Updated News From Kaup
ನಾಳೆ : ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಮೇ14 ರಿಂದ 24ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ನಿಮಿತ್ತ ಪೂರ್ವಭಾವಿ ಸಭೆ
Posted On: 11 Mar 2023, 09:37 PM
ಮಂಗಳೂರು : ಕುಲಾಲ ಸಮುದಾಯಕ್ಕೆ ಮುಕುಟಪ್ರಾಯವಾಗಿ ಕಂಗೊಳಿಸಲಿರುವ ಸಮುದಾಯದ ಸ್ವಾಭಿಮಾನ ಮತ್ತು ಹೆಮ್ಮೆಯ ಪ್ರತೀಕವಾದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವದ ಶುಭವಸರದಲ್ಲಿದೆ. ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವವು ಮೇ14 ರಿಂದ ಮೇ 24ರವರೆಗೆ ವೈಭವದಿಂದ ನೆರವೇರಲಿದೆ. ಈ 10 ದಿನಗಳ ಉತ್ಸವ ಕುಲಾಲ ಸಮುದಾಯದ ಉತ್ಸವವಾಗುವ ದಿಸೆಯಲ್ಲಿ ಯೋಚನೆ, ಯೋಜನೆ, ಅನುಷ್ಠಾನಗಳ ಆಯೋಜನೆಗಾಗಿ ಮಾಚ್೯ 12,ಆದಿತ್ಯವಾರ ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಪ್ರತೀ ಕಾರ್ಯದಲ್ಲಿಯೂ ಸಕ್ರಿಯವಾಗಿದ್ದ ಪ್ರತಿಯೊಬ್ಬರೂ ಈ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸಹಕಾರಗಳನ್ನಿತ್ತು ಈ ಸಭೆಯನ್ನು ಯಶಸ್ವಿಗೊಳಿಸಲು ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಾಳೆ : ಪೆರ್ಡೂರು ಬೈರಂಪಳ್ಳಿ ಶ್ರಮಿಕ ತರುಣ ತಂಡದಿಂದ ಶ್ರಮಿಕೋತ್ಸವ 2023
Posted On: 11 Mar 2023, 09:18 PM
ಪೆರ್ಡೂರು : ಇಲ್ಲಿಯ ಬೈರಂಪಳ್ಳಿಯ ಶ್ರಮಿಕ ತರುಣರ ಯುವಕರ ತಂಡ ಸದಾ ಅಶಕ್ತರ ಪಾಲಿಗೆ ಸದಾ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುತ್ತ, ಬಡವರ ಕಣ್ಣೀರು ಒರೆಸುವ ಕಾಯಕದಲ್ಲಿ ನಿರತವಾಗಿದೆ. ನಾಳೆ ಹಾಲಕ್ಕಿಯಲ್ಲಿ ಊರಿನ ಗ್ರಾಮಸ್ಥರ ಶ್ರೇಯೋಭಿವೃದ್ಧಿ ಹಾಗೂ ಸರ್ವರ ಸುಬಿಕ್ಷೆಗಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,ಭಜನಾ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಸಾರ್ವಜನಿಕ ಅನ್ನ ಸಂತರ್ಪಣೆ, ರಾತ್ರಿ 9 ಗಂಟೆಯಿಂದ ಶ್ರೀ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಿರಿಯಡ್ಕ ವತಿಯಿಂದ ಶ್ರೀ ಶನೀಶ್ವರ ಮಹಾತ್ಮೆ ತುಳು ಯಕ್ಷಗಾನ ಬಯಲಾಟ ನಡೆಯಲಿದ್ದು,ಎಲ್ಲರೂ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿ ಎಂದು ಶ್ರಮಿಕ ತರುಣರ ತಂಡ ಇದರ ಸಂಸ್ಥಾಪಕರಾದ ಸಂತೋಷ್ ಕುಮಾರ್ ಬೈರಂಪಳ್ಳಿ ಪ್ರಕಟಣೆಯಲ್ಲಿ ತಿಳಿಸಿರುವರು.
ಮಾಚ್೯ 11 ರಿಂದ 14 : ಕಟಪಾಡಿ ಏಣಗುಡ್ಡೆ ಶ್ರೀ ಬ್ರಹ್ಮ ಬೈದೆರುಗಳ ಗರಡಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ; ಕಾಲಾವಧಿ ಜಾತ್ರೆ
Posted On: 11 Mar 2023, 06:44 PM
ಕಟಪಾಡಿ : ಇಲ್ಲಿನ ಏಣಗುಡ್ಡೆ ಶ್ರೀ ಬ್ರಹ್ಮ ಬೈದೆರುಗಳ ಗರಡಿಯಲ್ಲಿ ನಡೆಯುವ ಕಾಲಾವಧಿ ಜಾತ್ರೆ ಹಾಗೂ ದೃಢಕಲಶ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಮಾಚ್೯ 11ರಿಂದ ಮಾಚ್೯ 14 ರವರೆಗೆ ಜರಗಲಿದೆ. ಮಾರ್ಚ್ 11 ಸಂಜೆ 4 ಗಂಟೆಗೆ ಮೂಲ ಗುಪ್ಫೆಯಿಂದ ಮಣ್ಣು ತರುವುದು. ಸಂಜೆ 6 ಗಂಟೆಗೆ ಗರಡಿ ಪ್ರವೇಶ. ರಾತ್ರಿ ಗಂಟೆ 7.05 ರಿಂದ ಪುಣ್ಯಾಹ, ವಾಸ್ತು ಹೋಮ ಇತ್ಯಾದಿ ನೆರವೇರಲಿದೆ. ಮಾರ್ಚ್ 12ರಂದು ಪೂರ್ವಾಹ್ನ ಗಂಟೆ 9.05 ರಿಂದ ದೃಢಕಲಶ, ಪೂರ್ವಾಹ್ನ ಗಂಟೆ 11.43ಕ್ಕೆ ಧ್ವಜಾರೋಹಣ, ಹಸಿರುವಾಣಿ ಸಮರ್ಪಣೆ, ರಾತ್ರಿ ಗಂಟೆ 7ಕ್ಕೆ ಅಗೆಲು ಸೇವೆ ನಡೆಯಲಿದೆ. ಮಾರ್ಚ್ 13 ಸಂಜೆ ಗಂಟೆ 6.30 ಕ್ಕೆ ಬೈದೆರುಗಳ ನೇಮೋತ್ಸವ ಜರಗಲಿದೆ. ಮಾರ್ಚ್ 14 ಸಂಜೆ ಗಂಟೆ 3 ಕ್ಕೆ ಮಾಯಂದಾಲ್ ನೇಮ, ಸಂಜೆ ಗಂಟೆ 8 ಕ್ಕೆ ಪರಿವಾರ ದೈವದ ನೇಮ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಾಚ್೯ 12 : ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದಿಂದ ರಾಜ್ಯಮಟ್ಟದ ಕಥಾಲಾಪ ಮತ್ತು ಚಿಣ್ಣರ ಚಿಲಿಪಿಲಿ
Posted On: 11 Mar 2023, 05:29 PM
ಮಂಗಳೂರು : ನ್ಯಾಯವಾದಿ, ಕವಯತ್ರಿ, ಮಕ್ಕಳ ಸಾಹಿತಿ ಪರಿಮಳ ರಾವ್ ಕೆ. ಸಾರಥ್ಯದ ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (ASSAP) ಆಶ್ರಯದಲ್ಲಿ ರಾಜ್ಯಮಟ್ಟದ ಕಥಾಲಾಪ ಮತ್ತು ಚಿಣ್ಣರ ಚಿಲಿಪಿಲಿ ಮಾಚ್೯ 12, ರವಿವಾರದಂದು ಮಂಗಳೂರು ನಗರದ ಕದ್ರಿ ಬಾಲಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು NSCDF ಅಧ್ಯಕ್ಷ ಗಂಗಾಧರ್ ಗಾಂಧಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (ASSAP) ದ ಅಧ್ಯಕ್ಷೆ ಹಾಗೂ ನ್ಯಾಯವಾದಿ, ಕವಯತ್ರಿ, ಮಕ್ಕಳ ಸಾಹಿತಿ ಪರಿಮಳ ರಾವ್ ಕೆ.ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಭಾಗವಹಿಸಲಿದ್ದು , ರಾಜ್ಯ ಮಟ್ಟದ ಕಥಾಲಾಪದ ಅಧ್ಯಕ್ಷರಾಗಿ ಜನಪ್ರಿಯ ಮುಕ್ತಕ ಕವಿ ಡಾ. ಸುರೇಶ್ ನೆಗಳಗುಲಿ ವಹಿಸಲಿದ್ದು, ಕಾರ್ಯಕ್ರಮದ ಸಂಚಾಲಕಿ ಕವಯತ್ರಿ ಗೀತಾ ಲಕ್ಷ್ಮೀಶ ಮತ್ತಿತರರು ಭಾಗವಹಿಸುವರು. ಇದೇ ಸಂದರ್ಭದಲ್ಲಿ ನಡೆಯುವ ಕಥಾಲಾಪದಲ್ಲಿ ವೀಣಾ ಆರ್ ಕಾರಂತ್, ವ. ಉಮೇಶ್ ಕಾರಂತ್, ಅಶ್ವಿಜ ಶ್ರೀಧರ್, ಕೊಳಚಪ್ಪೆ ಗೋವಿಂದ ಭಟ್, ಜಯರಾಮ ಪಡ್ರೆ, ಉಮೇಶ್ ಶಿರಿಯ, ರಾಮಾಂಜಿ ನಮ್ಮ ಭೂಮಿ, ಗೋಪಾಲಕೃಷ್ಣ ಶಾಸ್ತ್ರಿ, ರೇಖಾ ಸುದೇಶ್ ರಾವ್, ಶ್ಯಾಮಪ್ರಸಾದ್ ಭಟ್, ದೀಪಾ ಸದಾನಂದ್, ನವೀನ್ ಕುಮಾರ್ ಪೆರಾರ, ಮಾನ್ವಿ ಮಂಗಳೂರು, ಹಿತೇಶ್ ಕುಮಾರ್ ಎ, ಸುಗಂಧಿ ಶ್ಯಾಮ್, ಪದ್ಮನಾಭ ಮಿಜಾರು, ಎಡ್ವರ್ಡ್ ಲೊಬೊ, ಮಲ್ಲೇಶ್ ಜಿ. ಹಾಸನ್, ದೇವರಾಜ್ ಕುಂಬ್ಳೆ, ಚಿತ್ರಕಲಾ ದೇವರಾಜ್, ಸಿಹಾನ ಬಿ.ಎಂ, ರೇಮಂಡ್ ಡಿಕೂನ ತಾಕೊಡೆ, ಅನುರಾಧಾ ರಾಜೀವ್, ಹರೀಶ್ ಮೆಲ್ಕಾರ್, ದಯಮಣಿ ಎಕ್ಕಾರ್, ವಾಣಿ ಲೋಕಯ್ಯ, ಸೌಮ್ಯ ಆರ್ ಶೆಟ್ಟಿ, ರಶ್ಮಿತಾ, ಎ. ಕೆ. ಕುಕ್ಕಿಲಾ ಭಾಗವಹಿಸಲಿದ್ದಾರೆ. ಬಳಿಕ ಈ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಚಿಣ್ಣರ ಚಿಲಿಪಿಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (ASSAP)ದ ಕಾರ್ಯದರ್ಶಿ ಮಾಲಿನಿ ರಾವ್ ಕೆ. ಉಪಾಧ್ಯಕ್ಷ ಮಹೇಶ್ ಕೆ. ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಕರ್ತ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆಯವರ ಜಾತಿವ್ಯಾಧಿ ಚಿಕಿತ್ಸಕ ಡಾ.ಪದ್ಮನಾಭನ್ ಪಲ್ಪು ಪುಸ್ತಕ ಬಿಡುಗಡೆ
Posted On: 11 Mar 2023, 04:44 PM
ಕಾಪು : ಬ್ರಹ್ಮರ್ಷಿ ನಾರಾಯಣ ಗುರುಗಳ ಒಡನಾಡಿಯಾಗಿದ್ದು , ಕ್ರಾಂತಿಕಾರಿ ಸಮಾಜ ಸುಧಾರಣೆಯಲ್ಲಿ ಸುಧೀರ್ಘ ಕಾಲ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಮಹತ್ತರ ಸುಧಾರಣೆಗಳನ್ನು ಯಶಸ್ವಿಯಾಗಿ ಸಾಧಿಸಿದ ಡಾ. ಪದ್ಮನಾಭನ್ ಪಲ್ಪು ಅವರ ಸಾಧನೆಗಳ ಕುರಿತು ಪತ್ರಕರ್ತ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಅವರು ಬರೆದು ಪ್ರಕಟಿಸಿದ "ಜಾತಿವ್ಯಾಧಿ ಚಿಕಿತ್ಸಕ ಡಾ. ಪದ್ಮನಾಭನ್ ಪಲ್ಪು" ಪುಸ್ತಕ ಬಿಡುಗಡೆ ಕಾರ್ಯಕ್ರಮವು ಮಾರ್ಚ್ 9ರಂದು ಮೂಡುಬೆಳ್ಳೆಯ "ಧುನಿ" ಬಯಲು ರಂಗಮಂಟಪದಲ್ಲಿ ನಡೆಯಿತು. ಸುರತ್ಕಲ್ ಎನ್ ಐ ಟಿ ಕೆಯ ಪ್ರಾಧ್ಯಾಪಕರೂ, ಲೇಖಕರೂ ಆದ ಡಾ ಶಶಿಕಾಂತ ಕೌಡೂರು ಪುಸ್ತಕ ಬಿಡುಗಡೆಗೊಳಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಲೇಖಕ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಹಿರಿಯ ಬರಹಗಾರರೂ, ಸಂಶೋಧಕರೂ, ಕೇರಳ - ಕರ್ನಾಟಕ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮುಖಂಡರೂ ಆದ ಪಾಂಗಾಳ ಬಾಬು ಕೊರಗ, ಪಾಣ ಯಾನೆ ನಲಿಕೆ ಸಮಾಜಸೇವಾ ಸಂಘದ ಗೌರವಾಧ್ಯಕ್ಷರೂ, ಹಿರಿಯ ದೈವ ನರ್ತಕರೂ ಆದ ಸುಧಾಕರ ಪಾಣಾರ, ಕಾಸರಗೋಡಿನ ಕವಿ, ಕಥೆಗಾರ, ಲೇಖಕ, ಸಂಘಟಕ, ಕನ್ನಡಪರ ಹೋರಾಟಗಾರ ಸುಂದರ ಬಾರಡ್ಕ, ಕವಿ, ಲೇಖಕ, ಇತಿಹಾಸ ಸಂಶೋಧಕರಾದ ರಿಚರ್ಡ್ ದಾಂತಿ ಪಾಂಬೂರು ಮೊದಲಾದವರು ಉಪಸ್ಥಿತರಿದ್ದರು. ಶ್ರೀರಾಮ ದಿವಾಣ ಕಾರ್ಯಕ್ರಮ ನಿರ್ವಹಿಸಿದರು.
ಮಾಚ್೯ 12 : ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವರ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ವರ್ಧಂತಿ ಉತ್ಸವ
Posted On: 11 Mar 2023, 04:34 PM
ಕಾಪು : ತಾಲೂಕಿನ ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವರ ಸನ್ನಿಧಿಯಲ್ಲಿ ಮಾಚ್೯ 12, ಭಾನುವಾರ ಬ್ರಹ್ಮಕಲಶೋತ್ಸವ ವರ್ಧಂತಿ ಉತ್ಸವವು ಜರಗಲಿದೆ ಆಗಮೋಕ್ತ ಕಾರ್ಯಕ್ರಮಗಳ ನೇತೃತ್ವವನ್ನು ವೇದಮೂರ್ತಿ ಪಾದೂರು ಶ್ರೀ ಲಕ್ಷ್ಮೀನಾರಾಯಣ ತಂತ್ರಿಗಳು ವಹಿಸಲಿರುವರು. ಬೆಳಿಗ್ಗೆ ಗಂಟೆ 10ಕ್ಕೆ ವಿಶ್ವೇಶ್ವರ ದೇವರಿಗೆ, ಗಣಪತಿ ಮತ್ತು ಅನ್ನಪೂರ್ಣೇಶ್ವರಿ ದೇವರಿಗೆ ಕಲಶಾಭಿಷೇಕ, ಗಂಟೆ 11 ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾ ಅನ್ನಸಂತರ್ಪಣೆ, ರಾತ್ರಿ ಗಂಟೆ 7ಕ್ಕೆ ಮಹಾರಂಗಪೂಜೆ, ರಾತ್ರಿ ಗಂಟೆ 8.30 ಕ್ಕೆ ಉತ್ಸವ ಬಲಿ ನಡೆಯಲಿದೆ.
ಧ್ರುವ ನಾರಾಯಣ್ ನಿಧನ : ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕದ ರಾಜ್ಯಕಾರ್ಯದರ್ಶಿ ಫಾರೂಕ್ ಚಂದ್ರನಗರ ಸಂತಾಪ
Posted On: 11 Mar 2023, 04:00 PM
ಉಡುಪಿ : ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ , ಮಾಜಿ ಸಂಸದ,ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಸ್ತುವಾರಿ ಹಿರಿಯ ಕಾಂಗ್ರೆಸ್ ಮುಖಂಡರಾದ ಆರ್ ಧ್ರುವ ನಾರಾಯಣ್ ನಿಧನರಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಶ್ರೀಯುತರು ಉತ್ತಮ ಸಜ್ಜನ ರಾಜಕಾರಣಿಯಾಗಿದ್ದು ಪ್ರತಿಯೊಬ್ಬರಲ್ಲಿ ಸ್ನೇಹ ಮನೋಭಾವನೆ ಹೊಂದಿದ್ದರು. ಅವರ ಅಕಾಲಿಕ ನಿಧನ ಅವರ ಅಭಿಮಾನಿಗಳಿಗೆ ಆಘಾತವಾಗಿದೆ ಭಗವಂತ ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ನೀಡಲಿ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಫಾರೂಕ್ ಚಂದ್ರನಗರ ಸಂತಾಪ ಸೂಚಿಸಿದ್ದಾರೆ.
ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನಿಧನ : ಕಾಪು ಬ್ಲಾಕ್ ಕಾಂಗ್ರೆಸ್ ಸಂತಾಪ
Posted On: 11 Mar 2023, 02:31 PM
ಕಾಪು : ಮಾಜಿ ಶಾಸಕರು ಹಾಗೂ ಮಾಜಿ ಸಂಸದರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಗಳಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಆರ್. ಧ್ರುವ ನಾರಾಯಣ್ ರವರ ಆಕಸ್ಮಿಕ ನಿಧನಕ್ಕೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯು ತೀವ್ರ ಸಂತಾಪ ಸೂಚಿಸಿದೆ. ಈ ಬಗ್ಗೆ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಪತ್ರಿಕಾ ಹೇಳಿಕೆ ನೀಡಿ, ವಿದ್ಯಾರ್ಥಿ ಕಾಂಗ್ರೆಸ್ ನಿಂದ ಇವತ್ತಿನವರೆಗೂ ತನ್ನ ಒಡನಾಡಿಯಾಗಿ ಕೆಲಸ ಕಾರ್ಯ ಮಾಡಿದ್ದ ಒಬ್ಬ ಕ್ರಿಯಾಶೀಲ, ಪ್ರಾಮಾಣಿಕ, ನಿಷ್ಠಾವಂತ ರಾಜಕೀಯ ನಾಯಕನನ್ನು ನಾವು ಕಳೆದು ಕೊಂಡಿದ್ದು, ಅವರ ಅಗಲುವಿಕೆಯು ವೈಯುಕ್ತಿಕವಾಗಿ ನನಗೆ ಅಪಾರ ದುಃಖವನ್ನು ತರಿಸಿದೆ. ಜೊತೆಗೆ ಒಬ್ಬ ಕ್ರಿಯಾಶೀಲ, ಅನುಭವಿ ರಾಜಕಾರಣಿಯನ್ನು ಕಳೆದುಕೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರ ಕುಟುಂಬ ವರ್ಗಕ್ಕೆ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಸಹನೆ, ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ದೇವಿಪ್ರಸಾದ್ ಶೆಟ್ಟಿ ಬೆಳಪು, ನವೀನ್ ಚಂದ್ರ ಜೆ. ಶೆಟ್ಟಿ, ಶಿವಾಜಿ ಸುವರ್ಣ ಬೆಳ್ಳೆ, ಅಮೀರ್ ಮೊಹಮ್ಮದ್ ಕಾಪು, ಶಾಂತಲತಾ ಎಸ್. ಶೆಟ್ಟಿ, ಶರ್ಫುದ್ದೀನ್ ಶೇಖ್, ವಿಕ್ರಮ್ ಕಾಪು, ವಿನಯ್ ಬಲ್ಲಾಳ್, ಮೋಹಮ್ಮದ್ ಸಾದಿಕ್ ಹಾಗೂ ಬ್ಲಾಕ್ ಪದಾಧಿಕಾರಿಗಳು, ಪುರಸಭಾ ಸದಸ್ಯರು, ವಿವಿಧ ಘಟಕ/ಸಮಿತಿಗಳ ಅಧ್ಯಕ್ಷರು ಮತ್ತು ಪಕ್ಷದ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಪು : ಶಾಲೆಗೆ ತೆರಳುವ ವೇಳೆ ಬಸ್ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತ್ಯು
Posted On: 11 Mar 2023, 02:18 PM
ಕಾಪು : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಎಕ್ಸ್ ಪ್ರೆಸ್ ಬಸ್ ಡಿಕ್ಕಿ ಹೊಡೆದು ಶಾಲಾ ಬಾಲಕಿಯೋರ್ವಳು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಕಾಪು ಮಹಾದೇವಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ವರ್ಷಿತಾ(13) ಮೃತಪಟ್ಟ ವಿದ್ಯಾರ್ಥಿನಿ. ಇಂದು ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ವರ್ಷಿತಾ ರಾಷ್ಟ್ರೀಯ ಹೆದ್ದಾರಿ 66ರ ಮಂದಾರ ಹೊಟೇಲ್ ಬಳಿ ರಸ್ತೆ ದಾಟಲು ನಿಂತಿದ್ದ ವೇಳೆ ಅತೀ ವೇಗದಿಂದ ಉಡುಪಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಸ್ ವರ್ಷಿತಾಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಬಾಲಕಿಯ ತಲೆಗೆ ತೀವ್ರ ಗಾಯಗಳಾಗಿತ್ತು. ಈ ವೇಳೆ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಮಧ್ಯೆ ಆಕೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಳೆ : ಪಡುಬಿದ್ರಿ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಕಡೇ ಢಕ್ಕೆಬಲಿ ಮತ್ತು ಮಂಡಲ ವಿಸರ್ಜನೆ ಸೇವೆ
Posted On: 10 Mar 2023, 09:35 PM
ಪಡುಬಿದ್ರಿ : ಇಲ್ಲಿನ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ದ್ವೈವಾರ್ಷಿಕವಾಗಿ ಜರಗುವ ಢಕ್ಕೆ ಬಲಿ ಸೇವೆ ಮತ್ತು ಮಂಡಲ ವಿಸರ್ಜನೆಯು ನಾಳೆ (ಮಾಚ್೯ 11, ಶನಿವಾರ) ಸಂಪನ್ನಗೊಳ್ಳಲಿದೆ. ಈ ಪ್ರಯುಕ್ತ ಮಧ್ಯಾಹ್ನ ಗಂಟೆ 12ಕ್ಕೆ ಸರಿಯಾಗಿ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ಸಂಜೆ ಗಂಟೆ 4:30ಕ್ಕೆ ಫಲಪುಷ್ಪ ತಾಂಬೂಲ ಪರಿಕರ ಹೊರೆ ಕಾಣಿಕೆ ಮೆರವಣಿಗೆ, ರಾತ್ರಿ ಸನ್ನಿಧಾನದಲ್ಲಿ ತಂಬಿಲ ಸೇವೆ ನಂತರ ಢಕ್ಕೆಬಲಿ ಸೇವೆ ಬಳಿಕ ಮಂಡಲ ವಿಸರ್ಜನೆ ಸೇವೆಯು ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
