Updated News From Kaup
ಶಿರ್ವ ಸಿ.ಎ.ಸೊಸೈಟಿ ಚುನಾವಣೆ : ಕುತ್ಯಾರು ಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ ಜಯ

Posted On: 02-02-2025 11:27AM
ಶಿರ್ವ : ಭಾರೀ ಕುತೂಹಲ ಮೂಡಿಸಿದ್ದ ಶಿರ್ವ ಸಹಕಾರಿ ವ್ಯವಸಾಯಿಕ ಸಂಘ(ನಿ.) ಶಿರ್ವ ಇದರ ಆಡಳಿತ ಮಂಡಳಿಗೆ ಶನಿವಾರ ನಡೆದ ಚುಣಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾಗಿದ್ದ ಬಿಜೆಪಿ ಹಾಗೂ ಸಹಕಾರ ಭಾರತಿ ಬೆಂಬಲಿತ ಕುತ್ಯಾರು ಪ್ರಸಾದ್ ಶೆಟ್ಟಿ ನೇತೃತ್ವದ ತಂಡ 12 ಸ್ಥಾನಗಳಲ್ಲಿ 11 ಸ್ಥಾನವನ್ನು ಗಳಿಸುವ ಮೂಲಕ ದ್ವಿತೀಯ ಅವಧಿಗೆ ಆಡಳಿತದ ಚುಕ್ಕಾಣಿಯನ್ನು ಹಿಡಿದಿದೆ.
ಚುನಾವಣಾ ಅಧಿಕಾರಿಯಾಗಿ ರೋಹಿತ್ ಪ್ರ.ದ.ಸಹಾಯಕರು, ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ ಉಡುಪಿ ಇವರು ಕರ್ತವ್ಯ ನಿರ್ವಹಿಸಿದ್ದರು.
ಸಾಮಾನ್ಯ ಸ್ಥಾನದಲ್ಲಿ ಕುತ್ಯಾರು ಪ್ರಸಾದ್ ಎಸ್.ಶೆಟ್ಟಿ, ವೀರೇಂದ್ರ ಪಾಟ್ಕರ್ ಕೋಡುಗುಡ್ಡೆ, ರಂಜಿತ್ ಪ್ರಭು ಮಟ್ಟಾರು, ಉಮೇಶ ಆಚಾರ್ಯ, ಪುರುಶೋತ್ತಮ ಶೆಟ್ಟಿಗಾರ್, ಸುಂದರ ಮೂಲ್ಯ. ಮಹಿಳಾ ಮೀಸಲು ಸ್ಥಾನದಲ್ಲಿ ವಾರಿಜ ಆರ್ ಕಲ್ಮಾಡಿ, ವೇದಾವತಿ ಆಚಾರ್ಯ, ಹಿಂದುಳಿದ ಪ್ರವರ್ಗ ಎಯಲ್ಲಿ ವಿಜಯ ಪೂಜಾರಿ, ಹಿಂದುಳಿದ ಪ್ರವರ್ಗ ಬಿಯಲ್ಲಿ ಹರಿಣಾಕ್ಷ ಶೆಟ್ಟಿ, ಪರಿಶಿಷ್ಠ ಜಾತಿ ವಿಭಾಗದಲ್ಲಿ ಕೃಷ್ಣ ಮುಖಾರಿ, ಪರಿಶಿಷ್ಠ ಪಂಗಡದಲ್ಲಿ ಗಣೇಶ್ ನಾಯ್ಕ್ ಆಯ್ಕೆಯಾಗಿದ್ದಾರೆ.
ಕಾರ್ಯಕರ್ತರ ಪರಿಶ್ರಮವೇ ವಿಜಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕುತ್ಯಾರು ಪ್ರಸಾದ್ ಶೆಟ್ಟಿ ಸಂತಸ ವ್ಯಕ್ತಪಡಿಸಿದರು. ಕಾಪು ಕ್ಷೇತ್ರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿಜೇತರನ್ನು ಅಭಿನಂದಿಸಿದರು.
ಸುಳ್ಳು ಹೇಳಿಕೆಗಳ ಮೂಲಕ ಜನರ ಹಾದಿ ತಪ್ಪಿಸುತ್ತಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ : ಅನಿತ ಡಿಸೋಜ

Posted On: 01-02-2025 04:12PM
ಕಾರ್ಕಳ : ರಾಜ್ಯ ಕಾಂಗ್ರೆಸ್ ಸರಕಾರದ ಮೇಲೆ ಒಲೈಕೆ ನೀತಿ ಎಂಬ ಸುಳ್ಳು ಆರೋಪ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ಧ ಜನರು ಸ್ವಯಂ ಪ್ರೇರಿತರಾಗಿ ಧ್ವನಿ ಎತ್ತಬೇಕು ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಅನಿತಾ ಡಿಸೋಜಾ ಬೆಳ್ಮಣ್ ಆಗ್ರಹಿಸಿದ್ದಾರೆ.
ಜನ ವಿರೋಧಿ ಆಡಳಿತ ನೀಡಿ ಅಧಿಕಾರವನ್ನು ಕಳೆದುಕೊಂಡ ನಂತರ ಬಿಜೆಪಿ ಪಕ್ಷದ ನಾಯಕರಾದ ಸುನಿಲ್ ಕುಮಾರ್ ರವರು ರಾಜ್ಯ ಸರಕಾರದ ವಿರುದ್ಧ ಪದೇ ಪದೇ ಸುಳ್ಳು ಆರೋಪಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಒಂದು ಕಡೆ ಸರಕಾರದ ಬೊಕ್ಕಸ ಖಾಲಿಯಾಗಿದೆ, ಅಭಿವೃದ್ಧಿಗೆ ಹಣವೇ ಇಲ್ಲ ಅಂತ ಆರೋಪ ಮಾಡುತ್ತಿದ್ದ ಇವರ ನಾಲಿಗೆ, ಇನ್ನೊಂದು ಕಡೆ ಕಾರ್ಕಳಕ್ಕೆ ಏಷ್ಟು ಕೋಟಿ ಬಿಡುಗಡೆಯಾಗಿದೆ ಅಂತ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಜೆಪಿ ತನ್ನ ಪ್ರಯೋಗಲಯ ಮಾಡಿ ಜಾತಿ, ಧರ್ಮ, ಗೋ ಹತ್ಯೆ, ಹಲಾಲ್, ಜಟ್ಕಾ, ಹಿಜಾಬ್ ವಿಷಯದಲ್ಲಿ ರಾಜಕೀಯ ಮಾಡಿ ಪ್ರಯೋಜನ ಪಡೆದಿರುವುದು ಎಲ್ಲಾ ಜಾತಿ, ಧರ್ಮ, ಕುಲ, ಗೋತ್ರದ ಜನಸಾಮಾನ್ಯರ ಗಮನದಲ್ಲಿದೆ. ನಿಮ್ಮ ಆಲೋಚನೆಯಲ್ಲಿ ಎಲ್ಲಾ ಹಿಂದುಗಳು, ನಿಮ್ಮ ಕಪಟ ನಾಟಕ ಅರಿಯದ ಮುಗ್ದರು ಎಂದಿರಬಹುದು. ಆದರೆ ಅವರು ಮೂರ್ಖರಂತೂ ಅಲ್ಲಾ ಅನ್ನುವುದು ನಮ್ಮ ನಂಬಿಕೆ. ನೀವು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರಿ. ಅವಿಭಜಿತ ದಕ್ಷಿಣ ಕನ್ನಡಲ್ಲಿ ಬಹುತೇಕ ಗೋ ಹತ್ಯೆ, ಗೋ ಸಾಗಾಟದಲ್ಲಿ ಬಿಜೆಪಿ ಬೆಂಬಲಿತರೇ ಜಾಸ್ತಿ ಸಿಕ್ಕಿಕೊಂಡಿರೋದು ಹಾಗಾಗಿ ನಿಮಗೆ ಕಾಣಿಸುವುದಿಲ್ಲವೇ ಎಂದು ವ್ಯಂಗ್ಯವಾಡಿದ್ದಾರೆ.
ಗೋಮಾಂಸ ರಫ್ತಿನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಎಂಬುದನ್ನು ಮರೆತಿರುವ ಶಾಸಕ ಸುನಿಲ್ ಕುಮಾರ್ ಅವರು ಮಾನಸಿಕ ಅಸ್ವಸ್ಥನೊಬ್ಬನು ಕೆಚ್ಚಲು ಕೊಯ್ದ ಘಟನೆಯನ್ನು ಹಿಡಿದುಕೊಂಡು ಹಿಂದುಗಳ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ದೇಶದ ಈಶಾನ್ಯ ರಾಜ್ಯಗಳು ಮತ್ತು ಗೋವಾಗಳಲ್ಲಿ ಗೋಮಾಂಸ ತಿನ್ನುವವರ ಪರವಾಗಿ ಇವರದೇ ಪಕ್ಷ ಇದೆ. ಇಲ್ಲಿ ಗೋಮಾತೆಯ ಮೇಲೆ ವಿಶೇಷ ಮಮತೆ ಇರುವಂತಹ ನಾಟಕವನ್ನು ಆಡುತ್ತಿದ್ದಾರೆ. ಕರ್ನಾಟಕದಲ್ಲಿ ಇವರೇ ಬೆಳೆದು ಬಂದ ಸಂಘಟನೆಯ ಸದಸ್ಯರು ಗೋ ಸಾಗಾಟ ಪ್ರಕರಣಗಳಲ್ಲಿ ಸಿಕ್ಕಿ ಬಿದ್ದಿದಂತ ಹಲವಾರು ಪ್ರಕರಣಗಳು ದಾಖಲಾಗಿವೆ. ಬಡವರು ಮನೆ ಕಟ್ಟಲು ಆಗುತ್ತಿರುವ ಸಮಸ್ಯೆ, ನಿಮ್ಮ ಸರಕಾರ ಇರುವಾಗಲೂ ಇತ್ತು. ಮಂತ್ರಿ ಸ್ಥಾನದಲ್ಲಿ ಇದ್ದ ನೀವು ಯಾಕೆ ಆ ಸಮಸ್ಯೆ ಹೋಗಲಾಡಿಸಲು ಪ್ರಯತ್ನಿಸಲಿಲ್ಲ. ರೇಷನ್ ಕಾರ್ಡ್ ತೊಂದರೆಯಾಗಿರುವುದು ನಿಮ್ಮ ಕೇಂದ್ರ ಸರಕಾರದ ನೀತಿಯಿಂದ ಹೊರತು ರಾಜ್ಯ ಸರಕಾರದ ತಪಲ್ಲ. ಆದರೂ ರಾಜ್ಯ ಕಾಂಗ್ರೆಸ್ ಸರಕಾರ ರೇಷನ್ ಕಾರ್ಡ್ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಕಾಂಗ್ರೆಸ್ ಸರಕಾರ ಬಂದಮೇಲೆ ಹಾಲಿನ ದರ ಏರಿಕೆಯಾಗಲೇ ಇಲ್ಲ, ನೀವು ಹಾಲಿನ ದರ ಏರಿಕೆಯಾಗಿದೆಯಂತ ಜನರಿಗೆ ಸುಳ್ಳು ಹೇಳುತ್ತಿದ್ದೀರಿ. ರಾಜ್ಯ ಸರಕಾರದ ಅಭಿವೃದ್ಧಿ ಮತ್ತು ಜನಪರ ಯೋಜನೆಗಳನ್ನು ಜಾರಿ ಮಾಡಿ ಜನರಿಗೆ ತಲುಪಿಸುವ ಕೆಲಸವನ್ನು ಸರಕಾರ ಉತ್ತಮವಾಗಿ ಮಾಡುತ್ತಿದೆ. ಇದನ್ನು ಕಂಡು ಸಹಿಸದ ನೀವು ಜನರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದೀರಿ. ನಿಮ್ಮ ಈ ಕುತಂತ್ರ ಕಾರ್ಕಳ ಜನರ ಮುಂದೆ ಎಲ್ಲಾ ಸಮಯದಲ್ಲೂ ನಡೆಯುವುದಿಲ್ಲ ಎಂದು ತಾವು ಮನಗಣಬೇಕು. ಎಚ್ಚೆತ್ತು ಕೊಳ್ಳಿ ಸುನಿಲ್ ಕುಮಾರ್ ಅವರೇ, ದೇವರು ಕೈ ಬಿಟ್ಟಲ್ಲಿ ನಿಮ್ಮ ರಾಜಕೀಯ ಇತಿಶ್ರೀ ಯಾಗುವುದು ಖಂಡಿತಾ ಎಂದು ಅನಿತಾ ಡಿಸೋಜ ತಿಳಿಸಿದ್ದಾರೆ.
ಉಡುಪಿ : ಹೊಸ ಬದುಕು ಆಶ್ರಮವಾಸಿಗಳಿಗೆ ಅನ್ನದಾನ, ದಿನಸಿ ಸಾಮಗ್ರಿ, ಪರಿಕರಗಳ ಕೊಡುಗೆ

Posted On: 01-02-2025 04:03PM
ಉಡುಪಿ : ಉಡುಪಿಯ ಕಾರ್ತಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಹೊಸ ಬದುಕು ವೃದ್ಧಾಶ್ರಮದ ವಾಸಿಗಳಿಗೆ ಒಂದು ದಿನದ ಅನ್ನದಾನದ ಸೇವೆಯನ್ನು ಬೆಂಗಳೂರಿನ ಪದ್ಮ ರಾಮದಾಸ್ ರಾವ್ ದಂಪತಿಗಳ ಮದುವೆ ವಾರ್ಷಿಕೋತ್ಸವದ ಅಂಗವಾಗಿ ನೀಡಲಾಯಿತು.
ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಮೂರನೇ ಪಾತ್ರಿ ಸುಬ್ರಹ್ಮಣ್ಯ ರಾವ್ ರವರು ಮಾತನಾಡಿ, ದಾನ ಮಾಡುವವರಲ್ಲಿ ಜಾತಿ-ಕುಜಾತಿ ಎಂಬ ಬೇಧ ಭಾವವಿಲ್ಲ. ಅದರಲ್ಲೂ ಸಕಲ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಲೇಸು ಎಂಬಂತೆ ಸಕಲ ದಾನಗಳಲ್ಲಿ ಅನ್ನದಾನ ಶ್ರೇಷ್ಠವಾದದು. ಸ್ವಚ್ಛಂದ ಮನಸ್ಸಿನಿಂದ ಮಾಡುವ ದಾನದಲ್ಲಿ ದೇವರನ್ನು ಕಾಣಬಹುದು. ಯಾವುದೇ ದಾನ ನಮ್ಮ ಕೃೆಯಿಂದ ಮಾಡುವವನು ಪರಮೇಶ್ವರನೇ ಆಗಿರುತ್ತಾನೆ. ಯಾವುದೇ ಬೇಧ ಭಿನ್ನತೆ ಇಲ್ಲದೆ ಸಕಲ ಜಗತ್ತನ್ನು ಸಂರಕ್ಷಿಸುತ್ತಾನೆ ಎಂದರು.
ಫಲವಸ್ತು ಹಾಗು ಶಾಲುಗಳನ್ನು ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪ್ರಥಮ ಗುರಿಕಾರ ಗಿರೀಶ್ ರಾವ್, 60 ಕೆ.ಜಿ. ಅಕ್ಕಿಯನ್ನು ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಮೂರನೇ ಪಾತ್ರಿ ಸುಬ್ರಹ್ಮಣ್ಯ ರಾವ್ ಮತ್ತು ಮಹೇಂದ್ರರವರು, ಇಸೀ ಚಯರ್ ಗಳನ್ನು ಕಾಪು ಕಲ್ಯದ ದಿವಂಗತ ಕಮಲ ಶೇರಿಗಾರ್ತಿರವರ ನೆನಪಿಗಾಗಿ ಮಕ್ಕಳು ಹಾಗು ದಿನಸಿ ಸಾಮಾಗ್ರಿಗಳನ್ನು ಪಡುಬಿದ್ರಿ ಸುಶೀಲ್ ಕಾಂಚನ್ ರವರು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಪಡುಬಿದ್ರಿ ಬಾಲಪ್ಪ ಗರಿಕಾರರಾದ ನಟರಾಜ್ ರಾವ್, ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪ್ರಥಮ ಗುರಿಕಾರ ಗಿರೀಶ್ ರಾವ್, ಆಶ್ರಮದ ನಿತ್ಯ ದಾನಿಯಾದ ಸುಶೀಲಾ ರಾವ್ ಉಡುಪಿ, ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಪೂರ್ವ ಕಾರ್ಯದರ್ಶಿ ಪವನ್ ಸಾಲ್ಯಾನ್, ಶುಭಸಂತೋಷ್, ಹೊಸ ಬದುಕು ಸಂಸ್ಥೆಯ ನಿರ್ವಾಹಕರಾದ ವಿನಯಚಂದ್ರ, ರಾಜಶ್ರೀ ಉಪಸ್ಥಿತರಿದ್ದರು.
ಕಾಪು ಸಹಕಾರಿ ವ್ಯವಸಾಯಿಕಾ ಸಂಘದ ಅಧ್ಯಕ್ಷರಾಗಿ ಕಾಪು ದಿವಾಕರ ಶೆಟ್ಟಿ ಅವಿರೋಧ ಆಯ್ಕೆ

Posted On: 30-01-2025 09:46PM
ಕಾಪು: ಕಾಪು ಸಹಕಾರಿ ವ್ಯವಸಾಯಿಕ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರಾಜ್ಯ ಹಾಲು ಮಹಾ ಮಂಡಲದ ನಿರ್ದೇಶಕ ಕಾಪು ದಿವಾಕರ ಶೆಟ್ಟಿಯವರು ಸತತ ಮೂರನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಯುವ ಸದಸ್ಯ ಸುಲಕ್ಷಣ್ ಎಲ್. ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಾಪು ಸಹಕಾರಿ ವ್ಯವಸಾಯಿಕ ಸಂಘದ ಭಾಸ್ಕರ ಸೌಧದಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಸಿಬ್ಬಂದಿ ಕೆ.ಆರ್. ರೋಹಿತ್ ಕುಮಾರ್ ಆಯ್ಕೆ ಪ್ರಕ್ರಿಯೆ ನಡೆಸಿದರು.
ಈ ಸಂದರ್ಭ ಮಾತನಾಡಿದ ನಿಯೋಜಿತ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಕಳೆದ ಹತ್ತು ವರ್ಷಗಳಿಂದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದ ನನ್ನನ್ನು ಸದಸ್ಯರು ಒಮ್ಮತದಿಂದ ಅಧ್ಯಕ್ಷನಾಗಿ ಪುನರಾಯ್ಕೆ ಮಾಡಿ ಜವಾಬ್ದಾರಿ ನೀಡಿದ್ದಾರೆ. ಈ ಅವಕಾಶವನ್ನು ಸಂಘದ ಅಭಿವೃದ್ದಿಗೆ ಸಂಪೂರ್ಣ ತೊಡಗಿಸಿಕೊಳ್ಳುವ ಮೂಲಕ ನಿರ್ವಹಿಸುತ್ತೇನೆ ಎಂಬ ವಿಶ್ವಾಸವಿದೆ ಎಂದರು.
ನೂತನ ಆಡಳಿತ ಮಂಡಳಿಯ ಸದಸ್ಯರಾಗಿ ದಿನೇಶ್ ಎ. ಸಾಲ್ಯಾನ್, ಸದಾಶಿವ ಸೇರ್ವೆಗಾರ, ಅಬ್ದುಲ್ ರಜಾಕ್, ಸವಿತಾ ಐರಿನ್ ಕುಂದರ್, ಕವಿತಾ, ಭೋಜ ಎಸ್. ಅಮೀನ್, ಅರುಣ್ ಕುಮಾರ್, ಅನೂಪ್ ಕೆ., ಶ್ರೀಮತಿ ಅರುಣಾ ಆಯ್ಕೆಯಾಗಿದ್ದಾರೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಅರ್ಚನಾ ಶೆಟ್ಟಿ ಉಪಸ್ಥಿತರಿದ್ದರು.
ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಸ್ಕೌಟ್ಸ್ - ಗೈಡ್ಸ್ ದ್ವಿತೀಯ ಸೋಪಾನ ಪರೀಕ್ಷೆ

Posted On: 30-01-2025 09:31PM
ಕಾಪು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಪು ಮತ್ತು ಉಡುಪಿ ಸ್ಥಳೀಯ ಸಂಸ್ಥೆಯ ದ್ವಿತೀಯ ಸೋಪಾನ ಪರೀಕ್ಷೆಯು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಗುರುವಾರದಂದು ನಡೆಯಿತು. ಕಾರ್ಯಕ್ರಮವನ್ನು ಭಾರತ್ ಸ್ಕೌಟ್ಸ್-ಗೈಡ್ಸ್ ಉಡುಪಿ ಜಿಲ್ಲಾ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿಯವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸ್ಕೌಟ್ ಚಳವಳಿಯು ಒಂದು ನಿರಂತರ ಪ್ರಕ್ರಿಯೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇವುಗಳಲ್ಲಿ ತೊಡಗಿಕೊಂಡಾಗ, ಸಾಮಾಜಿಕ ಜೀವನದಲ್ಲಿ ಪರಿಪೂರ್ಣರಾಗಿ ಮೂಡಿಬರುತ್ತಾರೆ. ದೇಶಭಕ್ತಿಯ ಜೊತೆಗೆ ಸುಂದರ ಭವಿಷ್ಯದ ನಿರ್ಮಾಣಕ್ಕೆ ಕಾರಣರಾಗುತ್ತಾರೆ. ಸ್ಕೌಟ್ ಪರೀಕ್ಷೆಯ ಜೊತೆಗೆ ಮುಂಬರುವ ಶಾಲಾ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಿ ಪ್ರತಿಭಾನ್ವಿತರಾಗಿ ಮೂಡಿಬನ್ನಿ ಎಂಬ ಸಂದೇಶವನ್ನು ನೀಡಿದರು.

ಕಾಪು ಸ್ಥಳೀಯ ಸಂಸ್ಥೆಯ ಗೌರವಾಧ್ಯಕ್ಷರಾದ ಡಾ. ಕೆ. ಪ್ರಶಾಂತ್ ಶೆಟ್ಟಿಯವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಪರೀಕ್ಷಾ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಸ್ಕೌಟ್ಸ್-ಗೈಡ್ಸ್ ನ ಉನ್ನತ ಗೌರವ-ಪುರಸ್ಕಾರಗಳನ್ನು ಪಡೆದು ಪ್ರತಿಭಾನ್ವಿತರಾಗಿ ಮೂಡಿ ಬರಲು ಸಹಕಾರಿ ಎಂದು ಶುಭ ಹಾರೈಸಿದರು. ಈ ಸಂದರ್ಭ ಭಾರತ್ ಸ್ಕೌಟ್ಸ್-ಗೈಡ್ಸ್ ಉಡುಪಿ ಜಿಲ್ಲಾ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿಯವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ ಶೇಖರ್, ದಂಡತೀರ್ಥ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್, ಜಿಲ್ಲಾ ಸಹಾಯಕ ಆಯುಕ್ತ ರಿತೇಶ್ ಶೆಟ್ಟಿ ಸೂಡ, ಉಡುಪಿ ಸ್ಥಳೀಯ ಸಂಸ್ಥೆಯ ಖಜಾಂಚಿ ರಮೇಶ್ ಅಂಬಾಡಿ, ಶಿಬಿರದ ನಾಯಕರಾದ ಉಮೇಶ್ ಕಾಂಚನ್, ದಂಡತೀರ್ಥ ವಿದ್ಯಾಸಂಸ್ಥೆಯ ಪ್ರಾಂಶುಪಾಲ ನೀಲಾನಂದ ನಾಯ್ಕ್, ಪ್ರಾಥಮಿಕ ವಿಭಾಗದ ಮುಖ್ಯಸ್ಥ ಗೇಬ್ರಿಯಲ್ ಮಸ್ಕರೇನ್ಹಸ್, ವಿದ್ಯಾಸಂಸ್ಥೆಗಳ ಶಿಕ್ಷಕ - ಶಿಕ್ಷಕಿಯರು ಹಾಗೂ ಸುಮಾರು 500 ಮಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಪು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಮರಿಯ ಅನಿತ ಮೆಂಡೋನ್ಸ ಸ್ವಾಗತಿಸಿದರು. ಉಡುಪಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶೇಖರ್ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್ ವಂದಿಸಿದರು.
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನಿತರಾದ ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು

Posted On: 30-01-2025 06:01AM
ಪಡುಬಿದ್ರಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ಶಾಂತಿವನ ಟ್ರಸ್ಟ್ (ರಿ.) ಧರ್ಮಸ್ಥಳ ಇವರು ಆಯೋಜಿಸಿದ ರಾಜ್ಯಮಟ್ಟದ ಪ್ರಾರ್ಥನಾ ಶ್ಲೋಕಗಳ ಕಂಠಪಾಠ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕಾ ರಾವ್ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ.
ಪ್ರಬಂಧ ಸ್ಪರ್ಧೆಯಲ್ಲಿ ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮನ್ವಿತಾ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ.
ಧರ್ಮಸ್ಥಳದಲ್ಲಿ ನಡೆದ ಪುರಸ್ಕಾರ ಸಮಾರಂಭದಲ್ಲಿ ಈ ಇಬ್ಬರು ವಿದ್ಯಾರ್ಥಿನಿಯರು ಡಾ. ಡಿ.ವೀರೇಂದ್ರ ಹೆಗ್ಗಡೆ, ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ರಾಮಕೃಷ್ಣ ಮಠ, ಸಂಗೀತ ನಿರ್ದೇಶಕ ವಿ. ಮನೋಹರ್ ಮೊದಲಾದ ಗಣ್ಯರ ಸಮ್ಮುಖದಲ್ಲಿ ಪುರಸ್ಕಾರವನ್ನು ಪಡೆದರು.
ಕಾಪು : ಯೋಜನಾ ಪ್ರಾಧಿಕಾರಕ್ಕೆ ನಾಮನಿರ್ದೇಶಿತ ಸದಸ್ಯರಾಗಿ ಕಿರಣ್ ಆಳ್ವ ಆಯ್ಕೆ

Posted On: 30-01-2025 05:55AM
ಕಾಪು : ಕಾಪು ಪುರಸಭೆಯಿಂದ ಯೋಜನಾ ಪ್ರಾಧಿಕಾರಕ್ಕೆ ನಾಮನಿರ್ದೇಶಿತರಾಗಿ ಕಾಪು ಪುರಸಭೆಯ ಚುನಾಯಿತ ಸದಸ್ಯರಾದ ಕಿರಣ್ ಆಳ್ವರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಫೆ. 4 : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವಚಂಡೀಯಾಗ

Posted On: 29-01-2025 07:24PM
ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸಾನಿಧ್ಯ ವೃದ್ಧಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಫೆಬ್ರವರಿ 4ರ ಮಂಗಳವಾರ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವ ಚಂಡೀಯಾಗ ಜರಗಲಿದೆ ಎಂದು ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಅವರು ಕಾಪುವಿನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ದೇವಸ್ಥಾನದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ, ಪ್ರಧಾನ ಆರ್ಚಕರಾದ ವೇದಮೂರ್ತಿ ಕಲ್ಯ ಶ್ರೀನಿವಾಸ ತಂತ್ರಿಯವರ ಉಪಸ್ಥಿತಿಯಲ್ಲಿ ನವ ಚಂಡೀಯಾಗದ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಫೆಬ್ರವರಿ 4ರಂದು ಬೆಳಿಗ್ಗೆ ನವಚಂಡೀಯಾಗ ಆರಂಭ, ಕಲ್ಲೋಕ್ತ ಪೂಜಾ, 11 ಗಂಟೆಗೆ ಪೂರ್ಣಾಹುತಿ, ಧಾರ್ಮಿಕ ಸಭಾ ಕಾರ್ಯಕ್ರಮ, ವಾಗೀಶ್ವರಿ ಪೂಜೆ, ಮಹಾಮಂಗಳಾರತಿ, ಮಹಾಪ್ರಸಾದ ವಿತರಣೆ ಹಾಗೂ ಮದ್ಯಾಹ್ನ 1 ರಿಂದ ಅನ್ನಪ್ರಸಾದ ವಿತರಣೆ ನಡೆಯಲಿದೆ. ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರ ನೇತೃತ್ವದಲ್ಲಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಮತ್ತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ ಹಾಗೂ ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್ ಉಪಸ್ಥಿತಿಯಲ್ಲಿ ಈ ಎಲ್ಲಾ ಕಾರ್ಯಕ್ರಮ ಕಾರ್ಯಕ್ರಮಗಳು ಜರಗಲಿವೆ. ಆ ಪ್ರಯುಕ್ತ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ಡಾ. ರಾಮಲಿಂಗ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶಾಸಕರಾದ ಡಾ. ಮಂಜುನಾಥ್ ಭಂಡಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಆಯುಕ್ತರಾದ ವೆಂಕಟೇಶ್ ಐಎಎಸ್ ಗೌರವ ಉಪಸ್ಥಿತರಾಗಿ ಭಾಗವಹಿಸಲಿದ್ದಾರೆ. ನವದುರ್ಗಾ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳುವ ಉದ್ದೇಶದೊಂದಿಗೆ ಈಗಾಗಲೇ ಪುಸ್ತಕ ತೆಗೆದುಕೊಂಡು ಹೋಗಿ ಲೇಖನ ಬರೆಯುತ್ತಿರುವವರು ಜನವರಿ 30ರ ಒಳಗಾಗಿ ಪುಸ್ತಕವನ್ನು ದೇವಳಕ್ಕೆ ಸಮರ್ಪಿಸಿ, ಫೆಬ್ರವರಿ 4 ರಂದು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ನಡೆಯುವ ನವಚಂಡೀಯಾಗದ ಸಂಕಲ್ಪದಲ್ಲಿ ಭಾಗಿಯಾಗಬೇಕು.
ಸಂಕಲ್ಪಕ್ಕೆ ಕುಳಿತುಕೊಳ್ಳುವವರು ಬೆಳಿಗ್ಗೆ 9 ಗಂಟೆಗೆ ತಪ್ಪದೇ ಹಾಜರಿರಬೇಕು. ಲೇಖನ ಬರೆಯಲು ಇಚ್ಚಿಸುವ ಭಕ್ತರು ಆದಷ್ಟು ಶೀಘ್ರದಲ್ಲಿ ಲೇಖನ ಪುಸ್ತಕವನ್ನು ಪಡೆದು ಲೇಖನ ಬರೆದು ಶಿಲಾಸೇವೆ ಸಹಿತವಾಗಿ ಕಾಪುವಿನ ಅಮ್ಮನಿಗೆ ಸಮರ್ಪಿಸಲು ಅವಕಾಶವಿದೆ. ಆ ಪ್ರಯುಕ್ತ 9 ಮತ್ತು ಅದಕ್ಕಿಂತ ಹೆಚ್ಚಿನ ಶಿಲಾಸೇವೆ ನೀಡುವ ಭಕ್ತರಿಗೆ “ಕಾಪುವಿನ ಅಮ್ಮನ ಮಕ್ಕಳು” ತಂಡಕ್ಕೆ ಸೇರ್ಪಡೆಗೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದೂ ರಘುಪತಿ ಭಟ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ, ಕೋಶಾಧಿಕಾರಿ ಕೆ ವಿಶ್ವನಾಥ್, ಉಪಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ಸಂಚಾಲಕ ಸುವರ್ಧನ್ ನಾಯಕ್, ಮಹಿಳಾ ಪ್ರಧಾನ ಸಂಚಾಲಕಿ ಗೀತಾಂಜಲಿ ಎಂ ಸುವರ್ಣ, ಸಂಚಾಲಕಿ ಸಾವಿತ್ರಿ ಗಣೇಶ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ ಉಪಸ್ಥಿತರಿದ್ದರು.
ಫೆಬ್ರವರಿ 2 : ಕಾಂತಾವರ ಕುಲಾಲ ಸಂಘದ ಉದ್ಘಾಟನೆ

Posted On: 29-01-2025 07:04PM
ಕಾರ್ಕಳ : ತಾಲೂಕಿನ ಕಾಂತಾವರದಲ್ಲಿ ಕುಲಾಲ ಸಂಘ ಕಾಂತಾವರ ಇದರ ಉದ್ಘಾಟನೆಯು ಸಮುದಾಯದ ಹಿರಿಯರ ಕಿರಿಯರ ಜೊತೆಗೆ ಬೇಲಾಡಿ ಶ್ರೀ ಪುಂಡರೀಕ ವಿಷ್ಣುಮೂರ್ತಿ ದೇವಸ್ಥಾನದ ಅಂಗಳದಲ್ಲಿ ಫೆಬ್ರವರಿ 2 ರ ಭಾನುವಾರ ನಡೆಯಲಿದೆ.
ತಾಲೂಕಿನ ಸ್ವಜಾತಿ ಬಂಧುಗಳು, ಸ್ವಜಾತಿ ಬಾಂಧವರು ಭಾಗವಹಿಸಿ ಎಂದು ಕಾರ್ಯಕ್ರಮ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುವರು.
ಕಾಪು : ಎಸ್ಕೆಪಿಎ ಫೋಟೋಗ್ರಾಫಿ ಕಾರ್ಯಾಗಾರ

Posted On: 29-01-2025 09:42AM
ಕಾಪು : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ., ಉಡುಪಿ ಜಿಲ್ಲೆ ವತಿಯಿಂದ ಕಾಪುವಿನ ಪ್ಯಾಲೆಸ್ ಗಾರ್ಡನ್ನಲ್ಲಿ ಮಂಗಳವಾರ ನಡೆದ ಗಿಂಬಲ್ಸ್ ಹಾಗೂ ರೀಲ್ಸ್ ಕಾರ್ಯಾಗಾರವನ್ನು ಎಸ್ಕೆಪಿಎ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನವನ್ನು ನಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು. ಈ ಕಾರ್ಯಾಗಾರದ ಮೂಲಕ ಕೌಶಲ್ಯವನ್ನು ಹೇಗೆ ವೃದ್ಧಿಸಬಹುದು, ಹೊಸ ಹೊಸ ತಂತ್ರಜ್ಞಾನದ ಬಳಕೆ ಹೇಗೆ ಬಳಸಬಹುದು ಎಂಬುದನ್ನು ಅರಿತು ತಮ್ಮ ವೃತ್ತಿ ಜೀವನದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಸಂಪನ್ಮೂಲ ವ್ಯಕ್ತಿಯಾಗಿ ಸುಮಂತ್ ಸುವರ್ಣ ಕಾರ್ಯಾಗಾರ ನಡೆಸಿಕೊಟ್ಟರು.
ಎಸ್ಕೆಪಿಎ ಜಿಲ್ಲಾ ಸಂಚಾಲಕ ಕರುಣಾಕರ್ ಕಾನಂಗಿ, ಉಪಾಧ್ಯಕ್ಷರಾದ ರಮೇಶ್ ಕಲಾಶ್ರೀ ಮತ್ತು ಪ್ರವೀಣ್ ಕೊರಿಯ, ಕಾಪು ವಲಯ ಅಧ್ಯಕ್ಷ ಸಚಿನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಛಾಯಾ ಕಾರ್ಯದರ್ಶಿ ರವಿ ಕೋಟ್ಯಾನ್ ಸ್ವಾಗತಿಸಿದರು. ಎಸ್ಕೆಪಿಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು.