Updated News From Kaup

ಯಕ್ಷ ಪ್ರತಿಭೆ ಪಡುಬಿದ್ರಿಯ ವೈಷ್ಣವಿ ರಾವ್

Posted On: 29-01-2023 01:23PM

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿಯ ಪಿವಿ ಜಗನ್ನಾಥ್ ರಾವ್ ಹಾಗೂ ಸುಜ್ಯೋತಿ ದಂಪತಿಯರ ಮಗಳಾದ ವೈಷ್ಣವಿ ರಾವ್ ಇವರ ಜನನ. ಬಿಕಾಂ ವಿದ್ಯಾಭ್ಯಾಸವನ್ನು ಪೂರೈಸಿ ಪ್ರಸ್ತುತ U18 ನಲ್ಲಿ M.COM ವ್ಯಾಸಂಗ ಮಾಡುತ್ತಿದ್ದಾರೆ. ಇವರ ಊರಿನಲ್ಲಿ ತುಂಬಾ ಯಕ್ಷಗಾನ ಪ್ರದರ್ಶನ ಆಗುತಿತ್ತು ಮತ್ತು ತಮ್ಮ ಮೂರನೇ ವಯಸ್ಸಿಗೆ ಭರತನಾಟ್ಯ ಕಲಿಯಲು ಆರಂಭಿಸಿದ್ದ ಇವರಿಗೆ ಯಕ್ಷಗಾನ ಕಲಿಯಬೇಕು ಅನ್ನುವ ಆಸೆ ಬಂತು ಆವಾಗ ಯಕ್ಷಗಾನಕ್ಕೆ ಸೇರಿದರು, ಹೀಗೆ ಇವರಿಗೆ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ವೈಷ್ಣವಿ ಅವರು ಹೇಳುತ್ತಾರೆ. ಪೂರ್ಣಿಮಾ ಯತೀಶ್ ರೈ ಅವರ "ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಮಂಡಳಿಯಲ್ಲಿ”, ಅವರ ಮಾರ್ಗಶ್ರನದಲ್ಲಿ ಆರು ವರ್ಷಗಳಿಂದ ಮುಂಬೈ,ಚೆನ್ನೈ ಸೇರಿದಂತೆ ಬಹಳಷ್ಟು ಕಡೆ ಪ್ರದರ್ಶನ ಕೊಟ್ಟಿದ್ದಾರೆ. ಸಾಯಿಸುಮ ಮಿಥುನ್ ನಾವಡ ಇವರ "ಯಕ್ಷವಾಸ್ಯಮ್ ಕಾರಿಂಜ" ಇದರಲ್ಲೂ ಬಹಳ ಕಾರ್ಯಕ್ರಮಗಳಿಗೆ ಹೋಗಿದ್ದಾರೆ. ಇನ್ನೂ ಹಲವಾರು ಸಂಘ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ವೈಷ್ಣವಿ ಅವರು ನೀಡಿರುತ್ತಾರೆ.

ಯಕ್ಷಗಾನದ ಗುರುಗಳು : ಎಂಟನೇ ವಯಸ್ಸಿಗೆ ಊರಲ್ಲಿ ಗುರುಗಳಾದ ಭಾಸ್ಕರ ಪಡುಬಿದ್ರಿ ಹಾಗೂ ರವೀಂದ್ರ ಪಡುಬಿದ್ರಿ ಇವರಲ್ಲಿ ಯಕ್ಷಗಾನ ಅಭ್ಯಾಸ ಆರಂಭಿಸಿ, ನಿತಿನ್ ಆಚಾರ್ಯ ಪಡುಬಿದ್ರಿ ಇವರಲ್ಲಿ ಅಭ್ಯಾಸ ಮಾಡಿ ನಂತರ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಇವರಲ್ಲಿ ಅಭ್ಯಾಸ ಮುಂದುವರೆಸಿ ಅವರ ಮಾರ್ಗದರ್ಶನದಲ್ಲಿ ಬಹಳಷ್ಟು ಪ್ರದರ್ಶನಗಳನ್ನು ಅವರ ತಂಡದಲ್ಲಿ ನೀಡಿದ್ದಾರೆ. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ : ಗುರುಗಳಿಂದ ಪ್ರಸಂಗದ ಸಂಪೂರ್ಣ ಮಾಹಿತಿ ಪಡೆದುಕೊಂಡು ಆಮೇಲೆ ಇವರ ಪಾತ್ರದ ನಡೆಯನ್ನು ನೋಡಿ ಕೇಳಿ ತಿಳಿದುಕೊಳುತ್ತೇನೆ. ಕೆಲವೊಮ್ಮೆ ಪುಸ್ತಕಗಳು, ಕೆಲವು ವಿಡಿಯೋಗಳಿಂದ ಕೂಡ ಸಹಾಯ ಪಡೆಯುತ್ತೇನೆ. ಶ್ರೀ ದೇವಿ ಮಹಾತ್ಮ ಬಹಳ ಇಷ್ಟದ ಪ್ರಸಂಗ, ದಕ್ಷಾಧ್ವರ, ಸುಧನ್ವಾರ್ಜುನ ಕಾಳಗ ಇವರ ನೆಚ್ಚಿನ ಪ್ರಸಂಗಗಳು. ಶ್ರೀ ದೇವಿ, ಸುಧನ್ವಾರ್ಜುನದ ಅರ್ಜುನ, ದಾಕ್ಷಾಯಿಣಿ ನೆಚ್ಚಿನ ವೇಷಗಳು. ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ : ಇತ್ತೀಚೆಗೆ ಯಕ್ಷಗಾನಕ್ಕೆ ಬಹಳಷ್ಟು ಪ್ರಸಿದ್ಧಿ ಸಿಗ್ತಿದೆ. ಅಭಿಪ್ರಾಯ ಕೊಡುವಷ್ಟು ಬೆಳೆದಿಲ್ಲ ನಾನು. ಆದರೆ ಆದಷ್ಟು ಕಲೆಯನ್ನು ಅದರ ತನದಲ್ಲೇ ಕಲಿತು ಮುಂದುವರೆಸಬೇಕು. ಹೊಸತನ ಕೊಡಲು ಹೋಗಿ ಕೆಡಿಸಬಾರದು. ಹಿರಿಯರ ಮಾರ್ಗದರ್ಶನದ ಜೊತೆಗೆ ಮುಂದುವರೆಸಬೇಕು. ಆದಷ್ಟು ಮಕ್ಕಳಿಗೆ ಪೌರಾಣಿಕ ಪ್ರಸಂಗಗಳ ಮಾಹಿತಿ ಕೊಡಬೇಕು.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ : ಪ್ರೇಕ್ಷಕರಿಂದ ಕಲಾವಿದನಿಗೆ ತುಂಬಾ ಉತ್ತೇಜನ ಸಿಗುತ್ತದೆ, ಒಳ್ಳೆಯ ಪ್ರೋತ್ಸಾಹ ಸಿಗುತ್ತಾ ಇದೆ. ಖುಷಿ ಆಗ್ತದೆ. ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ : ಇನ್ನಷ್ಟು ಅಭ್ಯಾಸ ಮಾಡಿ ಒಳ್ಳೆಯ ಕಲಾವಿದೆ ಆಗಬೇಕು. ಪ್ರಶಸ್ತಿ/ಸನ್ಮಾನ : 'ಕಲಾಭೂಷಣ' ಪ್ರಶಸ್ತಿ -2016, ಸೇರಾಕೆರ್ ಸ್ಟಾರ್ ಆಫ್ ದಿ ಇಯರ್ -2015 ಕರಾವಳಿ ಯಕ್ಷ ಮಿತ್ರರು ಬಹುಮುಖ ಪ್ರತಿಭೆಗಳ ಸಂಗಮ ಪ್ರಶಸ್ತಿ -2019, ನೃತ್ಯಸಿಂಚನ -2018, ಗಿರಿಶ್ರೀ ಭಾಸ್ಕರ ಪ್ರಶಸ್ತಿ -2018, ರೋಟರಿ ಕ್ಲಬ್ ವತಿಯಿಂದ ಯುವ ಸಾಧಕ ಪ್ರಶಸ್ತಿ-2022, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯುವ ಸಾಧಕ ಪ್ರಶಸ್ತಿ -2020 ಹೀಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ರಾಜ್ಯಮಟ್ಟದ ಯುವಜನೋತ್ಸವದಲ್ಲಿ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿದೆ. ಪ್ರಸ್ತುತ ನಾಟ್ಯಮಯೂರಿ ಲಕ್ಷ್ಮೀ ಗುರುರಾಜ್ ಇವರಲ್ಲಿ ವಿದ್ವತ್ ಅನ್ನು ಮುಂದುವರಿಸುತ್ತಿದ್ದಾರೆ. ಭರತನಾಟ್ಯ, ಡ್ಯಾನ್ಸ್, ಸ್ವಿಮ್ಮಿಂಗ್, ಸಮಯ ಸಿಕ್ಕಾಗೆಲ್ಲ ಪುಸ್ತಕ ಓದುವುದು, ಕನ್ನಡ ಕಥೆಗಳನ್ನು ಕೇಳುವುದು ಇವರ ಹವ್ಯಾಸಗಳು. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು. ಶ್ರವಣ್ ಕಾರಂತ್ ಕೆ ಸುಪ್ರಭಾತ ಶಕ್ತಿನಗರ ಮಂಗಳೂರು. +91 8971275651

ನಿರಂತರ್ ಉದ್ಯಾವರ : ಜ.30 - ಫೆ. 5 ರವರೆಗೆ ಏಳು ದಿನದ ಬಹುಭಾಷಾ ನಾಟಕೋತ್ಸವ

Posted On: 28-01-2023 02:25PM

ಉಡುಪಿ : ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿರುವ ನಿರಂತರ್ ಉದ್ಯಾವರ ಐದನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಜನವರಿ 30 ರಿಂದ ಫೆಬ್ರವರಿ 5 ರವರೆಗೆ ಸಂಪೂರ್ಣ ಉಚಿತ ಪ್ರವೇಶದ ನಿರಂತರ ಏಳು ದಿನದ ಬಹುಭಾಷಾ ನಾಟಕೋತ್ಸವ ಉದ್ಯಾವರದಲ್ಲಿ ಹಮ್ಮಿಕೊಳ್ಳಲಾಗಿದೆ.

2018ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಸಂಸ್ಥೆ ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ನಾಟಕ ಮತ್ತು ಕವಿಗೋಷ್ಠಿ, ಚಲನಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡಿತ್ತು. ಉದ್ಯಾವರ ಸಂತ ಫ್ರಾನ್ಸಿಸ್ ಜೀವಿಯರ್ ದೇವಾಲಯದ ವಠಾರದಲ್ಲಿರುವ ಐಸಿಐಎಂ ಉದ್ಯಾವರ ಸುವರ್ಣ ಮಹೋತ್ಸವ ಸ್ಮಾರಕ ವೇದಿಕೆಯಲ್ಲಿ ನಾಟಕೋತ್ಸವ ಪ್ರದರ್ಶನವಾಗಲಿದೆ. ಐದನೇ ವರ್ಷದ ಪ್ರಯುಕ್ತ ಜನವರಿ 30ರಂದು ಸಂತೋಷ್ ನಾಯಕ್ ಪಟ್ಲ ಇವರ ನಿರ್ದೇಶನದ ಮತ್ತು ನಾಗೇಶ್ ಕುಮಾರ್ ಉದ್ಯಾವರ ಇವರು ತುಳು ಅನುವಾದ ಮಾಡಿದ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ಇವರಿಂದ "ಹೇ ರಾಮ್" ತುಳು ನಾಟಕ, ಜನವರಿ 31ರಂದು ವಾಲ್ಸ್ಟನ್ ಡೇಸ ರಚನೆಯ, ಗಣೇಶ್ ರಾವ್ ಎಲ್ಲೂರು ನಿರ್ದೇಶನದ ಕಲಾರಾಧನ ಸಂಸ್ಥೆ ಶಂಕರ್ ಪುರ ಇವರಿಂದ "ಕಾಮಿಲ್ ಕಲ್ವಾರ್" ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ. ಫೆಬ್ರವರಿ ಒಂದರಂದು ಲಿಟಲ್ ಅರ್ಥ ಸ್ಕೂಲ್ ಆಫ್ ಥಿಯೇಟರ್ ಕೇರಳ ಇವರಿಂದ ಮಲಯಾಳ ನಾಟಕ "ಬೊಲಿವಿಯನ್ ಸ್ಟಾರ್ಸ್", ಫೆಬ್ರವರಿ ಎರಡರಂದು ಅಸ್ತಿತ್ವ ಹಾಗೂ ರಂಗ ಅಧ್ಯಯನ ಕೇಂದ್ರ ಸಂತ ಅಲೋಸಿಸ್ ಕಾಲೇಜ್ ಮಂಗಳೂರು ಇವರಿಂದ ಕನ್ನಡ ನಾಟಕ "ಜನಶತ್ರು" ಪ್ರದರ್ಶನವಾಗಲಿದೆ. ಫೆಬ್ರವರಿ ಮೂರರಂದು ರಂಗ ಅಧ್ಯಯನ ಕೇಂದ್ರ ಸಂತ ಅಲೋವಿಷಸ್ ಕಾಲೇಜು ಮಂಗಳೂರು ಇವರಿಂದ ಇಂಗ್ಲೀಷ್ ನಾಟಕ "Can't Pay, Won't Pay", ಫೆಬ್ರವರಿ ನಾಲ್ಕರಂದು ಅಸ್ತಿತ್ವ ಮಂಗಳೂರು ಇವರಿಂದ ಕೊಂಕಣಿ ನಾಟಕ "ಅದಾಂವ್ ಅನಿ ಏವೆನ್ ಉಘಡ್ಲೆ ದೊಳೆ, ರಚ್ನಾರ ಅತಾಂ ತುಂಚ್ ಪಳೆ" ಮತ್ತು ಅಸ್ತಿತ್ವ ಮಂಗಳೂರು ಇವರಿಂದ ಕೊಂಕಣಿ ನಾಟಕ "ಎಮ್ಮಾವ್ಸ್" ಪ್ರದರ್ಶನವಾಗಲಿದೆ.

ಜನವರಿ 30 ರಂದು ಸಂಜೆ 6 ಗಂಟೆಗೆ ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ವಂ. ಸ್ಟ್ಯಾನಿ ಬಿ ಲೋಬೋ ಏಳು ದಿನದ ಬಹುಭಾಷ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕರು, ಮಾಜಿ ಸಚಿವರು, ವಿವಿಧ ಜನಪ್ರತಿನಿಧಿಗಳು, ಕಲಾವಿದರು, ಸಮಾಜದ ವಿವಿಧ ಸಂಘಟನೆಗಳ ಮುಖಂಡರು ವಿವಿಧ ದಿನದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ನಿರಂತರ್ ಸಂಘಟನೆಯ ಪ್ರಕಟಣೆ ತಿಳಿಸಿದೆ.

ಜೆಸಿಐ ಕಟಪಾಡಿ ವತಿಯಿಂದ ಟ್ರಾಫಿಕ್ ಪೋಲಿಸರಿಗೆ ಸನ್ಮಾನ

Posted On: 27-01-2023 05:59PM

ಕಟಪಾಡಿ : ಜೆಸಿಐ ಇಂಡಿಯಾ ಇದರ ವಲಯ 15ರ ಕಾರ್ಯಕ್ರಮ, ಕಟಪಾಡಿ ಘಟಕದ ವತಿಯಿಂದ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮದ ಅಂಗವಾಗಿ ಗುರುವಾರ ಕಟಪಾಡಿ ಹೊರ ಠಾಣೆಯಲ್ಲಿ ಟ್ರಾಫಿಕ್ ಪೊಲೀಸರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಜೆಸಿಐ ಪೂರ್ವ ಅಧ್ಯಕ್ಷರಾದ ಡಾ.ಉದಯಕುಮಾರ್ ಶೆಟ್ಟಿ ಮತ್ತು ಪೂರ್ವ ವಲಯಧ್ಯಕ್ಷರಾದ ಹರಿಶ್ಚಂದ್ರ ಅಮೀನ್ ಭಾಗವಹಿಸಿದ್ದರು. ಜೆಸಿಐ ವಲಯ XVರ ಅಧ್ಯಕ್ಷರಾದ ಜ್ಯೋತಿ ಶಂಕರ್ ಅಧ್ಯಕ್ಷತೆ ವಹಿಸಿದ್ದರು.

ವಲಯಧಿಕಾರಿ ಪ್ರವೀಣ್ ಪೂಜಾರಿ, ಪೂರ್ವಧ್ಯಾಕ್ಷರಾದ ಮಹೇಶ್ ಅಂಚನ್, ಜಯಶ್ರೀ ಕೋಟ್ಯಾನ್, ಸುರೇಶ್ ಪೂಜಾರಿ, ಕಾರ್ಯದರ್ಶಿ ವಿಜೇತ್ ಪೂಜಾರಿ ಉಪಸ್ಥಿತರಿದ್ದರು. ಪ್ರವೀಣ್ ಜತ್ತನ್ ಕಾರ್ಯಕ್ರಮ ನಿರ್ವಹಿಸಿದರು.

ಜನವರಿ 28 : ಕಾಪು ಜೇಸಿಐ ರಜತ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮ

Posted On: 27-01-2023 05:55PM

ಕಾಪು : ಜೇಸಿಐ ಕಾಪುವಿನ ರಜತ ವರ್ಷಾಚರಣೆಯ ಸಮಾರೋಪ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ರಜತ ಸಂಭ್ರಮ ಸಮಾರಂಭವು ಜ. 28ರಂದು ಸಂಜೆ 6 ಗಂಟೆಗೆ ಕಾಪು ಪೇಟೆಯಲ್ಲಿ ನಡೆಯಲಿದೆ.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ರಜತ ವರ್ಷಾಚರಣೆ ಸಮಿತಿ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಗುರ್ಮೆ ಫೌಂಡೇಷನ್ ಅಧ್ಯಕ್ಷ ಸುರೇಶ್ ಪಿ. ಶೆಟ್ಟಿ ಗುರ್ಮೆ, ಜೇಸಿಐ ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ, ಗಣ್ಯರಾದ ಯಶ್‌ಪಾಲ್ ಸುವರ್ಣ, ಕಿಶೋರ್ ಆಳ್ವ, ವಾಸುದೇವ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ವೈ. ಸುಕುಮಾರ್, ಅಲ್ ರೋಹನ್ ವಾಝ್, ರಾಕೇಶ್ ಕೆ., ಕಾಪು ದಿವಾಕರ ಶೆಟ್ಟಿ, ಮನೋಹರ್ ಎಸ್. ಶೆಟ್ಟಿ, ವೆಂಕಟೇಶ್ ನಾವಡ, ಪ್ರಭಾಕರ ಪೂಜಾರಿ, ಸಂಕಪ್ಪ ಅಮೀನ್, ಹರೀಶ್ ಅಮೀನ್, ಮಾಲಿನಿ ಶೆಟ್ಟಿ, ಜ್ಯೋತಿ ಶಂಕರ್ ಸಾಲ್ಯಾನ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ರಜತ ಸಂಭ್ರಮ ಸಮಾರಂಭದ ಪ್ರಯುಕ್ತ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕಾಪು ಜೇಸಿಐನ ಕಾರ್ಯಕ್ರಮಗಳಿಗೆ ಸಹಕರಿಸಿದ ಕಾಪು ಪರಿಸರದ ವಿವಿಧ ಸಂಘ ಸಂಸ್ಥೆಗಳಿಗೆ ರಜತ ಪುರಸ್ಕಾರ ಗೌರವಾರ್ಪಣೆ, ನೃತ್ಯ ವೈಭವ, ಸಂಗೀತ ರಸಮಂಜರಿ ಮತ್ತು ಸಿನಿ ತಾರೆಯರ ಸಂಗಮ ನಡೆಯಲಿದೆ ಎಂದು ರಜತ ಸಮಿತಿಯ ಮತ್ತು ಕಾಪು ಜೇಸಿಐನ ಪ್ರಕಟಣೆಯು ತಿಳಿಸಿದೆ.

ಮಂಗಳೂರು : ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದಿಂದ ಕಾವ್ಯಾನುಬಂಧ ವಿಚಾರಗೋಷ್ಠಿ – ಕವಿಗೋಷ್ಠಿ

Posted On: 26-01-2023 07:38PM

ಮಂಗಳೂರು : ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (KSSAP )ಆಶ್ರಯದಲ್ಲಿ ನಾಡು ಕಂಡ ಅದ್ವಿತೀಯ ಪ್ರೇಮ ಕವಿ ಕೆ.ಎಸ್‌ ನರಸಿಂಹ ಸ್ವಾಮಿಯವರ ಜನ್ಮ ದಿನಾಚರಣೆ ಪ್ರಯುಕ್ತ ಕದ್ರಿ ಬಾಲ ಭವನದಲ್ಲಿ ಕಾವ್ಯಾನುಬಂಧ ವಿಚಾರಗೋಷ್ಠಿ – ಕವಿಗೋಷ್ಠಿ ನಡೆಸುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಅಭಿಯಂತರ, ಕವಿ ಸಾಹಿತಿ ಡಾ. ಆನಂದ್‌ ಬಂಜನ್‌ ಮಾತನಾಡಿ ಕೆ.ಎಸ್. ನರಸಿಂಹ ಸ್ವಾಮಿಯವರ ಸಾಹಿತ್ಯ ಪ್ರಕಾರ ಇಂದಿಗೂ ಜೀವಂತ ಇದೆ ಎಂದರೆ ಅವರ ಸಾಹಿತ್ಯದ ಗಟ್ಟಿತನ ಅನುಭವಿಸಿ ಬರೆದ ರೀತಿ ಪ್ರೀತಿಯನ್ನು ವರ್ಣಿಸಿದ ರೀತಿ ಅನನ್ಯವಾದುದು. ಬಹುಶ: ಇಂದು ಜಗತ್ತಿನ ಅತ್ಯಂತ ಶಾಂತಿ ಪ್ರಿಯರು ಎಂದರೆ ಕವಿಗಳು ಹಾಗೂ ಕಥೆಗಾರರು. ಎಂದ ಅವರು ಆರ್ಥಿಕ ಸ್ಥಿತಿಯಲ್ಲಿ ಹಿನ್ನಡೆಯಿದ್ದರೂ ಕವಿಗಳು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ದ.ಕ ಜಿಲ್ಲಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನ್ಯಾಯವಾದಿ ಕವಯತ್ರಿ ವಿಮರ್ಶಕಿ ಪರಿಮಳ ಮಹೇಶ್‌ ರಾವ್‌ ಇವರನ್ನು ಅಭಿನಂದಿಸಲಾಯಿತು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ, ಆಕಾಶವಾಣಿಯ ವಿಶ್ರಾಂತ ಉದ್ಘೋಷಕ ಮುದ್ದು ಮೂಡುಬೆಳ್ಳೆ ಮಾತನಾಡಿ ಮೈಸೂರು ಮಲ್ಲಿಗೆಯ ಲಾವಣ್ಯ ಅಪ್ಸರೆಯ ಚೆಲುವಿನಂತೆ ಎಂದು ವರಕವಿ ಬೇಂದ್ರೆಯಂತವರೇ ಆಶ್ಚರ್ಯಪಟ್ಟಿದ್ದರು ಯಾಕೆಂದರೆ ಮೈಸೂರು ಮಲ್ಲಿಗೆ ಎಲ್ಲಾ ಯುವ ಪೀಳಿಗೆಗಳನ್ನು ಆಕರ್ಷಿಸಿತ್ತು. ಮೈಸೂರು ಮಲ್ಲಿಗೆ ಅಂದಿಗೂ ಇಂದಿಗೂ ಚಿರನೂತನವಾಗಿರುವುದು ಕಾಲದ ಸತ್ಯ ಎಂದ ಅವರು ಎಲ್ಲಾ ಕವಿಗಳ ಕವಿತೆಗಳ ಬಗ್ಗೆ ಅತ್ಯಂತ ಸರಳವಾಗಿ ಮತ್ತು ಮಾರ್ಮಿಕವಾಗಿ ನುಡಿದರು. ವೇದಿಕೆಯಲ್ಲಿ ಉಪನ್ಯಾಸಕ ಡಾ ಫ್ರಾನ್ಸಿಸ್‌ ಕ್ಸೇವಿಯರ್‌, ಚಲನಚಿತ್ರ ಸೆನ್ಸಾರ್‌ ಮಂಡಳಿಯ ಸದಸ್ಯೆ ಡಾ. ಮೀರಾ ಅನುರಾಧಾ ಪಡಿಯಾರ್‌, NSCDF ಅಧ್ಯಕ್ಷ ಗಂಗಾಧರ ಗಾಂಧಿ, PTI ವರದಿಗಾರ ಎಸ್.ಜಯರಾಂ ಉಪಸ್ಥಿತರಿದ್ದರು.

KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಸ್ವಾಗತಿಸಿ ಪ್ರಸ್ತಾವನೆಗೈದರು. ರಶ್ಮಿ ಸನಿಲ್‌ ನಿರೂಪಿಸಿದರು. ಗುಣಾಜೆ ರಾಮಚಂದ್ರ ಭ̧ಟ್‌ ಸೌಮ್ಯ ಆರ್‌ ಶೆಟ್ಟಿ,ಶ್ಯಾಮ್‌ ಪ್ರಸಾದ್‌ ಭಟ್‌, ಕಾರ್ಕಳ, ಹಿತೇಶ್‌ ಕುಮಾರ್ ಎ, ಅಶ್ರಫ್‌ ಅಲಿ ಕುಙಿ ಮುಂಡಾಜೆ, ಬಾಸ್ಕರ್‌ ವರ್ಕಾಡಿ, ಅಮರನಾಥ ಪೂಪಾಡಿಕಲ್ಲು, ಗೀತಾ ಲಕ್ಷ್ಮೀಶ್‌, ಅಜಿತ್‌ ಪ್ರಸಾದ್‌, ಎ.ಕೆ ಕುಕ್ಕಿಲ, ರೂಪಾ ವಿನಯ್‌, ಅಶ್ವಿಜಾ ಶ್ರೀಧರ್‌, ಹರೀಶ್‌ ಕುಮಾರ್‌ ಮೆಲ್ಕಾರ್‌, ಶಿವಪ್ರಸಾದ್‌ ಕೊಕ್ಕಡ, ರಶ್ಮಿತಾ ಸುರೇಶ್‌, ಮಾಣಿ, ರೇಖಾ ಸುದೇಶ್‌ ರಾವ್, ಸುರೇಶ್‌ ನೆಗಳಗುಳಿ, ಗೋಪಾಲಕೃಷ್ಣ ಶಾಸ್ತ್ರಿ, ಸಿಹಾನ ಬಿ.ಎಂ, ಸೌಮ್ಯ ಗೋಪಾಲ್‌, ರೇಮಂಡ್‌ ತಾಕೋಡೆ, ಆಶಾಲತಾ ಕಾಮತ್, ಲಿಖಿತಾ ಕೋಟ್ಯಾನ್ ಅಲ್ಲಿಪಾದೆ, ಮಾನ್ವಿ, ಸುಮಂಗಲಾ‌ ದಿನೇಶ್. ರಾಮಾಂಜಿ, ನಾರಾಯಣ ಕುಂಬ್ರ, ಜೂಲಿಯೇಟ್‌ ಫೆರ್ನಾಂಡೀಸ್‌ ಹಾಗೂ ಹೃದಯ ಕವಿ ಮನ್ಸೂರ್‌ ಮುಲ್ಕಿ ಪ್ರೇಮಾಧಾರಿತ ಕವನಗಳನ್ನು ವಾಚಿಸಿದರು. ಕವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕಾಪು : ಅತ್ಯಧಿಕ ಸೇವೆ ನೀಡಿದ ಗ್ರಾಮ ಒನ್ ಫ್ರಾಂಚೈಸಿಗಳಿಗೆ ಸನ್ಮಾನ

Posted On: 26-01-2023 07:14PM

ಕಾಪು : ತಾಲೂಕಿನ ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ 74ನೇ ಗಣರಾಜ್ಯೋತ್ಸವ ದಿನಾಚರಣೆ ಸಂಭ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿ ಜರಗಿತು.

ಈ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಮಹಾತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಕೇಂದ್ರಗಳಲ್ಲಿ ಗ್ರಾಮೀಣ ಭಾಗದ ನಾಗರಿಕರಿಗೆ ನಿಗದಿತ ಸಮಯದಲ್ಲಿ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾಪು ತಾಲೂಕಿನಲ್ಲಿ ಪ್ರಥಮ ಸ್ಥಾನ ಹಾಗೂ ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದ ಶಿರ್ವ ಗ್ರಾಮದ ಪ್ರಜ್ವಲ್ ಡಿಜಿಟಲ್ ಗ್ರಾಮ ಒನ್ ಕೇಂದ್ರದ ಪ್ರಜ್ವಲ್ ಬಿ ಕುಲಾಲ್, ಉಚ್ಚಿಲ ಬಡ ಗ್ರಾಮಪಂಚಾಯತ್ ನ ದೀರೇಶ್ ಡಿಪಿ ದ್ವಿತೀಯ, ಕೋಟೆ ಗ್ರಾಮ ಪಂಚಾಯತ್ ನ ಸಹನಾ ದಯಾನಂದ ತಿಂಗಳಾಯ ತೃತೀಯ ಸ್ಥಾನದ ನಿಮಿತ್ತ ಪ್ರಶಂಸನಾ ಪತ್ರವನ್ನು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಸುಧಾಮ ಶೆಟ್ಟಿ, ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ ಬಿ, ಕಾಪು ವೃತ್ತ ನಿರೀಕ್ಷಕರಾದ ಪೂವಯ್ಯ ಕೆ.ಸಿ, ಉಪ ತಹಶೀಲ್ದಾರ್ ಹರಿಪ್ರಸಾದ್ ಭಟ್, ಕಂದಾಯ ನಿರೀಕ್ಷಕ ಸುಧೀರ್ ಶೆಟ್ಟಿ, ಶಿರ್ವ ಗ್ರಾಮ ಕರಣಿಕ ವಿಜಯ್ ಮತ್ತು ಕಾಪು ಪುರಸಭಾ ಸದಸ್ಯರು, ಗ್ರಾಮಗಳ ಆಡಳಿತಾಧಿಕಾರಿಗಳು, ತಾಲೂಕು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪಡುಬಿದ್ರಿ : ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್ ಡಿ ಟಿ ಯು) ವತಿಯಿಂದ ಗಣರಾಜ್ಯೋತ್ಸವ ಆಚರಣೆ

Posted On: 26-01-2023 07:11PM

ಪಡುಬಿದ್ರಿ : ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್ ಡಿ ಟಿ ಯು) ವತಿಯಿಂದ ಪಡುಬಿದ್ರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.

ಎಸ್ ಡಿ ಟಿ ಯು ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಖಾದರ್ ಮಲ್ಲಾರ್ ಧ್ವಜಾರೋಹಣಗೈದರು. ಈ ಸಂದರ್ಭ ಮಾತನಾಡಿದ ಅವರು ಜನವರಿ 26 ರಂದು ಆಚರಿಸಲಾಗುವ ಗಣರಾಜ್ಯೋತ್ಸವದ ದಿನ ಪ್ರತಿ ಭಾರತೀಯನ ಪಾಲಿಗೆ ಹೆಮ್ಮೆಯ ದಿನವಾಗಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಎಷ್ಟು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆಯೋ, ಅಷ್ಟೇ ಸಂಭ್ರಮದಿಂದ ದೇಶದಲ್ಲಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಯಾದ ಎಸ್ ಡಿ ಟಿ ಯು ಉಡುಪಿ ಜಿಲ್ಲೆ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಎಸ್ ಡಿ ಟಿ ಯು ಎಂಬುವುದು ಕಾರ್ಮಿಕರನ್ನು ಒಟ್ಟು ಗೂಡಿಸಿ ಅವರ ಹಕ್ಕು ಮತ್ತು ಅವಕಾಶಗಳಿಗಾಗಿ ಹೋರಾಟ ಮಾಡುವ ಒಂದು ಒಕ್ಕೂಟವಾಗಿದೆ. ಈ ನಿಟ್ಟಿನಲ್ಲಿ ಸಂವಿಧಾನ ನೀಡಿದ ಎಲ್ಲಾ ಹಕ್ಕುಗಳನ್ನು ಸದುಪಯೋಗಪಡಿಸಿ ಕಾರ್ಮಿಕರು ಸಮಾಜದಲ್ಲಿ ಉತ್ತಮ ಬದುಕನ್ನು ಸಾಧಿಸಲು ಎಸ್ ಡಿ‌ ಟಿ ಯು ಶ್ರಮಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಎಸ್ ಡಿ ಟಿ ಯು ಪಡುಬಿದ್ರಿ ಘಟಕದ ಅಧ್ಯಕ್ಷ ರಿಯಾಜ್ ಕಂಚಿನಡ್ಕ , ಪಡುಬಿದ್ರಿ ಘಟಕದ ಪ್ರಧಾನ ಕಾರ್ಯದರ್ಶಿ ಹೈದರ್ ಕಂಚಿನಡ್ಕ, ಜಿಲ್ಲಾ ಸಮಿತಿ ಸದಸ್ಯ ಫಿರೋಜ್, ಅನ್ವರ್, ಎಸ್ ಡಿ ಪಿ ಐ ಪಡುಬಿದ್ರಿ ಗ್ರಾಮ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ, ಮತ್ತಿತರರು ಉಪಸ್ಥಿತರಿದ್ದರು.

ಜನವರಿ 29 : ಪೈಯ್ಯಾರು ಪಿ. ಕೆ. ಎಸ್ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಪೂರ್ವಭಾವಿ ಸಭೆ

Posted On: 26-01-2023 03:22PM

ಕಾಪು : ಕಳತ್ತೂರು ಪಯ್ಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕರು ಗೋಪಾಲ ಕೃಷ್ಣ ರಾವ್ ಇವರಿಗೆ ಗುರುವಂದನಾ ಕಾರ್ಯಕ್ರಮ ನಡೆಸುವ ಬಗ್ಗೆ ಶಾಲೆಯ ಹಳೆ ವಿದ್ಯಾರ್ಥಿಗಳ ಪೂರ್ವಭಾವಿ ಸಭೆಯನ್ನು ಪಯ್ಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲಾ ಸಭಾ ಭವನದಲ್ಲಿ ಜನವರಿ 29, ಭಾನುವಾರ ಬೆಳಿಗ್ಗೆ 9.30 ಕ್ಕೆ ಜರಗಲಿದೆ.

ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಪಯ್ಯಾರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಪಯ್ಯಾರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ: ಕಾಪು ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ

Posted On: 25-01-2023 11:01PM

ಕಾಪು : ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾಪು ತಾಲೂಕಿನ 2023-2024ನೇ ಅವಧಿಯ ನೂತನ ಅಧ್ಯಕ್ಷರಾಗಿ ನಸೀ‌ರ್ ಅಹಮದ್ ಆಯ್ಕೆಯಾಗಿದ್ದಾರೆ.

ಕಾಪುವಿನಲ್ಲಿ ನಡೆದ ತಾಲೂಕು ಸಮಿತಿಯ ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಈ ವೇಳೆ ಉಪಾಧ್ಯಕ್ಷರಾಗಿ ಮುಸ್ತಾಕ್ ಇಬ್ರಾಹಿಂ ಬೆಳಪು, ಕಾರ್ಯದರ್ಶಿಯಾಗಿ ರಿಯಾಜ್ ಅಹಮದ್ ನಜೀರ್ ಮುದರಂಗಡಿ, ಜೊತೆ ಕಾರ್ಯದರ್ಶಿಯಾಗಿ ವೈ. ಎಮ್ ಇಲಿಯಾಸ್ ಕಟಪಾಡಿ, ಕೋಶಾಧಿಕಾರಿಯಾಗಿ ಮೊಹಮ್ಮದ್ ಆಝಮ್ ಶೇಕ್ ಉಚ್ಚಿಲ ಹಾಗೂ ತಾಲೂಕು ಸಮಿತಿಯ ಸದಸ್ಯರಾಗಿ ಬಿ.ಎಮ್ ಮೊಯ್ದಿನ್ ಕಟಪಾಡಿ, ಅಬ್ದುಲ್ ರಜಾಕ್ ಕಟಪಾಡಿ, ಅಮೀರ್ ಹಂಝ ಕಾಪು, ರಮೀಜ್ ಹುಸೈನ್ ಪಡುಬಿದ್ರಿ, ಅಬ್ದುಲ್ ಹಮೀದ್ ಪಡುಬಿದ್ರಿ, ಮುಹಮ್ಮದ್ ಇಕ್ಬಾಲ್ ಸಾಹೇಬ್ ಮಜೂರ್, ಮುಹಮ್ಮದ್ ಸಾದಿಕ್ ದಿನಾರ್, ಮುಹಮ್ಮದ್ ಸುಲೇಮಾನ್ ಮಲ್ಲಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಅಬ್ದುರಹಮಾನ್ ಚಂದ್ರನಗರ, ಮೊಹಮ್ಮದ್ ಅಷ್ಪಾಕ್ ಮೊಹಸಿನ್ ಮಲ್ಲಾರ್, ಎಮ್. ಎಸ್. ಅಬ್ಬಾಸ್ ಹಾಜಿ ಕನ್ನಂಗಾರ್, ಅಬೂಬಕರ್ ಪಾದೂರ್ ಮತ್ತು ಸಿರಾಜ್ ಉಚ್ಚಿಲ, ಅವರನ್ನು ತಾಲೂಕು ಸಮಿತಿಯ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಯಿತು. ಜಿಲ್ಲಾ ಸಮಿತಿಗೆ ಎಮ್. ಪಿ. ಮೊಯಿದಿನಬ್ಬ ಅಬ್ದುರಹಮಾನ್ ಕನ್ನಂಗಾರ್ ರವರು ಜಿಲ್ಲಾ ವತಿಯಿಂದ ನೇಮಿಸಲ್ಪಟ್ಟಿರುವರು. ಸಭೆಯಲ್ಲಿ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ, ಸಂಘಟನಾ ಕಾರ್ಯದರ್ಶಿ ಎಸ್. ಕೆ. ಇಕ್ಬಾಲ್ ಉಪಸ್ಥಿತರಿದ್ದರು.

ಅನ್ವರ್ ಅಲಿಯವರ ಕುರಾನ್ ಪಠಣದೊಂದಿಗೆ ಸಭೆ ಪ್ರಾರಂಭವಾಗಿ, ಜನಾಬ್ ಶಬೀಹ್ ಅಹಮದ್‌ ಕಾಝಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇದ್ರಿಸ್ ರವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಜಿಲ್ಲಾ ಉಪಾಧ್ಯಕ್ಷರಾದ ಸಲಾಹುದ್ದೀನ್ ಹೂಡೆ ಚುನಾವಣಾ ಪ್ರಕ್ರಿಯೆ ನಡೆಸಿ ಕೊಟ್ಟರು. ಹಾಲಿ ಅಧ್ಯಕ್ಷರಾದ ಶಭಿ ಅಹ್ಮದ್ ಖಾಝಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ರಿಯಾಜ್ ಅಹಮದ್ ನಜೀರ್ ವಂದಿಸಿದರು.

ಕಾಪು : ರಾಷ್ಟೀಯ ಮತದಾರರ ದಿನಾಚರಣೆ - ಪ್ರತಿಜ್ಞಾ ವಿಧಿ ; ಸನ್ಮಾನ

Posted On: 25-01-2023 10:52PM

ಕಾಪು : ರಾಷ್ಟೀಯ ಮತದಾರರ ದಿನಾಚರಣೆ 2023 ಅಂಗವಾಗಿ ಕಾಪು ತಾಲೂಕು ಮಟ್ಟದ ಕಾರ್ಯಕ್ರಮವನ್ನು ಕಾಪುವಿನ ತಹಶೀಲ್ದಾರ್‌ ನೇತ್ರತ್ವದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು ಇಲ್ಲಿ ನಡೆಸಲಾಯಿತು.

ಮತದಾನದ ಮಹತ್ವವನ್ನು ತಿಳಿಸಿ, ಪ್ರತಿಜ್ಞಾ ವಿಧಿಯನ್ನು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ವಿದ್ಯಾರ್ಥಿಗಳಿಗೆ ಬೋಧಿಸಿದರು. ಪ್ರಾಂಶುಪಾಲರಾದ ಸ್ಟೀವನ್‌ ಕ್ವಾಡ್ರಸ್‌ ಯುವ ಮತದಾರರಿಗೆ ಮತದಾನದ ಮಹತ್ವವನ್ನು ತಿಳಿಸಿದರು.

ಸನ್ಮಾನ : ಉತ್ತಮವಾಗಿ ಕಾರ್ಯನಿರ್ವಹಿಸಿದ ಬಿ.ಎಲ್.ಓ ಮೇಲ್ವಿಚಾರಕರಾದ ಮಥಾಯಿ ಪಿ ಎಮ್‌, ಡೋಮಿನಿಕ್‌ ಡೇನಿಯಲ್‌ ಡಿಸೋಜಾ, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಬಿ.ಎಲ್.ಓಗಳಾದ ಜೆಸುದಾಸ್‌ ಸೋನ್ಸ್‌ ಹಾಗೂ ಪೂರ್ಣಿಮಾ ಇವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭ ತಹಶೀಲ್ದಾರ್ ಕಛೇರಿ ಸಿಬ್ಬಂದಿ, ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.