Updated News From Kaup

ಶಿರ್ವ : ನಾಲ್ಕು ವಿದ್ಯಾರ್ಥಿಗಳು ನಾಪತ್ತೆ

Thumbnail
Posted On: 15 May 2024, 01:34 PM

ಶಿರ್ವ : ಇಲ್ಲಿನ ಇಸ್ಲಾಂ ಎಜುಕೇಶನ್‌ ಟ್ರಸ್ಟ್‌ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ಮಂಗಳವಾರ ನಡೆದಿದೆ. ಮಧ್ಯಾಹ್ನ 2:30 ಗಂಟೆಯಿಂದ ಮಧ್ಯಾಹ್ನ 3:30 ಗಂಟೆಯ ನಡುವಿನ ಅವಧಿಯಲ್ಲಿ ಬಿಹಾರ ರಾಜ್ಯದ ವಿದ್ಯಾರ್ಥಿಗಳಾದ ತಬಾರಕ್‌, ಜಮ್‌ ಶೇಡ್‌, ತಂಜೀರ್‌ ಆಲ್‌ಮ್‌, ಶಾಹಿಲ್ ಇವರುಗಳು ಸಂಸ್ಥೆಯಿಂದ ಹೊರಗಡೆ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪರ್ವೇಜ್‌ ಸಲೀಂ ಶಿರ್ವ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಉಡುಪಿ : ಮತಗಟ್ಟೆಗಳಲ್ಲಿ ಮಾಧ್ಯಮದವರಿಗಾದ ತೊಂದರೆ ಕುರಿತು ಎಸ್ಪಿಗೆ ಮನವಿ

Thumbnail
Posted On: 14 May 2024, 04:01 PM

ಉಡುಪಿ : ಲೋಕ ಸಭಾ ಚುನಾವಣೆಯ ಸಂದರ್ಭ ಮತಗಟ್ಟೆಗಳಲ್ಲಿ ಮಾಧ್ಯಮದವರಿಗಾದ ತೊಂದರೆ ಕುರಿತು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ.ಅರುಣ್ ಕೆ. ಅವರಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಇಂದು ಮನವಿ ಸಲ್ಲಿಸಲಾಯಿತು. ಈ ಬಾರಿಯ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ಸಂದರ್ಭ ಮತಗಟ್ಟೆಗೆ ತೆರಳಿ ವಿಡಿಯೋ ಚಿತ್ರೀಕರಣ ಹಾಗೂ ಫೋಟೋಗ್ರಫಿ ಮಾಡಲು ಮಾಧ್ಯಮದವರಿಗೆ ಚುನಾವಣಾ ಆಯೋಗ ಪಾಸ್ ನೀಡಿತ್ತು. ಅದರಂತೆ ಸೀಮಿತ ಮತಗಟ್ಟೆಗಳಲ್ಲಿ ಸಲಬ್ರೆಟಿಗಳು ಮತದಾನ ಮಾಡುವ ಸಂದರ್ಭ ಕ್ಯಾಮೆರಾಮೆನ್‌ಗಳು ಹಾಗೂ ಫೋಟೋಗ್ರಾಫರ್‌ಗಳು ಚಿತ್ರೀಕರಣ/ ಫೋಟೋ ತೆಗೆಯಲು ಮುಂದಾಗಿದ್ದು, ಈ ವೇಳೆ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳು ಮಾಧ್ಯಮದವರಿಗೆ ಅಡ್ಡಿ ಪಡಿಸಿದ್ದಾರೆ. ಗ್ರಾಮೀಣ ಪ್ರದೇಶಗಳ ಪತ್ರಕರ್ತರಿಗೆ ಸರತಿ ಸಾಲಿನಲ್ಲಿ ನಿಂತ ಮತದಾರರ ಫೋಟೋ ತೆಗೆಯಲು ಕೂಡ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಈ ಬಗ್ಗೆ ಪರಿಶೀಲಿಸಿ ಮುಂದೆ ಈ ರೀತಿ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಜೂ.4ರಂದು ನಡೆಯುವ ಮತ ಎಣಿಕೆಗೆ ಸಂಬಂಧಿಸಿ ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಇದಕ್ಕೆ ಸ್ಪಂದಿಸಿದ ಎಸ್ಪಿ ಡಾ.ಕೆ.ಅರುಣ್, ಈ ವಿಚಾರವನ್ನು ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಮಾಹಿತಿ ನೀಡಬೇಕಾಗಿದ್ದು, ಮುಂದೆ ಈ ರೀತಿಯಾಗದಂತೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು ಮತ್ತು ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ನಿಯೋಗದಲ್ಲಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಉಮೇಶ್ ಮಾರ್ಪಳ್ಳಿ, ರಹೀಂ ಉಜಿರೆ, ಪ್ರಮೋದ್ ಸುವರ್ಣ, ಜಯಕರ ಸುವರ್ಣ, ಮೈಕಲ್ ರೋಡ್ರಿಗಸ್, ಹರೀಶ್ ಕುಂದರ್, ಅಜಿತ್ ಆರಾಡಿ, ಪತ್ರಕರ್ತರಾದ ಶಶಿಧರ್ ಮಾಸ್ತಿಬೈಲು, ದೀಪಕ್ ಜೈನ್, ಪುಂಡಲೀಕ ಮರಾಠ, ಹರೀಶ್ ಪಾಲೇಚಾರ್‌, ಚೇತನ್ ಮಟಪಾಡಿ, ಪರೀಕ್ಷಿತ್ ಶೇಟ್, ಜಸ್ಟಿನ್ ಡಿಸಿಲ್ವ, ರಕ್ಷಿತ್ ಬೆಳಪು, ನಾಗರಾಜ್ ರಾವ್, ಅವಿನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಾಪು : ನಿಖಿತಾ ಕುಲಾಲ್ ಸ್ಮರಣಾರ್ಥ ಉಚಿತ ನೋಟ್ ಬುಕ್ ವಿತರಣೆ

Thumbnail
Posted On: 14 May 2024, 02:49 PM

ಕಾಪು : ನಿಖಿತಾ ಕುಲಾಲ್ ನೆನಪಿನಲ್ಲಿ ಅವರ ಮನೆಯವರು ಕೊಡಮಾಡುವ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಮೇ 12 ರಂದು ಕುತ್ಯಾರು ರಾಮೋಟ್ಟು ಬನತೋಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಕುಲಾಲ ಸಂಘದ ಅಧ್ಯಕ್ಷರಾದ ಸಂದೀಪ್ ಬಂಗೇರ ವಹಿಸಿದ್ದರು. ವೇದಿಕೆಯಲ್ಲಿ ಸಂತೋಷ್ ಕುಲಾಲ್ ಪಕ್ಕಾಲು, ಪ್ರಭಾಕರ್ ಇನ್ನ, ನಿಖಿತಾ ಕುಲಾಲ್ ತಂದೆ ತಾಯಿ ಉಪಸ್ಥಿತರಿದ್ದರು. ಸಿಂಚನ ಕುಲಾಲ್ ಪ್ರಾರ್ಥಿಸಿದರು. ಸಂದೀಪ್ ಬಂಗೇರ ಸ್ವಾಗತಿಸಿ, ದೀರಾಜ್ ಕುಲಾಲ್ ವಂದಿಸಿದರು. ಸುಮಾರು 90 ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.

ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುವುದೇ ನಿಜವಾದ ಶಿಕ್ಷಣ -ಕೆ.ಕೆ. ಪೇಜಾವರ

Thumbnail
Posted On: 13 May 2024, 06:44 PM

ಮಂಗಳೂರು : ಶಿಕ್ಷಣವು ಯಾವತ್ತಿಗೂ ಮೌಲ್ಯಾಧಾರಿತ ಶಿಕ್ಷಣ ಆಗಿರಬೇಕು.ಇಂದಿನ ಸಮಾಜವು ಮನುಷ್ಯ ಪ್ರೀತಿಯನ್ನು ಮರೆತಿದೆ ಮಾನವೀಯ ಮೌಲ್ಯಗಳ ಕೊರತೆಯು ಆಧುನಿಕ ಸಮಾಜದಲ್ಲಿ ಎದ್ದು ಕಾಣುತ್ತಿದೆ. ಮಕ್ಕಳು ಹಲವು ಸನ್ನಿವೇಶಗಳಲ್ಲಿ ತಪ್ಪಿತಸ್ಥರಂತೆ ಕಂಡರೂ ಅದು ಮಕ್ಕಳ ತಪ್ಪಾಗಿರದೆ ಹೆತ್ತವರೇ ಅದಕ್ಕೆ ಹೊಣೆಯಾಗಿರುತ್ತಾರೆ. ಈ ಸಮಾಜವು ಅಸ್ವಸ್ಥಗೊಂಡ ಪರಿಣಾಮ ಪ್ರೀತಿಯ ಕುಸುಮಗಳಂತಿರುವ ಮಕ್ಕಳು ಕೂಡ ಬದಲಾಗುತ್ತಾರೆ. ಹಾಗಾಗಿ ಮರೆತ ಮಾನವೀಯ ಗುಣಗಳನ್ನು ಮರು ನೆನಪಿಸುವುದು ಈಗಿನ ಶಿಕ್ಷಣದ ಪ್ರಮುಖ ಕೆಲಸವಾಗಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ನಿಜವಾದ ಶಿಕ್ಷಣ ಎಂದು ಹಿರಿಯ ಜನಪದ ವಿದ್ವಾಂಸರೂ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ.ಕೆ ಪೇಜಾವರರವರು ಹೇಳಿದರು. ಅವರು ಚಿಣ್ಣರ ಚಾವಡಿ ಮಂಗಳೂರು ಮತ್ತು ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಜೆಪ್ಪು ಸಂತ ಜೆರೋಸಾ ಶಾಲೆಯಲ್ಲಿ 5 ದಿನಗಳ ಕಾಲ ನಡೆಯಲಿರುವ ಚಿಣ್ಣರ ಕಲರವ-2024 ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು. ಸೈಂಟ್ ಜೆರೋಸಾ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಅರ್ಪಿತಾರವರು ಮಾತನಾಡುತ್ತಾ, ಮಕ್ಕಳು ಸಾಧನೆಯ ಗುರಿಯನ್ನು ಇಟ್ಟುಕೊಂಡಿರಬೇಕು. ಆಸಕ್ತಿ ಇರುವ ವಲಯಗಳ ಕುರಿತು ಗಮನ ಹರಿಸಿ ನಿರಂತರ ಬೆನ್ನು ಬಿದ್ದು ಅಭ್ಯಾಸಿಸಿ ಆ ಗುರಿಯತ್ತ ಮುನ್ನಡೆಯಬೇಕು ನಿರಂತರ ಅಭ್ಯಾಸ ಮಾತ್ರ ಮಕ್ಕಳನ್ನು ಬೆಳೆಸಬಲ್ಲದು ಎಂದು ಹೇಳಿದರು. ಪ್ರಗತಿಪರ ಚಿಂತಕರಾದ ಮಾಕ್ಸಿಂ ಡಿ'ಸೋಜ ಬೋಂದೆಲ್ ಮಾತನಾಡುತ್ತಾ ವಿಜ್ಞಾನವು ಮಕ್ಕಳ ನಿತ್ಯದ ಪಾಠವಾಗಬೇಕು. ಸಂವಿಧಾನದ ಅರಿವು ಮಕ್ಕಳಿಗಿರಬೇಕು. ಭಾರತದ ಸಂವಿಧಾನದ ಘನತೆಯು ಮಕ್ಕಳಿಗೆ ತಿಳಿದಿರಬೇಕು ಎಂದರು. ಸಮುದಾಯ ಕರ್ನಾಟಕದ ರಾಜ್ಯ ಕಾರ್ಯದರ್ಶಿಯಾದ ಮನೋಜ್ ವಾಮಂಜೂರು ಮಾತನಾಡುತ್ತಾ ಮಕ್ಕಳನ್ನು ಮೊಬೈಲ್ ಗಳಿಂದ ದೂರವಿರಿಸಿ ಮಕ್ಕಳಿಗೆ ಪುಸ್ತಕದ ಪ್ರೀತಿಯನ್ನು ಹೆಚ್ಚಿಸಿ,ಓದುವ ಹವ್ಯಾಸ ಮಕ್ಕಳಿಗೆ ಹೊಸ ಜಗತ್ತನ್ನು ನೀಡಬಲ್ಲದು ಎಂದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಕೋಶಾಧಿಕಾರಿಯಾದ ಡೊಲ್ಫಿ ಡಿ'ಸೋಜ ವಹಿಸಿದ್ದರು. ವೇದಿಕೆಯಲ್ಲಿ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ, ಮಾಜಿ ಜಿಲ್ಲಾ ವಿಧ್ಯಾರ್ಥಿ ನಾಯಕರಾದ ಮೆಲ್ವಿನ್ ಪಾಯಸ್ ,ಪ್ರಗತಿಪರ ಚಿಂತಕರಾದ ಬಿ.ಎನ್ ದೇವಾಡಿಗ,ವಸಂತ ಕುಮಾರ್, ಜಿಲ್ಲಾ ಯುವ ನಾಯಕರಾದ ಸ್ಟ್ಯಾನಿ ಲೋಬೋ,ಸಾಮಾಜಿಕ ಚಿಂತಕರಾದ ಮರ್ಲಿನ್ ರೇಗೋ ಮೊದಲಾದವರು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಒಟ್ಟು 150 ವಿದ್ಯಾರ್ಥಿಗಳು ಭಾಗಿಗಳಾಗಿ ಮುಂದಿನ ಐದು ದಿನಗಳ ಕಾಲ ವಿವಿಧ ತರಬೇತಿಯನ್ನು ಪಡೆಯಲಿದ್ದಾರೆ ಎಂದು ಶಿಬಿರದ ನಿರ್ದೇಶಕರಾದ ಪ್ರವೀಣ್ ವಿಸ್ಮಯ ಬಜಾಲ್ ರವರು ತಿಳಿಸಿದರು. ಚಿಣ್ಣರ ಚಾವಡಿ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ಚಿಣ್ಣರ ಚಾವಡಿಯ ಯೋಗಿತಾ ಉಳ್ಳಾಲರವರು ವಂದಿಸಿದರು.

ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

Thumbnail
Posted On: 13 May 2024, 05:59 PM

ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 11ನೇ ವರ್ಷದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಶನಿವಾರ ಕಾಲೇಜಿನಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗಳು ಸಂಸ್ಥೆಗೆ ಒಂದು ಉತ್ತಮ ಜಾಹೀರಾತುಗಳಾಗಿವೆ. ವಿದ್ಯಾರ್ಥಿಗಳ ಉತ್ತಮ ನಡವಳಿಕೆ ಸಂಸ್ಥೆಯ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ. ಪದವೀಧರರು ಸಮಾಜದ ಎಲ್ಲಾ ಸವಾಲುಗಳನ್ನು ಎದುರಿಸಲು ಬೇಕಾಗುವಂತಹ ಕೌಶಲ್ಯವನ್ನು ಹೊಂದಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರತೀ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಎರಡು ಉತ್ತಮ ಪ್ರಾಜೆಕ್ಟ್‌ಗಳಿಗೆ ಬಹುಮಾನ ನೀಡಿಲಾಯಿತು. ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಡೀನ್‌ಗಳು ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಪು : ಸನಾತನ ಧರ್ಮವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ - ಹಿರಿಯ ನಟ ದೊಡ್ಡಣ್ಣ

Thumbnail
Posted On: 13 May 2024, 05:35 PM

ಕಾಪು : ಇಲ್ಲಿನ ಲಕ್ಷ್ಮಿಜನಾರ್ಧನ ದೇವಸ್ಥಾನಕ್ಕೆ ಸೋಮವಾರ ಹಿರಿಯ ನಟ ದೊಡ್ಡಣ್ಣ ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಜನಾರ್ಧನ್ ಭಟ್ ದೇವಸ್ಥಾನದ ವತಿಯಿಂದ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಅವರು ಸೂರ್ಯ ಚಂದ್ರ ಯಾವತ್ತು ಸ್ಥಾಪಿತರಾದರೋ ಆವತ್ತಿನಿಂದಲೇ ಸನಾತನ ಧರ್ಮ ಉಳಿದುಕೊಂಡಿದೆ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮ ಹಿರಿಯರಿಗೆ 90 ವರ್ಷವಾದರೂ‌ ಯಾವುದೇ ಆರೋಗ್ಯ ಸಮಸ್ಯೆ ಇರುತ್ತಿರಲಿಲ್ಲ. ಅವರು ಇನ್ನೊಬ್ಬರ ಖುಷಿಗೋಸ್ಕರ ಜೀವನ ಮಾಡಿ ತಮ್ಮ ತೃಪ್ತಿಯನ್ನು ಅದರಲ್ಲಿ ಕಾಣುತ್ತಿದ್ದರು. ನಮ್ಮ ದೇಸಿಯ ಅಡುಗೆಗಳನ್ನು ತಿನ್ನುತ್ತಿದ್ದರು. ಇವತ್ತಿನ ವಿದ್ಯಾವಂತರು ಪಿಜ್ಜಾ, ಬರ್ಗರ್ ತಿಂದು 30 ವರ್ಷಕ್ಕೆ ಸಕ್ಕರೆ ಕಾಯಿಲೆ, 45ಕ್ಕೆ ಕ್ಯಾನ್ಸರ್ ಬರುತ್ತಿದೆ. ಮೊಬೈಲ್ ಬಳಕೆ ಕಡಿಮೆ ಮಾಡಿ ನಮ್ಮಲ್ಲಿರುವ ಗ್ರಂಥ ಭಂಡಾರವನ್ನು ಓದಿ ಜೊತೆಗೆ ದೇವರ ಸ್ಮರಣೆಯನ್ನು ಮಾಡಿ ಎಂದರು. ಈ ಸಂದರ್ಭ ದೇವಸ್ಥಾನದ ವಠಾರದಲ್ಲಿ ಗಿಡ ನೆಡುವ ಮೂಲಕ ವೃಕ್ಷ ಸಂರಕ್ಷಣೆಗೆ ಪ್ರೋತ್ಸಾಹ ನೀಡಿದರು. ಜೋತಿಷ್ಯ ವಿದ್ವಾನ್ ಪ್ರಕಾಶ್‌ ಅಮ್ಮಣ್ಣಾಯ, ಗಿರೀಶ್ ಪಾತ್ರಿ, ಸಂದೀಪ್ ಶೆಟ್ಟಿ, ಲಕ್ಷ್ಮಿಕಾಂತ್ ಮತ್ತಿತರರು ಉಪಸ್ಥಿತರಿದ್ದರು.

ಪಡುಬಿದ್ರಿ : ಮಂಗಳೂರು ಹರ್ ಕ್ಯುಲರ್ಸ್ ತಂಡಕ್ಕೆ ಇನ್ನರ್ ವೀಲ್ ಟ್ರೋಫಿ -2024

Thumbnail
Posted On: 13 May 2024, 04:40 PM

ಪಡುಬಿದ್ರಿ : ಇಲ್ಲಿನ ಇನ್ನರ್ ವೀಲ್ ಕ್ಲಬ್ ವತಿಯಿಂದ ಅಂತಾರಾಷ್ಟ್ರೀಯ ಇನ್ನರ್ ವೀಲ್ ಕ್ಲಬ್ ನ ಶತಮಾನೋತ್ಸವದ ಅಂಗವಾಗಿ ಪಡುಬಿದ್ರಿ ಬೋರ್ಡ್ ಶಾಲಾ ಮೃೆದಾನದಲ್ಲಿ ನಡೆದ ಇನ್ನರ್ ವೀಲ್ ಕ್ಲಬ್ ನ ಇನ್ನರ್ ವೀಲ್ ಟ್ರೋಫಿ -2024 ಪಂದ್ಯಕೂಟವನ್ನು ಇನ್ನರ್ ವೀಲ್ ಜಿಲ್ಲಾ ಕಾರ್ಯದರ್ಶಿ ರಜನಿ ಭಟ್ ಉದ್ಘಾಟಿಸಿದರು. ಈ ಸಂದರ್ಭ ಪಡುಬಿದ್ರಿ ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ , ಹಿರಿಯ ತ್ರೋಬಾಲ್, ಬಾಡ್ಮಿಂಟನ್ ಆಟಗಾರ್ತಿ ಮಮತಾ ರವಿಕಿರಣ್, ‌ಅಂತಾರಾಷ್ಟ್ರೀಯ ತ್ರೋಬಾಲ್ ಆಟಗಾರ್ತಿ ಮಮತಾ ನವೀನ್, ಕಾರ್ಯದರ್ಶಿ ಮನೋರಮಾ ಸುವರ್ಣ ಉಪಸ್ಥಿತರಿದ್ದರು. ಸಮಾರೋಪ : ಇನ್ನರ್ ವೀಲ್ ಟ್ರೋಫಿ -2024 ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತಾಡಿದ ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಚಿ ಗುರ್ಮೆ, ನಿರಂತರ ಅಭ್ಯಾಸ ಮಾಡಿದರೆ ರಾಷ್ಟ್ರಮಟ್ಟದ ಆಟಗಾರರಾಗಿ ಮೂಡಿಬರಲು ಸಾಧ್ಯ.‌ ಆಟಗಾರರು ಶಿಸ್ತನ್ನು ಅಳವಡಿಸಿಕೊಂಡು ಅಟದ ನಿಯಮಗಳಿಗೆ ಬದ್ದರಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಇಂದಿನ ಪಂದ್ಯಕೂಟದ ಸೋಲು ಮುಂದಿನ ಗೆಲುವಿಗೆ ಕಾರಣವಾಗಿರುತ್ತದೆ‌ ಎಂದರು. ಉಭಯ ಜಿಲ್ಲೆಗಳಿಂದ ಬಲಿಷ್ಠ 16 ಮಹಿಳಾ ತ್ರೋಬಾಲ್ ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಮಂಗಳೂರಿನ ತುಳುನಾಡು ಯುನೃೆಟೆಡ್ ತಂಡವನ್ನು ಸೋಲಿಸುವ ಮೂಲಕ ಮಂಗಳೂರು ಹರ್ ಕ್ಯುಲರ್ಸ್ "ಬಿ" ತಂಡ ಇನ್ನರ್ ವೀಲ್ ಟ್ರೋಫಿ 2024ರ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ತುಳುನಾಡ್ ಯುನೈಟೆಡ್, ತೃತೀಯ ಸ್ಥಾನವನ್ನು ಮಂಗಳೂರ್ ಸ್ಪೋರ್ಟ್ಸಿಂಗ್ ತಂಡ ಪಡೆದು ಕೊಂಡಿತು. ಉತ್ತಮ ಎಸೆತಗಾರ್ತಿಯಾಗಿ ಮಂಗಳೂರು ಹರ್ ಕ್ಯುಲರ್ಸ ತಂಡದ ಶ್ರೇಯಾ, ಉತ್ತಮ ಹಿಡಿತಗಾರ್ತಿ ತುಳುನಾಡ್ ಯುನೈಟೆಡ್ ತಂಡದ ನಮೃತಾ, ಮತ್ತು ಉತ್ತಮ ಸವ್ಯಸಾಚಿ ಪ್ರಶಸ್ತಿಯನ್ನು ಮಂಗಳೂರು ಹರ್ ಕ್ಯುಲರ್ಸ್ ತಂಡದ ವೃೆಷ್ಣವಿ ಪಡೆದು ಕೊಂಡರು. ಇನ್ನರ್ ವೀಲ್ ಅಧ್ಯಕ್ಷೆ ನಮೃತಾ ಮಹೇಶ್ ಅಧ್ಯಕ್ಷತೆ ವಹಿಸಿದ್ದರು‌. ಈ ಸಂದರ್ಭದಲ್ಲಿ ಪಡುಬಿದ್ರಿ ವ್ಯವಸಾಯ ಸಹಕಾರಿ ಸೊಸೈಟಿ ಅಧ್ಯಕ್ಷ ವೃೆ.ಸುಧೀರ್ ಕುಮಾರ್, ಮಾಜಿ ಜಿ.ಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ಪಡುಬಿದ್ರಿ ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಪೂಜಾರಿ, ಜೆಸಿಐ ಇಂಡಿಯಾ ನಿರ್ದೇಶಕ ವೃೆ.ಸುಕುಮಾರ್ ಉಪಸ್ಥಿತರಿದ್ದರು. ನಮೃತಾ ಮಹೇಶ್ ಸ್ವಾಗತಿಸಿ, ಕೀರ್ತೀನ್ ಸಾಲ್ಯಾನ್ ಹಾಗು ಶುಭ ದಿನೇಶ್ ನಿರೂಪಿಸಿದರು. ಕಾರ್ಯದರ್ಶಿ ಮನೋರಮಾ ಸುವರ್ಣ ವಂದಿಸಿದರು.

ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ : ನೂತನ ಮನೆ ಹಸ್ತಾಂತರ

Thumbnail
Posted On: 13 May 2024, 11:04 AM

ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಇದರ ವತಿಯಿಂದ ಬಿದ್ಕಲ್ ಕಟ್ಟೆಯಲ್ಲಿ ಕಳೆದ 8 ವಷ೯ ಗಳಿಂದ ಮನೆಯಿಲ್ಲದೆ ಸಣ್ಣ ಜೋಪಡಿಯಲ್ಲಿ ವಾಸವಾಗಿದ್ದ ರಾಮ ಮತ್ತು ಮಗಳಾದ ಸುಮತಿಯವರಿಗೆ ಫೌಂಡೇಶನ್ ವತಿಯಿಂದ ನಿಮಿ೯ಸಲಾದ ರಾಮ ನಿಲಯ ನೂತನ ಮನೆಯ ಉದ್ಘಾಟನೆ ಮೇ.12 ರಂದು ನಡೆಯಿತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥರಾದ ಅಜು೯ನ್ ಭoಡಾರ್ಕಾರ್, ಈ ರೀತಿಯ ಸಮಾಜದಲ್ಲಿ ಯಾವುದೇ ಮೂಲಭೂತ ಸೌಕಯ೯ ವಿಲ್ಲದೆ ಸಮಾಜದ ಮುಖ್ಯವಾಹಿನಿ ಬರಲಾಗದೆ ಕಷ್ಟ ಪಡುವವರನ್ನು ಗುರುತಿಸಿ ಸೇವೆ ಮಾಡುವುದು ಇoದಿನ ಅಗತ್ಯವಾಗಿದೆ. ಎಂದರು. ಮುಂದಿನ ದಿನಗಳಲ್ಲಿ 200 ಕುಟುಂಬಗಳಿಗೆ ಸಹಾಯಧನ ನೀಡುವ ಕಾಯ೯ಕ್ರಮ ನಡೆಯಲಿದೆ ಎಂದರು. ಹೋಂ ಡಾಕ್ಟರ್ ಫೌಂಡೇಶನ್ ನ ಮುಖ್ಯಸ್ಥರಾದ ಡಾ.ಶಶಿಕಿರಣ್ ಶೆಟ್ಟಿ ಸಂಸ್ಥೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದಭ೯ ಬಡ ಪ್ರತಿಭಾನ್ವಿತ ವಿದ್ಯಾಥಿ೯ನಿಯ ಶಾಲಾ ಶುಲ್ಕ ಸೇರಿದಂತೆ ವಿವಿಧ ಸಹಾಯಧನ ನೀಡಲಾಯಿತು. ಈ ಸಂದಭ೯ದಲ್ಲಿ ಡಾ. ಸುಮಾ ಎಸ್ ಶೆಟ್ಟಿ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಭಾಗ್ಯಶ್ರೀ ಭಂಡಾರ್ಕರ್, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಉದಯ ನಾಯ್ಕ್, ರಾಘವೇಂದ್ರ ಪ್ರಭು ಕವಾ೯ಲು, ಸುಜಯ ಶೆಟ್ಟಿ, ಸ್ವರೂಪ ಹೆಗ್ಡೆ ಕಿಶೋರ್ ಶೆಟ್ಟಿ, ರಾಮು ಸುಮತಿ ಹಾಗೂ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.

ವಿಶ್ವ ತಾಯಂದಿರ ದಿನ : ಕಾಪು ಶ್ರೀ ಮಾರಿಯಮ್ಮನ ಸ್ವರ್ಣ ಗದ್ದುಗೆಯ ಕಚೇರಿ ಉದ್ಘಾಟನೆ

Thumbnail
Posted On: 12 May 2024, 03:01 PM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿಯಲ್ಲಿ ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿಯನ್ನು ನವ ದೀಪಗಳನ್ನು ಬೆಳಗಿಸುವ ಮೂಲಕ ಆದಿತ್ಯವಾರ ಉದ್ಘಾಟಿಸಲಾಯಿತು. ಈ ಸಂದರ್ಭ ಮುಂಬೈನ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್ ಇದರ ಆಡಳಿತ ನಿರ್ದೇಶಕರು, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಅಧ್ಯಕ್ಷರಾದ ರವಿ ಸುಂದರ್ ಶೆಟ್ಟಿ ಮಾತನಾಡಿ ಕಾಪು ಮಾರಿಗುಡಿಯಲ್ಲಿ ಗದ್ದುಗೆ ಪೂಜೆ ವಿಶೇಷವಾಗಿದ್ದು ಅದರಂತೆ ಸ್ವರ್ಣ ಗದ್ದುಗೆಗೆ ಪ್ರಾಮುಖ್ಯತೆ ನೀಡಲಾಗಿದೆ. ಭಕ್ತಾದಿಗಳು ಈ ಕಾರ್ಯಕ್ಕೆ ಕೈಜೋಡಿಸಬೇಕೆಂದು ವಿನಂತಿಸಿದರು. ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಪ್ರಧಾನ ಕಾರ್ಯಾಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ ಕಾಪು ಶ್ರೀ ಹೊಸ ಮಾರಿಗುಡಿ ದೇವಳದ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಮಾರಿಯಮ್ಮನ ಗದ್ದುಗೆಯನ್ನು ಸ್ವರ್ಣದಿಂದಲೇ ಮಾಡಬೇಕೆನ್ನುವುದು ದೇವಳದ ಅಭಿವೃದ್ಧಿ ಸಮಿತಿಯ ಆಶಯ. ಈಗಾಗಲೇ ಗದ್ದುಗೆ ನಿರ್ಮಾಣಕ್ಕಾಗಿ ಭಕ್ತರು ಚಿನ್ನವನ್ನು ನೀಡುತ್ತಿದ್ದಾರೆ. ಸ್ವರ್ಣ ಸಮರ್ಪಣೆಯ ಮಾಹಿತಿಯನ್ನು ಭಕ್ತಾದಿಗಳಿಗೆ ತಲುಪಿಸಬೇಕೆನ್ನುವ ದೃಷ್ಟಿಯಿಂದ ಕಚೇರಿಯನ್ನು ಆರಂಭಿಸಲಾಗಿದೆ ಎಂದರು. ಕಾಪು ಶ್ರೀ ಹೊಸ ಮಾರಿಗುಡಿ‌ ದೇವಳದ ಅಭಿವೃದ್ಧಿ ಸಮಿತಿ ‌ಅಧ್ಯಕ್ಷ ಕೆ‌. ವಾಸುದೇವ ಶೆಟ್ಟಿ ಮಾತನಾಡಿ ಇಂದು ವಿಶ್ವ ತಾಯಂದಿರ ದಿನದಂದು ಕಾಪು ಅಮ್ಮನ ಸ್ವರ್ಣ ಗದ್ದುಗೆ ಕಚೇರಿ ಉದ್ಘಾಟನೆ ನಡೆದಿದೆ. ಶೀಘ್ರದಲ್ಲಿ ಅಮ್ಮನ ಸ್ವರ್ಣ ಗದ್ದುಗೆ ಕಾರ್ಯದ ಚಾಲನೆ ಭಕ್ತ ಜನರ ಕೊಡುಗೆಯಿಂದ ಆಗಲಿ ಎಂದು ಶುಭ ಹಾರೈಸಿದರು. ಸಾಯಿರಾಧ ಗ್ರೂಪ್ಸ್ ಪ್ರಮುಖರಾದ ಮನೋಹರ್ ಎಸ್. ಶೆಟ್ಟಿ ಕುಟುಂಬ ವರ್ಗದ ಪರವಾಗಿ‌ ಸ್ವರ್ಣ ಗದ್ದುಗೆಗೆ ಚಿನ್ನವನ್ನು ಅರ್ಪಿಸಿದರು. ಕಚೇರಿ ಆರಂಭಕ್ಕೂ ಮುನ್ನ ಕಾಪು ಶ್ರೀ ಲಕ್ಷ್ಮಿಜನಾರ್ಧನ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರು ಮತ್ತು ಮುಂಬೈ ಸಮಿತಿಯ ಅಧ್ಯಕ್ಷರಾದ ಸುಧಾಕರ ಹೆಗ್ಡೆ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಹರಿಯಪ್ಪ ಕೋಟ್ಯಾನ್, ಬಿ ಎನ್ ಶಂಕರ್ ಪೂಜಾರಿ, ರತ್ನಾಕರ ಶೆಟ್ಟಿ ನಡಿಕೆರೆ, ಪ್ರಸನ್ನ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ ಕೊತ್ವಾಲಗುತ್ತು, ಕಾರ್ಯದರ್ಶಿ ರವಿ ಭಟ್ ಮಂದಾರ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಮುಂಬೈ ಸಮಿತಿಯ ಗೌರವ ಸಲಹೆಗಾರರಾದ ಸಿಎ ಎನ್. ಬಿ ಶೆಟ್ಟಿ, ಅಭಿವೃದ್ಧಿ ಸಮಿತಿಯ ಪುಣೆ ಸಮಿತಿಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲಬೆಟ್ಟು, ಚಂದ್ರಹಾಸ್ ಶೆಟ್ಟಿ ಮುಂಬೈ, ರಂಜನಿ ಸುಧಾಕರ ಹೆಗ್ಡೆ, ಉಪಾಧ್ಯಕ್ಷರುಗಳಾದ ಮಾಧವ ಆರ್ ಪಾಲನ್, ಮನೋಹರ್ ಎಸ್. ಶೆಟ್ಟಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ ಶೆಟ್ಟಿ ಬಾಲಾಜಿ, ಮುಂಬೈ ಸಮಿತಿಯ ವಸಾಯಿ - ಡಹಾನು ವಲಯದ ಮುಖ್ಯ ಸಂಚಾಲಕರಾದ ರಮೇಶ್ ವಿ ಶೆಟ್ಟಿ, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕರ ಶೆಟ್ಟಿ ಕಲ್ಯಾ, ಗ್ರಾಮ ಸಮಿತಿಯ ಪ್ರಧಾನ ಸಂಚಾಲಕರಾದ ಅರುಣ್ ಶೆಟ್ಟಿ ಪಾದೂರು, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರುಗಳಾದ ರತ್ನಾಕರ ಹೆಗ್ಡೆ ಕಲ್ಯಾ ಬೀಡು, ರಮೇಶ್ ಶೆಟ್ಟಿ ಕಾಪು ಕೊಲ್ಯ, ಸಂಚಾಲಕರುಗಳಾದ ಸಂದೀಪ್ ಶೆಟ್ಟಿ ಶಿರ್ವ ಮುಂಬೈ, ಮೋಹನ್ ವಿ. ಶೆಟ್ಟಿ ಮುಂಬೈ, ಸುನಿಲ್ ಎಸ್.ಪೂಜಾರಿ ಕಾಪು, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕರಾದ ಮಧುಕರ್ ಎಸ್., ಗ್ರಾಮ ಸಮಿತಿಯ ಮಹಿಳಾ ಮುಖ್ಯ ಸಂಚಾಲಕರಾದ ಗೀತಾಂಜಲಿ ಎಮ್.ಸುವರ್ಣ, ಕಾತ್ಯಾಯಿನಿ ತಂಡದ ಮುಖ್ಯ ಸಂಚಾಲಕರಾದ ಬೀನಾ ವಿ.ಶೆಟ್ಟಿ, ಶೈಲಪುತ್ರಿ ತಂಡದ ಮುಖ್ಯ ಸಂಚಾಲಕರಾದ ವಿದ್ಯಾಧರ ಪುರಾಣಿಕ್, ಸಂಚಾಲಕರಾದ ರಾಧಾರಮಣ ಶಾಸ್ತ್ರಿ, ಸಂಚಾಲಕರಾದ ಅನುರಾಧ ಮನೋಹರ್ ಶೆಟ್ಟಿ, ಪ್ರಚಾರ ಸಮಿತಿಯ ಮಹಿಳಾ ಮುಖ್ಯ ಸಂಚಾಲಕರಾದ ಸಾವಿತ್ರಿ ಗಣೇಶ್, ಪ್ರಚಾರ ಸಮಿತಿಯ ಸಂಚಾಲಕರಾದ ಜಯರಾಮ್ ಆಚಾರ್ಯ, ಕೂಷ್ಮಾಂಡಾ ತಂಡದ ಸಂಚಾಲಕರಾದ ಕೆ. ಕೊರಗ ಬೆಳಪು, ಚಂದ್ರಘಂಟಾ ತಂಡದ ಮುಖ್ಯ ಸಂಚಾಲಕರಾದ ಪಿ ಕೆ ಶ್ರೀನಿವಾಸ, ಕಾಲ ರಾತ್ರಿ ತಂಡದ ಮುಖ್ಯ ಸಂಚಾಲಕರಾದ ಶೇಖರ ಆಚಾರ್ಯ, ವಿಜಯಲಕ್ಷ್ಮಿ ಆಚಾರ್ಯ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಹಣೆಯ ಅರ್ಚನಾ ಶೆಟ್ಟಿ, ಸಂದೀಪ್ ಕುಮಾರ್ ಉಪಸ್ಥಿತರಿದ್ದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು, ಕಾಪು ದಿವಾಕರ ಶೆಟ್ಟಿ ವಂದಿಸಿದರು.

ಕಾಪು : ಬೆಳಪು ಸುತ್ತ ಮುತ್ತ ಮೇ 14ರಂದು ವಿದ್ಯುತ್ ನಿಲುಗಡೆ

Thumbnail
Posted On: 12 May 2024, 12:39 PM

ಕಾಪು : ತಾಲೂಕಿನ ಬೆಳಪು ವಿದ್ಯುತ್ ಉಪ ಕೇಂದ್ರದಿಂದ ಹೊರ ಡುವ ಮಲ್ಲಾರು ಫೀಡರ್ ಮಾರ್ಗದಲ್ಲಿ ಮೇ 14ರಂದು ಹೊಸದಾಗಿ ಲಿಂಕ್ ಲೈನ್ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9ರಿಂದ ಸಂಜೆ 5:30ರವರೆಗೆ ಮಲ್ಲಾರು, ಪಕೀರ್ಣಕಟ್ಟೆ, ಬೆಳಪು, ಮಜೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.