Updated News From Kaup
ಕನ್ನಡ ಸಂಘ ಬಹರೈನ್ಗೆ ಒಂದು ಕೋಟಿ ರೂಪಾಯಿಗಳ ಅನುದಾನ – ಮುಖ್ಯಮಂತ್ರಿಗಳ ಅನುಮೋದನೆ
Posted On: 13 Sep 2025, 08:47 AM
ಕಾಪು : ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿಶೇಷ ಶಿಫಾರಸಿನ ಮೇರೆಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕನ್ನಡ ಸಂಘ ಬಹರೈನ್ಗೆ ಒಂದು ಕೋಟಿ ರೂಪಾಯಿಗಳ ಅನುದಾನವನ್ನು ಅಧಿಕೃತವಾಗಿ ಅನುಮೋದಿಸಿದ್ದಾರೆ. ಈ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿಧಾನ ಪರಿಷತ್ತಿನ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ, ಅನಿವಾಸಿ ಭಾರತೀಯ ಸಮಿತಿ – ಕರ್ನಾಟಕ ಇದರ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರ ಉಪಸ್ಥಿತಿಯಲ್ಲಿ, ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅವರು ಮುಖ್ಯಮಂತ್ರಿಗಳಿಗೆ ಅನುದಾನಕ್ಕಾಗಿ ಮನವಿ ಸಲ್ಲಿಸಿದರು. ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರದ ಅನುದಾನ ನಿಧಿಯಿಂದ ಬಿಡುಗಡೆ ಮಾಡಲು ಅನುಮತಿ ನೀಡಿದ್ದಾರೆ. ಇತ್ತೀಚೆಗೆ ಕನ್ನಡ ಸಂಘ ಕಟ್ಟಡ ಸಮುಚ್ಚಯ ವಿದೇಶದಲ್ಲಿ ನಿರ್ಮಿತ ಪ್ರಥಮ ಕನ್ನಡ ಭವನವನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಂಘದ ಮೂಲಭೂತ ಅಗತ್ಯಗಳು ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಧನಸಹಾಯ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದರು. ಮುಖ್ಯಮಂತ್ರಿಗಳ ಈ ಅನುಮೋದನೆಯೊಂದಿಗೆ, ಕನ್ನಡ ಸಂಘ ಬಹರೈನ್ ತನ್ನ ಮೂಲಸೌಕರ್ಯ, ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ಮಹತ್ವದ ನೆರವನ್ನು ಪಡೆಯಲಿದೆ ಹಾಗೂ ಸಂಘದ ಅಧ್ಯಕ್ಷರಾದ ಅಜಿತ್ ಬಂಗೇರ ಅವರು ವೈಯಕ್ತಿಕವಾಗಿ ಹಾಗೂ ಬಹರೈನ್ ಕನ್ನಡಿಗರ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಪ್ರವಾದಿಗಳು ದೇವನ ಆದೇಶದಂತೆ ಬದುಕಿ ತೋರಿಸಿದವರು : ಆಲ್ಬನ್ ರೋಡ್ರಿಗಸ್
Posted On: 12 Sep 2025, 03:01 PM
ಕಾಪು : ಪ್ರವಾದಿ ಮುಹಮ್ಮದರು ದೇವನ ವತಿಯಿಂದ ಭೂಮಿಯ ಮೇಲೆ ನಿಯುಕ್ತಿಗೊಂಡ ಪ್ರವಾದಿ. ದೇವನ ಆದೇಶದಂತೆ ಬದುಕಿ ತೋರಿಸಿದವರು. ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಸಮಾಜ ಕೆಟ್ಟು ಹೋದ ಸಂಧರ್ಭದಲ್ಲಿ ಜನ ಕಲ್ಯಾಣಕ್ಕಾಗಿ ದೇವನು ಆಯಾಯ ಕಾಲದಲ್ಲಿ ಮನುಷ್ಯರ ನಡುವಿನಿಂದಲೇ ಪ್ರವಾದಿಗಳನ್ನು ಸೃಷ್ಟಿಸುತ್ತಾನೆ ಎಂದು ಕಾಪು ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಆಲ್ಬನ್ ರೋಡ್ರಿಗಸ್ ಹೇಳಿದರು. ಅವರು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕಾಪು ತಾಲೂಕು ಘಟಕ ವತಿಯಿಂದ ಹೋಟೆಲ್ ಕೆ. ಒನ್. ನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಪರಿಸ್ಥಿತಿ ಮತ್ತು ಪ್ರವಾದಿ ಸಂದೇಶ ಎಂಬ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಮಾತನಾಡಿ, ಕೋಮುವಾದ ಮತ್ತು ಜಾತಿ ವಾತ್ಸಲ್ಯಕ್ಕೆ ಮಹತ್ವ ನೀಡುವ ಕಾರಣ ಸಮಾಜದಲ್ಲಿ ಮಾನವೀಯತೆ, ಸೌಹಾರ್ದತೆ ಕೆಡುತ್ತದೆ. ಆದ್ದರಿಂದ ನಾವು ಹೃದಯ ವೈಶ್ಯಾಲ್ಯತೆ ಮೆರೆತು ಅನೋನ್ಯತೆಯಿಂದ ಬದುಕಬೇಕು ಎಂದು ತಿಳಿಸಿದರು. ಜಮಾ ಅತೆ ಇಸ್ಲಾಮೀ ಹಿಂದ್ ನ ಮಂಗಳೂರು ವಲಯ ಸಂಚಾಲಕರಾದ ಸಯೀದ್ ಇಸ್ಮಾಯಿಲ್ ರವರು ಮಾತನಾಡಿ, ಪ್ರವಾದಿ ಮುಹಮ್ಮದ್ ಸ. ರವರು ಸಮಾಜದಲ್ಲಿ ಇರುವ ಬಡ್ಡಿ, ವ್ಯಭಿಚಾರ, ಮಧ್ಯಪಾನ, ಜೂಜಾಟ, ಮೋಸ, ವಂಚನೆ, ಅವ್ಯವಹಾರ ಮಿತವಿಲ್ಲದ ಬಹು ಪತ್ನಿತ್ವ ದ ಬಗ್ಗೆ ಕುರ್ ಆನ್ ನ ಆದೇಶದಂತೆ ಯಾವಾಗ ಧ್ವನಿ ಎಬ್ಬಿಸಿದರೋ, ಅಂದಿನಿಂದ ಪ್ರಾಮಾಣಿಕ ಮತ್ತು ಸತ್ಯವಂತ ಎಂಬ ಬಿರುದಾಂಕಿತ ವ್ಯಕ್ತಿಯೆಂದು ನೋಡದೆ ಅರಬರು ಪ್ರವಾದಿಯನ್ನು ಮಕ್ಕಾ ತೊರೆಯುವಂತೆ ಮಾಡುತ್ತಾರೆ. ಆದರೆ ಅದೇ ಪ್ರವಾದಿ, ಜನರೊಂದಿಗೆ ಉತ್ತಮವಾಗಿ ವರ್ತಿಸಲು, ಮರ್ದಿತರಿಗೆ ನೆರವಾಗಲು, ವಿಧವೆಯರಿಗೆ ಆಶ್ರಯ ನೀಡಲು, ಜನರೊಂದಿಗೆ ಕರುಣೆ ತೋರಲು, ಮುಗುಳು ನಗೆಯೊಂದಿಗೆ ವರ್ತಿಸಲು , ಜನರೊಂದಿಗೆ ನ್ಯಾಯ ಪಾಲಿಸಲು ಬೋಧಿಸುತಿದ್ದರು. ಅವರು ಕೆಟ್ಟು ಹೋಗಿದ್ದ ಅರಬ್ ರಾಷ್ಟ್ರದಲ್ಲಿ 23 ವರ್ಷಗಳಷ್ಟು ಕಾಲ ಸದ್ಬೋಧನೆ ಮಾಡುತ್ತಾ, ಕೆಡುಕುಗಳನ್ನು ಒಳಿತುಗಳ ಮೂಲಕ ದೂರಿಕರಿಸುತ್ತಾ, ನ್ಯಾಯ ಪಾಲಿಸುತ್ತಾ, ಅನೋನ್ಯತೆಯಿಂದ, ಸಹೋದರತೆಯಿಂದ, ಸೌಹಾರ್ದಾತೆಯಿಂದ ಕೂಡಿದ ಸಮಾಜವನ್ನು ಕಟ್ಟುತ್ತಾರೆ. ಅವರ ಬೋಧನೆಯನ್ನು ಇಂದೂ ಜನರು ಪಾಲಿಸಿ ಅನುಸರಿಸಿದರೆ ನಮ್ಮಲ್ಲಿಯೂ ಕೂಡಾ ಅಂತಹ ವಾತಾವರಣವನ್ನು ನಿರ್ಮಿಸಬಹುದು ಎಂದು ಹೇಳಿದರು. ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಮುಹಮ್ಮದ್ ಮೌಲಾರವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಂತಿ ಪ್ರಕಾಶನ ಮಂಗಳೂರು ಪ್ರಕಟಿಸಿದ ಪತ್ರಕರ್ತ ಅಬ್ದುಸ್ಸಲಾಮ್ ಪುತ್ತಿಗೆ ಬರೆದ ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದರ (ಸ) ಆದರ್ಶದ ಔಚಿತ್ಯ ಮತ್ತು ಪ್ರವಾದಿ ಮುಹಮ್ಮದರನ್ನು (ಸ) ಅರಿಯಿರಿ ಎಂಬ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷರು ಜನಾಬ್ ಶಭಿಹ್ ಅಹಮದ್ ಕಾಝಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ, ಜಿಲ್ಲಾ ಕೋಶಾಧಿಕಾರಿ ಸಯ್ಯದ್ ಫರೀದ್ ಉಪಸ್ಥಿತರಿದ್ದರು. ಕಾರ್ಯಕ್ರಮವು ಮಾಸ್ಟರ್ ಮುಹಮ್ಮದ್ ರಾಯಿಫ್ ರವರ ಕುರ್ ಆನ್ ಪಠನದೊಂದಿಗೆ ಪ್ರಾರಂಭವಾಯಿತು. ಕಾಪು ತಾಲೂಕು ಘಟಕದ ಅಧ್ಯಕ್ಷರಾದ ನಸೀರ್ ಅಹಮದ್ ರವರು ಸ್ವಾಗತಿಸಿದರು. ಒಕ್ಕೂಟದ ಜಿಲ್ಲಾ ಸಮಿತಿಯ ಸದಸ್ಯರು ಅನ್ವರ್ ಅಲಿ ಕಾಪು ಪ್ರಸ್ತಾವನೆಗೈದರು. ಕೋಶಾಧಿಕಾರಿ ಬಿ. ಎಂ. ಮೊಯಿದಿನ್ ವಂದಿಸಿ, ತಾಲೂಕು ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ರವರು ಕಾರ್ಯಕ್ರಮ ನಿರೂಪಿಸಿದರು.
ರಾ.ಹೆ.ಯ ಗುಂಡಿ ಮುಚ್ಚಿಸಿ : ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ರಿಂದ ಡಿ.ಸಿ.ಗೆ ಮನವಿ
Posted On: 12 Sep 2025, 02:55 PM
ಉಡುಪಿ : ಉಡುಪಿ ಜಿಲ್ಲೆಯ ಮಣಿಪಾಲ -ಪರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಪಾಯಕಾರಿಯಾದ ದೊಡ್ಡ ದೊಡ್ಡ ಗುಂಡಿಗಳಿಂದ ವಾಹನ ಸಂಚಾರಕ್ಕೆ ಕಷ್ಟಕರವಾಗಿದ್ದು. ಇದ್ದರಿಂದ ಹಲವಾರು ದಿನಗಳಿಂದ ರಸ್ತೆ ಅಪಘಾತಗಳು ನಡೆಯುತ್ತಿದ್ದು. ಈ ಮಾರ್ಗವಾಗಿ ದಿನನಿತ್ಯ ಸಂಚಾರಿಸುವ ಶಾಲಾ -ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಕರ್ನಾಟಕ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ಉಡುಪಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು. ಈ ಅಪಾಯಕಾರಿ ಗುಂಡಿಗಳಿಂದ ಎಷ್ಚೋ ಜನರ ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುತ್ತಾರೆ. ಮೊನ್ನೆಯಷ್ಟೆ ದ.ಕ ಜಿಲ್ಲೆಯ ಕೂಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಗುಂಡಿಯಿಂದ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ತನ್ನ ಅಮೂಲ್ಯ ಜೀವ ಕಳೆದು ಕೊಂಡಿರುವುದರಿಂದ, ಈ ಗುಂಡಿಗಳಿಂದ ಇನ್ನಷ್ಟು ಜೀವಗಳು ಕಳೆದು ಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ ಸಂಬಂಧಪಟ್ಟ ಇಲಾಖೆಯವರಿಂದ ತ್ವರಿತಗತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳನ್ನು ಮುಚ್ಚಿಸಿ ಮುಕ್ತ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಯವರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ತುರ್ತಾಗಿ ಮುಚ್ಚಿಸುವ ಭರವಸೆ ನೀಡಿದರು.
ಪಲಿಮಾರು ಸ.ಪ.ಪೂ.ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
Posted On: 10 Sep 2025, 06:36 PM
ಪಲಿಮಾರು : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಡುಬಿದ್ರಿ ಠಾಣೆಯ ಉಪನಿರೀಕ್ಷಕರಾದ ಸಕ್ತಿವೇಲು, ಶಿಕ್ಷಣ ಪಡೆಯುವ ಹಂತದಲ್ಲಿ ಸಾಧನೆಯ ಕಡೆಗೆ ಗಮನವಿರಬೇಕು. ಮಕ್ಕಳು ಡ್ರಗ್ಸ್ ಸೇವನೆಗೆ ಬಲಿಯಾಗಬಾರದು. ಖಿನ್ನತೆ, ಆತ್ಮಹತ್ಯೆಗೆ ಶರಣಾಗುವುದರಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ ಎಂದು ಹೇಳಿದರು. ಈ ಸಂದರ್ಭ ಪಲಿಮಾರು ಸರಕಾರಿ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ಮಾಧವ ಸಾಲ್ಯಾನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಲಿಮಾರು ಒಕ್ಕೂಟದ ಅಧ್ಯಕ್ಷರಾದ ಆಶಾ ಮತ್ತಿತರರು ಉಪಸ್ಥಿತರಿದ್ದರು. ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಪ್ರಾಂಶುಪಾಲೆ ಗ್ರೆಟ್ಟಾ ಮೊರಸ್ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಡುಬಿದ್ರಿ ವಲಯ ಮೇಲ್ವಿಚಾರಕರಾದ ಸರಿತಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸುಶ್ಮಿತಾ ವಂದಿಸಿದರು.
ಸೆ.12 : ಬೆಳಪು ಗ್ರಾಮ ಪಂಚಾಯತ್ ಗೆ ಆರ್.ಬಿ.ಐ ನಿರ್ದೇಶಕರ ತಂಡ ಭೇಟಿ
Posted On: 10 Sep 2025, 09:54 AM
ಕಾಪು : ಬೆಳಪು ಗ್ರಾಮ ಪಂಚಾಯತಿಗೆ ಸೆ.12 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಭಾರತ ಸರಕಾರದ ಆರ್.ಬಿ.ಐ ನಿರ್ದೇಶಕರಾದ ಸೋನಾಲಿ ಸೇನ್ ಗುಪ್ತ, ಆರ್.ಬಿ.ಐ ಬೆಂಗಳೂರು ಎ.ಜಿ.ಎಂ ಅರುಣ್ ಕುಮಾರ್. ಯೂನಿಯನ್ ಬ್ಯಾಂಕಿನ ಜನರಲ್ ಮ್ಯಾನೇಜರ್ ರಾಜೇಂದ್ರ ಕುಮಾರ್ ಹಾಗೂ ಯೂನಿಯನ್ ಬ್ಯಾಂಕ್ ನ ರೀಜನಲ್ ಮ್ಯಾನೇಜರ್ ಅಶೋಕ್ ಕುಮಾರ್. ಲೀಡ್ ಬ್ಯಾಂಕ್ ಮ್ಯಾನೇಜರ್, ಕೆನರಾ ಬ್ಯಾಂಕ್ ಹರೀಶ್ ಜಿ. ಯೂನಿಯನ್ ಬ್ಯಾಂಕ್ ಡೆಪ್ಯೂಟಿ ರೀಜನಲ್ ಮುಖ್ಯಸ್ಥ ಸತ್ಯ ಬ್ರತೋ ಭಾದುರಿರವರ ಉನ್ನತ ಮಟ್ಟದ ತಂಡ ಪಂಚಾಯತ್ ಮಟ್ಟಕ್ಕೆ ಪ್ರಥಮವಾಗಿ ಬೆಳಪು ಗ್ರಾಮವನ್ನು ಆಯ್ಕೆ ಮಾಡಿ ಭೇಟಿ ನೀಡಲಿದ್ದಾರೆಂದು ಬೆಳಪು `ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ|ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ. ಬೆಳಪು ಗ್ರಾಮದ ಅಭಿವೃದ್ಧಿ ಯೋಜನೆಗಳು ಗ್ರಾಮೀಣ ಭಾಗದ ಜನರ ಆರ್ಥಿಕ ಸಬಲೀಕರಣ, ಭಾರತ ಸರಕಾರದಿಂದ ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಬ್ಯಾಂಕಿನಿಂದ ದೊರಕುವ ಸವಲತ್ತು ಬಳಸಿರುವ ಬಗ್ಗೆ, ವಿದ್ಯಾರ್ಥಿಗಳಿಗೆ ಬ್ಯಾಂಕಿನ ಸೌಲಭ್ಯ, ಗ್ರಾಮೀಣ ಕೈಗಾರಿಕೆಗಳಿಗೆ ರೈತರಿಗೆ, ಕೂಲಿ ಕಾರ್ಮಿಕರಿಗೆ ಭಾರತ ಸರಕಾರದ ಆಯುಷ್ಮಾನ್ ಅನುಷ್ಠಾನದ ಬಗ್ಗೆ, ಬ್ಯಾಂಕಿನ ಸಾಲ ಸೌಲಭ್ಯದ ಯೋಜನೆಯ ಕುರಿತು ನೇರವಾಗಿ ಸಮಾಲೋಚನೆ ನಡೆಸಬಹುದೆಂದರು. ಒಂದು ಗ್ರಾಮಕ್ಕೆ ಭಾರತ ಸರಕಾರದ ಅತ್ಯುನ್ನತ ಹಣಕಾಸು ಸಂಸ್ಥೆ ಆರ್.ಬಿ.ಐ ನಿರ್ದೇಶಕರ ತಂಡ ಭೇಟಿ ನೀಡಿ ಆರ್ಥಿಕ ಪ್ರಗತಿಯ ಪರಿಶೀಲನೆ ನಡೆಸುವುದು ನಮಗೆಲ್ಲ ಹೆಮ್ಮೆ ಎನಿಸಿದೆ. ಆರ್.ಬಿ.ಐ ನಡೆ ಹಳ್ಳಿ ಕಡೆ ನಿಜಕ್ಕೂ ಒಂದು ಸೌಭಾಗ್ಯ. ಇದರಿಂದ ಗ್ರಾಮೀಣ ಜನರಿಗೆ ಬ್ಯಾಂಕಿನ ಸವಲತ್ತುಗಳ ಪ್ರಯೋಜನ ಪಡೆದುಕೊಳ್ಳಲು ಮತ್ತು ಆಗುತ್ತಿರುವ ಸಮಸ್ಯೆಗೆ ನೇರ ಪರಿಹಾರ ಕಂಡುಕೊಳ್ಳಬಹುದೆಂದು ಇದರ ಪ್ರಯೋಜನ ಸಾರ್ವಜನಿಕರು ಪಡೆದುಕೊಳ್ಳುವಂತೆ ಬೆಳಪು ಪಂಚಾಯತ್ ಅಧ್ಯಕ್ಷರು ವಿನಂತಿಸಿಕೊಂಡಿದ್ದಾರೆ.
ಉಡುಪಿ : ಸಂತೆಕಟ್ಟೆ ಬಿಲ್ಲವರ ಸೇವಾಸಂಘ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮದಿನಾಚರಣೆ
Posted On: 09 Sep 2025, 12:06 PM
ಉಡುಪಿ : ಸಂತೆಕಟ್ಟೆ ಬಿಲ್ಲವರ ಸೇವಾಸಂಘ ನಯಂಪಳ್ಳಿ - ಸಂತೆಕಟ್ಟೆ ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಭಜನೆ ಹಾಗು ಗುರುಪೂಜೆಯು ಜರಗಿತು. ಸನ್ಮಾನ : ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ವಿಧುಷಿ ದೀಕ್ಷಾ ವಿ., ಶಿಕ್ಷಣ ಕ್ಷೇತ್ರದಲ್ಲಿ ಅಬಾಕಸ್ ಸ್ಪರ್ಧೆ ಯಲ್ಲಿ ಹಲವಾರು ಪ್ರಶಸ್ತಿ ಗಳಿಸಿದ ಕುಮಾರಿ ಜಿಶ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ದಿನೇಶ್ ಪೈ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂಧರ್ಭ ದಲ್ಲಿ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ನಿಕಟಪೂರ್ವ ಶಾಸಕರಾದ ಕೆ. ರಘುಪತಿ ಭಟ್, ಬ್ರಹ್ಮಾವರ ಬಿಲ್ಲವ ಸಂಘದ ಅಧ್ಯಕ್ಷರಾದ ಬಿ. ಎನ್. ಶಂಕರ್ ಪೂಜಾರಿ, ಉಡುಪಿ ಬಿಲ್ಲವ ಯುವವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಎಮ್. ಪೂಜಾರಿ, ಅಭಿವೃದ್ಧಿ ಸಮಿತಿಯ ಗೌ. ಅಧ್ಯಕ್ಷರಾದ ಶಾಮ್ ಕೆ. ಪೂಜಾರಿ, ಸಂಘದ ಗೌ. ಅಧ್ಯಕ್ಷರಾದ ಭಾಸ್ಕರ್ ಕೆ. ಜತ್ತನ್, ಅಧ್ಯಕ್ಷರಾದ ಶೇಕರ್ ಗುಜ್ಜರ್ ಬೆಟ್ಟು, ಉಪಾಧ್ಯಕ್ಷರುಗಳಾದ ವಿಠ್ಠಲ ಪೂಜಾರಿ, ಟಿ. ರಾಮ ಪೂಜಾರಿ, ಗಣೇಶ್ ಕೋಟ್ಯಾನ್, ಹೇಮರಾಜ ಅಮೀನ್, ಜಗದೀಶ್ ಕೆಮ್ಮಣ್ಣು, ಪ್ರ. ಕಾರ್ಯದರ್ಶಿ ಮುರಳೀಧರ ಸುವರ್ಣ, ಕೋಶಾಧಿಕಾರಿ ಉಮೇಶ್ ಪೂಜಾರಿ, ಪ್ರಧಾನ ಅರ್ಚಕರಾದ ಶಂಕರ್ ಪೂಜಾರಿ, ಸಹಾಯಕರಾದ ಉಮೇಶ್ ಜತ್ತನ್, ಸಂಘದ ಸದಸ್ಯರಾದ ಗೋಪಾಲ್ ಪೂಜಾರಿ, ಸುರೇಶ್ ಮೂಡುಬೆಟ್ಟು, ಗೋವರ್ಧನ್ ಜತ್ತನ್, ಮಹಾಬಲ ಪೂಜಾರಿ, ಸುರೇಶ್ ಸುವರ್ಣ, ಮಿತ್ರ ಕುಮಾರ್, ಸುಧಾಕರ್ ಕೋಟ್ಯಾನ್, ಸುರೇಶ್ ಅಮೀನ್, ಯೋಗೀಶ್ ಪೂಜಾರಿ, ಸುರೇಶ್ ಸಿ. ಎಸ್. ಕೆ, ಮಾಧವ ಸನಿಲ್ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಉಷಾ ವಸಂತ್, ಕಾರ್ಯದರ್ಶಿ ವಂದನಾ ಸುರೇಶ್ ಮತ್ತು ಮಹಿಳಾ ಘಟಕದ ಸದಸ್ಯೆಯರು ಉಪಸ್ಥಿತರಿದ್ದರು.
ವಿಶ್ವಕರ್ಮ ಸಮಾಜದ ಸಂಘ ಸಂಸ್ಥೆಗಳಿಂದ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪಡುಕುತ್ಯಾರ್ ಗೆ ಪಾದಯಾತ್ರೆ
Posted On: 09 Sep 2025, 11:54 AM
ಕಾಪು : ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಕಡಂಬು ಮಟ್ಟಾರ್ ಮತ್ತು ಕಾಳಿಕಾಂಬಾ ಮಹಿಳಾ ಮಂಡಳಿ ಕಡಂಬು ಇದರ ಜಂಟಿ ಆಶ್ರಯದಲ್ಲಿ ಶ್ರೀ ಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪಡುಕುತ್ಯಾರ್ ಗೆ ಪಾದಯಾತ್ರೆ ನಡೆಯಿತು. ಸಂಘದ ಅಧ್ಯಕ್ಷರಾದ ಮಂಜುನಾಥ್ ಆಚಾರ್ಯರ ಮುಂದಾಳತ್ವದಲ್ಲಿ ಸುಮಾರು 45 ಜನರನ್ನು ಒಳಗೊಂಡ ಬಾಂಧವರ ತಂಡ 20 ಕಿ.ಮೀ.ಗಳ ಸುದೀರ್ಘ ಕಾಲ್ನಡಿಗೆ ಮಾಡಿದರು. ಪಾದಯಾತ್ರೆಯ ಸಂದರ್ಭ ಶಿರ್ವ ಶ್ರೀಮಾಹಮ್ಮಾಯಿ ಅಮ್ಮನ ಸನ್ನಿಧಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕುತ್ಯಾರು, ಹಾಗೂ ಇತರ ದೇವಾಲಯಗಳಿಗೆ ಭೇಟಿ ಕೊಡಲಾಯಿತು. ಪಡುಕುತ್ಯಾರ್ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಕ್ಕೆ ತಲುಪಿದ ನಂತರ ಗುರುಪಾದ ಪೂಜೆ ಮಾಡಿ ಅನುಗ್ರಹ ಮಂತ್ರಾಕ್ಷತೆ ಪಡೆಯುವ ಮೂಲಕ ಪಾದಯಾತ್ರೆ ಸಂಪನ್ನಗೊಂಡಿತು. ಈ ಸಂದರ್ಭ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಮಹಿಳಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಇನ್ನಂಜೆಯ ಸೋದೆ ಶಿಕ್ಷಣ ಸಮೂಹ ಸಂಸ್ಥೆಗಳಿಗೆ ಬಸ್ಸುಗಳ ಕೊಡುಗೆ
Posted On: 09 Sep 2025, 08:17 AM
ಶಿರ್ವ : ಶ್ರೀ ಸೋದೆ ವಾದಿರಾಜ ಮಠದಿಂದ ಪ್ರವರ್ತಿತವಾದ ಸೋದೆ ಸಮೂಹ ಶಿಕ್ಷಣ ಸಂಸ್ಥೆಯು ಸಮಗ್ರ ಶಿಕ್ಷಣ ನೀಡುತ್ತಿರುವುದನ್ನು ಮನಗಂಡ ಬೆಂಗಳೂರಿನ ಉದ್ಯಮ ಸಂಸ್ಥೆಯಾದ “ಲೀಪ್ ಫ್ರಾಗ್ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್" ಸಿಎಸ್ಆರ್ ನಿಧಿಯಿಂದ ರೂ.48ಲಕ್ಷ ವೆಚ್ಚದ ಎರಡು ನೂತನ ಬಸ್ಸುಗಳ ಹಸ್ತಾಂತರ ಕಾರ್ಯಕ್ರಮವು ವಿದ್ಯಾಸಂಸ್ಥೆಯ ಆವರಣದಲ್ಲಿ ಜರಗಿತು. ಲೀಪ್ ಫ್ರಾಗ್ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯ ಐವರು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಅದರ ಮುಖ್ಯಸ್ಥರಾದ ಪ್ರಭಾವ್ ಎನ್ ರಾವ್ ಹಾಗೂ ಅವರ ಧರ್ಮಪತ್ನಿ ಪ್ರಿಯಾ ಶೈಲಾ ಪಿ ರಾವ್ ಇವರು ಬಸ್ಸಿನ ಕೀಲಿಕೈಗಳನ್ನು ವಿಷ್ಣುಮೂರ್ತಿ ಹಯವದನ ಸ್ವಾಮಿ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀನಿವಾಸ ತಂತ್ರಿಗಳು ಮತ್ತು ಕಾರ್ಯದರ್ಶಿಗಳಾದ ರತ್ನಕುಮಾರ್ ಇವರಿಗೆ ಹಸ್ತಾಂತರಿಸಿದರು. ಲೀಪ್ ಫ್ರಾಗ್ ಸಂಸ್ಥೆಯನ್ನು ಶ್ಲಾಘಿಸಿದ ಶ್ರೀ ಸೋದೆ ವಾದಿರಾಜ ಮಠದ ಶ್ರೀಪಾದರು, ಈ ಬಸ್ಸಿನ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವಂತೆ ಶಾಲಾ ಮುಖ್ಯಸ್ಥರಿಗೆ ಸೂಚಿಸಿದರು ಹಾಗೂ ಲೀಪ್ ಫ್ರಾಗ್ ಸಂಸ್ಥೆಯ ಮುಖ್ಯಸ್ಥರ ಈ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್, ಎಸ್ ವಿ ಹೆಚ್ ಪಿಯು ಕಾಲೇಜಿನ ಪ್ರಾಂಶುಪಾಲರು ಮತ್ತು ಪ್ರೌಢಶಾಲೆ, ಪ್ರಾಥಮಿಕ ಮತ್ತು ನರ್ಸರಿ ಶಾಲೆ ಇನ್ನಂಜೆ ವಿದ್ಯಾಸಂಸ್ಥೆಗಳ ಮುಖ್ಯೋಪಾಧ್ಯಯರು ಮತ್ತಿತ್ತರು ಉಪಸ್ಥಿತರಿದ್ದರು.
ಯೂತ್ ಬಿಲ್ಲವಾಸ್ ಮೂಡುಬೆಳ್ಳೆ : 171ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ
Posted On: 08 Sep 2025, 06:05 PM
ಶಿರ್ವ : ಯೂತ್ ಬಿಲ್ಲವಾಸ್ ಮೂಡುಬೆಳ್ಳೆ ತಂಡದ ವತಿಯಿಂದ 171ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಮೂಡುಬೆಳ್ಳೆ ಗೀತಾ ಮಂದಿರದಲ್ಲಿ ನಡೆಯಿತು. ನೂರಾರು ಬಿಲ್ಲವ ಭಾಂದವರು ಗುರು ಪೂಜೆಯಲ್ಲಿ ಭಾಗವಹಿಸಿ ನಾರಾಯಣಗುರುಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಹಿರಿಯರಾದ ಸಂತೋಷ್ ಪೂಜಾರಿ, ಸುಧಾಕರ್ ಪೂಜಾರಿ ಮಡಿಕೆಟ್ಟು,ಯೂತ್ ಬಿಲ್ಲವಾಸ್ ಮೂಡುಬೆಳ್ಳೆ ಇದರ ಅಧ್ಯಕ್ಷರಾದ ತಿಲಕ್ ಪೂಜಾರಿ ಭದ್ರಮ, ಗೌರವಾಧ್ಯಕ್ಷ ದಿನೇಶ್ ಸುವರ್ಣ ಮಡಿಕೆಟ್ಟು, ಪ್ರಧಾನ ಕಾರ್ಯದರ್ಶಿ ರಾಕೇಶ್ ಪೂಜಾರಿ ವರ್ವಾಡಿ, ಮಹಿಳಾ ಘಟಕ ಅಧ್ಯಕ್ಷೆ ಧನಲಕ್ಷ್ಮೀ ಸುಧಾಕರ್ ಪೂಜಾರಿ, ಉಪಾಧ್ಯಕ್ಷೆ ಸುನೀತಾ ಪೂಜಾರಿ ಹಾಗೂ ಯೂತ್ ಬಿಲ್ಲವಾಸ್ ಮೂಡುಬೆಳ್ಳೆ ಇದರ ಸದಸ್ಯರು ಉಪಸ್ಥಿತರಿದ್ದರು.
ಪಡುಬಿದ್ರಿ : ನೂರ್ ಹುದಾ ಮದ್ರಸ ಮಕ್ಕಳ ಕಲಾ ಉತ್ಸವ
Posted On: 07 Sep 2025, 11:01 PM
ಪಡುಬಿದ್ರಿ: ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ನೂರಾನಿಯಾ ಹುದಾ ಮದ್ರಸ ಪಡುಬಿದ್ರಿ – ದೀನ್ ಸ್ಟ್ರೀಟ್, ಮಿಸ್ಕ್ – ಎ - ಮದೀನಾ ವತಿಯಿಂದ 2025ನೇ ಸಾಲಿನ ವಿದ್ಯಾರ್ಥಿಗಳ ಕಲಾ ಉತ್ಸವವು ಭಾನುವಾರ ಪಡುಬಿದ್ರಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ನೂರಾನಿಯಾ ಜುಮ್ಮಾ ಮಸೀದಿಯ ಮೌಲಾನಾ ಅಬ್ದುಲ್ ಕುದ್ದೂಸ್ ಉದ್ಘಾಟಿಸಿದರು. ಜುಮ್ಮಾ ಮಸೀದಿಯ ಖತೀಬ್ ಎಸ್.ಎಂ. ಅಬ್ದುಲ್ ರಹ್ಮಾನ್ ಮದನಿ ಉಸ್ತಾದ್ ದುವಾ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಜುಮಾ ಮಸೀದಿ ಅಧ್ಯಕ್ಷರಾದ ಪಿ.ಕೆ. ಮೋಹಿದೀನ್ ವಹಿಸಿದ್ದರು. ಈ ಸಂದರ್ಭದಲ್ಲಿ ಹಿಮಾಯತುಲ್ ಇಸ್ಲಾಂ ಸಂಘದ ಅಧ್ಯಕ್ಷ ಬುಡನ್ ಶೈಖ್, ಜುಮಾ ಮಸೀದಿ ಕಂಚಿನಡ್ಕ ಖತೀಬ್ ಅಬ್ದುಲ್ ಲತೀಫ್ ಮದನಿ, ಸದರ್ ಉಸ್ತಾದ್ ಅಶ್ರಫ್ ಸಅದಿ, ಮಾಜಿ ಅಧ್ಯಕ್ಷ ರಾದ ಅಬ್ದುಲ್ ರಹ್ಮಾನ್, ಜುಮಾ ಮಸೀದಿ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಕೋಶಾಧಿಕಾರಿ ಎ.ಹೆಚ್. ಮೊಹಮ್ಮದ್, ಸದಸ್ಯರಾದ ಅಕ್ಬರ್, ಬಾಶ ಬೆಂಗ್ರೆ, ಎಂ.ಎಸ್ ಶಾಫಿ , ಮೈಯದಿ, ಇಸ್ಮಾಯಿಲ್, ಹಂಝ, ನಜ಼ೀರ್, ಮುಸ್ತಕ್ ಮತ್ತಿತರರು ವಿದ್ಯಾರ್ಥಿಗಳನ್ನು ಹಾರೈಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಕಲಾ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸ್ಪರ್ಧೆಗಳು ಜರಗಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
