Updated News From Kaup
ಬೋರ್ಡ್ ಆಫ್ ಇಸ್ಲಾಮಿಕ್ ಕರ್ನಾಟಕ ಕಾಪು ಸೆಂಟರ್ - ಅಭಿನಂದನಾ ಸಮಾರಂಭ
Posted On: 18 Aug 2025, 10:27 AM
ಕಾಪು : ಸಂಪತ್ತಿಗಿಂತ ವಿದ್ಯೆ ಮನುಷ್ಯನಿಗೆ ಮುಖ್ಯವಾಗಿದೆ. ವಿದ್ಯೆ ಇಲ್ಲದಿದ್ದರೆ ಆತನ ಬದುಕು ಬರೀ ಶೂನ್ಯ. ಸಂಪತ್ತಿನಿಂದ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ. ವಿದ್ಯೆಯಿಂದ ಜ್ಞಾನ ಗಳಿಸಲು ಪ್ರಯತ್ನಿಸಬೇಕು. ಲೌಕಿಕ ಜ್ಞಾನದ ಜೊತೆಗೆ ಧಾರ್ಮಿಕ ಜ್ಞಾನವನ್ನು ಕೂಡ ಮುತುವರ್ಜಿಯಿಂದ ಗಳಿಸಬೇಕು. ದೇವನ ವತಿಯಿಂದ ಬಂದ ಕೊನೆಯ ಗ್ರಂಥ ಕುರಾನ್ ಆಗಿದ್ದು, ಅದರಲ್ಲಿ ಇರುವ ಮೊದಲ ವಾಕ್ಯವೇ ಜ್ಞಾನ ಗಳಿಸುವ ಕುರಿತಾಗಿದೆ ಎಂದು ಆಯಿಷಾ ಮಸ್ಜಿದ್ ನೆಜಾರ್ ನ ಧರ್ಮ ಗುರುಗಳಾದ ಮೌಲಾನ ಆದಿಲ್ ನದ್ವಿ ಯವರು ಹೇಳಿದರು. ಅವರು ಕಾಪು ಕೆ. ಒನ್ ಹೋಟೆಲ್ ನ ಸಭಾಂಗಣ ದಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಕರ್ನಾಟಕ ಕಾಪು ಸೆಂಟರ್ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದರು ಜಮಾ ಅತೆ ಇಸ್ಲಾಮಿ ಹಿಂದ್ ನ ಸದಸ್ಯೆ ರೇಷ್ಮಾ ಬೈಲೂರು ರವರು ಮಾತನಾಡಿ, ಮನುಷ್ಯನು ಭೂಮಿಗೆ ಬಂದ ಉದ್ದೇಶವೇನು? ಬಂದ ನಂತರ ಏನು ಮಾಡಬೇಕು? ಮರಣದ ನಂತರದ ಬದುಕಿಗೆ ಇಹಲೋಕದಲ್ಲಿ ಯಾವ ಕೆಲಸ ಮಾಡಬೇಕು ಎಂಬುದರ ಬಗ್ಗೆ ನಾವು ಅಧ್ಯಯನ ಮಾಡಬೇಕು. ಮತ್ತು ಈ ಅಧ್ಯಯನದಿಂದ ಸಿಗುವ ಜ್ಞಾನವನ್ನು ತನ್ನಲ್ಲಿ ಅಳವಡಿಸಿಕೊಂಡು ಅದರ ಪ್ರಯೋಜನ ಸಮಾಜದಲ್ಲಿರುವ ಇತರರಿಗೂ ಸಿಗಬೇಕು. ಆಗ ಮಾತ್ರ ಆತ ಗಳಿಸಿದ ಜ್ಞಾನ ಸಾರ್ಥಕವಾಗುವುದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಾಕೀರ್ ಹುಸೈನ್, ಆಸೀಫ್ ಜಿ. ಡಿ, ಅಷ್ಫಾಕ್ ಅಹಮದ್ ಮುಜಾವರ್ ರವರು, ಬಿ. ಐ. ಇ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಅಭಿನಂದಿಸುತ್ತಾ, ಪ್ರಶಸ್ತಿ ಮತ್ತು ಸರ್ಟಿಫಿಕೇಟ್ ಮತ್ತು ಎಸ್. ಐ. ಓ ಮತ್ತು ಜಿ. ಐ. ಓ ವರ್ತುಲದಲ್ಲಿ ಭಾಗವಹಿಸಿದ ಎಸ್.ಎಸ್.ಎಲ್.ಸಿಯಲ್ಲಿ ಮತ್ತು ಪಿ.ಯು.ಸಿ ಯಲ್ಲಿ 80% ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು ಹಾಗೂ ಸಿ. ಐ. ಓ ನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಜಮಾ ಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ಅಧ್ಯಕ್ಷರಾದ ಅನ್ವರ್ ಅಲಿಯವರು ಮಾತನಾಡಿ, ಜಮಾ ಅತೆ ಇಸ್ಲಾಮಿ ಹಿಂದ್ ಈ ರಾಷ್ಟ್ರದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವ, ಕೆಡುಕನ್ನು ಅಳಿಸಿ ಒಳಿತನ್ನು ಸಂಸ್ಥಾಪಿಸುವ, ಯುವ ಪೀಳಿಗೆಯನ್ನು ನೈತಿಕ ಮೇರೆಯಲ್ಲಿ ಮುನ್ನಡೆಸುವ, ಸಮಾಜದಲ್ಲಿ ಶಾಂತಿ, ಪ್ರೀತಿ ಸೌಹಾರ್ದತೆ ಕಾಪಿಡುವ ಕೆಲಸ ಮಾಡುತ್ತಿದೆ ಇದರೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳಿ ಎಂದರು. ಫರಾನ ಬೇಗಮ್ ರವರು ಕುರಾನ್ ಪಠಿಸಿದರು. ಮುಹಮ್ಮದ್ ಶರೀಫ್ ಶೇಕ್ ಸ್ವಾಗತಿಸಿದರು. ಬಿ. ಐ. ಇ.ನ ಸಂಚಾಲಕಿ ಶೇಹೇನಾಜ್ ಪ್ರಸ್ತಾವನೆಗೈದರು. ಮೆಹರೂಫರವರು ನಿರೂಪಿಸಿ, ಸಯ್ಯದ್ ಮುಸ್ತಖೀಮ್ ವಂದಿಸಿದರು.
ಶಿರ್ವ ಸಂತ ಮೇರಿ ಪ. ಪೂ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕೆ ಆರ್ ಪಾಟ್ಕರ್ ಬಂಟಕಲ್ಲು ಆಯ್ಕೆ
Posted On: 18 Aug 2025, 09:55 AM
ಶಿರ್ವ : ಇಲ್ಲಿನ ಸಂತಮೇರಿ ಪ. ಪೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ, ಸಂತ ಮೇರಿ ಅಲುಮ್ನಿ ಎಸೋಸಿಯೇಶನ್ ನ ನೂತನ ಅಧ್ಯಕ್ಷರಾಗಿ ಶಿರ್ವ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಕೆ ಆರ್ ಪಾಟ್ಕರ್ ಬಂಟಕಲ್ಲು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಡಾ. ಗ್ರೇನಲ್ ಡಿ'ಮೆಲ್ಲೊ, ಕಾರ್ಯದರ್ಶಿಯಾಗಿ ಮೋಹನ್ ನೊರೊನ್ನಾ, ಜೊತೆ ಕಾರ್ಯದರ್ಶಿ ಕ್ಲಾರ ಪಿರೇರಾ, ಕೋಶಾಧಿಕಾರಿಯಾಗಿ ಜುಲಿಯಾನ್ ರೊಡ್ರಿಗಸ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೊಬಾರ್ಟ್ ಮಚಾದೋ, ಮೆಲ್ವಿನ್ ಅರಾನ್ನಾ, ಫೆಡ್ರಿಕ್ ಪಿಂಟೊ, ಡೆನಿಸ್ ಮಥಾಯಸ್, ಮರ್ವಿನ್ ಮೆನೇಜಸ್, ಅರ್ವಿನ್ ಡಿ' ಸೋಜಾ, ಅನಿತಾ ಮೆಂಡೋನ್ಸಾ, ಮನೋಜ್ ಮೆನೆಜಸ್, ವಸಂತ ಅಂಚನ್, ಮ್ಯಾಕ್ಸಿಮ್ ಡಿ' ಸೋಜಾ ಆಯ್ಕೆಯಾದರು.
ಹೆಜಮಾಡಿ : ಕಾಪು ತಾಲೂಕು ದಸರಾ ಕ್ರೀಡಾಕೂಟಕ್ಕೆ ಚಾಲನೆ
Posted On: 17 Aug 2025, 02:57 PM
ಪಡುಬಿದ್ರಿ : ಕಾಪು ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯೋಜನೆಯಲ್ಲಿ ಹೆಜಮಾಡಿ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕಾಪು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ 2025 - 26 ಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಕಾಪು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ನವೀನ್ ಚಂದ್ರ ಎಸ್ ಸುವರ್ಣ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ಅವಕಾಶವಿದೆ. ಯುವ ಸಮೂಹ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕ್ರೀಡೆಯು ದೈಹಿಕ, ಮಾನಸಿಕ ಸಮತೋಲನಕ್ಕೆ ಪೂರಕವಾಗಿದೆ. ಒತ್ತಡಗಳಿಂದ ದೂರವಾಗಲು ಕ್ರೀಡೆ ಅನಿವಾರ್ಯ ಎಂದರು. ಕಾಪು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿರಣ್ ಕುಮಾರ್ ಶೆಟ್ಟಿ ಮಾತನಾಡಿ, ಸಮರ್ಪಕ ಕ್ರೀಡಾಂಗಣವಿಲ್ಲದಿದ್ದರೂ ಕಾಪು ತಾಲೂಕಿನಲ್ಲಿ ಸತತ 3 ವರ್ಷಗಳಿಂದ ದಸರಾ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ ಎಂದರು. ಈ ಸಂದರ್ಭ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಷ್ಮಾ ಮೆಂಡನ್, ಉಪಾಧ್ಯಕ್ಷರಾದ ಮೋಹನ್ ಸುವರ್ಣ, ರಾಷ್ಟ್ರೀಯ ಹೈ ಜಂಪ್ ಕ್ರೀಡಾಪಟು ಪ್ರಕಾಶ್ ಶೆಟ್ಟಿ ಹೆಜಮಾಡಿ, ರಾಜ್ಯ ಸರಕಾರಿ ನೌಕರರ ಪರಿಷತ್ತು ನಿರ್ದೇಶಕ ಅಬ್ದುಲ್ ರಜಾಕ್ ಮತ್ತಿತರರು ಉಪಸ್ಥಿತರಿದ್ದರು. ಯೋಗ, ವಾಲಿಬಾಲ್, ತ್ರೋಬಾಲ್, ಕಬಡ್ಡಿ, ಕೊಕ್ಕೊ, ಫುಟ್ಬಾಲ್, ಅಥ್ಲೆಟಿಕ್ಸ್ ಮತ್ತು ವಿವಿಧ ಕ್ರೀಡಗಳು ಜರಗಿದವು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾಪು ತಾಲೂಕು ಅಧಿಕಾರಿ ರಿತೇಶ್ ಕುಮಾರ್ ಸ್ವಾಗತಿಸಿದರು. ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ನಿರೂಪಿಸಿ, ಎಸ್ ವಿ ಎಚ್ ಇನ್ನಂಜೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಶೆಟ್ಟಿ ವಂದಿಸಿದರು.
ಶ್ರೀ ವಿಠೋಬಾ ಭಜನಾ ಮಂಡಳಿ ಗೋಳಿಕಟ್ಟೆ, ಇನ್ನಂಜೆ : 79ನೇ ವಾರ್ಷಿಕ ಸ್ವಾತಂತ್ರ್ಯೋತ್ಸವ ಆಚರಣೆ
Posted On: 15 Aug 2025, 04:35 PM
ಕಾಪು : ಶ್ರೀ ವಿಠೋಬಾ ಭಜನಾ ಮಂಡಳಿ ಗೋಳಿಕಟ್ಟೆ, ಇನ್ನಂಜೆ ಇಲ್ಲಿ 79ನೇ ವಾರ್ಷಿಕ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಸಂಭ್ರಮ - ಸಡಗರದಿಂದ ಆಚರಿಸಲಾಯಿತು. ಇನ್ನಂಜೆ ಶಾಲೆಯಲ್ಲಿ ಶಿಕ್ಷಕಿಯಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಮತಾ ಎಚ್. ಅಂಚನ್ ಧ್ವಜಾರೋಹಣಗೈದರು. ಬಳಿಕ ಭಜನಾ ಮಂಡಳಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಭಜನಾ ಮಂಡಳಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪಡುಬಿದ್ರಿ : ಕಾಮತ್ ಸರ್ವಿಸ್ ಸೆಂಟರ್ - 79 ನೇ ಸ್ವಾತಂತ್ರ್ಯ ದಿನಾಚರಣೆ
Posted On: 15 Aug 2025, 02:56 PM
ಪಡುಬಿದ್ರಿ : 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪಡುಬಿದ್ರಿ ಕಾಮತ್ ಸರ್ವಿಸ್ ಸೆಂಟರ್ ಎಚ್ಪಿ ಪೆಟ್ರೋಲ್ ಪಂಪ್ ಇಲ್ಲಿ ಆಚರಿಸಲಾಯಿತು. ಪಡುಬಿದ್ರಿ ಮೆಸ್ಕಾಂ ಎ.ಇ. ಪ್ರೀತಂ ಮತ್ತು ಕುಟುಂಬ ಧ್ವಜಾರೋಹಣ ಮಾಡಿದರು. ಈ ಸಂದರ್ಭ ಪೆಟ್ರೋಲ್ ಪಂಪ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಿರ್ವ : ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಂಟಕಲ್ ಬಿ ಸಿ ರೋಡ್ - 79ನೇ ಸ್ವಾತಂತ್ರ್ಯ ದಿನಾಚರಣೆ
Posted On: 15 Aug 2025, 02:53 PM
ಶಿರ್ವ : ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಂಟಕಲ್ ಬಿ ಸಿ ರೋಡ್ ಇದರ ಆಶ್ರಯದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನದ ಧ್ವಜಾರೋಹಣವನ್ನು ಸಂಘದ ಗೌರವಾಧ್ಯಕ್ಷರಾದ ಕೆ.ಆರ್. ಪಾಟ್ಕರ್ ರವರು ನೆರವೇರಿಸಿ, ಸ್ವಾತಂತ್ರ್ಯ ದಿನದ ಸಂದೇಶವನ್ನು ನೀಡಿದರು. ಮುಖ್ಯ ಅತಿಥಿಯಾಗಿ ಡಾ. ಪ್ರಕಾಶ್ ಭಟ್, ವಲೇರಿಯನ್ ಮತಯಸ್, ದೀಪಕ್, ವಾಯ್ಲೆಟ್ ಕ್ಯಾಸ್ಟಲಿನೋ, ಉಮೇಶ್ ಪ್ರಭು ಉಪಸ್ಥಿತರಿದ್ದರು. ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಿ ಸಿ ರೋಡ್ ಇದರ ಅಧ್ಯಕ್ಷರಾದ ಸದಾಶಿವ ಕುಲಾಲ್ ಸ್ವಾಗತಿಸಿದರು. ಶ್ರೀತೇಶ್ ಕುಲಾಲ್ ವಂದಿಸಿದರು. ಡೆನಿಸ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ಕಾಪು : ಮಲ್ಲಾರು ಯುವಕ ಮಂಡಲದ ವತಿಯಿಂದ ಧ್ವಜಾರೋಹಣ
Posted On: 15 Aug 2025, 01:41 PM
ಕಾಪು : ಮಲ್ಲಾರು ಯುವಕ ಮಂಡಲ (ರಿ.) ಮಲ್ಲಾರು ಇದರ ವತಿಯಿಂದ ಮಂಡಲದ ಹಿರಿಯ ಸದಸ್ಯರಾದ ಅನ್ವರ್ ಅಲಿ ಕಾಪುರವರು 79 ನೇ ಸ್ವಾತಂತ್ರ್ಯತ್ಸವದ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ, ಪ್ರೀತಿ, ಸೌಹಾರ್ದತೆಯನ್ನು ಕಾಪಾಡಿದರೆ, ನಾವು ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ. ಇದಕ್ಕೆ ನಾವೆಲ್ಲರೂ ಬದ್ಧರಾಗಿರಬೇಕೆನ್ನುವ ಸಂದೇಶವನ್ನು ನೀಡಿದರು. ಈ ಸಂಭ್ರಮಾಚಾರಣೆಯಲ್ಲಿ ಮಲ್ಲಾರು ಯುವಕ ಮಂಡಲದ ಉಪಾಧ್ಯಕ್ಷರಾದ ಹಸನ್ ಅಬ್ದುಲ್ ಖಾದರ್, ಕಾರ್ಯದರ್ಶಿ ಸತೀಶ್ ಆಚಾರ್ಯ, ನಾರಾಯಣ, ವೇಲು ಸ್ವಾಮಿ, ನಸೀರ್ ಅಹಮದ್ ಶರ್ಫುದ್ದಿನ್, ಅಬ್ದುಲ್ ಸತ್ತಾರ್, ಕೃಷ್ಣ ಟೈಲರ್, ಗುರುಮೂರ್ತಿ, ಮೊಯಿದಿನ್, ಜಮಾಲ್, ಮಯ್ಯದಿ, ಅಣ್ಣಪ್ಪ, ಇಬ್ರಾಹಿಮ್, ಮುಹಮ್ಮದ್ ಸೈಫ್, ಅಂಗನವಾಡಿ ಕಾರ್ಯಕತೆಯರಾದ ರೇಖಾ, ವಿದ್ಯಾ ಪ್ರಶಾಂತ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ವೇಲು ಸ್ವಾಮಿಯವರ ವತಿಯಿಂದ ಸಿಹಿ ತಿಂಡಿ ಮತ್ತು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.
ದಂಡತೀರ್ಥ ವಿದ್ಯಾ ಸಂಸ್ಥೆ : ಮುದ್ದುಕೃಷ್ಣ ವೇಷ ಸ್ಪರ್ಧೆ
Posted On: 15 Aug 2025, 01:34 PM
ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯ ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಮುದ್ದು ಕೃಷ್ಣ ಮತ್ತು ಮುದ್ದು ರಾಧೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಳೆ ವಿದ್ಯಾರ್ಥಿನಿ, ವಕೀಲೆ ಮತ್ತು ನೋಟರಿ ಅಕ್ಷತಾ ಶೆಣೈ ಕಾಪು ಇವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ಮುದ್ದು ಮಕ್ಕಳಿಗೆ ಇಂತಹ ಅವಕಾಶ ಶಾಲೆಯಲ್ಲಿ ದೊರೆತಾಗ ಅವರ ಪ್ರತಿಭೆ ವ್ಯಕ್ತವಾಗುತ್ತದೆ ಹಾಗೂ ನಮ್ಮ ಸಂಸ್ಕೃತಿಯ ಪರಿಚಯವಾಗುತ್ತದೆ. ಬದಲಾಗುತ್ತಿರುವ ಈ ಪರಿಸ್ಥಿತಿಯಲ್ಲಿ ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಶಾಲೆ ಮತ್ತು ಶಿಕ್ಷಕರ ಮೇಲಿದೆ ಎಂಬ ಸಂದೇಶವನ್ನು ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯೆ, ಪ್ರಶಾಂತ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ಪನ್ನ ಪ್ರಶಾಂತ್ ಶೆಟ್ಟಿಯವರು ವಹಿಸಿ, ಎಲ್ಲಾ ಧರ್ಮೀಯರು ಸೇರಿಕೊಂಡು ಈ ಮುದ್ದು ಕೃಷ್ಣ,ರಾಧೆಯರ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ಸಂತಸದಾಯಕ, ಶಾಲೆಯಲ್ಲಿ ಸರ್ವಧರ್ಮ ಸಮಭಾವದ ಈ ವಾತಾವರಣ ನಿಜಕ್ಕೂ ಪ್ರಶಂಸನೀಯ ಎಂಬ ಸಂದೇಶವನ್ನು ನೀಡಿದರು. ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ಮತ್ತು ಶಿಕ್ಷಕಿ ರಜನಿ ಪ್ರಭು ಸಾಂದರ್ಭಿಕವಾಗಿ ಮಾತನಾಡಿದರು. ಪ್ರಾಂಶುಪಾಲ ನೀಲಾನಂದ್ ನಾಯ್ಕ್, ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್, ಶಿಕ್ಷಕ - ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ವಿವಿಧ ವಿಭಾಗಗಳ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ಹಾಗೂ ಸ್ಪರ್ಧಾಳುಗಳಿಗೆ ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಲಾಯಿತು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್ ಸ್ವಾಗತಿಸಿ, ಶಿಕ್ಷಕಿ ವರ್ಷಾ ಆಚಾರ್ಯ ವಂದಿಸಿದರು. ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಜಲಕ್ಷ್ಮೀ ರಾವ್ ನಿರೂಪಿಸಿದರು.
ಮುಂಡಾಲ ಯುವ ವೇದಿಕೆ ಪಡುಬಿದ್ರಿ : ಸ್ವಾತಂತ್ರ್ಯ ಸಂಭ್ರಮಾಚರಣೆ
Posted On: 15 Aug 2025, 01:14 PM
ಪಡುಬಿದ್ರಿ : 79ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಪಡುಬಿದ್ರಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಮುಂಡಾಲ ಯುವ ವೇದಿಕೆಯ ಜೊತೆಯಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ, ಸಿಹಿತಿಂಡಿ ವಿತರಿಸಲಾಯಿತು. ಧ್ವಜಾರೋಹಣವನ್ನು ವೇದಿಕೆಯ ಅಧ್ಯಕ್ಷರಾದ ಮಂಜುನಾಥ ಕರ್ಕೇರ ನೆರವೇರಿಸಿದರು. ವಸತಿ ನಿಲಯದ ಮೇಲ್ವಿಚರಕರಾದ ಬಸವರಾಜ್ ಶುಭಾಶಯವನ್ನು ಸಲ್ಲಿಸಿದರು. ಮುಂಡಾಲ ವೇದಿಕೆಯ ಸದಸ್ಯರಾದ ಸಂತೋಷ್ ನಂಬಿಯಾರ್ ಮಾತನಾಡಿ, ಸಾವಿರಾರು ವರ್ಷಗಳ ದಾಳಿಯನ್ನು ಈ ದೇಶ ಶೌರ್ಯದ ಮೂಲಕವೇ ಉತ್ತರವನ್ನಿತ್ತು, ತಾಯಿ ಭಾರತಿಯನ್ನು ದುಷ್ಟರಿಂದ ರಕ್ಷಿಸುವಂತ ಕಾರ್ಯ ನಮ್ಮ ಪೂರ್ವಜರು ಮಾಡಿದರು. ಹಾಗಾಗಿ ನಾವು ಇಂದು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ ಭವಿಷ್ಯದ ಪೀಳಿಗೆ ಈ ಪರಾಕ್ರಮ, ಶೌರ್ಯ ಬಲಿದಾನದ ವಿಚಾರವನ್ನು ತಿಳಿಸುತ್ತ, ಮುಂದೆ ಅಂತಹ ಸಂದಿಗ್ಧ ಪರಿಸ್ಥಿತಿ ಬಾರದಂತೆ ರಾಷ್ಟರಕ್ಷಣೆಯ ಜವಾಬ್ದಾರಿ ನಮ್ಮಿಂದಾಗಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಕಾರ್ಯದರ್ಶಿ ನಿತೀನ್ ಸಾಲ್ಯಾನ್, ಕೋಶಾಧಿಕಾರಿ ಪ್ರಕಾಶ್ ಮುಂಡ್ಕೂರು, ಸ್ಥಾಪಕಾದ್ಯಕ್ಷರಾದ ಪಿ.ಪ್ರಸನ್ನ ಕುಮಾರ್, ಸದಸ್ಯರಾದ ಸುರೇಶ್ ಪಡುಬಿದ್ರಿ, ಸೋಮಯ್ಯ ಎರ್ಮಾಳ್, ವೇದಿಕೆಯ ಸದಸ್ಯರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಾಪು : ಮುಟ್ಲಪಾಡಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
Posted On: 15 Aug 2025, 01:08 PM
ಕಾಪು : ಮುಟ್ಲಪಾಡಿ ಹಳೆ ವಿದ್ಯಾರ್ಥಿಗಳು, ಅಂಗನವಾಡಿ ಕೇಂದ್ರ ಮುಟ್ಲಪಾಡಿ ಹಾಗೂ ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಕಡಂಬು ಮಟ್ಟಾರ್ ಆಶ್ರಯದಲ್ಲಿ ಮುಟ್ಲಪಾಡಿ ಶಾಲೆಯಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯರಾದ ಸುಶೀಲ ಪೂಜಾರ್ತಿ, ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಮಂಜುನಾಥ್ ಆಚಾರ್ಯ, ಅಂಗನವಾಡಿ ಶಿಕ್ಷಕಿ ನಿಶ್ಮಾ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಟ್ಲಪಾಡಿ ಶಾಲೆಯ ಹಳೆವಿದ್ಯಾರ್ಥಿಗಳು, ಶಾಲೆಯ ಮಕ್ಕಳು, ವಿಶ್ವಕರ್ಮ ಸಮಾಜ ಸೇವಾ ಸಂಘದ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡರು.
