Updated News From Kaup
ಕಾಪು : ಗ್ರಾಮ ಚಲೋ ಕಾರ್ಯಕ್ರಮ - ಪೂರ್ವಭಾವಿ ಸಭೆ
Posted On: 04 Feb 2024, 06:27 PM
ಕಾಪು : ಫೆಬ್ರವರಿ 9,10 ಮತ್ತು 11 ರಂದು ನಡೆಯಲಿರುವ ಕಾಪು ಗ್ರಾಮ ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆ ಇಂದು ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಚಾಲಕರಾದ ಕುತ್ಯಾರು ನವೀನ್ ಶೆಟ್ಟಿ, ಗ್ರಾಮ ಚಲೋ ಕಾರ್ಯಕ್ರಮದ ಜಿಲ್ಲಾ ಸಹ ಸಂಚಾಲಕರಾದ ವಿಜಯ್ ಕುಮಾರ್, ಕಾಪು ಮಂಡಲ ಸಂಚಾಲಕರಾದ ಮುರಳಿಧರ ಪೈ, ಸಹ ಸಂಚಾಲಕರಾದ ನವೀನ್ ಎಸ್.ಕೆ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಪು : ಇನ್ನಂಜೆ ಯುವಕ ಮಂಡಲದ ಸುವರ್ಣ ಮಹೋತ್ಸವ - ಸುವರ್ಣ ಸಭಾಭವನದ ಉದ್ಘಾಟನೆ
Posted On: 03 Feb 2024, 11:52 AM
ಕಾಪು : ಇನ್ನಂಜೆ ಯುವಕ ಮಂಡಲದ ಸದಸ್ಯರು ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರದ ಸಂದರ್ಭ ರಾತ್ರಿ ಹಗಲು ಕರಸೇವೆ ಮಾಡಿದ ಫಲವಾಗಿ ಇಂದು ಸುಸಜ್ಜಿತ ಸಭಾಭವನ ನಿರ್ಮಾಣ ಮಾಡುವಂತಾಗಿದೆ ಎಂದು ಉಡುಪಿಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು. ಅವರು ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಇನ್ನಂಜೆಯಲ್ಲಿ ನಿರ್ಮಾಣವಾದ ಸುವರ್ಣ ಸಭಾಭವನ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಧ್ವಜಸ್ತಂಭ ಉದ್ಘಾಟಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀಮತಿ ಸುಂದರಿ ಶೆಟ್ಟಿ ವೇದಿಕೆಯನ್ನು ಮುಂಬೈ ಉದ್ಯಮಿ ರತ್ನಾಕರ ಶೆಟ್ಟಿ ಸಾಧು ಮನೆ ಮಂಡೇಡಿ ಅನಾವರಣಗೊಳಿಸಿದರು. ಮಂಗಳೂರಿನ ಉದ್ಯಮಿ ಗ್ರೆಗೋರಿ ಮಥಾಯಸ್ ಇನ್ನಂಜೆ ಕಛೇರಿ ಹಸ್ತಾಂತರ ಮಾಡಿದರು. ಮುಂಬೈ ಉದ್ಯಮಿ ಶಶಿಧರ್ ಕೆ. ಶೆಟ್ಟಿ ಮಂಡೇಡಿ ಬಾಲವನ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ನಂಜೆ ಯುವಕ ಮಂಡಲ ಇದರ ಅಧ್ಯಕ್ಷರಾದ ದಿವೇಶ್ ಶೆಟ್ಟಿ ವಹಿಸಿದ್ದರು. ಈ ಸಂದರ್ಭ ಇನ್ನಂಜೆ ಎಸ್ ವಿ ಎಚ್ ವಿದ್ಯಾಸಂಸ್ಥೆಯ ಸಂಚಾಲಕ ವೇದಮೂರ್ತಿ ಪಾಡಿಗಾರು ಶ್ರೀನಿವಾಸ ತಂತ್ರಿ, ಎಸ್ ವಿ ಎಚ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರತ್ನ ಕುಮಾರ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಇನ್ನಂಜಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಉಡುಪಿ ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಇನ್ನಂಜೆ ಯುವಕ ಮಂಡಲದ ಗೌರವ ಸಲಹೆಗಾರರುಗಳಾದ ಚಂದ್ರಹಾಸ ಗುರುಸ್ವಾಮಿ, ನವೀನ್ ಅಮೀನ್ ಶಂಕರಪುರ, ಕಾರ್ಯದರ್ಶಿ ಹರೀಶ್ ಪೂಜಾರಿ, ಸಲಹಾ ಸಮಿತಿಯ ಸದಸ್ಯರಾದ ರಮೇಶ್ ಮಿತ್ತಂತಾಯ, ಶ್ರೀಶ ಭಟ್, ಯು. ನಂದನ್ ಕುಮಾರ್, ರವಿವರ್ಮ ಶೆಟ್ಟಿ, ಸುರೇಶ್ ಎನ್ ಪೂಜಾರಿ, ಗೌರವ ಸಲಹೆಗಾರರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿಮಿತ್ತ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಉಡುಪಿ : ಕಾಡಬೆಟ್ಟು ಹುಲಿವೇಷ ತಂಡದ ಮುಖ್ಯಸ್ಥ ಅಶೋಕ್ರಾಜ್ ಇನ್ನಿಲ್ಲ
Posted On: 01 Feb 2024, 09:48 PM
ಉಡುಪಿ : ಇಲ್ಲಿಯ ಪ್ರಸಿದ್ಧ ಕಾಡಬೆಟ್ಟು ಹುಲಿವೇಷ ತಂಡದ ಮುಖ್ಯಸ್ಥ ಅಶೋಕ್ರಾಜ್ ಕಾಡಬೆಟ್ಟು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಹುಲಿವೇಷ ಪ್ರದರ್ಶನ ನೀಡಲು ಬೆಂಗಳೂರಿಗೆ ಹೋಗಿದ್ದ ಈ ಸಂದರ್ಭದಲ್ಲಿ ಅವರು ಕುಸಿದು ಬಿದ್ದಿದ್ದರು. ಬಳಿಕ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮಡಿವಾಳ ಮಾಚಿದೇವರಂತೆ ವೃತ್ತಿ ಗೌರವ ಬೆಳೆಸಿಕೊಳ್ಳಿ : ತಹಶೀಲ್ದಾರ್ ಡಾ.ಪ್ರತಿಭಾ ಆರ್.
Posted On: 01 Feb 2024, 07:51 PM
ಕಾಪು : ಅರಸುತನ ಮೇಲಲ್ಲ ಅಗಸುತನ ಕೀಳಲ್ಲ ಎಂದು ವೃತ್ತಿ ಗೌರವ ಸಾರಿದ ಮಡಿವಾಳ ಮಾಚಿದೇವರು 12 ಶತಮಾನದವರು, ಬಸವಣ್ಣನವರ ಸಮಕಾಲೀನರು. ವೃತ್ತಿಯಿಂದ ಮಡಿವಾಳರಾದರೂ ಹಲವು ವಚನಗಳನ್ನು ಬರೆದ ಅನುಭಾವಿ ವಚನಕಾರ. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಜಾತಿ ವ್ಯವಸ್ಥೆಯ ವಿಜೃಂಭಣೆಯನ್ನು ಪ್ರತಿಭಟಿಸಿ ನಿಂತ ಸಮಾಜ ಸುಧಾರಕರು ಎಂದು ಕಾಪು ತಾಲ್ಲೂಕು ತಹಶೀಲ್ದಾರ್ ಡಾ.ಪ್ರತಿಭಾ ಆರ್. ಹೇಳಿದರು. ಅವರು ಕಾಪು ತಹಶೀಲ್ದಾರ್ ಕಚೇರಿಯಲ್ಲಿ ಜರಗಿದ ಮಡಿವಾಳ ಮಾಚಿದೇವ ಜಯಂತಿ ಆಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕಾಯಕ ನಿಷ್ಠೆ, ದಾಸೋಹದಂತಹ ಮೌಲ್ಯಯುತವಾದ ಕಾಣಿಕೆ ನೀಡಿದ್ದು, 12ನೇ ಶತಮಾನದ ಕಾಲದಲ್ಲಿ. ಇಂತಹ ಶರಣರು ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಡಿವಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟವರಾಗಿದ್ದಾರೆ. ಸಮಾಜದಲ್ಲಿ ಜಾತಿ ಮುಖ್ಯವಲ್ಲ ಜೀವನ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ. 354 ವಚನಗಳನ್ನು ಬರೆದಿದ್ದಾರೆ. ಮಡಿವಾಳ ಮಾಚಿದೇವರ ತತ್ವಾದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಸಾಮಾಜಿಕ ನ್ಯಾಯ, ಸಮಾನತೆ ಸಾಧಿಸಬೇಕಿದೆ. ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎನ್ನುವ ಆದರ್ಶಪ್ರಾಯವಾದ ಸಂದೇಶವನ್ನ ಪಾಲಿಸಬೇಕು. ಜೊತೆಗೆ ಅನುಷ್ಠಾನಕ್ಕೆ ಬರಬೇಕು ಮತ್ತು ಯಾವ ವೃತ್ತಿಯೂ ಕೀಳಲ್ಲ, ಯಾವ ವೃತ್ತಿಯೂ ಮೇಲಲ್ಲ. ಸಮಾಜಕ್ಕೆ ಎಲ್ಲಾ ರೀತಿಯ ವೃತ್ತಿಗಳ ಅವಶ್ಯಕತೆ ಇದೆ. ಇಲ್ಲಿ ಎಲ್ಲರೂ ಪ್ರಮುಖರು. ಈ ತತ್ವವನ್ನು ಅಳವಡಿಸಿಕೊಂಡರೆ ಭಾರತ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರುವುದರಲ್ಲಿ ಅನುಮಾನವೇ ಬೇಡ, ಅದಕ್ಕಾಗಿ ನಾವು ಮಡಿವಾಳ ಮಾಚಿದೇವರ ವಚನಗಳನ್ನು ಅಧ್ಯಯನ ಮಾಡಿ ಅಲ್ಲಿನ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ತಾಲ್ಲೂಕು ಆಡಳಿತ ವರ್ಗದವರು ಹಾಗೂ ಉಪ ತಹಶೀಲ್ದಾರ್ ಅಶೋಕ್ ಕೋಟೆಕಾರ್, ರವಿಕಿರಣ್, ದೇವಕಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು.
ಪಡುಬಿದ್ರಿ : ಆನ್ಲೈನ್ ಜಾಬ್ ವಂಚನೆ
Posted On: 31 Jan 2024, 10:11 PM
ಪಡುಬಿದ್ರಿ : ಫೇಸ್ಬುಕ್ ನಲ್ಲಿ ಕಂಡ ಆನ್ಲೈನ್ ಜಾಬ್ ಜಾಹೀರಾತಿಗೆ ಮರುಳಾಗಿ ಮಹಿಳೆಯೋರ್ವರು 3 ಲಕ್ಷ 83 ಸಾವಿರ ರೂ. ಹಣ ಕಳೆದುಕೊಂಡು ವಂಚನೆಗೊಳಗಾದ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಬೇಬಿ ಎಂಬುವವರು ಖಾಸಗಿ ಕಂಪೆನಿಯಲ್ಲಿ ತಾಂತ್ರಿಕ ಸಹಾಯಕಳಾಗಿ ವರ್ಕ್ ಪ್ರಮ್ ಹೋಮ್ ಕೆಲಸ ಮಾಡಿಕೊಂಡಿದ್ದು ಪೇಸ್ಬುಕ್ ನೋಡುತ್ತಿದ್ದಾಗ ಆನ್ಲೈನ್ ಜಾಬ್ ಬಗೆಗಿನ ಜಾಹೀರಾತಿಗೆ ಕುತೂಹಲಗೊಂಡು ವಾಟ್ಸಾಪ್ ಸಂಖ್ಯೆ ಮೂಲಕ ಸಂಪರ್ಕಿಸಿ ತದನಂತರ ಆರೋಪಿತರು ಟೆಲಿಗ್ರಾಂ ಖಾತೆ ಮುಖೇನ ಟಾಸ್ಕ್ ನೀಡಲು ಪ್ರಾರಂಭಿಸಿದ್ದು, ಪ್ರಿಪೈಡ್ ಟಾಸ್ಕ್ ಎಂಬುದಾಗಿ ತಿಳಿಸಿದಂತೆ ಬೇಬಿಯವರಿಂದ ಹಂತ ಹಂತವಾಗಿ ಗೂಗಲ್ ಪೇ ಮುಖೇನ ಒಟ್ಟು ರೂ.3,83,000/- ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಹಣವನ್ನು ವಾಪಾಸ್ಸು ನೀಡದೇ ಮೋಸ ಮಾಡಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು ಮಂಡಲ ಬಿಜೆಪಿ ವತಿಯಿಂದ ಉಡುಪಿ ಜಿಲ್ಲಾ ನೂತನ ಅಧ್ಯಕ್ಷರಿಗೆ ಅಭಿನಂದನೆ
Posted On: 31 Jan 2024, 09:41 PM
ಕಾಪು : ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ನೂತನ ಅಧ್ಯಕ್ಷರಾದ ಕಿಶೋರ್ ಕುಮಾರ್ ಅವರಿಗೆ ಬುಧವಾರ ಕಾಪು ಮಂಡಲ ಬಿಜೆಪಿ ವತಿಯಿಂದ ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ಈ ಸಂದರ್ಭ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಜನಪ್ರತಿನಿಧಿಗಳು, ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮುಲ್ಕಿ : ಶಿವಾಯ ಫೌಂಡೇಶನ್ ಮುಂಬೈ - ಕುಟುಂಬವೊಂದಕ್ಕೆ ದಿನಸಿ ಸಾಮಾಗ್ರಿ, ವಿಧವಾ ವೇತನದ ಚೆಕ್ ಹಸ್ತಾಂತರ
Posted On: 31 Jan 2024, 07:20 PM
ಮುಲ್ಕಿ : ಶಿವಾಯ ಫೌಂಡೇಶನ್ (ರಿ.) ಮುಂಬೈ ಸಂಸ್ಥೆಯ ವತಿಯಿಂದ ಬುಧವಾರ ಮುಲ್ಕಿ ಕಾರ್ನಾಡು ಅಮೃತಮಾಯಿ ನಗರ ನಿವಾಸಿ ಗೀತಾರವರ ಕುಟುಂಬಕ್ಕೆ 3ನೇ ತಿಂಗಳಿನ ದಿನಬಳಕೆಯ ದಿನಸಿ ಸಾಮಾಗ್ರಿ ಹಾಗೂ ವಿಧವಾ ವೇತನದ ಚೆಕ್ ನ್ನು ಶಿವಾಯ ಸಂಸ್ಥೆಯ ನೂತನ ಗೌರವಾಧ್ಯಕ್ಷರಾದ ನವೀನ್ ಚಂದ್ರ ಜೆ ಶೆಟ್ಟಿ ಪಡುಬಿದ್ರಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಿವಾಯ ಫೌಂಡೇಶನ್ ಸಂಸ್ಥೆಯ ಸದಸ್ಯರಾದ ರವಿ ಶೆಟ್ಟಿ (ಶಾರದೆ), ಪಡುಬಿದ್ರಿ ರಮಣಿ ಐಸ್ ಕ್ರೀಮ್ ಪಾರ್ಲರ್ ಮಾಲಿಕರಾದ ಜಗನ್ನಾಥ್ ಶೆಟ್ಟಿ ಪಾದೆಬೆಟ್ಟು ಪಡುಬಿದ್ರಿ, ಸಂಸ್ಥೆಯ ಹಿತೈಷಿ ಸುಧಾಕರ್ ಕೆ ಪಡುಬಿದ್ರಿ ಉಪಸ್ಥಿತರಿದ್ದರು.
ಫೆಬ್ರವರಿ 1- 4 : ಉದ್ಯಾವರದಲ್ಲಿ ಬಹುಭಾಷಾ ನಾಟಕೋತ್ಸವ
Posted On: 31 Jan 2024, 11:18 AM
ಉದ್ಯಾವರ : ನಿರಂತರ್ ಉದ್ಯಾವರ ನೇತೃತ್ವದಲ್ಲಿ 6ನೇ ವರ್ಷದ ನಿರಂತರ್ ಬಹುಭಾಷಾ ನಾಟಕೋತ್ಸವವು ಇದೇ ಫೆಬ್ರವರಿ ಒಂದರಿಂದ ನಾಲ್ಕನೇ ತಾರೀಖಿನವರೆಗೆ ಸಂಜೆ ಗಂಟೆ 6:30ಕ್ಕೆ ಸರಿಯಾಗಿ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸ್ಮಾರಕ ವೇದಿಕೆಯಲ್ಲಿ (ಚರ್ಚ್ ವಠಾರ) ನಡೆಯಲಿದೆ. ಫೆಬ್ರವರಿ 1, ಗುರುವಾರದಂದು ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇವರಿಂದ ಕ್ಲಾನ್ವಿನ್ ಫೆರ್ನಾಂಡಿಸ್ ಇವರ ನಿರ್ದೇಶನದ ರಂಗಗೀತೆಗಳು ಮತ್ತು 'ಹ್ಯಾಂಗ್ ಆನ್' (ಕನ್ನಡ), ಫೆಬ್ರವರಿ 2 ಶುಕ್ರವಾರದಂದು ಪ್ರಶಸ್ತಿ ಪುರಸ್ಕೃತ ಸಂಗಮ ಕಲಾವಿದೆರ್ ಮಣಿಪಾಲ ಇವರಿಂದ ತುಳು ನಾಟಕ 'ಮರಣಗೆಂದಿನಾಯೆ', ಫೆಬ್ರವರಿ 3 ಶನಿವಾರದಂದು ಅಸ್ತಿತ್ವ ಮಂಗಳೂರು ತಂಡದಿಂದ 'ಜುಗಾರಿ' (ಕೊಂಕಣಿ), ಮತ್ತು ಫೆಬ್ರವರಿ 4, ಭಾನುವಾರದಂದು ಲೋಗೋಸ್ ಥಿಯೇಟರ್ ಗ್ರೂಪ್ ಮಂಗಳೂರು ಇವರಿಂದ 'ದಾದ್ಲ್ಯಾo ಮಧೆo ತುo ಸದೆoವ್' ಎನ್ನುವ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ. ಉಚಿತ ಪ್ರವೇಶವಿರುವ ಈ ನಾಟಕೋತ್ಸವವು ಸಮಯಕ್ಕೆ ಸರಿಯಾಗಿ ಆರಂಭವಾಗಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.
ಫೆಬ್ರವರಿ 3 : ಡಾನ್ಸ್ ಪಡುಬಿದ್ರಿ ಡಾನ್ಸ್-2024
Posted On: 30 Jan 2024, 06:48 PM
ಪಡುಬಿದ್ರಿ : ಇಲ್ಲಿನ ರೋಟರಿ ಕ್ಲಬ್ ಮತ್ತು ಓಂಕಾರ ಕಾಸ್ಟ್ಯೂಮ್ ಮತ್ತು ಕಲಾಸಂಗಮದ ವತಿಯಿಂದ ಕಲಾ ಪ್ರತಿಭೆಗಳಿಗೆ ವೇದಿಕೆ ರೂಪಿಸುವ ಸಲುವಾಗಿ ಡಾನ್ಸ್ ಪಡುಬಿದ್ರಿ ಡಾನ್ಸ್-2024 ರಾಜ್ಯ ಮಟ್ಟದ ಸಮೂಹ ಫಿಲ್ಮಿ ನೃತ್ಯ ಸ್ಪರ್ಧೆಯನ್ನು ಫೆಬ್ರವರಿ 3 ಶನಿವಾರದಂದು ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಅಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಪಡುಬಿದ್ರಿ ಸ್ಥಾಪಕ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಹೇಳಿದರು. ಅವರು ಕಾಪು ಪತ್ರಕರ್ತರ ಸಂಘದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಬೆಂಗಳೂರು, ಹಾಸನ, ಬಾಗಲಕೋಟೆ , ಚಿಕ್ಕಮಗಳೂರು , ಶಿವಮೊಗ್ಗ, ಉಡುಪಿ , ಮಂಗಳೂರು ಭಾಗ ಗಳಿಂದ ಸುಮಾರು 30 ಪ್ರಸಿದ್ಧ ನೃತ್ಯ ತಂಡಗಳು ಹಾಗೂ ಸ್ಥಳೀಯ ನೃತ್ಯ ತಂಡಗಳು ಕೂಡಾ ಭಾಗವಹಿಸಲಿದೆ. ಅಲ್ಲದೆ ಓಂಕಾರ ಕಲಾ ಸಂಗಮದ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಕೂಡಾ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಡ ಕುಟುಂಬದ ಅಂಗವಿಕಲ ಮಹಿಳೆಗೆ ವೀಲ್ ಚಯರ್ ವಿತರಣೆ ಮಾಡಲಿದ್ದು, ವಿವಿಧ ವಿಭಾಗದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ಈ ಅದ್ದೂರಿ ಕಾರ್ಯಕ್ರಮವನ್ನು ಉಡುಪಿಯ ಉಜ್ವಲ ಗ್ರೂಪ್ ನ ಆಡಳಿತ ನಿರ್ದೇಶಕ ಅಜಯ್ ಪಿ.ಶೆಟ್ಟಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ| ಅಂಶುಮಾನ್ ಗೌಡ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಉಡುಪಿ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನಚಂದ್ರ ಜೆ ಶೆಟ್ಟಿ, ಕುದ್ರೋಳಿ ಗೋಕರ್ಣಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್, ರೋಟರಿ ಜಿಲ್ಲಾ ಕಾರ್ಯದರ್ಶಿ ಡಾ| ಪ್ರೀತಿ ಮೋಹನ್, ವಲಯ ಸಹಾಯಕ ಗವರ್ನರ್ ಶೃೆಲೇಂದ್ರ ರಾವ್, ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸೊಸೈಟಿ ಅಧ್ಯಕ್ಷ ವೃೆ.ಸುದೀರ್ ಕುಮಾರ್, ಕಲ್ಲಟ್ಟೆ ಶ್ರೀ ಧರ್ಮ ಜಾರಂದಾಯ ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪಡುಬಿದ್ರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ವೃೆ. ಸುಕುಮಾರ್, ಉದ್ಯಮಿ ಗುಲಾಂ ಮೊಹಮ್ಮದ್, ಉಡುಪಿಯ ಹಿರಿಯ ವಕೀಲರಾದ ಸಂಕಪ್ಪ ಎ., ಪೂರ್ವ ಸಹಾಯಕ ಗವರ್ನರ್ ಗಣೇಶ್ ಆಚಾರ್ಯ ಉಚ್ಚಿಲ, ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ. ಕೃಷ್ಣ ಬಂಗೇರ, ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಗೌರವ ಅಧ್ಯಕ್ಷ ಶರತ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿಯ ಜಿಲ್ಲಾ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ಪಡುಬಿದ್ರಿ ಪೋಲಿಸ್ ಠಾಣಾಧಿಕಾರಿ ಪ್ರಸನ್ನ ಎಮ್.ಎಸ್, ಕಾಪು ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ ರಮೇಶ್ ಯು ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಕಿರುತೆರೆ ಹಾಗು ಚಲನಚಿತ್ರ ನಟ ನಟಿಯರಾದ ಸಾಯಿ ಕೃಷ್ಣ ಕುಡ್ಲ, ವಿನೀತ್ ಕುಮಾರ್, ನೀರಿಕ್ಷಾ ಶೆಟ್ಟಿ, ಗುರುಪ್ರಸಾದ್ ಹೆಗ್ಡೆ, ಕನ್ನಡ ಚಲನಚಿತ್ರ ಹಿನ್ನೆಲೆ ಗಾಯಕಿ ಶಿವಾನಿ ನವೀನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಂದನಾ ರೈ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಪಡುಬಿದ್ರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಓಂಕಾರ ಕಾಸ್ಟ್ಯೂಮ್ ಮತ್ತು ಕಲಾ ಸಂಗಮ ಪಡುಬಿದ್ರಿ ಪಾಲುದಾರೆ ಗೀತಾ ಅರುಣ್, ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಪಿ ಕೃಷ್ಣ ಬಂಗೇರ, ಕಾರ್ಯದರ್ಶಿ ಪವನ್ ಸಾಲ್ಯಾನ್, ರೋಟರಿ ಸಮುದಾಯದಳ ಅಧ್ಯಕ್ಷ ರಚನ್ ಸಾಲ್ಯಾನ್ ಉಪಸ್ಥಿತರಿದ್ದರು.
ಶಿರ್ವ : ಮೂಡುಮಟ್ಟಾರು ಶ್ರೀ ಬಬ್ಬರ್ಯ ದೈವಸ್ಥಾನ - ಜೀರ್ಣೋದ್ಧಾರದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಗಳು ಸಂಪನ್ನ
Posted On: 30 Jan 2024, 06:35 PM
ಶಿರ್ವ : ಮೂಡುಮಟ್ಟಾರು ಶ್ರೀ ಬಬ್ಬರ್ಯ ದೈವಸ್ಥಾನ ಇದರ ಅಮೂಲಾಗ್ರಹ ಜೀರ್ಣೋದ್ಧಾರದ ಪ್ರಯುಕ್ತ ಸಾನ್ನಿಧ್ಯ ಸಂಕೋಚ ಬಾಲಾಲಯ ಪ್ರತಿಷ್ಠೆ ವಿಧಿ ವಿಧಾನವು ಆಗಮ ಪಂಡಿತರಾದ ಕೇಂಜ ಶ್ರೀಧರ ತಂತ್ರಿಗಳ ಮಾರ್ಗದರ್ಶನದಲ್ಲಿ, ಕ್ಷೇತ್ರ ಪುರೋಹಿತರು ರಘುಪತಿ ಗುಂಡು ಭಟ್ ಇವರ ನೇತೃತ್ವದಲ್ಲಿ ಸಂಪನ್ನಗೊಂಡಿತು. ಸಮಾರಂಭದಲ್ಲಿ ನಡಿಬೆಟ್ಟು ಮನೆತನದ ರತ್ನವರ್ಮ ಹೆಗ್ಡೆ, ಕಾರ್ಯಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಉಪಾಧ್ಯಕ್ಷರಾದ ಎಸ್. ಕೆ ಸಾಲ್ಯಾನ್. ,ಜಗದೀಶ್ ಶೆಟ್ಟಿ, ವಾದಿರಾಜ ಆಚಾರ್ಯ, ವಿಠ್ಠಲ ಪೂಜಾರಿ, ಗೌರವ ಸಲಹೆಗಾರರಾದ ಶಂಕರ್ ಶೆಟ್ಟಿ ದರ್ಮೆಟ್ಟು, ವಿವೇಕ್ ಆಚಾರ್ಯ, ಹರಿಶ್ಚಂದ್ರ ಶೆಟ್ಟಿ, ಸಂತೋಷ ಆಚಾರ್ಯ, ಸುಧಾಕರ್ ಶೆಟ್ಟಿ, ರಾಜು ಬಿ ಸುವರ್ಣ, ಪ್ರಶಾಂತ್ ಪೂಜಾರಿ, ಕಾರ್ಯದರ್ಶಿ ಹರೀಶ್ ಪೂಜಾರಿ, ಜೊತೆ ಕಾರ್ಯದರ್ಶಿ ರವಿ ಪೂಜಾರಿ, ಕೋಶಾಧಿಕಾರಿ ಮಂಜುನಾಥ್ ಆಚಾರ್ಯ, ಸಂದೀಪ್ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಬಳಗ, ಸ್ಥಳವಂದಿಗರು ಮೂಡು ಮಟ್ಟಾರು ಗ್ರಾಮಸ್ಥರು ಉಪಸ್ಥಿತರಿದ್ದರು.
