Updated News From Kaup
ಡಿಸೆಂಬರ್ 29ರಂದು ವಿದ್ಯುತ್ ವ್ಯತ್ಯಯ

Posted On: 26-12-2022 11:54PM
ಉಡುಪಿ : ಉದ್ಯಾವರ ಎಂ.ಯು.ಎಸ್.ಎಸ್ ನಿಂದ ಹೊರಡುವ ಸಂಪಿಗೆನಗರ ಮತ್ತು ಕಡೆಕಾರ್ ಫೀಡರ್ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸಾಲ್ಮರ, ಕಲಾಯಿಬೈಲು, ಸಂಪಿಗೆನಗರ, ಕುತ್ಪಾಡಿ, ಅನಂತಕೃಷ್ಣನಗರ, ಕಡೆಕಾರು, ಕಿದಿಯೂರು, ಪಡುಕೆರೆ, ಕನ್ನರ್ಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ 110/11ಕೆವಿ ಮಧುವನ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಬಾರ್ಕೂರು ಎಕ್ಸ್ಪ್ರೆಸ್ ಫೀಡರಿನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 29 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಸಾಲ ಸೌಲಭ್ಯ : ಅರ್ಜಿ ಆಹ್ವಾನ

Posted On: 26-12-2022 11:42PM
ಉಡುಪಿ : ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸಫಾಯಿ ಕರ್ಮಚಾರಿ/ ಮ್ಯಾನುವಲ್ ಸ್ಕಾವೆಂರ್ಸ್ ಹಾಗೂ ಅವರ ಅವಲಂಬಿತರ ಆರ್ಥಿಕ ಅಭಿವೃದ್ಧಿಗಾಗಿ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ (ದ್ವಿ-ಚಕ್ರ / ತ್ರಿ-ಚಕ್ರ ಸರಕು ಸಾಗಾಣಿಕೆ ವಾಹನ) ಸಾಲ ಸೌಲಭ್ಯ ಪಡೆಯಲು ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ರಜತಾದ್ರಿ, ಮಣಿಪಾಲ ದೂರವಾಣಿ ಸಂಖ್ಯೆ: 0820-2574884 ಅನ್ನು ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 29 : ನೇರ ಸಂದರ್ಶನ

Posted On: 26-12-2022 11:40PM
ಉಡುಪಿ : ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಡಿಸೆಂಬರ್ 29 ರಂದು ಬೆಳಗ್ಗೆ 10.30 ಕ್ಕೆ ಬಿ.ಎಸ್.ಎಲ್ ಇಂಡಿಯಾ ಪ್ರೈ.ಲಿ. 2ನೇ ಮಹಡಿ, ನಂದ ಕಮರ್ಷಿಯಲ್ ಕಾಂಪ್ಲೆಕ್ಸ್, ಕೋರ್ಟ್ ರೋಡ್, ಉಡುಪಿ ಇಲ್ಲಿ ನೇರ ಸಂದರ್ಶನ ನಡೆಯಲಿದ್ದು, ಎಸ್.ಎಸ್.ಎಲ್.ಸಿ, ಪಿ.ಯು.ಸಿ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ, ದೂರವಾಣಿ ಸಂಖ್ಯೆ: 8105618291, 9945856670, 8197440155 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ದಾಖಲಾತಿಗೆ ಅನುಗುಣವಾಗಿ ಶಾಲಾ ಕೊಠಡಿಗಳನ್ನು ನಿರ್ಮಿಸಿ : ಡಾ. ವಿಶಾಲ್

Posted On: 26-12-2022 11:33PM
ಉಡುಪಿ : ಶಾಲಾ ಕಟ್ಟದ ನಿರ್ಮಾಣ ಸಂದರ್ಭದಲ್ಲಿ ಮಕ್ಕಳ ದಾಖಲಾತಿಗೆ ಅನುಗುಣವಾಗಿ ಕೊಠಡಿಗಳನ್ನು ನಿರ್ಮಿಸುವಂತೆ ಇಂಜಿನಿಯರಿಂಗ್ ಅಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ. ವಿಶಾಲ್ ಆರ್ ಸೂಚನೆ ನೀಡಿದರು. ಅವರು ಇಂದು ನಗರದ ಜಿಲ್ಲಾ ಪಂಚಾಯತ್ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಶಿಕ್ಷಣ ಇಲಾಖೆಯ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆ.ಪಿ.ಎಸ್ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಅವರು, ಕೆ.ಪಿ.ಎಸ್ ಶಾಲೆಗಳಿಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕಳೆದ ಮೂರು ವರ್ಷಗಳ ನಿರ್ಮಾಣ ಹಾಗೂ ದುರಸ್ಥಿ ಕಾಮಗಾರಿಗಳ ಪ್ರಗತಿ ವಿವರಗಳನ್ನು ಪರಿಶೀಲಿಸಿದ ಅವರು, ಬೇರೆ ಬೇರೆ ಅನುದಾನಗಳನ್ನು ಒಗ್ಗೂಡಿಸಿ ಕಾಮಗಾರಿ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಿಗೆ ತಿಳಿಸಿದರು.
ವಿವೇಕಾ ಶಾಲಾ ಕಾಮಗಾರಿಯಲ್ಲಿ 150 ಕಾಮಗಾರಿಗಳಿಗೆ ಪಿಡಬ್ಲ್ಯೂಡಿ ಹಾಗೂ 38 ಕಾಮಗಾರಿಗಳಿಗೆ ಕೆ.ಆರ್.ಐ.ಡಿ.ಎಲ್ ಇವರು ಅನುಷ್ಠಾನಾಧಿಕಾರಿಗಳಾಗಿದ್ದು ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದರು. ಎಲ್ಲಾ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಟೆಂಡರ್ ಕರೆದು ಅತ್ಯಂತ ತುರ್ತಾಗಿ ಕಾಮಗಾರಿಗಳನ್ನು ಮುಕ್ತಾಯಗೊಳಿಸುವಂತೆ ತಿಳಿಸಿದರು. ಕಂದಾಯ ಭೂಮಿ, ಅರಣ್ಯ, ಕುಂಕಿ, ದೇವಸ್ಥಾನ ಜಾಗಗಳ ಸಮಸ್ಸೆಗಳಿದ್ದಲ್ಲಿ ಸಂಬಂಧಿಸಿದ ತಹಶೀಲ್ದಾರರೊಂದಿಗೆ ಚರ್ಚಿಸಿ ಸಮಸ್ಸೆ ಬಗೆಹರಿಸಲು ತಿಳಿಸಿದ ಆಯುಕ್ತರು ಅರಣ್ಯ ನೋಂದಣಿ ಕಾಯಿದೆಯ ಪ್ರಕಾರ ಶಾಲಾ ಜಮೀನನ್ನು ಸಾರ್ವಜನಿಕ ಆಸ್ತಿಯೆಂದು ಘೋಷಿಸಿ ಬಳಕೆಯ ಹಕ್ಕನ್ನು ಅರಣ್ಯ ಇಲಾಖೆಯಿಂದ ಪಡೆಯುವಂತೆ ತಿಳಿಸಿದರು. ಕುಡಿಯುವ ನೀರು ಮತ್ತು ಶೌಚಾಲಯ ನರೇಗಾ ಕಾಮಗಾರಿಯ ಉಳಿಕೆ ಅನುದಾನವನ್ನು ಇತರೆ ಕಾಮಗಾರಿಗಳಿಗೆ ಬಳಸುವಂತೆ ಹಾಗೂ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳ ಕೊರತೆಯಾಗದಂತೆ ಅವಧಿಗೆ ಮುಂಚಿತವಾಗಿ ವಿತರಿಸಲಾಗುವುದು ಎಂದ ಅವರು, ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವಾಗಿ ಮಾಡಲಾಗುವುದು ಎಂದರು.
ಮಕ್ಕಳ ವೈದ್ಯಕೀಯ ತಪಾಸಣಾ ತಂಡಕ್ಕೆ ತಜ್ಞ ವೈದ್ಯರಿಂದ ತರಬೇತಿ ನೀಡುವಂತೆ, ವಿಟಮಿನ್ ಕೊರತೆ ಇರುವ ಮಕ್ಕಳಿಗೆ ವಿಟಮಿನ್ ಮಾತ್ರೆ ನೀಡಲು, ಮಕ್ಕಳಿಗೆ ದಂತ ತಪಾಸಣಾ ಶಿಬಿರಗಳನ್ನು ಏರ್ಪಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು. ಎಲ್ಲಾ ಶಾಲಾ ಮಕ್ಕಳ ಆರೋಗ್ಯ ತಪಾಸಣೆಯ ನಡೆಸಿ, ಸ್ಕ್ರೀನಿಂಗ್ ಮಾಡಿ, ಯಾವುದಾದರು ಗುರುತರವಾದ ಖಾಯಿಲೆಗಳು ಕಂಡುಬಂದಲ್ಲಿ ಅಂತಹ ಮಕ್ಕಳನ್ನು ತಜ್ಞ ವೈದ್ಯರಿಂದ ತಪಾಸಣೆಗೆ ಒಳಪಡಿ ಆಶಾ ಕಾರ್ಯಕರ್ತೆಯರಿಂದ ಫಾಲೊ ಅಫ್ ಮಾಡಿಸುವಂತೆ ತಿಳಿಸಿದರು. ಗರ್ಭಿಣಿಯರಿಗೆ ಕಬ್ಬಿಣ ಅಂಶದ ಕೊರತೆಗೆ ಚುಚ್ಚುಮದ್ದು ನೀಡುವಂತೆ ತಿಳಿಸಿದ ಅವರು,ಮಕ್ಕಳ ಮಾನಸಿಕ ಬೆಳವಣಿಗೆಗೆ ತಾಯಿಯು ಗರ್ಭಿಣಿಯಾಗಿದ್ದಾಗ ಎಲ್ಲಾ ಪೋಷಕಾಂಶಗಳ ಕೊರತೆಯೇ ಕಾರಣ ಆದ್ದರಿಂದ ಗರ್ಭಿಣಿಯರಿಗೆ ಉತ್ತಮ ವಿಟಮಿನ್ ಮಾತ್ರೆ, ಕಬ್ಬಿಣ ಅಂಶದ ಕೊರತೆಗೆ ಚುಚ್ಚುಮದ್ದು ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಣಪತಿ ಕೆ., ಎಲ್ಲಾ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಪು : ಮಗುವಿನ ಚಿಕಿತ್ಸೆಗೆ ಧನಸಹಾಯ ನೀಡಿದ ಕುತ್ಯಾರು ಗ್ರಾಮದ ಯುವಕರು

Posted On: 26-12-2022 11:24PM
ಕಾಪು : ಕುತ್ಯಾರು ಗ್ರಾಮದ ಯುವಕರ ತಂಡ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಹಂಪಿ ಯಾತ್ರೆ ಕೈಗೊಂಡು ಹಿಂದುರುಗಿ ಬಂದ ಉಳಿದ ಹಣ ರೂ.5,400 ಹಾಗೂ ಇತರರಿಂದ ಒಟ್ಟು 15,000 ವನ್ನು ಸಂಗ್ರಹಿಸಿ ಪೇರಾಡಿ ಗ್ರಾಮದ ಶ್ರೀಧರ್ ಪೂಜಾರಿ ಇವರ 7 ವರ್ಷದ ಮಗು ಪ್ರೀತೇಶ್ ರವರ ವೈದ್ಯಕೀಯ ಚಿಕಿತ್ಸೆಗೆ ನೀಡಲಾಯಿತು.
ಕಾಪು : ಕಳತ್ತೂರಿನಲ್ಲಿ ಆರ್ಥಿಕ ಹಿಂದುಳಿದ ನಾಲ್ಕು ಮಹಿಳೆಯರಿಗೆ ಸ್ವಂತ ಮನೆ ನಿರ್ಮಾಣ

Posted On: 26-12-2022 11:13PM
ಕಾಪು : ಆಲ್ ಕಾರ್ಗೋ ಲೋಜಿಸ್ಟಿಕ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಶಶಿಕಿರಣ್ ಶೆಟ್ಟಿಯವರು ದಾನದ ರೂಪದಲ್ಲಿ 2021-22 ಪಟ್ಟಿಯಲ್ಲಿ ಮಂಗಳೂರಿನ ಉದ್ಯಮಿ ಎ.ಜೆ.ಶೆಟ್ಟಿ ಇವರ ಅಧ್ಯಕ್ಷತೆಯ ವಿಶ್ವ ಬಂಟರ ಪ್ರತಿಷ್ಠಾನ ಮಂಗಳೂರು ಇವರ ಮುಖಾಂತರ ಸುಮಾರು 8 ಲಕ್ಷ ವೆಚ್ಚದ 17 ಮನೆ ನಿರ್ಮಾಣಗೊಂಡಿದ್ದು ಅದರಲ್ಲಿ ಕಾಸರಗೋಡು 7 ಮನೆ, ಮಂಗಳೂರು 5 ಮನೆ, ಕುಂದಾಪುರ 1 ಮನೆ ಹಾಗೂ ಕಾಪು ತಾಲೂಕಿನ ಕಳತ್ತೂರು ಗ್ರಾಮಕ್ಕೆ 4 ಮನೆ ನಿರ್ಮಿಸಿ ಕೊಟ್ಟಿರುತ್ತಾರೆ.

17 ಮನೆಯನ್ನು ಮಂಗಳೂರಿನಲ್ಲಿ ನಡೆದ ವಿಶ್ವ ಬಂಟರ ಪ್ರತಿಷ್ಠಾನ ಸಮಾರಂಭದಲ್ಲಿ 17 ಬಂಟ ಸಮಾಜದ ಮಹಿಳೆಯರಿಗೆ ಮನೆಯ ಕೀಯನ್ನು ಹಸ್ತಾಂತರಿಸಲಾಗಿದೆ. ಕಳತ್ತೂರು ಗ್ರಾಮದ 4 ಬಂಟ ಮಹಿಳೆಯರಿಗೆ ಮನೆಯನ್ನು ಡಿಸೆಂಬರ್ 21 ರಂದು ಪ್ರತಿಷ್ಠಾನದ ಸದಸ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.

ಕಳತ್ತೂರಿನ 4 ಫಲಾನುಭವಿಗಳಿಗೆ ಬಂಟ ಪ್ರತಿಷ್ಠಾನದ ಅಧ್ಯಕ್ಷ ಎ.ಜೆ.ಶೆಟ್ಟಿ, ಬಂಟ ಪ್ರತಿಷ್ಠಾನದ ಟ್ರಸ್ಟಿ ಶೇಖರ ಬಿ.ಶೆಟ್ಟಿ, ಕಳತ್ತೂರು ಬಂಟ ಪ್ರತಿಷ್ಠಾನದ ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ ಇವರಿಗೆ ಕಳತ್ತೂರು ಜನ ಸೇವಾ ವೇದಿಕೆಯ ಅಧ್ಯಕ್ಷ ದಿವಾಕರ ಬಿ. ಶೆಟ್ಟಿಯವರು ಮನವಿ ನೀಡಿರುವುದರಿಂದ ಕಳತ್ತೂರು ಗ್ರಾಮಕ್ಕೆ 4 ಮನೆ ನೀಡಿದ್ದಾರೆ. ಕಳತ್ತೂರು ಗ್ರಾಮದ ನಾಲ್ಕು ಮನೆಯನ್ನು ವಿಶ್ವ ಬಂಟರ ಪ್ರತಿಷ್ಠಾನ ಮಂಗಳೂರು ಇದರ ಟ್ರಸ್ಟಿ ಶೇಖರ ಬಿ.ಶೆಟ್ಟಿ ಕಳತ್ತೂರು ಉದ್ಘಾಟಿಸಿದರು. ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಳತ್ತೂರು ಶೇಖರ ಬಿ. ಶೆಟ್ಟಿ, ದಿವಾಕರ ಬಿ. ಶೆಟ್ಟಿ ಕಳತ್ತೂರು ಮತ್ತು ಮನೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಿಕೊಟ್ಟ ಮಕರ ಕನ್ಟ್ರಕ್ಷನ್ ಕಾಪು ಇದರ ಆಡಳಿತ ನಿರ್ದೇಶಕರಾದ ಸುಧಾಕರ್ ಶೆಟ್ಟಿ ಮಲ್ಲಾರು ಇವರನ್ನು ಫಲಾನುಭವಿಗಳ ಪರವಾಗಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಸನ್ಮಾನಿಸಿದರು.

ಕಾಪು ಬಂಟರ ಸಂಘದ ಕಾರ್ಯದರ್ಶಿ ಕೆ. ಲೀಲಾಧರ ಶೆಟ್ಟಿ ಕಾಪು, ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಕರ್ ಬಿ.ಶೆಟ್ಟಿ ಕಳತ್ತೂರು ವೇದಿಕೆಯಲ್ಲಿದ್ದರು. ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ದಯಾನಂದ ಶೆಟ್ಟಿ ದೆಂದೂರು ಸ್ವಾಗತಿಸಿದರು. ದಿವಾಕರ್ ಡಿ. ಶೆಟ್ಟಿ ಕಳತ್ತೂರು ವಂದಿಸಿದರು.
ರಾಜ್ಯ ಮಟ್ಟದ ಭಜನಾ ಸ್ಪರ್ಧೆ : ಉದ್ಯಾವರದ ಶ್ರೀ ನಾರಾಯಣಗುರು ಯುವಜನ ಕಲಾ ಮಂಡಳಿಗೆ ದ್ವಿತೀಯ ಸ್ಥಾನ

Posted On: 26-12-2022 12:10PM
ಕಾಪು : ಕರಾವಳಿ ಮಿತ್ರ ವೃಂದ ಮತ್ತು ಮಹಿಳಾ ವೃಂದ ಕಾಪು ಪಡು ಇವರ ಆಶ್ರಯದಲ್ಲಿ ಕಾಪುವಿನಲ್ಲಿ ನಡೆದ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಉದ್ಯಾವರ ಬಿಲ್ಲವ ಮಹಾಜನ ಸಂಘದ ಅಂಗಸಂಸ್ಥೆಯಾದ ಶ್ರೀ ನಾರಾಯಣಗುರು ಯುವ ಜನ ಕಲಾ ಮಂಡಳಿ ಉದ್ಯಾವರ ದ್ವಿತೀಯ ಸ್ಥಾನ ಪಡೆದಿರುತ್ತದೆ.
ಓಮನ್ ಬಿಲ್ಲವಾಸ್ : ಅಧ್ಯಕ್ಷರಾಗಿ ಸುಜಿತ್ ಎಸ್ ಅಂಚನ್ ಪಾಂಗಳ ಆಯ್ಕೆ

Posted On: 24-12-2022 03:49PM
ಗಲ್ಫ್ ರಾಷ್ಟ್ರದ ಸುಲ್ತಾನೇಟ್ ಆಪ್ ಓಮನ್ (ಮಸ್ಕತ್) ಇಲ್ಲಿರುವ ಓಮನ್ ಬಿಲ್ಲವಾಸ್ ಸಂಘಟನೆಯ 2023 ರಿಂದ 2024 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಶುಕ್ರವಾರ ನಡೆಯಿತು.

ಸಂಘಟನೆಯ ಸ್ಥಾಪಕ ಸದಸ್ಯರು, ಆಯ್ಕೆ ಸಮಿತಿ, ಬಿಲ್ಲವ ಸಮಾಜದ ಬಾಂಧವರು ಸೇರಿ ನಡೆಸಿದ ಸಭೆಯಲ್ಲಿ ಅಧ್ಯಕ್ಷರಾಗಿ ಸುಜಿತ್ ಎಸ್ ಅಂಚನ್ ಪಾಂಗಳ, ಉಪಾಧ್ಯಕ್ಷರಾಗಿ ಹರೀಶ್ ಸುವರ್ಣ ಮತ್ತು ಪ್ರಪುಲ್ಲ ಶಂಕರ್ ಕಟಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಬೋಳ, ಕೋಶಧಿಕಾರಿಯಾಗಿ ಭಾಸ್ಕರ್ ಕೋಟ್ಯಾನ್ ಮತ್ತು ಪದಾಧಿಕಾರಿಗಳನ್ನು ಆಯ್ಕೆಯಾದರು.
ಕಟಪಾಡಿ : ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕ - ಕೃತಜ್ಞತಾಪೂರ್ವಕ ಸಭೆ

Posted On: 24-12-2022 03:40PM
ಕಟಪಾಡಿ : ಯಾವುದೇ ಕಾರ್ಯ ಪೂರ್ವತಯಾರಿಯಿಲ್ಲದೆ ಆಗದು. ಎಲ್ಲರ ಸಹಕಾರ ಅಗತ್ಯ. ಸಫಲತೆಯ ಮನೋಭಾವ ಇದ್ದಾಗ ಕಾರ್ಯ ಸಾಧ್ಯ. ಕಾಪು ತಾಲೂಕಿನ ೪ನೇ ಕನ್ನಡ ಸಾಹಿತ್ಯ ಸಮ್ಮೇನಕ್ಕೆ ತಾಲೂಕು ಅಧ್ಯಕ್ಷರು, ಸಮಿತಿ ಮತ್ತು ಶಾಲೆಯ ಅಧ್ಯಾಪಕ ವೃಂದದವರ ಪರಿಶ್ರಮವಿದೆ. ಮುಂದೆಯೂ ನಮ್ಮ ಸಂಸ್ಥೆಯ ಸಹಕಾರವಿದೆ ಎಂದು ಕಟಪಾಡಿ ಎಸ್ ವಿ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರು ಮತ್ತು ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಕೆ ಸತ್ಯೇಂದ್ರ ಪೈ ಹೇಳಿದರು. ಅವರು ಶನಿವಾರ ಕಟಪಾಡಿ ಎಸ್ ವಿ ಎಸ್ ಪದವಿಪೂರ್ವ ಕಾಲೇಜಿನಲ್ಲಿ ಯಶಸ್ವಿಯಾಗಿ ಜರಗಿದ ಕಾಪು ತಾಲೂಕಿನ ೪ನೇ ಕನ್ನಡ ಸಾಹಿತ್ಯ ಸಮ್ಮೇನದ ಕೃತಜ್ಞತಾಪೂರ್ವಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಪುಂಡಲೀಕ ಮರಾಠೆ, ಸರ್ವರ ಸಹಕಾರದಿಂದ ಸಮ್ಮೇಳನವು ಯಶಸ್ವಿಯಾಗಿದೆ. ಸಭೆಯ ಸಲಹೆಗಳು ಮುಂದಿನ ಸಮ್ಮೇಳನವನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ಮಾಡಲು ಸಹಾಯಕವಾಗಿದೆ ಎಂದರು.
ಸಭೆಯಲ್ಲಿ ಸ್ವಾಗತ ಸಮಿತಿಯ ಕಾರ್ಯಧ್ಯಕ್ಷರು ಮತ್ತು ಎಸ್ ವಿ ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ| ದಯಾನಂದ ಪೈ, ಎಸ್ ವಿ ಎಸ್ ಆಡಳಿತ ಮಂಡಳಿ ಸದಸ್ಯ ಗಣೇಶ್ ಕಿಣಿ, ಎಸ್ ವಿ ಎಸ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ತಂತ್ರಿ, ಕಾಪು ತಾಲೂಕು ಘಟಕದ ಕೋಶಾಧಿಕಾರಿ ವಿದ್ಯಾಧರ ಪುರಾಣಿಕ್, ಸಂಘಟನ ಕಾರ್ಯದರ್ಶಿ ದೀಪಕ್ ಬೀರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿ ಪ್ರಭಾ ಬಿ. ಶೆಟ್ಟಿ, ನವೋದಯ ಸ್ವಸಹಾಯ ಸಂಘದ ಸದಸ್ಯರು, ಭಾಸ್ಕರ ಕಾಮತ್, ಕಿರಣ್ ಕುಮಾರ್, ದಿಲೀಪ್ ಕುಮಾರ್ ಬನ್ಸೊಡೆ, ಗ್ರೆಟ್ಟಾ ಮೊರಸ್ ಪಲಿಮಾರು ಮತ್ತಿತರರು ಉಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಪುಂಡಲೀಕ ಮರಾಠೆ ಸ್ವಾಗತಿಸಿದರು. ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ವಂದಿಸಿದರು.
ಅದಮಾರು ಪಿಪಿಸಿ ನೆನೆಪಿನಂಗಳ ಗುರುಶಿಷ್ಯರ ಸಮಾಗಮ - 2022

Posted On: 21-12-2022 11:07PM
ಈ ಗುರು ಶಿಷ್ಯ ಸಮಾವೇಶದಲ್ಲಿ ವಿದ್ಯಾರ್ಥಿಗಳಿಗೆ ಆಗ ಗುರುಗಳಾಗಿದ್ದ ಅದಮಾರು ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪೌಢಶಾಲೆ ಹಾಗೂ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿದ್ದ ಶಿಕ್ಷಕರಿಗೆ, ಉಪನ್ಯಾಸಕರಿಗೆ, ಸನ್ಮಾನಿಸುವ ಮೂಲಕ ಗುರುವಂದನೆ ಸಲ್ಲಿಸಿದರು. ನಿವೃತ್ತ ಪ್ರಾಂಶುಪಾಲರುಗಳಾದ ಬಿ. ಆರ್. ನಾಗರತ್ನ, ಎಂ. ಲಕ್ಷ್ಮೀ ನಾರಯಣ ರಾವ್, ರಮೇಶ ಹಂದೆ, ನಾರಾಯಣ ಹೆಬ್ಬಾರ್, ಎಂ ರಾಮಕೃಷ್ಣ ಪೈ, ಹಾಗೂ ನಿವೃತ್ತ ಉಪನ್ಯಾಸಕರಾದ ಏಕನಾಥ ಡೋಂಗ್ರೆ, ಹರಿಪ್ರಸಾದ್, ನಿವೃತ್ತ ಶಿಕ್ಷಕರಾದ ವೆಂಕಟರಾಜ ಸರಳಾಯ, ವಾದಿರಾಜ ತಂತಿ, ವಿಠಲ ದಾಸ್, ಜಯಶಂಕರ್, ರವಿ, ಶೆಟ್ಟಿ, ಹಾಗೂ ಮುಖ್ಯೋಪಾಧ್ಯಾಯರಾದ ಗಣಪತಿ ಭಟ್ ಸಂಧ್ಯಾ ಗಣಪತಿ ಭಟ್ ರನ್ನು ಸನ್ಮಾನಿಸಲಾಯಿತು. ತೀರಿಹೋದ ಗುರುಗಳಿಗೆ ಅವರ ಮನೆಯವರನ್ನು ಕರೆಸಿ ಅವರಿಗೂ ಗೌರವ ಸಲ್ಲಿಸಿದರು. ಶಿಕ್ಷಕೇತರ ಬಂಧುಗಳಾದ ನಾಗರತ್ನ ಕೆ. ವಸಂತ, ಸುಧಾಕರ ಅಮೀನ್, ಸುಧಾಕರ ಪೂಜಾರಿ, ಸದಾಶಿವ ಆಚಾರಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿತು
ಈ ಗುರು ಶಿಷ್ಯ ಸಮಾವೇಶದಲ್ಲಿ ವಿದ್ಯಾರ್ಥಿಗಳಿಗೆ ಆಗ ಗುರುಗಳಾಗಿದ್ದ ಅದಮಾರು ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪೌಢಶಾಲೆ ಹಾಗೂ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿದ್ದ ಶಿಕ್ಷಕರಿಗೆ, ಉಪನ್ಯಾಸಕರಿಗೆ, ಸನ್ಮಾನಿಸುವ ಮೂಲಕ ಗುರುವಂದನೆ ಸಲ್ಲಿಸಿದರು. ನಿವೃತ್ತ ಪ್ರಾಂಶುಪಾಲರುಗಳಾದ ಬಿ. ಆರ್. ನಾಗರತ್ನ, ಎಂ. ಲಕ್ಷ್ಮೀ ನಾರಯಣ ರಾವ್, ರಮೇಶ ಹಂದೆ, ನಾರಾಯಣ ಹೆಬ್ಬಾರ್, ಎಂ ರಾಮಕೃಷ್ಣ ಪೈ, ಹಾಗೂ ನಿವೃತ್ತ ಉಪನ್ಯಾಸಕರಾದ ಏಕನಾಥ ಡೋಂಗ್ರೆ, ಹರಿಪ್ರಸಾದ್, ನಿವೃತ್ತ ಶಿಕ್ಷಕರಾದ ವೆಂಕಟರಾಜ ಸರಳಾಯ, ವಾದಿರಾಜ ತಂತಿ, ವಿಠಲ ದಾಸ್, ಜಯಶಂಕರ್, ರವಿ, ಶೆಟ್ಟಿ, ಹಾಗೂ ಮುಖ್ಯೋಪಾಧ್ಯಾಯರಾದ ಗಣಪತಿ ಭಟ್ ಸಂಧ್ಯಾ ಗಣಪತಿ ಭಟ್ ರನ್ನು ಸನ್ಮಾನಿಸಲಾಯಿತು. ತೀರಿಹೋದ ಗುರುಗಳಿಗೆ ಅವರ ಮನೆಯವರನ್ನು ಕರೆಸಿ ಅವರಿಗೂ ಗೌರವ ಸಲ್ಲಿಸಿದರು. ಶಿಕ್ಷಕೇತರ ಬಂಧುಗಳಾದ ನಾಗರತ್ನ ಕೆ. ವಸಂತ, ಸುಧಾಕರ ಅಮೀನ್, ಸುಧಾಕರ ಪೂಜಾರಿ, ಸದಾಶಿವ ಆಚಾರಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿತು

ಬಿ.ಆರ್. ನಾಗರತ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಸಂಜೀವ ನಾಯ್ಕ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪದ್ಮಜ, ಅಲ್ತಾಫ್, ಮಿಥುನ್ ಶೆಟ್ಟಿ, ಸಾಯಿ ಪ್ರಸಾದ್, ಜನೆಸ್ ಡಿಸಿಲ್ವ, ಶಾಲಿನಿ, ಪ್ರಶಾಂತ್ ಉಪಸ್ಥಿತರಿದ್ದರು.
ತಮ್ಮ ಹಿಂದಿನ ಶಾಲಾ ಜೀವನವನ್ನು ನೆನೆಪಿಸಿಕೊಂಡು ತಾವು ಕಲಿತ ತರಗತಿಯಲ್ಲೇ ಕುಳಿತು ಹಿಂದಿನ ನೆನಪುಗಳನ್ನು ಮೆಲುಕಿ ಹಾಕಿಕೊಂಡು ಆಗಿನ ಇವರ ಶಿಕ್ಷಕರಾದ ವಿಠಲದಾಸರಿಂದ ಎಲ್ಲಾ ಹಳೆವಿದ್ಯಾರ್ಥಿಗಳು ನೆನಪಿನಂಗಳದ ಸ್ಮರಣಿಕೆ ಪಡೆದುಕೊಂಡರು. ತಾವು ಕಲಿತ ಶಾಲೆಗೆ ನೆನಪಿನ ಕಾಣಿಕೆಯಾಗಿ ಕಾಲು ದೀಪವನ್ನು ಆದಮಾರು ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಸಂಜೀವ ನಾಯ್ಕರಿಗೆ ನೀಡಿದರು. ಎಲ್ಲಾ ಗುರುಗಳಿಗೂ ಊಟೋಪಚಾರದ ವ್ಯವಸ್ಥೆಯನ್ನು ಮಾಡಿದಲ್ಲದೆ ಎಲ್ಲಾ ಗುರುಗಳ ಆಶೀರ್ವಾದ ಪಡೆದುಕೊಂಡರು. ಹಳೆ ವಿದ್ಯಾರ್ಥಿ ಪ್ರಿಯ ಶೆಟ್ಟಿ ಸ್ವಾಗತಿಸಿದರು. ಸುಧಾಕರ ಕೋಟ್ಯಾನ್ ಧನ್ಯವಾದವಿತ್ತರು. ಸುಧೀರ್ ಶೆಟ್ಟಿ ಅದಮಾರು ಕಾರ್ಯಕ್ರಮ ನಿರೂಪಿಸಿದರು. ಒಟ್ಟು 45 ಮಂದಿ ಹಳೆ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.