Updated News From Kaup

ಎಸ್ಡಿಪಿಐ ಕಾಪು ಕ್ಷೇತ್ರದ ನೂತನ ಕಛೇರಿ ಉದ್ಘಾಟನೆ

Posted On: 04-11-2022 11:40AM

ಕಾಪು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಕಾಪು ಕ್ಷೇತ್ರದ ನೂತನ ಕಛೇರಿ ಕಾಪುವಿನ ಹಿರಾ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು.

ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ತುಂಬೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಸಿವು ಮತ್ತು ಭಯ ಮುಕ್ತ ಸ್ವಾತಂತ್ರವೇ ಎಸ್ಡಿಪಿಐ ಪಕ್ಷದ ಉದ್ದೇಶ. ರಾಜಕೀಯದಲ್ಲಿ ನಿರಾಸೆ ಸಲ್ಲದು. ಇಂದಲ್ಲ ನಾಳೆ ಗೆದ್ದೇ ಗೆಲ್ಲುತ್ತೇವೆ ಎಂ ಛಲ ನಮ್ಮಲ್ಲಿದ್ದರೆ, ವಿಜಯ ಪತಾಕೆ ನಮ್ಮದಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲಿ ವಹಿಸಿದ್ದರು. ಎಸ್ಡಿಪಿಐ ಮುಖಂಡರಾದ ಅಥಾವುಲ್ಲಾ ಜೋಕಟ್ಟೆ, ಹನೀಫ್ ಮೂಳೂರು, ಅಬೂಬಕ್ಕರ್ ಪಾದೂರು, ಅಶ್ರಫ್ ಅಹಮದ್, ಸರಿತಾ, ಮಜೀದ್ ಪೊಲ್ಯ, ನೂರುದ್ದೀನ್ ಕಾಪು, ಆಸಿಫ್ ವೈಸಿ ಉಚ್ಚಿಲ ಹಾಗು ಅಝೀಝ್ ಪಡುಬಿದ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿರಿಯರೆಡೆಗೆ ನಮ್ಮ ನಡಿಗೆ - ಪಡುಬಿದ್ರಿಯ ಪ್ರಗತಿಪರ ಕೃಷಿಕ ಪಿ.ಕೆ.ಸದಾನಂದರಿಗೆ ಸನ್ಮಾನ

Posted On: 03-11-2022 08:56PM

ಪಡುಬಿದ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಗೀತಾನಂದ ಫೌಂಡೇಶನ್ ಮಣೂರು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ 9ನೇ ವರ್ಷದ ಸಂಪದ 2022 ತಿಂಗಳ ಸಡಗರ ಕಾರ್ಯಕ್ರಮದ ಅಂಗವಾಗಿ ಕಾಪು ತಾಲೂಕು ಘಟಕದ ವತಿಯಿಂದ ನವಂಬರ್ 3ರಂದು ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ ಅಂಗವಾಗಿ ಪಡುಬಿದ್ರಿಯ ಪ್ರಗತಿಪರ ಕೃಷಿಕ ಪಿ.ಕೆ.ಸದಾನಂದ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಕೆ. ಸದಾನಂದ ಕೃಷಿಯ ಜೊತೆಗೆ ಮೂರ್ತೆದಾರಿಕೆ, ಹೈನುಗಾರಿಕೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದೇನೆ. ನಮ್ಮ ಹಿರಿಯರ ಅನುಭವದ ಪಾಠಗಳು ನಮಗೆ ದಾರಿ ದೀಪವಾಗಿದೆ. ರೈತ ಸಂಘದ ಮೂಲಕ ಹಳ್ಳಿಗಳಲ್ಲಿ ಭೂ ಮಸೂದೆಯ ಬಗ್ಗೆ ಜನರಿಗೆ ತಿಳಿಸುವ ಕಾರ್ಯ, ಮೂರ್ತೆದಾರರ ಸಂಘಟನೆ, ಇತ್ಯಾದಿ ಕಾರ್ಯಗಳಲ್ಲಿ ಭಾಗವಹಿಸಿ, ಸಾಮಾಜಿಕ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಆ ಮೂಲಕ ಹಿಂದಿನಿಂದ ಬಹಳಷ್ಟು ಶ್ರಮವಹಿಸಿ ಕೃಷಿಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಹಿಂದಿನ ಪೀಳಿಗೆಯ ಅನುಭವಗಳು, ಕಾರ್ಯಗಳು, ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ನಶಿಸಿಹೋಗುತ್ತಿರುವ ಕೃಷಿಯನ್ನು ಇಂದಿಗೂ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿರುವ ಪಿ. ಕೆ. ಸದಾನಂದರು ನಮಗೆಲ್ಲರಿಗೂ ಆದರ್ಶರು. ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ಪೀಳಿಗೆಗೆ ಇಂತಹ ಸಾಧಕರನ್ನು ಪರಿಚಯಿಸುವ ಕಾರ್ಯ ಮಾಡುತ್ತಿದೆ ಎಂದರು. ಈ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರಾಮಚಂದ್ರ ಅಚಾರ್ಯ ಇವರನ್ನು ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಅಧ್ಯಕ್ಷರಾದ ಪುಂಡಲೀಕ ಮರಾಠೆ, ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಬೆಂಗಳೂರು ತುಳು ಕೂಟ ಅಧ್ಯಕ್ಷ ದಿನೇಶ್ ಹೆಗ್ಡೆ, ವಿಶು ಕುಮಾರ್ ಶೆಟ್ಟಿ, ಪತ್ರಕರ್ತ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳ್, ಗುರುರಾಜ್ ಪೂಜಾರಿ, ಸುಗಂಧಿ ಶ್ಯಾಮ್, ಕೇಶವ ಅಮೀನ್, ನವೀನ್ ಪೂಜಾರಿ, ಪ್ರಾಣೇಶ್ ಹೆಜಮಾಡಿ, ಭಾಸ್ಕರ, ನೀಲಾನಂದ ನಾಯ್ಕ್, ರಾಜೇಶ್, ಸುಂದರ್, ಸಂಘಟನಾ ಕಾರ್ಯದರ್ಶಿಗಳಾದ ದೀಪಕ್ ಬೀರ, ಕೆ.ಆರ್. ಪಾಟ್ಕರ್ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಅಧ್ಯಕ್ಷರಾದ ಪುಂಡಲೀಕ ಮರಾಠೆ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷರಾದ ವಿದ್ಯಾಧರ ಪುರಾಣಿಕ್ ವಂದಿಸಿದರು.

ಶ್ರೀ ನಾರಾಯಣ ಗುರು ಅಭಿವೃದ್ಧಿ ಕೋಶ ರಚನೆ : ರಾಜ್ಯ ಸರಕಾರಕ್ಕೆ ಗೀತಾಂಜಲಿ ಸುವರ್ಣ ಅಭಿನಂದನೆ

Posted On: 03-11-2022 06:00PM

ಉಡುಪಿ: ಹಿಂದುಳಿದ ವರ್ಗಕ್ಕೆ ಸೇರಿದ ಈಡಿಗ,ಬಿಲ್ಲವ ಸೇರಿದಂತೆ ತತ್ಸಮಾನ ಇಪ್ಪತ್ತಾರು ಜಾತಿಗಳವರಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಿರುವ ರಾಜ್ಯದಲ್ಲೇ ವಿಶಿಷ್ಠವಾದ ಶ್ರೀ ನಾರಾಯಣಗುರು ಅಭಿವೃದ್ಧಿ ಕೋಶವನ್ನು ಸ್ಥಾಪಿಸಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿಯವರನ್ನು ಹಿರಿಯ ಬಿಜೆಪಿ ನಾಯಕಿ ಮತ್ತು ಬಿಲ್ಲವ ಸಮುದಾಯದ ಮಹಿಳಾ ಮುಂದಾಳು ಗೀತಾಂಜಲಿ. ಎಂ.ಸುವರ್ಣ ಅಭಿನಂದಿಸಿದ್ದಾರೆ.

ಬಿಲ್ಲವ, ಈಡಿಗ ಸೇರಿದಂತೆ ತತ್ಸಮಾನ ಇಪ್ಪತ್ತಾರು ಜಾತಿಗಳವರಿಗೆ ಈಗಾಗಲೇ ಶೈಕ್ಷಣಿಕ ಹಾಗೂ ಔದ್ಯೋಗಿಕ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಕಲ್ಪಿಸಿರುವ ಬಿಜೆಪಿ ಸರಕಾರ, ನಾರಾಯಣಗುರು ವಸತಿ ಶಾಲೆ, ಕೋಟಿ- ಚೆನ್ನಯ್ಯ ಸೈನಿಕ ತರಬೇತಿ ಶಾಲೆಗಳನ್ನು ಸ್ಥಾಪಿಸುವ ಮೂಲಕ ಬಿಲ್ಲವ ಸಮುದಾಯದ ಅನೇಕ ಬೇಡಿಕೆಗಳನ್ನು ಈಡೇರಿಸಿದೆ.

ಬಿಲ್ಲವ ಸಮಾಜದ ಕೆಲವೇ ಮಂದಿ ಚುನಾವಣೆ ಹತ್ತಿರವಾಗುವ ಸಂದರ್ಭದಲ್ಲಿ ಸರಕಾರವನ್ನು ವಿರೋಧಿಸಿ ನೀಡುತ್ತಿರುವ ಹೇಳಿಕೆಗಳಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ , ಬಿಲ್ಲವ ಸಮುದಾಯದ ಜನತೆ ಬುದ್ಧಿವಂತರಿದ್ದು ಬಿಜೆಪಿ ಸರಕಾರಗಳ ಅವಧಿಯಲ್ಲಿ ಸಮುದಾಯಕ್ಕಾಗಿರುವ ಲಾಭಗಳ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದಾರೆ ಎಂದು ಗೀತಾಂಜಲಿ ಎಂ.ಸುವರ್ಣ ತಿಳಿಸಿದ್ದಾರೆ.

ಸರಕಾರ ಕೊಟ್ಟಂತಹ ಈ ಒಂದು ಅಭಿವೃದ್ಧಿ ಕೋಶದಲ್ಲಿ ಧನಾತ್ಮಕವಾದ ಚಿಂತನೆಗಳಿವೆ. ಇದನ್ನು ಎಲ್ಲರೂ ಸೇರಿ ಒಳಿತನ್ನು ಮಾಡುವ ಬದಲು ಸುಮ್ಮನೆ ಇಲ್ಲ ಸಲ್ಲದ ಆರೋಪಗಳನ್ನು ಹಾಕುವುದು ಒಳಿತಲ್ಲ. ಈ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ನಮ್ಮ ಎಲ್ಲಾ ಬಿಲ್ಲವ/ಈಡಿಗ ಸಮುದಾಯದವರು ಪಡೆದುಕೊಳ್ಳ ಬೇಕು ಹಾಗು ಮುಂದೆಯೂ ಕೂಡಾ ಬಿಲ್ಲವ ಸಮುದಾಯದ ನ್ಯಾಯೋಚಿತ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಈಡೇರಿಸಲು ಬಿಜೆಪಿ ಪಕ್ಷ ಮತ್ತದರ ನೇತೃತ್ವದ ರಾಜ್ಯ ಸರಕಾರ ಕಟಿಬದ್ಧವಾಗಿದ್ದು ಬಿಲ್ಲವರು ಬಿಜೆಪಿ ಮತ್ತು ರಾಜ್ಯ ಸರಕಾರದ ವಿರುದ್ಧದ ಯಾವುದೇ ಷಡ್ಯಂತ್ರಗಳಲ್ಲಿ ಭಾಗಿಯಾಗಕೂಡದು ಎಂದು ಗೀತಾಂಜಲಿ ಎಂ.ಸುವರ್ಣ ಸಮಸ್ತ ಬಿಲ್ಲವ ಸಮುದಾಯವನ್ನು ವಿನಂತಿಸಿದ್ದಾರೆ.

ರೋಟರಿ ಶಂಕರಪುರ : ದೀಪಾವಳಿ ಆಚರಣೆ ; ನೇಶನ್ ಬಿಲ್ಡರ್ ಅವಾರ್ಡ್ ಪ್ರದಾನ

Posted On: 03-11-2022 05:53PM

ಕಾಪು : ರೋಟರಿ ಶಂಕರಪುರದ ವತಿಯಿಂದ ದೀಪಾವಳಿ ಆಚರಣೆ ಹಾಗೂ ನೇಶನ್ ಬಿಲ್ಡರ್ ಅವಾರ್ಡ್ ಪ್ರದಾನ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ರೋಟರಿ ಜಿಲ್ಲೆ 3182 ರ ವಲಯ 5 ರ ಸಹಾಯಕ ಗವರ್ನರ್ ಡಾ| ಶಶಿಕಾಂತ ಕರಿಂಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತಿಥಿಗಳು ಸಾಮೂಹಿಕವಾಗಿ ದೀಪಗಳನ್ನು ಉರಿಸುವ ಮೂಲಕ ದೀಪಾವಳಿ ಶುಭಾಶಯ ವಿನಿಮಯ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯವರು ಅಂತರಾಷ್ಟ್ರೀಯ ರೋಟರಿಯು ಸಾಕ್ಷರತೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದು, ರೋಟರಿ ಇಂಡಿಯಾ ಲಿಟರಸಿ ಮಿಷನ್ ಮೂಲಕ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ಶಾಲೆಗಳ ಸಬಲೀಕರಣ ಶಿಕ್ಷಣದ ಗುಣಮಟ್ಟದ ಪೂರಕ ಯೋಜನೆ, ತರಬೇತಿ ಮತ್ತು ಪ್ರತಿಭಾನ್ವಿತ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಪ್ರೋತ್ಸಾಹಿಸುತ್ತಿದೆ ಹಾಗೂ ದೀಪಾವಳಿ ಹಬ್ಬದ ವಿಶೇಷತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ನೇಶನ್ ಬಿಲ್ಡರ್ ಅವಾರ್ಡ್ ಪ್ರದಾನ : ಪರಿಸರದ ವಿವಿಧ ಶಾಲೆಗಳ ಪ್ರತಿಭಾನ್ವಿತ ಶಿಕ್ಷಕರಾದ ಎಸ್ ವಿ ಎಚ್ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್ ಇನ್ನಂಜೆ ಸತೀಶ್ ನಾಯಕ್, ವಿದ್ಯಾವರ್ಧಕ ಹೈಸ್ಕೂಲ್ ಪಾಂಗಳ ಕಲ್ಯಾಣಿ, ಎಸ್ ವಿ ಎಚ್ ಹೈ ಸ್ಕೂಲ್ ಇನ್ನಂಜೆ ವಿಶ್ವನಾಥ ನಾಯ್ಕ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಚ್ಚಡ ಜಯಶ್ರೀ ಕೆ, ಸೈಂಟ್ ಜಾನ್ಸ್ ಅಕಾಡೆಮಿ ಹೈಸ್ಕೂಲ್, ಶಂಕರಪುರ ಸವಿತಾ ಮುರಳಿಧರ್, ಸೈಂಟ್ ಜಾನ್ಸ್ ಕನ್ನಡ ಮೀಡಿಯಂ ಹೈ ಸ್ಕೂಲ್ ಸುನೀತಾ ಲೀನಾ ಡಿಸೋಜ, ಇವರುಗಳಿಗೆ ನೇಶನ್ ಬಿಲ್ಡರ್ ಅವಾರ್ಡ್ ಪ್ರದಾನ ಮಾಡಲಾಯಿತು.

ಸಭೆಯಲ್ಲಿ ರೇಣುಕಾ ಆರ್ ವಾಲ್ಮೀಕಿಯವರ ಮನವಿಯ ಮೇರೆಗೆ ಮಗುವಿನ ಚಿಕಿತ್ಸೆಗೆ ರೋಟರಿ ಟ್ರಸ್ಟ್ ವತಿಯಿಂದ 10,000 ರೂ ಚೆಕ್ ಅನ್ನು ಡಾ| ಶಶಿಕಾಂತ ಕರಿಂಕ ವಿತರಿಸಿದರು. ರೋಟರಿ ಶಂಕರಪುರದ ಜನಪಯೋಗಿ ಕಾರ್ಯಕ್ರಮಗಳಲ್ಲಿ ಒಂದಾದ ಉಚಿತ ಮಾನಸಿಕ ಶಿಬಿರವು ಪ್ರತಿ ತಿಂಗಳ ಮೊದಲ ಭಾನುವಾರ ಸುಮಾರು 18 ವರ್ಷಗಳಿಂದ ನಡೆಯುತಿದೆ, ಈ ಶಿಬಿರದ ಮೆಡಿಸಿನ್ ವಿಭಾಗವನ್ನು 18 ವರ್ಷಗಳ ಕಾಲ ಉಚಿತ ಸೇವೆಯನ್ನು ನೀಡುತ್ತಾ ಬಂದಿರುವ ನಾಗರಾಜ್ ಮೂರ್ತಿ ಹಾಗೂ ಅವರ ಧರ್ಮಪತ್ನಿಯವರನ್ನು ರೋಟರಿಯ ಎಲ್ಲಾ ಹಿರಿಯ ಸದಸ್ಯರು ಸೇರಿ ಸನ್ಮಾನಿಸಿದರು. ಎಡ್ವಿನ್ ನೋಯಲ್ ಡಿಸಿಲ್ವ ಪ್ರಾರ್ಥನೆಯನ್ನು ನೆರವೇರಿಸಿದರು.

ಅಂಥೋನಿ ಡೇಸಾ ರವರು ನೇಶನ್ ಬಿಲ್ಡರ್ ಅವಾರ್ಡ ಬಗ್ಗೆ ಮಾಹಿತಿ ನೀಡಿದರು. ಜೇರೋಮ್ ರೋಡ್ರಿಗಸ್ ರವರು ನಾಗರಾಜ್ ಮೂರ್ತಿಯವರನ್ನು ಪರಿಚಯಿಸಿದರು. ಮಾಲಿನಿ ಶೆಟ್ಟಿಯವರು ಡಾ. ಶಶಿಕಾಂತ್ ಕರಿಂಕರವರ ಪರಿಚಯವನ್ನು ವಾಚಿಸಿದರು, ವೇದಿಕೆಯಲ್ಲಿ ಕ್ಲಬ್ ಸರ್ವಿಸ್ ಡೈರೆಕ್ಟರ್ ಫ್ರಾನ್ಸಿಸ್ ಡೇಸಾ ಉಪಸ್ಥಿತರಿದ್ದರು. ಅಧ್ಯಕ್ಷ ಗ್ಲಾಡಸನ್ ಕುಂದರ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಸಿಲ್ವಿಯ ಕಸ್ಟಲೀನೋ ವಂದಿಸಿದರು.

ಹೆಜಮಾಡಿ‌ : ಅತ್ಯುತ್ತಮ ಶಿಕ್ಷಕಿಯೆಂದು ಕರೆಯಲ್ಪಡುತ್ತಿದ್ದ ಶಿಕ್ಷಕಿ ಮಾನಸಿಕ‌‌ ಖಿನ್ನತೆಯಿಂದ ಆತ್ಮಹತ್ಯೆ

Posted On: 01-11-2022 10:20PM

ಹೆಜಮಾಡಿ : ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಕಿಯೆಂದೇ ಕರೆಯಲ್ಪಡುತ್ತಿದ್ದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತೋಕೂರು ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಹೆಜಮಾಡಿಯ ತನ್ನ ಗಂಡನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

ಹೆಜಮಾಡಿ ಟೋಲ್ ಬಳಿಯ ಚಿತ್ರಕೂಟ ಮನೆಯ ಸದಾಶಿವ ಗಡಿಯಾರ್‌ರವರ ಪತ್ನಿ, ತೋಕೂರು ತಪೋವನ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಜಯಂತಿ ಸದಾಶಿವ ಗಡಿಯಾರ್(೫೪) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ತನ್ನ ಸಹೋದರಿ ಮಾನಸಿಕ ಖಿನ್ನತೆಗೊಳಗಾಗಿದ್ದ ಸಂದರ್ಭ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದ ಜಯಂತಿಯವರು ಅವರು ಗುಣಮುಖರಾದ ಬಳಿಕ ತೀರಾ ಇತ್ತೀಚೆಗಷ್ಟೇ ಸ್ವಯಂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು ೨೫ ದಿನಗಳ ಹಿಂದೆ ತನ್ನ ಮಗಳ ಮನೆ ಬೆಂಗಳೂರಿಗೆ ತೆರಳಿ ವಿಶ್ರಾಂತಿ ಪಡೆದಿದ್ದರು. ಸೋಮವಾರವಷ್ಟೇ ಗಂಡನ ಜತೆಗೆ ಹೆಜಮಾಡಿಗೆ ಆಗಮಿಸಿದ್ದ ಅವರು ರಾತ್ರಿವರೆಗೂ ಖುಷಿಯಿಂದ ಇದ್ದರು. ಮುಂಜಾನೆ 3:30 ರ ಸಮಯ ಸದಾಶಿವ ಗಡಿಯಾರ್ ಎದ್ದು ನೋಡಿದ ಸಂದರ್ಭ ಅವರು ಕಾಣದಾದಾಗ ಬಾಗಿಲು ತೆರೆದು ಹೊರ ಬಂದ ಸಂದರ್ಭ ಮನೆ ಬಾವಿಗೆ ಹಾಸಲಾಗಿದ್ದ ಕಬ್ಬಿಣದ ಮುಚ್ಚಳ ತೆರೆದ ಸ್ಥಿತಿಯಲ್ಲಿತ್ತು. ಈ ಸಂದರ್ಭ ಮನೆಯಲ್ಲಿದ್ದ ಮಗ ರಾಧಾಕೃಷ್ಣ ಗಡಿಯಾರ್‌ನನ್ನು ಕರೆದು ಪರಿಶೀಲಿಸಿದಾಗ ಬಾವಿಯಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡು ಬಂದಿತ್ತು. ತಕ್ಷಣ ರಾಧಾಕೃಷ್ಣ ಬಾವಿಗೆ ಹಾರಿ ತಾಯಿಯನ್ನು ಹಿಡಿದು ಪರಿಶೀಲಿಸಿದಾಗ ಮೃತಪಟ್ಟಿರುವುದು ಕಂಡುಬಂದಿತ್ತು. ಇದೇ ಸಂದರ್ಭ ಪಕ್ಕದ ಟೋಲ್ ಸಿಬ್ಬಂದಿಗಳು ಆಗಮಿಸಿ ಇಬ್ಬರನ್ನೂ ಮೇಲಕ್ಕೆತ್ತಿದ್ದರು. ತಕ್ಷಣ ಜಯಂತಿಯವರನ್ನು ಆಸ್ಪತ್ರೆಗೆ ಕೊಂಡೊಯ್ದ ವೇಳೆ ಅದಾಗಲೇ ಅವರು ಮೃತಪಟ್ಟಿರುವುದು ದೃಢ ಪಟ್ಟಿತ್ತು.

ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೋಕೂರು ತಪೋವನ ಶಾಲೆಯಲ್ಲಿ ಕಳೆದ 26 ವರ್ಷಗಳಿಂದ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಜಯಂತಿಯವರು ಅತ್ಯುತ್ತಮ ಶಿಕ್ಷಕಿಯೆಂದೇ ಎಲ್ಲರಿಂದ ಪರಿಗಣಿಸಲ್ಪಟ್ಟಿದ್ದರು.

ಫಲಿಮಾರು : ದೇವಳದ ಜೀರ್ಣೋದ್ಧಾರ ಸಹಾಯಾರ್ಥವಾಗಿ ನಾಟಕ ಪ್ರದರ್ಶನ

Posted On: 01-11-2022 10:05PM

ಫಲಿಮಾರು : ಶ್ರೀ ಬ್ರಹ್ಮಲಿಂಗೇಶ್ವರ ಬ್ರಹ್ಮಸ್ಥಾನ, ಕೊಡಂಚಾಲ, ಅವರಾಲು, ವಯಾ ಹೆಜಮಾಡಿ, ಫಲಿಮಾರು ಗ್ರಾಮ, ಉಡುಪಿ ಜಿಲ್ಲೆ ಇದರ ಜೀರ್ಣೋದ್ಧಾರ ಸಹಾಯಾರ್ಥವಾಗಿ ನವಂಬರ್ 5 ರ ಶನಿವಾರ ಸಂಜೆ 4.30 ಕ್ಕೆ ಸಂತಕ್ರೂಜ್ ನ ಬಿಲ್ಲವ ಭವನದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ರಚಿಸಿ ನಿರ್ದೇಶಿಸಿರುವ, ಕಾಪಿಕಾಡ್, ಬೋಳಾರ್, ವಾಮಂಜೂರು ಅಭಿನಯದಲ್ಲಿ " ನಾಯಿದ ಬೀಲ..." ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಕ್ಷೇತ್ರದ ಭಕ್ತಾಭಿಮಾನಿಗಳು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಪುಣ್ಯ ಕಾರ್ಯಕ್ಕೆ ಕೈ ಜೋಡಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಟಿಕೆಟ್ ಗಾಗಿ ಸಂಪರ್ಕಿಸಿ : ರವೀಂದ್ರ ಶಾಂತಿ : 9892865119, ಸುನಿಲ್ ಫಲಿಮಾರ್ : 9930029387 ಸಂತೋಷ್ ಸಾಲ್ಯಾನ್ : 7977286528

ಕಾಪು : ಪಂಚಾಯತ್ ರಾಜ್ ಮಸೂದೆಗೆ ತಿದ್ದುಪಡಿ - ಕಾಂಗ್ರೆಸ್ ಪ್ರತಿಭಟನೆ

Posted On: 31-10-2022 04:59PM

ಕಾಪು : ಪಂಚಾಯತ್ ರಾಜ್ ಮಸೂದೆಗೆ ತಿದ್ದುಪಡಿ ಮಾಡಿ ಪಂಚಾಯತ್ ರಾಜ್ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದೆ ಎಂದು ಆಡಳಿತಾರೂಢ ಬಿಜೆಪಿ ವಿರುದ್ಧ ಕಾಪು ಕಾಂಗ್ರೆಸ್ ವತಿಯಿಂದ ಸೋಮವಾರ ಪ್ರತಿಭಟನೆ ಮಾಡಲಾಯಿತು.

ವ್ಯವಸ್ಥೆ ಗೆ ತಿದ್ದುಪಡಿ ತರುವ ಮೂಲಕ ಪಂಚಾಯತ್ ಗಳ ಅಧಿಕಾರವನ್ನು ಮೊಟಕುಗೊಳಿಸಿ ಜನತೆಗೆ ಅನ್ಯಾಯವೆಸಗಿದ್ದಾರೆ. ಸೋಮವಾರ ಕಾಪು ತಾಲೂಕು ಕಚೇರಿ ಮುಂಭಾಗ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

ಈ ಸಂದರ್ಭ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಕರ್ನಾಟಕ ಸರ್ಕಾರವು ಪಂಚಾಯತ್ ರಾಜ್ ವ್ಯವಸ್ಥೆಯನ್ನು ತನ್ನ ಹದ್ದು ಬಸ್ತಿನಲ್ಲಿಡಲು ಪ್ರಯತ್ನಿಸುತ್ತಿದೆ. ಹದಿನೈದನೇ ಹಣಕಾಸು ಯೋಜನೆಯಡಿ ಯಾವುದೇ ಸವಲತ್ತುಗಳನ್ನು ಪಂಚಾಯತ್ ಗೆ ನೇರವಾಗಿ ಸರಬರಾಜು ಆಗುತ್ತಿತ್ತು. ಇದನ್ವಯ ಜಲಸಿರಿ ಕಾರ್ಯಕ್ರಮದ ಮುಖಾಂತರ ಕುಡಿಯುವ ನೀರಿನ ಸರಬರಾಜು ಮಾಡಲು ಅವಕಾಶ ನೀಡಿತು. ಆದರೆ ಈಗ ಬರೇ ಪೈಪ್ ಹಾಕುವ ಮುಖಾಂತರ ತನ್ನ ಸುಪರ್ದಿಯ ಕಂಪನಿಗೆ ಟೆಂಡರ್ ನೀಡಿ ಕೆಲಸ ಮಾಡುತ್ತಿದೆ. ಜಲಮೂಲವನ್ನು ಹುಡುಕಿ ಟ್ಯಾಂಕ್ ಗಳ ನಿರ್ಮಾಣದ ನಂತರ ಪೈಪ್ ಹಾಕುವುದು ವಾಡಿಕೆ. ಒಟ್ಟಾರೆಯಾಗಿ ಜನರ ದುಡ್ಡು ಪೋಲಾಗುವ ಕೆಲಸ ಕಾರ್ಯಗಳು ನಡೆಯುತ್ತಿವೆ. ಪಂಚಾಯತ್ ಗಳಲ್ಲಿ ಶಾಸಕ,ಸಂಸದರ ಮೂಲಕ ಅನುದಾನ ಬರದೆ ನೇರವಾಗಿ ಪಂಚಾಯತ್ ಗೆ ಬರುವ ಹಾಗೆ ಆಗಬೇಕು ಎಂದರು. ಬಳಿಕ ಕಾಪು ತಹಶಿಲ್ದಾರರ ಅನುಪಸ್ಥಿತಿಯಲ್ಲಿ ಉಪ ತಹಶಿಲ್ದಾರ ಹರಿಪ್ರಸಾದ್ ಭಟ್ ಇವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ,ಕಾಪು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ವೈ.ಸುಕುಮಾರ್, ಶೇಖರ್ ಹೆಜಮಾಡಿ,‌ನವೀನ್ ಶೆಟ್ಟಿ ,ಶೇಖಬ್ಬ ಉಚ್ಚಿಲ, ಮತ್ತು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಅದಮಾರು : ಐತಿಹಾಸಿಕ ಉಳಿಕೆಗಳ ರಕ್ಷಣೆ ಇಂದಿನ ಅಗತ್ಯ- ಪುರಾತತ್ವ ಸಂಶೋಧಕ ಸುಭಾಸ್

Posted On: 31-10-2022 10:23AM

ಅದಮಾರು : ಇತಿಹಾಸ ಸಂಶೋಧನೆ ಮತ್ತು ಗುರುತಿಸುವಿಕೆಯಿಂದ ನಮ್ಮ ಸಾಂಸ್ಕೃತಿಕ ಅರಿವು ವಿಸ್ತಾರವಾಗುತ್ತದೆ.ಆದುದರಿಂದ ಐತಿಹಾಸಿಕ ಮಹತ್ವವುಳ್ಳ‌ ಪುರಾತನ ಅವಶೇಷಗಳನ್ನು ಕಾಪಿಡಬೇಕಾದುದು ಇಂದಿನ ಅಗತ್ಯ ಎಂದು ಪುರಾತತ್ವ ಸಂಶೋಧಕ ಬಂಟಕಲ್ಲಿನ‌ ಸುಭಾಸ್ ನಾಯಕ್ ಅವರು ಹೇಳಿದ್ದಾರೆ. ಅವರು ಅದಮಾರಿನಲ್ಲಿ‌ ಆದರ್ಶ ಸಂಘಗಳ ಒಕ್ಕೂಟವು ಸ್ಥಳೀಯ ಸರ್ವೋದಯ ಸಮುದಾಯ ಭವನದಲ್ಲಿಆಯೋಜಿಸಿದ ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿ‌ಯ "ಐತಿಹಾಸಿಕ ಪರಂಪರೆ ಉಳಿಸಿ ಜನಜಾಗೃತಿ ಅಭಿಯಾನ" ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.

ಪುರಾತನ ದೇವಾಲಯಗಳ ಜೀರ್ಣೋದ್ಧಾರ ಸಂದರ್ಭದಲ್ಲಿ ನಡೆಯುವ ಐತಿಹಾಸಿಕ ಮಹತ್ವದ ವಸ್ತುಗಳ ಅವಗಣನೆ, ಪರಿಸರದಲ್ಲಿರುವ ಕೋಟೆಕೊತ್ತಲಗಳ ನಾಶ,ಶಿಲಾಶಾಸನಗಳ ದಿವ್ಯನಿರ್ಲಕ್ಷ್ಯ,ನಾಣ್ಯಗಳ ದುರುಪಯೋಗ , ತಾಳೆಗರಿಗಳನ್ನು ರಕ್ಷಿಸದೆ ಇರುವುದು ಮುಂತಾದುದು ನಡೆಯುತ್ತಿವೆ.ಇಂತಹ ಐತಿಹಾಸಿಕ ಉಳಿಕೆಗಳನ್ನು ನಾಶಗೊಳಿಸದೆ ರಕ್ಷಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸುಭಾಸ್ ಹೇಳಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಸುದರ್ಶನ ವೈ.ಎಸ್.ಅಧ್ಯಕ್ಷತೆ ವಹಿಸಿದ್ದರು.ಉದಯ ಕೆ.ಶೆಟ್ಟಿ ಎರ್ಮಾಳು ಅವರು ಉದ್ಘಾಟಿಸಿದರು.ನಿವೃತ್ತ ಪ್ರಾಂಶುಪಾಲ ಬಿ.ಆರ್.ನಾಗರತ್ನ , ಎರ್ಮಾಳು ನೈಮಾಡಿ ನಾರಾಯಣ ಕೆ.ಶೆಟ್ಟಿ ,ಕೆ.ಎಲ್.ಕುಂಡಂತಾಯ, ಆದರ್ಶ ಯುವಕ ಸಂಘದ ಅಧ್ಯಕ್ಷ ಸಂತೋಷ ಜೆ.ಶೆಟ್ಟಿ,ಆದರ್ಶ ಮಹಿಳಾಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಲತಾ ಆರ್.ಆಚಾರ್ಯ ಅವರು ಉಪಸ್ಥಿತರಿದ್ದರು.

ಪ್ರಾಂಶುಪಾಲ ರಾಮಕೃಷ್ಣ ಪೈ ಅವರಿಗೆ ಗೌರವಾರ್ಪಣೆ : ಅದಮಾರಿನ ಆದರ್ಶ ಸಂಘಗಳ ಒಕ್ಕೂಟವು‌ ಅದಮಾರು ಪ.ಪೂ.ಕಾಲೇಜಿನ‌ ಪ್ರಾಂಶುಪಾಲರಾಗಿದ್ದು ನಿವೃತ್ತರಾಗಲಿರುವ ರಾಮಕೃಷ್ಣ ಪೈ ಅವರನ್ನು‌ಅಭಿನಂದಿಸಿ ಗೌರವಿಸಿತು. ಅದಮಾರಿನ ಶೈಕ್ಷಣಿಕ ಇತಿಹಾಸಕ್ಕೆ ತಮ್ಮದೇ ಆದ ಕೊಡುಗೆ ನೀಡಿದ, ಅದಮಾರಿನ ನಿವಾಸಿಯೂ ಆಗಿದ್ದು ಜನಪ್ರೀತಿ ಪಡೆದ ಸರಳ,ಸಜ್ಜನ ರಾಮಕೃಷ್ಣ ಪೈ ಅವರನ್ನು ನಿವೃತ್ತ ಪ್ರಾಂಶುಪಾಲ ಬಿ.ಆರ್.ನಾಗರತ್ನ ಅವರು ಗೌರವಿಸಿದರು.ಶ್ರೀಮತಿ‌ ಶ್ಯಾಮಲಾ ನಾಗರತ್ನ ಅವರು ಅಭಿನಂದನೆಯ ಮಾತುಗಳನ್ನಾಡಿದರು. ಸಂತೋಷ ಜೆ.ಶೆಟ್ಟಿ ಸ್ವಾಗತಿಸಿದರು,ಲತಾ ಆರ್. ಆಚಾರ್ಯ ವಂದಿಸಿದರು.ಗಣೇಶ ಸಾಲಿಯಾನ್ ಕಾರ್ಯಕ್ರಮ ನಿರ್ವಹಿಸಿದರು.

ಕಾಪು : ದೇಶದಲ್ಲಿ ಶೇ. 20 ರಷ್ಟು ರಕ್ತದ ಕೊರತೆಯಿದೆ : ಡಾ| ವೀಣಾ ಕುಮಾರಿ

Posted On: 30-10-2022 11:24PM

ಕಾಪು : ರಕ್ತದಾನ ಮಹಾದಾನವಾಗಿದ್ದು ದೇಶದಲ್ಲಿ ಶೇ.20ರಷ್ಟು ರಕ್ತದ ಕೊರತೆ ಕಾಡುತ್ತಿದೆ. ರಕ್ತದ ಅಲಭ್ಯತೆಯಿಂದಾಗಿ ಬಹಳಷ್ಟು ಮಂದಿ ಸಾವಿಗೀಡಾಗುತ್ತಿದ್ದು ನಾವೆಲ್ಲರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ಮತ್ತು ಜನರ ಜೀವವನ್ನು ಉಳಿಸಲು ಕೈಜೋಡಿಸಬೇಕಿದೆ ಎಂದು ಉಉಡಪಿ ಜಿಲ್ಲಾಸ್ಪತ್ರೆಯ ರಕ್ತ ನಿಧೀಕೇಂದ್ರದ ಮುಖ್ಯಸ್ಥೆ ಡಾ| ವೀಣಾ ಕುಮಾರಿ ಹೇಳಿದರು. ಕಾಪು ಧರಣಿ ಸಮಾಜ ಸೇವಾ ಸಂಘ, ಕಾಪು ಜೇಸಿಐ, ಕಾಪು ವಲಯ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಮ್ ಆಶ್ರಯದಲ್ಲಿ ಉಡುಪಿ ಜಿಲ್ಲಾಸ್ಪತ್ರೆ ಮತ್ತು ರಕ್ತ ನಿಧಿಕೇಂದ್ರದ ಸಹಯೋಗದಲ್ಲಿ ಕಾಪು ವೀರಭದ್ರ ಸಭಾಭವನದಲ್ಲಿ ರವಿವಾರ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತ ಸಂಗ್ರಹದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು ಇದನ್ನು ಕಾಪಾಡಿಕೊಂಡು ಬರುವಲ್ಲಿ ಯುವಜನರ ಸಹಕಾರ ಅತೀ ಅಗತ್ಯವಾಗಿ ದೊರಕಬೇಕಿದೆ ಎಂದರು.

ಸಮ್ಮಾನ : ದಾಖಲೆಯ 60ನೇ ಬಾರಿ ರಕ್ತದಾನ ಮಾಡಿದ ಸೂರಿ ಶೆಟ್ಟಿ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು. ರಕ್ತದಾನ ಶಿಬಿರದಲ್ಲಿ ಐವತ್ತಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಕಾಪು ಪೊಲೀಸ್ ಠಾಣಾಧಿಕಾರಿ ಶ್ರೀಶೈಲ ಮುರಗೋಡ, ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಕಾಪು ಉಪ ವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟಿ, ಕಾಪು ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾಪು ಜೇಸಿಐ ಅಧ್ಯಕ್ಷ ಸುಜಿತ್ ಶೆಟ್ಟಿ ಪಾದೂರು, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಮ್ ಅಧ್ಯಕ್ಷ ರಘುರಾಮ ಶೆಟ್ಟಿ ಕೊಪ್ಪಲಂಗಡಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾಪು ಧರಣಿ ಸಮಾಜ ಸೇವಾ ಸಂಘದ ಅಧ್ಯಕ್ಷ ಲೀಲಾಧರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕರಂದಾಡಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಪ್ರಭಾತ್ ಶೆಟ್ಟಿ ಮೂಳೂರು ವಂದಿಸಿದರು.

ಪಡುಬಿದ್ರಿ : ಶ್ರೀ ವೆಂಕಟರಮಣ ದೇವಳಕ್ಕೆ ಪಾದಯಾತ್ರೆ ಕೈಗೊಂಡ ಶ್ರೀ ವಾಮನಾಶ್ರಮ ಸ್ವಾಮೀಜಿ ಭೇಟಿ

Posted On: 30-10-2022 01:44PM

ಪಡುಬಿದ್ರಿ : ವಿಶ್ವಪ್ರಸಿದ್ಧ ಗೋಕರ್ಣ ಸಮೀಪದ ಹಳದಿಪುರದ ವೈಶ್ಯ ವಾಣಿ ಸಮಾಜದ ಶ್ರೀ ಸಂಸ್ಥಾನ ಶಾಂತಾಶ್ರಮ ಮಠದ ಶ್ರೀ ವಾಮನಾಶ್ರಮ ಸ್ವಾಮೀಜಿಯವರು ಕಳೆದ ವಿಜಯದಶಮಿ ಅಕ್ಟೋಬರ್ ೫ ರಂದು ತಮ್ಮ ಶಿಷ್ಯರೊಂದಿಗೆ ಆದಿ ಶಂಕರಾಚಾರ್ಯರ ಮೂಲಸ್ಥಾನ ದಕ್ಷಿಣದ ಕೇರಳದ ಕಾವಡಿಯಿಂದ ಉತ್ತರದ ಕಾಶೀ ವಿಶ್ವನಾಥ ಕ್ಷೇತ್ರದವರೆಗೆ ಪಾದಯಾತ್ರೆ ಆರಂಭಿಸಿದ್ದು ರವಿವಾರ ಕಾಪು ತಾಲೂಕಿನ ಪಡುಬಿದ್ರಿ ಶ್ರೀ ವೆಂಕಟರಮಣ ದೇವಳಕ್ಕೆ ಭೇಟಿ ಕೊಟ್ಟರು.

ಈ ಸಂದರ್ಭ ಮಾಧ್ಯಮದವರೊಡನೆ ಮಾತನಾಡಿದ ಅವರು ಕಾಶಿಯಲ್ಲಿ ನಮ್ಮ ಸಂಸ್ಥಾನದ ಮೂಲಮಠ ಇದ್ದು ನಮ್ಮ ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಇಚ್ಛೆಯಿಂದ ಮೂಲ ಮಠವನ್ನು ಪುನರುತ್ಥಾನಗೊಳಿಸುವ ಸಲುವಾಗಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಅಕ್ಷಯ ತೃತೀಯ ಎಪ್ರಿಲ್ 23 ರಂದು ಕಾಶಿ ತಲುಪುವ ಯೋಜನೆ ಇದೆ ಎಂದು ಹೇಳಿದರು.

ಈ ಸಂದರ್ಭ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಶಾಂತ್ ಶೆಣೈ ಸ್ವಾಮೀಜಿಯವರನ್ನು ಸ್ವಾಗತಿಸಿ ಬರ ಮಾಡಿಕೊಂಡರು. ವಿಶ್ರಾಂತಿ ನಂತರ ಸ್ವಾಮೀಜಿಯವರು ಕಾಪು ಕಡೆಗೆ ಪಾದಯಾತ್ರೆ ಬೆಳೆಸಿ ಇಂದು ಕಾಪು ಹಳೆ ಮಾರಿಗುಡಿಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.

ಈ ಸಂದರ್ಭ ಪಡುಬಿದ್ರಿ ಶ್ರೀ ವೆಂಕಟರಮಣ ದೇವಳ ಪ್ರಮುಖರು, ಭಕ್ತಾದಿಗಳು ಉಪಸ್ಥಿತರಿದ್ದರು.