Updated News From Kaup

ನಾಳೆ : ಪಡುಬಿದ್ರಿ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಕಡೇ ಢಕ್ಕೆಬಲಿ ಮತ್ತು ಮಂಡಲ ವಿಸರ್ಜನೆ ಸೇವೆ

Posted On: 10-03-2023 09:35PM

ಪಡುಬಿದ್ರಿ : ಇಲ್ಲಿನ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ದ್ವೈವಾರ್ಷಿಕವಾಗಿ ಜರಗುವ ಢಕ್ಕೆ ಬಲಿ ಸೇವೆ ಮತ್ತು ಮಂಡಲ ವಿಸರ್ಜನೆಯು ನಾಳೆ (ಮಾಚ್೯ 11, ಶನಿವಾರ) ಸಂಪನ್ನಗೊಳ್ಳಲಿದೆ.

ಈ ಪ್ರಯುಕ್ತ ಮಧ್ಯಾಹ್ನ ಗಂಟೆ 12ಕ್ಕೆ ಸರಿಯಾಗಿ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ಸಂಜೆ ಗಂಟೆ 4:30ಕ್ಕೆ ಫಲಪುಷ್ಪ ತಾಂಬೂಲ ಪರಿಕರ ಹೊರೆ ಕಾಣಿಕೆ ಮೆರವಣಿಗೆ, ರಾತ್ರಿ ಸನ್ನಿಧಾನದಲ್ಲಿ ತಂಬಿಲ‌ ಸೇವೆ ನಂತರ ಢಕ್ಕೆಬಲಿ ಸೇವೆ ಬಳಿಕ ಮಂಡಲ ವಿಸರ್ಜನೆ ಸೇವೆಯು ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಡಿ.ಎಂ. ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ ಗುಡ್ಡೆಯಂಗಡಿ : ರುಡಾಲ್ಫ್ ಮಚಾದೊ ಅಧ್ಯಕ್ಷರಾಗಿ ಆಯ್ಕೆ

Posted On: 10-03-2023 05:21PM

ಉದ್ಯಾವರ : ಎಸ್.ಡಿ.ಎಂ. ಆಟೋರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ ಗುಡ್ಡೆಯಂಗಡಿ ಉದ್ಯಾವರ ಇದರ 2023 - 24ನೇ ಸಾಲಿನ ಅಧ್ಯಕ್ಷರಾಗಿ ರುಡಾಲ್ಫ್ ಮಚಾದೊ ಸಂಪಿಗೆನಗರ ಆಯ್ಕೆಯಾಗಿದ್ದಾರೆ.

ನೂತನ ಸಾಲಿನ ಕಾರ್ಯಕಾರಿ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು, ಉಪಾಧ್ಯಕ್ಷರಾಗಿ ಸಿರಾಜುದ್ದೀನ್ ಗುಡ್ಡೆಯಂಗಡಿ, ಕಾರ್ಯದರ್ಶಿಯಾಗಿ ಅಪ್ಪು ಸಂಪಿಗೆನಗರ, ಜೊತೆ ಕಾರ್ಯದರ್ಶಿಯಾಗಿ ಚಂದ್ರ ಕಂಪನಬೆಟ್ಟು, ಕೋಶಾಧಿಕಾರಿಯಾಗಿ ಭರತ್ ಸನಿಲ್ ಸಂಪಿಗೆನಗರ, ಗೌರವ ಸಲಹೆಗಾರರಾಗಿ ಸುಧಾಕರ್ ಸನಿಲ್ ಸಂಪಿಗೆನಗರ, ಸಲಹಾ ಸಮಿತಿಯ ಸದಸ್ಯರಾಗಿ ರಾಮ ಪೂಜಾರಿ, ಪ್ರಕಾಶ್ ಪೂಜಾರಿ, ಆರಿಫ್, ರವಿರಾಜ್, ವಿನಯ ಎಸ್ಎನ್ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷರಾಗಿ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ಜಿತೇಂದ್ರ ಶೆಟ್ಟಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಪು : ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಬಗ್ಗೆ ಸೇರಿಸಲು ಎಸ್‌ಐಓ ಆಗ್ರಹ

Posted On: 10-03-2023 05:17PM

ಕಾಪು : ವಿಧಾನಸಭಾ ಕ್ಷೇತ್ರದಲ್ಲಿರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಹಾಗೂ ಮೌಲಾನಾ ಆಝಾದ್ ವಸತಿ ಶಾಲೆಗೆ ಹೊಸ ಕಟ್ಟಡ ರಚನೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮುಂಬರುವ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ವಿವಿಧ ಪಕ್ಷಗಳು ಸೇರಿಸಬೇಕು ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಒತ್ತಾಯಿಸಿದೆ.

ಕಾಪು ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಐಓ ಜಿಲ್ಲಾಧ್ಯಕ್ಷ ಅಯಾನ್ ಮಲ್ಪೆ ಮಾತನಾಡಿ 2023ರ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಕೆಯಲ್ಲಿ ವಿದ್ಯಾರ್ಥಿ-ಯುವಜನರ ಬೇಡಿಕೆಯ ವಿಚಾರಗಳನ್ನು ಸೇರಿಸಬೇಕು. ಯುವಜನರ ಮತಗಳನ್ನು ನಿರ್ಣಯಿಸುವಂತೆ ಜನಾಭಿಪ್ರಾಯ ಜನಾಭಿಪ್ರಾಯ ಮೂಡಿಸಲು ಎಸ್‌ಈಐ ಶಿಕ್ಷಣದ ಮೂಲಭಾಗದಾರರೊಂದಿಗೆ ಸಮಾಲೋಚಿಸಿ ವಿದ್ಯಾರ್ಥಿ ಪ್ರಣಾಳಿಕೆಯನ್ನು ತಯಾರುಗೊಳಿಸಿದ್ದು, ಪಕ್ಷಗಳು ಬೇಡಿಕೆಗಳನ್ನು ಈಡೀರಿಸಲು ಪ್ರಾಮಾಣಿಕ ಪ್ರಯತ್ನ ಬದ್ಧತೆಯನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದೆ.

ಜಿಲ್ಲೆಗೊಂಡು ಸರ್ಕಾರಿ ಮೆಡಿಕಲ್ ಕಾಲೇಜಿನ ಅವಶ್ಯಕತೆ ಇದ್ದು, ವೈದ್ಯಕೀಯ ಶಿಕ್ಷಣ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದೂ ಅಯಾನ್ ಮಲ್ಪೆ ಹೇಳಿದ್ದಾರೆ.

ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ನಿಫಾಲ್ ಹೂಡೆ, ಪರ್ಹಾನ್, ಸದಸ್ಯರಾದ ನೋಮಾನ್, ನಿಹಾಲ್, ಅಯಾನ್ ಕಾಪು, ಅಹದ್ ಕಾಪು, ಅವೇಝ್ ಉಪಸ್ಥಿತರಿದ್ದರು.

ಪಡುಬಿದ್ರಿ : ವಿಶ್ವ ಮಹಿಳಾ ದಿನಾಚರಣೆ - ಮಹಿಳೆಯರ ಗರ್ಭಕೋಶ ಸಂಬಂಧಿ ತೊಂದರೆಗಳ ಮಾಹಿತಿ, ಉಚಿತ ತಪಾಸಣೆ, ಚಿಕಿತ್ಸಾ ಶಿಬಿರ

Posted On: 09-03-2023 08:37PM

ಪಡುಬಿದ್ರಿ : ಇಂದಿನ ಆಹಾರ ಪದ್ಧತಿಗಳಿಂದ ಸಣ್ಣ ವಯಸ್ಸಿನಲ್ಲಿಯೇ ಮಕ್ಕಳ ದೇಹದಲ್ಲಿ ಬದಲಾವಣೆಗಳು ಕಾಣುತ್ತಿದೆ. ಜಿಮ್ ಮೊರೆಹೋಗಿ ದೇಹದಾಢ್ಯತೆಗಾಗಿ ಶ್ರಮ ವಹಿಸುವ ಯುವ ಜನಾಂಗ ಇಂದು ಒಂದೆಡೆಯಾದರೆ, ತಮ್ಮ ಜೀವನೋಪಾಯಕ್ಕಾಗಿ ಶ್ರಮದ ಮೂಲಕ ಆರೋಗ್ಯವಂತ ಜೀವನ ನಡೆಸುತ್ತಿದ್ದವರನ್ನು ಅಂದು ಕಾಣುತ್ತಿದ್ದೆವು ಎಂದು ಎಸ್.ಡಿ.ಎಂ.ಸಿ.ಎ ಉಡುಪಿಯ ಪ್ರಾಂಶುಪಾಲರು ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಮಮತಾ ನವೀನ್ ಹೇಳಿದರು.

ಅವರು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.), ಶ್ರೀ ನಾರಾಯಣಗುರು ಬಿಲ್ಲವ ಮಹಿಳಾ ಮಂಡಳಿ ಪಡುಬಿದ್ರಿ, ಯುವವಾಹಿನಿ (ರಿ.) ಪಡುಬಿದ್ರಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆ ಪ್ರಸೂತಿ ತಂತ್ರ ಹಾಗೂ ಸ್ತ್ರೀರೋಗ ವಿಭಾಗ ಕುತ್ಪಾಡಿ, ಉಡುಪಿ ಇದರ ತಜ್ಞ ವೈದ್ಯರಿಂದ ಮಾಚ್೯ 9ರಂದು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಸಭಾಂಗಣದಲ್ಲಿ ಮಹಿಳೆಯರ ಗರ್ಭಕೋಶ ಸಂಬಂಧಿ ತೊಂದರೆಗಳ ಬಗ್ಗೆ ಮಾಹಿತಿ, ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಹೆಣ್ಣುಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮಗಳನ್ನು ಮಾಡುವ ಹವ್ಯಾಸ ರೂಢಿಸಿಕೊಳ್ಳಿ ಎಂದರು. ಕಾರ್ಯಕ್ರಮವನ್ನು ನಿವೃತ್ತ ಪ್ರಸೂತಿ ತಜ್ಞೆ ನಳಿನಿ ಸದಾಶಿವ ಉದ್ಘಾಟಿಸಿದರು.

ಸನ್ಮಾನ : ಎಸ್.ಡಿ.ಎಂ.ಸಿ.ಎ ಉಡುಪಿಯ ಪ್ರಾಂಶುಪಾಲರು ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಮಮತಾ ನವೀನ್ ಮತ್ತು ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ‌ಮಂಗಳೂರು ಇವರಿಂದ ರಾಜ್ಯಮಟ್ಟದ ಕವಿ ಕಾವ್ಯ ಸನ್ಮಾನ ಪುರಸ್ಕೃತರಾದ ಸುಗಂಧಿ ಶ್ಯಾಮ್ ರನ್ನು ಸನ್ಮಾನಿಸಲಾಯಿತು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎರ್ಮಾಳು ಗ್ರಾಮ ಪಂಚಾಯತ್ ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ನಿರ್ದೇಶಕರು, ಪಡುಬಿದ್ರಿ ನಾರಾಯಣಗುರು ಬಿಲ್ಲವ ಮಹಿಳಾ ಮಂಡಳಿ ಅಧ್ಯಕ್ಷೆ ಸುಚರಿತಾ ಎಲ್ ಅಮೀನ್, ಕಾರ್ಯದರ್ಶಿ ರೋಹಿಣಿ ಆನಂದ್, ಯುವವಾಹಿನಿ ಪಡುಬಿದ್ರಿ ಘಟಕದ ಉಪಾಧ್ಯಕ್ಷರುಗಳಾದ ಶಶಿಕಲಾ ಯಶೋಧರ ಪೂಜಾರಿ ಮತ್ತು ಅಶ್ವಥ್ ಎಸ್.,ಯುವವಾಹಿನಿ ಪಡುಬಿದ್ರಿ ಘಟಕದ ಮಹಿಳಾ ಸಂಘಟನಾ ನಿರ್ದೇಶಕಿ ತುಳಸಿ ಕರುಣಾಕರ್, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ಯುವವಾಹಿನಿ ಪಡುಬಿದ್ರಿ ಘಟಕದ ಕಾರ್ಯದರ್ಶಿ ಡಾ| ಐಶ್ವರ್ಯ ಸಿ. ಅಂಚನ್ ನಿರೂಪಿಸಿದರು. ಘಟಕದ ಉಪಾಧ್ಯಕ್ಷೆ ಶಶಿಕಲಾ ಯಶೋಧರ ಪೂಜಾರಿ ವಂದಿಸಿದರು.

ಉಡುಪಿ ಅಂಚೆ ವಿಭಾಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Posted On: 09-03-2023 01:23PM

ಉಡುಪಿ : ಅವಿಭಕ್ತ ಕುಟುಂಬದಲ್ಲಿದ್ದುಕೊಂಡು ಸರ್ವರ ಜವಾಬ್ದಾರಿಯನ್ನು ವಹಿಸಿಕೊಂಡು ಹಿರಿಯರ ಆರೈಕೆಯೊಂದಿಗೆ ಕಿರಿಯರ ಯೋಗ ಕ್ಷೇಮದ ಕಾಳಜಿ ಮಾಡುತ್ತಾ ತಮ್ಮ ತುಂಬು ಸಂಸಾರವನ್ನು ತೂಗಿಸುತ್ತಿದ್ದ ಆಗಿನ ಕಾಲದ ಹೆಚ್ಚು ಕಲಿಯದ ಅನಕ್ಷರಸ್ಥ ಮಹಿಳೆ ಕೂಡ ಅಭಿನಂದನಾರ್ಹಳು ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಅಭಿಪ್ರಾಯಪಟ್ಟರು. ಉಡುಪಿ ಅಂಚೆ ವಿಭಾಗ ಹಮ್ಮಿಕೊಂಡ ಅಂತರ್ ರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮ ದಲ್ಲಿ ಸಭಾಧ್ಯಕ್ಷತೆ ವಹಿಸಿ ಐವರು ಮಹಿಳಾ ಸಾಧಕರನ್ನು ಗುರುತಿಸಿ ಮಾತನಾಡಿದ ಅವರು ದಿನಚರಿಯ ತಮ್ಮ ಕರ್ತವ್ಯದ ಜೊತೆ ಇಲಾಖೆಗೆ ವಿಶೇಷ ರೀತಿಯಲ್ಲಿ ಸೇವೆ ಸಲ್ಲಿಸಿದ ಐವರ ಮಹಿಳಾ ಸಾಧಕರನ್ನು ಸನ್ಮಾನಿಸಿ, ಶುಭ ಹಾರೈಸಿದರು.

ಅಂತರಾಷ್ಟ್ರೀಯ ಮಹಿಳಾ ದಿನವನ್ನು ಹ್ಯಾಪಿ ವುಮೆನ್ಸ್ ಡೇ ಎಂದು ವಿನ್ಯಾಸಗೊಳಿಸಿದ ಕೇಕ್ ಅನ್ನು ಸಾಹಿತಿ ನಿರೂಪಕಿ ಅಮಿತಾಂಜಲಿ ಕಿರಣ್ ರವರು ತುಂಡರಿಸಿ ಸಿಹಿ ಹಂಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಅವರು ಪುರುಷ ಹಾಗೂ ಮಹಿಳಾ ಸಹೋದ್ಯೋಗಿಗಳು ಒಟ್ಟಾಗಿ ಬಲು ಸಡಗರದಿಂದ ಆಚರಿಸುತ್ತಿರುವ ಮಹಿಳಾ ದಿನಾಚರಣೆಯನ್ನು ಕೊಂಡಾಡಿ ಸಂಭ್ರಮಿಸಿದರು.

ಸಹಾಯಕ ಅಂಚೆ ಅಧೀಕ್ಷಕರಾದ ವಸಂತ್ ರವರು ಸ್ವಾಗತಿಸಿದರು. ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠಲ್ ಭಟ್ ರವರು ಮಹಿಳಾ ದಿನಾಚರಣೆಯ ಬಗ್ಗೆ ಪ್ರಸ್ತಾವನೆಯ ಮಾತುಗಳನ್ನಾಡಿದರು. ಸವಿತಾ ಶೆಟ್ಟಿಗಾರ್ ಪ್ರಾರ್ಥಿಸಿದರು. ಸಹೋದ್ಯೋಗಿಗಳಿಗೆ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆ, ಸೀರೆಯಲ್ಲಿ‌ ನೀರೆಯರು ಸ್ಪರ್ಧೆ ಹಾಗೂ ಸಂಗೀತ ಕುರ್ಚಿ ಸ್ಪರ್ಧೆ ನಡೆದು ಬಹುಮಾನ ವಿತರಿಸಲಾಯಿತು. ಬಹುಮಾನ ವಿಜೇತರ ಪಟ್ಟಿಯನ್ನು ಚಿತ್ರಾ ದೇವಾಡಿಗ ವಾಚಿಸಿದರು. ಆಶಾಲತಾ ಮಹಿಳಾ ಸಾಧಕರ ವಿವರ ನೀಡಿದರು .ಅಂಚೆ ಇಲಾಖಾ ನಿವೃತ್ತ ಉದ್ಯೋಗಿ ಚಂದ್ರಿಕಾ ಉಪಸ್ಥಿತರಿದ್ದರು.

ವಿಭಾಗಿಯ ಅಂಚೆ ಕಚೇರಿಯ ಅನಿತಾ ಕಾರ್ಯಕ್ರಮ ವನ್ನು ಸಂಯೋಜಿಸಿದ್ದರು. ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆಪಾಲಕ ಗುರುಪ್ರಸಾದ್ ವಂದಿಸಿದರು.

ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ : ನಿಷೇಧಾಜ್ಞೆ

Posted On: 08-03-2023 11:39PM

ಉಡುಪಿ : ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 9 ರಿಂದ 29 ರ ವರೆಗೆ ಜಿಲ್ಲೆಯ ಒಟ್ಟು 28 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು ಹಾಗೂ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟುವ ಸಲುವಾಗಿ ನಿಗದಿಪಡಿಸಿದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ಸೆಕ್ಷನ್ 144 (1) ರಂತೆ ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.

ಉಡುಪಿ : ಹಾವಂಜೆಯ ಬಂಟ್ಸ್ ಫ್ರೆಂಡ್ಸ್ ಸಂಘದಿಂದ ವಿಶ್ವ ಮಹಿಳೆಯರ ದಿನಾಚರಣೆ ಕಾರ್ಯಕ್ರಮ

Posted On: 08-03-2023 11:26PM

ಉಡುಪಿ : ಬಂಟ್ಸ್ ಫ್ರೆಂಡ್ಸ್ ಸಂಘ ಹಾವಂಜೆ ಸಂಘದ ವತಿಯಿಂದ ಹಾವಂಜೆ ಮಂಜುನಾಥ ಸಭಾಭವನದಲ್ಲಿ ವಿಶ್ವ ಮಹಿಳೆಯರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯರು, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಯು ನ ರಮೇಶ್ ಶೆಟ್ಟಿ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಶಿಕ್ಷಕಿ ಶಶಿಕಲಾ ಶೆಟ್ಟಿ ವಹಿಸಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಜಾತ ಯು ಶೆಟ್ಟಿ, ಉಷಾ ಶೆಟ್ಟಿ, ಸುಗುಣ ಡಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತಿಯಿದ್ದರು. ಸನ್ಮಾನ, ಬಹುಮಾನ ವಿತರಣೆ : ಬಂಟ ಸಮುದಾಯದ ಹಿರಿಯ ಸಾಧಕರಾದ ರಾಧಮ್ಮ ಶೆಟ್ಟಿ, ಅಕ್ಕಯ್ಯ ಶೆಟ್ಟಿ, ಮೀನಕ್ಕ ಶೆಟ್ಟಿ, ಮೈರ ಶೆಟ್ಟಿ, ಯುವ ಪ್ರತಿಭೆಗಳಾದ ಕುಮಾರಿ ಪ್ರಜ್ಞಾ ಪಿ.ಶೆಟ್ಟಿ , ಕುಮಾರಿ ರಿಯಾ ಜಿ.ಶೆಟ್ಟಿ , ಕುಮಾರಿ ಸ್ಮಿರ ಪಿ. ಶೆಟ್ಟಿ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ನಿವೃತ್ತ ಕ್ರೀಡಾ ಶಿಕ್ಷಕ ಸೀತಾರಾಮ್ ಶೆಟ್ಟಿ, ಶಿಕ್ಷಕ ಪ್ರಶಾಂತ್ ಶೆಟ್ಟಿ, ಉದಯ್ ಶೆಟ್ಟಿ, ಅರುಣ್ ಶೆಟ್ಟಿ, ನಾರಾಯಣ ಶೆಟ್ಟಿ, ಸುರೇಶ್ ಶೆಟ್ಟಿ, ನಮ್ಮ ಉಡುಪಿ ಟಿವಿ ಹಾಗೂ ವಿ ಸ್ ಗ್ರೂಪ್ ನಿರ್ದೇಶಕರು ಹಾಗೂ ಅಖಿಲ ಭಾರತ ತುಳುನಾಡು ದೈವಾರಾಧಕರ ಒಕ್ಕೂಟ (ರಿ )ಉಡುಪಿ ಜಿಲ್ಲೆ ಸಂಸ್ಥಾಪಕರಾದ, ವಿನೋದ್ ಶೆಟ್ಟಿ, ಅರುಣ ಶೆಟ್ಟಿ, ಮಹಿಳಾ ವಿಭಾಗದ ಸದಸ್ಯರು ಉಪಸ್ಥಿತಿ ಇದ್ದರು.

ಶಿಕ್ಷಕಿ ಪದ್ಮ ಪಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಆಶಾ ಹರೀಶ್ ಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಊರಿನ ಯುವ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಹೆಜಮಾಡಿ : ಕಂಗೀಲು ಸೇವೆ

Posted On: 08-03-2023 09:48PM

ಹೆಜಮಾಡಿ : ಶ್ರೀ ಬ್ರಹ್ಮಮುಗ್ಗೆರ್ಕಳ ದೈವಸ್ಥಾನ, ಹೆಜಮಾಡಿ ಕೋಡಿ ಮತ್ತು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಊರಿನ ಮಾರಿಯನ್ನು ಓಡಿಸುವ ಕಂಗೀಲು ಸೇವೆಗೆ ಮಾಚ್೯ 8 ರಂದು ಆದಿಸ್ಥಳವಾದ ಹೆಜಮಾಡಿ ಮುಗ್ಗೆರ್ಕಳ ದೈವಸ್ಥಾನದಲ್ಲಿ ಚಾಲನೆ ನೀಡಲಾಯಿತು.

ಹೆಜಮಾಡಿ ಆಲಡೆ ಆಯನದ ಮರುದಿನ ನಡೆಯುವ ಕಂಗೀಲು ಆದಿಸ್ಥಳವಾದ ಹೆಜಮಾಡಿ ಮುಗ್ಗೆರ್ಕಳ ದೈವಸ್ಥಾನದಲ್ಲಿ ಸಿರಿ ಕಟ್ಟಿ ಹೆಜಮಾಡಿ ಬ್ರಹ್ಮಸ್ಥಾನಕ್ಕಾಗಿ, ಹೆಜಮಾಡಿ ಅಳಿವೆ ಕೋಡಿಯಿಂದ ಶ್ರೀ ವೀರ ಮಾರುತಿ ದೇವಸ್ಥಾನವಾಗಿ, ಫಲಿಮಾರು, ಚರಂತಿಪೇಟೆ, ಬಪ್ಪನಾಡು, ಮಾನಂಪಾಡಿ ಕೋಡಿ, ಪರಪಟ್ಟ, ಹೊಸಾಗೈ, ಕಡವಿನ ಬಾಗಿಲು, ಗುಂಡಿಮನೆಯ ತೋಟದಿಂದ ದೊಡ್ಡಮನೆ ತೋಟವಾಗಿ, ಮಟ್ಟು ಪಟ್ಣ ಭಜನಾ ಮಂದಿರದ ಬಳಿಯಿಂದ ಉತ್ತರ ಸುಲ್ತಾನ್‌ ರಸ್ತೆಯಾಗಿ ಹೆಜಮಾಡಿ ಗಡುವಿನಲ್ಲಿ ಸಿರಿ ಬಿಡುವುದು.

ಈ ಸಂದರ್ಭ ಬ್ರಹ್ಮಮುಗ್ಗೆರ್ಕಳ ದೈವಸ್ಥಾನದ ಪ್ರಮುಖರು, ಊರಿನ ಪ್ರಮುಖರು ಉಪಸ್ಥಿತರಿದ್ದರು.

ಕಾಪು : ಮಾನವ ಬಂದುತ್ವ ವೇದಿಕೆ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಮೀನು ಮಾರಾಟದ ಮಹಿಳೆಯರಿಗೆ ‌ಸನ್ಮಾನ

Posted On: 08-03-2023 07:22PM

ಕಾಪು : ಮಾನವ ಬಂದುತ್ವ ವೇದಿಕೆ ಕರ್ನಾಟಕ ಇದರ ಉಡುಪಿ ಜಿಲ್ಲಾ ಸಂಚಲನ ಸಮಿತಿ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಇಂದು ಮೀನು ಮಾರಾಟ ಮಾಡುವ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಕಾಪು ಮೀನು ಮಾರುಕಟ್ಟೆಯಲ್ಲಿ ಜರಗಿತು.

ಈ ಸಂದರ್ಭ ಮಾತನಾಡಿದ ಮಾಜಿ‌ ಸಚಿವರಾದ ವಿನಯಕುಮಾರ್ ಸೊರಕೆ ಮನೆಯ ಜೊತೆಗೆ ತಮ್ಮ ವೃತ್ತಿಯನ್ನು ನಿಭಾಯಿಸಿಕೊಂಡು ಬದುಕು ಕಟ್ಟುವ ಕಾಯದಲ್ಲಿರುವ ಮೀನುಗಾರರ ಮತ್ತು ಮೀನುಗಾರರ ಮಹಿಳೆಯರ ಉದ್ಯಮದ ಕಷ್ಟಗಳನ್ನು ಸ್ಮರಿಸಿಕೊಂಡರು.

ಮಂಗಳೂರು ವಿಭಾಗದ ಸಂಚಾಲಕ ಪತ್ರಕರ್ತ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾನವ ಬಂಧುತ್ವ ಕರ್ನಾಟಕ ವೇದಿಕೆ ಇದರ ರಾಜ್ಯ ಸಮಿತಿ ಸದಸ್ಯ ರೋನಾಲ್ಡ್ ಮನೋಹರ್ ಕರ್ಕಡ, ಪ್ರಮುಖರಾದ ಮಂಜಿತ್ ನಾಗರಾಜ್, ಮಹಮದ್ ಶೀಶ್, ಅಶ್ವಿನಿ, ಚಾಲ್ಸ್ ಅಂಬ್ಲರ್, ಕಾಪು ಮೀನು ಮಾರಾಟ ಸಂಘದ ಅಧ್ಯಕ್ಷ ಶಾಂತ ಸುವರ್ಣ, ಕಾರ್ಯದರ್ಶಿ ಶಶಿಕಲಾ, ಕಾಪು ಪುರಸಭಾ ಸದಸ್ಯರಾದ ಸತೀಶ್ ಚಂದ್ರ, ಫರ್ಜಾನ, ಶೋಭಾ ಬಂಗೇರ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪ್ರಮುಖರಾದ ಎಂಎ ಗಪುರ್, ಉಸ್ಮಾನ್, ಫಾರೂಕ್ ಚಂದ್ರನಗರ, ಹರೀಶ್ ನಾಯಕ್, ದೀಪಕ್ ಕುಮಾರ್ ಎರ್ಮಳ್, ಜಹೀರ್ ಅಹ್ಮದ್, ಸರ್ಫುದ್ದೀನ್ ಶೇಕ್ ಮತ್ತಿತರರು ಉಪಸ್ಥಿತರಿದ್ದರು.

ಉದ್ಯಾವರ : ವಿಶ್ವ ಮಹಿಳಾ ದಿನಾಚರಣೆ - ಅಂಗನವಾಡಿ ಕಾರ್ಯಕರ್ತರಿಗೆ ಸನ್ಮಾನ

Posted On: 08-03-2023 01:34PM

ಉದ್ಯಾವರ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಉದ್ಯಾವರ ಗ್ರಾಮದ 12 ಅಂಗನವಾಡಿ ಕಾರ್ಯಕರ್ತರಿಗೆ ಸಂಪಿಗೆನಗರದಲ್ಲಿರುವ ಪಲ್ಲೋಟೈನ್ ಸ್ನೇಹಾಲಯದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸ್ತ್ರೀ ಶಕ್ತಿಯ ಮೂಲಕ ಅಂಗನವಾಡಿ ಕಾರ್ಯಕರ್ತರು ಇನ್ನಷ್ಟು ಬಲಿಷ್ಠರಾಗುತ್ತಿದ್ದಾರೆ. ಪುರುಷ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ತಾಯಿಯ ಪ್ರೀತಿಯನ್ನು ಯಾವುದೇ ನಿರೀಕ್ಷೆಗಳಿಲ್ಲದೆ ಪುಟ್ಟ ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆಯರು ನೀಡುತ್ತಿದ್ದಾರೆ. ಮಹಿಳೆಯರನ್ನು ಗೌರವಿಸುವುದು ಕೇವಲ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತ್ರವಲ್ಲದೆ, ಪ್ರತಿದಿನ ಗೌರವಿಸುವಂತಾಗಬೇಕು ಎಂದರು.

ಲಯನ್ಸ್ 317Cಯ ಪ್ರಾಂತೀಯ ಅಧ್ಯಕ್ಷೇ ಲ. ವಿಜಯ ಗೋಪಾಲ ಬಂಗೇರ ಎಂ.ಜೆ.ಎಫ್. ಮಾತನಾಡಿ, ಅಂಗನವಾಡಿ ಕಾರ್ಯಕರ್ತರಿಗೆ ಮೊದಲ ಬಾರಿಗೆ ಈ ಗ್ರಾಮದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಮೂಲಕ ಸನ್ಮಾನ ದೊರಕುವಂತಾಗಿದೆ. ಅಂಗನವಾಡಿ ಕಾರ್ಯಕರ್ತರ ಸೇವೆ ನಿಜಕ್ಕೂ ದೇವರು ಮೆಚ್ಚುವಂಥದ್ದು ಎಂದರು. ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಉದ್ಯಾವರ ಗ್ರಾಮದ ಒಟ್ಟು 12 ಅಂಗನವಾಡಿ ಕಾರ್ಯಕರ್ತರನ್ನು ಅಭಿನಂದಿಸಿ ಅವರ ಸೇವೆಯನ್ನು ಗೌರವಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಾಂತಿಯ ಅಧ್ಯಕ್ಷೆ ಲ. ವಿಜಯ ಗೋಪಾಲ ಬಂಗೇರ ಮತ್ತು ಪಲ್ಲೋಟೈನ್ ಸ್ನೇಹಲಯದ ಮುಖ್ಯಸ್ಥೆ ಧರ್ಮಭಗಿನಿ ಸಿ. ಲೀನಾ ಅವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಲಯನ್ಸ್ ವಲಯ ಅಧ್ಯಕ್ಷ ಲ. ಜಾನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಅಧ್ಯಕ್ಷ ಲಯನ್ ಅನಿಲ್ ಲೋಬೊ ಸ್ವಾಗತಿಸಿದರೆ, ಕಾರ್ಯಕ್ರಮದ ನಿರ್ದೇಶಕ ಲಯನ್ ಪದ್ಮನಾಭ ಶೈಣೈ ಧನ್ಯವಾದ ಸಮರ್ಪಿಸಿದರು. ಕಾರ್ಯದರ್ಶಿ ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.