Updated News From Kaup
ಸ್ಟೇಟಸ್ ಕತೆಗಳ ಮೂಲಕ ಗಮನ ಸೆಳೆಯತ್ತಿರುವ ಉಪನ್ಯಾಸಕ ಧೀರಜ್ ಬೆಳ್ಳಾರೆ
Posted On: 03 Apr 2023, 04:35 PM
ಕೊರೋನಾ ಸಮಯ ಒಂದಷ್ಟು ಪ್ರತಿಭೆಗಳು ಬೆಳಕಿಗೆ ಬಂದದ್ದಂತು ನಿಜ. ಎಲ್ಲಾ ಸ್ತಬ್ಧವಾಗಿದ್ದರೂ ಕತೆ, ಕವನ, ನೃತ್ಯ, ಮಾತು ಇತ್ಯಾದಿ ಚಟುವಟಿಕೆಗಳಿಗೆ ಕೊರತೆ ಇರಲಿಲ್ಲ. ಪ್ರತಿನಿತ್ಯದ ಬಿಝಿಗಳ ನಡುವೆ ಮೊಬೈಲ್ ನಲ್ಲಿ ಕಾಲ ಕಳೆಯುವ ಈ ಕಾಲಘಟ್ಟದಲ್ಲಿ ವಾಟ್ಸಾಪ್ ಸ್ಟೇಟಸ್ ಕತೆಗಳ ಮೂಲಕ ಗಮನ ಸೆಳೆದ ವ್ಯಕ್ತಿ ಧೀರಜ್ ಬೆಳ್ಳಾರೆ. ವೃತ್ತಿಯಲ್ಲಿ ಉಪನ್ಯಾಸಕ, ಪ್ರವೃತ್ತಿಯಲ್ಲಿ ಲೇಖಕ, ವಾಗ್ಮಿ, ನಟರಾಗಿ ಗುರುತಿಸಿರುವ ಇವರು ತಮ್ಮ ಸ್ಟೇಟಸ್ ಸಾಹಿತ್ಯದ ಮೂಲಕ ಹಲವಾರು ಜನರ ವಾಟ್ಸಾಪ್ ಸ್ಟೇಟಸ್ ಅಲಂಕರಿಸಿದ್ದಾರೆ. ಕೊರೊನ ಸಮಯದಲ್ಲಿ ಇವರ ಬರಹದ ಆರಂಭವು ಒಂದು ಸಾವಿರ ಕತೆಗಳನ್ನು ದಾಟಿ ಇಂದಿಗೆ ಒಂದು ಸಾವಿರದ ಮೂರನೆಯ ಕತೆಯವರೆಗೆ ತಲುಪಿ ಇನ್ನೂ ಮುಂದುವರಿಯಲಿದೆ. ತಾನೂ ಬರೆಯುವುದಲ್ಲದೆ ಇತರರ ಬರವಣಿಗೆಗೆ ಸ್ಫೂರ್ತಿದಾತರಾಗಿದ್ದಾರೆ. ತಾನು ಬರೆದ ಸಾವಿರ ಕತೆಗಳಲ್ಲಿ ಆಯ್ದ ನೂರು ಕತೆಗಳನ್ನು ಆರಿಸಿ ಸ್ಟೇಟಸ್ ಕತೆಗಳು ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಪ್ರಸ್ತುತ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರ ಕತೆ, ಲೇಖನದ ಕಾರ್ಯ ಮುಂದುವರಿಯಲಿ. ಜನರಲ್ಲಿ ಇಂತಹ ಕತೆಗಳ ಮೂಲಕ ಓದುವಿಕೆಯು ಚಿಗುರೊಡೆಯಲಿ ಎಂದು ಆಶಿಸೋಣ.
ಕಾಪು : ಶ್ರೀ ವಿಠೋಭ ರುಕುಮಾಯಿ ದೇವರ ರಜತ ಕವಚ, ಪ್ರಭಾವಳಿ, ಗುರುದೇವರ ರಜತ ಪಾದುಕೆ, ಹಸಿರು ಹೊರೆ ಕಾಣಿಕೆ ಮೆರವಣಿಗೆ
Posted On: 31 Mar 2023, 08:10 PM
ಕಾಪು : ಇಲ್ಲಿನ ಬಿಲ್ಲವರ ಸಹಾಯಕ ಸಂಘದಲ್ಲಿ ಮಾರ್ಚ್ 31 ರಿಂದ ಎಪ್ರಿಲ್ 2ರವರೆಗೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೂತನವಾಗಿ ನಿರ್ಮಿಸಿದ ಶಿಲಾಮಯ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಮೂರ್ತಿ ಪುನರ್ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕದ ಕಾರ್ಯಕ್ರಮಗಳು ಜರಗಲಿವೆ. ಈ ನಿಮಿತ್ತ ಇಂದು ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದಿಂದ ಶ್ರೀ ವಿಠೋಭ ರುಕುಮಾಯಿ ದೇವರ ರಜತ ಕವಚ ಮತ್ತು ಪ್ರಭಾವಳಿ, ಶ್ರೀ ಗುರುದೇವರ ರಜತ ಪಾದುಕೆ, ಹಸಿರು ಹೊರೆ ಕಾಣಿಕೆ ಮೆರವಣಿಗೆ ಜರಗಿತು. ಕರದಾಳ ಕಲಬುರ್ಗಿಯ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಚಾಲನೆ ನೀಡಿದರು. ಕ್ಷೇತ್ರದಲ್ಲಿ ಬೆಳಿಗ್ಗೆ ಗಂಟೆ 7:30 ರಿಂದ ಭದ್ರದೀಪ ಪ್ರಜ್ವಲನೆ, ಆಚಾರ್ಯ ವರ್ಣಕ್ರಿಯೆ, ಸ್ವಸ್ತಿ ಪುಣ್ಯಾಹ ವಾಚನ, ಗಣಹೋಮ, ಸಪ್ತಶುದ್ಧಿ, ತೋರಣ ಮುಹೂರ್ತ, ಮೂರ್ತಿ ಸಂಸ್ಕಾರ ನಡೆಯಿತು. ಸಂಜೆ ಗಂಟೆ 6ರಿಂದ ವಾಸ್ತುಹೋಮ, ವಾಸ್ತು ಬಲಿ, ರಾಕ್ಷೋಘ್ನ ಹೋಮ, ಪ್ರಸಾದ ಶುದ್ಧಿ, ಚಕ್ರಾಬ್ಜ ಮಂಡಲ ಪೂಜೆ ಜರಗಲಿವೆ.
ಕಾಪು : ಕುಂಜೂರಿನಲ್ಲಿ ಭಜನಾ ಮಂಗಲೋತ್ಸವ ಸಂಪನ್ನ
Posted On: 31 Mar 2023, 07:33 PM
ಕಾಪು : ತಾಲೂಕಿನ ಕುಂಜೂರಿನ ಶ್ರೀ ದುರ್ಗಾ ಮಿತ್ರ ವೃಂದದ 15 ನೇ ವಾರ್ಷಿಕ ಭಜನಾ ಮಂಗಲೋತ್ಸವವು ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಪುನಃ ಪ್ರತಿಷ್ಠ ವರ್ಧಂತಿಯ ಸಂದರ್ಭದಲ್ಲಿ ನೆರವೇರಿತು. ಭಜನಾಮಂಗಲೋತ್ಸವವನ್ನು ಎರ್ಮಾಳು ನೈಮಾಡಿ ನಾರಾಯಣ ಕೆ.ಶೆಟ್ಟಿ ಅವರು ಉದ್ಘಾಟಿಸಿದರು. ದೇವಳದ ಅರ್ಚಕ ವೇ.ಮೂ. ಹರಿಕೃಷ್ಣ ಉಡುಪ, ಪವಿತ್ರಪಾಣಿ ಕೆ.ಎಲ್.ಕುಂಡಂತಾಯ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಸತೀಶ ಕುಂಡಂತಾಯ,ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ತಹಾಸ ಆಚಾರ್ಯ, ದುರ್ಗಾ ಮಿತ್ರವೃಂದದ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಟೀಚರ್,ದುರ್ಗಾ ಸೇವಾ ಸಮಿತಿಯ ಕಾರ್ಯದರ್ಶಿ ಸುದರ್ಶನ ವೈ.ಎಸ್.,ದುರ್ಗಾ ಮಿತ್ರ ವೃಂದದ ಸತೀಶ ಶೆಟ್ಟಿ ಗುಡ್ಡೆಚ್ಚಿ, ರಾಕೇಶ್ ಕುಂಜೂರು, ಸುನಿಲ್ ಎಸ್.ಮುಂತಾದವರು ಉಪಸ್ಥಿತರಿದ್ದರು. ಬೆಳಗ್ಗೆ ಎಂಟೂವರೆ ಗಂಟೆಯಿಂದ ರಾತ್ರಿ ಎಂಟೂವರೆ ಗಂಟೆ ಪರ್ಯಂತ ಹದಿನೈದು ಭಜನಾ ಮಂಡಳಿಗಳು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ದುರ್ಗಾ ಮಿತ್ರವೃಂದದ ಮಹಿಳಾ ಘಟಕದ ಸದಸ್ಯೆಯರಿಂದ ಕುಣಿತ ಭಜನೆ ನಡೆದು ಮಂಗಲೋತ್ಸವವು ಸಮಾಪನಗೊಂಡಿತು. ದುರ್ಗಾ ಮಿತ್ರವೃಂದದ ಬಾಲಕರು ಭಜನೆ ಹಾಗೂ ಕುಣಿತ ಭಜನೆಯಲ್ಲಿ ಭಾಗವಹಿಸಿದ್ದರು. ದುರ್ಗಾ ಮಾತೆಯ ಸನ್ನಿಧಿಯಲ್ಲಿ ಪುನಃ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ಬೆಳಗ್ಗೆ ಧಾರ್ಮಿಕ ವಿಧಿಗಳು , ಮಧ್ಯಾಹ್ನ ಅನ್ನಸಂತರ್ಪಣೆ ,ರಾತ್ರಿ ರಂಗಪೂಜೆ ಹಾಗೂ ಬಲಿಉತ್ಸವ ನೆರವೇರಿತು.
ಉಚ್ಚಿಲ : ಸ್ಕೂಟರ್ ಡಿಕ್ಕಿ ಹೊಡೆದು ವ್ಯಕ್ತಿ ಮೃತ್ಯು
Posted On: 31 Mar 2023, 07:23 PM
ಉಚ್ಚಿಲ : ಸ್ಕೂಟರೊಂದು ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೋರ್ವರಿಗೆ ಡಿಕ್ಕಿ ಹೊಡೆದು ಆ ವ್ಯಕ್ತಿ ಮೃತಪಟ್ಟ ಘಟನೆ ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಎರ್ಮಾಳು ಬಡಾ ಗ್ರಾಮದ ಗೋಪಾಲ ಎ. ಕರ್ಕೆರ (68) ಮೃತಪಟ್ಟವರು. ಇವರು ತಮ್ಮ ಅಣ್ಣನ ಮಗ ರವಿ ವಿ.ಸುವರ್ಣ ಅವರೊಂದಿಗೆ ಮಾಚ್೯ 30ರಂದು ಉಚ್ಚಿಲ ದೇವಸ್ಥಾನಕ್ಕೆ ಪೂಜೆಗೆಂದು ಹೋಗಿ ಪೂಜೆ ಮುಗಿಸಿ ವಾಪಾಸ್ಸು ಮನೆಗೆ ತೆರಳುವ ವೇಳೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಸ್ಕೂಟರ್ ಸವಾರ ಜೈ ಪ್ರಕಾಶ್ ಎಂಬಾತ ರಸ್ತೆಯ ಬದಿಯಲ್ಲಿ ನಿಂತಿದ್ದ ಗೋಪಾಲ ಎ ಕರ್ಕೆರ ರವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರಸ್ತೆಗೆ ಬಿದ್ದ ಬೈಕ್ ಸವಾರ ಹಾಗೂ ಸಹಸವಾರನಿಗೂ ಗಾಯವಾಗಿದ್ದು ಗೋಪಾಲ ಎ ಕರ್ಕೆರ ಅವರು ಗಂಭೀರ ಗಾಯಗೊಂಡಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗೋಪಾಲ ಎ ಕರ್ಕೆರ ಅವರನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಗೋಪಾಲ ಎ ಕರ್ಕೆರ ರವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಬಗ್ಗೆ ರವಿ ವಿ. ಸುವರ್ಣ ಅವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಬೈಕ್ ನಿಲ್ಲಿಸುವ ವಿಚಾರ - ಗಲಾಟೆ ಕೊಲೆಯಲ್ಲಿ ಅಂತ್ಯ ; ಕೊಲೆಯಾದ ವ್ಯಕ್ತಿ ಕಾಪುವಿನ ಕುಂಜೂರು ಮೂಲದವರು
Posted On: 31 Mar 2023, 03:08 PM
ಬೆಂಗಳೂರು : ಇಲ್ಲಿನ ಯಲಹಂಕದ ಅಪಾರ್ಟ್ಮೆಂಟ್ ಒಂದರಲ್ಲಿ ಒಂದೇ ರೂಂನಲ್ಲಿ ವಾಸವಿದ್ದ ಮೂವರ ನಡುವೆ ಬೈಕ್ ನಿಲ್ಲಿಸುವ ವಿಚಾರಕ್ಕೆ ಗಲಾಟೆಯಾಗಿ ಓರ್ವನನ್ನು ಕೊಲೆಗೈದ ಘಟನೆ ಮಾಚ್೯ 29ರಂದು ನಡೆದಿದೆ. ಯಲಹಂಕದ ಸಾಯಿ ಸಮೃದ್ಧಿ ಅಪಾರ್ಟ್ಮೆಂಟ್ನ ಒಂದೇ ರೂಂನಲ್ಲಿ ಜರ್ನಾಧನ್ ಭಟ್ಟ, ಸುಲೇಮಾನ್ ಮತ್ತು ರಿಜ್ವಾನ್ ಎಂಬುವವರು ವಾಸವಾಗಿದ್ದರು. ತಡರಾತ್ರಿ ರೂಂ ನ ಪಕ್ಕದಲ್ಲಿ ಬೈಕ್ ನಿಲ್ಲಿಸುವ ವಿಚಾರಕ್ಕೆ ಸುಲೇಮಾನ್, ರಿಜ್ವಾನ್ರವರು ಇಬ್ಬರೂ ಜರ್ನಾಧನ್ ಭಟ್ಟ ರವರೊಂದಿಗೆ ಗಲಾಟೆ ಮಾಡಿ, ಜನಾರ್ಧನ್ ಭಟ್ಟ ರವರ ಕಾಲುಗಳನ್ನು ವೈರ್ನಿಂದ ಕಟ್ಟಿ ಮತ್ತು ಬಾಯಿಗೆ ಟೇಪ್ ಹಾಕಿ ಮಾಡಿ ಜರ್ನಾಧನ್ ಭಟ್ಟರವರನ್ನು ಕೊಲೆ ಮಾಡಿ ಸುಲೇಮಾನ್ ಮತ್ತು ರಿಜ್ವಾನ್ ಪರಾರಿಯಾಗಿದ್ದರು. ಕೊಲೆಯಾದ ವ್ಯಕ್ತಿ ಜರ್ನಾಧನ್ ಭಟ್ಟರವರು ಕಾಪು ತಾಲುಕಿನ ಕುಂಜೂರು ಮೂಲದವರಾಗಿದ್ದಾರೆ. ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಯ ಸಲುವಾಗಿ ತನಿಖೆ ಕೈಗೊಳ್ಳಲಾಗಿದೆ.
ಉಡುಪಿ : ಶಸ್ತ್ರಾಸ್ತ್ರಗಳ ಠೇವಣಿಗೆ ಜಿಲ್ಲಾಧಿಕಾರಿ ಸೂಚನೆ
Posted On: 30 Mar 2023, 08:12 PM
ಉಡುಪಿ : ಕರ್ನಾಟಕ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ, ಮೇ 10 ರಂದು ಚುನಾವಣೆ ನಡೆಯಲಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಚುನಾವಣೆ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಳ್ಳುವವರೆಗೆ ಶಸ್ತ್ರಾಸ್ತ್ರ ಆಯುಧ ಮತ್ತು ಮದ್ದುಗುಂಡುಗಳೊಂದಿಗೆ ಸಂಚಾರ ಹಾಗೂ ಅವುಗಳನ್ನು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿರುತ್ತಾರೆ. ಆತ್ಮ ರಕ್ಷಣೆ ಮತ್ತು ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವ ಎಲ್ಲಾ ಅಧಿಕೃತ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಎಲ್ಲಾ ವಿಧಧ ಶಸ್ತ್ರಾಸ್ತ್ರಗಳನ್ನು (ಎಸ್ಬಿಬಿಎಲ್, ಡಿಬಿಬಿಎಲ್, ಎಸ್ಬಿಎಂಎಲ್, ಡಿಬಿಎಂಎಲ್, ಎನ್ಪಿಬಿ ರೈಫಲ್, ರಿವಾಲ್ವರ್ ಹಾಗೂ ಪಿಸ್ತೂಲ್) ತಮ್ಮ ವಿಳಾಸ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಅಥವಾ ಅಧಿಕೃತವಾಗಿ ಪರವಾನಿಗೆ ಹೊಂದಿರುವ ಡೀಲರ್ ಶಾಪ್ಗಳಲ್ಲಿ ಕಡ್ಡಾಯವಾಗಿ ವಿಳಂಬ ಮಾಡದೇ ಠೇವಣಿ ಮಾಡಿ, ರಶೀದಿ ಪಡೆಯಬೇಕು. ಚುನಾವಣಾ ಫಲಿತಾಂಶ ಘೋಷಣೆಯಾದ ದಿನಾಂಕದಿಂದ ಒಂದು ವಾರದ ನಂತರ ಶಸ್ತ್ರಾಸ್ತ್ರ ಠೇವಣಿ ಪಡೆದ ಠಾಣಾಧಿಕಾರಿಗಳಿಂದ ಅಥವಾ ಡೀಲರ್ಗಳಿಂದ ಶಸ್ತ್ರಾಸ್ತ್ರಗಳನ್ನು ಮರು ಪಡೆದುಕೊಳ್ಳಬಹುದು. ಈ ನಿಷೇಧ ಆದೇಶವು ಸರ್ಕಾರಿ ಕರ್ತವ್ಯಕ್ಕೆ ಹಾಗೂ ಬ್ಯಾಂಕ್ ಸೆಕ್ಯೂರಿಟಿ ಸಂಸ್ಥೆಗಳ ಭದ್ರತೆ ಹಾಗೂ ಸಂರಕ್ಷತಾ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ವೇಳೆ ಶಸ್ತ್ರಾಸ್ತ್ರ ಆಯುಧ ಬಳಸುವುದಕ್ಕೆ ಅನ್ವಯವಾಗುವುದಿಲ್ಲ. ಸದರಿ ಠೇವಣಿ ಆದೇಶದಿಂದ ವಿನಾಯಿತಿ ಕೋರುವ ಪರವಾನಿಗೆದಾರರು ಏಪ್ರಿಲ್ 5 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಸದರಿ ಅರ್ಜಿಗಳನ್ನು ಸ್ಕ್ರೀನಿಂಗ್ ಸಮಿತಿ ಸದಸ್ಯರಾದ ಪೊಲೀಸ್ ಅಧೀಕ್ಷಕರ ಕಮಿಟಿ ಮುಂದೆ ಮಂಡಿಸಿ, ಅರ್ಜಿಗಳ ಅವಶ್ಯಕತೆ ಹಾಗೂ ನೈಜ್ಯತೆಯ ಬಗ್ಗೆ ಪರಿಶೀಲಿಸಿ, ವಿನಾಯಿತಿ ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಆದೇಶಕ್ಕೆ ವ್ಯತಿರಿಕ್ತವಾಗಿ ಹಾಗೂ ಯಾವುದೇ ರೀತಿಯ ಕಾನೂನು ಬಾಹಿರವಾಗಿ ಪರವಾನಿಗೆ ರಹಿತ ಶಸ್ತ್ರಾಸ್ತ್ರ /ಆಯುಧ ಇತ್ಯಾದಿಗಳ ಸಂಗ್ರಹಣೆ, ಬಳಕೆ, ಸಾಗಾಟ ಮಾಡುತ್ತಿರುವ ಸುಳಿವು ದೊರೆತಲ್ಲಿ ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕಾಪು : ಗಾಂಜಾ ಸೇವನೆ ಪ್ರಕರಣ ದಾಖಲು
Posted On: 30 Mar 2023, 11:17 AM
ಕಾಪು : ಇಲ್ಲಿನ ಠಾಣಾ ವ್ಯಾಪ್ತಿಯ ಉದ್ಯಾವರ ಗ್ರಾಮದ ಸಂಪಿಗೆನಗರ ಕ್ರಾಸ್ ಬಳಿ ಅನುಮಾನಾಸ್ಪದವಾಗಿ ವ್ಯಕ್ತಿಯೋರ್ವ ಕಂಡು ಬಂದಿದ್ದು, ಆತನನ್ನು ಪೋಲಿಸರು ಪರಿಶೀಲಿಸಿದಾಗ ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದುಕೊಂಡಿದ್ದರು. ಆತನ ಹೆಸರು ಮಹಮ್ಮದ್ ಅನಸ್ ಸಾಹೇಬ (25) ಎಂದು ತಿಳಿಸಿದ್ದು, ಮಣಿಪಾಲದ ಪೊರೆನ್ಸಿಕ್ ವಿಭಾಗದ ವೈದ್ಯರು ಗಾಂಜಾ ಸೇವಿಸಿರುವ ಬಗ್ಗೆ ದೃಢಪಡಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಕೀಯ ಪಕ್ಷ, ಚುನಾವಣಾ ಅಭ್ಯರ್ಥಿಗಳಿಗೆ ಸಂಬಂಧಿಸಿದ ಬ್ಯಾನರ್, ಕಟೌಟ್ಗಳ ಬಳಕೆಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿ ಸೂಚನೆ
Posted On: 30 Mar 2023, 10:27 AM
ಉಡುಪಿ : ಕರ್ನಾಟಕ ವಿಧಾನಸಭಾ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾಚ್೯ 29ರಿಂದ ಅನ್ವಯವಾಗುವಂತೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಆದ್ದರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವವರೆಗೆ, ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಪಕ್ಷಗಳಿಗೆ ಹಾಗೂ ಚುನಾವಣಾ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಚಾರ, ಶುಭಕೋರುವ ಹಾಗೂ ಕಾರ್ಯಕ್ರಮಗಳ ಬಗ್ಗೆ ಬ್ಯಾನರ್, ಬಂಟಿಂಗ್ಸ್, ಕಟೌಟ್ ಅಳವಡಿಸಲು, ಭಿತ್ತಿ ಪತ್ರ ಹಂಚಲು, ಭಿತ್ತಿ ಪತ್ರಗಳನ್ನು ಗೋಡೆಗೆ ಅಂಟಿಸಲು ಹಾಗೂ ಗೋಡೆ ಬರಹ ಬರೆಯಲು ಸ್ಥಳಿಯಾಡಳಿತದಿಂದ ಅನುಮತಿ ನೀಡದಿರಲು ಆದೇಶಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿರುತ್ತಾರೆ.
ಮಾಚ್೯ 30 : ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ
Posted On: 29 Mar 2023, 05:09 PM
ಕಾಪು : ತಾಲೂಕಿನ ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಂದ ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆಯೊಂದಿಗೆ ವಿಶಿಷ್ಟವಾಗಿ ಶ್ರೀ ರಾಮನವಮಿಯ ಆಚರಣೆಯು ಶ್ರೀ ಸೌಭಾಗ್ಯ ಹೆಣ್ಣುಮಕ್ಕಳ ಭಾಗ್ಯೋದಯದ ಬೆಳಕು ಎಂಬ ಸೇವಾ ಕಾರ್ಯಕ್ರಮದ ಮೂಲಕ ಮಾಚ್೯ 30ರಂದು ಬೆಳಿಗ್ಗೆ 9 ಗಂಟೆಗೆ ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಜರಗಲಿದೆ. 21 ಮಕ್ಕಳಿಗೆ ಶ್ರೀ ರಾಮನವಮಿಯಂದು ಉಚಿತ ಚಿನ್ನದ ಮೂಗುತಿ ಧಾರಣೆ ನಡೆಯಲಿದೆ. ಈಗಾಗಲೇ ಎರಡು ವರುಷಗಳಿಂದ 330ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆಯನ್ನು ಏಕಜಾತಿ ಧರ್ಮ ಪೀಠದ ಸ್ಥಾಪಕರಾದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ದಿವ್ಯ ಸಂಕಲ್ಪದಲ್ಲಿ ನಡೆದುಕೊಂಡು ಬರುತ್ತಿದೆ.
ಮೇ 10 : ಕರ್ನಾಟಕ ವಿಧಾನಸಭಾ ಚುನಾವಣೆ, 13ಕ್ಕೆ ಫಲಿತಾಂಶ
Posted On: 29 Mar 2023, 12:49 PM
ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯುಕ್ತರಿಂದ ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಮೇ 10 ಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13 ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಕರ್ನಾಟಕ ರಾಜ್ಯದಲ್ಲಿ 58,282 ಸಾವಿರ ಮತಗಟ್ಟೆ, ಒಂದು ಮತಗಟ್ಟೆಯಲ್ಲಿ 883 ಮತದಾರರಿಗೆ ಮತ ಚಲಾಣೆಗೆ ಅವಕಾಶವಿದೆ. 80 ವರ್ಷ ಮೇಲ್ಪಟ್ಟ ವಯೋಮಾನದವರು ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತಚಲಾಯಿಸಲು ಅವಕಾಶ ಕಲ್ಪಿಸಲಾಗುವುದು. ಕರ್ನಾಟಕದಲ್ಲಿ ಈ ಬಾರಿ ಒಟ್ಟು 5.22 ಕೋಟಿ ಮತದಾರರಿದ್ದಾರೆ. ಇದರಲ್ಲಿ 2 ಕೋಟಿ 59 ಲಕ್ಷ ಮಹಿಳಾ ಮತದಾರರು, 2 ಕೋಟಿ 62 ಲಕ್ಷ ಪುರುಷ ಮತದಾರರಿದ್ದಾರೆ. ರಾಜ್ಯದಲ್ಲಿ ಒಟ್ಟು 58, 282 ಮತಗಟ್ಟೆ ಸ್ಥಾಪಿಸಲಾಗುವುದು. ನಗರಪ್ರದೇಶದಲ್ಲಿ 24,063 ಮತಗಟ್ಟೆ ಸ್ಥಾಪನೆ, ಗ್ರಾಮೀಣ ಪ್ರದೇಶದಲ್ಲಿ 34,219 ಮತಗಟ್ಟೆ ಇರಲಿದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ.
