Updated News From Kaup

ಕಾಂಗ್ರೆಸ್ ಪಕ್ಷ ಬಡ, ಮಧ್ಯಮ ವರ್ಗದವರಿಗಾಗಿ ಇರುವ ಪಕ್ಷ : ವಿನಯ್ ಕುಮಾರ್ ಸೊರಕೆ

Thumbnail
Posted On: 28 Apr 2023, 02:37 PM

ಉಡುಪಿ: ಬೆಲೆ ಏರಿಕೆ, ಧರ್ಮ ಧರ್ಮಗಳ ನಡುವೆ ಸಂಘರ್ಷದಿಂದ ಬಡ ಮಧ್ಯಮ ವರ್ಗದ ರಕ್ತವನ್ನು‌ ಹೀರುವ ಕೆಲಸವನ್ನು‌ ಬಿಜೆಪಿ ಮಾಡಿದೆ ಎಂದು ಕಾಪು ತಾಲೂಕಿನ ಮಣಿಪುರ ದೆಂದೂರು ಭಾಗದಲ್ಲಿ ಮತಯಾಚನೆಯ ಸಂದರ್ಭ ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದರು. ಕಾಂಗ್ರೆಸ್ ಪಕ್ಷ ಬಡ ಮಧ್ಯಮ ವರ್ಗದ ಪಕ್ಷ. ಬಡ ಮಧ್ಯಮ ವರ್ಗದವರಿಗೆ ಬಹಳಷ್ಟು ಯೋಜನೆಗಳನ್ನು ತಂದಿದ್ದು ಅವೆಲ್ಲಾ ಯೋಜನೆಗಳು ನಿಂತು ಹೋಗಿದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರು ಇನ್ನು‌ ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಬಡ ಮಧ್ಯಮ ವರ್ಗಕ್ಕೆ ಆರ್ಥಿಕವಾಗಿ ಸದೃಢರಾಗಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಬೆಂಬಲಿಸಬೇಕು ಎಂದು ಸೊರಕೆ ಹೇಳಿದ್ದಾರೆ. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ಶೆಟ್ಟಿ, ವಿನ್ಸೆಂಟ್, ಹಸನ್ ಶೇಖ್, ಡೆನ್ಸಿಲ್, ದೇವೆಂದ್ರ ಶೆಟ್ಟಿ, ಹಮೀದ್, ಅಬ್ದುಲ್ ಅಜೀದ್ ಮತ್ತಿತರರು ಉಪಸ್ಥಿತರಿದ್ದರು.

ಮತದಾರರು ಬೆಂಬಲಿಸಿದರೆ ಮುಂದಿನ 5 ವರ್ಷದ ಅವಧಿ ಜನರ ಕೆಲಸವನ್ನು ನಿಷ್ಠೆಯಿಂದ ಮಾಡುವೆ : ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ

Thumbnail
Posted On: 27 Apr 2023, 07:27 PM

ಪಡುಬಿದ್ರಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಪ್ರಗತಿಯ ಪಥದಲ್ಲಿ ನಡೆಯುತ್ತಿದೆ. ಕೋವಿಡ್ ಕಾಲದಲ್ಲಿ ಲಸಿಕೆಯ ಸಮರ್ಪಕ‌ ವಿತರಣೆ, ಹಸಿವೆ ನಿವಾರಣೆಗೆ ಉಚಿತ ಪಡಿತರದಂತಹ ಕಾರ್ಯಕ್ರಮಗಳಿಂದಾಗಿ ಜನರು ಇಂದು ಭಯಮುಕ್ತವಾಗಿ ಬದುಕುವಂತಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ಜ್ಯೋತಿ ಹೇಳಿದರು ಅವರು ಪಡುಬಿದ್ರಿಯಲ್ಲಿ ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಪರ ಚುನಾವಣಾ ಪ್ರಚಾರ ಮಾಡಿ ಮತ ಯಾಚಿಸಿದ ಅವರು ಆತ್ಮನಿರ್ಭರ ಭಾರತ ನಿರ್ಮಾಣ ಮಾಡಲು ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು. ಬಿಜೆಪಿ ತುಷ್ಟೀಕರಣ ರಾಜಕೀಯ ಮಾಡುವುದಿಲ್ಲ. ಅದರ ನೀತಿಗಳು ಸ್ಪಷ್ಟವಾಗಿವೆ ಮತ್ತು ಅಭಿವೃದ್ಧಿ ಕಾರ್ಯಸೂಚಿಯನ್ನು ಒಳಗೊಂಡಿವೆ ಎಂದ ಅವರು ಕರ್ನಾಟಕ ಒಂದು ಸುಂದರ ರಾಜ್ಯ, ಅಭಿವೃದ್ಧಿಗಾಗಿ ಜನರು ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ನರೇಂದ್ರ ಮೋದಿಯಂತಹ ಪ್ರಧಾನ ಮಂತ್ರಿ ನಮ್ಮ ರಾಷ್ಟ್ರಕ್ಕೆ ಲಭ್ಯರಾಗಿಲ್ಲವಲ್ಲ ಎಂದು ಪಾಕಿಸ್ತಾನದ ಜನತೆ ಖೇದ ವ್ಯಕ್ತಪಡಿಸುತ್ತಿದ್ದಾರೆ. ಇದು ಮಾಧ್ಯಮಗಳಲ್ಲೂ ವರದಿಯಾಗಿದೆ. ನಿಸ್ವಾರ್ಥದಿಂದ ದುಡಿಯುತ್ತಿರುವ ನರೇಂದ್ರ ಮೋದಿಯವರಿಂದಾಗಿ ಭಾರತ ವಿಶ್ವಗುರುವಾಗುವ ಹಾದಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಅವರ ಕೈ ಬಲಪಡಿಸುವುದಕ್ಕಾಗಿ ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಭಾರೀ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಮತದಾರರು ಬೆಂಬಲಿಸಿದರೆ ಮುಂದಿನ ಐದು ವರ್ಷದ ಅವಧಿ ಜನರ ಚಾಕರಿ ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ಲಾಲಾಜಿ ಮೆಂಡನ್, ಚುನಾವಣಾ ಪ್ರವಾಸಿ ಪ್ರಭಾರಿಗಳಾದ ವಿಜಯೇಂದ್ರ ಗುಪ್ತ, ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಹಿರಿಯ ಮುಖಂಡರಾದ ಎಂ ಕೆ ವಿಜಯ್ ಕುಮಾರ್, ಮಂಗಳೂರು ವಿಭಾಗ ಪ್ರಭಾರಿಗಳಾದ ಉದಯ್ ಕುಮಾರ್ ಶೆಟ್ಟಿ, ಮಟ್ಟಾರ್ ರತ್ನಾಕರ ಹೆಗ್ಡೆ, ಕಾಪು ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತಿಯಿದ್ದರು.

ಉಚ್ಚಿಲ : ರಾಹುಲ್ ಗಾಂಧಿಗೆ ಅಂಜಲ್ ಮೀನು ನೀಡಿದ ಮಹಿಳೆ

Thumbnail
Posted On: 27 Apr 2023, 07:05 PM

ಉಚ್ಚಿಲ : ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಇಂದು ಉಚ್ಚಿಲ ಮಹಾಲಕ್ಷ್ಮಿ ದೇಗುಲದ ಶಾಲಿನಿ ಡಾ. ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭ ನೇತ್ರಾವತಿ ಸುವರ್ಣ ಎಂಬ ಮಹಿಳೆ ರಾಹುಲ್ ಗಾಂಧಿಗೆ ಅಂಜಲ್ ಮೀನು ನೀಡಿದರು. ಇದಲ್ಲದೆ ಸಂವಾದದಲ್ಲಿ ತಾನು ಕೇರಳದಲ್ಲಿ ಮೀನುಗಾರರೊಂದಿಗೆ ಮೀನುಗಾರಿಕೆಗೆ ಹೋದ ಕತೆಯನ್ನು ಹೇಳಿದರು. ಈ ಸಂದರ್ಭ ಪಕ್ಷದ ಪ್ರಮುಖರು ಉಪಸ್ಥಿತಿಯಿದ್ದರು.

ಉಚ್ಚಿಲ : ಬಿಜೆಪಿಯ ಭೃಷ್ಟಾಚಾರದ ಜೊತೆ ಬೆಲೆ ಏರಿಕೆಯ ಬಿಸಿಯ ಮಧ್ಯೆ ಬಡವರು ಸಿಕ್ಕಿಕೊಂಡಿದ್ದಾರೆ - ರಾಹುಲ್ ಗಾಂಧಿ

Thumbnail
Posted On: 27 Apr 2023, 06:52 PM

ಉಚ್ಚಿಲ : ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ ಶಾಸಕರ ಖರೀದಿ ಬಿಜೆಪಿಯಲ್ಲಿದೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಬೇಕಾದರೆ 2ಸಾವಿರ ಕೋಟಿ ನೀಡಬೇಕಾಗಿದೆ. ಇತ್ತೀಚೆಗೆ ಕಂಟ್ರ್ಯಾಕ್ಟರ್ ಗಳು ಕರ್ನಾಟಕದ ಬಿಜೆಪಿ ಪಕ್ಷದ 40% ಕಮಿಷನ್ ಗೆ ಬೇಸತ್ತು ಪ್ರಧಾನಮಂತ್ರಿ ಗೆ ಪತ್ರ ಬರೆದಿದ್ದಾರೆ. ಧಾರ್ಮಿಕ ಮಠದಲ್ಲಿಯೂ 30% ಕಮೀಷನ್ ಇರುವುದು ದುರಂತ. ಪೋಲಿಸ್ , ಪ್ರಾಧ್ಯಾಪಕ, ಇಂಜಿನಿಯರಿಂಗ್ ನೇಮಕಾತಿ ಯಲ್ಲಿಯೂ 40% ಕಮಿಷನ್ ಇದೆ. ಈ ಹಣ ಎಲ್ಲಿ ಹೋಗುತ್ತದೆ ಅಂತ ನಾವು ಯೋಚಿಸಬೇಕಿದೆ ಎಂದು ಕಾಂಗ್ರೆಸ್ ಯುವ ನಾಯಕ ‌ರಾಹುಲ್ ಗಾಂಧಿ ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಳದ ಶಾಲಿನಿ ಡಾ. ಜಿ. ಶಂಕರ್ ತೆರೆದ ಸಭಾಭವನದಲ್ಲಿ ಮೀನುಗಾರರೊಂದಿಗೆ ನಡೆದ ಸಂವಾದವನ್ನು ಉದ್ದೇಶಿಸಿ ಮಾತನಾಡಿದರು. ಬಡವರು ಮತ್ತು ಶ್ರೀಮಂತ ಮೀನುಗಾರರೆಂಬ ವ್ಯತ್ಯಾಸ ದೂರಮಾಡಬೇಕಾಗಿದೆ. ಭೃಷ್ಟಾಚಾರದ ಜೊತೆ ಬೆಲೆ ಏರಿಕೆಯ ಬಿಸಿಯ ಮಧ್ಯೆ ಬಡವರು ಸಿಕ್ಕಿಕೊಂಡಿದ್ದಾರೆ. ಬಡವರಿಗೆ ಬಾರಿ ನಷ್ಟ ಉಂಟಾದರೆ ಶ್ರೀಮಂತರಿಗೆ ತೊಂದರೆಯಾಗದು. 4 ಗ್ಯಾರಂಟಿ ಸ್ಕೀಮ್ ಕಾಂಗ್ರೆಸ್ ಜಾರಿಗೊಳಿಸಿದೆ ಸರಕಾರ ಬಂದ 1 ಗಂಟೆಯಲ್ಲಿ ನಮ್ಮ ಭರವಸೆ ಈಡೇರಿಸುತ್ತೇವೆ. ಮಾತೆಯರಿಗಾಗಿ ಯೋಜನೆಗಳಿವೆ. ಸರಕಾರ ಕೋಟ್ಯಾಂತರ ಹಣ ಡೀಸೆಲ್‌ , ಪೆಟ್ರೋಲ್ ಮೂಲಕ ಗಳಿಸಿದೆ. ನಮ್ಮ ಸರಕಾರದಲ್ಲಿ ಸುಳ್ಳು ಭರವಸೆ ನೀಡಲಾರೆವು. ದೇಶದ ಜನಗಣತಿಯ ಮೂಲಕ ಸಮುದಾಯದ ಬಗ್ಗೆ ತಿಳಿಯಬಹುದು ಎಂದರು. ಮೀನುಗಾರರೊಂದಿಗೆ ಸಂವಾದ : ಡ್ರೆಜ್ಜಿಂಗ್ ಸಮಸ್ಯೆ, ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಮಾಡಬೇಕು, ಮೀನುಗಾರಿಕೆ ಸಂದರ್ಭ ತುರ್ತುಸೇವೆಗಾಗಿ ಸೀ ಅಂಬುಲೆನ್ಸ್ ಸೇವೆ, ಮೀನುಗಾರರ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮೀಸಲಾತಿ ಇತ್ಯಾದಿಗಳ ಬಗ್ಗೆ ಸಂವಾದ ನಡೆಯಿತು. ನಮ್ಮ ಸರಕಾರ ಮೀನುಗಾರರಿಗಾಗಿ ಹತ್ತು ಲಕ್ಷದ ಇನ್ಶೂರೆನ್ಸ್, ಮಹಿಳೆಯರಿಗೆ 1 ಲಕ್ಷದ ಬಡ್ಡಿರಹಿತ ಸಾಲ ನೀಡುವ ಯೋಜನೆಯಿದೆ. 25 ರೂಪಾಯಿ ಸಬ್ಸಿಡಿಯೊಂದಿಗೆ ಪ್ರತಿದಿನ 500 ಲೀಟರ್ ಡೀಸೆಲ್ ನೀಡಲಾಗುವುದು ಎಂದರು. ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ, ಉಡುಪಿ ಅಭ್ಯರ್ಥಿ ಪ್ರಸಾದ್ ಕಾಂಚನ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್, ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ರಾಷ್ಟ್ರೀಯ ಮೀನುಗಾರರ ಸಂಘದ ಅಧ್ಯಕ್ಷ ಮಂಜುನಾಥ ಸುಣೇಗಾರ್, ಕಾಂಗ್ರೆಸ್ ಮುಖಂಡರಾದ ಪ್ರತಾಪ್ ಚಂದ್ರ, ದೀಪಕ್ ಕೋಟ್ಯಾನ್, ವಿಶ್ವಾಸ್ ಅಮೀನ್, ಗೀತಾ ವಾಗ್ಳೆ, ಲಾವಣ್ಯ ಬಲ್ಲಾಳ್, ಸಂತೋಷ್ ಕುಲಾಲ್, ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಜೆ ಶೆಟ್ಟಿ, ವೆರೋನಿಕಾ ಕರ್ನಾಲಿಯೋ, ಗಫೂರ್, ಜಿತೇಂದ್ರ ಫುಟಾರ್ಡೋ, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಂಜುನಾಥ ಪೂಜಾರಿ, ದಿವಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕಾಪು : ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ರಾಶಿ ಪೂಜಾ ಮಹೋತ್ಸವ ಸಂಪನ್ನ

Thumbnail
Posted On: 26 Apr 2023, 10:24 PM

ಕಾಪು : ಇಲ್ಲಿನ ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ರಾಶಿ ಪೂಜಾ ಮಹೋತ್ಸವವು ಬ್ರಹ್ಮಶ್ರೀ ವೇ|ಮೂ| ಕಲ್ಯ ಶ್ರೀ ಅನಂತರಾಮ ತಂತ್ರಿಯವರ ಮಾರ್ಗದರ್ಶನದಲ್ಲಿ ಮತ್ತು ಬ್ರಹ್ಮಶ್ರೀ ವೇ|ಮೂ| ಶ್ರೀ ಪಂಜ ಭಾಸ್ಕರ ಭಟ್ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ಬ್ರಹ್ಮಶ್ರೀ ವೇ|ಮೂ| ಕೊರಂಗ್ರಪಾಡಿ ಶ್ರೀ ಶ್ರೀನಿವಾಸ ತಂತ್ರಿಗಳ ಸಹಕಾರದೊಂದಿಗೆ ಸಂಪನ್ನಗೊಂಡಿತು. ಈ ಸಂದರ್ಭ ದೇವಳದ ಕಾರ್ಯನಿರ್ವಹಣಾಧಿಕಾರಿ ಸುಧೀರ್ ಕುಮಾರ್ ಶೆಟ್ಟಿ, ಆಡಳಿತಾಧಿಕಾರಿ ಗಣೇಶ್ ರಾವ್, ರಾಶಿ ಪೂಜಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರುಗಳು, ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಸಮಿತಿಯ ಉಪಾಧ್ಯಕ್ಷರುಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಕಾಪು : ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯಿಂದ ವಿವಿದೆಡೆ ಮತಯಾಚನೆ

Thumbnail
Posted On: 26 Apr 2023, 06:35 PM

ಕಾಪು : ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು ಶಾಸಕ ಲಾಲಾಜಿ ಮೆಂಡನ್ ಜೊತೆಗೂಡಿ ತೆಂಕ ಗ್ರಾಮ ಪಂಚಾಯತ್, ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ಮಾಡಿ ಮತಯಾಚಿಸಿದರು. ಈ ಸಂದರ್ಭ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಯಡಿಯೂರಪ್ಪ ಹಾಗು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯ ಸರಕಾರ ಮಾಡಿದ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡಿದರು. ಸರಕಾರ ಒದಗಿಸುತ್ತಿರುವ ಸವಲತ್ತುಗಳು ಅರ್ಹರನ್ನು ತಲುಪುತ್ತಿರುವ ಬಗೆಯನ್ನು ವಿವರಿಸಿದರಲ್ಲದೆ ಈ ಬಾರಿಯೂ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಗಳಿಸುವಂತಾಗಲು ತಮಗೆ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭ ಗ್ರಾಮ ಪಂಚಾಯತಿ ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತಿಯಿದ್ದರು.

ಪಡುಬಿದ್ರಿ : ಬಟ್ಟೆ ಅಂಗಡಿಗೆ ನುಗ್ಗಿದ ಕಳ್ಳರು ; ಬಟ್ಟೆ, ನಗದು ಕಳವು

Thumbnail
Posted On: 26 Apr 2023, 06:22 PM

ಪಡುಬಿದ್ರಿ : ಇಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ಬಟ್ಟೆ, ನಗದು ಕಳವುಗೈದ ಪ್ರಕರಣ ನಡೆದಿದ್ದು ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಡುಬಿದ್ರಿಯ ಸಾಸ್ ಬಿಲ್ಡಿಂಗ್‌‌ನಲ್ಲಿ ಶ್ರೀಶಾ ಅಪಾರೆಲ್ಸ್ ಹೆಸರಿನ ಬಟ್ಟೆ ಅಂಗಡಿಗೆ ಹಾಕಿದ್ದ ಶೆಟರ್‌‌ನ ಬೀಗವನ್ನು ಮುರಿದು ಬಾಗಿಲನ್ನು ತೆರೆದು ಒಳ ಪ್ರವೇಶಿಸಿದ ಕಳ್ಳರು 2,83,500 ರೂಪಾಯಿ ಮೌಲ್ಯದ ಬಟ್ಟೆಗಳನ್ನು ಮತ್ತು ರೂ. 2 ಸಾವಿರ ನಗದನ್ನು ಕದ್ದು ಒಯ್ದಿದ್ದಾರೆ. ಈ ಬಗ್ಗೆ ಬಟ್ಟೆ ಅಂಗಡಿ ಮಾಲಕರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಕಾಪು ತಾಲೂಕು ಪರಿವಾರ ನಾಯಕ ಸಂಘದ ನೂತನ ಅಧ್ಯಕ್ಷರಾಗಿ ನೀಲಾನಂದ ನಾಯ್ಕ್ ಆಯ್ಕೆ

Thumbnail
Posted On: 26 Apr 2023, 02:25 PM

ಕಾಪು : ತಾಲೂಕು ಪರಿವಾರ ನಾಯಕ ಸಂಘದ ನೂತನ ಅಧ್ಯಕ್ಷರಾಗಿ ನೀಲಾನಂದ ನಾಯ್ಕ್ ಆಯ್ಕೆ ಆಗಿದ್ದಾರೆ. ಇವರು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯೂ ಆಗಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಅಧ್ಯಾಪಕರಾಗಿರುವ ಇವರು ಪ್ರಸ್ತುತ ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮತಯಾಚನೆಯೊಂದಿಗೆ ದೈವ-ದೇವರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ

Thumbnail
Posted On: 26 Apr 2023, 02:17 PM

ಕಾಪು : ಭಾರತೀಯ ಜನತಾ ಪಾರ್ಟಿಯ ಕಾಪು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರು ಇಂದು ಎರ್ಮಾಳು ಜನಾರ್ಧನ ದೇವಸ್ಥಾನ, ವೀರಭದ್ರ ದೇವಸ್ಥಾನ ಎರ್ಮಾಳು, ನಡಿಯಾಳು ಧೂಮಾವತಿ ದೇವಸ್ಥಾನ ಹಾಗೂ ವಿವಿದೆಡೆ ತೆರಳಿ ದೈವ -ದೇವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ತೆಂಕ, ಪಡುಬಿದ್ರಿ ಮಹಾಶಕ್ತಿಕೇಂದ್ರ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಹಿರಿಯರಾದ ಗಂಗಾಧರ್ ಸುವರ್ಣ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೇಶವ ಮೊಯ್ಲಿ, ಪಕ್ಷದ ಅನನ್ಯ ಜವಾಬ್ದಾರಿ ನಿರ್ವಹಿಸುತ್ತಿರುವ ಪ್ರಮುಖರು ಹಾಗೂ ಸ್ಥಳೀಯ ಪ್ರಮುಖರಾದ ಸತೀಶ್ ಸಾಲ್ಯಾನ್, ವಿನಯ ಶೆಟ್ಟಿ, ಧರ್ಮರಾಜ್, ಸಂತೋಷ್, ಅಮನಿ, ಮನೋಜ್, ದೀರಾಜ್, ಮೋಹನ್ ಸುವರ್ಣ, ವಿನೀತ್, ನಿತೇಶ್ ಕುಮಾರ್, ಪವನ್ ಎರ್ಮಾಳು, ಜಯೇಂದ್ರ, ಗಣೇಶ್ ಹಾಗೂ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

ನಾಳೆ : ಉಚ್ಚಿಲದಲ್ಲಿ ಮೀನುಗಾರರ ಜೊತೆ ರಾಹುಲ್ ಗಾಂಧಿ ಸಂವಾದ

Thumbnail
Posted On: 26 Apr 2023, 12:52 PM

ಕಾಪು : ಕರಾವಳಿ ಕರ್ನಾಟಕದಲ್ಲಿ ಮೀನುಗಾರಿಕೆ ವೃತ್ತಿಯು ಪ್ರಮುಖವಾಗಿದ್ದು ಈ ವೃತ್ತಿಯಲ್ಲಿ ಮೊಗವೀರರು ಸೇರಿದಂತೆ ವಿವಿಧ ಜಾತಿಗಳು, ಧರ್ಮಗಳ ಜನರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಜ್ಯದ ಮೀನುಗಾರರ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ ಆ ಮೂಲಕ ಅವರೆಲ್ಲರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿಯವರು ಎಪ್ರಿಲ್ 27 ರಂದು ಉಚ್ಚಿಲ ಮಹಾಲಕ್ಷ್ಮಿ ದೇವಳದ ಸಭಾಂಗಣದಲ್ಲಿ ನಡೆಯಲಿರುವ ಮೀನುಗಾರರ ಪ್ರತಿನಿಧಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಪು ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ತಿಳಿಸಿದರು. ಅವರು ಬುಧವಾರ ಕಾಪು ರಾಜೀವ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರಾಹುಲ್ ಗಾಂಧಿಯವರು ಹೆಲಿಕಾಪ್ಟರ್ ಮೂಲಕ 3:40 ಕ್ಕೆ ಆದಿ ಉಡುಪಿಗೆ ಆಗಮಿಸಲಿದ್ದಾರೆ. ಕಟಪಾಡಿಯಲ್ಲಿ ಅದ್ದೂರಿ ಸ್ವಾಗತವನ್ನು ಕೋರಲಿದ್ದು, ಮೂಳೂರು ಉಚ್ಚಿಲದಲ್ಲಿಯೂ ಕಾರ್ಯಕರ್ತರು, ಪಕ್ಷದ ಮುಖಂಡರು, ಹಿತೈಷಿಗಳು ಸೇರಿ ಅವರನ್ನು ಸ್ವಾಗತಿಸಲಿದ್ದಾರೆ. ಅಲ್ಲಿಂದ ನೇರವಾಗಿ ಉಚ್ಚಿಲ ಮಹಾಲಕ್ಷ್ಮಿ ದೇವಳಲದ ಸಭಾಂಗಣದಲ್ಲಿ ಜರಗುವ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎರಡು ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಕೇರಳದ ಸಂಸದರಾದ ಪ್ರತಾಪನ್, ಕೇರಳ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ನೌಷಾದ್, ರಾಜ್ಯ ಮೀನುಗಾರ ಸಂಘಟನೆ ಅಧ್ಯಕ್ಷ ಮಂಜುನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಂತಲತಾ, ಸ್ಥಳೀಯ ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಫುಟಾರ್ಡೊ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಹರೀಶ್ ಕಿಣಿ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಗಫೂರ್, ನವೀನ್ ಚಂದ್ರ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ, ರಾಜಶೇಖರ ಕೋಟ್ಯಾನ್, ಹರೀಶ್ ನಾಯಕ್, ದಿನೇಶ್ ಫಲಿಮಾರು, ವಿಶ್ವಾಸ್ ಅಮೀನ್, ರಮೀಝ್ ಹುಸೇನ್, ಶರ್ಫುದ್ದೀನ್, ವಿಲ್ಸನ್ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.