Updated News From Kaup
ಬಡವರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ : ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ
Posted On: 05 May 2023, 01:43 PM
ಕಟಪಾಡಿ : ಬಡವರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದೆ. ಬಡವರು ಮತ್ತು ಮಧ್ಯಮ ವರ್ಗ ದವರು ಈ ಚುನಾವಣೆಯಲ್ಲು ಸೋಲಬಾರದು ಅನ್ನೋದು ನನ್ನ ಆಸೆ. ನಿಮ್ಮ ಮತವನ್ನು ಮಾರಿಕೊಳ್ಳಬೇಡಿ ಅಂತಾ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ಕುಮಾರ್ ಸೊರಕೆ ಹೇಳಿದ್ದಾರೆ. ಕಾಪು ಕ್ಷೇತ್ರದ ಕಟಪಾಡಿ ಸರಕಾರಿ ಗುಡ್ಡೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ಸರ್ಕಾರದ ಬಡವರ ಜನಸಾಮಾನ್ಯರ ಎಲ್ಲಾ ಯೋಜನೆಗಳನ್ನು ಪೂರ್ತಿಯಾಗಿ ಹಿಂತೆಗೆದುಕೊಳ್ಳಲಾಗಿದೆ. ಈ ಮೂಲಕ ಬಡವರು ಜನಸಾಮಾನ್ಯರನ್ನು ಕಷ್ಟಕ್ಕೆ ದೂಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿರೋದು ದೊಡ್ಡ ದುರಂತ ಅಂತಾ ಅವರು ವಿಷಾದ ವ್ಯಕ್ತಪಡಿಸಿದರು. ದ್ವೇಶ, ಅಸೂಯೆ, ಬೇಡ ಶಾಂತ ರೀತಿಯಲ್ಲಿ ಎಲ್ಲಾ ಸಮಾಜದವರನ್ನು ಒಟ್ಟುಗೂಡಿಸಿಕೊಂಡು ಕೆಲಸ ಮಾಡಬೇಕು. ಹಣದ ಮೂಲಕ, ಗಿಫ್ಟ್ ಮುಖಾಂತರ ಆಮಿಷ ಒಡ್ಡಿ ನಿಮ್ಮ ಮತ ಸೆಳೆಯಲು ಬರ್ತಾರೆ. ನಿಮ್ಮನ್ನ ಮತವನ್ನು ಖರೀದಿ ಮಾಡಲು ಬರ್ತಾರೆ. ನೀವು ಜಾಗ್ರತೆ ವಹಿಸಿ ನಿಮ್ಮ ಮತವನ್ನು ಮಾರಿಕೊಳ್ಳದೆ ನಿಮ್ಮ ಕಷ್ಟದಲ್ಲಿ ಭಾಗಿಯಾಗಿ ಸಮಸ್ಯೆ ಗೆ ಪರಿಹಾರ ಒದಗಿಸುವ ಪ್ರಾಮಾಣಿಕ ರಿಗೆ ಓಟು ನೀಡಿ ಗೆಲ್ಲಿಸಿ ಅಂತಾ ವಿನಂತಿಸಿಕೊಂಡರು. ಕಾಂಗ್ರೆಸ್ ಮುಖಂಡರಾದ ಸರಸ್ವತಿ ಬಂಗೇರ, ಶ್ರೀಕರ ಅಂಚನ್, ಪ್ರಭಾಕರ ಆಚಾರ್, ಆಶಾ ಅಂಚನ್, ಅಬೂಬಕ್ಕರ್ ಎ.ಆರ್, ವಿನಯ ಬಲ್ಲಾಳ್ ಉಪಸ್ಥಿತರಿದ್ದರು.
ಕಾಪು ಕ್ಷೇತ್ರದಲ್ಲಿ ಸುಸಜ್ಜಿತ ಗೋ ರುದ್ರಭೂಮಿ : ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ
Posted On: 05 May 2023, 01:32 PM
ಕಾಪು: ತಾವು ಚುನಾಯಿತರಾದರೆ ಕಾಪು ಕ್ಷೇತ್ರದಲ್ಲಿ ಸುಸಜ್ಜಿತ ಗೋ ರುದ್ರಭೂಮಿ ಸ್ಥಾಪಿಸುವುದಾಗಿ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮತದಾರರಿಗೆ ಭರವಸೆ ನೀಡಿದ್ದಾರೆ. ಗೋ ಪ್ರೇಮಿ ಆಗಿರುವ ಗುರ್ಮೆ ಈಗಾಗಲೇ ಗೋ ವಿಹಾರಧಾಮ ಸ್ಥಾಪಿಸಿ ನೂರಾರು ಗೋವುಗಳನ್ನು ಸಾಕುತ್ತಿದ್ದಾರೆ. ಅವರೀಗ ತಮ್ಮ ಪ್ರಣಾಳಿಕೆಯಲ್ಲಿ ಗೋವುಗಳಿಗೆ ಗೌರವಯುತ ಅಂತ್ಯಸಂಸ್ಕಾರಕ್ಕಾಗಿ ಸುಸಜ್ಜಿತ ರುದ್ರಭೂಮಿ ನಿರ್ಮಾಣ ಮಾಡುವುದಾಗಿ ವಚನ ನೀಡಿದ್ದಾರೆ. ಇದಕ್ಕೆ ತಮಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಪ್ರೇರಣೆ ಎಂದು ಹೇಳಿರುವ ಅವರು ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ನೀಡಲಾಗಿರುವ ಉನ್ನತ ಮತ್ತು ಪೂಜ್ಯ ಸ್ಥಾನಮಾನವನ್ನು ಅನುಸರಿಸಿ ತಾವು ಈ ಕಾರ್ಯಕ್ಕೆ ಮುಂದಾಗಿರುವುದಾಗಿ ಹೇಳಿದ್ದಾರೆ.
ಸಣ್ಣ ಕೈಗಾರಿಕೆಗೆ ಒತ್ತು ಕೊಟ್ಟು ಪ್ರತೀ ಮನೆಗೆ ಒಂದು ಉದ್ಯೋಗ ಕೊಡುವ ಯೋಜನೆ : ವಿನಯ್ ಕುಮಾರ್ ಸೊರಕೆ
Posted On: 05 May 2023, 01:22 PM
ಉಡುಪಿ: ಸಣ್ಣ ಕೈಗಾರಿಕೆಗೆ ಒತ್ತು ಕೊಟ್ಟು ಮನೆಗೊಬ್ಬರಿಗೆ ಉದ್ಯೋಗ ನೀಡುವ ಯೋಜನೆಯನ್ನು ನೀಡುವ ಮಹದಾಸೆಯನ್ನು ಹೊಂದಿದ್ದೇನೆ ಅಂತಾ ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. ಮಣಿಪಾಲ ಟೆಕ್ನಾಲಜಿ ಸಮೂಹ ಸಂಸ್ಥೆಗೆ ಭೇಟಿ ನೀಡಿ ಮತಯಾಚನೆ ಮಾಡಿ ಮಾತಾಡಿದ ಅವರು ಕಾರ್ಮಿಕರೇ ಈ ದೇಶದ ನಿಜವಾದ ಸಂಪತ್ತು. ಇಡೀ ದೇಶದ ಸೆಕ್ಯೂರಿಟಿ ಕೀಲಿ ಇರೋದೇ ಕಾರ್ಮಿಕರ ಕೈಯಲ್ಲಿ. ಮಣಿಪಾಲದ ಗ್ರೂಪ್ ನ ತಾಂತ್ರಿಕ ಸಂಸ್ಥೆಗಳು ದೇಶದಲ್ಲಿ ಅಲ್ಲದೇ ಪ್ರಪಂಚದಾದ್ಯಂತ ಸುದ್ಧಿಯಲ್ಲಿದೆ. ಬಹಳಷ್ಟು ಮಂದಿಗೆ ಉದ್ಯೋಗ ವನ್ನು ನೀಡುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಕಾಪು ಕ್ಷೇತ್ರದಲ್ಲಿ ಕೂಡಾ ಮಣಿಪಾಲ ಸಮೂಹ ಸಂಸ್ಥೆಯಂತೆಯೇ ಸಣ್ಣ ಕೈಗಾರಿಕೆಯನ್ನು ಹುಟ್ಟು ಹಾಕಿ ಮನೆಗೊಂದು ಮಂದಿಗೆ ಉದ್ಯೋಗ ನೀಡುವ ಬೃಹತ್ ಯೋಜನೆಯನ್ನು ಮಾಡುವ ಕಾರ್ಯವನ್ನು ರೂಪಿಸುವ ಮಹದಾಸೆಯನ್ನು ಹೊಂದಿದ್ದೇನೆ. ಕಾಪು ಕ್ಷೇತ್ರಕ್ಕೆ ಐಡೆಂಟಿಟಿ ಇರಲಿಲ್ಲ. ಬೃಹತ್ ಕೈಗಾರಿಕೆಯಿಂದ ಜನಪಲ್ಲಟ ಆಗಿ ಮರುಭೂಮಿ ಆಗಿತ್ತು. ಕಾಪು ತಾಲೂಕನ್ನು, ಪುರಸಭೆಯನ್ನು ಮಾಡಿ ಎಲ್ಲಾ ಸೌಕರ್ಯವನ್ನು ಒದಗಿಸುವ ಕೆಲಸವನ್ನು ಮಾಡಿದ್ದೇನೆ. ಕಾಪುವಿನ ಎಲ್ಲಾ ಗ್ರಾಮಕ್ಕೂ ನೇರ ಸಂಪರ್ಕವನ್ನು ಕೊಡುವ ಯೋಜನೆ ಮುಂದಿನ ದಿನಗಳಲ್ಲಿ ನಡೆಯಲಿದೆ. ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ಸ್ಥಾಪನೆ ಮೂಲಕ ಶೈಕ್ಷಣಿಕ ವಾಗಿ ಕಾಪು ಸ್ವಂತ ಕಾಲ ಮೇಲೆ ನಿಲ್ಲುವ ಯೋಜನೆಯನ್ನು ರೂಪಿಸಬೇಕಾಗಿದೆ ಅಂತಾ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಮಣಿಪಾಲ ಸಮೂಹ ಸಂಸ್ಥೆಯ ಯುನಿಟ್ 4 ರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಶ್ರೀನಿವಾಸ, ನಿರ್ವಹಣಾ ವಿಭಾಗದ ವ್ಯವಸ್ಥಾಪಕ ಸತೀಶ್ ಪ್ರಭು, ಕಾಂಗ್ರೆಸ್ ಮುಖಂಡರಾದ ಸಂತೋಷ್ ಕುಮಾರ್ ಅಲೆವೂರು, ದೇವು ಪೂಜಾರಿ, ಸುಶಾಂತ್, ಸಂದೇಶ್, ಪ್ರಕಾಶ್ ಯತೀಶ್ ಕುಮಾರ್, ಜಲ್ಲೇಶ್ ಶೆಟ್ಟಿ ಉಪಸ್ಥಿತರಿದ್ದರು.
ಈ ಚುನಾವಣೆಯು ಧರ್ಮ ಅಧರ್ಮದ ಚುನಾವಣೆ : ಗುರ್ಮೆ ಸುರೇಶ್ ಶೆಟ್ಟಿ
Posted On: 05 May 2023, 09:41 AM
ಕಾಪು : ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲಾರ್ ಕುಂಜಿ ಗುಡ್ಡೆ ಪ್ರದೇಶದಲ್ಲಿ ಮಾತಯಾಚನೆ ಮಾಡಿದರು. ಈ ಸಂಧರ್ಭ ನೆರೆದಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿಯವರು ಈ ಚುನಾವಣೆಯು ಧರ್ಮ ಅಧರ್ಮದ ಚುನಾವಣೆ ಯಾರ ಬಗ್ಗೆಯೂ ಅಪಪ್ರಚಾರ ಮಾಡದೆ ನಮ್ಮ ವಿಚಾರಗಳು ಪ್ರಚಾರ ಆಗಬೇಕು ಎಂಬ ಮಾತನ್ನು ಹೇಳಿದರು. ಕಾಪು ಕ್ಷೇತ್ರ ಅಭಿವೃದ್ಧಿಯ ತಾಣವಾಗಬೇಕು ಹಲವಾರು ಕಾರ್ಯಗಳನ್ನು ನಡೆಸಿಕೊಡುವುದಾಗಿ ಭರವಸೆ ನೀಡಿದರು. ಈ ಸಂಧರ್ಭ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ಲಾಲಾಜಿ ಮೆಂಡನ್ ರವರು, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶರತ್ ಶೆಟ್ಟಿ, ಮುದರಂಗಡಿ ಶಕ್ತಿಕೇಂದ್ರ ಅಧ್ಯಕ್ಷರಾದ ಶಿವರಾಮ್ ಭಂಡಾರಿ, ಪೆರ್ನಾಲ್ ಭೂತ್ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಹಾಗೂ ಉದಯ್, ಬೆಳ್ಮಣ್ ಪಂಚಾಯತ್ ಸದಸ್ಯರಾದ ಶಂಕರ್ ಕುಂದರ್ ಸೂಡ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಪು : ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ನಾಝಿಂ ಕಂಚಿನಡ್ಕ ನೇಮಕ
Posted On: 05 May 2023, 12:13 AM
ಕಾಪು : ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರ ಶಿಫಾರಸ್ಸಿನ ಮೇರೆಗೆ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯನ್ನಾಗಿ ನಾಝಿಂ ಕಂಚಿನಡ್ಕ ಇವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಮೀಝ್ ಹುಸೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ : ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾದ ಬೆಂಬಲ ನೀಡಿಲ್ಲ
Posted On: 04 May 2023, 06:34 PM
ಕಾಪು : ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಪಡು ಕುತ್ಯಾರು ಮಹಾ ಸಂಸ್ಥಾನಕ್ಕೆ ಅನೇಕ ಮಂದಿ ಅಭ್ಯರ್ಥಿಗಳು ಆಗಮಿಸಿ, ಜಗದ್ಗುರುಗಳವರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದ್ದಾರೆ. ಹೆಚ್ಚಿನ ಉಮೇದ್ವಾರರ ಪರಿಚಯ ಇರುವುದರಿಂದ ಎಲ್ಲರೊಡನೆ ಕುಶಲೋಪರಿ, ವಿಚಾರ ವಿನಿಮಯ ನಡೆಸಿ ಶುಭವಾಗಲಿ ಎಂದು ಆಶೀರ್ವದಿಸಿ ಅನುಗ್ರಹ ಮಂತ್ರಾಕ್ಷತೆಯನ್ನು ಜಗದ್ಗುರುಗಳವರು ನೀಡಿರುತ್ತಾರೆ. ಇದನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿ ತಮಗೇ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಪತ್ರಿಕಾ ವರದಿ, ಸಮೂಹ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದಲ್ಲಿ ಆನೆಗುಂದಿ ಮಹಾಸಂಸ್ಥಾನವು ಜವಾಬ್ದಾರರಾಗುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇವೆ. ಹಾಗೆಯೇ ಜಗದ್ಗುರುಗಳವರು ಮಹಾ ಸಂಸ್ಥಾನದ ವತಿಯಿಂದ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾದ ಬೆಂಬಲ ನೀಡಿಲ್ಲ, ಆಶ್ವಾಸನೆಯನ್ನು ನೀಡಿಲ್ಲ ಅಲ್ಲದೆ ನಿರ್ದಿಷ್ಟ ಪಕ್ಷವನ್ನು ಬೆಂಬಲಿಸಬೇಕು ಎನ್ನುವ ಕರೆಯನ್ನೂ ಸಮಾಜಕ್ಕೆ ನೀಡಿಲ್ಲ. ಹಾಗೆ ಏನಾದರೂ ಪತ್ರಿಕೆಗಳಲ್ಲಿ, ಸಮೂಹ ಮಾದ್ಯಮಗಳಲ್ಲಿ ಪ್ರಕಟವಾಗಿದ್ದಲ್ಲಿ ಅದು ಅವರ ವೈಯುಕ್ತಿಕ ಅಭಿಪ್ರಾಯ ಅಲ್ಲದೆ ಇದಕ್ಕೆ ಆನೆಗುಂದಿ ಮಹಾ ಸಂಸ್ಥಾನವು ಜವಾಬ್ದಾರಿ ಅಲ್ಲ ಎಂದು ಈ ಮೂಲಕ ಸ್ಪಷ್ಟೀಕರಣ ನೀಡುತ್ತಿದ್ದೇವೆ ಎಂದು ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್. ಕಂಬಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮೇ 5 : ಕುಂಜೂರು
Posted On: 04 May 2023, 06:19 PM
ಉಡುಪಿ ಜಿಲ್ಲೆಯ ಐತಿಹಾಸಿಕ ಮಹತ್ವದಿಂದ ಅಪೂರ್ವವೆಂದು ಗುರುತಿಸಲ್ಪಡುವ ಕೆಲವೇ ದುರ್ಗಾ ಪ್ರತಿಮೆಗಳಲ್ಲಿ ಕುಂಜೂರಿನ ದುರ್ಗಾ ದೇವಸ್ಥಾನದ ಮೂಲಸ್ಥಾನ ಶ್ರೀದುರ್ಗಾ ಮೂರ್ತಿಯು ಒಂದು. ಜಗನ್ಮಾತೆಯು ಮಹಿಷನ ವಧಾನಂತರ ಸಾವಕಾಶವಾಗಿ ನಿಂತ ಭಂಗಿಯಲ್ಲಿರುವ ಮೂರ್ತಿಯು ಚತುರ್ಬಾಹುವನ್ನು ಹೊಂದಿದೆ. ಸ್ಕಂದಭಂಗದಲ್ಲಿದೆ. ಮೇಲೆನ ಬಲ ಕೈಯಲ್ಲಿ ಪ್ರಯೋಗ ಚಕ್ರ.ಮೇಲಿನ ಎಡ ಕೈಯಲ್ಲಿ ಶಂಖವನ್ನು ಹಾಗೂ ಕೆಳಗಿನ ಎಡ ಕೈಯಲ್ಲಿ ಯಾವ ಆಯುಧವೂ ಇಲ್ಲ.ಕೆಳಗಿನ ಬಲ ಕೈಯಲ್ಲಿ ತ್ರಿಶೂಲವಿದೆ.ವಿಗ್ರಹವು ಮಹತ್ವವುಳ್ಳ ಶಿಲ್ಪಶೈಲಿಯನ್ನು ಹೊಂದಿದ್ದು ಪ್ರತಿಮಾಲಕ್ಷಣ ಪ್ರಕಾರ ಕ್ರಿ.ಶ.ಒಂಬತ್ತನೇ ಶತಮಾನಕ್ಕೆ ಅನ್ವಯಿಸುತ್ತದೆ. ಈ ಮಹಿಷಮರ್ದಿನಿ ಬಿಂಬವನ್ನು ಕಡು ಕರಿ ಶಿಲೆಯಿಂದ ನಿರ್ಮಿಸಲಾಗಿದೆ.ಮೂರ್ತಿಯ ಮುಖವು ವೃತ್ತಾಕಾರದಲ್ಲಿದ್ದು ,ಶಂಕುವಾಕಾರದ ಕಿರೀಟವನ್ನು ಹೊಂದಿದೆ. ಮಿತಾಲಂಕಾರದಿಂದ ಕೂಡಿದ ದುರ್ಗಾ ಮೂರ್ತಿಯು ಸುಮಾರು ಮೂರುಅಡಿ ಎತ್ತರವಿದೆ ಎಂದು ಖ್ಯಾತ ಇತಿಹಾಸಕಾರ ಡಾ.ಗುರುರಾಜ ಭಟ್ಟ ಅವರು 1969ರ ವೇಳೆ ನಡೆಸಿದ್ದ ಕ್ಷೇತ್ರಕಾರ್ಯದ ಆಧಾರದಲ್ಲಿ ವಿವರ ನೀಡಿದ್ದಾರೆ. ಉಪಸ್ಥಾನ ಗಣಪತಿ : ಬಲಮುರಿಯಾದ ಈ ಮೂರ್ತಿಯು ಗಟ್ಟಿ ಶಿಲೆಯಿಂದ ರಚಿಸಿದ್ದು ಅಲಂಕಾರ ರಹಿತವಾಗಿದೆ.ಕುಳ್ಳಾದ ಮತ್ತು ಮುದ್ದಾದ ಈ ಗಣಪತಿ ಮೂರ್ತಿಯು ಒಂದಡಿ ಎತ್ತರವಾಗಿದೆ. ಕ್ರಿ.ಶ. ಒಂಬತ್ತು - ಹತ್ತನೇ ಶತಕದಷ್ಟು ಪ್ರಾಚೀನತೆಯನ್ನು ಭಟ್ಟರು ಹೇಳಿದ್ದಾರೆ. ಬಲಿ ಮೂರ್ತಿ : ಸುಮಾರು ಹತ್ತು ಇಂಚು ಎತ್ತರದ ಲಾವಣ್ಯಯುಕ್ತವಾದ ಪಂಚಲೋಹದ ಚತುರ್ಬಾಹು ಪ್ರತಿಮೆಯು ಸುಮಾರು ಹದಿನಾಲ್ಕು - ಹದಿನೈದನೇ ಶತಮಾನದಷ್ಟು ಪ್ರಾಚೀನ. ಚತುರಸ್ರ ಆಕಾರದ ದ್ವಿತಲದ ಗರ್ಭಗುಡಿಯು ಷಡ್ವರ್ಗ ಕ್ರಮದಲ್ಲಿದೆ.ಮಧ್ಯಮ ಗಾತ್ರದ ರಚನೆಯಾಗಿದೆ.ಜೀರ್ಣೋದ್ಧಾರ ಪೂರ್ವದಲ್ಲಿದ್ದ ಪ್ರಾಚೀನ ಗರ್ಭಗುಡಿಯಲ್ಲಿ ಗುರುತಿಸಲಾದ ಗಚ್ಚುಗಾರೆಯ ಶಿಲ್ಪಶೈಲಿಯನ್ನು ಆಧರಿಸಿ ನೂತನ ಗರ್ಭಗುಡಿಯನ್ನು ಶಿಲೆಯಲ್ಲಿ ನಿರ್ಮಿಸಿ ಮರ - ತಾಮ್ರದ ಛಾವಣಿಯನ್ನು ಅಳವಡಿಸಲಾಗಿದೆ. ಜೀರ್ಣೋದ್ಧಾರವು ಪುನಾರಚನೆಯೇ ಆಗಿತ್ತು. ಪೌರಾಣಿಕ ಹಿನ್ನೆಲೆ : 1919ನೇ ಇಸವಿಯಲ್ಲಿ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಿಂದ ಪ್ರಕಟವಾದ ಸಂಸ್ಕೃತ ಶ್ಲೋಕಗಳು ಮಾತ್ರ ಇರುವ , (ನಾಲ್ಕು ಅಧ್ಯಾಯಗಳಲ್ಲಿ 142 ಶ್ಲೋಕಗಳಲ್ಲಿ ) ಸ್ಕಾಂದಪುರಾಣದ ಸಹ್ಯಾದ್ರಿ ಖಂಡದ "ಎಲ್ಲೂರು ಮಹಾತ್ಮ್ಯೆ" ಯಿಂದ ( ಮುಂದೆ ಈ ಶ್ಲೋಕಗಳನ್ನೇ ಆಧರಿಸಿ ಕನ್ನಡ ತಾತ್ಪರ್ಯ ಸಹಿತ "ಎಲ್ಲೂರು ಮಹಾತ್ಮೆ" ಯು 1952 ರಿಂದ 1976 ರ ಅವಧಿಯಲ್ಲಿ ಮೂರು ಬಾರಿ ಮುದ್ರಿಸಲ್ಪಟ್ಟು ಪ್ರಕಟವಾಗಿದೆ) ಜನಜನಿತ ಹಾಗೂ ಸರ್ವಸಮ್ಮತ . ಶೌನಕಾದಿ ಋಷಿಗಳಿಗೆ ಸೂತಾಚಾರ್ಯರು ಪುಣ್ಯಕ್ಷೇತ್ರ ಹಾಗೂ ತೀರ್ಥಕ್ಷೇತ್ರಗಳ ಕುರಿತು ಹೇಳುತ್ತಾ ... ತಾನು ಎಲ್ಲೂರಿಗೆ ಹೇಗೆ ಹೋದೆನು, ಎಲ್ಲಿ ಯಾವ ಸ್ಥಳದಲ್ಲಿ ಆವಿರ್ಭವಿಸಿದೆ ಎಂಬುದನ್ನು ಮಹಾದೇವನು ಪಾರ್ವತಿಗೆ ಹೇಳುತ್ತಾ "ತತ್ರ ಕುಂಜಪುರ ಕ್ಷೇತ್ರ ಕಲ್ಪನಂ ಪರಮಾದ್ಭುತಂ" ಎಂದು ಹೇಳುತ್ತಾನೆ ಈಶ್ವರ.ಪಿಲಾರಕಾನದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಭಾರ್ಗವನಾಮಕನಾದ ಮಹರ್ಷಿಯು ಸಂಕಲ್ಪಿಸಿದ ಹತ್ತು ಕ್ಷೇತ್ರಗಳ ಮಧ್ಯೆ ನಾನು ಕುಂದರಾಜನ ತಪಸ್ಸಿಗೆ ಮೆಚ್ಚಿ ಆವಿರ್ಭವಿಸಿದೆನು ಎಂದು ಈಶ್ವರನು ಪಾರ್ವತಿಗೆ ಹೇಳಿದನು.ಈ ಹತ್ತು ಕ್ಷೇತ್ರಗಳು ಯಾವುವು ಎಂದರೆ ಪಿಲಾರಕಾನ,ಶಾಂತಪುರ(ಸಾಂತೂರು), ನಂದಿಕೂರು, ಪಾದೆಬೆಟ್ಟು, ಕುಂಜೂರು, ಉಳಿಯಾರು, ಪಾಂಗಾಳ, ಕಳತ್ತೂರು, ಪೇರೂರು ಹಾಗೂ ಶಿರ್ವ. ಈ ಯಾದಿ ಪುರಾಣೋಲ್ಲೇಖಿತವಾದುದು. ಎಲ್ಲೂರಿನಿಂದ ಅಗ್ನೇಯದಿಂದ ಉತ್ತರಕ್ಕೆ ಹರಿಯುತ್ತಾ ಮುಂದೆ ಪಶ್ಚಿಮಾಭಿಮುಖವಾಗಿ ಹರಿಯುತ್ತಾ ಪಶ್ಚಿಮಸಮುದ್ರವನ್ನು ಸಂಗಮಿಸಿಸುವ ವಾರಣೀ ಎಂಬ ನದಿಯನ್ನು ಒತ್ತೊತ್ತಾಗಿ ಮರಗಳು ಬೆಳೆದ ಕುಂಜ ಎಂಬ ಪ್ರದೇಶದ ಬಳಿ ಮುಚ್ಚಿ ಭಾರ್ಗವ ಋಷಿಗಳು ನೂತನ ಭೂಪ್ರದೇಶವನ್ನು ಸೃಷ್ಟಿಸಿ ಅಲ್ಲಿ ಮಹಾಯಾಗವೊಂದನ್ನು ಗ್ರಾಮಸ್ಥರ ಸಹಾಯದಿಂದ ನೆರವೇರಿಸಿ ಪವಿತ್ರ ಭೂಪ್ರದೇಶದಲ್ಲಿ ದುರ್ಗಾ ಶಕ್ತಿಯನ್ನು ಸಂಕಲ್ಪಿಸಿದರು.ಈ ಪ್ರದೇಶ ಕುಂಜಪುರ > ಕುಂಜೂರು ಎಂದಾಯಿತು. ಕನಿಷ್ಠ ಸಾವಿರದ ಇನ್ನೂರು ವರ್ಷ ಪುರಾತನದಲ್ಲಿ ದೇವಾಲಯವೊಂದು ಸಂಕಲ್ಪಿಸಿದ ಕುಂಜೂರು ಆಕಾಲದಲ್ಲಿ ಒಂದು ಬ್ರಾಹ್ಮಣರ ನೆಲೆಯಾಗಿತ್ತು (settlement) ಎಂಬುದಕ್ಕೆ ಪುರಾಣಕಾಲದ ಒಂದು ಗ್ರಾಮದ ಅಸ್ತಿತ್ವ ಸ್ಪಷ್ಟವಾಗುತ್ತದೆ.ಈಗಿನ ಮಾಣಿಯೂರಿನಿಂದ ಮೊದಲ್ಗೊಂಡು ದಳಾಂತ್ರೆ ಕೆರೆ, ಮಾಣಿಯೂರು ಮಠ,ಸಾಣಿಂಜೆ,ಕುದುರೆ, ಮಂಜರಬೆಟ್ಟು,ಕರಂಬಳ,ಕುಂಜೂರು ದೇವಳದ ಬಳಿಯ ಉಡುಪರ ಮನೆಯೂ ಪೂರ್ವದ ಮಠವೇ ಆಗಿತ್ತು ಎಂಬ ಮಾಹಿತಿ ಸಿಗುತ್ತದೆ.ಬಳಿಕ ಮೂಜಗಳ್ ಎಂಬಲ್ಲಿಯವರೆಗೆ ಹಾಗೂ ಈಗಿನ ಮುದರಂಗಡಿಯಿಂದ ಎರ್ಮಾಳು ರಸ್ತೆ ಹಾಗೂ ಮುದರಂಗಡಿ - ಎಲ್ಲೂರು -ಪಣಿಯೂರು - ಉಚ್ಚಿಲ ರಸ್ತೆಯ ನಡುವೆ ಎಲ್ಲೂರು ಗ್ರಾಮದ ವ್ಯಾಪ್ತಿಯಲ್ಲಿರುವ ವಿಸ್ತಾರವಾದ ಭೂಪ್ರದೇಶವೇ "ಕುಂಜೂರು". ಬ್ರಾಹ್ಮಣರ ನೆಲೆಗಳನ್ನು ವಿವರಿಸುವ ಗ್ರಾಮಪದ್ಧತಿಯಲ್ಲಿ ಪೂರ್ವಷೋಡಷ ಹಾಗೂ ಪಶ್ಚಿಮ ಷೋಡಷಗಳೆಂದು ಎರಡು ವಿಭಾಗ.ಎರಡು ಮೂರು ಪಾಠಾಂತರಗಳು ಲಭಿಸುತ್ತವೆ.ಉರ್ವ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೊರೆತ ತುಳುಲಿಪಿಯಲ್ಲಿದ್ದ ಗ್ರಾಮಪದ್ಧತಿಯ ಒಂದು ಪಾಠಾಂತರದಲ್ಲಿ 'ಕುಂಜೂರು' ಒಂದುಗ್ರಾಮ. ವಾರುಣೀ ನದಿಯ ಇಕ್ಕೆಲದಲ್ಲಿ ಒಂದು ಜನ ಜೀವನ,ಸಂಸ್ಕೃತಿ ಬೆಳೆದಿದೆ.ಎಂಬುದಕ್ಕೆ ಕುಂಜೂರು ಗ್ರಾಮವು ಉದಾಹರಣೆಯಾಗುತ್ತದೆ. ಈ ಕುರಿತು ಕುಂಜೂರಿನ ಪೌರಾಣಿಕ ಕಾಲದ ನಕ್ಷೆಯೊಂದು ಸಿದ್ಧಗೊಳಿಸಲಾಗುತ್ತಿದೆ. ಕ್ರಮೇಣ ಪ್ರಕಟಿಸುವ. { ಮೇ 5 ಕುಂಜೂರು ಆರಡ. ಈ ಸಂದರ್ಭಕ್ಕೆ ಇದೊಂದು ವಿಶೇಷ ಬರಹ. "ಕುಂಜೂರು ಶ್ರೀ ದುರ್ಗಾ" ಪುಸ್ತಕದ ಆಧಾರ} ಬರಹ : ಕೆ. ಎಲ್. ಕುಂಡಂತಾಯ
ಮೇ 7 - 14 : ಪಡು ಕುತ್ಯಾರು ಆನೆಗುಂದಿ ಮಹಾ ಸಂಸ್ಧಾನದಲ್ಲಿ ವಸಂತ ವೇದ ಶಿಬಿರ
Posted On: 04 May 2023, 03:13 PM
ಕಾಪು : ತಾಲೂಕಿನ ಪಡು ಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದಲ್ಲಿ ವರ್ಷಂಪ್ರತಿ ನಡೆಸಲಾಗುವ ವಸಂತ ವೇದ ಶಿಬಿರವು ಮೇ 7ರಿಂದ ಆರಂಭಗೊಳ್ಳಲಿದೆ. ಮೇ 6ರಂದು ಶಿಬಿರ ವಿದ್ಯಾರ್ಥಿಗಳ ನೋಂದಣಿ ಪೂರ್ಣಗೊಳ್ಳಲಿದೆ. ಮೇ 7ರಂದು ಬೆಳಗ್ಗೆ 10 ಗಂಟೆಗೆ ಮಹಾಸಂಸ್ಥಾನದ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದೀಪ ಪ್ರಜ್ವಲನಗೊಳಿಸಿ ವಸಂತ ವೇದ ಶಿಬಿರವನ್ನು ಉದ್ಘಾಟಿಸಲಿರುವರು. ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ಒಡೆಯ ಹೋಬಳಿ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಯಾಗಿ ಉಡುಪಿ ಮಂಗಳಾ ಜ್ಯುವೆಲ್ಲರ್ಸ್ ಮಾಲಕರೂ, ಕೊಡಂಕೂರು ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದ ಅಧ್ಯಕ್ಷರಾದ ಶ್ರೀಶ ಆಚಾರ್ಯ ಅಲೆಯೂರು ಭಾಗವಹಿಸುವರು. ಸಮಾರಂಭದಲ್ಲಿ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವ ಅಧ್ಯಕ್ಷ ಪಿ ವಿ ಗಂಗಾಧರ ಆಚಾರ್ಯ ಉಡುಪಿ, ವೇದ ಸಂಜೀವಿನಿ ಪಾಠಶಾಲೆಯ ಸಂಚಾಲಕ ಬಿ .ಸೂರ್ಯ ಕುಮಾರ್ ಆಚಾರ್ಯ ಹಳೆಯಂಗಡಿ, ಅಸೆಟ್ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು, ಗೋವು ಪರ್ಯಾವರಣ್ ಟ್ರಸ್ಟ್ ಅಧ್ಯಕ್ಷ ಬಿ ಸುಂದರ ಆಚಾರ್ಯ ಬೆಳುವಾಯಿ, ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, , ಶಿಬಿರಾಧಿಕಾರಿ ಐ ಲೋಲಾಕ್ಷ ಆಚಾರ್ಯ ಕಟಪಾಡಿ ಉಪಸ್ಥಿತರಿರುವರು. ವಸಂತ ವೇದ ಶಿಬಿರದಲ್ಲಿ ಪ್ರಮುಖವಾಗಿ ಸಂಧ್ಯಾವಂದನೆ ಪಾಠವನ್ನು ಹಾಗೂ ನಮ್ಮ ಧರ್ಮ. ಸಂಸ್ಕಾರ, ಆಚರಣೆಗಳು, ಕರ್ತವ್ಯಗಳು ಮುಂತಾದ ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡಲಾಗುವುದು. ವಸಂತ ವೇದ ಶಿಬಿರದ ಸಮಾರೋಪವು ಮೇ 14 ರ ಜಗದ್ಗುರುಗಳವರ ಪಟ್ಟಾಭಿಷೇಕ ವರ್ಧಂತಿಯಂದು ನಡೆಯಲಿದೆ. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಆಯೋಜಿಸಿರುವ ವಸಂತ ವೇದ ಶಿಬಿರವು ಶ್ರೀ ನಾಗಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆ, ಆನೆಗುಂದಿ ಗುರು ಸೇವಾ ಪರಿಷತ್ತು ಕೇಂದ್ರ ಸಮಿತಿ, ಅಸೆಟ್, ಗೋವು ಮತ್ತು ಪರ್ಯಾವರನ್ ಸಂರಕ್ಷಣಾ ಟ್ರಸ್ಟ್, ಶ್ರೀ ಸರಸ್ವತೀ ಮಾತೃ ಮಂಡಳಿ ಇವುಗಳ ಸಹಕಾರದೊಂದಿಗೆ ನಡೆಯಲಿದೆ ಎಂದು ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್. ಕಂಬಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ನ 5 ವರ್ಷದ ಹಿಂದಿನ ಅಭಿವೃದ್ಧಿಯ ಪಟ್ಟಿಯನ್ನು ಮುಂದಿಟ್ಟು ಬಿಜೆಪಿ ಓಟು ಕೇಳುತ್ತಿದೆ : ವಿನಯ್ ಕುಮಾರ್ ಸೊರಕೆ
Posted On: 04 May 2023, 12:13 PM
ಕಾಪು : ನಾನು ಶಾಸಕನಾಗಿದ್ದ ಅವಧಿಯಲ್ಲಿ 2013 ರಿಂದ 2018 ರಲ್ಲಿ ನಡೆಸಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಪಟ್ಟಿ ಮಾಡಿ ಮತದಾರರ ಮುಂದೆ ಇಟ್ಟು ಬಿಜೆಪಿ ಓಟು ಕೇಳುತ್ತಿದೆ ಎಂದು ವಿನಯ್ ಕುಮಾರ್ ಸೊರಕೆ ಲೇವಡಿ ಮಾಡಿದ್ದಾರೆ. ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆ ಮತಯಾಚನೆ ಮಾಡಿ ಅವರು ಮಾತನಾಡಿದರು. ಬಿಜೆಪಿ ಪಾರ್ಟಿಗೆ ಸ್ವಂತಿಕೆ ಅನ್ನೋದು ಇಲ್ಲ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಾಡಿದ ಶೇ.75 ಕಾಮಗಾರಿಗಳನ್ನು ತಮ್ಮ ಕಾಲದ ಅಭಿವೃದ್ಧಿ ಅಂತಾ ಮತದಾರರ ಮುಂದೆ ಸುಳ್ಳು ಹೇಳಿ ಓಟು ಕೇಳುವ ಗಿಮಿಕ್ ಮಾಡ್ತಾ ಇದೆ. ಈ ಬಾರಿ ಬಿಜೆಪಿಯ ಪ್ರಣಾಳಿಕೆ ಕಳೆದ ಬಾರಿಯ ನನ್ನ ಪ್ರಣಾಳಿಕೆಯನ್ನು ಕಾಪಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿಗೆ ಕಾಂಗ್ರೆಸ್ ನ ಅವಧಿಯಲ್ಲಿ ಆದ ಅಭಿವೃದ್ಧಿ ಕಾಮಗಾರಿಗಳು ಮತ್ತು ಕಾಂಗ್ರೆಸ್ ಪ್ರಣಾಳಿಕೆಯೇ ದಾರಿದೀಪವಾಗಿದೆಯೋ ಅಂತ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಸೊರಕೆ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಜತ್ತನ್ನ, ರತನ್ ಶೆಟ್ಟಿ, ಮೆಲ್ವಿನ್ ಡಿಸೋಜ, ಹಸನಬ್ಬ ಶೇಖ್, ಜೆಸಿಂತಾ, ಲ್ಯಾನ್ಸಿ ಕರೋಡ ಮತ್ತಿತರರು ಉಪಸ್ಥಿತರಿದ್ದರು.
ಶಿರ್ವ : ಕೌಶಲ್ಯ ಅಭಿವೃದ್ಧಿಯು ಸ್ಪರ್ಧೆಯನ್ನು ಗೆಲ್ಲುವ ಮಾರ್ಗವಾಗಿದೆ - ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್
Posted On: 04 May 2023, 12:04 PM
ಶಿರ್ವ: ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗವು ತನ್ನ ಘಟಕವಾದ ಐಟಿ ಕ್ಲಬ್ ನ ಮೂಲಕ ಬಿಸಿಎ ವಿದ್ಯಾರ್ಥಿಗಳಿಗೆ ಆಯೋಜಿಸಿದ ರೈಜೆನ್23 ಐಟಿ ಕಾಂಪಿಟೇಶನ್ಸ್ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ವಿಜೇತರಿಗೆ ಪ್ರಮಾಣ ಪತ್ರ ಜೊತೆಗೆ ಬಹುಮಾನಗಳನ್ನು ವಿತರಿಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮಲ್ಲಿ ಅಡಗಿರುವಂತ ವಿವಿಧ ಕೌಶಲಗಳನ್ನು ವೃದ್ಧಿಸಿಕೊಳ್ಳುವ ಮೂಲಕ ಎಲ್ಲಾ ರೀತಿಯ ಸ್ಪರ್ಧೆಗಳನ್ನು ಗೆಲ್ಲಲು ಸಾಧ್ಯ ಎಂದು ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ರೈಜೆನ್23 ಐಟಿ ಕಾಂಪಿಟೇಶನ್ಸ್ ಬಗ್ಗೆ ಮಾರ್ಗದರ್ಶನ ನೀಡಿ ಮಾತನಾಡಿದರು. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ವಿವಿಧ ಕೌಶಲ್ಯಗಳನ್ನು ವೃದ್ಧಿಸುವ ರಸಪ್ರಶ್ನೆ, ಕೋಡಿಂಗ್, ಗೇಮಿಂಗ್,ರಂಗೋಲಿ,ಅಣುಕು ಸಂದರ್ಶನ, ಪೋಸ್ಟರ್ ತಯಾರಿಕೆ, ನಿಧಿ ಬೇಟೆ,ಪವರ್ಪಾಯಿಂಟ್ ಪ್ರಸ್ತುತಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಇದೇ ಸಂದರ್ಭದಲ್ಲಿ ವಿಪ್ರೊ ಕ್ಯಾಂಪಸ್ ಪ್ಲೇಸ್ಮೆಂಟ್ ಡ್ರೈವಲ್ಲಿ ಆಯ್ಕೆಯಾದ ಕು. ನಿವೇದಿತಾ ನಿಖಿಲ್ ಪೂಜಾರಿ ಇವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಾದ ಮಾನ್ವಿತ ಎಸ್ ಸುವರ್ಣ, ಡಿಯೋನ್ ಜೋಯಲ್ ಪಿಂಟೋ ಈ ಸ್ಪರ್ಧೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ದಿವ್ಯಶ್ರೀ ಬಿ, ಸುಷ್ಮಾ, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ-ಅಧ್ಯಾಪಕೇತರಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಲ್ರುಶಾ ಮಿಲಿನಾ ಡಿಸಾ ಬಹುಮಾನ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿಗಳಾದ ಗೌರವ ಬಂಗೇರ ಮತ್ತು ತಂಡ, ಆಲಿಸ್ಟರ್ ಸುಜಾಯ್ ಡಿಸೋಜ, ಅನುಪ್ ನಾಯಕ ಸಹಕರಿಸಿದರು. ಕು.ಶ್ರೀಲಕ್ಷ್ಮಿ ಪ್ರಾರ್ಥಿಸಿದರು. ಕು. ಛಾಯಾ ಏ ಕರ್ಕೇರ ಸ್ವಾಗತಿಸಿ, ಪದ್ಮಶ್ರೀ ಭಟ್ ವಂದಿಸಿದರು. ಕು. ಫೈಝ ಭಾನು ಕಾರ್ಯಕ್ರಮ ಸಂಯೋಜಿಸಿದರು.
