Updated News From Kaup
ಪಡುಬಿದ್ರಿ : ವಿವಿಧ ಠಾಣೆಗಳಲ್ಲಿ ವಶಪಡಿಸಿಕೊಂಡ ಲಕ್ಷಾಂತರ ಮೌಲ್ಯದ ಮಾದಕ ವಸ್ತು ನಾಶ
Posted On: 10 Feb 2024, 05:20 PM
ಪಡುಬಿದ್ರಿ: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಸುಮಾರು 6 ಕೆಜಿ 912 ಗ್ರಾಂ ತೂಕದ ಅಂದಾಜು 2,76,000 ರೂ. ಬೆಲೆಯ ಗಾಂಜಾವನ್ನು ನಂದಿಕೂರಿನ ಔದ್ಯೋಗಿಕ ನಗರದಲ್ಲಿ ನಾಶಪಡಿಸಲಾಯಿತು. ಸೆನ್ ಠಾಣೆಯ 3 ಪ್ರಕರಣ, ಮಣಿಪಾಲ ಠಾಣೆಯ 4 ಪ್ರಕರಣ ಹಾಗೂ ಕುಂದಾಪುರ, ಕೋಟ, ಮಲ್ಪೆ ಮತ್ತು ಪಡುಬಿದ್ರಿ ಠಾಣೆಯ ತಲಾ 1 ಪ್ರಕರಣ ಸೇರಿ ಒಟ್ಟು 11 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ನ್ಯಾಯಾಲಯದ ಆದೇಶಾನುಸಾರ ನಾಶಗೊಳಿಸಲಾಗಿದೆ. ಇದರಲ್ಲಿ 2008ರ ಒಂದು ಪ್ರಕರಣ, 2011ರ ಒಂದು ಪ್ರಕರಣ, 2016ರ ಒಂದು ಪ್ರಕರಣ, 2020ರ ಎರಡು ಪ್ರಕರಣ, 2022ರ ಒಂದು ಪ್ರಕರಣ ಹಾಗೂ 2023ರ 5 ಪ್ರಕರಣ ಸೇರಿವೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷರಾದ ಡಾ. ಅರುಣ್ ಕೆ. ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಫೆ. 9 - 17 : ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ವರ್ಷಾವಧಿ ಜಾತ್ರಾ ಮಹೋತ್ಸವ ; ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು
Posted On: 10 Feb 2024, 04:54 PM
ಕಟಪಾಡಿ : ಇಲ್ಲಿನ ಶ್ರೀ ವಿಶ್ವನಾಥ ಕ್ಷೇತ್ರದ ವರ್ಷಾವಧಿ ಜಾತ್ರಾ ಮಹೋತ್ಸವವು ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪರವೂರು ರಾಕೇಶ್ ತಂತ್ರಿಯವರ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ದೇವದಾಸ ಶಾಂತಿಯವರ ಪೌರೋಹಿತ್ಯದಲ್ಲಿ ಫೆಬ್ರವರಿ 9, ಶುಕ್ರವಾರದಿಂದ, 17 ಶನಿವಾರದವರೆಗೆ ರವರೆಗೆ ಜರಗಲಿದೆ. ಜಾತ್ರಾ ಉತ್ಸವದ ಪವಿತ್ರ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಗಳು ಜರಗಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಚ್ಚಿಲ : ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾದ ನಿಧಿ ಟಿ. ಶೆಟ್ಟಿ
Posted On: 10 Feb 2024, 04:34 PM
ಉಚ್ಚಿಲ : ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಾಪು ತಾಲೂಕಿನ ಉಚ್ಚಿಲದ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲಾ ಹತ್ತನೇ ತರಗತಿಯ ವಿದ್ಯಾರ್ಥಿನಿ ನಿಧಿ ಟಿ. ಶೆಟ್ಟಿಯವರು ತುಳು ಭಾಷಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ಬಹುಮಾನ ಪಡೆದಿದ್ದಾರೆ. ಧಾರವಾಡದ ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜನತಾ ಶಿಕ್ಷಣ ಸಮಿತಿ ಸಹಯೋಗದಲ್ಲಿ ಗುರುವಾರ ಮತ್ತು ಶುಕ್ರವಾರ ಸನ್ನಿಧಿ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ನಡೆದಿದ್ದು, ಕುಮಾರಿ ನಿಧಿ ಶೆಟ್ಟಿ ತುಳು ಭಾಷಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಕುಮಾರಿ ನಿಧಿ ಶೆಟ್ಟಿಯವರನ್ನು ಶಾಲಾ ಆಡಳಿತ ಮಂಡಳಿ ಮೊಗವೀರ ಹಿತ ಸಾಧನ ವೇದಿಕೆ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ. ನಿಧಿ ಶೆಟ್ಟಿಯವರು ಕುಂಜೂರು ಕಿನ್ನೋಡಿ ಗುತ್ತು ತಿಮ್ಮಪ್ಪ ಶೆಟ್ಟಿ ಮತ್ತು ಶಾಂತ ಶೆಟ್ಟಿ, ದಂಪತಿಯ ಪುತ್ರಿ.
ಕುತ್ಯಾರು : ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ - ಧ್ಯಾನದ ಬಗ್ಗೆ ಮಾಹಿತಿ
Posted On: 10 Feb 2024, 04:21 PM
ಕುತ್ಯಾರು : ಆನೆಗುಂದಿ ಸರಸ್ವತೀ ಪೀಠದ ಕುತ್ಯಾರು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ನಲ್ಲಿ ಲಕ್ಷ್ಮೀ ನಾಯ್ಕ್ ಬೆಳ್ಮಣ್ ಇವರು ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ಧ್ಯಾನದ ಮಹತ್ವವನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ತಿಳಿಸಿದರು. ಶಾಲಾ ಉಪ ಪ್ರಾಂಶುಪಾಲೆ ಸೌಮ್ಯರವರು ಲಕ್ಷ್ಮೀ ನಾಯ್ಕರನ್ನು ಗೌರವಸಿದರು. ಅನಿತಾ ಮಾತಾಜಿ ಸ್ವಾಗತಿಸಿದರು. ರಮ್ಯಾ ಮಾತಾಜಿ ವಂದಿಸಿದರು.
ಕಾಪು : 800 ಕ್ಕೂ ಅಧಿಕ ಮಕ್ಕಳಿಗೆ ಸುಮಾರು 1.50 ಲಕ್ಷ ರೂ. ಮೌಲ್ಯದ ಶೈಕ್ಷಣಿಕ ಪರಿಕರಗಳ ವಿತರಣೆ
Posted On: 10 Feb 2024, 04:11 PM
ಕಾಪು : ಮುಂಬಯಿಯ ಮಾಜಿ ಕಾರ್ಪೊರೇಟರ್, ಜೋಸೆಫ್ ಪಟೇಲ್ ಎಸ್ಟೇಟ್ ನವರಾತ್ರಿ ದುರ್ಗಾಪೂಜಾ ಮಂಡಲ್ ಇದರ ಸ್ಥಾಪಕಿ ಕಾಪು ಗರಡಿಮನೆ ದಿ. ಗೀತಾ ಯಾದವ್ ಅವರ ಸ್ಮರಣಾರ್ಥ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾಪು ಪರಿಸರದ ವಿವಿಧ ಶಾಲೆಗಳ 800 ಕ್ಕೂ ಅಧಿಕ ಮಕ್ಕಳಿಗೆ ಸುಮಾರು 1.50 ಲಕ್ಷ ರೂ. ಮೌಲ್ಯದ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ಶೈಕ್ಷಣಿಕ ಪರಿಕರಗಳನ್ನು ವಿತರಿಸಿದ ದಿ. ಗೀತಾ ಯಾದವ್ ಅವರ ಪುತ್ರ ಸಂತೋಷ್ ಯಾದವ್ ಅವರು ಮಾತನಾಡಿ, ಕಾಪು ಗರಡಿ ಮನೆಯಲ್ಲಿ ಹುಟ್ಟಿ ಬೆಳೆದ ಮಾತೃಶ್ರೀಯವರು ಮುಂಬಯಿಯಲ್ಲಿ ಸುಮಾರು 25 ವರ್ಷಗಳ ಕಾಲ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆಗೈದು, ರಾಜಕೀಯವಾಗಿಯೂ ಬೆಳೆದಿದ್ದಾರೆ. ಇದೀಗ ನಮ್ಮೊಡನೆ ಇಲ್ಲದ ಅವರ ಸ್ಮರಣೆಗಾಗಿ ಕಳೆದ ಮೂರು ವರ್ಷಗಳಿಂದ ವಿವಿಧ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಮುಂಬಯಿಗೆ ಸೀಮಿತವಾಗಿದ್ದ ಸೇವಾ ಕಾರ್ಯಗಳನ್ನು ಅವರ ಹುಟ್ಟೂರಿನಲ್ಲಿಯೂ ನಡೆಸುವ ಮೂಲಕ ಅವರಿಗೆ ಹುಟ್ಟೂರಿನ ಬಗೆಗೆ ಇದ್ದ ಪ್ರೀತಿಯನ್ನು ವಿಸ್ತರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಕಾಪು ಗರಡಿ ರಸ್ತೆಯಲ್ಲಿರುವ ಅಂಗನವಾಡಿ, ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ವಿಶ್ವನಾಥ್ ಪೂಜಾರಿ ಕಾಪು, ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಉಷಾ, ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್. ರಾವ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ರಮಣಿ ವೈ., ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವಲಿಂಗಪ್ಪ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು : ನಿರಂತರ 12 ಗಂಟೆಗಳ ಕಾಲ ಗಾಯನ ಮಾಡಿ ವಿಶ್ವ ದಾಖಲೆ ಮಾಡಿದ ತಂಡ
Posted On: 07 Feb 2024, 05:10 PM
ಮಂಗಳೂರು : ಇಲ್ಲಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇತ್ತೀಚೆಗೆ ನಿರಂತರ 12 ಗಂಟೆಗಳ ಕಾಲ ಕನ್ನಡದ ಗೀತೆಗಳನ್ನು ಹಾಡುವ ಮೂಲಕ ವಿಶ್ವ ದಾಖಲೆ ನಿರ್ಮಾಣ ಮಾಡಿದ ಗಾಯನ ತಂಡದ ಮುಖ್ಯಸ್ಥ ಗಂಗಾಧರ್ ಗಾಂಧಿಯವರನ್ನು ಕರ್ನಾಟಕ ವಿಧಾನಸಭಾಧ್ಯಕ್ಷ ಯು. ಟಿ.ಖಾದರ್ ವಿಧಾನ ಸೌಧದ ತಮ್ಮ ಕಚೇರಿಯಲ್ಲಿ ವಿಶ್ವ ದಾಖಲೆ ಪ್ರಮಾಣ ಪತ್ರ ನೀಡಿ, ಹಾರ ಪೇಟಾ ಶಾಲು ತೊಡಿಸಿ ಅಭಿನಂದಿಸಿದರು. ಕಾರ್ಯಕ್ರಮ ಆಯೋಜಕ ಸಂಸ್ಥೆ NSCDF ನ ಅಂತಾರಾಷ್ಟ್ರೀಯ ವಕ್ತಾರೆ ಮಮತಾ ಕೋಟ್ಯಾನ್ ಮತ್ತಿತರರು ಉಪಸ್ಥಿತಿಯಿದ್ದರು. 12 ಗಂಟೆಗಳ ನಿರಂತರ ಗಾಯನ ಕಾರ್ಯಕ್ರಮದಲ್ಲಿ ರಾಣಿ ಪುಷ್ಪಲತಾ ದೇವಿ, ವರ್ಷ ಕರ್ಕೇರಾ , ಶ್ರೀ ರಕ್ಷ ಸರ್ಪಂಗಳ, ನೇತ್ರ ಖುಶಿ ಯುಗಳ ಗೀತೆಗಳಿಗೆ ಧ್ವನಿಯಾಗಿದ್ದರು.
ಕಾಪು : ಮಾನ್ಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರತಿಷ್ಠಾನ - ಸಂಸ್ಕೃತಿ ಸಂಚಯನದಲ್ಲಿ ಅನಿವಾಸಿಗರು ಚಿಂತನ ಮಂಥನ
Posted On: 07 Feb 2024, 05:02 PM
ಕಾಪು : ಮಾನ್ಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರತಿಷ್ಠಾನ ವತಿಯಿಂದ ಭಾರತೀಯ ಪ್ರವಾಸಿ ದಿನದ ಪ್ರಯುಕ್ತ ಸಂಸ್ಕೃತಿ ಸಂಚಯನದಲ್ಲಿ ಅನಿವಾಸಿಗರು ಎಂಬ ಶೀರ್ಷಿಕೆಯಡಿ ಚಿಂತನ ಮಂಥನ ಕಾರ್ಯಕ್ರಮ ಕಾಪುವಿನಲ್ಲಿ ಜರಗಿತು. ಕಾರ್ಯಕ್ರಮವನ್ನು ರಾಜಕೀಯ, ಸಾಮಾಜಿಕ ಮುಂದಾಳು ಗೀತಾಂಜಲಿ ಸುವರ್ಣ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕರಾವಳಿ ಕರ್ನಾಟಕದ ಉಭಯ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯ ಜನರು ವಿದೇಶದಲ್ಲಿ ನೆಲೆನಿಂತು ತನ್ಮೂಲಕ ತನ್ನ ಹುಟ್ಟೂರಿಗೆ ಸೇವೆಯನ್ನು ಮಾಡುತ್ತಿದ್ದು, ಅವರಿಗೂ ಕೂಡಾ ನೆರೆಯ ಕೇರಳ ರಾಜ್ಯ ಸಹಕರಿಸುವಂತೆ ನಮ್ಮಲ್ಲಿಯು ಸಂಪೂರ್ಣ ಸಹಕಾರ ಮುಂದಿನ ದಿನಗಳಲ್ಲಿ ಸರ್ಕಾರದಿಂದ ದೂರೆಯಬೇಕು ಎಂದು ಹೇಳಿದರು. ಅನಿವಾಸಿ ಪ್ರವಾಸಿಗರ ಸಂವಾದ ಹಾಗೂ ಬೆಂಗಳೂರಿನಲ್ಲಿ ಜನವರಿ 14ರಂದು ಬಿಡುಗಡೆಯಾಗಿದ್ದ ಪಿ.ಎಸ್ ರಂಗನಾಥ್ ಸಂಪಾದಕತ್ವದ ಅರಬ್ಬರ ನಾಡಿನಲ್ಲಿ ಕನ್ನಡಿಗರು ಎಂಬ ಪುಸ್ತಕವನ್ನು ಕರಾವಳಿಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಯಿತು. ಅನಿವಾಸಿಗನಾಗಿ ಎರಡು ದಶಕಗಳ ಕಾಲ ವಿದೇಶದ ಕೆಲ ವಿಚಾರಗಳನ್ನು ಶಿವಾನಂದ ಕೋಟ್ಯಾನ್ ಹಂಚಿಕೂಂಡರು. ಈ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ರಾಜ ಕಟಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಉಚ್ಚಿಲ ಬಡಾ ಗ್ರಾ.ಪಂ. : ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ
Posted On: 06 Feb 2024, 06:24 PM
ಉಚ್ಚಿಲ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಡಾ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮವನ್ನು ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್ ಉದ್ಘಾಟಿಸಿದರು. ಮಹಿಳೆಯರ ಋತು ಸ್ರಾವದ ಬಗ್ಗೆ ಹಾಗೂ ಕಿಶೋರಿಯರ ಆರೋಗ್ಯದ ಬಗ್ಗೆ ಪಡುಬಿದ್ರಿ ಪ್ರಾಥಮಿಕ ಕೇಂದ್ರದ ಆರೋಗ್ಯಾಧಿಕಾರಿ ಶಾಮಲಾ ಶೆಟ್ಟಿ ಮಾಹಿತಿ ನೀಡಿದರು. ಪೋಕ್ಸೋ ಕಾಯ್ದೆಯ ಬಗ್ಗೆ ಮಕ್ಕಳ ರಕ್ಷಣಾ ಘಟಕದ ಕಪಿಲಾರವರು ವಿವರಿಸಿದರು. ಸಿಎಚ್ಓ ಉಷ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದ ನೆನಪಿಗಾಗಿ ಗಿಡವೊಂದನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಪಿಡಿಒ ಸತೀಶ್, ಮಾಜಿ ಉಪಾಧ್ಯಕ್ಷೆ ಶಕುಂತಲಾ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಯುಸಿ ಶೇಖಬ್ಬ, ಗ್ರಾಮ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸದಸ್ಯರು, ಮಕ್ಕಳ ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶೈಲ ಸ್ವಾಗತಿಸಿ, ಪ್ರಸ್ತಾವಿಸಿದರು. ಅಂಗನವಾಡಿ ಕಾರ್ಯಕರ್ತೆ ಶಶಿಕಕಲಾ ನವೀನ್ ಕಾರ್ಯಕ್ರಮ ನಿರೂಪಿಸಿದರು. ಪ್ರಮೀಳಾ ವಂದಿಸಿದರು.
ಶಂಕರಪುರ : ರೋಟರಿ ಶಂಕರಪುರ - ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ, ಉಚಿತ ಔಷಧ ವಿತರಣಾ ಶಿಬಿರ
Posted On: 04 Feb 2024, 07:43 PM
ಶಂಕರಪುರ : ಸುಮಾರು 38 ವರ್ಷಗಳಿಂದ ಶಂಕರಪುರದ ಪರಿಸರಕ್ಕೆ ಉತ್ತಮ ಸೇವೆ ಕೊಡುತ್ತಾ ಬಂದಿರುವ ರೋಟರಿ ಶಂಕರಪುರ 1999ರಲ್ಲಿ ರೋಟರಿ ಟ್ರಸ್ಟ್ ಸ್ಥಾಪಿಸಿಕೊಂಡು ಸದಸ್ಯರು, ದಾನಿಗಳ ನೆರವಿನಿಂದ ನಿಧಿ ಸಂಗ್ರಹಿಸಿ 2003 ರಿಂದ ಪ್ರತಿ ತಿಂಗಳ ಮೊದಲ ಆದಿತ್ಯವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಹಾಗೂ ಉಚಿತ ಔಷಧ ನೀಡುವ ಶಿಬಿರವನ್ನು ನಡೆಸುತ್ತಿದ್ದು ಮಾಚ್೯ 3 ರಂದು 240ನೇ ಶಿಬಿರ ಜರಗಲಿದೆ ಎಂದು ರೋಟರಿ ಶಂಕರಪುರ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಪ್ರಾಯೋಜಕರಾದ ವಲೇರಿಯನ್ ನೊರೊನ್ಹ ಹೇಳಿದರು. ಅವರು ಶಂಕರಪುರ ರೋಟರಿ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು. 15ರಿಂದ 20 ರೋಗಿಗಳಿಂದ ಪ್ರಾರಂಭವಾಗಿ ಪ್ರಸ್ತುತ 100ಕ್ಕೂ ಅಧಿಕ ರೋಗಿಗಳು ಭಾಗವಹಿಸುತ್ತಿದ್ದಾರೆ. ದೂರದ ಊರುಗಳಿಂದಲೂ ರೋಗಿಗಳು ಬರುತ್ತಿದ್ದಾರೆ ಎಂದರು. ಉಡುಪಿಯ ಎ. ವಿ. ಬಾಳಿಗ ಆಸ್ಪತ್ರೆಯ ನಿರ್ದೇಶಕ ಹಾಗೂ ಮನೋರೋಗ ತಜ್ಞ ಡಾ.ಪಿ.ವಿ. ಭಂಡಾರಿ ಮಾತನಾಡಿ ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವು ಮುಖ್ಯವಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ, ವಯೋವೃದ್ಧರಿಗೆ ಈ ಶಿಬಿರವು ಸಹಕಾರಿಯಾಗಿದೆ. ನಂಬಿಕೆಗಳ ಜೊತೆ ವೈಜ್ಞಾನಿಕ ಚಿಕಿತ್ಸೆಯು ಅವಶ್ಯಕ. ಶಾಲೆಗಳಲ್ಲಿ ಕೌನ್ಸೆಲಿಂಗ್ ತಜ್ಞರ ಆವಶ್ಯಕತೆಯಿದೆ. ರಾಜ್ಯ ಸರ್ಕಾರ ನ್ಯಾಷನಲ್ ಸೊಸೈಡ್ ಪಾಲಿಸಿಯನ್ನು ಜಾರಿಗೆ ತಂದರೂ ಇದು ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಸರಿಯಾದ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು. ಈ ಸಂದರ್ಭ ಮನೋರೋಗ ತಜ್ಞರಾದ ಡಾ. ಶ್ರೀನಿವಾಸ್ ಭಟ್, ಡಾ. ನಾಗರಾಜ ಮೂರ್ತಿ, ಕೌನ್ಸಿಲಿಂಗ್ ತಜ್ಞೆ ವಿದ್ಯಾಶ್ರೀ, ರೋಟರಿ ಶಂಕರಪುರ ಅಧ್ಯಕ್ಷರಾದ ಜಾರ್ಜ್ ಅಡ್ವರ್ಡ್ ಡಿಸಿಲ್ವ, ಕಾರ್ಯಕ್ರಮದ ನಿರ್ದೇಶಕ ಅಡ್ವರ್ಡ್ ಮೆಂಡೋನ್ಸ, ಆಂಟೊನಿಯೊ ಡೇಸಾ, ಚಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ : ಪುರುಷೋತ್ತಮ ಪುರಸ್ಕಾರಕ್ಕೆ ರಾಘವೇಂದ್ರ ಪ್ರಭು ಕವಾ೯ಲು ಆಯ್ಕೆ
Posted On: 04 Feb 2024, 06:33 PM
ಉಡುಪಿ : ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಇದರ ವತಿಯಿಂದ ಫೆಬ್ರವರಿ 29 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣ ನಡೆಯುವ ಕಾರ್ಯಕ್ರಮದಲ್ಲಿ ಕೊಡ ಮಾಡುವ ಪುರುಷೋತ್ತಮ ಪುರಸ್ಕಾರಕ್ಕೆ ಉಡುಪಿಯ ಸಮಾಜಿಕ ಕಾರ್ಯಕರ್ತ, ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಪ್ರಭು ಕವಾ೯ಲು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯನ್ನು ಖ್ಯಾತ ಸಾಹಿತಿ ಡಾI ಷಡಷ್ಕರಿ ಪ್ರಧಾನ ಮಾಡಲಿದ್ದು, ಸಚಿವರುಗಳು ಭಾಗವಹಿಸಲಿರುವರು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಗುಣವಂತ ಮಂಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
