Updated News From Kaup

ಸತ್ಯಜಿತ್ ಸುರತ್ಕಲ್ ಗೆ ಪೊಲೀಸ್ ಭದ್ರತಾ ಸಿಬ್ಬಂದಿ ನಿಯೋಜಿಸಿ : ಉಡುಪಿ ಜಿಲ್ಲಾ ಶ್ರೀ ನಾರಾಯಣ ಗುರು ವಿಚಾರವೇದಿಕೆಯಿಂದ ಜಿಲ್ಲಾಧಿಕಾರಿಗೆ ಮನವಿ

Posted On: 05-04-2023 12:08PM

ಉಡುಪಿ : ಶ್ರೀ ನಾರಾಯಣ ಗುರು ವಿಚಾರವೇದಿಕೆ ಕರ್ನಾಟಕ ಇದರ ರಾಜ್ಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಅವರಿಗೆ ಕಳೆದ 16 ವರ್ಷ ಗಳಿಂದ ನೀಡಲಾಗಿದ್ದ ಪೊಲೀಸ್ ಭದ್ರತಾ ಸಿಬ್ಬಂದಿಯನ್ನು ಹಿಂದಕ್ಕೆ ಪಡೆದಿರುವ ವಿಚಾರವಾಗಿ ಅವರಿಗೆ ಹಿಂಪಡೆದ ಪೊಲೀಸ್ ಭದ್ರತಾ ಸಿಬ್ಬಂದಿಯನ್ನು ಮತ್ತೆ ನಿಯೋಜಿಸಬೇಕಾಗಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಮಾನ್ಯ ಜಿಲ್ಲಾಧಿಕಾರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ ಕೋಟೆ, ಉಡುಪಿ ಜಿಲ್ಲಾ ಗೌರವಾಧ್ಯಕ್ಷರಾದ ರಾಜು ಪೂಜಾರಿ ಉಪ್ಪೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಪಳ್ಳಿ, ಉಡುಪಿ ತಾಲೂಕು ಅಧ್ಯಕ್ಷರಾದ ಶಶಿಧರ್ ಅಮೀನ್,, ಕಾರ್ಕಳ ತಾಲೂಕು ಅಧ್ಯಕ್ಷರಾದ ಗಂಗಾಧರ ಪಣಿಯೂರು, ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಕರುಣಾಕರ ಪೂಜಾರಿ ಹಂದಾಡಿ, ಬನ್ನಂಜೆ ಬಿಲ್ಲವರ ಸಂಘದ ಅಧ್ಯಕ್ಷರಾದ ಮಾಧವ ಬನ್ನಂಜೆ, ಜಿಲ್ಲಾ ಉಪಾಧ್ಯಕ್ಷರಾದ ಕಾಮರಾಜ್ ಜಿ, ಜಿಲ್ಲಾ ಕೋಶಾಧಿಕಾರಿ ಆದ ವೀರೇಶ್ ಸುವರ್ಣ, ವಿನಯ್ ಪಡುಕೆರೆ, ಸತೀಶ್ ಬಂಗೇರ, ಜಿಲ್ಲಾ ಜೊತೆ ಕಾರ್ಯದರ್ಶಿಯಾದ ರಿತೇಶ್ ಕೋಟ್ಯಾನ್, ಲೋಕೇಶ್ ಪೂಜಾರಿ ಹೆರ್ಗ, ಸಂತೋಷ ಪೂಜಾರಿ ಹೆರ್ಗ, ಅರವಿಂದ ಕೋಟ್ಯಾನ್, ಕುಶಾಲ್ ಜತ್ತನ್, ಅಶೋಕ್ ಅಮೀನ್, ಸತೀಶ್ ಬಂಗೇರ ಹೇರೂರು, ರಾಜ್ಯ ಸಹ ಸಂಘಟನಾ ಕಾರ್ಯದರ್ಶಿಗಳಾದ ರಾಕೇಶ್ ಪೂಜಾರಿ ಕಲ್ಯಾಣಪುರ ಉಪಸ್ಥಿತರಿದ್ದರು.

ಕಾಪು : ಕಿರು ಸೇತುವೆಯ ಕೆಳ ದಂಡೆಗೆ ಡಿಕ್ಕಿ ಹೊಡೆದ ಸ್ಕೂಟರ್ ; ಸವಾರ ಆಸ್ಪತ್ರೆಗೆ ದಾಖಲು

Posted On: 05-04-2023 10:33AM

ಕಾಪು : ತಾಲೂಕಿನ ಮಲ್ಲಾರಿನ ಯುವಕನೋರ್ವನ ಅಜಾಗರೂಕತೆಯ ಸ್ಕೂಟರ್ ಚಾಲನೆಯಿಂದ ಹೆಜಮಾಡಿ ಗ್ರಾಮದ ನರ್ಸರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಿರು ಸೇತುವೆಯ ಕೆಳ ದಂಡೆಗೆ ಡಿಕ್ಕಿ ಹೊಡೆದು, ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ, ತಲೆ, ಬೆನ್ನಿಗೆ ಗಂಭೀರ ಗಾಯವಾದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಪಡುಬಿದ್ರಿಯ ಕೇಬಲ್ ಸಂಸ್ಥೆಯಲ್ಲಿ ಟೆಕ್ನೀಷಿಯನ್ ಆಗಿ ವೃತ್ತಿ ಮಾಡುತ್ತಿದ್ದ ಶಿವಪ್ರಸಾದ್ ತನ್ನ ಎಲೆಕ್ಟ್ರಿಕ್ ಸ್ಕೂಟರ್‌‌‌ನಲ್ಲಿ ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಮನೆಗೆ ವಾಪಾಸ್ಸು ಹೋಗುತ್ತಾ ತಾನು ಚಲಾಯಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರನ್ನು ಹೆಜಮಾಡಿಯಿಂದ ಕಾಪು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಈ ಘಟನೆ ನಡೆದಿದೆ.

ಗಾಯಾಳುವನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು : ಬ್ರಹ್ಮಶ್ರೀ ನಾರಾಯಣಗುರುಗಳು ಸಾಮಾಜಿಕ ಕ್ರಾಂತಿ ನಡೆಸಿ, ಜನರನ್ನು ಒಗ್ಗೂಡಿಸಿದ ಮಹಾನ್ ದಾರ್ಶನಿಕ - ವಿಖ್ಯಾತಾನಂದ ಸ್ವಾಮೀಜಿ

Posted On: 04-04-2023 08:53PM

ಕಾಪು : ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಸ್ತ ಹಿಂದೂ ಸಮಾಜದ ಏಳಿಗೆಗಾಗಿ ಸಾಮಾಜಿಕ ಕ್ರಾಂತಿಯನ್ನು ನಡೆಸಿ, ಜನರನ್ನು ಒಗ್ಗೂಡಿಸಿದ ಮಹಾನ್ ದಾರ್ಶನಿಕರು. ಅವರ ಹೆಸರಿನಲ್ಲಿ ಮುನ್ನಡೆಯುತ್ತಿರುವ ಸಂಘ ಸಂಸ್ಥೆಗಳು ಮತ್ತು ಗುರು ಮಂದಿರಗಳ ಮೂಲಕವಾಗಿ ಸಮಾಜದ ಯುವಜನರನ್ನು ಶೈಕ್ಷಣಿಕವಾಗಿ ಉನ್ನತ ಮಟ್ಟದವರೆಗೆ ಕೊಂಡೊಯ್ಯುವ ಪ್ರಯತ್ನಗಳು ನಡೆಯಬೇಕಿವೆ ಎಂದು ಕರ್ನಾಟಕ ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ರೇಣುಕಾ ಪೀಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು. ಅವರು ಎಪ್ರಿಲ್ 2 ರಂದು ಕಾಪು ಬಿಲ್ಲವರ ಸಹಾಯಕ ಸಂಘದ ನವೀಕೃತ ಶಿಲಾಮಯ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಮೂರ್ತಿ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀವರ್ಚನ ನೀಡಿದರು.

ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಂ ಕಾಪು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಸೂರ್ಯಕಾಂತ್ ಜೆ. ಪೂಜಾರಿ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಮುಂಬಯಿ ಬಿಲ್ಲವ ಚೇಂಬರ್ಸ್ ಆಫ್ ಕಾಮರ್ಸ್ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ಕಾಪು ಸಿ.ಎ. ಬ್ಯಾಂಕ್ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಮುಂಬೈಯ ಉದ್ಯಮಿ ಉಮೇಶ್ ಕಾಪು, ಕಾಪು ಪುರಸಭೆ ಸದಸ್ಯೆ ಸರಿತಾ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.

ಸಂಘದ ಮಾಜಿ ಅಧ್ಯಕ್ಷ ಮಾಧವ ಆರ್. ಪಾಲನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣಾರ, ವಾಸ್ತುತಜ್ನ ತ್ರಿವಿಕ್ರಮ ಭಟ್, ಶಿಲ್ಪಿಗಳಾದ ನರಸಿಂಹ ಆಚಾರ್ಯ, ಸುಧಿರ್ ಆಚಾರ್ಯ, ಇಂಜಿನಿಯರ್ ಶಶಿಧರ್ ಸುವರ್ಣ, ವೇಣುಕೃಷ್ಣ, ರಾಘು ಪೂಜಾರಿ ಕಲ್ಮಂಜೆ ಹಾಗೂ ಇಪ್ಪತ್ತೈದು ಸಾವಿರ ಮೇಲ್ಪಟ್ಟು ಧನಸಹಾಯ ನೀಡಿದ ದಾನಿಗಳು, ಮಂದಿರದ ವಿವಿಧ ಕಾಮಗಾರಿಗಳ ವೆಚ್ಚವನ್ನು ಭರಿಸಿದ ದಾನಿಗಳನ್ನು ಸಮ್ಮಾನಿಸಿ, ಗೌರವಿಸಲಾಯಿತು.

ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಅರ್ಚಕ ಚರಣ್ ಶಾಂತಿ ಕಟಪಾಡಿ, ಮಹೇಶ್ ಶಾಂತಿ ಹೆಜಮಾಡಿ, ಗೌ. ಪ್ರ. ಕಾರ್ಯದರ್ಶಿ ವಿಠಲ ಬಿ. ಸಾಲ್ಯಾನ್, ಉಪಾಧ್ಯಕ್ಷರಾದ ಐತಪ್ಪ ಎಸ್. ಕೋಟ್ಯಾನ್, ಸಖೇಂದ್ರ ಸುವರ್ಣ, ಮಧು ಪಾಲನ್, ಕೋಶಾಽಕಾರಿ ಉದಯ ಸನಿಲ್, ಮಹಿಳಾ ಬಳಗದ ಸಂಚಾಲಕಿ ಆಶಾ ಶಂಕರ್, ದಳಪತಿ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಂ ಕಾಪು ಸ್ವಾಗತಿಸಿ, ಜತೆ ಕಾರ್ಯದರ್ಶಿ ಅನಿಲ್ ಕುಮಾರ್ ವಂದಿಸಿದರು. ಸಚ್ಚೇಂದ್ರ ಅಂಬಾಗಿಲು ಕಾರ್ಯಕ್ರಮ ನಿರೂಪಿಸಿದರು.

ಪರಿವರ್ತನ್ ಫಿಟ್ನೆಸ್ ಮತ್ತು ವೆಲ್ನೆಸ್ ಸೆಂಟರ್ ಕಾಪು : ಮಕ್ಕಳಿಗಾಗಿ‌ ಕಿಡ್ಸ್ ಸಮ್ಮರ್ ಕ್ಯಾಂಪ್ - 2023

Posted On: 04-04-2023 07:25PM

ಮಕ್ಕಳಿಗಾಗಿ ಬೇಸಿಗೆಯ ರಜೆಯನ್ನು ಮಜವನ್ನಾಗಿಸುವ ನಿಟ್ಟಿನಲ್ಲಿ 4 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ ಮನೋರಂಜನಾತ್ಮಕ ಮತ್ತು ಕ್ರಿಯಾತ್ಮಕತೆ ಜೊತೆಗೆ ಹೊರಾಂಗಣದ ಚಟುವಟಿಕೆಗಳಿಂದ ಕೂಡಿದ ಕಿಡ್ಸ್ ಸಮ್ಮರ್ ಕ್ಯಾಂಪ್ - 2023ನ್ನು ಪರಿವರ್ತನ್ ಫಿಟ್ನೆಸ್ ಮತ್ತು ವೆಲ್ನೆಸ್ ಸೆಂಟರ್ ಕಾಪು ಇವರು ಕಾಪುವಿನ ಜನಾರ್ಧನ್ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಏಪ್ರಿಲ್ ಮತ್ತು ಮೇನಲ್ಲಿ 2 ಬ್ಯಾಚ್ ಗಳ ಮೂಲಕ ಆಯೋಜಿಸಿರುತ್ತಾರೆ.

ಏಪ್ರಿಲ್ 10 ರಿಂದ 28 ರವರೆಗೆ ಮೊದಲ ಬ್ಯಾಚ್ ಮತ್ತು ಮೇ 1 ರಿಂದ 20ರವರೆಗೆ ಎರಡನೆಯ ಬ್ಯಾಚ್ ಜರಗಲಿದೆ.

ಮಕ್ಕಳಿಗಾಗಿ ಕತೆ ಹೇಳುವುದು, ನೃತ್ಯ, ಮನೋರಂಜನಾ ಆಟಗಳು, ಕರಾಟೆ, ಯಕ್ಷಗಾನ, ಯೋಗ ಮತ್ತು ಧ್ಯಾನ, ಹೊರ ಪ್ರವಾಸ ಇತ್ಯಾದಿ ಅನೇಕ ಚಟುವಟಿಕೆಗಳು ಇರಲಿದೆ. ಕೆಲವೇ ಸೀಟುಗಳು ಬಾಕಿ ಇವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8971735243

ಕಾಪು : ಯುವಸೇನೆ ಮಡುಂಬು - 16ನೇ ವರ್ಷದ ವಾರ್ಷಿಕೋತ್ಸವ ಸಂಪನ್ನ

Posted On: 03-04-2023 08:25PM

ಕಾಪು : ಯುವಸೇನೆ ಮಡುಂಬು ಇದರ 16ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಎಪ್ರಿಲ್ 1 ರಂದು ಮಡುಂಬು ಬೆರ್ಮೋಟ್ಟು ದೇವಸ್ಥಾನದ ಬಳಿ ನಡೆದ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮವನ್ನು ವಿದ್ವಾನ್ ಕೆ.ಪಿ.ಶ್ರೀನಿವಾಸ ತಂತ್ರಿ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಹಿಂದೂ ಸಮಾಜದ ವ್ಯವಸ್ಥೆಯೊಳಗೆ ಯಾವುದಕ್ಕೂ ಧಕ್ಕೆ ಬರಬಾರದು. ಪರಶುರಾಮ ಸೃಷ್ಟಿಯಲ್ಲಿ ಹಲವಾರು ವಿವಿಧತೆಗಳಿವೆ. ಹಿಂದುತ್ವದ ಭದ್ರ ಬುನಾದಿಗೆ ನಾಂದಿ ಹಾಡಿದೆ ಯುವಸೇನೆ ಮಡುಂಬು. ನಮ್ಮ ಸಂಸ್ಕೃತಿ ನಮಗೆ ಬೇಕು ಅದರ ಬಲಿಷ್ಠತೆ ನಮಗೆ ತಿಳಿದಿರಬೇಕು. ಪ್ರತಿ ಮನೆಗೂ ಭಗವದ್ಗೀತೆ ನೀಡಬೇಕೆನ್ನುವ ಯುವಸೇನೆ ಮಡುಂಬುವಿನ ಸಾಫಲ್ಯತೆಗೆ ಯಶಸ್ವಿಯಾಗಲಿ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಮುಖಂಡೆ ಚೈತ್ರ ಕುಂದಾಪುರ ಮಾತನಾಡಿ ಊರಿನ ಸಂಘ ಸಂಸ್ಥೆಗಳಲ್ಲಿ ಊರಿಗಾಗಿ ದುಡಿಯುವ, ಒಂದಾಗುವ ಮನಸ್ಥಿತಿ ಇರುತ್ತದೆ. ಜೊತೆಗೆ ದೇಶ ಭಕ್ತಿ ಧರ್ಮ ಭಕ್ತಿಯಿರುತ್ತದೆ .ಸಾಂಸ್ಕೃತಿಕತೆಯ ಆಚೆಗೆ ನಿಂತು ಧರ್ಮದ ಬಗೆಗೆ ಚಿಂತಿಸುವ ಯುವಸೇನೆಯ ಕಾರ್ಯ ಶ್ಲಾಘನೀಯ. ಧಾರ್ಮಿಕತೆಗೆ ಒಲವಿರುವ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಜ್ಞಾನದ ಕೊರತೆಯಾಗುತ್ತಿದೆ. ಅವಶ್ಯಕತೆಯಿಲ್ಲದ ಆಚರಣೆಗಳ ಬಗ್ಗೆ ಹಿಂದೂ ಸಮಾಜ ಯೋಚಿಸಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನಿಲ್ ಸಾಲ್ಯಾನ್ ವಹಿಸಿದ್ದರು. ವಕೀಲರಾದ ಸಂಕಪ್ಪ ಅಮೀನ್, ಧರಣಿ ಸಂಸ್ಥೆ ಅಧ್ಯಕ್ಷರಾದ ಲೀಲಾಧರ ಶೆಟ್ಟಿ, ಇನ್ನಂಜೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಲ್ಯಾಲು, ಉದ್ಯಮಿ ಯೋಗೀಶ್ ವಿ ಶೆಟ್ಟಿ, ಪತ್ರಕರ್ತ ರಾಕೇಶ್ ಕುಂಜೂರು, ನವೀನ್ ಅಮೀನ್ ಶಂಕರಪುರ, ಸಂದೀಪ್ ಬಂಗೇರ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ತುಳು ನಾಟಕ ಜರಗಿತು. ಪದ್ಮಶ್ರೀ ಪ್ರಾರ್ಥಿಸಿದರು. ಯುವಸೇನೆ ಮಡುಂಬುವಿನ ಅಧ್ಯಕ್ಷರಾದ ಸುನಿಲ್ ಸಾಲ್ಯಾನ್ ಸ್ವಾಗತಿಸಿದರು. ಕಾರ್ತಿಕ್ ಶೆಟ್ಟಿ ವರದಿ ವಾಚಿಸಿದರು. ಡಾ.ಪ್ರಿಯ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ವಿಕ್ಕಿ ಪೂಜಾರಿ ಮಡುಂಬು ವಂದಿಸಿದರು.

ಉಡುಪಿ : ಅಟೋರಿಕ್ಷಾಗಳಲ್ಲಿ ರಾಜಕೀಯ ಸಂಬಂಧಿತ ಪೋಸ್ಟರ್ಗಳ ತೆರವಿಗೆ ಸೂಚನೆ

Posted On: 03-04-2023 07:44PM

ಉಡುಪಿ : ರಾಜ್ಯ ವಿಧಾನಸಭೆ ಚುನಾವಣೆ - 2023 ಕ್ಕೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ, ಜಿಲ್ಲೆಯ ಎಲ್ಲಾ ಆಟೋರಿಕ್ಷಾಗಳಲ್ಲಿ ರಾಜಕೀಯ ಸಂಬಂಧಿತ ಪೋಸ್ಟರ್ಗಳನ್ನು ತೆರವುಗೊಳಿಸಬೇಕು ಮತ್ತು ಯಾವುದೇ ರೀತಿಯ ರಾಜಕೀಯ ಸಂಬಂಧಿತ ಪೋಸ್ಟರ್ಗಳನ್ನು ಅಳವಡಿಸದಂತೆ ಆಟೋರಿಕ್ಷಾ ಚಾಲಕರು ಹಾಗೂ ಮಾಲಕರು ಕ್ರಮಕೈಗೊಳ್ಳಬೇಕು.

ತಪ್ಪಿದ್ದಲ್ಲಿ ಅಂತಹ ವಾಹನಗಳ ಪರವಾನಿಗೆಯನ್ನು ರದ್ದುಗೊಳಿಸಿ, ಎಫ್.ಐ.ಆರ್ ದಾಖಲಿಸಲು ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಟೀಲಿನಲ್ಲಿ "ನಾಗಾರಾಧನಾ ಸಾಹಿತ್ಯ ಸಂವಾದ" ನಾಗ - ವೃಕ್ಷ ಅವಳಿ ಚೇತನಗಳು : ಕೆ.ಎಲ್.ಕುಂಡಂತಾಯ

Posted On: 03-04-2023 06:44PM

ಕಟೀಲು : ಮಾನವನಿಂದ ಮೊತ್ತಮೊದಲು ದೈವೀಕರಿಸಲ್ಪಟ್ಟ ಪ್ರಾಣಿ ನಾಗ. ಪುರಾತನವಾದರೂ ಬಲಗುಂದದ ಆರಾಧನೆಯಾಗಿ ನಾಗಾರಾಧನೆ ಮಾನವ ವಿಕಾಸದೊಂದಿಗೆ ಸಾಗಿಬಂದಿದೆ.ನಾಗ ತಂಪನ್ನು ಆಶ್ರಯಿಸಿಕೊಂಡು ಬದುಕುವ ಪ್ರಾಣಿ.ಆದುದರಿಂದಲೇ ನಾಗನ ಆರಾಧನೆಯಲ್ಲಿ‌ ತಂಪೆರೆಯುವ ಕ್ರಿಯೆಗೆ ಪ್ರಾಶಸ್ತ್ಯವಿದೆ.ನಾಗ ವಾಸಸ್ಥಾನ ಬನವನ್ನು ಉಳಿಸಿಕೊಂಡು ಪ್ರಕೃತಿಯನ್ನು ರಕ್ಷಿಸಬೇಕಾದುದು ಕಾಲದ ಅನಿವಾರ್ಯತೆ ಏಕೆಂದರೆ ನಾಗ - ವೃಕ್ಷ ಅವಳಿ ಚೇತನಗಳು ಎಂದು ಜಾನಪದ ಸಂಶೋಧಕ ,ಸಾಹಿತಿ ಕೆ.ಎಲ್.ಕುಂಡಂತಾಯ ಅಭಿಪ್ರಾಯಪಟ್ಟರು. ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ 'ಕುದುರಿ'ನಲ್ಲಿ ಮೂಲ್ಕಿ ತಾಲೂಕು‌ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಟೀಲು ಪ್ರಥಮದರ್ಜೆ ಕಾಲೇಜಿನ‌ ಎನ್.ಎಸ್ ಎಸ್ .ಘಟಕ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಹಕಾರದಲ್ಲಿ‌ ಜರಗಿದ 'ನಾಗಾರಾಧನೆ ನಾಗಾರಾಧನಾ ಸಾಹಿತ್ಯ ಸಂವಾದ' ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಮಾನವ ಅಭಿಯೋಗವಾಗದ ಪುರಾತನ ನಾಗಬನವೊಂದರಲ್ಲಿ ಕನಿಷ್ಠ 50 - 60 ವೃಕ್ಷ ಪ್ರಬೇಧಗಳು ಹಾಗೂ ಸುಮಾರು ಇಪ್ಪತ್ತರಷ್ಟು ಔಷಧೀಯ ಸಸ್ಯಗಳು ಇರುತ್ತವೆ.ಪಕ್ಷಿ ಸಂಕುಲಗಳು ಆಶ್ರಯ ಪಡೆದಿರುತ್ತವೆ.ಹುಳು ಹುಪ್ಪಟಿಗಳ ಸಹಿತ ಜೀವರಾಶಿಗಳಿಗೆ ಬನವೊಂದು ಸುರಕ್ಷಿತ ನೆಲೆಯಾಗಿರುತ್ತದೆ,ಆದರೆ ಈ ಸತ್ಯವನ್ನು ಎಣಿಸದೆ ನಾಗಬನಗಳ ನಾಶ ನಡೆಯುತ್ತಲೇ ಇವೆ.ಈ ಅಭಿಯೋಗ ನಿಲ್ಲಬೇಕು ಬನಗಳು‌ ಸಂಸ್ಕೃತಿಯ ಪ್ರತೀಕವಾಗಿ ಉಳಿಯಬೇಕಿದೆ ಎಂದು ಕುಂಡಂತಾಯ ಹೇಳಿದರು ಉರಗತಜ್ಞ,ನಾಗರಹಾವಿನ ಜೀವನ ವಿಧಾನದ ಅಧ್ಯಯನ ಸಹಿತ ಸಾವಿರಾರು ನಾಗರ ಹಾವುಗಳನ್ನು ರಕ್ಷಿಸಿದ ಗುರುರಾಜ ಸನಿಲ್ ಅವರು ಮಾತನಾಡಿ‌ ನಮಗೆ ಹೇಗೆ ಈ ಪರಿಸರದಲ್ಲಿ ಜೀವಿಸುವ ಹಕ್ಕು‌ ಇದೆಯೋ ಅಂತೆಯೇ ಪ್ರಾಣಿಗಳಿಗೂ ವಾಸಿಸುವ ಅಧಿಕಾರವಿದೆ.ನಾಗ ಸಂತತಿಯ ವಾಸಸ್ಥಾನವಾಗಿರುವ ನಾಗಬನಗಳನ್ನು‌ ನಾಶಮಾಡಬಾರದು.ಬನದ ಮರಗಳು ಮಳೆನೀರನ್ನು ಹಿಡಿದಿಟ್ಟುಕೊಂಡು ನೆಲದ ಆಳಕ್ಕೆ ರವಾನಿಸುತ್ತದೆ ಆಮೂಲಕ ಅಂತರ್ಜಲ ವೃದ್ಧಿಯಾಗುತ್ತದೆ ಎಂದರು.

ನಾಗಾರಾಧನೆಯನ್ನು ವಾಸ್ತವವಾಗಿ ಗಮನಿಸಬೇಕು.ಆಮೂಲಕ ಆರಾಧನಾ ಪ್ರಜ್ಞೆ ಬೆಳೆಸಿಕೊಳ್ಳಬೇಕು.ನಾಗನ ಬಗ್ಗೆ ಮೂಢನಂಬಿಕೆ ಬೇಡ ಎಂದ ಸನಿಲ್ ಅವರು ನಾಗ ಮನೆಗೆ ಹೇಗೆ ಮತ್ತು ಏಕೆ ಹರಿದು ಬರುತ್ತದೆ ಎಂದು ವಿವರಿಸಿ ಪರಿಸರ ಸ್ವಚ್ಛವಾಗಿರಲಿ ನಾಗ ಬರಲಾರದು ಎಂದರು.ಇಲಿ ಮುಂತಾದ ಪ್ರಾಣಿಗಳ ಬೆನ್ನುಹಿಡಿದು ನಾಗ ಬರುವುದು ಸಾಮಾನ್ಯ ಎಂದು ವಿವರಿಸಿದರು.ಸರ್ಪ ಕಚ್ಚಿದಾಗ ಮಾಡಬೇಕಾ ಪ್ರಥಮ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು.ಹೆದರದೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಸೂಚಿಸಿದರು.

ಗುರುರಾಜ ಸನಿಲ್ ಹಾಗೂ ಕೆ.ಎಲ್.ಕುಂಡಂತಾಯ ಅವರು ಬರೆದ ಪುಸ್ತಕಗಳನ್ನು ಖರೀದಿಸುವ ಮೂಲಕ‌ ಕಾರ್ಯಕ್ರಮವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಉದ್ಘಾಟಿಸಿದರು. ಗಾಯಕಿ ಅಶ್ವಿನಿ ರಾವ್ ಪಂಜೆ ಮಂಗೇಶರಾಯರ ಪ್ರಸಿದ್ಧ ಹಾವಿನ ಹಾಡನ್ನು ಹಾಡಿದರು. ನಾಡೋಜ ಕೆ.ಪಿ.ರಾವ್,ಹಾಗೂ ಕ.ಸಾ.ಪ.ಮೂಲ್ಕಿ ಘಟಕದ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಯೋಜಕ ಮಿಥುನ್ ಉಡುಪ ಉಪಸ್ಥಿತರಿದ್ದರು. ಕಾರ್ಯದರ್ಶಿ ಜೊಸ್ಸಿ ಪಿಂಟೋ ಸ್ವಾಗತಿಸಿದರು. ರಾಜಶೇಖರ ಎಸ್.ಕಾರ್ಯಕ್ರಮ ನಿರೂಪಿಸಿದರು. ಕುದುರಿನ ಹುತ್ತದ ಎದುರಿನ ನಾಗಮಂಡಲ ಮಂಟಪದಲ್ಲಿ‌ ಕಾರ್ಯಕ್ರಮ ನಡೆಯಿತು.

ಸ್ಟೇಟಸ್ ಕತೆಗಳ ಮೂಲಕ ಗಮನ ಸೆಳೆಯತ್ತಿರುವ ಉಪನ್ಯಾಸಕ ಧೀರಜ್ ಬೆಳ್ಳಾರೆ

Posted On: 03-04-2023 04:35PM

ಕೊರೋನಾ ಸಮಯ ಒಂದಷ್ಟು ಪ್ರತಿಭೆಗಳು ಬೆಳಕಿಗೆ ಬಂದದ್ದಂತು ನಿಜ. ಎಲ್ಲಾ ಸ್ತಬ್ಧವಾಗಿದ್ದರೂ ಕತೆ, ಕವನ, ನೃತ್ಯ, ಮಾತು ಇತ್ಯಾದಿ ಚಟುವಟಿಕೆಗಳಿಗೆ ಕೊರತೆ ಇರಲಿಲ್ಲ. ಪ್ರತಿನಿತ್ಯದ ಬಿಝಿಗಳ ನಡುವೆ ಮೊಬೈಲ್ ನಲ್ಲಿ ಕಾಲ ಕಳೆಯುವ ಈ ಕಾಲಘಟ್ಟದಲ್ಲಿ ವಾಟ್ಸಾಪ್ ಸ್ಟೇಟಸ್ ಕತೆಗಳ ಮೂಲಕ ಗಮನ ಸೆಳೆದ ವ್ಯಕ್ತಿ ಧೀರಜ್ ಬೆಳ್ಳಾರೆ.

ವೃತ್ತಿಯಲ್ಲಿ ಉಪನ್ಯಾಸಕ, ಪ್ರವೃತ್ತಿಯಲ್ಲಿ ಲೇಖಕ, ವಾಗ್ಮಿ, ನಟರಾಗಿ ಗುರುತಿಸಿರುವ ಇವರು ತಮ್ಮ ಸ್ಟೇಟಸ್ ಸಾಹಿತ್ಯದ ಮೂಲಕ ಹಲವಾರು ಜನರ ವಾಟ್ಸಾಪ್ ಸ್ಟೇಟಸ್ ಅಲಂಕರಿಸಿದ್ದಾರೆ.

ಕೊರೊನ ಸಮಯದಲ್ಲಿ ಇವರ ಬರಹದ ಆರಂಭವು ಒಂದು ಸಾವಿರ ಕತೆಗಳನ್ನು ದಾಟಿ ಇಂದಿಗೆ ಒಂದು ಸಾವಿರದ ಮೂರನೆಯ ಕತೆಯವರೆಗೆ ತಲುಪಿ ಇನ್ನೂ ಮುಂದುವರಿಯಲಿದೆ. ತಾನೂ ಬರೆಯುವುದಲ್ಲದೆ ಇತರರ ಬರವಣಿಗೆಗೆ ಸ್ಫೂರ್ತಿದಾತರಾಗಿದ್ದಾರೆ.

ತಾನು ಬರೆದ ಸಾವಿರ ಕತೆಗಳಲ್ಲಿ ಆಯ್ದ ನೂರು ಕತೆಗಳನ್ನು ಆರಿಸಿ ಸ್ಟೇಟಸ್ ಕತೆಗಳು ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಪ್ರಸ್ತುತ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರ ಕತೆ, ಲೇಖನದ ಕಾರ್ಯ ಮುಂದುವರಿಯಲಿ. ಜನರಲ್ಲಿ ಇಂತಹ ಕತೆಗಳ ಮೂಲಕ ಓದುವಿಕೆಯು ಚಿಗುರೊಡೆಯಲಿ ಎಂದು ಆಶಿಸೋಣ.

ಕಾಪು : ಶ್ರೀ ವಿಠೋಭ ರುಕುಮಾಯಿ ದೇವರ ರಜತ ಕವಚ, ಪ್ರಭಾವಳಿ, ಗುರುದೇವರ ರಜತ ಪಾದುಕೆ, ಹಸಿರು ಹೊರೆ ಕಾಣಿಕೆ ಮೆರವಣಿಗೆ

Posted On: 31-03-2023 08:10PM

ಕಾಪು : ಇಲ್ಲಿನ ಬಿಲ್ಲವರ ಸಹಾಯಕ ಸಂಘದಲ್ಲಿ ಮಾರ್ಚ್ 31 ರಿಂದ ಎಪ್ರಿಲ್ 2ರವರೆಗೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೂತನವಾಗಿ ನಿರ್ಮಿಸಿದ ಶಿಲಾಮಯ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಮೂರ್ತಿ ಪುನರ್ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕದ ಕಾರ್ಯಕ್ರಮಗಳು ಜರಗಲಿವೆ.

ಈ ನಿಮಿತ್ತ ಇಂದು ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದಿಂದ ಶ್ರೀ ವಿಠೋಭ ರುಕುಮಾಯಿ ದೇವರ ರಜತ ಕವಚ ಮತ್ತು ಪ್ರಭಾವಳಿ, ಶ್ರೀ ಗುರುದೇವರ ರಜತ ಪಾದುಕೆ, ಹಸಿರು ಹೊರೆ ಕಾಣಿಕೆ ಮೆರವಣಿಗೆ ಜರಗಿತು. ಕರದಾಳ ಕಲಬುರ್ಗಿಯ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಚಾಲನೆ ನೀಡಿದರು.

ಕ್ಷೇತ್ರದಲ್ಲಿ ಬೆಳಿಗ್ಗೆ ಗಂಟೆ 7:30 ರಿಂದ ಭದ್ರದೀಪ ಪ್ರಜ್ವಲನೆ, ಆಚಾರ್ಯ ವರ್ಣಕ್ರಿಯೆ, ಸ್ವಸ್ತಿ ಪುಣ್ಯಾಹ ವಾಚನ, ಗಣಹೋಮ, ಸಪ್ತಶುದ್ಧಿ, ತೋರಣ ಮುಹೂರ್ತ, ಮೂರ್ತಿ ಸಂಸ್ಕಾರ ನಡೆಯಿತು. ಸಂಜೆ ಗಂಟೆ 6ರಿಂದ ವಾಸ್ತುಹೋಮ, ವಾಸ್ತು ಬಲಿ, ರಾಕ್ಷೋಘ್ನ ಹೋಮ, ಪ್ರಸಾದ ಶುದ್ಧಿ, ಚಕ್ರಾಬ್ಜ ಮಂಡಲ ಪೂಜೆ ಜರಗಲಿವೆ.

ಕಾಪು : ಕುಂಜೂರಿನಲ್ಲಿ‌ ಭಜನಾ ಮಂಗಲೋತ್ಸವ ಸಂಪನ್ನ

Posted On: 31-03-2023 07:33PM

ಕಾಪು : ತಾಲೂಕಿನ ಕುಂಜೂರಿನ ಶ್ರೀ ದುರ್ಗಾ ಮಿತ್ರ ವೃಂದದ 15 ನೇ ವಾರ್ಷಿಕ ಭಜನಾ ಮಂಗಲೋತ್ಸವವು ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಪುನಃ ಪ್ರತಿಷ್ಠ ವರ್ಧಂತಿಯ ಸಂದರ್ಭದಲ್ಲಿ ನೆರವೇರಿತು.

ಭಜನಾಮಂಗಲೋತ್ಸವವನ್ನು‌‌ ಎರ್ಮಾಳು ನೈಮಾಡಿ ನಾರಾಯಣ ಕೆ.ಶೆಟ್ಟಿ ಅವರು‌ ಉದ್ಘಾಟಿಸಿದರು. ದೇವಳದ ಅರ್ಚಕ ವೇ.ಮೂ. ಹರಿಕೃಷ್ಣ ಉಡುಪ, ಪವಿತ್ರಪಾಣಿ ಕೆ.ಎಲ್.ಕುಂಡಂತಾಯ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಸತೀಶ ಕುಂಡಂತಾಯ,ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ತಹಾಸ ಆಚಾರ್ಯ, ದುರ್ಗಾ ಮಿತ್ರವೃಂದದ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಟೀಚರ್,ದುರ್ಗಾ ಸೇವಾ ಸಮಿತಿಯ ಕಾರ್ಯದರ್ಶಿ ಸುದರ್ಶನ ವೈ.ಎಸ್.,ದುರ್ಗಾ ಮಿತ್ರ ವೃಂದದ ಸತೀಶ ಶೆಟ್ಟಿ ಗುಡ್ಡೆಚ್ಚಿ, ರಾಕೇಶ್ ಕುಂಜೂರು, ಸುನಿಲ್ ಎಸ್.ಮುಂತಾದವರು‌ ಉಪಸ್ಥಿತರಿದ್ದರು.

ಬೆಳಗ್ಗೆ ಎಂಟೂವರೆ ಗಂಟೆಯಿಂದ ರಾತ್ರಿ‌ ಎಂಟೂವರೆ ಗಂಟೆ ಪರ್ಯಂತ ಹದಿನೈದು ಭಜನಾ ಮಂಡಳಿಗಳು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ದುರ್ಗಾ ಮಿತ್ರವೃಂದದ ಮಹಿಳಾ ಘಟಕದ ಸದಸ್ಯೆಯರಿಂದ ಕುಣಿತ ಭಜನೆ ನಡೆದು ಮಂಗಲೋತ್ಸವವು ಸಮಾಪನ‌ಗೊಂಡಿತು. ದುರ್ಗಾ ಮಿತ್ರವೃಂದದ ಬಾಲಕರು ಭಜನೆ ಹಾಗೂ ಕುಣಿತ ಭಜನೆಯಲ್ಲಿ ಭಾಗವಹಿಸಿದ್ದರು.

ದುರ್ಗಾ ಮಾತೆಯ ಸನ್ನಿಧಿಯಲ್ಲಿ ಪುನಃ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ಬೆಳಗ್ಗೆ ಧಾರ್ಮಿಕ ವಿಧಿಗಳು , ಮಧ್ಯಾಹ್ನ ಅನ್ನಸಂತರ್ಪಣೆ ,ರಾತ್ರಿ ರಂಗಪೂಜೆ ಹಾಗೂ ಬಲಿಉತ್ಸವ ನೆರವೇರಿತು.