Updated News From Kaup

ಉಚ್ಚಿಲ : ಬಿಜೆಪಿಯ ಭೃಷ್ಟಾಚಾರದ ಜೊತೆ ಬೆಲೆ ಏರಿಕೆಯ ಬಿಸಿಯ ಮಧ್ಯೆ ಬಡವರು ಸಿಕ್ಕಿಕೊಂಡಿದ್ದಾರೆ - ರಾಹುಲ್ ಗಾಂಧಿ

Posted On: 27-04-2023 06:52PM

ಉಚ್ಚಿಲ : ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ ಶಾಸಕರ ಖರೀದಿ ಬಿಜೆಪಿಯಲ್ಲಿದೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಬೇಕಾದರೆ 2ಸಾವಿರ ಕೋಟಿ ನೀಡಬೇಕಾಗಿದೆ. ಇತ್ತೀಚೆಗೆ ಕಂಟ್ರ್ಯಾಕ್ಟರ್ ಗಳು ಕರ್ನಾಟಕದ ಬಿಜೆಪಿ ಪಕ್ಷದ 40% ಕಮಿಷನ್ ಗೆ ಬೇಸತ್ತು ಪ್ರಧಾನಮಂತ್ರಿ ಗೆ ಪತ್ರ ಬರೆದಿದ್ದಾರೆ. ಧಾರ್ಮಿಕ ಮಠದಲ್ಲಿಯೂ 30% ಕಮೀಷನ್ ಇರುವುದು ದುರಂತ. ಪೋಲಿಸ್ , ಪ್ರಾಧ್ಯಾಪಕ, ಇಂಜಿನಿಯರಿಂಗ್ ನೇಮಕಾತಿ ಯಲ್ಲಿಯೂ 40% ಕಮಿಷನ್ ಇದೆ. ಈ ಹಣ ಎಲ್ಲಿ ಹೋಗುತ್ತದೆ ಅಂತ ನಾವು ಯೋಚಿಸಬೇಕಿದೆ ಎಂದು ಕಾಂಗ್ರೆಸ್ ಯುವ ನಾಯಕ ‌ರಾಹುಲ್ ಗಾಂಧಿ ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಳದ ಶಾಲಿನಿ ಡಾ. ಜಿ. ಶಂಕರ್ ತೆರೆದ ಸಭಾಭವನದಲ್ಲಿ ಮೀನುಗಾರರೊಂದಿಗೆ ನಡೆದ ಸಂವಾದವನ್ನು ಉದ್ದೇಶಿಸಿ ಮಾತನಾಡಿದರು.

ಬಡವರು ಮತ್ತು ಶ್ರೀಮಂತ ಮೀನುಗಾರರೆಂಬ ವ್ಯತ್ಯಾಸ ದೂರಮಾಡಬೇಕಾಗಿದೆ. ಭೃಷ್ಟಾಚಾರದ ಜೊತೆ ಬೆಲೆ ಏರಿಕೆಯ ಬಿಸಿಯ ಮಧ್ಯೆ ಬಡವರು ಸಿಕ್ಕಿಕೊಂಡಿದ್ದಾರೆ. ಬಡವರಿಗೆ ಬಾರಿ ನಷ್ಟ ಉಂಟಾದರೆ ಶ್ರೀಮಂತರಿಗೆ ತೊಂದರೆಯಾಗದು. 4 ಗ್ಯಾರಂಟಿ ಸ್ಕೀಮ್ ಕಾಂಗ್ರೆಸ್ ಜಾರಿಗೊಳಿಸಿದೆ ಸರಕಾರ ಬಂದ 1 ಗಂಟೆಯಲ್ಲಿ ನಮ್ಮ ಭರವಸೆ ಈಡೇರಿಸುತ್ತೇವೆ. ಮಾತೆಯರಿಗಾಗಿ ಯೋಜನೆಗಳಿವೆ. ಸರಕಾರ ಕೋಟ್ಯಾಂತರ ಹಣ ಡೀಸೆಲ್‌ , ಪೆಟ್ರೋಲ್ ಮೂಲಕ ಗಳಿಸಿದೆ. ನಮ್ಮ ಸರಕಾರದಲ್ಲಿ ಸುಳ್ಳು ಭರವಸೆ ನೀಡಲಾರೆವು. ದೇಶದ ಜನಗಣತಿಯ ಮೂಲಕ ಸಮುದಾಯದ ಬಗ್ಗೆ ತಿಳಿಯಬಹುದು ಎಂದರು.

ಮೀನುಗಾರರೊಂದಿಗೆ ಸಂವಾದ : ಡ್ರೆಜ್ಜಿಂಗ್ ಸಮಸ್ಯೆ, ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಮಾಡಬೇಕು, ಮೀನುಗಾರಿಕೆ ಸಂದರ್ಭ ತುರ್ತುಸೇವೆಗಾಗಿ ಸೀ ಅಂಬುಲೆನ್ಸ್ ಸೇವೆ, ಮೀನುಗಾರರ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮೀಸಲಾತಿ ಇತ್ಯಾದಿಗಳ ಬಗ್ಗೆ ಸಂವಾದ ನಡೆಯಿತು. ನಮ್ಮ ಸರಕಾರ ಮೀನುಗಾರರಿಗಾಗಿ ಹತ್ತು ಲಕ್ಷದ ಇನ್ಶೂರೆನ್ಸ್, ಮಹಿಳೆಯರಿಗೆ 1 ಲಕ್ಷದ ಬಡ್ಡಿರಹಿತ ಸಾಲ ನೀಡುವ ಯೋಜನೆಯಿದೆ. 25 ರೂಪಾಯಿ ಸಬ್ಸಿಡಿಯೊಂದಿಗೆ ಪ್ರತಿದಿನ 500 ಲೀಟರ್ ಡೀಸೆಲ್ ನೀಡಲಾಗುವುದು ಎಂದರು.

ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ, ಉಡುಪಿ ಅಭ್ಯರ್ಥಿ ಪ್ರಸಾದ್ ಕಾಂಚನ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್, ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ರಾಷ್ಟ್ರೀಯ ಮೀನುಗಾರರ ಸಂಘದ ಅಧ್ಯಕ್ಷ ಮಂಜುನಾಥ ಸುಣೇಗಾರ್, ಕಾಂಗ್ರೆಸ್ ಮುಖಂಡರಾದ ಪ್ರತಾಪ್ ಚಂದ್ರ, ದೀಪಕ್ ಕೋಟ್ಯಾನ್, ವಿಶ್ವಾಸ್ ಅಮೀನ್, ಗೀತಾ ವಾಗ್ಳೆ, ಲಾವಣ್ಯ ಬಲ್ಲಾಳ್, ಸಂತೋಷ್ ಕುಲಾಲ್, ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಜೆ ಶೆಟ್ಟಿ, ವೆರೋನಿಕಾ ಕರ್ನಾಲಿಯೋ, ಗಫೂರ್, ಜಿತೇಂದ್ರ ಫುಟಾರ್ಡೋ, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಂಜುನಾಥ ಪೂಜಾರಿ, ದಿವಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕಾಪು : ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ರಾಶಿ ಪೂಜಾ ಮಹೋತ್ಸವ ಸಂಪನ್ನ

Posted On: 26-04-2023 10:24PM

ಕಾಪು : ಇಲ್ಲಿನ ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ರಾಶಿ ಪೂಜಾ ಮಹೋತ್ಸವವು ಬ್ರಹ್ಮಶ್ರೀ ವೇ|ಮೂ| ಕಲ್ಯ ಶ್ರೀ ಅನಂತರಾಮ ತಂತ್ರಿಯವರ ಮಾರ್ಗದರ್ಶನದಲ್ಲಿ ಮತ್ತು ಬ್ರಹ್ಮಶ್ರೀ ವೇ|ಮೂ| ಶ್ರೀ ಪಂಜ ಭಾಸ್ಕರ ಭಟ್ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ಬ್ರಹ್ಮಶ್ರೀ ವೇ|ಮೂ| ಕೊರಂಗ್ರಪಾಡಿ ಶ್ರೀ ಶ್ರೀನಿವಾಸ ತಂತ್ರಿಗಳ ಸಹಕಾರದೊಂದಿಗೆ ಸಂಪನ್ನಗೊಂಡಿತು.

ಈ ಸಂದರ್ಭ ದೇವಳದ ಕಾರ್ಯನಿರ್ವಹಣಾಧಿಕಾರಿ ಸುಧೀರ್ ಕುಮಾರ್ ಶೆಟ್ಟಿ, ಆಡಳಿತಾಧಿಕಾರಿ ಗಣೇಶ್ ರಾವ್, ರಾಶಿ ಪೂಜಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರುಗಳು, ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಸಮಿತಿಯ ಉಪಾಧ್ಯಕ್ಷರುಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಕಾಪು : ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯಿಂದ ವಿವಿದೆಡೆ ಮತಯಾಚನೆ

Posted On: 26-04-2023 06:35PM

ಕಾಪು : ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು ಶಾಸಕ ಲಾಲಾಜಿ ಮೆಂಡನ್ ಜೊತೆಗೂಡಿ ತೆಂಕ ಗ್ರಾಮ ಪಂಚಾಯತ್, ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ಮಾಡಿ ಮತಯಾಚಿಸಿದರು.

ಈ ಸಂದರ್ಭ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಯಡಿಯೂರಪ್ಪ ಹಾಗು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯ ಸರಕಾರ ಮಾಡಿದ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡಿದರು. ಸರಕಾರ ಒದಗಿಸುತ್ತಿರುವ ಸವಲತ್ತುಗಳು ಅರ್ಹರನ್ನು ತಲುಪುತ್ತಿರುವ ಬಗೆಯನ್ನು ವಿವರಿಸಿದರಲ್ಲದೆ ಈ ಬಾರಿಯೂ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಗಳಿಸುವಂತಾಗಲು ತಮಗೆ ಮತ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭ ಗ್ರಾಮ ಪಂಚಾಯತಿ ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತಿಯಿದ್ದರು.

ಪಡುಬಿದ್ರಿ : ಬಟ್ಟೆ ಅಂಗಡಿಗೆ ನುಗ್ಗಿದ ಕಳ್ಳರು ; ಬಟ್ಟೆ, ನಗದು ಕಳವು

Posted On: 26-04-2023 06:22PM

ಪಡುಬಿದ್ರಿ : ಇಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ಬಟ್ಟೆ, ನಗದು ಕಳವುಗೈದ ಪ್ರಕರಣ ನಡೆದಿದ್ದು ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರಿಯ ಸಾಸ್ ಬಿಲ್ಡಿಂಗ್‌‌ನಲ್ಲಿ ಶ್ರೀಶಾ ಅಪಾರೆಲ್ಸ್ ಹೆಸರಿನ ಬಟ್ಟೆ ಅಂಗಡಿಗೆ ಹಾಕಿದ್ದ ಶೆಟರ್‌‌ನ ಬೀಗವನ್ನು ಮುರಿದು ಬಾಗಿಲನ್ನು ತೆರೆದು ಒಳ ಪ್ರವೇಶಿಸಿದ ಕಳ್ಳರು 2,83,500 ರೂಪಾಯಿ ಮೌಲ್ಯದ ಬಟ್ಟೆಗಳನ್ನು ಮತ್ತು ರೂ. 2 ಸಾವಿರ ನಗದನ್ನು ಕದ್ದು ಒಯ್ದಿದ್ದಾರೆ.

ಈ ಬಗ್ಗೆ ಬಟ್ಟೆ ಅಂಗಡಿ ಮಾಲಕರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಕಾಪು ತಾಲೂಕು ಪರಿವಾರ ನಾಯಕ ಸಂಘದ ನೂತನ ಅಧ್ಯಕ್ಷರಾಗಿ ನೀಲಾನಂದ ನಾಯ್ಕ್ ಆಯ್ಕೆ

Posted On: 26-04-2023 02:25PM

ಕಾಪು : ತಾಲೂಕು ಪರಿವಾರ ನಾಯಕ ಸಂಘದ ನೂತನ ಅಧ್ಯಕ್ಷರಾಗಿ ನೀಲಾನಂದ ನಾಯ್ಕ್ ಆಯ್ಕೆ ಆಗಿದ್ದಾರೆ.

ಇವರು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯೂ ಆಗಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

ವೃತ್ತಿಯಲ್ಲಿ ಅಧ್ಯಾಪಕರಾಗಿರುವ ಇವರು ಪ್ರಸ್ತುತ ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮತಯಾಚನೆಯೊಂದಿಗೆ ದೈವ-ದೇವರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ

Posted On: 26-04-2023 02:17PM

ಕಾಪು : ಭಾರತೀಯ ಜನತಾ ಪಾರ್ಟಿಯ ಕಾಪು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರು ಇಂದು ಎರ್ಮಾಳು ಜನಾರ್ಧನ ದೇವಸ್ಥಾನ, ವೀರಭದ್ರ ದೇವಸ್ಥಾನ ಎರ್ಮಾಳು, ನಡಿಯಾಳು ಧೂಮಾವತಿ ದೇವಸ್ಥಾನ ಹಾಗೂ ವಿವಿದೆಡೆ ತೆರಳಿ ದೈವ -ದೇವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ತೆಂಕ, ಪಡುಬಿದ್ರಿ ಮಹಾಶಕ್ತಿಕೇಂದ್ರ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಹಿರಿಯರಾದ ಗಂಗಾಧರ್ ಸುವರ್ಣ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೇಶವ ಮೊಯ್ಲಿ, ಪಕ್ಷದ ಅನನ್ಯ ಜವಾಬ್ದಾರಿ ನಿರ್ವಹಿಸುತ್ತಿರುವ ಪ್ರಮುಖರು ಹಾಗೂ ಸ್ಥಳೀಯ ಪ್ರಮುಖರಾದ ಸತೀಶ್ ಸಾಲ್ಯಾನ್, ವಿನಯ ಶೆಟ್ಟಿ, ಧರ್ಮರಾಜ್, ಸಂತೋಷ್, ಅಮನಿ, ಮನೋಜ್, ದೀರಾಜ್, ಮೋಹನ್ ಸುವರ್ಣ, ವಿನೀತ್, ನಿತೇಶ್ ಕುಮಾರ್, ಪವನ್ ಎರ್ಮಾಳು, ಜಯೇಂದ್ರ, ಗಣೇಶ್ ಹಾಗೂ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

ನಾಳೆ : ಉಚ್ಚಿಲದಲ್ಲಿ ಮೀನುಗಾರರ ಜೊತೆ ರಾಹುಲ್ ಗಾಂಧಿ ಸಂವಾದ

Posted On: 26-04-2023 12:52PM

ಕಾಪು : ಕರಾವಳಿ ಕರ್ನಾಟಕದಲ್ಲಿ ಮೀನುಗಾರಿಕೆ ವೃತ್ತಿಯು ಪ್ರಮುಖವಾಗಿದ್ದು ಈ ವೃತ್ತಿಯಲ್ಲಿ ಮೊಗವೀರರು ಸೇರಿದಂತೆ ವಿವಿಧ ಜಾತಿಗಳು, ಧರ್ಮಗಳ ಜನರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಜ್ಯದ ಮೀನುಗಾರರ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ ಆ ಮೂಲಕ ಅವರೆಲ್ಲರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿಯವರು ಎಪ್ರಿಲ್ 27 ರಂದು ಉಚ್ಚಿಲ ಮಹಾಲಕ್ಷ್ಮಿ ದೇವಳದ ಸಭಾಂಗಣದಲ್ಲಿ ನಡೆಯಲಿರುವ ಮೀನುಗಾರರ ಪ್ರತಿನಿಧಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಪು ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ತಿಳಿಸಿದರು.

ಅವರು ಬುಧವಾರ ಕಾಪು ರಾಜೀವ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಹುಲ್ ಗಾಂಧಿಯವರು ಹೆಲಿಕಾಪ್ಟರ್ ಮೂಲಕ 3:40 ಕ್ಕೆ ಆದಿ ಉಡುಪಿಗೆ ಆಗಮಿಸಲಿದ್ದಾರೆ. ಕಟಪಾಡಿಯಲ್ಲಿ ಅದ್ದೂರಿ ಸ್ವಾಗತವನ್ನು ಕೋರಲಿದ್ದು, ಮೂಳೂರು ಉಚ್ಚಿಲದಲ್ಲಿಯೂ ಕಾರ್ಯಕರ್ತರು, ಪಕ್ಷದ ಮುಖಂಡರು, ಹಿತೈಷಿಗಳು ಸೇರಿ ಅವರನ್ನು ಸ್ವಾಗತಿಸಲಿದ್ದಾರೆ. ಅಲ್ಲಿಂದ ನೇರವಾಗಿ ಉಚ್ಚಿಲ ಮಹಾಲಕ್ಷ್ಮಿ ದೇವಳಲದ ಸಭಾಂಗಣದಲ್ಲಿ ಜರಗುವ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎರಡು ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಕೇರಳದ ಸಂಸದರಾದ ಪ್ರತಾಪನ್, ಕೇರಳ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ನೌಷಾದ್, ರಾಜ್ಯ ಮೀನುಗಾರ ಸಂಘಟನೆ ಅಧ್ಯಕ್ಷ ಮಂಜುನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಂತಲತಾ, ಸ್ಥಳೀಯ ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಫುಟಾರ್ಡೊ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಹರೀಶ್ ಕಿಣಿ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಗಫೂರ್, ನವೀನ್ ಚಂದ್ರ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ, ರಾಜಶೇಖರ ಕೋಟ್ಯಾನ್, ಹರೀಶ್ ನಾಯಕ್, ದಿನೇಶ್ ಫಲಿಮಾರು, ವಿಶ್ವಾಸ್ ಅಮೀನ್, ರಮೀಝ್ ಹುಸೇನ್, ಶರ್ಫುದ್ದೀನ್, ವಿಲ್ಸನ್ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.

ಎಪ್ರಿಲ್ 27 : ರಾಹುಲ್ ಗಾಂಧಿ ಉಚ್ಚಿಲಕ್ಕೆ; ಮೀನುಗಾರರ ಸಮಾವೇಶ ; ಮೀನುಗಾರರೊಂದಿಗೆ ಸಂವಾದ ; ಎಸ್ ಪಿ ಪರಿಶೀಲನೆ

Posted On: 25-04-2023 07:57PM

ಉಚ್ಚಿಲ : ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲಕ್ಕೆ ಎಪ್ರಿಲ್ 27 ರಂದು ಬರಲಿದ್ದು ಮೀನುಗಾರರ ಸಮಾವೇಶ ಅವರ ಜೊತೆಗೆ ಸಂವಾದ ಕಾರ್ಯಕ್ರಮ ‌ನಡೆಯಲಿದೆ.

ಸಭೆ ಸಂವಾದ ಕಾರ್ಯಕ್ರಮವು ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ‌ ಜಿ ಶಂಕರ್ ಸಭಾಂಗಣದಲ್ಲಿ‌‌ ನಡೆಯಲಿದೆ. ಕಾಪು‌ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ಸಭೆ ಸಂವಾದ ನಡೆಯುವ ಸ್ಥಳವನ್ನು ಎಸ್ ಪಿ ಅಕ್ಷಯ್ ಮಚ್ಛಿಂದ್ರ ತಂಡ ಪರಿಶೀಲನೆ ನಡೆಸಿದರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಅಶೋಕ್‌ಕುಮಾರ್ ಕೊಡವೂರು, ಮಂಜುನಾಥ ಸುಣೇಗಾರ್, ಹರೀಶ್ ಕಿಣಿ, ಜಿತೇಂದ್ರ ಪುಟಾರ್ಡೋ, ಅಖಿಲೇಶ್ ಕೋಟ್ಯಾನ್, ಶರ್ಪುದ್ದೀನ್ ಶೇಖ್, ವಿಶ್ವಾಸ್ ಅಮೀನ್, ಸತೀಶ್ ಅಮೀನ್, ರೋಶನ್, ಸಂತೋಷ್ ಪಡುಬಿದ್ರಿ, ಶೇಖರ ಹೆಜ್ಮಾಡಿ, ದೀಪಕ್ ಎರ್ಮಾಳ್ ಉಪಸ್ಥಿತರಿದ್ದರು.

ಕಾಪು : ಈ ಬಾರಿಯು ಬಿಜೆಪಿ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ - ಕೋಟ ಶ್ರೀನಿವಾಸ ಪೂಜಾರಿ

Posted On: 25-04-2023 07:51PM

ಕಾಪು : ಮಹಾಪ್ರಚಾರ ಅಭಿಯಾನದ ಅಂಗವಾಗಿ ಕಾಪು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಲಿದೆ. ಶಾಸಕ ಲಾಲಾಜಿ ಆರ್ ಮೆಂಡನ್ ರ ಅಭಿವೃದ್ಧಿ ಕಾರ್ಯ, ನಮ್ಮ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ ರವರ ಸಮಾಜಸೇವೆ ನಮ್ಮ ಪಕ್ಷಕ್ಕೆ ಶಕ್ತಿ ನೀಡಿದೆ. ಜಾತಿ ಧರ್ಮ ನೋಡದೆ ಅಭಿವೃದ್ಧಿ ಮಾಡುವ, ಬಡವರ ಪರವಾಗಿ ಕೆಲಸ ಮಾಡುವ ಸುರೇಶ್ ಶೆಟ್ಟಿ ಗುರ್ಮೆಯವರು ಈ ಬಾರಿ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಮಹಾಪ್ರಚಾರ ಅಭಿಯಾನದ ಅಂಗವಾಗಿ ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಲಾಲಾಜಿ ಮೆಂಡನ್ ಶಾಸಕರಾಗಿದ್ದ ಸಂದರ್ಭ ಹೆಜಮಾಡಿ ಬಂದರಿನ ಯೋಜನೆಗೆ ಮುಕ್ತಿ ನೀಡಿ ಇಂದು ಕಾಮಗಾರಿ ನಡೆಯುತ್ತಿದೆ. 23 ಸಾವಿರ ಮಹಿಳಾ ಮೀನುಗಾರರಿಗೆ ಸಾಲ ಮನ್ನಾ ಮಾಡಿದ ಕೀರ್ತಿ ನಮ್ಮ ಪಕ್ಷಕ್ಕಿದೆ. ನಾರಾಯಣ ಗುರು ನಿಗಮ ಸ್ಥಾಪನೆ ಮಾಡಿ, ನಾರಾಯಣ ಗುರುಗಳ ಹೆಸರಿನಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ, ಕೋಟಿ ಚೆನ್ನಯರ ಹೆಸರಿನಲ್ಲಿ ಸೇನಾ ಪೂರ್ವ ತರಬೇತಿ ಸಂಸ್ಥೆ, ಎಲ್ಲಾ ವರ್ಗದ ಸಣ್ಣ ಸಣ್ಣ ಜಾತಿಯವರಿಗೆ ನಿಗಮ ಮಂಡಳಿ ಮಾಡುವ ವ್ಯವಸ್ಥೆ ಮಾಡಿದ್ದೇವೆ. ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ದಿಸೆಯಲ್ಲಿ ಒಳ ಮೀಸಲಾತಿಯ ಮೂಲಕ ಅವಕಾಶ ನೀಡಲಾಗಿದೆ. ಭತ್ತ ಖರೀದಿಯ ಸಮಯದಲ್ಲಿ ಭತ್ತ ಮಾರಾಟವಾಗಿರುವ ಕಾರಣದಿಂದಾಗಿ ಕುಚ್ಚಲಕ್ಕಿ ಪೂರೈಕೆ ತಡವಾಗಿದೆ. ಮುಂದಿನ ದಿನಗಳಲ್ಲಿ ಈ ಬೇಡಿಕೆ ಖಂಡಿತವಾಗಿಯೂ ಈಡೇರಿಸುತ್ತೇವೆ ಎಂದರು.

ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ ಪ್ರಚಾರದ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಗಳ ಬಗ್ಗೆ ತಿಳಿಸಿದರು. ಶಾಸಕ ಲಾಲಾಜಿ ಆರ್ ಮೆಂಡನ್ ಬಿಜೆಪಿ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ ಹೆಚ್ಚಿನ ಮತಗಳ ಅಂತರದಿಂದ ಗೆಲುವನ್ನು ಪಡೆಯಲಿದ್ದಾರೆ ಎಂದರು.

ಈ ಸಂದರ್ಭ ಕಾಪುವಿನ ರಾಜ್ಯ ಚುನಾವಣಾ ಪ್ರಭಾರಿ ಸುಲೋಚನಾ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ಮಂಡಲದ ಅಧ್ಯಕ್ಷ ಶ್ರೀಕಾಂತ ನಾಯಕ್, ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಮಾಧ್ಯಮ ಸಂಚಾಲಕರಾದ ಕಿರಣ್, ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಇನ್ನಂಜೆ : ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಕುಮಾರಿ ಅನುಶ್ರೀ ಮತ್ತು ಸಾಧಕರಿಗೆ ಸನ್ಮಾನ

Posted On: 25-04-2023 09:27AM

ಇನ್ನಂಜೆ : ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 593 ಅಂಕಗಳನ್ನು ಪಡೆದು, ರಾಜ್ಯದಲ್ಲಿ 5ನೇ ಸ್ಥಾನಗಳಿಸಿದ ಎಸ್.ವಿ.ಎಚ್. ಪದವಿಪೂರ್ವ ಕಾಲೇಜು ಇನ್ನಂಜೆ ಇಲ್ಲಿನ ವಿದ್ಯಾರ್ಥಿನಿ ಕುಮಾರಿ ಅನುಶ್ರೀ ಇವರನ್ನು ಸಂಸ್ಥೆಯ ಪೋಷಕರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿದ ಅವರು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪಡೆದ ಶಿಕ್ಷಣ ಮತ್ತು ಮೌಲ್ಯಗಳನ್ನು ಜೀವನ ಪರ್ಯಂತ ಅನುಸರಿಸಿ ಶ್ರೇಷ್ಠ ಸಾಧಕಳಾಗಬೇಕು ಎಂದು ಹಾರೈಸಿದರು.

ಕಟಪಾಡಿ ಚೊಕ್ಕಾಡಿ ಸಮೀಪದ ಕೃಷ್ಣ ಮತ್ತು ಗೀತಾ ದಂಪತಿಗಳ ಪುತ್ರಿಯಾದ ಅನುಶ್ರೀಯವರು ತನ್ನ ನಿರೀಕ್ಷೆಗೂ ಮೀರಿದ ತರಬೇತಿಯನ್ನು ನೀಡಿದ ಶಿಕ್ಷಕ ವರ್ಗದ ನಂಬಿಕೆಯನ್ನು ಸಾಕಾರಗೊಳಿಸುವ ನಂಬಿಕೆಯನ್ನು ನೀಡಿದರು. ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ನಿಶಾನ್ ಕೋಟ್ಯಾನ್, ತೃತೀಯ ಸ್ಥಾನಗಳಿಸಿದ ಕುಮಾರಿ ಖುಷಿ, ವಿಜ್ಞಾನ ವಿಭಾಗದಲ್ಲಿ ಸಂಸ್ಥೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಕುಮಾರಿ ಸಾಕ್ಷಿ ಕುಲಾಲ್, ಕುಮಾರಿ ಯತಿಕ ಅಮೀನ್ ಹಾಗೂ ದ್ವಿತೀಯ ಸ್ಥಾನವನ್ನು ಪಡೆದ ಕುಮಾರಿ ಶ್ರೀಲೇಖಾ ಇವರೆಲ್ಲರನ್ನೂ ಶ್ರೀಗಳು ಸನ್ಮಾಸಿ ಶುಭ ಹಾರೈಸಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್‌ ಮಾತನಾಡಿ ರಾಜ್ಯದಲ್ಲಿ 5ನೇ ಸ್ಥಾನಗಳಿಸಿದ ಕುಮಾರಿ ಅನುಶ್ರೀಯ ಸಾಧನೆಗೆ ಪೂರಕವಾಗಿ ಶ್ರಮಿಸಿದ ನಮ್ಮ ಎಸ್.ವಿ.ಎಚ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ತಂಡ ಮತ್ತು ವಿದ್ಯಾರ್ಥಿನಿಯ ಪೋಷಕರನ್ನು ವಿಶೇಷವಾಗಿ ಅಭಿನಂದಿಸಿದರು. 47 ವಿಶಿಷ್ಟ ಶ್ರೇಣಿ ಹಾಗೂ 66 ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಸಾಧನೆಯೂ ನಮ್ಮ ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಕನ್ನಡಿಯಂತಿದೆ ಎಂದು ಎಲ್ಲಾ ಸಾಧಕರನ್ನು ಅಭಿನಂದಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪುಂಡರಿಕಾಕ್ಷ ಕೊಡಂಚ, ಉಪನ್ಯಾಸಕರಾದ ಪ್ರಶಾಂತ್ ಮತ್ತು ವಿದ್ಯಾರ್ಥಿಗಳ ಪೋಷಕರು ಈ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.