Updated News From Kaup

ಉಡುಪಿ ಅಂಚೆ ವಿಭಾಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Posted On: 09-03-2023 01:23PM

ಉಡುಪಿ : ಅವಿಭಕ್ತ ಕುಟುಂಬದಲ್ಲಿದ್ದುಕೊಂಡು ಸರ್ವರ ಜವಾಬ್ದಾರಿಯನ್ನು ವಹಿಸಿಕೊಂಡು ಹಿರಿಯರ ಆರೈಕೆಯೊಂದಿಗೆ ಕಿರಿಯರ ಯೋಗ ಕ್ಷೇಮದ ಕಾಳಜಿ ಮಾಡುತ್ತಾ ತಮ್ಮ ತುಂಬು ಸಂಸಾರವನ್ನು ತೂಗಿಸುತ್ತಿದ್ದ ಆಗಿನ ಕಾಲದ ಹೆಚ್ಚು ಕಲಿಯದ ಅನಕ್ಷರಸ್ಥ ಮಹಿಳೆ ಕೂಡ ಅಭಿನಂದನಾರ್ಹಳು ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಅಭಿಪ್ರಾಯಪಟ್ಟರು. ಉಡುಪಿ ಅಂಚೆ ವಿಭಾಗ ಹಮ್ಮಿಕೊಂಡ ಅಂತರ್ ರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮ ದಲ್ಲಿ ಸಭಾಧ್ಯಕ್ಷತೆ ವಹಿಸಿ ಐವರು ಮಹಿಳಾ ಸಾಧಕರನ್ನು ಗುರುತಿಸಿ ಮಾತನಾಡಿದ ಅವರು ದಿನಚರಿಯ ತಮ್ಮ ಕರ್ತವ್ಯದ ಜೊತೆ ಇಲಾಖೆಗೆ ವಿಶೇಷ ರೀತಿಯಲ್ಲಿ ಸೇವೆ ಸಲ್ಲಿಸಿದ ಐವರ ಮಹಿಳಾ ಸಾಧಕರನ್ನು ಸನ್ಮಾನಿಸಿ, ಶುಭ ಹಾರೈಸಿದರು.

ಅಂತರಾಷ್ಟ್ರೀಯ ಮಹಿಳಾ ದಿನವನ್ನು ಹ್ಯಾಪಿ ವುಮೆನ್ಸ್ ಡೇ ಎಂದು ವಿನ್ಯಾಸಗೊಳಿಸಿದ ಕೇಕ್ ಅನ್ನು ಸಾಹಿತಿ ನಿರೂಪಕಿ ಅಮಿತಾಂಜಲಿ ಕಿರಣ್ ರವರು ತುಂಡರಿಸಿ ಸಿಹಿ ಹಂಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಅವರು ಪುರುಷ ಹಾಗೂ ಮಹಿಳಾ ಸಹೋದ್ಯೋಗಿಗಳು ಒಟ್ಟಾಗಿ ಬಲು ಸಡಗರದಿಂದ ಆಚರಿಸುತ್ತಿರುವ ಮಹಿಳಾ ದಿನಾಚರಣೆಯನ್ನು ಕೊಂಡಾಡಿ ಸಂಭ್ರಮಿಸಿದರು.

ಸಹಾಯಕ ಅಂಚೆ ಅಧೀಕ್ಷಕರಾದ ವಸಂತ್ ರವರು ಸ್ವಾಗತಿಸಿದರು. ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠಲ್ ಭಟ್ ರವರು ಮಹಿಳಾ ದಿನಾಚರಣೆಯ ಬಗ್ಗೆ ಪ್ರಸ್ತಾವನೆಯ ಮಾತುಗಳನ್ನಾಡಿದರು. ಸವಿತಾ ಶೆಟ್ಟಿಗಾರ್ ಪ್ರಾರ್ಥಿಸಿದರು. ಸಹೋದ್ಯೋಗಿಗಳಿಗೆ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆ, ಸೀರೆಯಲ್ಲಿ‌ ನೀರೆಯರು ಸ್ಪರ್ಧೆ ಹಾಗೂ ಸಂಗೀತ ಕುರ್ಚಿ ಸ್ಪರ್ಧೆ ನಡೆದು ಬಹುಮಾನ ವಿತರಿಸಲಾಯಿತು. ಬಹುಮಾನ ವಿಜೇತರ ಪಟ್ಟಿಯನ್ನು ಚಿತ್ರಾ ದೇವಾಡಿಗ ವಾಚಿಸಿದರು. ಆಶಾಲತಾ ಮಹಿಳಾ ಸಾಧಕರ ವಿವರ ನೀಡಿದರು .ಅಂಚೆ ಇಲಾಖಾ ನಿವೃತ್ತ ಉದ್ಯೋಗಿ ಚಂದ್ರಿಕಾ ಉಪಸ್ಥಿತರಿದ್ದರು.

ವಿಭಾಗಿಯ ಅಂಚೆ ಕಚೇರಿಯ ಅನಿತಾ ಕಾರ್ಯಕ್ರಮ ವನ್ನು ಸಂಯೋಜಿಸಿದ್ದರು. ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆಪಾಲಕ ಗುರುಪ್ರಸಾದ್ ವಂದಿಸಿದರು.

ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ : ನಿಷೇಧಾಜ್ಞೆ

Posted On: 08-03-2023 11:39PM

ಉಡುಪಿ : ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 9 ರಿಂದ 29 ರ ವರೆಗೆ ಜಿಲ್ಲೆಯ ಒಟ್ಟು 28 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು ಹಾಗೂ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟುವ ಸಲುವಾಗಿ ನಿಗದಿಪಡಿಸಿದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ಸೆಕ್ಷನ್ 144 (1) ರಂತೆ ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.

ಉಡುಪಿ : ಹಾವಂಜೆಯ ಬಂಟ್ಸ್ ಫ್ರೆಂಡ್ಸ್ ಸಂಘದಿಂದ ವಿಶ್ವ ಮಹಿಳೆಯರ ದಿನಾಚರಣೆ ಕಾರ್ಯಕ್ರಮ

Posted On: 08-03-2023 11:26PM

ಉಡುಪಿ : ಬಂಟ್ಸ್ ಫ್ರೆಂಡ್ಸ್ ಸಂಘ ಹಾವಂಜೆ ಸಂಘದ ವತಿಯಿಂದ ಹಾವಂಜೆ ಮಂಜುನಾಥ ಸಭಾಭವನದಲ್ಲಿ ವಿಶ್ವ ಮಹಿಳೆಯರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯರು, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಯು ನ ರಮೇಶ್ ಶೆಟ್ಟಿ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಶಿಕ್ಷಕಿ ಶಶಿಕಲಾ ಶೆಟ್ಟಿ ವಹಿಸಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಜಾತ ಯು ಶೆಟ್ಟಿ, ಉಷಾ ಶೆಟ್ಟಿ, ಸುಗುಣ ಡಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತಿಯಿದ್ದರು. ಸನ್ಮಾನ, ಬಹುಮಾನ ವಿತರಣೆ : ಬಂಟ ಸಮುದಾಯದ ಹಿರಿಯ ಸಾಧಕರಾದ ರಾಧಮ್ಮ ಶೆಟ್ಟಿ, ಅಕ್ಕಯ್ಯ ಶೆಟ್ಟಿ, ಮೀನಕ್ಕ ಶೆಟ್ಟಿ, ಮೈರ ಶೆಟ್ಟಿ, ಯುವ ಪ್ರತಿಭೆಗಳಾದ ಕುಮಾರಿ ಪ್ರಜ್ಞಾ ಪಿ.ಶೆಟ್ಟಿ , ಕುಮಾರಿ ರಿಯಾ ಜಿ.ಶೆಟ್ಟಿ , ಕುಮಾರಿ ಸ್ಮಿರ ಪಿ. ಶೆಟ್ಟಿ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ನಿವೃತ್ತ ಕ್ರೀಡಾ ಶಿಕ್ಷಕ ಸೀತಾರಾಮ್ ಶೆಟ್ಟಿ, ಶಿಕ್ಷಕ ಪ್ರಶಾಂತ್ ಶೆಟ್ಟಿ, ಉದಯ್ ಶೆಟ್ಟಿ, ಅರುಣ್ ಶೆಟ್ಟಿ, ನಾರಾಯಣ ಶೆಟ್ಟಿ, ಸುರೇಶ್ ಶೆಟ್ಟಿ, ನಮ್ಮ ಉಡುಪಿ ಟಿವಿ ಹಾಗೂ ವಿ ಸ್ ಗ್ರೂಪ್ ನಿರ್ದೇಶಕರು ಹಾಗೂ ಅಖಿಲ ಭಾರತ ತುಳುನಾಡು ದೈವಾರಾಧಕರ ಒಕ್ಕೂಟ (ರಿ )ಉಡುಪಿ ಜಿಲ್ಲೆ ಸಂಸ್ಥಾಪಕರಾದ, ವಿನೋದ್ ಶೆಟ್ಟಿ, ಅರುಣ ಶೆಟ್ಟಿ, ಮಹಿಳಾ ವಿಭಾಗದ ಸದಸ್ಯರು ಉಪಸ್ಥಿತಿ ಇದ್ದರು.

ಶಿಕ್ಷಕಿ ಪದ್ಮ ಪಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಆಶಾ ಹರೀಶ್ ಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಊರಿನ ಯುವ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಹೆಜಮಾಡಿ : ಕಂಗೀಲು ಸೇವೆ

Posted On: 08-03-2023 09:48PM

ಹೆಜಮಾಡಿ : ಶ್ರೀ ಬ್ರಹ್ಮಮುಗ್ಗೆರ್ಕಳ ದೈವಸ್ಥಾನ, ಹೆಜಮಾಡಿ ಕೋಡಿ ಮತ್ತು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಊರಿನ ಮಾರಿಯನ್ನು ಓಡಿಸುವ ಕಂಗೀಲು ಸೇವೆಗೆ ಮಾಚ್೯ 8 ರಂದು ಆದಿಸ್ಥಳವಾದ ಹೆಜಮಾಡಿ ಮುಗ್ಗೆರ್ಕಳ ದೈವಸ್ಥಾನದಲ್ಲಿ ಚಾಲನೆ ನೀಡಲಾಯಿತು.

ಹೆಜಮಾಡಿ ಆಲಡೆ ಆಯನದ ಮರುದಿನ ನಡೆಯುವ ಕಂಗೀಲು ಆದಿಸ್ಥಳವಾದ ಹೆಜಮಾಡಿ ಮುಗ್ಗೆರ್ಕಳ ದೈವಸ್ಥಾನದಲ್ಲಿ ಸಿರಿ ಕಟ್ಟಿ ಹೆಜಮಾಡಿ ಬ್ರಹ್ಮಸ್ಥಾನಕ್ಕಾಗಿ, ಹೆಜಮಾಡಿ ಅಳಿವೆ ಕೋಡಿಯಿಂದ ಶ್ರೀ ವೀರ ಮಾರುತಿ ದೇವಸ್ಥಾನವಾಗಿ, ಫಲಿಮಾರು, ಚರಂತಿಪೇಟೆ, ಬಪ್ಪನಾಡು, ಮಾನಂಪಾಡಿ ಕೋಡಿ, ಪರಪಟ್ಟ, ಹೊಸಾಗೈ, ಕಡವಿನ ಬಾಗಿಲು, ಗುಂಡಿಮನೆಯ ತೋಟದಿಂದ ದೊಡ್ಡಮನೆ ತೋಟವಾಗಿ, ಮಟ್ಟು ಪಟ್ಣ ಭಜನಾ ಮಂದಿರದ ಬಳಿಯಿಂದ ಉತ್ತರ ಸುಲ್ತಾನ್‌ ರಸ್ತೆಯಾಗಿ ಹೆಜಮಾಡಿ ಗಡುವಿನಲ್ಲಿ ಸಿರಿ ಬಿಡುವುದು.

ಈ ಸಂದರ್ಭ ಬ್ರಹ್ಮಮುಗ್ಗೆರ್ಕಳ ದೈವಸ್ಥಾನದ ಪ್ರಮುಖರು, ಊರಿನ ಪ್ರಮುಖರು ಉಪಸ್ಥಿತರಿದ್ದರು.

ಕಾಪು : ಮಾನವ ಬಂದುತ್ವ ವೇದಿಕೆ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಮೀನು ಮಾರಾಟದ ಮಹಿಳೆಯರಿಗೆ ‌ಸನ್ಮಾನ

Posted On: 08-03-2023 07:22PM

ಕಾಪು : ಮಾನವ ಬಂದುತ್ವ ವೇದಿಕೆ ಕರ್ನಾಟಕ ಇದರ ಉಡುಪಿ ಜಿಲ್ಲಾ ಸಂಚಲನ ಸಮಿತಿ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಇಂದು ಮೀನು ಮಾರಾಟ ಮಾಡುವ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಕಾಪು ಮೀನು ಮಾರುಕಟ್ಟೆಯಲ್ಲಿ ಜರಗಿತು.

ಈ ಸಂದರ್ಭ ಮಾತನಾಡಿದ ಮಾಜಿ‌ ಸಚಿವರಾದ ವಿನಯಕುಮಾರ್ ಸೊರಕೆ ಮನೆಯ ಜೊತೆಗೆ ತಮ್ಮ ವೃತ್ತಿಯನ್ನು ನಿಭಾಯಿಸಿಕೊಂಡು ಬದುಕು ಕಟ್ಟುವ ಕಾಯದಲ್ಲಿರುವ ಮೀನುಗಾರರ ಮತ್ತು ಮೀನುಗಾರರ ಮಹಿಳೆಯರ ಉದ್ಯಮದ ಕಷ್ಟಗಳನ್ನು ಸ್ಮರಿಸಿಕೊಂಡರು.

ಮಂಗಳೂರು ವಿಭಾಗದ ಸಂಚಾಲಕ ಪತ್ರಕರ್ತ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾನವ ಬಂಧುತ್ವ ಕರ್ನಾಟಕ ವೇದಿಕೆ ಇದರ ರಾಜ್ಯ ಸಮಿತಿ ಸದಸ್ಯ ರೋನಾಲ್ಡ್ ಮನೋಹರ್ ಕರ್ಕಡ, ಪ್ರಮುಖರಾದ ಮಂಜಿತ್ ನಾಗರಾಜ್, ಮಹಮದ್ ಶೀಶ್, ಅಶ್ವಿನಿ, ಚಾಲ್ಸ್ ಅಂಬ್ಲರ್, ಕಾಪು ಮೀನು ಮಾರಾಟ ಸಂಘದ ಅಧ್ಯಕ್ಷ ಶಾಂತ ಸುವರ್ಣ, ಕಾರ್ಯದರ್ಶಿ ಶಶಿಕಲಾ, ಕಾಪು ಪುರಸಭಾ ಸದಸ್ಯರಾದ ಸತೀಶ್ ಚಂದ್ರ, ಫರ್ಜಾನ, ಶೋಭಾ ಬಂಗೇರ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪ್ರಮುಖರಾದ ಎಂಎ ಗಪುರ್, ಉಸ್ಮಾನ್, ಫಾರೂಕ್ ಚಂದ್ರನಗರ, ಹರೀಶ್ ನಾಯಕ್, ದೀಪಕ್ ಕುಮಾರ್ ಎರ್ಮಳ್, ಜಹೀರ್ ಅಹ್ಮದ್, ಸರ್ಫುದ್ದೀನ್ ಶೇಕ್ ಮತ್ತಿತರರು ಉಪಸ್ಥಿತರಿದ್ದರು.

ಉದ್ಯಾವರ : ವಿಶ್ವ ಮಹಿಳಾ ದಿನಾಚರಣೆ - ಅಂಗನವಾಡಿ ಕಾರ್ಯಕರ್ತರಿಗೆ ಸನ್ಮಾನ

Posted On: 08-03-2023 01:34PM

ಉದ್ಯಾವರ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಉದ್ಯಾವರ ಗ್ರಾಮದ 12 ಅಂಗನವಾಡಿ ಕಾರ್ಯಕರ್ತರಿಗೆ ಸಂಪಿಗೆನಗರದಲ್ಲಿರುವ ಪಲ್ಲೋಟೈನ್ ಸ್ನೇಹಾಲಯದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸ್ತ್ರೀ ಶಕ್ತಿಯ ಮೂಲಕ ಅಂಗನವಾಡಿ ಕಾರ್ಯಕರ್ತರು ಇನ್ನಷ್ಟು ಬಲಿಷ್ಠರಾಗುತ್ತಿದ್ದಾರೆ. ಪುರುಷ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ತಾಯಿಯ ಪ್ರೀತಿಯನ್ನು ಯಾವುದೇ ನಿರೀಕ್ಷೆಗಳಿಲ್ಲದೆ ಪುಟ್ಟ ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆಯರು ನೀಡುತ್ತಿದ್ದಾರೆ. ಮಹಿಳೆಯರನ್ನು ಗೌರವಿಸುವುದು ಕೇವಲ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತ್ರವಲ್ಲದೆ, ಪ್ರತಿದಿನ ಗೌರವಿಸುವಂತಾಗಬೇಕು ಎಂದರು.

ಲಯನ್ಸ್ 317Cಯ ಪ್ರಾಂತೀಯ ಅಧ್ಯಕ್ಷೇ ಲ. ವಿಜಯ ಗೋಪಾಲ ಬಂಗೇರ ಎಂ.ಜೆ.ಎಫ್. ಮಾತನಾಡಿ, ಅಂಗನವಾಡಿ ಕಾರ್ಯಕರ್ತರಿಗೆ ಮೊದಲ ಬಾರಿಗೆ ಈ ಗ್ರಾಮದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಮೂಲಕ ಸನ್ಮಾನ ದೊರಕುವಂತಾಗಿದೆ. ಅಂಗನವಾಡಿ ಕಾರ್ಯಕರ್ತರ ಸೇವೆ ನಿಜಕ್ಕೂ ದೇವರು ಮೆಚ್ಚುವಂಥದ್ದು ಎಂದರು. ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಉದ್ಯಾವರ ಗ್ರಾಮದ ಒಟ್ಟು 12 ಅಂಗನವಾಡಿ ಕಾರ್ಯಕರ್ತರನ್ನು ಅಭಿನಂದಿಸಿ ಅವರ ಸೇವೆಯನ್ನು ಗೌರವಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಾಂತಿಯ ಅಧ್ಯಕ್ಷೆ ಲ. ವಿಜಯ ಗೋಪಾಲ ಬಂಗೇರ ಮತ್ತು ಪಲ್ಲೋಟೈನ್ ಸ್ನೇಹಲಯದ ಮುಖ್ಯಸ್ಥೆ ಧರ್ಮಭಗಿನಿ ಸಿ. ಲೀನಾ ಅವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಲಯನ್ಸ್ ವಲಯ ಅಧ್ಯಕ್ಷ ಲ. ಜಾನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಅಧ್ಯಕ್ಷ ಲಯನ್ ಅನಿಲ್ ಲೋಬೊ ಸ್ವಾಗತಿಸಿದರೆ, ಕಾರ್ಯಕ್ರಮದ ನಿರ್ದೇಶಕ ಲಯನ್ ಪದ್ಮನಾಭ ಶೈಣೈ ಧನ್ಯವಾದ ಸಮರ್ಪಿಸಿದರು. ಕಾರ್ಯದರ್ಶಿ ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.

ಪಡುಬಿದ್ರಿ : ಟ್ಯಾಂಕರ್ ಅಜಾಗರೂಕತೆ ಚಾಲನೆ ; ಸ್ಕೂಟಿಯಲ್ಲಿದ್ದ ದಂಪತಿಗಳು ಮೃತ್ಯು

Posted On: 07-03-2023 07:43PM

ಪಡುಬಿದ್ರಿ : ಟ್ಯಾಂಕರ್ ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಮೂಲ್ಕಿ ಸೇತುವೆ ಮೇಲೆ ಇಂದು ಮಧ್ಯಾಹ್ನ ನಡೆದಿದೆ.

ಮೃತರನ್ನು ತೀರ್ಥಹಳ್ಳಿಯ ಅಡಿಕೆ ವ್ಯಾಪಾರಿ ದಂಪತಿ ಅಕ್ಬರ್ ಬಾಷಾ(61) ಹಾಗೂ ಖತೀಜಾಬಿ(46) ಎಂದು ಗುರುತಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರ ಶಾಂಭವಿ ನದಿಯ ಸೇತುವೆ ಮೇಲೆ ಈ ಘಟನೆ ನಡೆದಿದ್ದು ಟ್ಯಾಂಕರನ್ನು ಹೆಜಮಾಡಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಎದುರುಗಡೆಯಿಂದ ಸೇತುವೆಯ ಮೇಲೆ ಎಡ ಬದಿಯಲ್ಲಿ ಅಕ್ಬರ್ ಬಾಷಾರವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್‌ನ ಹಿಂಬದಿಗೆ ಡಿಕ್ಕಿ ಹೊಡೆದಿದ್ದು ಅಪಘಾತದಿಂದ ಸ್ಕೂಟರ್ ಸವಾರ ಅಕ್ಬರ್ ಬಾಷಾ ಹಾಗೂ ಸಹ ಸವಾರೆ ಖತೀಜಾಬಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತೀವ್ರರಕ್ತ ಗಾಯಗೊಂಡು ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರ್ವ : ಶ್ರೀ ಬಬ್ಬರ್ಯ ದೈವಸ್ಥಾನ ಮೂಡುಮಟ್ಟಾರು - ವಾರ್ಷಿಕ ನೇಮೋತ್ಸವ, ಮಹಾ ಅನ್ನಸಂತರ್ಪಣೆ

Posted On: 07-03-2023 05:16PM

ಶಿರ್ವ : ಇಲ್ಲಿನ ಶ್ರೀ ಬಬ್ಬರ್ಯ ದೈವಸ್ಥಾನ ಮೂಡುಮಟ್ಟಾರು ದೈವಸ್ಥಾನದಲ್ಲಿ ಮಾರ್ಚ್ 8, ಬುಧವಾರ ಬೆಳಿಗ್ಗೆ ಗಂಟೆ 10ಕ್ಕೆ ಭಂಡಾರ ಇಳಿಯುವುದು, ಮಧ್ಯಾಹ್ನ 12ಕ್ಕೆ ದರ್ಶನ ಸೇವೆ, ಮಧ್ಯಾಹ್ನ ಗಂಟೆ 1ರಿಂದ ಮಹಾ ಅನ್ನಸಂತರ್ಪಣೆ, ರಾತ್ರಿ ಗಂಟೆ 8ಕ್ಕೆ ಶ್ರೀ ನಂದಿಗೋಣ ನೇಮೋತ್ಸವ, ರಾತ್ರಿ ಗಂಟೆ 9:30 ರಿಂದ ಶ್ರೀ ಬಬ್ಬರ್ಯ ದೈವದ ನೇಮೋತ್ಸವ ಜರಗಲಿದೆ.

ಮಾಚ್೯ 9, ಗುರುವಾರ ಮಧ್ಯಾಹ್ನ ಗಂಟೆ 2 ರಿಂದ ನೀಚ ದೈವದ ನೇಮೋತ್ಸವ (ಕೊರಗಜ್ಜ) ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಟಪಾಡಿ‌‌‌ : ಸುಭಾಸ್ ನಗರದಲ್ಲಿ ನೂತನ ಬಾಲವನ ಉದ್ಘಾಟನೆ ; ಮಕ್ಕಳ ಆಟಿಕೆಗಳ ಕೊಡುಗೆ

Posted On: 07-03-2023 05:04PM

ಕಟಪಾಡಿ : ರೋಟರಿ ಕ್ಲಬ್ ಶಂಕರಪುರ ಹಾಗೂ ಗ್ರಾಮ ಪಂಚಾಯತ್ ಕಟಪಾಡಿ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ) ನೂತನ ಬಾಲವನವನ್ನು ಸುಭಾಸ್ ನಗರದ ಅಂಗನವಾಡಿಯ ಬಳಿಯಲ್ಲಿ ನಿರ್ಮಿಸಲಾಯಿತು. ಕಾರ್ಯಕ್ರಮವನ್ನು ಮಕ್ಕಳ ಆಟಿಕೆಯ ದಾನಿಗಳಾದ ದಿವಂಗತ ಅಪ್ಪಿ ತೋಮಣಿ ಸುವರ್ಣ ''ಪಪ್ಪಾ ಅಮ್ಮ ಛಾಯಾ ಸುಭಾಸ್ನಗರ '' ಇವರ ಸ್ಮರಣಾರ್ಥ ಮಕ್ಕಳಾದ ಮಂಜುಳಾ ನಾಗರಾಜ್ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಎಸ್ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾದ ರೋಟರಿ ವಲಯ ಸೇನಾನಿ ಯಶೋಧರ ಶೆಟ್ಟಿ, ಗ್ರಾಮ ಆಡಳಿತ ಅಧಿಕಾರಿ ಡೇನಿಯಲ್ ಡೊಮ್ನಿಕ್ ಡಿಸೋಜಾ ಶುಭ ಹಾರೈಸಿದರು. ಅಂಗನವಾಡಿಯ ಶಿಕ್ಷಕಿಯಾದ ಕಾಂತಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿನ ಹೆಚ್ಚಿನ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಕಾಮಗಾರಿಯನ್ನು ನಡೆಸಿದ ಪ್ರಭಾಕರ್ ಪಾಲನ್, ಮಕ್ಕಳ ಆಟಿಕೆಯ ಕೆಲಸಗಳನ್ನು ನಿರ್ವಹಿಸಿದ ಮೊಹಮ್ಮದ್ ಸಾಧಿಕ್ ಇವರುಗಳನ್ನು ಗುರುತಿಸಲಾಯಿತು.

ಸ್ಥಳೀಯರು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್ ಸ್ವಾಗತಿಸಿದರು. ವಿನ್ಸೆಂಟ್ ಸಲ್ದಾನ ಪ್ರಾರ್ಥಿಸಿದರು. ಅಂತೋನಿ ಡೇಸಾ ಪ್ರಸ್ತಾಪನೆಗೆಗೈದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತಾ ವೈ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ದಾನಿಗಳಾದ ಮಂಜುಳಾ ನಾಗರಾಜ್ ಇವರನ್ನು ಸನ್ಮಾನಿಸಲಾಯಿತು. ಚಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ : ಉದ್ದಿಮೆ ಆರಂಭಿಸದೆ, ಹೆಚ್ಚುವರಿ ಜಾಗ ಪಡೆದ ಕಂಪನಿಗಳ ಜಾಗವನ್ನು ಸರಕಾರ ಮರುವಶ/ಮರು ಹಂಚಿಕೆ ಮಾಡಬೇಕು - ಯೋಗೇಶ್ ವಿ ಶೆಟ್ಟಿ

Posted On: 07-03-2023 04:31PM

ಉಡುಪಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸರಕಾರದಿಂದ ಭೂಮಿ ಪಡೆದು ಪೂರ್ಣ ಕೈಗಾರಿಕೆಗಳನ್ನು ಸ್ಥಾಪಿಸದೆ / ವಿಸ್ತರಣೆ ಮಾಡದೆ ಇರುವ ಭೂಮಿಯನ್ನು ಸರಕಾರ ತನ್ನ ವಶಕ್ಕೆ ವಾಪಸು ಪಡೆಯಬೇಕು ಅಥವಾ ನೀಡಿಕೆಯಾದ ಭೂಮಿಯನ್ನು ಮರುಹಂಚಿಕೆ ಮಾಡಬೇಕು ಎಂದು ಉಡುಪಿ ಜಿಲ್ಲಾ ಜನತಾದಳ(ಜಾತ್ಯತೀತ)ದ ಜಿಲ್ಲಾಧ್ಯಕ್ಷರಾದ ಯೋಗೇಶ್ ವಿ ಶೆಟ್ಟಿ ಆಗ್ರಹಿಸಿದ್ದಾರೆ.

ಸಾಧಾರಣ ಅಂದಾಜು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7599 ಎಕ್ರೆ ಮತ್ತು ಉಡುಪಿ ಜಿಲ್ಲೆಯಲ್ಲಿ 2719 ಎಕ್ರೆ ಸೇರಿ ಒಟ್ಟು 10318 ಎಕ್ರೆ ಕೈಗಾರಿಕೆ ವಿಸ್ತರಣೆ ಮಾಡದೆ ಖಾಲಿ ಜಾಗ ಇದ್ದು,ಹಲವಾರು ಕಂಪನಿಗಳಿಗೆ ವಿತರಣೆಯಾಗಿದ್ದು, ಅಂತೆಯೇ ರಾಜ್ಯದ ಇತರ ಜಿಲ್ಲೆಗಳಲ್ಲೂ ಅಂಕಿ ಅಂಶ ಇದೇ ರೀತಿಯಲ್ಲಿ ಇದೆ.

ಕೈಗಾರಿಕೆಗಳು ಬೆಳೆಯಲಿ ಆರ್ಥಿಕ ಪ್ರಗತಿಗಾಗಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಲಿ ಎನ್ನುವ ಕಾರಣಕ್ಕೆ ಕೈಗಾರಿಕೆ ಸ್ಥಾಪಿಸುವರೇ ಸರಕಾರದಿಂದ ಭೂಮಿ ಕೊಡಲ್ಪಟ್ಟಿತ್ತು . ಆದರೂ ಕೆಲವು ಕೈಗಾರಿಕಾ ಸಂಸ್ಥೆಗಳು ಸಾಧಾರಣ 15 /30ವರ್ಷಗಳಿಂದ ವಿಸ್ತರಣೆ ಮಾಡಿದೆ ಹೆಚ್ಚುವರಿಯಾಗಿ ಜಾಗವನ್ನು ಹಾಗೆಯೇ ಉಳಿಸಿಕೊಂಡಿರುತ್ತದೆ. ಅಂತಹ ಜಾಗವನ್ನು ವಾಪಸು ಪಡೆದು, ಮರುಹಂಚಿಕೆಮಾಡಬೇಕೆಂದು ಸರಕಾರವನ್ನು ಒತ್ತಾಯ ಮಾಡುತ್ತಿದ್ದೇವೆ.

ಪರಿಹಾರ ನೀಡದ ವಶಪಡಿಸಿ ಕೊಂಡಂತಹ ಜಾಗವನ್ನು ಸಹಾ ಕೂಡಲೇ ವಾಪಸ್ ಪಡೆದು ಐಟಿ ಹಬ್ ಮತ್ತು ಇತರ ಕೈಗಾರಿಕೆಗಳನ್ನು ಸ್ಥಾಪಿಸುವ ಆಸಕ್ತರಿಗೆ ಮರು ವಿತರಣೆ ಮಾಡಿ ಉದ್ಯೋಗ ಸೃಷ್ಟಿ ಮಾಡುವರೇ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ. ಅದೇ ರೀತಿ ಜಾಗ ನೀಡಿದವರಿಗೆ/ ಕುಟುಂಬಸ್ಥರಿಗೆ / ಸ್ಥಳೀಯರಿಗೆ ಉದ್ಯೋಗ ನೀಡುವರೆ ಸರಕಾರವನ್ನು ಒತ್ತಾಯ ಪಡಿಸುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.