Updated News From Kaup

ಕಾಪು : 800 ಕ್ಕೂ ಅಧಿಕ ಮಕ್ಕಳಿಗೆ ಸುಮಾರು 1.50 ಲಕ್ಷ ರೂ. ಮೌಲ್ಯದ ಶೈಕ್ಷಣಿಕ ಪರಿಕರಗಳ ವಿತರಣೆ

Thumbnail
Posted On: 10 Feb 2024, 04:11 PM

ಕಾಪು : ಮುಂಬಯಿಯ ಮಾಜಿ ಕಾರ್ಪೊರೇಟರ್, ಜೋಸೆಫ್ ಪಟೇಲ್ ಎಸ್ಟೇಟ್ ನವರಾತ್ರಿ ದುರ್ಗಾಪೂಜಾ ಮಂಡಲ್ ಇದರ ಸ್ಥಾಪಕಿ ಕಾಪು ಗರಡಿಮನೆ ದಿ. ಗೀತಾ ಯಾದವ್ ಅವರ ಸ್ಮರಣಾರ್ಥ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾಪು ಪರಿಸರದ ವಿವಿಧ ಶಾಲೆಗಳ 800 ಕ್ಕೂ ಅಧಿಕ ಮಕ್ಕಳಿಗೆ ಸುಮಾರು 1.50 ಲಕ್ಷ ರೂ. ಮೌಲ್ಯದ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ಶೈಕ್ಷಣಿಕ ಪರಿಕರಗಳನ್ನು ವಿತರಿಸಿದ ದಿ‌. ಗೀತಾ ಯಾದವ್ ಅವರ ಪುತ್ರ ಸಂತೋಷ್ ಯಾದವ್ ಅವರು ಮಾತನಾಡಿ, ಕಾಪು ಗರಡಿ ಮನೆಯಲ್ಲಿ ಹುಟ್ಟಿ ಬೆಳೆದ ಮಾತೃಶ್ರೀಯವರು ಮುಂಬಯಿಯಲ್ಲಿ ಸುಮಾರು 25 ವರ್ಷಗಳ ಕಾಲ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆಗೈದು, ರಾಜಕೀಯವಾಗಿಯೂ ಬೆಳೆದಿದ್ದಾರೆ. ಇದೀಗ ನಮ್ಮೊಡನೆ ಇಲ್ಲದ ಅವರ‌ ಸ್ಮರಣೆಗಾಗಿ ಕಳೆದ ಮೂರು ವರ್ಷಗಳಿಂದ ವಿವಿಧ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಮುಂಬಯಿಗೆ ಸೀಮಿತವಾಗಿದ್ದ ಸೇವಾ ಕಾರ್ಯಗಳನ್ನು ಅವರ ಹುಟ್ಟೂರಿನಲ್ಲಿಯೂ ನಡೆಸುವ ಮೂಲಕ ಅವರಿಗೆ ಹುಟ್ಟೂರಿನ ಬಗೆಗೆ ಇದ್ದ ಪ್ರೀತಿಯನ್ನು ವಿಸ್ತರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಕಾಪು ಗರಡಿ ರಸ್ತೆಯಲ್ಲಿರುವ ಅಂಗನವಾಡಿ, ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ವಿಶ್ವನಾಥ್ ಪೂಜಾರಿ ಕಾಪು, ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಉಷಾ, ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್. ರಾವ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ‌ ರಮಣಿ ವೈ., ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವಲಿಂಗಪ್ಪ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರು : ನಿರಂತರ 12 ಗಂಟೆಗಳ ಕಾಲ ಗಾಯನ ಮಾಡಿ ವಿಶ್ವ ದಾಖಲೆ ಮಾಡಿದ ತಂಡ

Thumbnail
Posted On: 07 Feb 2024, 05:10 PM

ಮಂಗಳೂರು : ಇಲ್ಲಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇತ್ತೀಚೆಗೆ ನಿರಂತರ 12 ಗಂಟೆಗಳ ಕಾಲ ಕನ್ನಡದ ಗೀತೆಗಳನ್ನು ಹಾಡುವ ಮೂಲಕ ವಿಶ್ವ ದಾಖಲೆ ನಿರ್ಮಾಣ ಮಾಡಿದ ಗಾಯನ ತಂಡದ ಮುಖ್ಯಸ್ಥ ಗಂಗಾಧರ್ ಗಾಂಧಿಯವರನ್ನು ಕರ್ನಾಟಕ ವಿಧಾನಸಭಾಧ್ಯಕ್ಷ ಯು. ಟಿ.ಖಾದರ್ ವಿಧಾನ ಸೌಧದ ತಮ್ಮ ಕಚೇರಿಯಲ್ಲಿ ವಿಶ್ವ ದಾಖಲೆ ಪ್ರಮಾಣ ಪತ್ರ ನೀಡಿ, ಹಾರ ಪೇಟಾ ಶಾಲು ತೊಡಿಸಿ ಅಭಿನಂದಿಸಿದರು. ಕಾರ್ಯಕ್ರಮ ಆಯೋಜಕ ಸಂಸ್ಥೆ NSCDF ನ ಅಂತಾರಾಷ್ಟ್ರೀಯ ವಕ್ತಾರೆ ಮಮತಾ ಕೋಟ್ಯಾನ್ ಮತ್ತಿತರರು ಉಪಸ್ಥಿತಿಯಿದ್ದರು. 12 ಗಂಟೆಗಳ ನಿರಂತರ ಗಾಯನ ಕಾರ್ಯಕ್ರಮದಲ್ಲಿ ರಾಣಿ ಪುಷ್ಪಲತಾ ದೇವಿ, ವರ್ಷ ಕರ್ಕೇರಾ , ಶ್ರೀ ರಕ್ಷ ಸರ್ಪಂಗಳ, ನೇತ್ರ ಖುಶಿ ಯುಗಳ ಗೀತೆಗಳಿಗೆ ಧ್ವನಿಯಾಗಿದ್ದರು.

ಕಾಪು : ಮಾನ್ಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರತಿಷ್ಠಾನ - ಸಂಸ್ಕೃತಿ ಸಂಚಯನದಲ್ಲಿ ಅನಿವಾಸಿಗರು ಚಿಂತನ ಮಂಥನ

Thumbnail
Posted On: 07 Feb 2024, 05:02 PM

ಕಾಪು : ಮಾನ್ಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರತಿಷ್ಠಾನ ವತಿಯಿಂದ ಭಾರತೀಯ ಪ್ರವಾಸಿ ದಿನದ ಪ್ರಯುಕ್ತ ಸಂಸ್ಕೃತಿ ಸಂಚಯನದಲ್ಲಿ ಅನಿವಾಸಿಗರು ಎಂಬ ಶೀರ್ಷಿಕೆಯಡಿ ಚಿಂತನ ಮಂಥನ ಕಾರ್ಯಕ್ರಮ ಕಾಪುವಿನಲ್ಲಿ ಜರಗಿತು. ಕಾರ್ಯಕ್ರಮವನ್ನು ರಾಜಕೀಯ, ಸಾಮಾಜಿಕ ಮುಂದಾಳು ಗೀತಾಂಜಲಿ ಸುವರ್ಣ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕರಾವಳಿ ಕರ್ನಾಟಕದ ಉಭಯ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯ ಜನರು ವಿದೇಶದಲ್ಲಿ ನೆಲೆನಿಂತು ತನ್ಮೂಲಕ ತನ್ನ ಹುಟ್ಟೂರಿಗೆ ಸೇವೆಯನ್ನು ಮಾಡುತ್ತಿದ್ದು, ಅವರಿಗೂ ಕೂಡಾ ನೆರೆಯ ಕೇರಳ ರಾಜ್ಯ ಸಹಕರಿಸುವಂತೆ ನಮ್ಮಲ್ಲಿಯು ಸಂಪೂರ್ಣ ಸಹಕಾರ ಮುಂದಿನ ದಿನಗಳಲ್ಲಿ ಸರ್ಕಾರದಿಂದ ದೂರೆಯಬೇಕು ಎಂದು ಹೇಳಿದರು. ಅನಿವಾಸಿ ಪ್ರವಾಸಿಗರ ಸಂವಾದ ಹಾಗೂ ಬೆಂಗಳೂರಿನಲ್ಲಿ ಜನವರಿ 14ರಂದು‌ ಬಿಡುಗಡೆಯಾಗಿದ್ದ ಪಿ.‌ಎಸ್‌ ರಂಗನಾಥ್‌ ಸಂಪಾದಕತ್ವದ ಅರಬ್ಬರ ನಾಡಿನಲ್ಲಿ ಕನ್ನಡಿಗರು ಎಂಬ ಪುಸ್ತಕವನ್ನು ಕರಾವಳಿಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಯಿತು. ಅನಿವಾಸಿಗನಾಗಿ ಎರಡು ದಶಕಗಳ ಕಾಲ ವಿದೇಶದ ಕೆಲ ವಿಚಾರಗಳನ್ನು ಶಿವಾನಂದ ಕೋಟ್ಯಾನ್ ಹಂಚಿಕೂಂಡರು. ಈ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ರಾಜ ಕಟಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಉಚ್ಚಿಲ ಬಡಾ ಗ್ರಾ.ಪಂ. : ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ

Thumbnail
Posted On: 06 Feb 2024, 06:24 PM

ಉಚ್ಚಿಲ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಡಾ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮವನ್ನು ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್‌ ಉದ್ಘಾಟಿಸಿದರು. ಮಹಿಳೆಯರ ಋತು ಸ್ರಾವದ ಬಗ್ಗೆ ಹಾಗೂ ಕಿಶೋರಿಯರ ಆರೋಗ್ಯದ ಬಗ್ಗೆ ಪಡುಬಿದ್ರಿ ಪ್ರಾಥಮಿಕ ಕೇಂದ್ರದ ಆರೋಗ್ಯಾಧಿಕಾರಿ ಶಾಮಲಾ ಶೆಟ್ಟಿ ಮಾಹಿತಿ ನೀಡಿದರು. ಪೋಕ್ಸೋ ಕಾಯ್ದೆಯ ಬಗ್ಗೆ ಮಕ್ಕಳ ರಕ್ಷಣಾ ಘಟಕದ ಕಪಿಲಾರವರು ವಿವರಿಸಿದರು. ಸಿಎಚ್ಓ ಉಷ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದ ನೆನಪಿಗಾಗಿ ಗಿಡವೊಂದನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಪಿಡಿಒ ಸತೀಶ್, ಮಾಜಿ ಉಪಾಧ್ಯಕ್ಷೆ ಶಕುಂತಲಾ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಯುಸಿ ಶೇಖಬ್ಬ, ಗ್ರಾಮ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸದಸ್ಯರು, ಮಕ್ಕಳ ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶೈಲ ಸ್ವಾಗತಿಸಿ, ಪ್ರಸ್ತಾವಿಸಿದರು. ಅಂಗನವಾಡಿ ಕಾರ್ಯಕರ್ತೆ ಶಶಿಕಕಲಾ ನವೀನ್ ಕಾರ್ಯಕ್ರಮ ನಿರೂಪಿಸಿದರು. ಪ್ರಮೀಳಾ ವಂದಿಸಿದರು.

ಶಂಕರಪುರ : ರೋಟರಿ ಶಂಕರಪುರ - ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ, ಉಚಿತ ಔಷಧ ವಿತರಣಾ ಶಿಬಿರ

Thumbnail
Posted On: 04 Feb 2024, 07:43 PM

ಶಂಕರಪುರ : ಸುಮಾರು 38 ವರ್ಷಗಳಿಂದ ಶಂಕರಪುರದ ಪರಿಸರಕ್ಕೆ ಉತ್ತಮ ಸೇವೆ ಕೊಡುತ್ತಾ ಬಂದಿರುವ ರೋಟರಿ ಶಂಕರಪುರ 1999ರಲ್ಲಿ ರೋಟರಿ ಟ್ರಸ್ಟ್ ಸ್ಥಾಪಿಸಿಕೊಂಡು ಸದಸ್ಯರು, ದಾನಿಗಳ ನೆರವಿನಿಂದ ನಿಧಿ ಸಂಗ್ರಹಿಸಿ 2003 ರಿಂದ ಪ್ರತಿ ತಿಂಗಳ ಮೊದಲ ಆದಿತ್ಯವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಹಾಗೂ ಉಚಿತ ಔಷಧ ನೀಡುವ ಶಿಬಿರವನ್ನು ನಡೆಸುತ್ತಿದ್ದು ಮಾಚ್೯ 3 ರಂದು 240ನೇ ಶಿಬಿರ ಜರಗಲಿದೆ ಎಂದು ರೋಟರಿ ಶಂಕರಪುರ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಪ್ರಾಯೋಜಕರಾದ ವಲೇರಿಯನ್ ನೊರೊನ್ಹ ಹೇಳಿದರು. ಅವರು ಶಂಕರಪುರ ರೋಟರಿ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು. 15ರಿಂದ 20 ರೋಗಿಗಳಿಂದ ಪ್ರಾರಂಭವಾಗಿ ಪ್ರಸ್ತುತ 100ಕ್ಕೂ ಅಧಿಕ ರೋಗಿಗಳು ಭಾಗವಹಿಸುತ್ತಿದ್ದಾರೆ. ದೂರದ ಊರುಗಳಿಂದಲೂ ರೋಗಿಗಳು ಬರುತ್ತಿದ್ದಾರೆ ಎಂದರು. ಉಡುಪಿಯ ಎ. ವಿ. ಬಾಳಿಗ ಆಸ್ಪತ್ರೆಯ ನಿರ್ದೇಶಕ ಹಾಗೂ ಮನೋರೋಗ ತಜ್ಞ ಡಾ.ಪಿ.ವಿ. ಭಂಡಾರಿ ಮಾತನಾಡಿ ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವು ಮುಖ್ಯವಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ, ವಯೋವೃದ್ಧರಿಗೆ ಈ ಶಿಬಿರವು ಸಹಕಾರಿಯಾಗಿದೆ. ನಂಬಿಕೆಗಳ ಜೊತೆ ವೈಜ್ಞಾನಿಕ ಚಿಕಿತ್ಸೆಯು ಅವಶ್ಯಕ. ಶಾಲೆಗಳಲ್ಲಿ ಕೌನ್ಸೆಲಿಂಗ್ ತಜ್ಞರ ಆವಶ್ಯಕತೆಯಿದೆ. ರಾಜ್ಯ ಸರ್ಕಾರ ನ್ಯಾಷನಲ್ ಸೊಸೈಡ್ ಪಾಲಿಸಿಯನ್ನು ಜಾರಿಗೆ ತಂದರೂ ಇದು ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಸರಿಯಾದ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು. ಈ ಸಂದರ್ಭ ಮನೋರೋಗ ತಜ್ಞರಾದ ಡಾ. ಶ್ರೀನಿವಾಸ್ ಭಟ್, ಡಾ. ನಾಗರಾಜ ಮೂರ್ತಿ, ಕೌನ್ಸಿಲಿಂಗ್ ತಜ್ಞೆ ವಿದ್ಯಾಶ್ರೀ, ರೋಟರಿ ಶಂಕರಪುರ ಅಧ್ಯಕ್ಷರಾದ ಜಾರ್ಜ್ ಅಡ್ವರ್ಡ್ ಡಿಸಿಲ್ವ, ಕಾರ್ಯಕ್ರಮದ ನಿರ್ದೇಶಕ ಅಡ್ವರ್ಡ್ ಮೆಂಡೋನ್ಸ, ಆಂಟೊನಿಯೊ ಡೇಸಾ, ಚಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ : ಪುರುಷೋತ್ತಮ ಪುರಸ್ಕಾರಕ್ಕೆ ರಾಘವೇಂದ್ರ ಪ್ರಭು ಕವಾ೯ಲು ಆಯ್ಕೆ

Thumbnail
Posted On: 04 Feb 2024, 06:33 PM

ಉಡುಪಿ : ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಇದರ ವತಿಯಿಂದ ಫೆಬ್ರವರಿ 29 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣ ನಡೆಯುವ ಕಾರ್ಯಕ್ರಮದಲ್ಲಿ ಕೊಡ ಮಾಡುವ ಪುರುಷೋತ್ತಮ ಪುರಸ್ಕಾರಕ್ಕೆ ಉಡುಪಿಯ ಸಮಾಜಿಕ ಕಾರ್ಯಕರ್ತ, ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಪ್ರಭು ಕವಾ೯ಲು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯನ್ನು ಖ್ಯಾತ ಸಾಹಿತಿ ಡಾI ಷಡಷ್ಕರಿ ಪ್ರಧಾನ ಮಾಡಲಿದ್ದು, ಸಚಿವರುಗಳು ಭಾಗವಹಿಸಲಿರುವರು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಗುಣವಂತ ಮಂಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು : ಗ್ರಾಮ ಚಲೋ ಕಾರ್ಯಕ್ರಮ - ಪೂರ್ವಭಾವಿ ಸಭೆ

Thumbnail
Posted On: 04 Feb 2024, 06:27 PM

ಕಾಪು : ಫೆಬ್ರವರಿ 9,10 ಮತ್ತು 11 ರಂದು ನಡೆಯಲಿರುವ ಕಾಪು ಗ್ರಾಮ ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆ ಇಂದು ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಚಾಲಕರಾದ ಕುತ್ಯಾರು ನವೀನ್ ಶೆಟ್ಟಿ, ಗ್ರಾಮ ಚಲೋ ಕಾರ್ಯಕ್ರಮದ ಜಿಲ್ಲಾ ಸಹ ಸಂಚಾಲಕರಾದ ವಿಜಯ್ ಕುಮಾರ್, ಕಾಪು ಮಂಡಲ ಸಂಚಾಲಕರಾದ ಮುರಳಿಧರ ಪೈ, ಸಹ ಸಂಚಾಲಕರಾದ ನವೀನ್ ಎಸ್.ಕೆ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಪು : ಇನ್ನಂಜೆ ಯುವಕ ಮಂಡಲದ ಸುವರ್ಣ ಮಹೋತ್ಸವ - ಸುವರ್ಣ ಸಭಾಭವನದ ಉದ್ಘಾಟನೆ

Thumbnail
Posted On: 03 Feb 2024, 11:52 AM

ಕಾಪು : ಇನ್ನಂಜೆ ಯುವಕ ಮಂಡಲದ ಸದಸ್ಯರು ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರದ ಸಂದರ್ಭ ರಾತ್ರಿ ಹಗಲು ಕರಸೇವೆ ಮಾಡಿದ ಫಲವಾಗಿ ಇಂದು ಸುಸಜ್ಜಿತ ಸಭಾಭವನ ನಿರ್ಮಾಣ ಮಾಡುವಂತಾಗಿದೆ ಎಂದು‌ ಉಡುಪಿಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು. ಅವರು ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಇನ್ನಂಜೆಯಲ್ಲಿ ನಿರ್ಮಾಣವಾದ ಸುವರ್ಣ ಸಭಾಭವನ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಧ್ವಜಸ್ತಂಭ ಉದ್ಘಾಟಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀಮತಿ ಸುಂದರಿ ಶೆಟ್ಟಿ ವೇದಿಕೆಯನ್ನು ಮುಂಬೈ ಉದ್ಯಮಿ ರತ್ನಾಕರ ಶೆಟ್ಟಿ ಸಾಧು ಮನೆ ಮಂಡೇಡಿ ಅನಾವರಣಗೊಳಿಸಿದರು. ಮಂಗಳೂರಿನ ಉದ್ಯಮಿ ಗ್ರೆಗೋರಿ ಮಥಾಯಸ್ ಇನ್ನಂಜೆ ಕಛೇರಿ ಹಸ್ತಾಂತರ ಮಾಡಿದರು. ಮುಂಬೈ ಉದ್ಯಮಿ ಶಶಿಧರ್ ಕೆ. ಶೆಟ್ಟಿ ಮಂಡೇಡಿ ಬಾಲವನ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ನಂಜೆ ಯುವಕ ಮಂಡಲ ಇದರ ಅಧ್ಯಕ್ಷರಾದ ದಿವೇಶ್ ಶೆಟ್ಟಿ ವಹಿಸಿದ್ದರು. ಈ ಸಂದರ್ಭ ಇನ್ನಂಜೆ ಎಸ್ ವಿ ಎಚ್ ವಿದ್ಯಾಸಂಸ್ಥೆಯ ಸಂಚಾಲಕ ವೇದಮೂರ್ತಿ ಪಾಡಿಗಾರು ಶ್ರೀನಿವಾಸ ತಂತ್ರಿ, ಎಸ್ ವಿ ಎಚ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರತ್ನ ಕುಮಾರ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಇನ್ನಂಜಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಉಡುಪಿ ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಇನ್ನಂಜೆ ಯುವಕ ಮಂಡಲದ ಗೌರವ ಸಲಹೆಗಾರರುಗಳಾದ ಚಂದ್ರಹಾಸ ಗುರುಸ್ವಾಮಿ, ನವೀನ್ ಅಮೀನ್ ಶಂಕರಪುರ, ಕಾರ್ಯದರ್ಶಿ ಹರೀಶ್ ಪೂಜಾರಿ, ಸಲಹಾ ಸಮಿತಿಯ ಸದಸ್ಯರಾದ ರಮೇಶ್ ಮಿತ್ತಂತಾಯ, ಶ್ರೀಶ ಭಟ್, ಯು. ನಂದನ್ ಕುಮಾರ್, ರವಿವರ್ಮ ಶೆಟ್ಟಿ, ಸುರೇಶ್ ಎನ್ ಪೂಜಾರಿ, ಗೌರವ ಸಲಹೆಗಾರರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿಮಿತ್ತ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಉಡುಪಿ : ಕಾಡಬೆಟ್ಟು ಹುಲಿವೇಷ ತಂಡದ ಮುಖ್ಯಸ್ಥ ಅಶೋಕ್‌ರಾಜ್ ಇನ್ನಿಲ್ಲ

Thumbnail
Posted On: 01 Feb 2024, 09:48 PM

ಉಡುಪಿ : ಇಲ್ಲಿಯ ಪ್ರಸಿದ್ಧ ಕಾಡಬೆಟ್ಟು ಹುಲಿವೇಷ ತಂಡದ ಮುಖ್ಯಸ್ಥ ಅಶೋಕ್‌ರಾಜ್ ಕಾಡಬೆಟ್ಟು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಹುಲಿವೇಷ ಪ್ರದರ್ಶನ ನೀಡಲು ಬೆಂಗಳೂರಿಗೆ ಹೋಗಿದ್ದ ಈ ಸಂದರ್ಭದಲ್ಲಿ ಅವರು ಕುಸಿದು ಬಿದ್ದಿದ್ದರು. ಬಳಿಕ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಮಡಿವಾಳ ಮಾಚಿದೇವರಂತೆ ವೃತ್ತಿ ಗೌರವ ಬೆಳೆಸಿಕೊಳ್ಳಿ : ತಹಶೀಲ್ದಾರ್ ಡಾ.ಪ್ರತಿಭಾ ಆರ್.

Thumbnail
Posted On: 01 Feb 2024, 07:51 PM

ಕಾಪು : ಅರಸುತನ ಮೇಲಲ್ಲ ಅಗಸುತನ ಕೀಳಲ್ಲ ಎಂದು ವೃತ್ತಿ ಗೌರವ ಸಾರಿದ ಮಡಿವಾಳ ಮಾಚಿದೇವರು 12 ಶತಮಾನದವರು, ಬಸವಣ್ಣನವರ ಸಮಕಾಲೀನರು. ವೃತ್ತಿಯಿಂದ ಮಡಿವಾಳರಾದರೂ ಹಲವು ವಚನಗಳನ್ನು ಬರೆದ ಅನುಭಾವಿ ವಚನಕಾರ. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಜಾತಿ ವ್ಯವಸ್ಥೆಯ ವಿಜೃಂಭಣೆಯನ್ನು ಪ್ರತಿಭಟಿಸಿ ನಿಂತ ಸಮಾಜ ಸುಧಾರಕರು ಎಂದು ಕಾಪು ತಾಲ್ಲೂಕು ತಹಶೀಲ್ದಾರ್ ಡಾ.ಪ್ರತಿಭಾ ಆರ್. ಹೇಳಿದರು. ಅವರು ಕಾಪು ತಹಶೀಲ್ದಾರ್ ಕಚೇರಿಯಲ್ಲಿ ಜರಗಿದ ಮಡಿವಾಳ ಮಾಚಿದೇವ ಜಯಂತಿ ಆಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕಾಯಕ ನಿಷ್ಠೆ, ದಾಸೋಹದಂತಹ ಮೌಲ್ಯಯುತವಾದ ಕಾಣಿಕೆ ನೀಡಿದ್ದು, 12ನೇ ಶತಮಾನದ ಕಾಲದಲ್ಲಿ. ಇಂತಹ ಶರಣರು ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಡಿವಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟವರಾಗಿದ್ದಾರೆ. ಸಮಾಜದಲ್ಲಿ ಜಾತಿ ಮುಖ್ಯವಲ್ಲ ಜೀವನ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ. 354 ವಚನಗಳನ್ನು ಬರೆದಿದ್ದಾರೆ. ಮಡಿವಾಳ ಮಾಚಿದೇವರ ತತ್ವಾದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಸಾಮಾಜಿಕ ನ್ಯಾಯ, ಸಮಾನತೆ ಸಾಧಿಸಬೇಕಿದೆ. ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎನ್ನುವ ಆದರ್ಶಪ್ರಾಯವಾದ ಸಂದೇಶವನ್ನ ಪಾಲಿಸಬೇಕು. ಜೊತೆಗೆ ಅನುಷ್ಠಾನಕ್ಕೆ ಬರಬೇಕು ಮತ್ತು ಯಾವ ವೃತ್ತಿಯೂ ಕೀಳಲ್ಲ, ಯಾವ ವೃತ್ತಿಯೂ ಮೇಲಲ್ಲ. ಸಮಾಜಕ್ಕೆ ಎಲ್ಲಾ ರೀತಿಯ ವೃತ್ತಿಗಳ ಅವಶ್ಯಕತೆ ಇದೆ. ಇಲ್ಲಿ ಎಲ್ಲರೂ ಪ್ರಮುಖರು. ಈ ತತ್ವವನ್ನು ಅಳವಡಿಸಿಕೊಂಡರೆ ಭಾರತ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರುವುದರಲ್ಲಿ ಅನುಮಾನವೇ ಬೇಡ, ಅದಕ್ಕಾಗಿ ನಾವು ಮಡಿವಾಳ ಮಾಚಿದೇವರ ವಚನಗಳನ್ನು ಅಧ್ಯಯನ ಮಾಡಿ ಅಲ್ಲಿನ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ತಾಲ್ಲೂಕು ಆಡಳಿತ ವರ್ಗದವರು ಹಾಗೂ ಉಪ ತಹಶೀಲ್ದಾರ್ ಅಶೋಕ್ ಕೋಟೆಕಾರ್, ರವಿಕಿರಣ್, ದೇವಕಿ ಹಾಗೂ ಸಿಬ್ಬಂದಿ ವರ್ಗದವರು‌ ಉಪಸ್ಥಿತರಿದ್ದರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು.