Updated News From Kaup

ಜನವರಿ 8 : ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ - ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಿಬಿಸಿ ಟ್ರೋಫಿ 2023

Posted On: 07-01-2023 03:52PM

ಪಡುಬಿದ್ರಿ : ಇಲ್ಲಿನ ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ ಅರ್ಪಿಸುವ ದಿವಂಗತ ಲೋಹಿತಾಕ್ಷ ಸುವರ್ಣ ಸ್ಮರಣಾರ್ಥ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಿಬಿಸಿ ಟ್ರೋಫಿ 2023 ಇದರ ಉದ್ಘಾಟನೆ ಜನವರಿ 8, ಆದಿತ್ಯವಾರ ಬೆಳಿಗ್ಗೆ 8:30 ಕ್ಕೆ ಹಳೆಯಂಗಡಿಯ ಟೋರ್ಪೆಡೋಸ್ ಸ್ಫೋಟ್೯್ಸ ಕ್ಲಬ್ ನ ಒಳಾಂಗಣ ಶಟಲ್ ಕೋಟ್೯ ಇಲ್ಲಿ ಜರಗಲಿದೆ.

8 ತಂಡಗಳು, 64 ಆಟಗಾರರು ಭಾಗವಹಿಸಲಿದ್ದಾರೆ. ಪ್ರಥಮ ಬಹುಮಾನ ರೂ.7,777 ಮತ್ತು ದ್ವಿತೀಯ ಬಹುಮಾನ ರೂ.5,555 ಜೊತೆಗೆ ಪಿಬಿಸಿ ಟ್ರೋಫಿ ಇರಲಿದೆ. ಬೆಸ್ಟ್ ಎಮರ್ಜಿಂಗ್ ಪ್ಲೇಯರ್ ಮತ್ತು ಬೆಸ್ಟ್ ಆಲ್ರೌಂಡರ್ ಪ್ರಶಸ್ತಿ ಇರಲಿದೆ.

ಕಾರ್ಯಕ್ರಮವನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಡಿ ಎಸ್ ಅಬ್ದುಲ್ ರೆಹಮಾನ್, ನವೀನ್ಚಂದ್ರ ಶೆಟ್ಟಿ, ವೈ ಸುಧೀರ್ ಕುಮಾರ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿತೇಂದ್ರ ಜೆ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಜಿತೇಂದ್ರ ಫುರ್ಟಾಡೊ, ಅಬ್ದುಲ್ ಅಝೀಝ್, ಗೀತಾ ಅರುಣ್ ಭಾಗವಹಿಸಲಿದ್ದಾರೆ. ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ ನ ಅಧ್ಯಕ್ಷರಾದ ವೈ ಸುಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ತಂಡಗಳು : ನವೀನ್ ಎನ್ ಶೆಟ್ಟಿ ಮಾಲೀಕತ್ವದ ಮೋಹಿತ್ ಸ್ಮಾಶರ್ಸ್, ಕಪೀಲ್ ಕುಮಾರ್ ರವರ ಮಾಹಿ ವಾರಿಯಸ್೯, ನಸ್ರುಲ್ಲರವರ ಟೀಮ್ ಸಿಗ್ನೇಚರ್, ದೀಕ್ಷಿತ್ ರವರ ವಿಹಾನ್ ಗ್ಲಾಡಿಯೇಟರ್, ಶಂಕರ್ ಕಂಚಿನಡ್ಕ ಇವರ ಯಶ್ ವಾರಿಯಸ್೯, ಕೃಷ್ಣ ಬಂಗೇರರ ಯನ್ಶ್ ರಿಯಲ್ ಫೈಟಸ್೯, ಅನ್ವರ್ ಅಹ್ಮದ್ ರ ಕ್ಲಬ್ ಎನ್ಫಿಗೊ, ಸಿರಾಜ್ ರವರ ಓಶಿಯನ್ ವಾರಿಯಸ್೯ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಲಿದೆ ಎಂದು ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ ನ ಕಾರ್ಯದರ್ಶಿ ರಮೀಝ್ ಹುಸೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಡುಬಿದ್ರಿ : ಕಾಂತಾರ ಸಿನೆಮಾದಂತೆ ಕಾರ್ಣಿಕ ತೋರಿದ ದೈವ

Posted On: 07-01-2023 12:06PM

ಪಡುಬಿದ್ರಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿಯ ಪಡುಹಿತ್ಲುವಿನಲ್ಲಿ ಸುಮಾರು 500 ವರ್ಷಗಳ ಇತಿಹಾಸವುಳ್ಳ ಊರ ದೈವವಾಗಿ ಕಾಲಕಾಲಕ್ಕೆ ತಂಬಿಲ, ನೇಮಾದಿ ಕಾರ್ಯಗಳು ನಡೆಯುತ್ತಿದ್ದ ಜಾರಂದಾಯ ಬಂಟ ದೈವಸ್ಥಾನದಲ್ಲಿ ಇದೀಗ ಅಧಿಕಾರದ ವ್ಯಾಮೋಹದಿಂದ ಒಂದು ವಾರ್ಷಿಕ ನೇಮೋತ್ಸವ ಆಗುವಲ್ಲಿ ಎರಡು ನೇಮವೇ ಎಂಬಂತಾಗಿದೆ.

ಈಗಾಗಲೇ ಊರಿನ ಹತ್ತು ಸಮಸ್ತರ ಸಮ್ಮುಖದಲ್ಲಿ ಸಮಿತಿಯಿದ್ದು ಅದರ ಅಧ್ಯಕ್ಷರಾಗಿದ್ದ ಪ್ರಕಾಶ್ ಶೆಟ್ಟಿ ಅಧಿಕಾರ ಅವಧಿ ಮುಗಿದಿತ್ತು. ಆದರೆ ಅಧಿಕಾರ ಅವಧಿ ಮುಗಿದ ಕೂಡಲೇ ಟ್ರಸ್ಟ್ ಮಾಡುವ ಇರಾದೆಯಿಂದ ಸಾನದ ಮನೆಯ ಗುರಿಕಾರ ಜಯ ಪೂಜಾರಿಯವರನ್ನು ಅಧ್ಯಕ್ಷರನ್ನಾಗಿಸಿಕೊಂಡು ಒಟ್ಟು 5 ಮಂದಿಯ ಟ್ರಸ್ಟ್ ರಚನೆಯಾಗುತ್ತದೆ. ಆ ಮೂಲಕ ದೈವಸ್ಥಾನದ ಆಡಳಿತ ಚುಕ್ಕಾಣಿ ಹಿಡಿಯಲು ಮುಂದಾಗುತ್ತದೆ. ಜನವರಿ 7ರಂದು ನೇಮದ ದಿನ ನಿಗದಿಯಾಗುತ್ತಿದ್ದಂತೆ ಟ್ರಸ್ಟ್ ತಂಡವು ಕೋಟ್೯ ಮೊರೆ ಹೋಗಿ ಡಿಸೆಂಬರ್ 23 ರಂದು ತಡೆಯಾಜ್ಞೆ ತರುತ್ತದೆ. ಮರುದಿನ ಡಿಸೆಂಬರ್ 24ರಂದು ಟ್ರಸ್ಟ್ ಸದಸ್ಯರೋರ್ವರ ಮನೆಯ ದೈವಸ್ಥಾನದಲ್ಲಿ ತಂಬಿಲದಂದು ಜಯಪೂಜಾರಿ ಎಲ್ಲರ ಎದುರು ಹಠತ್ತಾಗಿ ಕುಸಿದು ಸಾವನ್ನಪ್ಪುತ್ತಾರೆ. ಇದು ದೈವ ಕಾರ್ಣಿಕ ಎಂದು ಜನರು ಆಡುವಂತಾಗಿದೆ. ಇತ್ತ ಊರಿನ ಸಮಿತಿ ತಡೆಯಾಜ್ಞೆ ತೆರವುಗೊಳಿಸುವಲ್ಲಿ ಸಫಲರಾಗುತ್ತಾರೆ.

ಏತನ್ಮಧ್ಯೆ ಜಯ ಪೂಜಾರಿ ಮರಣದಿಂದ ಊರಿನವರ ತೀರ್ಮಾನದಂತೆ ನೇಮ ಮುಂದೂಡಲಾಗುತ್ತದೆ. ನೇಮ ಮುಂದೂಡಿಕೆಯ ಬಗ್ಗೆ ಪತ್ರಿಕಾ ಪ್ರಕಟಣೆಯನ್ನೂ ನೀಡಲಾಗುತ್ತದೆ. ಆದರೆ ಟ್ರಸ್ಟ್ ತಂಡ ಮಾತ್ರ ಸುಮ್ಮನಿರದೆ ಜಯ ಪೂಜಾರಿ ಉತ್ತರಕ್ರಿಯೆಯ ದಿನವಾದ ಜನವರಿ 7ರಂದು ನೇಮ ಮಾಡಿಯೇ ಸಿದ್ಧ ಎಂಬ ಹಟಕ್ಕೆ ಬಿದ್ದಂತಿದೆ. ಇತ್ತ ಊರಿನವರು ಜನವರಿ 13ರಂದು ನೇಮ ಮಾಡುವುದೆಂದು ತೀರ್ಮಾನಿಸಿದ್ದಾರೆ.

ಇನ್ನೊಂದೆಡೆ ದೈವ ನರ್ತಕರಾದ ಭಾಸ್ಕರ ‌ಎಂಬುವವರಿಗೆ ಟ್ರಸ್ಟ್ ತಂಡವು ಬೆದರಿಕೆಯನ್ನು ಹಾಕಿದೆ ಎಂದು ಸ್ವತಃ ಭಾಸ್ಕರ್ ‌ಮಾಧ್ಯಮದವರ ಮುಂದೆ ಹೇಳಿದ್ದಾರೆ. ಅಪಾರ ಕಾರ್ಣಿಕ ಕ್ಷೇತ್ರವಾದ ದೈವಸ್ಥಾನದಲ್ಲಿ ಇಂತಹ ಘಟನೆಗಳು ಭಕ್ತರಿಗೆ ನೋವುಂಟು ಮಾಡಿದರೂ ಭಕ್ತರು ದೈವದ ಕಾರ್ಣಿಕಕ್ಕಾಗಿ ಕಾದಿದ್ದಾರೆ.

ಕಾರ್ಕಳ : ನಿಧಿ ಯು ಆಚಾರ್‌ - ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Posted On: 06-01-2023 11:28PM

ಕಾರ್ಕಳ : ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ ಡಿಸೆಂಬರ್ 26ರಿಂದ 28ರವರೆಗೆ ನಡೆದ ಇಂಡಿಯಾ ಸ್ಕೂಲ್‌ ಗೇಮ್ಸ್‌ ಸ್ಪೋರ್ಟ್ಸ್‌ ಫೌಂಡೇಶನ್‌ ನ (S. G. S. D. F India) ವತಿಯಿಂದ ನಡೆಸಲಾದ ಮೂರನೇ ಅಂತರಾಷ್ಟ್ರೀಯ 19 ವರ್ಷದೊಳಗಿನ ಯೋಗ ಚಾಂಪಿಯನ್‌ ಶಿಪ್ ನಲ್ಲಿ ಕಾರ್ಕಳ ಕ್ರಿಯೇಟಿವ್‌ ಕಾಲೇಜಿನ ಪದವಿ ಪೂರ್ವ ವಿದ್ಯಾರ್ಥಿನಿ ನಿಧಿ ಯು ಆಚಾರ್‌ ಭಾರತವನ್ನು ಪ್ರತಿನಿಧಿಸಿ ಬಂಗಾರದ ಪದಕವನ್ನು ಗಳಿಸಿರುತ್ತಾರೆ.

ನಿಧಿ ಯು ಆಚಾರ್‌ ಬಾಲ್ಯದಿಂದಲೂ ಅನೇಕ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಪ್ರತಿಭೆಯಾಗಿದ್ದಾರೆ. ಕುಮಾರಿ ನಿಧಿ ಕಾರ್ಕಳದ ಉದಯ ಆಚಾರ್‌ ಮತ್ತು ಲತಾರವರ ಪುತ್ರಿ.

ವಿದ್ಯಾರ್ಥಿನಿಯ ಈ ಸಾಧನೆಗೆ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.

ಈಕೆ ಅಂತರಾಷ್ಟ್ರೀಯ ಯೋಗಗುರು ನರೇಂದ್ರ ಕಾವಿದ್ಯಾರ್ಥಿನಿಯ ಈ ಸಾಧನೆಗೆ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ. ಮತ್‌ ರವರಲ್ಲಿ ಯೋಗಭ್ಯಾಸ ತರಬೇತಿಯನ್ನು ಪಡೆಯುತ್ತಿದ್ದಾರೆ.

ಶಂಕರಪುರ : ಜೆಸಿಐ ಜಾಸ್ಮಿನ್ ಬೆಳ್ಳಿ ಹಬ್ಬದ ಸಂಭ್ರಮ ; ಶಾಶ್ವತ ಕೊಡುಗೆಗಳ ಉದ್ಘಾಟನೆ ; ಸಾಲ್ಮರ ಫ್ರೆಂಡ್ಸ್ ವಾರ್ಷಿಕೋತ್ಸವ

Posted On: 06-01-2023 11:42AM

ಶಂಕರಪುರ : ಕಾಪು ತಾಲೂಕಿನ ಜೆಸಿಐ ಶಂಕರಪುರ ಜಾಸ್ಮಿನ್ ಘಟಕದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ, ಶಾಶ್ವತ ಕೊಡುಗೆಗಳ ಉದ್ಘಾಟನೆ, ಸಾಲ್ಮರ ಫ್ರೆಂಡ್ಸ್ ಶಂಕರಪುರ ಇದರ ವಾರ್ಷಿಕೋತ್ಸವ ಸಮಾರಂಭವನ್ನು ವಲಯ 15ರ ಪೂರ್ವ ಮಲಯಾಧ್ಯಕ್ಷರು ಮತ್ತು ರಾಷ್ಟ್ರೀಯ ತರಬೇತುದಾರರಾದ ಜೆಸಿ ರಾಜೇಂದ್ರ ಭಟ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು 24 ವರುಷದಿಂದ ಈ ಘಟಕ ಉತ್ತಮ ಸಮಾಜ ಸೇವೆ ಮತ್ತು ಯುವಕರ ವ್ಯಕ್ತಿತ್ವ ವಿಕಸನವನ್ನು ಮಾಡುತ್ತಾ ಬಂದಿರುತ್ತದೆ ಎಂದು ಶ್ಲಾಘಿಸಿದರು.

ಸೈoಟ್ ಜೋನ್ಸ್ ಚರ್ಚ್ ನ ಧರ್ಮಗುರುಗಳಾದ ಫರ್ಡಿನಾಂಡ್ ಗೋನ್ಸಾಲಿಸ್ ಆಶೀರ್ವಚನವಿತ್ತರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಶಿಧರ್ ಕೆ ಶೆಟ್ಟಿ ಇನ್ನಂಜೆ ಉದ್ಯಮಿ ಮುಂಬೈ, ಅಭಿನಂದನ್ ಎ ಶೆಟ್ಟಿ ಫಾಸ್ಟ್ ಗವರ್ನರ್ ರೋಟರಿ ಜಿಲ್ಲೆ 3182, ಗ್ರೇಗೋರಿ ಮಾತಾಯಸ್ ಮಾತಾಯಸ್ ಹೇರಿಟೇಜ್ ಇನ್ನಂಜೆ, ಎಲಿಯಾಸ್ ಮೋನಿಸ್ ಸಿವಿಲ್ ಇಂಜಿನಿಯರ್ ಸಲ್ಮಾರ, ಕಾರ್ಯಕ್ರಮ ಸಂಯೋಜಕರಾದ ಜೆಸಿ ಸಂತೋಷ್ ಕುಮಾರ್, ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಜಗದೀಶ್ ಅಮಿನ್, ಜೆಸಿರೇಟ್ ಅಧ್ಯಕ್ಷರಾದ ಜಯಶ್ರೀ ನವೀನ್ ಅಮೀನ್, ಜೆಜೆಸಿ ಅಧ್ಯಕ್ಷರಾದ ಶಶಾಂಕ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೆಸಿಐ ಶಂಕರಪುರ ಜಾಸ್ಮಿನ್ ಘಟಕದ ಸ್ಥಾಪಕ ಕಾರ್ಯದರ್ಶಿ ಮತ್ತು ಸಾಲ್ಮರ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಜೆಸಿ ನವೀನ್ ಅಮೀನ್ ಇವರು ಪ್ರಸ್ತಾವನೆಗೈದರು, ಜೆ ಸಿ ಐ ಶಂಕರಪುರ ಜಾಸ್ಮಿನ್ ಘಟಕದ ಮಾಲಿನಿ ಶೆಟ್ಟಿ ಇನ್ನಂಜೆ ಸ್ವಾಗತಿಸಿದರು. ಕಾರ್ಯದರ್ಶಿಯಾದ ಜೆ ಸಿ ಪ್ರವೀಣ್ ಪೂಜಾರಿ ವಂದಿಸಿದರು.

ಕಾಪು : ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹುಟ್ಟುಹಬ್ಬ ಆಚರಣೆ ; ಸಮ್ಮಾನ

Posted On: 06-01-2023 11:04AM

ಕಾಪು : ಇಲ್ಲಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪು ರಾಜೀವ ಭವನದಲ್ಲಿ ಗುರುವಾರ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಸಮ್ಮಾನ : ಕಾಪು ತಾಲೂಕಿನ ಪತ್ರಕರ್ತರು, ಮಾಜಿ ಯೋಧರು, ಸಮಾಜ ಸೇವಕರು, ಕಾಪು ಪುರಸಭಾ ಪೌರಕಾರ್ಮಿಕರನ್ನು ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಮ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ವಿನಯ ಕುಮಾರ್ ಸೊರಕೆ ನಾನು ನನ್ನ ರಾಜಕೀಯ ಜೀವನದಲ್ಲಿ ಬಿಳಿ ಬಟ್ಟೆ ಧರಿಸುವಂತೆ ಜೀವನದಲ್ಲಿಯೂ ಶುಭ್ರವಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕೀಯದಲ್ಲಿದ್ದೇನೆ. ಎಂದಿಗೂ ಹಿಂಬಾಗಿಲ ಪ್ರವೇಶಕ್ಕಾಗಿ ಕಾಯಲಿಲ್ಲ. ಜನರೊಂದಿಗೆ ಮುಂದೆಯೂ ಇರುತ್ತೇನೆ ಎಂದರು.

ಈ ಸಂದರ್ಭ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಮಾಜಿ ಅಧ್ಯಕ್ಷ ನವೀನ್ಚಂದ್ರ ಜೆ ಶೆಟ್ಟಿ, ದಿವಾಕರ್ ಶೆಟ್ಟಿ, ಶಿವಾಜಿ ಸುವರ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಂತಲತಾ ಶೆಟ್ಟಿ, ದೀಪಕ್ ಕುಮಾರ್ ಎರ್ಮಾಳು, ಗಣೇಶ್ ಕೋಟ್ಯಾನ್, ರಮೀಝ್ ಹುಸೇನ್, ವೈ ಸುಧೀರ್ ಕುಮಾರ್, ಶರ್ಫುದ್ದೀನ್ ಶೇಕ್, ಜ್ಯೋತಿ ಮೆನನ್, ಸಾಧಿಕ್, ಅಶ್ವಿನಿ ಕಾಪು, ಮೊಯ್ದಿನಬ್ಬ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಮಂಡಳಿಗೆ ಮುಖ್ಯಮಂತ್ರಿಗಳಿಂದ ಹಸಿರು ನಿಶಾನೆ ; ಮುಂದಿನ ಬಜೆಟ್ ನಲ್ಲಿ ಘೋಷಣೆ

Posted On: 05-01-2023 08:17PM

ಕಾಪು : ಈಡಿಗ, ಬಿಲ್ಲವ, ನಾಮದಾರಿಗಳು ಸೇರಿದಂತೆ 26 ಉಪಪಂಗಡಗಳ ಬಹಳ ದಿನಗಳ ಬೇಡಿಕೆಯಾದ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಮಂಡಳಿಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಿಸಿದರು.

ಈ ಬಗ್ಗೆ ಮುಖ್ಯಮಂತ್ರಿಗಳು ಮುಂದಿನ ಆಯವ್ಯದಲ್ಲಿ ಸೂಕ್ತ ಅನುದಾನವನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಶ್ರೀ ನಾರಾಯಣ ಗುರು ಅಭಿವೃದ್ಧಿ ಕೋಶ ಸ್ಥಾಪಿಸಲಾಗಿದ್ದು, ಅದನ್ನು ಪರಿವರ್ತಿಸಿ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಮಂಡಳಿ ರಚಿಸುವುದಾಗಿ ಹೇಳಿದರು. ಈ ಬಗ್ಗೆ ಮುಂದಿನ ಬಜೆಟ್ ನಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.

ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಕೆ ರಘುಪತಿ ಭಟ್, ಬಿಲ್ಲವ ಸಮಾಜದ ಸ್ವಾಮೀಜಿಗಳು, ಮುಖಂಡರುಗಳ ನಿಯೋಗ ಜನವರಿ 5, ಗುರುವಾರದಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವರಿಕೆ ಮಾಡಿತ್ತು. ಈ ಬಗ್ಗೆ ನಿಯೋಗದಲ್ಲಿ ಇದ್ದ ಗೀತಾಂಜಲಿ ಸುವರ್ಣ ಮುಖ್ಯಮಂತ್ರಿಗಳ ನಿರ್ಧಾರವನ್ನು ಅಭಿನಂದಿಸಿದ್ದಾರೆ.

ಈ ಸಂದರ್ಭದಲ್ಲಿ ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಶ್ರೀ ರೇಣುಕಾಪೀಠದ ಗುರುಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಸೋಲೂರು ಮಠದ ಆರ್ಯಶ್ರೀ ರೇಣುಕಾನಂದ ಸ್ವಾಮೀಜಿ, ಸಾಗರ ಶಾಸಕರು ಎಂ.ಎಸ್.ಐ.ಎಲ್.ನಿಗಮ ಮಂಡಳಿ ಅಧ್ಯಕ್ಷರಾದ ಹರತಾಲು ಹಾಲಪ್ಪ, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಮೂಡುಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್, ಭಟ್ಕಳ ಶಾಸಕರಾದ ಸುನೀಲ್ ನಾಯ್ಕ್, ಬಿಲ್ಲವ ಸಮಾಜದ ಮುಖಂಡರಾದ ಪ್ರವೀಣ್ ಪೂಜಾರಿ, ಬಿ ಎನ್ ಶಂಕರ ಪೂಜಾರಿ, ಗೀತಾಂಜಲಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಗ್ಲೋಬಲ್ ಅಚೀವ್ ಮೆಂಟ್ ಪುರಸ್ಕಾರಕ್ಕೆ ಆಯ್ಕೆಯಾದ ರಾಘವೇಂದ್ರ ಪ್ರಭು ಕವಾ೯ಲು

Posted On: 05-01-2023 07:25PM

ಉಡುಪಿ : ಶೀ ಲಕ್ಷಮ್ಮ ದೇವಿ ಕಲಾಪೋಷಕ ಸಂಘ ರಾಯಭಾಗ್ ಬೆಳಗಾವಿ ಇದರ ವತಿಯಿಂದ ಧಾರವಾಡ ರಂಗಾಯಣದಲ್ಲಿ ನಡೆಯಲಿರುವ ಕನಾ೯ಟಕ ಸಾಧಕರ ಸಮಾವೇಶದಲ್ಲಿ ನೀಡಲಾಗುವ ಗ್ಲೋಬಲ್ ಅಚೀವ್ ಮೆಂಟ್ ಪುರಸ್ಕಾರಕ್ಕೆ ಉಡುಪಿಯ ರಾಘವೇಂದ್ರ ಪ್ರಭು, ಕವಾ೯ಲು ಯುವ ಸಂಘಟನೆ/ ಸಮಾಜ ಸೇವೆ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭ ಜನವರಿ 22ರಂದು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಿದ್ರಾಮ ನಿಲಜಗಿ ತಿಳಿಸಿದ್ದಾರೆ.

ಜ. 7 : ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರ ಶ್ರೀ ಅಯ್ಯಪ್ಪ ಭಕ್ತವೃಂದ ಶಂಕರಪುರದ 37ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Posted On: 04-01-2023 11:30PM

ಕಾಪು : ಮುಂಬೈ ಮಹಾನಗರದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿ ಗುರುತಿಸಿಕೊಂಡು, ಧಾರ್ಮಿಕ ಶೈಕ್ಷಣಿಕ ಸೇವೆಗಳಿಗೆ ತನ್ನ ಬದುಕನ್ನು ಮುಡುಪಾಗಿಟ್ಟದ್ದು ಕಳೆದ 37 ವರ್ಷಗಳಿಂದ ಕಲಿಯುಗ ವರದ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಕಟ್ಟುನಿಟ್ಟಿನ ವೃತ್ತವನ್ನು ಮಾಡಿ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಾ ಬಂದಿರುವ ಶಂಕರಪುರ, ಇನ್ನಂಜೆ ಯಲ್ಲಿ 37 ಹಾಗೂ ಮುಂಬಯಿ, ಅಂಧೇರಿ ಪರಿಸರದಲ್ಲಿ 33 ವರ್ಷಗಳ ಹಿಂದೆ ಶ್ರೀ ಅಯ್ಯಪ್ಪ ಭಕ್ತವೃಂದ ಸೇವಾ ಸಮಿತಿ ಸ್ಥಾಪಿಸಿ ಅಯ್ಯಪ್ಪ ಮಹಾಪೂಜೆಯನ್ನು ನಡೆಸುತ್ತಾ ಸಾವಿರಾರು ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಅನುದಾನವನ್ನು ನೀಡುತ್ತಾ ಬಂದಿರುವ ಇನ್ನಂಜೆ ಚಂದ್ರ ಗುರುಸ್ವಾಮಿ ಅವರ ಈ ವರ್ಷದ 37 ನೇ ಶ್ರೀ ಅಯ್ಯಪ್ಪ ಮಹಾಪೂಜೆ ಜನವರಿ 7 ರಂದು ಶನಿವಾರ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಇನ್ನಂಜೆಯಲ್ಲಿ ನಡೆಯಲಿದೆ

ಆ ಪ್ರಯುಕ್ತ ಜನವರಿ 6 ರ ಶುಕ್ರವಾರ ಸಂಜೆ 5 ಗಂಟೆಗೆ ಅಯ್ಯಪ್ಪ ಶಿಬಿರ ದಿಂದ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.ಜನವರಿ 7 ರ ಶನಿವಾರ ಬೆಳಿಗ್ಗೆ 5.00 ಕ್ಕೆ ಶರಣುಘೋಷ ಮತ್ತು ನಿತ್ಯ ಪೂಜೆ ಬೆಳಿಗ್ಗೆ 6 ರಿಂದ ಮಹಾಗಣಪತಿ ಹೋಮ ಬೆಳಿಗ್ಗೆ 11 ರಿಂದ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಹಾಪೂಜೆ, ಆ ಬಳಿಕ ಮಹಾಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ವಿಶೇಷ ಹೂವಿನ ಪೂಜೆಯ ನಂತರ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಅಯ್ಯಪ್ಪ ಶಿಬಿರದ ವರಗೆ ವಿಶೇಷ ಮೆರವಣಿಗೆ ನಡೆದು, ರಾತ್ರಿ 8 ಗಂಟೆಗೆ ಚಂದ್ರಹಾಸ ಗುರುಸ್ವಾಮಿಯವರ ನೇತೃತ್ವದಲ್ಲಿ ಪಡಿಪೂಜೆ ಹಾಗೂ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ರಾತ್ರಿ ಗಂಟೆ 9 ಕ್ಕೆ ಕಿನ್ನಿಗೋಳಿ ವಿಜಯಾ ಕಲಾವಿದರಿಂದ ಧಾರ್ಮಿಕ ಸ್ಪರ್ಶದ ಸಾಂಸ್ಕೃತಿಕ ನಾಟಕ "ಪಂಚ ಜೀಟಿಗೆ" ಪ್ರದರ್ಶನ ಗೊಳ್ಳಲಿದೆ. ಜನವರಿ 10 ರಂದು ಬೆಳಿಗ್ಗೆ 8 ಗಂಟೆಗೆ ಶಿಬಿರದಲ್ಲಿ ಇರುಮುಡಿ ಕಟ್ಟುವ ಕಾರ್ಯಕ್ರಮ ಇದೆ. ಭಕ್ತಾದಿಗಳೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಅಯ್ಯಪ್ಪ ಸ್ವಾಮಿಯ ಹಾಗೂ ಶ್ರೀ ವಿಷ್ಣುಮೂರ್ತಿ ದೇವರ ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಬೇಕೆಂದು ಸಂಸ್ಥಾಪಕರಾದ ಚಂದ್ರಹಾಸ ಗುರುಸ್ವಾಮಿ, ಉಪಾಧ್ಯಕ್ಷರುಗಳಾದ ಚಂದ್ರಹಾಸ ಜೆ. ಶೆಟ್ಟಿ, ಸೂರ್ಯಪ್ರಕಾಶ್ ಶಟ್ಟಿಗಾರ್, ಗೌರವ ಪ್ರಧಾನ ಕಾರ್ಯದರ್ಶಿ, ಬಾಬು ಎಂ ಶೆಟ್ಟಿ ಗೌರವ ಕೋಶಧಿಕಾರಿ ವಿಜಯ ಎಸ್. ಶೆಟ್ಟಿ , ಜೊತೆ ಕಾರ್ಯದರ್ಶಿಗಳಾದ ದಿಲೀಪ್ ಎಸ್. ಶೆಟ್ಟಿ ಪ್ರಭಾಶ್ಚಂದ್ರ ಎಸ್. ಶೆಟ್ಟಿ, ಜೊತೆ ಕೋಶಾಧಿಕಾರಿಗಳಾದ ಭರತ್ ಕೆ ಶೆಟ್ಟಿ, ಶಂಕರ್ ಎನ್ ಶೆಟ್ಟಿ ಮತ್ತು ಅಯ್ಯಪ್ಪ ಭಕ್ತ ವೃಂದ ಶಂಕರಪುರ ಹಾಗೂ ಮುಂಬಯಿಯ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

ಕೊರೊನ ಮಹಾಮಾರಿ ತೊಲಗಲು ಪಾದಯಾತ್ರೆ ಕೈಗೊಂಡ ವಿಶ್ವ ಕಲ್ಲಟ್ಟೆ (ಈಚು ಸ್ವಾಮಿ)

Posted On: 04-01-2023 11:23PM

ಪಡುಬಿದ್ರಿ : ಹಲವು ವರ್ಷಗಳಿಂದ ಅಯ್ಯಪ್ಪ ಮಾಲಾಧಾರಿಯಾಗಿ ಪಾದಯಾತ್ರೆಯ ಮೂಲಕ ಕ್ಷೇತ್ರ ದರ್ಶನ ಮಾಡುತ್ತಿರುವ ಪಡುಬಿದ್ರಿಯ ವಿಶ್ವ ಕಲ್ಲಟ್ಟೆ (ಈಚು ಸ್ವಾಮಿ) ಈ ಬಾರಿಯು ಪಾದಯಾತ್ರೆ ಕೈಗೊಂಡಿದ್ದಾರೆ.

ಅದರಲ್ಲೇನು ವಿಶೇಷ ಅಂದುಕೊಳ್ಳಬಹುದು ಹೌದು ವಿಶೇಷವಿದೆ. ಕೊರೊನದ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಾಮಾರಿ ತೊಲಗಲು ಶಬರಿಮಲೆ ಕ್ಷೇತ್ರಕ್ಕೆ ತುಪ್ಪದ ಅಭಿಷೇಕವನ್ನು ಪಾದಯಾತ್ರೆಯ ಹರಕೆ ಹೊತ್ತಿದ್ದರು. ಆದರೆ ಶಬರಿಮಲೆಗೆ ಪಾದಯಾತ್ರೆ ಅಂದು ನಿಷಿದ್ಧವಿದ್ದರಿಂದ ಈ ಸೇವೆ ಮಾಡಲು ವಿಳಂಬವಾಯಿತು. ಈ ಬಾರಿ ಹರಕೆ ಪೂರೈಸುವ ನಿಟ್ಟಿನಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ.

ಇದಕ್ಕೂ ಮೊದಲು ವಿಶ್ವ ಕಲ್ಲಟ್ಟೆ ( ಈಚು ಸ್ವಾಮಿ) ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲು ಪಾದಯಾತ್ರೆ ಹರಕೆ ಹೊತ್ತಿದ್ದರು.

ಸಾಮಾಜಿಕ ಸೇವಾ ಸಂಸ್ಥೆ ಪಡುಬಿದ್ರಿ ಭಗವತಿ ಗ್ರೂಪ್ ಇದರ ಸದಸ್ಯನಾಗಿದ್ದಾರೆ. ತನ್ನ ಒಳಿತಿಗಾಗಿ ದೇವರ ಮೊರೆ ಹೋಗುವ ಕಾಲಘಟ್ಟದಲ್ಲಿ ಸರ್ವರ ಒಳಿತಿಗಾಗಿ ವಿಶ್ವ ಕಲ್ಲಟ್ಟೆ (ಈಚು ಸ್ವಾಮಿ)ಯವರು ಕೈಗೊಂಡ ಪಾದಯಾತ್ರೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಜನವರಿ 19 ರಿಂದ ಮಾಚ್೯ 11: ಪಡುಬಿದ್ರಿ ಢಕ್ಕೆಬಲಿ

Posted On: 04-01-2023 12:55PM

ಪಡುಬಿದ್ರಿ : ಇಲ್ಲಿನ ಖಡೇಶ್ವರೀ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಢಕ್ಕೆಬಲಿ ಸೇವೆಗಳು ಜನವರಿ 19ರಂದು ಮಂಡಲ ಹಾಕುವ ಢಕ್ಕೆಬಲಿ ಸೇವೆಯೊಂದಿಗೆ ಆರಂಭಗೊಳ್ಳಲಿದೆ.

ಮಾಚ್೯ 11ರಂದು ಮಂಡಲ ವಿಸರ್ಜನೆಯೊಂದಿಗೆ ಢಕ್ಕೆಬಲಿ ಸೇವೆಗಳು ಮುಕ್ತಾಯಗೊಳ್ಳಲಿವೆ.

ಈ ಬಾರಿ ಒಟ್ಟು 36 ಢಕ್ಕೆಬಲಿ ಸೇವೆಗಳು ಇರಲಿದೆ. ಹೆಚ್ಚಿನ ಮಾಹಿತಿಗೆ ಸೇವಾದಾರರು ಬ್ರಹ್ಮಸ್ಥಾನದ ಕಚೇರಿಯನ್ನು ಅಥವಾ ಖಡೇಶ್ವರೀ ವನದುರ್ಗಾ ಟ್ರಸ್ಟ್‌ನ ಕಾರ್ಯದರ್ಶಿ ವೈ.ಎನ್. ರಾಮಚಂದ್ರ ರಾವ್ ಅವರನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ.