Updated News From Kaup
ಉಡುಪಿ : ಮಕ್ಕಳ ಚಲನಚಿತ್ರ ಸ್ಕೂಲ್ ಲೀಡರ್ - ಬಾಲ ಕಲಾವಿದರ ಆಯ್ಕೆ ಪ್ರಕ್ರಿಯೆಗೆ ಚಾಲನೆ
Posted On: 01 May 2023, 12:34 PM
ಉಡುಪಿ : ಮಕ್ಕಳು ಪ್ರತಿಭಾವಂತರು. ಪಾಠ ಪ್ರವಚನದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳು ತೊಡಗಬೇಕಾಗಿದೆ. ಹಣ ಸಂಪಾದನೆಗಾಗಿ ಚಲನಚಿತ್ರವಾಗಬಾರದು ಸಮಾಜಕ್ಕೆ ಸಂದೇಶ ಕೊಡುವ ಹಿನ್ನೆಲೆಯ ಸದಭಿರುಚಿಯ ಚಿತ್ರವನ್ನು ಮಾಡಬೇಕಾಗಿದೆ. ಆಯ್ಕೆ ಇಂದು ಆಗದಿದ್ದರೂ ನಾಳೆ ಆಗುತ್ತದೆ ಎಂಬ ಭರವಸೆ ನಮ್ಮಲ್ಲಿರಬೇಕು. ಎಂದು ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಕಾರ್ಯನಿರ್ವಾಹಕ ಬಿ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಅವರು ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಶೆಟ್ಟಿ ಸಭಾ ಭವನದಲ್ಲಿ ಜರಗಿದ ಸನ್ ಮ್ಯಾಟ್ರಿಕ್ಸ್ ಅರ್ಪಿಸುವ ಫಿಲಂ ವ್ಹೀಲ್ ಸ್ಟುಡಿಯೋಸ್ ಸಹಯೋಗದೊಂದಿಗೆ ಸದ್ಯದಲ್ಲಿ ಚಿತ್ರೀಕರಣಗೊಳ್ಳಲಿರುವ ಸ್ಕೂಲ್ ಲೀಡರ್ ಚಿತ್ರದ ಬಾಲ ಕಲಾವಿದರ ಆಯ್ಕೆ ಪ್ರಕ್ರಿಯೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾಂತಾರ ಚಿತ್ರದಲ್ಲಿ ನಟಿಸಿದ ಚಂದ್ರಕಲಾ ರಾವ್ ಮಾತನಾಡಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭ ಹಾರೈಸಿದರು. ಚಿತ್ರ ನಿರ್ಮಾಪಕರಾದ ಸತ್ಯೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸುದರ್ಶನ್ ಎಸ್ ಪುತ್ತೂರು, ರೂಪದರ್ಶಿ ವಿದ್ಯಾಸರಸ್ವತಿ, ನಟಿಯರಾದ ಚಂದ್ರಕಲಾ ರಾವ್, ರಂಜಿತಾ ಶೇಟ್, ಪತ್ರಕರ್ತ ಶೇಖರ ಅಜೆಕಾರು, ಚಿತ್ರದ ನಿರ್ದೇಶಕ ರಝಾಕ್ ಪುತ್ತೂರು, ಅಕ್ಷತ್, ಮೋಹನ್ ಪಡ್ರೆ, ಮೈತ್ರಿ, ದೀಪಕ್ ಬೀರ ಉಪಸ್ಥಿತರಿದ್ದರು. ಸಾನ್ವಿ ಎಸ್ ಆಚಾರ್ಯ ಪ್ರಾರ್ಥಿಸಿದರು ರಝಾಕ್ ಪುತ್ತೂರು ಪ್ರಸ್ತಾವನೆಗೈದರು. ಪತ್ರಕರ್ತ ಪ್ರಕಾಶ್ ಸುವರ್ಣ ನಿರೂಪಿಸಿದರು. ರಂಗ ನಟ ನಾಗೇಶ್ ಕಾಮತ್ ವಂದಿಸಿದರು.
ಶ್ರೀ ದೇವಿ ಭಜನಾ ಮಂಡಳಿ ಮಂಡೇಡಿ ಇನ್ನಂಜೆ : 45ನೇ ವಾರ್ಷಿಕ ಭಜನಾ ಮಂಗಳೋತ್ಸವ ಸಂಪನ್ನ
Posted On: 30 Apr 2023, 06:04 PM
ಕಾಪು : ಶ್ರೀ ದೇವಿ ಭಜನಾ ಮಂಡಳಿ (ರಿ.) ಮಂಡೇಡಿ ಇನ್ನಂಜೆ ಇದರ 45ನೇ ವಾರ್ಷಿಕ ಭಜನಾ ಮಂಗಳೋತ್ಸವವು ಎಪ್ರಿಲ್ 28 ರಂದು ನಡೆಯಿತು. ಬೆಳಿಗ್ಗೆಯಿಂದ ಸಂಜೆಯವರೆಗೆ ಸುಮಾರು 10 ಭಜನಾ ತಂಡಗಳಿಂದ ನಿರಂತರ ಭಜನಾ ಸೇವೆ ನಡೆಯಿತು. ಮಧ್ಯಾಹ್ನ ಸತ್ಯನಾರಾಯಣ ಪೂಜೆ ಹಾಗೂ ಅನ್ನಸಂತರ್ಪಣೆ ಮತ್ತು ರಾತ್ರಿ ಘಂಟೆ 7:30ಕ್ಕೆ ಭಜನಾ ಮಂಗಳೋತ್ಸವ ಸಂಪನ್ನಗೊಂಡು, ಸ್ಥಳೀಯ ಮಕ್ಕಳಿಗೆ ನೃತ್ಯ ಕಾರ್ಯಕ್ರಮ, ಗಣ್ಯರಾದ ಕೊಡುಗೈ ದಾನಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ದಯಾನಂದ ಶೆಟ್ಟಿ ದಂಪತಿ, ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಸಹಕರಿಸುತ್ತಿರುವ ದಯಾನಂದ ವಿಠ್ಠಲ ಶೆಟ್ಟಿ ದಂಪತಿ ಹಾಗೂ ಗ್ರಾಮದ ಹಿರಿಯರಾದ ಗೋಪಾಲ ಪೂಜಾರಿ, ಜಯ ಶೆಟ್ಟಿ, ಮುದ್ದು ಮುಖಾರಿ (ಪಾತ್ರಿ)ಯವರು ನೀಡಿರುವ ಸೇವೆಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದಯಾನಂದ ಶೆಟ್ಟಿ "ಹರಿ ಕೀರ್ತನಾಶ್ರಮ" ಮಂಡೇಡಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ವಿ.ಜಿ ಶೆಟ್ಟಿ ಮಂಡೇಡಿ, ಸಮಾಜರತ್ನ ಜಿ. ಲೀಲಾಧರ ಶೆಟ್ಟಿ, ಗೌರವ ಸಲಹೆಗಾರರಾದ ಜೀವನ್ ಪ್ರಕಾಶ್ ಶೆಟ್ಟಿ, ಗೌರವಾಧ್ಯಕ್ಷರಾದ ರಮೇಶ್ ಕೆ. ಶೆಟ್ಟಿ, ಶಿವರಾಮ ಜೆ. ಶೆಟ್ಟಿ, ಕಾರ್ಯದರ್ಶಿ ಕೃಷ್ಣ ವಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಕೋಶಾಧಿಕಾರಿ ಸಂತೋಷ್ ಎಸ್.ಶೆಟ್ಟಿ, ಸಂತೋಷ್ ಎನ್. ಶೆಟ್ಟಿ ಮತ್ತು ಭಜನಾ ಮಂಡಳಿಯ ಎಲ್ಲಾ ಸದಸ್ಯರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿರ್ಮಲ್ ಕುಮಾರ್ ಹೆಗ್ಡೆ ಹಾಗೂ ರೇಷ್ಮಾ ಸಿ. ಶೆಟ್ಟಿ ನಿರ್ವಹಿಸಿದರು, ಮಂಡಳಿಯ ಅಧ್ಯಕ್ಷರಾದ ಲಕ್ಷ್ಮಣ್ ಕೆ.ಶೆಟ್ಟಿ ಸ್ವಾಗತಿಸಿ ಧನ್ಯವಾದಗೈದರು. ನಂತರ ಕಿನ್ನಿಗೋಳಿ ಕಲಾವಿದರಿಂದ ತುಳು ಹಾಸ್ಯಮಯ ನಾಟಕ "ತೊಟ್ಟಿಲು" ಪ್ರದರ್ಶನಗೊಂಡಿತು.
ಜಾತಿ ಧರ್ಮ ಇಂದಿನ ಅಗತ್ಯತೆ ಅಲ್ಲ ; ಉದ್ಯೋಗವಿಲ್ಲದೆ ಯುವ ಜನತೆ ಲಂಚದ ಪರಮಾವಧಿಯಿಂದ ಬೇಸತ್ತಿದ್ದಾರೆ : ವಿನಯ್ ಕುಮಾರ್ ಸೊರಕೆ
Posted On: 30 Apr 2023, 05:57 PM
ಕಾಪು : ಇಲ್ಲಿನ ಇಂದಿನ ಅಗತ್ಯತೆ ಜಾತಿ ಧರ್ಮ ಅಲ್ಲ. ಅತಿಯಾದ ಬೆಲೆ ಏರಿಕೆಯಿಂದ ಜನತೆ ರೋಸಿ ಹೋಗಿದ್ದಾರೆ. ಉದ್ಯೋಗವಿಲ್ಲದೆ ಯುವ ಜನತೆ ಲಂಚದ ಪರಮಾವಧಿಯಿಂದ ಬೇಸತ್ತು ಹೋಗಿದ್ದಾರೆ ಅಂತಾ ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಅವರು ಕಾಪು ಕ್ಷೇತ್ರದ ಹಿರೇಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆ ಮತಯಾಚನೆ ಸಂದರ್ಭ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಆಡಳಿತ ವಿರೋಧಿ ಅಲೆ ಜನರಲ್ಲಿ ಎದ್ದು ಕಾಣ್ತಾ ಇದೆ. ಜನತೆ ಬದಲಾವಣೆಯನ್ನು ಬಯಸಿದೆ. ಕಾಪುವಿನ ತಳಮಟ್ಟದ ಜನತೆಯಲ್ಲಿ ಇದು ಮನೆ ಮಾತಾಗಿದೆ. 40 ವರ್ಷಗಳ ಕಾಲ ರಾಜಕೀಯ ಬದುಕಿನಲ್ಲಿ ನಾನು ಬಹಳಷ್ಟನ್ನ ಅನುಭವಿಸಿದ್ದೇನೆ. ಶಾಸಕನಾಗಿ, ಪಾರ್ಲಿಮೆಂಟ್ ಸದಸ್ಯನಾಗಿ , ಮಂತ್ರಿಯಾಗಿ ದುಡಿದ ಸಂತೋಷವೂ ಇದೆ. ಅನುಭವವೂ ಇದೆ. ಇದುವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದ ನನಗೆ ಅದೇ ನನ್ನ ಮನೆ. ಈ ಬಾರಿ ನನ್ನನ್ನು ಆಯ್ಕೆಮಾಡಿ 5 ವರ್ಷ ಜನ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟರೆ ಕಾಪು ಕ್ಷೇತ್ರ ವನ್ನು ಜಗತ್ತಿನ ಭೂಪಟದಲ್ಲಿ ಗುರುತಿಸುವಷ್ಟು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಸೊರಕೆ ಅಭಿಪ್ರಾಯಪಟ್ಟರು. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ನಾರಾಯಣ ಮದಗ, ಇಸ್ಮಾಯಿಲ್, ಸುಲೇಮಾನ್, ರಮೇಶ್, ಸುರೇಖ, ಆಶಾ, ಸುಗುಣ, ರಾಜೇಶ್ವರಿ, ಕ್ರಷ್ಣ, ಆನಂದ, ಸುಧಾಕರ, ಸಂಜೀವ ಮದಗ, ಉಮ್ಮರ್ ಅಲಿ, ದಾನೇಶ್, ಶಾಹೀದ್, ಸುಹೈಬ್ ಉಪಸ್ಥಿತರಿದ್ದರು.
ಕಾಪು : ಪಕ್ಷದ ಕಾರ್ಯಕರ್ತರೊಂದಿಗೆ ಮನ್ ಕಿ ಬಾತ್ ವೀಕ್ಷಿಸಿದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ
Posted On: 30 Apr 2023, 05:49 PM
ಕಾಪು : ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರು ಕಾಪು ವಿಧಾನಸಭಾ ಕ್ಷೇತ್ರ 80 ಬಡಗಬೆಟ್ಟು ಪಂಚಾಯತ್ ವ್ಯಾಪ್ತಿಯ ಬೂತ್ ಸಂಖ್ಯೆ 36ರ ಬೂತ್ ಅಧ್ಯಕ್ಷರಾದ ಸಂದೀಪ್ ಮರಾಠೆ ಅವರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕರ್ತರೊಂದಿಗೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ವ್ಯಾಪ್ತಿಯ ಪಕ್ಷದ ಪ್ರಮುಖರು, ಗ್ರಾಮ ಪಂಚಾಯತ್ ಸದಸ್ಯರು, ಉಪಸ್ಥಿತರಿದ್ದರು.
ಕಾಪು : ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರಿಂದ ಉಪಕಾರ ಮಾತ್ರ ಆಗುವುದು, ಅಪಕಾರವಾಗದು - ಪ್ರಮೋದ್ ಮಧ್ವರಾಜ್
Posted On: 30 Apr 2023, 05:31 PM
ಕಾಪು : ಬಿಜೆಪಿಯಲ್ಲಿ ಸಂಸ್ಕಾರ ಗುಣವಿದೆ. ಹಾಗಾಗಿ ಬಂಡಾಯವೆನ್ನುವುದು ಕಡಿಮೆ. ಶಾಸಕ ಲಾಲಾಜಿಯವರ ಸಾಧುತನ ಗುಣವೇ ಅವರಿಗೆ ಭೂಷಣ. ಅವರ ಅವಧಿಯ ಕೆಲಸ ಕಾರ್ಯಗಳು ಶ್ಲಾಘನೀಯ. ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರಿಂದ ಉಪಕಾರ ಮಾತ್ರ ಆಗುವುದು. ಅಪಕಾರವಾಗದು. ಎಲ್ಲರನ್ನು ಸಮಾನವಾಗಿ ನೋಡುವ ವ್ಯಕ್ತಿ ಎಂದು ಬಿಜೆಪಿ ಪಕ್ಷದ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಭಾನುವಾರ ಕಾಪುವಿನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೀನುಗಾರರ ಹಿತ ಕಾಪಾಡುವ ಪಕ್ಷ ಬಿಜೆಪಿಯಾಗಿದೆ ಎಂದರು. ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದೆ ಎಂದರು. ಬಿಜೆಪಿ ಪಕ್ಷದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಎಲ್ಲಾ ಕಡೆ ಬಿಜೆಪಿಗೆ ಪೂರಕ ವಾತಾವರಣವಿದೆ. ಈ ಬಾರಿ ಬಹುಮತದಿಂದ ಕ್ಷೇತ್ರದ ನಾಗರಿಕರು ಗೆಲ್ಲಿಸುವರೆಂಬ ನಿರೀಕ್ಷೆಯಿದೆ ಎಂದರು. ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ ಬಿಜೆಪಿ ಅಭ್ಯರ್ಥಿ ಪರ ಪಕ್ಷದ ಕಾರ್ಯಕರ್ತರಿಂದ ಬಿರುಸಿನ ಪ್ರಚಾರ ನಡೆಯುತ್ತಿದೆ. ಬಿಜೆಪಿ ಸರಕಾರದ ಕಾರ್ಯ ವೈಖರಿಯ ಜೊತೆಗೆ ಗುರ್ಮೆ ಸುರೇಶ್ ಶೆಟ್ಟಿಯವರ ಸಮಾಜಸೇವೆಯೂ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂದರು. ಈ ಸಂದರ್ಭ ಪಕ್ಷದ ಪ್ರಮುಖರಾದ ಶ್ರೀಕಾಂತ್ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಿರಣ್ ಆಳ್ವ, ಗೋಪಾಲಕೃಷ್ಣ ರಾವ್, ಶರಣ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಬಿಜೆಪಿ ಹೈನುಗಾರರಿಗೆ ದ್ರೋಹವೆಸಗುತ್ತಿದೆ ; ಹೈನುಗಾರರ ರಕ್ಷಣೆಗೆ ಕಾಂಗ್ರೆಸ್ ಬದ್ಧ - ದೇವಿಪ್ರಸಾದ್ ಶೆಟ್ಟಿ
Posted On: 30 Apr 2023, 11:51 AM
ಕಾಪು : ಕೇಂದ್ರ ಸರಕಾರದಿಂದ ರಾಷ್ಟ್ರೀಕೃತ ಬ್ಯಾಂಕುಗಳ ಸಹಿತ ಎಲ್ಲಾ ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಇದೀಗ ಕೆಎಂಎಫ್ ನ್ನು ಖಾಸಗೀಕರಣ ಮಾಡಲು ಯತ್ನಿಸಲಾಗುತ್ತಿದೆ. ಗುಜರಾತ್ ಮೂಲದ ಅಮೂಲ್ ಸಂಸ್ಥೆಯವರಿಗೆ ಕೆಎಂಎಫ್ ನ್ನು ಗುತ್ತಿಗೆ ನೀಡುವ ಮಾತುಕತೆಯಾಗಿದೆ ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ದೇವಿಪ್ರಸಾದ್ ಶೆಟ್ಟಿ ಹೇಳಿದರು. ಅವರು ಆದಿತ್ಯವಾರ ಕಾಪುವಿನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಕಳೆದ 2 ದಿನಗಳಿಂದ ಹಾಲು ಒಕ್ಕೂಟದ ಪ್ರಾಥಮಿಕ ಸಂಘಗಳಿಂದ ನಮಗೆ ದೂರು ಬಂದಿದ್ದು ಅದರ ಪ್ರಕಾರ ಹೈನುಗಾರರ ಹಾಲಿಗೆ ಡಿಗ್ರಿ, ಫ್ಯಾಟ್ ಇಲ್ಲ ಎಂಬ ಸಬೂಬು ನೀಡಿ ಹಾಲನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಇದರಿಂದ ಹೈನುಗಾರಿಕೆಯನ್ನು ನಂಬಿದ ಕುಟುಂಬಗಳಿಗೆ ತೊಂದರೆಯಾಗಿದೆ. ಅಮೂಲ್ ನ್ನು ಮಾರುಕಟ್ಟೆಗೆ ಪರಿಚಯಿಸಬೇಕೆನ್ನುವ ಹುನ್ನಾರದ ಹಿಂದೆ ಅಮಿತ್ ಶಾ ಮತ್ತು ಬಿಜೆಪಿ ಪಕ್ಷದ ಕುತಂತ್ರವಿದೆ. ರೈತರ ಜೀವನಾಡಿಯಾಗಿರುವ ಹೈನುಗಾರಿಕೆಗೆ ದ್ರೋಹವೆಸಗುತ್ತಿದ್ದಾರೆ. ಇದನ್ನು ಮುಂದುವರಿಸಿದರೆ ಚುನಾವಣಾ ಪೂರ್ವದಲ್ಲಿಯೇ ಕೆಎಂಎಫ್ ಗೆ ದೊಡ್ಡಮಟ್ಟದಲ್ಲಿ ಮುತ್ತಿಗೆ ಹಾಕಿ ರೈತರ ರಕ್ಷಣೆಗೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ಇಂದಿನಿಂದ ರೈತರ ಹಾಲನ್ನು ಹಿಂದಕ್ಕೆ ಕಳುಹಿಸಬಾರದು. ರೈತರ ಜೀವನಕ್ಕೆ ತೊಂದರೆ ಮಾಡಿದರೆ ಕಾಂಗ್ರೆಸ್ ರೈತರ ಪರವಾಗಿದ್ದೇವೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಅಮೂಲನ್ನು ಈ ರಾಜ್ಯದಿಂದ ಒದ್ದೋಡಿಸುತ್ತೇವೆ. ಹಾಲಿಗೆ ಬೆಂಬಲ ಬೆಲೆಯನ್ನು ನೀಡುತ್ತೇವೆ ಎಂದು ಹೇಳಿದರು. ಈ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಕಾಪು : ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯಿಂದ ಕಾಪು ಕ್ಷೇತ್ರದ ಅಭಿವೃದ್ಧಿ ಯೋಜನೆಯ ಚುನಾವಣಾ ಪ್ರಣಾಳಿಕೆ ಬಿಡುಗಡೆ
Posted On: 30 Apr 2023, 11:04 AM
ಕಾಪು : ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾಪು ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ನಮ್ಮ ಕನಸಿನ ಕಾಪು ಪ್ರಣಾಳಿಕೆಯ ಮೂಲಕ ಸುಂದರ ಕಾಪು ಸ್ವಚ್ಛ ಕಾಪು ಪರಿಕಲ್ಪನೆಯಲ್ಲಿ ಕಾಪು ಕ್ಷೇತ್ರದ ನಾಗರಿಕರಿಗೆ ಎಲ್ಲಾ ಸೌಲಭ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಇಂದು ಕಾಪು ರಾಜೀವ ಭವನದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ, ಹೆಜಮಾಡಿಯಿಂದ ಕುಕ್ಕೆಹಳ್ಳಿಯವರೆಗೆ ಈ ಯೋಜನೆ ಜಾರಿಗೊಳಿಸಲಿದ್ದೇವೆ. ಬಡವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಬಾಕಿ ಇದೆ ಹಾಗಾಗಿ ಮನೆರಹಿತರಿಗೆ ಮನೆ ನಿರ್ಮಾಣ, ವಿಜ್ಞಾನ ಕೇಂದ್ರ , ಸರಕಾರಿ ಇಂಜಿನಿಯರಿಂಗ್ ಕಾಲೇಜ್, ಜೊತೆಗೆ ಜಿಲ್ಲಾ ಮಟ್ಟದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯ ಗುರಿ, ಪ್ರವಾಸೋದ್ಯಮಕ್ಕೂ ಒತ್ತು ನೀಡಲಿದ್ದೇವೆ. ಮನೆ ಮನೆಗೆ ಶುದ್ಧ ಕುಡಿಯುವ ನೀರಿಗಾಗಿ ಶುದ್ಧ ಗಂಗಾ ಯೋಜನೆ, ಕೌಶಲ್ಯಾಭಿವೃದ್ಧಿ ಕೇಂದ್ರ, ಯುವಕರಿಗೆ ಉದ್ಯೋಗ ಮತ್ತು ಉದ್ದಿಮೆ, ಅತ್ಯಾಧುನಿಕ ತಂತ್ರಜ್ಞಾನದ ಕಸವಿಲೇವಾರಿ ಘಟಕ ಸ್ಥಾಪನೆ, ಬಹುಮಹಡಿ ವಸತಿ ಯೋಜನೆ, ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ , ಆರೋಗ್ಯಕ್ಕೆ ಒತ್ತು ನೀಡುವ ದಿಸೆಯಲ್ಲಿ ಕಾಪು ಪುರಸಭಾ ವ್ಯಾಪ್ತಿಯಲ್ಲಿ 100 ಬೆಡ್ ಆಸ್ಪತ್ರೆ ನಿರ್ಮಾಣ, ಈಜುಕೊಳ ನಿರ್ಮಾಣ, ರೈತ ಸಂಜೀವಿನಿ ಯೋಜನೆ, ಸಮುದಾಯ ಭವನಗಳ ನಿರ್ಮಾಣ, ಸರ್ವ ಧರ್ಮದ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ, ದಲಿತ ಶ್ರೇಯಾಭಿವೃದ್ಧಿ ಯೋಜನೆ, ಸಿ ಆರ್ ಝಡ್ ನಿಯಮ ಸಡಿಲಿಕೆ, ಸುಸಜ್ಜಿತ ಬಸ್ಸು ತಂಗುದಾಣ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದರು. ಈ ಸಂದರ್ಭ ಕಾಪು ಬ್ಲಾಕ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಕಾಂಗ್ರೆಸ್ ಮುಖಂಡರಾದ ದೇವಿಪ್ರಸಾದ್ ಶೆಟ್ಟಿ, ಮಾಧವ ಪಾಲನ್, ಶರ್ಫುದ್ಧೀನ್ ಮತ್ತಿತರರು ಉಪಸ್ಥಿತರಿದ್ದರು.
ನನ್ನ ಶಾಸಕತ್ವದ ಅವಧಿಯಲ್ಲಿ ಕಾಪುವಿನಲ್ಲಿ ಅಭಿವೃದ್ಧಿಯ ಮೈಲಿಗಲ್ಲನ್ನೇ ಸ್ಥಾಪಿಸಿದ್ದೇನೆ : ವಿನಯ್ ಕುಮಾರ್ ಸೊರಕೆ
Posted On: 29 Apr 2023, 05:06 PM
ಕಾಪು : ನನ್ನ ಶಾಸಕತ್ವದ ಅವಧಿಯಲ್ಲಿ ಕಾಪುವಿನಲ್ಲಿ ಅಭಿವೃದ್ಧಿಯ ಮೈಲಿಗಲ್ಲನ್ನೇ ಸ್ಥಾಪಿಸಿದ್ದೇನೆ. ಆದರೂ ನನ್ನನ್ನು ಕಳೆದ ಬಾರಿ ಸೋಲಿಸಿದ್ದೀರಿ. ಈ ಬಾರಿಯಾದರೂ ಕಾಪು ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ಅಭಿವೃದ್ಧಿಗೆ ಬೆಲೆ ಇದೆ ಅಂತಾ ಸಾಬೀತು ಮಾಡೋ ಕೆಲಸವನ್ನು ಮತದಾರರು ಮಾಡಲೇಬೇಕಿದೆ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದರು. ಅವರು ಉದ್ಯಾವರ ಬಿಲ್ಲವ ಮಹಾಮಂಡಲದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಹಿರಿಯರ ಆಶೀರ್ವಾದ ಪಡೆದು ಮಾತನಾಡಿದರು. ಈ ಬಾರಿ ಕಾಪು ಕ್ಷೇತ್ರ ಪ್ರಾಮಾಣಿಕತೆ, ಅಭಿವೃದ್ಧಿ ಮತ್ತು ಹಣದ ಹೊಳೆಯ ನಡುವಿನ ಚುನಾವಣೆಯಾಗಿ ಮಾರ್ಪಟ್ಟಿದೆ. ಕಾಪುವಿನ ಮತದಾರರು ಬಹಳಷ್ಟು ಪ್ರಬುದ್ಧರಿದ್ದಾರೆ. ಈ ಬಾರಿ ಪ್ರಾಮಾಣಿಕತೆ ಮತ್ತು ಅಭಿವೃದ್ಧಿಗೆ ಮತ ಹಾಕುತ್ತಾರೆ ಅನ್ನೋ ನಂಬಿಕೆ ನನಗಿದೆ. ಸೋತ ಮೇಲೂ ಐದು ವರ್ಷಗಳ ಜನರ ನಡುವೆ ಇದ್ದು ಜನತೆಯ ಎಲ್ಲಾ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆ. ನಾರಾಯಣಗುರುಗಳ ವಿಚಾರದಲ್ಲಿ ಜಿಲ್ಲೆಯಾದ್ಯಂತ ಬಹಳಷ್ಟು ಹೋರಾಟ ಸಂಘಟಿಸಿದ್ದೇನೆ. ನಾರಾಯಣಗುರುಗಳ ಸ್ತಬ್ಧ ಚಿತ್ರದ ವಿಚಾರದಲ್ಲಿ, ಪಠ್ಯ ಪುಸ್ತಕದ ವಿಚಾರದಲ್ಲಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ಬಿಲ್ಲವ ಮುಖಂಡರ ಜೊತೆ ಇದ್ದು ಹೋರಾಟವನ್ನು ಸಂಘಟಿಸಿದ್ದೇನೆ. ಈ ಬಾರಿ ನನ್ನ ಕೊನೆಯಚುನಾವಣೆ. ನನ್ನನ್ನು ಗೆಲ್ಲಿಸಿ ಜನತೆಯ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡುತ್ತೀರಿ ಅನ್ನೊ ನಂಬಿಕೆ ಇದೆ ಅಂತ ಸೊರಕೆ ಹೇಳಿದರು. ಒಂದು ವೇಳೆ ಗೆದ್ದು ಬಂದಲ್ಲಿ ಸಮಾಜದ ಎಲ್ಲಾ ವರ್ಗದವರ ಪರ ನಿಂತು ಸಮಾನತೆಯಿಂದ ಕೆಲಸ ಮಾಡುತ್ತೇನೆ ಎಂಬ ವಾಗ್ದಾನ ಮಾಡುತ್ತೇನೆ ಎಂದು ಸೊರಕೆ ಹೇಳಿದರು. ಈ ಸಂದರ್ಭ ಉದ್ಯಾವರ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸತೀಶ್ ಕೋಟ್ಯಾನ್, ಕಾರ್ಯದರ್ಶಿ ಆನಂದ ಉದ್ಯಾವರ, ಯುವ ಜನ ಕಲಾಮಂಡಳಿ ಅಧ್ಯಕ್ಷ ಶಿವರಾಮ ಗುರಿಕಾರರರು, ಬಿಲ್ಲವ ಮಖಂಡರು , ಮಹಿಳಾ ಘಟಕದ ಎಲ್ಲಾ ಮುಖಂಡರು , ಕಾಂಗ್ರೆಸ್ ಮುಖಂಡರಾದ ಉದ್ಯಾವರ ನಾಗೇಶ್ ಕುಮಾರ್, ಗಿರೀಶ್ ಕುಮಾರ್, ರಾಯಸ್ ಫೆರ್ನಾಂಡೀಸ್, ಅಬೀದ್ ಅಲಿ, ಶೇಖರ ಕೋಟ್ಯಾನ್, ಸಾಯಿನಾಥ್, ನಿತೀನ್ ಸಾಲ್ಯಾನ್, ಸೊಹೇಲ್ ರಹಮತುಲ್ಲಾ, ಭಾಸ್ಕರ ಕೋಟ್ಯಾನ್, ಸಚಿನ್, ರಿಯಾಝ್ ಪಳ್ಳಿ, ಮೇರಿ ಡಿಸೋಜ, ಪೂರ್ಣಿಮಾ, ಆಶಾ, ಹೆಲೆನ್ ಫೆರ್ನಾಂಡೀಸ್, ದಿವಾಕರ ಬೊಳ್ಜೆ, ಸರೋಜ, ಗಿರೀಶ್ ಗುಡ್ಡೆಯಂಗಡಿ, ಮೀರಾ, ದಯಾನಂದ, ನಯಾಝ್ ಪಳ್ಳಿ, ಅನ್ಸರ್, ಆಶಾ ಸುರೇಶ್, ಸತೀಶ್ ಉಪಸ್ಥಿತರಿದ್ದರು.
ಕಟಪಾಡಿ : ಬಿಜೆಪಿ ಪಕ್ಷವು ವೋಟ್ ಬ್ಯಾಂಕ್ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ - ಕೇಂದ್ರ ಗೃಹ ಮಂತ್ರಿ ಅಮಿತ್ ಶಾ
Posted On: 29 Apr 2023, 04:54 PM
ಕಟಪಾಡಿ : ಕಾಂಗ್ರೆಸ್ ಪಕ್ಷವು ದೇಶದ ಸುರಕ್ಷತೆಯನ್ನು ವೋಟ್ ಬ್ಯಾಂಕ್ ರಾಜಕೀಯದ ಮೂಲಕ ಆಟವಾಡಿಸುತ್ತಿದೆ. ಬಿಜೆಪಿ ಪಕ್ಷವು ವೋಟ್ ಬ್ಯಾಂಕ್ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ. ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲಾತಿ ಮತ್ತೆ ತರುತ್ತಾರೆ. ಬಿಜೆಪಿ ಯಾವತ್ತೂ ತರುವುದಿಲ್ಲ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದು ಬಿಜೆಪಿ ಅಭ್ಯರ್ಥಿ ಮತ ಪ್ರಚಾರದ ಅಂಗವಾಗಿ ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನದಲ್ಲಿ ಜರಗಿದ ಬಹಿರಂಗ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಪಿ ಎಫ್ ಐ ಬ್ಯಾನ್ ಮಾಡಿದ ಕೀರ್ತಿ ಬಿಜೆಪಿಗೆ ಇದೆ. ದಕ್ಷಿಣ ಭಾರತವನ್ನು ಸುರಕ್ಷಿತವಾಗಿಸಿದ್ದೇವೆ. ಈ ಸಂದರ್ಭ ಮಾಜಿ ಸಚಿವ ವಿ.ಎಸ್ ಆಚಾರ್ಯ ರನ್ನು ಸ್ಮರಿಸಿದರು. ಕಟಪಾಡಿ ಬೂತ್ ನ ಅಧ್ಯಕ್ಷರಾದ ಶ್ರೀಧರ ಪೂಜಾರಿ ಅಮಿತ್ ಷಾ ರನ್ನು ವೇದಿಕೆಗೆ ಬರಮಾಡಿಕೊಂಡರು. ಬಿಜೆಪಿ ಜಿಲ್ಲಾ ಸಮಿತಿಯ ಪರವಾಗಿ ನಾರಾಯಣಗುರುಗಳ ಮೂರ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಚುನಾವಣಾ ಪ್ರಭಾರಿ ವಿಜೇಂದ್ರ ಗುಪ್ತ, ಶಾಸಕರಾದ ಲಾಲಾಜಿ ಆರ್ ಮೆಂಡನ್, ರಘುಪತಿ ಭಟ್, ಬಿಜೆಪಿ ಅಭ್ಯರ್ಥಿಗಳಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಪ್ರಮೋದ್ ಮಧ್ವರಾಜ್, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ ಸುವರ್ಣ, ದಿನಕರ ಬಾಬು, ಶ್ರೀಶ ನಾಯಕ್, ವೀಣಾ ಎಸ್ ಶೆಟ್ಟಿ, ಸುರೇಂದ್ರ ಪಣಿಯೂರು, ಸುಲೋಚನಾ ಭಟ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನಯನ ಗಣೇಶ್, ಉದಯ ಕುಮಾರ್ ಶೆಟ್ಟಿ, ನವೀನ್ ಕುತ್ಯಾರು, ಪ್ರತಾಪ್ ಸಿಂಹ ಮತ್ತಿತರರು ಉಪಸ್ಥಿತರಿದ್ದರು.
ಇಂದು ಕಟಪಾಡಿಗೆ ಅಮಿತ್ ಷಾ : ಬಹಿರಂಗ ಸಾರ್ವಜನಿಕ ಸಭೆ
Posted On: 29 Apr 2023, 12:41 PM
ಕಟಪಾಡಿ : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದು ಬಿಜೆಪಿ ಅಭ್ಯರ್ಥಿ ಮತ ಪ್ರಚಾರದ ಅಂಗವಾಗಿ ಮಧ್ಯಾಹ್ನ 2ಕ್ಕೆ ಉಡುಪಿಯಿಂದ ನೇರವಾಗಿ ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನದಲ್ಲಿ ಜರಗುವ ಬಹಿರಂಗ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮಿತ್ ಶಾ ಬರುವಿಕೆಯ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ.
