Updated News From Kaup
ಮಾಚ್೯ 28 : ಉಡುಪಿಯಲ್ಲಿ ನೇರ ಸಂದರ್ಶನ

Posted On: 24-03-2023 11:16PM
ಉಡುಪಿ : ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಮಾರ್ಚ್ 28 ರಂದು ಬೆಳಗ್ಗೆ 10.30 ಕ್ಕೆ ನಗರದ ಶಾಂತ ಎಲೆಕ್ಟ್ರಿಕಲ್ಸ್ ಪ್ರೈ.ಲಿ., ಆಭರಣ ಜುವೆರ್ಸ್ ಹತ್ತಿರ, ಕಾರ್ಪೊರೇಶನ್ ಬ್ಯಾಂಕ್ ರೋಡ್, ಅನುಗ್ರಹ ಕಾಂಪ್ಲೆಕ್ಸ್ ಇಲ್ಲಿ ನೇರ ಸಂದರ್ಶನ ನಡೆಯಲಿದೆ.
ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ, ಬಿ.ಎ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ:8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಪು : ಪಡುಬಿದ್ರಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವಂತೆ ಹೋರಾಟ ಸಮಿತಿಯಿಂದ ಆಗ್ರಹ ; ಮನವಿ ಸಲ್ಲಿಕೆ

Posted On: 24-03-2023 07:08PM
ಬೆಳಪು : ಪಡುಬಿದ್ರಿ ರೈಲು ನಿಲ್ದಾಣದಲ್ಲಿ ಮುಂಬೈ ಮತ್ತು ಬೆಂಗಳೂರು ರೈಲು ನಿಲುಗಡೆಗೊಳಿಸುವಂತೆ ಆಗ್ರಹಿಸಿ ಮತ್ತು ರೈಲ್ವೆ ನಿಲ್ದಾಣದ ರಸ್ತೆಯನ್ನು ಬೆಳಪು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವ ಕುರಿತಂತೆ ಮಾಚ್೯ 24ರಂದು ಹೋರಾಟ ಸಮಿತಿ ಸೇರಿದಂತೆ ಎಂಟು ಗ್ರಾಮಗಳ ಜನರು ಪ್ರತಿಭಟನಾ ಸಭೆ ನಡೆಸಿ ರೈಲ್ವೆ ಅಧಿಕಾರಿ ಗಣಪತಿ ನಾಯಕ್ ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಬೆಳಪು (ಪಡುಬಿದ್ರಿ) ರೈಲು ನಿಲ್ದಾಣ ಮೇಲ್ದರ್ಜೆ ಹೋರಾಟ ಸಮಿತಿ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬೆಳಪುವಿನಲ್ಲಿರುವ ರೈಲು ನಿಲ್ದಾಣಕ್ಕೆ ಪಡುಬಿದ್ರಿ ರೈಲು ನಿಲ್ದಾಣವೆಂದು ಹೆಸರಿಟ್ಟಿದ್ದಾರೆ. ಬೆಳಪು ಸುತ್ತ ಮುತ್ತ ಹಲವಾರು ಔದ್ಯೋಗಿಕ ಕೇಂದ್ರಗಳಿದ್ದು ಬೇರೆ ರಾಜ್ಯದ ಜನರಿಗೂ ಇದು ಅವಶ್ಯಕವಾದ ರೈಲು ನಿಲ್ದಾಣ. ಕಾಸರಗೋಡಿನಲ್ಲಿ ಪ್ರತಿ ನಿಲ್ದಾಣದಲ್ಲಿಯೂ ರೈಲು ನಿಲುಗಡೆ ಇದೆ ನಮ್ಮಲ್ಲಿ ಯಾಕಿಲ್ಲ. ಸುಮಾರು ವರ್ಷಗಳಿಂದ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಮ್ಮ ಮನವಿಗೆ ಒಂದು ತಿಂಗಳೊಳಗೆ ಸರಕಾರದಿಂದ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ರೈಲು ರೋಖೋ ಅನಿವಾರ್ಯ ಎಂದರು.
ಈ ಸಂದರ್ಭ ಬೆಳಪು, ಉಚ್ಚಿಲ, ಮಲ್ಲಾರು ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು, ಪುರಸಭೆ ಸದಸ್ಯರು, ಗ್ರಾಮಸ್ಥರು, ಮತ್ತಿತರರು ಉಪಸ್ಥಿತರಿದ್ದರು.
ಮಾಚ್೯ 27ರಿಂದ 29 : ಕೋಟೆ ಶ್ರೀ ಹಳೆ ಮಾರಿಯಮ್ಮ ದೇವಸ್ಥಾನ ಮಲ್ಲಾರು ರಾಣ್ಯಕೇರಿ, ಕಾಪು - ಪುನರ್ ಪ್ರತಿಷ್ಠೆ, ಕಾಲಾವಧಿ ರಾಶಿ ಮಾರಿ ಪೂಜೆ

Posted On: 23-03-2023 08:34PM
ಕಾಪು : ಇಲ್ಲಿನ ಮಲ್ಲಾರು ರಾಣ್ಯಕೇರಿ ಕೋಟೆ ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದಲ್ಲಿ ಮಾಚ್೯ 27, ಸೋಮವಾರ ಬೆಳಿಗ್ಗೆ ಪುನರ್ ಪ್ರತಿಷ್ಠೆ ಹಾಗೂ 28,ಮಂಗಳವಾರ ಹಾಗೂ 29, ಬುಧವಾರದಂದು ಕಾಲಾವಧಿ ರಾಶಿ ಮಾರಿಪೂಜೆಯು ಜರಗಲಿದೆ.
ಮಾಚ್೯ 27,ಸೋಮವಾರ ಬೆಳಿಗ್ಗೆ ಗಂಟೆ 7:30ಕ್ಕೆ ಪ್ರತಿಷ್ಠೆ, ಬೆಳಿಗ್ಗೆ ಗಂಟೆ 11ಕ್ಕೆ ಚಂಡಿಕಯಾಗ ಪೂರ್ಣಾಹುತಿ, ಗಂಟೆ 11:30ಕ್ಕೆ ಕಲಶಾಭೀಷೇಕ, ಮಧ್ಯಾಹ್ನ ಗಂಟೆ 12:30ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 1ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಮಾಚ್೯ 28, ಮಂಗಳವಾರ ಬೆಳಿಗ್ಗೆ ಗಂಟೆ 5ಕ್ಕೆ ಹೊರೆಕಾಣಿಕೆ ಕಟ್ಟೆಯಲ್ಲಿ ಶ್ರೀ ದೇವಿಯ ಬಿಂಬ ಪ್ರತಿಷ್ಠೆ, ರಾತ್ರಿ ಗಂಟೆ 7:30ಕ್ಕೆ ಹೊರೆಕಾಣಿಕೆ ಕಟ್ಟೆಯಿಂದ ಮೆರವಣಿಗೆಯ ಮೂಲಕ ಶ್ರೀ ದೇವಿಯ ಸನ್ನಿಧಾನಕ್ಕೆ ಹೊರೆಕಾಣಿಕೆ ಹಾಗೂ ಶ್ರೀ ದೇವಿಯ ಬಿಂಬ ಬರುವುದು. ರಾತ್ರಿ ಗಂಟೆ 7:30 ರಿಂದ ರಾತ್ರಿ ಗಂಟೆ 8ರವರೆಗೆ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 8:30ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 11:30ಕ್ಕೆಮಹಾಪೂಜೆ ಶ್ರೀ ದೇವಿಯ ದರ್ಶನ ಸೇವೆ ಹಾಗೂ ರಾಶಿಪೂಜಾ ಮಹೋತ್ಸವ ಜರಗಲಿದೆ.
ಮಾಚ್೯ 29, ಬುಧವಾರ ಬೆಳಿಗ್ಗೆ 6ಕ್ಕೆ ಅರಮನೆ ಪೂಜೆ, ಮಧ್ಯಾಹ್ನ ಗಂಟೆ 3ಕ್ಕೆ ಮಹಾಪೂಜೆ, ಶ್ರೀ ದೇವಿಯ ದರ್ಶನ ಸೇವೆ, ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾಭಿಮಾನಿಗಳೆಲ್ಲರೂ ಈ ಎಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಮಲ್ಲಾರು, ರಾಣ್ಯಕೇರಿ - ಕಾಪು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆಡಳಿತ ವ್ಯವಸ್ಥೆಯು ಸಮಸ್ಯೆಗೆ ಪರಿಹಾರವಾಗಬೇಕು : ಸಚಿವ ಕೋಟ ಶ್ರೀನಿವಾಸ ಪೂಜಾರಿ

Posted On: 23-03-2023 07:38PM
ಉಡುಪಿ : ಆಡಳಿತ ವ್ಯವಸ್ಥೆಯು ಜನಸಾಮಾನ್ಯರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ಅತ್ಯಂತ ಪ್ರಮುಖ ಭಾಗವಾಗಿ ಕಾರ್ಯನಿರ್ವಹಿಸುವ ಮೂಲಕ ಜನಸ್ನೇಹಿಯಾಗಿರಬೇಕು ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಇಂದು, ಬ್ರಹ್ಮಾವರದಲ್ಲಿ, ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ, 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಹ್ಮಾವರ ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಾರ್ವಜನಿಕರ ಬಹುತೇಕ ಸಮಸ್ಯೆಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದು. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸಿ, ಸಮಸ್ಯೆಗಳನ್ನು ಶೀಘ್ರದಲ್ಲಿ ಇತ್ಯರ್ಥಪಡಿಸುವ ಮೂಲಕ ಜನಪರ ಕೆಲಸಗಳನ್ನು ಮಾಡುವ ಮನೋಭಾವವನ್ನು ಸಿಬ್ಬಂದಿಗಳು ಬೆಳೆಸಿಕೊಳ್ಳುವಂತೆ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಡೀಮ್ಡ್ ಅರಣ್ಯ ವಿನಾಯತಿಯ ನಂತರ ಕಂದಾಯ ಇಲಾಖೆಗೆ ನೀಡಿರುವ ಜಾಗವನ್ನು ಅರ್ಹರಿಗೆ 94 ಸಿ ಮತ್ತು 94 ಸಿಸಿ ಯಡಿಯಲ್ಲಿ ಆದ್ಯತೆಯ ಮೇಲೆ ಹಕ್ಕುಪತ್ರಗಳನ್ನು ನೀಡುವ ಕಾರ್ಯ ಆಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ರಹ್ಮಾವರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಕಾಮಗಾರಿಗಳಿಗಾಗಿ 310 ಕೋಟಿ ರೂ. ಮತ್ತು 195 ಕೊಟಿ ರೂ. ಗಳ ಯೋಜನೆಯನ್ನು ಕೈಗೊಳ್ಳಲಾಗಿದೆ. 80 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮಾವರ ಸೀತಾನದಿ ಚತುಷ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರದ ನೆರವಿನಿಂದ 5 ಎಕ್ರೆ ಪ್ರದೇಶದಲ್ಲಿ 100 ಬೆಡ್ ಸಾಮರ್ಥ್ಯದ ಸುಸಜ್ಜಿತ ಇ.ಎಸ್.ಐ. ಆಸ್ಪತ್ರೆ ನಿರ್ಮಾಣ ಕಾಮಗಾರಿಯು ಟೆಂಡರ್ ಹಂತದಲ್ಲಿದೆ. ನೂತನ ತಾಲೂಕು ಕೋರ್ಟ್ ಹಾಗೂ ತಾಲೂಕು ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಗಳು ನಡೆದಿವೆ ಎಂದರು. ಪ್ರಸ್ತುತ ನೂತನ ತಾಲೂಕು ಆಡಳಿತ ಸೌಧದಲ್ಲಿ ಎಲ್ಲಾ ತಾಲೂಕು ಮಟ್ಟದ ಕಚೇರಿಗಳು ಒಂದೇ ಕಡೆ ಇರುವುದರಿಂದ ನಾಗರೀಕರಿಗೆ ಒಂದೇ ಕಡೆಯಲ್ಲಿ ಹಲವು ಸೌಲಭ್ಯಗಳು ಶೀಘ್ರದಲ್ಲಿ ದೊರೆಯಲಿದ್ದು, ಕಟ್ಟಡದಲ್ಲಿ ಪೀಠೋಪಕರಣ ಮತ್ತಿತರ ಸೌಲಭ್ಯಕ್ಕಾಗಿ ಹೆಚ್ಚುವರಿಯಗಿ 2.75 ಕೋಟಿ ರೂ. ಗಳನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸುವುದಾಗಿ ಕಂದಾಯ ಸಚಿವರು ಭರವಸೆ ನೀಡಿದ್ದಾರೆ ಎಂದರು.
ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗವೇಣಿ ಪಂಡರೀನಾಥ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಮ್ ಹಾಕೆ, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಕರ್ನಾಟಕ ಗೃಹ ಮಂಡಳಿ ಇಂಜಿನಿಯರ್ ಸಹನಾ ಮತ್ತಿತರರು ಉಪಸ್ಥಿತರಿದ್ದರು. ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ ಸ್ವಾಗತಿಸಿದರು, ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭಟ್ ವಂದಿಸಿದರು.
ಉಡುಪಿ : ಮಾಚ್೯ 24 - ಬ್ಯಾನರ್, ಕಟೌಟ್ಗಳ ತೆರವಿಗೆ ಕೊನೆ ದಿನ

Posted On: 23-03-2023 07:32PM
ಉಡುಪಿ : ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ -2023 ರ ಪ್ರಯುಕ್ತ ಉಡುಪಿ ನಗರಸಭೆಯಿಂದ ಅನುಮತಿ ನೀಡಿ ಅವಧಿ ಮುಗಿದಿರುವ ಹಾಗೂ ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್, ಬಂಟಿಂಗ್ಸ್ ಹಾಗೂ ಕಟೌಟ್ಗಳನ್ನು ಮಾರ್ಚ್ 24 ರ ಒಳಗೆ ತೆರವುಗೊಳಿಸಬೇಕು. ಕಾರ್ಯಕ್ರಮ ನಡೆಸಲು ಹಾಗೂ ಬ್ಯಾನರ್ ಮತ್ತು ಕಟೌಟ್ಗಳನ್ನು ಅಳವಡಿಸಲು ನಗರಸಭೆಯಿಂದ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದ್ದು, ತಪ್ಪಿದ್ದಲ್ಲಿ ಸದರಿ ಬ್ಯಾನರ್, ಬಂಟಿಂಗ್ಸ್ ಹಾಗೂ ಹೋರ್ಡಿಂಗ್ಸ್ಗಳನ್ನು ಅನಧಿಕೃತವೆಂದು ಪರಿಗಣಿಸಿ, ನಗರಸಭೆಯಿಂದ ತೆರವುಗೊಳಿಸಲಾಗುವುದು ಎಂದು ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಉಡುಪಿ : ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಳ ಜೀರ್ಣೋದ್ಧಾರ - ಶಂಕುಸ್ಥಾಪನೆ

Posted On: 23-03-2023 06:50PM
ಉಡುಪಿ : ಪೇಜಾವರ ಮಠದ ಆಡಳಿತಕ್ಕೊಳಪಟ್ಟಿರುವ, ಸುಮಾರು 10ನೇ ಶತಮಾನದಲ್ಲಿ ಆಳುಪ ವಂಶದ ರಾಣಿ ಬಲ್ಲಾ ಮಹಾದೇವಿ ನಿರ್ಮಿಸಿದ ಇಲ್ಲಿನ ಪೆರ್ಣಂಕಿಲ ಗ್ರಾಮದ ಮಹಾಲಿಂಗೇಶ್ವರ - ಮಹಾಗಣಪತಿ ದೇವಳದ ಸಮಗ್ರ ಜೀರ್ಣೋದ್ಧಾರ ಕಾರ್ಯಕ್ಕೆ ಗುರುವಾರ ಶಂಕುಸ್ಥಾಪನೆ ನಡೆಯಿತು. ಊರಿನ ಭಕ್ತಾಭಿಮಾನಿಗಳ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಜೀರ್ಣೋದ್ಧಾರ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿದ್ವಾನ್ ಹರಿದಾಸ ಭಟ್, ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್ ಪೆರ್ಣಂಕಿಲ, ಪೇಜಾವರ ಮಠದ ದಿವಾನರಾದ ಸುಬ್ರಹ್ಮಣ್ಯ ಭಟ್ ಸಗ್ರಿ, ದೇವಳದ ಸಾರ್ವಜನಿಕ ಸಂಪರ್ಕಾಧಿಕಾರಿ ಹರೀಶ ಸರಳಾಯ, ದೇವಸ್ಥಾನದ ತಂತ್ರಿ ಮಧುಸೂದನ ತಂತ್ರಿ, ವ್ಯವಸ್ಥಾಪಕರಾದ ಸುರೇಶ ತಂತ್ರಿ, ಸಮಿತಿಯ ಪದಾಧಿಕಾರಿಗಳಾದ ಸುವರ್ಧನ ನಾಯಕ್, ಸದಾನಂದ ಪ್ರಭು, ವಸಂತ ಶೆಟ್ಟಿ ಕುದಿ, ಉಮೇಶ್ ನಾಯಕ್, ಮಹೇಶ್ ಕುಲಕರ್ಣಿ, ಸಂದೀಪ್ ನಾಯಕ್ ಹೆಬ್ಬಾಗಿಲು ಮುಂತಾದವರು ಉಪಸ್ಥಿತರಿದ್ದರು.
ಸುಮಾರು 10 ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿರುವ ಈ ಜೀರ್ಣೋದ್ದಾರ ಕಾರ್ಯವು ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ. ಒಂದೇ ಪ್ರಾಕರದೊಳಗೆ ಪೂರ್ವಾಭಿಮುಖವಾಗಿ ಮಹಾಲಿಂಗೇಶ್ವರ ಮತ್ತು ಪಶ್ಚಿಮಾಭಿಮುಖವಾಗಿ ಉದ್ಭವ ಮಹಾಗಣಪತಿ ದೇವಾಲಯಗಳಿರುವುದು ಇಲ್ಲಿನ ವಿಶೇಷತೆಯಾಗಿದೆ.
ಕಾರ್ಕಳ ವಿಧಾನಸಭಾ ಕ್ಷೇತ್ರ : ಕಾಂಗ್ರೆಸ್ ನಿಂದ ಅನಿತಾ ಡಿಸೋಜ ರವರಿಗೆ ಟಿಕೆಟ್ ನೀಡಲು ಮನವಿ

Posted On: 23-03-2023 02:08PM
ಕಾರ್ಕಳ : ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಸಮಯದಲ್ಲಿ ವಿವಿಧ ಪಕ್ಷಗಳು ಅಭ್ಯರ್ಥಿ ತನಕ್ಕಾಗಿ ಭಾರಿ ಕಸರತ್ತನ್ನು ಮಾಡುತ್ತಿವೆ. ಪ್ರತಿಷ್ಠಿತ ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ತರಲು ಹರಸಾಹಸ ಮಾಡುತ್ತಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಹಲವು ಬಾರಿ ಪ್ರತಿನಿಧಿಸಿದಂತ ಕ್ಷೇತ್ರದಲ್ಲಿ ಪ್ರಸ್ತುತ ಕಾಂಗ್ರೆಸ್ ಹೀನಾಯ ಪರಿಸ್ಥಿತಿಯಲ್ಲಿದೆ. ಇಂಧನ ಸಚಿವ ಬಿಜೆಪಿ ಪ್ರಮುಖ ಮುಖಂಡ ಸುನಿಲ್ ಕುಮಾರ್ ರವರ ಹಿಡಿತದಲ್ಲಿರುವಂತ ಕಾರ್ಕಳ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತನ್ನ ಗತ ಇತಿಹಾಸವನ್ನು ಮರಳಿ ತರುವಲ್ಲಿ ಹರಸಾಸಪಡುತ್ತಿದೆ.
ಹೀನಾಯ ಪರಿಸ್ಥಿತಿಯಲ್ಲಿದ್ದರೂ ಪಕ್ಷದಲ್ಲಿ ಅಭ್ಯರ್ಥಿ ಸ್ಥಾನಕ್ಕೆ ಕೊರತೆ ಇಲ್ಲ. ಐದಕ್ಕೂ ಅಧಿಕ ಅಭ್ಯರ್ಥಿಗಳು ಈಗಾಗಲೇ ತಮ್ಮ ಹೆಸರನ್ನು ಕೆಪಿಸಿಸಿಯಲ್ಲಿ ನೋಂದಾಯಿಸಿದ್ದಾರೆ. ಆದರೆ ಕ್ಷೇತ್ರದಲ್ಲಿ ಈ ಬಾರಿ ಮಹಿಳೆಯರಿಗೆ ಅವಕಾಶ ಕೊಡಿ ಎಂಬ ಸದ್ದು ಎದ್ದಿದ್ದು, ಇದಕ್ಕೆ ಕ್ರೈಸ್ತ ಸಮಾಜ ಬಾಂಧವರ ಹಲವು ಸಂಘಟನೆಗಳು ಸಾತ್ ನೀಡಿವೆ. 20ಕ್ಕೂ ಅಧಿಕ ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತೆಯಾಗಿ ಪಕ್ಷಕ್ಕಾಗಿ ದುಡಿದಿರುವ, ಪ್ರಸ್ತುತ ಕಾರ್ಕಳ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅನಿತಾ ಡಿಸೋಜರವರು ಈ ಬಾರಿ ಅಭ್ಯರ್ಥಿಯಾಗಲಿ ಎಂಬ ಸದ್ದು ಕಾರ್ಕಳದಲ್ಲಿ ಪ್ರತಿಧ್ವನಿಸುತ್ತಿದೆ. ಗ್ರಾಮ ಪಂಚಾಯತ್ ಸದಸ್ಯರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅನಿತಾ ಡಿಸೋಜ, ಪಕ್ಷದ ಪರವಾಗಿ ವಿವಿಧ ಮಾಧ್ಯಮಗಳಲ್ಲಿ ತನ್ನ ಧ್ವನಿಯನ್ನು ಎತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪ್ರಮುಖ ಎರಡು ಪಕ್ಷಗಳಲ್ಲಿ ಮಹಿಳೆಯರಿಗೆ ಟಿಕೆಟ್ ದೊರಕುತ್ತಿಲ್ಲ. ಈ ಬಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅನಿತಾ ರವರಿಗೆ ಪಕ್ಷದಿಂದ ಟಿಕೆಟ್ ನೀಡಿದರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂಬುದನ್ನು ನಿರೀಕ್ಷೆ ಮಾಡಬಹುದೆಂದು ಕ್ರೈಸ್ತ ಸಂಘಟನೆಗಳು ಒತ್ತಾಯಿಸಿವೆ.
ಇವರು ಸಮಾಜ ಸೇವೆಯಲ್ಲಿ ಚಿರಪರಿಚಿತರು. ಬೆಳ್ಮಣ್ ಪರಿಸರದಲ್ಲಿ ಅಪಘಾತ ನಡೆದಾಗ ರಾತ್ರಿ ಹಗಲು ಯೆನ್ನದೆ ಮೊದಲು ನೆನೆಯುವ ಹೆಸರು ಇವರದ್ದು. ಎಷ್ಟೋಜನರನ್ನ ಅಪಘಾತವಾದಾಗ ಯಾವುದೇ ಫಲಾಪೇಕ್ಷೆ ಆಶಿಸದೆ ಆಸ್ಪತ್ರೆಗೆ ದಾಕಲಿಸಿದ ಉಧಾಹರಣೆಗಳು ಅದೆಷ್ಟೋ ಇವೆ. ಬೆಳ್ಮಣ್ ಪರಿಸರದಲ್ಲಿ ಬೆಳ್ಮಣ್ ಹೆಲ್ಪಿಂಗ್ ಹ್ಯಾಂಡ್ ಎಂಬ ವಾಟ್ಸಾಪ್ ಗುಂಪ್ಪನ್ನು ಹುಟ್ಟು ಹಾಕಿ ಬೆಳ್ಮಣ್ ಪರಿಸರದಲ್ಲಿ ಸಮಾರಂಭದಲ್ಲಿ ಹೆಚ್ಚಾಗಿ ಉಳಿದ ಆಹಾರವನ್ನು ಅಸಕ್ತರಿಗೆ, ನಿಗೃತಿಕರಿಗೆ ಹಾಗೂ ಅನಾತಾಶ್ರಮಗಳಿಗೆ ಕ್ಲಪ್ತ ಸಮಯದಲ್ಲಿ ತಲುಪಿಸಿ ಆಹಾರವನ್ನು ಪೋಲಾಗದ ರೀತಿಯಲ್ಲಿ ಸಹಕರಿಸುತ್ತಾರೆ. ದಾನಿಗಳಿಂದ ಬಟ್ಟೆ ಹಾಗೂ ಆಹಾರ ದಾನ್ಯಗಳನ್ನ ಒಟ್ಟು ಗೂಡಿಸಿ ಅಗತ್ಯವಿದ್ದವರಿಗೆ ತಲುಪಿಸುತ್ತಾರೆ. ಬೆಳ್ಮಣ್ಣಲ್ಲಿ ನಿರ್ಗತಿಕರನ್ನು ಆಶ್ರಮ ಹಾಗೂ ಪುನವಸತಿ ಕೇಂದ್ರಕ್ಕೆ ತಲುಪಿಸುವಲ್ಲಿ ಸಹಕರಿಸಿರುತ್ತರೆ. ಪರಿಸರದಲ್ಲಿ ಸ್ವಚ್ಚತೆಯ ಅರಿವು ಜನರಲ್ಲಿ ಮೂಡಿಸುವ ಉದ್ದೇಶದಿಂದ ಸ್ವಚ್ಚತಾ ತಂಡದ ಸಕ್ರೀಯ ಸದಸ್ಯೆಯಾಗಿ ಪ್ರತಿ ಭಾನುವಾರ ಸ್ವಚ್ಚತಾ ಕಾಯಕ್ರಮವನ್ನು ಯಶಸ್ಚಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಮದುವೆಯ ದಿನ ಬಡವರ್ಗದ ಎಷ್ಟೋ ಹೆಣ್ಣು ಮಕ್ಕಳನ್ನ ಬೆಳಗ್ಗಿನ ಜಾವ ಅವರ ಮನೆಗೆ ಹೋಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಮದುಮಗಳನ್ನು ಚೆನ್ನಾಗಿ ಮದುವೆಗೆ ತಯಾರುಮಾಡಿ ಕಳುಹಿಸಿ ಕೊಟ್ಟಿರುವ ಇವರು ಕೊರೊನಾದ ಸಮಯದಲ್ಲಿ ದಾನಿಗಳಿಂದ 500ಕ್ಕೂ ಹೆಚ್ಚಿನ ಮನೆಗಳಿಗೆ ದಿನಸಿ ವಸ್ತುಗಳನ್ನು ಹಂಚಿರುತ್ತಾರೆ. ವೃದ್ದರಿಗೆ ಹಾಗೂ ಅಗತ್ಯವಿದ್ದವರಿಗೆ ಔಷದಿಯನ್ನ ತರಿಸಿ ಕೊಟ್ಟಿದ್ದು, ಕ್ಲಪ್ತ ಸಮಯದಲ್ಲಿ ಅಗತ್ಯ ಬಿದ್ದವರಿಗೆ ವೈದ್ಯಕೀಯ ನೆರವನ್ನು ಒದಗಿಸಿದ್ದಾರೆ. ಬೆಳ್ಮಣ್ ಪರಿಸರದಲ್ಲಿ ಕೂಲಿ ಕಾರ್ಮಿಕರಾಗಿ ಇದ್ದ ಉತ್ತರ ಭಾರತದ ಕಾರ್ಮಿಕರಿಗೆ ಅವರ ಊರಿಗೆ ಹೋಗಲು ಬೇಕಾದ ವ್ಯವಸ್ತೆಯನ್ನ ಮಾಡಲು ಸಹಕರಿಸಿದ್ದಾರೆ. ಎಷ್ಟೋ ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಿರುತ್ತಾರೆ. ಅರಕ್ಷಕ ಠಾಣೆ ಕಾರ್ಕಳ, ಬೆಳ್ಮಣು ಸರಕಾರಿ ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಜೊತೆ 24 ಗಂಟೆಯೂ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ ಕೀರ್ತಿ ಬೆಳ್ಮಣ್ ಪರಿಸರದಲ್ಲಿ ಇವರಿಗೆ ಸಲ್ಲಿತ್ತದೆ.
ಸುಮಾರು 22 ಬಾರಿ ರಕ್ತದಾನ ಮಾಡಿ ಮಹಿಳೆಯರಿಗೆ ಸ್ಪೂರ್ತಿದಾತರಾಗಿದ್ದಾರೆ. ಚರ್ಚ್ ಪಾಲನ ಮಂಡಳಿ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿರುವ ಇವರಿಗೆ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ವಿವಿಧ ಸಂಘ ಸಂಸ್ಥೆಗಳು ಮನವಿ ಮಾಡಿದೆ.
ಮಾಚ್೯ 24 : ಹಾವಂಜೆ ಇರ್ಮಾಡಿ ಶೆಟ್ಟಿಬೆಟ್ಟು ಮೂಲನಾಗದೇವರ ದಿವ್ಯಸನ್ನಿಧಿಯಲ್ಲಿ ಚತುಃಪವಿತ್ರ ನಾಗಮಂಡಲೋತ್ಸವ

Posted On: 23-03-2023 01:59PM
ಉಡುಪಿ : ಇಲ್ಲಿನ ಹಾವಂಜೆ ಇರ್ಮಾಡಿ ಶೆಟ್ಟಿಬೆಟ್ಟು ಮೂಲನಾಗದೇವರ ದಿವ್ಯಸನ್ನಿಧಿಯಲ್ಲಿ ಮಾಚ್೯ 24, ಶುಕ್ರವಾರ ಚತುಃಪವಿತ್ರ ನಾಗಮಂಡಲೋತ್ಸವ ವಿದ್ವಾನ್ ವೇದಮೂರ್ತಿ ಹೆರ್ಗ ಜಯರಾಮ್ ತಂತ್ರಿ ಮತ್ತು ಹಾವಂಜೆ ಗುರುರಾಜ್ ಭಟ್ ಇವರ ನೇತೃತ್ವದಲ್ಲಿ, ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ ಶ್ರೀ ಕ್ಷೇತ್ರ ಕಲ್ಲಂಗಳ, ಕೃಷ್ಣಪ್ರಸಾದ್ ವೈದ್ಯ ಮುದ್ದೂರು ಮತ್ತು ನಾಗಕನ್ನಿಕೆಯಾಗಿ ಬಾಲಕೃಷ್ಣ ವೈದ್ಯ, ನಟರಾಜ ವೈದ್ಯ ಬಳಗದವರ ಸಹಯೋಗದೊಂದಿಗೆ ನಡೆಯಲಿದೆ
ಮಾಚ್೯ 22 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹಸಿರುವಾಣಿ ಹೊರಕಾಣಿಕೆ ಹೊರಡಲಿರುವುದು. ಮಾಚ್೯ 24, ಶುಕ್ರವಾರ ಬೆಳಿಗ್ಗೆ 8.30ಕ್ಕೆ ಪ್ರಾರ್ಥನೆ, ಪುಣ್ಯಾಹ ನಾಂದಿ, ಪ್ರಾಯಶ್ಚಿತ್ತ ಹೋಮಗಳು, ಪಂಚವಿಂಶತಿ ಕಲಶ ಪ್ರತಿಷ್ಠೆ, ಅಧಿವಾಸ ಹೋಮ, ಆಶ್ಲೇಷ ಬಲಿ, ಕಲಶಾಭಿಷೇಕ, ಪ್ರಸನ್ನ ಪೂಜೆ, ವಟು ಆರಾಧನೆ, ದ್ವಾದಶ ಮೂರ್ತಿ ಆರಾಧನೆ, ದಂಪತಿ ಪೂಜೆ, ಪಲ್ಲ ಪೂಜೆ, ಮಧ್ಯಾಹ್ನ ಗಂಟೆ 12ರಿಂದ ಭಕ್ತಿ ರಸಮಂಜರಿ ಸಪ್ತಸ್ವರ ಮ್ಯೂಸಿಕಲ್ಸ್, ಗೋಳಿಕಟ್ಟೆ ಹಾವಂಜೆ ಇವರಿಂದ ಮಧ್ಯಾಹ್ನ ಗಂಟೆ 12.30ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 4.30ರಿಂದ ಶ್ರೀ ಉಮಾಮಹೇಶ್ವರ ಮಹಿಳಾ ಭಜನಾ ಮಂಡಳಿ ಹಾವಂಜೆ ಮತ್ತು ಶ್ರೀ ಮಹಾಮಾಯಿ ತುಳಜಾ ಭವಾನಿ ಮಹಿಳಾ ಭಜನಾ ಮಂಡಳಿ ಹಾವಂಜೆ ಇವರಿಂದ ಭಜನಾ ಕಾರ್ಯಕ್ರಮ, ಸಂಜೆ ಗಂಟೆ 6ರಿಂದ ದೀಪಾರಾಧನೆ, ಸಂಜೆ ಗಂಟೆ 6.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಸಂಜೆ ಗಂಟೆ 8 ರಿಂದ ಶಶಿಕಾಂತ್ ಶೆಟ್ಟಿ ಕಾರ್ಕಳ ಸಂಯೋಜನೆಯಲ್ಲಿ ಬಡಗುತಿಟ್ಟಿನ ಸುಪ್ರಸಿದ್ಧ ಕಲಾವಿದರ ಯಕ್ಷಗಾನ ಪ್ರಸಂಗ 'ಶ್ರೀ ಕೃಷ್ಣ ಪಾರಿಜಾತ', ರಾತ್ರಿ ಗಂಟೆ 10ಕ್ಕೆ ಹಾಲಿಟ್ಟು ಸೇವೆ, ಗಂಟೆ 10.30ಕ್ಕೆ ಮಂಡಲ ಪೂಜೆ, ಗಂಟೆ 11ಕ್ಕೆ : ನಾಗಮಂಡಲ ಸೇವೆ, ಗಂಟೆ 2:30ಕ್ಕೆ ಪ್ರಸಾದ ವಿತರಣೆ ನಡೆಯಲಿದೆ.
ಆ ಪ್ರಯುಕ್ತ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಗೂ ಮಹಾಅನ್ನಸಂತರ್ಪಣೆಯಲ್ಲಿಯೂ ಸರ್ವರು ಪಾಲ್ಗೊಳ್ಳಬೇಕೆಂದು ಶ್ರೀಮತಿ ಗುಲಾಬಿ ಬಿ. ಶೆಟ್ಟಿ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರು ಇರ್ಮಾಡಿ ಶೆಟ್ಟಿಬೆಟ್ಟು ಹಾವಂಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ನಾಗಮಂಡಲದ ನೇರಪ್ರಸಾರ ನಮ್ಮಉಡುಪಿ ಟಿವಿ ಫೇಸ್ಬುಕ್ ಹಾಗೂ ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರಗೊಳ್ಳಲಿದೆ.

ಕಾಪು : ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ಐವರು ವಶಕ್ಕೆ

Posted On: 22-03-2023 07:55PM
ಕಾಪು : ಇಲ್ಲಿನ ಪಡು ಗ್ರಾಮದ ಬಬ್ಬುಸ್ವಾಮಿ ದೈವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ಐದು ಜನರನ್ನು, ನಗದು ಸಹಿತ ಇತರೆ ವಸ್ತುಗಳನ್ನು ಕಾಪು ಪೋಲಿಸರು ವಶಪಡಿಸಿಕೊಂಡ ಘಟನೆ ಮಾಚ್೯ 22 ರಂದು ನಡೆದಿದೆ.
ಕಾಪು ಮಾರಿಗುಡಿ ಬಂದೋಬಸ್ತ್ ಪ್ರಯುಕ್ತ ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕರು ರೌಂಡ್ಸ್ ನಲ್ಲಿರುವ ಸಂದರ್ಭ ಬೆಳಿಗ್ಗೆ ಪಡು ಗ್ರಾಮದ ಕಾಪು ಬಬ್ಬುಸ್ವಾಮಿ ದೈವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗರಗರ ಮಂಡಲ ಜೂಜಾಟ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ತೌಸಿಫ್, ದೀಪಕ್, ಶ್ರೀನಿವಾಸ, ಆದರ್ಶ್, ಮಂಜುನಾಥ ಎಂಬವವರನ್ನು ವಶಕ್ಕೆ ಪಡೆದು, ಜೂಜಾಟಕ್ಕೆ ಬಳಸಿದ ನಗದು, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ : ಪಡುಬಿದ್ರಿ ಚೆಂಡಿಗೆ ಚಾಲನೆ

Posted On: 22-03-2023 05:05PM
ಪಡುಬಿದ್ರಿ : ಇತಿಹಾಸ ಪ್ರಸಿದ್ದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಾ. 22ರಂದು ಚೆಂಡಿಗೆ ಚಾಲನೆ ನೀಡಲಾಯಿತು.

ದೇವಳದ ಅರ್ಚಕರಾದ ವೈ ಗುರುರಾಜ ಭಟ್ ರವರ ಪ್ರಾರ್ಥನೆಯೊಂದಿಗೆ ಚೆಂಡಿನ ಸೇವಾಕರ್ತರಾದ ಶರತ್ ಪೂಜಾರಿಯವರು ಬಗ್ಗೆಡಿ ಗುತ್ತಿನಾರ್ ಮತ್ತು ನಡ್ಸಾಲು ಗುತ್ತಿನಾರುಗಳಿಗೆ ಹಸ್ತಾಂತರಿಸಿ ಅವರು ಚೆಂಡನ್ನು ದೇವಳದ ಮುಂಭಾಗದ ವಠಾರಕ್ಕೆ ಎಸೆಯುವ ಮೂಲಕ ಚಾಲನೆ ನೀಡಲಾಯಿತು.
ಪ್ರತಿ ವರ್ಷದಂತೆ ಈ ಬಾರಿಯೂ ಊರಿನ ಹಿರಿಯರು, ಕಿರಿಯರು ಚೆಂಡು ಆಡುವ ಮೂಲಕ ಸಂಭ್ರಮಿಸಿದರು.
ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್ ಮತ್ತು ಪಿ. ಭವಾನಿಶಂಕರ ಹೆಗ್ಡೆ, ಬಗ್ಗೆಡಿ ಗುತ್ತಿನಾರ್ ಶೇಖರ ಶೆಟ್ಟಿ, ನಡ್ಸಾಲು ಗುತ್ತಿನಾರ್ ಶ್ರೀನಾಥ ಹೆಗ್ಗಡೆ, ದೇವಸ್ಥಾನದ ಅರ್ಚಕರಾದ ವೈ. ಗುರುರಾಜ ಭಟ್, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಭಕ್ತರು ಉಪಸ್ಥಿತರಿದ್ದರು.