Updated News From Kaup
ಕಾಪು : ತಾಲೂಕಿನ 16 ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸಾ ಅಭಿಯಾನ
Posted On: 25 Oct 2023, 07:48 PM
ಕಾಪು : ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕಾಪು ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕಾಪು ಇವರುಗಳ ಜಂಟಿ ಆಶ್ರಯದಲ್ಲಿ ಗ್ರೀನ್ ಪುಟ್ ಪ್ರಿಂಟ್ ಸಂಸ್ಥೆ ಚಿಕ್ಕಮಗಳೂರು ಇವರ ನೇತ್ರತ್ವದಲ್ಲಿ ಕಾಪು ತಾಲೂಕಿನ ಎಲ್ಲಾ 16 ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸ್ಥಳೀಯ ಪಂಚಾಯತ್ ಗಳ ಅನುದಾನದಿಂದ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸಾ ಅಭಿಯಾನ ಹಮ್ಮಿಕೊಳ್ಳಲಾಗದೆ. ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರವಾಗಿ ಅವುಗಳ ಸಂಖ್ಯೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವುದು ಮತ್ತು ಬೀದಿನಾಯಿಗಳಿಂದ ರೇಬಿಸ್ ರೋಗ ಹರಡುವುದನ್ನು ತಡೆಗಟ್ಟುವ ಸಲುವಾಗಿ ಅವುಗಳಿಗೆ ರೇಬಿಸ್ ಲಸಿಕೆ ನೀಡುವ ಕಾರ್ಯಕ್ರಮವೂ ಏಕಕಾಲದಲ್ಲಿ ನಡೆಯಲಿದೆ. ಈ ಅಭಿಯಾನ ಅಕ್ಟೋಬರ್ 25 ರಿಂದ ಪ್ರಾರಂಭವಾಗಿ ಒಂದು ತಿಂಗಳವರೆಗೆ ನಡೆಯಲಿದ್ದು ಸಾರ್ವಜನಿಕರು ಸಾಕುನಾಯಿಗಳನ್ನು ಬೀದಿಗೆ ಬಿಡಬಾರದಾಗಿ ವಿನಂತಿಸಲಾಗಿದೆ. ಹಾಗೆಯೇ ಗ್ರೀನ್ ಪುಟ್ ಪ್ರಿಂಟ್ ಸಂಸ್ಥೆಯ ಸಿಬ್ಬಂದಿಯವರು ಬೀದಿನಾಯಿಗಳನ್ನು ಹಿಡಿಯಲು ತಮ್ಮ ಗ್ರಾಮಗಳಿಗೆ ಬಂದಾಗ ಅವರಿಗೆ ಸಹಕರಿಸಬೇಕಾಗಿ ಕೋರಲಾಗಿದೆ. ಸದ್ರಿ ಸಂಸ್ಥೆಯವರು ಬೀದಿನಾಯಿಗಳನ್ನು ಹಿಡಿದು ತಂದು ಅವುಗಳಿಗೆ ಸಂತಾನಹರಣಶಸ್ತ್ರಚಿಕಿತ್ಸೆ ನಡೆಸಿ, ರೇಬಿಸ್ ಲಸಿಕೆ ನೀಡಿ, 3 ದಿನಗಳ ಕಾಲ ಅವುಗಳ ಅರೈಕೆ ಮಾಡಿ ನಂತರ ಯಾವ ಬೀದಿಯಲ್ಲಿ ಹಿಡಿದಿದ್ದಾರೊ ಅದೇ ಜಾಗದಲ್ಲಿ ಬಿಡಲಿದ್ದಾರೆ. ಈ ಅಭಿಯಾನದ ಯಶಸ್ಸಿಗೆ ಕಾಪು ತಾಲೂಕು ವ್ಯಾಪ್ತಿಯ ಎಲ್ಲಾ ಪಂಚಾಯತ್ ಗಳ ಅಧ್ಯಕ್ಷರು, ಸರ್ವ ಸದಸ್ಯರುಗಳು, ಪಂ. ಅ. ಅಧಿಕಾರಿಗಳು / ಸಿಬ್ಬಂದಿ ವರ್ಗ, ವಿವಿಧ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರ ಸಂಪೂರ್ಣ ಸಹಕಾರ ಕೋರಲಾಗಿದೆ ಎಂದು ತಾಲೂಕು ಪಶು ವೈದ್ಯಾಧಿಕಾರಿ ಡಾ.ಅರುಣ್ ಹೆಗ್ಡೆ ತಿಳಿಸಿದ್ದಾರೆ.
ಕಾರ್ಕಳ ಶಾಸಕ ಸುನೀಲ್ ಕುಮಾರ್ : ಕಾಪು ಮಾರಿಗುಡಿ ಭೇಟಿ - ಕಾಮಗಾರಿ ವೀಕ್ಷಣೆ
Posted On: 25 Oct 2023, 07:35 PM
ಕಾಪು : ಕರ್ನಾಟಕ ಸರಕಾರದ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಮಾಜಿ ಸಚಿವರು ಮತ್ತು ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ದಂಪತಿ ಸೋಮವಾರ ಸಂಜೆ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಹೊಸ ಮಾರಿಗುಡಿ ದೇವಳಕ್ಕೆ ಆಗಮಿಸಿ ಶ್ರೀದೇವಿಯ ದರುಶನವನ್ನು ಪಡೆದು, ಅಮ್ಮನ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು. ನಂತರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ವಾಸುದೇವ ಶೆಟ್ಟಿಯವರು ನಡೆಯುತ್ತಿರುವ ಕಾಮಗಾರಿ ಮತ್ತು ಸಮಗ್ರ ಜೀರ್ಣೋದ್ಧಾರದ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭ ಅವರು ಅಭಿವೃದ್ಧಿ ಸಮಿತಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ, ಪ್ರಶಂಶಿಸಿ, ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂಬ ಭರವಸೆಯನ್ನು ನೀಡಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯ, ದೇವಿಪಾತ್ರಿ ಗುರುಮೂರ್ತಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಜಗದೀಶ್ ಬಂಗೇರ, ಬಾಬು ಮಲ್ಲಾರ್, ಜೀರ್ಣೋದ್ಧಾರದ ಆರ್ಥಿಕ ಸಮಿತಿಯ ಕಾತ್ಯಾಯಿನಿ ತಂಡದ ಮುಖ್ಯ ಸಂಚಾಲಕರಾದ ಬೀನಾ ವಿ. ಶೆಟ್ಟಿ ಮತ್ತು ದೇವಳದ ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಉಪಸ್ಥಿತರಿದ್ದರು.
ಉಚ್ಚಿಲ : ದಸರಾ ನಿರ್ವಿಘ್ನವಾಗಿ ನೆರವೇರಲು ಸಮುದ್ರ ರಾಜನಿಗೆ ವಿಶೇಷ ಪೂಜೆ
Posted On: 24 Oct 2023, 12:59 PM
ಉಚ್ಚಿಲ : ಶ್ರೀ ಕ್ಷೇತ್ರ ಉಚ್ಚಿಲದ ಆಶ್ರಯದಲ್ಲಿ ನಡೆಯುತ್ತಿರುವ ಉಚ್ಚಿಲ ದಸರಾ 2023ರ ನವದುರ್ಗೆಯರ ಶೋಭಾಯಾತ್ರೆ ಹಾಗೂ ಜಲಸ್ತಂಭನದ ಪೂರ್ವಭಾವಿಯಾಗಿ ಇಂದು ಕಾರ್ಯಕ್ರಮವು ನಿರ್ವಿಘ್ನವಾಗಿ ನೇರವೇರುವಂತೆ ಪ್ರಾರ್ಥಿಸಿ ಸಮುದ್ರ ರಾಜನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ದೇವಳದ ಪ್ರಮುಖರು ಉಪಸ್ಥಿತರಿದ್ದರು.
ಶಿರ್ವ : ಚಂದ್ರನಗರದಲ್ಲಿ ಆರೋಗ್ಯ ಮಾಹಿತಿ ಶಿಬಿರ
Posted On: 23 Oct 2023, 01:04 PM
ಶಿರ್ವ : ರೋಟರಿ ಕ್ಲಬ್ ಶಿರ್ವ ಆಶ್ರಯದಲ್ಲಿ ಚಂದ್ರನಗರದ ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಸಭಾಂಗಣದಲ್ಲಿ ಆರೋಗ್ಯ ಮಾಹಿತಿ ಶಿಬಿರವನ್ನು ಶಿರ್ವ ರೋಟರಿ ಕ್ಲಬ್ ಅಧ್ಯಕ್ಷರಾದ ಫಾರೂಕ್ ಚಂದ್ರನಗರ ಉದ್ಘಾಟಿಸಿದರು. ಸನ್ಮಾನ : ಪ್ರೊಫೆಸರ್ ಹಾಗೂ ವೈದ್ಯಾಧಿಕಾರಿ ವಿ.ಪಿ.ಎ.ಎಂ.ಸಿ ವಡ್ನಗರ್ ಅಹಮದಬಾದ್, ಡಾ. ಶಿಬ್ಗತ್ಉಲ್ಲಾ ಶರೀಫ್ ಆರ್ ರವರನ್ನು ಸನ್ಮಾನಿಸಲಾಯಿತು. ತದ ನಂತರ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿವಿಲಿಯಮ್ ಮಚದೊ, ರಘುಪತಿ ಐತಾಳ್, ಫಿಲಿಫ್ ಕೇಸ್ತಾಲಿನೋ, ದಿವಾಕರ ಡಿ ಶೆಟ್ಟಿ, ಮೇಲ್ವಿನ್ ಡಿಸೋಜ, ಮೈಕಲ್ ಮತಾಯಸ್, ದಿವಾಕರ ಬಿ ಶೆಟ್ಟಿ ಕಳತ್ತೂರು ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಮಟ್ಟಾರುವಿನಲ್ಲಿ ದುರ್ಗಾಷ್ಟಮಿ ಉತ್ಸವ ಕಾರ್ಯಕ್ರಮ
Posted On: 23 Oct 2023, 11:25 AM
ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ದುರ್ಗಾಷ್ಟಮಿ ಉತ್ಸವ ಕಾರ್ಯಕ್ರಮ ಮಟ್ಟಾರು ಬಯಲು ರಂಗಮಂದಿರದಲ್ಲಿ ಜರಗಿತು. ಮಾತೃಶಕ್ತಿ ಉಡುಪಿ ಜಿಲ್ಲಾ ಪ್ರಮುಖ್ ಪೂರ್ಣಿಮಾ ಸುರೇಶ್ ದುರ್ಗಾಷ್ಟಮಿ ಉತ್ಸವದ ಸಂದೇಶ ನೀಡಿದರು. ಮಟ್ಟಾರು ಘಟಕ ಮಾತೃಶಕ್ತಿ ಪ್ರಮುಖ್ ಸುಮತಿ ಸಾಲ್ಯಾನ್ ಸಭಾಧ್ಯಕ್ಷತೆ ವಹಿಸಿದ್ದರು. ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವಾರಿಜಾ ಪೂಜಾರಿ, ಹಿಂದೂ ಜೂನಿಯರ್ ಕಾಲೇಜು ಉಪನ್ಯಾಸಕಿ ಸುಪ್ರೀತಾ ಶೆಟ್ಟಿ, ಉಪ ಆರೋಗ್ಯ ಕೇಂದ್ರದ ಪ್ರಾಥಮಿಕ ಸುರಕ್ಷಾಧಿಕಾರಿ ಗೀತಾ, ಮಾತೃಶಕ್ತಿ ಕಾಪು ಪ್ರಖಂಡ ಸಹಪ್ರಮುಖ್ ಉಷಾ ಪಾಟ್ಕರ್, ದುರ್ಗಾವಾಹಿನಿ ಮಟ್ಟಾರು ಸಂಚಾಲಕಿ ಕುಮಾರಿ ಶ್ವೇತಾ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಶ್ವೇತಾ ರಾವ್ ಸ್ವಾಗತಿಸಿದರು. ಕು.ಶ್ರೀರಕ್ಷಾ ಆಚಾರ್ಯ ವಂದಿಸಿದರು. ಭಜನೆ, ದುರ್ಗಾಪೂಜೆ ಮತ್ತು ಪ್ರಸಾದ ವಿತರಣೆ ಜರಗಿತು.
ಕಾಪು : ದೇವಾಡಿಗರ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ
Posted On: 22 Oct 2023, 01:14 PM
ಕಾಪು : ದೇವಾಡಿಗರ ಸೇವಾ ಸಂಘ (ರಿ.) ಕಾಪು ಇದರ ನೂತನ ಕಟ್ಟಡದ ಗುದ್ದಲಿ ಪೂಜೆಯು ಭಾನುವಾರ ಜರಗಿತು. ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಾಸುದೇವ ಶೆಟ್ಟಿ ದೇವಾಡಿಗರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶುಭ ಹಾರೈಸಿ ರೂ.99,999 ನ್ನು ತನ್ನ ವೈಯುಕ್ತಿಕ ನೆಲೆಯಲ್ಲಿ ದೇಣಿಗೆ ನೀಡಿದರು. ಕಾಪು ದೇವಾಡಿಗರ ಸೇವಾ ಸಂಘದ ಅಧ್ಯಕ್ಷರಾದ ಗೋವರ್ಧನ್ ಸೇರಿಗಾರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯ, ಕಾಪು ದೇವಾಡಿಗರ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಸಾವಿತ್ರಿ ಸುಧಾಕರ, ಪುರಸಭಾ ಸದಸ್ಯರಾದ ಹರಿಣಾಕ್ಷಿ, ಅರುಣ್ ಶೆಟ್ಟಿ, ವಿದ್ಯಾಲತಾ, ಲಕ್ಷ್ಮಿ ಜನಾರ್ದನ ದೇವಸ್ಥಾನ ಆಡಳಿತಾಧಿಕಾರಿಗಳಾದ ಅರುಣ್, ಕಾಪು ದೇವಾಡಿಗರ ಸೇವಾ ಸಂಘದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾಪು : ಸವೋಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಭೇಟಿ
Posted On: 21 Oct 2023, 07:46 PM
ಕಾಪು : ಸವೋಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ಶಿವಮಾಲಾ ದಂಪತಿ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರು ಶನಿವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವಿಯ ದರುಶನಗೈದು ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿದರು. ಅವರನ್ನು ಹುಲಿಕುಣಿತ ಮತ್ತು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ದೇವಳದ ಪ್ರಧಾನ ತಂತ್ರಿಗಳಾದ ವಿದ್ವಾನ್ ಕುಮಾರಗುರು ತಂತ್ರಿ, ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಇವರು ಪ್ರಾರ್ಥಿಸಿ ಮಾರಿಯಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು. ಕಾಪು ಶಾಸಕರು ಮತ್ತು ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ, ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಅನಿಲ್ ಬಲ್ಲಾಳ್ ಕಾಪು ಬೀಡು, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ರತ್ನಾಕರ ಶೆಟ್ಟಿ ನಡಿಕೆರೆ, ನಿರ್ಮಲ್ ಕುಮಾರ್ ಹೆಗ್ಡೆ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್ ಪಾಲನ್, ಮನೋಹರ್ ಎಸ್ ಶೆಟ್ಟಿ, ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾದ ಉದಯ ಸುಂದರ್ ಶೆಟ್ಟಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ರತ್ನಾಕರ ಹೆಗ್ಡೆ ಕಲ್ಯಾ ಬೀಡು, ರಮೇಶ್ ಶೆಟ್ಟಿ ಕಾಪು ಕೊಲ್ಯ, ಮೋಹನ್ ವಿ. ಶೆಟ್ಟಿ ಮುಂಬೈ, ಸಂದೀಪ್ ಶೆಟ್ಟಿ ಶಿರ್ವ, ಮುಂಬೈ, ಸಿ.ಎ ರವಿರಾಜ್ ಶೆಟ್ಟಿ, ಜಗದೀಶ್ ಶೆಟ್ಟಿ ನಂದಳಿಕೆ, ಮುಂಬೈ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಜಗದೀಶ್ ಬಂಗೇರ, ಬಾಬು ಮಲ್ಲಾರ್, ಗ್ರಾಮ ಸಮಿತಿಯ ಪ್ರಧಾನ ಸಂಚಾಲಕರಾದ ಜಿ. ಲೀಲಾಧರ ಶೆಟ್ಟಿ, ಅರುಣ್ ಶೆಟ್ಟಿ ಪಾದೂರು, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕರಾದ ಮಧುಕರ್ ಎಸ್, ಗೀತಾಂಜಲಿ ಎಮ್ ಸುವರ್ಣ, ವೀಣಾ ಶೆಟ್ಟಿ, ಪ್ರಚಾರ ಸಮಿತಿಯ ಸಂಚಾಲಕರಾದ ಜಯರಾಮ ಆಚಾರ್ಯ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಆರ್ಥಿಕ ಸಮಿತಿಯ 9 ತಂಡಗಳ ಮುಖ್ಯ ಸಂಚಾಲಕರು, ಸಂಚಾಲಕರುಗಳು, ವಿವಿಧ ಸಮಿತಿಯ ಸಂಚಾಲಕರುಗಳು, ದೇವಳದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ : ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡುವುದು, ಮರುಬಳಕೆ, ಮರು ಉತ್ಪಾದನೆ ಬಗ್ಗೆ ಜಾಗೃತಿ ಅಭಿಯಾನ
Posted On: 20 Oct 2023, 02:38 PM
ಉಡುಪಿ : ಆಕಾಶ್ ಬೈಜೂಸ್ ನ ಜಂಕ್ ದಿ ಪ್ಲಾಸ್ಟಿಕ್ ಅಭಿಯಾನ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡುವುದು, ಮರುಬಳಕೆ ಮತ್ತು ಮರು ಉತ್ಪಾದನೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಉಡುಪಿಯಲ್ಲಿ ಜರಗಿತು. ವಿದ್ಯಾರ್ಥಿಗಳಿಗೆ ಪ್ರಕೃತಿಯ ಬಗ್ಗೆ ಪ್ರೀತಿಯನ್ನು ಬೆಳೆಸಲು ನೆರವಾಗುವ ವಿಚಾರದಲ್ಲಿ ಉಡುಪಿಯನ್ನು ಸ್ವಚ್ಛಗೊಳಿಸಲು ಹಾಗೂ ನಮ್ಮ ಅದ್ಭುತ ನಗರ ನಿರ್ವಹಣೆಗೆ ಕೊಡುಗೆಯನ್ನು ನೀಡುವ ಭಾಗವಾಗಿರಲು ನಾವು ಸಂತೋಷ ಪಡುತ್ತೇವೆ ಎಂದು ಸಂಸ್ಥೆಯ ಮುಖ್ಯಸ್ಥರು ಹೇಳಿದರು. ಮುಂಬರುವ ದಿನಗಳಲ್ಲಿ ದೇಶದ ಇತರ ಕರಾವಳಿ ನಗರಗಳಿಗೂ ಈ ಅಭಿಯಾನವನ್ನು ವಿಸ್ತರಣೆ ಮಾಡಲು ಆಕಾಶ್ ಬೈಜೂಸ್ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಣ್ಣೂರು, ಕೋಝಿಕೋಡ್, ಚೆನ್ನೈ, ವಿಶಾಖಪಟ್ಟಣ, ಮುಂಬೈ, ಮತ್ತು ಪಣಜಿಯ ಕಡಲ ಕಿನಾರೆಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಉಡುಪಿ ಮುನ್ಸಿಪಾಲ್ ಕಮಿಷನರ್ ರಾಯಪ್ಪ, ಆಕಾಶ್ ಬೈಜೂಸ್ ಸಂಸ್ಥೆಯ ಅನಿಲ್ ಕುಮಾರ, ಶ್ಯಾಮ್ ಪ್ರಸಾದ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಕ್ಟೊಬರ್ 21 : ಉಡುಪಿಯ ಬೊಬ್ಬರ್ಯಕಟ್ಟೆಯಲ್ಲಿ ಹೂವಿನ ಪೂಜೆ, ಕಲ್ಕುಡ ದೈವದ ದರ್ಶನ ಸೇವೆ
Posted On: 20 Oct 2023, 02:09 PM
ಉಡುಪಿ : ವುಡ್ ಲ್ಯಾಂಡ್ಸ್ ಹೋಟೆಲ್ ಹತ್ತಿರದ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ್ಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನ ಬೊಬ್ಬರ್ಯಕಟ್ಟೆಯಲ್ಲಿ ಅಕ್ಟೋಬರ್ 21, ಶನಿವಾರ ಹೂವಿನ ಪೂಜೆ, ಕಲ್ಕುಡ ದರ್ಶನ ಸೇವೆ ನಡೆಯಲಿದೆ. ಶನಿವಾರದಂದು ಸಂಜೆ 5:30ಕ್ಕೆ ಸೇವಾಕರ್ತರಾದ ಸುಧಾಕರ್ ಶೆಟ್ಟಿ ಬನ್ನಂಜೆ ವತಿಯಿಂದ ಹೂವಿನ ಪೂಜೆ ಹಾಗೂ ಕಲ್ಕುಡ ದೈವದ ದರ್ಶನ ಸೇವೆ ಜರಗಲಿರುವುದು. ಈ ಪುಣ್ಯದ ಕಾರ್ಯದಲ್ಲಿ ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾಗಬೇಕೆಂದು ಅನಂತೇಶ್ವರ ದೇವಸ್ಥಾನ ಆಡಳಿತ ಮಂಡಳಿ ಉಡುಪಿ ಹಾಗೂ ಬಬ್ಬರ್ಯ ಸೇವಾ ಸಮಿತಿಯವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ವಿಶ್ವಕರ್ಮ ಯುವ ಮಿಲನ್ ಸಂಘದ ಘಟಕಗಳ ಉದ್ಘಾಟನೆ
Posted On: 20 Oct 2023, 01:52 PM
ಉಡುಪಿ : ವಿಶ್ವಕರ್ಮ ಯುವ ಮಿಲನ್(ರಿ.)ಕರ್ನಾಟಕ ರಾಜ್ಯ, ಕೇಂದ್ರ ಕಚೇರಿ ಮಂಗಳೂರು, ಇದರ ರಾಜ್ಯಾಧ್ಯಕ್ಷರಾದ ವಿಕ್ರಮ್ ಐ. ಆಚಾರ್ಯರು ಸಂಘದ ವಿವಿಧ ಘಟಕಗಳನ್ನು ಉದ್ಘಾಟಿಸಿದರು. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿ, ಶೀಲನೆರೆ ಹೋಬಳಿ, ಬುಕನಕೆರೆ ಹೋಬಳಿ, ಅಕ್ಕಿ ಹೆಬ್ಬಾಳು ಮತ್ತು ಕಸಬಾ ಹೊಬ್ಬಳ್ಳಿಯಲ್ಲಿ ಮಂಡ್ಯ ವಿಶ್ವಕರ್ಮ ಯುವ ಮಿಲನ್ ಸಂಘದ ಘಟಕಗಳ ಉದ್ಘಾಟನೆ ಮಾಡಲಾಯಿತು. ಯುವ ಸಂಘಟನೆಯು ಬೆಂಕಿಯಂತೆ ಇರಬೇಕು, ಸಮಾಜದ ರಕ್ಷಣೆ ಹಾಗೂ ಸಮಾಜದ ಒಗ್ಗಟ್ಟಿಗೆ ಯುವ ಶಕ್ತಿ ಮುಖ್ಯ ಎಂಬುದಾಗಿ ರಾಜ್ಯಾಧ್ಯಕ್ಷರು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮೋಹನ್ ಆಚಾರ್ಯ, ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷರಾದ ವಿಜಯ್ ಕುಮಾರ್, ಪುರ ಗ್ರಾಮ ಘಟಕ ಅಧ್ಯಕ್ಷ ವಿಜಯ್ ಕುಮಾರ್, ಆಕಾಶ್ ಆಚಾರ್ಯ ಪಾಂಡೇಶ್ವರ ಹಾಗೂ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
