗುರೂಜಿಯವರಿಂದ ಪತ್ರಕರ್ತರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಉಚ್ಚಿಲ ,ಕೋಶಾಧಿಕಾರಿಯಾದ ಉಮೇಶ್ ಮಾರ್ಪಳ್ಳಿ , ಕಾರ್ಯದರ್ಶಿಯಾದ ಪ್ರಮೋದ್ ಸುವರ್ಣ ,ಸದಸ್ಯರಾದ ಪ್ರಭಾಕರ ಆಚಾರ್ಯ, ವಿಜಯ ಆಚಾರ್ಯ ಉಚ್ಚಿಲ ಮತ್ತು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಹೆಜಮಾಡಿ , ಕಾರ್ಯದರ್ಶಿ ಸಂತೋಷ್ ಕಾಪು, ಸದಸ್ಯರಾದ ರಾಕೇಶ್ ಕುಂಜೂರು, ಪುರುಷೋತ್ತಮ್ ಸಾಲ್ಯಾನ್, ಸಚಿನ್ ಉಚ್ಚಿಲ, ಪ್ರಕಾಶ್ ಸುವರ್ಣ, ವಿಕ್ಕಿ ಪೂಜಾರಿ ಕಾಪು, ದೀಪಕ್ ಬೀರ, ಲವ ಸುವರ್ಣ ಇವರನ್ನು ಗೌರವಿಸಲಾಯಿತು. ರಾಘವೇಂದ್ರ ಪ್ರಭು ಕರ್ವಾಲು, ಗೀತಾಂಜಲಿ.ಎಮ್.ಸುವರ್ಣ, ವೀಣಾ .ಎಸ್.ಶೆಟ್ಟಿ , ರಾಜೇಶ್ ಜೋಗಿ, ಸತೀಶ್ ದೇವಾಡಿಗ, ವಿಘ್ನೇಶ್ ನೀಲಾವರ, ನಿಲೇಶ್, ಪ್ರದೀಪ್ ಪೂಜಾರಿ, ಶಶಾಂಕ್, ರಿತೇಶ್ ಉಪಸ್ಥಿತರಿದ್ದರು. ಎನ್ .ಆರ್. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.
ಕುತ್ಯಾರು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ವಿಕಲಚೇತನರೊಂದಿಗೆ ಸಂವಹನ, ಶಾಲಾ ಸಂಸತ್ತು ರಚನಾ ಕಾರ್ಯಕ್ರಮ
Posted On: 01 Jul 2024, 06:39 PM
ಕುತ್ಯಾರು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆ, ಕುತ್ಯಾರು ಇಲ್ಲಿ ವಿಕಲಚೇತನರೊಂದಿಗೆ ಸಂವಹನ ಕಾರ್ಯಕ್ರಮ ಮತ್ತು ಶಾಲಾ ಸಂಸತ್ತು ರಚನಾ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ವಿಕಲಚೇತನರಾದ ಗಣೇಶ್ ಪಂಜಿಮಾರ್ ಮಾತನಾಡಿ “ಸಾಧಿಸುವ ಛಲವೊಂದಿದ್ದರೆ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳೂ ಮೆಟ್ಟಿಲುಗಳಾಗುತ್ತದೆ. ದೇಹದಲ್ಲಿ ಬಲವಿಲ್ಲದಿದ್ದರೇನಂತೆ? ಅಂತರಂಗದಲ್ಲಿ ಅಡಗಿರುವ ಆತ್ಮಸ್ಥೈರ್ಯ ನಾನು ಅಶಕ್ತನಲ್ಲ ಎಂದು ಸಾರಿ ಹೇಳುತ್ತದೆ. ಸಾಧನೆಗೆ ದೈಹಿಕ ನ್ಯೂನತೆ ಎಂದೂ ಅಡ್ಡಿ ಮಾಡುವುದಿಲ್ಲ ಎಂದು ಹೇಳಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ, ಶಾಲಾ ಶೈಕ್ಷಣಿಕ ಸಲಹೆಗಾರರಾದ ದಿವಾಕರ ಆಚಾರ್ಯ ಗೇರುಕಟ್ಟೆ, ಶಾಲಾ ಪ್ರಾಂಶುಪಾಲರಾದ ಸಂಗೀತಾ, ಶಿಕ್ಷಕ ವೃಂದ ಮತ್ತು ಮಕ್ಕಳು ಉಪಸ್ಥಿತರಿದ್ದರು.
ಕಾಪು : ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಭೇಟಿ
Posted On: 01 Jul 2024, 06:21 PM
ಕಾಪು : ಉಡುಪಿ - ಮಂಗಳೂರು, ಕರ್ನಾಟಕ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ನಟರಾಜ್ ಅವರು ಜೂನ್ 30ರ ಭಾನುವಾರ ಇತಿಹಾಸ ಪ್ರಸಿದ್ಧ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಕಾಪು ಮಾರಿಯಮ್ಮನ ದರುಶನ ಪಡೆದು ಅಮ್ಮನ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು. ನಂತರ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿ ಮಾತನಾಡಿದ ಅವರು ಇಳಕಲ್ಲಿನಿಂದ ನಿರ್ಮಾಣವಾಗುತ್ತಿರುವ ದಕ್ಷಿಣ ಭಾರತದ ಮೊಟ್ಟಮೊದಲ ಬೃಹತ್ ದೇಗುಲ ಇದಾಗಿದೆ, ಕರ್ನಾಟಕ ರಾಜ್ಯದಲ್ಲೆ ಅತ್ಯದ್ಭುತವಾದಂತಹ ವಾಸ್ತುಶಿಲ್ಪ ಶೈಲಿಯನ್ನೊಳಗೊಂಡು ದೇವಸ್ಥಾನದ ನಿರ್ಮಾಣ ಮಾಡುತ್ತಿದ್ದೀರಿ. ಇನ್ನೂ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುವ ಅಭಿವೃದ್ಧಿ ಸಮಿತಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ದೇವಳದ ಮಾಜಿ ಅಧ್ಯಕ್ಷ,ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಚಾರ ಸಮಿತಿಯ ಸಂಚಾಲಕ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಾಹಕ ಜಯರಾಮ ಆಚಾರ್ಯ, ಶೈಲಪುತ್ರಿ ತಂಡದ ಸಂಚಾಲಕ ರಾಧಾರಮಣ ಶಾಸ್ತ್ರಿ, ಕಾತ್ಯಾಯಿನಿ ತಂಡದ ಸಂಚಾಲಕಿ ವನಿತಾ ಶೆಟ್ಟಿ, ಕಾಪು ಪೊಲೀಸ್ ಉಪನಿರೀಕ್ಷಕರಾದ ಪುರುಷೋತ್ತಮ್ ಮತ್ತು ಕಾಪು ಪೊಲೀಸ್ ವೃತ್ತ ಕಚೇರಿ ಹೆಡ್ ಕಾನ್ಸ್ಟೇಬಲ್ ಪ್ರವೀಣ್ ಉಪಸ್ಥಿತರಿದ್ದರು.
ಉಚ್ಚಿಲ : ಮಳೆಗಾಲದ ಮೀನುಗಾರಿಕೆಯ “ದಾರಾ”ಗೆ ಚಾಲನೆ
Posted On: 01 Jul 2024, 06:16 PM
ಉಚ್ಚಿಲ : ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ನಡೆಸುವ ಮೋಗವೀರರು ಮೀನುಗಾರಿಕೆಗಾಗಿ ಬಳಸುವ ಬಲೆಗಳನ್ನು ಜೋಡಿಸುವ ಕಾರ್ಯ "ದಾರ" ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪ್ರಾಂಗಣದಲ್ಲಿ ಭಾನುವಾರ ನಡೆಯಿತು. ವರ್ಷಂಪ್ರತಿಯಂತೆ ಉಡುಪಿ ಜಿಲ್ಲೆಯ ಉಚ್ಚಿಲ ಕೇಂದ್ರವಾಗಿಟ್ಟುಕೊಂಡು ಉಚ್ಚಿಲ- ಎರ್ಮಾಳು ವಲಯದ ನಾಡದೋಣಿ ಮೀನುಗಾರರು ಭಾನುವಾರ ಸಾಂಪ್ರ್ರದಾಯಿಕ ನಾಡದೋಣಿ ಮೀನುಗಾರಿಕೆಗಾಗಿ "ದಾರ" ಮುಹೂರ್ತ ನಡೆಸಿದ್ದಾರೆ. ಕಳೆದ ವರ್ಷದ ನಾಡದೋಣಿ ಮೀನುಗಾರಿಕೆ ಋತು ಕೊನೆಗೊಂಡ ಬಳಿಕ ಮೀನುಗಾರಿಕೆಗೆ ಬಳಸಿದ ಮಾಟುಬಲೆಯನ್ನು ಬಿಡಿ ಬಿಡಿಯಾಗಿಸಿ ಸಂಗ್ರಹಿಸಿಡುತ್ತಾರೆ. ಹರಿದ ಬಲೆಗಳನ್ನು ಸರಿಪಡಿಸುವ ಉದ್ದೇಶದಿಂದ ಮೀನುಗಾರ ಪ್ರತಿನಿಧಿಗಳಿಗೆ ಹಂಚುತ್ತಾರೆ. ಅವರೆಲ್ಲರೂ ಅದನ್ನು ಡಿಸೆಂಬರ್ 15 ರೊಳಗೆ ಫಂಡಿನ ಮುಖ್ಯಸ್ಥರಿಗೆ ತಲುಪಿಸಬೇಕು. ಆಯಕಟ್ಟಿನ ಜಾಗದಲ್ಲಿ ಬಿಡಿಬಿಡಿಯಾಗಿ ಜೋಡಿಸಿಟ್ಟ ಬಲೆಗಳನ್ನು ಮಳೆಗಾಲ ಆರಂಭಗೊಂಡ ಬಳಿಕ ಸಾಮೂಹಿಕವಾಗಿ ನಿಗದಿ ಪಡಿಸಿದ ದಿನದಂದು ಎಲ್ಲರೂ ಒಗ್ಗಾಟ್ಟಾಗಿ ಪೋಣಿಸುವ ಕೈಂಕರ್ಯವೇ “ದಾರ”. ಮಳೆಗಾಲ ಆರಂಭಗೊಂಡ ತಕ್ಷಣ ಸಮುದ್ರ ಪ್ರಕ್ಷಭ್ದ ಗೊಳ್ಳುತ್ತದೆ. ಮಧ್ಯೆ ಕೆಲವು ದಿನ ಶಾಂತವಾಗುವ ಸಂದರ್ಭ ನಾಡದೋಣಿ ಮೀನುಗಾರಿಕೆಗೆ ಅವಕಾಶವಿದೆ. ಈ ಅವಕಾಶಕ್ಕಾಗಿ ಕಾದು ಕುಳಿತಿರುವ ನಾಡದೋಣಿ ಮೀನುಗಾರರು ಮೀನುಗಾರಿಕೆಗೆ ಆರಂಭಿಕವಾಗಿ "ದಾರ" ನಡೆಸುತ್ತಾರೆ. ಎಲ್ಲಾ ಫಂಡಿನಿಂದ ತಲಾ 5 ಮಂದಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ಪುರೋಹಿತರ ಬಳಿ ದಾರ ಪ್ರಕ್ರಿಯೆಗಾಗಿ ಶುಭಮೂಹೂರ್ತ ಯಾಚಿಸುತ್ತಾರೆ. ಪುರೋಹಿತರು ನೀಡಿದ ಶುಭ ಮುಹೂರ್ತದಂದು ಪ್ರತಿಯೊಂದು ಫಂಡಿನವರು ಒಗ್ಗಟ್ಟಾಗಿ ದೈವ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿ ಬಲೆಗಳನ್ನು ಜೋಡಿಸುವ ಮೂಲಕ ದಾರ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ. ದಾರ ಮುಗಿದ ಬಳಿಕ ಜೋಡಿಸಿದ ಬಲೆಗಳನ್ನು ದೋಣಿಗಳಲ್ಲಿ ತುಂಬಿಸಿ ಮತ್ತೊಂದು ಶುಭ ಮುಹೂರ್ತದಲ್ಲಿ ಬಲೆಯನ್ನು ನೀರಿಗೆ ಹಾಕುವ ಸಂಪ್ರಾದಾಯವಿದೆ. ಆ ಬಳಿಕ ಸಮುದ್ರ ಶಾಂತಗೊಂಡು ಮೀನುಗಾರಿಕಾ ಪ್ರಕ್ರಿಯೆ ಆರಂಭಗೊಂಡ ತಕ್ಷಣ ಎಲ್ಲರೂ ಒಗ್ಗಟ್ಟಾಗಿ ಗ್ರಾಮದ ಎಲ್ಲಾ ದೈವ, ದೇವಸ್ಥಾನ, ಮಂದಿರಗಳಿಗೆ ಸಾಮೂಹಿಕ ಪ್ರಾರ್ಥನೆ ನಡೆಸಿ ಉತ್ತಮ ಮತ್ಸ್ಯ ಸಂಪತ್ತು ಹಾಗೂ ಮೀನುಗಾರಿಕೆ ಸಂದರ್ಭ ಯಾವುದೇ ಅವಘಡ ನಡೆಯದಿರಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯುತ್ತಾರೆ. ಮಳೆಗಾಲದ ಅವಧಿಯಲ್ಲಿ ಯಾವುದೇ ಯಾಂತ್ರಿಕ ದೋಣಿಗಳು ಕಡಲಿಗಿಳಿಯದು. ಹಾಗಾಗಿ ಆ ಸಂದರ್ಭ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶ. ಈ ದಿನಗಳಲ್ಲಿ ಶೇ.75ರಷ್ಟು ದಿನ ಸಮುದ್ರ ಪ್ರಕ್ಷುಭ್ದ ವಾಗಿರುತ್ತದೆ. ಸಿಗುವ ಅತ್ಯಲ್ಪ 15 ರಿಂದ 20 ದಿನಗಳ ಅವಧಿಯಲ್ಲಿ ಮಾತ್ರ ಮೀನುಗಾರಿಕೆಗೆ ಅವಕಾಶ. ಆ ಸಂದರ್ಭ ನಾಡದೋಣಿಯಲ್ಲಿ ಬಹುದೂರ ಚಲಿಸುವಂತೆಯೂ ಇಲ್ಲ. ಇರುವ ಅಲ್ಪ ಪರಿಮಿತಿಯೊಳಗೆ ಮೀನುಗಾರಿಕೆ ನಡೆಸಬೇಕು. ಈ ಅವಧಿಯಲ್ಲಿ ಬೆಳೆಬಾಳುವ ಸಿಗಡಿ ದೊರೆತರೆ ಮಾತ್ರ ಬಂಪರ್ ಲಾಟರಿ ಸಿಕ್ಕಿದಂತೆ. ಉಳಿದಂತೆ ದೊರಕುವ ಬಂಗುಡೆ, ಬೂತಾಯಿ, ಇನ್ನಿತರ ಸಣ್ಣಪುಟ್ಟ ಮೀನುಗಳು ಹೇರಳ ದೊರಕಿದರೂ ಪ್ರಯೋಜನವಿಲ್ಲ. ಕೇವಲ ಸಿಗಡಿ ಬೇಟೆಗಾಗಿ ಮೀನುಗಾರರು ಆಶಾ ಭಾವದೊಂದಿಗೆ ಕಡಲಗಿಳಿಯುತ್ತಾರೆ. ಆದರೆ ಲಾಟರಿಯಂತೆ ಎಲ್ಲರೂ ಅದೃಷ್ಟನಂತರಾಗಿರುವುದಿಲ್ಲ. 1,000 ದೋಣಿಗಳ ಪೈಕಿ 100ಕ್ಕೆ ದೊರೆತರೆ ಹೆಚ್ಚು. ಆದ್ದರಿಂದಲೇ ಮಳೆಗಾಲದ ಮೀನುಗಾರಿಕೆಯನ್ನು ಲಾಟರಿಗೆ ಹೋಲಿಸುತ್ತಾರೆ. ಈ ವೇಳೆ ಉಚ್ಚಿಲ ಕೈ ರಂಪಣಿ ಫಂಡಿನ ಮೀನುಗಾರರಲ್ಲೋರ್ವರು ಮಾತನಾಡಿ, ಬೆಲೆ ಏರಿಕೆ, ಬಂದರು ಸೌಲಭ್ಯ ಇಲ್ಲದಿರುವುದು, ಬೃಹತ್ ಕೈಗಾರಿಕೆಗಳಿಂದ ಕಲುಷಿತ ನೀರು ಸಮುದ್ರಕ್ಕೆ ಬಿಡುತ್ತಿರುವುದು ಹಾಗೂ ಮೀನು ಸಂತತಿ ನಾಶವಾಗಿರುವುದು, ನಾಡದೋಣಿ ಮೀನುಗಾರಿಕೆಗೆ ಇತ್ತೀಚಿನ ವರ್ಷಗಳಲ್ಲಿ ಭಾರೀ ನಷ್ಟವನ್ನುಂಟು ಮಾಡುತ್ತಿವೆ. ಬೃಹತ್ ಉದ್ದಿಮೆಗಳಿಂದ ತೀರ ಮೀನುಗಾರಿಕೆಗೆ ತೀರಾ ಸಮಸ್ಯೆ ಉಂಟಾಗಿದ್ದು, ಮೊಟ್ಟೆ ಇಡಲು ಬರುತ್ತಿರುವ ಮೀನುಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ. ಇಲ್ಲಿ ಮೀನುಗಾರಿಕೆಗೆ ಯೋಗ್ಯ ಸ್ಥಳ ಇಲ್ಲವಾದ್ದರಿಂದ ಪ್ರತಿದಿನ ಟೆಂಪೋ ಮೂಲಕ ಮಲ್ಪೆ ಅಥವಾ ಮಂಗಳೂರು ಬಂದರಿಗೆ ಹೋಗಿ ಮೀನುಗಾರಿಕೆ ನಡೆಸಬೇಕಾಗಿದೆ. ಹಾಗಾಗಿ ದಿನ ನಿತ್ಯ ಫಂಡ್ ಒಂದಕ್ಕೆ ಸಾವಿರಾರು ರುಪಾಯಿ ಖರ್ಚು ಸಂಭವಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬೆಲೆಯೇರಿಕೆಯಿಂದ ಖರ್ಚು ವೆಚ್ಚ ಜಾಸ್ತಿಯಾಗುತ್ತಿದ್ದು ಸಾಕಷ್ಟು ಸಂಪಾದನೆ ಆಗುತ್ತಿಲ್ಲ. ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಉಳಿಯ ಬೇಕಾದರೆ, ಜತೆಗೆ ಬಡ ಮೀನುಗಾರರು ಬದುಕು ಹಸನಾಗಬೇಕಾದರೆ, ಸರಕಾರ ನಮ್ಮ ಕಷ್ಟಗಳಿಗೆ ಸೂಕ್ತವಾಗಿ ಸ್ಪಂದಿಸ ಬೇಕು ಎನ್ನುತ್ತಾರೆ ಮೀನುಗಾರರು. ಕ್ಯರಂಪಣಿ ಫಂಡಿನ ಮುಖ್ಯಸ್ಥ ಮೋಹನ ಗುರಿಕಾರ ಮಾತನಾಡಿ, ಉಚ್ಚಿಲದಲ್ಲಿ ಹಿಂದೆ 10ಕ್ಕಿಂತ ಹೆಚ್ಚು ಜೋಡಿಗಳಿತ್ತು. ಈಗ ಕೇವಲ ಮೂರಕ್ಕೆ ಇಳಿದಿದೆ. ಮೀನಿನ ಸಂತತಿ ನಾಶ, ಲಾಭಕ್ಕಿಂತ ನಷ್ಟವೇ ಹೆಚ್ಚು, ಯುವ ಪೀಳಿಗೆ ಮೀನುಗಾರಿಕೆಯಲ್ಲಿ ದೂರ ಸರಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮಳೆಗಾಲದ ಮೀನುಗಾರಿಕೆ ನಿಲ್ಲುವ ಸಂಭವವೇ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಕಾಪು : ರಾಷ್ಟ್ರಮಟ್ಟದ ಫಿಡೆ ರೇಟೆಡ್ ರ್ಯಾಪಿಡ್ ಚೆಸ್ ಟೂರ್ನಿ - ಶರಣ್ ರಾವ್ ಗೆ ನಾರಾಯಣ ಗುರು ಟ್ರೋಫಿ
Posted On: 01 Jul 2024, 06:25 AM
ಕಾಪು : ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ಸಂಸ್ಥೆಯ ಉಡುಪಿ ಮತ್ತು ಕಾಪು ಘಟಕ, ಕಾಪು ಹಳೆ ಮಾರಿಯಮ್ಮ ಸಭಾಭವನದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಫಿಡೆ ರೇಟೆಡ್ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಮಂಗಳೂರಿನ ಶರಣ್ ರಾವ್ ಟೂರ್ನಿಯಲ್ಲಿ ಒಂಬತ್ತು ಸುತ್ತುಗಳಲ್ಲಿ 8.5 ಪಾಯಿಂಟ್ ಕಲೆ ಹಾಕಿ ₹ 25 ಸಾವಿರ ನಗದು ಮತ್ತು ನಾರಾಯಣ ಗುರು ಟ್ರೋಫಿ ತಮ್ಮದಾಗಿಸಿಕೊಂಡರು. ಶನಿವಾರ ಆರು ಸುತ್ತುಗಳಲ್ಲಿ 5.5 ಪಾಯಿಂಟ್ ಗಳಿಸಿದ್ದ ಎರಡನೇ ಶ್ರೇಯಾಂಕಿತ ಶರಣ್ ಭಾನುವಾರದ ಎಲ್ಲ ಸುತ್ತುಗಳಲ್ಲೂ ಜಯಶಾಲಿಯಾದರು. ಅಗ್ರಶ್ರೇಯಾಂಕಿತ, ಕೇರಳದ ನಿತಿನ್ ಬಾಬು ಮತ್ತು ತಮಿಳುನಾಡಿನ ಆಕಾಶ್ ಜಿ ವಿರುದ್ಧ ಕ್ರಮವಾಗಿ 8 ಮತ್ತು 9ನೇ ಸುತ್ತುಗಳಲ್ಲಿ ಗೆದ್ದರು. ಐದನೇ ಸುತ್ತಿನಿಂದ 8ನೇ ಸುತ್ತಿನ ವರೆಗೆ ಆಕಾಶ್ ಅಗ್ರಸ್ಥಾನ ಉಳಿಸಿಕೊಂಡಿದ್ದರು. ಆಕಾಶ್ ಜಿ, ಮಂಗಳೂರಿನ ಲಕ್ಷಿತ್ ಸಾಲ್ಯಾನ್ ಮತ್ತು ತಮಿಳುನಾಡಿನ ಎಸ್.ಎ ಕಣ್ಣನ್ ತಲಾ 8 ಪಾಯಿಂಟ್ ಗಳಿಸಿದರು. ಉತ್ತಮ ಟೈಬ್ರೇಕರ್ ಆಧಾರದಲ್ಲಿ ಆಕಾಶ್ ದ್ವಿತೀಯ, ಲಕ್ಷಿತ್ ತೃತೀಯ ಮತ್ತು ಕಣ್ಣನ್ ನಾಲ್ಕನೇ ಸ್ಥಾನ ಗಳಿಸಿದರು. 7.5 ಪಾಯಿಂಟ್ಗಳೊಂದಿಗೆ ನಿತಿನ್ ಬಾಬು ಐದನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ರಾಮಕೃಷ್ಣ ಜೆ, ಕರ್ನಾಟಕದ ಆರುಷ್ ಭಟ್ ಮತ್ತು ಶಾನ್ ಡಿಯೋನ್ ಸಿಕ್ಕೇರ ಕೂಡ 7.5 ಪಾಯಿಂಟ್ ಗಳಿಸಿದರು. ಮಂಗಳೂರಿನ ಶರಣ್ ರಾವ್ಗೆ ತಮಿಳುನಾಡಿನ ಆಕಾಶ್ ವಿರುದ್ಧ ಜಯ. ತಮಿಳುನಾಡಿನ ಎಸ್.ಎ ಕಣ್ಣನ್ಗೆ ಕರ್ನಾಟಕದ ದ್ರಿಕ್ಷು ಕೆ ವಸಂತ್ ಎದುರು, ಮಂಗಳೂರಿನ ಲಕ್ಷಿತ್ ಸಾಲ್ಯಾನ್ಗೆ ಗೋವಾದ ಜೋಶುವಾ ಮಾರ್ಕ್ ಟೆಲಿಸ್ ವಿರುದ್ಧ, ಕೇರಳದಲ್ಲಿ ನಿತಿನ್ ಬಾಬುಗೆ ಕರ್ನಾಟಕದ ಪಂಕಜ್ ಭಟ್ ವಿರುದ್ಧ, ಕಾರ್ತಿಕ್ ಸಾಯ್ಗೆ ಕರ್ನಾಟಕದ ಲೀಲಾಜಯ ಕೃಷ್ಣ ವಿರುದ್ಧ ಹಾಗೂ ಕರ್ನಾಟಕದ ಪ್ರಶಾಂತ್ ನಾಯಕ್ಗೆ ತಮಿಳುನಾಡಿನ ದೀಪಕ್ ಲಕ್ಷಣ ಎದುರು ಜಯ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ರಾಮಕೃಷ್ಣ ಜೆ ಮತ್ತು ಮಂಗಳೂರಿನ ಶಾನ್ ಡಿಯೋನ್ ಸಿಕ್ವೆರಾ, ಕರ್ನಾಟಕದ ಆರುಷ್ ಭಟ್ ಮತ್ತು ಗೋವಾದ ಋಷಿಕೇಶ್ ಪರಬ್, ಕರ್ನಾಟಕದ ನಿಹಾಲ್ ಎನ್.ಶೆಟ್ಟಿ ಮತ್ತು ಮಹಾರಾಷ್ಟ್ರದ ಸಾಹು ವಿಕ್ರಮಾದಿತ್ಯ, ಕರ್ನಾಟಕದ ಚಿನ್ಮಯ ಎಸ್ ಭಟ್ ಮತ್ತು ಗೋವಾದ ಚೈತನ್ಯ ಗಾಂವ್ಕರ್ ನಡುವಿನ ಪಂದ್ಯ ಡ್ರಾ ಆಗಿದೆ.
