Updated News From Kaup

ಕಾರ್ಕಳ : ನೆತ್ತೆರ್ ಉಂಬೊಲಿ - ರಕ್ತದಾನ ಶಿಬಿರ

Posted On: 06-12-2022 05:48PM

ಕಾರ್ಕಳ : ಜೈ ತುಳುನಾಡ್(ರಿ.) ಮುಂದಾಳತ್ವದಲ್ಲಿ ರಕ್ತನಿಧಿ, ಜಿಲ್ಲಾಸ್ಪತ್ರೆ, ಉಡುಪಿ ಮತ್ತು ಹಲವು ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಕಳದ ರೋಟರಿ ಬಾಲಭವನದಲ್ಲಿ 'ನೆತ್ತೆರ್ ಉಂಬೊಲಿ' ರಕ್ತದಾನ ಶಿಬಿರ ಡಿಸೆಂಬರ್ 4 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಯೋಗದೀಪಿಕ ವಿದ್ಯಾಪೀಠ, ಪಲಿಮಾರು ಇಲ್ಲಿನ ಪ್ರಾಂಶುಪಾಲರೂ, ಕಾರ್ಕಳದ ಶ್ರೀ ಅನಂತಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಕಾ. ವೇ. ಶಂಕರನಾರಾಯಣ ಭಟ್ ಮಾತನಾಡಿ ಭಾಷೆ ಮತ್ತು ಲಿಪಿ ಎರಡನ್ನೂ ಹೊಂದಿರುವ ಭಾಷೆಗಳಲ್ಲಿ ತುಳು ಒಂದಾಗಿದ್ದು, ಅದರ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಎಲ್ಲಾ ತುಳುವರು ಈ ಬಗ್ಗೆ ಹೆಮ್ಮೆ ಪಡಬೇಕು. ಮುನ್ನೂರು ವರ್ಷಗಳ ಹಿಂದಕ್ಕೆ ಉಡುಪಿ, ಮಂಗಳೂರು, ಕಾಸರಗೋಡು ಮತ್ತು ಉತ್ತರ ಕನ್ನಡದ ಕೆಲ ಪ್ರದೇಶಗಳಲ್ಲಿ ಭಾಷೆ ಎಂದರೆ ತುಳು, ಲಿಪಿ ಎಂದರೆ ತುಳು ಲಿಪಿ ಎಂದಾಗಿತ್ತು. ತುಳುನಾಡಿನ ಎಲ್ಲಾ ದೇವಸ್ಥಾನಗಳಲ್ಲಿಯೂ ಪೂಜಾ ಕೈಂಕರ್ಯಗಳ ವಿದ್ಯಾಭ್ಯಾಸವನ್ನು ಪಡೆಯುವವರು ತುಳು ಲಿಪಿಯನ್ನು ಕಲಿಯಬೇಕಾಗಿತ್ತು ಮತ್ತು ಅದನ್ನು ಪ್ರತಿದಿನ ದೇವಸ್ಥಾನಗಳಲ್ಲಿ ಬಳಸಬೇಕಾಗಿತ್ತು, ಈಗಲೂ ಈ ಪದ್ಧತಿ ಬಹಳಷ್ಟು ಕಡೆ ಚಾಲ್ತಿಯಲ್ಲಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು ಮತ್ತು ಆಳುಪ ವಂಶಸ್ಥರಾದ ಡಾ. ಆಕಾಶ್ ರಾಜ್ ಜೈನ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಆದಾಯವನ್ನು ತಂದುಕೊಡುವಂತಹ ಜಿಲ್ಲೆಗಳಲ್ಲಿ ತುಳುನಾಡಿನ ಜಿಲ್ಲೆಗಳು ಅಗ್ರಸ್ಥಾನದಲ್ಲಿವೆ. ನಮ್ಮಲ್ಲಿ ಭೂಮಾರ್ಗ, ಜಲಮಾರ್ಗ ವಾಯುಮಾರ್ಗದಂತಹ ಎಲ್ಲಾ ಸೌಕರ್ಯಗಳು ಇವೆ. ಬ್ರಿಟಿಷರ ಕಾಲದಲ್ಲಿ ಅತ್ಯಂತ ಉದ್ದದ ಭಾರತದ ರೈಲ್ವೆ ಮಾರ್ಗವನ್ನು ತುಳುನಾಡು ಹೊಂದಿತ್ತು. ಇಷ್ಟೆಲ್ಲ ಇದ್ದರೂ ಇಲ್ಲಿನ ನೆಲದ ಭಾಷೆಯಾದ ತುಳುವಿಗೆ ಕರ್ನಾಟಕ ರಾಜ್ಯದಲ್ಲಿ ಇನ್ನೂ ಕೂಡ ಆಡಳಿತ ಭಾಷಾ ಸ್ಥಾನಮಾನ ಸಿಗದಿರುವುದು ಬೇಸರದ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ಅವರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವ 20 ವರ್ಷಗಳ ಹಿಂದೆಯೇ ತುಳುನಾಡಿನಲ್ಲಿ ನಡೆದಂತಹ ಅಮರ ಸುಳ್ಯ ಕ್ರಾಂತಿಯನ್ನು ಪ್ರಸ್ತಾಪಿಸಿ ತುಳುನಾಡಿನ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಸಭೆಗೆ ನೆನಪಿಸಿದರು. ಜೈ ತುಲುನಾಡ್(ರಿ.) ಸಂಘಟನೆಯ ಅಧ್ಯಕ್ಷರಾದಂತಹ ಅಶ್ವಥ್ ತುಳುವೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ರಕ್ತ ನಿಧಿ ಜಿಲ್ಲಾಸ್ಪತ್ರೆ, ಉಡುಪಿ ಇದರ ವೈದ್ಯಾಧಿಕಾರಿ ಆದಂತಹ ಡಾ. ವೀಣಾ ಕುಮಾರಿ ಮುಖ್ಯ ಅತಿಥಿಗಳಾಗಿ ಜೊತೆಯಲ್ಲಿದ್ದರು. ಕಾರ್ಯಕ್ರಮದ ಸಹಭಾಗಿತ್ವವನ್ನು ವಹಿಸಿಕೊಂಡ ಸಂಘ ಸಂಸ್ಥೆಗಳಾದ ಜಿ.ಎಸ್.ಬಿ ಹಿತರಕ್ಷಣಾ ವೇದಿಕೆ ಕಾರ್ಕಳ ಇದರ ಸಂಚಾಲಕರಾದ ಆರ್ ವಿವೇಕಾನಂದ ಶೆಣೈ, ಎಚ್.ಡಿ.ಎಫ್.ಸಿ ಬ್ಯಾಂಕ್ ಲಿ. ಮಂಗಳೂರು ಇದರ ಸಹ ವ್ಯವಸ್ಥಾಪಕ ನಿತೇಶ್ ಕುಮಾರ್, ಯುವ ವಾಹಿನಿ (ರಿ.) ಕಾರ್ಕಳ ಘಟಕದ ಅಧ್ಯಕ್ಷರು ತಾರಾನಾಥ ಕೋಟ್ಯಾನ್, ಸೌಹಾರ್ದ ಫ್ರೆಂಡ್ಸ್ ಕ್ಲಬ್ ಜಾರ್ಕಳ-ಮುಂಡ್ಲಿ ಇದರ ಅಧ್ಯಕ್ಷರಾದ ಪ್ರಜ್ವಲ್ ಜೈನ್, ಅಮ್ಮಾಸ್ ಸ್ಪೋರ್ಟ್ಸ್ & ಗಿಫ್ಟ್ಸ್ ಕಾರ್ಕಳ ಇದರ ಮಾಲಕ ಸುಧೀರ್ ಪೂಜಾರಿ, ಗೆಳೆಯರ ಬಳಗ ನೆಲ್ಲಿಗುಡ್ಡೆ ಬಜಗೋಳಿ ಅಧ್ಯಕ್ಷರು ಸುರೇಶ್ ಸಾಲಿಯಾನ್, ಛತ್ರಪತಿ ಶಿವಾಜಿ ಮಹಾರಾಜ್ ಬಳಗ ಕಾಂತರಗೋಳಿ ಇದರ ಅಧ್ಯಕ್ಷರಾದ ಸತೀಶ್ ಪೂಜಾರಿ ಕಾಂತರಗೋಳಿ ವೇದಿಕೆಯಲ್ಲಿದ್ದರು.

ಪ್ರಧಾನ ಕಾರ್ಯದರ್ಶಿಗಳಾದ ಅವಿನಾಶ್ ಮುಕ್ಕ, ಸಂಘಟನಾ ಕಾರ್ಯದರ್ಶಿ ಸದಾಶಿವ ಮುದ್ರಾಡಿ, ಸಹ ಸಂಘಟನಾ ಕಾರ್ಯದರ್ಶಿ ಪೃಥ್ವಿ ತುಲುವೆ, ಕೇಂದ್ರ ಸಮಿತಿಯ ಗೀತಾ ಲಕ್ಷ್ಮೀಶ್, ವಿನಯ್ ರೈ, ಸಂಘಟನೆಯ ಸದಸ್ಯರು ಮತ್ತು ರಕ್ತ ನಿಧಿ ಜಿಲ್ಲಾ ಆಸ್ಪತ್ರೆ, ಉಡುಪಿ ಇದರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ವಿವಿಧ ಸಂಸ್ಥೆಗಳ 60ಕ್ಕೂ ಹೆಚ್ಚು ಸದಸ್ಯರು ರಕ್ತದಾನ ಮಾಡುವ ಮೂಲಕ ಶಿಬಿರದಲ್ಲಿ ಪಾಲ್ಗೊಂಡರು.

ಆತ್ಮ ಕೆ. ತುಳುನಾಡಗೀತೆ ಹಾಡುವ ಮೂಲಕ ಪ್ರಾರ್ಥಿಸಿದರು. ಜೈ ತುಲುನಾಡ್ (ರಿ.) ಸಂಘಟನೆಯ ಜೊತೆ ಕಾರ್ಯದರ್ಶಿ ರಾಜೇಶ್ ತುಲುವೆ ಉಪ್ಪೂರು ಸ್ವಾಗತಿಸಿದರು. ಸ್ವರಾಜ್ ಶೆಟ್ಟಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ವಿಶು ಶ್ರೀಕೇರ ವಂದಿಸಿದರು.

ಮುಂಡ್ಕೂರಿನ ಕುಲಾಲ ಸಂಘದಲ್ಲಿ ಕುಲಾಲ ಕ್ರೀಡಾಕೂಟ ಸಮಾಪನ

Posted On: 06-12-2022 05:37PM

ಮುಂಡ್ಕೂರು : ಕುಲಾಲ ಸಂಘ (ರಿ.) ನಾನಿಲ್ತಾರ್ ಮುಂಡ್ಕೂರು ಇದರ ಯುವ ವೇದಿಕೆ ಆಶ್ರಯದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾದ ದಿ. ಸುಂದರ ಮೂಲ್ಯ ಕ್ರೀಡಾಂಗಣದಲ್ಲಿ ಕುಲಾಲ ಬಾಂಧವರಿಗಾಗಿ ಕುಲಾಲ ಕ್ರೀಡಾಕೂಟ ಅಯೋಜಿಸಲಾಗಿತ್ತು.

ಸಂಘದ ಅಧ್ಯಕ್ಷ ಕುಶ ಆರ್ ಮೂಲ್ಯ ಅಧ್ಯಕ್ಷತೆಯಲ್ಲಿ ಕುತ್ಯಾರುವಿನ ಖ್ಯಾತ ನ್ಯಾಯವಾದಿ ಜಗದೀಶ್ ಮೂಲ್ಯ ಉದ್ಘಾಟಿಸಿದರು.

ಸಂಘದ ಅಧ್ಯಕ್ಷ ಕುಶ ಆರ್ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಲವ ಆರ್ ಮೂಲ್ಯ ಇನ್ನ, ಸದಾನಂದ ಮೂಲ್ಯ ಕುವೈಟ್, ಸಂಘದ ಉಪಾಧ್ಯಕ್ಷರಾದ ಬೊಗ್ಗು ಮೂಲ್ಯ ಬೇಲಾಡಿ, ಜಯರಾಮ ಕುಲಾಲ್, ಸಂಘದ ಮಾಜಿ ಅಧ್ಯಕ್ಷರಾದ ಮಂಜಪ್ಪ ಮೂಲ್ಯ, ಗುತ್ತಿಗೆದಾರರಾದ ಬೊಗ್ಗು ಮೂಲ್ಯ ಬೆಳ್ಮಣ್, ಬಿ ವಾರಿಜ, ಮಹಿಳಾ ಘಟಕದ ಅಧ್ಯಕ್ಷೆ ಪ್ರತಿಮಾ, ಯುವ ವೇದಿಕೆ ಅಧ್ಯಕ್ಷರಾದ ದೀಪಕ್ ಕುಲಾಲ್ ಬೆಳ್ಮಣ್, ಕಾರ್ಯದರ್ಶಿ ಸಂತೋಷ್, ಉಪಾಧ್ಯಕ್ಷ ಗಿರೀಶ್ ಬೆಳ್ಮಣ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ದಿನೇಶ್ ಕುಲಾಲ್ ಸ್ವಾಗತಿಸಿದರು. ಆಶಾ ವರದರಾಜ್ , ಕುಮಾರಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಶ್ರೀಕಾಂತ್ ಕುಲಾಲ್ ವಂದಿಸಿದರು.

ಕಾರ್ಕಳ : ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ಪಾಲಕರ-ಶಿಕ್ಷಕರ ಸಭೆ

Posted On: 05-12-2022 10:15PM

ಕಾರ್ಕಳ : ಇಲ್ಲಿನ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ 2022-23 ನೇ ಸಾಲಿನ ಪಾಲಕರ-ಶಿಕ್ಷಕರ ಸಭೆ ದಿನಾಂಕ ಡಿಸೆಂಬರ್ 4 ರಂದು ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥಾಪಕರಾದ ಅಶ್ವತ್ ಎಸ್‌ ಎಲ್‌, ಕ್ರಿಯೇಟಿವ್‌ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ವಿವಿಧ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡಿ ತರಬೇತಿ ನೀಡಲಾಗುತ್ತಿದೆ. ಆಯಾ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ಅತ್ಯಂತ ಪಾರದರ್ಶಕವಾಗಿ ಪರಿಶೀಲಿಸಿ, ಲೋಪದೋಷಗಳನ್ನು ಪರಿಹರಿಸಲಾಗುತ್ತಿದೆ. ಮುಂಬರುವ NEET,CET, KVPY, NATA, NDA, IIT ಪರೀಕ್ಷೆಗಳಿಗೆ ನುರಿತ ಅನುಭವಿ ಪ್ರಾಧ್ಯಾಪಕರು ತರಬೇತಿ ನೀಡುತ್ತಿದ್ದು ವಿಶೇಷ ತರಗತಿಗಳನ್ನೂ ನಡೆಸಲಾಗುತ್ತಿದೆ. ಪಾಲಕರೂ ನಮ್ಮೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್‌ ಮಾತಾನಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ತೀವ್ರ ಪೈಪೋಟಿ ನೀಡಬೇಕಾಗಿದೆ. ಇರುವ ಅವಕಾಶ ಉಪಯೋಗಿಸಿಕೊಳ್ಳಲು ಕ್ರಿಯೇಟಿವ್‌ ವಿದ್ಯಾಸಂಸ್ಥೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿಯವರು ಪಾಲಕರಿಗೆ ಪ್ರಥಮ ಪಿಯುಸಿಯಿಂದ ಇಂದಿನವರೆಗೂ ನಡೆದ ವಿವಿಧ ಪರೀಕ್ಷೆಗಳ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ಸಂಸ್ಥಾಪಕರಾದ ಆದರ್ಶ ಎಂ ಕೆ, ಅಮೃತ್‌ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಹೆತ್ತವರನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥಾಪಕರಾದ ಗಣಪತಿ ಭಟ್‌ ಕೆ ಎಸ್‌ ಇಂದು ವಾಣಿಜ್ಯ ವಿಭಾಗದ CA, CS ಕ್ಷೇತ್ರಗಳಲ್ಲಿ ಅಪರಿಮಿತ ಅವಕಾಶಗಳಿವೆ. ನಮ್ಮ ಸಂಸ್ಥೆಯಿಂದ ಅನೇಕ ವಿದ್ಯಾರ್ಥಿಗಳು ಈಗಾಗಲೇ ವಿವಿಧ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದು, ವಿಶೇಷವಾಗಿ ತಜ್ಞ ಅಧ್ಯಾಪಕರನ್ನು ಕರೆಸಿ ಅವರಿಂದ ಪಾಠ, ಪ್ರವಚನ ಕೋಚಿಂಗ್‌ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಉಪನ್ಯಾಸಕರು ಸಭೆಯಲ್ಲಿ ಪಾಲ್ಗೊಂಡು ಪಾಲಕರೊಂದಿಗೆ ಸಮಾಲೋಚನೆ ನಡೆಸಿದರು. ಉಪನ್ಯಾಸಕರಾದ ಲೋಹಿತ್‌ ಎಸ್‌ ಕೆ, ವಿನಾಯಕ ಜೋಗ್‌, ಉಮೇಶ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪಡುಬಿದ್ರಿ : ರೋಟರಿ ಕ್ಲಬ್ ವತಿಯಿಂದ ಪರೀಕ್ಷಾ ಪೂರ್ವ ತಯಾರಿ ಸಿದ್ಧತೆ ; ವಿದ್ಯಾರ್ಥಿ ನಾಯಕತ್ವ - ಮಾಹಿತಿ ಕಾರ್ಯಕ್ರಮ

Posted On: 05-12-2022 09:38PM

ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ಇದರ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಸಿದ್ಧತೆ ಮತ್ತು ವಿದ್ಯಾರ್ಥಿ ನಾಯಕತ್ವದ ಬಗ್ಗೆ ಮಾಹಿತಿ ಕಾರ್ಯಕ್ರಮ ಸೋಮವಾರ ಗಣಪತಿ ಪ್ರೌಢ ಶಾಲೆ ಪಡುಬಿದ್ರಿ ಇಲ್ಲಿ ಜರಗಿತು.

ಸಂಪನ್ಮೂಲ ವ್ಯಕ್ತಿಯಾಗಿ ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಪುಷ್ಪರಾಣಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋ. ಗೀತಾ ಅರುಣ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ವಲಯ 5 ರ ಪೂರ್ವ ಸಹಾಯಕ ಗವರ್ನರ್ ರೋ. ಪಿ.ಎಚ್.ಎಫ್ ಗಣೇಶ್ ಆಚಾರ್ಯ ಉಚ್ಚಿಲ ರೋಟರಿ ವಲಯ 5 ರ ಕಾರ್ಯದರ್ಶಿ ರೋ. ಸಂತೋಷ್, ಪಡುಬಿದ್ರಿ ಗಣಪತಿ ಶಾಲೆಯ ಮುಖ್ಯೋಪಾಧ್ಯಾಯ ಗಣಪತಿ ಭಟ್, ರೋ. ತಸ್ನೀನ್ ಅರಾ, ರೋ.ಪುಷ್ಪಲತಾ ಗಂಗಾಧರ್, ರೋ. ‌ಪವನ್ ಸಾಲ್ಯಾನ್, ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ರಂಜಿತ್ ದೇವಾಡಿಗ, ಚಯರ್ ಮ್ಯಾನ್ ಶ್ರೀಶ ಭಟ್, ರೋ. ಮಹಮ್ಮದ್ ನಿಯಾಝ್, ರೋ. ಸುಧಾಕರ್ ಕೆ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು ರೋ. ಸಂತೋಷ್ ಪಡುಬಿದ್ರಿ ವಂದಿಸಿದರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿಶ್ವ ಕಂಪ್ಯೂಟರ್ ಸಾಕ್ಷರತೆ ದಿನಾಚರಣೆ

Posted On: 05-12-2022 06:41PM

ಶಿರ್ವ : ಪ್ರಸ್ತುತ ತಾಂತ್ರಿಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕಾರ್ಯಗಳು ಎಲ್ಲಾ ಕ್ಷೇತ್ರಗಳಲ್ಲಿ ಸುಲಭವಾಗಿ ನಡೆಯಲು ಮತ್ತು ಅತ್ಯಂತ ವೇಗವಾಗಿ ಪರಿಣಾಮಕಾರಿಯಾಗಿ ಮಾನವನ ಕೆಲಸವನ್ನು ಕಂಪ್ಯೂಟರ್ ಬಳಕೆಯಿಂದ ಸಾಗುತ್ತಿದೆ. ಇಂದಿನ ಯುವಕರಲ್ಲಿ ಕಲಿಕೆಯ ಜೊತೆಗೆ ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳುವ ಮೂಲಕ ಮುಂದೆ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ರೀತಿಯ ಬೆಳವಣಿಗೆ ಕಾಣಿಸಬಹುದು. ಕಲಿಕೆಗೆ ವಯಸ್ಸು ಮುಖ್ಯ ಅಲ್ಲ ಮನಸು ಮುಖ್ಯ ಎಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗ ಹಾಗೂ ಕಂಪ್ಯೂಟರ್ ಸಾಕ್ಷರತ ಕೋಶ ಜಂಟಿಯಾಗಿ ಏರ್ಪಡಿಸಿದ ವಿಶ್ವ ಕಂಪ್ಯೂಟರ್ ಸಾಕ್ಷರತೆ ದಿನಾಚರಣೆ ದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಕಚೇರಿ ದ್ವಿತೀಯ ದರ್ಜೆಯ ಸಹಾಯಕಿ ಜಾಕ್ಲೈನ್ ​​ಮೆಂಡೋನ್ಸಾ ರವರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ತಮ್ಮ ಅನುಭವವನ್ನು ವ್ಯಕ್ತಪಡಿಸಿದರು.

ಈ ದಿನದ ಪ್ರಯುಕ್ತ ಹಲವು ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ, ಮುಂದಿನ ಉದ್ಯೋಗ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ನಿರಂತರ ಕಂಪ್ಯೂಟರ್ ಕಲಿಕೆಯನ್ನು ವಿದ್ಯಾರ್ಥಿಗಳು ಕಾಲೇಜು ಹಂತಗಳಲ್ಲಿ ಅಭ್ಯಾಸನವನ್ನು ಮಾಡಬೇಕೆಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿದರು.

ಶೈಕ್ಷಣಿಕ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಕಲಿಕೆ ಇಂದಿನ ದಿನ ಅತ್ಯಂತ ಪ್ರಮುಖವಾಗಿದೆ.ಇದರ ಪ್ರಯುಕ್ತ ಕಾಲೇಜಿನಲ್ಲಿ ವಿಭಾಗದ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಬೇಸಿಕ್ ಮತ್ತು ಟ್ಯಾಲಿ ಕೋರ್ಸುಗಳ ತರಬೇತಿ ನೀಡಿ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಇದರ ಪ್ರಯೋಜನವನ್ನು ಪಡೆದುಕೊಂಡ ಮುಂದಿನ ಉದ್ಯೋಗ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಇಂಥ ಸರ್ಟಿಫಿಕೇಟ್ ಗಳು ವಿದ್ಯಾರ್ಥಿಗಳಿಗೆ ಸಹಾಯಕಾರಿ ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್ ಅವರು ಮಾತನಾಡಿದರು.

ದ್ವಿತೀಯ ಬಿಎ ವಿದ್ಯಾರ್ಥಿ ಪವನ್ ಕುಮಾರ್ ತಮ್ಮ ಕಂಪ್ಯೂಟರ್ ಕಲಿಕೆಯ ಜ್ಞಾನದ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿದರು . ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕಿ ಸಂಗೀತ ಪೂಜಾರಿ, ಪ್ರಿಯಾಂಕ, ಅಧ್ಯಾಪಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನುಕ್ ನಾಯಕ್ ಮತ್ತು ಅಲ್ಲಿಸ್ಟರ್ ಸುಜಾ ಡಿಸೋಜ ಕಾರ್ಯಕ್ರಮಕ್ಕೆ ಸಹಕರಿಸಿದರು. ಕಂಪ್ಯೂಟರ್ ಸಾಕ್ಷರತೆ ಕೋಶದ ರಕ್ಷಾ ಮತ್ತು ಬಳಗ ಪ್ರಾರ್ಥಿಸಿದರು. ಕಂಪ್ಯೂಟರ್ ಸಾಕ್ಷರತೆ ಕೋಶದ ಸಂಯೋಜಕಿ ದಿವ್ಯಶ್ರೀ ಸ್ವಾಗತಿಸಿದರು. ಆದಿತ್ಯ ಶೆಟ್ಟಿಗಾರ ಪ್ರಾಸ್ತವಿಕವಾಗಿ ಮಾತನಾಡಿದರು. ಶ್ರೇಯ ಸಫಲಿಗ ಕಾರ್ಯಕ್ರಮ ನಿರೂಪಿಸಿದರು. ಸೆಲ್ಮಾ ಪಿಂಟು ವಂದಿಸಿದರು.

ಕಾಪು ಶ್ರೀ ವೆಂಕಟರಮಣ ದೇವಾಲಯದಲ್ಲಿ ಮುಕ್ಕೋಟಿ ದ್ವಾದಶಿ ಸಂಭ್ರಮ

Posted On: 05-12-2022 10:33AM

ಕಾಪು : ಧನುರ್ಮಾಸದಲ್ಲಿ ಬರುವ ಶುದ್ಧ ದ್ವಾದಶಿಯಂದು ಮುಕ್ಕೋಟಿ ದ್ವಾದಶಿ ಆಚರಿಸುತ್ತಾರೆ. ಏಕಾದಶಿಯ ಮರು ದಿನ ದ್ವಾದಶಿ. ಮೂವತ್ತ್ಮೂರು ಕೋಟಿ ದೇವತೆಗಳು ಅಂದು ತಿರುಮಲದ ದೇವಾಲಯ ಪಕ್ಕದಲ್ಲಿರುವ ಸ್ವಾಮಿ ಪುಷ್ಕರಣಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಆದ್ದರಿಂದ ಮುಕ್ಕೋಟಿ ದ್ವಾದಶಿ ಎಂಬ ಹೆಸರಿದೆ. ಹಲವಾರು ದೇವಾಲಯಗಳಲ್ಲಿ ಇದನ್ನು ಆಚರಿಸುತ್ತಾರೆ.

ಇತಿಹಾಸ ಪ್ರಸಿದ್ಧ ಕಾಪು ಶ್ರೀ ವೆಂಕಟರಮಣ ದೇವಾಲಯದಲ್ಲಿ ಪ್ರಾಥಕಾಲದಲ್ಲಿ ಪಟ್ಟದೇವರ ಸಹಿತ ಪುಷ್ಕರಣಯಲ್ಲಿ ಜಳಕಗೈದು ಪಲ್ಲಕ್ಕಿಯಲ್ಲಿ ವಿರಾಜಮಾನರಾಗಿ ಹಗಲು ಉತ್ಸವ ಪೇಟೆಗೆ ಹೊರಡುವ ಮೂಲಕ ಅಲ್ಲಲ್ಲಿ ಮನೆಮಂದಿಗಳಿಂದ ಹಣ್ಣು ಕಾಯಿ ಸಹಿತ ಆರತಿ ಮಾಡಿ ಪೂಜೆ ಸಲ್ಲಿಸುತ್ತಾರೆ.

ಜಿ. ಜಗದೀಶ್ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ

Posted On: 04-12-2022 06:50PM

ಉಚ್ಚಿಲ : ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕರಾದ ಜಿ. ಜಗದೀಶ್ ಇಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರದರ್ಶನ ಪಡೆದರು.

ದ. ಕ. ಮೊಗವೀರ ಮಹಾಜನ ಸಂಘ ರಿ. ಉಚ್ಚಿಲ ಇದರ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ಅವರನ್ನು ಬರ ಮಾಡಿಕೊಂಡರು.

ಈ ಸಂಧರ್ಭದಲ್ಲಿ ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ, ಶಂಕರ್ ಸಾಲ್ಯಾನ್, ದಿನೇಶ್ ಮುಳೂರು, ರಾಘವೇಂದ್ರ ಸುವರ್ಣ ಬೈಕಾಡಿ, ವಿಷ್ಣುಮೂರ್ತಿ ಉಪಾಧ್ಯಾಯ, ಶೇಖರ್ ಪುತ್ರನ್, ಸತೀಶ್ ಅಮೀನ್ ಪಡುಕರೆ ಮುಂತಾದವರು ಉಪಸ್ಥಿತರಿದ್ದರು.

ಜನವರಿ 21 : ಮಟ್ಟಾರುವಿನಲ್ಲಿ ಹೊನಲು ಬೆಳಕಿನ ಒಬಿಸಿ ಕಮಲ ಟ್ರೋಫಿ - 2023

Posted On: 04-12-2022 11:49AM

ಕಾಪು : ಬಿಜೆಪಿ ಹಿಂದುಳಿದ ಮೋರ್ಚಾ ಕಾಪು ವಿಧಾನ ಸಭಾ ಕ್ಷೇತ್ರದ ವತಿಯಿಂದ ಜನವರಿ 21 ರಂದು ಶಿರ್ವದ ಮಟ್ಟಾರು ಇಲ್ಲಿ ಪಿನ್ ಕೊಡ್ ಮಾದರಿಯ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಲಿದೆ.

ಪ್ರಥಮ ಬಹುಮಾನ 25000 ನಗದು ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ 15000 ನಗದು ಹಾಗೂ ಶಾಶ್ವತ ಫಲಕ, ತೃತೀಯ ಬಹಮಾನ 10000 ಹಾಗೂ ಶಾಶ್ವತ ಫಲಕ ಜೊತೆಗೆ ಬೆಸ್ಟ್ ಅಟ್ಯಾಕರ್, ಬೆಸ್ಟ್ ಪಾಸರ್, ಬೆಸ್ಟ್ ಅಲ್ ರೌಂಡರ್, ಬೆಸ್ಟ್ ಲೀಬ್ರೋ ಪ್ರಶಸ್ತಿ ಒಳಗೊಂಡಿದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ಕಾಪು ಇದರ ಅಧ್ಯಕ್ಷರಾದ ಸಂತೋಷ್ ಕುಮಾರ್ ಮೂಡುಬೆಳ್ಳೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬಂಟಕಲ್ಲು : ನಾಗರಿಕ ಸೇವಾ ಸಮಿತಿಯಿಂದ ಅಂಚೆಯಣ್ಣನವರಿಗೆ ಅಭಿನಂದನೆ, ಬೀಳ್ಕೊಡುಗೆ

Posted On: 02-12-2022 03:36PM

ಬಂಟಕಲ್ಲು : ನಾಗರಿಕ ಸೇವಾ ಸಮಿತಿ ರಿ. ಬಂಟಕಲ್ಲು ಇವರ ಆಶ್ರಯದಲ್ಲಿ ಬಂಟಕಲ್ಲು ಅಂಚೆ ಕಛೇರಿಯಲ್ಲಿ ಸುಮಾರು 8 ವರ್ಷದಿಂದ ಪತ್ರ ಬಟಾವಾಡೆ ಮಾಡುತ್ತಿದ್ದ ಅಂಚೆಯಣ್ಣ ಚಿತ್ರಕಲಿ ಹಾಗೂ ಸುಮಾರು 20 ವರ್ಷಗಳಿಂದ ಹೇರೂರು ಅಂಚೆ ಕಛೇರಿಯಲ್ಲಿ ಪತ್ರ ಬಟಾವಾಡೆ ಮಾಡುತ್ತಿದ್ದ ಅಂಚೆಯಣ್ಣ ರಾಜೇಶ್ ಆಚಾರ್ಯ ಇವರು ತಮ್ಮ ವೃತ್ತಿಯಲ್ಲಿ ಅಂಚೆ ಇಲಾಖೆಯಿಂದ ಪದೋನ್ನತಿ ಹೊಂದಿ ಚಿತ್ರಕಲಿಯವರು ಶಂಕರಪುರ ಅಂಚೆ ಕಛೇರಿಗೆ ಹಾಗೂ ರಾಜೇಶ್ ರವರು ಕಟಪಾಡಿ ಅಂಚೆಕಛೇರಿಗೆ ವರ್ಗಾವಣೆ ಹೊಂದಿರುವ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಿ ಬೀಳ್ಕೊಡುವ ಸರಳ ಕಾರ್ಯಕ್ರಮವು ಇಂದು ಬಂಟಕಲ್ಲು ಅಂಚೆ ಕಛೇರಿಯಲ್ಲಿ ಜರುಗಿತು.

ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಇದರ ಅಧ್ಯಕ್ಷ ಕೆ ಆರ್ ಪಾಟ್ಕರ್ ಅಂಚೆಯಣ್ಣನವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಅಂಚೆಯಣ್ಣನವರು ಬಂಟಕಲ್ಲು ಪರಿಸರಕ್ಕೆ ನೀಡಿದ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಸಿ ಅಭಿನಂದಿಸಿದರು. ಇದೇ ಸಂಧರ್ಭದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಕಂಠಪಾಠ ವಿಭಾಗದಲ್ಲಿ ದ್ವಿತೀಯಾ ಸ್ಥಾನ ಪಡೆದ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅಭಿಜ್ಞಾಳನ್ನು ನಾಗರಿಕ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠೆಯವರು ಶುಭಾಶಂಸನೆ ಮಾಡಿದರು.

ನಿವೃತ್ತ ಅಂಚೆ ಪಾಲಕ ಬಾಸ್ಕರ ಶೆಟ್ಟಿ, ಉದ್ಯಮಿ ರಾಮಚಂದ್ರ ನಾಯಕ್,ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ಬಂಟಕಲ್ಲು ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್,ಶಿರ್ವ ಗ್ರಾಮ ಪಂಚಾಯತ್ ಸದಸ್ಯೆ ವೈಲೆಟ್ ಕಸ್ತಲಿನೊ, ಮಜೂರು ಗ್ರಾಮ ಪಂ ಸದಸ್ಯೆ ಮಂಜುಳ ಆಚಾರ್ಯ, ಅಂಚೆ ಇಲಾಖೆಯ ಪ್ರಮೀಳಾ ಲೋಬೊ, ಬಂಟಕಲ್ಲು ಅಂಚೆಕಛೇರಿಯ ಅಂಚೆ ಪಾಲಕಿ ಲೂವಿಸ್ ಅರಾನ್ನಾ, ಮಮತಾ ಆಚಾರ್ಯ ಉದ್ಯಮಿ ರಾಮ ಶೆಟ್ಟಿ, ಜಯ ಶೆಟ್ಟಿ, ನಾಗರಿಕ ಸೇವಾ ಸಮಿತಿಯ ಜಗದೀಶ್ ಆಚಾರ್ಯ, ವಿರೇಂದ್ರ ಪಾಟ್ಕರ್, ವಿನ್ಸಂಟ್ ಕಸ್ತಲಿನೊ, ಮೂದಲಾದವರು ಉಪಸ್ಥಿತರಿದ್ದರು. ನಾಗರಿ ಸೇವಾ ಸಮಿತಿಯ ಕಾರ್ಯದರ್ಶಿ ದಿನೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಗೆದ್ದ ಮೇಲೆ ಯಾವುದೇ ಪಕ್ಷ ಬದಲಾಯಿಸುವುದಿಲ್ಲ ಎಂದು ಅಫಿಡವಿಟ್ ಪಡೆದುಕೊಳ್ಳುವ ಕಾನೂನು ರೂಪುಗೊಳ್ಳಬೇಕಿದೆ : ಜಸ್ಟಿಸ್ ಅರಳಿ ನಾಗರಾಜ್

Posted On: 02-12-2022 11:49AM

ಮಂಗಳೂರು : ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬ ಸ್ಪರ್ಧಿಯಲ್ಲೂ ನಾನು ಗೆದ್ದು ಬಂದಮೇಲೆ ಯಾವುದೇ ಪಕ್ಷ ಬದಲಾಯಿಸುವುದಿಲ್ಲ ಎಂದು ಅಫಿಡವಿಟ್ ಪಡೆದು ಕೊಳ್ಳುವ ಕಾನೂನು ರೂಪುಗೊಳ್ಳಬೇಕಿದೆ ಎಂದು ಜಸ್ಟಿಸ್ ಅರಳಿ ನಾಗರಾಜ್ ಹೇಳಿದರು. ಅವರು ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಮತ್ತು ರಾಷ್ಟ್ರೀಯ ಸೌಹಾರ್ದ ವೇದಿಕೆ ಬಿಜಾಪುರ ಜಂಟಿ ಆಶ್ರಯದಲ್ಲಿ ಡಿಸೆಂಬರ್ 1ರಂದು ಬಿಜಾಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರ ದಲ್ಲಿ ಆಯೋಜಿಸಿದ್ದ "ಸಂವಿಧಾನದ ಆಶಯ ಈಡೇರಿದೆಯೇ? " - ವಿಚಾರ ಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದರು.

ದೇಶ ನನಗೇನು ಕೊಟ್ಟಿದೆ ಎಂಬುದು ಮುಖ್ಯವಲ್ಲ ದೇಶಕ್ಕಾಗಿ ನಾನೇನು ಕೊಡಬಲ್ಲೆ ಎಂಬುದು ಮುಖ್ಯ , ಸ್ವಾತಂತ್ರ್ಯ ಪೂರ್ವಕ್ಕೆ ದೇಶ ಪ್ರೇಮ ಇತ್ತು . ಇತ್ತೀಚೆಗೆ ಸ್ವಾರ್ಥ ಪ್ರೇಮ ಹೆಚ್ಚಾಗಿದೆ. ಈ ಕಾರಣದಿಂದಾಗಿಯೇ ಇಂದು ಒಂದು ಪಕ್ಷ ಸೇರಿ ಗೆದ್ದುಬಂದವರು ಅವರಿಗೆ ಬೇಕಾದಂತೆ ಪಕ್ಷ ಬದಲಿಸಿ ಗೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಂವಿಧಾನದ ಆಶಯ ಈಡೇರಿದೆಯೋ ಇಲ್ಲವೋ ಎಂಬ ಪ್ರಶ್ನೆ ತಮ್ಮ ಮುಂದೆ ಇಡುತ್ತೇನೆ, ಮೂಕ ಪ್ರೇಕ್ಷಕನಾಗದೆ ಪ್ರಶ್ನೆಗಳನ್ನು ಕೇಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು, ಬ್ಯಾಂಕ್ ಬಾಲನ್ಸ್ ಮೊಬೈಲ್ನಲ್ಲಿ ನೋಡಿಕೊಳ್ಳ ಬಹುದು. ಆಯಸ್ಸು ಎಷ್ಟು ಎಂಬುದು ತಿಳಿದುಕೊಳ್ಳಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಯುವಜನತೆ ಅಲೋಚಿಸಬೇಕಿದೆ ಎಂದು ಜಸ್ಟಿಸ್ ಅರಳಿ ನಾಗರಾಜ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಸ್ಟಿಸ್ ವಸಂತ ಮುಳಸಾವಳಗಿ ಮಾತನಾಡಿ ಸಂವಿದಾನದ ಆಶಯಗಳು ಸ್ಪಷ್ಟವಾಗಿವೆ ಮತ್ತು ನಿಖರವಾಗಿವೆ. ಅವುಗಳನ್ನು ಜಾರಿಗೊಳಿಸುವ ನಮ್ಮ ವ್ಯವಸ್ಥೆ ಎಡವುತ್ತಿರುವುದರಿಂದ ಸಂವಿದಾನದ ಆಶಯ ಈಡೇರಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದರೆ ಯುವಜನತೆ ಜಾಗೃತರಾಗಿ ಕರ್ತವ್ಯ ನಿರ್ವಹಿಸಬೆಕಾಗಿದೆ.

ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ ಮತ್ತು ಸಾಹಿತಿ ವಿದ್ಯಾವತಿ ಅಂಕಲಗಿ, RSV ಸಂಸ್ಥಾಪಕಿ ರಾಜೇಶ್ವರಿ ಹಿಪ್ಪರಗಿ, ನಿರ್ದೇಶಕ ಜೆ.ಎಸ್. ಪಾಟೀಲ್, ಅಧ್ಯಕ್ಷ ಚಂದ್ರಶೇಖರ ಘಂಟಪ್ಪಗೋಳ, ಕಾರ್ಯದರ್ಶಿ ಫಯಾಜ್ ಕಲಾದಗಿ ಮುಂತಾದವರು ಉಪಸ್ಥಿತರಿದ್ದರು. ಮಣಿಕಂಠ ಮಠಪತಿಯವರು ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಚಂದ್ರಶೇಖರ ಘಂಟಪ್ಪಗೋಳ ಸ್ವಾಗತಿಸಿ NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಪ್ರಸ್ತಾವನೆಗೈದರು. ರೋಹಿಣಿ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು.