Updated News From Kaup

ಯುವವಾಹಿನಿ ಪಡುಬಿದ್ರಿ ಘಟಕ : ಮಕ್ಕಳ ಹಬ್ಬ - ಕಲಾಶ್ರೀ, ಕಲಾರತ್ನ ಪ್ರಶಸ್ತಿ ಪ್ರದಾನ

Posted On: 02-12-2022 10:28AM

ಪಡುಬಿದ್ರಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸೃತ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ ಕೆಮುಂಡೇಲು ಖಾಸಗಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಮಕ್ಕಳ ಹಬ್ಬ, ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವು ನವೆಂಬರ್ 20ರಂದು ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ (ರಿ.) ಕೆಮುಂಡೇಲು ಇಲ್ಲಿ ಜರುಗಿತು. ಪುತ್ತಿಗೆ ಮಠ ಉಡುಪಿಯ ದಿವಾನರಾದ ನಾಗರಾಜ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಉಪಾಧ್ಯಕ್ಷರಾದ ಶಶಿಕಲಾ ಯಶೋಧರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜೆಸಿಐ ಪಡುಬಿದ್ರಿ ಅಧ್ಯಕ್ಷ ಶರತ್ ಶೆಟ್ಟಿ, ರಿಲಾಯನ್ಸ್ ಇನ್ಫೋಕಾಂ. ಲಿಮಿಟೆಡ್ ಸೀನಿಯರ್ ಮೆನೇಜರ್ ರಮೇಶ್ ಪಿ. ಬಿ., ಶ್ರೀ ಪಾಂಡುರಂಗ ಭಜನಾ ಮಂಡಳಿ ಕೆಮುಂಡೇಲು ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಶಾಂತಿ ಎಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶ್ಯಾಮಲಾ ನಾಗರತ್ನ ರಾವ್, ಶಾಲಾ ವಿದ್ಯಾರ್ಥಿ ನಾಯಕ ಶ್ರೇಯಸ್ ಉಪಸ್ಥಿತರಿದ್ದರು. ಉದ್ಗಾಟನಾ ಸಮಾರಂಭದ ನಂತರ ಮಕ್ಕಳಿಗಾಗಿ ಅಭಿನಯ ಗೀತೆ, ಚಿತ್ರಕಲಾ ಸ್ಪರ್ಧೆ, ಛದ್ಮವೇಷ , ಕಥೆಹೇಳುವ ಸ್ಪರ್ಧೆ, ಭಾಷಣ ಸ್ಪರ್ಧೆ,ಚಿತ್ರಕಲಾ ಸ್ಪರ್ಧೆ, ಛದ್ಮವೇಷ, ರಸಪ್ರಶ್ನೆ ಸಮೂಹ ನೃತ್ಯ, ಪ್ರಬಂಧ ಸ್ಪರ್ಧೆ ನಡೆಯಿತು.

ಸಮಾರೋಪ ಸಮಾರಂಭ: ಘಟಕದ ಉಪಾಧ್ಯಕ್ಷರಾದ ಅಶ್ವಥ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಅಧ್ಯಕ್ಷ ಉದಯ ಅಮೀನ್ ಮಟ್ಟು, ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ಬಿ. ಜೆ. ಪಿ. ಉಡುಪಿ ಜಿಲ್ಲೆ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಸಂಘಟನಾ ಕಾರ್ಯದರ್ಶಿ ಚಿತ್ರಾಕ್ಷಿ ಕೆ. ಕೋಟ್ಯಾನ್, ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ (ರಿ.) ಕೆಮುಂಡೇಲು ಕಾರ್ಯದರ್ಶಿ ಕೃಷ್ಣಾನಂದ ರಾವ್, ಕೆಮುಂಡೇಲು ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯೋಪಾಧ್ಯಾಯ ಜಗನ್ನಾಥ ಶೆಟ್ಟಿ, ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಕಾರ್ಯದರ್ಶಿ ಡಾ. ಐಶ್ವರ್ಯ ಸಿ. ಅಂಚನ್ ಉಪಸ್ಥಿತರಿದ್ದರು. ಸನ್ಮಾನ, ಪ್ರಶಸ್ತಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಸಂಸ್ಥೆಗೆ ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ (ರಿ.) ಕೆಮುಂಡೇಲು ಇವರ ವತಿಯಿಂದ ಸನ್ಮಾನ ನೆರವೇರಿತು. ಧೀರಜ್ ಯು ಆಚಾರ್ಯ ಕಲಾಶ್ರೀ ಪ್ರಶಸ್ತಿ, ಓಂಕಾರ್ ಎಸ್ ಜೋಗಿ ಕಲಾರತ್ನ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಘಟಕದ ಉಪಾಧ್ಯಕ್ಷರಾದ ಅಶ್ವಥ್ ಸ್ವಾಗತಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ಸುಜಿತ್ ಪ್ರಸ್ತಾವಿಸಿದರು. ಸ್ಪರ್ಧಾ ವಿಜೇತರ ಪಟ್ಟಿಯನ್ನು ರವಿರಾಜ್ ಎನ್ ಕೋಟ್ಯಾನ್ ವಾಚಿಸಿದರು. ಯಶೋದ ಮತ್ತು ತೃಪ್ತಿ ಕಾರ್ಯಕ್ರಮ ನಿರೂಪಿಸಿದರು. ಡಾ. ಐಶ್ವರ್ಯ ಸಿ ಅಂಚನ್ ವಂದಿಸಿದರು.

ಶಂಕರಪುರ : ನಶಾ ಮುಕ್ತ ಅಭಿಯಾನ

Posted On: 02-12-2022 09:33AM

ಶಂಕರಪುರ : ಭಾರತೀಯ ವೈದ್ಯಕೀಯ ಸಂಘ ಉಡುಪಿ ಹಾಗೂ ರೋಟರಿ ಕ್ಲಬ್ ಶಂಕರಪುರ ಜಂಟಿಯಾಗಿ ನಶಾ ಮುಕ್ತ ಅಭಿಯಾನ ಕಾರ್ಯಕ್ರಮವನ್ನು ಸೈಂಟ್ ಜಾನ್ಸ್ ಪಿಯು ಕಾಲೇಜ್ ಶಂಕರಪುರದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಡಾ. ಪಿ ವಿ ಭಂಡಾರಿ ಭಾರತೀಯ ವೈದ್ಯಕೀಯ ಸಂಘ ಉಡುಪಿ ನಡೆಸಿಕೊಟ್ಟರು.

ಐ ಎಂ ಎ ಕಾರ್ಯದರ್ಶಿ ಡಾ. ಕೇಶವ ನಾಯಕ್, ರೋಟರಿ ದಂಡಪಾಣಿ ಜಾರ್ಜ್ ಡಿಸಿಲ್ವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 180 ಮಕ್ಕಳು, ಶಿಕ್ಷಕರು, ರೋಟರಿಯ ಸದಸ್ಯರು, ಉಪಸ್ಥಿತರಿದ್ದರು.

ಸಭಾಧ್ಯಕ್ಷ ಸ್ಥಾನವನ್ನು ವಹಿಸಿದ ಸೈಂಟ್ ಜಾನ್ಸ್ ಪಿಯು ಕಾಲೇಜ್ ಶಂಕರಪುರದ ಪ್ರಾಂಶುಪಾಲರಾದ ಪ್ರಿಯಾ ಕೆ ಡೇಸಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಟರಿ ಅಧ್ಯಕ್ಷ ಗ್ಲಾಡಸನ್ ಕುಂದರ್ ಸ್ವಾಗತಿಸಿದರು. ಕಾರ್ಯದರ್ಶಿ ಸಿಲ್ವಿಯಾ ಕಸ್ಟಲೀನೋ ವಂದಿಸಿದರು.

ಉದ್ಯಮಿ ಜೋಸೆಫ್ ಮಥಾಯಸ್ ರವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Posted On: 02-12-2022 09:26AM

ದುಬೈನಲ್ಲಿರುವ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಹಾಗೂ ದುಬೈ ಕನ್ನಡಿಗರ ಸಹಕಾರದಲ್ಲಿ ದುಬೈ ಶೇಖ್ ರಶೀದ್ ಸಭಾಂಗಣದಲ್ಲಿ ಇತ್ತೀಚಿಗೆ ಜರಗಿದ 'ವಿಶ್ವಕನ್ನಡ ಹಬ್ಬದಲ್ಲಿ' ಮೈಸೂರಿನ ಮಹಾರಾಜ ಯದುವೀರ ಶ್ರೀ ಕೃಷ್ಣದತ್ತ ಚಾಮರಾಜ ಒಡೆಯರು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ಅರಬ್ ರಾಷ್ಟ್ರದಲ್ಲಿ ಉದ್ಯಮವನ್ನು ಹೊಂದಿರುವ ಜೋಸೆಫ್ ಮಥಾಯಸ್ ಅವರಿಗೆ 'ಅಂತಾರಾಷ್ಟ್ರೀಯ ವಿಶ್ವ ಮಾನ್ಯ ಪ್ರಶಸ್ತಿ' ನೀಡಿ ಗೌರವಿಸಿದರು.

ಬಹುಮುಖ ಪ್ರತಿಭೆಯಾಗಿರುವ ಜೋಸೆಫ್ ಮಥಾಯಸ್ ರವರು ಮಂಗಳೂರಿನ ಅಶೋಕನಗರ ಯುವಕ ಸಂಘದ ಮಹಾಪೋಷಕರಾಗಿದ್ದು, ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಸೀರೆ, ಧೋತಿ, ಗೌರವ ಧನ, ಅಂಗವಿಕಲರಿಗೆ ಗಾಲಿ ಕುರ್ಚಿ, ಹೊಲಿಗೆ ಯಂತ್ರ, ಸೈಕಲ್ ಮತ್ತು ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಸಹಾಯಧನ ನೀಡುತ್ತಾ ಬಂದಿರುತ್ತಾರೆ. ವಿವಿಧ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವವನ್ನು ನೀಡುತ್ತಿರುವ ಜೋಸೆಫ್ ಮಥಾಯಸ್ ಉಡುಪಿಯ ಶಂಕರ್ ಪುರದ ನಿವಾಸಿಯಾಗಿದ್ದು, ಮಂಗಳೂರಿನಲ್ಲಿಯೂ ವಾಸ್ತವ್ಯವನ್ನು ಹೊಂದಿದ್ದಾರೆ.

ಅರಬ್ ರಾಷ್ಟ್ರದಲ್ಲಿ ಉದ್ಯಮವನ್ನು ಹೊಂದಿರುವ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ನಟನೆ, ಸಂಗೀತ ಸಹಿತ ಸಾಂಸ್ಕೃತಿಕ ಕ್ಷೇತ್ರದಲ್ಲೂ ಮುಂದೆ ಇರುವ ಇವರು ನಗುಮುಖದ ಸರಳ ವ್ಯಕ್ತಿತ್ವದವರು. ಇವರು ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಗಣನೀಯ ಸೇವೆಗಾಗಿ ಈ ಪ್ರಶಸ್ತಿ ಲಭಿಸಿದೆ.

ಕಾಪು : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

Posted On: 02-12-2022 09:23AM

ಕಾಪು : ರಕ್ತದಾನ ಶ್ರೇಷ್ಠವಾಗಿದೆ. ನಮ್ಮ ದೇಹದ ಬಗೆಗೂ‌ ನಾವು ಗಮನಹರಿಸಿ ಆ ಮೂಲಕ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದು ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರ ಮುಖ್ಯಸ್ಥರಾದ ಡಾ. ವೀಣಾ ಕುಮಾರಿ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು,ಕಾಲೇಜಿನ ಐಕ್ಯೂಎಸಿ ಘಟಕ, ಶ್ರೀದೇವಿ ಸ್ಪೋರ್ಟ್ಸ್ ಮತ್ತು ಸಾಂಸ್ಕೃತಿಕ ಸಂಘ ಕಾಪು, ಯುವ ರೆಡ್ ಕ್ರಾಸ್ ಘಟಕ, ಕಾಲೇಜು ಹಳೆ ವಿದ್ಯಾರ್ಥಿ ಸಂಘ, ಹೆಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು ಹಾಗೂ ಜಿಲ್ಲಾ ರಕ್ತ ನಿಧಿ ಕೇಂದ್ರ ಉಡುಪಿ, ಇವರ ಸಹಯೋಗದೊಂದಿಗೆ ಡಿಸೆಂಬರ್ 1ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿ ಜರಗಿದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿನ ಪ್ರಾಂಶುಪಾಲರಾದ ಪ್ರೊ. ಸ್ಟೀವನ್ ಕ್ವಾಡ್ರಸ್ ವಹಿಸಿದ್ದರು.

ಈ ಸಂದರ್ಭ ಐಕ್ಯೂಎಸಿ ಸಂಚಾಲಕರಾದ ಡಾ.ರೋಶ್ನಿ ಯಶವಂತ್, ಶ್ರೀ ದೇವಿ ಸ್ಪೋರ್ಟ್ಸ್ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್, ಹೆಚ್‌ ಡಿ ಎಫ್ ಸಿ ಬ್ಯಾಂಕ್ ಮಂಗಳೂರು ಇದರ ಮ್ಯಾನೇಜರ್ ರಾಘವೇಂದ್ರ ರಾವ್, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಡಾ.ಸುಚಿತ್ರಾ ಎಸ್ ಆರ್, ಬೋಧಕ-ಬೋಧಕೇತರ ವರ್ಗ, ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಅಭಿವೃದ್ಧಿ ಸಮಿತಿಯವರು‌ ಉಪಸ್ಥಿತರಿದ್ದರು.

ದ್ವಿಚಕ್ರ ವಾಹನ ಸವಾರರಿಗೆ ತೊಂದರೆ : ಹೆದ್ದಾರಿ ಇಲಾಖೆ ನಿರ್ಲಕ್ಷ್ಯ

Posted On: 01-12-2022 05:52PM

ಪಡುಬಿದ್ರಿ : ಹಾಳಾದ ರಸ್ತೆಯನ್ನು ಸರಿ ಮಾಡದೆ ಸರಿ ಇದ್ದ ರಸ್ತೆಯನ್ನು ಯಂತ್ರದ ಮೂಲಕ ಡಾಂಬರು ತೆಗೆದು ಜೊತೆಗೆ ಡಾಂಬರು ಹುಡಿಯು ರಸ್ತೆಯಲ್ಲೇ ಇದ್ದು ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುವ ಸ್ಥಿತಿ ಪಡುಬಿದ್ರಿ ಸಮೀಪದ ಕಣ್ಣಂಗಾರುವಿನಿಂದ ಬೀಡುವರೆಗೆ ಒಂದು ಬದಿಯ ರಸ್ತೆಯಲ್ಲಿ ಕಾಣಬಹುದಾಗಿದೆ.

ಇದೇ ಭಾಗಲ್ಲಿ ಒಂದೆಡೆ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳು ಮತ್ತೊಂದೆಡೆ ರಸ್ತೆಯ ಈ ಸ್ಥಿತಿ ಜೊತೆಗೆ ಡಾಂಬರು ಹುಡಿ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗಿದೆ. ರಾತ್ರಿ ವೇಳೆ ಇಂತಹ ಸ್ಥಿತಿ ಅಪಾಯಕಾರಿ ಆದಷ್ಟು ಬೇಗ ಡಾಂಬರೀಕರಣವಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಿರಿಯರ ಕನ್ನಡ ಸೇವೆಯು ನಮಗೆ ಮಾದರಿಯಾಗಲಿ – ಡಾ ಹಿರೇಮಗಳೂರು ಕಣ್ಣನ್‌

Posted On: 30-11-2022 05:48PM

ಕಾರ್ಕಳ : ಕನ್ನಡದ ಕಂಪು ವಿಶ್ವದೆಲ್ಲೆಡೆ ಪಸರಿಸಲು ನಾವು ಕಟಿಬದ್ಧರಾಗಬೇಕು. ಕನ್ನಡದ ನೆಲ, ಜಲ, ಭಾಷೆಗಳು ಉತ್ತುಂಗಕ್ಕೇರಲು ಇಂದಿನ ಯುವ ಪೀಳಿಗೆ ಪ್ರಯತ್ನಿಸಬೇಕು. ನಮ್ಮ ಪೂರ್ವಿಕರು ನಮಗೆ ದೊರಕಿಸಿಕೊಟ್ಟಿರುವ ಈ ಭವ್ಯ ಭಾಷೆ, ಕಲೆ, ಸಂಪತ್ತನ್ನು ವೃದ್ಧಿಸಬೇಕು. ನಮ್ಮಲ್ಲಿರುವ ಪರಸ್ಪರ ದ್ವೇಶಭಾವ ಬಿಟ್ಟು ಸುಮನಸಿನವರಾಬೇಕಾಗಿದೆ. ತಂದೆ-ತಾಯಿಗಳನ್ನು ಪ್ರೀತಿಯಿಂದ ಸಲಹಬೇಕು. ಹಾಗೆಯೇ ನಮ್ಮ ಮಾತೃಭೂಮಿ ತಾಯಿ ಭಾಷೆಯನ್ನು ಬೆಳೆಸಬೇಕು ಎಂದು ಕನ್ನಡದ ಪೂಜಾರಿ ಡಾ ಹಿರೇಮಗಳೂರು ಕಣ್ಣನ್‌ ಕರೆ ನೀಡಿದರು.

ಅವರು ನವೆಂಬರ್‌ 29 ರಂದು ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ʼಕ್ರಿಯೇಟಿವ್‌ ನುಡಿಹಬ್ಬ-೨೦೨೨ʼ ವನ್ನು ಉದ್ಘಾಟಿಸಿ “ನಿನಾದ” ತ್ರೈಮಾಸಿಕ ಪತ್ರಿಕೆಯ ಎರಡನೇ ಸಂಚಿಕೆಯನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಆರೋಗ್ಯ ಪೂರ್ಣವಾದ ಮನಸ್ಸು ಪಡೆಯಲು ಕ್ರಿಯಾಶೀಲ ಚಟುವಟಿಕೆಗಳು ಪೂರಕ. ಸತ್ಯದ ಒಸರನ್ನು ಹುಡುಕುವ ಕಡೆಗೆ ಸದಾ ಮನಸ್ಸು ತುಡಿಯುತ್ತಿರಲಿ ಎಂದು ಹಾರೈಸಿದರು. ಕ್ರಿಯೇಟಿವ್‌ ಕಾಲೇಜಿನಲ್ಲಿ ವಾಣಿಜ್ಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಬಿ ರಾವ್‌ ಅವರ ʼಬೊಂಬಿನ ಬೇಲಿʼ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ಮಾತನಾಡಿ ವಿದ್ಯಾರ್ಥಿಗಳು ಸಾಹಿತ್ಯ ಕ್ಷೇತ್ರದೆಡೆಗೆ ಮತ್ತು ಮೌಲ್ಯಯುತ ವಿಚಾರಗಳನ್ನು ತಿಳಿಯಲು ಆಸಕ್ತರಾಗಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕರಲ್ಲೊಬ್ಬರಾದ ಅಮೃತ್‌ ರೈ ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಸಾಹಿತ್ಯ ಚಟುವಟಿಕೆ ಮತ್ತು ಕಾರ್ಯಕ್ರಮಗಳು ಎಲ್ಲ ಕಡೆಯಲ್ಲೂ ನಡೆಯುವಂತಾಗಲಿ ಎಂದು ಆಶಿಸಿದರು.

ಸಂಸ್ಥಾಪಕರಾದ ಡಾ ಗಣನಾಥ ಶೆಟ್ಟಿ, ಆದರ್ಶ ಎಂ ಕೆ, ವಿಮಲ್‌ ರಾಜ್‌, ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು ಉಡುಪಿಯ ಪ್ರಾಂಶುಪಾಲರಾದ ಸ್ಟಾನಿ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥಾಪಕರಾದ ಅಶ್ವಥ್‌ ಎಸ್‌ ಎಲ್‌ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವಿನಾಯಕ ಜೋಗ್‌ ಬಹುಮಾನಿತರ ಯಾದಿ ವಾಚಿಸಿದರು. ಲೋಹಿತ್‌ ಎಸ್‌ ಕೆ ವಂದಿಸಿದರು. ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ದುಪ್ಪಟ್ಟು ಟೋಲ್ ವಿಧಿಸುವ ಕ್ರಮ ಸರಿಯಲ್ಲ : ಸಮಾಜ ಸೇವಕ ಫಾರೂಕ್ ಚಂದ್ರನಗರ

Posted On: 30-11-2022 05:29PM

ಕಾಪು : ಹೆಜಮಾಡಿಯಲ್ಲಿ ಡಿಸೆಂಬರ್ 01 ರಿಂದ ದುಪ್ಪಟ್ಟು ಟೋಲ್ ವಿಧಿಸುವ ಕ್ರಮ ಸರಿಯಲ್ಲ ಜನಸಾಮಾನ್ಯರು ಈಗಾಗಲೇ ಹೆಚ್ಚುತ್ತಿರುವ ದಿನಬಳಕೆ ವಸ್ತು ಡೀಸೆಲ್, ಪೆಟ್ರೋಲ್ ನಿಂದ ಕಂಗೆಟ್ಟಿದ್ದಾರೆ. ಕರೋಣದಂತ ಮಹಾ ಮಾರಿಯಿಂದ ಈಗ ವ್ಯಪಾರ ವ್ಯವಹಾರ ಚೇತರಿಕೆ ಸಂದರ್ಭದಲ್ಲಿ ಜನರ ಮೇಲೆ ಟೋಲ್ ದುಪ್ಪಟ್ಟು ಮಾಡಿ ಕಾಪು, ಪಡುಬಿದ್ರಿ, ಮುಲ್ಕಿ ಹತ್ತಿರದ ಜನರಿಗೆ ತುಂಬಾನೇ ಕಷ್ಟಕರ ಪರಿಸ್ಥಿತಿ ಎದುರಾಗುತ್ತದೆ. ಕೇಂದ್ರ ಸರಕಾರ ಕೂಡಲೇ ಇದನ್ನು ಮನಗಂಡು ಈ ಮೊದಲು ನಿಗದಿಪಡಿಸಿದ್ದ ದರವನ್ನೆ ಮುಂದುವರೆಸಿ ಜನಸಾಮಾನ್ಯರಿಗೆ ಸಹಕರಿಸಬೇಕೆಂದು ಸಮಾಜ ಸೇವಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫಾರೂಕ್ ಚಂದ್ರನಗರ ಆಗ್ರಹಿಸಿದ್ದಾರೆ.

ಡಿಸೆಂಬರ್ 16,17,18 ರಂದು ಕಾಪು ಕಡಲ ಕಿನಾರೆಯಲ್ಲಿ ಕಡಲ ಐಸಿರ - 2022

Posted On: 29-11-2022 06:47PM

ಕಾಪು : ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ (ರಿ.) ಕಾಪು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಪು ಪಡು, ದಿ| ಆರ್ ಡಿ ಮೆಂಡನ್ ಕಾಪು ಸ್ಮರಣಾರ್ಥ ಜನ್ಮ ಶತಮಾನೋತ್ಸವ ಆಚರಣೆ ಸಮಿತಿ, ಕಾಪು ಇದರ ಸಂಯುಕ್ತ ಆಶ್ರಯದಲ್ಲಿ ಕಾಪು ದೀಪಸ್ಥಂಭದ ಬಳಿ ಕಡಲ ಕಿನಾರೆಯಲ್ಲಿ ಬೀಚ್ ಉತ್ಸವ ಕಡಲ ಐಸಿರ 2022 ಡಿಸೆಂಬರ್ 16,17,18 ರಂದು ಜರಗಲಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷರಾದ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಕಾಪುವಿನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಲಾಲ್ ಬಹುದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ಸಂಸ್ಥೆಯ 45ನೇ ವಾರ್ಷಿಕೋತ್ಸವ ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ದಿ. ಆರ್ ಡಿ ಮೆಂಡನ್ ಕಾಪು ಇವರ ಸ್ಮರಣಾರ್ಥ ಜನ್ಮ ಶತಮಾನೋತ್ಸವ ಆಚರಣಾ ಸಂಯುಕ್ತ ಆಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳು ಕಾಪು ಕಡಲ ಕಿನಾರೆಯಲ್ಲಿ ಜರಗಲಿದೆ. ಈ ಹಿಂದೆ ಕಾರ್ಯಕ್ರಮಗಳನ್ನು ಆಯೋಜಿಸಿದ ತಂಡ ಈ ಬಾರಿ ಆಟದ ಜೊತೆಗೆ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ, ಫಲಪುಷ್ಪ ಕಲಾ ಸ್ಪರ್ಧೆ- ಪ್ರದರ್ಶನ, ಫುಡ್ ಫೆಸ್ಟಿವಲ್, ಲೇಸರ್ ಷೋ, ರಸಮಂಜರಿ, ಬಲೆ ಬೀಸಿ ಮೀನು ಹಿಡಿಯುವುದು, ಗಾಳ ಹಾಕಿ ಮೀನು ಹಿಡಿಯುವುದು, ಚೆಂಡೆ ಸ್ಪರ್ಧೆ, ಬೀಚ್ ವಾಲಿಬಾಲ್ ಸ್ಪರ್ಧೆ, ಮಹಿಳೆಯರಿಗಾಗಿ ತ್ರೋಬಾಲ್, ಸಂಗೀತ ಕುರ್ಚಿ ಇತ್ಯಾದಿ ಸ್ಪರ್ಧೆಗಳು, ಕೊಳಲು ತಬಲ ತಂಡ, ಶ್ವಾನ ಸ್ಪರ್ಧೆ, ಈಜು ಸ್ಪರ್ಧೆ, ಮರಳಿನಲ್ಲಿ ಕಲಾಕೃತಿ, ಹುಟ್ಟು ಧೋನಿ ಸ್ಪರ್ಧೆ, ಗಾಳಿಪಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಇದರಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದವರಿಗೆ ನಗದು ಬಹುಮಾನ ಇದೆ ಎಂದರು.

ಈ ಸಂದರ್ಭ ಸಂಸ್ಥೆಯ ಅಧ್ಯಕ್ಷರಾದ ಶೀಲರಾಜ್ ಪುತ್ರನ್, ಉಪಾಧ್ಯಕ್ಷರಾದ ಆನಂದ ಶ್ರೀಯಾನ್, ಕಾರ್ಯದರ್ಶಿ ಸಚಿನ್ ಪುತ್ರನ್, ಕೋಶಾಧಿಕಾರಿ ಕುಶ ಸಾಲ್ಯಾನ್, ದಿನೇಶ್ ಸುವರ್ಣ, ನಿತೇಶ್ ಸುವರ್ಣ, ರಾಜೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಕಟಪಾಡಿ : ಏಣಗುಡ್ಡೆ ಶ್ರೀ ಶಿವಾನಂದ ಭಜನಾ ಮಂಡಳಿಯ 76ನೇ ವಾರ್ಷಿಕ ಮಂಗಳೋತ್ಸವ

Posted On: 29-11-2022 02:57PM

ಕಟಪಾಡಿ : ಇಲ್ಲಿನ ಏಣಗುಡ್ಡೆ ಶ್ರೀ ಶಿವಾನಂದ ಭಜನಾ ಮಂಡಳಿಯ 76ನೇ ವಾರ್ಷಿಕ ಮಂಗಳೋತ್ಸವ ಡಿಸೆಂಬರ್ 3ರಂದು ಜರಗಲಿದೆ.

ಆ ಪ್ರಯುಕ್ತ ಅದೇ ದಿನ ಬೆಳಿಗ್ಗೆ ಏಳು ಗಂಟೆಗೆ ಗಣಹೋಮ, ಗಂಟೆ 10ಕ್ಕೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಗಂಟೆ 12ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 6ಕ್ಕೆ ಕಲಶ ಪ್ರತಿಷ್ಠೆಯೊಂದಿಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಗಂಟೆ 12ಕ್ಕೆ ಮಂಗಳೋತ್ಸವ ನೆರವೇರಲಿದೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

ಚಂಪಾ ಷಷ್ಠಿ - ಸುಬ್ರಹ್ಮಣ್ಯ ಷಷ್ಠಿ : "ನಾಗ - ಸುಬ್ರಹ್ಮಣ್ಯ" ಸಮೀಕರಣ ಒಂದು ವಿಶ್ಲೇಷಣೆ

Posted On: 28-11-2022 09:55PM

ಆದಿಮ - ವೈದಿಕ ವಿಚಾರಧಾರೆಗಳು ಒಂದಕ್ಕೊಂದು ಪೂರಕವಾಗಿದ್ದುವುಗಳಾಗಿದ್ದುದರಿಂದಲೇ ಅಥವಾ ಆದಿಮದ ಮುಂದುವರಿದ ಭಾಗವಾಗಿ ವೈದಿಕವು ಪಡಿಮೂಡಿರುವುದರಿಂದಲೇ ನಮ್ಮ ಸಂಸ್ಕೃತಿಯಲ್ಲಿ ಸಾವಿರಾರು ದೈವಗಳು - ಕೋಟಿ ಸಂಖ್ಯೆಯ ದೇವತೆಗಳು - ದೇವರುಗಳಿದ್ದರೂ ಗೊಂದಲವಿಲ್ಲ.ಸರ್ವ ಆಶೋತ್ತರಗಳ ಈಡೇರಿಕೆಗೆ ಒಂದೇ ದೇವರಿಗೆ ಶರಣಾಗುವ ಜಾಯಮಾನ ನಮ್ಮದಲ್ಲ.ನಮ್ಮಲ್ಲಿ‌ ಒಂದೊಂದು ಅನುಗ್ರಹಕ್ಕೆ ಒಬ್ಬೊಬ್ಬ ದೇವರಂತೆ ಆರಾಧಿಸುತ್ತೇವೆ. ಈ‌ದೇವರುಗಳ ಸಂದಣಿಯಲ್ಲಿ‌ ತಾಯಿಯಾಗಿ ರಕ್ಷಿಸುವ ,ತಂದೆಯಾಗಿ ಕರುಣೆತೋರುವ, ಸಂಪತ್ತನ್ನು‌ಕೊಡುವ, ವಿಘ್ನಗಳನ್ನು‌ನಿವಾರಿಸಿ ಬದುಕನ್ನು ನಿರಾಳವಾಗಿಸುವ,ದುಷ್ಟಾರಿಷ್ಟಗಳನ್ನು ಪರಿಹರಿಸುವವರು ಇದ್ದಾರೆ.ಮಾನವ ಬದುಕಿನ‌ ಪರಮ ಲಕ್ಷ್ಯ ಸುಖ, ಸಮೃದ್ಧಿ ಹಾಗೂ ಭಾರತೀಯ ತತ್ತ್ವಜ್ಞಾನದಂತೆ ಸತ್ ಸಂತಾನ ಪ್ರಾಪ್ತಿ, ಮಕ್ಕಳಿಲ್ಲದವನ ಬದುಕು ಸಾರ್ಥಕವಾಗಲಾರದು‌ ಆದುದರಿಂದಲೇ ಈ ಅನುಗ್ರಹ ಶಕ್ತಿಯನ್ನು ಹೊಂದಿರುವ ದೇವರು ಬಹುಮಾನ್ಯನಾಗಿ ಜನಪ್ರಿಯನಾಗುವುದು ಸಹಜ.ಅದರೊಂದಿಗೆ ಅಕ್ಷಯ ಕೃಷಿಸಂಪತ್ತನ್ನು ನೀಡುವ ,ತೀವ್ರ ವ್ಯಾಧಿಗಳನ್ನು ಗುಣ‌ಪಡಿಸುವ‌ ಅನುಗ್ರಹ ವಿಶೇಷ ‌ಇರುವುದರಿಂದಲೇ ನಾಗ - ಸುಬ್ರಹ್ಮಣ್ಯ ಸಾನ್ನಿಧ್ಯಗಳು ಜನಪ್ರೀತಿ ಪಡೆದುವು.

ಸುಬ್ರಹ್ಮಣ್ಯ - ಆರು : • ಸುಬ್ರಹ್ಮಣ್ಯ ಪುರಾಣಗಳು ಹೇಳುವ ಕಥೆಗಳಲ್ಲಿ ಸುರಸೈನ್ಯನಾಥನಾಗಿ,ಪರಾಕ್ರಮಿಯಾಗಿ ,ಅಸುರ ಮರ್ದನನಾದ,ದೇವತೆಗಳನ್ನು ರಕ್ಷಿಸುವ ಮಹಾದೇವನ ಪುತ್ರನಾದ ಷಣ್ಮುಖ,ಇವನ ಜನನವೇ ತಾರಕನೆಂಬ ರಾಕ್ಷಸನ ವಧೆಗಾಗಿ ಸಂಭವಿಸಿತು. • ಕೃತ್ತಿಕೆಯರು ಆರು ಮಂದಿಯಿಂದ ಪೋಷಿಸಲ್ಪಟ್ಟವ ಎಂಬ ಕಾರಣಕ್ಕೆ ಈತ ಕಾರ್ತಿಕೇಯನಂತೆ.ಹೀಗೆ ಆರು ಮುಖದಿಂದ ಪೂಜೆಗೊಳ್ಳುವ ಸುಬ್ರಹ್ಮಣ್ಯನಿಗೂ 'ಆರು' (ಷಟ್) ಅಂಕೆಗೂ ಒಂದು ಅವಿನಾಭಾವ ಸಂಬಂಧ. • ದೇವಿ ಭಾಗವತ ವಿವರಿಸುವಂತೆ 'ಷಷ್ಠೀ' ಎಂಬಾಕೆ ಕುಮಾರ ಸ್ವಾಮಿಯ ಮಡದಿ, 'ಷಷ್ಠೀ ಪ್ರಿಯ'ನೆಂಬುದು ಸುಬ್ರಹ್ಮಣ್ಯನಿಗಿರುವ ಅನ್ವರ್ಥನಾಮ. • ದೇವತೆಗಳಲ್ಲಿ ಶ್ರೇಷ್ಠನೆನಿಸಿ ,ಇಂದ್ರನು ಸೂಚಿಸಿದಂತೆ ದಕ್ಷಬ್ರಹ್ಮನ ಮಗಳಾದ ದೇವಸೇನೆಯನ್ನು ಷಷ್ಠಿ ದಿನದಂದು‌ ಸುಬ್ರಹ್ಮಣ್ಯನು‌ ವರಿಸಿದ ಎಂಬುದು ಒಂದು ಕಥೆ. • ಕಾರಣಾಂತರದಿಂದ ಬ್ರಹ್ಮಶಾಪಕ್ಕೆ ಒಳಗಾಗಿ ಘಟಸರ್ಪನಾದ ಸುಬ್ರಹ್ಮಣ್ಯ .ಈ ಶಾಪ‌ ನಿವೃತ್ತಿಗಾಗಿ ಸುಬ್ರಹ್ಮಣ್ಯನ ಮಾತೆ ಪಾರ್ವತಿ 108 ಷಷ್ಠಿ ದಿನಗಳಲ್ಲಿ ಉಪವಾಸ ವ್ರತವನ್ನು ಆಚರಿಸಲಾಗಿ ವ್ರತ ಉದ್ಯಾಪನೆಯಂದು ಮಹಾ ವಿಷ್ಣುವಿನ‌‌ ಸ್ಪರ್ಶ ಮಾತ್ರದಿಂದ ಸುಬ್ರಹ್ಮಣ್ಯನಿಗೆ‌ ತನ್ನ ಪೂರ್ವದ ಸುಕುಮಾರ ರೂಪ ಮರಳಿ‌ ಪ್ರಾಪ್ತಿಯಾಯಿತಂತೆ ಪ್ರತೀ ಪಕ್ಷದ ಷಷ್ಠಿಯೇ ಪಾರ್ವತಿ ಆಚರಿಸಿದ ವ್ರತದ ದಿನವಾಗಿದ್ದು ಷಷ್ಠಿಗೂ ಸುಬ್ರಹ್ಮಣ್ಯನಿಗೂ‌ ಸಂಬಂಧವಿದೆ. ವಿವಾಹದ ಶುಭ ಸಂದರ್ಭ, ದೇವತೆಗಳಿಗೆ ರಾಕ್ಷಸರ ವಿರುದ್ಧ ಯುದ್ಧದಲ್ಲಿ ವಿಜಯ ಪ್ರಾಪ್ತಿಯಾದ ದಿನ,ಶಾಪ ವಿಮೋಚನೆಯಂತಹ ನಿವೃತ್ತಿಯ ಪುಣ್ಯಕಾಲ,ಸ್ವತಃ ಕೃತ್ತಿಕ್ಕೆಯರಿಗೆ ಬೇಕಾಗಿ ಆರು ಮುಖ ಧರಿಸಿದ ಕುಮಾರನ ಬಾಲ್ಯ‌ಮುಂತಾದ ಸಂದರ್ಭಗಳು ಸುಬ್ರಹ್ಮಣ್ಯ ಷಷ್ಠಿಗಿರುವ ಸಂಬಂಧವನ್ನು ಬೆಸೆಯುತ್ತಾ ಸ್ಕಂದನ‌ ಆರಾಧನೆಗೆ ಷಷ್ಠಿ ಪ್ರಶಸ್ತ ದಿನವಾಗಿ ರೂಢಗೊಂಡಿರಬೇಕೆಂದು‌ ಭಾವಿಸಬಹುದು.

ನಾಗ - ಸುಬ್ರಹ್ಮಣ್ಯ : ಉತ್ತರ ಭಾರತದಲ್ಲಿ ಸ್ಕಂದನಾಗಿ ಜನಪ್ರಿಯಗೊಂಡಿದ್ದು ,ತಮಿಳುನಾಡು‌ ಪರಿಸರದಲ್ಲಿ (ದಕ್ಷಿಣಭಾರತದಲ್ಲಿ) ಆದಿಮ‌ ಸಂಸ್ಕೃತಿಯೊಂದಿಗೆ ತನ್ನ ಅಸ್ತಿತ್ವವನ್ನು‌ ತೋರುತ್ತಾ ಕಂದ,ಕುಮಾರ, ಪರಾಕ್ರಮಿ,ಸುಂದರ ಮುಂತಾದ ನೆಗಳ್ತೆವೆತ್ತು‌ ರಸಿಕಾಗ್ರಣಿಯಾಗಿ‌ ,ಸಂತಾನ ಮತ್ತು ಸಮೃದ್ಧಿ ಹಾಗೂ ಸುಖ ದಾಂಪತ್ಯ, ಪ್ರೀತಿಸಿದ ವಧುವಿನೊಂದಿಗೆ ಅಥವಾ ವರನೊಂದಿಗೆ ವಿವಾಹ ಮುಂತಾದ ಅನುಗ್ರಹ ಶಕ್ತಿ ಎಂದೇ‌ ಪರಿಗ್ರಹಿಸಲ್ಪಟ್ಟ ಮೂಲತಃ ಮುರುಗನಾಗಿದ್ದು ಸುಬ್ರಹ್ಮಣ್ಯ ಎಂಬ ವೈದಿಕ ದೇವರ ಸ್ಥಾನಮಾನ ಪಡೆದ ಸ್ಕಂದನ ಮೂಲ‌ - ವಿಕಾಸ - ಪ್ರಸರಣದ ಕುರಿತಾದ ಅಧ್ಯಯನ ರೋಚಕ ವಿವರಗಳನ್ನು ತೆರೆದಿಡುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ನಾಗಾರಾಧನೆಗೆ ಪ್ರಸಿದ್ಧವಾದುದು.ಇಲ್ಲಿರುವಷ್ಟು ನಾಗ‌ ಉಪಾಸನಾ ವೈವಿಧ್ಯಗಳು ಬೇರೆಲ್ಲೂ ಕಾಣಸಿಗದು.ಭೂಮಿ - ಮರ - ನಾಗ ಸಂಬಂಧ ಪುರಾತನವಾದುದು.ಜಿಲ್ಲೆಯ ಸಂಸ್ಕೃತಿಯ ಆರಂಭದಿಂದಲೂ ನಾಗ ಶ್ರದ್ಧೆ - ಪೂಜೆ ವಿವಿಧ ರೋಚಕ ವಿಧಿವಿಧಾನಗಳಿಂದ ನಡೆಯುತ್ತಿರುವುದು ಸಂಶೋಧನೆಗಳಿಂದ ತಿಳಿದ ಸತ್ಯ.ಈ ನಾಗ ಆರಾಧನೆಯ ಮೂಲಕ‌ ಸಂತಾನ,ಕೃಷಿ ಸಮೃದ್ಧಿ,ಚರ್ಮವ್ಯಾಧಿಗಳಿಂದ ನಿವೃತ್ತಿಯಂತಹ ಅನುಗ್ರಹವನ್ನು ಪಡೆಯುತ್ತೇವೆ ಎಂಬುದು‌ ಪ್ರಾಕ್ತನ ನಂಬಿಕೆ. ವೈದಿಕ ವಿಧಾನಗಳು ಧಾರ್ಮಿಕ ಕ್ಷೇತ್ರದಲ್ಲಿ‌ ಪರಿಣಾಮ ಬೀರುತ್ತಾ ಪರಸ್ಪರ ಸಂಲಗ್ನಗೊಳ್ಳುವ ಸಂದರ್ಭದಲ್ಲಿ ಸಮಾನ ಆಶಯ ಹಾಗೂ ಅನುಗ್ರಹ ವಿಶೇಷಗಳುಳ್ಳ ಸುಬ್ರಹ್ಮಣ್ಯ - ನಾಗ ಉಪಾಸನೆ - ಶ್ರದ್ಧೆಗಳು ಸಮೀಕರಣಗೊಂಡುವು ಎಂಬುದು ಉಡುಪಿ - ದಕ್ಷಿಣಕನ್ನಡ ಜಿಲ್ಲೆಗಳ ಸುಬ್ರಹ್ಮಣ್ಯ ಕ್ಷೇತ್ರಗಳ ಸೂಕ್ಷ್ಮ ಅಧ್ಯಯನದಿಂದ ತಿಳಿಯಲಾಗುತ್ತದೆ.ನಾಗ - ಸುಬ್ರಹ್ಮಣ್ಯ ಅಭೇದ ಕಲ್ಪನೆಯಿಂದ ನಾಗನೇ ಸುಬ್ರಹ್ಮಣ್ಯನಾಗಿ , ಸುಬ್ರಹ್ಮಣ್ಯನೇ ನಾಗನಾಗಿ ಪೂಜೆಗೊಳ್ಳುವುದು ಸಾಮಾನ್ಯ. ಸುಬ್ರಹ್ಮಣ್ಯ, ಷಣ್ಮುಖ ಸುಬ್ರಹ್ಮಣ್ಯ, ವಾಸುಕೀ ಸುಬ್ರಹ್ಮಣ್ಯ , ವಾಸುಕಿ ಅನಂತ ಪದ್ಮನಾಭ, ಶಂಖಪಾಲ ಸುಬ್ರಹ್ಮಣ್ಯ, ಸುಬ್ರಾಯ, ಕಾರ್ತಿಕೇಯ ಸುಬ್ರಹ್ಮಣ್ಯಗಳೆಂದು ನಾಗ - ಸುಬ್ರಹ್ಮಣ್ಯ ದೇವಾಲಯಗಳು ಹೆಸರಿಸಲ್ಪಡುತ್ತವೆ. ಉಡುಪಿ ,ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ‌ ಕ್ರಿ.ಶ.7- 8ನೇ ಶತಮಾನದ ವೇಳೆ ಸ್ಕಂದ - ಸುಬ್ರಹ್ಮಣ್ಯ ಆರಾಧನೆ ಆರಂಭವಾಗಿರಬೇಕೆಂದು ಇತಿಹಾಸ ವಿವರಿಸುತ್ತದೆ. ಕೆಲವೆಡೆ ಸುಬ್ರಹ್ಮಣ್ಯ ಪ್ರತಿಮೆಗಳೇ ಮೂಲಸ್ಥಾನ ಮೂರ್ತಿಯಾಗಿ ದೇವಾಲಯಗಳಲ್ಲಿ ಪೂಜೆಗೊಂಡರೆ ಕೆಲವೆಡೆ ನಾಗಪ್ರತೀಕಗಳನ್ನೇ ( ಐದು ಹೆಡೆಯ ಸುಂದರ ಮೂರ್ತಿಯನ್ನು ಪಾಣಿಪೀಠದಲ್ಲಿ‌ ನೆಲೆಗೊಳಿಸಿರುವ) ಪ್ರತಿಷ್ಠಾಪಿಸಲಾಗಿದೆ.ಇನ್ನೂ ಹಲವೆಡೆ ವಲ್ಮೀಕವೇ( ಹುತ್ತ) ಮೂಲಸ್ಥಾನ ಸಾನ್ನಿಧ್ಯವಾಗಿ ಸುಬ್ರಹ್ಮಣ್ಯ ಮೂರ್ತಿ ಅಥವಾ ಲೋಹದ ನಾಗ - ಸುಬ್ರಹ್ಮಣ್ಯ ಪ್ರತೀಕಗಳು‌ ಪೂಜೆಗೊಳ್ಳುತ್ತವೆ‌.ಈ ವಿಶ್ಲೇಷಣೆಯಿಂದ ನಾಗ - ಸುಬ್ರಹ್ಮಣ್ಯ ಅಭೇದ ಚಿಂತನೆಯನ್ನು ಮತ್ತೊಮ್ಮೆ ದೃಢೀಕರಿಸಬಹುದು.

ಷಷ್ಠಿ ಸಂಭ್ರಮ : ಬಹುತೇಕ ಸುಬ್ರಹ್ಮಣ್ಯ ( ನಾಗ ಸಹಿತ) ದೇವಳಗಳಲ್ಲಿ ಷಷ್ಠಿ ಪರ್ವದಿನದಂದೇ ವಾರ್ಷಿಕ‌ ಉತ್ಸವ ನಡೆಯುತ್ತವೆ . ಆದರೆ ಕೆಲವೆಡೆ ಮಾತ್ರ ಪ್ರತ್ಯೇಕ ದಿನಗಳಲ್ಲಿ ವಾರ್ಷಿಕ‌ ಉತ್ಸವ ನಡೆಯುತ್ತದೆ. ಆದರೆ ಷಷ್ಠಿ ವಿಶೇಷ ಪರ್ವದಿನವಾಗಿ ಆಚರಿಸಲ್ಪಡುತ್ತದೆ. ವಿವಿಧ ಹರಕೆ,ಎಡೆ ಸ್ನಾನ, ಉರುಳು ಸೇವೆ ಹಾಗೂ ವಿವಿಧ ಅಭಿಷೇಕ,ಅರ್ಚನೆ,ಬೆಳ್ಳಿಯ ನಾಗ ಪ್ರತಿಮೆ ಅರ್ಪಣೆ ,ಉಪ್ಪು ಸಹಿತ ಕೆಲವೊಂದು‌ ಧಾನ್ಯಗಳನ್ನು ,ತೊಗರಿಬೇಳೆಯನ್ನು ಹರಕೆಯಾಗಿ‌ ಸಲ್ಲಿಸಲಾಗುತ್ತದೆ .ಶರೀರ ಸಂಬಂಧಿಯಾದ ರೋಗಗಳ ನಿವಾರಣೆಗೆ ನರ,ಕಣ್ಣು,ಕೈ,ಕಾಲು, ಮುಂತಾದ ದೇಹದ ಅವಯವಗಳ‌‌ ಬೆಳ್ಳಿಯ‌ ಪ್ರತಿಕೃತಿಗಳನ್ನು ದೇವರಿಗೆ ಸಮರ್ಪಿಸುವ ಪರಿಪಾಠವು ರೂಢಿಯಲ್ಲಿವೆ. ‌‌ ತಿಥಿ ಸಂಬಂಧಿಯಾದ ಷಷ್ಠೀ‌ ಉತ್ಸವದ ಆಚರಣೆ ಚಾಂದ್ರಮಾನ ಪದ್ಧತಿಯಿಂದ ಬಂದಿರಬೇಕೆಂದು‌‌ ಪರಿಭಾವಿಸಬಹುದಾಗಿದೆ.ನಾಗರ ಪಂಚಮಿ‌ ಎಂಬುದು ಇದಕ್ಕೆ ಪೂರಕವಾಗಿದೆ.ನಾಗನಿಗೆ ಪಂಚಮಿಯಾದರೆ ಸುಬ್ರಹ್ಮಣ್ಯನಿಗೆ ಷಷ್ಠಿ.ಹೇಗಿದೆ ನಮ್ಮ ಪೂರ್ವಸೂರಿಗಳ ಶ್ರದ್ಧೆಯ ಪರಿಕಲ್ಪನೆ. ಬರಹ : ಕೆ.ಎಲ್.ಕುಂಡಂತಾಯ