Updated News From Kaup
ಕಾರ್ಕಳ ವಿಧಾನಸಭಾ ಕ್ಷೇತ್ರ : ಕಾಂಗ್ರೆಸ್ ನಿಂದ ಅನಿತಾ ಡಿಸೋಜ ರವರಿಗೆ ಟಿಕೆಟ್ ನೀಡಲು ಮನವಿ
Posted On: 23 Mar 2023, 02:08 PM
ಕಾರ್ಕಳ : ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಸಮಯದಲ್ಲಿ ವಿವಿಧ ಪಕ್ಷಗಳು ಅಭ್ಯರ್ಥಿ ತನಕ್ಕಾಗಿ ಭಾರಿ ಕಸರತ್ತನ್ನು ಮಾಡುತ್ತಿವೆ. ಪ್ರತಿಷ್ಠಿತ ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ತರಲು ಹರಸಾಹಸ ಮಾಡುತ್ತಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಹಲವು ಬಾರಿ ಪ್ರತಿನಿಧಿಸಿದಂತ ಕ್ಷೇತ್ರದಲ್ಲಿ ಪ್ರಸ್ತುತ ಕಾಂಗ್ರೆಸ್ ಹೀನಾಯ ಪರಿಸ್ಥಿತಿಯಲ್ಲಿದೆ. ಇಂಧನ ಸಚಿವ ಬಿಜೆಪಿ ಪ್ರಮುಖ ಮುಖಂಡ ಸುನಿಲ್ ಕುಮಾರ್ ರವರ ಹಿಡಿತದಲ್ಲಿರುವಂತ ಕಾರ್ಕಳ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತನ್ನ ಗತ ಇತಿಹಾಸವನ್ನು ಮರಳಿ ತರುವಲ್ಲಿ ಹರಸಾಸಪಡುತ್ತಿದೆ. ಹೀನಾಯ ಪರಿಸ್ಥಿತಿಯಲ್ಲಿದ್ದರೂ ಪಕ್ಷದಲ್ಲಿ ಅಭ್ಯರ್ಥಿ ಸ್ಥಾನಕ್ಕೆ ಕೊರತೆ ಇಲ್ಲ. ಐದಕ್ಕೂ ಅಧಿಕ ಅಭ್ಯರ್ಥಿಗಳು ಈಗಾಗಲೇ ತಮ್ಮ ಹೆಸರನ್ನು ಕೆಪಿಸಿಸಿಯಲ್ಲಿ ನೋಂದಾಯಿಸಿದ್ದಾರೆ. ಆದರೆ ಕ್ಷೇತ್ರದಲ್ಲಿ ಈ ಬಾರಿ ಮಹಿಳೆಯರಿಗೆ ಅವಕಾಶ ಕೊಡಿ ಎಂಬ ಸದ್ದು ಎದ್ದಿದ್ದು, ಇದಕ್ಕೆ ಕ್ರೈಸ್ತ ಸಮಾಜ ಬಾಂಧವರ ಹಲವು ಸಂಘಟನೆಗಳು ಸಾತ್ ನೀಡಿವೆ. 20ಕ್ಕೂ ಅಧಿಕ ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತೆಯಾಗಿ ಪಕ್ಷಕ್ಕಾಗಿ ದುಡಿದಿರುವ, ಪ್ರಸ್ತುತ ಕಾರ್ಕಳ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅನಿತಾ ಡಿಸೋಜರವರು ಈ ಬಾರಿ ಅಭ್ಯರ್ಥಿಯಾಗಲಿ ಎಂಬ ಸದ್ದು ಕಾರ್ಕಳದಲ್ಲಿ ಪ್ರತಿಧ್ವನಿಸುತ್ತಿದೆ. ಗ್ರಾಮ ಪಂಚಾಯತ್ ಸದಸ್ಯರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅನಿತಾ ಡಿಸೋಜ, ಪಕ್ಷದ ಪರವಾಗಿ ವಿವಿಧ ಮಾಧ್ಯಮಗಳಲ್ಲಿ ತನ್ನ ಧ್ವನಿಯನ್ನು ಎತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪ್ರಮುಖ ಎರಡು ಪಕ್ಷಗಳಲ್ಲಿ ಮಹಿಳೆಯರಿಗೆ ಟಿಕೆಟ್ ದೊರಕುತ್ತಿಲ್ಲ. ಈ ಬಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅನಿತಾ ರವರಿಗೆ ಪಕ್ಷದಿಂದ ಟಿಕೆಟ್ ನೀಡಿದರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂಬುದನ್ನು ನಿರೀಕ್ಷೆ ಮಾಡಬಹುದೆಂದು ಕ್ರೈಸ್ತ ಸಂಘಟನೆಗಳು ಒತ್ತಾಯಿಸಿವೆ. ಇವರು ಸಮಾಜ ಸೇವೆಯಲ್ಲಿ ಚಿರಪರಿಚಿತರು. ಬೆಳ್ಮಣ್ ಪರಿಸರದಲ್ಲಿ ಅಪಘಾತ ನಡೆದಾಗ ರಾತ್ರಿ ಹಗಲು ಯೆನ್ನದೆ ಮೊದಲು ನೆನೆಯುವ ಹೆಸರು ಇವರದ್ದು. ಎಷ್ಟೋಜನರನ್ನ ಅಪಘಾತವಾದಾಗ ಯಾವುದೇ ಫಲಾಪೇಕ್ಷೆ ಆಶಿಸದೆ ಆಸ್ಪತ್ರೆಗೆ ದಾಕಲಿಸಿದ ಉಧಾಹರಣೆಗಳು ಅದೆಷ್ಟೋ ಇವೆ. ಬೆಳ್ಮಣ್ ಪರಿಸರದಲ್ಲಿ ಬೆಳ್ಮಣ್ ಹೆಲ್ಪಿಂಗ್ ಹ್ಯಾಂಡ್ ಎಂಬ ವಾಟ್ಸಾಪ್ ಗುಂಪ್ಪನ್ನು ಹುಟ್ಟು ಹಾಕಿ ಬೆಳ್ಮಣ್ ಪರಿಸರದಲ್ಲಿ ಸಮಾರಂಭದಲ್ಲಿ ಹೆಚ್ಚಾಗಿ ಉಳಿದ ಆಹಾರವನ್ನು ಅಸಕ್ತರಿಗೆ, ನಿಗೃತಿಕರಿಗೆ ಹಾಗೂ ಅನಾತಾಶ್ರಮಗಳಿಗೆ ಕ್ಲಪ್ತ ಸಮಯದಲ್ಲಿ ತಲುಪಿಸಿ ಆಹಾರವನ್ನು ಪೋಲಾಗದ ರೀತಿಯಲ್ಲಿ ಸಹಕರಿಸುತ್ತಾರೆ. ದಾನಿಗಳಿಂದ ಬಟ್ಟೆ ಹಾಗೂ ಆಹಾರ ದಾನ್ಯಗಳನ್ನ ಒಟ್ಟು ಗೂಡಿಸಿ ಅಗತ್ಯವಿದ್ದವರಿಗೆ ತಲುಪಿಸುತ್ತಾರೆ. ಬೆಳ್ಮಣ್ಣಲ್ಲಿ ನಿರ್ಗತಿಕರನ್ನು ಆಶ್ರಮ ಹಾಗೂ ಪುನವಸತಿ ಕೇಂದ್ರಕ್ಕೆ ತಲುಪಿಸುವಲ್ಲಿ ಸಹಕರಿಸಿರುತ್ತರೆ. ಪರಿಸರದಲ್ಲಿ ಸ್ವಚ್ಚತೆಯ ಅರಿವು ಜನರಲ್ಲಿ ಮೂಡಿಸುವ ಉದ್ದೇಶದಿಂದ ಸ್ವಚ್ಚತಾ ತಂಡದ ಸಕ್ರೀಯ ಸದಸ್ಯೆಯಾಗಿ ಪ್ರತಿ ಭಾನುವಾರ ಸ್ವಚ್ಚತಾ ಕಾಯಕ್ರಮವನ್ನು ಯಶಸ್ಚಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಮದುವೆಯ ದಿನ ಬಡವರ್ಗದ ಎಷ್ಟೋ ಹೆಣ್ಣು ಮಕ್ಕಳನ್ನ ಬೆಳಗ್ಗಿನ ಜಾವ ಅವರ ಮನೆಗೆ ಹೋಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಮದುಮಗಳನ್ನು ಚೆನ್ನಾಗಿ ಮದುವೆಗೆ ತಯಾರುಮಾಡಿ ಕಳುಹಿಸಿ ಕೊಟ್ಟಿರುವ ಇವರು ಕೊರೊನಾದ ಸಮಯದಲ್ಲಿ ದಾನಿಗಳಿಂದ 500ಕ್ಕೂ ಹೆಚ್ಚಿನ ಮನೆಗಳಿಗೆ ದಿನಸಿ ವಸ್ತುಗಳನ್ನು ಹಂಚಿರುತ್ತಾರೆ. ವೃದ್ದರಿಗೆ ಹಾಗೂ ಅಗತ್ಯವಿದ್ದವರಿಗೆ ಔಷದಿಯನ್ನ ತರಿಸಿ ಕೊಟ್ಟಿದ್ದು, ಕ್ಲಪ್ತ ಸಮಯದಲ್ಲಿ ಅಗತ್ಯ ಬಿದ್ದವರಿಗೆ ವೈದ್ಯಕೀಯ ನೆರವನ್ನು ಒದಗಿಸಿದ್ದಾರೆ. ಬೆಳ್ಮಣ್ ಪರಿಸರದಲ್ಲಿ ಕೂಲಿ ಕಾರ್ಮಿಕರಾಗಿ ಇದ್ದ ಉತ್ತರ ಭಾರತದ ಕಾರ್ಮಿಕರಿಗೆ ಅವರ ಊರಿಗೆ ಹೋಗಲು ಬೇಕಾದ ವ್ಯವಸ್ತೆಯನ್ನ ಮಾಡಲು ಸಹಕರಿಸಿದ್ದಾರೆ. ಎಷ್ಟೋ ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಿರುತ್ತಾರೆ. ಅರಕ್ಷಕ ಠಾಣೆ ಕಾರ್ಕಳ, ಬೆಳ್ಮಣು ಸರಕಾರಿ ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಜೊತೆ 24 ಗಂಟೆಯೂ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ ಕೀರ್ತಿ ಬೆಳ್ಮಣ್ ಪರಿಸರದಲ್ಲಿ ಇವರಿಗೆ ಸಲ್ಲಿತ್ತದೆ. ಸುಮಾರು 22 ಬಾರಿ ರಕ್ತದಾನ ಮಾಡಿ ಮಹಿಳೆಯರಿಗೆ ಸ್ಪೂರ್ತಿದಾತರಾಗಿದ್ದಾರೆ. ಚರ್ಚ್ ಪಾಲನ ಮಂಡಳಿ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿರುವ ಇವರಿಗೆ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ವಿವಿಧ ಸಂಘ ಸಂಸ್ಥೆಗಳು ಮನವಿ ಮಾಡಿದೆ.
ಮಾಚ್೯ 24 : ಹಾವಂಜೆ ಇರ್ಮಾಡಿ ಶೆಟ್ಟಿಬೆಟ್ಟು ಮೂಲನಾಗದೇವರ ದಿವ್ಯಸನ್ನಿಧಿಯಲ್ಲಿ ಚತುಃಪವಿತ್ರ ನಾಗಮಂಡಲೋತ್ಸವ
Posted On: 23 Mar 2023, 01:59 PM
ಉಡುಪಿ : ಇಲ್ಲಿನ ಹಾವಂಜೆ ಇರ್ಮಾಡಿ ಶೆಟ್ಟಿಬೆಟ್ಟು ಮೂಲನಾಗದೇವರ ದಿವ್ಯಸನ್ನಿಧಿಯಲ್ಲಿ ಮಾಚ್೯ 24, ಶುಕ್ರವಾರ ಚತುಃಪವಿತ್ರ ನಾಗಮಂಡಲೋತ್ಸವ ವಿದ್ವಾನ್ ವೇದಮೂರ್ತಿ ಹೆರ್ಗ ಜಯರಾಮ್ ತಂತ್ರಿ ಮತ್ತು ಹಾವಂಜೆ ಗುರುರಾಜ್ ಭಟ್ ಇವರ ನೇತೃತ್ವದಲ್ಲಿ, ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ ಶ್ರೀ ಕ್ಷೇತ್ರ ಕಲ್ಲಂಗಳ, ಕೃಷ್ಣಪ್ರಸಾದ್ ವೈದ್ಯ ಮುದ್ದೂರು ಮತ್ತು ನಾಗಕನ್ನಿಕೆಯಾಗಿ ಬಾಲಕೃಷ್ಣ ವೈದ್ಯ, ನಟರಾಜ ವೈದ್ಯ ಬಳಗದವರ ಸಹಯೋಗದೊಂದಿಗೆ ನಡೆಯಲಿದೆ ಮಾಚ್೯ 22 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹಸಿರುವಾಣಿ ಹೊರಕಾಣಿಕೆ ಹೊರಡಲಿರುವುದು. ಮಾಚ್೯ 24, ಶುಕ್ರವಾರ ಬೆಳಿಗ್ಗೆ 8.30ಕ್ಕೆ ಪ್ರಾರ್ಥನೆ, ಪುಣ್ಯಾಹ ನಾಂದಿ, ಪ್ರಾಯಶ್ಚಿತ್ತ ಹೋಮಗಳು, ಪಂಚವಿಂಶತಿ ಕಲಶ ಪ್ರತಿಷ್ಠೆ, ಅಧಿವಾಸ ಹೋಮ, ಆಶ್ಲೇಷ ಬಲಿ, ಕಲಶಾಭಿಷೇಕ, ಪ್ರಸನ್ನ ಪೂಜೆ, ವಟು ಆರಾಧನೆ, ದ್ವಾದಶ ಮೂರ್ತಿ ಆರಾಧನೆ, ದಂಪತಿ ಪೂಜೆ, ಪಲ್ಲ ಪೂಜೆ, ಮಧ್ಯಾಹ್ನ ಗಂಟೆ 12ರಿಂದ ಭಕ್ತಿ ರಸಮಂಜರಿ ಸಪ್ತಸ್ವರ ಮ್ಯೂಸಿಕಲ್ಸ್, ಗೋಳಿಕಟ್ಟೆ ಹಾವಂಜೆ ಇವರಿಂದ ಮಧ್ಯಾಹ್ನ ಗಂಟೆ 12.30ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 4.30ರಿಂದ ಶ್ರೀ ಉಮಾಮಹೇಶ್ವರ ಮಹಿಳಾ ಭಜನಾ ಮಂಡಳಿ ಹಾವಂಜೆ ಮತ್ತು ಶ್ರೀ ಮಹಾಮಾಯಿ ತುಳಜಾ ಭವಾನಿ ಮಹಿಳಾ ಭಜನಾ ಮಂಡಳಿ ಹಾವಂಜೆ ಇವರಿಂದ ಭಜನಾ ಕಾರ್ಯಕ್ರಮ, ಸಂಜೆ ಗಂಟೆ 6ರಿಂದ ದೀಪಾರಾಧನೆ, ಸಂಜೆ ಗಂಟೆ 6.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಸಂಜೆ ಗಂಟೆ 8 ರಿಂದ ಶಶಿಕಾಂತ್ ಶೆಟ್ಟಿ ಕಾರ್ಕಳ ಸಂಯೋಜನೆಯಲ್ಲಿ ಬಡಗುತಿಟ್ಟಿನ ಸುಪ್ರಸಿದ್ಧ ಕಲಾವಿದರ ಯಕ್ಷಗಾನ ಪ್ರಸಂಗ 'ಶ್ರೀ ಕೃಷ್ಣ ಪಾರಿಜಾತ', ರಾತ್ರಿ ಗಂಟೆ 10ಕ್ಕೆ ಹಾಲಿಟ್ಟು ಸೇವೆ, ಗಂಟೆ 10.30ಕ್ಕೆ ಮಂಡಲ ಪೂಜೆ, ಗಂಟೆ 11ಕ್ಕೆ : ನಾಗಮಂಡಲ ಸೇವೆ, ಗಂಟೆ 2:30ಕ್ಕೆ ಪ್ರಸಾದ ವಿತರಣೆ ನಡೆಯಲಿದೆ. ಆ ಪ್ರಯುಕ್ತ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಗೂ ಮಹಾಅನ್ನಸಂತರ್ಪಣೆಯಲ್ಲಿಯೂ ಸರ್ವರು ಪಾಲ್ಗೊಳ್ಳಬೇಕೆಂದು ಶ್ರೀಮತಿ ಗುಲಾಬಿ ಬಿ. ಶೆಟ್ಟಿ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರು ಇರ್ಮಾಡಿ ಶೆಟ್ಟಿಬೆಟ್ಟು ಹಾವಂಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ನಾಗಮಂಡಲದ ನೇರಪ್ರಸಾರ ನಮ್ಮಉಡುಪಿ ಟಿವಿ ಫೇಸ್ಬುಕ್ ಹಾಗೂ ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರಗೊಳ್ಳಲಿದೆ.
ಕಾಪು : ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ಐವರು ವಶಕ್ಕೆ
Posted On: 22 Mar 2023, 07:55 PM
ಕಾಪು : ಇಲ್ಲಿನ ಪಡು ಗ್ರಾಮದ ಬಬ್ಬುಸ್ವಾಮಿ ದೈವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ಐದು ಜನರನ್ನು, ನಗದು ಸಹಿತ ಇತರೆ ವಸ್ತುಗಳನ್ನು ಕಾಪು ಪೋಲಿಸರು ವಶಪಡಿಸಿಕೊಂಡ ಘಟನೆ ಮಾಚ್೯ 22 ರಂದು ನಡೆದಿದೆ. ಕಾಪು ಮಾರಿಗುಡಿ ಬಂದೋಬಸ್ತ್ ಪ್ರಯುಕ್ತ ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕರು ರೌಂಡ್ಸ್ ನಲ್ಲಿರುವ ಸಂದರ್ಭ ಬೆಳಿಗ್ಗೆ ಪಡು ಗ್ರಾಮದ ಕಾಪು ಬಬ್ಬುಸ್ವಾಮಿ ದೈವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗರಗರ ಮಂಡಲ ಜೂಜಾಟ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ತೌಸಿಫ್, ದೀಪಕ್, ಶ್ರೀನಿವಾಸ, ಆದರ್ಶ್, ಮಂಜುನಾಥ ಎಂಬವವರನ್ನು ವಶಕ್ಕೆ ಪಡೆದು, ಜೂಜಾಟಕ್ಕೆ ಬಳಸಿದ ನಗದು, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ : ಪಡುಬಿದ್ರಿ ಚೆಂಡಿಗೆ ಚಾಲನೆ
Posted On: 22 Mar 2023, 05:05 PM
ಪಡುಬಿದ್ರಿ : ಇತಿಹಾಸ ಪ್ರಸಿದ್ದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಾ. 22ರಂದು ಚೆಂಡಿಗೆ ಚಾಲನೆ ನೀಡಲಾಯಿತು. ದೇವಳದ ಅರ್ಚಕರಾದ ವೈ ಗುರುರಾಜ ಭಟ್ ರವರ ಪ್ರಾರ್ಥನೆಯೊಂದಿಗೆ ಚೆಂಡಿನ ಸೇವಾಕರ್ತರಾದ ಶರತ್ ಪೂಜಾರಿಯವರು ಬಗ್ಗೆಡಿ ಗುತ್ತಿನಾರ್ ಮತ್ತು ನಡ್ಸಾಲು ಗುತ್ತಿನಾರುಗಳಿಗೆ ಹಸ್ತಾಂತರಿಸಿ ಅವರು ಚೆಂಡನ್ನು ದೇವಳದ ಮುಂಭಾಗದ ವಠಾರಕ್ಕೆ ಎಸೆಯುವ ಮೂಲಕ ಚಾಲನೆ ನೀಡಲಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಊರಿನ ಹಿರಿಯರು, ಕಿರಿಯರು ಚೆಂಡು ಆಡುವ ಮೂಲಕ ಸಂಭ್ರಮಿಸಿದರು. ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್ ಮತ್ತು ಪಿ. ಭವಾನಿಶಂಕರ ಹೆಗ್ಡೆ, ಬಗ್ಗೆಡಿ ಗುತ್ತಿನಾರ್ ಶೇಖರ ಶೆಟ್ಟಿ, ನಡ್ಸಾಲು ಗುತ್ತಿನಾರ್ ಶ್ರೀನಾಥ ಹೆಗ್ಗಡೆ, ದೇವಸ್ಥಾನದ ಅರ್ಚಕರಾದ ವೈ. ಗುರುರಾಜ ಭಟ್, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಭಕ್ತರು ಉಪಸ್ಥಿತರಿದ್ದರು.
ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥಾರೋಹಣ ಸಂಪನ್ನ
Posted On: 22 Mar 2023, 10:38 AM
ಪಡುಬಿದ್ರಿ : ಇತಿಹಾಸ ಪ್ರಸಿದ್ದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವದ ಪ್ರಯುಕ್ತ ಮಾ. 21ರಂದು ಮಧ್ಯಾಹ್ನ ರಥಾರೋಹಣ ಮತ್ತು ರಾತ್ರಿ ಶ್ರೀಮನ್ಮಹಾರಥೋತ್ಸವ ಸಂಪನ್ನಗೊಂಡಿತು. ವರ್ಷಾವಧಿ ಉತ್ಸವದ ಧಾರ್ಮಿಕ ವಿಧಿವಿಧಾನಗಳು ಶ್ರೀ ಕ್ಷೇತ್ರದ ತಂತ್ರಿಗಳಾದ ವೇದ ಮೂರ್ತಿ ಕಂಬ್ಳಕಟ್ಟ ಶ್ರೀ ಶಿವರಾಜ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಜರಗಿದವು. ನಿತ್ಯಪೂಜೆ, ನಿತ್ಯಬಲಿ, ಪಲ್ಲಪೂಜೆ, ರಥಶುದ್ಧಿಗಳ ಬಳಿಕ ರಥಾರೋಹಣ ನಡೆಯಿತು. ಮಧ್ಯಾಹ್ನ ಸಹಸ್ರಾರು ಮಂದಿ ಅನ್ನಪ್ರಸಾದವನ್ನು ಸ್ವೀಕರಿಸಿದರು. ರಾತ್ರಿ ಶ್ರೀಮನ್ಮಹಾರಥೋತ್ಸವ, ಭೂತಬಲಿ, ಕವಾಟಬಂಧನ ಇತ್ಯಾದಿಗಳು ನೆರವೇರಿದವು. ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್ ಮತ್ತು ಪಿ. ಭವಾನಿಶಂಕರ ಹೆಗ್ಡೆ ಹಾಗೂ ದೇವಸ್ಥಾನದ ಅರ್ಚಕರಾದ ಎಚ್. ಪದ್ಮನಾಭ ಭಟ್, ವೈ. ಗುರುರಾಜ ಭಟ್, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಭಕ್ತರು ಉಪಸ್ಥಿತರಿದ್ದರು.
ಇಂದು ಮತ್ತು ನಾಳೆ : ಕಾಪುವಿನ ಮೂರು ಮಾರಿಗುಡಿಗಳಲ್ಲಿ ಮಾರಿಪೂಜೆಯ ಸಂಭ್ರಮ
Posted On: 21 Mar 2023, 03:15 PM
ಕಾಪು : ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಾಪು ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನದಲ್ಲಿ ಜರಗುವ ಕಾಲಾವಧಿ ಸುಗ್ಗಿ ಮಾರಿಪೂಜೆಯು ಈ ಬಾರಿ ಮಾಚ್೯ 21 ಮತ್ತು 22ರಂದು ನಡೆಯಲಿದೆ. ಈ ನಿಮಿತ್ತ ಮಂಗಳವಾರ ಸಂಜೆ ಪ್ರಾರಂಭಗೊಂಡು ಬುಧವಾರ ಸಂಜೆಯವರೆಗೆ ಎರಡು ದಿನಗಳ ಕಾಲ ಜರಗುವ ಮಾರಿಪೂಜೆಯ ಸಂದರ್ಭದಲ್ಲಿ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಕಾಲಾವಧಿ ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಮಂಗಳವಾರ ರಾತ್ರಿ ಶ್ರೀ ಹಳೇ ಮಾರಿಯಮ್ಮನ ಸನ್ನಿಧಿಗೆ ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಹೊಸ ಮಾರಿಗುಡಿ ಮತ್ತು ಶ್ರೀ ಮೂರನೇಮಾರಿಗುಡಿಯ ಮಾರಿಯಮ್ಮನ ಸನ್ನಿಧಿಗೆ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ಮಾರಿಯಮ್ಮ ದೇವಿಯ ಸ್ವರ್ಣಾಭರಣಗಳನ್ನು ತಂದು, ಗದ್ದುಗೆಯಲ್ಲಿ ಮಾರಿಯಮ್ಮ ದೇವಿಯ ಬಿಂಬವನ್ನು ಪ್ರತಿಷ್ಠಾಪಿಸಿ ಅಲಂಕರಿಸಿ ಮಾರಿಪೂಜೆ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಅಲಂಕಾರದ ಬಳಿಕ ರಾತ್ರಿ ದರ್ಶನ ಸೇವೆ ನಡೆದು, ಸಂಪ್ರದಾಯದಂತೆ ಭಕ್ತರಿಂದ ವಿವಿಧ ಹರಕೆಗಳು ಸಮರ್ಪಣೆಗೊಳ್ಳುತ್ತದೆ. ಭಕ್ತರು ದೇವಿಯ ಗಣಗಳಿಗೆ ರಕ್ತಾಹಾರದ ಸೇವೆಯನ್ನು ಸಮರ್ಪಿಸುವ ಮೂಲಕ ತಮ್ಮ ನಂಬಿಕೆಯನ್ನು ಅನಾವರಣಗೊಳಿಸುತ್ತಾರೆ. ಬುಧವಾರ ಸಂಜೆ ಮೂರೂ ಮಾರಿಗುಡಿಗಳಲ್ಲಿಯೂ ಮಾರಿಯಮ್ಮ ದೇವಿಯ ದರ್ಶನ ಸೇವೆ ನಡೆದು ದರ್ಶನಾವೇಶದೊಂದಿಗೆ ಮಾರಿಯಮ್ಮ ದೇವಿಯನ್ನು ಗದ್ದುಗೆಯಿಂದ ಕೆಳಗಿಳಿಸಲಾಗುತ್ತದೆ. ಗದ್ದುಗೆಯಿಂದ ಕೆಳಗಿಳಿಸಿದ ಬಿಂಬವನ್ನು ಮಲ್ಲಾರಿನ ನಿರ್ದಿಷ್ಟ ಪ್ರದೇಶಕ್ಕೆ ಕೊಂಡೊಯ್ದು ವಿಸರ್ಜಿಸುವ ಮೂಲಕ ಮಾರಿಪೂಜಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.
ಪಡುಬಿದ್ರಿ : ರಥೋತ್ಸವದ ಅಂಗವಾಗಿ ತುಳುನಾಡ ಕಲಾವಿದರು ವತಿಯಿಂದ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನ
Posted On: 19 Mar 2023, 09:48 PM
ಪಡುಬಿದ್ರಿ : ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವ ಪಡುಬಿದ್ರಿಯ ತುಳುನಾಡ ಕಲಾವಿದರು ಸಂಘಟನೆಯ ಕಾರ್ಯ ಶ್ಲಾಘನೀಯ. ಪಡುಬಿದ್ರಿ ಭಾಗದಲ್ಲಿ ಕಲಾವಿದರಿಗೆ ಕೊರತೆಯಿಲ್ಲ. ಹಲವಾರು ಪ್ರತಿಭೆಗಳಿವೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸೊಸೈಟಿಯ ಅಧ್ಯಕ್ಷರಾದ ವೈ, ಸುಧೀರ್ ಕುಮಾರ್ ಹೇಳಿದರು. ಅವರು ಮಾಚ್೯ 18 ರಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ರಥೋತ್ಸವದ ಅಂಗವಾಗಿ ತುಳುನಾಡ ಕಲಾವಿದರು ಪಡುಬಿದ್ರಿ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಮುನ್ನ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವರ್ಷದಿಂದ ವರ್ಷಕ್ಕೆ ಜನರಿಗೆ ಉತ್ತಮವಾದಂತಹ ಮನೋರಂಜಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಹೀಗೆಯೇ ಮುಂದುರಿಯಲಿ ಎಂದರು. ಕನ್ನಂಗಾರು ಬ್ರಹ್ಮ ಬೈದರ್ಕಳ ಗರಡಿಯ ಅರ್ಚಕರಾದ ಗಿರಿಧರ ಅಂಚನ್, ಬೆಂಗಳೂರಿನ ಯುವ ಉದ್ಯಮಿ ವಿಶ್ವಾಸ್ ವಿ ಅಮೀನ್, ಪಾದೆಬೆಟ್ಟು ಸುಬ್ರಹ್ಮಣ್ಯ ಯುವಕ ಮಂಡಲದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರೋಟರಿ ಕ್ಲಬ್ ಪಡುಬಿದ್ರಿಯ ಪೂರ್ವಾಧ್ಯಕ್ಷರಾದ ಕೃಷ್ಣ ಬಂಗೇರ ಸಂದರ್ಭೋಚಿತವಾಗಿ ಮಾತನಾಡಿದರು. ಸನ್ಮಾನ : ಸಮಾಜ ಸೇವಕ ಕೃಷ್ಣ ಬಂಗೇರ, ಕಲಾ ಪೋಷಕಿ ಗೀತಾ ಅರುಣ್, ಸಾಂಸ್ಕೃತಿಕ ರಂಗದ ಯುವ ಪ್ರತಿಭೆ ವೈಷ್ಣವಿ ರಾವ್ ನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈ. ಸುಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ವಲಯ 5ರ ಪೂರ್ವ ಸಹಾಯಕ ಗವರ್ನರ್ ಗಣೇಶ್ ಆಚಾರ್ಯ ಉಚ್ಚಿಲ, ಪಡುಬಿದ್ರಿಯ ಯುವ ಉದ್ಯಮಿ ಸುನಿಲ್ ಕುಮಾರ್, ಪಡುಬಿದ್ರಿ ರೋಟರಿ ಅಧ್ಯಕ್ಷೆ ಗೀತಾ ಅರುಣ್ ಉಪಸ್ಥಿತರಿದ್ದರು. ತುಳುನಾಡ ಕಲಾವಿದರು ಅಧ್ಯಕ್ಷ ವೈ ಸುಕುಮಾರ್ ಸ್ವಾಗತಿಸಿ, ಪ್ರಸ್ತಾವಿಸಿದರು. ಕಾರ್ಯಕ್ರಮವನ್ನು ಯಶೋದ, ರಾಜೇಶ್ ಶೇರಿಗಾರ್, ಸಂತೋಷ್ ನಿರ್ವಹಿಸಿದರು. ಸ್ಥಾಪಕ ಅಧ್ಯಕ್ಷ ರವೀನ್ ಪಡುಬಿದ್ರಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ : ಓಂಕಾರ್ ಕಲಾ ಸಂಗಮ ಇವರಿಂದ ನೃತ್ಯ ವೈಭವ, ತುಳುನಾಡ ಕಲಾವಿದರಿಂದ ಕಿರು ನಾಟಕ ಪರಮ್ ವೀರ್, ವೈಷ್ಣವಿ ಕಲಾವಿದೆರ್ ಕೊಯಿಲ ಮಂಗಳೂರು ವತಿಯಿಂದ ಕುಸೆಲ್ದ ಗೌಜಿ ಹಾಸ್ಯಮಯ ಕಾರ್ಯಕ್ರಮ ಜರಗಿತು.
ಉಡುಪಿ : ಮತದಾನ ಜಾಗೃತಿ - ಕಿರುಚಿತ್ರ ಸ್ಪರ್ಧೆ ವಿಜೇತರು
Posted On: 19 Mar 2023, 05:44 PM
ಉಡುಪಿ : ಕರ್ನಾಟಕ ವಿಧಾನಸಭಾ ಚುನಾವಣೆ-2023 ರ ಅಂಗವಾಗಿ ಸಾರ್ವಜನಿಕರಿಗೆ ಏರ್ಪಡಿಸಲಾಗಿದ್ದ ಮತದಾನ ಜಾಗೃತಿ ಕಿರುಚಿತ್ರ ನಿರ್ಮಾಣ ಸ್ಪರ್ಧೆಯಲ್ಲಿ ಮೊದಲ ಐದು ಸ್ಥಾನ ಪಡೆದ ಸ್ಪರ್ಧೆಯ ವಿಜೇತರ ವಿವರ ಈ ಕೆಳಗಿನಂತಿದೆ. ಸಾಧನಾ ಕಟಪಾಡಿ ಅವರ ನನ್ನ ಮತ ನನ್ನ ಹೆಮ್ಮೆ ಕಿರು ಚಿತ್ರವು ಪ್ರಥಮ ಸ್ಥಾನ ಪಡೆದಿದ್ದು, 10,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ, ಆದಿತ್ಯ ಅಂಬಲಪಾಡಿ ಅವರ ಓಟು=02 ಕಿರುಚಿತ್ರಕ್ಕೆ ದ್ವಿತೀಯ ಸ್ಥಾನ ಲಭಿಸಿದ್ದು, 7,500 ರೂ. ನಗದು ಹಾಗೂ ಪ್ರಶಸ್ತಿ ಪತ್ರ, ಕೆ. ಸತ್ಯೇಂದ್ರ ಪೈ ಅವರ ಮತದಾರ ಕಿರುಚಿತ್ರವು ತೃತೀಯ ಸ್ಥಾನ ಪಡೆದಿದ್ದು, 5,000 ರೂ ನಗದು ಹಾಗೂ ಪ್ರಶಸ್ತಿ ಪತ್ರ, ಸುಚಿತ್ರ ಎಸ್ ಅವರ ಮತ ಸಂಭ್ರಮ ಕಿರು ಚಿತ್ರಕ್ಕೆ ನಾಲ್ಕನೇ ಸ್ಥಾನ ಲಭಿಸಿದ್ದು, 2,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಸತೀಶ್ ಕಲ್ಯಾಣಪುರ ಅವರ ನಮ್ಮ ಓಟು ನಮ್ಮ ಪವರ್ ಕಿರು ಚಿತ್ರವು ಐದನೇ ಸ್ಥಾನ ಪಡೆದಿದ್ದು, 1,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ ಪಡೆದಿರುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಪಡುಬೆಳ್ಳೆ ಘಟಕ - ಗೋಗ್ರಾಸ ಸಮರ್ಪಣೆ
Posted On: 19 Mar 2023, 02:51 PM
ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಪಡುಬೆಳ್ಳೆ ಘಟಕದ ನೇತೃತ್ವದಲ್ಲಿ ನೀಲಾವರ ಗೋಶಾಲೆಗಾಗಿ ಗೋಗ್ರಾಸ ಇಂದು ನೀಡಲಾಯಿತು. ಈ ಪ್ರಯುಕ್ತ ಪಡುಬೆಳ್ಳೆ ದೊಡ್ಡಮನೆಯ ಗದ್ದೆಯಲ್ಲಿ ಬಿತ್ತನೆ ಮಾಡಿದ್ದ ಜೋಳದ ಬೆಳೆಯನ್ನು ಇಂದು ಕಟಾವು ಮಾಡಿ ಗೋಶಾಲೆಗೆ ಸಮರ್ಪಿಸಲಾಯಿತು.
ಕಾಪು : ಬಜರಂಗದಳದ ಸೇವಾ ಸಪ್ತಾಹ ಅಂಗವಾಗಿ ಶಿರ್ವ ಮತ್ತು ಪಾಂಗಾಳ ಘಟಕಗಳಿಂದ ಹಿಂದೂ ರುಧ್ರಭೂಮಿಯ ಸ್ವಚ್ಛತಾ ಕಾರ್ಯ
Posted On: 19 Mar 2023, 02:45 PM
ಕಾಪು : ಬಜರಂಗದಳದ ಸೇವಾ ಸಪ್ತಾಹ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಶಿರ್ವ ವಿಷ್ಣುಮೂರ್ತಿ ಘಟಕ ಮತ್ತು ಪಾಂಗಾಳ ಘಟಕ ವತಿಯಿಂದ ಸಾಮಾಜಿಕ ಕಾರ್ಯಗಳು ಇಂದು ಜರಗಿತು. ಶಿರ್ವ ವಿಷ್ಣುಮೂರ್ತಿ ಘಟಕ ವತಿಯಿಂದ ಶಿರ್ವ ಹಿಂದೂ ರುದ್ರಭೂಮಿ ಮತ್ತು ಪಾಂಗಾಳ ಘಟಕ ವತಿಯಿಂದ ಪಾಂಗಾಳ ಗಾಂಧಿನಗರದ ಹಿಂದೂ ರುಧ್ರಭೂಮಿಯ ಸ್ವಚ್ಛತಾ ಕಾರ್ಯ ನಡೆಯಿತು.
