Updated News From Kaup
ಕಾಪು : ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯಿಂದ ಕಾಪು ಕ್ಷೇತ್ರದ ಅಭಿವೃದ್ಧಿ ಯೋಜನೆಯ ಚುನಾವಣಾ ಪ್ರಣಾಳಿಕೆ ಬಿಡುಗಡೆ
Posted On: 30 Apr 2023, 11:04 AM
ಕಾಪು : ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾಪು ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ನಮ್ಮ ಕನಸಿನ ಕಾಪು ಪ್ರಣಾಳಿಕೆಯ ಮೂಲಕ ಸುಂದರ ಕಾಪು ಸ್ವಚ್ಛ ಕಾಪು ಪರಿಕಲ್ಪನೆಯಲ್ಲಿ ಕಾಪು ಕ್ಷೇತ್ರದ ನಾಗರಿಕರಿಗೆ ಎಲ್ಲಾ ಸೌಲಭ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಇಂದು ಕಾಪು ರಾಜೀವ ಭವನದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ, ಹೆಜಮಾಡಿಯಿಂದ ಕುಕ್ಕೆಹಳ್ಳಿಯವರೆಗೆ ಈ ಯೋಜನೆ ಜಾರಿಗೊಳಿಸಲಿದ್ದೇವೆ. ಬಡವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಬಾಕಿ ಇದೆ ಹಾಗಾಗಿ ಮನೆರಹಿತರಿಗೆ ಮನೆ ನಿರ್ಮಾಣ, ವಿಜ್ಞಾನ ಕೇಂದ್ರ , ಸರಕಾರಿ ಇಂಜಿನಿಯರಿಂಗ್ ಕಾಲೇಜ್, ಜೊತೆಗೆ ಜಿಲ್ಲಾ ಮಟ್ಟದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯ ಗುರಿ, ಪ್ರವಾಸೋದ್ಯಮಕ್ಕೂ ಒತ್ತು ನೀಡಲಿದ್ದೇವೆ. ಮನೆ ಮನೆಗೆ ಶುದ್ಧ ಕುಡಿಯುವ ನೀರಿಗಾಗಿ ಶುದ್ಧ ಗಂಗಾ ಯೋಜನೆ, ಕೌಶಲ್ಯಾಭಿವೃದ್ಧಿ ಕೇಂದ್ರ, ಯುವಕರಿಗೆ ಉದ್ಯೋಗ ಮತ್ತು ಉದ್ದಿಮೆ, ಅತ್ಯಾಧುನಿಕ ತಂತ್ರಜ್ಞಾನದ ಕಸವಿಲೇವಾರಿ ಘಟಕ ಸ್ಥಾಪನೆ, ಬಹುಮಹಡಿ ವಸತಿ ಯೋಜನೆ, ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ , ಆರೋಗ್ಯಕ್ಕೆ ಒತ್ತು ನೀಡುವ ದಿಸೆಯಲ್ಲಿ ಕಾಪು ಪುರಸಭಾ ವ್ಯಾಪ್ತಿಯಲ್ಲಿ 100 ಬೆಡ್ ಆಸ್ಪತ್ರೆ ನಿರ್ಮಾಣ, ಈಜುಕೊಳ ನಿರ್ಮಾಣ, ರೈತ ಸಂಜೀವಿನಿ ಯೋಜನೆ, ಸಮುದಾಯ ಭವನಗಳ ನಿರ್ಮಾಣ, ಸರ್ವ ಧರ್ಮದ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ, ದಲಿತ ಶ್ರೇಯಾಭಿವೃದ್ಧಿ ಯೋಜನೆ, ಸಿ ಆರ್ ಝಡ್ ನಿಯಮ ಸಡಿಲಿಕೆ, ಸುಸಜ್ಜಿತ ಬಸ್ಸು ತಂಗುದಾಣ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದರು. ಈ ಸಂದರ್ಭ ಕಾಪು ಬ್ಲಾಕ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಕಾಂಗ್ರೆಸ್ ಮುಖಂಡರಾದ ದೇವಿಪ್ರಸಾದ್ ಶೆಟ್ಟಿ, ಮಾಧವ ಪಾಲನ್, ಶರ್ಫುದ್ಧೀನ್ ಮತ್ತಿತರರು ಉಪಸ್ಥಿತರಿದ್ದರು.
ನನ್ನ ಶಾಸಕತ್ವದ ಅವಧಿಯಲ್ಲಿ ಕಾಪುವಿನಲ್ಲಿ ಅಭಿವೃದ್ಧಿಯ ಮೈಲಿಗಲ್ಲನ್ನೇ ಸ್ಥಾಪಿಸಿದ್ದೇನೆ : ವಿನಯ್ ಕುಮಾರ್ ಸೊರಕೆ
Posted On: 29 Apr 2023, 05:06 PM
ಕಾಪು : ನನ್ನ ಶಾಸಕತ್ವದ ಅವಧಿಯಲ್ಲಿ ಕಾಪುವಿನಲ್ಲಿ ಅಭಿವೃದ್ಧಿಯ ಮೈಲಿಗಲ್ಲನ್ನೇ ಸ್ಥಾಪಿಸಿದ್ದೇನೆ. ಆದರೂ ನನ್ನನ್ನು ಕಳೆದ ಬಾರಿ ಸೋಲಿಸಿದ್ದೀರಿ. ಈ ಬಾರಿಯಾದರೂ ಕಾಪು ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ಅಭಿವೃದ್ಧಿಗೆ ಬೆಲೆ ಇದೆ ಅಂತಾ ಸಾಬೀತು ಮಾಡೋ ಕೆಲಸವನ್ನು ಮತದಾರರು ಮಾಡಲೇಬೇಕಿದೆ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದರು. ಅವರು ಉದ್ಯಾವರ ಬಿಲ್ಲವ ಮಹಾಮಂಡಲದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಹಿರಿಯರ ಆಶೀರ್ವಾದ ಪಡೆದು ಮಾತನಾಡಿದರು. ಈ ಬಾರಿ ಕಾಪು ಕ್ಷೇತ್ರ ಪ್ರಾಮಾಣಿಕತೆ, ಅಭಿವೃದ್ಧಿ ಮತ್ತು ಹಣದ ಹೊಳೆಯ ನಡುವಿನ ಚುನಾವಣೆಯಾಗಿ ಮಾರ್ಪಟ್ಟಿದೆ. ಕಾಪುವಿನ ಮತದಾರರು ಬಹಳಷ್ಟು ಪ್ರಬುದ್ಧರಿದ್ದಾರೆ. ಈ ಬಾರಿ ಪ್ರಾಮಾಣಿಕತೆ ಮತ್ತು ಅಭಿವೃದ್ಧಿಗೆ ಮತ ಹಾಕುತ್ತಾರೆ ಅನ್ನೋ ನಂಬಿಕೆ ನನಗಿದೆ. ಸೋತ ಮೇಲೂ ಐದು ವರ್ಷಗಳ ಜನರ ನಡುವೆ ಇದ್ದು ಜನತೆಯ ಎಲ್ಲಾ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆ. ನಾರಾಯಣಗುರುಗಳ ವಿಚಾರದಲ್ಲಿ ಜಿಲ್ಲೆಯಾದ್ಯಂತ ಬಹಳಷ್ಟು ಹೋರಾಟ ಸಂಘಟಿಸಿದ್ದೇನೆ. ನಾರಾಯಣಗುರುಗಳ ಸ್ತಬ್ಧ ಚಿತ್ರದ ವಿಚಾರದಲ್ಲಿ, ಪಠ್ಯ ಪುಸ್ತಕದ ವಿಚಾರದಲ್ಲಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ಬಿಲ್ಲವ ಮುಖಂಡರ ಜೊತೆ ಇದ್ದು ಹೋರಾಟವನ್ನು ಸಂಘಟಿಸಿದ್ದೇನೆ. ಈ ಬಾರಿ ನನ್ನ ಕೊನೆಯಚುನಾವಣೆ. ನನ್ನನ್ನು ಗೆಲ್ಲಿಸಿ ಜನತೆಯ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡುತ್ತೀರಿ ಅನ್ನೊ ನಂಬಿಕೆ ಇದೆ ಅಂತ ಸೊರಕೆ ಹೇಳಿದರು. ಒಂದು ವೇಳೆ ಗೆದ್ದು ಬಂದಲ್ಲಿ ಸಮಾಜದ ಎಲ್ಲಾ ವರ್ಗದವರ ಪರ ನಿಂತು ಸಮಾನತೆಯಿಂದ ಕೆಲಸ ಮಾಡುತ್ತೇನೆ ಎಂಬ ವಾಗ್ದಾನ ಮಾಡುತ್ತೇನೆ ಎಂದು ಸೊರಕೆ ಹೇಳಿದರು. ಈ ಸಂದರ್ಭ ಉದ್ಯಾವರ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸತೀಶ್ ಕೋಟ್ಯಾನ್, ಕಾರ್ಯದರ್ಶಿ ಆನಂದ ಉದ್ಯಾವರ, ಯುವ ಜನ ಕಲಾಮಂಡಳಿ ಅಧ್ಯಕ್ಷ ಶಿವರಾಮ ಗುರಿಕಾರರರು, ಬಿಲ್ಲವ ಮಖಂಡರು , ಮಹಿಳಾ ಘಟಕದ ಎಲ್ಲಾ ಮುಖಂಡರು , ಕಾಂಗ್ರೆಸ್ ಮುಖಂಡರಾದ ಉದ್ಯಾವರ ನಾಗೇಶ್ ಕುಮಾರ್, ಗಿರೀಶ್ ಕುಮಾರ್, ರಾಯಸ್ ಫೆರ್ನಾಂಡೀಸ್, ಅಬೀದ್ ಅಲಿ, ಶೇಖರ ಕೋಟ್ಯಾನ್, ಸಾಯಿನಾಥ್, ನಿತೀನ್ ಸಾಲ್ಯಾನ್, ಸೊಹೇಲ್ ರಹಮತುಲ್ಲಾ, ಭಾಸ್ಕರ ಕೋಟ್ಯಾನ್, ಸಚಿನ್, ರಿಯಾಝ್ ಪಳ್ಳಿ, ಮೇರಿ ಡಿಸೋಜ, ಪೂರ್ಣಿಮಾ, ಆಶಾ, ಹೆಲೆನ್ ಫೆರ್ನಾಂಡೀಸ್, ದಿವಾಕರ ಬೊಳ್ಜೆ, ಸರೋಜ, ಗಿರೀಶ್ ಗುಡ್ಡೆಯಂಗಡಿ, ಮೀರಾ, ದಯಾನಂದ, ನಯಾಝ್ ಪಳ್ಳಿ, ಅನ್ಸರ್, ಆಶಾ ಸುರೇಶ್, ಸತೀಶ್ ಉಪಸ್ಥಿತರಿದ್ದರು.
ಕಟಪಾಡಿ : ಬಿಜೆಪಿ ಪಕ್ಷವು ವೋಟ್ ಬ್ಯಾಂಕ್ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ - ಕೇಂದ್ರ ಗೃಹ ಮಂತ್ರಿ ಅಮಿತ್ ಶಾ
Posted On: 29 Apr 2023, 04:54 PM
ಕಟಪಾಡಿ : ಕಾಂಗ್ರೆಸ್ ಪಕ್ಷವು ದೇಶದ ಸುರಕ್ಷತೆಯನ್ನು ವೋಟ್ ಬ್ಯಾಂಕ್ ರಾಜಕೀಯದ ಮೂಲಕ ಆಟವಾಡಿಸುತ್ತಿದೆ. ಬಿಜೆಪಿ ಪಕ್ಷವು ವೋಟ್ ಬ್ಯಾಂಕ್ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ. ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲಾತಿ ಮತ್ತೆ ತರುತ್ತಾರೆ. ಬಿಜೆಪಿ ಯಾವತ್ತೂ ತರುವುದಿಲ್ಲ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದು ಬಿಜೆಪಿ ಅಭ್ಯರ್ಥಿ ಮತ ಪ್ರಚಾರದ ಅಂಗವಾಗಿ ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನದಲ್ಲಿ ಜರಗಿದ ಬಹಿರಂಗ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಪಿ ಎಫ್ ಐ ಬ್ಯಾನ್ ಮಾಡಿದ ಕೀರ್ತಿ ಬಿಜೆಪಿಗೆ ಇದೆ. ದಕ್ಷಿಣ ಭಾರತವನ್ನು ಸುರಕ್ಷಿತವಾಗಿಸಿದ್ದೇವೆ. ಈ ಸಂದರ್ಭ ಮಾಜಿ ಸಚಿವ ವಿ.ಎಸ್ ಆಚಾರ್ಯ ರನ್ನು ಸ್ಮರಿಸಿದರು. ಕಟಪಾಡಿ ಬೂತ್ ನ ಅಧ್ಯಕ್ಷರಾದ ಶ್ರೀಧರ ಪೂಜಾರಿ ಅಮಿತ್ ಷಾ ರನ್ನು ವೇದಿಕೆಗೆ ಬರಮಾಡಿಕೊಂಡರು. ಬಿಜೆಪಿ ಜಿಲ್ಲಾ ಸಮಿತಿಯ ಪರವಾಗಿ ನಾರಾಯಣಗುರುಗಳ ಮೂರ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಚುನಾವಣಾ ಪ್ರಭಾರಿ ವಿಜೇಂದ್ರ ಗುಪ್ತ, ಶಾಸಕರಾದ ಲಾಲಾಜಿ ಆರ್ ಮೆಂಡನ್, ರಘುಪತಿ ಭಟ್, ಬಿಜೆಪಿ ಅಭ್ಯರ್ಥಿಗಳಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಪ್ರಮೋದ್ ಮಧ್ವರಾಜ್, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ ಸುವರ್ಣ, ದಿನಕರ ಬಾಬು, ಶ್ರೀಶ ನಾಯಕ್, ವೀಣಾ ಎಸ್ ಶೆಟ್ಟಿ, ಸುರೇಂದ್ರ ಪಣಿಯೂರು, ಸುಲೋಚನಾ ಭಟ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನಯನ ಗಣೇಶ್, ಉದಯ ಕುಮಾರ್ ಶೆಟ್ಟಿ, ನವೀನ್ ಕುತ್ಯಾರು, ಪ್ರತಾಪ್ ಸಿಂಹ ಮತ್ತಿತರರು ಉಪಸ್ಥಿತರಿದ್ದರು.
ಇಂದು ಕಟಪಾಡಿಗೆ ಅಮಿತ್ ಷಾ : ಬಹಿರಂಗ ಸಾರ್ವಜನಿಕ ಸಭೆ
Posted On: 29 Apr 2023, 12:41 PM
ಕಟಪಾಡಿ : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದು ಬಿಜೆಪಿ ಅಭ್ಯರ್ಥಿ ಮತ ಪ್ರಚಾರದ ಅಂಗವಾಗಿ ಮಧ್ಯಾಹ್ನ 2ಕ್ಕೆ ಉಡುಪಿಯಿಂದ ನೇರವಾಗಿ ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನದಲ್ಲಿ ಜರಗುವ ಬಹಿರಂಗ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮಿತ್ ಶಾ ಬರುವಿಕೆಯ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ.
ಕೇರಳದ ಬ್ರಾಹ್ಮಣರ ಬೆನ್ನತ್ತಿ ಬಂದು ಇನ್ನಂಜೆ ಗ್ರಾಮದ ಮಂಡೇಡಿಯಲ್ಲಿ ನೆಲೆಯಾದ ಕೊರತಿ ದೈವ
Posted On: 29 Apr 2023, 07:44 AM
ಸುಮಾರು ನೂರಾರು ವರುಷಗಳ ಹಿಂದೆ ಕೇರಳದ ಬ್ರಾಹ್ಮಣ ಕುಟುಂಬವೊಂದರ ಭಕ್ತಿಗೆ ಬೆನ್ನತಿ ಬಂದ ಕೊರತಿ ದೈವವು ಮಂಡೇಡಿಯ ಬಾಕ್ಯಾರಿನ ಜಾಗವೊಂದರಲ್ಲಿ ಪರಿವಾರ ದೈವಗಳಾದ ಬೊಬ್ಬರ್ಯ, ಪಂಜುರ್ಲಿ, ನೀಚ ಮತ್ತು ಗುಳಿಗ ದೈವದೊಂದಿಗೆ ನೆಲೆಯಾಗಿ ಮುಂದೆ ಆ ಜಾಗವು ಕೊರತಿ ಬಾಕ್ಯಾರು ಎಂಬ ಹೆಸರಿನಿಂದಲೇ ಪ್ರಸಿದ್ದಿಯಾಗಿ ಪಂಚದೈವಗಳ ಸಾನಿಧ್ಯವೆಂದೇ ಹೆಸರಾಯಿತು. ಕಾಲಕ್ರಮೇಣ 33 ವರ್ಷಗಳ ಹಿಂದೆ ಕೊಂಕಣ ರೈಲ್ವೆಯವರು ಟ್ರ್ಯಾಕ್ ನಿರ್ಮಿಸುವ ಸಂದರ್ಭದಲ್ಲಿ ಗುಡಿಯನ್ನು ಹಿಂದೆ ಇದ್ದ ಜಾಗದಿಂದ ತೆರವುಗೊಳಿಸಬೇಕಾದಾಗ 5,000 ರೂಪಾಯಿಯನ್ನು ನೀಡಿ ಕೈ ತೊಳೆದುಕೊಂಡಿದ್ದರು, ಆಗ ಆ ಕುಟುಂಬ ದೈವವನ್ನು ಬಿಟ್ಟು, ನಾಗನ ಕಲ್ಲನ್ನು ನೀರಿಗೆ ವಿಸರ್ಜಿಸಿ ಅಲ್ಲಿಂದ ಬೇರೆ ಕಡೆಗೆ ತೆರಳಿದ್ದರು. ಮಂಡೇಡಿ ಗ್ರಾಮಕ್ಕೆ ಸಂಬಂಧಪಟ್ಟ ಅಸುಪಾಸಿನ ಹತ್ತು ಮನೆಯವರು ಸೇರಿ ಬ್ರಾಹ್ಮಣರ ಜಾಗದಲ್ಲಿಯೇ ಚಲನೆ ಮಾಡಿ ದೈವವನ್ನು ತೆಂಗಿನಕಾಯಿಗೆ ಅವಾಹನೆ ಮಾಡಿ ಹಾಲಿನ ಮರಕ್ಕೆ ಕಟ್ಟಿ ಇಟ್ಟಿದ್ದರು, ರೈಲ್ವೆ ಟ್ರ್ಯಾಕ್ನ ಕೆಲಸಕ್ಕೆ ಬಂದಿದ್ದ ಜೇಸಿಬಿಯವರು ಆ ತೆಂಗಿನಕಾಯಿಯನ್ನು ಒಡೆದು ತಿಂದಿದ್ದರು ಪರಿಣಾಮ ಎಷ್ಟೇ ಪ್ರಯತ್ನ ಪಟ್ಟರು ಜೇಸಿಬಿ ಕೆಟ್ಟು ಹೋಗಿ ಕೆಲಸ ಮುಂದೆ ಸಾಗಲಿಲ್ಲ, ದೊಡ್ಡ ದೊಡ್ಡ ಮೆಕ್ಯಾನಿಕ್ಗಳನ್ನು ಕರೆಸಿದರು ಕೂಡಾ ಜೇಸಿಬಿ ಮುಂದೆ ಸಾಗದೇ ಇದ್ದಾಗ ದೇವರ ಮೊರೆ ಹೋಗುವುದೋ, ದೈವಜ್ಞರ ಮೊರೆ ಹೋಗುವುದೋ ಅನಿವಾರ್ಯವಾಯಿತು. ಅವರಿಗೆ ತಿಳಿದ ಕೇರಳದ ಮಾಂತ್ರಿಕರೊಬ್ಬರನ್ನು ಕರೆಸಿ ಕೇಳಿದಾಗ ಅವರು ಸಾನಿಧ್ಯದ ಬಗ್ಗೆ ಹೇಳಲಾಗಿ ತೆಂಗಿನಕಾಯಿಯನ್ನು ತಿಂದ ಬಗ್ಗೆ ಗೋಚರಕ್ಕೆ ಬಂದು ದೈವವನ್ನು ಪ್ರತಿಷ್ಠೆ ಮಾಡದೇ ಇದ್ದರೆ ಜೇಸಿಬಿ ಯಾವುದೇ ಕಾರಣಕ್ಕೂ ಮುಂದೆ ಹೋಗುವುದಿಲ್ಲ, ಎಂದು ಕಾಣಿಸುತ್ತದೆ. ಕಲ್ಲು ಹಾಕಿ ದೈವವನ್ನು ನಂಬಿದ ನಂತರ ಜೇಸಿಬಿ ಪುನಃ ಎಂದಿನಂತೆ ಕೆಲಸ ಮಾಡಲಾರಂಭಿಸಿತು. ಬ್ರಾಹ್ಮಣರೊಬ್ಬರು ಅಲ್ಲಿನ ಕಾಡಿನಲ್ಲಿ ಇದ್ದ ಪಂಜುರ್ಲಿಯ ಕಲ್ಲಿನಲ್ಲಿ ಬಲ ಕಾಲಿನ ಹೆಜ್ಜೆಯ ಗುರುತಿನಂತಿದ್ದು ಆಕಾರವಿಲ್ಲದ ಸುಂದರವಾದ ಕಲ್ಲನ್ನು ತನ್ನ ಮನೆಯ ದನದ ಕೊಟ್ಟಿಗೆಯಲ್ಲಿ ತಂದು ಹಾಕಿದರು ಆ ದಿನ ಹಸುವಿನ ಹಾಲನ್ನು ಕರೆದಾಗ ಹಾಲಿನ ಬದಲಾಗಿ ರಕ್ತ ಸುರಿಯಲಾರಂಭಿಸಿತು, ಭಯಭೀತರಾದ ಅವರು ಎಲ್ಲಿಯೋ ಕೇಳಿ ನೋಡಿದಾಗ ಅದು ಪಂಜುರ್ಲಿಯ ಕಲ್ಲು ಎಂದು ಗೋಚರಕ್ಕೆ ಬಂದು ಇದ್ದ ಜಾಗದಲ್ಲಿಯೇ ಅದನ್ನು ಪ್ರತಿಷ್ಠೆ ಮಾಡಬೇಕೆಂದು ಕಾಣಿಸಿತು ಹೀಗೆ ಪಂಜುರ್ಲಿಯು ಕೂಡಾ ಒಂದು ಕಾಲದಲ್ಲಿ ಕಾರಣಿಕ ಮೆರೆದು ತನ್ನ ಇರುವಿಕೆಯನ್ನು ತೋರ್ಪಡಿಸಿದ್ದ. ಇನ್ನು ಕ್ಷೇತ್ರದ ಗುಳಿಗನ ಬಗ್ಗೆ ಹೇಳಬೇಕೆಂದರೆ ಸ್ವತಃ ನನಗೆ ನೇಮದ ಸಂದರ್ಭದಲ್ಲಿ ಆಗಿದ್ದ ಅನುಭವ ಎದೆ ಜಲ್ಲೆನ್ನುವ ರೀತಿಯಲ್ಲಿತ್ತು. ಐದು ವರ್ಷಗಳ ಹಿಂದೆ ಬೇರೆ ಕಡೆಯ ನೇಮಕ್ಕೆಲ್ಲ ಹೋಗುವುದು ಕಡಿಮೆ ಊರಿನ ಬೆರ್ಮೋಟ್ಟಿನ ಗುಳಿಗನ ನೇಮವೋ, ಮತ್ಯಾರದ್ದೋ ಮನೆಯ ನೇಮವನ್ನು ನೋಡಿದ್ದ ನನಗೆ ಗುಳಿಗ ಅಬತರ ಹೇಗಿರಬಹುದು, ಆರ್ಭಟ ಹೇಗಿರಬಹುದೆನ್ನುವ ಕುತೂಹಲ. ಹತ್ತಿರದಲ್ಲಿ ನೋಡಬೇಕೆನ್ನುವ ಆಸೆಯಿಂದ ನಿಂತಿದ್ದಾಗ ಗುಳಿಗ ರೈಲ್ವೆ ಟ್ರ್ಯಾಕ್ ನ ಕಡೆಗೆ ಓಡುತ್ತಾನೆ ಟ್ರ್ಯಾಕ್ ನ ಮೇಲೆ ಹೋಗಿ ಕೆಳಗೆ ಇಳಿದಾಗಲೇ ಟ್ರ್ಯಾಕ್ನಲ್ಲಿ ರೈಲೊಂದು ಹಾದು ಹೋಗುತ್ತದೆ. ಗುಳಿಗನ ಮತ್ತು ರೈಲಿನ ಅಂತರ ನೋಡುವಾಗಲೇ ಮೈ ಜುಮ್ಮೆನ್ನುತ್ತದೆ , ದೈವ ನರ್ತನ ನಡೆಸುವ ಸಂದರ್ಭದಲ್ಲೆ ಇಹಲೋಕ ತ್ಯಜಿಸಿರುವ ಒಂದೆರಡು ಘಟನೆಗಳನ್ನು ಕಂಡಿರುವ ನಮಗೆ ಇಂತಹ ಘಟನೆಗಳು ಮತ್ತೆ ಮತ್ತೆ ನೆನಪಿಗೆ ಬಂದು ಗುಳಿಗನ ಕಾರಣಿಕವು ಬಹಳಷ್ಟಿದೆ ಅನ್ನುವುದಕ್ಕೆ ಸಾಕ್ಷಿಯಾಗಿದೆ. ಹಿಂದೆ ಕಾರಣಾಂತರಗಳಿಂದ ದೈವವನ್ನು ಬಿಟ್ಟುಹೋಗಿದ್ದ ಕುಟುಂಬ ಇದೀಗ ಬಂದಿದ್ದು, ನಿಮ್ಮೊಂದಿಗೆ ನಾವು ಕೂಡಾ ತನು -ಮನ -ಧನಗಳಿಂದ ದೈವದ ಸೇವೆಯನ್ನು ಮಾಡಲು ತಯಾರಿದ್ದೇವೆ ಎಂದು ಹೇಳಿರುವುದು, ಸಮಿತಿಗೆ ಮತ್ತು ಊರವರಿಗೆ ಆನೆಬಲ ಬಂದಂತಾಗಿದೆ. ಸರ್ವೇ ಜನೋ ಸುಖಿನೋ ಭವಂತು... (ವಿಶೇಷ ಸೂಚನೆ : 2023ರ ಏಪ್ರಿಲ್ 30ರಂದು ರಾತ್ರಿ 9 ಗಂಟೆಯ ನಂತರ ನೇಮ ನಡೆಯಲಿದ್ದು ತುಳುನಾಡ ಸಂಸ್ಕೃತಿಯ ಬಗ್ಗೆ ವಿಶೇಷವಾದ ಕಾಳಜಿ ಇರುವವರು, ಭಕ್ತಾದಿಗಳು ಇದನ್ನೇ ವೈಯುಕ್ತಿಕ ಆಮಂತ್ರಣ ಎಂದು ಭಾವಿಸಿ ಬರಬಹುದು) ಬರಹ : ವಿಕ್ಕಿ ಪೂಜಾರಿ ಮಡುಂಬು
ಕಾಪು : ಪೇಟೆ ವಾರ್ಡ್ ನಂಬರ್ 135 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪರ ಬಿರುಸಿನ ಪ್ರಚಾರ
Posted On: 29 Apr 2023, 07:42 AM
ಕಾಪು : ಇಲ್ಲಿನ ಪೇಟೆ ವಾರ್ಡ್ ನಂಬರ್ 135 ರಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪರ ಬಿರುಸಿನ ಮತಯಾಚನೆ ಪಕ್ಷದ ಕಾರ್ಯಕರ್ತರಿಂದ ನಡೆಯಿತು. ಈ ಸಂದರ್ಭ ಮಾತನಾಡಿದ ಕಾಪು ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹರೀಶ್ ನಾಯಕ್, ಕಾಪು ಕ್ಷೇತ್ರದಲ್ಲಿ ವಿನಯ್ ಕುಮಾರ್ ಸೊರಕೆಯವರಿಗೆ ಎಲ್ಲಾ ಸಮಾಜದವರಿಂದಲೂ ಉತ್ತಮ ಸ್ಪಂದನೆಯನ್ನು ದೊರೆಯುತ್ತಿದ್ದು, ಈ ಬಾರಿ ಖಂಡಿತವಾಗಿಯೂ ಕಾಪುವಿನಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ. ಅಲ್ಲದೆ ಪ್ರತಿ ಮನೆಗೂ ಪ್ರತಿ ತಿಂಗಳು ಗೃಹ ಜ್ಯೋತಿ ಕಾರ್ಯಕ್ರಮದ ಅಡಿಯಲ್ಲಿ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಪ್ರತೀ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ಮನೆ ನಿರ್ವಹಣೆಗೆ ರೂ. 2,000 ಹಾಗೂ ವಿವಿಧ ಯೋಜನೆಗಳ ಕಾಂಗ್ರೆಸ್ ಗ್ಯಾರಂಟಿಗೆ ಮತದಾರರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು. ಈ ಸಂದರ್ಭ ಪಕ್ಷದ ಪ್ರಮುಖರಾದ ಹರೀಶ್ ನಾಯಕ್ ಕಾಪು, ದೀಪಕ್ ಕುಮಾರ್ ಎರ್ಮಾಳ್, ಮಾಧವ ಪಾಲನ್, ಆಶಾ ಕಟಪಾಡಿ, ಫರ್ಝಾನ, ಆಶಾ ಶಂಕರ್, ಶೋಭ ಪಾಂಗಳ, ಪ್ರಭಾಕರ್, ಶಂಕರ್ ಕಾಪು, ಕಾರ್ಯಕರ್ತರು ಉಪಸ್ಥಿತಿಯಿದ್ದರು.
ಕಟಪಾಡಿ : ಪಿಯುಸಿಯಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್ ಗಳಿಸಿದ ಅನುಶ್ರೀಯವರನ್ನು ಅಭಿನಂದಿಸಿದ ಗುರ್ಮೆ ಸುರೇಶ್ ಶೆಟ್ಟಿ
Posted On: 28 Apr 2023, 10:01 PM
ಕಟಪಾಡಿ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಉನ್ನತ ಸಾಧನೆಗೈದು, ರಾಜ್ಯಕ್ಕೆ 5 ನೇ ರ್ಯಾಂಕ್ ಪಡೆದ ಕಟಪಾಡಿಯ ಅನುಶ್ರೀ ಅವರನ್ನು ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಮಾಡಿ, ಗೌರವಿಸಿ ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು.
ಕಾಪು : ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯಿಂದ ಮಣಿಪುರ ಪಂಚಾಯತ್ ವ್ಯಾಪ್ತಿಯಲ್ಲಿ ಮತಯಾಚನೆ
Posted On: 28 Apr 2023, 06:16 PM
ಕಾಪು : ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರು ಜೊತೆಯಾಗಿ ಕಾಪು ತಾಲೂಕಿನ ಮಣಿಪುರ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಕಾಪು : ಕಾಂಗ್ರೆಸ್ ಪ್ರಚಾರ ವಾಹನಕ್ಕೆ ಚಾಲನೆ
Posted On: 28 Apr 2023, 06:05 PM
ಕಾಪು : ಕ್ಷೇತ್ರದಲ್ಲಿ ವಿನಯಕುಮಾರ್ ಸೊರಕೆಯವರ ಅಭಿವೃದ್ಧಿ ಕಾರ್ಯಕ್ರಮಗಳ ಬಗೆಗೆ ಪ್ರಚಾರ ನಡೆಸುವ ಕಾಂಗ್ರೆಸ್ ಪ್ರಚಾರ ವಾಹನಕ್ಕೆ ಕಾಪು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕರು ವಿನಯ ಕುಮಾರ್ ಸೊರಕೆ ಉದ್ಯಾವರದಲ್ಲಿ ಚಾಲನೆ ನೀಡಿದರು. ಈ ಪ್ರಚಾರ ವಾಹನ ಕಾಪು ಕ್ಷೇತ್ರದಾದ್ಯಂತ ಸಂಚರಿಸಿ ಪ್ರಚಾರ ನಡೆಸಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಉದ್ಯಾವರ ನಾಗೇಶ್ ಕುಮಾರ್, ಗಿರೀಶ್ ಕುಮಾರ್, ರಾಯಸ್ ಫೆರ್ನಾಂಡೀಸ್, ಅಬೀದ್ ಅಲಿ, ಶೇಖರ ಕೋಟ್ಯಾನ್, ಸಾಯಿನಾಥ್, ನಿತೀನ್ ಸಾಲ್ಯಾನ್, ಸೊಹೇಲ್ ರಹಮತುಲ್ಲಾ, ಭಾಸ್ಕರ ಕೋಟ್ಯಾನ್, ಸಚಿನ್, ರಿಯಾಝ್ ಪಳ್ಳಿ, ಮೇರಿ ಡಿಸೋಜ, ಪೂರ್ಣಿಮಾ, ಆಶಾ, ಹೆಲೆನ್ ಫೆರ್ನಾಂಡೀಸ್, ದಿವಾಕರ ಬೊಳ್ಜೆ, ಸರೋಜ, ಗಿರೀಶ್ ಗುಡ್ಡೆಯಂಗಡಿ, ಮೀರಾ, ದಯಾನಂದ, ನಯಾಝ್ ಪಳ್ಳಿ, ಅನ್ಸರ್, ಆಶಾ ಸುರೇಶ್, ಸತೀಶ್ ಉಪಸ್ಥಿತರಿದ್ದರು.
ಮತ ಮಾರಿಕೊಳ್ಳಬೇಡಿ : ನ್ಯಾ.ಶಾಂತವೀರ ಶಿವಪ್ಪ
Posted On: 28 Apr 2023, 04:53 PM
ಉಡುಪಿ :ಮೇ 10 ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ, ತಮ್ಮ ಮತವನ್ನು ಮಾರಿಕೊಳ್ಳದೇ, ಉತ್ತಮ ಅಭ್ಯರ್ಥಿಗೆ ಮತಚಲಾಯಿಸುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು. ಅವರು ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮದರ್ಜೆಕಾಲೇಜು ಮತ್ತು ಸ್ನಾತಕೋತ್ತರಅಧ್ಯಯನ ಕೇಂದ್ರದಲ್ಲಿ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ, ಮತದಾನ ಜಾಗೃತಿ ಸಾರುವ ಟ್ಯಾಬ್ಲೋ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಚುನಾವಣೆಯಲ್ಲಿ ಬಹುತೇಕ ಯುವಜನತೆ ಮೊದಲ ಬಾರಿಗೆ ಮತ ಚಲಾಯಿಸುವ ಸಂಭ್ರಮದಲ್ಲಿದ್ದು, ಯಾವುದೇ ಆಮಿಷಗಳಿಗೆ ಬಲಿಯಾಗದೇ, ತಮ್ಮ ಮುಂದಿನ ಭವಿಷ್ಯಕ್ಕೆಉತ್ತಮ ಯೋಜನೆ ರೂಪಿಸುವ, ಉದ್ಯೋಗ ಸೃಷ್ಠಿಸುವ ಆಲೋಚನೆಯಿರುವ, ಪ್ರಾಮಾಣಿಕ ಮತ್ತು ನೈತಿಕತೆಯಿರುವ ಅಭ್ಯರ್ಥಿಗೆ ಮತ ನೀಡುವುದರ ಮೂಲಕ ತಮ್ಮ ಹಕ್ಕು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ವಿದ್ಯಾರ್ಥಿನಿಯರಿಗೆ ಮತದಾನದ ಪ್ರತಿಜ್ಞಾ ವಿಧಿ ಭೋದಿಸಿದ ಜಿಲ್ಲಾಧಿಕಾರಿಕೂರ್ಮಾರಾವ್ ಎಂ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವಜನತೆ ಮತದಾರರ ಪಟ್ಟಿಗೆ ತಮ್ಮ ಹೆಸರು ನೊಂದಣಿ ಮಾಡಿದ್ದು, ಇದರಿಂದ ಜಿಲ್ಲೆಗೆ ಚುನಾವಣಾ ಆಯೋಗದಿಂದ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಸಹ ಬಂದಿದೆ. ಮತದಾನ ದಿನದಂದು ಜಿಲ್ಲೆಯ ಎಲ್ಲಾ ಯುವಜನತೆ ತಪ್ಪದೇ ತಮ್ಮ ಮತದಾನದ ಹಕ್ಕು ಚಲಾಯಿಸುವ ಮೂಲಕ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾಎಸ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಉಡುಪಿ ನಗರಸಭೆಯ ಪೌರಾಯುಕ್ತ ರಮೇಶ್ ನಾಯಕ್ ಹಾಗೂ ಕಾಲೇಜಿನ ಉಪನ್ಯಾಸಕರು ಹಾಗೂ ಮತ್ತಿತರರು ಭಾಗವಹಿಸಿದ್ದರು.
