Updated News From Kaup

ಪುಸ್ತಕದಲ್ಲಿದ್ದ ವಿಚಾರಗಳು ಮಸ್ತಕಕ್ಕೆ ಹೋದರೆ ಮಸ್ತಕವೇ ಒಂದು ಪುಸ್ತಕವಾಗುವುದು - ನ್ಯಾಯವಾದಿ ಎಂ ಗುರುಪ್ರಸಾದ್ ಮಂಡ್ಯ

Thumbnail
Posted On: 04 Jun 2023, 06:04 PM

ಮಂಗಳೂರು : ಕರ್ನಾಟಕ ಸಾಮಾಜಿಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಬರಹ ಪ್ರಕಾಶನ ಮಂಗಳೂರು ಸಾರಥ್ಯದಲ್ಲಿ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಜೂನ್ 03 ರಂದು ಕೃತಿಗಳ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ನ್ಯಾಯವಾದಿ ಗುರುಪ್ರಸಾದ್ ಮಾತನಾಡಿ ಪುಸ್ತಕದಲ್ಲಿರುವ ವಿಚಾರಗಳು ಮಸ್ತಕಕ್ಕೆ ಹೋದರೆ ಮಸ್ತಕವೇ ಒಂದು ಪುಸ್ತಕವಾಗಿ ರೂಪುಗೊಳ್ಳುತ್ತದೆ. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಇವನಾರವ ಇವನಾರವ ಎಂದೆನಿಸದೆ , ಇವ ನಮ್ಮವ ಇವ ನಮ್ಮವ ಎಂದು ಹೇಳುತ್ತಾ ಜಗತ್ತಿನಲ್ಲಿ ಜಾತಿ ಧರ್ಮ ಮೇಲು ಕೀಳು ಎಂಬ ಭಾವನೆ ನಮ್ಮಲ್ಲಿರದೆ ನಾವೆಲ್ಲ ಒಂದೇ ಎಂಬ ಭಾವನೆಯಿಂದ ಇರಬೇಕೆಂದು ಹೇಳಿದ್ದರು. ಅವರು ತಾಳೆಗರಿಯಲ್ಲಿ 900 ,ವರ್ಷಗಳ ಹಿಂದೆ ಬರೆದ ಎಷ್ಟೊಂದು ವಚನಗಳು ಇಂದು ನಮಗೆ ದಾರಿದೀಪವಾಗಿದೆ. ಆದುದರಿಂದ ಉತ್ತಮ ಪುಸ್ತಕಗಳನ್ನು ಓದುವುದರ ಮೂಲಕ ನಮ್ಮ ಜೀವನವನ್ನು ಸಾರ್ಥಕ ಗೊಳಿಸಿಕೊಳ್ಳಬೇಕು ಎಂದರು. ನಾವು ಯಾವುದೇ ಶುಭ ಸಮಾರಂಭಗಳನ್ನು ಮಾಡುವಂತಹ ಸಂದರ್ಭದಲ್ಲಿ ಹಾರ ತುರಾಯಿ ನೀಡುವ ಬದಲು ಉತ್ತಮ ಪುಸ್ತಕಗಳನ್ನು ನೀಡಬೇಕು. ಪುಸ್ತಕಗಳನ್ನು ಓದುವ ಮೂಲಕ ನಮ್ಮಲ್ಲಿ ಜ್ಞಾನ ಸಂಪಾದನೆಯಾಗುತ್ತದೆ ಎಂದರು. ಆ ಕಾಲದಲ್ಲಿ ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ಒಂದು ಪಾರ್ಲಿಮೆಂಟನ್ನೇ ರಚಿಸಿ ಮಹಿಳೆಯರು ಮನೆಯಲ್ಲಿ ಬಂಧಿಯಾಗಿರದೇ ಸ್ವತಂತ್ರವಾಗಿ ಇರಬೇಕೆಂದು ಬಯಸಿದ್ದರು. ಇದರ ದ್ಯೊತಕವಾಗಿ ಇಂದು ರಾಣಿ ಪುಷ್ಪಲತಾ ದೇವಿಯಂತವರು ಒಂದು ಸಂಸ್ಥೆಯನ್ನು ಸ್ಥಾಪಿಸಿ ಅಧ್ಯಕ್ಷರಾಗಿ ಕಾರ್ಯಕ್ರಮ ನಡೆಸಲು ಸಾಧ್ಯವಾಯಿತು ಎಂದು ಹೇಳಿದರು. ಆ ಬಳಿಕ ರಾಣಿ ಪುಷ್ಪಲತಾ ದೇವಿಯವರ ವರ್ಣರಂಜಿತ ಚಿತ್ರ ಕವನಸಂಕಲನ "ಭೂರಮೆಯೊಡಲು" ಹಾಗೂ ಡಾ. ಆನಂದ ಬಂಜನ್ ರವರ "ತುಳುನಾಡ ವೈಭವ" ಕೃತಿಗಳನ್ನು ಲೋಕಾರ್ಪಣೆ ಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತ ದೇಶದಾದ್ಯಂತ ಕನ್ನಡಕ್ಕಾಗಿ ದುಡಿದ ಸುಮಾರು 3500 ಪ್ರಮುಖರನ್ನು ಸನ್ಮಾನಿಸಿದ್ದ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ| ಹೆಚ್ ಎಲ್ ಎನ್ ರಾವ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ| ಆನಂದ್ ಬಂಜನ್, ಕವಿಗೋಷ್ಟಿ ಅಧ್ಯಕ್ಷ ಡಾ| ಫ್ರಾನ್ಸಿಸ್ ಕ್ಸೇವಿಯರ್, NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಕವಿಗೋಷ್ಠಿ ಸಂಚಾಲಕಿ ಸುಧಾ ಕಂದಕೂರ ಉಪಸ್ಥಿತರಿದ್ದರು. ರಾಜ್ ಸಂಪಾಜೆ ಮತ್ತು ರೇಖಾ ಸುರೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 40ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು. ಸಭಾ ಕಾರ್ಯಕ್ರಮದ ನಂತರ ಕಾರ್ತಿಕ್ ಡಾನ್ಸ್ ಅಕಾಡೆಮಿ ಬೆಂಗಳೂರು ಮತ್ತು ಶ್ರೀಮತಿ ಧನ್ಯ ಸಂತೋಷ್ ಸಾರಥ್ಯದ ಕೈರಾಳಿ ನಾಟ್ಯಾಲಯ ಹಾಗೂ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕವಿಗಳಿಗೆ ಮತ್ತು ಕಲಾವಿದರಿಗೆ ಪ್ರಶಂಸನಾ ಪತ್ರ ಮತ್ತು ಪುಸ್ತಕಗಳನ್ನು ನೀಡಲಾಯಿತು.

ಕಾರ್ಕಳ : ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು, ಶಿರ್ಡಿ ಸಾಯಿಬಾಬಾ ಕಾಲೇಜು ವಿದ್ಯಾರ್ಥಿಗಳಿಂದ ಆಗುಂಬೆ ಘಾಟ್ ಸ್ವಚ್ಛತೆ

Thumbnail
Posted On: 04 Jun 2023, 03:40 PM

ಕಾರ್ಕಳ : ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು ಮತ್ತು ಶಿರ್ಡಿ ಸಾಯಿಬಾಬ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ಆಗುಂಬೆಯ ಘಾಟಿಯ ಇಕ್ಕೆಲಗಳನ್ನು ಸ್ವಚ್ಛತೆಯೆಡೆಗೆ ನಮ್ಮ ಹೆಜ್ಜೆ, ಪರಿಸರ ಕಾಳಜಿ ನಮ್ಮೆಲ್ಲರ ಹೊಣೆ ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಈ ಅರಣ್ಯದಲ್ಲಿ ಅಳಿವಿನಂಚಿನಲ್ಲಿರುವ ಅನನ್ಯ ಪ್ರಾಣಿ, ಪಕ್ಷಿ ಪ್ರಬೇಧಗಳಿವೆ. ನಾವು ಮಾಡುವ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಅವುಗಳ ಜೀವನ ದುಸ್ತರವಾಗುವಂತಾಗಿದೆ. ಆದ್ದರಿಂದ ನಾವು ಪ್ರಕೃತಿಯನ್ನು ಹಾಳುಗೆಡಹುವ ಕಾರ್ಯ ಬಿಟ್ಟು ಸಾಧ್ಯವಾದಷ್ಟು ಪರಿಸರದ ಸ್ವಚ್ಛತೆಗೆ ಆದ್ಯತೆಯಾಗುವಂತೆ ಬದುಕಬೇಕಾಗಿದೆ ಎಂದು ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ಹೇಳಿದರು. ನಾವು ಶಿಕ್ಷಿತರಾದರೂ ಅನಕ್ಷರಸ್ಥರಂತೆ ವರ್ತಿಸುತ್ತಿದ್ದೇವೆ. ನಾವು ಬಳಸಿದ ತ್ಯಾಜ್ಯ ವಸ್ತುಗಳನ್ನು, ಕಸ, ಪ್ಲಾಸ್ಟಿಕ್‌ ಇತ್ಯಾದಿಗಳನ್ನು ಜವಾಬ್ದಾರಿಯಿಲ್ಲದೇ ಕಂಡಲ್ಲಿ ಎಸೆಯುತ್ತಿದ್ದೇವೆ. ಅದು ಕಾಡಿನ ಪರಿಸರವನ್ನು ಮಾಲಿನ್ಯಗೊಳಿಸಿ ಅಲ್ಲಿನ ಪ್ರಾಣಿಪಕ್ಷಿಗಳಿಗೂ ತೊಂದರೆಯುಂಟುಮಾಡುತ್ತಿದೆ. ಆದ್ದರಿಂದ ಪ್ರವಾಸಿ ಸ್ಥಳ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಸ್ವಂತ ಕಾಳಜಿಯಿಂದ ನಿರ್ಮಲವಾಗಿಡುವ ಕಡೆಗೆ ಗಮನ ಹರಿಸಬೇಕಾಗಿದೆ ಎಂದು ಎನ್‌ ಎಸ್ ಎಸ್‌ ನ ಯೋಜನಾಧಿಕಾರಿಯಾದ ಶ್ರೀ ಉಮೇಶ್‌ ಕರೆ ನೀಡಿದರು. ಶಿರ್ಡಿ ಡಿಗ್ರಿ ಕಾಲೇಜಿನ ಆಶೀಶ್‌ ಶೆಟ್ಟಿ ಮಾತನಾಡಿ ಪ್ರತಿಯೊಬ್ಬರಿಗೂ ಸಾಮಾಜಿಕ ಪ್ರಜ್ಞೆಯಿರಬೇಕು. ಕೊಳಕು ಮಾಡುವ ಸಂಸ್ಕೃತಿ ನಿಲ್ಲಬೇಕು. ಎಲ್ಲರೂ ಬದುಕಿ ಬಾಳುವ ವಾತಾವರಣ ನಿರ್ಮಾಣ ಮಾಡುವುದಕ್ಕಾಗಿ ನಾವೆಲ್ಲ ಟೊಂಕಕಟ್ಟಿ ನಿಲ್ಲಬೇಕಾದ ಅನಿರ್ವಾಯತೆಯಿದೆ. ಪರಿಸರ ಪ್ರೀತಿ ಬೆಳೆಸೋಣ ಎಂದರು. ಈ ಸಂದರ್ಭದಲ್ಲಿ ಆಗುಂಬೆಯ ಘಾಟಿಯ ಆರಂಭದಿಂದ ಸೋಮೇಶ್ವರದವರೆಗೆ ಕ್ರಿಯೇಟಿವ್‌ ಕಾಲೇಜು ಹಾಗೂ ಶಿರ್ಡಿ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ನೇರವೇರಿಸಿದರು. ಉಪನ್ಯಾಸಕರಾದ ಚಂದ್ರಕಾಂತ ಆಚಾರ್ಯ, ಶ್ರೀಮತಿ ಶ್ರೀನಿಧಿ, ಪ್ರಿಯಾಂಕ, ತಿಪ್ಪೇಸ್ವಾಮಿ, ಶಶಿಧರ ಭಟ್‌ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಹರೀಶ್‌, ಚ್ರೈತ್ರಾ, ಆರ್ ಎಫ್ ಒ ಗೌರವ್‌ ಹಾಗೂ ಅರಣ್ಯಾಧಿಕಾರಿಗಳು ಮತ್ತು ಶಿರ್ಡಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಉಪಸ್ಥಿತರಿದ್ದರು.

ಕಾಪು : ಶ್ರೀ ದೇವಿ ಫ್ರೆಂಡ್ಸ್ ಕಾಪು ಮಲ್ಲಾರ್ ರಾಣ್ಯಕೇರಿ - ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪುಸ್ತಕ ವಿತರಣೆ ಸಮಾರಂಭ

Thumbnail
Posted On: 04 Jun 2023, 03:30 PM

ಕಾಪು : ಶ್ರೀ ದೇವಿ ಫ್ರೆಂಡ್ಸ್ ಕಾಪು ಮಲ್ಲಾರ್ - ರಾಣ್ಯಕೇರಿ ಇದರ ವತಿಯಿಂದ ರಾಣೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪುಸ್ತಕ ವಿತರಣೆ ಸಮಾರಂಭವು ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ ಜರಗಿತು. ಕಾರ್ಯಕ್ರಮವನ್ನು ಕಾಪು ಕ್ಷೇತ್ರದ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿದರು. ಈ ಸಂದರ್ಭ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭ ರಾಣೆ ಸಮಾಜದ ಪ್ರಮುಖರಾದ ಜಯ ರಾಣ್ಯ, ಬಿ ಕೆ ಶ್ರೀನಿವಾಸ್, ರವೀಂದ್ರ ಮಲ್ಲಾರು, ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಮಾಜಿ ಗುರಿಕಾರ ಶೇಖರ ರಾಣ್ಯ, ದರ್ಶನ ಪಾತ್ರಿ ನಾರಾಯಣ, ಅರ್ಚಕರಾದ ಸೋಮನಾಥ, ಮಹಿಳಾ ಮಂಡಳಿ ಕಾರ್ಯದರ್ಶಿ ಗೀತಾ, ಶ್ರೀ ದೇವಿ ಫ್ರೆಂಡ್ಸ್ ಅಧ್ಯಕ್ಷರಾದ ಶರತ್ ಎಸ್, ನಡು ಮಾರಿಯಮ್ಮ ದೇವಸ್ಥಾನದ ಗುರಿಕಾರರಾದ ಬಾಬು, ಶ್ರೀ ದೇವಿ ಫ್ರೆಂಡ್ಸ್ ಇದರ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂದೇಶ್ ಪ್ರಾರ್ಥಿಸಿದರು. ಪ್ರಕಾಶ್ ಎಸ್ ನಿರೂಪಿಸಿದರು.

ಭರವಸೆ ನೀಡಿದ‌ 5 ಗ್ಯಾರಂಟಿ ಜಾರಿಗೆ ; ನುಡಿದಂತೆ ನಡೆದ ಕಾಂಗ್ರೆಸ್ ಸರಕಾರ - ರಮೀಜ್ ಹುಸೇನ್

Thumbnail
Posted On: 03 Jun 2023, 06:36 PM

ಪಡುಬಿದ್ರಿ : ಈ ಆರ್ಥಿಕ ವರ್ಷದಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿ ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯ ಮಾತನ್ನು ಈಡೇರಿಸಿದ ಮುಖ್ಯ ಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯರವರಿಗೆ ಅಭಿನಂದನೆಗಳು ಎಂದು ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ತಿಳಿಸಿದ್ದಾರೆ. ಗ್ಯಾರಂಟಿ ಜಾರಿಗಳನ್ನು ಯಾವುದೇ ಜಾತಿ, ಧರ್ಮಗಳ ತಾರತಮ್ಯ ಇಲ್ಲದೇ ಗ್ಯಾರಂಟಿ ಯೋಜನೆ ಜಾರಿ ಗೊಳಿಸಿದ್ದಲ್ಲದೇ ಸಮಾನ್ಯ ಜನರಿಗೆ ಆಸರೆಯನ್ನು ನೀಡಿದೆ. ಜನ ಸಮಾನ್ಯರು ಬೆಲೆ ಏರಿಕೆ ಹಾಗು ಯುವ ಜನತೆ ನಿರುದ್ಯೋಗದ ಸಮಸ್ಯೆಯಿಂದ ತತ್ತರಿಸಿರುವ‌ ಈ ಸಂದರ್ಭದಲ್ಲಿ ಜನರ ಬದುಕಿಗೆ ಅಸರೆ ನೀಡಿದ‌ ಕಾಂಗ್ರೆಸ್ ‌ಸರಕಾರದ ಈ ಸಾಧನೆ ನಿಜವಾಗಿಯು ಶಾಘ್ಲನೀಯ. ಜನರ ಕಷ್ಟಕ್ಕೆ ಸ್ಪಂದಿಸುವ ‌ಸರಕಾರ ಎಂಬುದನ್ನು ಕಾಂಗ್ರೆಸ್ ಪಕ್ಷದ ‌ಸರಕಾರ ಸಾಬೀತು ಪಡಿಸಿದೆ ಎಂದು ರಮೀಜ್ ಹರ್ಷ ವ್ಯಕ್ತಪಡಿಸಿದ್ದಾರೆ.

ಕಟಪಾಡಿ : ತ್ರಿಶಾ ವಿದ್ಯಾ ಕಾಲೇಜು - ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ, ನಾಯಕತ್ವದ ಗುಣ, ಪ್ರೇರಣೆಯ ಕುರಿತ ಕಾರ್ಯಾಗಾರ

Thumbnail
Posted On: 03 Jun 2023, 06:30 PM

ಕಟಪಾಡಿ : ಮೇಜರ್ ರಾಧಾಕೃಷ್ಣ ಅವರಿಂದ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿಗಳಿಗೆ ಶಿಸ್ತು ಸಂಯಮ, ನಾಯಕತ್ವದ ಗುಣ ಮತ್ತು ಪ್ರೇರಣೆಯ ಕುರಿತಾದ ಕಾರ್ಯಾಗಾರವು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ 120ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ, ಯುವ ಜನಾಂಗದಲ್ಲಿ ಶಿಸ್ತು ಬಹಳ ಮುಖ್ಯ. ಸತತ ಪ್ರಯತ್ನದಿಂದ ಜೀವನದಲ್ಲಿ ಗೆಲುವು ಸಾಧ್ಯ ಎನ್ನುವುದನ್ನ ತಿಳಿದುಕೊಂಡರು. ಕಾರ್ಯಕ್ರಮದಲ್ಲಿ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಇಂದುರೀತಿ, ಉಪನ್ಯಾಸಕ‌ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉಡುಪಿ : ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಭೆ

Thumbnail
Posted On: 03 Jun 2023, 05:20 PM

ಉಡುಪಿ : ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳೊಂದಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶನಿವಾರ ಶಾಸಕರ ಕಚೇರಿ ಉಡುಪಿಯಲ್ಲಿ ಸಭೆ ನಡೆಸಿ ಚರ್ಚಿಸಿದರು. ಸಭೆಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮತ್ತು ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ರೋಗಿಗಳಿಗೆ ಸದ್ರಿ ಯೋಜನೆಯ ಪ್ರಯೋಜನವನ್ನು ಪಡೆಯುವಂತೆ ಸಹಕಾರ ಹಾಗೂ ಸಲಹೆಗಳನ್ನು ವೈದ್ಯಾಧಿಕಾರಿಗಳು ನೀಡಬೇಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ವೈದ್ಯಾಧಿಕಾರಿಯವರು ಸ್ಥಳೀಯ ಸಾರ್ವಜನಿಕರ ಹಾಗೂ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಔಷಧೋಪಚಾರವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ ಸೂಚಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳಾದ ನಾಗಭೂಷಣ್ ಉಡುಪ, ತಾಲ್ಲೂಕು ವೈದ್ಯಾಧಿಕಾರಿಗಳಾದ ವಾಸುದೇವ್ ಉಡುಪ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಸುನಿಲ್ ಕುಮಾರ್ ಹೇಳಿಕೆಯ ಹಿಂದೆ ಖಾಸಗಿ ಬಸ್ಸು ಮಾಫಿಯಾಕ್ಕೆ ಲಾಭ ಮಾಡಿಕೊಡುವ ಹುನ್ನಾರ : ಅನಿತಾ ಡಿಸೋಜ

Thumbnail
Posted On: 03 Jun 2023, 04:59 PM

ಕಾರ್ಕಳ : ಖಾಸಗಿ ಬಸುಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ನೀಡಬೇಕು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಸರಕಾರವನ್ನು ಒತ್ತಾಯಿಸುತ್ತಿದ್ದಂತೆ, ಅವರ ಹೇಳಿಕೆ ಬೆಂಬಲಿಸಿ ರಾಜ್ಯ ಖಾಸಗಿ ಬಸ್ ಮಾಲಕರ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮತ್ತು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿಕೆಯು ಖಾಸಗಿ ಬಸ್ಸು ಮಾಫಿಯಕ್ಕೆ ಲಾಭ ಮಾಡಿಕೊಡುವ ಹುನ್ನಾರ ಇದೆ ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ ಆರೋಪಿಸಿದ್ದಾರೆ. ಕರಾವಳಿ ಸೇರಿದಂತೆ ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚಾರ ಇದ್ದು, ಸರಕಾರಿ ಬಸ್ಸುಗಳಿಗೆ ಕೊಡುವ ಅನುಕೂಲ ಖಾಸಗಿ ಬಸ್ಸುಗಳಿಗೂ ಸರಕಾರ ನೀಡಬೇಕು. ಹಣದ ರೂಪದಲ್ಲಾದರೂ ಖಾಸಗಿ ಬಸ್ಸುಗಳಿಗೆ ಅನುಕೂಲ ಮಾಡಿಕೊಟ್ಟರೆ, ಮಹಿಳೆಯರ ಉಚಿತ ಪ್ರಯಾಣಕ್ಕೆ ನಾವು ಸಿದ್ಧ ಎಂದು ಬಸ್ಸು ಮಾಲಕರ ಸಂಘದ ರಾಜ್ಯಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಇತ್ತೀಚಿಗೆ ಹೇಳಿಕೆ ನೀಡಿದ್ದರು. ಮಾಜಿ ಮಂತ್ರಿ ಹಾಲಿ ಶಾಸಕ ಸುನಿಲ್ ಕುಮಾರ್ ಹೇಳಿಕೆ ಬೆನ್ನಲ್ಲೇ ಕುಯಿಲಾಡಿ ಸುರೇಶ್ ಕುಮಾರ್ ರವರ ಹೇಳಿಕೆ ಬಸ್ ಮಾಫಿಯಾಗೆ ಸರಕಾರದ ಪೆಟ್ರೋಲ್, ಡೀಸೆಲ್ ಸಬ್ಸಿಡಿ ಅಥವಾ ಉಚಿತ ಟಿಕೆಟ್ ಗಾಗಿ ಇಂತಿಷ್ಟು ಅನುದಾನವನ್ನು ಕೊಡಿಸಿ ಖಾಸಗಿ ಬಸ್ ಮಾಫಿಯಾಕ್ಕೆ ಲಾಭ ಮಾಡಿಕೊಡುವ ಲಾಭ ಮಾಡಿಕೊಡುವ ಹುನ್ನಾರದಿಂದಲೇ ಶಾಸಕ ಸುನಿಲ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ ಎಂಬ ಸಂಶಯ ಮೂಡುತ್ತಿದೆ. ಶಾಸಕ ಸುನಿಲ್ ಕುಮಾರ್ ರವರಿಗೆ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ತನ್ನ ಜಿಲ್ಲೆಯ ಜನರಿಗೂ ಸಿಗಬೇಕು ಎಂಬ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ, ಕರಾವಳಿಯಲ್ಲಿ ಖಾಸಗಿಯಷ್ಟೇ ಪ್ರಮಾಣದ ಸರಕಾರಿ ಬಸ್ ಗಳು ಓಡಿಸುವಂತೆ ಸರಕಾರವನ್ನು ಒತ್ತಾಯಿಸುತ್ತಿದ್ದರು. ಜಿಲ್ಲೆಯ ಇಬ್ಬರು ಬಿಜೆಪಿ ನಾಯಕರುಗಳು ಖಾಸಗಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅಗ್ರಹಿಸುತ್ತಿರುವುದು ಜನಪರವಾದ ಕಾಳಜಿಯಿಂದ ಅಲ್ಲ. ಬದಲಾಗಿ ಇದರ ಹಿಂದೆ ದೊಡ್ಡ ಹುನ್ನಾರವೇ ಇದೆ ಎಂದು ಜನರು ಅರ್ಥ ಮಾಡಿಕೊಳ್ಳಬೇಕು. ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳು ಈಗಾಗಲೇ ಜಾರಿಯಾಗಿದ್ದು, ಬಿಜೆಪಿ ಜಿಲ್ಲಾಧ್ಯಕ್ಷರು ಕೆಪಿಸಿಸಿ ಕಚೇರಿಯ ಮುಂದೆ ತಲೆ ಬೋಳಿಸಿ ಕುಳಿತುಕೊಳ್ಳಲು ಸಿದ್ದರಾಗಲಿ ಎಂದು ಅನಿತಾ ತಿಳಿಸಿದ್ದಾರೆ.

ಉಡುಪಿ : ಮಹಿಳಾ ಕುಸ್ತಿ ಪಟುಗಳನ್ನು ಬೆಂಬಲಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ವತಿಯಿಂದ ಪ್ರತಿಭಟನೆ

Thumbnail
Posted On: 03 Jun 2023, 04:49 PM

ಕಾಪು : ಮಹಿಳಾ ಕುಸ್ತಿ ಪಟುಗಳಿಗೆ ಕಿರುಕುಳ ನೀಡಿದ ಪೋಸ್ಕೊ ಆರೋಪಿ ಬಿಜೆಪಿ ಸಂಸದರನ್ನು ಬಂಧಿಸಲು ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ಇವರು ಪ್ರತಿಭಟನೆ ನಿರತ ಕುಸ್ತಿಪಟುಗಳನ್ನು ಬೆಂಬಲಿಸಿ ಕಾಪು ಪೇಟೆಯಲ್ಲಿ ಶನಿವಾರ ಮುಸ್ಲಿಂ ಮಹಿಳೆಯರು ಬ್ರಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ವಿಮೆನ್ ಇಂಡಿಯಾ ಮೂವ್ ಮೆಂಟ್ ನ ಅಧ್ಯಕ್ಷೆ ನಾಝಿಯ ಮಾತನಾಡಿ ಮಹಿಳೆಯರ ಮೇಲೆ ದೌರ್ಜನ್ಯ ನೋಡಿಯೂ ಕಣ್ಣು ಮುಚ್ಚಿ ಕುಳಿತ ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿದರು. ನಾವು ಆರಿಸಿ ಕಳುಹಿಸಿದ ಸಂಸದರು ಬರೇ ಸಂಬಳವನ್ನು ತೆಗೆದುಕೊಳ್ಳುವ ಬದಲು ಮಹಿಳೆಯರ ಬಗ್ಗೆ ಸ್ವಲ್ಪ ಕಾಳಜಿಯಿಂದ ವರ್ತಿಸಲಿ. ಬಿಜೆಪಿ ಸರ್ಕಾರ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುವ ಮೂಲಕವೇ ಅತ್ಯಾಚಾರಿಗಳನ್ನು ರಕ್ಷಿಸುವ ಕೆಲಸ ಮಾಡುತ್ತದೆ ಎಂದರು. ಪ್ರತಿಭಟನೆಯಲ್ಲಿ ಕಾರ್ಯದರ್ಶಿ ರಹಿಮಾ ಕಾಪು,ಜಿಲ್ಲಾ ಉಪಾಧ್ಯಕ್ಷೆ ನಸೀಮಾ, ಕಾಪು ಅಧ್ಯಕ್ಷೆ ಫರ್ಝಾನಾ,ಕಾರ್ಯದರ್ಶಿ ನೌಶೀನ್ ಮುಂತಾದವರು ಇದ್ದರು.

ಕಾಪು : ಪುರಸಭಾ ವ್ಯಾಪ್ತಿಯ ಕುಂದು ಕೊರತೆ ಬಗ್ಗೆ ಪುರಸಭಾ ಸದಸ್ಯರು, ಇಲಾಖಾಧಿಕಾರಿಗಳೊಂದಿಗೆ ಶಾಸಕರ ಸಭೆ

Thumbnail
Posted On: 02 Jun 2023, 08:53 PM

ಕಾಪು : ಇಲ್ಲಿನ ಪುರಸಭಾ ವ್ಯಾಪ್ತಿಯ ಕುಂದು ಕೊರತೆ ಬಗ್ಗೆ ಇಂದು ಕಾಪು ಪುರಸಭೆಯ ಸಭಾಂಗಣದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಪುರಸಭಾ ಸದಸ್ಯರು ಹಾಗೂ ಪುರಸಭೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭ ‌ಮಾತನಾಡಿದ‌ ಶಾಸಕರು ಮುಂಗಾರು ಆರಂಭಗೊಳ್ಳಲಿದ್ದು ಮುಂಜಾಗ್ರತವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚಿಸಿದರು. ಪುರಸಭಾ ಇಲಾಖಾಧಿಕಾರಿಗಳು ಕ್ಲಪ್ತ ಸಮಯದಲ್ಲಿ ಕಚೇರಿಗೆ ಆಗಮಿಸಿ ಶೀಘ್ರವಾಗಿ ಕಡತವಿಲೆವಾರಿಗೆ ಹಾಗೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಿದರು. ಈ ಸಂದರ್ಭ ಕಾಪು ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿಗಳಾದ ಸಂತೋಷ್, ನಗರ ಯೋಜಕರಾದ ಅಭಿಲಾಶ್ ಹಾಗೂ ಪುರಸಭೆಯ ಸದಸ್ಯರು, ಪುರಸಭೆಯ ಅಭಿಯಂತರರು, ವಿಷಯ ನಿರ್ವಾಹಕರು ಉಪಸ್ಥಿತರಿದ್ದರು.

ಕಾಪು : ವಿಶ್ವಕರ್ಮ ಸಮಾಜ ಸೇವಾ ಸಂಘ ಕಡಂಬು ಮಟ್ಟಾರು - ದಶಮಾನೋತ್ಸವ, ವಿಶ್ವಕರ್ಮ ಪೂಜೆ ಸಂಪನ್ನ

Thumbnail
Posted On: 02 Jun 2023, 08:16 PM

ಕಾಪು : ವಿಶ್ವಕರ್ಮ ಸಮಾಜ ಸೇವಾ ಸಂಘ ಕಡಂಬು ಮಟ್ಟಾರು ಇದರ ದಶಮಾನೋತ್ಸವ ಮತ್ತು ವಿಶ್ವಕರ್ಮ ಪೂಜೆ ಮೇ 28ರಂದು ಕಡಂಬು ಮೈದಾನದಲ್ಲಿ ನಡೆಯಿತು. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ದೀಪ ಬೆಳಗಿಸುವುದರ ಮೂಲಕ ದಶಮಾನೋತ್ಸವ ಸಂಭ್ರಮಕ್ಕೆ ಚಾಲನೆ ಕೊಟ್ಟರು. ಸುಮಾರು 5 ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ. ಸ್ಥಳೀಯ ಪ್ರತಿಭೆಗಳಿಂದ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಸಂಶ ತಂಡ ಕಾಪು ಇವರಿಂದ ಬಲೆ ತೆಲಿಪಲೆ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷರಾದ ಚೇತನ್ ಆಚಾರ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಟ್ಟಾರು ರತ್ನಾಕರ ಹೆಗ್ಡೆ ಮತ್ತು ವಿಶ್ವಹಿಂದೂ ಪರಿಷದ್ ಮತ್ತು ಭಜರಂಗದಳ ಪ್ರಮುಖರಾದ ಜಯಪ್ರಕಾಶ್ ಪ್ರಭು, ಮಾಜಿ ಶಾಸಕರು ಲಾಲಾಜಿ ಮೆಂಡನ್, ಸಂಘದ ಗೌರವ ಅಧ್ಯಕ್ಷರಾದ ಗೋಪಾಲ ಆಚಾರ್ಯ ಮತ್ತು ಕಾಳಿಕಾಂಬಾ ಮಹಿಳಾ ಸಂಘದ ಅಧ್ಯಕ್ಷರಾದ ಚೈತ್ರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಜುನಾಥ್ ಆಚಾರ್ಯ ಮೂಡು ಮಟ್ಟಾರು ಪ್ರಸ್ತವಿಕ ನುಡಿಗಳನ್ನಿತ್ತು, ಸಂಘದ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಸ್ವಾಗತಿಸಿದರು. ಸಂಘದ ಕೋಶಾಧಿಕಾರಿ ದೀಪಕ್ ಆಚಾರ್ಯ ವಂದಿಸಿದರು. ದಾಮೋದರ್ ಶರ್ಮ ಕಾರ್ಯಕ್ರಮನ್ನು ನೀರೂಪಿದರು.