Updated News From Kaup
ಸೆ. 21 : ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಗುರು ಸಂದೇಶ ಸಾಮರಸ್ಯ ಜಾಥಾ 2025
Posted On: 20 Sep 2025, 10:07 AM
ಉಡುಪಿ: ಒಂದೇ ಜಾತಿ ಒಂದೇ ಮತ ಒಬ್ಬರೇ ದೇವರು ಎಂಬ ವಿಶ್ವಗುರುವಿನ ಸಾರ್ವಕಾಲಿಕ ಸತ್ಯ ಸಂದೇಶ ಸಾರಿದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿಯ ಹರಿಕಾರ, ಸಮಾಜ ಸುಧಾರಣೆಯ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೆ.21,ಆದಿತ್ಯವಾರದಂದು ಉಡುಪಿ ಜಿಲ್ಲಾ ಯುವ ವೇದಿಕೆಯ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಬಿಲ್ಲವ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಗುರು ಸಂದೇಶ ಸಾಮರಸ್ಯ ಜಾಥಾ 2025 ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ ಹೇಳಿದರು. ಅವರು ಉಡುಪಿಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಗುರು ಸಂದೇಶ ಸಾಮರಸ್ಯ ಜಾಥವು ಬನ್ನಂಜೆ ಜಯಲಕ್ಷ್ಮೀ ಎದುರುಗಡೆಯಿಂದ ಪ್ರಾರಂಭಗೊಂಡು ನಮ್ಮ ಸಮಾಜದ ದಕ್ಷ ಮಹಿಳಾ ಪೊಲೀಸ್ ಅಧಿಕಾರಿ ರೀನಾ ಸುವರ್ಣ ಮತ್ತು ಕರಾವಳಿಯ ನಿಷ್ಠೆಯ ದೈವಾರಾಧಕರಾದ ದೈವ ನರ್ತಕ ರವಿ ಪಡ್ಡಂರವರು ಗುರು ಸಂದೇಶ ಸಾಮರಸ್ಯ ರಥಕ್ಕೆ ಚಾಲನೆ ನೀಡಲಿದ್ದಾರೆ. ಗುರು ಸಂದೇಶ ಸಾಮರಸ್ಯ ಜಾಥಾದ ಮುಖ್ಯ ಅತಿಥಿಗಳಾಗಿ ಸಂಸದರು, ಶಾಸಕರು, ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಉಡುಪಿ ಪರಿಸರದ ಎಲ್ಲಾ ಬಿಲ್ಲವ ಸಂಘ ಸಂಸ್ಥೆಗಳ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಜಾಥಾವು ಬನ್ನಂಜೆ ಜಯಲಕ್ಷ್ಮಿ ಎದುರುಗಡೆಯಿಂದ ಸಿಟಿ ಬಸ್ ಸ್ಟ್ಯಾಂಡ್ - ಕೋರ್ಟ್ ರೋಡ್ - ಮಿಷನ್ ಕಾಂಪೌಂಡ್, ಮಹಿಷಮರ್ದಿನಿ ದೇವಸ್ಥಾನ, ಕೊರಂಗ್ರಪಾಡಿ, ಮಾರ್ಪಳ್ಳಿ, ಕುಕ್ಕಿಕಟ್ಟೆ, ಅಲೆವೂರು, ರಾಂಪುರ, ದೆಂದೂರ್ ಕಟ್ಟೆ, ಮಣಿಪುರ ಆಗಿ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಗುರುಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ. ಈ ಸೌಹಾರ್ದ ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ಬಾಂಧವರು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ನಾರಾಯಣ ಗುರುಗಳ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರು ಸಂದೇಶ ಸಾಮರಸ್ಯ ಜಾಥವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಬೇಕು ಎಂದವರು ಮನವಿ ಮಾಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಸುಧಾಕರ್ ಡಿ ಅಮೀನ್, ದಿವಾಕರ್ ಸನಿಲ್, ವಿಜಯ್ ಉದ್ಯಾವರ, ಮಹೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
ಸೆ. 22 - ಅ. 2 : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವ - 2025
Posted On: 20 Sep 2025, 09:48 AM
ಕಾಪು : ಇಲ್ಲಿನ ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಸೆ.22 ರಿಂದ ಅ.2ರವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವವು 11 ದಿನಗಳ ಪರ್ಯಂತ ಅಮ್ಮನ ಸನ್ನಿಧಾನದಲ್ಲಿ ಮಾರಿಗುಡಿಯ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ಜ್ಯೋತಿಷ್ಯ ವಿದ್ವಾನ್ ಶ್ರೀ ಕೆ.ಪಿ. ಕುಮಾರಗುರು ತಂತ್ರಿಗಳ ಹಾಗೂ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಇವರ ಸಹಯೋಗದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾಹಿತಿ ನೀಡಿದರು. ಕಾಪುವಿನ ಹೊಸ ಮಾರಿಗುಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸೆಪ್ಟೆಂಬರ್ 22ರಂದು ಬೆಳಿಗ್ಗೆ 8:30ಕ್ಕೆ ಸರಿಯಾಗಿ ಶರನ್ನವರಾತ್ರಿ ಮಹೋತ್ಸವದ ಉದ್ಘಾಟನೆಯನ್ನು 9 ಜನ ಗಣ್ಯ ಮಹಿಳೆಯರು ಮಾಡಲಿದ್ದಾರೆ. ಕಾಪು ಕ್ಷೇತ್ರ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ಭಕ್ತರು ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಎಲ್ಲೆಡೆಯೂ 9 ದೀಪಗಳನ್ನು ಬೆಳಗುವ ಬಗ್ಗೆ ಕಾಪುವಿನ ಅಮ್ಮನ ಸಾನಿಧ್ಯ ಬೆಳಗಿದೆ. ಹಾಗಾಗಿ ಈ ಬಾರಿಯ ನವರಾತ್ರಿಯಲ್ಲಿ 9 ದೀಪಗಳನ್ನು ಬೆಳಗಿ ಉದ್ಘಾಟನೆ ನೆರವೇರಿಸಲಾಗುವುದು. ಬೆಳಿಗ್ಗೆ 10.00 ರಿಂದ ಶ್ರೀದೇವಿಗೆ ಹರಕೆಯಾಗಿ ಬಂದಿರುವ ಸೀರೆಗಳನ್ನು ದೇವಳದ ಪ್ರಾಂಗಣದಲ್ಲಿ ಏಲಂ ಮಾಡಲಾಗುವುದು. ಅಕ್ಟೋಬರ್ 1ರಂದು ಬೆಳಿಗ್ಗೆ 08:00 ಗಂಟೆಯಿಂದ ನವದುರ್ಗಾ ಲೇಖನ ಸಂಕಲ್ಪ, ಪುಸ್ತಕಸ್ಥ ವಾಗ್ಗೇವತಾಪೂಜನಮ್ ನಡೆಯಲಿದ್ದು, ಈಗಾಗಲೇ ಪುಸ್ತಕ ಬರೆದವರು ಈ ಪೂಜೆಯಲ್ಲಿ ಭಾಗಿಯಾಗಬೇಕೆಂದು ನವದುರ್ಗಾ ಲೇಖನ ಯಜ್ಞ ಸಮಿತಿ ತಿಳಿಸಿದೆ. ಅದೇ ದಿನ ಸಂಜೆ 05:30 ರಿಂದ ಶ್ರೀದೇವೀ ದುರ್ಗಾ ನಮಸ್ಕಾರ ಪೂಜಾ ನಡೆಯಲಿದೆ. ಭಾಗಿಯಾಗುವ ಭಕ್ತರು ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆಯಲ್ಲಿ ಭಾಗಿಯಾಗಬಹುದು. ಪ್ರತಿನಿತ್ಯ ಶ್ರೀದೇವಿಗೆ ಕಟ್ಟೋಕ್ತ ಪೂಜೆ ನಡೆಯಲಿದ್ದು, ಪೂಜಾ ಪ್ರಸಾದ ಸ್ವೀಕರಿಸಲು ಅವಕಾಶವಿದೆ. ಪ್ರತಿದಿನ ಸಂಜೆ ಗಂಟೆ 05:30 ರಿಂದ 07.00 ರವರೆಗೆ ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ. ಸಂಜೆ 07:00ರಿಂದ ಸಾಂಸ್ಕೃತಿಕ ವೈಭವದ ಮೆರುಗನ್ನು ನೀಡಲು ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಪ್ರದರ್ಶನ ನಡೆಯಲಿದೆ. ನವರಾತ್ರಿಯ ಎಲ್ಲಾ ದಿನಗಳಲ್ಲೂ ಭಕ್ತರಿಗೆ ಬೆಳಿಗ್ಗೆ ಗಂಟೆ 9:00 ರಿಂದ ಸಂಜೆ ಗಂಟೆ 06.00ರ ವರೆಗೆ ಘಂಟಾನಾದ ಸೇವೆಯನ್ನು ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ. ಭಕ್ತರು ಸನ್ನಿದಾನದಲ್ಲಿ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಉಚ್ಚಂಗಿ ಸಹಿತ ಕಾಪು ಶ್ರೀ ಮಾರಿಯಮ್ಮನ ಕೃಪೆಗೆ ಪಾತ್ರರಾಗಬೇಕೆಂದು ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಕಾರ್ಯನಿರ್ವಹಣಾಧಿಕಾರಿ ಹಾಗೂ ಅಭಿವೃದ್ಧಿಯ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಪರವಾಗಿ ವಾಸುದೇವ ಶೆಟ್ಟಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಸದಸ್ಯರಾದ ಮನೋಹರ ರಾವ್ ಕಲ್ಯ, ಮಾಧವ ಪಾಲನ್, ಕಾರ್ಯನಿರ್ವಹಣಾಧಿಕಾರಿ ರವಿ ಕಿರಣ್, ಬಾಲಾಜಿ ಯೋಗೀಶ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಕಳ : ಎಬಿವಿಪಿ ವತಿಯಿಂದ ಕಾಲೇಜಿನ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ
Posted On: 20 Sep 2025, 09:38 AM
ಕಾರ್ಕಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕು ವತಿಯಿಂದ ಬಿ ಎಸ್ಸಿ ನರ್ಸಿಂಗ್ ಕಾಲೇಜು ಕಾರ್ಕಳದಲ್ಲಿ ಇರುವಂತಹ ಅನೇಕ ಸಮಸ್ಯೆಗಳ ಬಗ್ಗೆ ಸಂಸ್ಥೆಯ ಪ್ರಾಂಶುಪಾಲರಿಗೆ ಮನವಿ ನೀಡಲಾಯಿತು. ವಿದ್ಯಾರ್ಥಿಗಳು ಕಳೆದ 4 ವರ್ಷಗಳಿಂದ ಅನುಭವಿಸುವ ಸಮಸ್ಯೆಯನ್ನು ಮನವರಿಕೆ ಮಾಡಲಾಯಿತು. ಕಾಲೇಜಿನಲ್ಲಿ ಒಂದು ಸುಸಜ್ಜಿತ ಕಟ್ಟಡವಿಲ್ಲದೆ, ಕಾಲೇಜು ನಿರ್ವಹಣೆಗೆ ಬೇಕಾದ ಗುಮಾಸ್ತರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಇಲ್ಲದೆ, ಸರಿಯಾದ ಉಪನ್ಯಾಸಕರು ಇಲ್ಲದೆ, ಸರಿಯಾದ ತರಗತಿ ಕೊಠಡಿಗಳು ಇಲ್ಲದೆ, ಶಾಚಾಲಯಗಳ ವ್ಯೆವಸ್ಥೆಗಳು ಸರಿಯಾಗಿ ಇಲ್ಲದೆ, ನರ್ಸಿಂಗ್ ವ್ಯಾಸಂಗಕ್ಕೆ ಬೇಕಾದ ಅತ್ಯಗತ್ಯ ಉಪಕರಣಗಳು ಹಾಗೂ ವಿದ್ಯಾಭ್ಯಾಸಕ್ಕೆ ಬೇಕಾದ ಸರಿಯಾದ ಪ್ರಯೋಗಾಲಯವಿಲ್ಲದೆ, ಗ್ರಂಥಾಲಯ ವ್ಯವಸ್ಥೆ ಕಾಲೇಜಿನಲ್ಲಿ ಇಲ್ಲದೆ, ವಿದ್ಯಾರ್ಥಿಗಳು ಸಮಸ್ಯೆಗಳ ಸರಮಾಲೆಯನ್ನು ಎದುರಿಸುತ್ತಿದ್ದಾರೆ. ಅದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಮಸ್ಯೆ ಆಗುತ್ತಿದ್ದು ಇದಕ್ಕೆ ಸಂಬಂದಿಸಿ ಕಾಲೇಜಿನ ಆಡಳಿತ ಮಂಡಳಿ ತಕ್ಷಣವೇ ಬಂದು ಸರಿಯಾದ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಒಂದು ಉತ್ತಮವಾದ ಅವಕಾಶ ಒದಗಿಸಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿಗಳಾದ ಗಣೇಶ್ ಪೂಜಾರಿ, ಉಡುಪಿ ಜಿಲ್ಲಾ ಸಂಚಾಲಕರಾದ ಶ್ರೇಯಸ್ ಅಂಚನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ : ಮಾತೃ ವಂದನಾ ಕಾರ್ಯಕ್ರಮ
Posted On: 20 Sep 2025, 09:28 AM
ಕಾಪು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ಕುತ್ಯಾರು ಇಲ್ಲಿ ಮಾತೃ ವಂದನಾ ಕಾರ್ಯಕ್ರಮವು ನಡೆಯಿತು. ಮೌನೇಶ್ ಶರ್ಮಾ ಮಾತೃ ವಂದನಾ ಕಾರ್ಯಕ್ರಮವನ್ನು ನೆರವೇರಿಸಿ, ಅಮ್ಮನ ಮಹತ್ವದ ಬಗ್ಗೆ ಧಾರ್ಮಿಕ ಉಪನ್ಯಾಸವನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ, ಮುಖ್ಯ ಕಾರ್ಯದರ್ಶಿಗಳಾದ ಗುರುರಾಜ್ ಕೆ ಜೆ, ಆಸೆಟ್ ನ ಸದಸ್ಯರಾದ ಸುಂದರ ಆಚಾರ್ಯ ಮರೋಳಿ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ವಿಜಯಲಕ್ಷ್ಮಿ ತಂತ್ರಿ, ಶಾಲಾ ಮಾತೃ ಮಂಡಳಿಯ ಅಧ್ಯಕ್ಷರಾದ ಶೋಭಾ ಆಚಾರ್ಯ, ಶಾಲಾ ಮುಖ್ಯ ಶಿಕ್ಷಕರಾದ ಅನಿತಾ, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಮತ್ತು ಪೋಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಅನಿತಾ ಮಾತಾಜಿ ಸ್ವಾಗತಿಸಿ, ರಶ್ಮಿ ಮಾತಾಜಿ ವಂದಿಸಿ, ರಮ್ಯಾ ಮಾತಾಜಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕನ್ನಡ ಸಂಘ ಬಹರೈನ್ಗೆ ಒಂದು ಕೋಟಿ ರೂಪಾಯಿಗಳ ಅನುದಾನ – ಮುಖ್ಯಮಂತ್ರಿಗಳ ಅನುಮೋದನೆ
Posted On: 13 Sep 2025, 08:47 AM
ಕಾಪು : ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿಶೇಷ ಶಿಫಾರಸಿನ ಮೇರೆಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕನ್ನಡ ಸಂಘ ಬಹರೈನ್ಗೆ ಒಂದು ಕೋಟಿ ರೂಪಾಯಿಗಳ ಅನುದಾನವನ್ನು ಅಧಿಕೃತವಾಗಿ ಅನುಮೋದಿಸಿದ್ದಾರೆ. ಈ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿಧಾನ ಪರಿಷತ್ತಿನ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ, ಅನಿವಾಸಿ ಭಾರತೀಯ ಸಮಿತಿ – ಕರ್ನಾಟಕ ಇದರ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರ ಉಪಸ್ಥಿತಿಯಲ್ಲಿ, ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅವರು ಮುಖ್ಯಮಂತ್ರಿಗಳಿಗೆ ಅನುದಾನಕ್ಕಾಗಿ ಮನವಿ ಸಲ್ಲಿಸಿದರು. ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರದ ಅನುದಾನ ನಿಧಿಯಿಂದ ಬಿಡುಗಡೆ ಮಾಡಲು ಅನುಮತಿ ನೀಡಿದ್ದಾರೆ. ಇತ್ತೀಚೆಗೆ ಕನ್ನಡ ಸಂಘ ಕಟ್ಟಡ ಸಮುಚ್ಚಯ ವಿದೇಶದಲ್ಲಿ ನಿರ್ಮಿತ ಪ್ರಥಮ ಕನ್ನಡ ಭವನವನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಂಘದ ಮೂಲಭೂತ ಅಗತ್ಯಗಳು ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಧನಸಹಾಯ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದರು. ಮುಖ್ಯಮಂತ್ರಿಗಳ ಈ ಅನುಮೋದನೆಯೊಂದಿಗೆ, ಕನ್ನಡ ಸಂಘ ಬಹರೈನ್ ತನ್ನ ಮೂಲಸೌಕರ್ಯ, ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ಮಹತ್ವದ ನೆರವನ್ನು ಪಡೆಯಲಿದೆ ಹಾಗೂ ಸಂಘದ ಅಧ್ಯಕ್ಷರಾದ ಅಜಿತ್ ಬಂಗೇರ ಅವರು ವೈಯಕ್ತಿಕವಾಗಿ ಹಾಗೂ ಬಹರೈನ್ ಕನ್ನಡಿಗರ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಪ್ರವಾದಿಗಳು ದೇವನ ಆದೇಶದಂತೆ ಬದುಕಿ ತೋರಿಸಿದವರು : ಆಲ್ಬನ್ ರೋಡ್ರಿಗಸ್
Posted On: 12 Sep 2025, 03:01 PM
ಕಾಪು : ಪ್ರವಾದಿ ಮುಹಮ್ಮದರು ದೇವನ ವತಿಯಿಂದ ಭೂಮಿಯ ಮೇಲೆ ನಿಯುಕ್ತಿಗೊಂಡ ಪ್ರವಾದಿ. ದೇವನ ಆದೇಶದಂತೆ ಬದುಕಿ ತೋರಿಸಿದವರು. ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಸಮಾಜ ಕೆಟ್ಟು ಹೋದ ಸಂಧರ್ಭದಲ್ಲಿ ಜನ ಕಲ್ಯಾಣಕ್ಕಾಗಿ ದೇವನು ಆಯಾಯ ಕಾಲದಲ್ಲಿ ಮನುಷ್ಯರ ನಡುವಿನಿಂದಲೇ ಪ್ರವಾದಿಗಳನ್ನು ಸೃಷ್ಟಿಸುತ್ತಾನೆ ಎಂದು ಕಾಪು ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಆಲ್ಬನ್ ರೋಡ್ರಿಗಸ್ ಹೇಳಿದರು. ಅವರು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕಾಪು ತಾಲೂಕು ಘಟಕ ವತಿಯಿಂದ ಹೋಟೆಲ್ ಕೆ. ಒನ್. ನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಪರಿಸ್ಥಿತಿ ಮತ್ತು ಪ್ರವಾದಿ ಸಂದೇಶ ಎಂಬ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಮಾತನಾಡಿ, ಕೋಮುವಾದ ಮತ್ತು ಜಾತಿ ವಾತ್ಸಲ್ಯಕ್ಕೆ ಮಹತ್ವ ನೀಡುವ ಕಾರಣ ಸಮಾಜದಲ್ಲಿ ಮಾನವೀಯತೆ, ಸೌಹಾರ್ದತೆ ಕೆಡುತ್ತದೆ. ಆದ್ದರಿಂದ ನಾವು ಹೃದಯ ವೈಶ್ಯಾಲ್ಯತೆ ಮೆರೆತು ಅನೋನ್ಯತೆಯಿಂದ ಬದುಕಬೇಕು ಎಂದು ತಿಳಿಸಿದರು. ಜಮಾ ಅತೆ ಇಸ್ಲಾಮೀ ಹಿಂದ್ ನ ಮಂಗಳೂರು ವಲಯ ಸಂಚಾಲಕರಾದ ಸಯೀದ್ ಇಸ್ಮಾಯಿಲ್ ರವರು ಮಾತನಾಡಿ, ಪ್ರವಾದಿ ಮುಹಮ್ಮದ್ ಸ. ರವರು ಸಮಾಜದಲ್ಲಿ ಇರುವ ಬಡ್ಡಿ, ವ್ಯಭಿಚಾರ, ಮಧ್ಯಪಾನ, ಜೂಜಾಟ, ಮೋಸ, ವಂಚನೆ, ಅವ್ಯವಹಾರ ಮಿತವಿಲ್ಲದ ಬಹು ಪತ್ನಿತ್ವ ದ ಬಗ್ಗೆ ಕುರ್ ಆನ್ ನ ಆದೇಶದಂತೆ ಯಾವಾಗ ಧ್ವನಿ ಎಬ್ಬಿಸಿದರೋ, ಅಂದಿನಿಂದ ಪ್ರಾಮಾಣಿಕ ಮತ್ತು ಸತ್ಯವಂತ ಎಂಬ ಬಿರುದಾಂಕಿತ ವ್ಯಕ್ತಿಯೆಂದು ನೋಡದೆ ಅರಬರು ಪ್ರವಾದಿಯನ್ನು ಮಕ್ಕಾ ತೊರೆಯುವಂತೆ ಮಾಡುತ್ತಾರೆ. ಆದರೆ ಅದೇ ಪ್ರವಾದಿ, ಜನರೊಂದಿಗೆ ಉತ್ತಮವಾಗಿ ವರ್ತಿಸಲು, ಮರ್ದಿತರಿಗೆ ನೆರವಾಗಲು, ವಿಧವೆಯರಿಗೆ ಆಶ್ರಯ ನೀಡಲು, ಜನರೊಂದಿಗೆ ಕರುಣೆ ತೋರಲು, ಮುಗುಳು ನಗೆಯೊಂದಿಗೆ ವರ್ತಿಸಲು , ಜನರೊಂದಿಗೆ ನ್ಯಾಯ ಪಾಲಿಸಲು ಬೋಧಿಸುತಿದ್ದರು. ಅವರು ಕೆಟ್ಟು ಹೋಗಿದ್ದ ಅರಬ್ ರಾಷ್ಟ್ರದಲ್ಲಿ 23 ವರ್ಷಗಳಷ್ಟು ಕಾಲ ಸದ್ಬೋಧನೆ ಮಾಡುತ್ತಾ, ಕೆಡುಕುಗಳನ್ನು ಒಳಿತುಗಳ ಮೂಲಕ ದೂರಿಕರಿಸುತ್ತಾ, ನ್ಯಾಯ ಪಾಲಿಸುತ್ತಾ, ಅನೋನ್ಯತೆಯಿಂದ, ಸಹೋದರತೆಯಿಂದ, ಸೌಹಾರ್ದಾತೆಯಿಂದ ಕೂಡಿದ ಸಮಾಜವನ್ನು ಕಟ್ಟುತ್ತಾರೆ. ಅವರ ಬೋಧನೆಯನ್ನು ಇಂದೂ ಜನರು ಪಾಲಿಸಿ ಅನುಸರಿಸಿದರೆ ನಮ್ಮಲ್ಲಿಯೂ ಕೂಡಾ ಅಂತಹ ವಾತಾವರಣವನ್ನು ನಿರ್ಮಿಸಬಹುದು ಎಂದು ಹೇಳಿದರು. ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಮುಹಮ್ಮದ್ ಮೌಲಾರವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಂತಿ ಪ್ರಕಾಶನ ಮಂಗಳೂರು ಪ್ರಕಟಿಸಿದ ಪತ್ರಕರ್ತ ಅಬ್ದುಸ್ಸಲಾಮ್ ಪುತ್ತಿಗೆ ಬರೆದ ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದರ (ಸ) ಆದರ್ಶದ ಔಚಿತ್ಯ ಮತ್ತು ಪ್ರವಾದಿ ಮುಹಮ್ಮದರನ್ನು (ಸ) ಅರಿಯಿರಿ ಎಂಬ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷರು ಜನಾಬ್ ಶಭಿಹ್ ಅಹಮದ್ ಕಾಝಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ, ಜಿಲ್ಲಾ ಕೋಶಾಧಿಕಾರಿ ಸಯ್ಯದ್ ಫರೀದ್ ಉಪಸ್ಥಿತರಿದ್ದರು. ಕಾರ್ಯಕ್ರಮವು ಮಾಸ್ಟರ್ ಮುಹಮ್ಮದ್ ರಾಯಿಫ್ ರವರ ಕುರ್ ಆನ್ ಪಠನದೊಂದಿಗೆ ಪ್ರಾರಂಭವಾಯಿತು. ಕಾಪು ತಾಲೂಕು ಘಟಕದ ಅಧ್ಯಕ್ಷರಾದ ನಸೀರ್ ಅಹಮದ್ ರವರು ಸ್ವಾಗತಿಸಿದರು. ಒಕ್ಕೂಟದ ಜಿಲ್ಲಾ ಸಮಿತಿಯ ಸದಸ್ಯರು ಅನ್ವರ್ ಅಲಿ ಕಾಪು ಪ್ರಸ್ತಾವನೆಗೈದರು. ಕೋಶಾಧಿಕಾರಿ ಬಿ. ಎಂ. ಮೊಯಿದಿನ್ ವಂದಿಸಿ, ತಾಲೂಕು ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ರವರು ಕಾರ್ಯಕ್ರಮ ನಿರೂಪಿಸಿದರು.
ರಾ.ಹೆ.ಯ ಗುಂಡಿ ಮುಚ್ಚಿಸಿ : ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ರಿಂದ ಡಿ.ಸಿ.ಗೆ ಮನವಿ
Posted On: 12 Sep 2025, 02:55 PM
ಉಡುಪಿ : ಉಡುಪಿ ಜಿಲ್ಲೆಯ ಮಣಿಪಾಲ -ಪರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಪಾಯಕಾರಿಯಾದ ದೊಡ್ಡ ದೊಡ್ಡ ಗುಂಡಿಗಳಿಂದ ವಾಹನ ಸಂಚಾರಕ್ಕೆ ಕಷ್ಟಕರವಾಗಿದ್ದು. ಇದ್ದರಿಂದ ಹಲವಾರು ದಿನಗಳಿಂದ ರಸ್ತೆ ಅಪಘಾತಗಳು ನಡೆಯುತ್ತಿದ್ದು. ಈ ಮಾರ್ಗವಾಗಿ ದಿನನಿತ್ಯ ಸಂಚಾರಿಸುವ ಶಾಲಾ -ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಕರ್ನಾಟಕ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ಉಡುಪಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು. ಈ ಅಪಾಯಕಾರಿ ಗುಂಡಿಗಳಿಂದ ಎಷ್ಚೋ ಜನರ ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುತ್ತಾರೆ. ಮೊನ್ನೆಯಷ್ಟೆ ದ.ಕ ಜಿಲ್ಲೆಯ ಕೂಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಗುಂಡಿಯಿಂದ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ತನ್ನ ಅಮೂಲ್ಯ ಜೀವ ಕಳೆದು ಕೊಂಡಿರುವುದರಿಂದ, ಈ ಗುಂಡಿಗಳಿಂದ ಇನ್ನಷ್ಟು ಜೀವಗಳು ಕಳೆದು ಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ ಸಂಬಂಧಪಟ್ಟ ಇಲಾಖೆಯವರಿಂದ ತ್ವರಿತಗತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳನ್ನು ಮುಚ್ಚಿಸಿ ಮುಕ್ತ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಯವರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ತುರ್ತಾಗಿ ಮುಚ್ಚಿಸುವ ಭರವಸೆ ನೀಡಿದರು.
ಪಲಿಮಾರು ಸ.ಪ.ಪೂ.ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
Posted On: 10 Sep 2025, 06:36 PM
ಪಲಿಮಾರು : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಡುಬಿದ್ರಿ ಠಾಣೆಯ ಉಪನಿರೀಕ್ಷಕರಾದ ಸಕ್ತಿವೇಲು, ಶಿಕ್ಷಣ ಪಡೆಯುವ ಹಂತದಲ್ಲಿ ಸಾಧನೆಯ ಕಡೆಗೆ ಗಮನವಿರಬೇಕು. ಮಕ್ಕಳು ಡ್ರಗ್ಸ್ ಸೇವನೆಗೆ ಬಲಿಯಾಗಬಾರದು. ಖಿನ್ನತೆ, ಆತ್ಮಹತ್ಯೆಗೆ ಶರಣಾಗುವುದರಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ ಎಂದು ಹೇಳಿದರು. ಈ ಸಂದರ್ಭ ಪಲಿಮಾರು ಸರಕಾರಿ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ಮಾಧವ ಸಾಲ್ಯಾನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಲಿಮಾರು ಒಕ್ಕೂಟದ ಅಧ್ಯಕ್ಷರಾದ ಆಶಾ ಮತ್ತಿತರರು ಉಪಸ್ಥಿತರಿದ್ದರು. ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಪ್ರಾಂಶುಪಾಲೆ ಗ್ರೆಟ್ಟಾ ಮೊರಸ್ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಡುಬಿದ್ರಿ ವಲಯ ಮೇಲ್ವಿಚಾರಕರಾದ ಸರಿತಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸುಶ್ಮಿತಾ ವಂದಿಸಿದರು.
ಸೆ.12 : ಬೆಳಪು ಗ್ರಾಮ ಪಂಚಾಯತ್ ಗೆ ಆರ್.ಬಿ.ಐ ನಿರ್ದೇಶಕರ ತಂಡ ಭೇಟಿ
Posted On: 10 Sep 2025, 09:54 AM
ಕಾಪು : ಬೆಳಪು ಗ್ರಾಮ ಪಂಚಾಯತಿಗೆ ಸೆ.12 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಭಾರತ ಸರಕಾರದ ಆರ್.ಬಿ.ಐ ನಿರ್ದೇಶಕರಾದ ಸೋನಾಲಿ ಸೇನ್ ಗುಪ್ತ, ಆರ್.ಬಿ.ಐ ಬೆಂಗಳೂರು ಎ.ಜಿ.ಎಂ ಅರುಣ್ ಕುಮಾರ್. ಯೂನಿಯನ್ ಬ್ಯಾಂಕಿನ ಜನರಲ್ ಮ್ಯಾನೇಜರ್ ರಾಜೇಂದ್ರ ಕುಮಾರ್ ಹಾಗೂ ಯೂನಿಯನ್ ಬ್ಯಾಂಕ್ ನ ರೀಜನಲ್ ಮ್ಯಾನೇಜರ್ ಅಶೋಕ್ ಕುಮಾರ್. ಲೀಡ್ ಬ್ಯಾಂಕ್ ಮ್ಯಾನೇಜರ್, ಕೆನರಾ ಬ್ಯಾಂಕ್ ಹರೀಶ್ ಜಿ. ಯೂನಿಯನ್ ಬ್ಯಾಂಕ್ ಡೆಪ್ಯೂಟಿ ರೀಜನಲ್ ಮುಖ್ಯಸ್ಥ ಸತ್ಯ ಬ್ರತೋ ಭಾದುರಿರವರ ಉನ್ನತ ಮಟ್ಟದ ತಂಡ ಪಂಚಾಯತ್ ಮಟ್ಟಕ್ಕೆ ಪ್ರಥಮವಾಗಿ ಬೆಳಪು ಗ್ರಾಮವನ್ನು ಆಯ್ಕೆ ಮಾಡಿ ಭೇಟಿ ನೀಡಲಿದ್ದಾರೆಂದು ಬೆಳಪು `ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ|ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ. ಬೆಳಪು ಗ್ರಾಮದ ಅಭಿವೃದ್ಧಿ ಯೋಜನೆಗಳು ಗ್ರಾಮೀಣ ಭಾಗದ ಜನರ ಆರ್ಥಿಕ ಸಬಲೀಕರಣ, ಭಾರತ ಸರಕಾರದಿಂದ ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಬ್ಯಾಂಕಿನಿಂದ ದೊರಕುವ ಸವಲತ್ತು ಬಳಸಿರುವ ಬಗ್ಗೆ, ವಿದ್ಯಾರ್ಥಿಗಳಿಗೆ ಬ್ಯಾಂಕಿನ ಸೌಲಭ್ಯ, ಗ್ರಾಮೀಣ ಕೈಗಾರಿಕೆಗಳಿಗೆ ರೈತರಿಗೆ, ಕೂಲಿ ಕಾರ್ಮಿಕರಿಗೆ ಭಾರತ ಸರಕಾರದ ಆಯುಷ್ಮಾನ್ ಅನುಷ್ಠಾನದ ಬಗ್ಗೆ, ಬ್ಯಾಂಕಿನ ಸಾಲ ಸೌಲಭ್ಯದ ಯೋಜನೆಯ ಕುರಿತು ನೇರವಾಗಿ ಸಮಾಲೋಚನೆ ನಡೆಸಬಹುದೆಂದರು. ಒಂದು ಗ್ರಾಮಕ್ಕೆ ಭಾರತ ಸರಕಾರದ ಅತ್ಯುನ್ನತ ಹಣಕಾಸು ಸಂಸ್ಥೆ ಆರ್.ಬಿ.ಐ ನಿರ್ದೇಶಕರ ತಂಡ ಭೇಟಿ ನೀಡಿ ಆರ್ಥಿಕ ಪ್ರಗತಿಯ ಪರಿಶೀಲನೆ ನಡೆಸುವುದು ನಮಗೆಲ್ಲ ಹೆಮ್ಮೆ ಎನಿಸಿದೆ. ಆರ್.ಬಿ.ಐ ನಡೆ ಹಳ್ಳಿ ಕಡೆ ನಿಜಕ್ಕೂ ಒಂದು ಸೌಭಾಗ್ಯ. ಇದರಿಂದ ಗ್ರಾಮೀಣ ಜನರಿಗೆ ಬ್ಯಾಂಕಿನ ಸವಲತ್ತುಗಳ ಪ್ರಯೋಜನ ಪಡೆದುಕೊಳ್ಳಲು ಮತ್ತು ಆಗುತ್ತಿರುವ ಸಮಸ್ಯೆಗೆ ನೇರ ಪರಿಹಾರ ಕಂಡುಕೊಳ್ಳಬಹುದೆಂದು ಇದರ ಪ್ರಯೋಜನ ಸಾರ್ವಜನಿಕರು ಪಡೆದುಕೊಳ್ಳುವಂತೆ ಬೆಳಪು ಪಂಚಾಯತ್ ಅಧ್ಯಕ್ಷರು ವಿನಂತಿಸಿಕೊಂಡಿದ್ದಾರೆ.
ಉಡುಪಿ : ಸಂತೆಕಟ್ಟೆ ಬಿಲ್ಲವರ ಸೇವಾಸಂಘ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮದಿನಾಚರಣೆ
Posted On: 09 Sep 2025, 12:06 PM
ಉಡುಪಿ : ಸಂತೆಕಟ್ಟೆ ಬಿಲ್ಲವರ ಸೇವಾಸಂಘ ನಯಂಪಳ್ಳಿ - ಸಂತೆಕಟ್ಟೆ ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಭಜನೆ ಹಾಗು ಗುರುಪೂಜೆಯು ಜರಗಿತು. ಸನ್ಮಾನ : ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ವಿಧುಷಿ ದೀಕ್ಷಾ ವಿ., ಶಿಕ್ಷಣ ಕ್ಷೇತ್ರದಲ್ಲಿ ಅಬಾಕಸ್ ಸ್ಪರ್ಧೆ ಯಲ್ಲಿ ಹಲವಾರು ಪ್ರಶಸ್ತಿ ಗಳಿಸಿದ ಕುಮಾರಿ ಜಿಶ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ದಿನೇಶ್ ಪೈ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂಧರ್ಭ ದಲ್ಲಿ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ನಿಕಟಪೂರ್ವ ಶಾಸಕರಾದ ಕೆ. ರಘುಪತಿ ಭಟ್, ಬ್ರಹ್ಮಾವರ ಬಿಲ್ಲವ ಸಂಘದ ಅಧ್ಯಕ್ಷರಾದ ಬಿ. ಎನ್. ಶಂಕರ್ ಪೂಜಾರಿ, ಉಡುಪಿ ಬಿಲ್ಲವ ಯುವವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಎಮ್. ಪೂಜಾರಿ, ಅಭಿವೃದ್ಧಿ ಸಮಿತಿಯ ಗೌ. ಅಧ್ಯಕ್ಷರಾದ ಶಾಮ್ ಕೆ. ಪೂಜಾರಿ, ಸಂಘದ ಗೌ. ಅಧ್ಯಕ್ಷರಾದ ಭಾಸ್ಕರ್ ಕೆ. ಜತ್ತನ್, ಅಧ್ಯಕ್ಷರಾದ ಶೇಕರ್ ಗುಜ್ಜರ್ ಬೆಟ್ಟು, ಉಪಾಧ್ಯಕ್ಷರುಗಳಾದ ವಿಠ್ಠಲ ಪೂಜಾರಿ, ಟಿ. ರಾಮ ಪೂಜಾರಿ, ಗಣೇಶ್ ಕೋಟ್ಯಾನ್, ಹೇಮರಾಜ ಅಮೀನ್, ಜಗದೀಶ್ ಕೆಮ್ಮಣ್ಣು, ಪ್ರ. ಕಾರ್ಯದರ್ಶಿ ಮುರಳೀಧರ ಸುವರ್ಣ, ಕೋಶಾಧಿಕಾರಿ ಉಮೇಶ್ ಪೂಜಾರಿ, ಪ್ರಧಾನ ಅರ್ಚಕರಾದ ಶಂಕರ್ ಪೂಜಾರಿ, ಸಹಾಯಕರಾದ ಉಮೇಶ್ ಜತ್ತನ್, ಸಂಘದ ಸದಸ್ಯರಾದ ಗೋಪಾಲ್ ಪೂಜಾರಿ, ಸುರೇಶ್ ಮೂಡುಬೆಟ್ಟು, ಗೋವರ್ಧನ್ ಜತ್ತನ್, ಮಹಾಬಲ ಪೂಜಾರಿ, ಸುರೇಶ್ ಸುವರ್ಣ, ಮಿತ್ರ ಕುಮಾರ್, ಸುಧಾಕರ್ ಕೋಟ್ಯಾನ್, ಸುರೇಶ್ ಅಮೀನ್, ಯೋಗೀಶ್ ಪೂಜಾರಿ, ಸುರೇಶ್ ಸಿ. ಎಸ್. ಕೆ, ಮಾಧವ ಸನಿಲ್ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಉಷಾ ವಸಂತ್, ಕಾರ್ಯದರ್ಶಿ ವಂದನಾ ಸುರೇಶ್ ಮತ್ತು ಮಹಿಳಾ ಘಟಕದ ಸದಸ್ಯೆಯರು ಉಪಸ್ಥಿತರಿದ್ದರು.
