Updated News From Kaup
ಕಾಪು : ಸಮಾಜ ಸೇವಕ ಲೀಲಾಧರ್ ಶೆಟ್ಟಿ ಮತ್ತು ವಸುಂದರ ದಂಪತಿಗಳ ಅಂತ್ಯಕ್ರಿಯೆ

Posted On: 13-12-2023 08:05PM
ಕಾಪು : ಇಲ್ಲಿನ ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕ, ಸಮಾಜ ಸೇವಕ ಧರಣಿ ಸಮಾಜ ಸಂಸ್ಥೆ ಸ್ಥಾಪಿಸಿದ್ದ ಕರಂದಾಡಿ ಲೀಲಾಧರ್ ಶೆಟ್ಟಿ ಮತ್ತು ಮಡದಿ ವಸುಂದರ ದಂಪತಿಗಳು ಆತ್ಮಹತ್ಯೆ ಶರಣಾಗಿದ್ದಾರೆ.
ಅವರ ಮರಣದಿಂದ ಕಾಪು ತಾಲೂಕಿನ ಅವರ ಅಭಿಮಾನಿ ವರ್ಗ ಸೇರಿದಂತೆ ಎಲ್ಲರೂ ಕಂಬನಿ ಮಿಡಿದಿದ್ದಾರೆ. ಅವರ ಮರಣದಿಂದ ಕಾಪುವಿಗೆ ಸೂತಕದ ಛಾಯೆ ಆವರಿಸಿದೆ. ಆಟೋ, ಟ್ಯಾಕ್ಸಿ ಸೇರಿದಂತೆ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಣೆಯಿಂದ ಬಂದ್ ಆಗಿದೆ. ಮಣಿಪಾಲದಿಂದ ಬಂದ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸಹಸ್ರಾರು ಜನರು ಸೇರಿದ್ದರು.
ಜನರ ಮೆಚ್ಚಿನ ಲೀಲಣ್ಣ ಮತ್ತು ವಸುಂದರಕ್ಕನವರ ಪಾರ್ಥಿವ ಶರೀರದ ಮೆರವಣಿಗೆಯು ಕಾಪು ಪೊಲಿಪು ಜಾಮೀಯಾ ಮಸೀದಿಯ ಜಂಕ್ಷನ್ ನಿಂದ ಪ್ರಾರಂಭಗೊಂಡು ಕರಂದಾಡಿ ಶಾಲೆಯಲ್ಲಿ ಕೊನೆಗೊಂಡು, ಅಂತಿಮ ದರ್ಶನ ಕರಂದಾಡಿ ಶಾಲಾ ಮೈದಾನದಲ್ಲಿ ನಡೆಯಲಿದೆ. ಕರಂದಾಡಿ ಶಾಲಾ ಮೈದಾನದಲ್ಲಿ ಅಂತಿಮ ದರ್ಶನದ ಸಕಲ ಏರ್ಪಾಡು ಆಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಂತಿಮ ದರ್ಶನ ಕ್ಕಾಗಿ ಕಾಯುವ ದೃಶ್ಯ ಮನ ಮಿಡಿಯುತ್ತಿತ್ತು.
ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರುಗಳಾದ ಲಾಲಾಜಿ ಮೆಂಡನ್, ವಿನಯ ಕುಮಾರ್ ಸೊರಕೆ ಸಹಿತ ನೂರಾರು ಗಣ್ಯರು ಉಪಸ್ಥಿತರಿದ್ದರು.
ಉಡುಪಿ : ಮೆಡಿಕಲ್ ಶಾಪ್ಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ - ಜಿಲ್ಲಾಧಿಕಾರಿ

Posted On: 13-12-2023 12:28PM
ಉಡುಪಿ : ಸಾರ್ವಜನಿಕ ಹಿತವನ್ನು ಕಾಪಾಡುವ ದೃಷ್ಟಿಯಿಂದ ಕ್ರಿಮಿನಲ್ ಪ್ರೊಸೀಜರ್ ಕೋಡ್ 1973 ಕಾಲಂ 133 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲೆಯಲ್ಲಿ “X” ಮತ್ತು “H” ಔಷಧಿಗಳನ್ನು ಮಾರಾಟ ಮಾಡುವ ಎಲ್ಲಾ ವೈದ್ಯಕೀಯ ಹಾಗೂ ಫಾರ್ಮಸಿ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿ.ಸಿ ಟಿವಿ ಅಳವಡಿಸುವಂತೆ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಆದೇಶಿಸಿದ್ದಾರೆ.
ಸಿ.ಸಿ.ಟಿವಿ ಕ್ಯಾಮೆರಾವನ್ನು ಅಳವಡಿಸಲು ಎಲ್ಲಾ ವೈದ್ಯಕೀಯ, ಫಾರ್ಮಸಿ ಅಂಗಡಿ ಮಾಲೀಕರಿಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದ್ದು, ಜಿಲ್ಲಾ ಔಷಧ ನಿಯಂತ್ರಕರು ಸದ್ರಿ ಅಂಗಡಿಗಳಲ್ಲಿ ಸಿ.ಸಿ ಟಿವಿ ಅಳವಡಿಸಿರುವ ಕುರಿತು ತಪಾಸಣೆ ನಡೆಸಬೇಕು.
ಈ ಆದೇಶವನ್ನು ಉಲ್ಲಂಘಿಸುವ ಮೆಡಿಕಲ್, ಫಾರ್ಮಸಿ ಅಂಗಡಿ ಮಾಲೀಕರ ವಿರುದ್ಧ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ಸ್ ಕತಾರ್ : ವಾರ್ಷಿಕ ಸಾಮಾನ್ಯ ಸಭೆ ; ಅಧ್ಯಕ್ಷರಾಗಿ ನವೀನ್ ಶೆಟ್ಟಿ ಇರುವೈಲ್ ಅವಿರೋಧ ಆಯ್ಕೆ

Posted On: 13-12-2023 12:14PM
ಭಾರತದ ರಾಯಭಾರ ಕಚೇರಿಯ ಅಧೀನದಲ್ಲಿ ಇಂಡಿಯನ್ ಕಲ್ಚರಲ್ ಸೆಂಟರ್ ಸಹವರ್ತಿ ಸಂಘಗಳಲ್ಲಿ ಒಂದಾದ ಬಂಟ್ಸ್ ಕತಾರ್ ತನ್ನ ಸದಸ್ಯರಿಗೆ ವೇದಿಕೆಯನ್ನು ಒದಗಿಸುವ ಮತ್ತು ಉತ್ತೇಜಿಸುವ ಮತ್ತು ರವಾನಿಸುವ ಮುಖ್ಯ ಉದ್ದೇಶದೊಂದಿಗೆ 2011 ರಲ್ಲಿ ಸ್ಥಾಪನೆಯಾದಾಗಿನಿಂದ ಯುವ ಪೀಳಿಗೆಗೆ ಸ್ಥಳೀಯ ಸಂಸ್ಕೃತಿ, ವಿವಿಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಇದರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2023-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ನವೀನ್ ಶೆಟ್ಟಿ ಇರುವೈಲ್ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಸುಬೋಧ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುಖರಾಮ ಶೆಟ್ಟಿ, ಕೋಶಾಧಿಕಾರಿಯಾಗಿ ಸುನೀಲ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ನವೀನ್ ಶೆಟ್ಟಿ ಮಡಂತ್ಯಾರು, ವಿಶೇಷ ಅಗತ್ಯಗಳ ಉಸ್ತುವಾರಿಯಾಗಿ ಪ್ರೀತನ್ ರೈ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಕ್ಷಿಣಿ ವಿಘ್ನೇಶ್ ಶೆಟ್ಟಿ, ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ಚಿದಾನಂದ ರೈ, ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂಜಾ ಆದರ್ಶ ಶೇಣವ, ಲಾಜಿಸ್ಟಿಕ್ ಮತ್ತು ಯುವ ಸಂಯೋಜಕರಾಗಿ ದಿನೇಶ್ ಶೆಟ್ಟಿ, ಸದಸ್ಯತ್ವ ಮತ್ತು ಪರಿಸರ ಸಂಯೋಜಕರಾಗಿ ಮನೋಜ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಬಂಟ್ಸ್ ಕತಾರ್ನ ನಿರ್ಗಮಿತ ಅಧ್ಯಕ್ಷೆ ಡಾ.ಪದ್ಮಶ್ರೀ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಉದ್ದೇಶಗಳನ್ನು ವಿವರಿಸಿ, ಶ್ಲಾಘಿಸಿದರು. ಅವರ ಆಡಳಿತ ಸದಸ್ಯರ ಸಾಮೂಹಿಕ ಪ್ರಯತ್ನಕ್ಕೆ ಮತ್ತು ಸಲಹಾ ಸಮಿತಿ, ಸದಸ್ಯರಿಂದ ದೊರೆತ ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ನೀಡಿದ ಸಹಕಾರಕ್ಕಾಗಿ ನಿರ್ಗಮಿತ ಕಾರ್ಯಕಾರಿ ಮಂಡಳಿ ಮತ್ತು ಸಲಹಾ ಸಮಿತಿ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಸ್ಥಾಪಕ ಅಧ್ಯಕ್ಷ ರವಿ ಶೆಟ್ಟಿ, ಮಾಜಿ ಅಧ್ಯಕ್ಷ ನವನೀತ ಶೆಟ್ಟಿ, ಹಿರಿಯ ಸದಸ್ಯರಾದ ರಾಮ್ ಮೋಹನ್ ರೈ, ರಾಮಚಂದ್ರ ಶೆಟ್ಟಿ ಅವರು ಹೊಸ ಸಮಿತಿಯನ್ನು ಅಭಿನಂದಿಸಿ ಮತ್ತು ನೂತನ ಆಡಳಿತ ಅವಧಿಯಲ್ಲಿ ಬಂಟ್ಸ್ ಕತಾರ್ ಇನ್ನು ಹೆಚ್ಚು ಎತ್ತರಕ್ಕೆ ಬೆಳೆಯಲಿ ಎಂದು ತಮ್ಮ ಶುಭಾಶಯಗಳನ್ನು ತಿಳಿಸಿದರು. ಮಾಜಿ ಅಧ್ಯಕ್ಷ ಮತ್ತು ನಿರ್ಗಮಿತ ಸಲಹಾ ಸಮಿತಿ ಛೇರ್ಮನ್ ದೀಪಕ್ ಶೆಟ್ಟಿ, ಹಿಂದಿನ ಸಮಿತಿಯ ಸದಸ್ಯರು ಮತ್ತು ಬಂಟ್ಸ್ ಕತಾರ್ ಸದಸ್ಯರು ಉಪಸ್ಥಿತರಿದ್ದರು.
ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಮಾನಸ ಶೆಟ್ಟಿ ಗತ ಸಾಲಿನ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು. ಕೋಶಾಧಿಕಾರಿ ಮನೋಹರ ಶೆಟ್ಟಿ ಆಯವ್ಯಯ ಪತ್ರ ಮಂಡಿಸಿದರು.
ಕಾಪು : ಸ್ವಾತಂತ್ರ್ಯ ಹೋರಾಟಗಾರನ್ನು ಸ್ಮರಿಸುವುದೇ ಪುಣ್ಯದ ಕಾರ್ಯ - ಸುಬ್ರಹ್ಮಣ್ಯ ಶೆಟ್ಟಿ

Posted On: 13-12-2023 11:02AM
ಕಾಪು : ಮಹಾತ್ಮಗಾಂಧೀಜಿಯವರ ಕರೆಗೆ ಓಗೊಟ್ಟು ತಮ್ಮ ಸರ್ವಸ್ವವನ್ನು ತ್ಯಾಗಮಾಡಿ ಸಮರ್ಪಣಾಭಾವದಿಂದ ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಹೋರಾಡಿ, ಲಾಠಿಏಟು, ಸೆರೆಮನೆ ವಾಸ, ವಿವಿಧ ಚಿತ್ರಹಿಂಸೆಗಳನ್ನು ಅನುಭವಿಸಿ ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು ನಮಗೆ ಪ್ರಾತ:ಸ್ಮರಣೀಯರು, ಅವರನ್ನು ಸ್ಮರಿಸುವುದೇ ಜೀವನದ ಅವಿಸ್ಮರಣೀಯ ಕ್ಷಣ ಹಾಗೂ ಪುಣ್ಯದ ಕಾರ್ಯ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ನುಡಿದರು. ಅವರು ಸೋಮವಾರ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ಕಾಪು ಪಡುಗ್ರಾಮ ಕೊಪ್ಪಲಂಗಡಿ ಸಾಲ್ಯಾನ್ ತೋಟ "ಶ್ರೀಪ್ರಭಾ"ನಿವಾಸದಲ್ಲಿ ಏರ್ಪಡಿಸಿದ ಸ್ವಾತಂತ್ರ್ಯ ವೀರ ಸಹೋದರರಾದ ಕಾಪು ವೀರಪ್ಪ ಎಂ.ಸಾಲಿಯಾನ್ ಕಾಪು ಹರೇಂದ್ರ ಸಾಲಿಯಾನ್ರವರ ಸಂಸ್ಮರಣೆ "ಅಮೃತಭಾರತಿಗೆ ಕನ್ನಡದ ಆರತಿ" ಸ್ವಾತಂತ್ರ್ಯ ಸೇನಾನಿಗಳ ನೆನಪಿನಲ್ಲಿ ಏರ್ಪಡಿಸಿದ "ಅಮೃತಾಂಜಲಿ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಕಾಪು ತಾಲೂಕು ಕಸಾಪ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿ ತಾಲೂಕಿನ ಹೋರಾಟಗಾರರನ್ನು ಗುರುತಿಸಿ ಅವರ ಮನೆಯಂಗಳದಲ್ಲಿ ಕುಟುಂಬದ ಸದಸ್ಯರನ್ನೊಳಗೊಂಡು ಹಿರಿಯ ಹೋರಾಟಗಾರರನ್ನು ಸ್ಮರಿಸುವ ಇಂತಹ ಸ್ತುತ್ಯ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ದಿ.ವೀರಪ್ಪ ಎಂ.ಸಾಲ್ಯಾನ್ರವರ ಹಿರಿಯ ಪುತ್ರಿ ಪ್ರಭಾವತಿ ಪಿ.ಸಾಲಿಯಾನ್ ದೀಪ ಪ್ರಜ್ವಲನದೊಂದಿಗೆ ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಿದರು. ಕಾಪು ಪುರಸಭಾ ಮಾಜಿ ಸದಸ್ಯ ಕೆ.ಎಚ್.ಉಸ್ಮಾನ್ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರ ನೆನಪು ಸದಾ ಉಳಿಯುವಂತೆ ಅವರು ವಾಸಿಸಿದ ಹಾಗೂ ನಡೆದಾಡಿದ ರಸ್ತೆಗೆ "ವೀರಪ್ಪ ಎಂ.ಸಾಲಿಯಾನ್ ರಸ್ತೆ" ಎಂದು ನಾಮಕರಣ ಮಾಡುವಂತೆ ಸಾಹಿತ್ಯ ಪರಿಷತ್ತು ನಿರ್ಣಯ ಕೈಗೊಂಡು ಪುರಸಭೆಗೆ ನೀಡುವಂತೆ ಸಲಹೆ ನೀಡಿದಲ್ಲದೆ ಈ ನಿಟ್ಟಿನಲ್ಲಿ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಮುಂದಾಳು ಮಾಧವ ಪಾಲನ್ ಕಾಪು, ಜಿಲ್ಲಾ ಕಸಾಪ ಸಭಾಭವನ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ನುಡಿನಮನ ಸಲ್ಲಿಸಿದರು. ಕುರ್ಕಾಲು ಗ್ರಾಮ ಪಂ.ಅಧ್ಯಕ್ಷ ಪ್ರಶಾಂತ್ ಪೂಜಾರಿ, ವೀರಪ್ಪ ಸಾಲಿಯಾನ್ರವರ ಪುತ್ರಿಯರಾದ ಜಯಲಕ್ಷ್ಮಿ ಪೂಜಾರಿ, ಮೀರಾ ಪೂಜಾರಿ, ಭಜನಾ ಮಂಡಳಿ ಅಧ್ಯಕ್ಷೆ ಸಾವಿತ್ರಿಗಣೇಶ್, ಅರುಣ್ ಬಂಗೇರ, ಸುಧಾಕರ ಪಾಣಾರ ಬೆಳ್ಳೆ, ಜಿಲ್ಲಾ ದೈಹಿಕ ಶಿಕ್ಷಣ ನಿವೃತ್ತ ಅಧಿಕಾರಿ ಮಧುಕರ್ ಎಸ್.ಕಲ್ಯಾ ವೇದಿಕೆಯಲ್ಲಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿ ಮಾತನಾಡಿ ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವ ಹೊಸ್ತಿಲಲ್ಲಿ ಕಾಪು ತಾಲೂಕಿನ ಹೋರಾಟಗಾರರ ವಿವರವನ್ನು ಸಂಗ್ರಹಿಸಿ ಅವರ ದೇಶಭಕ್ತಿ, ತ್ಯಾಗ, ಕೊಡುಗೆಯನ್ನು ಸ್ಮರಿಸಿ ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ತಾಲೂಕು ಘಟಕ ಶೃದ್ದಾಭಕ್ತಿಯಿಂದ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರಾದ ವೀರಪ್ಪ ಎಂ.ಸಾಲಿಯಾನ್ರವರ ನೆನಪು ಸದಾ ಉಳಿಯುವಂತೆ ಅವರು ವಾಸಿಸಿದ ಹಾಗೂ ನಡೆದಾಡಿದ ರಸ್ತೆಗೆ "ವೀರಪ್ಪ ಎಂ.ಸಾಲಿಯಾನ್ ರಸ್ತೆ" ಎಂದು ನಾಮಕರಣ ಮಾಡುವ ಪ್ರಸ್ತಾವದ ಬಗ್ಗೆ ನಿರ್ಣಯ ಕೈಗೊಂಡು ಕಾಪು ಪುರಸಭೆಗೆ ಮನವಿ ಸಲ್ಲಿಸುವುದಾಗಿ ತಿಳಿಸಿ ಈನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳೂ ಕೈಜೋಡಿಸುವಂತೆ ವಿನಂತಿಸಿದರು.
ಕಸಾಪ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ನೀಲಾನಂದ ನಾಯ್ಕ್ ನಿರೂಪಿಸಿದರು. ಗೌರವ ಕೋಶಾಧ್ಯಕ್ಷ ವಿದ್ಯಾಧರ್ ಪುರಾಣಿಕ್ ವಂದಿಸಿದರು.
ಡಿಸೆಂಬರ್ 15 : ಕಾಪು ತಾಲ್ಲೂಕು ಮಟ್ಟದ ಪಿಂಚಣಿ ಅದಾಲತ್

Posted On: 13-12-2023 08:52AM
ಕಾಪು : ಸಾಮಾಜಿಕ ಭದ್ರತಾ ಯೋಜನೆಗಳಾದ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ವೇತನ, ನಿರ್ಗತಿಕ ವಿಧವಾ ವೇತನ, ಮೈತ್ರಿ ಯೋಜನೆ ಹಾಗೂ ಮನಸ್ವಿನಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾಪು ತಾಲೂಕಿಗೆ ಸಂಬಂಧಿಸಿದ ಗ್ರಾಮಗಳ ಕಾಪು ತಾಲ್ಲೂಕು ಮಟ್ಟದ ಪಿಂಚಣಿ ಅದಾಲತ್ ಡಿಸೆಂಬರ್ 15 ರಂದು ಬೆಳಿಗ್ಗೆ 10 ಗಂಟೆಗೆ ಕಾಪು ಆಡಳಿತ ಸೌಧದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾದ ರಶ್ಮಿ ಎಸ್ ಆರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾಪು ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಿಗೆ ಸಂಬಂಧಪಟ್ಟ ಪಿಂಚಣಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿ ಕೋರಿಕೆ ತಿರಸ್ಕೃತಗೊಂಡಿರುವವರು ಪಿಂಚಣಿ ಬಾರದಿರುವವ ಹಾಗೂ ಪಿಂಚಣಿಗೆ ಸಂಬಂಧಿಸಿದ ಇನ್ನಿತರ ದೂರುಗಳ ಫಲಾನುಭವಿಗಳು ಹಾಜರಾಗಿ ಪರಿಹಾರ ಕಂಡುಕೊಳಬಹುದಾಗಿದೆ ಎಂದು ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓಮನ್ ಬಿಲ್ಲವಾಸ್ : ವ್ಯವಹಾರ ಸಂಪರ್ಕ - ತರಬೇತಿ ಕಾರ್ಯಾಗಾರ ಸಂಪನ್ನ
Posted On: 13-12-2023 08:30AM
ಓಮನ್ ಬಿಲ್ಲವಾಸ್ ಮುಖೇನ 'ವ್ಯವಹಾರ ಸಂಪರ್ಕ' ಶೀರ್ಷಿಕೆಯಡಿಯಲ್ಲಿ ಬಿಲ್ಲವ ಬಾಂಧವರನ್ನು ಆರ್ಥಿಕವಾಗಿ ಸ್ವಾವಲಂಬಿತರನ್ನಾಗಿಸುವ ಹಾಗೂ ಪರಸ್ಪರ ವ್ಯಾವಹಾರಿಕ ಬೆಂಬಲವನ್ನು ವೃದ್ಧಿಪಡಿಸುವ ತರಬೇತಿ ಕಾರ್ಯಾಗಾರ ಡಿಸೆಂಬರ್ 8ರಂದು ಮಸ್ಕತ್ ನ ಅಜ್ಹೈಭ ಗಾರ್ಡನ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯ ಉದ್ಯಮಿಗಳು, ಸ್ವಉದ್ಯೋಗಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ತಮ್ಮ ವ್ಯಾವಹಾರಿಕ ಅನುಭವನ್ನು ಹಂಚಿಕೊಂಡರು ಹಾಗೂ ಯಶಸ್ವೀ ಉದ್ಯಮಿಗಳಾಗುವಲ್ಲಿ ಪರಿಪಾಲಿಸಬೇಕಾದ ಸೂಕ್ಷ್ಮ ವಿಚಾರಗಳನ್ನು ತಿಳಿಸಲಾಯಿತು.
ಅಧ್ಯಕ್ಷರಾದ ಸುಜಿತ್ ಅಂಚನ್ ಮಾತನಾಡಿ ಸಂಘಟನಾತ್ಮಕ ಚಟುವಟಿಕೆಗಳು ಹಾಗೂ ಮುಂಬರುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು. ಸ್ಥಾಪಕ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಡಾ. ಅಂಚನ್ ಸಿ. ಕೆ ದಿಕ್ಸೂಚಿ ಭಾಷಣ ನೀಡಿದರು.
ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಹರೀಶ್ ಸುವರ್ಣ ಸ್ವಾಗತಿಸಿದರು. ಶ್ರೀ ಕೃಷ್ಣ ಪ್ರಸಾದ್ ಮತ್ತು ಸುರೇಂದ್ರ ಅಮೀನ್ ಪ್ರಸ್ತಾವನೆಗೈದರು. ಉಮೇಶ್ ಜೆಪ್ಪು ಕಾರ್ಯಕ್ರಮ ನಿರೂಪಿಸಿ, ವಂದನ ರಾಮಕೃಷ್ಣ ವಂದಿಸಿದರು.
ಕಾಪು : ಸಮಾಜ ಸೇವಕ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ

Posted On: 13-12-2023 08:04AM
ಕಾಪು : ಇಲ್ಲಿನ ಸಮಾಜ ಸೇವಕ, ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕರೂ ಆಗಿದ್ದ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಜನರ ಪ್ರೀತಿಯ ಲೀಲಣ್ಣ ಸರಳ ಸಜ್ಜನ ವ್ಯಕ್ತಿಯಾಗಿ ಓರ್ವ ಉತ್ತಮ ನಟ, ನಿರ್ದೇಶಕನಗಿ, ಕಾಪು ರಂಗತರಂಗ ತಂಡದ ಜನಪ್ರಿಯತೆಗೆ ಕಾರಣವಾಗಿದ್ದರು. ಒಂದು ಬಾರಿ ಕಾಪು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಸಮಾಜದ ಪರವಾಗಿ ಕಾಳಜಿ ಹೊಂದಿದ್ದರು.
ಸಮಾಜ ಸೇವಕನಾಗಿ, ಕಾಪು ಬಂಟರ ಸಂಘದ ಮಾಜಿ ಅಧ್ಯಕ್ಷ, ಭಜನಾ ಮಂಡಳಿಯ ಸಂಚಾಲಕ ಆಗಿದ್ದರು. ಅವರು ದಂಪತಿ ಸಹಿತವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತವುಂಟು ಮಾಡಿದೆ.
ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಇಂದು ಸಾಯಂಕಾಲ 4 ಘಂಟೆಯ ನಂತರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಉಡುಪಿ : ಎನ್ ಎ ಐ ಉಡುಪಿ ಜಿಲ್ಲಾಧ್ಯಕ್ಷರಾಗಿ ಕಿರಣ್ ಪೂಜಾರಿ ಆಯ್ಕೆ

Posted On: 10-12-2023 09:09PM
ಉಡುಪಿ : ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಉಡುಪಿ ಜಿಲ್ಲಾಧ್ಯಕ್ಷರಾಗಿ ನಾಡಿನ ಸುದ್ದಿ ಪತ್ರಿಕೆ ಉಪಸಂಪಾದಕರಾದ ಕಿರಣ್ ಪೂಜಾರಿ ಆಯ್ಕೆಯಾಗಿದ್ದಾರೆ.
1998ರಲ್ಲಿ "ಜನ ಈದಿನ" ಪತ್ರಿಕೆ ಮೂಲಕ ಪತ್ರಿಕಾರಂಗಕ್ಕೆ ಪಾದಾರ್ಪಣೆ ಮಾಡಿದರು. ಸ್ಟಿಂಗ್ ರಿಪೋರ್ಟರ್ ಆಗಿ ಭ್ರಷ್ಟಚಾರ, ಅಕ್ರಮ, ಕಾನೂನು ಬಾಹಿರ ಚಟುವಟಿಕೆಗಳನ್ನು ಬಯಲಿಗೆ ಎಳೆದು ಪತ್ರಿಕಾ ಲೋಕದಲ್ಲಿ ಪ್ರಾಮಾಣಿಕ, ನೇರ ನುಡಿ, ರಾಜಿ ಆಗದ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತನನ್ನು ಗುರುತಿಸಿ ರಾಷ್ಟ್ರೀಯ ಸಂಘದ ಕಾರ್ಯದರ್ಶಿ ವಿಪಿನ್ ಗೌರ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಕಿರಣ್ ಪೂಜಾರಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಭಾರತದ ಎಲ್ಲ ರಾಜ್ಯ ಗಳಲ್ಲಿ ಶಾಖೆಯನ್ನು ಹೊಂದಿದ್ದು, ಭಾರತ ಸರಕಾರದಿಂದ ಮಾನ್ಯತೆ ಪಡೆದಿದೆ.
ಕಾಪು ಹೊಸ ಮಾರಿಗುಡಿ : ಕುದಿ - ಕೋಡಿಬೆಟ್ಟು ಗ್ರಾಮದ ಗ್ರಾಮ ಸಮಿತಿ ರಚನಾ ಸಭೆ ಸಂಪನ್ನ

Posted On: 10-12-2023 09:05PM
ಕಾಪು : ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕಾಪು ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಗ್ರಾಮ ಸಮಿತಿ ರಚಿಸಿ, ಪ್ರತಿ ಮನೆಗೂ ಮನವಿ ಪತ್ರ ತಲುಪಿಸಿ ಅಮ್ಮನ ಅಭಯ ವಾಕ್ಯದಂತೆ ದೇವಳ ನಿರ್ಮಾಣದ ವಿಷಯ ಪ್ರಪಂಚದ ಮೂಲೆ ಮೂಲೆಗೂ ತಲುಪಬೇಕೆನ್ನುವುದು ಅಭಿವೃದ್ಧಿ ಸಮಿತಿಯ ಆಶಯದಂತೆ ಶನಿವಾರ ಕುದಿ - ಕೋಡಿಬೆಟ್ಟು ಗ್ರಾಮದ ಗ್ರಾಮ ಸಮಿತಿ ರಚನಾ ಸಭೆ ಕುದಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರಗಿತು. ಪ್ರಾರ್ಥನೆಯೊಂದಿಗೆ ಒಂಬತ್ತು ಜನ ಮಹಿಳೆಯರಾದ ಲತಾ ವಿ. ಶೆಟ್ಟಿ, ಹೇಮಲತಾ ಶೆಟ್ಟಿ, ಸುಧಾ, ದೇವಕಿ ಐತಾಳ್, ಉಮಾ ಶೆಟ್ಟಿ, ಸಂಧ್ಯಾ ಶೆಟ್ಟಿ, ಶಕುಂತಲಾ, ರಂಜಿತಾ ಮತ್ತು ದಿಶಾ ಇವರು ಏಕಕಾಲದಲ್ಲಿ ದೀಪ ಬೆಳಗಿಸಿ ಆರತಿ ಎತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಗ್ರಾಮ ಸಮಿತಿಯ ಪ್ರಧಾನ ಸಂಚಾಲಕರಾದ ಅರುಣ್ ಶೆಟ್ಟಿ ಪಾದೂರು ಮಾತನಾಡಿ ಗ್ರಾಮದ ಪ್ರತೀ ಮನೆಯಿಂದಲೂ ಕನಿಷ್ಠ ಒಂಬತ್ತು ಶಿಲಾಸೇವೆಯನ್ನು (ರೂಪಾಯಿ 9,999) ನೀಡುವ ಮೂಲಕ "ಕಾಪುವಿನ ಅಮ್ಮನ ಮಕ್ಕಳು" ತಂಡಕ್ಕೆ ಸೇರಬೇಕು ಎಂದು ವಿನಂತಿಸಿದರು ಮತ್ತು ಗ್ರಾಮ ಸಮಿತಿಯ ದ್ಯೇಯೋದ್ದೇಶಗಳನ್ನು ತಿಳಿಸಿದರು. ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕರ ಶೆಟ್ಟಿ ಕಲ್ಯಾ ಇವರ ಉಪಸ್ಥಿತಿಯಲ್ಲಿ ಗ್ರಾಮ ಸಮಿತಿಯನ್ನು ರಚನೆ ಮಾಡಿ ಕುದಿ ಮತ್ತು ಕೋಡಿಬೆಟ್ಟು ಗ್ರಾಮದ 9 ಜನ ಪುರುಷರ ಮತ್ತು ಮಹಿಳೆಯರ 5 ತಂಡಗಳನ್ನು ಮಾಡಲಾಯಿತು, ಗ್ರಾಮದ ಜವಾಬ್ದಾರಿಯನ್ನು ಕುದಿ ವಸಂತ್ ಶೆಟ್ಟಿ, ಶಿವರಾಮ್ ಶೆಟ್ಟಿ, ಗುರುರಾಜ್ ಭಟ್ ಮತ್ತು ಸುಧಾಕರ್ ಶೆಟ್ಟಿ ವಹಿಸಿಕೊಂಡರು. ಸಮಿತಿಗೆ ಆಯ್ಕೆಯಾದವರು ಹೊಸ ಮಾರಿಗುಡಿ ದೇವಳದ ಜೀರ್ಣೋದ್ಧಾರದ ಬಗ್ಗೆ ಗ್ರಾಮದ ಪ್ರತಿ ಮನೆ ಮನೆಗೂ ಸುದ್ದಿ ತಲುಪಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಗ್ರಾಮದ ಪ್ರತಿ ಮನೆ ಮನೆಗೆ ತಲುಪಿಸುವ ಮನವಿ ಪತ್ರವನ್ನು ಮತ್ತು ಸ್ಟಿಕ್ಕರನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮದ ಪ್ರಮುಖರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ರತ್ನಾಕರ ಶೆಟ್ಟಿ ನಡಿಕೆರೆ, ದೇವಳದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಮಾಧವ ಆರ್. ಪಾಲನ್, ಪ್ರಚಾರ ಸಮಿತಿಯ ಸಂಚಾಲಕರಾದ ಜಯರಾಮ ಆಚಾರ್ಯ, ಪ್ರಭಾತ್ ಶೆಟ್ಟಿ ಮೂಳೂರು, ಗ್ರಾಮ ಸಮಿತಿಯ ಮಹಿಳಾ ಮುಖ್ಯ ಸಂಚಾಲಕರಾದ ಗೀತಾಂಜಲಿ ಎಂ.ಸುವರ್ಣ, ಗ್ರಾಮಸ್ಥರಾದ ರಾಘವೇಂದ್ರ ಪಾಟ್ಕರ್, ಪ್ರಸನ್ನ ಹೆಗ್ಡೆ, ಸಂಧ್ಯಾ ಶೆಟ್ಟಿ, ಸತೀಶ್ ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸುಧಾಕರ ಶೆಟ್ಟಿ ಗುಂಡಿಬೈಲು ಸ್ವಾಗತಿಸಿದರು. ಜೀರ್ಣೋದ್ಧಾರದ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಪ್ರಸ್ತಾವನೆಗೈದರು.
ಪಡುಬಿದ್ರಿ : ಕೃಷಿ ಮೇಳ ಸಮಾರೋಪ

Posted On: 10-12-2023 08:51PM
ಪಡುಬಿದ್ರಿ : ಅಂದಿನ ಕಾಲದಲ್ಲಿ ಯಾವುದೇ ಯಂತ್ರದ ಸಹಾಯವಿಲ್ಲದೆ ಬಹಳ ಕಷ್ಟದಿಂದ ನಮ್ಮ ಹಿರಿಯರು ಕೃಷಿಯನ್ನು ನಿರ್ವಹಿಸುತ್ತಿದ್ದರು. ಕೃಷಿ ತೋ ನಾಸ್ತಿ ದುರ್ಭೀಕ್ಷಮ್ ಎಂಬ ಮಾತಿನಂತೆ ಕೃಷಿಯು ಇಂದು ಕಷ್ಟಕರವಾದರೂ ಇಷ್ಟಪಟ್ಟು ನಿರ್ವಹಿಸಿದ್ದಲ್ಲಿ ಲಾಭದಾಯಕವಾಗಿದೆ. ಅಂದು ನಮ್ಮ ಮನೆಯ ಹಿರಿಯರೇ ಕೃಷಿ ತಜ್ಞರಾಗಿರುತ್ತಿದ್ದರು. ಈಗ ಹಿರಿಯರ ಅನುಭವದ ಮಾತು ಕೃಷಿಗೆ ಅನಿವಾರ್ಯವಾಗಿದೆ. ಹಿರಿದಾಗಿ ಎಕರೆಗಟ್ಟಲೆಯಲ್ಲಿದ್ದ ಕೃಷಿ ಭೂಮಿಗಳು ಕೈಗಾರಿಕೆ, ವಸತಿ ಸಮುಚ್ಚಯಗಳಾಗಿ ಕಿರಿದಾದ ಪ್ರದೇಶಗಳಾಗಿ ಮಾರ್ಪಾಡುಗೊಂಡಿದೆ. ಕೃಷಿಯ ಬಗೆಗಿನ ಜಾಗೃತಿಗೆ ಕೃಷಿ ಮೇಳಗಳು ಸಹಾಯಕವಾಗಿದೆ ಎಂದು ಕಟೀಲು ಕ್ಷೇತ್ರದ ಅರ್ಚಕರಾದ ವೇ.ಮೂ. ಶ್ರೀ ಹರಿನಾರಾಯಣದಾಸ ಅಸ್ರಣ್ಣ ಹೇಳಿದರು. ಅವರು ಪಡುಬಿದ್ರಿ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಹಯೋಗದೊಂದಿಗೆ ಆದಿತ್ಯವಾರ ಪಡುಬಿದ್ರಿಯ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಪ್ರಥಮ ಬಾರಿಗೆ ಜರಗಿದ ಕೃಷಿ ಮೇಳದ ಸಮಾರೋಪದಲ್ಲಿ ಮಂಗಳ ಮಂತ್ರಕ್ಷತೆಯ ನುಡಿಗಳನ್ನಿತ್ತರು.

ಎಸ್ ಇ ಝಡ್ ಮುಖ್ಯಸ್ಥ ಅಶೋಕ್ ಶೆಟ್ಟಿ ಮಾತನಾಡಿ ಕೃಷಿ ಮೇಳದ ಮೂಲಕ ರೈತರ ಸಬಲೀಕರಣ ಆಗಬೇಕಾಗಿದೆ. ಇದರ ಮೂಲಕ ನಮ್ಮ ಪ್ರದೇಶ, ರಾಜ್ಯ, ದೇಶದ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ರೈತರಿಗೆ ಬೇಕಾದ ಮಾಹಿತಿ ಮುಖ್ಯ. ಆಧುನೀಕರಣಕ್ಕೆ ಒತ್ತು ನೀಡಿ ಲಾಭದಾಯಕದತ್ತ ಕೃಷಿ ಸಾಗುವಲ್ಲಿ ಶ್ರಮಿಸಬೇಕಾಗಿದೆ ಎಂದರು. ಸನ್ಮಾನ : ಕೃಷಿಯಲ್ಲಿ ಸಾಧನೆಗೈದ ಪಿ ಕೆ ಸದಾನಂದ, ಅಪ್ಪು ಪೂಜಾರಿ, ಪೂವಪ್ಪ ಪೂಜಾರಿ, ಪ್ರಭಾಕರ ಎನ್ ಶೆಟ್ಟಿ, ಬಿ ಕೆ ದೇವರಾವ್, ಕೊಳಚೂರು ಜಗನ್ನಾಥ ಮೂಲ್ಯರನ್ನು ಸನ್ಮಾನಿಸಲಾಯಿತು.

ಕೃಷಿ ಮೇಳದ ಅಧ್ಯಕ್ಷರಾದ ಶಶಿಕಾಂತ್ ಪಡುಬಿದ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಕೆಪಿಸಿಸಿ ಸಂಯೋಜಕರಾದ ನವೀನ್ ಚಂದ್ರ ಜೆ ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರವಿ ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಎನ್ ಶೆಟ್ಟಿ, ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ಎರ್ಮಾಳು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವಿರಾಜ್, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರಧಾನ ಅರ್ಚಕ ಜಗದಾಭಿರಾಮ, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಎರ್ಮಾಳು, ಕಾರ್ಯಕ್ರಮ ಸಂಚಾಲಕ ದೇವಾನಂದ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಕುಮಾರಿ ಶರಣ್ಯ ಪ್ರಾರ್ಥಿಸಿದರು. ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಎರ್ಮಾಳು ಸ್ವಾಗತಿಸಿದರು. ರವಿರಾಜ್ ಎನ್ ಕೋಟ್ಯಾನ್ ಮತ್ತು ಯಶೋಧ ಕಾರ್ಯಕ್ರಮ ನಿರೂಪಿಸಿದರು. ದೇವಾನಂದ್ ಭಟ್ ವಂದಿಸಿದರು. ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.