Updated News From Kaup
ಶಿರ್ವ : ತಮ್ಮ ಭಾಷೆ, ಆರೋಗ್ಯದ ಬಗ್ಗೆ ಕೊರಗ ಸಮುದಾಯ ಮಹತ್ವ ನೀಡಬೇಕಾಗಿದೆ - ಪಾಂಗಾಳ ಬಾಬು ಕೊರಗ

Posted On: 06-03-2023 08:32PM
ಶಿರ್ವ : ನೆಲಮೂಲದ ಸಂಸ್ಕೃತಿಯ ಪ್ರತಿನಿಧಿಗಳಾದ ಕೊರಗರು ಇಂದು ಹೊರಗಿನವರಾಗಿ ಬಿಟ್ಟಿರುವುದು ಬೇಸರದ ಸಂಗತಿ. ಇಂದು ಎಲ್ಲಾ ರೀತಿಯ ಹಕ್ಕುಗಳಿದ್ದರೂ ಕೊರಗ ಸಮುದಾಯ ಹಿಂಜರಿಯುತ್ತಿದೆ. ಶಿಕ್ಷಣವೊಂದೇ ಬದಲಾವಣೆಗೆ ಸಹಕಾರಿ. ತಮ್ಮ ಭಾಷೆ ಮತ್ತು ಆರೋಗ್ಯದ ಬಗೆಯೂ ಮಹತ್ವ ನೀಡಬೇಕಾಗಿದೆ ಎಂದು ಕೊರಗ ಸಮುದಾಯದ ಹಿರಿಯ ಸಂಘಟಕ, ಸಾಹಿತಿ ಪಾಂಗಾಳ ಬಾಬು ಕೊರಗ ಹೇಳಿದರು.

ಅವರು ಮಾಚ್೯ 5 ರಂದು ಮುಂಚಿಕಾಡು (ಪಾಂಬೂರು)ಕೊರಗರ ಬಲೆಪುವಿನಲ್ಲಿ ಬೆಳ್ಳೆ ಗ್ರಾಮ ಪಂಚಾಯತ್, ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕ ಮತ್ತು ಉಡುಪಿ ಜಿಲ್ಲಾ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕೊರ್ರೆನ ಕೊರಲ್ - ಕೊರಗರ ನೆಲಮೂಲ ಪರಂಪರೆ, ಭಾಷೆಯ ಹೊಳಹು ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು. ಕೊರಗರ ಬಲೆಪುವಿನ ಗುರಿಕಾರ ವಸಂತ ಅವರು ಕೊಳಲು ವಾದನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊರಗರ ಬಲೆಪುವಿನ ಕಮಲ ಮತ್ತು ಸುಂದರ ಟಿ. ತೀಪೆ ಪಟ್ನದು ಜೇನು ನೀಡಿ ಜೇನ ಹಬ್ಬ ನೆರವೇರಿಸಿದರು.

ಮುಖ್ಯ ಅತಿಥಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು. ಈ ಸಂದರ್ಭ ಹಿರಿಯ ಸಂಘಟಕ, ಸಾಹಿತಿ ಪಾಂಗಾಳ ಬಾಬು ಕೊರಗ ಅವರನ್ನು ಸಮ್ಮಾನಿಸಲಾಯಿತು. ಬೆಳ್ಳೆ ಗ್ರಾ.ಪಂ. ಅಧ್ಯಕ್ಷರಾದ ಸುಧಾಕರ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ಜಿಲ್ಲಾ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ದೇವದಾಸ ಹೆಬ್ಬಾರ್, ಬೆಳ್ಳೆ ಗ್ರಾ.ಪಂ. ಸದಸ್ಯೆ ಅಮಿತಾ ವೇದಿಕೆಯಲ್ಲಿದ್ದರು. ಕನ್ನಡ ಸಾಹಿತ್ಯ ಪರಿಷತ್ ಕಾಪು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊರಗ ಸಮುದಾಯದ ಪ್ರಮುಖರು, ಬೆಳ್ಳೆ ಗ್ರಾಮ ಪಂಚಾಯತ್ ಅಧಿಕಾರಿ ವರ್ಗ, ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಬೆಳ್ಳೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ನೀಲಾನಂದ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.

ತಟ್ಟಿ ಕುಡುಪು, ಬುಟ್ಟಿ, ಡೋಲು, ಕೊಳಲು, ಹುರಿ ಹಗ್ಗದ ಮಾಹಿತಿಯನ್ನು ನೀಡಲಾಯಿತು. ಸಭಾಕಾರ್ಯಕ್ರಮದ ಬಳಿಕ ಡೋಲು-ಕೊಳಲು ವಾದನ, ಕೊರಗರ ಹಾಡು, ಕೊರಗರ ನೃತ್ಯ, ಅರಕಜಬ್ಬೆಯ ಕಥಾವಾಚನ, ಕೊರಗರ ದೊರೆ ಉಭಾಷಿಕನ ಇತಿಹಾಸದ ಪ್ರಾತ್ಯಕ್ಷಿಕೆ ನೀಡಲಾಯಿತು.
ಮಾರ್ಚ್ 19 : ಹೆಬ್ರಿ ತಾಲೂಕು ನೂತನ ಕುಲಾಲ ಸಂಘದ ಉದ್ಘಾಟನೆ

Posted On: 04-03-2023 10:53PM
ಕಾರ್ಕಳ : ತಾಲೂಕಿನ ಹೆಬ್ರಿಯ ನೂತನ ಕುಲಾಲ ಸಂಘದ ಉದ್ಘಾಟನೆ ಸಮಾರಂಭ ಮಾರ್ಚ್ 19 ರ ಬೆಳಿಗ್ಗೆ 9:30 ಕ್ಕೆ ಬಂಟರ ಭವನ ಹೆಬ್ರಿಯ ಶ್ರೀಮತಿ ಶೀಲಾ ಸುಭೋದ ಬಲ್ಲಾಳ್ ಸಭಾ ಭವನದಲ್ಲಿ ನಡೆಯಲಿದೆ ಎಂದು ಹೆಬ್ರಿ ತಾಲೂಕು ಕುಲಾಲ ಸಂಘದ ಅಧ್ಯಕ್ಷರು,ಪದಾಧಿಕಾರಿಗಳು, ಸರ್ವ ಸದಸ್ಯರು ಪ್ರಕಟಣೆ ನೀಡಿರುತ್ತಾರೆ.
ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆಯನ್ನು ಎದುರಿಸುತ್ತಿದ್ದೇನೆ : ವಿನಯಕುಮಾರ್ ಸೊರಕೆ

Posted On: 04-03-2023 10:50PM
ಉದ್ಯಾವರ : ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಜನಸೇವೆಯನ್ನು ಮಾಡಿದ್ದೇನೆ. ಅಧಿಕಾರ ಇದ್ದ ಅಥವಾ ಅಧಿಕಾರ ಇಲ್ಲದ ಸಮಯದಲ್ಲೂ ಜನರೊಂದಿಗೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಅಧಿಕಾರ ಇದ್ದಂಥ ಸಮಯದಲ್ಲಿ ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಪ್ರಸ್ತುತ ಚುನಾವಣೆ ನಾನು ಎದುರಿಸುತ್ತಿರುವ ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆಯಾಗಲಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಯಾವರದಲ್ಲಿ ಭಾವನಾತ್ಮಕವಾಗಿ ಮಾತನಾಡಿದರು. ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಾದರೂ, ಜನರು ಮತ್ತು ಕಾರ್ಯಕರ್ತರು ನನ್ನನ್ನು ಯಾವತ್ತೂ ಕೈ ಬಿಡಲಿಲ್ಲ. ಕ್ಷೇತ್ರದ ಮತದಾರರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ನನ್ನ ಮೇಲೆ ಇಟ್ಟ ನಂಬಿಕೆಗೆ ಯಾವುದೇ ಚ್ಯುತಿ ಬಾರದಂತೆ ಕೆಲಸ ಮಾಡಿದ್ದೇನೆ. ಪ್ರಸ್ತುತ ನಾನು ಮಾಜಿ ಶಾಸಕನಾದರೂ ಪ್ರತಿದಿನ ಎಂಬಂತೆ ಜನರು ನನ್ನ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳನ್ನು ನನ್ನ ಬಳಿ ತಿಳಿಸುತ್ತಿದ್ದಾರೆ ಮತ್ತು ಅದಕ್ಕೆ ನಾನು ಸ್ಪಂದಿಸುತ್ತಿದ್ದೇನೆ. ಹಿಂದುತ್ವದ ಹೆಸರೇಳಿ ಅಧಿಕಾರ ಪಡೆದಂತ ಬಿಜೆಪಿ ನಾಯಕರು ರಾಜ್ಯದ ವಿವಿಧ ದೇವಸ್ಥಾನಗಳನ್ನು ಕೆಡವಲು ಪ್ರಯತ್ನಿಸಿದರು. ನಂಜನಗೂಡಿನಲ್ಲಿ ಇತಿಹಾಸ ಪ್ರಸಿದ್ಧ ದೇವಸ್ಥಾನ ಕೆಡವಿದ ಬಳಿಕ ಜನರ ಪ್ರತಿಭಟನೆಗೆ ಹೆದರಿ ತನ್ನ ನಿರ್ಧಾರದಿಂದ ಬಿಜೆಪಿ ಹಿಂದಕ್ಕೆ ಸರಿದಿತ್ತು ಎಂದರು.
ನನ್ನ ಅಧಿಕಾರದ ಸಮಯದಲ್ಲಿ ವಿವಿಧ ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಸರಕಾರದಿಂದ ದೊರಕುವ ಅನುದಾನ ಮತ್ತು ನನ್ನ ವೈಯುಕ್ತಿಕ ಸಹಾಯವನ್ನು ಮಾಡಿದ್ದೇನೆ. ಯಾವುದೇ ಸಂದರ್ಭದಲ್ಲಿ ನಾನು ರಾಜಕೀಯ ಮಾಡಿಲ್ಲ. ಕಳೆದ ಚುನಾವಣೆಯಲ್ಲಿ ನನಗೆ ಸೋಲಾದರೂ, ಮನೆಯಲ್ಲಿ ಕುಳಿತುಕೊಳ್ಳದೆ ಜನರೊಂದಿಗೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನವನ್ನು ನಿಷ್ಠೆಯಿಂದ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಆದ ಯೋಜನೆಗಳನ್ನು ಪ್ರಸ್ತುತ ಬಿಜೆಪಿ ಶಾಸಕರು ಉದ್ಘಾಟನೆ ಮಾಡುತ್ತಿದ್ದಾರೆ. ಅದೇ ಅವರ ಸಾಧನೆ. ಪ್ರಸ್ತುತ ರಾಜ್ಯದ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಸ್ಪಷ್ಟವಾಗಿದೆ. ಅಧಿಕಾರ ಇರಲಿ ಅಧಿಕಾರ ಇಲ್ಲದಿರಲಿ, ಜಾತಿ ಧರ್ಮವನ್ನು ನೋಡಿಲ್ಲ. ಪಕ್ಷಾತೀತವಾಗಿ ಕಾಪು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೋರಾಟ ಮಾಡಿದ್ದೇನೆ ಮತ್ತು ಜನರ ಸಹಕಾರದಿಂದ ಯಶಸ್ವಿಯಾಗಿದ್ದೇನೆ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣವಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಮುಂದೆ ನಡೆಯುವ ವಿಧಾನಸಭಾ ಚುನಾವಣೆಯು ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆ. ಕಪ್ಪು ಚುಕ್ಕೆ ಇಲ್ಲದ ನನ್ನ ರಾಜಕೀಯ ಜೀವನದ ಈ ಚುನಾವಣೆಗೆ ಮತದಾರರು ಆಶೀರ್ವದಿಸುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನ್ನಲ್ಲಿದೆ ಎಂದು ವಿನಯ್ ಕುಮಾರ್ ಸೊರಕೆ ತಿಳಿಸಿದರು.
ಬಂಟಕಲ್ಲು : ರವಿಪ್ರಭ ಕೆ ಅವರಿಗೆ ಪಿಎಚ್ಡಿ ಪದವಿ ಪ್ರದಾನ

Posted On: 01-03-2023 01:25PM
ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿಯಾದ ರವಿಪ್ರಭಾ ಕೆ ಇವರು ಎನ್.ಎಮ್.ಎ.ಎಮ್ ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ ಇಲ್ಲಿಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ರಮೇಶ್ ಭಟ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಸ್ಟಡೀಸ್ ಆಫ್ ಕೊರೊಶನ್ ಇನ್ಹಿಬಿಶನ್ ಆಫ್ ಅಲ್ಯುಮಿನಿಯಂ ಬೈ ಯುಸಿಂಗ್ ಸಿಂಪಲ್ ಆ್ಯಂಡ್ ಫ್ಯೂಸ್ಡ್ ಹೀಟಿರೋಸೈಕ್ಲಿಕ್ ಕಾಂಪೌಂಡ್ಸ್ ಇನ್ ಅಸಿಡಿಕ್ ಮಿಡಿಯಮ್ ಎಂಬ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಪ್ರಾಧ್ಯಾಪಕಿಯ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಮಾಚ್೯ 21, 22 : ಕಾಪು ಮಾರಿಯಮ್ಮನ ಸನ್ನಿಧಿಯಲ್ಲಿ ಕಾಲಾವಧಿ ಸುಗ್ಗಿ ಮಾರಿಪೂಜೆ

Posted On: 01-03-2023 10:28AM
ಕಾಪು : ಇಲ್ಲಿನ ಮೂರು ಮಾರಿಗುಡಿಗಳಲ್ಲಿ ನಡೆಯುವ ಕಾಲಾವಧಿ ಸುಗ್ಗಿ ಮಾರಿಪೂಜೆ ಮಾಚ್೯ 21, ಮಂಗಳವಾರ ಮತ್ತು 22, ಬುಧವಾರದಂದು ನಡೆಯಲಿದೆ ಎಂದು ಮೂರು ಮಾರಿಗುಡಿಗಳ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹಳೆ, ಹೊಸ, ಕಲ್ಯಾ(ಮೂರನೆಯ) ಮಾರಿಗುಡಿಗಳಲ್ಲಿ ವಿಶೇಷವಾಗಿ ಮಾರಿಪೂಜೆ ಆಚರಿಸಲಾಗುತ್ತದೆ. ಜಿಲ್ಲೆ ಹೊರತುಪಡಿಸಿ ವಿವಿದೆಡೆಗಳಿಂದ ಭಕ್ತ ಜನರು ಮಾರಿಪೂಜೆಯಲ್ಲಿ ಭಾಗವಹಿಸುತ್ತಾರೆ.
ಮಾಚ್೯ 14 ಮೀನ ಸಂಕ್ರಮಣದಂದು ಕುರಿ ಬಿಡುವ ಕ್ರಮವಿದ್ದು ಅದರ ನಂತರದ ವಾರದಲ್ಲಿ ಮಾರಿಪೂಜೆ ನಡೆಯುತ್ತದೆ.
ಈ ಸಂದರ್ಭದಲ್ಲಿ ಕಾಪು ಹಳೆ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ, ಹೊಸ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಹೆಗ್ಡೆ, ಮೂರನೇ ಮಾರಿಗುಡಿಯ ಕಾರ್ಯನಿರ್ವಹಣಾಧಿಕಾರಿ ಸುಧೀರ್ ಕುಮಾರ್, ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಭಟ್ ಕೆ. ಎಮ್ ಇವರ ಗುರುವಂದನಾ ಕಾರ್ಯಕ್ರಮಕ್ಕಾಗಿ ಸಜ್ಜಾಗಿದೆ ಪಿ.ಕೆ.ಎಸ್ ಪ್ರೌಢಶಾಲೆ ಕಳತ್ತೂರು

Posted On: 28-02-2023 10:19PM
ಕಾಪು : ಗೋಪಾಲಕೃಷ್ಣ ಭಟ್ ಕೆ. ಎಮ್ ದೂರದ ಕಾಸರಗೋಡುವಿನ ಸಂಪ್ರದಾಯಸ್ಥ ಮನೆತನದ ಪರಮೇಶ್ವರ ಭಟ್ ಮತ್ತು ಸುಮತಿ ದಂಪತಿಗಳ ಪುತ್ರರಾಗಿ ಜನಿಸಿದ ಶ್ರೀಯುತರು ಬಾಲ್ಯದ ವಿದ್ಯಾಭ್ಯಾಸವನ್ನು ತನ್ನ ಊರಿನಲ್ಲಿ ಪಡೆದರು. ಇವರ ಕುಟುಂಬವು ಕೂಡ ಶಿಕ್ಷಕ ಕುಟುಂಬವೆಂದು ಹೇಳಿದರೂ ಅತಿಶಯೋಕ್ತಿಯಾಗಲಾರದು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆ ಮಾತು ಇವರಿಗೆ ಎಲ್ಲಾ ವಿಧದಲ್ಲೂ ಸಲ್ಲುತ್ತದೆ. ವಿದ್ಯಾರ್ಥಿ ಜೀವನದಲ್ಲಿಯೇ ಗಣಿತ ಹಾಗೂ ವಿಜ್ಞಾನದ ಬಗ್ಗೆ ಅಪಾರ ಅನುಭವ ಹೊಂದಿ ಆ ಅನುಭವವನ್ನು ಮೈಗೂಡಿಸಿಕೊಂಡ ಹಿರಿಮೆ ಇವರದ್ದು. ಇವರು ಪೈಯ್ಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆಗೆ 1986 ರಲ್ಲಿ ಅಧ್ಯಾಪಕರಾಗಿ ಸೇರಿ ಗಣಿತ ಪಾಠ ಮಾಡುವುದರಲ್ಲಿ ವರ್ಷದಿಂದ ವರ್ಷಕ್ಕೆ ಎತ್ತರಕ್ಕೆ ಏರುತ್ತಾ ಹೋದರು. ಉಡುಪಿ ಜೆಲ್ಲೆಯಲ್ಲಿ ಸತತವಾಗಿ ಮೂರು ಬಾರಿ ಎಸ್ ಎಸ್ ಎಲ್ ಸಿ ಗಣಿತದಲ್ಲಿ ಸರಾಸರಿ ಅಂಕಗಳಲ್ಲಿ ಪ್ರಥಮ, ಉಡುಪಿ ಜಿಲ್ಲಾ ಸಾಧಕ ಶಿಕ್ಷಕ ಪ್ರಶಸ್ತಿ, ತನ್ನೂರಿನ ಹಾಗೂ ಅನೇಕ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿದೆ.
ನಿವೃತ್ತ ನೆಚ್ಚಿನ ಶಿಕ್ಷಕ ಗೋಪಾಲಕೃಷ್ಣ ಭಟ್ ಕೆ.ಎಮ್ ಇವರಿಗೆ ಶಾಲಾ ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳೆಲ್ಲ ಸೇರಿ ಅದ್ದೂರಿ ಗುರುವಂದನಾ ಕಾರ್ಯಕ್ರಮ ಮಾರ್ಚ್ 3ರಂದು ನಡೆಯಲಿದೆ.
ಜಾತಿ, ಧರ್ಮ, ಪಕ್ಷ , ಪಂಗಡ ಇವೆಲ್ಲವುಗಳನ್ನು ಮರೆತು ಎಲ್ಲರಿಗೂ ಸಮಾನತೆ, ಸೌಹಾರ್ದತೆ, ಸಹ ಬಾಳ್ವಿಕೆಯನ್ನು ಕಲಿಸಿ ಕೊಡುವ ಪಿ.ಕೆ.ಎಸ್ ಪ್ರೌಢಶಾಲೆ ಕಳತ್ತೂರಿನ ಈ ಅದ್ದೂರಿ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗೋಣ.
✍️ ಉದಯ ಕುಲಾಲ್ ವರದಿಗಾರರು ನಮ್ಮ ಕಾಪು ನ್ಯೂಸ್
ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಮಂಜುನಾಥ್ ಮತ್ತು ಸದಾನಂದರಿಗೆ ಪಿಎಚ್ಡಿ ಪದವಿ

Posted On: 28-02-2023 06:43PM
ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಮಂಜುನಾಥ್ ಎಸ್ ಇವರು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಮಕೃಷ್ಣ ಎನ್ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಡೆವಲಪ್ಮೆಂಟ್ ಆಫ್ ಎ ಡ್ಯುಯಲ್ ಸ್ಟಿಲ್೯ ಚೇಂಬರ್ ಫಾರ್ ಆ್ಯನ್ ಐಡಿ ಎಂಜಿನ್ ಆ್ಯಂಡ್ ಇನ್ವೆಸ್ಟಿಗೇಷನ್ ಆನ್ ಇಟ್ಸ್ ಇಫೆಕ್ಟ್ ಆನ್ ಎಂಜಿನ್ ಪರ್ಫಾರ್ಮೆನ್ಸ್ ಯುಸಿಂಗ್ ಎ ಬಯೋಡೀಸೆಲ್ ಬ್ಲೆಂಡ್" ಎಂಬ ಸಂಶೋಧನಾ ಪ್ರಬಂಧಕ್ಕೆ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಸದಾನಂದ ಎಲ್ ಇವರು ಬ್ಯಾರೀಸ್ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಬಿ ಅಜೀಜ್ ಮುಸ್ತಫ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎಮ್ ಎಲ್ ಅಪ್ರೊಚಸಸ್ ಟವರ್ಡ್ಸ್ ಡಿಟೆಕ್ಟಿಂಗ್ ಆಂಡ್ರೈಡ್ ಸ್ಪೆಸಿಫಿಕ್ ಅಡ್ವಾನ್ಸ್ಡ್ ಮಾಲ್ವೇರ್ಸ್" ಎಂಬ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಪ್ರಾಧ್ಯಾಪಕರ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಪಡುಬಿದ್ರಿ : ಕ್ಷುಲ್ಲಕ ಕಾರಣ ; ಹಲ್ಲೆ, ಜೀವಬೆದರಿಕೆ ; ಇತ್ತಂಡಗಳಿಂದ ದೂರು

Posted On: 27-02-2023 10:41PM
ಪಡುಬಿದ್ರಿ : ಕ್ಷುಲ್ಲಕ ಕಾರಣದಿಂದ ಇತ್ತಂಡಗಳ ನಡುವೆ ಹಲ್ಲೆ, ಜೀವಬೆದರಿಕೆ ಬಗ್ಗೆ ಆದಿತ್ಯವಾರ ದೂರು ಪ್ರತಿದೂರು ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.
ವಸಂತ ಮತ್ತು ಬಾಲು ಎಂಬುವವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಿವಪ್ರಕಾಶ್ ಎಂಬುವವರು ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜೀವ ಬೆದರಿಕೆ ಹಾಕಿರುವ ಬಗ್ಗೆ ನವೀನ್ ಎಂಬುವವರು ಪ್ರತಿದೂರು ನೀಡಿದ್ದಾರೆ.
ಪಡುಬಿದ್ರಿಯ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ನಡೆಯುತ್ತಿರುವ ಢಕ್ಕೆಬಲಿಗೆ ಶಿವಪ್ರಕಾಶ್, ತಮ್ಮ ಆದರ್ಶ್, ಹಾಗೂ ಇಬ್ಬರು ಸ್ನೇಹಿತರಾದ ಧನುಷ್ ಮತ್ತು ಪ್ರತೀಕ್ ಎಂಬುವರೊಂದಿಗೆ ಹೋಗಿದ್ದು, ರಾತ್ರಿ 1 ಗಂಟೆಯ ವೇಳೆಗೆ ಶಿವಪ್ರಕಾಶ್ ಮೂತ್ರ ವಿಸರ್ಜನೆಗೆಂದು ಹೋದ ಸಮಯ ವಸಂತ ಹಾಗೂ ಬಾಲುರವರು ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ ಎಂದು ದೂರನಿತ್ತಿದ್ದಾರೆ.
ಅದೇ ದಿನ ನವೀನ್ ಅವರ ಸ್ನೇಹಿತರಾದ ರಾಕೇಶ್, ದಿವಾಕರ, ಬಾಲಕೃಷ್ಣ ಎಂಬುವವರ ಜೊತೆಗೆ ಹೋಗಿದ್ದು ರಾತ್ರಿ 1 ಗಂಟೆಯ ವೇಳಗೆ ಬ್ರಹ್ಮಸ್ಥಾನದ ನೀರಿನ ಟ್ಯಾಂಕ್ ಬಳಿ ಬ್ರಹ್ಮಸ್ಥಾನದ ಕಡೆಗೆ ಹೋಗುತ್ತಿರುವಾಗ ಶಿವಪ್ರಕಾಶ್ ಎಂಬಾತನು ತಡೆದು ನಿಲ್ಲಿಸಿ ವಸಂತ ಎಲ್ಲಿದ್ದಾನೆ ಎಂದು ಕೇಳಿ, ಚೂರಿ ಹಾಕಿ ಕೊಲ್ಲುತ್ತೇನೆ ಎಂದ ಜೀವ ಬೆದರಿಕೆ ಹಾಕಿರುವುದಾಗಿ ನವೀನ್ ದೂರಿನಲ್ಲಿ ತಿಳಿಸಿದ್ದಾರೆ.
ಜೀರ್ಣಗೊಂಡ ದೇವಾಲಯಗಳ ಉದ್ಧಾರ ಊರಿಗೆ ಶ್ರೇಯಸ್ಕರ : ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Posted On: 27-02-2023 09:14PM
ಉಡುಪಿ : ಹಳೆಯ ಬಟ್ಟೆಯನ್ನು ತೊಡೆದು ಹೊಸ ಬಟ್ಟೆಯನ್ನು ಉಡುವುದು ವೈಯುಕ್ತಿಕವಾಗಿ ವ್ಯಕ್ತಿಗೆ ಹೇಗೆ ಶ್ರೇಯಸ್ಕರವೋ, ಹಾಗೇ ಜೀರ್ಣಗೊಂಡ ದೇವಾಲಯಗಳನ್ನು ಉದ್ಧಾರಗೊಳಿಸುವುದು ಊರಿಗೆ ಶ್ರೇಯಸ್ಕರವಾದುದು, ಆದ್ದರಿಂದ ದೇವಾಲಯಗಳ ಜೀರ್ಣೋದ್ಧಾರದಲ್ಲಿ ಊರವರೆಲ್ಲರೂ ಒಮ್ಮನಸ್ಸಿನಿಂದ ಸೇವೆ ಸಲ್ಲಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಅವರು ಸೋಮವಾರ, ಇಲ್ಲಿನ ಪೆರ್ಣಂಕಿಲದ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಪ್ರಕ್ರಿಯೆ ಪ್ರಾರಂಭದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅನುಗ್ರಹ ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀಗಳು ದೇವಾಲಯಕ್ಕೆ ಭೂಮಿ, ಮರ, ಧನ ದಾನ ಮಾಡಿದವರನ್ನು ಗೌರವಿಸಿದರು. ಅವದಾನಿ ಗುಂಡಿಬೈಲು ಸುಬ್ರಹಣ್ಯ ಭಟ್ ಊರವರಿಗೆ ದೀಕ್ಷಾಬದ್ಧತೆಯನ್ನು ವಿವರಿಸಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪೆರ್ಣಂಕಿಲ ಹರಿದಾಸ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಶಾ ನಾಯಕ್, ಮಠದ ದಿವಾಣರಾದ ಸುಬ್ರಹ್ಮಣ್ಯ ಭಟ್, ವಿದ್ವಾನ್ ರಘುರಾಮ ಆಚಾರ್ಯರು ವೇದಿಕೆಯಲ್ಲಿದ್ದರು.
ಉಮೇಶ್ ನಾಯಕ್ ಮತ್ತು ಸದಾನಂದ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಸರ್ವೇಶ ತಂತ್ರಿಗಳ ನೇತೃತ್ವದಲ್ಲಿ, ಶ್ರೀಗಳ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿ, ಮಧುಸೂದನ ತಂತ್ರಿಗಳ ಮಾರ್ಗದರ್ಶನದಲ್ಲಿ ದೇವರ ಬಿಂಬವನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಮೂಲಕ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕಾಪು : ನಿವೃತ್ತ ಮುಖ್ಯ ಶಿಕ್ಷಕ ಹಾಜಿ ಬಾವು ಬ್ಯಾರಿ ಕರಂದಾಡಿ ನಿಧನ

Posted On: 27-02-2023 07:54AM
ಕಾಪು : ಇಲ್ಲಿನ ಕರಂದಾಡಿ ನಿವಾಸಿ ನಿವೃತ್ತ ಮುಖ್ಯ ಶಿಕ್ಷಕ ಹಾಜಿ ಬಾವು ಬ್ಯಾರಿ ಕರಂದಾಡಿ ಇವರು ಫೆಬ್ರವರಿ 25ರಂದು ಅಲ್ಪಕಾಲದ ಅಸೌಖ್ಯದಿಂದ ತನ್ನ ನಿವಾಸದಲ್ಲಿ ನಿಧನರಾದರು.
ಶ್ರೀಯುತರು ಮಲ್ಲಾರು ಕರಂದಾಡಿ, ಪುಂಜಾಲಕಟ್ಟೆ, ಪಡುಬಿದ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಮುಖ್ಯ ಶಿಕ್ಷಕರಾಗಿ 35 ವರ್ಷ ಸೇವೆಸಲ್ಲಿಸಿದ್ದಾರೆ.
ಬದ್ರಿಯ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಶ್ರೀಯುತರು ಪತ್ನಿ ಹಾಗೂ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಾಗಿದ್ದು ಇದೀಗ ವಿದೇಶದಲ್ಲಿರುವ ಡಾ| ಅಬ್ದುಲ್ ರಝಾಕ್ ಯು.ಕೆ ಸೇರಿದಂತೆ ನಾಲ್ವರು ಪುತ್ರರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಬಳಕೆದಾರರ ವೇದಿಕೆ ದೇವಿನಗರ ಪರ್ಕಳ ಅಜೀವ ಗೌರವಾದ್ಯಕ್ಷ ಹಾಜಿ ಕೆ.ಅಬೂಬಕ್ಕರ್ ಪರ್ಕಳ, ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಕಾರ್ಯದರ್ಶಿ ಫಾರೂಕ್ ಚಂದ್ರನಗರ ಸಂತಾಪ ವ್ಯಕ್ತಪಡಿಸಿದ್ದಾರೆ.