Updated News From Kaup
ಕಾರ್ಕಳ : ಕ್ರಿಯೇಟಿವ್ ಆವಿರ್ಭವ-2023 ಕಾಲೇಜು ವಾರ್ಷಿಕೋತ್ಸವ

Posted On: 02-12-2023 01:44PM
ಕಾರ್ಕಳ : ತ್ರಿಶಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ಸಮಾರಂಭ “ವಸುಧೈವ ಕುಟುಂಬಕಂ” ಎಂಬ ಕಲ್ಪನೆಯಲ್ಲಿ ಮೂಡಿಬಂದಿತು. ಸಮಾರಂಭದಲ್ಲಿ ಮಿಲಾಗ್ರಿಸ್ ಚರ್ಚ್ನ ಧರ್ಮಗುರುಗಳಾದ ವಲೇರಿಯನ್ ಮೆಂಡೊನ್ಸಾ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಮಾಜದಲ್ಲಿ ಜವಾಬ್ದಾರಿಯುತವಾದ ಒಂದು ಸಮುದಾಯವನ್ನು ನಿರ್ಮಾಣ ಮಾಡುವ ಕನಸು ಕಂಡು ಉತ್ತಮ ರೀತಿಯಿಂದ ಮುನ್ನಡೆಯುತ್ತಿದೆ. ಉಡುಪಿ ಪ್ರಾಂತ್ಯದಲ್ಲಿ ಕ್ರಿಯೇಟಿವ್ನ ಹೆಸರು ಇತ್ತೀಚೆಗೆ ಎಲ್ಲ ಕಡೆ ಕೇಳಲಾರಂಭಿಸಿದೆ. ಉನ್ನತವಾದ ಯಶಸ್ಸು ಕೀರ್ತಿ ಲಭಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ವಿದ್ಯಾಸಂಸ್ಥೆಯ ಸಹ ಸಂಸ್ಥಾಪಕರಲ್ಲಿ ಓರ್ವರಾದ ಡಾ. ಗಣನಾಥ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳ ವಿಶೇಷವಾದ ಬೆಳವಣಿಗೆಗಳಿಗೆ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಮುಂಬರುವ ವಾರ್ಷಿಕ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಲಿ ಎಂದು ಆಶಿಸಿದರು.
ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಅಮೃತ್ ರೈ, ಆದರ್ಶ ಎಂ.ಕೆ, ವಿಮಲ್ ರಾಜ್ ಜಿ, ಗಣಪತಿ ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅನೇಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಪ್ರಾಂಶುಪಾಲರಾದ ಸ್ಟಾನಿ ಲೋಬೋ ವಾರ್ಷಿಕ ವರದಿ ವಾಚಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉಪನ್ಯಾಸಕರ ಜೋಯೆಲ್ ಸ್ವಾಗತಿಸಿದರು. ಸೋನಾಲ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಶಿಲ್ಪಾ ಕ್ರಾಸ್ತಾ ವಂದಿಸಿದರು.
ಯು.ಎ.ಇ ದುಬೈನಲ್ಲಿ 2023 ಯೂತ್ ಐಕಾನ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಕಾಪುವಿನ ಸಮಾಜ ಸೇವಕ ಫಾರೂಕ್ ಚಂದ್ರನಗರ ಆಯ್ಕೆ

Posted On: 02-12-2023 11:03AM
ಕಾಪು : ಕಳತ್ತೂರು ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಚಂದ್ರನಗರ ಇದರ ಮಾಲಕರು ರೋಟರಿ ಕ್ಲಬ್ ಶಿರ್ವ ಇದರ ಅಧ್ಯಕ್ಷರಾದ ಯುವ ನಾಯಕ, ಉದ್ಯಮಿಯಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಯು.ಎ.ಇ ದುಬೈನಲ್ಲಿ 2023 ಯೂತ್ ಐಕಾನ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ಎಲ್ಲಾ ಜಾತಿಯವರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದು ಗ್ರಾಮ ಮಟ್ಟದ ಜನರಿಗೆ ತನ್ನಿಂದ ಆಗುವ ಸಹಾಯ ಮಾಡುತ್ತ ಕುಡಿಯುವ ನೀರು, ರಸ್ತೆ ನಿರ್ಮಾಣ, ಕೊರೋನದಂತ ಮಹಾಮಾರಿ ಬಂದಾಗ ಸಂತ್ರಸ್ತರಿಗೆ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾಗಿ ಅದರ ಮುಖಾಂತರ ಸುಮಾರು 6000 ಕ್ಕೂ ಮಿಕ್ಕಿ ಮನೆಗೆ ಅಕ್ಕಿ ಪಡಿತರ ಕಿಟ್ ನೀಡಿದ್ದು ,ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆ ,ಪೊಲೀಸ್ ಇಲಾಖೆಯವರ ಸಹಕಾರದಿಂದ ಹಲವಾರು ಮೆಡಿಕಲ್ ಕ್ಯಾಂಪ್, ಬ್ಲಡ್ ಕ್ಯಾಂಪ್, ವಿದ್ಯಾರ್ಥಿವೇತನದಂತ ನೂರಾರು ಸಾಮಾಜಿಕ ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿ ಸರಕಾರದಿಂದ ಸಿಗುವ ಸವಲತ್ತುಗಳನ್ನು ಜನರಿಗೆ ಸುಲಭ ರೀತಿಯಲ್ಲಿ ಸಿಗಲು ಹಲವಾರು ಮಾಹಿತಿ ಕಾರ್ಯಕ್ರಮ ಮಾಡಿರುತ್ತಾರೆ.
ಹತ್ತಾರು ಸಾಮಾಜಿಕ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿ ಕರ್ನಾಟಕ ಸರಕಾರದ ಪ್ರತಿಷ್ಠಿತ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಏಷ್ಯಾ ಫೇಸಿಫಿಕ್ ಗೋಲ್ಡ್ ಸ್ಟಾರ್ ಅವಾರ್ಡ್ ದೆಹಲಿ, ಜನಸೇವಾ ಸದ್ಭಾವನ್ ಪುರಸ್ಕಾರ್ ಅವಾರ್ಡ್ ಗೋವಾ, ಕೈರಲಿ ಪ್ರಕಾಶನ ಕೊಡಲ್ಪಟ್ಟ ಸಮಾಜ ರತ್ನ ಕೇರಳ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಸಾಧಕ ರತ್ನ ಪ್ರಶಸ್ತಿ, ಕರ್ನಾಟಕ ರಾಷ್ಟ್ರ ಸಮಿತಿ ಉಡುಪಿ ವತಿಯಿಂದ ಸಮಾಜ ರತ್ನ ಪ್ರಶಸ್ತಿ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿ ಪಡೆದು ನೂರಾರು ಸಂಘ ಸಂಸ್ಥೆಗಳಿಂದ ಸನ್ಮಾನ ಅಭಿನಂದನೆ ಪಡೆದಿರುತ್ತಾರೆ.
ಇದೀಗ ಡಿಸೆಂಬರ್ 10 ದುಬೈ ಅಲ್ ಖುಷಿಸ್ ಉಡ್ಲಮ್ ಪಾರ್ಕ್ ದುಬೈ ಶಾಲಾ ಸಭಾಂಗಣದಲ್ಲಿ ನಡೆಯುವ ಗಡಿನಾಡ ಉತ್ಸವ ಕಾರ್ಯಕ್ರಮದಲ್ಲಿ ಹಲವಾರು ದೇಶ ಹಾಗೂ ವಿದೇಶದ ಗಣ್ಯತಿಗಣ್ಯರ ಸಮ್ಮುಖದಲ್ಲಿ 2023 ರ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಯೂತ್ ಐಕಾನ್ ಪಡೆಯಲಿದ್ದಾರೆಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ.) ದುಬೈ ಘಟಕದ ಅಧ್ಯಕ್ಷರಾದ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆ, ಕಾರ್ಯದರ್ಶಿ ಅಮರದೀಪ ಕಲ್ಲುರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ಪಡು ಕುತ್ಯಾರು ಶ್ರೀ ದುರ್ಗಾಮಂದಿರದಲ್ಲಿ ವಾರ್ಷಿಕ ಮಹೋತ್ಸವ

Posted On: 01-12-2023 08:38PM
ಕಾಪು : ತಾಲೂಕಿನ ಪಡು ಕುತ್ಯಾರು ಶ್ರೀ ದುರ್ಗಾಮಂದಿರದಲ್ಲಿ ವಾರ್ಷಿಕ ಮಹೋತ್ಸವವು ಆನೆಗುಂದಿ ಮಠದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಶುಕ್ರವಾರ ಜರಗಿತು.
ಈ ಸಂದರ್ಭ ಕ್ಷೇತ್ರದ ದೇವರಿಗೆ ವಿಶೇಷ ಅಲಂಕಾರ ಪೂಜೆ ಮಾಡಲಾಗಿತ್ತು. ಶ್ರೀದೇವಿಯ ಮಹಾಪೂಜೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದು ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯು ನಡೆಯಿತು.
ಮುಕ್ತೇಶ್ವರ ಪ್ರಕಾಶ ಎಸ್ ಆಚಾರ್ಯ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ, ನಾಗೇಶ್ ಆರ್ ಆಚಾರ್ಯ, ಕಾರ್ಯಾಧ್ಯಕ್ಷರಾದ ಕಾಪು ಜಯರಾಮ ಆಚಾರ್ಯ, ಮುಂಬೈ ಕಮಿಟಿ ಅಧ್ಯಕ್ಷರಾದ ಮಾಧವ ಎಸ್ ಆಚಾರ್ಯ, ಕಾರ್ಯದರ್ಶಿ ದಿನೇಶ್ ಎಸ್ ಆಚಾರ್ಯ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಡುಬಿದ್ರಿ : ಎ ಎಸ್ ಐ ದಿವಾಕರ ಜೆ. ಸುವರ್ಣರಿಗೆ ಬೀಳ್ಕೊಡುಗೆ

Posted On: 01-12-2023 07:45AM
ಪಡುಬಿದ್ರಿ : 31 ವರ್ಷಗಳ ಕಾಲ ಪೋಲಿಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆಗೈದು ವಯೋ ನಿವೃತ್ತಿ ಹೊಂದಿದ ಎ ಎಸ್ ಐ ದಿವಾಕರ ಜೆ. ಸುವರ್ಣರ ಬೀಳ್ಕೊಡುಗೆ ಸಮಾರಂಭ ಗುರುವಾರ ಪಡುಬಿದ್ರಿ ಮಾರ್ಕೆಟ್ ರಸ್ತೆಯ ಸಾಯಿ ಆರ್ಕೇಡ್ ನಲ್ಲಿ ಜರಗಿತು.

ಈ ಸಂದರ್ಭ ಪಡುಬಿದ್ರಿ ಠಾಣೆಯ ಎ ಎಸ್ ಐ ಸುರೇಶ್ ಭಟ್, ಹೆಡ್ ಕಾನ್ ಸ್ಟೇಬಲ್ ಚಂದ್ರ ಬಿಲ್ಲವ, ಮಣಿಪಾಲ ಠಾಣೆಯ ಎ ಎಸ್ ಐ ನಾಗೇಶ್, ಸಿಬ್ಬಂದಿಗಳಾದ ಶಶಿಕುಮಾರ್, ಸುಕೇಶ್, ಶ್ರೀಧರ್, ಸಾಮಾಜಿಕ ಕಾರ್ಯಕರ್ತರಾದ ಲೋಕೇಶ್ ಕಂಚಿನಡ್ಕ, ಶೇಖರ ಹೆಜಮಾಡಿ, ಲೋಕೇಶ್ ಹೆಜಮಾಡಿ, ಪತ್ರಕರ್ತ ರಾಮಚಂದ್ರ ಆಚಾರ್ಯ ನಿವೃತ್ತರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸನ್ಮಾನ : ಪಡುಬಿದ್ರಿ ಠಾಣಾ ಸಿಬ್ಬಂದಿಗಳು, ಹೋಮ್ ಗಾಡ್ಸ್೯, ಹೆಜಮಾಡಿ ಬಿಲ್ಲವ ಸಂಘ, ಅಂಬೇಡ್ಕರ್ ಯುವಸೇನೆ ವತಿಯಿಂದ ದಿವಾಕರ ಜೆ. ಸುವರ್ಣರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ದಿವಾಕರ ಜೆ. ಸುವರ್ಣ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರ ಸಹಕಾರದಿಂದ ಪೋಲಿಸ್ ಇಲಾಖೆಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು. ಮಾಡುವ ಕೆಲಸದಲ್ಲಿ ನಿಷ್ಠೆಯಿದ್ದಾಗ ಮಾತ್ರ ಉತ್ತಮ ಫಲ ದೊರಕುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಮಾತನಾಡಿ ದಿವಾಕರ ಜೆ. ಸುವರ್ಣರು ಪೋಲಿಸ್ ಇಲಾಖೆಯಲ್ಲಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಅವರು ವಯೋ ನಿವೃತ್ತಿ ಹೊಂದಿರಬಹುದು. ಆದರೆ ಅವರ ಸಲಹೆ ಸಹಕಾರ ಮುಂದೆಯೂ ಇರಲಿ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ವೇದಿಕೆಯಲ್ಲಿ ಎ ಎಸ್ ಐ ದಿವಾಕರ ಜೆ. ಸುವರ್ಣರ ಪತ್ನಿ ಹರಿಣಾಕ್ಷಿ, ಪಡುಬಿದ್ರಿ ಠಾಣೆಯ ಅಪರಾಧ ವಿಭಾಗದ ಪಿ ಎಸ್ ಐ ಸುದರ್ಶನ ದೊಡ್ಡಮಣಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಠಾಣಾ ಸಿಬ್ಬಂದಿ ವೆಂಕಟೇಶ ಸ್ವಾಗತಿಸಿದರು. ಸಿಬ್ಬಂದಿ ಯೋಗೀಶ್ ನಿರೂಪಿಸಿ, ವಂದಿಸಿದರು.
ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ಘಾಟನೆ
Posted On: 30-11-2023 06:03PM
ಬಂಟಕಲ್ಲು : ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಸಮುದಾಯದ ಅಭಿವೃದ್ಧಿ ಕಾರ್ಯಗಳಲ್ಲಿ ಅವಕಾಶವನ್ನು ನೀಡುತ್ತದೆ ಮತ್ತು ಶಿಕ್ಷಣ ಹೊರತುಪಡಿಸಿ ಹೊರಗಿನ ಜೀವನದ ಬಗ್ಗೆ ಅನುಭವವನ್ನು ಪಡೆಯಲು ಅವಕಾಶ ಕಲ್ಪಸುತ್ತದೆ. ಅಲ್ಲದೆ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಶಿಸ್ತು, ಸೇವಾ ಮನೋಭಾವ ಮತ್ತು ನಾಯಕತ್ವ ಕೌಶಲ್ಯವನ್ನು ತಿಳಿಸಿಕೊಡುತ್ತದೆ ಎಂದು ಉಡುಪಿಯ ಎಂಜಿಎಮ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಮತ್ತು ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಯಾದ ಸುಚಿತ್ ಕೋಟ್ಯಾನ್ ಹೇಳಿದರು. ಅವರು ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಆವರಣದಲ್ಲಿ ನವೆಂಬರ್ 27 ರಂದು ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಈ ಶಿಬಿರವನ್ನು ಆಯೋಜಿಸಿದಕ್ಕಾಗಿ ಹರ್ಷ ವ್ಯಕ್ತಪಡಿಸಿದರು ಮತ್ತು ವಿದ್ಯಾರ್ಥಿಗಳು ಈ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂವಿಧಾನ ದಿನದ ಅಂಗವಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭವನ್ನು ಆಯೋಜಿಸಲಾಗಿತ್ತು. ಅತಿಥಿಗಳಾದ ಸುಚಿತ್ ಕೋಟ್ಯಾನ್ ಪ್ರಮಾಣ ವಚನವನ್ನು ವಾಚಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ಡೀನ್, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನಿಧಿ ಪಾಟ್ಕರ್ ಸ್ವಾಗತಿಸಿದರು. ಸುರಭಿ ಪ್ರಾರ್ಥಿಸಿದರು. ಅಕ್ಷತಾ ಅತಿಥಿಗಳನ್ನು ಪರಿಚಯಿಸಿದರು. ಅನನ್ಯ ಕಾರ್ಯಕ್ರಮ ನಿರೂಪಿಸಿದರು. ಧನುಷ್ ಶಾಸ್ತ್ರಿ ವಂದಿಸಿದರು.
ಉಡುಪಿ : ವಿಕಸಿತ ಭಾರತ ಸಂಕಲ್ಪ ಯಾತ್ರೆ - ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ

Posted On: 30-11-2023 03:13PM
ಉಡುಪಿ : ಭಾರತದಾದ್ಯಂತ ನವೆಂಬರ್ 15ರಿಂದ ಜನವರಿ 26ರವರೆಗೆ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಗುರುವಾರ ಅಂಬಲಪಾಡಿ ಗ್ರಾಮ ಪಂಚಾಯತ್ ಬಳಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು.

ಇದೇ ಸಂದರ್ಭ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣದ ನೇರಪ್ರಸಾರ ವೀಕ್ಷಿಸಲಾಯಿತು. ಕೇಂದ್ರ ಸರ್ಕಾರದ 70ಕ್ಕೂ ಹೆಚ್ಚು ಯೋಜನೆಗಳ ಪೈಕಿ 17 ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ಒದಗಿಸುವುದು. ಈ ಯೋಜನೆಗಳನ್ನು ಕೊನೆಯ ಮೈಲಿಯವರೆಗೂ ಮುಟ್ಟಿಸುವುದು, ಈವರೆಗೆ ಪ್ರಯೋಜನ ಪಡೆಯದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಗಳನ್ನು ತಲುಪಿಸುವುದು ಈ ಯಾತ್ರೆಯ ಉದ್ದೇಶವಾಗಿದ್ದು, ಯಾತ್ರೆಯಲ್ಲಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಾಹನ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದ್ದು, ಎಲ್ಇಡಿ ಪರದೆಯ ಮೂಲಕ ಯೋಜನೆಗಳ ಮಾಹಿತಿಯನ್ನು ನೀಡಲಾಗುವುದು.
ಈ ಸಂದರ್ಭ ಉಡುಪಿ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ, ಕೆನರಾ ಬ್ಯಾಂಕ್ ಮಣಿಪಾಲ ಶಾಖೆಯ ಮಹಾ ಪ್ರಬಂಧಕರಾದ ಪಂಡಿತ್ ಹಾಗೂ ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಉದ್ಯಾವರ : ಗ್ರಾಮ ಪಂಚಾಯತ್ ಅಧ್ಯಕ್ಷೆ ಸಹಿತ ಇಬ್ಬರು ಕಾಂಗ್ರೆಸ್ ಸೇರ್ಪಡೆ

Posted On: 30-11-2023 02:56PM
ಉದ್ಯಾವರ : ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಧ್ಯಕ್ಷ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದ ಬಿಜೆಪಿ ಬೆಂಬಲದಿಂದ ಆಯ್ಕೆಯಾಗಿದ್ದ ಗ್ರಾಮ ಪಂಚಾಯತ್ ಸದಸ್ಯರಿಬ್ಬರು ಮಾಜಿ ಸಚಿವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಬಿಜೆಪಿಯ ಅಧಿಕೃತ ಅಧ್ಯಕ್ಷೆ ಅಭ್ಯರ್ಥಿಯ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್ ಬೆಂಬಲದಿಂದ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ 12ನೇ ವಾರ್ಡ್ ನ ಮಾಲತಿ ಸಂದೀಪ್ ಮತ್ತು ಮೂರು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಗಿರೀಶ್ ಸುವರ್ಣ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯ ಅಧ್ಯಕ್ಷ ಸಂತೋಷ್ ಕುಲಾಲ್, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರೋಯ್ಸ್ ಫೆರ್ನಾoಡೀಸ್, ನಾಗೇಶ್ ಕುಮಾರ್ ಉದ್ಯಾವರ ಮತ್ತು ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಕಾಪು : ವಿಶ್ವೇಶತೀರ್ಥ ವಿದ್ಯಾಲಯದ ನೂತನ ಶಾಲಾ ಕಟ್ಟಡ ಉದ್ಘಾಟನೆ

Posted On: 30-11-2023 02:51PM
ಕಾಪು : ಊರು ಉದ್ಧಾರವಾಗಲು ಮಂದಿರ, ಶಾಲೆ, ವೈದ್ಯಕೀಯ ವ್ಯವಸ್ಥೆ ಜೊತೆಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಇರಬೇಕು. ಊರೊಳಗೆ ಈ ಎಲ್ಲಾ ವ್ಯವಸ್ಥೆಗಳು ಇದ್ದಲ್ಲಿ ಸಮಗ್ರ ಬೆಳವಣಿಗೆ ಕಾಣಲು ಸಾಧ್ಯ. ಉತ್ತಮ ಶಿಕ್ಷಣ ಬದುಕಿನಲ್ಲಿ ಸಾರ್ಥಕತೆ ಗಳಿಸಲು ಸಾಧ್ಯ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಅವರು ವಿದ್ಯಾಸಾಗರ ಎಜಕೇಶನ್ ಟ್ರಸ್ಟ್ ಇದರ ಆಡಳಿತಕ್ಕೊಳಪಟ್ಟ ಶಿಕ್ಷಣ ಸಂಸ್ಥೆ ಕೈಪುಂಜಾಲು ಚೆನ್ನಪ್ಪ ಸಾಹುಕಾರ್ ರವರ ಸ್ಮರಣಾರ್ಥ ವಿಶ್ವೇಶತೀರ್ಥ ವಿದ್ಯಾಲಯದ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಶಾಲೆಯ ನೂತನ ಸಭಾಭವನ ಉದ್ಘಾಟಿಸಿ ಮಾತನಾಡಿದ ಉಡುಪಿಯ ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ. ಶಂಕರ್ ಮಾತನಾಡಿ ಸತೀಶ್ ಕುಂದರ್ ತಂಡದಿಂದ ಈ ಶಿಕ್ಷಣ ಸಂಸ್ಥೆ ಮೂಡಿ ಬಂದಿದೆ. ದಾನಿಗಳು ಶಿಕ್ಷಣ ಸಂಸ್ಥೆಗೆ ತಮ್ಮಿಂದಾದ ಸಹಾಯ ಮಾಡಬಹುದು. ಆದರೆ ಸಂಸ್ಥೆಯ ಬೆಳವಣಿಗೆಯು ಉತ್ತಮ ಸಂಸ್ಕಾರಯುತ ಶಿಕ್ಷಣದ ಮೇಲೆ ಅವಲಂಬಿತವಾಗಿದೆ. ಈ ಜವಾಬ್ದಾರಿ ಶಿಕ್ಷಕ ವರ್ಗಕ್ಕಿದೆ ಎಂದರು.

ಸಮ್ಮಾನ : ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಪೇಜಾವರ ಶ್ರೀಗಳನ್ನು ವಿವಿಧ ಫಲಗಳ ಸಹಿತ ಪುಷ್ಪ ಸಿಂಚನದೊಂದಿಗೆ ಗೌರವಿಸಲಾಯಿತು. ಉಡುಪಿಯ ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ. ಶಂಕರ್, ಬೆಂಗಳೂರಿನ ಏಸ್ ಸಂಸ್ಥೆಯ ಅಧ್ಯಕ್ಷ ರಾಮದಾಸ್ ಪುತ್ತಿಗೆ, ಶಾಲಾ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಸತೀಶ್ ಕುಂದರ್, ರವಿ ಕುಮಾರ್, ಲಕ್ಷ್ಮೀಶ ತಂತ್ರಿ ಮೊದಲಾದವರನ್ನು ಪೇಜಾವರ ಶ್ರೀಗಳು ಸಮ್ಮಾನಿಸಿದರು.
ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಬೆಂಗಳೂರಿನ ಏಸ್ ಸಂಸ್ಥೆಯ ಅಧ್ಯಕ್ಷ ರಾಮದಾಸ್ ಪುತ್ತಿಗೆ, ಕಾಪು ದೇವಿಪ್ರಸಾದ್ ಕನ್ ಸ್ಟ್ರಕ್ಷನ್ ನ ವಾಸುದೇವ ಶೆಟ್ಟಿ, ಮತ್ಸ್ಯೋದಮಿಗಳಾದ ಸಾಧು ಸಾಲ್ಯಾನ್, ಹರಿಯಪ್ಪ ಸಾಲ್ಯಾನ್, ಪಾಜಕ ಆನಂದ ತೀರ್ಥ ವಿದ್ಯಾಲಯದ ಕಾರ್ಯದರ್ಶಿ ಬಿ. ಸುಬ್ರಹ್ಮಣ್ಯ ಸಾಮಗ, ಶಿಕ್ಷಣ ತಜ್ಞ ವಾಸುದೇವ ಭಟ್, ಕಾಪು ದಂಡತೀರ್ಥ ಪ್ರತಿಷ್ಠಾನದ ಸೀತಾರಾಮ ಭಟ್, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಪ್ರಭಾಕರ ಪೂಜಾರಿ, ನಾಗರಾಜ ಸುವರ್ಣ, ಪ್ರವೀಣ್ ಶ್ರೀಯಾನ್, ಚಂದ್ರಶೇಖರ ಅಮೀನ್, ಮುಖ್ಯ ಶಿಕ್ಷಕ ಸಾಕ್ಷತ್ ಯು.ಕೆ, ದಯಾವತಿ ಕುಂದರ್, ವಿನೋದ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.
ಕಾಪು ಮಾರಿಯಮ್ಮನ ಪ್ರಸಾದದಿಂದ ಬೆಂಗಳೂರು ಕಂಬಳ ಗೆಲ್ಲುವಂತಾಯಿತು : ನಂದಳಿಕೆ ಶ್ರೀಕಾಂತ್ ಭಟ್

Posted On: 29-11-2023 07:04PM
ಕಾಪು : ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಕಾಪು ಮಾರಿಯಮ್ಮನ ದಿವ್ಯ ಸಾನಿಧ್ಯವಾದ ಕಾಪು ಹೊಸ ಮಾರಿಗುಡಿ ದೇವಳದಲ್ಲಿ ನವೆಂಬರ್ 28 ಮತ್ತು 29 ರಂದು ಕಾಲಾವಧಿ ಜಾರ್ದೆ ಮಾರಿ ಪೂಜೆಯು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ನಡೆಯಿತು.

ಬೆಂಗಳೂರು ಕಂಬಳ ಸಮಿತಿಯ ಗೌರವಾದ್ಯಕ್ಷರು ಮತ್ತು ಕಾಪು ಹೊಸ ಮಾರಿಗುಡಿ ದೇವಸ್ಥಾನದ ಗೌರವಾಧ್ಯಕ್ಷರಾದ ಎಮ್. ಆರ್.ಜಿ ಗ್ರೂಪ್ ನ ಆಡಳಿತ ನಿರ್ದೇಶಕರಾದ ಉದ್ಯಮಿ ಕೊರಂಗ್ರಪಾಡಿ ದೊಡ್ಡಮನೆ ಪ್ರಕಾಶ್ ಶೆಟ್ಟಿ ಹಾಗೂ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆದ ಬೆಂಗಳೂರು ಕಂಬಳ ನಮ್ಮ ಕಂಬಳದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕವನ್ನು ಹೆಗಲಿಗೆರಿಸಿಕೊಂಡ ನಂದಳಿಕೆ ಶ್ರೀಕಾಂತ್ ಭಟ್ ಅವರು ದೇವಸ್ಥಾನಕ್ಕೆ ಭೇಟಿಕೊಟ್ಟು ಭರದಿಂದ ಸಾಗುತ್ತಿರುವ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿ ಶ್ರೀದೇವಿಯ ದರುಶನವನ್ನು ಪಡೆದು ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಇವರಿಂದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರ ಸಮ್ಮುಖದಲ್ಲಿ ಅಮ್ಮನ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಉದ್ಯಾನ ನಗರಿ, ರಾಜ್ಯ ರಾಜಧಾನಿಯಲ್ಲಿ ನಡೆದ ಪ್ರಥಮ ಕಂಬಳದಲ್ಲಿ ಪ್ರಥಮ ಬಹುಮಾನ ಕಾಪುವಿನ ಅಮ್ಮನ ದಯೆಯಿಂದ ನಮಗೆ ಬಂದಿದೆ. ಪ್ರತೀ ಕಂಬಳಕ್ಕೂ ಹೊರಡುವ ಮುನ್ನ ಅಮ್ಮನ ಪ್ರಸಾದ ಹಿಡಿದುಕೊಂಡೆ ನಾನು ಇಲ್ಲಿಂದ ಹೊರಡುವುದು, ಈ ಬಾರಿಯೂ ಅಮ್ಮನ ಪ್ರಸಾದವನ್ನು ಕೋಣಗಳಿಗೆ ಹಾಕಿ ಕಂಬಳದ ಕರೆಗೆ ಇಳಿಸಿದ್ದೆ. ನನಗೆ ಏನೇ ಗೌರವ ಬಂದಿದ್ದರೂ ಅದು ಅಮ್ಮನ ಆಶೀರ್ವಾದ ಎಂದು ನಾನು ನಂಬುತ್ತೇನೆ, ಈ ದೇಗುಲ ಜೀರ್ಣೋದ್ಧಾರಗೊಳ್ಳುತ್ತಿದ್ದು ಇಲ್ಲಿನ ಒಂದೊಂದು ಸ್ತಂಭಗಳನ್ನು ನೋಡುವಾಗ ಮೈ ರೋಮಾಂಚನಗೊಳ್ಳುತ್ತಿದೆ. ಕೇವಲ ಭಕ್ತರ ನೆರವಿನಿಂದ ಇಷ್ಟು ದೊಡ್ಡ ದೇವಸ್ಥಾನ ನಿರ್ಮಾಣ ಆಗುತ್ತಿರುವುದು ಅಮ್ಮನ ದಯೆಯೇ ಹೊರತು ಬೇರೇನೂ ಅಲ್ಲ. ಅಧ್ಯಕ್ಷರಾದ ವಾಸುದೇವ ಶೆಟ್ರು ಮತ್ತು ಸಮಿತಿಯವರು ಅಮ್ಮನ ಪ್ರೇರಣೆಯಿಂದ ಈ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಕೆಲಸ ಒಬ್ಬರಿಂದ ಆಗುವಂತದ್ದಲ್ಲ ಲಕ್ಷಾಂತರ ಭಕ್ತರ ನೆರವಿನಿಂದ ಆಗುತ್ತಿದೆ, ಇದಕ್ಕಾಗಿ "ಕಾಪುವಿನ ಅಮ್ಮನ ಮಕ್ಕಳು" ಎಂಬ ತಂಡವೊಂದನ್ನು ರಚಿಸಲಾಗಿದೆ 9 ಶಿಲೆಯ ಬಾಬ್ತು ರೂಪಾಯಿ 9,999 ನೀಡಿದ್ದಲ್ಲಿ ಈ ತಂಡಕ್ಕೆ ಸೇರ್ಪಡೆಯಾಗಬಹು, ಊರ ಪರವೂರ, ದೇಶ ವಿದೇಶಗಳ ಭಕ್ತರನ್ನು ಸೇರಿಸಿ ಆರ್ಥಿಕ ಕ್ರೋಡಿಕರಣ ಆಗುತ್ತಿದೆ. ನಾವು ಕೂಡಾ ನಮ್ಮಿಂದ ಆಗುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಈವರೆಗೆ ಜೂನಿಯರ್ ವಿಭಾಗದಲ್ಲಿ 167 ಪದಕ, ಸೀನಿಯರ್ ವಿಭಾಗದಲ್ಲಿ 59 ಪದಕ ಗಳಿಸಿದ್ದೇನೆ. ಪಾಂಡು 203 ಪದಕ ಗಳಿಸಿದೆ. ಬೆಂಗಳೂರಿನಲ್ಲಿ ಲಕ್ಷಾಂತರ ಜನರ ಮುಂದೆ ಪಾಂಡುವಿಗೆ ಆದ ಸನ್ಮಾನ ನನಗೆ ಬಹಳಷ್ಟು ಖುಷಿ ಕೊಟ್ಟಿದೆ. ಕಂಬಳದ ಆರಂಭದಿಂದ ಕಂಬಳ ಮುಗಿದು ಲಾರಿ ಹತ್ತುವವರೆಗೂ ಪಾಂಡುವಿನೊಂದಿಗೆ ಸೆಲ್ಫಿಗಾಗಿ ಜನರು ಮುಗಿಬೀಳುತ್ತಿದ್ದರು. ಕಾಪು ಮಾರಿಯಮ್ಮನ ದೇಗುಲ ನಿರ್ಮಾಣಕ್ಕೆ ಎಲ್ಲ ಭಕ್ತರ ತನು ಮನ ಧನದ ಸಹಕಾರವಿರಲಿ ಎಂದರು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಮಾಜಿ ಅಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಕಾಶಿನಾಥ್ ಶೆಣೈ, ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.
ಪಲಿಮಾರು : ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕ : ಸಂಪದ - ೨೦೨೩ ತಿಂಗಳ ಸಡಗರ ಶಾಲೆಯತ್ತ ಸಾಹಿತ್ಯ ಸಂಪನ್ನ

Posted On: 29-11-2023 06:35PM
ಪಲಿಮಾರು : ನಾಡು, ನುಡಿ, ಸಾಹಿತ್ಯ, ಜನಪದ, ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಸದ್ವಿಚಾರದ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿದೆ. ಉಡುಪಿ ಜಿಲ್ಲಾ ತಾಲೂಕು ಪರಿಷತ್ತಿನ ತಾಲೂಕು ಘಟಕಗಳಿಂದ ಸಾಹಿತ್ಯ ವಿಚಾರದ ಕಾರ್ಯಕ್ರಮಗಳ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರನ್ನೂ ಗುರುತಿಸುವಂತಹ ಕಾರ್ಯ ನಡೆದಿದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜಿಲ್ಲೆಯಲ್ಲಿ ೪೮ ಕಾರ್ಯಕ್ರಮಗಳು ಜರಗಿದೆ. ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ೫ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ ಕಾಪು ತಾಲೂಕು ಘಟಕದ ಕಾರ್ಯ ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಅವರು ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ಬುಧವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದಿಂದ ಕನ್ನಡ ರಾಜ್ಯೋತ್ಸವ ಮಾಸಾಚಾರಣೆ ಸಂಪದ - ೨೦೨೩ ತಿಂಗಳ ಸಡಗರ ಶಾಲೆಯತ್ತ ಸಾಹಿತ್ಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಗಾಯಕ ಡಾ. ಗಣೇಶ್ ಗಂಗೊಳ್ಳಿ ಜಾನಪದ ಸಾಹಿತ್ಯದಲ್ಲಿ ಮೌಲ್ಯಗಳು ವಿಷಯದೊಂದಿಗೆ ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಗೌರವಾರ್ಪಣೆ : ಮುಂದಿನ ವರ್ಷ ಜರಗಲಿರುವ ಕಾಪು ತಾಲೂಕಿನ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಿರುವ ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರನ್ನು, ಕವನ ಬರೆಯುವ ಹವ್ಯಾಸದ ಕಾಲೇಜಿನ ಯುವ ಕವಯಿತ್ರಿರನ್ನು ಜಿಲ್ಲಾ ಕಸಾಪ ವತಿಯಿಂದ ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಪುಂಡಲೀಕ ಮರಾಠೆ ವಹಿಸಿದ್ದರು. ವೇದಿಕೆಯಲ್ಲಿ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ ಪೈ, ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸಾದ್ ಪಲಿಮಾರು, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಗ್ರೆಟ್ಟಾ ಮೊರಸ್, ಕನ್ನಡ ಶಿಕ್ಷಕ ಸುಧಾಕರ ಶೆಣೈ, ಕಾಪು ತಾಲೂಕು ಘಟಕದ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್, ಸಂಘಟನಾ ಕಾರ್ಯದರ್ಶಿ ದೀಪಕ್ ಕೆ. ಬೀರ, ಅನಂತ ಮೂಡಿತ್ತಾಯ, ಡೊಮಿಯನ್ ನೊರೊನ್ಹ, ಸುಧಾಕರ ಪೂಜಾರಿ ಉಪಸ್ಥಿತರಿದ್ದರು.
ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಗ್ರೆಟ್ಟಾ ಮೊರಸ್ ಸ್ವಾಗತಿಸಿದರು. ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಪವಿತ್ರ ಕೆ. ಕಾರ್ಯಕ್ರಮ ನಿರೂಪಿಸಿದರು. ಕಾಪು ತಾಲೂಕು ಘಟಕದ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ವಂದಿಸಿದರು.