Updated News From Kaup

ನಿನಾದ ಕ್ರಿಯೇಷನ್ ಯುಟ್ಯೂಬ್ ಚಾನಲ್ ನಲ್ಲಿ ಕಾಪು ಮಾರಿಯಮ್ಮನ ಭಕ್ತಿ ಗಾಯನ - ಕಾಪು ಶಾಸಕರಿಂದ ಬಿಡುಗಡೆ

Thumbnail
Posted On: 21 Sep 2025, 02:14 PM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಿನಾದ ಕ್ರಿಯೇಷನ್ ಯುಟ್ಯೂಬ್ ಚಾನಲ್ ಅರ್ಪಿಸುವ ಕಾಪು ಮಾರಿಯಮ್ಮನ ಭಕ್ತಿ ಗಾಯನವು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಇವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾರಿಗುಡಿಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ, ಮಾರಿಗುಡಿಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ಯೋಗೀಶ್ ವಿ. ಶೆಟ್ಟಿ ಬಾಲಾಜಿ, ರಮೇಶ್ ಹೆಗ್ಡೆ ಕಲ್ಯ, ರವೀಂದ್ರ ಮಲ್ಲಾರು, ಜಯ ರಾಣ್ಯ ಮಲ್ಲಾರು, ಬಿ ಕೆ ಶ್ರೀನಿವಾಸ್ ಮಲ್ಲಾರು, ಹಾಗು ಚಂದ್ರಶೇಖರ್ ಎಸ್. ಕಟಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಗೆಳೆಯರ ಬಳಗ ಅಂಬಾಗಿಲು : ಬಾಲಕಿಯೋರ್ವಳ ವೈದ್ಯಕೀಯ ವೆಚ್ಚಕ್ಕೆ ಧನ ಸಹಾಯ

Thumbnail
Posted On: 21 Sep 2025, 01:49 PM

ಕಾಪು : ಗೆಳೆಯರ ಬಳಗ ಅಂಬಾಗಿಲು ಇವರ ವತಿಯಿಂದ ಪ್ರಥಮ ಸೇವಾರ್ಥವಾಗಿ ಚಾರ್ವಿ (9 ವರ್ಷ) ಅವರ ಶಸ್ತ್ರ ಚಿಕಿತ್ಸೆಗೆ, ಗುಂಪಿನ ಸಹಕಾರದೊಂದಿಗೆ ರೂ.21,000 ಧನ ಸಂಗ್ರಹಿಸಿ ಹಸ್ತಾಂತರಿಸಲಾಯಿತು. ಗೆಳೆಯರ ಬಳಗ ಅಂಬಾಗಿಲು ಇದರ ಸದಸ್ಯರು ಉಪಸ್ಥಿತರಿದ್ದರು.

ಕಾಪು : ರಾಣಿ ಅಬ್ಬಕ್ಕನ ಸ್ಮರಣೆ ನಮ್ಮ ಯುವ ಮನಸ್ಸುಗಳಿಗೆ ಸ್ಪೂರ್ತಿಯಾಗಲಿ - ಸುರೇಶ್ ಶೆಟ್ಟಿ ಗುರ್ಮೆ

Thumbnail
Posted On: 21 Sep 2025, 11:44 AM

ಕಾಪು : ಆತ್ಮವಿಶ್ವಾಸ ಹೊಂದಿದ್ದರೆ ಅಪರಿಮಿತವಾದದ್ದನ್ನು ಸಾಧಿಸಬಹುದು ಎನ್ನುವುದಕ್ಕೆ ನಮ್ಮ ಹೆಮ್ಮೆಯ ಅಬ್ಬಕ್ಕ ರಾಣಿಯೇ ಸಾಕ್ಷಿ. ಇಂತಹ ಸಾಧಕರ ಚರಿತ್ರೆಯು ನಮ್ಮಲ್ಲಿ ಸಂಸ್ಕಾರವನ್ನು ಮೂಡಿಸುತ್ತದೆ. ಸಂಸ್ಕಾರದ ಸ್ಪರ್ಶದಿಂದ ಕಲ್ಲು ದೇವರಾಗಬಹುದು, ಹೆಪ್ಪು ತುಪ್ಪವಾಗಬಹುದು, ಕವಿಮನಸ್ಸು ಕಾಳಿದಾಸನೆನಿಸಬಹುದು. ಆತ್ಮವಿಶ್ವಾಸದೊಂದಿಗಿನ ನಿಮ್ಮ ಪ್ರಯತ್ನವೇ ಇಲ್ಲಿ ಬಹಳ ಮುಖ್ಯವಾದದ್ದು. ರಾಣಿ ಅಬ್ಬಕ್ಕನ ಸ್ಮರಣೆ ನಮ್ಮ ಯುವ ಮನಸ್ಸುಗಳಿಗೆ ಸ್ಪೂರ್ತಿಯಾಗಲಿ. ನೀವೂ ನಿಮ್ಮ ಬದುಕಿನಲ್ಲಿ ಅಪರಿಮಿತವಾದದನ್ನು ಸಾಧಿಸುವಂತಾಗಲಿ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಹಾರೈಸಿದರು. ಅವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಹಾಗೂ ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ರಾಣಿ ಅಬ್ಬಕ್ಕನ ಕುರಿತಾದ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಕಾಂತ್ ಭಟ್ ಮಾತನಾಡಿ ರಾಣಿ ಅಬ್ಬಕ್ಕನ ಚರಿತ್ರೆ ತಮಗೆಲ್ಲರಿಗೂ ಕೂಡ ಅತಿ ಹೆಚ್ಚು ಸ್ಪೂರ್ತಿದಾಯಕವಾದದ್ದು ಯಾಕೆಂದರೆ ಒಂದು ಕಾಲದಲ್ಲಿ ಜಗತ್ತನ್ನು ಆಳಿದ ಅತಿ ದೊಡ್ಡ ಸಾಮ್ರಾಜ್ಯ ಎಂಬ ಖ್ಯಾತಿ ಪಡೆದ ಪೋರ್ಚುಗೀಸರ ಸೈನ್ಯವನ್ನು ಆಕೆ ತನ್ನಲ್ಲಿದ್ದ ಕಚ್ಚಾ ವಸ್ತುಗಳನ್ನೇ ಬಳಸಿಕೊಂಡು ಅತ್ಯಂತ ಚತುರತೆಯಿಂದ ನುಚ್ಚುನೂರಾಗಿಸುವಲ್ಲಿ, ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದವಳು. ಅಬ್ಬಕ್ಕನ ಧೀಮಂತ ವ್ಯಕ್ತಿತ್ವ ನಮ್ಮೆಲ್ಲರ ಒಳಗೂ ದೇಶಪ್ರೇಮವನ್ನೂ, ಧೈರ್ಯವನ್ನು ತುಂಬಲಿ. ನಮ್ಮ ಬದುಕಿಗೆ ಪ್ರೇರಣೆ ನೀಡಲಿ ಎಂದು ಅಭಿಪ್ರಾಯಪಟ್ಟರು. ದಂಡತೀರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನೀಲಾನಂದ ನಾಯ್ಕ್, ಕೆ ಆರ್ ಎಂ ಎಸ್ ಎಸ್ ನ ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಮಾಧವ ಎಂ ಕೆ, ಸದಸ್ಯರಾದ ಡಾ| ಶರಣ್ ಶೆಟ್ಟಿ, ದಂಡ ತೀರ್ಥ ಸಮೂಹ ವಿದ್ಯಾರ್ಥಿಗಳ ಆಡಳಿತ ಮಂಡಳಿಯ ಶಿಕ್ಷಣ ಸಂಯೋಜಕರಾದ ಶಿವಣ್ಣ ಉಪಸ್ಥಿತರಿದ್ದರು. ಡಾ| ಶರಣ್ ಶೆಟ್ಟಿ ಅವರು ಸ್ವಾಗತಿಸಿ, ಸುಮನ ಕಾರ್ಯಕ್ರಮವನ್ನು ನಿರೂಪಿಸಿ, ಶಿವಣ್ಣ ವಂದಿಸಿದರು.

ಇನ್ನಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸುಬ್ರಹ್ಮಣ್ಯ ಎನ್ ಭಟ್ ರವರಿಗೆ ಪ್ರಶಸ್ತಿ

Thumbnail
Posted On: 21 Sep 2025, 09:57 AM

ಕಾಪು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ 2024 - 25ನೇ ಒಕ್ಕೂಟದ 39ನೆಯ ವಾರ್ಷಿಕ ಸಾಮಾನ್ಯ ಸಭೆಯು ಸೆ. 20 ರಂದು ಕೊರ್ಡೆಲ್ ಹಾಲ್ ಚಚ್೯ಗೇಟ್ ಕುಲಶೇಖರ ಮಂಗಳೂರು ಇಲ್ಲಿ ಜರಗಿತು. ಈ ಸಭೆಯಲ್ಲಿ ಪ್ರತಿಷ್ಠಿತ ದಕ್ಷಿಣ ಕನ್ನಡ ಸರಕಾರಿ ಒಕ್ಕೂಟದ 2024 -25 ನೇ ಸಾಲಿನ ಒಕ್ಕೂಟದ ಉತ್ತಮ ಕೃತಕ ಗರ್ಭಧಾರಣಾ ಪ್ರಶಸ್ತಿಯನ್ನು ಒಕ್ಕೂಟದ ಅಧ್ಯಕ್ಷರಾದ ಕೊಡವೂರು ರವಿರಾಜ ಹೆಗ್ಡೆ ಇವರು ಕಾಪು ತಾಲೂಕಿನ ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಥಮ ಚಿಕಿತ್ಸೆ ಹಾಗೂ ಪಶುಸಂಗೋಪನೆಗಾರರಾದ ಸುಬ್ರಹ್ಮಣ್ಯ ಎನ್ ಭಟ್ ರವರಿಗೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಉದಯ ಎಸ್ ಕೋಟ್ಯಾನ್, ಕೆಎಂಎಫ್ ನಿರ್ದೇಶಕರಾದ ಡಾ. ದೇವಿ ಪ್ರಸಾದ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ್ ಡಿ., ವ್ಯವಸ್ಥಾಪಕರಾದ ಡಾ. ರವಿರಾಜ ಉಡುಪ, ನಿರ್ದೇಶಕರುಗಳು, ಉಪ ವ್ಯವಸ್ಥಾಪಕರುಗಳು, ಸಿಬ್ಬಂದಿ ವರ್ಗ ಹಾಗೂ ಇನ್ನಂಜೆ ಹಾಲು ಸಹಕಾರಿ ಸಂಘದ ಅಧ್ಯಕ್ಷರಾದ ಶಿವರಾಮ ಶೆಟ್ಟಿಯವರು ಉಪಸ್ಥಿತರಿದ್ದರು.

ಶಿರ್ವ : ಪೋಲಿಸ್ ಅಧಿಕಾರಿಯೆಂದು ನಂಬಿಸಿ ಸೈಬರ್ ವಂಚಕರಿಂದ ರೂ. 4ಲಕ್ಷ ವಂಚನೆ

Thumbnail
Posted On: 20 Sep 2025, 12:54 PM

ಶಿರ್ವ : ಸೈಬರ್ ವಂಚಕರು ಪೋಲಿಸ್ ಅಧಿಕಾರಿಯೆಂದು ನಂಬಿಸಿ ಶಿರ್ವದ ವ್ಯಕ್ತಿಯೋರ್ವರಿಗೆ ಬ್ಯಾಂಕ್ ಖಾತೆಯಿಂದ ರೂ. 4 ಲಕ್ಷ ಹತ್ತು ಸಾವಿರ ಮೊತ್ತದ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ ಘಟನೆ ಶಿರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಿರ್ವದ ಲಿನೆಟ್ ಮೆಂಡೋನ್ಸರವರಿಗೆ ಸೆ.18 ರಂದು ವಾಟ್ಸ್ ಆಪ್ನಲ್ಲಿ ವಿಡಿಯೋ ಕಾಲ್ ಬಂದಿರುತ್ತದೆ. ಕರೆ ಮಾಡಿದ ವ್ಯಕ್ತಿಯು ನಿಮ್ಮ ಮೇಲೆ ಕೇಸು ಇದೆ ನಿಮ್ಮ ನಂಬರ್ ಬ್ಲಾಕ್ ಮಾಡುತ್ತೇವೆ. ನೀವು ಗೂಂಡಾಗಿರಿಯಲ್ಲಿ ಒಳಗೊಂಡಿದ್ದೀರಿ ಗೂಂಡಾಗಿರಿಯಲ್ಲಿ ಮಾಡಿದ ಹಣ ಕೂಡಾ ನಿಮ್ಮ ಬ್ಯಾಂಕ್ ಖಾತೆಯಲ್ಲಿರುತ್ತದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣ ಉಳಿಯಬೇಕಾದರೆ ಕೂಡಲೇ ನಾನು ತಿಳಿಸಿದ ಖಾತೆಗೆ ಹಾಕುವಂತೆ ಒಂದು ಪಿಡಿಎಪ್ ಪೈಲ್ ಕಳುಹಿಸಿದ್ದಾನೆ. ಆತನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಿದ್ದು ವಿಡಿಯೋ ಕಾಲ್ ಮಾಡಿದ ವ್ಯಕ್ತಿಯು ಪೊಲೀಸ್ ಸಮವಸ್ತ್ರದಲ್ಲಿದ್ದನು. ಅಲ್ಲದೆ ವಿಡಿಯೋ ಕಾಲ್ ಕರೆಯನ್ನು ಕಟ್ ಮಾಡಬಾರದು ಬೇರೆ ಯಾರಿಗೂ ಮಾಹಿತಿ ನೀಡಬಾರದು ಎಂದು ತಿಳಿಸಿರುತ್ತಾನೆ. ಅದರಂತೆ ಲಿನೆಟ್ ರವರು ತನ್ನ ಖಾತೆಯಲ್ಲಿದ್ದ ರೂ. 4,10,000 ಹಣವನ್ನು ಆತನು ತಿಳಿಸಿದ ಖಾತೆಗೆ ಆರ್ಟಿಜಿಸ್ ಮಾಡಿರುತ್ತಾರೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರಾಟೆಯಲ್ಲಿ ಸಾಣೂರು ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಕು. ಸೃಜನಾ ರಾಜ್ಯಮಟ್ಟಕ್ಕೆ ಆಯ್ಕೆ

Thumbnail
Posted On: 20 Sep 2025, 12:31 PM

ಕಾರ್ಕಳ : ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಮತ್ತು ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿನಿ ಕುಮಾರಿ ಸೃಜನಾ ಆಯ್ಕೆಯಾಗಿದ್ದಾರೆ. ಈಕೆ ಕಾಂತಾವರ ಗ್ರಾಮದ ಬಾರಾಡಿಯ ಜಗದೀಶ್ ಕುಲಾಲ್ ಮತ್ತು ಜ್ಯೋತಿ ಕುಲಾಲ್ ದಂಪತಿಗಳ ಸುಪುತ್ರಿ.

ಸೆ. 21 : ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಗುರು ಸಂದೇಶ ಸಾಮರಸ್ಯ ಜಾಥಾ 2025

Thumbnail
Posted On: 20 Sep 2025, 10:07 AM

ಉಡುಪಿ: ಒಂದೇ ಜಾತಿ ಒಂದೇ ಮತ ಒಬ್ಬರೇ ದೇವರು ಎಂಬ ವಿಶ್ವಗುರುವಿನ ಸಾರ್ವಕಾಲಿಕ ಸತ್ಯ ಸಂದೇಶ ಸಾರಿದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿಯ ಹರಿಕಾರ, ಸಮಾಜ ಸುಧಾರಣೆಯ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೆ.21,ಆದಿತ್ಯವಾರದಂದು ಉಡುಪಿ ಜಿಲ್ಲಾ ಯುವ ವೇದಿಕೆಯ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಬಿಲ್ಲವ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಗುರು ಸಂದೇಶ ಸಾಮರಸ್ಯ ಜಾಥಾ 2025 ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ ಹೇಳಿದರು. ಅವರು ಉಡುಪಿಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಗುರು ಸಂದೇಶ ಸಾಮರಸ್ಯ ಜಾಥವು ಬನ್ನಂಜೆ ಜಯಲಕ್ಷ್ಮೀ ಎದುರುಗಡೆಯಿಂದ ಪ್ರಾರಂಭಗೊಂಡು ನಮ್ಮ ಸಮಾಜದ ದಕ್ಷ ಮಹಿಳಾ ಪೊಲೀಸ್ ಅಧಿಕಾರಿ ರೀನಾ ಸುವರ್ಣ ಮತ್ತು ಕರಾವಳಿಯ ನಿಷ್ಠೆಯ ದೈವಾರಾಧಕರಾದ ದೈವ ನರ್ತಕ ರವಿ ಪಡ್ಡಂರವರು ಗುರು ಸಂದೇಶ ಸಾಮರಸ್ಯ ರಥಕ್ಕೆ ಚಾಲನೆ ನೀಡಲಿದ್ದಾರೆ. ಗುರು ಸಂದೇಶ ಸಾಮರಸ್ಯ ಜಾಥಾದ ಮುಖ್ಯ ಅತಿಥಿಗಳಾಗಿ ಸಂಸದರು, ಶಾಸಕರು, ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಉಡುಪಿ ಪರಿಸರದ ಎಲ್ಲಾ ಬಿಲ್ಲವ ಸಂಘ ಸಂಸ್ಥೆಗಳ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಜಾಥಾವು ಬನ್ನಂಜೆ ಜಯಲಕ್ಷ್ಮಿ ಎದುರುಗಡೆಯಿಂದ ಸಿಟಿ ಬಸ್ ಸ್ಟ್ಯಾಂಡ್ - ಕೋರ್ಟ್ ರೋಡ್ - ಮಿಷನ್ ಕಾಂಪೌಂಡ್, ಮಹಿಷಮರ್ದಿನಿ ದೇವಸ್ಥಾನ, ಕೊರಂಗ್ರಪಾಡಿ, ಮಾರ್ಪಳ್ಳಿ, ಕುಕ್ಕಿಕಟ್ಟೆ, ಅಲೆವೂರು, ರಾಂಪುರ, ದೆಂದೂರ್‌ ಕಟ್ಟೆ, ಮಣಿಪುರ ಆಗಿ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಗುರುಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ. ಈ ಸೌಹಾರ್ದ ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ಬಾಂಧವರು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ನಾರಾಯಣ ಗುರುಗಳ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರು ಸಂದೇಶ ಸಾಮರಸ್ಯ ಜಾಥವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಬೇಕು ಎಂದವರು ಮನವಿ ಮಾಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಸುಧಾಕರ್ ಡಿ ಅಮೀನ್, ದಿವಾಕರ್ ಸನಿಲ್, ವಿಜಯ್ ಉದ್ಯಾವರ, ಮಹೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

ಸೆ. 22 - ಅ. 2 : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವ - 2025

Thumbnail
Posted On: 20 Sep 2025, 09:48 AM

ಕಾಪು : ಇಲ್ಲಿನ ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಸೆ.22 ರಿಂದ ಅ.2ರವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವವು 11 ದಿನಗಳ ಪರ್ಯಂತ ಅಮ್ಮನ ಸನ್ನಿಧಾನದಲ್ಲಿ ಮಾರಿಗುಡಿಯ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ಜ್ಯೋತಿಷ್ಯ ವಿದ್ವಾನ್ ಶ್ರೀ ಕೆ.ಪಿ. ಕುಮಾರಗುರು ತಂತ್ರಿಗಳ ಹಾಗೂ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಇವರ ಸಹಯೋಗದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾಹಿತಿ ನೀಡಿದರು. ಕಾಪುವಿನ ಹೊಸ ಮಾರಿಗುಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸೆಪ್ಟೆಂಬರ್ 22ರಂದು ಬೆಳಿಗ್ಗೆ 8:30ಕ್ಕೆ ಸರಿಯಾಗಿ ಶರನ್ನವರಾತ್ರಿ ಮಹೋತ್ಸವದ ಉದ್ಘಾಟನೆಯನ್ನು 9 ಜನ ಗಣ್ಯ ಮಹಿಳೆಯರು ಮಾಡಲಿದ್ದಾರೆ. ಕಾಪು ಕ್ಷೇತ್ರ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ಭಕ್ತರು ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಎಲ್ಲೆಡೆಯೂ 9 ದೀಪಗಳನ್ನು ಬೆಳಗುವ ಬಗ್ಗೆ ಕಾಪುವಿನ ಅಮ್ಮನ ಸಾನಿಧ್ಯ ಬೆಳಗಿದೆ. ಹಾಗಾಗಿ ಈ ಬಾರಿಯ ನವರಾತ್ರಿಯಲ್ಲಿ 9 ದೀಪಗಳನ್ನು ಬೆಳಗಿ ಉದ್ಘಾಟನೆ ನೆರವೇರಿಸಲಾಗುವುದು. ಬೆಳಿಗ್ಗೆ 10.00 ರಿಂದ ಶ್ರೀದೇವಿಗೆ ಹರಕೆಯಾಗಿ ಬಂದಿರುವ ಸೀರೆಗಳನ್ನು ದೇವಳದ ಪ್ರಾಂಗಣದಲ್ಲಿ ಏಲಂ ಮಾಡಲಾಗುವುದು. ಅಕ್ಟೋಬರ್ 1ರಂದು ಬೆಳಿಗ್ಗೆ 08:00 ಗಂಟೆಯಿಂದ ನವದುರ್ಗಾ ಲೇಖನ ಸಂಕಲ್ಪ, ಪುಸ್ತಕಸ್ಥ ವಾಗ್ಗೇವತಾಪೂಜನಮ್ ನಡೆಯಲಿದ್ದು, ಈಗಾಗಲೇ ಪುಸ್ತಕ ಬರೆದವರು ಈ ಪೂಜೆಯಲ್ಲಿ ಭಾಗಿಯಾಗಬೇಕೆಂದು ನವದುರ್ಗಾ ಲೇಖನ ಯಜ್ಞ ಸಮಿತಿ ತಿಳಿಸಿದೆ. ಅದೇ ದಿನ ಸಂಜೆ 05:30 ರಿಂದ ಶ್ರೀದೇವೀ ದುರ್ಗಾ ನಮಸ್ಕಾರ ಪೂಜಾ ನಡೆಯಲಿದೆ. ಭಾಗಿಯಾಗುವ ಭಕ್ತರು ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆಯಲ್ಲಿ ಭಾಗಿಯಾಗಬಹುದು. ಪ್ರತಿನಿತ್ಯ ಶ್ರೀದೇವಿಗೆ ಕಟ್ಟೋಕ್ತ ಪೂಜೆ ನಡೆಯಲಿದ್ದು, ಪೂಜಾ ಪ್ರಸಾದ ಸ್ವೀಕರಿಸಲು ಅವಕಾಶವಿದೆ. ಪ್ರತಿದಿನ ಸಂಜೆ ಗಂಟೆ 05:30 ರಿಂದ 07.00 ರವರೆಗೆ ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ. ಸಂಜೆ 07:00ರಿಂದ ಸಾಂಸ್ಕೃತಿಕ ವೈಭವದ ಮೆರುಗನ್ನು ನೀಡಲು ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಪ್ರದರ್ಶನ ನಡೆಯಲಿದೆ. ನವರಾತ್ರಿಯ ಎಲ್ಲಾ ದಿನಗಳಲ್ಲೂ ಭಕ್ತರಿಗೆ ಬೆಳಿಗ್ಗೆ ಗಂಟೆ 9:00 ರಿಂದ ಸಂಜೆ ಗಂಟೆ 06.00ರ ವರೆಗೆ ಘಂಟಾನಾದ ಸೇವೆಯನ್ನು ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ. ಭಕ್ತರು ಸನ್ನಿದಾನದಲ್ಲಿ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಉಚ್ಚಂಗಿ ಸಹಿತ ಕಾಪು ಶ್ರೀ ಮಾರಿಯಮ್ಮನ ಕೃಪೆಗೆ ಪಾತ್ರರಾಗಬೇಕೆಂದು ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಕಾರ್ಯನಿರ್ವಹಣಾಧಿಕಾರಿ ಹಾಗೂ ಅಭಿವೃದ್ಧಿಯ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಪರವಾಗಿ ವಾಸುದೇವ ಶೆಟ್ಟಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಸದಸ್ಯರಾದ ಮನೋಹರ ರಾವ್ ಕಲ್ಯ, ಮಾಧವ ಪಾಲನ್, ಕಾರ್ಯನಿರ್ವಹಣಾಧಿಕಾರಿ ರವಿ ಕಿರಣ್, ಬಾಲಾಜಿ ಯೋಗೀಶ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಕಳ : ಎಬಿವಿಪಿ ವತಿಯಿಂದ ಕಾಲೇಜಿನ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ

Thumbnail
Posted On: 20 Sep 2025, 09:38 AM

ಕಾರ್ಕಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕು ವತಿಯಿಂದ ಬಿ ಎಸ್ಸಿ ನರ್ಸಿಂಗ್ ಕಾಲೇಜು ಕಾರ್ಕಳದಲ್ಲಿ ಇರುವಂತಹ ಅನೇಕ ಸಮಸ್ಯೆಗಳ ಬಗ್ಗೆ ಸಂಸ್ಥೆಯ ಪ್ರಾಂಶುಪಾಲರಿಗೆ ಮನವಿ ನೀಡಲಾಯಿತು. ವಿದ್ಯಾರ್ಥಿಗಳು ಕಳೆದ 4 ವರ್ಷಗಳಿಂದ ಅನುಭವಿಸುವ ಸಮಸ್ಯೆಯನ್ನು ಮನವರಿಕೆ ಮಾಡಲಾಯಿತು. ಕಾಲೇಜಿನಲ್ಲಿ ಒಂದು ಸುಸಜ್ಜಿತ ಕಟ್ಟಡವಿಲ್ಲದೆ, ಕಾಲೇಜು ನಿರ್ವಹಣೆಗೆ ಬೇಕಾದ ಗುಮಾಸ್ತರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಇಲ್ಲದೆ, ಸರಿಯಾದ ಉಪನ್ಯಾಸಕರು ಇಲ್ಲದೆ, ಸರಿಯಾದ ತರಗತಿ ಕೊಠಡಿಗಳು ಇಲ್ಲದೆ, ಶಾಚಾಲಯಗಳ ವ್ಯೆವಸ್ಥೆಗಳು ಸರಿಯಾಗಿ ಇಲ್ಲದೆ, ನರ್ಸಿಂಗ್ ವ್ಯಾಸಂಗಕ್ಕೆ ಬೇಕಾದ ಅತ್ಯಗತ್ಯ ಉಪಕರಣಗಳು ಹಾಗೂ ವಿದ್ಯಾಭ್ಯಾಸಕ್ಕೆ ಬೇಕಾದ ಸರಿಯಾದ ಪ್ರಯೋಗಾಲಯವಿಲ್ಲದೆ, ಗ್ರಂಥಾಲಯ ವ್ಯವಸ್ಥೆ ಕಾಲೇಜಿನಲ್ಲಿ ಇಲ್ಲದೆ, ವಿದ್ಯಾರ್ಥಿಗಳು ಸಮಸ್ಯೆಗಳ ಸರಮಾಲೆಯನ್ನು ಎದುರಿಸುತ್ತಿದ್ದಾರೆ. ಅದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಮಸ್ಯೆ ಆಗುತ್ತಿದ್ದು ಇದಕ್ಕೆ ಸಂಬಂದಿಸಿ ಕಾಲೇಜಿನ ಆಡಳಿತ ಮಂಡಳಿ ತಕ್ಷಣವೇ ಬಂದು ಸರಿಯಾದ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಒಂದು ಉತ್ತಮವಾದ ಅವಕಾಶ ಒದಗಿಸಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿಗಳಾದ ಗಣೇಶ್ ಪೂಜಾರಿ, ಉಡುಪಿ ಜಿಲ್ಲಾ ಸಂಚಾಲಕರಾದ ಶ್ರೇಯಸ್ ಅಂಚನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ : ಮಾತೃ ವಂದನಾ ಕಾರ್ಯಕ್ರಮ

Thumbnail
Posted On: 20 Sep 2025, 09:28 AM

ಕಾಪು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ಕುತ್ಯಾರು ಇಲ್ಲಿ ಮಾತೃ ವಂದನಾ ಕಾರ್ಯಕ್ರಮವು ನಡೆಯಿತು. ಮೌನೇಶ್ ಶರ್ಮಾ ಮಾತೃ ವಂದನಾ ಕಾರ್ಯಕ್ರಮವನ್ನು ನೆರವೇರಿಸಿ, ಅಮ್ಮನ ಮಹತ್ವದ ಬಗ್ಗೆ ಧಾರ್ಮಿಕ ಉಪನ್ಯಾಸವನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ, ಮುಖ್ಯ ಕಾರ್ಯದರ್ಶಿಗಳಾದ ಗುರುರಾಜ್ ಕೆ ಜೆ, ಆಸೆಟ್ ನ ಸದಸ್ಯರಾದ ಸುಂದರ ಆಚಾರ್ಯ ಮರೋಳಿ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ವಿಜಯಲಕ್ಷ್ಮಿ ತಂತ್ರಿ, ಶಾಲಾ ಮಾತೃ ಮಂಡಳಿಯ ಅಧ್ಯಕ್ಷರಾದ ಶೋಭಾ ಆಚಾರ್ಯ, ಶಾಲಾ ಮುಖ್ಯ ಶಿಕ್ಷಕರಾದ ಅನಿತಾ, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಮತ್ತು ಪೋಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಅನಿತಾ ಮಾತಾಜಿ ಸ್ವಾಗತಿಸಿ, ರಶ್ಮಿ ಮಾತಾಜಿ ವಂದಿಸಿ, ರಮ್ಯಾ ಮಾತಾಜಿ ಕಾರ್ಯಕ್ರಮವನ್ನು ನಿರೂಪಿಸಿದರು.