Updated News From Kaup

ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಪದ ಪ್ರಧಾನ ಸಮಾರಂಭ

Thumbnail
Posted On: 18 Feb 2024, 03:04 PM

ಬ್ರಹ್ಮಾವರ : ನಮ್ಮ ಆದಾಯದ ಒಂದಂಶವನ್ನು ಸಮಾಜಕ್ಕೆ ನೀಡಿದಾಗ ನಮ್ಮ ಜೀವನದಲ್ಲಿ ಸಾಥ೯ಕತೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಜಯಂಟ್ಸ್ ಸಂಸ್ಥೆಯ ಸೇವೆ ಅನುಪಮ ಎಂದು ಬ್ರಹ್ಮಾವರ ತಾಲೂಕು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಹೇಳಿದರು. ಅವರು ಶನಿವಾರ ಸಿಟಿ ಸೆಂಟರ್ ನಲ್ಲಿ ನಡೆದ ಬ್ರಹ್ಮಾವರ ಜಯಂಟ್ಸ್ ಗ್ರೂಪ್ ನ ಪದಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಜಯಂಟ್ಸ್ ಫೆಡರೇಶನ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ ಅಮೀನ್ ಮಾತನಾಡಿ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದೆ. ಜನ ಔಷಧಿ ಸಂಸ್ಥೆ ಪ್ರಾರಂಭ ಮಾಡಿ ಸಾವಿರಾರು ಜನರಿಗೆ ಸಹಾಯ ಮಾಡಿದೆ ಎಂದರು. ಜಯಂಟ್ಸ್ ಫೆಡರೇಶನ್ ಉಪಾಧ್ಯಕ್ಷ ತೇಜೇಶ್ವರ ರಾವ್, ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು ಶುಭ ಹಾರೈಸಿದರು. ಈ ಸಂದಭ೯ದಲ್ಲಿ ನೂತನ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ಮತ್ತು ಅವರ ತಂಡದ ಪದ ಪ್ರಧಾನ ನಡೆಯಿತು. ಕಾಯ೯ಕ್ರಮದಲ್ಲಿ ಪೋಲಿಸ್ ಉಪ ನಿರೀಕ್ಷಕ ಕೃಷ್ಣಪ್ಪ ಮತ್ತು ಹಿರಿಯ ವಿಭಾಗದ ಕ್ರೀಡಾಪಟು ಗೀತಾ ಎ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸ್ಪಂದನ ವಿಶೇಷ ಚೇತನ ಶಾಲೆಗೆ 2.5 ಲಕ್ಷ ವೆಚ್ಚದ ಸೋಲಾರ್, ಟಿವಿ, ವಿವಿಧ ಪರಿಕರಗಳನ್ನು ನೀಡಲಾಯಿತು. ಬಡ ರೋಗಿಗೆ ಸಹಾಯಧನ ವಿತರಿಸಲಾಯಿತು. ಸಮಾರಂಭದಲ್ಲಿ ನೂತನ ಯೂನಿಟ್ ಡೈರೆಕ್ಟರ್ ವಿವೇಕಾನಂದ ಕಾಮತ್ ಮತ್ತು ನೂತನ 4 ಜನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಯಿತು. ವಿವೇಕ್ ಕಾಮತ್ ಸ್ವಾಗತಿಸಿದರು. ಕಾಯ೯ದಶಿ೯ ಮಿಲ್ಟನ್ ಒಲಿವರ್ ವರದಿ ವಾಚಿಸಿದರು. ರಾಘವೇಂದ್ರ ಕವಾ೯ಲು ನಿರೂಪಿಸಿದರು.

ಪಡುಬಿದ್ರಿ ಸಿ.ಎ. ಸೊಸೈಟಿಯ ನವೀಕೃತ ಹವಾನಿಯಂತ್ರಿತ ಹೆಜಮಾಡಿ ಶಾಖೆಯ ಲೋಕಾರ್ಪಣೆ

Thumbnail
Posted On: 18 Feb 2024, 02:48 PM

ಹೆಜಮಾಡಿ : ಉಡುಪಿ ಜಿಲ್ಲೆಯಲ್ಲಿ ಅತ್ಯುತ್ತಮ ಬ್ಯಾಂಕಿಂಗ್ ಸೊಸೈಟಿಯಾಗಿ ಹೆಗ್ಗಳಿಕೆ ಹೊಂದಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ನವೀಕರಣಗೊಂಡ ಹವಾನಿಯಂತ್ರಿತ ಹೆಜಮಾಡಿ ಶಾಖೆಯ ಬ್ಯಾಂಕಿಂಗ್ ಕಟ್ಟಡದ ಉದ್ಘಾಟನೆಯನ್ನು ಭಾನುವಾರ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿಗಮದ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿಗಮ ಬೆಂಗಳೂರು ಇದರ ನಿರ್ದೇಶಕರಾದ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ದೀಪ ಪ್ರಜ್ವಲನೆಯನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ ಮಂಗಳೂರು ಇದರ ಅಧ್ಯಕ್ಷರಾದ ನವೀನ್ ಚಂದ್ರ ಡಿ. ಸುವರ್ಣ ಮಾಡಿದರು. ನಾಮ ಫಲಕದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿಗಮ ಬೆಂಗಳೂರು ಇದರ ನಿರ್ದೇಶಕರಾದ ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಪಡಿತರ ವ್ಯವಸ್ಥೆಯ ಗೋದಾಮನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಭದ್ರತಾ ಕೊಠಡಿಯನ್ನು ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಶ್ಮ ಎ. ಮೆಂಡನ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಬಂದರಿನ ಮೂಲಕ ಪ್ರಸಿದ್ಧಿ ಪಡೆದ ಹೆಜಮಾಡಿಯಲ್ಲಿ ಪ್ರಥಮ ಹವಾನಿಯಂತ್ರಿತ ಕಟ್ಟಡವಾಗಿ ಪಡುಬಿದ್ರಿ ಸಿ.ಎ ಸೊಸೈಟಿಯ ಹೆಜಮಾಡಿ ಶಾಖೆ ಉದ್ಘಾಟನೆಯಾಗಿದೆ. ಸಹಕಾರಿ ಸೊಸೈಟಿಗಳು ಕಲ್ಪವೃಕ್ಷದಂತೆ ಬಹಳಷ್ಟು ಕೊಡುಗೆ ನೀಡಿದೆ. ಸಾಮಾಜಿಕವಾಗಿ, ಕೃಷಿಕರ, ಊರಿನ ಅಭಿವೃದ್ಧಿ ಬಗ್ಗೆ ಪಡುಬಿದ್ರಿ ಸಿ.ಎ ಸೊಸೈಟಿ ಕೆಲಸ ಮಾಡುತ್ತಿದೆ. ಶೇ.25 ಡಿವಿಡೆಂಟ್ ನೀಡಿ, 125 ಕೋಟಿ ಲಾಭದಾಯಕವಾಗಿದೆ. ಗ್ರಾಹಕರು ನಮ್ಮ ದೇವರು ಎಂಬ ಸೇವಾ ಭಾವನೆಯಿಂದ ದುಡಿಯುವ ಸಂಸ್ಥೆಯ ಉದ್ಯೋಗಿಗಳ ಮೂಲಕ ಈ ಸಾಧನೆ ಸಾಧ್ಯವಾಗಿದೆ ಎಂದರು. ಸನ್ಮಾನ/ಸ್ವಚ್ಛತಾ ಪರಿಕರ ವಿತರಣೆ : ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕಾಪು ದಿವಾಕರ ಶೆಟ್ಟಿ, ಶೈಕ್ಷಣಿಕ ಸಾಧಕಿ ಡಾ. ಹರ್ಷಿತ ಎನ್. ಅಂಚನ್, ಕ್ರೀಡಾ ಸಾಧಕ ಧನುಷ್ ಎಸ್. ಸಾಲ್ಯಾನ್‌ರನ್ನು ಸನ್ಮಾನಿಸಲಾಯಿತು. ಸೊಸೈಟಿ ವ್ಯಾಪ್ತಿಯ ಕರಾವಳಿಯನ್ನು ನಿರಂತರವಾಗಿ ಸ್ವಚ್ಛಗೊಳಿಸಿ ಉತ್ತಮ ಸಮಾಜ ಸೇವೆಗೈಯ್ಯುತ್ತಿರುವ ಹೆಜಮಾಡಿ ಕರಾವಳಿ ಯುವಕ ಯುವತಿ ವೃಂದ ಮತ್ತು ಪಡುಬಿದ್ರಿ ನಡಿಪಟ್ನ ಕರಾವಳಿ ಸ್ಟಾರ್ ಸಂಸ್ಥೆಗಳಿಗೆ ಸ್ವಚ್ಚತಾ ಪರಿಕರಗಳನ್ನು ವಿತರಿಸಲಾಗುವುದು. ಈ ಸಂದರ್ಭ ಫೆ. 5 ರಿಂದ ಮಾರ್ಚ್ ಅಂತ್ಯದವರೆಗೆ ಸೊಸೈಟಿಯಲ್ಲಿ ಠೇವಣಿ ವಿನಿಯೋಗಿಸಿದ ಠೇವಣಿದಾರರಿಗೆ, ಚಿನ್ನಾಭರಣ ಸಾಲ ಪಡೆದ 10 ವಿಜೇತರನ್ನು ಗಣ್ಯರು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಚಿನ್ನದ ನಾಣ್ಯ, ಆಕರ್ಷಕ ಬಹುಮಾನ ವಿತರಿಸಿದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಈ‌ ಸಂದರ್ಭ ನವೀನಚಂದ್ರ ಡಿ ಸುವರ್ಣ, ಬಿ ಜಯಕರ ಶೆಟ್ಟಿ ಇಂದ್ರಾಳಿ, ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಮೋಹನ್ ಸುವರ್ಣ, ಪಾಂಡುರಂಗ ಸಿ ಕರ್ಕೇರ, ಪ್ರಾಣೇಶ್ ಹೆಜಮಾಡಿ, ಸುಧಾಕರ ಕರ್ಕೇರ, ವಾಮನ ಕೋಟ್ಯಾನ್, ದಯಾನಂದ ಹೆಜಮಾಡಿ, ಸತೀಶ್ ನಾಯ್ಕ್, ಸುರೇಶ್ ಶೆಟ್ಟಿ, ಲೋಕೇಶ್ ಕೆ. ಅಮೀನ್, ರಾಜು ಹೆಜಮಾಡಿ, ಮೊಹಮ್ಮದ್ ಇಸ್ಮಾಯಿಲ್, ಎಚ್ ಶೇಷಗಿರಿ, ವಾದಿರಾಜ ಆಚಾರ್ಯ, ಹೆಚ್‌. ರವಿ ಕುಂದರ್ ಹೆಜಮಾಡಿ, ರಾಲ್ಫಿ ಡಿ'ಕೋಸ್ತ, ಹರೀಶ್ ದೇವಾಡಿಗ, ಜಯಂತ್ ಪುತ್ರನ್, ಸೊಸೈಟಿಯ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ನಿಶ್ಮಿತ ಪಿ.ಎಚ್, ಶಾಖಾ ವ್ಯವಸ್ಥಾಪಕಿ ಶಕುಂತಳ, ನಿರ್ದೇಶಕರುಗಳಾದ ರಸೂಲ್ ವೈ.ಜಿ, ಗಿರೀಶ್ ಪಲಿಮಾರು, ಶಿವರಾಮ ಎನ್. ಶೆಟ್ಟಿ, ರಾಜಾರಾಮ್ ರಾವ್, ವಾಸುದೇವ ದೇವಾಡಿಗ, ಯಶವಂತ್ ಪಿ.ಬಿ, ಮಾಧವ ಆಚಾರ್ಯ, ಸ್ಟ್ಯಾನಿ ಕ್ವಾಡ್ರಸ್, ಸುಚರಿತ ಎಲ್ ಅಮೀನ್, ಕುಸುಮಾ ಎಮ್. ಕರ್ಕೇರ, ಕಾಂಚನ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲ ಗೋಪಾಲ್ ಬಲ್ಲಾಳ್ ಕೆ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಹೆಜಮಾಡಿ ಪೇಟೆಯಿಂದ ಹೆಜಮಾಡಿ ಶಾಖೆಯವರೆಗೆ ಗಣ್ಯರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ಸೊಸೈಟಿ ‌ಅಧ್ಯಕ್ಷ ವೈ ಸುಧೀರ್ ಕುಮಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸತೀಶ್ಚಂದ್ರ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಗುರುರಾಜ್ ಪೂಜಾರಿ ವಂದಿಸಿದರು.

ಕುತ್ಯಾರು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆ - ಶಿಕ್ಷಕ ರಕ್ಷಕ ಸಭೆ

Thumbnail
Posted On: 18 Feb 2024, 09:49 AM

ಕುತ್ಯಾರು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆ, ಕುತ್ಯಾರು ಇಲ್ಲಿ ಶನಿವಾರ ಶಿಕ್ಷಕ ರಕ್ಷಕ ಸಭೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶಿರ್ವ ಪೋಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಕೃಷ್ಣ ಆಚಾರ್ಯ ಹಾಗೂ ಹೆಡ್ ಕಾನ್ ಸ್ಟೇಬಲ್ ಮಂಜುನಾಥ ಅಡಿಗ ಇವರು ಪೋಷಕರಿಗೆ ಮತ್ತು ಮಕ್ಕಳಿಗೆ ರಸ್ತೆ ಸುರಕ್ಷತೆ, ಸೈಬರ್ ಕ್ರೈಮ್ ಮತ್ತು ಮಾದಕ ವ್ಯಸನಗಳ ಬಗ್ಗೆ ಮಾಹಿತಿ ನೀಡಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚೈತನ್ಯವಾಣಿ ಸಂಚಿಕೆಯ ದ್ವಿತೀಯ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ಬುಡೋಕಾನ್ ಕರಾಟೆ ಸ್ಪರ್ಧೆ, ಚಿಂತನ ಗಣಿತ, ಇಂಗ್ಲೀಷ್, ಸಾಮಾನ್ಯ ಜ್ಞಾನ ಪರೀಕ್ಷೆಗಳಲ್ಲಿ ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ರಾಂಕ್ ವಿಜೇತರಾದವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಕಾರ್ಯದರ್ಶಿ ಗುರುರಾಜ ಆಚಾರ್ಯ ಮತ್ತು ಶೈಕ್ಷಣಿಕ ಸಲಹೆಗಾರರಾದ ದಿವಾಕರ ಆಚಾರ್ಯ ಗೇರುಕಟ್ಟೆ, ಮಾತೃ ಮಂಡಳಿಯ ಅಧ್ಯಕ್ಷರಾದ ಲತಾ ಸಂತೋಷ್, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ವಾಣಿ ಸ್ವಾಗತಿಸಿದರು. ಶಿಕ್ಷಕಿ ಅಮಿತಾ ವಿಜೇತರ ಪಟ್ಟಿಯನ್ನು ವಾಚಿಸಿದರು. ಶಾಲಾ ಪ್ರಾಂಶುಪಾಲರಾದ ಸಂಗೀತಾ ರಾವ್ ಶಾಲಾ ಶೈಕ್ಷಣಿಕ ವರದಿಯ ಜೊತೆಗೆ ಪರೀಕ್ಷೆಗಳ ಮಾಹಿತಿಯನ್ನು ನೀಡಿದರು. ಉಪ ಪ್ರಾಂಶುಪಾಲರಾದ ಸೌಮ್ಯ ಮತ್ತು ಶಿಕ್ಷಕಿ ಅನಿತಾ ಕಾರ್ಯಕ್ರಮ ನಿರೂಪಿಸಿದರು. ಶ್ರುತಿ ವಂದಿಸಿದರು.

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಅನುದಾನ ಮತ್ತೆ ನೆನೆಗುದಿಗೆ : ಪ್ರವೀಣ್ ಎಮ್. ಪೂಜಾರಿ

Thumbnail
Posted On: 18 Feb 2024, 09:34 AM

ಉಡುಪಿ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರವು ತನ್ನ ಪಕ್ಷದ ಚುನಾವಣಾ ಪ್ರಣಾವಳಿಕೆಯಲ್ಲಿ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನವನ್ನು ತಮ್ಮ ಸರಕಾರ ಆಡಳಿತಕ್ಕೆ ಬಂದರೆ ನೀಡುವುದಾಗಿ ಭರವಸೆಯನ್ನು ನೀಡಿದ್ದು ಸರಕಾರ ಆಡಳಿತಕ್ಕೆ ಬಂದು 2 ಬಜೆಟನ್ನು ಮಂಡಿಸಿದಾಗ್ಯೂ ಯಾವುದೇ ಅನುದಾನವನ್ನು ನೀಡದೆ ಸಮಸ್ತ ಬಿಲ್ಲವ/ಈಡಿಗ ಸಮಾಜಕ್ಕೆ ವಂಚಿಸಿದೆ. ಈ ರೀತಿಯ ದೋರಣೆಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಮಾಜದ ಅಭಿವೃದ್ಧಿ ಹಾಗೂ ಶ್ರೀ ನಾರಾಯಣ ಗುರುಗಳ ತತ್ವಾಚಾರಗಳ ಅನುಷ್ಠಾನಗೊಳಿಸಲು ಬುನಾದಿಯೇ ಹಾಕಲಾಗದಂತಾಗಿದೆ. ಬಿಲ್ಲವ/ಈಡಿಗ ಹಿಂದುಳಿದ ಸಮಾಜದ ಅಭಿವೃದ್ಧಿಗೆ ಅನುದಾನದ ಭರವಸೆಯನ್ನು ನೀಡಿದ ಸರಕಾರ ಕೇವಲ ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ ಎಂದು ನಿರೂಪಿಸಿದೆ. ಹಿಂದಿನ ಮತ್ತು ಈಗಿನ ಸರಕಾರ ಬಿಲ್ಲವ/ಈಡಿಗ ಸಮುದಾಯದ ಸಮಾಜಕ್ಕೆ ಕೇವಲ ಚುನಾವಣಾ ಸಮಯದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಪ್ರತಿ ಬಜೆಟ್ ನಲ್ಲೂ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಯಾವುದೇ ಅನುದಾನವನ್ನು ನೀಡದೆ ಪಂಗನಾಮ ಹಾಕುವುದು ಸಾಮಾನ್ಯವಾಗಿದೆ. ಈಗಿನ ಆಡಳಿತ ವಿರೋಧ ಪಕ್ಷದವರು ತಮ್ಮ ಸರಕಾರ ಆಡಳಿತದಲ್ಲಿದ್ದಾಗ ಅನುದಾನ ನೀಡದೆ ಈಗ ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಆಡಳಿತ ಸರಕಾರವು ಅನುದಾನ ನೀಡಿಲ್ಲ ಎಂದು ದೂಷಿಸುವುದು. ಹಾಗೆಯೇ ಇವರಿಬ್ಬರ ಕೆಸರಾಟದಲ್ಲಿ ಹಿಂದುಳಿದ ವರ್ಗವಾದ ಬಿಲ್ಲವ/ಈಡಿಗರ ಅಭಿವೃದ್ಧಿಯ ಕನಸು ಕನಸಾಗಿಯೇ ಉಳಿಯಿತು. ಬಿಲ್ಲವ/ಈಡಿಗ ಸಮುದಾಯ ಇದಕ್ಕೆ ಸರಿಯಾದ ಉತ್ತರವನ್ನು ಚುನಾವಣಾ ಸಮಯದಲ್ಲಿ ನೀಡಿ ಎಚ್ಚರ ತಪ್ಪಿದ ರಾಜಕೀಯ ನಾಯಕರಿಗೆ ಎಚ್ಚರಿಸಬೇಕಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ಉಡುಪಿ ಅಧ್ಯಕ್ಷರಾದ ಪ್ರವೀಣ್ ಎಮ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು : ತಹಶಿಲ್ದಾರ್ ಕಚೇರಿಯಲ್ಲಿ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ

Thumbnail
Posted On: 18 Feb 2024, 09:29 AM

ಕಾಪು : ತಾಲೂಕು ತಹಶಿಲ್ದಾರ್ ಕಚೇರಿಯಲ್ಲಿ ವಿಶ್ವಗುರು ಸಾಂಸ್ಕೃತಿಕ ನಾಯಕ ಭಾವಚಿತ್ರವನ್ನು ಕಾಪು ತಾಲೂಕು ತಹಶಿಲ್ದಾರ್ ಡಾ.ಪ್ರತಿಭಾ ಆರ್ ಅನಾವರಣಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಸರ್ಕಾರ ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಬುದ್ಧ, ಬಸವ, ಮಹಾತ್ಮಾ ಗಾಂಧಿ, ಅಂಬೇಡ್ಕರ್ ಈ ಎಲ್ಲ ಮಹನೀಯರು ಆರೋಗ್ಯಕರ, ಮನುಷ್ಯತ್ವದಿಂದ ಕೂಡಿದ ಸಮಾಜಿಕ ವ್ಯವಸ್ಥೆಯನ್ನು ಬಯಸಿದವರು. ಜಾತೀಯತೆ, ಮೌಢ್ಯ ಕಂದಾಚಾರಗಳನ್ನು ಸಮಾಜದಲ್ಲಿ ಪ್ರಚಲಿತವಾಗಿದೆ. ಅಸಮಾನತೆ ತೊಲಗಿ ಎಲ್ಲರೂ ಗೌರವದಿಂದ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕೆಂಬ ದಿಸೆಯಲ್ಲಿ ಬಸವಣ್ಣನವರು ಶ್ರಮಿಸಿದರು. ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದರು. ಬಸವಣ್ಣ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯ ಎಂದರೆ ಸ್ವರ್ಗ ಎಲವೂ ಎಂದರೆ ನರಕ ಎಂದು ಸಾರುವ ಮೂಲಕ ತಮ್ಮ ಮಾನವಾತಾ ವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದರು. ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅಪೂರ್ವ ಕೊಡುಗೆ ಅಪಾರ ಇದುವರೆಗೆ ಸುಮಾರು 1500 ವಚನಗಳನ್ನು ಸಂಗ್ರಹಿಸಿಡಲಾಗಿದೆ ಎಂದರು. ಈ ಸಂದರ್ಭ ತಹಶಿಲ್ದಾರ್ ಕಚೇರಿಯ ಉಪತಹಶೀಲ್ದಾರರಾದ ದೇವಕಿ, ಅಶೋಕ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಗ್ಯಾರಂಟಿ ನಷ್ಟ ಸರಿದೂಗಿಸಲು ರಾಜ್ಯದ ಜನರ ಮೇಲೆ ತೆರಿಗೆಯ ಬರೆ : ಗುರ್ಮೆ ಸುರೇಶ್ ಶೆಟ್ಟಿ

Thumbnail
Posted On: 16 Feb 2024, 05:36 PM

ಕಾಪು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರಸವಾದ ಬಜೆಟ್ ಮಂಡಿಸಿದ್ದಾರೆ. ಜನರ ಆಶಾಭಾವನೆಗಳಿಗೆ ವಿರುದ್ಧವಾದ ಬಜೆಟ್ ಇದಾಗಿದೆ. ಸಂಪತ್ತಿನ ಸಮಾನ ಹಂಚಿಕೆ ಎಂಬುದು ಸಿದ್ದರಾಮಯ್ಯ ಸರ್ಕಾರದಲ್ಲಿ ಮರೀಚಿಕೆಯಾಗಿದೆ. ಅಲ್ಪಸಂಖ್ಯಾತರನ್ನು ಓಲೈಸಲೆಂದೇ ಈ ಬಜೆಟ್ ತಯಾರಿಗೊಳಿಸಲಾಗಿದೆ. ನನ್ನ ತೆರಿಗೆ ನನ್ನ ಹಕ್ಕು ಎಂದು ಕೇಂದ್ರ ಸರ್ಕಾರದೆದುರು ವಾದ ಮಂಡಿಸಿದವರು ಇಂದು ಉಡುಪಿ ಜಿಲ್ಲೆಯ ತೆರಿಗೆಯ ಪಾಲನ್ನು ಸರಿಯಾದ ಕ್ರಮದಲ್ಲಿ ನಮ್ಮ ಜಿಲ್ಲೆಗೆ ಹಿಂತಿರುಗಿಸಿಲ್ಲ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಗೆ ಯಾವುದೇ ರೀತಿಯ ಉತ್ತೇಜನ ನೀಡಿಲ್ಲ. ಚುನಾವಣೆಯು ಹತ್ತಿರದಲ್ಲಿರುವಾಗ ಮೋದಿ ಸರ್ಕಾರವನ್ನು ದೂಷಿಸಿ ಮಂಡಿಸಿದ ಬಜೆಟ್ ಇದಾಗಿದೆ. ಗ್ಯಾರಂಟಿ ಯೋಜನೆಗಳಿಂದ ಅನುಭವಿಸುತ್ತಿರುವ ನಷ್ಟವನ್ನು ಸರಿದೂಗಿಸಲು ರಾಜ್ಯದ ಜನರ ಮೇಲೆ ಸಿದ್ದರಾಮಯ್ಯ ತೆರಿಗೆಯ ಬರೆ ಹಾಕಿದ್ದಾರೆ. ಈ ಸರ್ಕಾರದಲ್ಲಿ ಎಲ್ಲವೂ ಏರುತ್ತಿದೆ. ಜನಸಾಮಾನ್ಯರ ಬದುಕಿಗೆ ಯಾವುದೇ ರೀತಿಯಲ್ಲೂ ಸಹಕಾರಿಯಾಗಿಲ್ಲ ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆಯ ಮಟ್ಟಿಗೆ ನಿರಾಶದಾಯಕ ಬಜೆಟ್ : ಯೋಗೀಶ್ ಶೆಟ್ಟಿ ಬಾಲಾಜಿ

Thumbnail
Posted On: 16 Feb 2024, 05:24 PM

ಉಡುಪಿ : ಇಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ಬಜೆಟ್ ಇದ್ದ ಬಜೆಟ್ ಅನ್ನೇ ಅಲ್ಪ ಸ್ವಲ್ಪ ಬದಲಾಯಿಸಿ ಮಾಡಿದ ಬಜೆಟ್ ಆಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಕೊಡುತ್ತೇವೆ ಅಂತ ಎಲ್ಲೂ ಹೇಳಿಲ್ಲ. ಅಬಕಾರಿ, ನೋಂದಣಿ ಶುಲ್ಕವನ್ನು ಹೆಚ್ಚಿಸಿ ಗ್ಯಾರಂಟಿಗೆ ಹಣ ಕ್ರೋಢೀಕರಿಸಿದ್ದಾರೆ. ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಯತ್ನ . ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಹಾಗು ಇನ್ನಿತರ ಆರೋಗ್ಯ ಕ್ಷೇತ್ರಗಳ ನಿರೀಕ್ಷೆ ಹುಸಿಯಾಗಿದೆ. ಉಡುಪಿ ಜಿಲ್ಲೆಯ ಮಟ್ಟಿಗೆ ನಿರಾಶದಾಯಕ ಬಜೆಟ್ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿ ಪ್ರಕಟನೆಯಲ್ಲಿ‌ ತಿಳಿಸಿದ್ದಾರೆ.

ಪಡುಬಿದ್ರಿ ಲಯನ್ಸ್ ಕ್ಲಬ್ : ಮನೆ ಹಸ್ತಾಂತರ

Thumbnail
Posted On: 16 Feb 2024, 05:21 PM

ಪಡುಬಿದ್ರಿ : ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದರ ವಾಸ ಯೋಗ್ಯವಲ್ಲದ ಮನೆಯನ್ನು ಪಡುಬಿದ್ರಿ ಲಯನ್ಸ್ ಕ್ಲಬ್ ವತಿಯಿಂದ ನವೀಕರಿಸಿ ಗುರುವಾರ ದಾಯ್ಜಿ ವರ್ಲ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ ಹಸ್ತಾಂತರಿಸಿದರು. ಪಡುಬಿದ್ರಿ-ಪಾದೆಬೆಟ್ಟು ಕೆರಮದ ರಮೇಶ್ ಆಚಾರ್ಯ-ಸುಮತಿ ದಂಪತಿ ವಾಸಿಸುವ ಮನೆಯು ಅತ್ಯಂತ ಅಜೀರ್ಣಾವಸ್ಥೆಯಲ್ಲಿರುವುದನ್ನು ಮನಗಂಡು ಸ್ಥಳೀಯರಾದ ಅಶ್ವಥ್ ಆಚಾರ್ಯ ಕೋರಿಕೆಯ ಮೇರೆಗೆ ಪಡುಬಿದ್ರಿ ಲಯನ್ಸ್ ಸಂಸ್ಥೆಯು ಸುಮಾರು ರೂ. 2 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ವಾಸಯೋಗ್ಯವಾಗಿ ನವೀಕರಿಸಿ ವಿದ್ಯುತ್ ಸಂಪರ್ಕ ಸಹಿತ ಶೌಚಾಲಯ ನಿರ್ಮಿಸಿ ಮನೆಯನ್ನು ನಿರ್ಮಿಸಿ ಕೊಟ್ಟಿದೆ. ಮನೆ ಹಸ್ತಾಂತರಿಸಿ ಮಾತನಾಡಿದ ವಾಲ್ಟರ್ ನಂದಳಿಕೆ ಸಮಾಜ ಸೇವೆಯಲ್ಲಿ ಶ್ರೇಷ್ಠ ಶ್ರೇಣಿಯಲ್ಲಿ ಕಂಡುಬರುವ ಕಾಯಕವನ್ನು ಪಡುಬಿದ್ರಿ ಲಯನ್ಸ್ ನಿರ್ವಹಿಸಿದೆ. ಇಂತಹ ಸೇವೆಯಿಂದ ಸಮಾಜ ಮತ್ತು ದೇಶಸೇವೆ ಸಾಧ್ಯವಿದೆ ಎಂದರು. ಈ ಸಂದರ್ಭ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎನ್. ಎಮ್.ಹೆಗ್ಡೆ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಜಿತೇಂದ್ರ ಫುರ್ಟಾಡೊ, ಉದ್ಯಮಿ ಫ್ರಾನ್ಸಿಸ್ ಡಿಸೋಜಾ, ಪ್ರಾಂತೀಯ ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ಪಡುಬಿದ್ರಿ ಲಯನ್ಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅಡ್ವೆ, ಪಡುಬಿದ್ರಿ ಸ್ಪೂರ್ತಿ ಲಯನ್ಸ್ ಅಧ್ಯಕ್ಷೆ ಶಾರ್ಲೆಟ್ ಫುರ್ಟಾಡೊ, ಲಯನ್ಸ್ ಪ್ರಮುಖರಾದ ಕಪಿಲ್, ಪ್ರಗತ್ ಜಿ. ಶೆಟ್ಟಿ, ಕಸ್ತೂರಿ ಪ್ರವೀಣ್, ಐರಿನ್ ಅಂದ್ರಾದೆ, ಮ್ಯಾಕ್ಸಿಂ ಡಿಸೋಜಾ, ಸ್ನೇಹಾ ಪ್ರವೀಣ್, ಸವಿತಾ ಫುರ್ಟಾಡೋ, ಗೀತಾ ನವೀನ್‌ಚಂದ್ರ, ಕುಟ್ಟಿ ಪೂಜಾರಿ, ವಿಶ್ವಕರ್ಮ ಸಮಾಜದ ಮುಖ್ಯಸ್ಥ ವಸಂತ ಅಚಾರ್ಯ ಉಪಸ್ಥಿತರಿದ್ದರು.

ಕಾಪು: ಇನ್ನಂಜೆ ದೇವಳದ ಕೆರೆಯಲ್ಲಿ ಯುವಕನ ಶವ ಪತ್ತೆ

Thumbnail
Posted On: 16 Feb 2024, 04:40 PM

ಕಾಪು : ತಾಲೂಕಿನ ಇನ್ನಂಜೆ ವಿಷ್ಣುಮೂರ್ತಿ ದೇವಸ್ಥಾನ ಕೆರೆಯಲ್ಲಿ ಯುವಕನ ಶವವೊಂದು ಪತ್ತೆಯಾಗಿದ್ದು ಇದಕ್ಕೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಈತ ಪಡುಬಿದ್ರಿ ನಿವಾಸಿ ವಿನಯ ರಾವ್(27) ಆಗಿದ್ದು ಪಾಲಿಟೆಕ್ನಿಕ್ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಇಂದು ಮುಂಜಾನೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕೆರೆಯ ದಡದಲ್ಲಿ ಲ್ಯಾಪ್‌ಟಾಪ್ ಸಹಿತ ಕೆಲ ಪರಿಕರಗಳು ಪತ್ತೆಯಾಗಿದೆ. ದೇವಳದ ಸಿಸಿ ಕ್ಯಾಮಾರ ಸಾಧನವನ್ನು ಪರಿಶೀಲನೆ ನಡೆಸಿದಾಗ ಈತ ರಾತ್ರಿ ಹನ್ನೆರಡರ ಬಳಿಕ ದೇವಳದ ಪರಿಸರದಲ್ಲಿ ಸುತ್ತಾಡುತ್ತಿದ್ದ ದೃಶ್ಯ ಸೆರೆಯಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ, ಸ್ಥಳಕ್ಕೆ ಬಂದ ಕಾಪು ಪೊಲೀಸರು ಸಾರ್ವಜನಿಕ ಸಹಕಾರದಿಂದ ಶವವನ್ನು ಕೆರೆಯಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾರ್ಚ್ 7: ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ - ಭಗ್ವ ಟ್ರೋಫಿ 2024

Thumbnail
Posted On: 15 Feb 2024, 09:18 PM

ಉಡುಪಿ : ಜಿಲ್ಲೆಯಲ್ಲಿ ರೂಪುಗೊಂಡ ಸಮಾನ ಮನಸ್ಕರ ತಂಡ ಟೀಮ್ ಭಗ್ವ ಈ ಬಾರಿ ಅಶಕ್ತ ಬಡ ಕುಟುಂಬಗಳಿಗೆ ನೆರವು ನೀಡುವ ಸಲುವಾಗಿ 65 ಕೆಜಿ ವಿಭಾಗದ ಮತ್ತು 23 ವರ್ಷ ವಯೋಮಿತಿಯ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು ಮಾರ್ಚ್ 7 ರಂದು ಮಧ್ಯಾಹ್ನ 2 ಗಂಟೆಗೆ ಮೂಳೂರು ಕೊಡಮಣಿತ್ತಾಯ ದೈವಸ್ಥಾನದ ಹಿಂಬದಿಯ ಮೈದಾನದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 988075 4812, 8971388220 ಸಂಪರ್ಕಿಸಿ ಕ್ರೀಡಾ ಕೂಟದಲ್ಲಿ ತಮ್ಮ ಇರುವಿಕೆಯನ್ನು ಖಾತ್ರಿಪಡಿಸಿಕೊಳ್ಳಬೇಕೆಂದು ಟೀಮ್ ಭಗ್ವ ತಂಡದ ಅಧ್ಯಕ್ಷರಾದ ದೀಪಕ್ ಮೂಡುಬೆಳ್ಳೆ ಪ್ರಕಟಣೆಯಲ್ಲಿ ತಿಳಿಸಿರುವರು.