Updated News From Kaup
ನಿಸರ್ಗಾಂತರ್ಗತ "ಚೈತನ್ಯ" ಸಂಭ್ರಮಿಸುವ ಸನ್ನಿಧಾನ ಪಡುಬಿದ್ರಿಯ ಬ್ರಹ್ಮಸ್ಥಾನ

Posted On: 21-01-2023 06:59PM
ಸಹಜ ನಿಸರ್ಗ ಮತ್ತು ಅಲಂಕೃತ ನಿಸರ್ಗದ ಸನ್ನಿಧಿಗಳಲ್ಲಿ "ನಡುವಣಲೋಕ" ನಿರ್ಮಾಣವಾಗಬಲ್ಲುದು . "ಪ್ರಕೃತಿ" , ನಿಜವಾಗಿ ಸಂಭ್ರಮಿಸುವುದು ಅಲಂಕಾರದಲ್ಲಿ ಮತ್ತು ಅಲಂಕಾರ ರಹಿತ ಸ್ಥಿತಿಯಲ್ಲಿ . ಇಂತಹ ಒಂದು ಅಪೂರ್ವ ನೆಲೆಯಾಗಿ ಪಡುಬಿದ್ರಿಯ ಬ್ರಹ್ಮಸ್ಥಾನ ಪ್ರಕಟಗೊಳ್ಳುತ್ತದೆ . [ ಆದರೆ ಇಲ್ಲಿಯ ನೈಜ ಸೊಬಗನ್ನಾಗಲಿ, ಅಲಂಕೃತ ಚಿತ್ರಣವನ್ನಾಗಲಿ ಕ್ಯಾಮರಾಗಳಲ್ಲಿ ಕ್ಲಿಕ್ಕಿಸಿ ಕೊಂಡೊಯ್ಯುವಂತಿಲ್ಲ , ಆ ಭವ್ಯವನ್ನು ಪ್ರತ್ಯಕ್ಷ ಕಂಡೇ ಅನುಭವಿಸಬೇಕು . ಕಲಾವಿದರು ಬಿಡಿಸಿದ ಚಿತ್ರಗಳು ಇವೆ , ಅವುಗಳಷ್ಟೆ ಇಲ್ಲಿ ಸಿಗುವ ಅಭಿವ್ಯಕ್ತಿಗಳು . ಇದು ಇಲ್ಲಿಯ ಶಿಸ್ತು .]

ನಿಸರ್ಗವು ನೈಜ ಸ್ಥಿತಿಯಲ್ಲಿ ಅಂದರೆ "ಇದ್ದಹಾಗೆ" ( ಅಲಂಕಾರ ರಹಿತ ) . ಅಲಂಕೃತ ಸ್ವರೂಪ ಎಂದರೆ ಮಾನವ ನಿರ್ಮಿತ ಅಲಂಕರಣದಲ್ಲಿ ಎಂದು ಅರ್ಥೈಸಿಕೊಂಡರೆ ಈ ಎರಡೂ ಸ್ಥಿತಿಯಲ್ಲಿ ತೆರೆದುಕೊಳ್ಳಬಲ್ಲುದು.ಈ ಸನ್ನಿಧಿಯಲ್ಲಿ ಸಾಧಕನು ತಾದಾತ್ಮ್ಯ ಸಾಧಿಸಬಲ್ಲ . ಇಲ್ಲಿಯ ಅಲಂಕರಣಗಳಿಲ್ಲದ ಸ್ಥಿತಿ , ಹಕ್ಕಿಗಳ ಇಂಚರದಲ್ಲಿಯೂ ಸೃಷ್ಟಿಯಾಗುವ ಮೌನ , ಪ್ರಕೃತಿಯ ರಮ್ಯಮನೋಹರ ನೋಟ ನಡುವಣ ಲೋಕಕ್ಕೆ ನಮ್ಮನ್ನು ಸುಲಭವಾಗಿ ಒಯ್ಯುವಂತಿರುತ್ತದೆ . ಅದೇ ನಿಸರ್ಗ ಹೂ ,ಹಣ್ಣು , ಫಲವಸ್ತುಗಳಿಂದ ಶೃಂಗಾರಗೊಂಡಾಗ ಮಂದ ಬೆಳಕಿನಲ್ಲಿ ಅಂದರೆ ಆರಾಧನೆ ಅಥವಾ ವಿಧಿಯಾಚರಣೆಗೆ ಅಣಿಯಾದಾಗ ಒಂದು ಅಲೌಕಿಕ ಲೋಕ ನಿರ್ಮಾಣವಾಗುತ್ತದೆ ಇದೇ ನಡುವಣಲೋಕ . ಇದು ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲಿ ಸಾಧ್ಯವಾಗುವ ಅಥವಾ ಸಿದ್ಧಿಯಾಗುವ "ದಿವ್ಯ"ದ ಸಾಕ್ಷಾತ್ಕಾರ . ಎರಡು ವರ್ಷಗಳಿಗೊಮ್ಮೆ "ಡಕ್ಕೆಬಲಿ" ಎಂಬ ಸೇವೆ ನಡೆಯುವ ಶ್ರಾಯದಲ್ಲಿ ಒಂದಷ್ಟು ದಿನ ಪ್ರಕೃತಿ ಶೃಂಗಾರಗೊಳ್ಳುತ್ತದೆ . ಉಳಿದ ದೀರ್ಘ ಅವಧಿಯಲ್ಲಿ ಸಹಜ ಸ್ಥಿತಿ ಇರುತ್ತದೆ .ಇದು ಏಕಾಂತದಲ್ಲಿ ನಮ್ಮನ್ನು ನಾವೇ ಮರೆಯುವಂತಹ ಸ್ಥಿತಿ ತಲುಪಲು ಸಾಧ್ಯವಾಗುವ ಪ್ರಕೃತಿಯ ತಾಣ . ಗಿಡ , ಮರ ,ಬಳ್ಳಿ ,ಕಲ್ಲು ,ಬಂಡೆ , ಮಣ್ಣು ಮುಂತಾದ ನಿಸರ್ಗದ ಅವಿಭಾಜ್ಯ ಅಂಗಗಳಲ್ಲಿ ಅಗೋಚರವಾದ ಶಕ್ತಿ ಇದೆ ಎಂಬ ಅನುಭವ ಸಿದ್ಧವಾದ ಪ್ರಾಚೀನರ ನಂಬಿಕೆ ಮತ್ತು ಪದ್ಧತಿಗಳು ಚೈತನ್ಯವಾದವನ್ನವಲಂಬಿಸಿತ್ತು . ಇಂತಹ ಚೈತನ್ಯವನ್ನು ತನಗೆ ಬೇಕೆಂದಲ್ಲಿ ಒದಗಿಬರುವಂತೆ ಮಾಡಲು ಅವರು ಪೂಜಾವಿಧಾನವನ್ನು ಅನುಸರಿಸಿದರು . ಸಾನ್ನಿಧ್ಯವಿದೆ ಎಂದು ಪೂಜೆಯಲ್ಲ ಪೂಜೆಯಾಗುತ್ತಿರುವಂತೆ ಸಾನ್ಮಿಧ್ಯ ಒದಗಿಬರುವ ನಿಸರ್ಗಾಂತರ್ಗತವಾದ ಶಕ್ತಿಯನ್ನು ಒಪ್ಪಿದ ,ಸ್ವೀಕರಿಸಿದ ನಮ್ಮ ಪೂರ್ವಸೂರಿಗಳು ಪ್ರಕೃತಿಯ ಮಡಿಲಲ್ಲಿ ಇಂತಹ ಪೂಜಾಸ್ಥಾನಗಳನ್ನು ಕಲ್ಪಿಸಿದರು .ಈ ಪರಿಕಲ್ಪನೆಯಲ್ಲಿ ರೂಢಿಗೆ ಬಂದಿರುವ ಪ್ರಾಚೀನ ಆರಾಧನಾ ಸ್ಥಾನವೇ "ಪಡುಬಿದ್ರಿಯ ಬ್ರಹ್ಮಸ್ಥಾನ",ಅಥವಾ 'ಬೆರ್ಮಸ್ಥಾನ'. ಇಲ್ಲಿ ಎಲ್ಲವೂ ಬಟ್ಟಂಬಯಲು . ಆದರೆ ಏನೂ ಅರ್ಥವಾಗದ ಸಂಕೀರ್ಣ ಶ್ರದ್ಧಾಸ್ಥಾನ . ಇಲ್ಲಿ ಯಾವುದೇ ಕಟ್ಟಡಗಳಿಲ್ಲ ಆದರೆ "ಕಟ್ಟು ಕಟ್ಟಳೆ"ಯಂತೆ ಪೂಜಾ ವಿಧಿಗಳು ನಡೆಯುತ್ತಿರುವಂತೆ ನಂಬಿಕೆ ಒದಗಿ ಬರುತ್ತದೆ ಅಥವಾ ಇಚ್ಛಿತ ಸಂಕಲ್ಪ ಸನ್ನಿಹಿತವಾಗುತ್ತದೆ . ಅಂದರೆ ಇಲ್ಲಿ 'ಕಟ್ಟುಕಟ್ಟಳೆಗಳೇ' ಪ್ರಧಾನವಾಗುತ್ತಾ ಸಮಗ್ರ ವಿಧಿಗಳು ನಿರ್ವಹಿಸಲ್ಪಡುತ್ತವೆ . ಈ ಎಲ್ಲಾ ವಿಧಿವಿಧಾನಗಳು ತಂತ್ರ ರೂಪದವುಗಳು , ಮಂತ್ರ ಮುಖ್ಯವಾದವುಗಳಲ್ಲ . ಏಕೆಂದರೆ ಇದು ಪ್ರಾಚೀನವಾದುದು . ವೈದಿಕ ಪೂರ್ವದ ಸರಳ ,ಮುಗ್ಧ , ವಿಮರ್ಶೆಗಳಿಲ್ಲದ ಉಪಾಸನಾ ಕ್ರಮಗಳಿರುವ ನೆಲೆ . ಇದು ಪಡುಬಿದ್ರಿಯ ಬ್ರಹ್ಮಸ್ಥಾನ - ಬೆರ್ಮಸ್ಥಾನ. ಎರಡು ವರ್ಷಕ್ಕೊಮ್ಮೆ ನಡೆಯುವ ಡಕ್ಕೆಬಲಿ ಎಂಬ ಸೇವೆಯಿಂದ ಗುರುತಿಸಲ್ಪಡುವ ಒಂದು ನಿಸರ್ಗದ ಮಡಿಲು . ಈ ಡಕ್ಕೆಬಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಪ್ರಸಿದ್ಧ ಏಳು ಉತ್ಸವಗಳಲ್ಲಿ ಒಂದು . ಏಕೆಂದರೆ ಇಲ್ಲಿ ಯಾವುದೇ ವಿಕೃತಿಗಳಿಲ್ಲದ ಸೊಬಗಿನ ಪ್ರಕೃತಿ ಇದೆ .ಸಂಜೆಯಾಗುತ್ತಿರುವಂತೆ ಅಲಂಕಾರ ಆರಂಭವಾಗುತ್ತದೆ , ನಡು ಇರುಳಲ್ಲಿ ನಿಸರ್ಗ ಪೂರ್ಣ ಸೊಬಗಿನಿಂದ ವಿಜೃಂಭಿಸುತ್ತದೆ . ಆಗ 'ಕಟ್ಟು ಕಟ್ಟಳೆ'ಗಳು ನೆರವೇರುತ್ತವೆ , ಬೆಳಗಾಗುತ್ತಿರುವಂತೆ ಆರಾಧನೆ ಮುಗಿಯುತ್ತದೆ , ಪ್ರಕೃತಿ ಮತ್ತೆ ಅಲಂಕರಣಗಳನ್ನು ಕಳಚಿಕೊಂಡು ನೈಜ ಸ್ಥಿತಿಗೆ ಬರುತ್ತದೆ . ಇಂತಹ ರೂಪಾಂತರವು ಆರಾಧನಾ ಪರ್ವದಲ್ಲಿ ಮಾತ್ರ ಕಾಣಬಹುದಾದ ಇಲ್ಲಿಯ ವೈಶಿಷ್ಟ್ಯ . ಜಗದಗಲ ಹಬ್ಬಿರುವ ಚೈತನ್ಯವು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ವಿಜೃಂಭಿಸುತ್ತದೆ . ಆ ಸ್ಥಳಗಳೇ ನಿಸರ್ಗದ ಅಚಿಂತ್ಯಾದ್ಭುತವಾದ ಸಾಮರ್ಥ್ಯಕ್ಕೆ ಒದಗಿದ ಸನ್ನಿಧಾನ .ಆದುದರಿಂದಲೇ ಇಲ್ಲಿ ಏಕಾಗ್ರತೆ ಸುಲಭ .ಮೌನದಲ್ಲಿ ಹೇಗೆ ಅನುಸಂಧಾನ ಲೀಲಾಜಾಲವಾಗಿ ಸಾಧಿಸಲ್ಪಡುತ್ತದೋ ಅಂತೆಯೇ ಗದ್ದಲಗಳಿದ್ದರೂ ಅವ್ಯಕ್ತ ಚೈತನ್ಯದೊಂದಿಗೆ ತಾದಾತ್ಮ್ಯ ಸಾಧ್ಯವಾಗುವುದು . ಈ ಸಿದ್ಧಿ ಪಡೆದವರು ಬಹುಮಂದಿ , ಆದರೆ ಈಗ ಬೆರಳೆಣಿಕೆಯಷ್ಟು ಮಾತ್ರ . ವೈಭವೀಕರಣಗೊಂಡ ನಂಬಿಕೆ , ಶ್ರದ್ಧೆ , ಸನ್ನಿಧಾನದ ದರ್ಶನ , ಸೇವಾ ಸಮರ್ಪಣೆ ಮುಂತಾದುವುಗಳು ಯಾವ ತಾದಾತ್ಮ್ಯವನ್ನೂ ಬಯಸುವುದಿಲ್ಲ , ಬದಲಿಗೆ ನಡವಳಿಕೆಗಳನ್ನು ಮಾತ್ರ ವ್ಯಕ್ತ ಪಡಿಸುತ್ತದೆ .ಆದುದರಿಂದ ನಿಸರ್ಗದೊಂದಿಗೆ ಒಳಗೊಳ್ಳುವ ಉಪಾಸನಾ ವಿಧಾನವೇ ಮರೆತಂತೆ . ಆದರೆ ಇದು ಪಡುಬಿದ್ರಿಯ ಬಟ್ಟಂಬಯಲಿನ , ಆದರೆ ಸಾಮರ್ಥ್ಯ( ಚೈತನ್ಯ) ಸಂಭ್ರಮಿಸುತ್ತಿರುವ ಬ್ರಹ್ಮಸ್ಥಾನದಲ್ಲಿ ಮಾತ್ರ ಜಾಗೃತವಾಗಿದೆ . ಎಷ್ಟು ಮಂದಿಗೆ ಸಾಕ್ಷಾತ್ಕಾರವಾಗಿದೆ ಗೊತ್ತಿಲ್ಲ . ಇಂತಹ ಧ್ಯಾನಾಸಕ್ತರು ಇಂದಿಗೂ ಇದ್ದಾರೆ .
"ಬ್ರಹ್ಮಸ್ಥಾನ" ಎಂದರೇನು ? : ಬೆಮ್ಮೆರ್ , ಬೆರ್ಮೆರ್ , ಬ್ರಹ್ಮೆರ್ ಎಂದು ತುಳುವರು ಸ್ವೀಕರಿಸಿರುವ , ಪ್ರಕೃತಿಯಲ್ಲಿ ಅಂತರ್ಗತವಾಗಿರುವ ಒಂದು ಶಕ್ತಿ .ಇದನ್ನು ರಕ್ಷಾ ಶಕ್ತಿಎಂದು ಪರಿಗ್ರಹಿಸಿದ ನಮ್ಮ ಪೂರ್ವ ಸೂರಿಗಳು ಕಾಲಾಂತರದಲ್ಲಿ ಬೆರ್ಮೆರ್ ಅಥವಾ ಬ್ರಮ್ಮೆರ್ ಪ್ರಧಾನವಾಗಿ ತಮ್ಮ ಆರಾಧನೆಗಳನ್ನು ನೇರ್ಪುಗೊಳಿಸಿದರು , ಅದರಂತೆ ರೂಢಿಗೆಬಂತು . 'ಬ್ರಹ್ಮೆರ್' ಅಥವಾ 'ಬೆಮ್ಮೆರ್' ಪ್ರಧಾನವಾಗಿರುವ ನೆಲೆಗಳನ್ನು ಬ್ರಹ್ಮಸ್ಥಾನವೆಂದು ಗುರುತಿಸಲು ಆರಂಭಿಸಿದ್ದು ಬಹುಶಃ ವೈದಿಕರ ಆಗಮನದ ಬಳಿಕ ಇರಬೇಕು . ಅದಕ್ಕೂ ಪೂರ್ವದಲ್ಲಿದ್ದ ಸಮೂಹ ಪೂಜಾ ಸ್ಥಾನಗಳೇ ಬೆರ್ಮಸ್ಥಾನ ಅಥವಾ ಬ್ರಹ್ಮಸ್ಥಾನಗಳು . ಸಮೂಹ ಪೂಜೆ ಎಂದರೆ ಆದಿಮ ಸಂಸ್ಕೃತಿಯಲ್ಲಿ ಆರಾಧಿಸಬೇಕೆಂದು ಬಯಸಿದ ಎಲ್ಲಾ ಶಕ್ತಿಗಳಿಗೆ ಒಂದು ವ್ಯವಸ್ಥೆಯ ಅಡಿಯಲ್ಲಿ ಸ್ಥಾನ ಕಲ್ಪಿಸಿದ್ದು , ವೈದಿಕದ ಆಗಮನದ ಬಳಿಕ ನಿಯಮ - ನಿಬಂಧನೆಗಳಿಗೆ ಒಳಪಟ್ಟು ನಾವು ಈಗ ಕಾಣುವ ಬ್ರಹ್ಮಸ್ಥಾನಗಳು ಕಲ್ಪಿಸಲ್ಪಟ್ಟುವು . ಒಂದು ಒಪ್ಪಿಗೆಯಂತೆ ಬ್ರಹ್ಮಸ್ಥಾನ ಎಂದರೆ ಪಂಚ ದೈವಸ್ಥಾನಗಳು . ಆದರೆ ಅದು ಐದಕ್ಕೆ ಸೀಮಿತಗೊಳ್ಳುವ ಶಕ್ತಿಗಳ ನೆಲೆಯಲ್ಲ .ಬದಲಿಗೆ ಒಂದಷ್ಟು ದೈವಗಳು ಇಲ್ಲಿ ಸ್ಥಾನ ಪಡೆಯುತ್ತವೆ . ಬ್ರಹ್ಮ ಅಥವಾ ಬೆರ್ಮೆರ್ ಪ್ರಧಾನವಾಗಿ ಇಲ್ಲಿ ಎಲ್ಲಾ ಸನ್ನಿಧಾನಗಳು ಸನ್ನಿಹಿತವಾಗಿರುತ್ತವೆ . ಆದುದರಿಂದಲೇ ಇಂತಹ ಆರಾಧನಾ ಸ್ಥಾನಗಳು 'ಬ್ರಹ್ಮಸ್ಥಾನ'ಗಳು ಎಂದು ಗುರುತಿಸಲ್ಪಡುತ್ತವೆ . ಇತ್ತೀಚೆಗೆ ಜಿಲ್ಲೆಯ ಹಲವೆಡೆ ಇಂತಹ ಬ್ರಹ್ಮಸ್ಥಾನಗಳು 'ನಾಗಬ್ರಹ್ಮಸ್ಥಾನ'ಗಳಾಗಿ ಬದಲಾಗುತ್ತಿವೆ . ಬ್ರಹ್ಮ ಅಥವಾ ಬೆರ್ಮೆರ್ ಕುರಿತಂತೆ ಸ್ಪಷ್ಟವಾದ ಕಲ್ಪನೆ ದೊರೆಯದ ಕಾರಣ ಇಂತಹ ಬದಲಾವಣೆಗಳು ನಡೆಯುತ್ತವೆ ಎಂದನಿಸುತ್ತದೆ . ಅಂತೆಯೇ ಪಡುಬಿದ್ರಿಯಲ್ಲಿ ಇಂತಹ ಒಂದು ಸ್ಥಿತ್ಯಂತರ ಸಂಭವಿಸಿದ್ದು , "ಖಡ್ಗೇಶ್ವರೀ ಬ್ರಹ್ಮಸ್ಥಾನ"ವೆಂದು ಹೇಳಲಾಗುತ್ತಿದೆ ,ಆದರೆ "ಬ್ರಹ್ಮಸ್ಥಾನ" ಎಂಬ ಮೂಲದ ಹೆಸರು ಬದಲಾಗಲೇ ಇಲ್ಲ ,ಇದು ಇಲ್ಲಿಯ ಶ್ರದ್ಧೆ , ಸಂಪ್ರದಾಯ ಬದ್ಧತೆ. ಒಂದು ಕಾಲದಲ್ಲಿ ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲೂ ಒಂಬತ್ತು ಮಂದಿ ಸ್ಥಾನಿಗಳು ( ಪಾತ್ರಿಗಳು ) ಬೇರೆಬೇರೆ ಹೆಸರಿನಲ್ಲಿ ಸನ್ನಿಧಾನದ ಮುಂದೆ ಪ್ರಕಟಗೊಳ್ಳುತ್ತಿದ್ದುದನ್ನು ಸ್ಥಳೀಯ ಹಿರಿಯರು ನೆನಪಿಸಿಕೊಳ್ಳುತ್ತಾರೆ . ಯಾವುದೇ ರೀತಿಯಲ್ಲಿ ಸನ್ನಿಧಾನದ ಆಂತರ್ಯವನ್ನು ನಿರೂಪಿಸಲಾಗದೇ ಇರುತ್ತದೊ ಅದೇ ಆ ಸನ್ನಿಧಾನದ ಮಹತ್ವ . ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದಂತೆ ಹಲವು ಅವಶೇಷಗಳು ಏಳು - ಎಂಟು ಕಿ .ಮೀ . ವ್ಯಾಪ್ತಿಯಲ್ಲಿ ದೊರೆಯುತ್ತವೆ . ಪ್ರತಿ ವರ್ಷ ಆಟಿ ತಿಂಗಳಲ್ಲಿ ಒಂದು ದಿನ ( ಹದಿನಾರನೇ ದಿನ ) ಹೊಸ ಮರಳನ್ನು ಸಮುದ್ರತೀರದಿಂದ ತಂದು ಹಾಕುವ ಸಂಪ್ರದಾಯವಿದೆ . ಇಲ್ಲಿ ನಡೆಯುವ ವಿಧಿಯಾಚರಣೆಗಳೆಲ್ಲ "ಅವೈದಿಕ"ಗಳಾದರೂ ನಿರ್ವಹಿಸುವವರು ಮಾತ್ರ ವೈದಿಕರು . ಮೂಲ ದ್ರಾವಿಡ ಭಾಷೆಯ ಒಂದಷ್ಟು ಶಬ್ದಗಳು ವೈದಿಕರಿಂದ ಬ್ರಹ್ಮಸ್ಥಾನದಲ್ಲಿ ಮಾತ್ರ ಉಚ್ಚರಿಸಲ್ಪಡುತ್ತವೆ . ಇಂತಹ ಹತ್ತಾರು ನಿರ್ವಹಣೆಗಳನ್ನು , ಸಂಪ್ರದಾಯಗಳನ್ನು ಗಮನಿಸಿದಾಗ ಪಡುಬಿದ್ರಿಯ ಬ್ರಹ್ಮಸ್ಥಾನದ ಪ್ರಾಚೀನತೆ ಇತಿಹಾಸಕಾಲಕ್ಕಿಂತಲೂ ಹಿಂದೆ ಹೋಗುತ್ತದೆ . ಹಾಗಾಗಿ ಆ ಸನ್ನಿಧಾನಕ್ಕೆ ಏನೆಂದು ಹೆಸರಿಸಿದರೂ ಸೂಕ್ತವಾಗದು .ಇದೇ ಇಲ್ಲಿಯ ಅಭೇದ್ಯವಾದ ಸನ್ನಿಧಾನ ವಿಶೇಷ . ಕಲ್ಪನೆಗೆ ನಿಲುಕದ ಸಂಕಲ್ಪಗಳಿರುವ ಪೂಜಾಸ್ಥಾನ . ಈ ಕುರಿತು ಸತ್ಯ ಶೋಧನೆ ಅನಗತ್ಯ . ಇದು ಕೇವಲ ಒಂದು ಗ್ರಹಿಕೆ ಮಾತ್ರ .
ಡಕ್ಕೆಬಲಿ - ಬ್ರಹ್ಮಮಂಡಲ : ಡಕ್ಕೆಬಲಿ ಎಂದರೆ 'ಬೂತನಾಗರಿಗೆ ಮಂಡಲ ಬರೆದು ನಡೆಸುವ ಒಂದು ಬಗೆಯ ನೃತ್ಯರೂಪದ ಆರಾಧನೆ' ಎನ್ನುತ್ತದೆ ತುಳು ನಿಘಂಟು . ಇದನ್ನೇ ಬ್ರಹ್ಮಮಂಡಲ ಎನ್ನಲಾಗುತ್ತದೆ . ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲಿ ಒಂದು ಡಕ್ಕೆಬಲಿಯ ವಿಧಿವಿಧಾನವು ಎರಡು ವಿಭಾಗವಾಗಿ ನೆರವೇರುತ್ತದೆ . ರಾತ್ರಿ ಸುಮಾರು ಹತ್ತು - ಹನ್ನೊಂದು ಗಂಟೆಯಿಂದ ನಡೆಯುವುದು "ತಂಬಿಲ" , ಇದು ಮೊದಲ ಭಾಗ . ತಡ ರಾತ್ರಿಯ ಬಳಿಕ ಎರಡನೇ ಭಾಗವಾಗಿ ಡಕ್ಕೆಬಲಿ ಸಂಪನ್ನಗೊಳ್ಳುತ್ತದೆ . ರಾತ್ರಿ ತಂಬಿಲ ನವರಾತ್ರಿ ಹಾಗೂ ಮಾಮೂಲು ದಿನಗಳಲ್ಲಿ ಸಾಂಪ್ರದಾಯಿಕವಾಗಿ ಹಾಗೂ ಹರಕೆಯಂತೆ ನಡೆಯುತ್ತಿರುತ್ತವೆ . ಆದರೆ ಅದಕ್ಕೆ ಡಕ್ಕೆಯವರು ಇರುವುದಿಲ್ಲ ,ಆದರೆ ದ್ವೈವಾರ್ಷಿಕ ಡಕ್ಕೆಬಲಿ ಸಂದರ್ಭದಲ್ಲಿ ಮಾಮೂಲಿನ ತಂಬಿಲವು ಡಕ್ಕೆಯವರ ಸಹಭಾಗಿತ್ವದಲ್ಲಿ ನೆರವೇರುತ್ತದೆ . ತಂಬಿಲ ಮುಗಿದ ಬಳಿಕ ಮಧ್ಯೆ ವಿಶ್ರಾಂತಿ ಇರುತ್ತದೆ . ಆವೇಳೆಯಲ್ಲಿ ಗುರಿಕಾರರು , ಅರ್ಚಕರು , ಪಾತ್ರಿಗಳು ,ಡಕ್ಕೆಯವರು , ಇತರ ಕಾರ್ಯನಿರ್ವಹಿಸುವವರು ಉಪಾಹಾರ ಸ್ವೀಕರಿಸುತ್ತಾರೆ . ಬಳಿಕ ಡಕ್ಕೆಯವರು ಮಂಡಲ ಬರೆಯುವ ಚಿಟ್ಟೆಯಲ್ಲಿ ಡಕ್ಕೆ ಬಲಿ ಮಂಡಲ ರಚಿಸಿ ಅಲಂಕರಿಸುತ್ತಾರೆ . ಈ ಮಂಡಲವು ಬ್ರಹ್ಮ ಪ್ರಧಾನವಾಗಿಯೇ ಇರುತ್ತದೆ . ಡಕ್ಕೆ ಬಲಿ ಆರಂಭವಾಗುವಾಗ ಡಕ್ಕೆಯವರ ಹಾಡು , ಅರ್ಧನಾರಿ ವೇಷ ಧರಿಸಿದ ವೈದ್ಯರು ಮಂಡಲ ಚಿಟ್ಟೆ - ಬ್ರಹ್ಮಸನ್ನಿಧಾನದ ನಡುವೆ ಕುಣಿಯುತ್ತಾರೆ . ಮತ್ತೆ ಪಾತ್ರಿಗಳ ಆವೇಶ , ಒಬ್ಬೊಬ್ಬರನ್ನಾಗಿ ಮಂಡಲದತ್ತ ಕರೆದೊಯ್ಯುವುದು , ಮಂಡಲ ಪ್ರದಕ್ಷಿಣೆ , ಅಲ್ಲಿ ಬೇರೆ ಬೇರೆ ವಿಧಿಗಳು ನಡೆದ ಬಳಿಕ ,ಮರಳಿ ಮೂಲ ಸನ್ನಿಧಾನದ ಎದುರಿಗೆ ಬಂದು ಪ್ರಸಾದ ವಿತರಣೆ ನಡೆಯುತ್ತದೆ .ಇದು ಸ್ಥೂಲವಾದ ವಿಧಿಯಾಚರಣೆಯ ವಿಧಾನ ಇನ್ನೂ ವಿಸ್ತಾರವಾಗಿ ನಡೆಯುತ್ತವೆ , ಅವುಗಳನ್ನು ನೋಡಿಯೇ ಗ್ರಹಿಸಬೇಕು . ಆಗಲೂ ಪೂರ್ಣವಾಗಿ ಅರ್ಥವಾಗದು, ಅದೇ ಪಡುಬಿದ್ರಿ ಬ್ರಹ್ಮಸ್ಥಾನದ ಸಾನ್ನಿಧ್ಯ ವಿಶೇಷ .ಇದಕ್ಕಿಂತ ಹೆಚ್ಚಿನ ವಿವರಣೆ ನೀಡಲಾಗದು . ನೀಡಲೂಬಾರದು . ಏಕೆಂದರೆ ಇದು "ನಿಸರ್ಗಾಂತರ್ಗತ ಬ್ರಹ್ಮಶಕ್ತಿ" ಸನ್ನಿಹಿತವಾದ ನೆಲೆ . ಡಕ್ಕೆಬಲಿ ಸಂದರ್ಭದಲ್ಲಿ ಮಾತ್ರ ನಿಸರ್ಗ ಒಂದು ರಾತ್ರಿಯ ಅವಧಿಗೆ ಅಲಂಕರಿಸಲ್ಪಡುತ್ತದೆ , ಬೆಳಗಾಗುವ ವೇಳೆ ಮತ್ತೆ ಸಹಜ ಸ್ಥಿತಿಗೆ ಮರಳುತ್ತದೆ .ಇಂತಹ "ದರ್ಶನ" ಇಲ್ಲಿ ಮಾತ್ರ ಸಾಧ್ಯ. ವೀಳ್ಯೆದೆಲೆಯಲ್ಲಿ ಗಂಧ, ಮರಳು ಇಲ್ಲಿ ಪ್ರಸಾದ : ಆರಾಧನೆಯ ಸಂದರ್ಭಗಳಲ್ಲಿವೀಳ್ಯೆದೆಲೆಯಲ್ಲಿ ಗಂಧ ನೀಡುವುದು,(ಉಳಿದ ದಿನಗಳಲ್ಲಿ ಸನ್ನಿಧಾನಕ್ಕೆ ನಮಸ್ಕರಿಸುವಾಗ ಮೈಗೆ ಅಂಟಿಕೊಳ್ಳುವ ಮರಳು ಇಲ್ಲಿ ಪ್ರಸಾದ).ಅಡಿಕೆ ಮರದ ಹಾಳೆ ವೀಳ್ಯೆದೆಲೆಯ ಹರಿವಾಣವಾಗುವುದು, ತಾರತಮ್ಯಗಳಿಲ್ಲದ ಸಭಾ ವ್ಯವಸ್ಥೆ - ಎಂದರೆ ಆಸನಗಳಿಲ್ಲದೆ ನೆಲದಲ್ಲೆ ಕುಳಿತುಕೊಳ್ಳುವುದು , ದೊಂದಿ ಬೆಳಕಿಗೆ ಪ್ರಾಧಾನ್ಯ, ವೈಭವದ ವಾದ್ಯಗಳಿಗೆ ಅವಕಾಶವಿಲ್ಲದಿರುವುದು, ಯಾವುದೇ ವಿಧಿ ನಿರ್ವಹಣೆಯಲ್ಲಿ ರಾಜಿ ಸೂತ್ರವಿಲ್ಲ, ನಿಯಮದಂತೆ ನಡೆಯತಕ್ಕದ್ದು, ಕರ್ತವ್ಯಲೋಪದಲ್ಲಿ ಕ್ಷಮೆ ಇಲ್ಲದಿರುವುದು ಇವು ಇಲ್ಲಿಯ ವಿಶೇಷಗಳು. ಪಡುಬಿದ್ರಿಯ ಬ್ರಹ್ಮಸ್ಥಾನ ಅಂದರೆ ಖಡ್ಗೇಶ್ವರೀ ಬ್ರಹ್ಮಸ್ಥಾನ ಮತ್ತು ಅಲ್ಲಿ ನೆರವೇರುವ ಎಲ್ಲಾ ಸೇವಾದಿಗಳು ಪಡುಬಿದ್ರಿಯ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಜವಾಬ್ದಾರಿ ಮತ್ತು ನೇತೃತ್ವದಲ್ಲಿ ನೆರವೇರುತ್ತದೆ . ಸುಗಮ ನಿರ್ವಹಣೆಗೆ ವನದುರ್ಗಾ ಟ್ರಸ್ಟ್ ಇದೆ . ಲೇಖನ : ಕೆ.ಎಲ್.ಕುಂಡಂತಾಯ ರೇಖಾ ಚಿತ್ರ : ದಾಮೋದರ ರಾವ್
ಜನವರಿ 21 : ಉಡುಪಿ ಜಿಲ್ಲೆಯ ರಜತ ಮಹೋತ್ಸವ - ಕಾಪು ಕಡಲ ಕಿನಾರೆಯಲ್ಲಿ ಸಭಾ, ಸಾಂಸ್ಕೃತಿಕ, ಸಂಗೀತ ರಸಮಂಜರಿ ಕಾರ್ಯಕ್ರಮ

Posted On: 20-01-2023 11:45PM
ಕಾಪು : ತಾಲೂಕು ಆಡಳಿತದ ವತಿಯಿಂದ ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಅಂಗವಾಗಿ ಜನವರಿ 21, ಶನಿವಾರ ಅಪರಾಹ್ನ 2.30 ಗಂಟೆಯಿಂದ ಕಾಪು ಕಡಲ ಕಿನಾರೆಯಲ್ಲಿ ವಿವಿಧ ಕಾರ್ಯಕ್ರಮಗಳು ಜರಗಲಿವೆ.
ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಡಿ.ವಿ ಸದಾನಂದ ಗೌಡ ಉದ್ಘಾಟಿಸಲಿದ್ದಾರೆ.
ಅಪರಾಹ್ನ 2.30 ರಿಂದ 3.30 ರವರೆಗೆ ಸ್ತಬ್ಧ ಚಿತ್ರ ಮೆರವಣಿಗೆ ಕಾಪು ಪುರಸಭೆಯಿಂದ - ಕಾಪು ಪೇಟೆಯಾಗಿ - ಕಾಪು ಬೀಚ್ ಗೆ ಸಾಗಲಿದೆ. ಕಾಪು ಕಡಲ ಕಿನಾರೆಯಲ್ಲಿ ಅಪರಾಹ್ನ ಗಂಟೆ 3.30 ರಿಂದ 5 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 5 ಕ್ಕೆ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ, ಸಂಜೆ ಗಂಟೆ 6 ರಿಂದ ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್ ಹಾಗೂ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಲಿದೆ.
ಜನವರಿ 22 : ಯಂಗ್ ಫ್ರೆಂಡ್ಸ್ ಪಡುಬಿದ್ರಿ - ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಕೋಸ್ಟಲ್ ಸ್ಮ್ಯಾಷರ್ಸ್ ಟ್ರೋಫಿ 2023

Posted On: 20-01-2023 10:57PM
ಪಡುಬಿದ್ರಿ : ಇಲ್ಲಿನ ಯಂಗ್ ಫ್ರೆಂಡ್ಸ್ ಪಡುಬಿದ್ರಿ ವತಿಯಿಂದ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಕೋಸ್ಟಲ್ ಸ್ಮ್ಯಾಷರ್ಸ್ ಟ್ರೋಫಿ 2023 ಇದರ ಉದ್ಘಾಟನಾ ಸಮಾರಂಭ ಜನವರಿ 22, ಆದಿತ್ಯವಾರ ಬೆಳಿಗ್ಗೆ 9:30 ಕ್ಕೆ ಹಳೆಯಂಗಡಿಯ ಟೋರ್ಪೆಡೋಸ್ ಸ್ಫೋಟ್ಸ್೯ ಕ್ಲಬ್ನ ಒಳಾಂಗಣ ಶಟಲ್ ಕೋಟ್೯ ನಲ್ಲಿ ಜರಗಲಿದೆ.

ಸ್ಮ್ಯಾಷಸ್೯ ವೆಲ್ಫೇರ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ಅಧ್ಯಕ್ಷ ರಮೀಝ್ ಹುಸೇನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಲಿದ್ದು, ಪಂದ್ಯಾಟವನ್ನು ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ ನ ಅಧ್ಯಕ್ಷರಾದ ವೈ ಸುಕುಮಾರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಕೋರ್ಡಿನೇಟರ್ ನವೀನ್ಚಂದ್ರ ಜೆ ಶೆಟ್ಟಿ, ಪಡುಬಿದ್ರಿ ಸಿಎ ಬ್ಯಾಂಕ್ ಅಧ್ಯಕ್ಷ ವೈ ಸುಧೀರ್ ಕುಮಾರ್, ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಎನ್ ಶೆಟ್ಟಿ, ಮ್ಯಾಂಗಳೋರ್ ಪ್ರಾಪರ್ಟೀಸ್ ಮ್ಯಾನೇಜಿಂಗ್ ಡೈರೆಕ್ಟರ್ ರೋಜರ್ ಎಮ್ ಪಿಂಟೊ, ಕೋಸ್ಟಲ್ ಫರ್ನಿಚರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಹನಿಫ್ ಕೋಸ್ಟಲ್, ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಗೌರವ ಅಧ್ಯಕ್ಷ ಶರತ್ ಶೆಟ್ಟಿ, ದೇವಿ ಜುವೆಲರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಸನ್ನ ಎಸ್ ಎಸ್, ಕಾಪು ಪ್ರೆಸ್ ಕ್ಲಬ್ ಅಧ್ಯಕ್ಷ ಸುರೇಶ್ ಎರ್ಮಾಳು, ಸ್ಮ್ಯಾಷಸ್೯ ವೆಲ್ಫೇರ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ಗೌರವ ಅಧ್ಯಕ್ಷ ಕೌಸರ್ ಭಾಗವಹಿಸಲಿದ್ದಾರೆ.

ಪಂದ್ಯಾಟದಲ್ಲಿ ಒಟ್ಟು 10 ತಂಡಗಳು, 80 ಆಟಗಾರರಿದ್ದು, ವಿನ್ನಸ್೯ಗೆ ರೂ.20,000 ನಗದು, ಟ್ರೋಫಿ, ರನ್ನಸ್೯ಗೆ ರೂ. 13,0000 ನಗದು, ಟ್ರೋಫಿ ದೊರೆಯಲಿದೆ.
ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ನೌಶೀರ್ ಮಾಲೀಕತ್ವದ ಕೋಸ್ಟಲ್ ಹಿರೋಸ್, ನಿತೇಶ್ ರವರ ಎರ್ಮಾಳು ಗುರು ಫ್ರೆಂಡ್ಸ್, ನಸ್ರುಲ್ಲರವರ ಟೀಮ್ ಸಿಗ್ನೇಚರ್, ಕಾರ್ತಿಕ್ ರವರ ದುರ್ಗಾ ಫ್ರೆಂಡ್ಸ್ ಎರ್ಮಾಳು, ಶಂಕರ್ ಕಂಚಿನಡ್ಕ ಇವರ ಯಶ್ ವಾರಿಯಸ್೯, ಕೃಷ್ಣ ಬಂಗೇರ ಇವರ ಯನ್ಶ್ ರಿಯಲ್ ಫೈಟಸ್೯, ಅನ್ವರ್ ಅಹ್ಮದ್ ರವರ ಕ್ಲಬ್ ಡಿ ಎನ್ಫಿಗೊ, ಪ್ರಶಾಂತ್ ರವರ ಎಸ್ ಎನ್ ಜಿ ಎರ್ಮಾಳು, ತರುಣ್ ಶೆಟ್ಟಿ ಇವರ ಟಿಯಾನ್ ಶೆಟ್ಟಿ ಫ್ರೆಂಡ್ಸ್, ರಾಝಿ ಮಾಲೀಕತ್ವದ ರೈಸಿಂಗ್ ಸ್ಟಾರ್ ಪಡುಬಿದ್ರಿ ತಂಡಗಳು ಭಾಗವಹಿಸಲಿವೆ ಎಂದು ಪಂದ್ಯಾಟದ ಸಂಘಟಕರಾದ ಮಿನ್ನಾ ಷರೀಫ್, ಪ್ರವೀಣ್ ಎರ್ಮಾಳು, ಇಮ್ರಾನ್ ಪಡುಬಿದ್ರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರ್ವ : ಅಪಘಾತ ವಲಯ ಸಮೀಪದ ಗಿಡಗಂಟಿಗಳ ಸ್ವಚ್ಚತೆ

Posted On: 20-01-2023 10:09PM
ಶಿರ್ವ : ಶಿರ್ವದ ಅಪಘಾತ ವಲಯವೆಂದು ಪರಿಗಣಿಸಲ್ಪಟ್ಟ ರಾಬಿನ್ ಬಸ್ ಸ್ಟ್ಯಾಂಡ್ ರಸ್ತೆ ಬದಿಯ ತಿರುಗು ರಸ್ತೆ ಬಳಿ ಇರುವ ಗಿಡಗಂಟಿಗಳನ್ನು ಶಿರ್ವ ಸಿ. ಎ. ಬ್ಯಾಂಕ್ ಕಾರ್ಯದರ್ಶಿ ರವೀಂದ್ರ ಆಚಾರ್ಯ, ಬಂಟಕಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆ ಅಧ್ಯಕ್ಷ ಮಾಧವ ಕಾಮತ್, ಲl ರವೀಂದ್ರ ಆಚಾರ್ಯ ಬಂಟಕಲ್ ಇವರ ಸಹಕಾರದಿಂದ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತನ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ತೆರವುಗೊಳಿಸಲಾಯಿತು.
ಸರಕಾರ ಪಂಜಿಮಾರು ಪಾಲ್ಕೆಯಿಂದ ಸಿದ್ದಿ ವಿನಾಯಕ ದೇವಸ್ಥಾನದವರೆಗಿನ ರಸ್ತೆಯನ್ನು ದ್ವೀಪದಗೊಳಿಸದೆ ಕೆಲವಾರು ಅಪಘಾತ ಈ ವಲಯದಲ್ಲಿ ಸಂಭವಿಸಿ ಪ್ರಾಣಹಾನಿ ಉಂಟಾಗಿದೆ. ಸಾರ್ವಜನಿಕರು, ಗ್ರಾಮ ಪಂಚಾಯತ್ ಮನವಿ ಮಾಡಿದರು ಸರಕಾರ ಸ್ಪಂದನೆ ಮಾಡಲಿಲ್ಲ ಎಂದು ರತನ್ ಶೆಟ್ಟಿ ಅಭಿಪ್ರಾಯಪಟ್ಟು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.
ಕಾಪು : ಮೂಳೂರು ಯುವ ಗೆಳೆಯರ ಬಳಗದ 33ನೇ ವಾರ್ಷಿಕೋತ್ಸವ ಸಂಪನ್ನ

Posted On: 19-01-2023 09:07PM
ಕಾಪು : ಮುಳೂರು ಯುವ ಗೆಳೆಯರ ಬಳಗದ 33ನೇ ವಾರ್ಷಿಕೋತ್ಸವ ಬುಧವಾರ ಸಂಪನ್ನಗೊಂಡಿತು. ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕಳೆದ 33 ವರ್ಷಗಳಿಂದ ನಿರಂತರ ಸಮಾಜ ಸೇವೆ ಮಾಡುತ್ತಿರುವ ಯುವ ಗೆಳೆಯರ ಬಳಗದ ಸದಸ್ಯರು ಅಭಿನಂದನೆಗೆ ಅರ್ಹರು ಎಂದರು.

ಈ ಪರಿಸರದಲ್ಲಿ ಕಡಲ್ಕೊರೆತಕ್ಕಾಗಿ ಕಲ್ಲು ದಂಡೆ ನಿರ್ಮಿಸಲು ಸಹಕರಿಸಿದ ಕಾಪು ಶಾಸಕ ಲಾಲಾಜಿ ಮೆಂಡನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣಾರ, ಸಹಕಾರ ರತ್ನ ಪ್ರಶಸ್ತಿ ಪಡೆದ ಯಶ್ ಪಾಲ್ ಸುವರ್ಣ, ಕಲಾಸಂಗಮದ ಮುಖ್ಯಸ್ಥ ವಿಜಯಕುಮಾರ್ ಕೊಡಿಯಲ್ ಬೈಲುರವರನ್ನು ವೇದಿಕೆಯಲ್ಲಿ ಗಣ್ಯರು ಸನ್ಮಾನಿಸಿದರು.
ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಗುರ್ಮೆ ಫೌಂಡೇಶನ್ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಸಮಾಜ ರತ್ನ ಯಶ್ ಪಾಲ್ ಸುವರ್ಣ, ಸಾಯಿ ರಾಧಾ ಸಂಸ್ಥೆಯ ಮುಖ್ಯಸ್ಥ ಮನೋಹರ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೇಶ್ ಶೆಟ್ಟಿ ಬಾಲಾಜಿ , ಸಂಸ್ಥೆಯ ಅಧ್ಯಕ್ಷ ಮಧು ಆರ್ ಕೋಟ್ಯಾನ್, ವಿನೋದ್ ಸುವರ್ಣ, ಶಾಂಭವಿ ಕುಲಾಲ್, ಕುಶ ಸುವರ್ಣ, ಕಿಶೋರ್ ಕರ್ಕೆರಾ, ವೀರ ಕೇಸರಿ ಜೆ ಶೆಟ್ಟಿ, , ನವೀನ್ ಡಿ ಪುತ್ರನ್, ಸಚಿನ್ ಕೋಟ್ಯಾನ್, ದೇವರಾಜ್ ಎಸ್ ಕರ್ಕೆರಾ ಉಪಸ್ಥಿತರಿದ್ದರು.
ಮಧು ಕೋಟ್ಯಾನ್ ಪ್ರಾರ್ಥಿಸಿದರು. ಸತೀಶ್ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು. ಸುನಿಲ್ ಕೋಟ್ಯಾನ್ ವಂದಿಸಿದರು.
ಕಾಂಗ್ರೆಸ್ ಪ್ರತಿಯೊಬ್ಬರ ಏಳಿಗೆ ಬಯಸುವ ಪಕ್ಷ : ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿ ಫಾರೂಕ್ ಚಂದ್ರನಗರ

Posted On: 19-01-2023 08:42PM
ಕಾಪು : ಬೆಂಗಳೂರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯಾಧ್ಯಕ್ಷ ವಿಧಾನ ಪರಿಷತ್ ಸದಸ್ಯರಾದ ಕೆ. ಅಬ್ದುಲ್ ಜಬ್ಬಾರ್ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಫಾರೂಕ್ ಚಂದ್ರನಗರ ಭಾಗವಹಿಸಿ ಉಡುಪಿ ಜಿಲ್ಲಾ ಅಲ್ಪ ಸಂಖ್ಯಾತರ ಪರವಾಗಿ ಚರ್ಚೆ ನಡೆಸಿದರು.
ಈಗಾಗಲೇ ಚುನಾವಣೆ ಹತ್ತಿರದಲ್ಲಿದ್ದು ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಈಗಾಗಲೇ ಚುನಾವಣೆ ಪ್ರಣಾಳಿಕೆ ಬಿಡುಗಡೆಗೊಳ್ಳುತ್ತಿದೆ. ಜನಸಾಮಾನ್ಯರಿಗೆ ಪ್ರತಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದು ಜನರಿಗೆ ತುಂಬಾ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ಜ್ಯಾತ್ಯತೀತ ನೆಲೆಯಲ್ಲಿ ಪ್ರತಿಯೊಬ್ಬರ ಪ್ರಗತಿಯನ್ನು ಬಯಸುತ್ತದೆ ಎಂದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪ ಸಂಖ್ಯಾತ ಸದಸ್ಯರುಗಳು ಉಪಸ್ಥಿತರಿದ್ದರು.
ಶಿರ್ವ : ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆ ; ಸರಕಾರ ಪ್ರೋತ್ಸಾಹ ಧನ ಹೆಚ್ಚಿಸಿ ಹೈನುಗಾರರ ಕಷ್ಟಕ್ಕೆ ಸ್ಪಂದಿಸಬೇಕು - ಬೋಳ ಸದಾಶಿವ ಶೆಟ್ಟಿ

Posted On: 19-01-2023 05:27PM
ಶಿರ್ವ : ಸ್ಥಳೀಯ ಹೋಟೆಲ್ ಶಾಮ್ ಸ್ಕ್ವೇರ್ ಸಭಾಂಗಣದಲ್ಲಿ ಜರುಗಿದ ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆ ಯನ್ನು ಉದ್ಘಾಟಿಸಿ ಮಾತನಾಡುತ್ತಾ ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾದ ಬೋಳ ಸದಾಶಿವ ಶೆಟ್ಟಿಯವರು ಹೈನುಗಾರರ ಪರಿಸ್ಥಿತಿ ತೀವ್ರ ಸಂಕಷ್ಟದಲ್ಲಿದೆ. ಸರಕಾರವು ಪ್ರೋತ್ಸಾಹ ಧನವನ್ನು ಹೆಚ್ಚಿಸುವ ಮೂಲಕ ಹೈನುಗಾರರ ಕಷ್ಟಕ್ಕೆ ಸ್ಪಂದಿಸಬೇಕು ಎಂದರು.

ಸಭಾಧ್ಯಕ್ಷತೆಯನ್ನು ಕಾಪು ತಾಲೂಕು ಸಹಕಾರ ಭಾರತಿ ಅಧ್ಯಕ್ಷ ರಾದ ಗಂಗಾಧರ ಸುವರ್ಣ ವಹಿಸಿದ್ದರು. ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ಅವರು ಸಂಘಟನಾತ್ಮಕ ಮಾತುಗಳನ್ನಾಡಿದರು. ಜಿಲ್ಲಾ ಪ್ಯಾಕ್ಸ್ ಪ್ರಕೊಷ್ಟ ಸಂಚಾಲಕರೂ ಶಿರ್ವ ಸಿ. ಎ.ಬ್ಯಾಂಕ್ ಅಧ್ಯಕ್ಷರೂ ಆದ ಕುತ್ಯಾರು ಪ್ರಸಾದ್ ಶೆಟ್ಟಿ ಹಾಗೂ ಕಾಪು ತಾಲೂಕು ಸಂಚಾಲಕರಾದ ಸುಧಾಮ ಶೆಟ್ಟಿ ಮಲ್ಲಾರು ವೇದಿಕೆಯಲ್ಲಿದ್ದರು.
ಸಮಾರಂಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿನೇಶ್ ಬಲ್ಲಾಳ್ ಕುತ್ಯಾರು, ರಘುವೀರ ಶೆಣೈ ಮುಂಡ್ಕೂರು ಹಾಗೂ ತಾಲೂಕಿನ ವಿವಿಧ ಸಹಕಾರಿ ಸಂಘಗಳ ನಿರ್ದೇಶಕರು, ಅಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವೀರೇಂದ್ರ ಪಾಟ್ಕರ್ ಪ್ರಾರ್ಥಿಸಿದರು. ಗಂಗಾಧರ ಸುವರ್ಣ ಸ್ವಾಗತಿಸಿದರು. ರವೀಂದ್ರ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಮುರಳೀಧರ ಪೈ ಕಟಪಾಡಿ ವಂದಿಸಿದರು.
ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿಯಾಗಿ ಫಾರೂಕ್ ಚಂದ್ರನಗರ ಆಯ್ಕೆ

Posted On: 18-01-2023 06:34PM
ಕಾಪು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿಯಾಗಿ ಫಾರೂಕ್ ಚಂದ್ರನಗರರನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆಯವರ ಶಿಫಾರಸಿನ ಮೇರೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರು ಹಾಗೂ ಕೇಂದ್ರ ಸರಕಾರದ ಸಂಸದರಾದ ಇಮ್ರಾನ್ ಪ್ರತಾಪ್ ಗರ್ಹೀ ಅವರ ಆದೇಶದ ಮೇರೆಗೆ ಕೆ.ಪಿ.ಸಿ.ಸಿ ಅಲ್ಪ ಸಂಖ್ಯಾತ ಅಧ್ಯಕ್ಷರಾದ ಕೆ. ಅಬ್ದುಲ್ ಜಬ್ಬಾರ್ ಆಯ್ಕೆ ಮಾಡಿರುತ್ತಾರೆ.
ಫಾರೂಕ್ ಚಂದ್ರನಗರ ಈ ಮೊದಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಪಕ್ಷದ ಹಲವಾರು ಹುದ್ದೆ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು : ಉಡುಪಿ ಜಿಲ್ಲಾ ಸಮಿತಿ, ತಾಲೂಕು ಅಧ್ಯಕ್ಷರ ನಿಯೋಗ - ಸಚಿವ ಸುನಿಲ್ ಕುಮಾರ್ ಭೇಟಿ

Posted On: 18-01-2023 06:18PM
ಉಡುಪಿ : ಜಿಲ್ಲಾ ಕನ್ನಡ ಭವನ ನಿರ್ಮಾಣದ ಬಗ್ಗೆ ಸರಕಾರದ ಮೂಲಕ ಅನುದಾನ ನೀಡುವ ಬಗ್ಗೆ ರಾಜ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರು ಸುನಿಲ್ ಕುಮಾರ್ ರನ್ನು ಅವರ ನಿವಾಸದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನೇತೃತ್ವದಲ್ಲಿ ಜಿಲ್ಲಾ ಸಮಿತಿ ಹಾಗೂ ತಾಲೂಕು ಅಧ್ಯಕ್ಷರುಗಳ ನಿಯೋಗ ಭೇಟಿ ಮಾಡಿ ಮಾತುಕತೆ ನಡೆಸಿದರು.
ಮೂಲ್ಯರ ಯಾನೆ ಕುಲಾಲರ ಸಂಘ ಕುತ್ಯಾರು : ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ, ಸಾಧಕರಿಗೆ ಸನ್ಮಾನ

Posted On: 17-01-2023 01:53PM
ಕಾಪು : ತಾಲೂಕಿನ ಕುತ್ಯಾರುವಿನ ಮೂಲ್ಯರ ಯಾನೆ ಕುಲಾಲ ಸಂಘ (ರಿ) ಕುತ್ಯಾರು ಇವರ ಆಶ್ರಯದಲ್ಲಿ ಸಂಘದ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಂಘದ ಅಧ್ಯಕ್ಷರಾದ ಸತೀಶ್ ಕುತ್ಯಾರು ಅಧ್ಯಕ್ಷತೆಯಲ್ಲಿ ಕುತ್ಯಾರು ರಾಮೊಟ್ಟು ಬನತೋಡಿ ಗದ್ದೆಯಲ್ಲಿ ಜನವರಿ 15 ರಂದು ನಡೆಯಿತು.

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೆರ್ಡೂರಿನ ಐತು ಕುಲಾಲ್ ಹಾಗೂ ಕುತ್ಯಾರು ಅಂಚೆ ಕಚೇರಿಯಲ್ಲಿ ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ ಇನ್ನದ ಸತೀಶ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಂಗಳೂರಿನ ವೈದ್ಯರಾದ ಶ್ರೀನಿವಾಸ್ ಮಂಗಳೂರು, ಆಗಮ ಪಂಡಿತ ವೇ| ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಉದ್ಯಮಿ ಸಮಾಜ ಸೇವಕರು ಗುರ್ಮೆ ಸುರೇಶ್ ಶೆಟ್ಟಿ, ಕುತ್ಯಾರು ಅರಮನೆಯ ಜಿನೇಶ್ ಬಲ್ಲಾಳ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇದರ ನಿಕಟ ಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ ಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ಮನೋಜ್ ಕುಲಾಲ್ ಉಪಸ್ಥಿತರಿದ್ದರು.
ರಾಜಲಕ್ಷ್ಮಿ ಸತೀಶ್ ಎಲ್ಲರನ್ನು ಸ್ವಾಗತಿಸಿದರು. ಧೀರಜ್ ಕುಲಾಲ್ ಕುತ್ಯಾರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.