Updated News From Kaup
ಕಾಪು : ಕುಂಜೂರಿನಲ್ಲಿ ಸಮವಸ್ತ್ರ ವಿತರಣೆ
Posted On: 26 Mar 2023, 05:58 PM
ಕಾಪು : ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ಮಿತ್ರ ವೃಂದದ ಅಂಗ ಸಂಸ್ಥೆ ದುರ್ಗಾ ಮಿತ್ರ ವೃಂದದ ಮಹಿಳಾ ಘಟಕದ ಭಜನಾ ತಂಡದ 32 ಮಹಿಳಾ ಸದಸ್ಯರಿಗೆ ಹಾಗೂ 12 ಬಾಲಕ - ಬಾಲಕಿಯರಿಗೆ ಸುಮಾರು ನಲ್ವತ್ತು ಸಾವಿರ ರೂಪಾಯಿ ಮೌಲ್ಯದ ಸಮವಸ್ತ್ರವನ್ನು ವಿತರಿಸಲಾಯಿತು. ಎರ್ಮಾಳು ನೈಮಾಡಿ ನಾರಾಯಣ ಕೆ.ಶೆಟ್ಟಿ ಅವರು ಸಮವಸ್ತ್ರದ ಪ್ರಾಯೋಜಕರು. ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಅರ್ಚಕರಾದ ಹರಿಕೃಷ್ಣ ಉಡುಪ, ಕೆ.ಎಲ್.ಕುಂಡಂತಾಯ ಅವರು ಸಮವಸ್ತ್ರ ವಿತರಿಸಿದರು. ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಟೀಚರ್ ಉಪಸ್ಥಿತರಿದ್ದರು. ದುರ್ಗಾ ಮಿತ್ರವೃಂದದ ಮಹಿಳಾ ಘಟಕದ ಸದಸ್ಯರು ಕಳೆದ ಒಂದು ವರ್ಷದಿಂದ ಕುಣಿತ ಭಜನೆಯನ್ನು ಶಕಿಲಾ ಟೀಚರ್ ಅವರಿಂದ ತರಬೇತಿ ಪಡೆಯುತ್ತಿದ್ದು ಹಲವು ಭಜನಾ ಸ್ಪರ್ಧೆಗಳಲ್ಲಿ, ಜಿಲ್ಲೆಯಲ್ಲದೆ ಉತ್ತರ ಕನ್ನಡದ ಕಾರವಾರದ ವರೆಗೆ ವಿವಿಧ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಮಾಚ್೯26 - ಎಪ್ರಿಲ್ 2 : ತೆಂಕ ಎರ್ಮಾಳು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ವಾರ್ಷಿಕ ನೇಮೋತ್ಸವ
Posted On: 26 Mar 2023, 05:51 PM
ಎರ್ಮಾಳು : ಸಂದು ದಾಂತಿ ಗರಡಿ ಎಂದೇ ಪ್ರಸಿದ್ಧಿ ಪಡೆದಿರುವ ತೆಂಕ ಎರ್ಮಾಳು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಮಾಚ್೯ 26ರಿಂದ ಎಪ್ರಿಲ್ 2ರ ವರೆಗೆ ನವೀಕೃತ ನಿರ್ಮಾಣಗಳ ಸಮರ್ಪಣೆ, ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಶ್ರೀ ಬೈದರ್ಕಳ ದರ್ಶನ, ಮಹಾ ಅನ್ನಸಂತರ್ಪಣೆ ಮತ್ತು ವಾರ್ಷಿಕ ನೇಮೋತ್ಸವಾದಿ ಧಾರ್ಮಿಕ ಕಾರ್ಯಕ್ರಮಗಳು ವೇದ ಮೂರ್ತಿ ಗಣಪತಿ ಭಟ್ ಎರ್ಮಾಳು ಅವರ ನೇತೃತ್ವದಲ್ಲಿ ನಡೆಯಲಿದೆ. ಮಾಚ್೯ 26ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿಗಳು ಆರಂಭಗೊಳ್ಳಲಿದ್ದು, ಸಂಜೆ 4.30ರಿಂದ ಆಲಯ ಪರಿಗ್ರಹ, ದೇವತಾ ಪ್ರಾರ್ಥನೆ, ಪುಣ್ಯಾಹ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪೂಜೆ, ಸಪ್ತ ಶುದ್ಧಿ, ರಕ್ಷೋಭ್ಯ ಹೋಮ, ಬಿಂಬ ಶುದ್ಧಿ, ಬಿಂಬಾಧಿವಾಸ, ಪ್ರಾಕಾರ ಬಲಿ ಸೇವೆಗಳು ನಡೆಯಲಿದೆ. ಮಾಚ್೯ 27ರಂದು ಬೆಳಿಗ್ಗೆ 6.30 ರಿಂದ ಗಣಹೋಮ, ಕಲಶಾಧಿವಾಸ ಹೋಮ, ದುರ್ಗಾ ಹೋಮ, 8 ಗಂಟೆಯಿಂದ ನಾಗಬನದಲ್ಲಿ ತನು ತಂಬಿಲ ಸೇವೆ ಮತ್ತು ಆಶ್ಲೇಷ ಬಲಿ, ಬೆಳಗ್ಗೆ 10.10ಕ್ಕೆ ವೃಷಭ ಲಗ್ನದಲ್ಲಿ ಶ್ರೀ ಬ್ರಹ್ಮಬೈದರ್ಕಳ ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕುಂಭಾಭಿಷೇಕ, ಶ್ರೀ ಬೈದರ್ಕಳ ದರ್ಶನ, ಮಧ್ಯಾಹ್ನ 12.30ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 8.30ರಿಂದ ಗರಡಿ ಪ್ರವೇಶ ನಡೆಯಲಿದೆ. ಮಾಚ್೯ 28 ರಂದು ರಾತ್ರಿ 7.30ಕ್ಕೆ ಅಗೇಲು ಸೇವೆ ನಡೆಯಲಿದೆ. ಮಾಚ್೯ 29 ರಂದು ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 7ರಿಂದ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ರಾತ್ರಿ 11.50ಕ್ಕೆ ಶ್ರೀ ಬೈದರ್ಕಳರ ದರ್ಶನ ನಡೆಯಲಿದೆ. ಮಾಚ್೯ 30ರ ಸಂಜೆ 4 ಗಂಟೆಗೆ ಮಾಯಂದಲ ಕೋಲ, ರಾತ್ರಿ 9ಕ್ಕೆ ಪಿಲಿಚಂಡಿ ಕೋಲ ನಡೆಯಲಿದೆ. ಎಪ್ರಿಲ್ 2ರಂದು ಎರ್ಮಾಳು ಎಲ್ಲದಡಿ ಮನೆಯವರಿಂದ ಶುದ್ಧದ ಅಗೇಲು ಸೇವೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರ್ವ : ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಸರ ಕಸಿದು ಅಪರಿಚಿತ ಯುವಕರು ಪರಾರಿ
Posted On: 26 Mar 2023, 10:32 AM
ಶಿರ್ವ : ವಿಳಾಸ ಕೇಳುವ ನೆಪದಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತ ಯುವಕರು ಚರ್ಚಿನಲ್ಲಿ ಪೂಜೆ ಸಲ್ಲಿಸಿ ಮನೆಗೆ ತೆರಳುತ್ತಿರುವ ಮಹಿಳೆಯ ಸರ ಕಸಿದು ಪರಾರಿಯಾದ ಘಟನೆ ತುಂಡುಬಲ್ಲೆ ಲೆತ್ತಿ ಬಾಯಿ ಮನೆ ಬಳಿ ಸಂಭವಿಸಿದೆ. ಶಿರ್ವ ಸೊರ್ಪು ನಿವಾಸಿ ಎಮಿಲಿಯನ್ ಸಲ್ದಾನ ಅವರು ಶಿರ್ವ ಚರ್ಚ್ ನಲ್ಲಿ ಪೂಜೆ ಮುಗಿಸಿ ತುಂಡು ಬಲ್ಲೆ ಬಳಿ ಬಸ್ಸಿನಿಂದಿಳಿದು ಮನೆ ಕಡೆ ಒಬ್ಬರೇ ತೆರಳುತ್ತಿದ್ದರು. ಆ ವೇಳೆ ಹೆಲ್ಮಟ್ ಧರಿಸಿ ಕಪ್ಪು ಬೈಕ್ ನಲ್ಲಿ ಬಂದ ಯುವಕರಿಬ್ಬರಲ್ಲಿ ಓರ್ವ ಮಹಿಳೆಯ ಬಳಿ ಬಂದು ಚೀಟಿ ತೋರಿಸಿ ತುಳುವಿನಲ್ಲಿ ಉಂದು ಏರೆನ ಇಲ್ಡ್ ಗೊತ್ತುಂಡೇ ಎಂದು ಕೇಳಿದ್ದಾನೆ. ಮಹಿಳೆ ಇಲ್ಲವೆಂದು ಹೇಳಿ ಮುಂದೆ ಹೋದಾಗ ಹಿಂದಿನಿಂದ ಬಂದು ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು ರೂ. 60,000 ಮೌಲ್ಯದ 12 ಗ್ರಾಮ್ ತೂಕದ ಕ್ರಾಸ್ ಪೇಂಡೆಂಟ್ ಇರುವ ಚಿನ್ನದ ಸರವನ್ನು ಕಸಿದಿದ್ದಾನೆ. ಆಗ ಮಹಿಳೆ ಜೋರಾಗಿ ಬೊಬ್ಬೆ ಹೊಡೆದಿದ್ದು ಸವಾರರಿಬ್ಬರೂ ತುಂಡುಬಲ್ಲೆ ಮುಖ್ಯರಸ್ತೆಯ ಕಡೆಗೆ ಪರಾರಿಯಾಗಿದ್ದಾರೆ. ಮಹಿಳೆ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಜಿಲ್ಲೆಯಲ್ಲಿ 13,753 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿದ್ದಾರೆ - ಜಿಲ್ಲಾಧಿಕಾರಿ ಕೂರ್ಮರಾವ್ ಎಂ
Posted On: 25 Mar 2023, 07:25 PM
ಉಡುಪಿ : ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾರ್ಚ್ 31 ರಿಂದ ಏಪ್ರಿಲ್ 15 ರ ವರೆಗೆ ನಡೆಯಲಿದ್ದು, ಈ ಬಾರಿ ಜಿಲ್ಲೆಯಲ್ಲಿ ಒಟ್ಟು 13,753 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ 55 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪರೀಕ್ಷೆಗಳು ಸುಗಮವಾಗಿ ನಡೆಯಲು ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಸೂಚನೆ ನೀಡಿದರು. ಅವರು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ, ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಾಗಿ ರೆಗ್ಯೂಲರ್, ಖಾಸಗಿ ಮತ್ತು ಪುನಾರಾವರ್ತಿತ ಸೇರಿದಂತೆ 7185 ಬಾಲಕರು ಮತ್ತು 6568 ಬಾಲಕಿಯರು ಸೇರಿದಂತೆ ಒಟ್ಟು 13753 ವಿದ್ಯಾರ್ಥಿಗಳು ಹಾಜರಾಗಲಿದ್ದು, ಬೈಂದೂರಿನಲ್ಲಿ 8, ಕುಂದಾಪುರದಲ್ಲಿ 9, ಕಾರ್ಕಳದಲ್ಲಿ 10, ಬ್ರಹ್ಮಾವರದಲ್ಲಿ 12 ಹಾಗೂ ಉಡುಪಿಯಲ್ಲಿ 16 ಸೇರಿದಂತೆ ಒಟ್ಟು 55 ಕೇಂದ್ರಗಳಲ್ಲಿ, ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದರು. ಪರೀಕ್ಷಾ ಕೇಂದ್ರಗಳ ಒಳಗೆ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಸ್ಮಾರ್ಟ್ವಾಚ್, ಮೊಬೈಲ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾಹಿತಿ ನೀಡುವಂತೆ ಮತ್ತು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಮುನ್ನವೇ ಇವುಗಳನ್ನು ಹೊಂದಿರುವ ಬಗ್ಗೆ ಪರಿಶೀಲಿಸುವಂತೆ ತಿಳಿಸಿದ ಅವರು, ಪರೀಕ್ಷಾ ಕೇಂದ್ರಗಳಿಗೆ ಕಸ್ಟೋಡಿಯನ್ಗಳು, ಸ್ಥಾನಿಕ ಜಾಗೃತ ದಳ, ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನಿಯೋಜಿಸುವಂತೆ ಸೂಚನೆ ನೀಡಿದರು. ಪರೀಕ್ಷಾ ಕೇಂದ್ರಗಳ ಒಳಗೆ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಗಳಾಗದಂತೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಗ್ರಾಮೀಣ ಪ್ರದೇಶದಿಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಆಗಮಿಸಲು ಬಸ್ಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಅವಧಿಯಲ್ಲಿ, ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳಿಗೆ ತೆರಳು ಮತ್ತು ವಾಪಾಸ್ ಮರಳಲು ಸಾಮಾನ್ಯ ಹಾಗೂ ವೇಗದೂತ ಬಸ್ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದ್ದು, ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ಉಚಿತವಾಗಿ ಪ್ರಯಾಣ ಮಾಡಬಹುದಾಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ, ವಿದ್ಯಾರ್ಥಿಗಳ ಆರೋಗ್ಯದ ದೃಷ್ಠಿಯಿಂದ ಪ್ರಥಮ ಚಿಕಿತ್ಸಾ ಕಿಟ್ನೊಂದಿಗೆ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸೂಚಿಸಿದರು. ಪ್ರಶ್ನೆಪತ್ರಿಕೆ ಬಂಡಲ್ಗಳನ್ನು ಖಜಾನೆಯಿಂದ ಪಡೆಯುವಾಗ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅವುಗಳನ್ನು ತೆರೆಯುವಾಗ ವೀಡಿಯೋ ಚಿತ್ರೀಕರಣ ಮಾಡುವಂತೆ ಹಾಗೂ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಸಾಗಾಟ ವಾಹನ, ಪರೀಕ್ಷಾ ಕೇಂದ್ರ ಮತ್ತು ಭದ್ರತಾ ಕೊಠಡಿಗಳಿಗೆ ಸೂಕ್ತ ಪೊಲೀಸ್ ಭದ್ರತೆ ಪಡೆಯುವಂತೆ ಹಾಗೂ ಎಲ್ಲಾ ಕೇಂದ್ರಗಳಿಗೆ ಸಕಾಲದಲ್ಲಿ ಪ್ರಶ್ನೆಪತ್ರಿಕೆಗಳು ತಲುಪುವುಂತೆ ಅಗತ್ಯವಿರುವ ವಾಹನಗಳ ವ್ಯವಸ್ಥೆ, ಮಾರ್ಗಾಧಿಕಾರಿಗಳನ್ನು ನೇಮಿಸುವಂತೆ ತಿಳಿಸಿದರು. ಪರೀಕ್ಷೆಯ ಅವಧಿಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಗೊಂದಲಕ್ಕೀಡು ಮಾಡುವಂತಹ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಜಿಲ್ಲಾಧಿಕಾರಿಗಳು, ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶವನ್ನು ಸೆಕ್ಷನ್ 144 ರಂತೆ ನಿಷೇಧಾಜ್ಞೆ ವಿಧಿಸುವುದರ ಜೊತೆಗೆ ಸುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಯಾವುದೇ ಗೊಂದಲಗಳಿಲ್ಲದೇ ಸುಗಮ ಮತ್ತು ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಡಿಡಿಪಿಐ ಗಣಪತಿ, ಸಹಾಯಕ ಖಜಾನಾಧಿಕಾರಿ ರೂಪಶ್ರೀ, ಎಸ್.ಎಸ್.ಎಲ್.ಸಿ ಪರೀಕ್ಷೆಯ ಜಿಲ್ಲಾ ನೋಡೆಲ್ ಅಧಿಕಾರಿ ಸಿಪ್ರಿಯಾನ್ ಮೆಂಥಾರೋ ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸುವ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ಉಚ್ಚಿಲ : ಗಾಂಜಾ ಸೇವನೆ - ಪ್ರಕರಣ ದಾಖಲು
Posted On: 25 Mar 2023, 07:13 PM
ಉಚ್ಚಿಲ : ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿ 2 ಮಂದಿ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಡುಬಿದ್ರಿ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿ ಇದ್ದ ವೇಳೆ, ಕಾಪು ತಾಲೂಕಿನ ಬಡಾ ಗ್ರಾಮದ ಉಚ್ಚಿಲದಲ್ಲಿ ಕೆವಿನ್ ಕುಲ್ದೀಪ್ ಮಜಲು ಮತ್ತು ಅಶ್ವಿನ್ ಪೂಜಾರಿ ಎಂಬುವವರು ಯಾವುದೋ ಅಮಲಿನಲ್ಲಿದ್ದವನಂತೆ ತೂರಾಡುತ್ತಿದ್ದು, ಯಾವುದೋ ಮಾದಕ ಪದಾರ್ಥ ಸೇವಿಸಿರಬಹುದು ಎಂದು ಅನುಮಾನಗೊಂಡು ಸದ್ರಿ ವ್ಯಕ್ತಿಗಳನ್ನು ವಶಕ್ಕೆ ಪಡೆದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದಲ್ಲಿ ತಪಾಸಣೆಗೊಳಪಡಿಸಿದ್ದು, ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ 2 ಪ್ರಕರಣ ದಾಖಲಾಗಿದೆ.
ಬಂಟಕಲ್ಲು : ಇಂಜಿನಿಯರಿಂಗ್ ಕಾಲೇಜಿನಲ್ಲಿ 13ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ
Posted On: 25 Mar 2023, 06:36 PM
ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 13ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಮಾರ್ಚ್ 24ರಂದು ಸಂಸ್ಥೆಯ ಆವರಣದಲ್ಲಿ ವಿಜೃಂಭಣೆಯಿಂದ ಜರಗಿತು. ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು, ಸೋಸಲೆ ಶ್ರೀ ವ್ಯಾಸರಾಜ ಮಠ, ಇವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಕೋವಿಡ್ ಕಾಲದಲ್ಲಿ ಮಾನವೀಯತೆಯ ಸೈರ್ಯ ಎದ್ದು ಕಾಣುತಿತ್ತು. ಇದು ನಮ್ಮ ಜನರಲ್ಲಿ ನಾಯಕತ್ವದ ಗುಣವನ್ನು ಮೂಡಿಸಿದೆ. ಅಲ್ಲದೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಆಶಾವಾದ ಬೆಳೆಸಿಕೊಳ್ಳಬೇಕು ಮತ್ತು ಯಾವುದೇ ಕಷ್ಟದ ಸಂದರ್ಭದಲ್ಲಿ ಭರವಸೆಯನ್ನು ಕಳೆದುಕೊಳ್ಳಬಾರದೆಂದು ಸಲಹೆ ನೀಡಿದರು. ಉಡುಪಿ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇವರು ತಮ್ಮ ಆಶೀರ್ವಚನದಲ್ಲಿ ಶಿಸ್ತು ಎನ್ನುವುದು ಗುರಿ ಮತ್ತು ಸಾಧನೆಗಳ ನಡುವಿನ ಸೇತುವೆಯಾಗಿದೆ. ಇದು ಪ್ರತಿಯೊಬ್ಬರೊಳಗೆ ಅಡಗಿರುವ ಅಮೂಲ್ಯ ರತ್ನವನ್ನು ಹೊರತಂದು ಜೀವನದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲರೂ ಶಿಸ್ತಿನ ಜೀವನ ನಡೆಸಬೇಕೆಂದು ತಿಳಿಸಿದರು. ಗೌರವ ಅತಿಥಿಯಾಗಿದ್ದ ಕರ್ನಾಟಕ ರಾಜ್ಯದ ಉಪ ಲೋಕಾಯುಕ್ತ, ನ್ಯಾಯಮೂರ್ತಿಗಳಾದ ಕೆ ಎನ್ ಫಣೀಂದ್ರ ಮಾತನಾಡಿ, ಇಂತಹ ಸಂಸ್ಥೆಯನ್ನು ಕಟ್ಟಿ ಜನ ಸೇವೆಗಾಗಿ ಮುಡಿಪಾಗಿಟ್ಟಿರುವುದಕ್ಕಾಗಿ ಸೋದೆ ಶ್ರೀಪಾದರ ಕುರಿತು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮೌಲ್ಯಾಧಾರಿತ ಶಿಕ್ಷಣ ಎಂದರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಮೌಲ್ಯವನ್ನು ಬಿತ್ತುವುದು. ಶಿಕ್ಷಕರು ತಾಯಿ ಮತ್ತು ತಂದೆಯ ಪಾತ್ರವನ್ನು ಈಗ ನಿರ್ವಹಿಸಬೇಕಾಗಿದೆ ಮತ್ತು ಇಂದಿನ ಯುವಕರು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕೆಂದು ಹೇಳಿದರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ ಕಾರ್ಯದರ್ಶಿಗಳಾದ ರತ್ನಕುಮಾರ್ ಅತಿಥಿ ಗಳನ್ನು ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ 2022-23ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಹಾಗೂ ಗೌತಮ ಫೌಂಡೇಶನ್ನಿಂದ ನೀಡಲ್ಪಟ್ಟ ವಿದ್ಯಾರ್ಥಿವೇತನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಅಂತಿಮ ವರ್ಷದ ಉತ್ತಮ ಸಾಧಕ ವಿದ್ಯಾರ್ಥಿಗಳಿಗೆ ಕೊಡುವ “ಶ್ರೀ ಮಧ್ವ ವಾದಿರಾಜ ಪ್ರಶಸ್ತಿ'ಯನ್ನು ಗಣಕಯಂತ್ರ ವಿಭಾಗದ ರಂಜನಿ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಶೇಷಗಿರಿ ವೈಕುಂಠ ಪೈ ಇವರಿಗೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ದ್ವಿತೀಯ ಮತ್ತು ತೃತೀಯ ವರ್ಷದ ಉತ್ತಮ ವಿದ್ಯಾರ್ಥಿಗಳಿಗೆ ಹಯವದನ ಪ್ರಶಸ್ತಿಯನ್ನು ನೀಡಲಾಯಿತು. ಡಾಕ್ಟರೇಟ್ ಪದವಿ ಪಡೆದುಕೊಂಡ ಅಧ್ಯಾಪಕರನ್ನು ಗೌರವಿಸಲಾಯಿತು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ ಉಪಾಧ್ಯಕ್ಷರಾದ ಶ್ರೀನಿವಾಸ ತಂತ್ರಿ, ಆಡಳಿತ ಮಂಡಳಿ ಸದಸ್ಯರಾದ ಶ್ಯಾಮ ಸುಂದರ್, ಸುಂದರ ಮಡಕ್ಷಿರ, ಜಗದೀಶ್ ಆಚಾರ್ಯ, ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ಮತ್ತು ವಿದ್ಯಾರ್ಥಿ ಕೌನ್ಸಿಲ್ನ ಪ್ರಧಾನ ಕಾರ್ಯದರ್ಶಿ ಶ್ರೇಯ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಮಂಜುನಾಥ ಎಸ್ ಮತ್ತು ಸಂಧ್ಯಾ ಅತಿಥಿಗಳನ್ನು ಪರಿಚಯಿಸಿದರು. ಡೀನ್ ಡಾ. ಸುದರ್ಶನ್ ರಾವ್ ಮತ್ತು ಡಾ.ರವಿಪ್ರಭಾ ವಿದ್ಯಾರ್ಥಿ ವೇತನ ಪಡೆದವರ ವಿವರವನ್ನು ನೀಡಿದರು. ಶ್ರೇಯ ಉಡುಪ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಅಂಕಿತ ಭಟ್ ಮತ್ತು ಶ್ರೀವತ್ಸ ನಿರೂಪಿಸಿದರು. ಪ್ರಾಧ್ಯಾಪಕರಾದ ಸಚಿನ್ ಪ್ರಭು ವಂದಿಸಿದರು.
ಮೂಳೂರು : ಬೈಕ್ - ಟ್ಯಾಂಕರ್ ಅಪಘಾತ ; ಓರ್ವ ಸಾವು, ಮತ್ತೋರ್ವ ಗಂಭೀರ
Posted On: 25 Mar 2023, 06:19 PM
ಮೂಳೂರು : ಕಾಪು ತಾಲೂಕಿನ ಮೂಳೂರಿನ ವೆಸ್ಟ್ ಕೋಸ್ಟ್ ನರ್ಸರಿ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ. ಪಲ್ಸರ್ ಬೈಕ್ ಮತ್ತು ಟ್ಯಾಂಕರ್ ಉಡುಪಿ ಕಡೆಯಿಂದ ಪಡುಬಿದ್ರಿ ಕಡೆ ಸಾಗುತ್ತಿತ್ತು. ಹಿಂಬದಿಯಿಂದ ಬಂದ ಟ್ಯಾಂಕರ್ ಬೈಕಿಗೆ ಡಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಕೆ. ಸಿ ಪೂವಯ್ಯ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಭೇಟಿ ನೀಡಿದ್ದಾರೆ.
ಎರ್ಮಾಳು : ನಗ - ನಗದು ಕಳ್ಳತನ
Posted On: 25 Mar 2023, 02:43 PM
ಎರ್ಮಾಳು : ಕಾಪು ತಾಲೂಕಿನ ತೆಂಕ ಎರ್ಮಾಳು ಗ್ರಾಮದ ಬೀಚ್ರಸ್ತೆಯಲ್ಲಿರುವ ಬಾಡಿಗೆ ಮನೆಯೊಂದಕ್ಕೆ ಕಳ್ಳರು ನುಗ್ಗಿ 1.40 ಮೌಲ್ಯದ ನಗ-ನಗದು ಕಳ್ಳತನಗೈದ ಘಟನೆ ನಡೆದಿದೆ. ಬಾಡಿಗೆ ಮನೆಯಲ್ಲಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದ ಬಾಗಲಕೋಟೆ ಮೂಲದ ದಂಪತಿಗಳಾದ ನಿಂಗವ್ವ ಮತ್ತು ಆಕೆಯ ಪತಿ ನಿನ್ನೆ ಬೆಳಿಗ್ಗೆ ಎಂದಿನಂತೆ ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನದ ವೇಳೆ ನಿಂಗವ್ವ ಅವರ ಗಂಡ ವಾಪಾಸ್ಸು ಮನೆಗೆ ಬಂದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಕಳ್ಳರು ಕಪಾಟಿನಲ್ಲಿದ್ದ 1,10,000 ರೂ. ನಗದು ಹಾಗೂ 30,000 ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ಪೂಜಾ ಸಾಮಾಗ್ರಿಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ನಿಂಗವ್ವ ಅವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರ್ಚ್ 26 : ಉದ್ಯಾವರದಲ್ಲಿ ಕೊಂಕಣಿ ಕವಿಗೋಷ್ಠಿ
Posted On: 25 Mar 2023, 02:25 PM
ಉದ್ಯಾವರ : ನಿರಂತರ್ ಉದ್ಯಾವರ ಮತ್ತು ಪೊಯೆಟಿಕಾ ಮಂಗಳೂರು ಇವರ ನೇತೃತ್ವದಲ್ಲಿ ಪೊಯೆಟಿಕಾ ಕವಿಗೋಷ್ಠಿ 16 ಮಾರ್ಚ್ 26, ಆದಿತ್ಯವಾರ ಸಂಜೆ 4 ಗಂಟೆಗೆ ಉದ್ಯಾವರದ ರಾಷ್ಟ್ರೀಯ ಹೆದ್ದಾರಿ 66 ಬಳಿ ಇರುವ ಡಿವೈನ್ ಗ್ಲೋರಿ ರೋಷನ್ ಕ್ರಾಸ್ಟೋ ಅವರ ನಿವಾಸದಲ್ಲಿ ಜರುಗಲಿದೆ. ಕಳೆದ ಐದು ವರ್ಷಗಳಲ್ಲಿ ವಿವಿಧ ತಂಡಗಳ 30 ಬಹುಭಾಷಾ ನಾಟಕಗಳನ್ನು ಉದ್ಯಾವರದಲ್ಲಿ ಪ್ರದರ್ಶನ ಮಾಡುವಲ್ಲಿ ನೇತೃತ್ವ ವಹಿಸಿದ ನಿರಂತರ್ ಉದ್ಯಾವರ ಸಂಘಟನೆಯ ನೇತೃತ್ವದಲ್ಲಿ ನಡೆಯುತ್ತಿರುವಂತ ಈ ಕವಿಗೋಷ್ಠಿಯಲ್ಲಿ, ಪ್ರತಿಷ್ಠಿತ ಪೊಯೆಟಿಕಾ ಕವಿ ತಂಡ ಸಹಭಾಗಿತ್ವ ವಹಿಸಿದೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಕೊಂಕಣಿ ಕವಿಗಳು ಭಾಗವಹಿಸುತ್ತಿರುವ ಈ ಕವಿಗೋಷ್ಠಿಯಲ್ಲಿ, ದೂರದ ಗೋವಾ ರಾಜ್ಯದಿಂದಲೂ ಕವಿಗಳು ಆಗಮಿಸುತ್ತಿರುವುದು ವಿಶೇಷ. 30 ಮಂದಿ ಯುವ ಮತ್ತು ಅನುಭವಿ ಕವಿಗಳು ತಮ್ಮ ಕವಿತೆಯನ್ನು ಕವಿಗೋಷ್ಠಿಯಲ್ಲಿ ಸಾದರಪಡಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರ ಪ್ರಕಟಣೆ ತಿಳಿಸಿದೆ.
ಮಾಚ್೯ 28 : ಉಡುಪಿಯಲ್ಲಿ ನೇರ ಸಂದರ್ಶನ
Posted On: 24 Mar 2023, 11:16 PM
ಉಡುಪಿ : ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಮಾರ್ಚ್ 28 ರಂದು ಬೆಳಗ್ಗೆ 10.30 ಕ್ಕೆ ನಗರದ ಶಾಂತ ಎಲೆಕ್ಟ್ರಿಕಲ್ಸ್ ಪ್ರೈ.ಲಿ., ಆಭರಣ ಜುವೆರ್ಸ್ ಹತ್ತಿರ, ಕಾರ್ಪೊರೇಶನ್ ಬ್ಯಾಂಕ್ ರೋಡ್, ಅನುಗ್ರಹ ಕಾಂಪ್ಲೆಕ್ಸ್ ಇಲ್ಲಿ ನೇರ ಸಂದರ್ಶನ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ, ಬಿ.ಎ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ:8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
