Updated News From Kaup

ಪಾಜಕ ಶ್ರೀವಿಶ್ವೇಶತೀರ್ಥ ಮಹಾವಿದ್ಯಾಲಯ -ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

Posted On: 25-03-2025 02:35PM

ಶಿರ್ವ : ಕುಂಜಾರುಗಿರಿ ಸಮೀಪದ ಪಾಜಕ ಶ್ರೀವಿಶ್ವೇಶತೀರ್ಥ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ, ಜೆಸಿಐ ಕಟಪಾಡಿ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕಾಲೇಜಿನ ಪ್ರಾಚಾರ್ಯ ವಿಜಯ್ ಪಿ.ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಚಿತವಾಗಿ ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಅಶಕ್ತರಿಗೆ ಹೆಚ್ಚಿನ ಪ್ರಯೋಜನವಾಗುವುದು. ವಿದ್ಯಾರ್ಥಿಗಳಲ್ಲಿ ರಕ್ತದಾನದ ಅರಿವು ಮೂಡಿಸುವುದರಜೊತೆಗೆ ಇತ್ತೀಚಿನ ದಿನಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುವುದರಿಂದ ಅಗತ್ಯ ಇರುವ ರೋಗಿಗಳಿಗೆ ಇದರ ಸದುಪಯೋಗ ಆಗುವಲ್ಲಿ ಸಹಕಾರಿಯಾಗಲಿದೆ ಎಂದರು. ಶಿಬಿರದಲ್ಲಿ ಮಹಿಳೆಯರ ಉಚಿತ ಆರೋಗ್ಯ ತಪಾಸಣೆ, ಕೀಲು, ಮೂಳೆ ತಪಾಸಣೆ, ಮಧುಮೇಹ, ಕಣ್ಣಿನ ಆರೋಗ್ಯ ತಪಾಸಣೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಆನಂದತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಕೋಶಾಧಿಕಾರಿ ಲಕ್ಷ್ಮೀನಾರಾಯಣ ಉಪಾಧ್ಯ, ಸದಸ್ಯರಾದ ಸುದರ್ಶನ್ ರಾವ್, ಆನಂದತೀರ್ಥ ವಿದ್ಯಾಲಯದ ಪ್ರಾಂಶುಪಾಲೆ ಡಾ.ಗೀತಾ ಎಸ್.ಕೋಟ್ಯಾನ್, ಉಡುಪಿ ಸಿಎಸ್‌ಐ ಲಾಂಬರ್ಡ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಣೇಶ್ ನಾಯಕ್, ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿ ಘಟಕದ ಡಾ,ವೀಣಾ ಕುಮಾರಿ, ಕಟಪಾಡಿ ಜೆಸಿಐ ಅಧ್ಯಕ್ಷೆ ರಂಜಿತಾ ಶೇಟ್, ವಲಯ ಸಂಯೋಜಕ ಪ್ರಶಾಂತ್ ಆರ್,ಎಸ್, ಪದವಿ ಕಾಲೇಜು ಸಂಯೋಜಕಿ ರಕ್ಷಿತಾ, ಕಾಲೇಜು ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಪೂಜಾ ಉಪಸ್ಥಿತರಿದ್ದರು.

170ಕ್ಕೂ ಅಧಿಕ ಜನ ಶಿಬಿರದ ಪ್ರಯೋಜನ ಪಡೆದುಕೊಂಡರು. 62 ಯುನಿಟ್ ರಕ್ತ ಸಂಗ್ರಹವಾಗಿದೆ.

ಎರ್ಮಾಳಿನಲ್ಲಿ ಯುವಕನಿಗೆ ಕಾರು ಡಿಕ್ಕಿ ; ಗಂಭೀರ

Posted On: 25-03-2025 02:21PM

ಪಡುಬಿದ್ರಿ : ಪಡುಬಿದ್ರಿ ಠಾಣಾ ವ್ಯಾಪ್ತಿಯ ಎರ್ಮಾಳು ಶ್ರೀ ಜನಾರ್ಧನ ದೇವಸ್ಥಾನದ ಎದುರು ರಾ.ಹೆ. 66ರಲ್ಲಿ ಕೊರಿಯರ್ ಸರ್ವೀಸ್ ‌ಯುವಕನಿಗೆ ಕಾರೊಂದು ಡಿಕ್ಕಿ ಹೊಡೆದು ಗಂಭಿರವಾಗಿ ಗಾಯಗೊಂಡ ಘಟನೆ ಮಂಗಳವಾರ ಘಟಿಸಿದೆ.

ಗಾಯಗೊಂಡ ಯುವಕನನ್ನು ಅದಮಾರು ಕೆಮುಂಡೇಲು ಗಣೇಶ್‌ ಆಚಾರ್ಯರವರ ಮಗ ಶರಣ್ ಆಚಾರ್ಯ ಎಂದು ಗುರುತಿಸಲಾಗಿದೆ.

ತೀವ್ರ ಗಾಯಗೊಂಡ ಯುವಕನನ್ನು ಉಚ್ಚಿಲದ ಎಸ್‌ಡಿಪಿಐ ಅಂಬುಲೆನ್ಸ್‌ನಲ್ಲಿ ಸಾರ್ವಜನಿಕರ ಸಹಕಾರದಲ್ಲಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಟೋಲ್ ವಿನಾಯಿತಿ : ಕಾಪು ಶಾಸಕರ ನೇತೃತ್ವದಲ್ಲಿ ಮನವಿ

Posted On: 24-03-2025 03:36PM

ಪಡುಬಿದ್ರಿ : ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ವಾಹನಗಳಿಗೆ ಹೆಜಮಾಡಿ ಟೋಲ್ ಗೇಟ್‌ನಲ್ಲಿ ಸುಂಕ ವಿನಾಯಿತಿ ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಮನವಿ ನೀಡಲಾಯಿತು.

ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಜಮಾಡಿಯಲ್ಲಿ ಹಲವಾರು ವರ್ಷಗಳಿಂದ ಟೋಲ್ ಗೇಟ್ ನಿರ್ಮಾಣಗೊಂಡು ಸುಂಕ ವಸೂಲಾತಿಯನ್ನು ಮಾಡುತ್ತಿದ್ದು, ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಸ್ಥಳೀಯ ವಾಹನಗಳಿಗೆ ಸುಂಕ ವಸೂಲಾತಿಯಿಂದ ವಿನಾಯಿತಿ ನೀಡಬೇಕೆಂದು ಮನವಿಯನ್ನು ಮಾಡಿದ್ದರು. ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾಸ್ತಾನ ಟೋಲ್ ಗೇಟ್ ನಲ್ಲಿ ಕೋಟಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸ್ಥಳೀಯ ವಾಹನಗಳಿಗೆ ಸುಂಕ ವಸೂಲಾತಿಯಿಂದ ವಿನಾಯಿತಿ ನೀಡಿದ್ದು, ಅದರಂತೆ ಹೆಜಮಾಡಿ ಟೋಲ್ ಗೇಟ್ ನಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯತ್ ನ ಸ್ಥಳೀಯ ವಾಹನಗಳಿಗೆ ಸುಂಕ ವಸೂಲಾತಿಯಿಂದ ವಿನಾಯಿತಿಗೊಳಿಸುವಂತೆ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶರಣ್ ಕುಮಾರ್ ಮಟ್ಟು, ಪಕ್ಷದ ಹಿರಿಯರಾದ ರಮಕಾಂತ್ ಪಡುಬಿದ್ರಿ, ಮಿಥುನ್ ಆರ್ ಹೆಗ್ಡೆ ಉಪಸ್ಥಿತರಿದ್ದರು.

ಮಾ.25ರಂದು ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದಲ್ಲಿ ಜೀರ್ಣೋದ್ದಾರ ಮೂಲನಿಧಿ ಸಮರ್ಪಣಾ ಮಹಾ ಅಭಿಯಾನಕ್ಕೆ ಚಾಲನೆ

Posted On: 23-03-2025 05:34PM

ಕಾಪು : ಮಾರ್ಚ್ 25 ಮಂಗಳವಾರ ಸುಗ್ಗಿ ಜಾತ್ರೆಯ ಪರ್ವಕಾಲದಂದು “ಕಾಪು ಶ್ರೀ ಹಳೇ ಮಾರಿಯಮ್ಮ ಸನ್ನಿಧಾನ ಜೀರ್ಣೋದ್ಧಾರ ಮಹಾ ಸಂಕಲ್ಪ" ಐತಿಹಾಸಿಕ ಕಾರ್ಯಕ್ರಮದ ಪೂರ್ವಭಾವಿಯಾಗಿ ರಾತ್ರಿ 9.30 ಗಂಟೆಗೆ ಶ್ರೀ ದೇವಳದ ಮುಂಭಾಗದ ವೇದಿಕೆಯಲ್ಲಿ "ಜೀರ್ಣೋದ್ದಾರ ಮೂಲನಿಧಿ ಸಮರ್ಪಣಾ ಮಹಾ ಅಭಿಯಾನ ಪ್ರಾರಂಭ ಸಂಬಂಧಿ "ಸಭಾ ಕಾರ್ಯಕ್ರಮ - ಜೀರ್ಣೋದ್ಧಾರ ಲಾಂಛನ ಅನಾವರಣ", ಸಮಸ್ತ ಭಕ್ತರಿಗೆ ಕಾಣಿಕೆ ಡಬ್ಬಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಪ್ರಸಾದ್ ಜಿ ಶೆಣೈ ಹೇಳಿದ್ದಾರೆ. ಅವರು ಶನಿವಾರ ಕಾಪು ಹಳೆಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾಪು ಶ್ರೀ ಹಳೆ ಮಾರಿಯಮ್ಮನ ದೇಗುಲ ಜೀರ್ಣೋದ್ಧಾರ ಆಗಬೇಕೆಂದು ಲಕ್ಷಾಂತರ ಭಕ್ತರ ಬಹು ಕಾಲದ ಕನಸಾಗಿದ್ದು, ಶ್ರೀ ದೇವಿಯ ಸಮ್ಮುಖ ಊರಿನ ಗುರು ಹಿರಿಯರ, ಗಣ್ಯರ, ಸಮಸ್ತ ಭಕ್ತಾಧಿಗಳ ಸಹಭಾಗಿತ್ವದಲ್ಲಿ ಇದಕ್ಕೆ ಮುನ್ನುಡಿ ಇಡಲಾಗುತ್ತಿದೆ.

ಅಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾಪು ಶ್ರೀ ವೆಂಕಟರಮಣ ಹಾಗೂ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಕೆ ಕಮಲಾಕ್ಷ ಭಟ್, ಧಾರ್ಮಿಕ ವಿದ್ವಾಂಸರು, ಪ್ರಸಿದ್ದ ಪಂಚಾಂಗಕರ್ತರು ಹಾಗೂ ಶ್ರೀ ವೆಂಕಟರಮಣ ದೇವಸ್ಥಾನದ ತಂತ್ರಿಗಳಾದ ಡಾ. ಎಂ. ಪಂಡಿತ್ ನರಸಿಂಹ ಆಚಾರ್ಯ ಮಂಗಳೂರು ಉಪಸ್ಥಿತರಿರುವರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾಪು ಇದರ ಮಾಜಿ ಅಧ್ಯಕ್ಷ ಗೋಕುಲ್ದಾಸ್ ಆನಂದ್ರಾಯ ಶೆಣೈ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಶಾಸಕರಾದ ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಲಾಲಾಜಿ ಅರ್ ಮೆಂಡನ್, ಜಿ.ಎಸ್.ಬಿ. ಸರ್ವ ದೇವಳಗಳ ಒಕ್ಕೂಟದ ಅಧ್ಯಕ್ಷ ಅತುಲ್ ಕುಡ್ವಾ ಮುಲ್ಕಿ, ಕಾಪು ಮಹತೋಭಾರ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕೇಸರ ಮನೋಹರ್ ಶೆಟ್ಟಿ, ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ, ಕಾಪು ಬಿಲ್ಲವ ಸಂಘದ ಅಧ್ಯಕ್ಷ ವಿಕ್ರಮ್ ಕಾಪು, ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಮಾಜಿ ಆಡಳಿತ ಮೊಕೇಸರ ಮೋಹನ್ ಬಂಗೇರ, ಕಾಪು ಶ್ರೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಕೆ. ಲಕ್ಷ್ಮೀನಾರಾಯಣ ನಾಯಕ್ ಕಾಪು, ಡಾ. ಕೆ. ನಾಗಾನಂದ ಭಟ್ ಉಪಸ್ಥಿತರಿರುವರೆಂದು ಪ್ರಸಾದ್ ಶೆಣೈ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಹ ಮೊಕ್ತೇಸರರಾದ ಸದಾಶಿವ ಕಾಮತ್, ರಾಮ ನಾಯಕ್, ಶ್ರೀಕಾಂತ್ ಭಟ್, ರಾಜೇಶ್ ಎಂ ಶೆಣೈ, ಸದಸ್ಯರಾದ ಮೋಹನದಾಸ್ ಕಿಣಿ, ಸುನಿಲ್ ಪೈ, ಚಂದ್ರಕಾಂತ್ ಕಾಮತ್, ಕೃಷ್ಣಾನಂದ ನಾಯಕ್ ಮತ್ತು ರಾಜೇಶ್ ಶೆಣೈ ಉಪಸ್ಥಿತರಿದ್ದರು.

ಪಡುಬಿದ್ರಿ : ಅರಣ್ಯ ಇಲಾಖೆ ನೆಟ್ಟ ಗಿಡಗಳನ್ನು ಜೆಸಿಬಿಯಿಂದ ಕಿತ್ತೆಸೆದ ವ್ಯಕ್ತಿ ; ದೂರು ದಾಖಲು

Posted On: 21-03-2025 01:49PM

ಪಡುಬಿದ್ರಿ : ಪಡುಬಿದ್ರಿಯ ಅಲಂಗಾರು ಎಂಬಲ್ಲಿ ರಾ. ಹೆ. 66ರ ಬದಿಯಲ್ಲಿ ಬೆಳೆದ ಗಿಡಗಳು ಜಾಹೀರಾತು ಫಲಕಗಳಿಗೆ ಅಡ್ಡವಾಗುತ್ತದೆ ಎಂದು ಅರಣ್ಯ ಇಲಾಖೆ ನೆಟ್ಟ 42 ಗಿಡಗಳು ಹಾಗೂ ಅರಣ್ಯ ಇಲಾಖೆಯ ಬೋರ್ಡನ್ನು ಜಾಹೀರಾತು ಫಲಕ ಹಾಕುವ ವ್ಯಕ್ತಿ ಜೆಸಿಬಿಯಿಂದ ಕಿತ್ತೆಸೆದ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

2023 ನೇ ವರ್ಷದ ಜೂನ್‌ ತಿಂಗಳಲ್ಲಿ ಹೊಳೆ ದಾಸವಾಳ, ಮೇ ಪ್ಲವರ್‌, ನೇರಳೆ, ಕಕ್ಕೆ ಮುಂತಾದ ಗಿಡಗಳನ್ನು ಅರಣ್ಯ ಇಲಾಖಾ ವತಿಯಿಂದ ನೆಟ್ಟಿದ್ದು ಅದರ ಪೋಷಣೆ ಕರ್ತವ್ಯವನ್ನು ಅರಣ್ಯ ಪಾಲಕ ಅಖಿಲೇಶ್ ನಿರ್ವಹಿಸಿಕೊಂಡು ಬರುತ್ತಿದ್ದು, ಎಂದಿನಂತೆ ಗಸ್ತಿನಲ್ಲಿರುವಾಗ ಈ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಜಾಹಿರಾತು ಫಲಕಗಳನ್ನು ಹಾಕುವ ರೋಶನ್‌ ಎಂಬಾತನ ವಿರುದ್ಧ ಅರಣ್ಯ ಪಾಲಕ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಶ್ರೀ ಕ್ಷೇತ್ರ ಶಂಕರಪುರ : ಉಚಿತ ಚಿನ್ನದ ಮೂಗುತಿ ಕಾರ್ಯಕ್ರಮದ ಮಾಹಿತಿ ಪತ್ರ ಬಿಡುಗಡೆ

Posted On: 21-03-2025 01:35PM

ಶಿರ್ವ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ, ಕಾಲಭೈರವ ದೇವಸ್ಥಾನ ವತಿಯಿಂದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಲ್ಲಿ 2025 ನವರಾತ್ರಿಯಂದು ನಡೆಯುವ ಉಚಿತ ಚಿನ್ನದ ಮೂಗುತಿ ಕಾರ್ಯಕ್ರಮದ ಮಾಹಿತಿ ಪತ್ರ ವೀಣಾ ಶೆಟ್ಟಿ ಹಾಗೂ 5 ಕನ್ಯೆಯರಿಂದ ಕ್ಷೇತ್ರದಲ್ಲಿ ಬಿಡುಗಡೆಯಾಯಿತು.

ಸನಾತನ ಹಿಂದೂ ಧರ್ಮದ ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಹೆಣ್ಣು ಮಕ್ಕಳ ಭಾಗ್ಯೋದಯದ ಬೆಳಕು ಶ್ರೀ ಸೌಭಾಗ್ಯ ಕಾರ್ಯಕ್ರಮದಡಿಯಲ್ಲಿ 9 ರಿಂದ 19 ವರ್ಷದ 1008 ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ನವರಾತ್ರಿ ದುರ್ಗಾಷ್ಟಮಿಯ ಪರ್ವ ಕಾಲದಲ್ಲಿ ನಡೆಯಲಿದೆ.

ಈ ಸಂದರ್ಭ ಶ್ರೀ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.

ಅಂತಾರಾಷ್ಟ್ರೀಯ ವಾಸ್ತುತಜ್ಞ ಚಂದ್ರಶೇಖರ ಸ್ವಾಮೀಜಿ ದಂಪತಿ ಕಾಪು ಮಾರಿಯಮ್ಮ ಸನ್ನಿಧಾನ ಭೇಟಿ

Posted On: 20-03-2025 06:09PM

ಕಾಪು : ಆಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತು ತಜ್ಞ, ವ್ಯೆಜ್ಞಾನಿಕ ಜ್ಯೋತಿಷಿ ಶ್ರೀಚಂದ್ರಶೇಖರ ಸ್ವಾಮೀಜಿ ದಂಪತಿ ಹಾಗೂ ಪುತ್ರ ಮತ್ತು ಅವರ ಹಿರಿಯ ಸಹೋದರ ವಿಶ್ವನಾಥ್ ಭಟ್ ದಂಪತಿ ಕುಟುಂಬ ಸಮೇತರಾಗಿ ಇತಿಹಾಸ ಪ್ರಸಿದ್ಧ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಅವರು ಅಭಿವೃದ್ಧಿ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳ ಸಮಕ್ಷಮದಲ್ಲಿ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು.

ಪ್ರಚಾರ ಸಮಿತಿ ಪ್ರಧಾನ ಸಂಚಾಲಕ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಜಿರ್ಣೋದ್ಧಾರ ನಡೆದು ಬಂದ ಹಾದಿ ಮತ್ತು ಮುಂದಿನ ಕಾರ್ಯ ಯೋಜನೆಯ ಬಗ್ಗೆ ವಿವರಿಸಿದರು. ಶ್ರೀ ಚಂದ್ರಶೇಖರ ಸ್ವಾಮೀಜಿ ದೇವಳದ ವಾಸ್ತುಶಿಲ್ಪವನ್ನು ಕಂಡು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಶೇಖರ್ ಸಾಲ್ಯಾನ್, ಮನೋಹರ್ ರಾವ್ ಕಲ್ಯ, ನವದುರ್ಗಾ ಲೇಖನ ಯಜ್ಞ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾಂಜಲಿ ಎಮ್. ಸುವರ್ಣ, ಕಾರ್ಯಾಧ್ಯಕ್ಷೆ ಸಾವಿತ್ರಿ ಗಣೇಶ್, ಪ್ರಬಂಧಕ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ : ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ

Posted On: 20-03-2025 03:25PM

ಪಡುಬಿದ್ರಿ : ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಾಕಷ್ಟು ಸವಲತ್ತುಗಳು ಜನಸಾಮಾನ್ಯರಿಗೆ ಲಭ್ಯವಿದ್ದು, ಅರ್ಹ ಫಲಾನುಭವಿಗಳು ವಿವಿಧ ಇಲಾಖೆಗಳನ್ನು ಸಂಪರ್ಕಿಸಿ, ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ತಿಳಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪಡುಬಿದ್ರಿ ಬೇಂಗ್ರೆಯ ಗಜಾನನ ಜ್ಞಾನ ವಿಕಾಸ ಕೇಂದ್ರದ ಮಹಿಳಾ ಸದಸ್ಯರಿಗೆ ಸರಕಾರಿ ಸವಲತ್ತುಗಳ ಕುರಿತು ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸರಕಾರವು ವಿವಿಧ ವರ್ಗಗಳಿಗಾಗಿ ವಿವಿಧ ಇಲಾಖೆ, ನಿಗಮ, ಮಂಡಳಿಗಳನ್ನು ರೂಪಿಸಿ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಹಂತ ಹಂತವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೂಡಾ ಸವಲತ್ತುಗಳಿಗಾಗಿ ಗ್ರಾಮ ಒನ್, ಕರ್ನಾಟಕ ಒನ್, ಸಿಎಸ್‌ಸಿ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಬೇಂಗ್ರೆಯ ಗಜಾನನ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ಸುಶೀಲಾ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿ ಸರಿತಾ, ಭವ್ಯ, ಸೇವಾ ಪ್ರತಿನಿಧಿ ಸುನೀತಾ ಉಪಸ್ಥಿತರಿದ್ದರು. ಶಕುಂತಳ ಸ್ವಾಗತಿಸಿ, ವಂದಿಸಿದರು.

ಕಾಪು ಜಮಾತೆ ಇಸ್ಲಾಂ ವತಿಯಿಂದ ಸೌಹಾರ್ದ ಸಂವಾದ

Posted On: 20-03-2025 11:53AM

ಕಾಪು : ಕಾಪು ಜಮಾತೆ ಇಸ್ಲಾಂ ವತಿಯಿಂದ ಕಾಪು ಕೊಂಬಗುಡ್ಡೆಯಲ್ಲಿ ರಂಜಾನ್ ಪ್ರಯುಕ್ತ ಸೌಹಾರ್ದ ಸಂವಾದವು ಅನ್ವರ್ ಆಲಿ ಇವರ ಗೃಹದಲ್ಲಿ ಬುಧವಾರ ಜರಗಿತು.

ಜಮಾತೆ ಇಸ್ಲಾಂ ನಿಕಟಪೂರ್ವ ಜಿಲ್ಲಾಧ್ಯಕ್ಷ ಶಬೀರ್ ಮಾತನಾಡಿ, ರಂಜಾನ್ ಉಪವಾಸ ಹಸಿವನ್ನು ಅರಿಯುವುದರ ಜೊತೆಗೆ ಅಂಗಾಂಗಳನ್ನು ಹತೋಟಿಯಲ್ಲಿಡುವ ಉಪವಾಸವಾಗಿದೆ. ಇಂದು ಜಿಹಾದ್ ಬಹು ಚರ್ಚಿತ ವಿಷಯವಾಗಿದ್ದು, ನಿಜವಾದ ಅರ್ಥದಲ್ಲಿ ಜಿಹಾದ್ ನಮ್ಮೊಳಗಿನ ಆಂತರ್ಯದ ಸಂಘರ್ಷ. ಭಾರತ ಶಾಂತಿಯ ತೋಟ. ನಾವೆಲ್ಲರೂ ಸಹೋದರತ್ವದಲ್ಲಿ ಬಾಳಬೇಕಾಗಿದೆ ಎಂದರು. ವಾಗ್ಮಿ, ಸಂಸ್ಕೃತ ವಿದ್ವಾಂಸರಾದ ಡಾ.ಗಣೇಶ್ ಭಟ್ ಮಾತನಾಡಿ, ಪ್ರತಿ ಧರ್ಮದ ತಿರುಳು ಸಮಾನತೆಯಾಗಿದೆ. ವಸುದೈವ ಕುಟುಂಬಕಂ ಎನ್ನುವ ಭಾರತ ದೇಶದಲ್ಲಿ ಸರ್ವರೂ ಸಮಾನರು ಎಂದರು.

ಈ ಸಂದರ್ಭ ಕಾಪು ಜಮಾತೆ ಇಸ್ಲಾಂ ಕಾಪು ತಾಲೂಕಿನ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕುರಾನ್ ಪಠಿಸಿ ಸಂದೇಶ ನೀಡಿದರು. ಇದೇ ಸಂದರ್ಭ ಧಾರ್ಮಿಕ ಚಿಂತನೆಗಳ ಬಗೆಗೆ ಸಂವಾದವು ನಡೆಯಿತು.

ಈ ಸಂದರ್ಭ ಪತ್ರಕರ್ತರಾದ ಬಾಲಕೃಷ್ಣ ಪೂಜಾರಿ, ಮಹಮ್ಮದ್ ಶಾರೂಕ್, ದೀಪಕ್ ಬೀರ, ಮಹಮ್ಮದ್ ಇಕ್ಬಾಲ್, ಪತ್ರಿಕಾ ವಿತರಕ ಅರುಣ್ ಕಾಮತ್, ಮಜೂರು ಗ್ರಾ.ಪಂ.ಸದಸ್ಯ ಭಾಸ್ಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಯುಎಇ ಸಂಘಟಕ ಸರ್ವೋತ್ತಮ ಶೆಟ್ಟಿ ಅಬಧಾಬಿಯವರಿಗೆ ಮಾತೃ ವಿಯೋಗ

Posted On: 20-03-2025 11:01AM

ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಂತರಾಷ್ಟ್ರೀಯ ಸೇವಾ ಸಮಿತಿಯ ಅಧ್ಯಕ್ಷ, ಯುಎಇ ಸಂಘಟಕ ಸರ್ವೋತ್ತಮ ಶೆಟ್ಟಿ ಅಬಧಾಬಿಯವರ ಮಾತೃಶ್ರೀ ಶತಾಯುಷಿ ಸರಸ್ವತಿ ಸೂರಪ್ಪ ಹೆಗ್ಡೆ (102)ಅವರು ನಿಧನರಾಗಿದ್ದಾರೆ.

ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದು, ಗಣ್ಯರು ಅಗಲಿದ ಆತ್ಮಕ್ಕೆ ಶಾಂತಿ ಕೋರಿದ್ದಾರೆ.