Updated News From Kaup
ಕಾಪು : ನಿರ್ಮಾಣ ಹಂತದಲ್ಲಿರುವ ಶಿಲಾಮಯ ಗರ್ಭಗುಡಿ, ಮಾರಿಗುಡಿಯ ಶಿಲಾಸ್ತಂಭ ಪರಿಗ್ರಹ ಸಮರ್ಪಣಾ ಸಂಕಲ್ಪ ಪೂಜೆ ಸಂಪನ್ನ
Posted On: 25 Jun 2024, 07:17 AM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ ಸಂಪೂರ್ಣ ಇಳಕಲ್ ಕೆಂಪು ಶಿಲೆಯೊಂದಿಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಿಲಾಮಯ ಗರ್ಭಗುಡಿ ಮತ್ತು ಸಂಪೂರ್ಣ ಮಾರಿಗುಡಿಯ ಶಿಲಾಸ್ತಂಭ ಪರಿಗ್ರಹ ಸಮರ್ಪಣಾ ಸಂಕಲ್ಪ ಪೂಜೆಯು ಸೋಮವಾರ ದೇಗುಲದ ತಂತ್ರಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿ ಕೊರಂಗ್ರಪಾಡಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯ ಅವರ ಉಪಸ್ಥಿತಿಯಲ್ಲಿ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಹೊಸ ಮಾರಿಗುಡಿ ನಿರ್ಮಾಣ ಕಾಮಗಾರಿಯನ್ನು ವಹಿಸಿಕೊಂಡಿರುವ ಶಿಲ್ಪಿಗಳು ಮಾರಿಗುಡಿಯ ಮಹಾದ್ವಾರ, ನಾಲ್ಕು ಮಹಾಸ್ಥಂಭ, ಮರದ ಕೆತ್ತನೆಯ ಮೇಲ್ಛಾವಣಿಯ ಕರ್ಣ ಮುಚ್ಚಿಗೆ, ಸುತ್ತು ಪೌಳಿಯ ಶಿಲಾಸ್ಥಂಭಗಳ ಸಹಿತವಾಗಿ ನಾಲ್ಕು ಲಕ್ಷ ರೂ. ಗಳಿಂದ ಎರಡು ಕೋಟಿ ರೂಪಾಯಿವರೆಗಿನ ೮೬ ಶಿಲಾಸ್ಥಂಬಗಳನ್ನು ದಾನಿಗಳಿಗೆ ಹಸ್ತಾಂತರಿಸಿದರು. ದಾನಿಗಳು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ಕೆ. ರವಿಕಿರಣ್, ಮುಂಬಯಿ ಗೌರವಾಧ್ಯಕ್ಷ ಎಂ. ಸುಧಾಕರ್ ಹೆಗ್ಡೆ, ಮುಂಬಯಿ ಸಮಿತಿ ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಮನೋಹರ್ ಶೆಟ್ಟಿ ಕಾಪು, ಗೌರವ ಸಲಹೆಗಾರ ನಡಿಕೆರೆ ರತ್ನಾಕರ ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಮಹಾದ್ವಾರದ ದಾನಿ ಕೆ. ಎಂ. ಶೆಟ್ಟಿ ಮುಂಬಯಿ, ಮಹಾಸ್ತಂಭದ ದಾನಿ ಪ್ರಭಾಕರ ಜೆ. ಶೆಟ್ಟಿ ಮಂಡಗದ್ದೆ ಹಾಗೂ ಶಿಲಾಸ್ತಂಭ ಸಮರ್ಪಿಸಿದ ದಾನಿಗಳು, ಅವರ ಕುಟುಂಬಸ್ಥರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇಂದು ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಣೆ : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಾರಿಯಮ್ಮ ದೇವಿ ಮತ್ತು ಉಚ್ಚಂಗಿ ದೇವಿಗೆ ನೂತನ ಸ್ವರ್ಣ ಗದ್ದುಗೆ ನಿರ್ಮಾಣಗೊಳ್ಳಲಿದ್ದು ಗದ್ದುಗೆಗೆ ಸ್ವರ್ಣ ಸಮರ್ಪಣೆಗೆ ಜೂ. ೨೫ರಂದು ಬೆಳಿಗ್ಗೆ ೯.೦೯ ಕ್ಕೆ ಸ್ವರ್ಣ ಗೌರಿ ಪೂಜೆಯ ಮೂಲಕವಾಗಿ ಚಾಲನೆ ನೀಡಲಾಗುವುದು. ಭಕ್ತರಿಗೆ ೯ ಗ್ರಾಂ, ೧೮ ಗ್ರಾಂ, ೯೯ ಗ್ರಾಂ, ೨೪೩ ಗ್ರಾಂ, ೪೫೦ ಗ್ರಾಂ, ೯೯೯ ಗ್ರಾಂ ಸ್ವರ್ಣ ಸಮರ್ಪಣೆಗೆ ಅವಕಾಶವಿದ್ದು ಸ್ವರ್ಣ ಸಮರ್ಪಣಾ ಸಮಾರಂಭ ಮತ್ತು ಮಾರಿಯಮ್ಮ ದೇವಿಯ ಸನ್ನಿಧಾನದಲ್ಲೂ ಸ್ವರ್ಣ ಸಮರ್ಪಿಸಬಹುದಾಗಿದೆ. ಸ್ವರ್ಣ ಗದ್ದುಗೆ ಸಮರ್ಪಣೆಗೆ ಹೊಸ ಚಿನ್ನದೊಂದಿಗೆ ಭಕ್ತರು ತಾವು ಉಪಯೋಗಿಸಿದ, ಬಳಸಿದ ಚಿನ್ನಗಳನ್ನೂ ಹರಕೆಯ ರೂಪದಲ್ಲಿ ಸಮರ್ಪಿಸಲು ಅವಕಾಶವಿದೆ ಎಂದು ಸ್ವರ್ಣ ಸಮರ್ಪಣಾ ಸಮಿತಿ ಮತ್ತು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಪ್ರಕಟಣೆಯು ತಿಳಿಸಿದೆ.
ಕನ್ನಡ ಜಾನಪದ ಪರಿಷತ್ ಉಡುಪಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ
Posted On: 24 Jun 2024, 07:28 PM
ಉಡುಪಿ : ಕನ್ನಡ ಜಾನಪದ ಪರಿಷತ್ ಬೆಂಗಳೂರು, ಉಡುಪಿ ಜಿಲ್ಲಾ ಘಟಕ ಇವರ ಉಡುಪಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ಜೂ. 23 ರಂದು ಶಾಂತಿ ನಗರ ಮಣಿಪಾಲ ಸಾರ್ವಜನಿಕ ಗಣೇಶ ಸಮಿತಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಬೆಂಗಳೂರು ಇದರ ರಾಜ್ಯ ಅಧ್ಯಕ್ಷ ಡಾ. ಎಸ್ ಬಾಲಾಜಿ ಜನಪದ ಸಾಹಿತ್ಯವು ಧರ್ಮತೀತವಾಗಿದೆ. ಜಾನಪದದಿಂದ ಹಲವಾರು ಸಂಸ್ಕೃತಿಯ ಪರಿಚಯ ನಮಗೆ ದೊರೆಯುತ್ತದೆ. ಈ ನಿಟ್ಟಿನಲ್ಲಿ ಜನಪದ ಸಾಹಿತ್ಯ ಮತ್ತು ಅದರ ದಾಖಲೀಕರಣ ಅಗತ್ಯವಾಗಿದೆ. ಜಾನಪದ ಪರಿಷತ್ ಮೂಲಕ ಮುಂದಿನ ದಿನಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಮೂಡುಸಗ್ರಿಯ ಧರ್ಮದರ್ಶಿ ಭಾಸ್ಕರ್ ಗುಂಡಿಬೈಲು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಮಹಿಳಾ ಪ್ರತಿನಿಧಿ ಅಹಲ್ಯ ಹೆಗ್ಡೆ, ಮಹಾಮಾಯಿ ಭಜನಾ ಮಂಡಳಿಯ ಸಂಸ್ಥಾಪಕಿ ಮೋಹಿನಿ ಭಟ್, ಆಶ್ಲೇಷ ಹೋಟೆಲಿನ ಮಾಲಕರಾದ ಶ್ರುತಿ ಜಿ.ಶಣೈ, ಜಿಲ್ಲಾ ಘಟಕದ ಖಜಾಂಚಿ ಚಂದ್ರ ಹಂಗಾರುಕಟ್ಟೆ ಮುಂತಾದವರು ಉಪಸ್ಥಿತರಿದ್ದರು. ಈ ಸಂದಭ೯ದಲ್ಲಿ ಹಿರಿಯ ಜಾನಪದ ಕಲಾವಿದೆ ಸರಸ್ವತಿ ಪಿತ್ರೋಡಿಯವರನ್ನು ಸನ್ಮಾನಿಸಲಾಯಿತು. ಸಂಸ್ಥೆ ವತಿಯಿಂದ ರಾಜಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರನ್ನು ಗೌರವಿಸಲಾಯಿತು. ನೂತನ ಅಧ್ಯಕ್ಷೆ ಮಾಯಾ ಕಾಮತ್ ಮತ್ತು ಅವರ ತಂಡಕ್ಕೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಜಿಲ್ಲಾ ಸಂ.ಕಾಯ೯ದಶಿ೯ ರಾಘವೇಂದ್ರ ಪ್ರಭು, ಕವಾ೯ಲು ನಿರೂಪಿಸಿದರು. ಪ್ರ.ಕಾಯ೯ದಶಿ೯ ಕುಸುಮ ಕಾಮತ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭಜನಾ ಮತ್ತು ಸಾಂಸ್ಕ್ರತಿಕ ಕಾಯ೯ಕ್ರಮ ನಡೆಯಿತು.
ಪಡುಬಿದ್ರಿ : ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನ
Posted On: 24 Jun 2024, 06:10 PM
ಪಡುಬಿದ್ರಿ : ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ, ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿ ತಮ್ಮ ಭವಿಷ್ಯವನ್ನೇ ಹಾಳು ಮಾಡುತ್ತಿದ್ದಾರೆ. ಪೋಷಕರ ಕನಸುಗಳನ್ನು ನನಸುಗೊಳಿಸಲು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಯೋಚಿಸಬೇಕು. ಇಂತಹ ಸಮಾಜ ಘಾತುಕ ಮಾದಕ ವಸ್ತುಗಳಿಗೆ ಆಕರ್ಷಿತರಾಗಬಾರದು. ಅಪರಾಧ ಕೃತ್ಯಗಳಿಗೆ ಬಲಿಯಾಗದೇ ದೇಶದ ಉತ್ತಮ ಪ್ರಜೆಯಾಗಿ ಬಾಳಿ ಎಂದು ಪಡುಬಿದ್ರಿ ಪೋಲಿಸ್ ಠಾಣಾಧಿಕಾರಿ ಪ್ರಸನ್ನ ಪಿ.ಎಸ್. ಹೇಳಿದರು. ಅವರು ಪಡುಬಿದ್ರಿ ರೋಟರಿ ಕ್ಲಬ್ ಹಾಗು ಪಡುಬಿದ್ರಿ ಪೋಲಿಸ್ ಠಾಣೆ ವತಿಯಿಂದ ಪಡುಬಿದ್ರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಕಾಲೇಜು ಸಭಾಂಗಣದಲ್ಲಿ ನಡೆದ ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನ ಕಾರ್ಯಕ್ರಮಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ ವಹಿಸಿದ್ದರು. ಇನ್ನರ್ ವೀಲ್ ಅಧ್ಯಕ್ಷೆ ನಮೃತಾ ಮಹೇಶ್, ಕಾಲೇಜು ಪ್ರಭಾರ ಪ್ರಾಂಶುಪಾಲೆ ಹರ್ಷದ್ ಭಾನು, ಹಿರಿಯ ಶಿಕ್ಷಕಿ ಗೀತಾ ಶೆಟ್ಟಿ, ರೋಟರಿ ನಿಕಟ ಪೂರ್ವ ಅಧ್ಯಕ್ಷೆ ಗೀತಾ ಅರುಣ್, ನಿಯೋಜಿತ ಅಧ್ಯಕ್ಷೆ ತಸ್ನೀನ್ ಅರಾ, ಕೋಶಾಧಿಕಾರಿ ಸುನಿಲ್ ಕುಮಾರ್, ಪೋಲಿಸ್ ಸಿಬ್ಬಂದಿ ಹೇಮರಾಜ್ ಉಪಸ್ಥಿತರಿದ್ದರು. ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ಮೋಹನ್ ಕರ್ಕೇರ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಪವನ್ ಸಾಲ್ಯಾನ್ ವಂದಿಸಿದರು.
ಪಡುಬಿದ್ರಿ : ನಡಿಪಟ್ನದಲ್ಲಿ ಕಡಲ್ಕೊರೆತ - ಇಲಾಖಾಧಿಕಾರಿಗಳೊಂದಿಗೆ ಶಾಸಕರ ಭೇಟಿ
Posted On: 23 Jun 2024, 05:03 PM
ಪಡುಬಿದ್ರಿ : ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡಿಪಟ್ನ ಭಾಗದಲ್ಲಿ ಕಡಲ್ಕೊರೆತ ಉಂಟಾಗಿದ್ದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಲಾಖಾಧಿಕಾರಿಗಳೊಂದಿಗೆ ರವಿವಾರ ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಗಾಲದಲ್ಲಿ ಕಡಲ ಕೊರೆತದ ಸಮಸ್ಯೆ ಅಧಿಕವಾಗಲಿರುವುದರಿಂದ ಇದಕ್ಕೆ ಬೇಕಾದ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ವಿದ್ಯಾಶ್ರೀ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ನೀತಾ ಗುರುರಾಜ್ ಹಾಗೂ ಕಾಪು ತಹಶೀಲ್ದಾರರಾದ ಪ್ರತಿಭ ಆರ್., ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಅಭಿಯಂತರರಾದ ಜಯರಾಜ್ ಉಪಸ್ಥಿತರಿದ್ದರು.
ಓಂ ಶ್ರೀ ಯೋಗ ಕೇಂದ್ರ ಬಸ್ರೂರು : ಯೋಗ ದಿನಾಚರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Posted On: 23 Jun 2024, 03:12 PM
ಬಸ್ರೂರು : ಓಂ ಶ್ರೀ ಯೋಗ ಕೇಂದ್ರ ಬಸ್ರೂರು ವತಿಯಿಂದ ಜರಗಿದ ಯೋಗ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ .ರಾಧಾಕೃಷ್ಣ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಅವರು ನಿತ್ಯದ ಜೀವನದಲ್ಲಿ ಯೋಗದ ಮಹತ್ವದ ಬಗ್ಗೆ ಮಾತನಾಡಿದರು. ಸನ್ಮಾನ : 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 90 ಪ್ರತಿಶತ ಹಾಗೂ ಅಧಿಕ ಅಂಕವನ್ನು ಗಳಿಸಿದಂತಹ ಸ್ಥಳೀಯ ಬಸ್ರೂರು ಗ್ರಾಮದ ಸಾಧಕ ವಿದ್ಯಾರ್ಥಿಗಳಾದ ವಿಭಾ, ಸ್ಪಂದನ ಉಳ್ಳೂರು, ಸಾನಿಕಾ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಉದ್ಯಮಿ ಅನಿಲ್ ಕುಮಾರ್ ಶೆಟ್ಟಿ, ನಿರುಪಮ ಹೆಗ್ಡೆ ಉಪಸ್ಥಿತರಿದ್ದರು. ಓಂ ಶ್ರೀ ಯೋಗ ಕೇಂದ್ರದ ಅಧ್ಯಕ್ಷರಾದ ಪ್ರಭಾಕರ್ ಐತಾಳ್ ಸ್ವಾಗತಿಸಿದರು. ಸಾರಿಕಾ ಅಶೋಕ್ ನಿರೂಪಿಸಿದರು. ಕಾರ್ಯದರ್ಶಿ ಅಶೋಕ್ ಕೆರೆಕಟ್ಟೆ ವಂದಿಸಿದರು.
ಜಯಂಟ್ಸ್ ಬ್ರಹ್ಮಾವರ ವಾಷಿ೯ಕ ಮಹಾಸಭೆ ; ಸಾಧಕರಿಗೆ ಅಭಿನಂದನಾ ಸಮಾರಂಭ
Posted On: 23 Jun 2024, 03:02 PM
ಬ್ರಹ್ಮಾವರ : ಸಮಾಜದಲ್ಲಿ ನಾವೆಲ್ಲರೂ ಹೊಸ ಚಿಂತನೆಗಳನ್ನು ಬೆಳೆಸಿಕೊಂಡು ಪರಿಸರಕ್ಕೆ ಪೂರಕವಾದ ಕಾಯ೯ ಮಾಡಬೇಕಾಗಿದೆ ಎಂದು ಡಾ.ಎ.ವಿ ಬಾಳಿಗಾ ಆಸ್ಪತ್ರೆಯ ಖ್ಯಾತ ಮನೋರೋಗ ತಜ್ಞರಾದ ಡಾ. ವಿರೂಪಾಕ್ಷ ದೇವರಮನೆ ಹೇಳಿದರು. ಅವರು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರದ ವತಿಯಿಂದ ಸಿಟಿ ಸೆಂಟರ್ ನಲ್ಲಿ ನಡೆದ ವಾಷಿ೯ಕ ಮಹಾಸಭೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಸೇವಾ ಕಾಯ೯ಗಳನ್ನು ಮಾಡಿದಾಗ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರಿ ಮಾನಸಿಕ ಆರೋಗ್ಯ ಕೂಡ ಉತ್ತಮಗೊಳ್ಳುತ್ತದೆ ಎಂದರು. ಜಯಂಟ್ಸ್ ಫೆಡರೇಶನ್ 6 ರ ಅಧ್ಯಕ್ಷ ಎಲ್.ಬಿ ದೊಡ್ಡಮನಿ ಜಯಂಟ್ಸ್ ನ ಮುಂದಿನ ಕಾಯ೯ಕ್ರಮಗಳ ವಿವರ ನೀಡಿದರು. ವೇದಿಕೆಯಲ್ಲಿ ಫೆಡರೇಶನ್ ಪೂವ೯ ಅಧ್ಯಕ್ಷ ಮಧುಸೂಧನ್ ಹೇರೂರು, ಉಪಾಧ್ಯಕ್ಷ ತೇಜೇಶ್ವರ ರಾವ್, ಯೂನಿಟ್ ಡೈರೆಕ್ಟರ್ ವಿವೇಕಾನಂದ ಕಾಮತ್, ಮುಂತಾದವರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಜಯಂಟ್ಸ್ ಅದ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ವಹಿಸಿದ್ದರು. ಈ ಸಂದಭ೯ದಲ್ಲಿ ಖ್ಯಾತ ಮಿಯಾವಾಕಿ ತಜ್ಞ ಕೆ.ಮಹೇಶ್ ಶೆಣೈ, ಈಜು ಪಟು ಲಿಮ್ಕಾ ದಾಖಲೆಗಾರ ರೋನಾನ್ ಲೂವಿಸ್ ರವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ಜಯಂಟ್ಸ್ ಉಡುಪಿ ಮಾಜಿ ಅಧ್ಯಕ್ಷ ಜಯರಾಂ ರಾವ್, ಡಾ. ಎ.ರಾಜಾ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ.ಜೀವನ್ ಕೃಷ್ಣ ಯುಎಸ್ಐ ರವರ ಪ್ರಾಯೋಜಕತ್ವದಲ್ಲಿ ಅನಾಥ ಶ್ರಮಗಳಿಗೆ ವೀಲ್ ಚೈರ್ ಗಳನ್ನು ಹಸ್ತಾಂತರಿಸಲಾಯಿತು.ಕಾಯ೯ ದಶಿ೯ ಮಿಲ್ಟನ್ ಒಲಿವರ್ ವರದಿ ವಾಚಿಸಿದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು. ಶ್ರೀನಾಥ ಕೋಟ, ರೊನಾಲ್ಡ್ ಸಹಕರಿಸಿದರು.
ಸಾಂತೂರಿನಲ್ಲಿ ಅಕ್ರಮ ಗ್ಯಾಸ್ ಫಿಲ್ಲಿಂಗ್ : ಇಬ್ಬರು ಪೋಲಿಸ್ ವಶ
Posted On: 23 Jun 2024, 02:25 PM
ಸಾಂತೂರು : ಅನಾಹುತಕ್ಕೆ ಎಡೆಮಾಡುವ ರೀತಿಯಲ್ಲಿ ತುಂಬಿದ ಸಿಲಿಂಡರ್ಗಳಿಂದ ಗ್ಯಾಸನ್ನು ಖಾಲಿ ಸಿಲಿಂಡರ್ಗಳಿಗೆ ತುಂಬಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಗೋದಾಮಿಗೆ ದಾಳಿ ಮಾಡಿ ಪಡುಬಿದ್ರಿ ಪೋಲಿಸರು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಕಾಪು ತಾಲೂಕಿನ ಸಾಂತೂರಿನಲ್ಲಿ ನಡೆದಿದೆ. ಅಕ್ರಮವಾಗಿ ಸಿಲಿಂಡರ್ ಗಳಿಗೆ ಅನಿಲ ತುಂಬಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪಡುಬಿದ್ರಿ ಪೊಲೀಸರು, ತಹಶಿಲ್ದಾರರ ನಿರ್ದೇಶನದಂತೆ ಆಹಾರ ನಿರೀಕ್ಷಕರ ಜೊತೆಗೂಡಿ ಸಾಂತೂರಿನ ಸಮನ್ಯು ಗ್ಯಾಸ್ ಏಜೆನ್ಸಿ ಗೋದಾಮಿಗೆ ದಾಳಿ ಮಾಡಿ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ರಾಜಸ್ಥಾನ ಮೂಲದ ಸುರೇಂದ್ರ ಕುಮಾರ್ (25) ಹಾಗೂ ಸುಖ್ ದೇವ್(23) ಎಂದು ಗುರುತಿಸಲಾಗಿದೆ. ಉಳಿದಂತೆ ರಾಜಸ್ಥಾನದ ದೇವರಾಮ್ ಹಾಗೂ ಗ್ಯಾಸ್ ಏಜೆನ್ಸಿ ಮಾಲಕಿಯನ್ನು ಇನ್ನಷ್ಟೆ ವಶಕ್ಕೆ ಪಡೆಯ ಬೇಕಾಗಿದೆ. ಅಂದಾಜು ರೂ.55 ಸಾವಿರ ಮೌಲ್ಯದ 15 ಸಿಲಿಂಡರ್ ಗಳು, ಗ್ಯಾಸ್ ರಿಫಿಲ್ಲಿಂಗ್ ಮಾಡಲು ಬಳಸುವ ಪರಿಕರ, ಲೇಬಲ್ಗಳು, ರೂ.15,460 ನಗದು, ಮೊಬೈಲ್ಫೋನ್ಗಳನ್ನು ವಶಪಡಿಸಲಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆ ಕುತ್ಯಾರು : ಯೋಗ ದಿನಾಚರಣೆ
Posted On: 22 Jun 2024, 07:42 AM
ಕುತ್ಯಾರು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆ, ಕುತ್ಯಾರು ಇಲ್ಲಿ ಜೂ.21ರಂದು 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪತಂಜಲಿ ಯೋಗ ಸಮಿತಿ ಇದರ ಸಕ್ರಿಯ ಸದಸ್ಯರಾಗಿರುವ ಶ್ರೀಪತಿ ಕಾಮತ್ ಹಾಗೂ ಗಣೇಶ್ ಇವರು ವಿದ್ಯಾರ್ಥಿಗಳಿಗೆ ಯೋಗದ ಮಹತ್ವ, ವಿವಿಧ ಯೋಗಾಸನಗಳನ್ನು ತಿಳಿಸಿಕೊಟ್ಟರು. ಸಂಪನ್ಮೂಲ ವ್ಯಕ್ತಿಗಳನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ, ಶಾಲಾ ಶೈಕ್ಷಣಿಕ ಸಲಹೆಗಾರರಾದ ದಿವಾಕರ ಆಚಾರ್ಯ ಗೇರುಕಟ್ಟೆ ಹಾಗೂ ಶಾಲಾ ಪ್ರಾಂಶುಪಾಲರಾದ ಸಂಗೀತಾ, ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳಪು : ಮುಖ್ಯ ಶಿಕ್ಷಕಿ ರಜನಿ ಕೆ ಇವರಿಗೆ ಬೀಳ್ಕೊಡುಗೆ
Posted On: 22 Jun 2024, 07:39 AM
ಕಾಪು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳಪು ಇಲ್ಲಿಯ ಮುಖ್ಯೋಪಾಧ್ಯಾಯಿನಿ ರಜನಿ ಕೆ ಇವರ ಬೀಳ್ಕೊಡುಗೆ ಸಮಾರಂಭವು ಜೂನ್ 13 ರಂದು ಬೆಳಪು ಶಾಲೆಯಲ್ಲಿ ನೆರವೇರಿತು. ಬೀಳ್ಕೊಡುಗೆ ಸಮಾರಂಭದ ನೇತೃತ್ವವನ್ನು ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ವಹಿಸಿದ್ದರು. ಈ ಸಂದರ್ಭ ಎರ್ಮಾಳ್ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಸುಧೀರ್, ಮುಸ್ತಾಕ್ ಸಾಹೇಬ್, ಬಾಲಕೃಷ್ಣ ಆಚಾರ್ಯ, ಸುರೇಂದ್ರ ಪಣಿಯೂರ್, ಚಂದ್ರಹಾಸ್, ಮಹೇಶ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ ವೃಂದ , ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸೌಮ್ಯಶ್ರೀ ಸ್ವಾಗತಿಸಿದರು. ಅನಸೂಯ ಹಾಗೂ ಲಿಡಿಯ ಮರಿಯಾ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಜಯಲಕ್ಷ್ಮಿ ನಿರೂಪಿಸಿದರು. ಕುಮಾರಿ ಶರ್ಮಿಳಾ ವಂದಿಸಿದರು.
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು : ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮ
Posted On: 22 Jun 2024, 07:27 AM
ಕಾಪು : ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023 -24ನೇ ಸಾಲಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಪು ಕ್ಷೇತ್ರದ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಾತನಾಡಿ ಈ ಕಾಲೇಜು ಉತ್ತಮವಾಗಿ ಬೆಳೆದು ಬರಲು ಹಲವು ಶಿಕ್ಷಣ ಪ್ರೇಮಿಗಳ ಕೊಡುಗೆ ಇದೆ. ವಿದ್ಯಾರ್ಥಿಗಳು ಈ ಶೈಕ್ಷಣಿಕ ಸಂಸ್ಥೆಯ ಮೂಲಕ ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು, ಪೋಷಕರು, ಹಲವಾರು ಕೊಡುಗೈ ದಾನಿಗಳ ಮೂಲಕ ಈ ಸಂಸ್ಥೆ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಬೇಕು ಎಂದು ಹಾರೈಸಿದರು. ಕಾಪು ದಂಡ ತೀರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನೀಲಾನಂದ ನಾಯ್ಕ್ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಮನೋಭಾವದಲ್ಲಿ ಬಹಳಷ್ಟು ಬದಲಾವಣೆಯಾಗುತ್ತಿದ್ದು, ವಿದ್ಯಾರ್ಥಿಗಳು ಹೆಚ್ಚು ಹೊತ್ತು ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದು ಅವರ ಜೀವನದ ದಿಕ್ಕನ್ನು ಬದಲಾಯಿಸಿ ಕಷ್ಟಕ್ಕೆ ಎಡೆ ಮಾಡಿಕೊಡುತ್ತಿದೆ. ವಿದ್ಯಾರ್ಥಿಗಳು ಪೋಷಕರು, ಗುರುಗಳು, ಹಿರಿಯರ, ಮಾರ್ಗದರ್ಶನದಲ್ಲಿ ನಡೆದು ಗುರು ಹಿರಿಯರಿಗೆ ವಿಧೇಯರಾಗಿ ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದರು. ಸರಕಾರಿ ಪದವಿ ಪೂರ್ವ ಕಾಲೇಜು ಪೊಲಿಪುವಿನ ಉಪನ್ಯಾಸಕ ಸುಧಾಕರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸನ್ಮಾನ/ ಗೌರವ : ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿತ ಕರ್ಕೇರ ಮತ್ತು ಇತಿಹಾಸ ವಿಭಾಗದ ಡಾ. ಮೆಹೆಬೂಬ್ ಸಾಬ್ ಡಿಪಿ ಅವರನ್ನು ಈ ಶೈಕ್ಷಣಿಕ ಸಾಲಿನಲ್ಲಿ ಪಿಎಚ್ಡಿ ಪದವಿ ಪಡೆದುದಕ್ಕಾಗಿ ಸನ್ಮಾನಿಸಲಾಯಿತು. ಕಾಲೇಜಿನ ವಿದ್ಯಾರ್ಥಿ ಯಮುನಪ್ಪ ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಿರುವುದರಿಂದ ಗುರುತಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋಪಾಲಕೃಷ್ಣ ಎಂ ಗಾಂವ್ಕರ್ ವಹಿಸಿದ್ದರು. ಪೋಷಕ -ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಜಾತ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ದೀಪಿಕಾ ಸುವರ್ಣ, ಸಾಂಸ್ಕೃತಿಕ ಸಂಘದ ಸಂಚಾಲಕ್ಕೆ ಡಾ. ನಾಯನ ಎಲ್ ಎಂ, ಐಕ್ಯೂಎಸ್ ಸಿ ಘಟಕದ ಸಂಚಾಲಕಿ ಡಾ. ರೋಷನೀ ಯಶ್ವಂತ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಮತಿ ಸವಿತಾ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿ ಸಮಿತಿಯ ಅಧ್ಯಕ್ಷರಾದ ಕುಮಾರಿ ಕವಿತಾ ಸ್ವಾಗತಿಸಿದರು. ಕುಮಾರಿ ಶರಣ್ಯ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸುಶ್ಮಿತಾ ವಂದಿಸಿದರು.
