Updated News From Kaup

ಕಾಪು : ಪಡು ಗ್ರಾಮ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರಿಂದ ಮತಯಾಚನೆ

Thumbnail
Posted On: 23 Apr 2023, 05:18 PM

ಕಾಪು : ಪುರಸಭೆ ವ್ಯಾಪ್ತಿಯ ಕಾಪು ಪಡು ಗ್ರಾಮ ವ್ಯಾಪ್ತಿಯ ರಾಮನಗರ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಸಭಾ ಚುನಾವಣೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರು ಭಾಗವಹಿಸಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ಕ್ಷೇತ್ರ ಚುನಾವಣೆ ಉಸ್ತುವಾರಿ ಸುಲೋಚನಾ ಭಟ್, ಗಂಗಾಧರ್ ಸುವರ್ಣ, ಪುರಸಭೆ ಬಿಜೆಪಿ ಅಧ್ಯಕ್ಷ ಸಂದೀಪ್ ಶೆಟ್ಟಿ, ಪುರಸಭೆ ಸದಸ್ಯ ನಿತಿನ್ ಕುಮಾರ್, ಅನಿಲ್ ಕುಮಾರ್, ನವೀನ್ ಅಮೀನ್ ಹಾಗೂ ಪಕ್ಷದ ಪ್ರಮುಖರಾದ ಸುರೇಂದ್ರ ಪಣಿಯೂರು, ನವೀನ್ ಎಸ್ ಕೆ, ಕುಶ ಸಾಲ್ಯಾನ್, ಪಕ್ಷದ ಪ್ರಮುಖರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

ಕಾಪು : ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ

Thumbnail
Posted On: 23 Apr 2023, 05:11 PM

ಕಾಪು: ಬಿಜೆಪಿ ಕಾರ್ಯಕರ್ತರಾದ ನಾಗಾರಾಜ್ ಸಾಲ್ಯಾನ್ ಮತ್ತು ರೋಷನ್ ಮುಳೂರು ಇಂದು ಕಾಂಗ್ರೆಸ್ ಸೇರ್ಪಡೆಗೊಂಡರು. ಕಾಪು ರಾಜೀವ ಭವನದಲ್ಲಿ‌ ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯವರು ಕಾಂಗ್ರೆಸ್ ಧ್ವಜ‌ ನೀಡಿ‌ ಶಾಲು ಹಾಕಿ ನಾಗರಾಜ್ ಸಾಲ್ಯಾನ್ ಮತ್ತು ರೋಶನ್ ಮುಳೂರು ಅವರನ್ನು‌ ಪಕ್ಷಕ್ಕೆ ಬರಮಾಡಿಕೊಂಡರು. ಪಕ್ಷದ ಮುಖಂಡರಾದ ದೇವಿ ಪ್ರಸಾದ್ ಶೆಟ್ಟಿ, ನವೀನ ಚಂದ್ರ ಸುವರ್ಣ, ದೀಪಕ್ ಎರ್ಮಾಳ್, ಶರ್ಫುದ್ದೀನ್, ಸತೀಶ್ಚಂದ್ರ ಮುಳೂರು, ಸುಶಾಂತ್ ಕುಮಾರ್ ಉಪಸ್ಥಿತರಿದ್ದರು.

ಪಡುಬಿದ್ರಿ : ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನೆ

Thumbnail
Posted On: 21 Apr 2023, 12:37 PM

ಪಡುಬಿದ್ರಿ : ಇಲ್ಲಿನ ಬಿಜೆಪಿ ಮಹಾ ಶಕ್ತಿ ಕೇಂದ್ರದ ಚುನಾವಣಾ ಕಾರ್ಯಾಲಯ ಇಂದು ಕಾಪು ವಿಧಾನಸಭಾ ಬಿಜೆಪಿ ಪಕ್ಷದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಶಾಸಕ ಲಾಲಾಜಿ ಆರ್ ಮೆಂಡನ್ ಜೊತೆಗೂಡಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ಲಾಲಾಜಿ ಆರ್ ಮೆಂಡನ್ ಸರ್ವರು ಒಗ್ಗೂಡಿ ಈ ಚುನಾವಣೆಯಲ್ಲಿ ಗುರ್ಮೆಯವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸೋಣ ಎಂದರು. ಕಾಪು ವಿಧಾನಸಭಾ ಬಿಜೆಪಿ ಪಕ್ಷದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಚುನಾವಣೆಯಲ್ಲಿ ಗೆಲ್ಲಲು ಕಾರ್ಯಕರ್ತರ ಬೆಂಬಲ ಅನಿವಾರ್ಯ. ನಿಮ್ಮ ಸಹಕಾರದಿಂದ ಮುಂದಿನ ಸಮಯದಲ್ಲಿ ಪ್ರಚಾರ ಕಾರ್ಯ ನಡೆಯಲಿ. ನನ್ನ ಗೆಲುವು, ಪಕ್ಷದ ಅಸ್ತಿತ್ವ ನಿಮ್ಮ ಕೈಯಲ್ಲಿದೆ. ಈ ಬಾರಿ ಭಾರತೀಯ ಜನತಾ ಪಕ್ಷ, ಧರ್ಮ, ಸಂಸ್ಕೃತಿ ಗೆಲ್ಲಿಸೋಣ ಎಂದರು. ಈ ಸಂದರ್ಭ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ, ಪಡುಬಿದ್ರಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಪಡುಬಿದ್ರಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಹಾಗೂ ಪಕ್ಷದ ಪ್ರಮುಖರಾದ ಮಿಥುನ್ ಹೆಗ್ಡೆ, ಹರೀಶ್ ಶೆಟ್ಟಿ ಮುಂಬಯಿ, ನೀತಾ ಗುರುರಾಜ್, ಕೇಶವ ಮೊಯ್ಲಿ, ಗಾಯತ್ರಿ ಪ್ರಭು , ಸೌಮ್ಯಲತಾ ಶೆಟ್ಟಿ, ಜಯಶ್ರೀ ತೆಂಕ , ಯಶೋದ ಹಾಗೂ ಇನ್ನಿತರ ಪ್ರಮುಖರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಉದ್ಯಾವರ : ಕ್ಷುಲ್ಲಕ ಕಾರಣಕ್ಕೆ ಹತ್ಯೆ

Thumbnail
Posted On: 21 Apr 2023, 11:57 AM

ಉದ್ಯಾವರ : ಇಲ್ಲಿನ ಪಿತ್ರೋಡಿ ಸಮೀಪ ಮೀನುಗಾರನನ್ನು ಕೊಂದಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಪಿತ್ರೋಡಿ ನಿವಾಸಿ ಮೀನುಗಾರಿಕೆ ಬೋಟ್ ಕಾರ್ಮಿಕ ದಯಾನಂದ ಸಾಲ್ಯಾನ್ (48) ಕೊಲೆಯಾದವರು. ಪಿತ್ರೋಡಿಯ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದಾಗ ಪಕ್ಕದಲ್ಲಿ ಕುಳಿತಿದ್ದ ಸ್ಥಳೀಯ ನಿವಾಸಿ ಭರತ್ ಎಂಬಾತನ ಜತೆಗೆ ಯಾವುದೋ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಬಾರ್‌ನಿಂದ ಹೊರಬಂದು ಜಗಳವಾಡಿಕೊಂಡಿದ್ದಾರೆ. ಈ ಸಂದರ್ಭ ಭರತ್ ತನ್ನ ಪಂಚ್‌ನಿಂದ ದಯಾನಂದ ಮುಖಕ್ಕೆ ಹೊಡೆದಿದ್ದಾನೆ. ದಯಾನಂದ ನೆಲಕ್ಕೆ ಬಿದ್ದಾಗ ಓಡಿಹೋಗಿದ್ದಾನೆ. ಸ್ಥಳೀಯ ಭಜನೆ ತಂಡದವರು ದಯಾನಂದ ಅವರ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆಸ್ಪತ್ರೆಗೆ ಒಯ್ದರೂ ದಯಾನಂದ ಮೃತಪಟ್ಟಿದ್ದಾರೆ. ಆರೋಪಿ ಭರತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚುನಾವಣಾ ನೀತಿ‌ ಸಂಹಿತೆ ‌ಉಲ್ಲಂಘನೆ : ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ವಿರುದ್ಧ ಪ್ರಕರಣ ದಾಖಲು

Thumbnail
Posted On: 19 Apr 2023, 10:58 PM

ಕಾಪು : ಚುನಾವಣಾಧಿಕಾರಿಯ ಅನುಮತಿ ಪಡೆಯದೆ ಚುನಾವಣೆ ನಾಮಪತ್ರ ಸಲ್ಲಿಕೆಯ ನಂತರ ಬಂದಂತಹ ಕಾರ್ಯಕರ್ತರಿಗೆ ಭೋಜನ ಮತ್ತು ನೀರನ್ನು ವಿತರಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚುನಾವಣಾಧಿಕಾರಿಗಳ  ಪ್ಲೈಯಿಂಗ್‌ ಸ್ಕ್ವಾಡ್ ತಂಡ ಕಾಪುವಿನಲ್ಲಿ ಗಸ್ತು ಮಾಡುತ್ತಿರುವ ಸಮಯದಲ್ಲಿ  ‌ಮಧ್ಯಾಹ್ನ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ  ಚುನಾವಣಾ  ವಿಭಾಗದಿಂದ  ಬಂದ ಕರೆಯಂತೆ  ಸಿ-ವಿಜಿಲ್‌ ದೂರಿನಂತೆ  ಕಾಂಗ್ರೆಸ್‌ ಪಕ್ಷದ  ವತಿಯಿಂದ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಲುವಾಗಿ ನಡೆದ ರ‍್ಯಾಲಿ ಬಳಿಕ ಕಾಪುವಿನಲ್ಲಿರುವ  ರಾಜೀವ ಸಭಾ ಭವನ  ಇಲ್ಲಿ ಭಾಗವಹಿಸಿದ ಕಾಯ೯ಕತ೯ರಿಗೆ ಕಾಪು ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿಯಿಂದ ಅನುಮತಿಯನ್ನು ಪಡೆಯದೇ ಸುಮಾರು 1000 ಜನರಿಗೆ ಭೋಜನ  ಹಾಗೂ  ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದು ಅದನ್ನು ಪಕ್ಷದ ಕಾಯ೯ಕತ೯ರಿಗೆ ವಿತರಿಸುತ್ತಿದ್ದು ಕಂಡು ಬಂದಿದ್ದು, ಜಾಥ ನಡೆಸಲು ಅನುಮತಿ ಪಡೆದುಕೊಂಡ ಕಾಪು ಬ್ಲಾಕ್‌ ಕಾಂಗ್ರೆಸ್‌ ದಕ್ಷಿಣದ ಅಧ್ಯಕ್ಷ ನವೀನ್‌ ಚಂದ್ರ ಸುವಣ೯ ಮೇಲೆ  ಚುನಾವಣಾ ನೀತಿ ಸಂಹಿತೆ  ಉಲ್ಲಂಘನೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ  ಜರುಗಿಸುವಂತೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಕಾಪು : ಜೆಡಿಎಸ್ ಅಭ್ಯರ್ಥಿ ಸಬೀನಾ ಸಮದ್ ನಾಮಪತ್ರ ಸಲ್ಲಿಕೆ

Thumbnail
Posted On: 19 Apr 2023, 02:33 PM

ಕಾಪು : ನಮ್ಮ ಅಭ್ಯರ್ಥಿಯ ಗೆಲುವಿಗೆ ಪಕ್ಷವು ಶ್ರಮಿಸಲಿದ್ದು. ಉತ್ತಮ ಯೋಜನೆಗಳನ್ನು ಕಾಪು ತಾಲೂಕಿಗೆ ನೀಡಲಿದ್ದೇವೆ. ಈ ಬಾರಿ ಕಾಪು ವಿಧಾನ ಸಭಾಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಮಹಿಳೆಗೆ ಸ್ಥಾನ ನೀಡಿದೆ. ಸಮಾಜ ಸೇವೆ ಮಾಡುತ್ತಿರುವ ಸಬೀನ ಸಮದ್ ರಿಗೆ ನಮ್ಮ ಪಕ್ಷವು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಯೋಜನೆಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಜನತಾದಳ (ಜಾತ್ಯತೀತ) ಪಕ್ಷದ ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಹೇಳಿದರು. ಅವರು ಜೆಡಿಎಸ್ ಅಭ್ಯರ್ಥಿ ಸಬೀನ ಸಮದ್ ನಾಮಪತ್ರಿಕೆ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಪುವಿನಲ್ಲಿ ಅಗ್ನಿಶಾಮಕ ದಳ ನಿರ್ಮಾಣ, ಪರಿಸರ ಸ್ನೇಹಿ ಉದ್ಯೋಗ ಸೃಷ್ಟಿ ಸೇರಿದಂತೆ ಹಲವಾರು ಯೋಜನೆಗಳಿವೆ. ಪಕ್ಷ ಅಧಿಕಾರಕ್ಕೆ ಬಂದರೆ ಅದನ್ನು ಈಡೇರಿಸುವಲ್ಲಿ ಬದ್ಧರಿದ್ದೇವೆ ಎಂದರು. ಈ ಸಂದರ್ಭ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಕಾಪು : ಗೆಲುವಿನ ನಿರೀಕ್ಷೆಯಲ್ಲಿ ಜನತಾದಳ (ಜಾತ್ಯತೀತ) ಪಕ್ಷ ; ಕುಮಾರಸ್ವಾಮಿ ಯೋಜನೆಗಳೇ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆ

Thumbnail
Posted On: 19 Apr 2023, 01:42 PM

ಕಾಪು : ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಹಲವಾರು ಜನಪರ ಕಾರ್ಯಗಳ ಮೂಲಕ ರಾಜ್ಯದಲ್ಲಿ ಪ್ರಗತಿ ಕಂಡಿದೆ. ಇವರ ಕಾರ್ಯಗಳೇ ನಮ್ಮ ಕಾಪು ತಾಲೂಕಿನ ಅಭ್ಯರ್ಥಿ ಸಬೀನಾ ಸಮದ್ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದು ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೇಶ್ ಶೆಟ್ಟಿ ಹೇಳಿದರು. ಅವರು ಬುಧವಾರ ಕಾಪು ಜೆಡಿಎಸ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜೆಡಿಎಸ್ ಪಕ್ಷವು ಜನತಾ ಪರ್ವ ಕಾರ್ಯಕ್ರಮದ ಅಡಿಯಲ್ಲಿ ಜನತಾ ಜಲಧಾರೆ, ಜನತಾ ಮಿತ್ರ, ಪಂಚರತ್ನ ಯೋಜನೆಗಳನ್ನು ರೂಪಿಸಿದೆ. ಈ ಬಾರಿ ಜಾತ್ಯಾತೀತ ಜನತಾದಳದ ಅಭ್ಯರ್ಥಿ ಸಬೀನ ಸಮದ್ ಕಾಪುವಿನವರಾಗಿದ್ದು, ಕಾಪು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿನ ನಿರೀಕ್ಷೆಯಿದೆ ಎಂದರು. ಕಾಪು ಪುರಸಭೆ ವ್ಯಾಪ್ತಿಯಲ್ಲಿ ಯು.ಜಿ.ಡಿ ಮ್ಯಾನ್ ಹೋಲ್ ಅಂಡರ್ ಗ್ರೌಂಡ್ ಡ್ರೈನೇಜ್ ಸಿಸ್ಟಮ್ ಅನುಷ್ಟಾನಕ್ಕೆ ಒತ್ತು, ಹೆಜಮಾಡಿ ಬಂದರು ಶೀಘ್ರ ಕಾರ್ಯ ಮುಗಿಸುವ ಬಗ್ಗೆ, ಪರಿಸರ ಸ್ನೇಹಿ ಉದ್ಯೋಗ ಸೃಷ್ಟಿ, ಕಾಪುವಿನಲ್ಲಿ ಅಗ್ನಿಶಾಮಕ ದಳ ನಿರ್ಮಾಣ, ಕಾಪು ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ, ಪುರಸಭೆಯ ಹೆಚ್ಚುವರಿ ಟ್ಯಾಕ್ಸ್ ಕಡಿಮೆ ಮಾಡಲಾಗುತ್ತದೆ. ಕಾಪು ಕ್ಷೇತ್ರಕ್ಕೆ ಆಟದ ಮೈದಾನ ನಿರ್ಮಾಣ, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಮತ್ತು ಬಸ್ ಸ್ಟ್ಯಾಂಡ್ ನಿರ್ಮಾಣ, ಪಣಿಯೂರು-ಇನ್ನಂಜೆಯಲ್ಲಿ ರೈಲು ನಿಲುಗಡೆ, ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ಸರ್ವರಿಗೂ ಸಮಾನ ಅವಕಾಶವನ್ನ ಮಾಡಿಕೊಡುವ ನಿಟ್ಟಿನಲ್ಲಿ ಪಕ್ಷ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ ಎಂದರು. ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ, ಅಭ್ಯರ್ಥಿ ಸಬೀನ ಸಮದ್,ಕಾರ್ಯಾಧ್ಯಕ್ಷ ವಾಸುದೇವ ರಾವ್,ರಾಜ್ಯ ಕಾರ್ಯದರ್ಶಿ ಸುಧಾಕರ್ ಶೆಟ್ಟಿ, ಮುಖಂಡರಾದ ಇಕ್ಬಾಲ್ ಅತ್ರಾಡಿ,ಜಯರಾಮ ಆಚಾರ್ಯ, ಭರತ್ ಶೆಟ್ಟಿ, ಸಂಜಯ್,ಉಮೇಶ್ ಕರ್ಕೇರ, ಚಂದ್ರಹಾಸ ಎರ್ಮಾಳ್,ಇಬ್ರಾಹಿಂ, ರಝಾಕ್ ಕರೀಂ ಹಾಗೂ ಫೈಝನ್ ಉಪಸ್ಥಿತರಿದ್ದರು.

ಹೆಜಮಾಡಿ : ದಾಖಲೆಗಳಿಲ್ಲದ್ದ 4.79 ಲಕ್ಷ ರೂ. ಮೌಲ್ಯದ ಸಿಗರೇಟ್ ವಶ

Thumbnail
Posted On: 18 Apr 2023, 07:00 PM

ಹೆಜಮಾಡಿ : ಚುನಾವಣೆಯ ನಿಮಿತ್ತ ಹೆಜಮಾಡಿ ಚೆಕ್‌ಪೋಸ್ಟ್ ಬಳಿ ಅಧಿಕಾರಿಗಳು, ಪೋಲಿಸರು ತಪಾಸಣೆಯಲ್ಲಿದ್ದಾಗ ಕಾರು ಮತ್ತು ಯಾವುದೇ ದಾಖಲೆ ಇಲ್ಲದ 4.79 ಲಕ್ಷ ರೂ. ಮೌಲ್ಯದ ಸಿಗರೇಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಪು ತಾಲೂಕು ಹೆಜಮಾಡಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಆಗುತ್ತಿದ್ದ ಸಂದರ್ಭ ಮಂಗಳೂರು ಕಡೆಯಿಂದ ಬಂದ ಕಾರಿನಲ್ಲಿ ಕಾರು ಚಾಲಕ ಅಬ್ದುಲ್ ಖಾದರ್ ಅನ್ಸಾರ್ ಹಾಗೂ ಸುಫಿಯಾನ್‌ ಶೌರಿ ಇವರು ಯಾವುದೇ ದಾಖಲೆ ಇಲ್ಲದ 10 ಸಿಗರೇಟ್‌ ತುಂಬಿಸಿದ 20 ಪ್ಯಾಕ್‌ಗಳಿರುವ 120 ಬಂಡಲ್‌, ನಿಷೇಧೀತ  E-Cigarette ತಲಾ 3 ಬಂಡಲ್‌ನಲ್ಲಿ ತಲಾ 10 ರಂತೆ ಒಟ್ಟು 30 ಸಿಗರೇಟ್‌ಗಳು ಇದ್ದು ಅವುಗಳ ಒಟ್ಟು ಮೌಲ್ಯ ರೂಪಾಯಿ 4,79,970 ಆಗಿದ್ದು,  ಸಿಗರೇಟು ಬಂಡಲ್‌ಗಳನ್ನು ಮಂಜೇಶ್ವರ ಬಾಯಾರಿನ ಮೊಯ್ನು ಎಂಬಾತನು ಆರೋಪಿತರಿಗೆ ನೀಡಿ, ಅವುಗಳನ್ನು ಮಣಿಪಾಲದ ಸೈಫು ಎಂಬುವವನಿಗೆ ನೀಡುವಂತೆ ತಿಳಿಸಿರುವುದಾಗಿರುತ್ತದೆ. ಪೋಲಿಸರು ಸ್ವತ್ತುಗಳನ್ನು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು : ಬಿಜೆಪಿ ಪಕ್ಷದ ಮಾಧ್ಯಮ ಕೇಂದ್ರ ಮತ್ತು ಕಾಲ್ ಸೆಂಟರ್‌ ಉದ್ಘಾಟನೆ

Thumbnail
Posted On: 18 Apr 2023, 06:19 PM

ಕಾಪು : ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಮಾಧ್ಯಮ ಕೇಂದ್ರ ಮತ್ತು ಕಾಲ್ ಸೆಂಟರ್‌ ನ್ನು ಬಿಜೆಪಿಯ ರಾಜ್ಯ ಚುನಾವಣಾ ಸಹ ಉಸ್ತುವಾರಿ ಕೆ. ಅಣ್ಣಾಮಲೈ ಹಾಗೂ ಶಾಸಕರಾದ ಲಾಲಾಜಿ ಮೆಂಡನ್ ಸಹಿತವಾಗಿ ಗಣ್ಯರು ಎಪ್ರಿಲ್ 17 ರಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಕಾಪು ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಉದ್ಯಮಿಗಳಾದ ಕೆ. ಪ್ರಕಾಶ್ ಶೆಟ್ಟಿ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಉಚ್ಚಿಲ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ - ಬಿಜೆಪಿ ಕಾಪು ತಾಲೂಕು ಅಧ್ಯಕ್ಷನ ವಿರುದ್ಧ ದೂರು

Thumbnail
Posted On: 17 Apr 2023, 11:04 PM

ಉಚ್ಚಿಲ : ಇಲ್ಲಿನ ಸಭಾಂಗಣವೊಂದರಲ್ಲಿ ಬಿಜೆಪಿ ವತಿಯಿಂದ ನಡೆದ ಸಭೆಯಲ್ಲಿ ಕಾಪು ತಾಲೂಕು ಬಿಜೆಪಿ ಪಕ್ಷದ ಅಧ್ಯಕ್ಷ ಯಾವುದೇ ಅನುಮತಿ ಪಡೆಯದೇ ಸುಮಾರು100 ಜನರಿಗೆ ಉಪಹಾರ ವಿತರಿಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಘಟನೆ ಆದಿತ್ಯವಾರ ನಡೆದಿದೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ 121-ಕಾಪು ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ 3 ನೇ ತಂಡದ ಅಧಿಕಾರಿಯಾಗಿರುವ ಮುಸ್ತಾಫ್ ರವರಿಗೆ ಜಿಲ್ಲಾಧಿಕಾರಿಗಳ ಕಛೇರಿ ಚುನಾವಣಾ ವಿಭಾಗದಿಂದ ಬಂದ ದೂರಿನಂತೆ ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲದಲ್ಲಿರುವ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿಯ ಪರವಾಗಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸುತ್ತಿರುವ ವ್ಯಕ್ತಿಗಳಿಗೆ ಕಾಪು ತಾಲೂಕು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಶ್ರೀಕಾಂತ್‌ನಾಯಕ್ ರವರು ಯಾವುದೇ ಅನುಮತಿ ಪಡೆಯದೇ ಉಪಾಹಾರದ ವ್ಯವಸ್ಥೆ ಮಾಡಿದ್ದ ಬಗ್ಗೆ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.