Updated News From Kaup
ನಾಳೆ (ಜು.9) ದಕ್ಷಿಣ ಕನ್ನಡ ಜಿಲ್ಲೆಯ ಪಿಯುಸಿವರೆಗಿನ ಮಕ್ಕಳಿಗೆ ರಜೆ ಘೋಷಣೆ
Posted On: 08 Jul 2024, 08:39 PM
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜುಲೈ 9ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ರಜೆಯನ್ನು ಘೋಷಿಸಿದೆ.
ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್ : ಕಟಾ, ಕುಮಿಟೆ ವಿಭಾಗದಲ್ಲಿ ಹರ್ಷಿತಾ ಇನ್ನಂಜೆ ಪ್ರಥಮ ಸ್ಥಾನ
Posted On: 08 Jul 2024, 06:44 PM
ಕಾಪು : ಗದಗದಲ್ಲಿ ಜುಲೈ 7 ರಂದು ನಡೆದ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಬಾಲಕಿಯರ ಬ್ಲಾಕ್ ಬೆಲ್ಟ್ ಅಂಡರ್ 21 ಕಟಾ ವಿಭಾಗದಲ್ಲಿ ಹಾಗೂ ಬ್ಲಾಕ್ ಬೆಲ್ಟ್ +65KG ಕುಮಿಟೆ ವಿಭಾಗದಲ್ಲಿ ಹರ್ಷಿತಾ ಇನ್ನಂಜೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಉದ್ಯಾವರ : ಆಟೋ, ಟೆಂಪೋ ಮಾಲಕ ಆತ್ಮಹತ್ಯೆ
Posted On: 08 Jul 2024, 06:24 PM
ಉದ್ಯಾವರ : ವೈಯುಕ್ತಿಕ ಕಾರಣಗಳಿಂದ ಮನನೊಂದು ಉದ್ಯಾವರ ಬೋಳಾರ್ ಗುಡ್ಡೆಯ ಆಟೋ ಟೆಂಪೋ ಚಾಲಕ / ಮಾಲಕ ಮಹೇಶ್ ಪಾಲನ್ (35) ಉದ್ಯಾವರ ಹಿಂದೂ ರುದ್ರ ಭೂಮಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮದಾಸ್ ಪಾಲನ್ ಪುತ್ರನಾಗಿರುವ ಮಹೇಶ್ (ಮಾಹಿ), ಇಂದು ಬೆಳಿಗ್ಗೆ ಮೂರನೇ ತರಗತಿಯಲ್ಲಿ ಇರುವ ಪುತ್ರಿಯನ್ನು ಶಾಲೆಗೆ ಬಿಟ್ಟು ಬಂದಿದ್ದು, ಬಳಿಕ ಮನೆ ಸಮೀಪದಲ್ಲಿರುವ ಕಟ್ಟಿಗೆ ತುಂಬಿರುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮಹೇಶ್ ಉದ್ಯಾವರ ಗುಡ್ಡೆಯಂಗಡಿಯಲ್ಲಿ ಟೆಂಪೋರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಬಿಲ್ಲವ ಮಹಾಜನ ಸಂಘ, ಉದ್ಯಾವರ ಯುವಕ ಮಂಡಲ ಮತ್ತು ಗುಡ್ಡೆಯಂಗಡಿ ಫ್ರೆಂಡ್ಸ್ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತ ಮಹೇಶ್ ತಂದೆ ತಾಯಿ, ಇಬ್ಬರು ಸಹೋದರರು, ಪತ್ನಿ, ಪುತ್ರಿ ಸಹಿತ ಬಂದು ಬಳಗದವರನ್ನು ಅಗಲಿದ್ದಾರೆ.
ಜುಲೈ 9 (ನಾಳೆ) : ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
Posted On: 08 Jul 2024, 06:20 PM
ಉಡುಪಿ : ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಜು.9ರಂದು ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಂಗಳವಾರ ರಜೆ ಘೋಷಿಸಿ ಉಡುಪಿ ಅಪರ ಜಿಲ್ಲಾಧಿಕಾರಿ ಆದೇಶ ನೀಡಿದ್ದು, ಉಳಿದಂತೆ ಎಲ್ಲ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್, ಐಟಿಐಗಳಿಗೆ ರಜೆ ನೀಡಲಾಗಿಲ್ಲ.
ಕಳತ್ತೂರು : ಕೆ, ಕೆ ಬಾಯ್ಸ್ ಆಶ್ರಯದ ಕೆಸರ್ಡೊಂಜಿ ದಿನ ಕಾರ್ಯಕ್ರಮ ಸಂಪನ್ನ
Posted On: 08 Jul 2024, 08:29 AM
ಕಳತ್ತೂರು : ಇಲ್ಲಿನ ಕೆ. ಕೆ ಬಾಯ್ಸ್ ಅಶ್ರಯದಲ್ಲಿ ಕುಕ್ಕುಂಜ ಹಾಗೂ ಕಳತ್ತೂರು ಗ್ರಾಮಸ್ಥರಿಗೆ ಆಯೋಜನೆ ಮಾಡಿದ ಕೆಸರ್ಡೊಂಜಿ ದಿನ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಆಚಾರ್ಯ, ಹಿರಿಯರಾದ ರವೀಂದ್ರ ಶೆಟ್ಟಿ, ಪ್ರಮುಖರಾದ ರಾಜೇಶ್ ಕುಲಾಲ್, ಉದಯ ಕುಲಾಲ್, ಪ್ರದೀಶ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ವಿಗೆ ಸಹಕಾರವಿತ್ತ ಎಲ್ಲರಿಗೂ ಕೆ. ಕೆ ಬಾಯ್ಸ್ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿರುವರು.
ಪಡುಬೆಳ್ಳೆ ನಾರಾಯಣಗುರು ಶಾಲೆಯ ಇಂಟರ್ಯಾಕ್ಟ್ ವಿದ್ಯಾರ್ಥಿಗಳಿಂದ ಗದ್ದೆ ನಾಟಿ ; ಕೃಷಿ ಮಾಹಿತಿ
Posted On: 08 Jul 2024, 06:38 AM
ಶಿರ್ವ : ಪಡುಬೆಳ್ಳೆ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಇಂಟರ್ಯಾಕ್ಟ್ ವಿದ್ಯಾರ್ಥಿಗಳು ಪಡುಬೆಳ್ಳೆಯ ಸಡಂಬೈಲು ಪ್ರಗತಿಪರ ಕೃಷಿಕ ರಘುರಾಮ ನಾಯಕ್ ತೊಟ್ಟಿಲು ಮನೆಯ ದೊಡ್ಡ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಬೇಸಾಯಗಾರರ ಕೃಷಿ ದಿನಚರಿಯ ಬಗ್ಗೆ ಪ್ರತ್ಯಕ್ಷ ಅನುಭವ ಪಡೆದು ಕೊಂಡರು. ವಿದ್ಯಾರ್ಥಿಗಳ ಬರುವಿಕೆಗಾಗಿಯೇ ದೊಡ್ಡ ಗದ್ದೆಯನ್ನು ಉಳುಮೆ ಮಾಡಿ ಸಿದ್ಧಗೊಳಿಸಿದ್ದು, ನಾಟಿ ಮಾಡುವ ಪೂರ್ವದಲ್ಲಿ ಬೇಸಾಯಗಾರನ ದಿನಚರಿ, ಉಳುಮೆಯ ವಿಧಾನ, ಭತ್ತದ ತಳಿಯ ಬಗ್ಗೆ ಮಾಹಿತಿ ನೀಡಿ, ನಾಟಿ ಮಾಡುವ ವಿಧಾನದ ಬಗ್ಗೆ ರಘುರಾಮ ನಾಯಕ್ ವಿವರಿಸಿದರು. ಮಳೆಯಲ್ಲಿಯೇ ವಿದ್ಯಾರ್ಥಿಗಳು ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡು ಹೊಸ ಅನುಭವವನ್ನು ಪಡೆದುಕೊಂಡರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ರಿನುಷಾ, ಇಂಟರ್ಯಾಕ್ಟ್ ಕೋರ್ಡಿನೇಟರ್ ವೀಣಾ ಆಚಾರ್ಯ, ಸಹ ಶಿಕ್ಷಕಿಯರಾದ ರೂಪಾ, ದೀಕ್ಷಾ, ಶಾಹಿಸ್ತಾ, ವೀಣಾ ನಾಯಕ್, ವಾಹನ ಚಾಲಕ ಮಂಜುನಾಥ್ ಪೂಜಾರಿ ವಿದ್ಯಾರ್ಥಿಗಳೊಂದಿಗೆ ಸಾಥ್ ನೀಡಿದರು. ಇಂಟರ್ಯಾಕ್ಟ್ ಅಧ್ಯಕ್ಷೆ ಭವಿಷ್ಯಾ, ಕಾರ್ಯದರ್ಶಿ ಡೇವಿಡ್ ತರಂಗ್ ಸಹಿತ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ವಿಶೇಷ ಅನುಭವವನ್ನು ಸವಿದರು.
ಬಂಟಕಲ್ಲು : ಪಿಎಚ್ಡಿ ಸಾಧಕಿ ಡಾ.ವಾರಿಜಾ ಮೋಹನ್ ರವರಿಗೆ ಅಭಿನಂದನೆ, ಸನ್ಮಾನ
Posted On: 08 Jul 2024, 06:32 AM
ಬಂಟಕಲ್ಲು : ಉಡುಪಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿನ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ವಾರಿಜಾ ಮೋಹನ್ ಇವರು ಮಂಡಿಸಿದ "ಜಾಬ್ ಅಟ್ಯಿಟ್ಯೂಡ್ ಅಮಂಗ್ ಔಟ್ಸೊರ್ಸಸ್ಡ್ ಎಂಪ್ಲಾಯ್ಸ್ ಇನ್ ಗವರ್ನಮೆಂಟ್ ಡಿಪಾರ್ಟ್ಮೆಂಟ್ -ಅ ಸ್ಟಡಿ ವಿಥ್ ರೆಫರೆನ್ಸ್ ಟು ಉಡುಪಿ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ" ಎಂಬ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿವಿ ಯಿಂದ ಡಾಕ್ಟರೇಟ್ ಪದವಿ ಪಡೆದ ಪ್ರಯುಕ್ತ ಬಂಟಕಲ್ಲು ಎಸ್.ವಿ.ಕನ್ಸ್ಟ್ರಕ್ಷನ್ಸ್ ಮತ್ತು ಪದಕಣ್ಣಾಯ ಫ್ಯಾಮಿಲಿ ಟ್ರಸ್ಟ್ ಇದರ ವತಿಯಿಂದ ರವಿವಾರ ಅಭಿನಂದಿಸಿ ಸನ್ಮಾನಿಸಲಾಯಿತು. ಬಂಟಕಲ್ಲು ಶ್ರೀಬ್ಬುಸ್ವಾಮಿ ದೈವಸ್ಥಾನದ ಕಾರ್ಯಾಲಯದಲ್ಲಿ ಜರುಗಿದ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಶ್ರೀಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಬಿ.ಪುಂಡಲೀಕ ಮರಾಠೆ ಸನ್ಮಾನ ನೆರವೇರಿಸಿ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟಕಲ್ಲು ಶ್ರೀಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ಭಾಸ್ಕರ ಶೆಟ್ಟಿ ಸಡಂಬೈಲು ವಹಿಸಿದ್ದರು. ದೈವಸ್ಥಾನದ ಗುರಿಕಾರರೂ, ಬಂಟಕಲ್ಲು ಎಸ್.ವಿ.ಕನ್ಸ್ಟ್ರಕ್ಷನ್ಸ್ ಮತ್ತು ಪದಕಣ್ಣಾಯ ಫ್ಯಾಮಿಲಿ ಟ್ರಸ್ಟ್ನ ಅಧ್ಯಕ್ಷರಾದ ಶಂಕರ ಪದಕಣ್ಣಾಯ ಸ್ವಾಗತಿಸಿದರು. ಜೀರ್ಣೊದ್ಧಾರ ಸಮಿತಿಯ ಕಾರ್ಯದರ್ಶಿ ಶಿಕ್ಷಕ ಸತ್ಯಸಾಯಿ ಪ್ರಸಾದ್ ಪ್ರಾಸ್ತಾವಿಕ ಮಾತುಗಳೊಂದಿಗೆ ನಿರೂಪಿಸಿದರು. ಡಿಡಿಪಿಐ ಕಛೇರಿಯ ನಿವೃತ್ತ ಪ್ರಬಂಧಕರಾದ ಶಾಂತಾ, ಮೋಹನ್ ಸಾಲಿಕೇರಿ, ವಾಸುದೇವ, ದಿನೇಶ್ ಎಸ್, ಬಂಟಕಲ್ಲು ಸಂಜೀವ ವೈ, ದೈವಸ್ಥಾನದ ಅರ್ಚಕರಾದ ಸಂತೋಷ್, ಚಂದ್ರಶೇಖರ್, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಪಾರ್ಥಸಾರಥಿ ಕುಂಜಾರುಗಿರಿ ವಂದಿಸಿದರು.
ಮೂಡಬೆಟ್ಟು : ಉಸಿರಿಗಾಗಿ ಹಸಿರು ಕಾರ್ಯಕ್ರಮ
Posted On: 07 Jul 2024, 07:39 PM
ಕಟಪಾಡಿ : ಉಸಿರಿಗಾಗಿ ಹಸಿರು ಸಂಘಟನೆ ಆಯೋಜಿಸುವ "ಉಸಿರಿಗಾಗಿ ಹಸಿರು" ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಹಣ್ಣಿನ ಗಿಡಗಳು ಮತ್ತು ಔಷಧಿಯ ಗಿಡಗಳ ವಿತರಣೆ ಮತ್ತು ನೆಡುವ ಕಾರ್ಯಕ್ರಮ ಮೂಡಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ರವಿವಾರ ನಡೆಯಿತು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುಭಾಸ್ ಬಲ್ಲಾಳ್, ಅಶೋಕ್ ರಾವ್, ಸವಿತಾ ಶೆಟ್ಟಿ, ಸುಜಲ ಪೂಜಾರಿ, ಪವಿತ್ರ ಶೆಟ್ಟಿ, ಕವಿತಾ ಸುವರ್ಣ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗೀತಾಂಜಲಿ ಸುವರ್ಣ, ಶಕ್ತಿ ಕೇಂದ್ರ ಪ್ರಮುಖ್ ನಿತಿನ್ ವಿ ಶೇರಿಗಾರ್, ಬೂತ್ ಅಧ್ಯಕ್ಷರಾದ ಕರುಣಾಕರ ಪೂಜಾರಿ, ಡಾ. ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ ಸದಸ್ಯರಾದ ಸಂತೋಷ್ ಎಮ್ ಶೆಟ್ಟಿಗಾರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಬ್ರಹ್ಮಾವರ : ಆಸರೆ ರುಡ್ ಸೆಟ್ ನೇತೃತ್ವದಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ
Posted On: 07 Jul 2024, 07:32 PM
ಬ್ರಹ್ಮಾವರ : ಇಲ್ಲಿನ ಆಸರೆ ರುಡ್ ಸೆಟ್ ಸಂಘಟನೆಯ ನೇತೃತ್ವದಲ್ಲಿ ರುಡ್ ಸೆಟ್ ಆವರಣದಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು. ಪರಿಸರದ ಬಗೆಗಿನ ಜಾಗೃತಿ ಹಾಗೂ ಪರಿಸರ ಸಂರಕ್ಷಣೆ ಪ್ರತಿ ವ್ಯಕ್ತಿಯ ಜವಾಬ್ದಾರಿ ಎನ್ನುವ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂಧರ್ಭದಲ್ಲಿ ಆಸರೆ ಅಧ್ಯಕ್ಷರಾದ ಹರಿಣಿ ರಾವ್, ಕೋಶಾದಿಕಾರಿ ವೆಂಕಟೇಶ ನಾಯ್ಕ್, ಗೌರವ ಸಲಹೆಗಾರರಾದ ರಾಜೇಂದ್ರ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಹೇಶ್ ಕುಮಾರ್ ಮಲ್ಪೆ, ಕಾರ್ಯದರ್ಶಿ ಸೂರಜ್ ಹಾವಂಜೆ, ಉಪಾಧ್ಯಕ್ಷರಾದ ಕುಶ ಕುಮಾರ್, ಸದಸ್ಯರಾದ ರಾಜಲಕ್ಷ್ಮಿ, ಕಾರ್ಯಕಾರಿ ಸಮಿತಿ ಸದಸ್ಯರು , ಉಪಸ್ಥಿತಿಯಿದ್ದರು. ರುಡ್ ಸೆಟ್ ಸಿಬ್ಬಂದಿ ಪ್ರಥ್ವಿರಾಜ್, ರುಡ್ ಸೆಟ್ ವಿಧ್ಯಾರ್ಥಿಗಳು ಸಹಕರಿಸಿದರು.
ಶಿರ್ವ ಸಂತ ಮೇರಿ ಪ.ಪೂ ಕಾಲೇಜು ಹಳೆ ವಿದ್ಯಾರ್ಥಿ ಸಂಘ : 2.50 ಲಕ್ಷ ವಿದ್ಯಾರ್ಥಿವೇತನ ವಿತರಣೆ
Posted On: 07 Jul 2024, 06:37 PM
ಶಿರ್ವ : ಸುವರ್ಣ ವರ್ಷದ ಸಂಭ್ರಮದಲ್ಲಿರುವ ಶಿರ್ವ ಸಂತ ಮೇರಿ ಪ.ಪೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತರಾಗಿರುವ ಪ್ರಸ್ತುತ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಈ ಸಂಸ್ಥೆಯಲ್ಲಿ ಕಲಿತು ಉನ್ನತ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2 ಲಕ್ಷ 50 ಸಾವಿರ ರೂ. ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಸಂತಮೇರಿ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಧರ್ಮಗುರುಗಳಾದ ರೇ.ಫಾ ಡಾ ಲೆಸ್ಲಿ ಡಿ'ಸೋಜ ರವರು ವಿದ್ಯಾರ್ಥಿವೇತನ ವಿತರಿಸಿ ಮಕ್ಕಳಿಗೆ ಮಾರ್ಗದರ್ಶನ ನೀಡಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ವಿದ್ಯಾರ್ಥಿ ವೇತನವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿ ಶುಭಹಾರೈಸಿದರು. ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಪರವಾಗಿ ನಿತಿನ್ ವಾಗ್ಲೆ, ಆಶ್ಲೇಶ್ ಪ್ರಭು ಮಾತನಾಡಿದರು. ಕಾಲೇಜು ಪ್ರಾಂಶುಪಾಲರಾದ ಜಯಶಂಕರ್ ರವರು ಸಂಘದ ಕಾರ್ಯಚಟುವಟಿಕೆ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿರ್ವ ಚರ್ಚ್ ನ ಪಾಲನ ಮಂಡಳಿಯ ಮೆಲ್ವಿನ್ ಅರಾನ್ನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ನೊರ್ಬಾಟ್ ಮಾಚದೊರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು. ಸಂಘದ ಕೋಶಾಧಿಕಾರಿ ಡಾ. ಗುರುರಾಜ್ ರವರು ವಿದ್ಯಾರ್ಥಿವೇತನ ಪಡೆದವರ ವಿವರ ವಾಚಿಸಿದರು. ಕಾರ್ಯದರ್ಶಿ ಮೋಹನ್ ನೊರೊನ್ಹಾ ವಂದಿಸಿದರು. ಸಂಘದ ಕಾರ್ಯಕಾರಿ ಸಮಿತಿಯ ಕೆ ಆರ್ ಪಾಟ್ಕರ್ ರವರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಹೆತ್ತವರು ಉಪಸ್ಥಿತರಿದ್ದರು.
