Updated News From Kaup
ಶಿರ್ವ : ಮಣಿಪುರ ಕೂಡುರಸ್ತೆಯಲ್ಲಿ ವೈಜ್ಞಾನಿಕ ಮಾದರಿಯ ರೋಟರಿ ಸರ್ಕಲ್ ಉದ್ಘಾಟನೆ

Posted On: 24-02-2025 05:06PM
ಶಿರ್ವ : ಮಣಿಪುರ ರೋಟರಿ ಸಂಸ್ಥೆಯ ವತಿಯಿಂದ ಅಂತಾರಾಷ್ಟ್ರೀಯ ರೋಟರಿಯ 121ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಮಣಿಪುರ ಪೇಟೆಯಲ್ಲಿ ವೈಜ್ಞಾನಿಕ ಮಾದರಿಯಲ್ಲಿ ನಿರ್ಮಿಸಿದ ರೋಟರಿ ಶಾಂತಿ ವೃತ್ವನ್ನು ರೋಟರಿ ಅ. ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ಸಿಎ.ದೇವ್ಆನಂದ್ ಉದ್ಘಾಟಸಿದರು. ಈ ಸಂದರ್ಭ ಅವರು ಮಾತನಾಡಿ, ರೋಟರಿಯ ಜಿಲ್ಲಾಯೋಜನೆ ರಸ್ತೆ ಸುರಕ್ಷಾ ಜಾಗೃತಿ ಹಾಗೂ ರೋಟರಿ ವರ್ಚಸ್ಸನ್ನು ವೃದ್ಧಿಸುವ ನಿಟ್ಟಿನಲ್ಲಿ ಕೈಗೊಂಡ ಅತ್ಯುತ್ತಮ ಕಾರ್ಯ ಇದಾಗಿದ್ದು, ಮೂರು ಪ್ರಮುಖ ರಸ್ತೆಗಳು ಕೂಡುವ ಈ ಭಾಗದಲ್ಲಿ ರಸ್ತೆಗೆ ಬೆಳಕು, ರಸ್ತೆ ಸೂಚನಾ ಫಲಕಗಳು ಹಾಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಪ್ರಯೋಜನವಾಗುವ ಸ್ತುತ್ಯ ಕಾರ್ಯವನ್ನು ಮಾಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಛೇರಿಯ ಪ್ರಬಂಧಕ ನಿರಂಜನ ಆಚಾರ್ಯ, ರೋಟರಿ ಜಿಲ್ಲಾ ಪ್ರಥಮ ಮಹಿಳೆ ರೇಖಾ ದೇವಾನಂದ್, ವಲಯದ ಎಲ್ಲಾ ರೋಟರಿ ಪದಾಧಿಕಾರಿಗಳು, ಕ್ಲಬ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಶಾಂತಿ ಸಂಗಮ -2025 : ರೋಟರಿ ಭವನದಲ್ಲಿ ಜಿಲ್ಲಾ ವಲಯ ಐದರ ರೋಟರಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜರುಗಿದ ಶಾಂತಿ ಸಂಗಮ -2025 ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ವೃತ್ತಿಸೇವಾ ಜಾಗೃತಿ ಸಮಿತಿಯ ಜಿಲ್ಲಾ ಛರ್ಮನ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ವಿಶ್ವ ಶಾಂತಿಗಾಗಿಯೇ ಸಂಘಟನೆಗೊಂಡ ಅಂತಾರಾಷ್ಟ್ರೀಯ ರೋಟರಿ ಕಳೆದ 120 ವರ್ಷಗಳಲ್ಲಿ ಯಾವುದೇ ಜಾತಿ, ಮತ, ಧರ್ಮ, ವರ್ಣ ರಾಜಕೀಯದ ಲೇಪವಿಲ್ಲದೆ ಜಾಗತಿಕ ಶಾಂತಿ ಮತ್ತು ಮನುಕುಲದ ಸೇವೆಗಾಗಿ ಅರ್ಪಣಾ ಮನೋಭಾವದಿಂದ ನೂರಾರು ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮಣಿಪುರ ರೋಟರಿ ಅಧ್ಯಕ್ಷ ಸುಧೀರ್ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ವಲಯ ಸಹಾಯಕ ಗವರ್ನರ್ ಅನಿಲ್ ಡೇಸಾ, ವಲಯ ತರಬೇತುದಾರ ಶೈಲೇಂದ್ರ ರಾವ್, ವಲಯ ಸೇನಾನಿಗಳಾದ ಮೆಲ್ವಿನ್ ಡಿಸೋಜ, ಸುರೇಶ್ ನಾಯಕ್, ಜೋನ್ ಸಿಕ್ವೇರಾ, ವಲಯ ಕಾರ್ಯದರ್ಶಿ ಚಂದ್ರ ಪೂಜಾರಿ, ಕ್ಲಬ್ ಕಾರ್ಯದರ್ಶಿ ಗುರುರಾಜ್ ಭಟ್, ವಲಯ ನಿರ್ದೇಶಕ ಶೇಖರ ಎಚ್, ಕ್ಲಬ್ ಸೇನಾ ನಿರ್ದೇಶಕ ಮೊಹಮ್ಮದ್ ಶರೀಫ್,ಶುಭ ಹಾರೈಸಿದರು. ಚಂದ್ರಶೇಖರ ಸಾಲಿಯಾನ್ ನಿರೂಪಿಸಿದರು. ವಲಯ ಕಾರ್ಯದರ್ಶಿ ಚಂದ್ರ ಪೂಜಾರಿ ವಂದಿಸಿದರು.
ಫೆ.25 ರಿಂದ ಮಾ.5 : ಕಾಪುವಿನ ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Posted On: 24-02-2025 04:41PM
ಕಾಪು : ಸಂಪೂರ್ಣ ಶಿಲಾಮಯವಾಗಿ ನಿರ್ಮಾಣಗೊಂಡಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 5 ವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜರಗಲಿದ್ದು, ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಕಾಪುವಿನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪ್ರತಿನಿತ್ಯ ಬೆಳಿಗ್ಗೆ ಕ್ಷೇತ್ರದ ತಂತಿವರ್ಯರು, ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾಪು ಸಮೃದ್ಧಿ, ಸಾಮರಸ್ಯದ ಊರಾಗಿದೆ. ಅನ್ಯ ಧರ್ಮೀಯರು ಹೊರೆಕಾಣಿಕೆ ನೀಡಿದ್ದಾರೆ. ಹೆಜಮಾಡಿಯಿಂದ ಉದ್ಯಾವರದವರೆಗೆ ಪತಾಕೆ ಹಾಕಲಾಗಿದ್ದು, 8 ಕಿ.ಮೀ. ವ್ಯಾಪ್ತಿಯವರೆಗೆ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ಸ್ಥಳೀಯರಿಂದ ರಾಷ್ಟ್ರಮಟ್ಟದ ಪ್ರತಿಭೆಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆಲವು ಕಡೆಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ದೇವಳಕ್ಕೆ ಭಕ್ತರನ್ನು ಕರೆದುತರುವ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಟೆಂಡರ್ ಪ್ರಕ್ರಿಯೆಯ ಮೂಲಕ 30 ಕೋಟಿಯಲ್ಲಿ ದೇವಳದ ಪ್ರಥಮ ಹಂತದ ಕಾಮಗಾರಿ ಮುಗಿದಿದ್ದು, ಭಕ್ತರ ಸಂಕಲ್ಪದಿಂದ ರಾಜಗೋಪುರ, ಸ್ವರ್ಣ ಗದ್ದುಗೆ, ದೇವಿಗೆ ಚಿನ್ನದ ಮುಖ, ರಜತ ರಥ, ಉಚ್ಚಂಗಿ ಚಿನ್ನದ ಮುಖ ಸೇರಿದಂತೆ 65 ಕೋಟಿಯ ಕೆಲಸವಾಗಿದೆ. ಅನಂತ ಉಗ್ರಾಣದಲ್ಲಿ ದಾಖಲೆ ಸಂಖ್ಯೆಯಲ್ಲಿ ಹಸುರುವಾಣಿ ಹೊರೆಕಾಣಿಕೆ ಸಂಗ್ರಹವಾಗಿದೆ. ಉತ್ತಮ ವ್ಯವಸ್ಥೆಗೆ ಸ್ವಯಂ ಸೇವಕರು ಸಹಕರಿಸಲಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಅಶ್ವ ಪೂಜೆ, ಗಜೆ ಪೂಜೆಯು ನಡೆಯಲಿದೆ. ಬ್ರಹ್ಮಕಲಶೋತ್ಸವದ ಬಳಿಕ 48 ದಿನ ಕ್ಷೇತ್ರದ ದಾನಿಗಳಿಂದ ಚಂಡಿಕಾಯಾಗವೂ ನಡೆಯಲಿದೆ ಎಂದರು.
ಉದಯ ಸುಂದರ್ ಶೆಟ್ಟಿ ಮಾತನಾಡಿ, ಬೆಳಗ್ಗೆ ಮತ್ತು ಸಂಜೆ ಉಪಾಹಾರ, ಮಧ್ಯಾಹ್ನ ಮತ್ತು ಸಂಜೆ ಊಟದ ವ್ಯವಸ್ಥೆ ಮಾಡಲಾಗಿದೆ. ದೇವಳದ 4 ಕಡೆಗಳಲ್ಲಿ ಬಫೆ ಮತ್ತು ಎಲೆಯ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಸದಸ್ಯ ಮಾಧವ ಪಾಲನ್, ಯೋಗೀಶ್ ವಿ. ಶೆಟ್ಟಿ, ಸುಹಾಸ್ ಹೆಗ್ಡೆ ನಂದಳಿಕೆ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್ ಉಪಸ್ಥಿತರಿದ್ದರು.
ಜಯ ಪೂಜಾರಿ ಮತ್ತು ಸಂಕ್ರಿ ಜೆ. ಪೂಜಾರಿ ದಂಪತಿ ವೈವಾಹಿಕ ಜೀವನದ ಸುವರ್ಣ ಮಹೋತ್ಸವ

Posted On: 24-02-2025 07:39AM
ಉಡುಪಿ : ಹೋಟೆಲ್ ಶ್ರೀ ಜಯದುರ್ಗಾ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಮಾಲಕ ಜಯ ಪೂಜಾರಿ ಮತ್ತು ಸಂಕ್ರಿ ಜೆ. ಪೂಜಾರಿ ದಂಪತಿ ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಸ್ಪಂದನ ದಿವ್ಯಾಂಗರ ಸಂರಕ್ಷಣ ಸಂಸ್ಥೆಯಲ್ಲಿ ನಡೆಯಿತು.
ಈ ಸಂದರ್ಭ ಸಂಸ್ಥೆಯ ಮುಖ್ಯಸ್ಥರು, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಕಾಪು : ಪರಿವಾರ ನಾಯಕ ಸಮಾಜದ ವತಿಯಿಂದ ಹಸಿರು ಹೊರೆಕಾಣಿಕೆ

Posted On: 24-02-2025 07:35AM
ಕಾಪು : ಕಾಪುವಿನ ಅಮ್ಮನ ಬ್ರಹ್ಮಕಲಶೋತ್ಸಕ್ಕೆ ಕಾಪು ತಾಲೂಕಿನ ಪರಿವಾರ ನಾಯಕ ಸಮಾಜದ ವತಿಯಿಂದ ಪಯ್ಯಾರು ಕಾಂತನಾಧಿಕಾರಿ ಧೂಮಾವತಿ ಧೈವಸ್ಥಾನದಿಂದ ಹಸಿರು ಹೊರೆಕಾಣಿಕೆಯನ್ನು ಶ್ರೀ ದೇವಳಕ್ಕೆ ಸಮರ್ಪಿಸಲಾಯಿತು.

ಸಜಾತಿ ಬಾಂಧವರಿಂದ ಒಟ್ಟುಗೂಡಿದ 17.50 ಕ್ವಿಂಟಾಲ್ ಅಕ್ಕಿ , 544 ಕೆ.ಜಿ. ಬೆಲ್ಲ , 43 ಲೀಟರ್ ದೀಪದೆಣ್ಣೆ ,225 ತೆಂಗಿನಕಾಯಿ , 550 ಬಾಳೆಎಲೆ ಮತ್ತು ಬಾಳೆಗೊನೆ , ತುಪ್ಪ ಮೊದಲಾದ ವಸ್ತುಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಗೋಪಾಲ್ ನಾಯ್ಕ್ , ಕಾಪು ತಾಲೂಕು ಪರಿವಾರ ನಾಯಕ ಸಮಾಜದ ಅಧ್ಯಕ್ಷರಾದ ನೀಲಾನಂದ ನಾಯ್ಕ್, ಹಿರಿಯರು, ಪದಾಧಿಕಾರಿಗಳು ಹಾಗೂ ಸಜಾತಿ ಬಾಂಧವರು ಉಪಸ್ಥಿತರಿದ್ದರು.
ಕಾಪು ಶ್ರೀ ಹೊಸ ಮಾರಿಗುಡಿ : ಉತ್ತರ ವಾಹಿನಿ ಹೊರೆಕಾಣಿಕೆ ಸಮರ್ಪಣೆ

Posted On: 24-02-2025 07:26AM
ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ. 25 ರಿಂದ ಮಾರ್ಚ್ 5ರವರೆಗೆ ಜರಗಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಸಮರ್ಪಿಸಿದ ಉತ್ತರವಾಹಿನಿ ಹೊರೆಕಾಣಿಕೆ ಮೆರವಣಿಗೆಗೆ ರವಿವಾರ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ಅವರು ಪಾಂಗಾಳ ಸೇತುವೆ ಬಳಿ ಚಾಲನೆ ನೀಡಿದರು.

ಹೊರೆಕಾಣಿಕೆಯಲ್ಲಿ ಅಕ್ಕಿ, ಬೆಲ್ಲ, ತರಕಾರಿಗಳು, ದವಸ ಧಾನ್ಯಗಳನ್ನು 500ಕ್ಕೂ ಅಧಿಕ ವಾಹನಗಳ ಮೂಲಕ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಕಾಪು ಪೇಟೆಯಾಗಿ ಹೊಸ ಮಾರಿಗುಡಿ ತಲುಪಿತು.

ಮೆರವಣಿಗೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ, ವೀರಗಾಸೆ, ಡೋಲು ವಾದನ, ತಾಲೀಮು, ಪುರುಷರು, ಮಹಿಳೆಯರು ಹಾಗೂ ಮಕ್ಕಳ ಕುಣಿತ ಭಜನೆ, ಕೊಂಬು, ಬಿರುದಾವಳಿ, ಕೀಲು ಕುದುರೆ, ವಿವಿಧ ರೀತಿಯ ಟ್ಯಾಬ್ಲೋ, ಹುಲಿ ವೇಷ ಕುಣಿತ, ಚೆಂಡೆ ಸಹಿತ ವಿವಿಧ ವೇಷಗಳು ಮೆರವಣಿಗೆಗೆ ರಂಗು ತಂದಿತು. ನವೋದಯ ಸ್ವಸಹಾಯ ಗುಂಪು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದೇವಸ್ಥಾನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಹೊರೆಕಾಣಿಕೆ ಸಮರ್ಪಣಾ ಸಮಿತಿಯ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ, ಅರುಣ್ ಶೆಟ್ಟಿ ಪಾದೂರು, ಶ್ರೀಕರ ಶೆಟ್ಟಿ ಕಲ್ಯ, ಹರೀಶ್ ನಾಯಕ್ ಕಾಪು, ಸಾಯಿ ಈಶ್ವರ್ ಗುರೂಜಿ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಕೆ. ರಘಪತಿ ಭಟ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಪುಣೆ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು, ಉದಯ ಸುಂದರ ಶೆಟ್ಟಿ, ರಮೇಶ್ ಹೆಗ್ಡೆ ಕಲ್ಯ, ಕಾಪು ದಿವಾಕರ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಸುಗ್ಗಿ ಸುಧಾಕರ ಶೆಟ್ಟಿ, ರೋಷನ್ ಕುಮಾರ್ ಶೆಟ್ಟಿ, ಭಗವಾನ್ ದಾಸ್ ಶೆಟ್ಟಿಗಾರ್, ಸಂದೀಪ್ ಶೆಟ್ಟಿ ಮುಂಬಯಿ, ಮಾಧವ ಆರ್. ಪಾಲನ್, ಯೋಗೀಶ್ ವಿ. ಶೆಟ್ಟಿ, ಸುಹಾಸ್ ಹೆಗ್ಡೆ ನಂದಳಿಕೆ, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ಡಾ. ಸುನೀತಾ ಶೆಟ್ಟಿ, ಶಾಂತಲತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ಳೆ ಗ್ರಾಮ ಪಂಚಾಯತಿಯಲ್ಲಿ ರೋಜ್ ಗಾರ್ ದಿನಾಚರಣೆ

Posted On: 21-02-2025 07:51PM
ಶಿರ್ವ : ಬೆಳ್ಳೆ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜ್ ಗಾರ್ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಶ್ರೀನಿವಾಸ ರಾವ್ ಮುಖ್ಯ ಅತಿಥಿಯಾಗಿ ಮಾತನಾಡಿ ಗ್ರಾಮ ಪಂಚಾಯತ್ ಜೊತೆಗೆ ಸಮುದಾಯ ಸಂಘಟಿತವಾಗಿ ಭಾಗಿಯಾದರೆ ಉದ್ಯೋಗ ಖಾತರಿ ಯೋಜನೆಯ ಮುಖಾಂತರ ಸಾಕಷ್ಟು ವೈಯಕ್ತಿಕ ಮತ್ತು ಸಮುದಾಯದ ಅಭಿವೃದ್ಧಿಯನ್ನು ಮಾಡಬಹುದೆಂದು ಮತ್ತು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಪ್ರತೀ ಗ್ರಾಮ ಮಟ್ಟದಲ್ಲಿ ನಡೆದಾಗ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಮುದಾಯದೊಂದಿಗೆ ಉತ್ತಮ ಬಾಂಧವ್ಯಗಳು ಬೆಸೆಯುತ್ತವೆ ಎಂದು ತಿಳಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವರವರು ಮಾತನಾಡಿ ಗ್ರಾಮ ಪಂಚಾಯತ್ ಆಡಳಿತ ಮತ್ತು ಸಿಬ್ಬಂದಿ ಉತ್ತಮ ಬಾಂಧವ್ಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಗ್ರಾಮ ಪಂಚಾಯತ್ ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದರು.
ಸಾಮಾಗ್ರಿ ಹಸ್ತಾಂತರ, ಗೌರವಾರ್ಪಣೆ : ದಾನಿಗಳಿಂದ ಕೊಡುಗೆಯಾಗಿ ನೀಡಿದ ಕೆಲಸದ ಸಾಮಾಗ್ರಿಗಳನ್ನು ನೋಂದಾಯಿತ ಕೂಲಿಗಾರರಿಗೆ ಮುಖ್ಯ ಕಾರ್ಯದರ್ಶಿಯವರು ಹಸ್ತಾಂತರಿಸಿದರು. ವೈಯಕ್ತಿಕ ಫಲಾನುಭವಿಗಳಾದ ಹರೀಶ್ ಕರ್ಕೇರ ಮತ್ತು ಸುದೀಪ್ ರೋಷನ್ ಲೋಬೊ ಹಾಗೂ ಎಲ್ಲಾ ಕಾರ್ಮಿಕರನ್ನು ಗೌರವಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಿವ್ಯಾ ವಿ. ಆಚಾರ್ಯ ಇವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾ. ಪಂ. ಸಹಾಯಕ ನಿರ್ದೇಶಕರಾದ ಚಂದ್ರಕಲಾ, ತಾಂತ್ರಿಕ ಸಂಯೋಜಕರಾದ ಪವನ್ ಜಿ., ಬಿಎಫ್ ಟಿ ಶಂಕರ್, ಯೋಜನಾ ಸಂವಹನಕಾರರಾದ ಅಕ್ಷಯ್ ಕೃಷ್ಣ, ಪಂಚಾಯತ್ ಕಾರ್ಯದರ್ಶಿ ಅನಂದ್ ಕುಲಕರ್ಣಿ, ಗ್ರಾಮ ಪಂಚಾಯತ್ ಸದಸ್ಯರಾದ ಪರಶುರಾಮ ಭಟ್, ಹರೀಶ್ ಶೆಟ್ಟಿ, ಗ್ರಾಮ ಪಂಚಾಯತ್ ಸಿಬ್ಬಂದಿ ಸದಾನಂದ ಪೂಜಾರಿ, ರೇಷ್ಮಾ ಆಚಾರ್ಯ, ನೀತಾ ನಾಯಕ್, ರಕ್ಷಿತಾ, ಯಶೋದ, ಚಂದ್ರಿಕಾ, ರಮೇಶ್ ಶೆಟ್ಟಿ, ಪ್ರೀತೇಶ್, ಸುಂದರ ಹಾಗೂ ಸ್ಥಳೀಯರಾದ ಭಾಸ್ಕರ ಶೆಟ್ಟಿ, ಮಾಜಿ ಗ್ರಾ.ಪಂ. ಸದಸ್ಯರಾದ ಸುನೀತಾ ಶೆಟ್ಟಿ, ಮಮತಾ ವಾಗ್ಳೆ ಹಾಗೂ ಯೋಜನೆಯ ಸುಮಾರು ಮೂವತ್ತಾರು ಜನ ಕಾರ್ಮಿಕರು, ಗ್ರಾಮಸ್ಥರು, ಫಲಾನುಭವಿಗಳು ಉಪಸ್ಥಿತರಿದ್ದರು.
ಕೂಲಿಯಿಂದ ಮಗಳನ್ನು ಗಗನಸಖಿಯಾಗಿಸಿದ ಮಹಿಳೆ : ಕೂಲಿ ಕಾರ್ಮಿಕರಲ್ಲೊಬ್ಬರಾದ ಕುಸುಮ ನಾಯಕ್ ಇವರು ಆರು ವರ್ಷಗಳಿಂದ ಯೋಜನೆಯಲ್ಲಿ ಕೂಲಿ ಪಡೆದು, ಅದರಿಂದ ಮಗಳಿಗೆ ವಿದ್ಯಾಭ್ಯಾಸ ನೀಡಿ ಗಗನಸಖಿಯನ್ನಾಗಿಸಲು ಯೋಜನೆ ಪ್ರಯೋಜನವಾಗಿದೆಯೆಂದು ತಿಳಿಸಿ ಭಾವುಕರಾದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಶಿಧರ ವಾಗ್ಳೆ ಸ್ವಾಗತಿಸಿ, ವಂದಿಸಿದರು. ಆರೋಗ್ಯ ಇಲಾಖೆಯ ಸಿ ಎಚ್ ಒ ವೈಷ್ಣವಿ ಮತ್ತು ಶಕುಂತಲ ಆರೋಗ್ಯ ತಪಾಸನೆ ನಡೆಸಿದರು
ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಸರ್ವೇಶ್ ಭಟ್ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

Posted On: 21-02-2025 10:39AM
ಉಡುಪಿ : ಡಾ| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ, ಮೈಸೂರು ನಡೆಸಿದ ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಸರ್ವೇಶ್ ಭಟ್ ಶೇ.83.8% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಶ್ರೀ ಭ್ರಾಮರಿ ನಾಟ್ಯಾಲಯ, ಅಮ್ಮುಂಜೆಯ ನೃತ್ಯಗುರು ವಿದ್ವಾನ್ ಕೆ.ಭವಾನಿ ಶಂಕರ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾರೆ.
ಪೆರಂಪಳ್ಳಿಯ ವೇದಮೂರ್ತಿ ಪ್ರಾಣೇಶ್ ಭಟ್ ಹಾಗೂ ಶ್ರೀಮತಿ ಸೌಮ್ಯ ಭಟ್ ಇವರ ಪುತ್ರರಾಗಿದ್ದು. ಜೈನ್ ಯೂನಿವರ್ಸಿಟಿ ಬೆಂಗಳೂರು ಸಂಸ್ಥೆಯಲ್ಲಿ ಎಂಬಿಎ ಪದವಿಯನ್ನು ಮುಂದುವರಿಸುತ್ತಿದ್ದಾರೆ.
ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ ಯಶಸ್ವಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

Posted On: 21-02-2025 10:36AM
ಉಡುಪಿ : ಡಾ| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ, ಮೈಸೂರು ನಡೆಸಿದ ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ ಕು.ಯಶಸ್ವಿ ಶೇ.82.4 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಶ್ರೀ ಭ್ರಾಮರಿ ನಾಟ್ಯಾಲಯ ಅಮ್ಮುಂಜೆಯ ನೃತ್ಯಗುರು ವಿದ್ವಾನ್ ಕೆ.ಭವಾನಿ ಶಂಕರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಡಾ.ಜಿ. ಶಂಕರ್ ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ ಇಲ್ಲಿ ದ್ವಿತೀಯ ಎಂ.ಕಾಮ್ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಪುತ್ತೂರು ಸುಬ್ರಹ್ಮಣ್ಯ ನಗರದ ವಿಜಯ್ ಸನಿಲ್ ಹಾಗೂ ಶ್ರೀಮತಿ ಸುಮಾ ಸನಿಲ್ ದಂಪತಿಗಳ ಪುತ್ರಿಯಾಗಿದ್ದಾಳೆ.
ಫೆ.23 : ಕುತ್ಯಾರು ಕುಲಾಲ ಸಂಘದ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ ; ಸನ್ಮಾನ

Posted On: 21-02-2025 10:30AM
ಕಾಪು : ತಾಲೂಕಿನ ಕುತ್ಯಾರು ಮೂಲ್ಯರ ಯಾನೆ ಕುಲಾಲರ ಸಂಘ (ರಿ.) ಕುತ್ಯಾರು ಇದರ ವಾರ್ಷಿಕೋತ್ಸವ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಫೆ. 23 ರ ಭಾನುವಾರ ಕುತ್ಯಾರು ರಾಮೋಟ್ಟು ಬನತೋಡಿ ಗದ್ದೆಯಲ್ಲಿ ನಡೆಯಲಿದ್ದು, ಸಮುದಾಯದ ಪ್ರಮುಖರು, ಊರಿನ ಗಣ್ಯರ ಜೊತೆಗೆ, ಕುಲಾಲ ಸಮುದಾಯದ ಇಬ್ಬರನ್ನು ಸನ್ಮಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶೈಲೇಶ್ ಕುಲಾಲ್ ಮತ್ತು ಪ್ರಮುಖರು ಪ್ರಕಟನೆಯಲ್ಲಿ ತಿಳಿಸಿರುವರು.
ಫೆ. 20-23 : ಉದ್ಯಾವರದಲ್ಲಿ ಏಳನೇ ವರ್ಷದ ನಿರಂತರ ಬಹುಭಾಷಾ ನಾಟಕೋತ್ಸವ

Posted On: 20-02-2025 10:42AM
ಕಾಪು : ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭವಾಗಿರುವ ನಿರಂತರ್ ಉದ್ಯಾವರ ಸಂಘಟನೆ 7ನೇ ವರ್ಷದ ಬಹುಭಾಷಾ ನಾಟಕೋತ್ಸವವನ್ನು ಫೆಬ್ರವರಿ 20 ರಿಂದ 23ರ ವರೆಗೆ ಉದ್ಯಾವರದ ಸರಕಾರಿ ಪದವಿ ಪೂರ್ವ ಕಾಲೇಜು, ಮೈದಾನ, ಗ್ರಾಮ ಪಂಚಾಯತ್ ಕಚೇರಿ ಹಿಂಭಾಗದಲ್ಲಿ ಆಯೋಜಿಸಲಾಗಿದೆ.
ಫೆಬ್ರವರಿ 20ರಂದು ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ.) ಬೈಕಾಡಿ ಬ್ರಹ್ಮಾವರದ ಮಂದಾರ ತಂಡದಿಂದ ಬೆತ್ತಲಾಟ ಕನ್ನಡ ನಾಟಕ, ಫೆಬ್ರವರಿ 21ರಂದು ಪ್ರತಿಷ್ಠಿತ ಸುಮನಸ ಕೊಡವೂರು ಉಡುಪಿ ಇವರಿಂದ ತುಳು ಭಾಷೆಯಲ್ಲಿ ಈದಿ, ಫೆಬ್ರವರಿ 22ರಂದು ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಕಾಲೇಜು ಇವರಿಂದ ಹ್ಯಾಂಗ್ ಆನ್ ಕನ್ನಡದಲ್ಲಿ ಮತ್ತು ಫೆಬ್ರವರಿ 23 ಕೊನೆಯ ದಿನ ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಕಾಲೇಜು ಇವರಿಂದ ಕೊಂಕಣಿ ಭಾಷೆಯಲ್ಲಿ ಪಯ್ಣ್ ಪರ್ವತಕ್ ಪ್ರದರ್ಶನವಾಗಲಿದೆ.
ಪ್ರತಿದಿನ ಸಂಜೆ 6:30ಕ್ಕೆ ಸರಿಯಾಗಿ ನಾಟಕಗಳು ಆರಂಭವಾಗಲಿದ್ದು, ಎಲ್ಲಾ ನಾಟಕಗಳಿಗೆ ಉಚಿತ ಪ್ರವೇಶವಿರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.