Updated News From Kaup

ಮಾಚ್೯ 19 : ಮೀನುಗಾರಿಕಾ ಸಚಿವರಿಂದ ಮೀನುಗಾರರೊಂದಿಗೆ ಸಂವಾದ ಕಾರ್ಯಕ್ರಮ

Thumbnail
Posted On: 18 Mar 2023, 07:44 AM

ಉಡುಪಿ : ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಕರಾವಳಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಪೂರ್ವ ನಿರ್ಧರಿಸಿದ ಸಮುದ್ರ ಮಾರ್ಗದ ಮೂಲಕ ಸಾಗರ ಪರಿಕ್ರಮ ಕಾರ್ಯಕ್ರಮವನ್ನು ಆಯೋಜಿಸಿದೆ. ಮೀನುಗಾರರು, ಕರಾವಳಿ ಸಮುದಾಯಗಳು ಮತ್ತು ಮಧ್ಯಸ್ಥಗಾರರೊಂದಿಗೆ ಸಂವಾದವನ್ನು ಸುಲಭಗೊಳಿಸಲು ಸರ್ಕಾರವು ಅನುಷ್ಠಾನಗೊಳಿಸುತ್ತಿರುವ ವಿವಿಧ ಮೀನುಗಾರಿಕೆ ಸಂಬಂಧಿತ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮಾಹಿತಿಯನ್ನು ಪ್ರಸಾರ ಮಾಡಲು, ಎಲ್ಲಾ ಮೀನುಗಾರರಿಗೆ ಮತ್ತು ಸಂಬಂಧಪಟ್ಟವರಿಗೆ ಒಗ್ಗಟ್ಟನ್ನು ಪ್ರದರ್ಶಿಸುವ ಗುರಿ ಹೊಂದಲು, ಆತ್ಮನಿರ್ಭರ ಭಾರತ ಸ್ಪೂರ್ತಿಯಂತೆ ಮಧ್ಯಸ್ಥಗಾರರು ಜವಾಬ್ದಾರಿಯುತ ಮೀನುಗಾರಿಕೆಯನ್ನು ಉತ್ತೇಜಿಸಲು ಮತ್ತು ರಾಷ್ಟ್ರದ ಆಹಾರ ಭದ್ರತೆ ಮತ್ತು ಕರಾವಳಿ ಮೀನುಗಾರ ಸಮುದಾಯಗಳ ಜೀವನೋಪಾಯಕ್ಕಾಗಿ ಸಮುದ್ರ ಮೀನುಗಾರಿಕೆ ಸಂಪನ್ಮೂಲಗಳ ಬಳಕೆ ಹಾಗೂ ಸಮುದ್ರ ಪರಿಸರ ವ್ಯವಸ್ಥೆಗಳ ರಕ್ಷಣೆಯ ನಡುವೆ ಸುಸ್ಥಿರ ಸಮತೋಲನವನ್ನು ಕೇಂದ್ರೀಕರಿಸುವುದಾಗಿದೆ. ಸಾಗರ ಪರಿಕ್ರಮ ಕಾರ್ಯಕ್ರಮವು ಕಡಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಹಂತ ಹಂತವಾಗಿ ಒಳಗೊಳ್ಳಲು ಉದ್ದೇಶಿಸಿದ್ದು, ಸರ್ಕಾರವು ಅನುಷ್ಠಾನಗೊಳಿಸುತ್ತಿರುವ ವಿವಿಧ ಫಲಾನುಭವಿ ಆಧಾರಿತ ಯೋಜನೆ ಮತ್ತು ಕಾರ್ಯಕ್ರಮಗಳ ಅರಿವು ಮತ್ತು ಅಳವಡಿಸಿಕೊಳ್ಳಬಹುದಾದ ಉತ್ತಮ ಅಭ್ಯಾಸಗಳನ್ನು ಪ್ರದರ್ಶಿಸುವ ಮೂಲಕ ಕರಾವಳಿ ಪ್ರದೇಶಗಳಲ್ಲಿನ ಮೀನುಗಾರರು, ಮೀನುಗಾರ ಸಮುದಾಯಗಳು ಮತ್ತು ಪಾಲುದಾರರು ಪ್ರಯೋಜನ ಪಡೆಯಬಹುದಾಗಿದೆ. ಸಾಗರ ಪರಿಕ್ರಮದ ಸಂದರ್ಭದಲ್ಲಿ ಆಯೋಜಿಸಲಾಗುತ್ತಿರುವ ಸಂವಾದ ಕಾರ್ಯಕ್ರಮಗಳು ಮೀನುಗಾರರು ಮತ್ತು ಇತರ ಮಧ್ಯಸ್ಥಗಾರರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮತ್ಸ್ಯಸಂಪದದಂತಹ ವಿವಿಧ ಮೀನುಗಾರಿಕೆ ಯೋಜನೆ ಮತ್ತು ಕಾರ್ಯಕ್ರಮಗಳ ಮೂಲಕ ಅವರ ಆರ್ಥಿಕ ಉನ್ನತಿಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆ ಮೀನುಗಾರಿಕೆ ವಲಯದಲ್ಲಿ ರೂ.20,050 ಕೋಟಿ ಗಳ ಅತ್ಯಧಿಕ ಅಂದಾಜು ಹೂಡಿಕೆಯೊಂದಿಗೆ ಪ್ರಮುಖ ಯೋಜನೆಯಾಗಿದೆ. ಮೀನುಗಾರಿಕೆ ಮತ್ತು ಜಲಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿ, ಅರ್ಹ ಸಂಸ್ಥೆಗಳಿಗೆ ರಿಯಾಯಿತಿ ಹಣಕಾಸು ಒದಗಿಸುವುದು ಮತ್ತು ಮೀನುಗಾರರು ಮತ್ತು ಮೀನುಗಾರರಿಗೆ ವಿಸ್ತರಿಸಲಾದ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸೌಲಭ್ಯ, ಮೀನುಗಾರಿಕಾ ಕ್ಷೇತ್ರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಜೊತೆಗೆ, ಸಾಗರ ಪರಿಕ್ರಮ ಕಾರ್ಯಕ್ರಮದ ಮೂಲಕ ಕೇಂದ್ರ ಸರ್ಕಾರದ ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ. 4 ನೇ ಹಂತದ ಭಾಗವಾಗಿ, ಕೇಂದ್ರ ಮೀನುಗಾರಿಕೆ ಸಚಿವರು ಮಾ. 19 ರಂದು ಜಿಲ್ಲೆಗೆ ಆಗಮಿಸಲಿದ್ದು, ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 11.30 ರವರೆಗೆ ಮೀನುಗಾರರೊಂದಿಗೆ ಸಂವಾದ ಮತ್ತು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಟಪಾಡಿ :ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ಅಂತಾರಾಷ್ಟ್ರೀಯ ಉಪಾಧ್ಯಕ್ಷರಾಗಿ ನವೀನ್ ಅಮೀನ್ ಶಂಕರಪುರ ಆಯ್ಕೆ

Thumbnail
Posted On: 17 Mar 2023, 11:57 AM

ಕಟಪಾಡಿ : ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ಅಂತಾರಾಷ್ಟ್ರೀಯ ಉಪಾಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಉದ್ಯಮಿ ನವೀನ್ ಅಮೀನ್ ಶಂಕರಪುರ ಆಯ್ಕೆಯಾಗಿದ್ದಾರೆ. ಕೇರಳದ ಮಾಹೆಯಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರನ್ನು ಆಯ್ಕೆ ಮಾಡಲಾಯಿತು. ಜೆಸಿಐ ಶಂಕರಪುರ ಅಧ್ಯಕ್ಷ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ರಾಷ್ಟ್ರೀಯ ಸಂಯೋಜಕ, ಶಂಕರಪುರ ರೋಟರಿ ಅಧ್ಯಕ್ಷ, ರೋಟರಿ ವಲಯ ಸೇನಾನಿ, ಸಹಾಯಕ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯಲ್ಲಿ ಉಂಟಾಗದಂತೆ ಅಧಿಕಾರಿಗಳು ಎಚ್ಚರವಹಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Thumbnail
Posted On: 16 Mar 2023, 07:26 PM

ಉಡುಪಿ : ಬೇಸಿಗೆಯಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆಗಳು ಆಗದಂತೆ ಎಲ್ಲಾ ರೀತಿಯ ಎಚ್ಚರಿಕೆ ವಹಿಸಿ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾನ್ಯವಾಗಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನೀರಿನ ಸಮಸ್ಯೆಗಳು ಉಂಟಾಗುತ್ತವೆ . ಜಿಲ್ಲೆಯಲ್ಲಿ ಕಳೆದ ಸೆಪ್ಟಂಬರ್ ಇಂದ ಈವರೆಗೆ ಹೇಳುವಂತಹ ಮಳೆ ಬೀಳದೆ ಇರುವ ಕಾರಣ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ಎಲ್ಲಾ ಸ್ಥಳೀಯ ಸಂಸ್ಥೆಗಳು , ಗ್ರಾಮ ಪಂಚಾಯತ್ ಗಳು ತಮ್ಮ ವ್ಯಾಪ್ತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು, ಒಂದೊಮ್ಮೆ ನೀರಿನ ಸಮಸ್ಯೆಯಾದಲ್ಲಿ ಟ್ಯಾಂಕರ್ಗಳ ಮೂಲಕ ಜನ ಸಾಮಾನ್ಯರಿಗೆ ನೀರು ಸರಬರಾಜು ಮಾಡಬೇಕೆಂದು ತಿಳಿಸಿದರು. ಜಿಲ್ಲೆಯಲ್ಲಿ ಈಗಾಗಲೇ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳುವುದರೊಂದಿಗೆ ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಕಲ್ಪಿಸಬೇಕು ಎಂದ ಅವರು ಕುಡಿಯುವ ನೀರಿನ ಅವಶ್ಯವಿರುವ ತುರ್ತು ಕಾಮಗಾರಿಗಳನ್ನೂ ಸಹ ಕೈಗೆತ್ತಿಕೊಳ್ಳುವ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು. ತಾಲೂಕು ಮಟ್ಟದಲ್ಲಿಯೂ ಸಹ ತಹಸೀಲ್ದಾರ್ ನೇತೃತ್ವದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತ ಟಾಸ್ಕ್ ಪೋರ್ಸ್ ಸಮಿತಿಯ ಪ್ರತೀ ಶುಕ್ರವಾರ ಸಭೆಯನ್ನು ನಡೆಸುವದರೊಂದಿಗೆ ಸ್ಥಳೀಯ ನೀರಿನ ಸಮಸ್ಯೆ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಸೂಚನೆ ನೀಡಿದರು. ಸಾರ್ವಜನಿಕರು ಬೇಸಿಗೆಯೆ ಸಂದರ್ಭದಲ್ಲಿ ನೀರನ್ನು ಮಿತವಾಗಿ ಬಳಸಬೇಕು, ಅದೇ ರೀತಿ ರೈತರೂ ಸಹ ನೀರು ಅನಗತ್ಯ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಸಾಧ್ಯವಾದಷ್ಟು ತೋಟಗಳಿಗೆ ವಾರಕ್ಕೊಮ್ಮೆ ನೀರು ಹಾಯಿಸಬೇಕೆಂದು ಸಲಹೆ ನೀಡಿದರು. ವಿಪತ್ತು ಪರಿಸ್ಥಿತಿಯ ಬಗೆ ಜನ ಸಾಮಾನ್ಯರಿಗೆ ಎಚ್ಚರಿಕೆ ನೀಡುವ ಡಿ.ಎಂ.ಆರ್ ಟವರ್ ಗಳನ್ನು ಆಯಕಟ್ಟಿನ ಜಾಗಗಳಲ್ಲಿ ಶೀಘ್ರವಾಗಿ ನಿರ್ಮಿಸಿ ಅವುಗಳ ಕಾರ್ಯ ಚಾಲನೆ ಮಾಡಬೇಕು. ಇದರಿಂದಾಗಿ ಜನ ಸಾಮಾನ್ಯರಿಗೆ ವಿಪತ್ತಿನ ಮುನ್ಸೂಚನೆಗಳನ್ನು ನೀಡಲು ಸಾಧ್ಯವಾಗುವುದರ ಜೊತೆಗೆ ಹೆಚ್ಚಿನ ಸಾವು ನೋವುಗಳು ಆಗದಂತೆ ನೋಡಿಕೊಳ್ಳಬಹುದು ಎಂದರು. ಶಾಲಾ ಹಂತಗಳಲ್ಲಿಯೂ ವಿಪತ್ತು ನಿರ್ವಹಣೆ ಯೋಜನೆಯನ್ನು ಪ್ರತೀ ಶಾಲೆಯಲ್ಲೂ ಪರಿಷ್ಕರಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಎಲ್ಲಾ ರೀತಿಯ ವಿಪತ್ತಗಳನ್ನು ಎದುರಿಸಲು ಅರಿವು ಮೂಡಿಸುವರ ಜೊತೆಗೆ ತಮ್ಮ ಕುಟುಂಬದವರಿಗೂ ಆ ರೀತಿಯಲ್ಲಿ ತಿಳಿಸಲು ಸೂಚಿಸಬೇಕು ಎಂದರು. ಕಳೆದ ಸಾಲಿನಲ್ಲಿ ಮಳೆ ಹಾನಿಯಿಂದ ಉಂಟಾದ ಶಾಲೆ ಅಂಗನವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಮತ್ತಿತರ ಹಾನಿಗಳ ದುರಸ್ತಿ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳುವುದರೊಂದಿಗೆ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು. ಹವಾಮಾನ ಇಲಾಖೆವತಿಯಿಂದ ಜಿಲ್ಲೆಯಲ್ಲಿ ಉಂಟಾಗುವ ವಿಕೋಪ ಮುನ್ಸೂಚನೆಗಳನ್ನು ಸಾರ್ವಜನಿಕರಿಗೆ ಶೀಘ್ರದಲ್ಲಿಯೇ ತಲುಪಿಸುವುದರ ಜೊತೆಗೆ ಅವುಗಳನ್ನು ಎದುರಿಸುವ ಕುರಿತು ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕೆಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಹೆಚ್, ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಅಪರ ಜಿಲ್ಲಾದಿಕಾರಿ ವೀಣಾ ಬಿ.ಎನ್. ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಕೋಟ್ಯಂತರ ಭಕ್ತರ ನಂಬಿಕೆಯ ಗುಳಿಗ ದೈವಕ್ಕೆ ಗೃಹಸಚಿವರಿಂದ ಅಪಮಾನ ಖಂಡನೀಯ : ಪದ್ಮರಾಜ್‌ ಆರ್.

Thumbnail
Posted On: 16 Mar 2023, 07:07 PM

ಮಂಗಳೂರು : ತುಳುನಾಡು ಮಾತ್ರವಲ್ಲ ದೇಶ, ವಿದೇಶದಲ್ಲೂ ಚರಿತ್ರೆ ಸೃಷ್ಟಿಸಿರುವ ನಾಟಕ ವಿಜಯಕುಮಾರ್ ಕೊಡಿಯಾಲ್‌ಬೈಲ್‌ ನಿರ್ದೇಶನದ 'ಶಿವಧೂತ ಗುಳಿಗೆ'. ದೈವಾರಾಧನೆ ಎಂದರೆ ತುಳುನಾಡಿನ ಧಾರ್ಮಿಕತೆ ಮತ್ತು ನಂಬಿಕೆ. ಇದು ಕೇವಲ ಆಚರಣೆಯಲ್ಲ; ತುಳುನಾಡಿನ ಬದುಕಿನ ಸಂಸ್ಕೃತಿಯೂ ಹೌದು ಎನ್ನುವುದನ್ನು ಅದ್ಭುತ ರಂಗಪ್ರಯೋಗದ ಮೂಲಕ ತೋರಿಸಿಕೊಟ್ಟರು ಕೊಡಿಯಾಲ್‌ಬೈಲ್‌ರವರು. ಇದೀಗ ಇವರ ನಿರ್ದೇಶನದ 'ಶಿವಧೂತ ಗುಳಿಗೆ' ನಾಟಕದ ಬಗ್ಗೆ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವಹೇಳನ ಮಾಡಿರುವುದು ದೈವಾರಾದನೆ ಮಾತ್ರವಲ್ಲ ಕೋಟ್ಯಂತರ ಮಂದಿ ದೈವ ಭಕ್ತರಿಗೆ ಮಾಡಿದ ಅಪಮಾನ ಎಂದು ಮಂಗಳೂರಿನ ನೋಟರಿ, ವಕೀಲರು ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್. ಖಂಡಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ನಡೆದ ಶಿವಧೂತ ಗುಳಿಗೆ ನಾಟಕವನ್ನು ಸುಮಾರು 16 ಸಾವಿರ ಪ್ರೇಕ್ಷಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ಊರಲ್ಲಿ ಗೃಹಸಚಿವರು ಗುಳಿಗನ್ನು ಜಪಾನ್ ಮಾತ್ರೆಗೆ ಹೋಲಿಕೆ ಮಾಡಿರುವುದು ಎಷ್ಟು ಸರಿ? ಕೂಡಲೇ ಗೃಹಸಚಿವರು ತುಳುನಾಡು ಸೇರಿದಂತೆ ದೈವ ಭಕ್ತರಲ್ಲಿ ಕ್ಷಮೆಯಾಚನೆ ಮಾಡಬೇಕು. ತುಳುನಾಡಿನ ದೈವಾರಾಧನೆ ಬಗ್ಗೆ ಇವರಿಗೇನು ಗೊತ್ತಿದೆ?. ರಾಜ್ಯದ ಗೃಹ ಸಚಿವರಾಗಿ ದೈವಾರಾಧನೆ ಬಗ್ಗೆ ಪರಿಜ್ಞಾನ ಇಲ್ಲದೆ; ವಿವೇಚನೆ ರಹಿತವಾಗಿ ಮಾತನಾಡುವುದನ್ನು ಬಿಟ್ಟು, ಆ ಬಗ್ಗೆ ಜ್ಞಾನ‌ ಇರುವವರಲ್ಲಿ ಮಾಹಿತಿ ಪಡೆದು ಮಾತನಾಡಲಿ. ಅದನ್ನು ಬಿಟ್ಟು ಇಂತಹ ಅರೆಜ್ಞಾನದ ಮಾತುಗಳಿಗೆ ತುಳುನಾಡಿನ‌ ಜನ ಎಂದಿಗೂ ಕ್ಷಮೆ ನೀಡಲಾರರು ಎಂದಿದ್ದಾರೆ.

ಶಿರ್ವ : ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ, ಶ್ರೀ ವಿಶ್ವ ಬ್ರಾಹ್ಮಣ ಮಹಿಳಾ ಬಳಗದ ದಶಮಾನೋತ್ಸವ ಸಂಭ್ರಮ ಸಂಪನ್ನ

Thumbnail
Posted On: 16 Mar 2023, 06:24 PM

ಶಿರ್ವ : ವಿಶ್ವಕರ್ಮ ಯುವ ಜನಾಂಗ ಸಾಮಾಜಿಕ ಚಟುವಟಿಕೆಯಲ್ಲಿ ಹಿಂದಿದೆ. 14ರಿಂದ 20 ವರ್ಷದ ಯುವಕರು ಕೇವಲ ಮೊಬೈಲ್ ನಲ್ಲಿ ತಲ್ಲೀನರಾಗಿದ್ದು ಈ ಬಗ್ಗೆ ಪಾಲಕರು ಮುತುವರ್ಜಿ ವಹಿಸಿ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಲ್ಲಿ ಜವಾಬ್ದಾರಿ ವಹಿಸಬೇಕು. ಎಲ್ಲಾ ಸಮಾಜದವರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಅದು ವಿಶ್ವಕರ್ಮ ಸಮಾಜದವರಿಂದ ಮಾತ್ರ ಸಾಧ್ಯ ಎಂದು ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು. ಅವರು ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ (ರಿ). ಶಿರ್ವ ಮತ್ತು ಶ್ರೀ ವಿಶ್ವ ಬ್ರಾಹ್ಮಣ ಮಹಿಳಾ ಬಳಗ ಶಿರ್ವ ಇದರ ದಶಮಾನೋತ್ಸವ ಸಂಭ್ರಮದ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು. ಎಲ್ಲವನ್ನು ಸಾಧಿಸುವವರು ವಿಶ್ವಕರ್ಮರು. ರಾಜಕೀಯದಲ್ಲಿ ಗುರುತಿಸಬೇಕಿದ್ದರೆ ಸಂಘಟನೆಗಳು ಅತಿ ಪ್ರಾಮುಖ್ಯ ಎಂದು ವಿದ್ಯಾವರ್ಧಕ ಸಂಘ( ರಿ.) ಇದರ ಆಡಳಿತ ಅಧಿಕಾರಿ ಪ್ರೊ. ವೈ ಭಾಸ್ಕರ್ ಶೆಟ್ಟಿ ಹೇಳಿದರು ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್, ಕಟಪಾಡಿ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ನವೀನ್ ಆಚಾರ್ಯ, ದ.ಕ. ಜಿಲ್ಲೆ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮುಲ್ಕಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷರಾದ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತನ್ ಕುಮಾರ್ ಶೆಟ್ಟಿ, ಯೋಗೀಶ್ ಆಚಾರ್ಯ ಉಡುಪಿ, ಮಣಿಪಾಲ ಡಾ. ಪ್ರತಿಮಾ ಜಯ ಪ್ರಕಾಶ್ ಆಚಾರ್ಯ ಸಂದರ್ಭೋಚಿತವಾಗಿ ಮಾತನಾಡಿದರು. ಸಮಾಜ ಸೇವಕರು ಹಾಗೂ ಉದ್ಯಮಿ ಕೆ.ಮನೋಹರ್ ಶೆಟ್ಟಿ, ಶಿರ್ವ ಸಿದ್ದಿವಿನಾಯಕ ದೇವಸ್ಥಾನದ ಸ್ಥಾಪಕರಾದ ಗ್ಲಾಬ್ರಿಯಲ್ ನಜರತ್, ವಾಸುದೇವ ಆಚಾರ್ಯ ಪರ್ಕಳ, ಹಿರಿಯ ದಂಪತಿಗಳಾದ ಶ್ರೀಮತಿ ಮತ್ತು ಶ್ರೀ ವ್ಯಾಸರಾಯ ಆಚಾರ್ಯ ಶಿರ್ವ ಇವರನ್ನು ಸನ್ಮಾನಿಸಲಾಯಿತು. ಇಬ್ಬರಿಗೆ ವೈದ್ಯಕೀಯ ನೆರವು, 17 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಂಸ್ಥೆಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ, 4 ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಸ್ಥೆಯ ಸ್ಥಾಪಕ ಶ್ರೀಕಾಂತ್ ಆಚಾರ್ಯ ಕಾಪು ಪ್ರಾಸ್ತಾವನೆಗೈದರು. ಗೌರವಾಧ್ಯಕ್ಷರಾದ ಸುರೇಶ್ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಭಾಸ್ಕರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಉಮೇಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ರವಿ ಪುರೋಹಿತರು ವಿಶ್ವಕರ್ಮ ಪೂಜೆ ನೆರವೇರಿಸಿದರು. ಪುರೋಹಿತ್ ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಮಾಧವ ಆಚಾರ್ಯ ವಂದಿಸಿದರು. ನಂತರ ಸದಸ್ಯರಿಂದ ವಿವಿಧ ಮನೋರಂಜನೆ ಕಾರ್ಯಕ್ರಮ, ಥಂಡರ್ ಗೈಸ್ ಫೌಂಡೇಶನ್ (ರಿ) ಬಜ್ಪೆ ಇವರಿಂದ ಕ್ಷೇತ್ರ ಪುರಾಣ ಮಂಜರಿ ಕಾರ್ಯಕ್ರಮ ನೆರವೇರಿತು. ದಶಮಾನೋತ್ಸವದ ಸಂಚಾಲಕರಾದ ಪ್ರಶಾಂತ್ ಆಚಾರ್ಯ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪಡುಬಿದ್ರಿ : ಮಾ.14ರಿಂದ ಮಾ.22ರವರೆಗೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವ

Thumbnail
Posted On: 14 Mar 2023, 08:58 PM

ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಾ.14ರಿಂದ ಮಾ. 22ರ ವರೆಗೆ ವರ್ಷಾವಧಿ ಮಹೋತ್ಸವ ವಿಜೃಂಭಣೆಯಿಂದ ಜರಗಲಿದೆ. ಮಾ.14ರಂದು ಬೆಳಗ್ಗೆ ಧ್ವಜಾರೋಹಣ ಸಂಪನ್ನಗೊಂಡಿತು. ಮಾ.15ರಂದು ರಾತ್ರಿ ಬಲಿ ಉತ್ಸವ, ಆಯನೋತ್ಸವ, ದೀಪಾರಾಧನೆ, ಮಾ.16ರಂದು ರಾತ್ರಿ ಫಲೋತ್ಕ್ಷೆಪ ಬಲಿ ಉತ್ಸವ, ಮಾ.17ರಂದು ರಾತ್ರಿ ಬಲಿ ಉತ್ಸವ, ಪಡು ಸವಾರಿ, ಮಾ.18ರಂದು ರಾತ್ರಿ ಬಲಿ ಉತ್ಸವ, ಪಾರುಪತ್ಯಗಾರ ಕಟ್ಟೆಪೂಜೆ, ಮಾ.19 ರಂದು ರಾತ್ರಿ ಬಲಿ ಸೇವೆ, ಕೆರೆ ದೀಪೋತ್ಸವ, ಮಾ.20ರಂದು ರಾತ್ರಿ ಬಲಿ ಉತ್ಸವ, ತೆಂಕು ಸವಾರಿ ನಡೆಯಲಿದೆ. ಮಾರ್ಚ್ 21ರಂದು ಬೆಳಗ್ಗೆ 11 ಗಂಟೆಗೆ ರಥಾ ರೋಹಣ, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ, ರಾತ್ರಿ 11 ಗಂಟೆಯಿಂದ ಮಹಾ ರಥೋತ್ಸವ ಜರುಗಲಿದೆ. ಮಾ.22ರಂದು ಬೆಳಗ್ಗೆ 6.30 ಗಂಟೆಗೆ ಕವಾಟೋದ್ಘಾಟನೆ, ಬಲಿ ಉತ್ಸವ, ತುಲಾಭಾರ ಸೇವೆ, ಸಂಜೆ 4 ಗಂಟೆಗೆ ಚೆಂಡು ಉತ್ಸವ, ರಾತ್ರಿ 7 ಗಂಟೆಗೆ ಅವಭ್ರತಸ್ನಾನ, ಕಟ್ಟೆಪೂಜೆ, ಸೂಟೆದಾರ, ಬಲಿ ಉತ್ಸವ, ಧ್ವಜಾವರೋಹಣ ನಡೆಯಲಿದೆ ಮಾ.23ರಂದು ಬೆಳಗ್ಗೆ ಮಹಾ ಸಂಪ್ರೋಕ್ಷಣೆ, ಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು : ಮಾ.14ರಂದು ಸಂಜೆ 6 ಗಂಟೆಯಿಂದ ಸ್ಯಾಕ್ಸೋಫೋನ್ ಮತ್ತು ನಾದಸ್ವರ ವಾದನ, ಮಾ.15ರಂದು ರಾತ್ರಿ 7 ಗಂಟೆಗೆ ಯಕ್ಷಗಾನ ಬಯಲಾಟ, ಮಾ.16ರಂದು ಸಂಜೆ ಸಂಗೀತ ಕಾರ್ಯಕ್ರಮ, ಮಾ.18 ರಂದು ರಾತ್ರಿ 9 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಮಾ.21ರಂದು ಮಧ್ಯಾಹ್ನ 12 ಗಂಟೆಗೆ ಭಕ್ತಿ ಸುಧೆ, ಸಂಜೆ 4 ಗಂಟೆಗೆ ಭಕ್ತಿ ಸುಧೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ಮಾ.22 ರಂದು ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉಡುಪಿ : ಚುನಾವಣೆ ಸಂದರ್ಭ ಅಬಕಾರಿ ಅಕ್ರಮ ತಡೆಗಟ್ಟಲು ವಿಶೇಷ ತಂಡ ರಚನೆ

Thumbnail
Posted On: 14 Mar 2023, 07:11 PM

ಉಡುಪಿ : ರಾಜ್ಯ ವಿಧಾನಸಭಾ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆ, ಮತದಾರರನ್ನು ಸೆಳೆಯಲು ನಕಲಿ/ ಕಳಪೆ ಮಟ್ಟದ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿಗಳನ್ನು ತಯಾರಿಸಿ, ಸಾಗಾಣಿಕೆ ಹಾಗೂ ಶೇಖರಣೆ ಮಾಡಿ, ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿತರಿಸುವ ಸಾಧ್ಯತೆ ಇದ್ದು, ಇದನ್ನು ಸೇವನೆ ಮಾಡಿದವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು ಹಾಗೂ ಕೆಲವು ಸಮಾಜ ಘಾತುಕರು ಅಕ್ರಮವಾಗಿ ಆದಾಯ ಗಳಿಸಲು ತೆರಿಗೆ ಪಾವತಿಸಿರುವ ಮದ್ಯವನ್ನು ಖರೀದಿಸಿ, ದಾಸ್ತಾನು ಇಟ್ಟು, ಅದನ್ನು ಚುನಾವಣೆಯ ಡ್ರೈ ಡೇ ದಿನಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಾಧ್ಯತೆ ಇರುವುದರಿಂದ ಇಂತಹ ಕಾರ್ಯಗಳನ್ನು ತಡೆಗಟ್ಟಿ ಅಂತಹವರ ವಿರುದ್ಧ ಅಬಕಾರಿ ಇಲಾಖೆ ವತಿಯಿಂದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಬಕಾರಿ ಅಕ್ರಮಗಳನ್ನು ತಡೆಗಟ್ಟಿ, ಜಾರಿ ಮತ್ತು ತನಿಖೆ ಕಾರ್ಯಗಳನ್ನು ಚುರುಕುಗೊಳಿಸಿ, ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ, ನಕಲಿ, ಕಳ್ಳಭಟ್ಟಿ, ಅನಧಿಕೃತ ಮದ್ಯ ತಯಾರಿ, ಸಾಗಾಣಿಕೆ, ದಾಸ್ತಾನು ಮತ್ತು ಮಾರಾಟ ಕಂಡುಬಂದಲ್ಲಿ ಟೋಲ್ ಫ್ರೀ ನಂ.: 1800 4250 732, ಉಡುಪಿ ದೂ.ಸಂಖ್ಯೆ: 0820-2532732, ಕುಂದಾಪುರ ದೂ.ಸಂಖ್ಯೆ: 08254-200902 ಹಾಗೂ ಕಾರ್ಕಳ ದೂ.ಸಂಖ್ಯೆ: 08258-298865 ತಾಲೂಕು ಕಂಟ್ರೋಲ್ ರೂಂ ಅಥವಾ ಅಬಕಾರಿ ಅಧಿಕಾರಿಗಳ ಸಂಚಾರಿ ದೂರವಾಣಿ ಸಂಖ್ಯೆಗಳಾದ ಜಿಲ್ಲಾ ಅಬಕಾರಿ ಉಪ ಆಯುಕ್ತರು ಮೊ.ನಂ: 9449597104, ಉಡುಪಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಮೊ.ನಂ: 9449597113, ಕುಂದಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಮೊ.ನಂ: 9449597777, ಉಡುಪಿ ಉಪ ವಿಭಾಗದ ಅಬಕಾರಿ ನಿರೀಕ್ಷಕರು ಮೊ.ನಂ: 9449597114, ಕುಂದಾಪುರ ಉಪ ವಿಭಾಗದ ಅಬಕಾರಿ ನಿರೀಕ್ಷಕರು ಮೊ.ನಂ: 9449597778, ಉಡುಪಿ ವಲಯ-1 ಅಬಕಾರಿ ನಿರೀಕ್ಷಕರು ಮೊ.ನಂ: 9448921980, ಉಡುಪಿ ವಲಯ-2 ಅಬಕಾರಿ ನಿರೀಕ್ಷಕರು ಮೊ.ನಂ:9731860034, ಕಾರ್ಕಳ ವಲಯ ಅಬಕಾರಿ ನಿರೀಕ್ಷಕರು ಮೊ.ನಂ: 9686198924, ಕುಂದಾಪುರ ವಲಯ ಅಬಕಾರಿ ನಿರೀಕ್ಷಕರು ಮೊ.ನಂ: 9731674117 ಹಾಗೂ ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕರು ಮೊ.ನಂ: 9035773785 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್ 1 : ಯುವಸೇನೆ ಮಡುಂಬು ಇನ್ನಂಜೆ - 16ನೇ ವಾರ್ಷಿಕೋತ್ಸವ - ಸಾಂಸ್ಕೃತಿಕ, ಮನೋರಂಜನಾ ಮತ್ತು ಸಭಾ ಕಾರ್ಯಕ್ರಮ

Thumbnail
Posted On: 14 Mar 2023, 07:34 AM

ಕಾಪು : ಯುವಸೇನೆ ಮಡುಂಬು ಇನ್ನಂಜೆ ಇದರ 16ನೇ ವಾರ್ಷಿಕೋತ್ಸವ ಸಮಾರಂಭ ಏಪ್ರಿಲ್ 1, ಶನಿವಾರದಂದು ಮಡುಂಬು ಬೆರ್ಮೋಟ್ಟು ದೇವಸ್ಥಾನದ ಬಳಿ ನಡೆಯಲಿದೆ. ಸಂಜೆ 6 ಗಂಟೆಯಿಂದ ಸ್ಥಳೀಯರಿಂದ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮ ರಾತ್ರಿ ಗಂಟೆ 8 ರಿಂದ ಸಭಾ ಕಾರ್ಯಕ್ರಮ ಜರಗಲಿದೆ. ಸಭಾ ಕಾರ್ಯಕ್ರಮವನ್ನು ಕಾಪು ಮಡುಂಬುವಿನ ಜ್ಯೋತಿಷಿ ಮತ್ತು ಪುರೋಹಿತರಾದ ವಿದ್ವಾನ್ ಕೆ.ಪಿ. ಶ್ರೀನಿವಾಸ ತಂತ್ರಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಭಾಗವಹಿಸಲಿದ್ದು, ಅತಿಥಿಗಳಾಗಿ ಕಾಪು ಶಾಸಕರಾದ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮಹೇಶ್ ಶೆಟ್ಟಿ ತಿಮ್ಮರೋಡಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ (ನಿ.) ಮಂಗಳೂರು ಅಧ್ಯಕ್ಷರಾದ ಯಶ್ಪಾಲ್ ಸುವರ್ಣ, ಗುರ್ಮೆ ಫೌಂಡೇಶನ್ ಕಳತ್ತೂರು‌ ಇದರ ಅಧ್ಯಕ್ಷರಾದ ‌ಸುರೇಶ್ ಶೆಟ್ಟಿ ಗುರ್ಮೆ, ಜನತಾದಳ (ಜಾತ್ಯತೀತ) ಉಡುಪಿ ಜಿಲ್ಲೆ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಖ್ಯಾತ ವಕೀಲರಾದ ಸಂಕಪ್ಪ ಅಮೀನ್, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಡಿ. ಬಂಗೇರ, ಫ್ರೆಂಡ್ಸ್ ಕ್ಯಾಟರರ್ಸ್ ಶಂಕರಪುರ ಮಾಲಕರಾದ ನವೀನ್ ಅಮೀನ್, ಇನ್ನಂಜೆ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ರಾಜೇಶ್ ರಾವ್ ಪಾಂಗಾಳ, ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ‌ಮಲ್ಲಿಕಾ ಆಚಾರ್ಯ, ಶಾಂತ ಎಲೆಕ್ಟಿಕಲ್ಸ್ & ಇಂಜಿನಿಯರ್ಸ್ ಪ್ರೈ.ಲಿ. ಉಡುಪಿ ಇದರ ಆಡಳಿತ ನಿರ್ದೇಶಕರಾದ ಶ್ರೀಪತಿ ಭಟ್ ಉಪಸ್ಥಿತರಿರುವರು‌. ರಾತ್ರಿ ಗಂಟೆ 9 ರಿಂದ ಶಾರದಾ ಆಟ್ಸ್೯ ಕಲಾವಿದೆರ್ ಮಂಜೇಶ್ವರ ತಂಡದಿಂದ ತುಳು ಹಾಸ್ಯಮಯ ನಾಟಕ ನಿತ್ಯೆ ಬನ್ನಗ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಗೃಹ ರಕ್ಷಕರ ನೇಮಕಾತಿ : ಅರ್ಜಿ ಆಹ್ವಾನ

Thumbnail
Posted On: 13 Mar 2023, 06:27 PM

ಉಡುಪಿ : ಜಿಲ್ಲಾ ಗೃಹರಕ್ಷಕದಳ ಇಲಾಖೆಯಲ್ಲಿ ಗೃಹರಕ್ಷಕರಾಗಿ ಸೇವೆ ಸಲ್ಲಿಸಲು ಇಚ್ಛಿಸುವ ಎಸ್.ಎಸ್.ಎಲ್.ಸಿ ಉತ್ತೀರ್ಣ ಹಾಗೂ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ, 19 ರಿಂದ 45 ವರ್ಷದೊಳಗಿನ ಅರ್ಹ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 25 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಗ್ನಿಶಾಮಕ ಕಚೇರಿ ಆವರಣದಲ್ಲಿರುವ ಜಿಲ್ಲಾ ಗೃಹರಕ್ಷಕದಳ ಕಚೇರಿ ದೂ.ಸಂಖ್ಯೆ: 0820-2533650, ಬೈಂದೂರು ಘಟಕಾಧಿಕಾರಿ ರಾಘವೇಂದ್ರ ಮೊ.ನಂ: 9449469838, ಕುಂದಾಪುರ ಘಟಕಾಧಿಕಾರಿ ಕೆ. ಭಾಸ್ಕರ್ ಮೊ.ನಂ: 9242126368, ಬ್ರಹ್ಮಾವರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ ಮೊ.ನಂ: 9731897356, ಕಾರ್ಕಳ ಘಟಕಾಧಿಕಾರಿ ಪ್ರಭಾಕರ ಸುವರ್ಣ ಮೊ.ನಂ: 9632002170, ಕಾಪು ಘಟಕಾಧಿಕಾರಿ ಕುಮಾರ್ ವಿ ಕೋಟ್ಯಾನ್ ಮೊ.ನಂ: 9901930467, ಪಡುಬಿದ್ರೆ ಘಟಕಾಧಿಕಾರಿ ನವೀನ್ ಮೊ.ನಂ: 9880343236, ಮಣಿಪಾಲ ಘಟಕಾಧಿಕಾರಿ ಶೇಖರ್ ಮೊ.ನಂ: 6360895883 ಹಾಗೂ ಉಡುಪಿ ಘಟಕಾಧಿಕಾರಿ ಕುಮಾರ್ ಮೊ.ನಂ: 8971682721 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕಮಾಂಡೆಂಟ್ ಡಾ. ಕೆ.ಪ್ರಶಾಂತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರಬೇತಿಯಿಂದ ಪರಿಪೂರ್ಣತೆ: ಎಸ್.ಟಿ ಸಿದ್ದಲಿಂಗಪ್ಪ

Thumbnail
Posted On: 13 Mar 2023, 06:13 PM

ಉಡುಪಿ : ತರಬೇತಿಯು ಅಧಿಕಾರಿ ಹಾಗೂ ಸಿಬ್ಬಂದಿಗಳಲ್ಲಿ ಜ್ಞಾನ, ಕೌಶಲ್ಯತೆ ಹಾಗೂ ಅತ್ಮವಿಶ್ವಾಸವನ್ನು ಹೆಚ್ಚಿಸಲಿದ್ದು, ಯಾವುದೇ ಉದ್ಯೋಗದಲ್ಲಿ ಪರಿಪೂರ್ಣತೆಯನ್ನು ಸಾಧಿಸುವಲ್ಲಿ ತರಬೇತಿಯು ಅತೀ ಅಗತ್ಯ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ಧಲಿಂಗಪ್ಪ ಹೇಳಿದರು. ಅವರು ಗುರುವಾರ, ಮಲ್ಪೆಯ ಸಿ.ಎಸ್.ಪಿ ಕೇಂದ್ರ ಕಚೇರಿಯಲ್ಲಿ, ಕರಾವಳಿ ಕಾವಲು ಪೊಲೀಸ್ ಘಟಕದ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ 2 ನೇ ತಂಡದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕರಾವಳಿ ಕಾವಲು ಪೊಲೀಸ್ ಘಟಕದ ವತಿಯಿಂದ ಹಮ್ಮಿಕೊಂಡಿರುವ ಈಜು ತರಬೇತಿ, ಪ್ರಥಮ ಚಿಕಿತ್ಸೆ, ಸಮುದ್ರ ಈಜು ತರಬೇತಿ ಮತ್ತು ಒಳಾಂಗಣ ತರಬೇತಿಯು ಸಿ.ಎಸ್.ಪಿ ಘಟಕದ ಕರ್ತವ್ಯ ನಿರ್ವಹಣೆಗೆ ಪೂರಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಲ್ಪೆ ಟೆಗ್ಮಾ ಕೊಚ್ಚಿನ್ ಶಿಫ್ಯಾರ್ಡ್ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹರಿಕುಮಾರ್ ಮಾತನಾಡಿ, ಯಾವುದೇ ಉದ್ಯೋಗದಲ್ಲಿ ತರಬೇತಿಯು ಅತೀ ಅಗತ್ಯವಾಗಿದ್ದು, ತರಬೇತಿಯು ತುರ್ತು ಸಮಯದಲ್ಲಿ ಸಾರ್ವಜನಿಕರ ಜೀವ ಮತ್ತು ಸ್ವತ್ತು ರಕ್ಷಣೆಗೆ ಅನುಕೂಲವಾಗಲಿದೆ ಎಂದರು. ತರಬೇತಿ ಸಂಸ್ಥೆಯ ಉಪಪ್ರಾಂಶುಪಾಲ ಸಿ.ಎಸ್.ಪಿ ಕೇಂದ್ರ ಕಚೇರಿಯ ಡಿವೈಎಸ್ಪಿ ಟಿ.ಎಸ್ ಸುಲ್ಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎಸ್.ಪಿ ಕೇಂದ್ರ ಕಚೇರಿಯ ಅಪರಾಧ ವಿಭಾಗದ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಸ್ವಾಗತಿಸಿ, ನಿಸ್ತಂತು ವಿಭಾಗದ ಪಿ.ಎಸ್.ಐ ಮನಮೋಹನ ರಾವ್ ನಿರೂಪಿಸಿ, ಪಿ.ಐ ಕರುಣಾಸಾಗರ ವಂದಿಸಿದರು. 25 ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದು, ಇವರಿಗೆ 2 ವಾರಗಳ ಕಾಲ ತರಬೇತಿ ನಡೆಯಲಿದೆ.