Updated News From Kaup
ಕಾಪು : ಗೆಲುವಿನ ಸಂಭ್ರಮಾಚರಣೆ - ನೂತನ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರಿಂದ ರೋಡ್ ಶೋ
Posted On: 20 May 2023, 05:56 PM
ಕಾಪು : ನೂತನ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿಯವರ ರೋಡ್ ಶೋ ಕಾರ್ಯಕ್ರಮ ಶನಿವಾರದಂದು ಬಿಜೆಪಿ ಪಕ್ಷದ ಪ್ರಮುಖರ ಉಪಸ್ಥಿತಿಯಲ್ಲಿ ಬೆಳಿಗ್ಗೆ ಪಡುಕೆರೆಯಿಂದ ಆರಂಭವಾಯಿತು. ತದನಂತರ ಉದ್ಯಾವರ, ಕಟಪಾಡಿ, ಶಿರ್ವ, ಮುದರಂಗಡಿ, ಅಡ್ಡೆ, ಪಲಿಮಾರು, ನಂದಿಕೂರು, ಪಡುಬಿದ್ರಿ, ಹೆಜಮಾಡಿ, ಎರ್ಮಾಳು, ಅದಮಾರು, ಕಾಪು ಹೀಗೆ ಕ್ಷೇತ್ರದೆಲ್ಲೆಡೆ ಸಾಗಿ ಈ ದಿನದ ರೋಡ್ ಶೋ ಶಿರ್ವ ವ್ಯಾಪ್ತಿಯ ಕುಶಲ ಶೇಖರ ಶೆಟ್ಟಿ ಸಭಾಂಗಣದಲ್ಲಿ ಸಮಾಪನಗೊಳ್ಳಲಿದೆ. ನೂತನ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕ ಲಾಲಾಜಿ ಆರ್, ಮೆಂಡನ್, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಜಿ.ಪಂ. ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ ಪೂಜಾರಿ, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷ ಪಾಂಡುರಂಗ ಕರ್ಕೇರ, ಪ್ರಾಣೇಶ್ ಹೆಜಮಾಡಿ, ಶರಣ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಪೇಟೆಯಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ
Posted On: 20 May 2023, 05:24 PM
ಕಾಪು : ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಮತ್ತು ಇತರರ ಪ್ರಮಾಣವಚನ ಸ್ವೀಕಾರದ ನೇರ ಪ್ರಸಾರದ ವೀಕ್ಷಣೆಯ ಅವಕಾಶವನ್ನು ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವತಿಯಿಂದ ಕಾಪು ಪೇಟೆಯಲ್ಲಿ ಆಯೋಜಿಸಲಾಗಿತ್ತು. ಪಕ್ಷದ ಮುಖಂಡರು, ಕಾರ್ಯಕರ್ತರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರದ ಸಂದರ್ಭ ಜೈಕಾರ ಹಾಕಿದರು. ಇದೇ ಸಂದರ್ಭ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಪದಗ್ರಹಣ ಸಮಾರಂಭದ ಸಂಭ್ರಮಾಚರಣೆ ಮಾಡಿದರು.
ಮೇ 20-21 : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ರೋಡ್ ಶೋ
Posted On: 19 May 2023, 09:41 PM
ಕಾಪು : ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿಯವರ ರೋಡ್ ಶೋ ಮೇ 20, ಶನಿವಾರ ಮತ್ತು ಮೇ 21, ಭಾನುವಾರ ಜರಗಲಿದೆ. ವಿವರಗಳು : ಮೇ 20 ಶನಿವಾರದಂದು ಬೆಳಿಗ್ಗೆ ಗಂಟೆ 9.30 ಪಡುಕೆರೆ, 10 ಗಂಟೆಗೆ ಕೋಟೆ, 10.15 ಕಟಪಾಡಿ, 10.45 ಉದ್ಯಾವರ ಸಂಪಿಗೆನಗರ, 11.15 ಕಟಪಾಡಿ, 11.30 ಕುರ್ಕಾಲು, 12.00 ಬಂಟಕಲ್ಲು, 12.15 ಶಿರ್ವ, 12.45 ಕುತ್ಯಾರು, 1ಗಂಟೆಗೆ ಮುದರಂಗಡಿ, 1.30 ಪಲಿಮಾರಿನಲ್ಲಿ ನಡೆಯಲಿದೆ. ವಿರಾಮದ ಬಳಿಕ ಮಧ್ಯಾಹ್ನ 2.30 ಕ್ಕೆ ಪಲಿಮಾರು, 3 ಗಂಟೆಗೆ ಪಡುಬಿದ್ರಿ, 3.15 ಹೆಜಮಾಡಿ, 3.30 ಪಡುಬಿದ್ರಿ 3.45 ತೆಂಕ, 4 ಅದಮಾರು, 4.15 ಬೆಳಪು, 4.30 ಎಲ್ಲೂರು ಪಣಿಯೂರು, 4.45 ಉಚ್ಚಿಲ, ಸಂಜೆ 5 ಮುಳೂರು ಫಿಶರೀಸ್ ರಸ್ತೆ, 5.15 ದೀಪಸ್ತoಭ, 5.45 ಕೈಪುಂಜಾಲು, 6ಕ್ಕೆ ಕೋತಲ್ ಕಟ್ಟೆ, ಕಾಪು ಪೇಟೆ, 6.15 ಕೊಂಬಗುಡ್ಡೆ, 6.30 ಮಜೂರು, 7 ಗಂಟೆಗೆ ಕಳತ್ತೂರು ತದನಂತರ ಕುಶಲ ಶೇಖರ ಶೆಟ್ಟಿ ಸಭಾಂಗಣದಲ್ಲಿ ಸಮಾರೋಪ ಮತ್ತು ಭೋಜನದ ವ್ಯವಸ್ಥೆ ಇರಲಿದೆ. ಎರಡನೇ ದಿನವಾದ ಮೇ 21, ಭಾನುವಾರ ಬೆಳಿಗ್ಗೆ ಗಂಟೆ 9.30 ಬೆಳ್ಳಂಪಳ್ಳಿ ಕುಕ್ಕೆಹಳ್ಳಿ, 9.45 ಕುಕ್ಕೆಹಳ್ಳಿ, 10 ಬಜೆ ರಸ್ತೆ, 10.15 ಬುಕ್ಕಿಗುಡ್ಡೆ, 10.30 ಪೆರ್ಡೂರು, 10.45 ಭೈರಂಪಳ್ಳಿ, 11 ಪಂಚನಬೆಟ್ಟು ರಸ್ತೆ, 11.30 ಮುತ್ತೂರು ರಸ್ತೆ, 12.00 ಕಾಜರಗುತ್ತು, 12.15 ಕೊಡಿಬೆಟ್ಟು, ಓಂತಿಬೆಟ್ಟು ಜಂಕ್ಷನ್, 12.30 ಹಿರಿಯಡ್ಕ, 12.45 ಪುತ್ತಿಗೆ, ಮಧ್ಯಾಹ್ನ 1ಕ್ಕೆ ಹಿರಿಯಡ್ಕದಲ್ಲಿ ಸಭಾ ಕಾರ್ಯಕ್ರಮ ಭೋಜನದ ವಿರಾಮ ತದನಂತರ 2.15 ಮಟ್ಟಾರು, 3 ನಾಲ್ಕುಬೀದಿ, 3.15 ಬೆಳ್ಳೆ, 3.30 ನೆಲ್ಲಿಕಟ್ಟೆ ಕೊಡಂಗಳ, 4 ಕರ್ವಾಲು ನೆಹರೂನಗರ, 4.15 ನೈಲಪಾದೆ ಕುಂತಳನಗರ, 4.30 ದೆಂದೂರುಕಟ್ಟೆ, 4.45 ಅಲೆವೂರು, 5 ಕೆಮ್ತೂರು ರಸ್ತೆ ಕೊರಂಗ್ರಪಾಡಿ, 5.15ಅಲೆವೂರು ಮಣಿಪಾಲ ರಸ್ತೆ, 5.30 ದಶರಥ ನಗರ, 5.45 ಪರ್ಕಳ, 6 ಆತ್ರಾಡಿ, 6.15 ಪರೀಕ, 6.39 ನೆಲ್ಲಿಕಟ್ಟೆ, 7ಗಂಟೆಗೆ ಸಮಾರೋಪ, ಸಭಾಕಾರ್ಯಕ್ರಮ ಮತ್ತು ಭೋಜನದೊಂದಿಗೆ ಮುಕ್ತಾಯವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರ್ವ : ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ದೃಷ್ಟಿಹೀನರಿಗೆ ಸಹಾಯಕವಾಗುವ ಯಂತ್ರದ ಅಭಿವೃದ್ಧಿ
Posted On: 19 May 2023, 08:28 PM
ಶಿರ್ವ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಶ್ರೇಯ ಉಡುಪ, ಸ್ನೇಹ ಜೆ ಎಸ್, ತುಳಸಿ ಡಿ ಜೆ ಮತ್ತು ಯಶವಂತ ನಾಯಕ್ ಇವರು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕರಾದ ಚೇತನ್ ಇವರ ಮಾರ್ಗದರ್ಶನದಲ್ಲಿ “ರೋಬೋಟ್ ಅಸಿಸ್ಟೆನ್ಸ್ ಫಾರ್ ವಿಷುವಲೀ ಇಂಪೇರ್ಡ್” ಎಂಬ ಪ್ರಾಜೆಕ್ಟ್ನ್ನು ಅಭಿವೃದ್ಧಿ ಪಡಿಸಿರುತ್ತಾರೆ. ಈ ಪ್ರಾಜೆಕ್ಟ್ಗೆ ಕರ್ನಾಟಕ ಸರಕಾರದ ವೈಜ್ಞಾನಿಕ ಮತ್ತು ತಂತ್ರಜ್ಞಾನ ಮಂಡಳಿಯಿಂದ (KSCST) ಆರ್ಥಿಕ ನೆರವು ದೊರೆತಿದೆ. ಕಣ್ಣುಗಳು ಮಾನವನ ಅತ್ಯಮೂಲ್ಯವಾದ ಅಂಗ. ದೃಷ್ಟಿಯನ್ನು ಕಳೆದುಕೊಂಡವರು ತಮ್ಮ ದಿನನಿತ್ಯದ ಚಟುವಟಿಕೆಯನ್ನು ನಡೆಸಲು ಬಹಳಷ್ಟು ಕಷ್ಟಪಡುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸಲು ವಿದ್ಯಾರ್ಥಿಗಳು ಈ ಪ್ರಾಜೆಕ್ಟ್ನ್ನು ಅಭಿವೃದ್ಧಿಪಡಿಸಿದ್ದಾರೆ. ಈ ರೋಬೋಟ್ ಮೂಲಕ ದೃಷ್ಟಿಯನ್ನು ಕಳೆದುಕೊಂಡವರು ತಮ್ಮ ದಿನನಿತ್ಯದ ಚಟುವಟಿಕೆಗಳಿಗೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು, ವಸ್ತುಗಳನ್ನು ಗುರುತಿಸಲು ಸಹಾಯಕವಾಗಿದೆ, ಈ ರೋಬೋಟ್ ಧ್ವನಿ ಪ್ರಕ್ರಿಯೆಯನ್ನು ಒಳಗೊಂಡಿದ್ದು ಇದರ ಮೂಲಕ ದೃಷ್ಟಿಯನ್ನು ಕಳೆದುಕೊಂಡವರು ತಮ್ಮ ಕೆಲಸ ಕಾರ್ಯವನ್ನು ನಿರ್ವಹಿಸುತ್ತಾರೆ. ವಿದ್ಯಾರ್ಥಿಗಳ ಈ ಯೋಜನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥರು ಅಭಿನಂದಿಸಿರುತ್ತಾರೆ.
ಮೇ 20 ಮತ್ತು 21 : ಉಡುಪಿ ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆ ಬರೆಯಲಿದ್ದಾರೆ 5712 ವಿದ್ಯಾರ್ಥಿಗಳು
Posted On: 19 May 2023, 08:10 PM
ಉಡುಪಿ : ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗಳು ಮೇ 20 ಮತ್ತು 21 ರಂದು ನಡೆಯಲಿದ್ದು, ಇದಕ್ಕಾಗಿ ಉಡುಪಿಯಲ್ಲಿ 6, ಕಾರ್ಕಳದಲ್ಲಿ 2, ಕುಂದಾಪುರದಲ್ಲಿ 2 ಹಾಗೂ ಬ್ರಹ್ಮಾವರದಲ್ಲಿ 2 ಸೇರಿದಂತೆ ಒಟ್ಟು 12 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 5712 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ (ಪ್ರಭಾರ) ಪ್ರಸನ್ನ ಹೆಚ್ ತಿಳಿಸಿದರು. ಅವರು ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ, 2023 ನೇ ಸಾಲಿನ ಸಿಇಟಿ ಪರೀಕ್ಷೆ ಮತ್ತು ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆ ನಡೆಸುವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿಇಟಿ ಪರೀಕ್ಷೆ ಕುರಿತು ಪ್ರಶ್ನೆಪತ್ರಿಕೆಯನ್ನು ಜಿಲ್ಲಾ ಖಜಾನೆಯಲ್ಲಿ ಸೂಕ್ತ ಪೊಲೀಸ್ ಭದ್ರತೆಯಲ್ಲಿ ಇಡುವಂತೆ ತಿಳಿಸಿದ ಅವರು, ಖಜಾನೆಯಲ್ಲಿ ಸಿಸಿಟಿವಿ ವ್ಯವಸ್ಥೆ ಅಳವಡಿಸುವಂತೆ ಹಾಗೂ ಪ್ರಶ್ನೆ ಪತ್ರಿಕೆ ವಿತರಣೆಗೆ ನೇಮಿಸಿರುವ ತಾಲೂಕುಗಳ ತಹಶೀಲ್ದಾರ್ಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಪ್ರಾಂಶುಪಾಲರನ್ನು ಒಳಗೊಂಡ ತ್ರಿಸದಸ್ಯ ಸಮಿತಿ ಸದಸ್ಯರ ತಂಡಗಳು ಪೊಲೀಸ್ ಭದ್ರತೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ನಿಗಧಿತ ಸಮಯಕ್ಕೆ ಸರಿಯಾಗಿ ತಲುಪಿಸುವಂತೆ ಸೂಚನೆ ನೀಡಿದರು. ಪ್ರತೀ ಪರೀಕ್ಷಾ ಕೇಂದ್ರಕ್ಕೆ ವೀಕ್ಷಕರನ್ನು ಹಾಗೂ ಎಲ್ಲಾ ಪರೀಕ್ಷಾ ಕೇಂದ್ರಗಳ ಕೊಠಡಿಗಳಿಗೆ ಸಿಸಿ ಕೆಮರಾ ಗಳ ಅಳವಡಿಕೆ ಮತ್ತು ಕೊಠಡಿ ಮೇಲ್ವಿಚಾರಕನ್ನು ನೇಮಿಸಲಾಗುವುದು ಎಂದರು. ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ. ಪ್ರದೇಶವನ್ನು ನಿಷೇಧಿತ ಸ್ಥಳವೆಂದು ಘೋಷಿಸಿ, ಸೂಕ್ತ ಪೊಲೀಸ್ ಭದ್ರತೆ ನೀಡುವಂತೆ ಪೊಲೀಸ್ ಇಲಾಖೆಗೆ ಹಾಗೂ ಮುಂಜಾಗ್ರತೆಯಾಗಿ ಎಲ್ಲಾ ಕೇಂದ್ರಗಳಿಗೆ ಆರೋಗ್ಯ ಸಹಾಯಕರನ್ನು ನೇಮಿಸುವಂತೆ ಆರೋಗ್ಯ ಇಲಾಖೆಗೆ ಮತ್ತು ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗದಂತೆ ಎಚ್ಚರವಹಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಿಇಟಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಯಾವುದೇ ರೀತಿಯ ವಾಚ್ಗಳು, ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು, ತುಂಬು ತೋಳಿನ ಶರ್ಟ್ ಹಾಗೂ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಲಾಗಿದ್ದು, ಪರೀಕ್ಷೆಗಳು ಆರಂಭವಾಗುವ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿ ವಿದ್ಯಾರ್ಥಿಗಳು ಕೇಂದ್ರದಲ್ಲಿ ಹಾಜರಿರುವಂತೆ ಹಾಗೂ ತಮ್ಮ ಪರೀಕ್ಷಾ ಪ್ರವೇಶ ಪತ್ರದ ಜೊತೆ ಯಾವುದಾದರೊಂದು ಗುರುತಿನ ಚೀಟಿಯನ್ನು (ಕಾಲೇಜಿನ ಗುರುತಿನ ಚೀಟಿ, ಬಸ್ ಪಾಸ್, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ಆಧಾರ್ ಕಾರ್ಡ್, ಪಾನ್ ಕಾರ್ಡ್) ತರುವಂತೆ ತಿಳಿಸಿದರು. ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ಗೈರು ಹಾಜರಾಗದಂತೆ ಅಥವಾ ಬೇರೆಯವನ್ನು ನಿಯೋಜಿಸದಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಪರೀಕ್ಷೆ ಸಂದರ್ಭದಲ್ಲಿ ಯಾವುದೇ ಗೊಂದಲ ಉಂಟಾಗದಂತೆ, ಪರೀಕ್ಷೆಯನ್ನು ಸಮರ್ಥವಾಗಿ ಮತ್ತು ಅತ್ಯಂತ ಸುವ್ಯವಸ್ಥಿತವಾಗಿ ನಡೆಸುವಂತೆ ನಿರ್ದೇಶನ ನೀಡಿದರು.
ವಿಕಲಚೇತನರಿಗೆ ವಿವಿಧ ಸೌಲಭ್ಯ: ಅರ್ಜಿ ಆಹ್ವಾನ
Posted On: 19 May 2023, 07:53 PM
ಉಡುಪಿ : ಪ್ರಸಕ್ತ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಜಿಲ್ಲೆಯ ಅಂಗವಿಕಲರಿಗಾಗಿ, ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳಾದ ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪ್ರೋತ್ಸಾಹಧನ, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್, ಅಂಗವಿಕಲರ ದೈನಂದಿನ ಚಟುವಟಿಕೆಗಳಿಗೆ ಅಗತ್ಯವಿರುವ ಸಾಧನ ಸಲಕರಣೆ, ನಿವಾರಣಾ ಶಸ್ತ್ರಚಿಕಿತ್ಸೆಗೆ ವೈದ್ಯಕೀಯ ನೆರವು, ವಿಕಲಚೇತನರ ಬಸ್ ಪಾಸ್, ಸ್ವಯಂ ಉದ್ಯೋಗಕ್ಕಾಗಿ ಶೇ. 50 ರಷ್ಟು ಬ್ಯಾಂಕ್ ಸಾಲ ಮತ್ತು ಶೇ. 50 ಸಬ್ಸಿಡಿ ಮೂಲಕ ಆಧಾರ ಸಾಲ ಯೋಜನೆ, ಯಂತ್ರಚಾಲಿತ ದ್ವಿ-ಚಕ್ರ ವಾಹನ, ವಿಕಲಚೇತನ ವ್ಯಕ್ತಿಯನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗೆ ವಿವಾಹ ಪ್ರೋತ್ಸಾಹಧನ, ಅಂಧ ಮಹಿಳೆಗೆ ಜನಿಸುವ ಮೊದಲನೇ ಮತ್ತು ಎರಡನೇ ಮಗುವಿನ ಪಾಲನೆಗಾಗಿ ಶಿಶುಪಾಲನಾ ಭತ್ಯೆ, ಶ್ರವಣ ದೋಷವುಳ್ಳ ವಿಕಲಚೇತನ ವ್ಯಕ್ತಿಗಳಿಗೆ ಹೊಲಿಗೆಯಂತ್ರ, ಅಂಧ ವಿದ್ಯಾರ್ಥಿಗಳಿಗೆ ಬ್ರೆöÊಲ್ಕಿಟ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಿ ಬ್ಲಾಕ್, ತಳಮಹಡಿ, ಸಿಂಡಿಕೇಟ್ ಬ್ಯಾಂಕ್ ಹತ್ತಿರ, ಜಿಲ್ಲಾ ಪಂಚಾಯತ್ ವಿಭಾಗ, ರಜತಾದ್ರಿ, ಮಣಿಪಾಲ ದೂರವಾಣಿ ಸಂಖ್ಯೆ: 0820-2574810, 2574811 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರು ಪ್ರೋತ್ಸಾಹಧನ ಪಡೆಯಲು ಇ-ಕೆವೈಸಿ ಕಡ್ಡಾಯ
Posted On: 19 May 2023, 07:49 PM
ಉಡುಪಿ : ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪಿ.ಎಂ.ಕಿಸಾನ್ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಫಲಾನುಭವಿ ರೈತರು ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಇ-ಕೆವೈಸಿ ಮಾಡಿಸಲು ಬಾಕಿ ಇರುವ ರೈತ ಫಲಾನುಭವಿಗಳಿಗೆ ಯೋಜನೆಯ ಮುಂದಿನ ಕಂತು ಬಿಡುಗಡೆಯಾಗುವುದಿಲ್ಲ. ಕೃಷಿ ಇಲಾಖೆಯ ವತಿಯಿಂದ ಈಗಾಗಲೇ ಈ ಕುರಿತು ಮಾಹಿತಿ ನೀಡಲಾಗಿದ್ದು, ಇದು ಕೊನೆಯ ಅವಕಾಶವಾಗಿದ್ದು, ಕೂಡಲೇ ರೈತರು ತಮ್ಮ ಆಧಾರ್ ಕಾರ್ಡ್, ಆಧಾರ್ ಕಾರ್ಡ್ ಜೋಡಣೆಯಾಗಿರುವ ಮೊಬೈಲ್ ನಂಬರ್ ದಾಖಲೆಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರದಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಉಡುಪಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2000 ರೂಪಾಯಿ ನೋಟು ಚಲಾವಣೆ ಹಿಂಪಡೆಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಣೆ
Posted On: 19 May 2023, 07:27 PM
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, 2,000 ರೂಪಾಯಿ ಮುಖಬೆಲೆಯ ನೋಟನ್ನು ಹಿಂತೆಗೆದುಕೊಂಡಿದೆ. ನೋಟುಗಳು ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧವಾಗಿ ಮುಂದುವರಿಯುತ್ತದೆ. ಸಾರ್ವಜನಿಕರಿಗೆ ಸಾಕಷ್ಟು ಸಮಯವನ್ನು ಒದಗಿಸಲು, ಎಲ್ಲಾ ಬ್ಯಾಂಕುಗಳಲ್ಲಿ ಸೆಪ್ಟೆಂಬರ್ 30, 2023 ರೊಳಗೆ ರೂ. 2000 ಮುಖಬೆಲೆಯ ನೋಟನ್ನು ಬ್ಯಾಂಕ್ನಲ್ಲಿ ಠೇವಣಿ ಮಾಡಿಕೊಳ್ಳಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 1, 2023 ರಿಂದ 2,000 ರೂಪಾಯಿ ನೋಟುಗಳು ಚಲಾವಣೆ ಸ್ಥಗಿತಗೊಳ್ಳಲಿದೆ. ಈ ಬಗ್ಗೆ ಬ್ಯಾಂಕ್ಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಆರ್ಬಿಐ ಬ್ಯಾಂಕ್ಗಳಿಗೆ ಸೂಚಿಸಿದೆ.
ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆ : ನೂರು ಶೇಕಡಾ ಫಲಿತಾಂಶ - ವಿದ್ಯಾರ್ಥಿಗಳಿಗೆ ಅಭಿನಂದನೆ, ಬೀಳ್ಕೊಡುಗೆ ಸಮಾರಂಭ
Posted On: 19 May 2023, 06:51 PM
ಕಾಪು : ಆತ್ಮವಿಶ್ವಾಸವೇ ಜೀವನಕ್ಕೆ ಮಾರ್ಗದರ್ಶನ. ಇದೊಂದು ಕೌಶಲ್ಯ. ಆಭರಣದಂತೆ ಆತ್ಮವಿಶ್ವಾಸ ನಮ್ಮನ್ನು ಅಲಂಕರಿಸುವಂತಿರಬೇಕು. ವಿದ್ಯಾರ್ಥಿ ದಿಸೆಯಲ್ಲಿಯೇ ಕಠಿಣ ಪರಿಶ್ರಮದ ಮೂಲಕ ಸಾಧನೆಯ ದಾರಿಯನ್ನು ಕಂಡುಕೊಳ್ಳಬೇಕು ಎಂದು ಜೀವನ ಕೌಶಲ್ಯ ತರಬೇತುದಾರರಾದ ಸುಪರ್ಣ ಶೆಟ್ಟಿ ಹೇಳಿದರು. ಅವರು ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಯು ಐ ಸಿ ಎಸ್ ಇ ಬೋಡ್೯ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶ ಪಡೆಯಲು ಕಾರಣೀಭೂತರಾದ ವಿದ್ಯಾರ್ಥಿಗಳನ್ನು ಮತ್ತು ಉತ್ತಮ ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನೆ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸೂಕ್ತ ಅವಕಾಶವನ್ನು ಬಳಸಿ ಮುಂದುವರಿಯಬೇಕು. ಹೆತ್ತವರು ಮತ್ತು ಮಕ್ಕಳ ಅನ್ಯೋನ್ಯತೆಯ ಸಂಬಂಧಗಳ ಜೊತೆಗೆ ಪಿತೃ ಋಣ, ಲೋಕ ಋಣದ ಅರಿವಿರಬೇಕು ಎಂದರು. ಅಭಿನಂದನೆ : ಉತ್ತಮ ಅಂಕ ಗಳಿಸಿ ಸಾಧನೆಗೈದ ರಿಧ, ಚಿರಾಗ್, ಆಶೀಶ್ ರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಯ ಸಂಚಾಲಕರಾದ ಕೆ ಪಿ ಆಚಾರ್ಯ ವಹಿಸಿದ್ದರು. ಸಂಸ್ಥೆಯ ಮುಖ್ಯಸ್ಥೆ ಶ್ವೇತ ಐತಾಳ್, ಶಿಕ್ಷಕ ವರ್ಗ, ಪೋಷಕರು ಉಪಸ್ಥಿತರಿದ್ದರು. ಪತ್ರಕರ್ತರಾದ ರಾಕೇಶ್ ಕುಂಜೂರು ಶುಭಾಶಂಸನೆಗೈದರು. ಸಂಸ್ಥೆಯ ಮುಖ್ಯ ಶಿಕ್ಷಕಿ ಸ್ಮಿತಾ ಪಾಟೀಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಾಪು : ಬಿರುವೆರ್ ಕಾಪು ಸೇವಾ ಸಮಿತಿಯ ವತಿಯಿಂದ ಬ್ರಹ್ಮಶ್ರೀ ಮನೆ ಹಸ್ತಾಂತರ
Posted On: 18 May 2023, 12:06 PM
ಕಾಪು : ಇಲ್ಲಿನ ಬಿರುವೆರ್ ಕಾಪು ಸೇವಾ ಸಮಿತಿಯ ನೇತೃತ್ವದಲ್ಲಿ ಪುನರ್ ನಿರ್ಮಿಸಲಾದ ಮಲ್ಲಾರು ಗರಡಿ ಬಳಿಯ ಕೃಷ್ಣಪ್ಪ ಪೂಜಾರಿ ಮತ್ತು ಇಂದಿರಾ ಪೂಜಾರ್ತಿ ದಂಪತಿಯ ಬ್ರಹ್ಮಶ್ರೀ ಮನೆಯನ್ನು ಬುಧವಾರ ಉದ್ಘಾಟಿಸಿ, ಹಸ್ತಾಂತರಿಸಲಾಯಿತು. ಉಡುಪಿಯ ವಕೀಲ ಸಂಕಪ್ಪ ಅಮೀನ್ ಅವರು ಮನೆಯನ್ನು ಉದ್ಘಾಟಿಸಿ ಮಾತನಾಡಿ, ಕೇವಲ ಐದು ವರ್ಷಗಳ ಹಿಂದೆ ಆರಂಭಗೊಂಡಿರುವ ಬಿರುವೆರ್ ಕಾಪು ಸೇವಾ ಸಮಿತಿಯು ಈಗಾಗಲೇ 21 ಸೇವಾ ಕಾರ್ಯಕ್ರಮಗಳನ್ನು ನಡೆಸಿದ್ದು ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಮೂಲಕ ಮಾದರಿಯಾಗುವ ಕೆಲಸವನ್ನು ಮಾಡಿದೆ. ಎಲ್ಲಾ ಪ್ರದೇಶಗಳಿಗೂ ತನ್ನ ಸೇವೆಯನ್ನು ವಿಸ್ತರಿಸುತ್ತಿರುವ ಸಮಿತಿಯ ಸೇವಾ ಕಾರ್ಯಗಳು ಇತರೆಲ್ಲಾ ಸಂಘ-ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದರು. ಬಿರುವೆರ್ ಕಾಪು ಸೇವಾ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ರಾಕೇಶ್ ಕುಂಜೂರು ಮಾತನಾಡಿ, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ, ಗುಡಿಸಲಿನಲ್ಲಿ ವಾಸಿಸುತ್ತಿದ್ದ ಮಲ್ಲಾರು ಗರಡಿ ಬಳಿಯ ಕೃಷ್ಣಪ್ಪ ಪುಜಾರಿ ಮತ್ತು ಇಂದಿರಾ ಪೂಜಾರ್ತಿ ದಂಪತಿಯು ತಮಗಾರೂ ಆಸರೆಯಿಲ್ಲದೇ ಹರುಕು ಮುರುಕು ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಮನೆಯನ್ನು ಬಿರುವೆರ್ ಕಾಪು ಸೇವಾ ಸಮಿತಿಯ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಸುಮಾರು 1.50 ಲಕ್ಷ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿದೆ ಎಂದರು. ಕಟಪಾಡಿ ಅರವಿಪುರಂ ಮಠ ಚರಣ್ ಶಾಂತಿ, ಶಿರ್ವ ಬಿಲ್ಲವರ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ, ಮಲ್ಲಾರು ಬಿಲ್ಲವರ ಸಂಘದ ಅಧ್ಯಕ್ಷ ಉಮೇಶ್ ಪೂಜಾರಿ, ಪುರಸಭೆ ಸದಸ್ಯರಾದ ಶೈಲೇಶ್ ಅಮೀನ್, ಉಮೇಶ್ ಕರ್ಕೇರ, ಉದ್ಯಮಿಗಳಾದ ದೀಪಕ್ ಕುಮಾರ್ ಎರ್ಮಾಳು, ರವಿ ಪೂಜಾರಿ ಇನ್ನಂಜೆ, ಹರಿಪ್ರಸಾದ್ ಶಿರ್ವ, ಬಿರುವೆರ್ ಕಾಪು ಸೇವಾ ಸಮಿತಿಯ ಉಪಾಧ್ಯಕ್ಷ ಗಣೇಶ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ವಿಕ್ಕಿ ಪೂಜಾರಿ ಮಡುಂಬು, ಅತಿಥ್ ಸುವರ್ಣ, ಸಂಧ್ಯಾ ಬಿ. ಕೋಟ್ಯಾನ್, ಅಶ್ವಿನಿ ನವೀನ್, ಅನಿಲ್ ಅಮೀನ್, ಪ್ರಮುಖರಾದ ಶರತ್ ಪೂಜಾರಿ, ಗೀತಾ ಗೋಪಾಲ್, ಬಾಬು ಪೂಜಾರಿ, ಸುಮಿತ್ರಾ ಬಾಬು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
