Updated News From Kaup

ಶಿರ್ವ : ಬಂಟಕಲ್ ಸನ್ ಶೈನ್ ಸೀನಿಯರ್ ಚೇಂಬರ್ ವತಿಯಿಂದ ವನಮಹೋತ್ಸವ

Thumbnail
Posted On: 25 Sep 2025, 04:38 PM

ಶಿರ್ವ : ತಾಲೂಕಿನ ಬಂಟಕಲ್ ಸನ್ ಶೈನ್ ಸೀನಿಯರ್ ಚೇಂಬರ್ ಇದರ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನೆರವೇರಿತು. ಅಧ್ಯಕ್ಷರಾದ ಸೀನಿಯರ್ ರಮೇಶ್ ಬಂಟಕಲ್ ಗಿಡ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಪೂರ್ವಾಧ್ಯಕ್ಷರಾದ ಸೀನಿಯರ್ ಸಂದೀಪ್ ಬಂಗೇರ, ಕಾರ್ಯದರ್ಶಿ ಸೀನಿಯರ್ ರವೀಂದ್ರ ಪಾಟ್ಕರ್, ಸದಸ್ಯೆ ಸೀನಿಯರ್ ಪ್ರೀತಿ ಲತಾ ಉಪಸ್ಥಿತರಿದ್ದರು.

ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಲೇಖನ ಯಜ್ಞದ ಪುಣ್ಯ ಭೂಮಿಗೆ ಚಾಲನೆ

Thumbnail
Posted On: 25 Sep 2025, 04:30 PM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿಯಲ್ಲಿ ಶರನ್ನವರಾತ್ರಿ ಮಹೋತ್ಸವದ 4 ನೇ ದಿನವಾದ ಸೆ. 25ರಂದು ಬೆಳಿಗ್ಗೆ ನವದುರ್ಗಾ ಲೇಖನ ಯಜ್ಞ ಲೇಖನ ಮಂಟಪದಲ್ಲಿ ದೇವಳದಲ್ಲಿಯೇ ನವದುರ್ಗಾ ಲೇಖನವನ್ನು ಬರೆಯಲು ಲೇಖನ ಯಜ್ಞದ ಪುಣ್ಯ ಭೂಮಿಗೆ ಪ್ರಧಾನ ತಂತ್ರಿ ಜ್ಯೋತಿಷ್ಯ ವಿದ್ವಾನ್ ಕೊರಂಗ್ರಪಾಡಿ ಕೆ. ಪಿ ಕುಮಾರಗುರು ತಂತ್ರಿ ಮತ್ತು ಪ್ರಧಾನ ಅರ್ಚಕರಾದ ವೇ.ಮೂ. ಶ್ರೀನಿವಾಸ ತಂತ್ರಿ ಕಲ್ಯಾ ಇವರ ಉಪಸ್ಥಿತಿಯಲ್ಲಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಸಮಕ್ಷಮದಲ್ಲಿ ಚಾಲನೆ ನೀಡಲಾಯಿತು. ಕಾಪುವಿನ ಅಮ್ಮ ನೂತನ ದೇವಳದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೊದಲು ತಾತ್ಕಾಲಿಕ ಸಾನಿಧ್ಯದಲ್ಲಿ ನೆಲೆಯಾಗಿದ್ದು, ಅದೇ ಜಾಗದಲ್ಲಿ ಇದೀಗ ನವದುರ್ಗಾ ಲೇಖನ ಮಂಟಪ ರಚನೆಯಾಗಿದ್ದು, ವಿಶೇಷವಾಗಿ ಲೇಖನವನ್ನು 9 ದಿನಗಳವರೆಗೆ ಸಾನಿಧ್ಯದಲ್ಲೇ ಬರೆಯಲು ಅಥವಾ ಒಂದು ದಿನ ದೇವಳದಲ್ಲಿಯೇ ಬರೆದು ನಂತರದ ದಿನಗಳನ್ನು ಮನೆಯಲ್ಲಿ ಪೂರೈಸಿ ಲೇಖನ ಪುಸ್ತಕವನ್ನು ಶಾಶ್ವತ ಸೇವೆಯ ಸಹಿತವಾಗಿ ದೇವಳಕ್ಕೆ ಸಮರ್ಪಿಸುವ ಪುಣ್ಯಾವಕಾಶವನ್ನು ದೇವಳದ ಅಭಿವೃದ್ಧಿ ಸಮಿತಿಯಿಂದ ಒದಗಿಸಲಾಗಿದೆ. ಈ ಸಂದರ್ಭ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ, ಘಂಟಾನಾದ ಸೇವಾ ಸಮಿತಿಯ ಅಧ್ಯಕ್ಷ ಮತ್ತು ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗಿಶ್ ವಿ. ಶೆಟ್ಟಿ, ಧಾರ್ಮಿಕ ಸಮಿತಿಯ ಪ್ರಧಾನ ಸಂಚಾಲಕರಾದ ಭಗವಾನ್ ದಾಸ್ ಶೆಟ್ಟಿಗಾರ್, ನವದುರ್ಗಾ ಲೇಖನ ಯಜ್ಞ ಸಮಿತಿಯ ಕೋಶಾಧಿಕಾರಿ ಕೆ. ವಿಶ್ವನಾಥ್, ಮಹಿಳಾ ಪ್ರಧಾನ ಸಂಚಾಲಕರಾದ ಸಾವಿತ್ರಿ ಗಣೇಶ್ ಮತ್ತು ಆರ್ಥಿಕ ಸಮಿತಿಯ ಸಂಚಾಲಕರಾದ ಸುನಿಲ್ ಎಸ್. ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಬೆಳ್ಳೆ : ರೋಜ್‌ಗಾರ್ ದಿವಸ್ ಮತ್ತು ಆರೋಗ್ಯ ತಪಾಸಣೆ

Thumbnail
Posted On: 21 Sep 2025, 05:45 PM

ಶಿರ್ವ : ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರ "ರೋಜ್‌ಗಾರ್ ದಿವಸ್" ಆಚರಣೆ ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮ ಶನಿವಾರ ಶ್ರೀಪಾಜಕ ಕ್ಷೇತ್ರದ ಆವರಣದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಬೆಳ್ಳೆ ಗ್ರಾ.ಪಂ.ಅಧ್ಯಕ್ಷೆ ದಿವ್ಯಾ ವಿ.ಆಚಾರ್ಯ ವಹಿಸಿದ್ದರು. ಪಾಕಜಕ್ಷೇತ್ರದ ಪ್ರಧಾನ ಅರ್ಚಕರಾದ ವೇ.ಮೂ.ಮಾಧವ ಉಪಾಧ್ಯಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ಮಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹರಿಕೃಷ್ಣ ಉಪಾಧ್ಯಾಯ ಸಾಂಪ್ರದಾಯಿಕ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಯೋಜನೆಯ ತಾಲೂಕು ಮಟ್ಟದ ಬಿಎಫ್‌ಟಿ ಶಂಕರ್ ಸಕಾಲಿಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪಿಡಿಒ ಆನಂದ್ ಕುಲಕರ್ಣಿ, ಪಂಚಾಯತ್ ಸದಸ್ಯರಾದ ಪ್ರೇಮಾ ವೆಂಕಟೇಶ್, ಹರೀಶ್ ಶೆಟ್ಟಿ, ಯೋಜನೆಯ ತಾಲೂಕು ತಾಂತ್ರಿಕ ಸಂಯೋಜಕ ಪವನ್, ಯೋಜನೆಯ ವಿಷಯ ನಿರ್ವಾಹಕಿ ನೀತಾ ನಾಯಕ್, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯರ್ತರು, ಪಂಚಾಯತ್ ಸಿಬ್ಬಂದಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ಪರಶುರಾಮ ಭಟ್ ಸ್ವಾಗತಿಸಿದರು. ಪಂಚಾಯತ್ ಉಪಾಧ್ಯಕ್ಷ ಶಶಿಧರ ವಾಗ್ಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನಂತರ ಸಾಮೂಹಿಕ ಆರೋಗ್ಯ ತಪಾಸಣೆ ನಡೆಯಿತು.

ಹೆಜಮಾಡಿ‌ ವಿಶ್ವ ಹಿಂದೂ ಪರಿಷತ್‌, ಸಾರ್ವಜನಿಕ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಿತಿಯಿಂದ ರೂ.1,11,111 ದೇಣಿಗೆ

Thumbnail
Posted On: 21 Sep 2025, 02:53 PM

ಹೆಜಮಾಡಿ‌ : ಇಲ್ಲಿನ ವಿಶ್ವ ಹಿಂದೂ ಪರಿಷತ್‌, ಹೆಜಮಾಡಿ ಸಾರ್ವಜನಿಕ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಿತಿಯ ವತಿಯಿಂದ ರೂ.1,11,111 (ಒಂದು ಲಕ್ಷದ ಹನ್ನೊಂದು ಸಾವಿರದ ನೂರ ಹನ್ನೊಂದು) ಮೊತ್ತದ ಹಣವನ್ನು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಹೆಜಮಾಡಿ ಇದರ ಜೀರ್ಣೋದ್ಧಾರ ಕಾರ್ಯಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ವಿಶ್ವ ಹಿಂದೂ ಪರಿಷತ್, ಹೆಜಮಾಡಿ ಅಧ್ಯಕ್ಷರು, ಪದಾಧಿಕಾರಿಗಳು, ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆಯ ಪ್ರಮುಖರು ಉಪಸ್ಥಿತರಿದ್ದರು.

ನಿನಾದ ಕ್ರಿಯೇಷನ್ ಯುಟ್ಯೂಬ್ ಚಾನಲ್ ನಲ್ಲಿ ಕಾಪು ಮಾರಿಯಮ್ಮನ ಭಕ್ತಿ ಗಾಯನ - ಕಾಪು ಶಾಸಕರಿಂದ ಬಿಡುಗಡೆ

Thumbnail
Posted On: 21 Sep 2025, 02:14 PM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಿನಾದ ಕ್ರಿಯೇಷನ್ ಯುಟ್ಯೂಬ್ ಚಾನಲ್ ಅರ್ಪಿಸುವ ಕಾಪು ಮಾರಿಯಮ್ಮನ ಭಕ್ತಿ ಗಾಯನವು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಇವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾರಿಗುಡಿಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ, ಮಾರಿಗುಡಿಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ಯೋಗೀಶ್ ವಿ. ಶೆಟ್ಟಿ ಬಾಲಾಜಿ, ರಮೇಶ್ ಹೆಗ್ಡೆ ಕಲ್ಯ, ರವೀಂದ್ರ ಮಲ್ಲಾರು, ಜಯ ರಾಣ್ಯ ಮಲ್ಲಾರು, ಬಿ ಕೆ ಶ್ರೀನಿವಾಸ್ ಮಲ್ಲಾರು, ಹಾಗು ಚಂದ್ರಶೇಖರ್ ಎಸ್. ಕಟಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಗೆಳೆಯರ ಬಳಗ ಅಂಬಾಗಿಲು : ಬಾಲಕಿಯೋರ್ವಳ ವೈದ್ಯಕೀಯ ವೆಚ್ಚಕ್ಕೆ ಧನ ಸಹಾಯ

Thumbnail
Posted On: 21 Sep 2025, 01:49 PM

ಕಾಪು : ಗೆಳೆಯರ ಬಳಗ ಅಂಬಾಗಿಲು ಇವರ ವತಿಯಿಂದ ಪ್ರಥಮ ಸೇವಾರ್ಥವಾಗಿ ಚಾರ್ವಿ (9 ವರ್ಷ) ಅವರ ಶಸ್ತ್ರ ಚಿಕಿತ್ಸೆಗೆ, ಗುಂಪಿನ ಸಹಕಾರದೊಂದಿಗೆ ರೂ.21,000 ಧನ ಸಂಗ್ರಹಿಸಿ ಹಸ್ತಾಂತರಿಸಲಾಯಿತು. ಗೆಳೆಯರ ಬಳಗ ಅಂಬಾಗಿಲು ಇದರ ಸದಸ್ಯರು ಉಪಸ್ಥಿತರಿದ್ದರು.

ಕಾಪು : ರಾಣಿ ಅಬ್ಬಕ್ಕನ ಸ್ಮರಣೆ ನಮ್ಮ ಯುವ ಮನಸ್ಸುಗಳಿಗೆ ಸ್ಪೂರ್ತಿಯಾಗಲಿ - ಸುರೇಶ್ ಶೆಟ್ಟಿ ಗುರ್ಮೆ

Thumbnail
Posted On: 21 Sep 2025, 11:44 AM

ಕಾಪು : ಆತ್ಮವಿಶ್ವಾಸ ಹೊಂದಿದ್ದರೆ ಅಪರಿಮಿತವಾದದ್ದನ್ನು ಸಾಧಿಸಬಹುದು ಎನ್ನುವುದಕ್ಕೆ ನಮ್ಮ ಹೆಮ್ಮೆಯ ಅಬ್ಬಕ್ಕ ರಾಣಿಯೇ ಸಾಕ್ಷಿ. ಇಂತಹ ಸಾಧಕರ ಚರಿತ್ರೆಯು ನಮ್ಮಲ್ಲಿ ಸಂಸ್ಕಾರವನ್ನು ಮೂಡಿಸುತ್ತದೆ. ಸಂಸ್ಕಾರದ ಸ್ಪರ್ಶದಿಂದ ಕಲ್ಲು ದೇವರಾಗಬಹುದು, ಹೆಪ್ಪು ತುಪ್ಪವಾಗಬಹುದು, ಕವಿಮನಸ್ಸು ಕಾಳಿದಾಸನೆನಿಸಬಹುದು. ಆತ್ಮವಿಶ್ವಾಸದೊಂದಿಗಿನ ನಿಮ್ಮ ಪ್ರಯತ್ನವೇ ಇಲ್ಲಿ ಬಹಳ ಮುಖ್ಯವಾದದ್ದು. ರಾಣಿ ಅಬ್ಬಕ್ಕನ ಸ್ಮರಣೆ ನಮ್ಮ ಯುವ ಮನಸ್ಸುಗಳಿಗೆ ಸ್ಪೂರ್ತಿಯಾಗಲಿ. ನೀವೂ ನಿಮ್ಮ ಬದುಕಿನಲ್ಲಿ ಅಪರಿಮಿತವಾದದನ್ನು ಸಾಧಿಸುವಂತಾಗಲಿ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಹಾರೈಸಿದರು. ಅವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಹಾಗೂ ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ರಾಣಿ ಅಬ್ಬಕ್ಕನ ಕುರಿತಾದ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಕಾಂತ್ ಭಟ್ ಮಾತನಾಡಿ ರಾಣಿ ಅಬ್ಬಕ್ಕನ ಚರಿತ್ರೆ ತಮಗೆಲ್ಲರಿಗೂ ಕೂಡ ಅತಿ ಹೆಚ್ಚು ಸ್ಪೂರ್ತಿದಾಯಕವಾದದ್ದು ಯಾಕೆಂದರೆ ಒಂದು ಕಾಲದಲ್ಲಿ ಜಗತ್ತನ್ನು ಆಳಿದ ಅತಿ ದೊಡ್ಡ ಸಾಮ್ರಾಜ್ಯ ಎಂಬ ಖ್ಯಾತಿ ಪಡೆದ ಪೋರ್ಚುಗೀಸರ ಸೈನ್ಯವನ್ನು ಆಕೆ ತನ್ನಲ್ಲಿದ್ದ ಕಚ್ಚಾ ವಸ್ತುಗಳನ್ನೇ ಬಳಸಿಕೊಂಡು ಅತ್ಯಂತ ಚತುರತೆಯಿಂದ ನುಚ್ಚುನೂರಾಗಿಸುವಲ್ಲಿ, ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದವಳು. ಅಬ್ಬಕ್ಕನ ಧೀಮಂತ ವ್ಯಕ್ತಿತ್ವ ನಮ್ಮೆಲ್ಲರ ಒಳಗೂ ದೇಶಪ್ರೇಮವನ್ನೂ, ಧೈರ್ಯವನ್ನು ತುಂಬಲಿ. ನಮ್ಮ ಬದುಕಿಗೆ ಪ್ರೇರಣೆ ನೀಡಲಿ ಎಂದು ಅಭಿಪ್ರಾಯಪಟ್ಟರು. ದಂಡತೀರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನೀಲಾನಂದ ನಾಯ್ಕ್, ಕೆ ಆರ್ ಎಂ ಎಸ್ ಎಸ್ ನ ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಮಾಧವ ಎಂ ಕೆ, ಸದಸ್ಯರಾದ ಡಾ| ಶರಣ್ ಶೆಟ್ಟಿ, ದಂಡ ತೀರ್ಥ ಸಮೂಹ ವಿದ್ಯಾರ್ಥಿಗಳ ಆಡಳಿತ ಮಂಡಳಿಯ ಶಿಕ್ಷಣ ಸಂಯೋಜಕರಾದ ಶಿವಣ್ಣ ಉಪಸ್ಥಿತರಿದ್ದರು. ಡಾ| ಶರಣ್ ಶೆಟ್ಟಿ ಅವರು ಸ್ವಾಗತಿಸಿ, ಸುಮನ ಕಾರ್ಯಕ್ರಮವನ್ನು ನಿರೂಪಿಸಿ, ಶಿವಣ್ಣ ವಂದಿಸಿದರು.

ಇನ್ನಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸುಬ್ರಹ್ಮಣ್ಯ ಎನ್ ಭಟ್ ರವರಿಗೆ ಪ್ರಶಸ್ತಿ

Thumbnail
Posted On: 21 Sep 2025, 09:57 AM

ಕಾಪು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ 2024 - 25ನೇ ಒಕ್ಕೂಟದ 39ನೆಯ ವಾರ್ಷಿಕ ಸಾಮಾನ್ಯ ಸಭೆಯು ಸೆ. 20 ರಂದು ಕೊರ್ಡೆಲ್ ಹಾಲ್ ಚಚ್೯ಗೇಟ್ ಕುಲಶೇಖರ ಮಂಗಳೂರು ಇಲ್ಲಿ ಜರಗಿತು. ಈ ಸಭೆಯಲ್ಲಿ ಪ್ರತಿಷ್ಠಿತ ದಕ್ಷಿಣ ಕನ್ನಡ ಸರಕಾರಿ ಒಕ್ಕೂಟದ 2024 -25 ನೇ ಸಾಲಿನ ಒಕ್ಕೂಟದ ಉತ್ತಮ ಕೃತಕ ಗರ್ಭಧಾರಣಾ ಪ್ರಶಸ್ತಿಯನ್ನು ಒಕ್ಕೂಟದ ಅಧ್ಯಕ್ಷರಾದ ಕೊಡವೂರು ರವಿರಾಜ ಹೆಗ್ಡೆ ಇವರು ಕಾಪು ತಾಲೂಕಿನ ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಥಮ ಚಿಕಿತ್ಸೆ ಹಾಗೂ ಪಶುಸಂಗೋಪನೆಗಾರರಾದ ಸುಬ್ರಹ್ಮಣ್ಯ ಎನ್ ಭಟ್ ರವರಿಗೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಉದಯ ಎಸ್ ಕೋಟ್ಯಾನ್, ಕೆಎಂಎಫ್ ನಿರ್ದೇಶಕರಾದ ಡಾ. ದೇವಿ ಪ್ರಸಾದ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ್ ಡಿ., ವ್ಯವಸ್ಥಾಪಕರಾದ ಡಾ. ರವಿರಾಜ ಉಡುಪ, ನಿರ್ದೇಶಕರುಗಳು, ಉಪ ವ್ಯವಸ್ಥಾಪಕರುಗಳು, ಸಿಬ್ಬಂದಿ ವರ್ಗ ಹಾಗೂ ಇನ್ನಂಜೆ ಹಾಲು ಸಹಕಾರಿ ಸಂಘದ ಅಧ್ಯಕ್ಷರಾದ ಶಿವರಾಮ ಶೆಟ್ಟಿಯವರು ಉಪಸ್ಥಿತರಿದ್ದರು.

ಶಿರ್ವ : ಪೋಲಿಸ್ ಅಧಿಕಾರಿಯೆಂದು ನಂಬಿಸಿ ಸೈಬರ್ ವಂಚಕರಿಂದ ರೂ. 4ಲಕ್ಷ ವಂಚನೆ

Thumbnail
Posted On: 20 Sep 2025, 12:54 PM

ಶಿರ್ವ : ಸೈಬರ್ ವಂಚಕರು ಪೋಲಿಸ್ ಅಧಿಕಾರಿಯೆಂದು ನಂಬಿಸಿ ಶಿರ್ವದ ವ್ಯಕ್ತಿಯೋರ್ವರಿಗೆ ಬ್ಯಾಂಕ್ ಖಾತೆಯಿಂದ ರೂ. 4 ಲಕ್ಷ ಹತ್ತು ಸಾವಿರ ಮೊತ್ತದ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ ಘಟನೆ ಶಿರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಿರ್ವದ ಲಿನೆಟ್ ಮೆಂಡೋನ್ಸರವರಿಗೆ ಸೆ.18 ರಂದು ವಾಟ್ಸ್ ಆಪ್ನಲ್ಲಿ ವಿಡಿಯೋ ಕಾಲ್ ಬಂದಿರುತ್ತದೆ. ಕರೆ ಮಾಡಿದ ವ್ಯಕ್ತಿಯು ನಿಮ್ಮ ಮೇಲೆ ಕೇಸು ಇದೆ ನಿಮ್ಮ ನಂಬರ್ ಬ್ಲಾಕ್ ಮಾಡುತ್ತೇವೆ. ನೀವು ಗೂಂಡಾಗಿರಿಯಲ್ಲಿ ಒಳಗೊಂಡಿದ್ದೀರಿ ಗೂಂಡಾಗಿರಿಯಲ್ಲಿ ಮಾಡಿದ ಹಣ ಕೂಡಾ ನಿಮ್ಮ ಬ್ಯಾಂಕ್ ಖಾತೆಯಲ್ಲಿರುತ್ತದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣ ಉಳಿಯಬೇಕಾದರೆ ಕೂಡಲೇ ನಾನು ತಿಳಿಸಿದ ಖಾತೆಗೆ ಹಾಕುವಂತೆ ಒಂದು ಪಿಡಿಎಪ್ ಪೈಲ್ ಕಳುಹಿಸಿದ್ದಾನೆ. ಆತನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಿದ್ದು ವಿಡಿಯೋ ಕಾಲ್ ಮಾಡಿದ ವ್ಯಕ್ತಿಯು ಪೊಲೀಸ್ ಸಮವಸ್ತ್ರದಲ್ಲಿದ್ದನು. ಅಲ್ಲದೆ ವಿಡಿಯೋ ಕಾಲ್ ಕರೆಯನ್ನು ಕಟ್ ಮಾಡಬಾರದು ಬೇರೆ ಯಾರಿಗೂ ಮಾಹಿತಿ ನೀಡಬಾರದು ಎಂದು ತಿಳಿಸಿರುತ್ತಾನೆ. ಅದರಂತೆ ಲಿನೆಟ್ ರವರು ತನ್ನ ಖಾತೆಯಲ್ಲಿದ್ದ ರೂ. 4,10,000 ಹಣವನ್ನು ಆತನು ತಿಳಿಸಿದ ಖಾತೆಗೆ ಆರ್ಟಿಜಿಸ್ ಮಾಡಿರುತ್ತಾರೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರಾಟೆಯಲ್ಲಿ ಸಾಣೂರು ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಕು. ಸೃಜನಾ ರಾಜ್ಯಮಟ್ಟಕ್ಕೆ ಆಯ್ಕೆ

Thumbnail
Posted On: 20 Sep 2025, 12:31 PM

ಕಾರ್ಕಳ : ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಮತ್ತು ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿನಿ ಕುಮಾರಿ ಸೃಜನಾ ಆಯ್ಕೆಯಾಗಿದ್ದಾರೆ. ಈಕೆ ಕಾಂತಾವರ ಗ್ರಾಮದ ಬಾರಾಡಿಯ ಜಗದೀಶ್ ಕುಲಾಲ್ ಮತ್ತು ಜ್ಯೋತಿ ಕುಲಾಲ್ ದಂಪತಿಗಳ ಸುಪುತ್ರಿ.