Updated News From Kaup

ನಾಳೆ (ಎಪ್ರಿಲ್ 18) : ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

Thumbnail
Posted On: 17 Apr 2023, 07:00 PM

ಕಾಪು : ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ, ಶಾಸಕರಾದ ವಿನಯ್ ಕುಮಾರ್ ಸೊರಕೆ ನಾಳೆ ಕಾಪು ತಾಲೂಕು ಕಛೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಿಗ್ಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಅಲ್ಲಿಂದ ಕಾಲ್ನಡಿಗೆಯಲ್ಲಿ ಕಾಪು ಪೇಟೆಯವರೆಗೆ ಬಂದು ಅಲ್ಲಿ ಸಾರ್ವಜನಿಕ ಸಭೆ ನಡೆಸಿ, ತದನಂತರ ಅಪರಾಹ್ನ ಗಂಟೆ 12.05 ರ ನಂತರ ಕಾಪು ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಯವರಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಪ್ರಕಟನೆ ತಿಳಿಸಿದೆ.

ಉಚ್ಚಿಲ : ಕಾಂಗ್ರೆಸ್ ನ ಗ್ಯಾರಂಟಿ ಕಾಡ್೯ ಚೀನಿ ಸೆಟ್ ರೇಡಿಯೋ ಕತೆಯಂತೆ - ಕೋಟ ಶ್ರೀನಿವಾಸ ಪೂಜಾರಿ

Thumbnail
Posted On: 16 Apr 2023, 04:54 PM

ಉಚ್ಚಿಲ : ಸಾಮಾಜಿಕ ಜಾಲತಾಣವನ್ನು ಅತ್ಯಂತ ಬಲಿಷ್ಟಗೊಳಿಸಬೇಕಾಗಿದೆ. ಆಡಳಿತಾತ್ಮಕ, ಸೈದ್ಧಾಂತಿಕ ಸಮರ್ಥನೆಗೂ ಸಾಮಾಜಿಕ ಜಾಲತಾಣ ಅನಿವಾರ್ಯ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಉಚ್ಚಿಲ ಮೊಗವೀರ ಸಭಾಭವನದಲ್ಲಿ ಜರಗಿದ ಮಂಗಳೂರು ವಿಭಾಗದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಈ ಬಾರಿ ಬಿಜೆಪಿ ಪಕ್ಷವು ಟಿಕೆಟ್ ಹಂಚಿಕೆಯಲ್ಲಿ ಐವತ್ತು ಮಂದಿ ಹಿಂದುಳಿದವರಿಗೆ, 30 ಮಂದಿ ಪರಿಶಿಷ್ಟ ಜಾತಿ,18 ಮಂದಿ ಪರಿಶಿಷ್ಟ ಪಂಗಡದವರಿಗೆ ಅವಕಾಶ ನೀಡಿದೆ. ಚುನಾವಣೆ ಗೋಸ್ಕರ ಅಲ್ಲ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೀಸಲಾತಿ ಸಿಗುವಂತೆ ಮಾಡುವುದೇ ಬಿಜೆಪಿಯ ಉದ್ದೇಶ. ಕಾಂಗ್ರೆಸ್ ಪಕ್ಷವನ್ನು ಜನರು ನಂಬುತ್ತಿಲ್ಲ. ಹಾಗಾಗಿ ಗ್ಯಾರಂಟಿ ಗ್ಯಾರಂಟಿ ಎನ್ನುತ್ತಿದ್ದಾರೆ. ಕಾಂಗ್ರೆಸ್ ನ ಗ್ಯಾರಂಟಿ ಕಾಡ್೯ ಚೀನಿ ಸೆಟ್ ರೇಡಿಯೋ ಕತೆಯಂತೆ. ರೆಡಿಯೋ ಹಾಳಾಗುತ್ತದೆ ಎಂದು ಜನ ಕೊಳ್ಳಲು ಗ್ಯಾರಂಟಿ ಕಾಡ್೯ ಕೊಡುತ್ತಿದ್ದ. ಹಾಳಾದ ರೇಡಿಯೋಗೆ ಗ್ಯಾರಂಟಿ ಕಾಡ್೯ ಇದೆ ಎಂದು ಕೊಂಡೊಯ್ದರೆ ಗ್ಯಾರಂಟಿ ಕಾಡ್೯ಗೇ ಗ್ಯಾರಂಟಿ ಇಲ್ಲ ಎನ್ನುತ್ತಿದ್ದ. ಅಂತೆಯೇ ಕಾಂಗ್ರೆಸ್ ನ ಗ್ಯಾರಂಟಿ ಕಾಡ್೯ ಜನರನ್ನು ವಂಚಿಸುವ ಕಾಡ್೯ ಎಂದರು. ಈ ಸಂದರ್ಭ ಕುಯಿಲಾಡಿ ಸುರೇಶ್ ನಾಯಕ್, ಉದಯ ಕುಮಾರ್ ಶೆಟ್ಟಿ, ವಿಕಾಸ್ ಪುತ್ತೂರು, ಸುದರ್ಶನ್, ಸುದೀಪ್ ಶೆಟ್ಟಿ, ರಾಘವೇಂದ್ರ ಠಾಕೂರ್, ಅಜಿತ್ ಕುಮಾರ್, ಜೀತು ಪೂಜಾರಿ, ದೆಹಲಿ ಶಾಸಕ ವಿಜೇಂದ್ರ ಗುಪ್ತ, ಶ್ರೀಕಾಂತ ನಾಯಕ್, ಮಹೇಶ್ ಠಾಕೂರ್ ಮತ್ತಿತರರು ಉಪಸ್ಥಿತರಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ವಿಕಾಸ್ ಪುತ್ತೂರು ಡಿಜಿಟಲ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸುಜಾತ ಪ್ರಾರ್ಥಿಸಿದರು. ಮಹೇಶ್ ಪೂಜಾರಿ ಸ್ವಾಗತಿಸಿದರು.

ರಾಷ್ಟ್ರ ದೃಷ್ಟಿಯ ದೇವಾಲಯ ಉತ್ಸವ : ಎಲ್ಲೂರು ವಿಶ್ವೇಶ್ವರ ದೇವರಿಗೆ "ಭೌವನೋತ್ಸವ"

Thumbnail
Posted On: 16 Apr 2023, 09:04 AM

ರಾಷ್ಟ್ರೀಯ ಏಕತೆ , ರಾಷ್ಟ್ರದ ಸಮೃದ್ಧಿ , ಪ್ರಜಾಶಾಂತಿ , ಜನಪದರ ನೆಮ್ಮದಿಯೆ ಮೊದಲಾದ ಲೋಕದೃಷ್ಟಿಯ ಆಶಯವಿರುವ "ದೇವಾಲಯಗಳ ವಾರ್ಷಿಕ ಮಹೋತ್ಸವ"ಗಳು ಸಕಲ ಪಾಪಗಳನ್ನು ಪರಿಹರಿಸುವಂತಹದ್ದು , ಅಮಂಗಲವನ್ನು ನಾಶಪಡಿಸುವಂತಹದ್ದು ,ಸೌಭಾಗ್ಯ - ಸಂತತಿ - ಸಂಪತ್ತು ಕೊಡುವಂತಹದ್ದು , ಧರ್ಮ - ಅರ್ಥ - ಕಾಮ - ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ ಈಡೇರಿಸುವಂತಹದ್ದು ಎಂಬುದು ಶಾಸ್ತ್ರ ಪ್ರಮಾಣ. ಈ ಸಂಕಲ್ಪದೊಂದಿಗೆ ನಡೆಸುವ ಉತ್ಸವದ ಅಂತ್ಯದಲ್ಲಿ ಮಹೋತ್ಸವದಿಂದ ಸಂತುಷ್ಟರಾದ ದೇವರು ರಾಜನಿಗೆ - ರಾಷ್ಟ್ರಕ್ಕೆ = "ರಾಜಾರಾಷ್ಟ್ರಕ್ಕೆ" ಹಾಗೂ ನಡೆಸಿದಂತಹಾ ಕರ್ತೃಗಳಿಗೆ, ನೋಡಿದಂತಹ ಮಹಾಜನರಿಗೆ ಬರುವಂತಹ ಸಕಲಾರಿಷ್ಟಗಳನ್ನು ಪರಿಹರಿಸಿ ಸದಾ ಭಾಗ್ಯ- ಭೋಗ - ನಿತ್ಯಸೌಮಂಗಲ್ಯೋತ್ಸವವನ್ನು ಅನುಗ್ರಹಿಸಬೇಕೆಂದು ಪ್ರಾರ್ಥಿಸಿಕೊಳ್ಳವುದು ಅಥವಾ ಧ್ಯಾನಿಸುವ ಸಂಪ್ರದಾಯವಿದೆ . ಇಂತಹ ಉತ್ಸವಗಳು ಅಂಕುರಾರೋಪಣ ಮೂಲಕ ನೆರವೇರಿದರೆ ಉತ್ತಮ , ಧ್ವಜಾರೋಹಣ ಪುರಸ್ಸರ ಸಂಪನ್ನಗೊಂಡರೆ ಮಧ್ಯಮ , ಭೇರಿತಾಡನ ಪೂರ್ವಕ ನಡೆದರೆ ಅಧಮ ಎಂದು ಉತ್ಸವಗಳನ್ನು ತಂತ್ರ - ಆಗಮ ಶಾಸ್ತ್ರಗಳು ವಿವರಿಸುತ್ತವೆ . ಒಂದು ದಿನದಲ್ಲಿ ಪೂರೈಸುವ ಉತ್ಸವವು ಶೈವೋತ್ಸವ , ಮೂರುದಿನಗಳ ಉತ್ಸವ ಗೌಣೋತ್ಸವ , ಐದು ದಿನಗಳ ಉತ್ಸವ ಭೌತಿಕೋತ್ಸವ, ಏಳು ದಿನಗಳ ಉತ್ಸವ ಭೌವನೋತ್ಸವ, ಒಂಬತ್ತು ದಿನಗಳ ಉತ್ಸವ ದೈವಿಕೋತ್ಸವ, ಹನ್ನೆರಡು ದಿನಗಳ ಉತ್ಸವ ಶ್ರೀಕರೋತ್ಸವ, ಇಪ್ಪತ್ತೊಂದು ದಿನಗಳ ಉತ್ಸವ ರೌದ್ರೋತ್ಸವ. ಇಂತಹ ಮಹೋತ್ಸವವನ್ನು ವರ್ಷದ ಯಾವ ತಿಂಗಳುಗಳಲ್ಲಿ ಮಾಡಬಹುದು ಅಥವಾ ಪ್ರಾರಂಭಿಸಬಹುದು ಎಂದರೆ : ಕಾರ್ತಿಕ ಮಾಸದಲ್ಲಿ , ಮಾರ್ಗಶಿರ ಮಾಸದಲ್ಲಿ ,ಮಾಘ - ಪಾಲ್ಗುಣ ಮಾಸಗಳಲ್ಲಿ , ಚೈತ್ರ - ವೈಶಾಖ ಮಧ್ಯದಲ್ಲಾಗಲಿ ನರವೇರಿಸ ಬಹುದೆಂಬುದು ಶಾಸ್ತ್ರ ಸೂಚನೆ . ಸಂಕ್ರಮಣದಲ್ಲಾಗಲಿ ,‌ಪೌರ್ಣಮಿ - ಅಮಾವಸ್ಯೆಯಲ್ಲಾಗಲಿ , ದೇವರ ಜನ್ಮನಕ್ಷತ್ರದಲ್ಲಾಗಲಿ ಮಹೋತ್ಸವ ಆರಂಭಿಸಬೇಕು ಎಂದು ನಿರ್ದೇಶಿಸುತ್ತದೆ ಶಾಸ್ತ್ರ . ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವರ ಸನ್ನಿಧಿಯಲ್ಲಿ ಮೇಷ ಸಂಕ್ರಮಣದಂದು ಧ್ವಜಾರೋಹಣ ಪರಸ್ಸರ ಉತ್ಸವ ಆರಂಭವಾಗುತ್ತದೆ . ಈ ಸಂದರ್ಭವು ಚೈತ್ರ - ವೈಶಾಖ ಮಾಸಗಳ ನಡುವೆ ಒದಗಿಬರುತ್ತದೆ. ಎ.13 ರಂದು ಅಂಕುರಾರೋಪಣ,ಎಪ್ರಿಲ್ 14 ರಂದು ಧ್ಜಜಾರೋಹಣದೊಂದಿಗೆ ಉತ್ಸವ ಆರಂಭಗೊಂಡು ಎಪ್ರಿಲ್ 20 ರ ಪರ್ಯಂತ ಏಳು ದಿನಗಳ ಕಾಲ ನೆರವೇರುವುದು .ಏಳು ದಿನಗಳ ಉತ್ಸವವಾಗಿರುವುದರಿಂದ ಇದು "ಭೌವನೋತ್ಸವ". ನಡೆದೇಗುಲದಲ್ಲಿ ದೇವರು : ಉತ್ಸವ ಎಂದರೆ ಒಂದಷ್ಟು ಅಲಂಕಾರ , ಧಾರ್ಮಿಕ ವಿಧಿ ವಿಧಾನಗಳು ,ತಂತ್ರಿಯವರ ನಿರ್ವಹಣೆಯ ಪೂಜೆ - ಬಲಿಗಳು , ವಿವಿಧ ವಾದ್ಯ - ವಾದನಗಳ ಸಡಗರದ ಬಲಿ , ಪಾಲಕಿ ಸುತ್ತು , ಕಟ್ಟೆಪೂಜೆ , ಸಿಡಿಮದ್ದು ಸಿಡಿಸುವುದು ಹಾಗೂ ಊರಿಗೆ ಊರೆ ಸಂಭ್ರಮಿಸುವ ಸಂದರ್ಭ . ಮಹಾಕ್ರೀಡೆಗಳು ನಡೆದು ಅದು ಮಹೋತ್ಸವವಾಗುತ್ತದೆ . ಈ ವಿಜೃಂಭಣೆಯ ಆಚರಣೆಗೆ ಮಹತ್ತು ಪ್ರಾಪ್ತಿಯಾಗುವುದು ರಥದಿಂದ . ರಥಾರೋಹಣ - ರಥೋತ್ಸವ - ರಥ ಎಳೆಯುವುದು ಮುಂತಾದ ಸಮಷ್ಟಿಗೆ ಪಾಲ್ಗೋಳ್ಳವಿಕೆಯ ಅವಕಾಶದಿಂದ ಇದನ್ನು "ಶ್ರೀಮನ್ಮಮಹಾರಥೋತ್ಸವ" ಎಂದಿರಬೇಕು. ರಥೋತ್ಸವ : ಸರ್ವಾಲಂಕೃತ ರಥವು ಸಾಗಿಬರುವುದನ್ನು ಕಂಡಾಗ ನಮಗನ್ನಿಸುವುದು ದೇವಾಲಯವೊಂದು ನಡೆದು ಬರುತ್ತಿರುವಂತೆ . ಆದುದರಿಂದ ರಥಗಳನ್ನು " ನಡೆದೇಗುಲ"ಗಳೆಂದು ಕರೆದಿರಬೇಕು . ಜನಪದರು ಸೇರಿ ಕಟ್ಟಿದ ರಥದಲ್ಲಿ ದೇವರ ರಥಾರೋಹಣದ ಪೂರ್ವಭಾವಿಯಾಗಿ ರಥದ ಚಕ್ರದಿಂದ ಆರಂಭಿಸಿ ಶಿಖರ ಪರ್ಯಂತ ದೇವಾನುದೇವತೆಗಳ ಸನ್ನಿಧಾನವನ್ನು‌ ಆವಾಹಿಸಲಾಗುವುದು , ಇಂತಹ ದೇವಲೋಕವೇ ಆಗುವ ಅಲಂಕೃತ ರಥಕ್ಕೆ ದೇವರ ಆರೋಹಣ , ರಥೋತ್ಸವ ಇವೆಲ್ಲ ಆಗಮ ಶಾಸ್ತ್ರದ ಕಲ್ಪನೆ - ಅನುಸಂಧಾನ. ದೇವರ ರಥಾರೋಹಣದ ಬಳಿಕ ಪೂಜೆ . ರಥ ಎಳೆಯುವ ಮೊದಲು ಸ್ಥಳವಂದಿಗರು , ಅಜಕಾಯಿ ಒಡೆಯುವ ಪಾರಂಪರಿಕ ಕ್ರಮವು ಎಲ್ಲೂರಿನಲ್ಲಿದೆ . ಇಂದಿಗೂ ನಡೆಯುತ್ತದೆ . ಇದಕ್ಕೆ ಪ್ರಾಶಸ್ತ್ಯವಿದೆ . ಇದೊಂದು ರಥೋತ್ಸವ ಎಂಬ ಆಚರಣೆಯ ಪದ್ಧತಿಯಾಗಿ ನೆರವೇರುತ್ತದೆ . ಇಂತಹ ಭವ್ಯ - ದಿವ್ಯ ರಥದಲ್ಲಿ ಸನ್ನಿಹಿತರಾಗುವ ದೇವರ ದರ್ಶನ ಮಾತ್ರದಿಂದ ಪುನರ್ಜನ್ಮವಿಲ್ಲ ಎಂಬ ಮಾತು , ಹಾಗೂ ಅಶ್ವಮೇಧ ಫಲಪ್ರಾಪ್ತಿ ಎಂಬ ಹೇಳಿಕೆಗಳು ರಥೋತ್ಸವಕ್ಕೆ ಪ್ರಾಧಾನ್ಯ ಕೊಡುತ್ತವೆ , ಬಹುಸಂಖ್ಯೆಯ ಮಂದಿ ಭಾಗವಹಿಸುತ್ತಿರುವ ಸಾರ್ವತ್ರಿಕ ವ್ಯಾಪ್ತಿಯನ್ನು ಸಮರ್ಥಿಸುತ್ತದೆ . ಗರ್ಭಗುಡಿಯಲ್ಲಿರುವ ದೇವರು ಅಂಗಣಕ್ಕೆ ಬರುವ ಪದ್ಧತಿ ಸಾಮಾನ್ಯ .ಆದರೆ ಉತ್ಸವ ಕಾಲದಲ್ಲಿ ದೇವರು ಊರಿನ ಎಲ್ಲೆಡೆ ಕಟ್ಟೆಪೂಜೆಗೆ ಹೋಗುವುದು , ರಥದಲ್ಲಿ ಸಂಚರಿಸುವುದು , ಅವಭೃತ , ಸೂಟೆದಾರ ಮುಂತಾದ ಉತ್ಸವ ವಿಧಿಗಳು ಸೂಕ್ಷ್ಮ ದಿಂದ ಸ್ಥೂಲಕ್ಕೆ ತೆರೆದುಕೊಳ್ಳುವ ದೇವಾಲಯ ಪರಿಕಲ್ಪನೆಯನ್ನು ಮತ್ತೆ ದೃಢಗೊಳಿಸುತ್ತದೆ . ಈ ಎಲ್ಲಾ ಸಮಾಜಮುಖಿ ಚಿಂತನೆ ಇರುವ ಕಾರಣಕ್ಕೆ ದೇವಾಲಯ ಉತ್ಸವ ಸರ್ವರ - ಸಮಾಜದ - ಭಕ್ತ ಸಂದಣಿಯ ಉತ್ಸಾಹಕ್ಕೆ ಕಾರಣವಾಗುತ್ತದೆ .ಇದು ಖಂಡಿತಾ ಸಂಕುಚಿತವಲ್ಲ ,ವೈಚಾರಿಕ ವೈಶಾಲ್ಯತೆ ಇರುವಂತಹದ್ದು ಎಂದನಿಸುವುದಿಲ್ಲವೆ . ಶಯನೋತ್ಸವ : ಇದು ಕಾಲಕ್ಕೆ ಸರಿಯಾದ ಮಳೆ - ಬೆಳೆ - ಸಮೃದ್ಧಿ ಆಶಯದ ಉತ್ಸವಾಂಗ . ರಥೋತ್ಸವದ ಬಳಿಕ ಅಂದು ರಾತ್ರಿ ದೇವರ ಗರ್ಭಗುಡಿಯಲ್ಲಿ ಈ ಶಯನೋತ್ಸವ ನಡೆಯುತ್ತದೆ . ನಿದ್ರಾಕಲಶವಿರಿಸಿ ,ಪಾರ್ವತಿ ಪರಮೇಶ್ವರರನ್ನು ಸುಖನಿದ್ದೆಗಾಗಿ ಪ್ರಾರ್ಥಿಸಿ ಗರ್ಭಗುಡಿಯ ದ್ವಾರವನ್ನು ಬಂಧಿಸಬೇಕು. ಮರುದಿನ ಸುಪ್ರಭಾತದಲ್ಲಿ ಕವಾಟೋದ್ಘಾಟನೆ.ಮಧ್ಯಾಹ್ನ ಸಂಭ್ರಮದ ಉತ್ಸವ. ಸಂಜೆ ಓಕುಳಿ - ಮಾಣಿಯೂರು ಮಠದಲ್ಲಿ ಅವಭೃತ. ಹಿಂದಿರುಗುವಾಗ ತೂಟೆದಾರ.ಅವಭೃತ - ಆರಟ. 'ಆರಟ'ವನ್ನು "ಜಳಕ"ವೆಂದೂ ಹೇಳುತ್ತಾರೆ . ದೇವಳಕ್ಕೆ ಹಿಂದಿರುಗಿದ ಮೇಲೆ ಮೂಲಸ್ಥಾನ ವಿಶ್ವೇಶ್ವರ ದೇವರಿಗೆ "ಗಂಧಪೂಜೆ". ಉತ್ಸವದಲ್ಲಿ ಸಂಭವಿಸಿರಬಹುದಾದ ನ್ಯೂನಾತಿರಿಕ್ತ ದೋಷ ಪರಿಹಾರ ಹಾಗೂ ಸಕಾಲದ ಮಳೆ - ಬೆಳೆ - ಸರ್ವಸಮೃದ್ಧಿಯನ್ನು ಯಾಚಿಸಿ ಈ ಪೂಜೆ ಮೂಲಲಿಂಗಕ್ಕೆ ತೇದ ಗಂಧವನ್ನು ಲೇಪಿಸಿ ಸೀಮೆಯ ಪ್ರಾರ್ಥನೆಯೊಂದಿಗೆ ಸಂಪನ್ನಗೊಳ್ಳುವುದು. ಮುಂದೆ ಧ್ವಜಾವರೋಹಣ , ಮಹಾಮಂತ್ರಾಕ್ಷತೆ. ದೀಪಾರಾಧನೆಯಂತೆ , ದೀಪೋತ್ಸವದಂತೆ , ದೀವಟಿಗೆಗಳಂತೆ , ಹಿಲಾಲುಗಳ ವೈಭವದಂತೆ , ಪಚ್ವೆಡಿಯ (ಬಟ್ಟೆಯನ್ನು ಎಣ್ಣೆಯಲ್ಲಿ ಅದ್ದಿ ಹಿಲಾಲಿನ ತುದಿಗೆ ಕಟ್ಟಿ ದೇವರ ಮುಂಭಾಗ ಉರಿಸುವುದು) ಸೇವೆಯಂತೆ , ಸಿಡಿಮದ್ದು ಸಿಡಿಸುವ ಗದ್ದಲದಂತೆ 'ತೂಟೆದಾರ' ನಡೆಯುತ್ತದೆ . ಸುಮಾರು 900 - 1000 ವರ್ಷ ಪುರಾತನವಾದ ಎಲ್ಲೂರಿನ ವಿಶ್ವೇಶ್ವರ ದೇವರು "ಕುಂದ ಅರಸರ" ತಪಸ್ಸಿಗೆ ಒಲಿದು ಕಾಶಿಯಿಂದ ಬಂದರೆಂಬುದು ಕ್ಷೇತ್ರ ಸಂಬಂಧಿಯಾದ ಪುರಾಣ ಕಥೆ.ಮೂಲಸ್ಥಾನ ವಿಶ್ವೇಶ್ವರ ದೇವರಿಗೆ ಅನ್ನಪೂರ್ಣೇಶ್ವರೀ ಹಾಗೂ ಗಣಪತಿ ಉಪಸ್ಥಾನ ಸನ್ನಿಧಿಗಳು.ಉಳಿದಂತೆ ಮೂಲ ಸ್ಥಾನದಲ್ಲಿರುವ ಬ್ರಹ್ಮ,ನಾಗ,ಚಾವುಂಡಿ, ಗುಳಿಗ ಸನ್ನಿಧಾನಗಳು ಮತ್ತು ವೀರಭದ್ರ ,ನಂದಿಕೇಶ್ವರ ಹಾಗೂ ಆಂಜನೇಯ ಸಂಕಲ್ಪಗಳು ಪರಿವಾರ ಶಕ್ತಿಗಳು ಕ್ಷೇತ್ರದಲ್ಲಿ ಸನ್ನಿಹಿತವಾಗಿವೆ.ಪುರಾತನ ಸಂಪ್ರದಾಯ,ಆಚರಣೆಯ ಪದ್ಧತಿಗಳನ್ನು ಉಳಿಸಿಕೊಂಡು ಬಂದಿರುವ ಜಿಲ್ಲೆಯ ಕೆಲವೇ ದೇವಳಗಳಲ್ಲಿ‌ ಎಲ್ಲೂರಿನ ಮಹತೋಭಾರ ಶ್ರೀವಿಶ್ವೇಶ್ವರ ದೇವಸ್ಥಾನ‌ ಒಂದು. ಇದೊಂದು ಮಾಗಣೆಗಳ ಕೂಡುಕಟ್ಟು ಹಾಗೂ ನೂರ ಐದು ಸ್ಥಳವಂದಿಗರಿರುವ ಸೀಮೆಯ ದೇವಳ. ಭಾರತೀಯ ದೇವಾಲಯಗಳಿಗೆ ಜಾನಪದ ಮೂಲವಿದೆ ಎಂಬ ವಿದ್ವಾಂಸರ - ಸಂಶೋಧಕರ ಅಭಿಪ್ರಾಯಗಳು ದೇವಳಗಳಲ್ಲಿ ನೆರವೇರುವ ವಾರ್ಷಿಕ ಉತ್ಸವ ವಿಧಾನಗಳಿಂದ , ಆ ವೇಳೆಯ ಸಮಷ್ಟಿಯ ಸಹಭಾಗಿತ್ವದ ಶೈಲಿಯಿಂದ ದೃಢಗೊಳ್ಳುತ್ತದೆ . ಲೇಖನ : ಕೆ.ಎಲ್.ಕುಂಡಂತಾಯ { "ಮಹತೋಭಾರ ಎಲ್ಲೂರು ವಿಶ್ವನಾಥ" - 'ಕ್ಷೇತ್ರ ಪರಿಚಯ' ಪುಸ್ತಕದಿಂದ.} ಕಾರ್ಯಕ್ರಮದ ವಿವರ : 14- 04- 2023.......ಧ್ವಜಾರೋಹಣ ‌‌‌‌‌‌‌ 18 - 04 - 2023 ....ಮೃತ್ಯುಂಜಯ ಯಾಗ 19 - 04 - 2023... ಶ್ರೀ ಮನ್ಮಹಾರಥೋತ್ಸವ 20 - 4 -2023.. ಕವಾಟೋದ್ಘಾಟನೆ, ಅವಭೃತ,ಗಂಧಪೂಜೆ, ಧ್ವಜಾವರೋಹಣ, ಮಹಾಮಂತ್ರಾಕ್ಷತೆ.

ಎಪ್ರಿಲ್ 16 - 30 : ಗ್ರ್ಯಾವಿಟಿ ಡ್ಯಾನ್ಸ್ ಕ್ರೀವ್ ವತಿಯಿಂದ ಸಮ್ಮರ್ ಕ್ಯಾಂಪ್ ದಮಾಕ

Thumbnail
Posted On: 15 Apr 2023, 11:10 PM

ಕಾಪು : ಗ್ರ್ಯಾವಿಟಿ ಡ್ಯಾನ್ಸ್ ಕ್ರೀವ್ ಇವರ ವತಿಯಿಂದ ನೆರವೇರಲಿರುವ ಸಮ್ಮರ್ ಕ್ಯಾಂಪ್ ದಮಾಕ ಎಪ್ರಿಲ್ 16ರಿಂದ ಎಪ್ರಿಲ್ 30ರವರೆಗೆ ನಡೆಯಲಿದೆ. ಇದರ ವತಿಯಿಂದ ಮಕ್ಕಳಿಗೆ ಹಲವಾರು ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಡ್ಯಾನ್ಸ್:- ವಿನೂತನ ನೃತ್ಯ ಭಂಗಿಗಳು,ಮುಖದಲ್ಲಿ ನೃತ್ಯದ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬಹುದು ಎಂದು ಮಕ್ಕಳಿಗೆ ತಿಳಿಸಿ ಕೊಡಲಾಗುತ್ತದೆ. ಚಿತ್ರಕಲೆ:- ಹಲವಾರು ಶ್ಯೆಲಿಯ ಚಿತ್ರಕಲೆಯ ಸೊಬಗನ್ನು ಮಕ್ಕಳಿಗೆ ತಿಳಿಸಿಕೊಡಲಾಗುವುದು. ಅಭಿನಯ:- ಖ್ಯಾತ ಕಲಾವಿದರಿಂದ ಅಭಿನಯದ ಸ್ಪರ್ಶವನ್ನು ಮಕ್ಕಳಿಗೆ ಹೇಳಿಕೊಡಲಾಗುವುದು. ಸ್ಪರ್ಧೆ:- ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಯೊಂದಿಗೆ ಮನೋರಂಜಿಸಲಾಗುವುದು.

ಪಡುಬಿದ್ರಿ : ಕಂಚಿನಡ್ಕ ಮತಗಟ್ಟೆಗೆ ಜಿಲ್ಲಾಧಿಕಾರಿ ಸೇರಿದಂತೆ ತಾಲೂಕು ಅಧಿಕಾರಿ ವರ್ಗ ಭೇಟಿ

Thumbnail
Posted On: 15 Apr 2023, 10:58 PM

ಪಡುಬಿದ್ರಿ : ಇಲ್ಲಿನ ನಡ್ಸಾಲು ಗ್ರಾಮದ ಕಂಚಿನಡ್ಕದ ವಲ್ನರೇಬಲ್ ಮತಗಟ್ಟೆಗೆ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಕಾಪು ತಾಲೂಕು ಅಧಿಕಾರಿ ವರ್ಗ ಭೇಟಿ ನೀಡಿದರು. ಈ ಸಂದರ್ಭ ಸಾರ್ವಜನಿಕರಿಗೆ ಯಾವುದೇ ಒತ್ತಡ ಆಮಿಷಗಳಿಗೆ ಒಳಗಾಗದೇ ನಿರ್ಭೀತಿಯಿಂದ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಲಾಯಿತು. ಈ‌ ಸಂದರ್ಭ ಸ್ಥಳೀಯರು ಮತ್ತು ಅಧಿಕಾರಿ ‌ವರ್ಗ ಉಪಸ್ಥಿತರಿದ್ದರು.

ಕಾಪು : ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ - ಕಾರ್ಯಕರ್ತರ ಭೇಟಿ ; ಸಮಾಲೋಚನೆ

Thumbnail
Posted On: 15 Apr 2023, 08:14 PM

ಕಾಪು : ಇಲ್ಲಿನ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಇಂದು ಕುರ್ಕಾಲು, ಇನ್ನಂಜೆ ಮಲ್ಲಾರು, ಕಟಪಾಡಿ, ಮಜೂರು, ಎಲ್ಲೂರು, ಕೋಟೆ ಗ್ರಾಮೀಣ ಕಾಂಗ್ರೆಸ್ ಸಮಿತಿಗಳಿಗೆ ಭೇಟಿ ನೀಡಿ, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ನಾಮಪತ್ರ ಸಲ್ಲಿಸುವ ಬಗ್ಗೆ ಕಾರ್ಯಕರ್ತರ ಹಾಗೂ ಪಕ್ಷದ ಹಿತೈಷಿಗಳಲ್ಲಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿ ಮಾಡಿಕೊಂಡರು. ಈ ಸಂದರ್ಭ ಡಾ. ದೇವಿ ಪ್ರಸಾದ ಶೆಟ್ಟಿ, ಜಿತೇಂದ್ರ ಪೂಟಾರ್ಡೋ, ನವೀನ್ ಚಂದ್ರ ಜೆ ಶೆಟ್ಟಿ, ದಿವಾಕರ್, ಸುರೇಶ್ ಪೂಜಾರಿ ಕೂರ್ಕಾಲು, ನವೀನ್ ಚಂದ್ರ ಸುವರ್ಣ ಅಡ್ವೆ, ವೈ ಸುಕುಮಾರ್, ದೇವಪುತ್ರ ಕೋಟ್ಯಾನ್, ರಾಜೇಶ್ ರಾವ್ ,ಶ್ರೀಕರ್ ಅಂಚನ್, ಅಶೋಕ್ ರಾವ್ ಕಟ್ಪಾಡಿ ,ಅಬ್ದುಲ್ ಅಜೀಜ್, ನಯೀಮ್ ಕಟಪಾಡಿ, ಅಖಿಲೇಶ್ ಕೋಟ್ಯಾನ್, ಪ್ರಭಾಕರ್ ಆಚಾರ್ಯ, ಅಬೂಬಕರ್ ಕಟಪಾಡಿ, ಮಹೇಶ್ ಶೆಟ್ಟಿ ಬಿಳಿಯಾರು ಮುಂತಾದವರು ಉಪಸ್ಥಿತರಿದ್ದರು.

ಮೋದಿಯವರ ಯೋಜನೆ, ಯೋಚನೆ ಮತ್ತು ಶಾಸಕ ಲಾಲಾಜಿ ಮೆಂಡನ್ ರ ಅಭಿವೃದ್ಧಿ ಕೆಲಸಗಳೇ ಗೆಲುವಿಗೆ ಶ್ರೀರಕ್ಷೆ : ಸುರೇಶ್ ಶೆಟ್ಟಿ ‌ಗುರ್ಮೆ

Thumbnail
Posted On: 15 Apr 2023, 07:47 PM

ಕಾಪು : ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷ ನನ್ನನ್ನು ಅಭ್ಯರ್ಥಿಯನ್ನಾಗಿದೆ. ಎಪ್ರಿಲ್ 17, ಸೋಮವಾರ ಬೆಳಗ್ಗೆ 10 ಗಂಟೆಗೆ ಕಾಪು ಜನಾರ್ಧನ ದೇವಸ್ಥಾನದಿಂದ ಸುಮಾರು 25,000 ಜನರ ಸೇರುವಿಕೆಯೊಂದಿಗೆ ಪಾದಯಾತ್ರೆ ಮೂಲಕ ಕಾಪು ತಾಲೂಕು ಕಛೇರಿಗೆ ಸಾಗಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಶೆಟ್ಟಿ ‌ಗುರ್ಮೆ ಹೇಳಿದರು. ಅವರು ಕಾಪುವಿನಲ್ಲಿ ಜರಗಿದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ನಾಮಪತ್ರಿಕೆ ಸಲ್ಲಿಕೆಯಂದು ಅಣ್ಣಾಮಲೈ, ಸುನಿಲ್ ಕುಮಾರ್, ಕೋಟ ಶ್ರೀನಿವಾಸ ‌ಪೂಜಾರಿ, ಲಾಲಾಜಿ‌‌ ಮೆಂಡನ್, ರಘುಪತಿ ಭಟ್, ಯಶ್ಪಾಲ್ ಸುವರ್ಣ ಭಾಗವಹಿಸಲಿದ್ದಾರೆ. ನರೇಂದ್ರ ಮೋದಿಯ ಯೋಜನೆ, ಯೋಚನೆಯ ಜೊತೆಗೆ ಸ್ಥಳೀಯವಾಗಿ ಶಾಸಕರಾದ ಲಾಲಾಜಿ‌ ಮೆಂಡನ್ ರವರ ಐದು ವರ್ಷಗಳಲ್ಲಿ ಮೂರು ಸಾವಿರ ಕೋಟಿ ಅನುದಾನ ಕ್ಷೇತ್ರಕ್ಕೆ ತಂದಿದ್ದಾರೆ. ನಮ್ಮ ಚುನಾವಣೆಗೆ ಇದು ಶ್ರೀರಕ್ಷೆಯಾಗಲಿದೆ. ಮುಂದೆ ಹಲವಾರು ಕನಸುಗಳಿವೆ ಎಂದರು. ಈ ಸಂದರ್ಭ ಮಾತನಾಡಿದ ಶಾಸಕ ಲಾಲಾಜಿ ಮೆಂಡನ್ ಪಕ್ಷ 6 ಬಾರಿ ಸ್ಪರ್ಧಿಸಲು ಅವಕಾಶ ನೀಡಿ 3 ಬಾರಿ ಶಾಸಕನಾಗಿ ಆಯ್ಕೆಯಾಗಿ ಮೂರು ಸಾವಿರಕ್ಕೂ ಮಿಕ್ಕಿ ಅನುದಾನದ ಕಾರ್ಯಯೋಜನೆಗಳಾಗಿವೆ. ಸುರೇಶ್ ಶೆಟ್ಟಿ ಗುರ್ಮೆಯವರು ಶಾಸಕನಾಗಿ ಆಯ್ಕೆಯಾಗಿ ಹಲವಾರು ರೀತಿಯ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ದೆಹಲಿ ವಿಧಾನಸಭಾ ಶಾಸಕ ಹಾಗೂ ಚುನಾವಣಾ ಪ್ರವಾಸಿ ಪ್ರಭಾರಿ ವಿಜೇಂದರ್ ಗುಪ್ತ, ಶಾಸಕರಾದ ಲಾಲಾಜಿ ಮೆಂಡನ್, ಮಟ್ಟಾರ್ ರತ್ನಾಕರ್ ಹೆಗ್ಡೆ, ಕಾಪು ಕ್ಷೇತ್ರದ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹಿರಿಯರಾದ ಗಂಗಾಧರ್ ಸುವರ್ಣ, ಗೀತಾಂಜಲಿ ಸುವರ್ಣ ಮತ್ತು ಶಿಲ್ಪಾ ಜಿ ಸುವರ್ಣ ಉಪಸ್ಥಿತರಿದ್ದರು.

ಬೆಳಪು : ಕಾಂಗ್ರೆಸ್ ಚುನಾವಣಾ ಕಛೇರಿ ಉದ್ಘಾಟನೆ

Thumbnail
Posted On: 14 Apr 2023, 07:25 PM

ಬೆಳಪು : ಇಲ್ಲಿ ಕಾಂಗ್ರೆಸ್ ಸ್ಥಾನೀಯ ಸಮಿತಿಯ ಚುನಾವಣಾ ಕಛೇರಿಯನ್ನು ಇಂದು ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಚುನಾವಣೆಗೆ ಅಣಿಗೊಳ್ಳುವ ನಿಟ್ಟಿನಲ್ಲಿ ಬೆಳಪು ಭಾಗದಲ್ಲಿ ಗ್ರಾಮೀಣ ಕಾಂಗ್ರೆಸ್ ಕಚೇರಿಯನ್ನು ಪ್ರಾರಂಭಿಸಲಾಗಿದೆ. ಏಪ್ರಿಲ್ 18ರಂದು ನಾಮಪತ್ರ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಬೆಳಿಗ್ಗೆ 10 ಗಂಟೆಗೆ ಜನಾರ್ಧನ ದೇವಸ್ಥಾನದಿಂದ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಕಾಪು ಕಾಂಗ್ರೆಸ್ ಭವನದಲ್ಲಿ ಸಭೆ ನಡೆಸಿ ಮಧ್ಯಾಹ್ನ 12ಗಂಟೆಯ ನಂತರ ನಾಮಪತ್ರ ಸಲ್ಲಿಸಲಿದ್ದೇನೆ ಎಂದರು. ಈ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಮುಖರಾದ ದೇವಿ ಪ್ರಸಾದ್ ಶೆಟ್ಟಿ, ದಿವಾಕರ ಶೆಟ್ಟಿ, ಸುನಿಲ್ ಬಂಗೇರ, ಶೇಖರ ಹೆಜ್ಮಾಡಿ, ಜಿತೇಂದ್ರ ಫುಟಾರ್ಡೊ, ಶೇಖಬ್ಬ, ಝಾಹಿರ್, ಗುಲಾಂ, ಹರೀಶ್ ನಾಯಕ್, ಸೆಲ್ವ, ಸತೀಶ್, ಮುಸ್ತಾಕ್, ಮನ್ಸೂರ್, ದೀಪಕ್ ಕುಮಾರ್ ಎರ್ಮಾಳ್ ಮತ್ತಿತರರು ಉಪಸ್ಥಿತರಿದ್ದರು.

ಪಲಿಮಾರು : ಆಕಸ್ಮಿಕವಾಗಿ ಕೈಜಾರಿ ಆಯತಪ್ಪಿ ಬಾವಿಗೆ ಬಿದ್ದ ವ್ಯಕ್ತಿ ಮೃತ್ಯು

Thumbnail
Posted On: 14 Apr 2023, 07:21 PM

ಪಲಿಮಾರು : ಗ್ರಾಮದ ಮಠದ ಬಳಿಯ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕೈಜಾರಿ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ. ಕೃಷಿ ಕೆಲಸ ಮಾಡಿಕೊಂಡಿದ್ದ ಭಾಸ್ಕರ ದೇವಾಡಿಗ (60) ಏಪ್ರಿಲ್ 13 ರಂದು ಕೆಲಸ ಮುಗಿಸಿ ಸಂಜೆ ಪಲಿಮಾರು ಪೇಟೆಗೆ ಹೋಗಿ ವಾಪಾಸ್ಸು ಮನೆಗೆ ನಡೆದುಕೊಂಡು ಬರುವಾಗ ಮನೆಯ ಬಳಿ ಕಾಲು ದಾರಿಯ ಬದಿಯಲ್ಲಿ ಇದ್ದ ಗಿರೀಶ್ ಎಂಬುವರ ಆವರಣ ದಂಡೆ ಇರುವ ಬಾವಿಯ ಕುಂದವನ್ನು ಹಿಡಿದು ಮುಂದೆ ಸಾಗುವ ಸಮಯ ಆಕಸ್ಮಿಕವಾಗಿ ಕೈಜಾರಿ ಆಯ ತಪ್ಪಿ ಬಾವಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂಬುದಾಗಿ ಮೃತರ ಸಂಬಂಧಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರಿ : ಬಿಲ್ಲವ ಸಮಾಜ ಸೇವಾ ಸಂಘ - 23ನೇ ವರ್ಷದ ಬ್ರಹ್ಮಶ್ರೀ ನಾರಾಯಣ ಗುರುಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ

Thumbnail
Posted On: 14 Apr 2023, 12:28 PM

ಪಡುಬಿದ್ರಿ : ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಏಪ್ರಿಲ್ 16, ಆದಿತ್ಯವಾರ 23ನೇ ವರ್ಷದ ಬ್ರಹ್ಮಶ್ರೀ ನಾರಾಯಣ ಗುರುಮೂರ್ತಿ ಪ್ರತಿಷ್ಠಾಪನಾ ಮಹೋತ್ಸವವು ಜರಗಲಿದೆ. ಬೆಳಿಗ್ಗೆ ಗಂಟೆ 7ರಿಂದ 9 ರವರೆಗೆ ಗಣಹೋಮ ಹಾಗೂ ಕಲಶಾಭಿಷೇಕ, ಬೆಳಿಗ್ಗೆ 9:30ರಿಂದ ಸಂಜೆ 6 ಗಂಟೆಯವರೆಗೆ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 1 ರಿಂದ ಅನ್ನ ಸಂತರ್ಪಣೆ, ಸಂಜೆ ಗಂಟೆ 6:30ಕ್ಕೆ ಮಹಾಮಂಗಳಾರತಿ ಜರಗಲಿದೆ ಎಂದು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಪ್ರಕಟನೆ ತಿಳಿಸಿದೆ.