Updated News From Kaup
ಕಾಪು : ಪುರಸಭಾ ವ್ಯಾಪ್ತಿಯ ಭಾರತ್ ನಗರ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಿಂದ ಪ್ರಚಾರ ಸಭೆ

Posted On: 07-05-2023 11:38AM
ಕಾಪು : ಪುರಸಭಾ ವ್ಯಾಪ್ತಿಯ ಭಾರತ್ ನಗರ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ವಿನಯ್ ಕುಮಾರ್ ಸೊರಕೆಯವರ ಪರವಾಗಿ ಚುನಾವಣಾ ಪ್ರಚಾರ ಸಭೆ ನಡೆಸಲಾಯಿತು.

ವಿನಯ್ ಕುಮಾರ್ ಸೊರಕೆಯವರು ಮತದಾರ ಬಾಂಧವರಲ್ಲಿ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ಹಾಕಿ ಗೆಲ್ಲಿಸಬೇಕು ಮತ್ತು ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮತಯಾಚಿಸಿದರು.
ಕೆ.ಪಿ.ಸಿ.ಸಿ ಕಾರ್ಯದರ್ಶಿಗಳಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕೆ.ಪಿ.ಸಿ.ಸಿ ಸಂಯೋಜಕರಾದ ನವೀನ್ ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಕಾಪು ದಿವಾಕರ್ ಶೆಟ್ಟಿ ಮತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಜಿತೇಂದ್ರ ಫುರ್ಟಾಡೋ ರವರು ಸೊರಕೆಯವರ ಸಾಧನೆಗಳ ಬಗ್ಗೆ ವಿವರಿಸಿ, ಮುಂದೆ ಶಾಸಕರಾಗಿ ಚುನಾಯಿತರಾದರೆ ಏನು ಮಾಡುತ್ತಾರೆ ಎನ್ನುವ ದೃಷ್ಟಿಕೋನವನ್ನು ಇಟ್ಟುಕೊಂಡಿದ್ದಾರೆ ಎಂಬುದನ್ನು ತಿಳಿಸಿದರು.
ಪಕ್ಷದ ಪ್ರಮುಖರಾದ ಅಮೀರ್ ಮೊಹಮ್ಮದ್, ಹರೀಶ್ ನಾಯಕ್, ಸೌಮ್ಯ ಸಂಜೀವ, ಶೋಭಾ ಪಾಂಗಳ, ಲಕ್ಷ್ಮೀಶ ತಂತ್ರಿ, ಸಂಧ್ಯಾ ಬಾಲಕೃಷ್ಣ, ಹಬೀಬ್ ಖಾನ್, ಕೆ.ಎಂ. ರಝಕ್, ಶಂಶುದ್ದೀನ್, ರಜಾಬ್ ಉಮ್ಮರ್, ಮೋಹನ್ ದಾಸ್ ಶೆಣೈ, ಮೋಹಿನಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಉದ್ಯಾವರ ಸಂಪಿಗೆ ನಗರದಲ್ಲಿ ಬಿಜೆಪಿ ಮತ ಬೇಟೆ

Posted On: 07-05-2023 11:23AM
ಕಾಪು : ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ 10ನೇ ವಾರ್ಡ್ ಸಂಪಿಗೆ ನಗರ ಪ್ರದೇಶದಲ್ಲಿ ಭರ್ಜರಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯವರು, ಬಿಲ್ಲವ ಸಮಾಜದ ಏಳಿಗೆಗಾಗಿ ಬಿಜೆಪಿ ಸರ್ಕಾರವು ಹಲವಾರು ಅನುದಾನಗಳನ್ನು ನೀಡಿದೆ, ಮೀನುಗಾರರಿಗೆ ಹಾಗೂ ಮೀನುಗಾರಿಕ ಕ್ಷೇತ್ರಕ್ಕೆ ಹಲವಾರು ಅನುದಾನಗಳನ್ನು ನೀಡಿದೆ, ಇನ್ನಷ್ಟು ಯೋಜನೆಗಳನ್ನು ಬಿಜೆಪಿ ಸರ್ಕಾರವು ನಡೆಸಿ ಕೊಡಲಿದೆ ಕಾಪು ಕ್ಷೇತ್ರದ ಅಭಿವೃದ್ದಿಗೆ ಗುರ್ಮೆ ಸುರೇಶ್ ಶೆಟ್ಟಿಯವರ ಅಗತ್ಯವಿದೆ ನಿಮ್ಮ ಸಂಪೂರ್ಣ ಬೆಂಬಲ ಅವರಿಗೆ ನೀಡಬೇಕಾಗಿ ಕೇಳಿ ಕೊಂಡರು. ನಂತರ ಮಾತನಾಡಿದ ಕಾಪು ವಿಧಾನಸಭಾ ಕ್ಷೇತ್ರ ದ ಶಾಸಕ ಲಾಲಾಜಿ ಮೆಂಡನ್ ರವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕವಾಗಿ ಗುರುತಿಸಿಕೊಂಡಿರುವ ಸಮಾಜ ಸೇವಕ ಗುರ್ಮೆ ಸುರೇಶ್ ಶೆಟ್ಟಿಯವರ ಜೊತೆಗೆ ಇದ್ದು ಬಿಜೆಪಿ ಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ, ಗುರ್ಮೆ ಸುರೇಶ್ ಶೆಟ್ಟಿ ಯವರಿಂದ ಕಾಪು ಕ್ಷೇತ್ರವು ಅಭಿವೃದ್ಧಿ ಕ್ಷೇತ್ರವಾಗಲಿದೆ ಎಂದು ತಿಳಿಸಿ ನಿಮ್ಮ ಬೆಂಬಲ ನಮಗೆ ಅಗತ್ಯ ಎಂದು ತಿಳಿಸಿದರು. ನಂತರ ಮಾತನಾಡಿದ ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಘುಪತಿ ಭಟ್ ರವರು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಬಗ್ಗೆ ತಿಳಿಸಿದರು. ಗೋ ಹತ್ಯೆ ನಿಷೇದ ಕಾಯ್ದೆ ಹಿಂಪಡೆಯುವ ಬಗ್ಗೆ ಹಾಗೂ ಟಿಪ್ಪು ಜಯಂತಿ ಮರು ಆಚರಣೆ ನಡೆಸುವ ಬಗ್ಗೆ ಹಾಗೂ ಭಜರಂಗದಳ ನಿಷೇಧ ಮಾಡುವುದು, ಈ ರೀತಿಯ ಹಗಲು ಕನಸುಗಳನ್ನು ಕಾಣುವುದು ಕಾಂಗ್ರೆಸ್ ಪಕ್ಷದವರು ಬಿಡಬೇಕು. ಧರ್ಮ ರಕ್ಷಣೆ ಗೋಸ್ಕರ ಇರುವ ಬಿಜೆಪಿ ಸರ್ಕಾರವೇ ಕರ್ನಾಟಕದಲ್ಲಿ ಮತ್ತೆ ಆಡಳಿತಕ್ಕೆ ಬರುತ್ತೆ ಎಂದು ಭರವಸೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ ಯವರು ಶಾಸಕ ಲಾಲಾಜಿ ಮೆಂಡನ್ ರವರ ಅಭಿವೃದ್ಧಿ ಕೆಲಸಗಳು ಆದರ್ಶವು, ಕಾಪು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗಾಗಿ ಶ್ರೀ ರಕ್ಷೆಯಾಗಲಿದೆ, ಬಿಜೆಪಿ ಪಕ್ಷದ ಸಿದ್ಧಾಂತ, ರಾಷ್ಟ್ರೀಯವಾದ ಹಾಗೂ ರಾಷ್ಟ್ರ ಪರ ಚಿಂತನೆಗಳು ಹಾಗೂ ಹಿರಿಯರೆಲ್ಲರು ನನ್ನ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿ ಕೊಂಡು ಹೋಗುತ್ತೇನೆ ಎಂಬ ಭರವಸೆ ಕೊಟ್ಟರು.
ಈ ಸಂದರ್ಭದಲ್ಲಿ ಉದ್ಯಾವರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರವಿ ಕೋಟ್ಯಾನ್, ಆರ್ ಎಸ್ ಎಸ್ ಪ್ರಚಾರಕ ಪ್ರಸಾದ್ ಕುತ್ಯಾರ್, ಉದ್ಯಾವರ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯನ್, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನ ಗಣೇಶ್, ಸಂಪಿಗೆ ನಗರ ಭೂತ್ ಅಧ್ಯಕ್ಷ ಶ್ರೀಧರ್, ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್, ವೀಣಾ ಶ್ರೀಧರ್, ಬಿಜೆಪಿ ಮುಖಂಡರಾದ ಸುರೇಂದ್ರ ಪಣಿಯೂರು, ವಿಜಯ್ ಕುಮಾರ್ ಉದ್ಯಾವರ, ಗಣೇಶ್ ಕುಮಾರ್ ಉದ್ಯಾವರ, ಸಂತೋಷ್ ಬೊಲ್ಜೆ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.
ಶಿರ್ವ : ದರೋಡೆಗೆ ಹೊಂಚು ಹಾಕುತ್ತಿದ್ದ 6 ಮಂದಿ ಪೋಲಿಸ್ ವಶಕ್ಕೆ

Posted On: 07-05-2023 11:04AM
ಶಿರ್ವ : ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಕುಂಜಾರುಗಿರಿ ದೇವಸ್ಥಾನದ ದ್ವಾರದ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ 6 ಮಂದಿಯನ್ನು ಶಿರ್ವ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸಿ.ನೇತೃತ್ವದ ತಂಡ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಬಂಧಿತರನ್ನು ಇಕ್ಬಾಲ್ ಆಲಿಯಾಸ್ ಇಕ್ಬಾಲ್ ಶೇಖ್ ಆಲಿಯಾಸ್ ಇಕ್ಬಾಲ್ ಅಹಮದ್, ಪರ್ವೇಜ್, ಅಬ್ದುಲ್ ರಾಕಿಬ್, ಮೊಹಮ್ಮದ್ ಸಕ್ಲೇನ್, ಸಲೇಮ್ ಆಲಿಯಾಸ್ ಸಲೀಂ ಮತ್ತು ಅನಾಸ್ ಎಂದು ಗುರುತಿಸಲಾಗಿದೆ.
ಬಂಧಿತರಲ್ಲಿದ್ದ ಡ್ರಾಗನ್ ಒಂದು, 2 ಮೆಣಸಿನ ಹುಡಿ ಪ್ಯಾಕೆಟ್, 3 ಮರದ ವಿಕೆಟ್, 3 ದ್ವಿಚಕ್ರ ವಾಹನ ಮತ್ತು 4 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಸುಮಾರು ರೂ.2,31,000 ಆಗಬಹುದು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ಕುಂಬಳೆಯಲ್ಲಿ ಗಡಿ ಉತ್ಸವ - ಸಾಂಸ್ಕೃತಿಕ ಕಾರ್ಯಕ್ರಮ ; ಕವಿಗೋಷ್ಠಿ

Posted On: 07-05-2023 10:38AM
ಮಂಗಳೂರು : ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಮೇ 6 ರಂದು ಕಾಸರಗೋಡಿನ ಕುಂಬಳೆಯಲ್ಲಿ ಗಡಿ ಉತ್ಸವ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮವು ಅದ್ದೂರಿಯಿಂದ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊಫೆಸರ್ ರಾಧಾಕೃಷ್ಣ ಬೆಳ್ಳೂರು ಮಾತನಾಡಿ ಕಾಸರಗೋಡಿನಲ್ಲಿ ಮೂರು ಮಾದರಿಯ ಕನ್ನಡ ಹೋರಾಟ ನಡೆದಿದೆ. ಒಂದನೆಯದು ಬೀದಿಗಿಳಿದು ನಡೆಸುವ ಹೋರಾಟ. ಅದರ ಕಾವು ಈಗ ತಗ್ಗುತ್ತಾ ಬಂದಿದೆ. ಎರಡನೆಯದು ಸಾಹಿತ್ಯಕ ಮತ್ತು ಸಾಂಸ್ಕೃತಿಕವಾದ ಹೋರಾಟ. ಅದು ಮುಂದಿನ ತಲೆಮಾರಿಗೆ ದಾಖಲೆಯಾಗಿ ಉಳಿಯುವ ಮಾದರಿಯದು. ಇಲ್ಲಿಂದ ಆರು ಸಾವಿರಕ್ಕೂ ಹೆಚ್ಚು ಕನ್ನಡ ಪುಸ್ತಕಗಳು ಪ್ರಕಟವಾಗಿವೆ. ಇದು ಇಲ್ಲಿ ಕನ್ನಡ ಇತ್ತು, ಇದು ಕನ್ನಡ ನಾಡಾಗಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುವ ಐತಿಹಾಸಿಕವಾದ ಸಂಗತಿ. ಮೂರನೆಯದು ಕಾನೂನಾತ್ಮಕವಾದ ಹೋರಾಟ. ಕಳ್ಳಿಗೆ ಮಹಾಬಲ ಭಂಡಾರಿ. ಯು.ಪಿ. ಕುಣಿಕುಳ್ಳಾಯ ಮುಂತಾದವರು ಕೋರ್ಟಿಗೆ ಹೋಗಿ ಕಾಸರಗೋಡಿನ ಕನ್ನಡಿಗರಿಗೆ ಹಲವಾರು ಅನುಕೂಲತೆಗಳನ್ನು ಒದಗಿಸಿಕೊಟ್ಟಿದ್ದಾರೆ. ಈಗ ಆ ರೀತಿಯ ಹೋರಾಟವೂ ತುಸು ತಗ್ಗಿದಂತೆ ಭಾಸವಾಗುತ್ತಿದೆ. ಸದ್ಯ ಕಾಸರಗೋಡಿನಲ್ಲಿ ಕನ್ನಡ ಉಳಿಯಬೇಕಿದ್ದರೆ ಅದನ್ನು ಸಾಂಸ್ಕೃತಿಕವಾಗಿ ಉಳಿಸಲು ಸಾಧ್ಯವಾಗಬೇಕು. ಕಾಸರಗೋಡಿನ ಜನತೆಗೆ ಸಾಂಸ್ಕೃತಿಕವಾಗಿ ಕನ್ನಡದ ಪ್ರೌಢಿಮೆಯನ್ನು ತಿಳಿಸುವಂತಹ ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಬೇಕಾಗಿವೆ. ಜನಸಾಮಾನ್ಯರನ್ನು ಕನ್ನಡದ ಹೆಸರಲ್ಲಿ ಅಭಿಮಾನದಿಂದ ಒಂದುಗೂಡುವಂತೆ ಮಾಡಬೇಕಿದ್ದರೆ ಬೇರೆ ದಾರಿಗಳಿಲ್ಲ. ಕಾರ್ಯಕ್ರಮಗಳ ಆಧಿಕ್ಯ ಮತ್ತು ಸಂಘಟನೆಗಳ ಆಧಿಕ್ಯ ಎರಡೂ ಕಾಸರಗೋಡು ಕನ್ನಡ ಹೋರಾಟದ ದೃಷ್ಟಿಯಿಂದ ಕೊರತೆಗಳಾಗಿಯೇ ಕಂಡುಬರುತ್ತಿವೆ ಎಂದರು.

ಸನ್ಮಾನ : ಕನ್ನಡವನ್ನೇ ಉಸಿರಾಗಿಸಿಕೊಂಡಿರುವ ಶಿಕ್ಷಣ ತಜ್ಞ ವಿ.ಬಿ.ಕುಳಮರ್ವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಸ್ಎಸ್ಎಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಣ ತಜ್ಞ ವಿ ಬಿ ಕುಳಮರ್ವ, ಎ ಎಲ್ ಪಿ ಶಾಲಾ ಮುಖ್ಯೋಪಾಧ್ಯಾಯನಿ ಸ್ಮಿತಾ, ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು.

ಗೀತಾರವರು ಪ್ರಾರ್ಥನೆಗೈದರು. ರಾಣಿ ಪುಷ್ಪಲತಾ ದೇವಿ ಸ್ವಾಗತಿಸಿದರು. ಗಂಗಾಧರ್ ಗಾಂಧಿ ವಂದಿಸಿದರು . ರೇಖಾ ಸುದೇಶ್ ರಾವ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ನಡೆದ ಕವಿಗೋಷ್ಠಿಯಲ್ಲಿ ಮೂವತ್ತಕ್ಕೂ ಹೆಚ್ಚು ಕವಿಗಳು ಕಾವ್ಯ ವಾಚನ ಮಾಡಿದರು. ತದನಂತರ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಸಾಂಸ್ಕೃತಿಕ ಉತ್ಸವ ಮನೋರಂಜನ ಕಾರ್ಯಕ್ರಮಗಳು ಜರುಗಿದವು. ಭಾಗವಹಿಸಿದ ಎಲ್ಲ ಕವಿಗಳಿಗೆ ಹಾಗೂ ಕಲಾವಿದರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಲಾಲಾಜಿ ಮೆಂಡನ್ ರವರ ಮಾರ್ಗದರ್ಶನದಲ್ಲಿ ನಾನು ಕಾಪು ಕ್ಷೇತ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ : ಗುರ್ಮೆ ಸುರೇಶ್ ಶೆಟ್ಟಿ

Posted On: 06-05-2023 06:07PM
ಕಾಪು : ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ನಿಧಿ ಕ್ಯಾಶ್ಯೂಸ್ ಗೆ ಭೇಟಿ ನೀಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಾಲಾಜಿ ಮೆಂಡನ್ ರವರು ಈಗಾಗಲೇ ಹಲವಾರು ಬೀಜ ಕಾರ್ಖಾನೆ ಗೆ ಭೇಟಿ ಕೊಟ್ಟು ಮತಯಾಚನೆ ನಡೆಸಿದ್ದೇವೆ, ಎಲ್ಲಾ ಕಡೆ ಉತ್ತಮ ಬೆಂಬಲ ಸಿಕ್ಕಿದೆ, ನನ್ನ ಅಧಿಕಾರ ಅವಧಿಯಲ್ಲಿ ಕಾಪು ಕ್ಷೇತ್ರಕ್ಕಾಗಿ ತುಂಬಾ ಶ್ರಮಿಸಿದ್ದೇನೆ. ಇನ್ನು ಆ ಜವಾಬ್ದಾರಿಯನ್ನು ಗುರ್ಮೆ ಸುರೇಶ್ ಶೆಟ್ಟಿಯವರು ನಿಭಾಯಿಸಿಲಿದ್ದಾರೆ ಎಂದು ತಿಳಿಸಿದರು.
ನಂತರ ಮಾತನಾಡಿದ ಗುರ್ಮೆ ಶೆಟ್ಟಿ ಯವರು ಲಾಲಾಜಿ ಮೆಂಡನ್ ರವರ ಮಾರ್ಗದರ್ಶನದಲ್ಲಿ ನಾನು ಕಾಪು ಕ್ಷೇತ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ. ನಿಮ್ಮ ಬೆಂಬಲ ನನ್ನ ಮೇಲೆ ಇರಲಿ ಎಂದು ಕೇಳಿ ಕೊಂಡರು.
ಈ ಸಂದರ್ಭದಲ್ಲಿ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಪೇಂದ್ರ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಶ್ರೀಶ ನಾಯಕ್, ಜಿಲ್ಲಾ ಸಹ ವಕ್ತಾರ ಪ್ರತಾಪ್ ಶೆಟ್ಟಿ, ಬಡಗಬೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಸಂದೀಪ್ ಶೆಟ್ಟಿ, ಪಂಚಾಯತ್ ಅಧ್ಯಕ್ಷರು ಪುರಂದರ ಕೋಟ್ಯಾನ್, ಪಂಚಾಯತ್ ಉಪಾಧ್ಯಕ್ಷರು ಹೇಮಲತಾ ಶೆಟ್ಟಿ, ಬಿಜೆಪಿ ಪ್ರಮುಖರು ಸಂತೋಷ್ ಬೊಲ್ಜೆ, ಪ್ರಸಾದ್ ಹೆಗ್ಡೆ, ಶಂಕರ್ ಸಾಲ್ಯಾನ್, ಶಿಲ್ಪಾ ಸಾಲ್ಯಾನ್, ಕೃಷ್ಣ ನಾಯಕ್, ನವೀನ್ ಕುಲಾಲ್, ಸುನಿತಾ ನಾಯಕ್ ,ಪ್ರವೀಣ್ ಪೂಜಾರಿ, ಹಿರೇಬೆಟ್ಟು, ಹಿರಿಯಡ್ಕ ಪಂಚಾಯತ್ ಸದಸ್ಯರು ಹರೀಶ್ ಸಾಲ್ಯಾನ್ ಹಾಗೂ ಪಕ್ಷದ ಕಾರ್ಯಕರ್ತರು, ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.
ನೀವು ಎಲ್ಲಿ ಕೂತಿದ್ದೀರಿ ಅಲ್ಲೇ ಹಕ್ಕುಪತ್ರ : ವಿನಯ ಕುಮಾರ್ ಸೊರಕೆ

Posted On: 06-05-2023 06:01PM
ಪೆರ್ಡೂರು: ಸರ್ಕಾರಿ ಜಾಗದಲ್ಲಿ ಬಹಳಷ್ಟು ವರ್ಷಗಳಿಂದ ಮನೆ ಮಾಡಿ ಕೂತವರಿಗೆ ನೀವು ಎಲ್ಲಿ ಕೂತಿದ್ದೀರಿ ಅದೇ ಜಾಗಕ್ಕೆ ಹಕ್ಕುಪತ್ರ ಒದಗಿಸುವ ಕಾರ್ಯವನ್ನು ಕಾನೂನಿನಂತೆ ಮಾಡಿಕೊಡಲಾಗುವುದು ಎಂದು ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. ಪೆರ್ಡೂರು ಬುಕ್ಕಿಗುಡ್ಡೆಯ ಕೈರ್ ಎಂಬಲ್ಲಿ ಮನೆ ಮನೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಜಾಗದಲ್ಲಿ ಕೂತ ಬಡವರನ್ನು ಎಬ್ಬಿಸಿ ಬುಲ್ಡೋಜರ್ ಓಡಿಸಿ ಒಕ್ಕಲೆಬ್ಬಿಸುವ ದುಸ್ಸಾಹಸಕ್ಕೆ ಬಿಜೆಪಿ ಕೈ ಹಾಕಿದೆ. ಕಳೆದ 5 ವರ್ಷದ ಬಿಜೆಪಿ ಸಾಧನೆಗಳಲ್ಲಿ ಇದು ಕೂಡಾ ಒಂದು. ಕಾಂಗ್ರೆಸ್ ಇಂದಿರಾಗಾಂಧಿ ಕಾಲದಿಂದಲೂ ಡಿಕ್ಲರೇಷನ್ ಕಾನೂನು ಮೂಲಕ ಭೂಮಿ ನೀಡುವ ಮಹತ್ ಕಾರ್ಯವನ್ನು ಮಾಡಿಕೊಂಡು ಬಂದಿದೆ. ಮುಂದೆಯೂ ಕೂಡಾ ಬಡವರು ಸರ್ಕಾರಿ ಜಾಗದಲ್ಲಿ ಕೂತಲ್ಲಿ ಕೂತ ಸ್ಥಳದಲ್ಲೇ ಹಕ್ಕು ಪತ್ರ ನೀಡುವ ಕೆಲಸವನ್ನು ಮಾಡಲಾಗುವುದು ಎಂದು ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಬಡವರ ಪಕ್ಷ ಕಾಂಗ್ರೆಸ್ ನ್ನು ಗೆಲ್ಲಿಸಿದರೆ ಹಕ್ಕುಪತ್ರ ಕೊಡುವ ಕಾರ್ಯಕ್ರಮಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು. ನಂತರ ಪೆರ್ಡೂರು ವ್ಯಾಪ್ತಿಯ ಹತ್ರಿಬೈಲು ವಿಜಯಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್ ಮತ್ತು ಬುಕ್ಕಿಗುಡ್ಡೆಯಲ್ಲಿ ಎಪಿಎಂ ಕ್ಯಾಶ್ಯೂ ಇಂಡಸ್ಟ್ರೀಸ್ ಗೆ ಭೇಟಿ ಅಲ್ಲಿನ ಕಾರ್ಮಿಕರ ಸಮಸ್ಯೆಯನ್ನು ಆಲಿಸಿ ಮತಯಾಚನೆ ಮಾಡಿದರು.
ಪೆರ್ಡೂರು ಬುಕ್ಕಿಗುಡ್ಡೆ ಕೈರ್ ವ್ಯಾಪ್ತಿಯ ಸಂತೋಷ್ ಕುಲಾಲ್, ದಿನೇಶ್ ಪೂಜಾರಿ, ಶೋಭಾ, ರಾಮದಾಸ್, ಹರೀಶ್, ರಾಮ ಕುಲಾಲ್, ರಘುನಾಥ್ ನಾಯ್ಕ್, ಸುಂದರ, ರಾಘವೆ ಶೆಟ್ಟಿ, ಶರತ್ ಶೆಟ್ಟಿ ಉಪಸ್ಥಿತರಿದ್ದರು.
ಕಾಪು :ಕನ್ನಡ ಸಾಹಿತ್ಯ ಪರಿಷತ್ತು - ೧೦೯ನೇ ಸಂಸ್ಥಾಪನಾ ದಿನಾಚರಣೆ, ದತ್ತಿ ಉಪನ್ಯಾಸ ಕಾರ್ಯಕ್ರಮ

Posted On: 06-05-2023 05:53PM
ಕಾಪು : ಹಲವು ವರ್ಷಗಳ ಹಿಂದೆ ಮಾನವನಿಗೆ ಸ್ವಂತವಾದ ಬದುಕಿದೆಯೆಂದು ಯೋಚನೆ ಇರಲಿಲ್ಲ. ಎಲ್ಲವೂ ದೇವರೆಂಬ ಕಲ್ಪನೆಯಲ್ಲಿದ್ದರು. ಭಾರತದಲ್ಲಿ ಬಸವಣ್ಣನಂತಹ ದಾರ್ಶನಿಕರು ದೇವರು ಮತ್ತು ಮನುಷ್ಯನಿಗೆ ನೇರವಾಗಿ ಸಂಬಂಧವಿದೆ ಎಂದು ಮೊದಲ ಬಾರಿಗೆ ತಿಳಿಸಿದರು. ವಚನಕಾರರು ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ವಚನಗಳು ಸಾಹಿತ್ಯದಲ್ಲಿ ಶ್ರೇಷ್ಠವಾಗಿದೆ. ನಮ್ಮ ರಾಜ್ಯದ ಶ್ರೀಮಂತಿಕೆಯನ್ನು, ಪ್ರಕೃತಿಯ ಸೊಬಗನ್ನು ಕೆ.ಎಸ್.ನಿಸಾರ್ ಅಹಮದ್ ರಂತಹ ಕವಿಗಳು ಪದ್ಯದ ಮೂಲಕ ಜಗತ್ತಿಗೆ ಸಾರಿದ್ದಾರೆ ಎಂದು ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸ್ಟೀವನ್ ಕ್ವಾಡ್ರಸ್ ಹೇಳಿದರು. ಅವರು ಶುಕ್ರವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಆಶ್ರಯದಲ್ಲಿ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರಗಿದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೯ನೇ ಸಂಸ್ಥಾಪನಾ ದಿನಾಚರಣೆ - ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವರು ಕೇಂದ್ರಿತ ನೃತ್ಯಗಳಲ್ಲಿ ತುಳುನಾಡಿನ ಕಂಗೀಲು, ಉತ್ತರ ಕನ್ನಡದ ವೀರಭದ್ರ ಕುಣಿತ, ಕಂಸಾಲೆ ಇತ್ಯಾದಿ ಜಾನಪದ ನೃತ್ಯ ಪ್ರಾಕಾರಗಳು ಮನುಷ್ಯ ಮತ್ತು ದೇವರಿಗೆ ಸಂಬಂಧಿತ ನೃತ್ಯಗಳಾಗಿವೆ ಎಂದರು. ಕಸಾಪ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳಲ್ಲಿ ಕನ್ನಡ ನಾಡು ನುಡಿ ಪರಂಪರೆಯ ಬಗ್ಗೆ ಮತ್ತು ದತ್ತಿ ಉಪನ್ಯಾಸದ ಮಹತ್ವದ ಬಗ್ಗೆ ತಿಳಿಸಿದರು. ಪುರಂದರದಾಸರ ಬಗ್ಗೆ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಪ್ರೊ. ಎ.ಆರ್. ನಾಯ್ಕ್ ಮಾತನಾಡಿ, ತನ್ನೆಲ್ಲ ಸರ್ವಸ್ವ ಧಾರೆಯೆರೆದು ದಾಸನಾಗಿ ಎಲ್ಲಾ ವರ್ಗದ ಜನರ ಒಡನಾಟವನ್ನು ಮಾಡಿ ತನ್ನ ಅನುಭವಗಳನ್ನು ಕೀರ್ತನೆಗಳ ಮೂಲಕ ಪುರಂದರದಾಸರು ಜನರಿಗೆ ತಿಳಿಸಿದರು. ವರ್ತನೆಯಲ್ಲಿ ಪರಿವರ್ತನೆ ಮಾಡಿದಾಗ ಮನುಷ್ಯನಾಗಬಹುದು. ಶಾಸನಗಳಲ್ಲಿಯೂ ಪುರಂದರದಾಸರ ಬಗ್ಗೆ ಮಾಹಿತಿ ಇದೆ. ಕನ್ನಡ ಸಾಹಿತ್ಯ ಹಲವಾರು ಕವಿಗಳನ್ನು ಕಂಡಿದೆ. ಜೊತೆಗೆ 8 ಜ್ಞಾನ ಪೀಠದ ಗೌರವ ಕನ್ನಡಕ್ಕೆ ದೊರೆತಿದೆ. ಕನ್ನಡವನ್ನು ಉಳಿಸಿ ಬೆಳೆಸಲು ಕನ್ನಡದ ಮನಸ್ಸುಗಳು ಒಂದಾಗಬೇಕಿದೆ ಎಂದರು.
ಬಯಲಾಟದ ಕುರಿತು ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ| ಗೋಪಾಲಕೃಷ್ಣ ಗಾಂವ್ಕರ್ ಮಾತನಾಡಿ ಬಯಲಾಟವು ಉತ್ತರ ಕರ್ನಾಟಕದಲ್ಲಿ ಜಾನಪದ ಕಲೆಯಾಗಿ ಕನ್ನಡ ಭಾಷೆಯಲ್ಲಿ ನೀತಿ ನಿಯಮ, ಹೊಸ ವಿಷಯಗಳನ್ನು ಜನರಿಗೆ ಮುಟ್ಟಿಸುವ ಮಾಧ್ಯಮವಾಗಿದೆ. ನಮ್ಮ ಸುತ್ತ ಮುತ್ತಲಿನ ಘಟನಾವಳಿಗಳು ಕನ್ನಡದಲ್ಲಿರುತ್ತದೆ. ಅದನ್ನು ನಾವು ಅರಗಿಸಿಕೊಳ್ಳುವ ತಾಕತ್ತು ನಮಗೆ ಬಂದಾಗ ನಾವು ಬೇರೆ ಭಾಷೆ, ವ್ಯವಸ್ಥೆಯಲ್ಲಿ ಮಾತನಾಡಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಈ ಸಂದರ್ಭ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ| ರೋಶ್ನಿ ಯಶ್ವಂತ್, ಉಡುಪಿ ಜಿಲ್ಲಾ ಘಟಕದ ನರಸಿಂಹ ಮೂರ್ತಿ ರಾವ್, ಕಸಾಪ ಕಾಪು ಘಟಕದ ಕೋಶಾಧಿಕಾರಿ ವಿದ್ಯಾಧರ ಪುರಾಣಿಕ್, ಕೃಷ್ಣಕುಮಾರ್ ರಾವ್, ಮಧುಕರ ಎಸ್. ಯು, ದೀಪಕ್ ಬೀರ ಉಪಸ್ಥಿತರಿದ್ದರು.
ಗಾಯಕ ಡಾ| ಗಣೇಶ್ ಗಂಗೊಳ್ಳಿಯವರಿಂದ ಕನ್ನಡ ಗೀತೆಗಳ ಗಾಯನವು ನಡೆಯಿತು. ಕಸಾಪ ಕಾಪು ಘಟಕದ ಸದಸ್ಯ ರಾಕೇಶ್ ಕುಂಜೂರು ಸ್ವಾಗತಿಸಿದರು. ಎಸ್.ಎಸ್. ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಕಾಪು ಘಟಕದ ಕಾರ್ಯದರ್ಶಿ ನೀಲಾನಂದ ನಾಯ್ಕ ವಂದಿಸಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದವರು ಕ್ಷೇತ್ರ ತೊರೆಯಲು ಸೂಚನೆ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 06-05-2023 05:50PM
ಉಡುಪಿ : ಜಿಲ್ಲೆಯಲ್ಲಿ ಮೇ 10 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆ, ಸ್ಥಳೀಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಪ್ರಚಾರಕರು, ಕಾರ್ಯಕರ್ತರು, ಮೆರವಣಿಗೆ ಅಯೋಜಕರು ಸೇರಿದಂತೆ ಮತ್ತಿತರರು ಮೇ 8 ರಂದು ಸಂಜೆ 6 ಗಂಟೆಗೆ ಕ್ಷೇತ್ರ ಬಿಡಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಮತದಾನವು ಮೇ 10 ರಂದು ನಡೆಯಲಿದ್ದು, ಚುನಾವಣೆಯು ಮುಕ್ತ , ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ನಡೆಯಬೇಕಾದ ಹಿನ್ನಲೆ, ಮತದಾನದ ಅಂತ್ಯದ 48 ಗಂಟೆ ಮುಂಚಿತವಾಗಿ ಯಾವುದೇ ರೀತಿಯ ಬಹಿರಂಗ ಪ್ರಚಾರಗಳನ್ನು ಕೈಗೊಳ್ಳಲು ಅನುಮತಿ ಇರುವುದಿಲ್ಲ, ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರಲ್ಲದವರು ನಿಗಧಿತ ಸಮಯಕ್ಕಿಂತ ಮುಂಚೆ ಹೊರಹೋಗಬೇಕು ಎಂದರು. ಯಾವುದೆ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಅಥವಾ ಅಧಿಕೃತ ಅಭ್ಯರ್ಥಿಗಳ ಪ್ರಚಾರಕ್ಕಾಗಿ ವಿಧಾನಸಭಾ ಕ್ಷೇತ್ರದ ಹೊರಗಿನಿಂದ ಬಂದು ಉಳಿದುಕೊಂಡಿದ್ದಲ್ಲಿ ಅಂತಹವರು ನಿಗಧಿಪಡಿಸಿರುವ ಕಾಲಕ್ಕಿಂತ ಮುಂಚೆ ಕ್ಷೇತ್ರದಿಂದ ಹೊರಗೆ ಹೋಗಬೇಕು ಒಂದೊಮ್ಮೆ ಯಾವುದೇ ವಸತಿಗೃಹಗಳಲ್ಲಿ , ಕಲ್ಯಾಣ ಮಂಟಪಗಳಲ್ಲಿ ಉಳಿದುಕೊಂಡಿದ್ದಲ್ಲಿ ಅಂತಹವರಿಗೆ ಆಸ್ಪದ ನೀಡಬಾರದು. ಅನಧಿಕೃತವಾಗಿ ಉಳಿದುಕೊಂಡಿರುವ ಬಗ್ಗೆ ಮಾಹಿತಿಯಿದ್ದಲ್ಲಿ ಜಿಲ್ಲಾಡಳಿತ ಅಥವಾ ಜಿಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿಗೆ ನೀಡಬೇಕು ಎಂದರು. ಈ ಬಗ್ಗೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಆಗಾಗ್ಗೆ ಪರಿಶೀಲಿಸಲಿದ್ದಾರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರಲ್ಲದ ರಾಜಕೀಯ ಕಾರ್ಯಕರ್ತರು ,ಪಕ್ಷದ ಸಂಘಟಕರು, ಸೇರಿದಂತೆ ಮತ್ತಿತರರು ಅನಧಿಕೃತವಾಗಿ ನೆಲೆಸಿದ್ದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಹಾಗೂ ಅವರಿಗೆ ಆಶ್ರಯ ನೀಡುವವರ ಮೇಲೆಯೂ ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.
ಮತದಾನಕ್ಕೆ ನಿಗದಿಪಡಿಸಿದ ಅವಧಿ ಕೊನೆಗೊಳ್ಳುವುದಕ್ಕಿಂತ 48 ಗಂಟೆಗಳ ಮುಂಚೆ ಯಾವುದೇ ಮುದ್ರಣ ಮಾದ್ಯಮಗಳಲ್ಲಿ ಜಾಹೀರಾತು ಪ್ರಕಟಸಬೇಕಾದರೆ ಸಂಬಂದಪಟ್ಟ ಅಭ್ಯರ್ಥಿಗಳು ಅಥವಾ ಪಕ್ಷವು ಮಾಧ್ಯಮ ಪ್ರಾಮಾಣಿಕರಣ ಸಮಿತಿ ವತಿಯಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದರು. ಮೇ 8 ರಂದು ಸಂಜೆ 5 ಗಂಟೆಯಿಂದ ಮೇ 10 ರ ಮಧ್ಯರಾತ್ರಿ 12 ರ ವರೆಗೆ ಹಾಗೂ ಮೇ 12 ರ ಮಧ್ಯರಾತ್ರಿ 12 ಗಂಟೆಯಿಂದ ಮೇ 13 ರ ಮಧ್ಯರಾತ್ರಿ 12 ರ ವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಸರಬರಾಜನ್ನು ನಿಷೇಧಿಸಲಾಗಿದ್ದು, ಯಾವುದೇ ವಸತಿಗೃಹಗಳಲ್ಲಿ, ಕಲ್ಯಾಣ ಮಂಟಪಗಳು ಸೇರಿದಂತೆ ಮತ್ತಿತರ ಎಲ್ಲಾ ಸಭಾಂಗಣಗಳಲ್ಲಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಸಭೆಯಲ್ಲಿ ಮಾದರಿ ನೀತಿ ಸಂಹಿತೆ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಅಪರ ಜಿಲ್ಲಾಧಿಕಾರಿ ವೀಣಾ, ತರಬೇತಿ ನಿರತ ಐ.ಎ.ಎಸ್ ಆಧಿಕಾರಿ ಯತೀಶ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಹಾಗೂ ವಿವಿಧ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಡವರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ : ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ

Posted On: 05-05-2023 01:43PM
ಕಟಪಾಡಿ : ಬಡವರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದೆ. ಬಡವರು ಮತ್ತು ಮಧ್ಯಮ ವರ್ಗ ದವರು ಈ ಚುನಾವಣೆಯಲ್ಲು ಸೋಲಬಾರದು ಅನ್ನೋದು ನನ್ನ ಆಸೆ. ನಿಮ್ಮ ಮತವನ್ನು ಮಾರಿಕೊಳ್ಳಬೇಡಿ ಅಂತಾ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ಕುಮಾರ್ ಸೊರಕೆ ಹೇಳಿದ್ದಾರೆ. ಕಾಪು ಕ್ಷೇತ್ರದ ಕಟಪಾಡಿ ಸರಕಾರಿ ಗುಡ್ಡೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ಸರ್ಕಾರದ ಬಡವರ ಜನಸಾಮಾನ್ಯರ ಎಲ್ಲಾ ಯೋಜನೆಗಳನ್ನು ಪೂರ್ತಿಯಾಗಿ ಹಿಂತೆಗೆದುಕೊಳ್ಳಲಾಗಿದೆ. ಈ ಮೂಲಕ ಬಡವರು ಜನಸಾಮಾನ್ಯರನ್ನು ಕಷ್ಟಕ್ಕೆ ದೂಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿರೋದು ದೊಡ್ಡ ದುರಂತ ಅಂತಾ ಅವರು ವಿಷಾದ ವ್ಯಕ್ತಪಡಿಸಿದರು.
ದ್ವೇಶ, ಅಸೂಯೆ, ಬೇಡ ಶಾಂತ ರೀತಿಯಲ್ಲಿ ಎಲ್ಲಾ ಸಮಾಜದವರನ್ನು ಒಟ್ಟುಗೂಡಿಸಿಕೊಂಡು ಕೆಲಸ ಮಾಡಬೇಕು. ಹಣದ ಮೂಲಕ, ಗಿಫ್ಟ್ ಮುಖಾಂತರ ಆಮಿಷ ಒಡ್ಡಿ ನಿಮ್ಮ ಮತ ಸೆಳೆಯಲು ಬರ್ತಾರೆ. ನಿಮ್ಮನ್ನ ಮತವನ್ನು ಖರೀದಿ ಮಾಡಲು ಬರ್ತಾರೆ. ನೀವು ಜಾಗ್ರತೆ ವಹಿಸಿ ನಿಮ್ಮ ಮತವನ್ನು ಮಾರಿಕೊಳ್ಳದೆ ನಿಮ್ಮ ಕಷ್ಟದಲ್ಲಿ ಭಾಗಿಯಾಗಿ ಸಮಸ್ಯೆ ಗೆ ಪರಿಹಾರ ಒದಗಿಸುವ ಪ್ರಾಮಾಣಿಕ ರಿಗೆ ಓಟು ನೀಡಿ ಗೆಲ್ಲಿಸಿ ಅಂತಾ ವಿನಂತಿಸಿಕೊಂಡರು.
ಕಾಂಗ್ರೆಸ್ ಮುಖಂಡರಾದ ಸರಸ್ವತಿ ಬಂಗೇರ, ಶ್ರೀಕರ ಅಂಚನ್, ಪ್ರಭಾಕರ ಆಚಾರ್, ಆಶಾ ಅಂಚನ್, ಅಬೂಬಕ್ಕರ್ ಎ.ಆರ್, ವಿನಯ ಬಲ್ಲಾಳ್ ಉಪಸ್ಥಿತರಿದ್ದರು.
ಕಾಪು ಕ್ಷೇತ್ರದಲ್ಲಿ ಸುಸಜ್ಜಿತ ಗೋ ರುದ್ರಭೂಮಿ : ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ

Posted On: 05-05-2023 01:32PM
ಕಾಪು: ತಾವು ಚುನಾಯಿತರಾದರೆ ಕಾಪು ಕ್ಷೇತ್ರದಲ್ಲಿ ಸುಸಜ್ಜಿತ ಗೋ ರುದ್ರಭೂಮಿ ಸ್ಥಾಪಿಸುವುದಾಗಿ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮತದಾರರಿಗೆ ಭರವಸೆ ನೀಡಿದ್ದಾರೆ.
ಗೋ ಪ್ರೇಮಿ ಆಗಿರುವ ಗುರ್ಮೆ ಈಗಾಗಲೇ ಗೋ ವಿಹಾರಧಾಮ ಸ್ಥಾಪಿಸಿ ನೂರಾರು ಗೋವುಗಳನ್ನು ಸಾಕುತ್ತಿದ್ದಾರೆ. ಅವರೀಗ ತಮ್ಮ ಪ್ರಣಾಳಿಕೆಯಲ್ಲಿ ಗೋವುಗಳಿಗೆ ಗೌರವಯುತ ಅಂತ್ಯಸಂಸ್ಕಾರಕ್ಕಾಗಿ ಸುಸಜ್ಜಿತ ರುದ್ರಭೂಮಿ ನಿರ್ಮಾಣ ಮಾಡುವುದಾಗಿ ವಚನ ನೀಡಿದ್ದಾರೆ.
ಇದಕ್ಕೆ ತಮಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಪ್ರೇರಣೆ ಎಂದು ಹೇಳಿರುವ ಅವರು ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ನೀಡಲಾಗಿರುವ ಉನ್ನತ ಮತ್ತು ಪೂಜ್ಯ ಸ್ಥಾನಮಾನವನ್ನು ಅನುಸರಿಸಿ ತಾವು ಈ ಕಾರ್ಯಕ್ಕೆ ಮುಂದಾಗಿರುವುದಾಗಿ ಹೇಳಿದ್ದಾರೆ.