Updated News From Kaup

ಹೆಜಮಾಡಿ : ಕಂಗೀಲು ಸೇವೆ

Thumbnail
Posted On: 08 Mar 2023, 09:48 PM

ಹೆಜಮಾಡಿ : ಶ್ರೀ ಬ್ರಹ್ಮಮುಗ್ಗೆರ್ಕಳ ದೈವಸ್ಥಾನ, ಹೆಜಮಾಡಿ ಕೋಡಿ ಮತ್ತು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಊರಿನ ಮಾರಿಯನ್ನು ಓಡಿಸುವ ಕಂಗೀಲು ಸೇವೆಗೆ ಮಾಚ್೯ 8 ರಂದು ಆದಿಸ್ಥಳವಾದ ಹೆಜಮಾಡಿ ಮುಗ್ಗೆರ್ಕಳ ದೈವಸ್ಥಾನದಲ್ಲಿ ಚಾಲನೆ ನೀಡಲಾಯಿತು. ಹೆಜಮಾಡಿ ಆಲಡೆ ಆಯನದ ಮರುದಿನ ನಡೆಯುವ ಕಂಗೀಲು ಆದಿಸ್ಥಳವಾದ ಹೆಜಮಾಡಿ ಮುಗ್ಗೆರ್ಕಳ ದೈವಸ್ಥಾನದಲ್ಲಿ ಸಿರಿ ಕಟ್ಟಿ ಹೆಜಮಾಡಿ ಬ್ರಹ್ಮಸ್ಥಾನಕ್ಕಾಗಿ, ಹೆಜಮಾಡಿ ಅಳಿವೆ ಕೋಡಿಯಿಂದ ಶ್ರೀ ವೀರ ಮಾರುತಿ ದೇವಸ್ಥಾನವಾಗಿ, ಫಲಿಮಾರು, ಚರಂತಿಪೇಟೆ, ಬಪ್ಪನಾಡು, ಮಾನಂಪಾಡಿ ಕೋಡಿ, ಪರಪಟ್ಟ, ಹೊಸಾಗೈ, ಕಡವಿನ ಬಾಗಿಲು, ಗುಂಡಿಮನೆಯ ತೋಟದಿಂದ ದೊಡ್ಡಮನೆ ತೋಟವಾಗಿ, ಮಟ್ಟು ಪಟ್ಣ ಭಜನಾ ಮಂದಿರದ ಬಳಿಯಿಂದ ಉತ್ತರ ಸುಲ್ತಾನ್‌ ರಸ್ತೆಯಾಗಿ ಹೆಜಮಾಡಿ ಗಡುವಿನಲ್ಲಿ ಸಿರಿ ಬಿಡುವುದು. ಈ ಸಂದರ್ಭ ಬ್ರಹ್ಮಮುಗ್ಗೆರ್ಕಳ ದೈವಸ್ಥಾನದ ಪ್ರಮುಖರು, ಊರಿನ ಪ್ರಮುಖರು ಉಪಸ್ಥಿತರಿದ್ದರು.

ಕಾಪು : ಮಾನವ ಬಂದುತ್ವ ವೇದಿಕೆ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಮೀನು ಮಾರಾಟದ ಮಹಿಳೆಯರಿಗೆ ‌ಸನ್ಮಾನ

Thumbnail
Posted On: 08 Mar 2023, 07:22 PM

ಕಾಪು : ಮಾನವ ಬಂದುತ್ವ ವೇದಿಕೆ ಕರ್ನಾಟಕ ಇದರ ಉಡುಪಿ ಜಿಲ್ಲಾ ಸಂಚಲನ ಸಮಿತಿ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಇಂದು ಮೀನು ಮಾರಾಟ ಮಾಡುವ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಕಾಪು ಮೀನು ಮಾರುಕಟ್ಟೆಯಲ್ಲಿ ಜರಗಿತು. ಈ ಸಂದರ್ಭ ಮಾತನಾಡಿದ ಮಾಜಿ‌ ಸಚಿವರಾದ ವಿನಯಕುಮಾರ್ ಸೊರಕೆ ಮನೆಯ ಜೊತೆಗೆ ತಮ್ಮ ವೃತ್ತಿಯನ್ನು ನಿಭಾಯಿಸಿಕೊಂಡು ಬದುಕು ಕಟ್ಟುವ ಕಾಯದಲ್ಲಿರುವ ಮೀನುಗಾರರ ಮತ್ತು ಮೀನುಗಾರರ ಮಹಿಳೆಯರ ಉದ್ಯಮದ ಕಷ್ಟಗಳನ್ನು ಸ್ಮರಿಸಿಕೊಂಡರು. ಮಂಗಳೂರು ವಿಭಾಗದ ಸಂಚಾಲಕ ಪತ್ರಕರ್ತ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾನವ ಬಂಧುತ್ವ ಕರ್ನಾಟಕ ವೇದಿಕೆ ಇದರ ರಾಜ್ಯ ಸಮಿತಿ ಸದಸ್ಯ ರೋನಾಲ್ಡ್ ಮನೋಹರ್ ಕರ್ಕಡ, ಪ್ರಮುಖರಾದ ಮಂಜಿತ್ ನಾಗರಾಜ್, ಮಹಮದ್ ಶೀಶ್, ಅಶ್ವಿನಿ, ಚಾಲ್ಸ್ ಅಂಬ್ಲರ್, ಕಾಪು ಮೀನು ಮಾರಾಟ ಸಂಘದ ಅಧ್ಯಕ್ಷ ಶಾಂತ ಸುವರ್ಣ, ಕಾರ್ಯದರ್ಶಿ ಶಶಿಕಲಾ, ಕಾಪು ಪುರಸಭಾ ಸದಸ್ಯರಾದ ಸತೀಶ್ ಚಂದ್ರ, ಫರ್ಜಾನ, ಶೋಭಾ ಬಂಗೇರ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪ್ರಮುಖರಾದ ಎಂಎ ಗಪುರ್, ಉಸ್ಮಾನ್, ಫಾರೂಕ್ ಚಂದ್ರನಗರ, ಹರೀಶ್ ನಾಯಕ್, ದೀಪಕ್ ಕುಮಾರ್ ಎರ್ಮಳ್, ಜಹೀರ್ ಅಹ್ಮದ್, ಸರ್ಫುದ್ದೀನ್ ಶೇಕ್ ಮತ್ತಿತರರು ಉಪಸ್ಥಿತರಿದ್ದರು.

ಉದ್ಯಾವರ : ವಿಶ್ವ ಮಹಿಳಾ ದಿನಾಚರಣೆ - ಅಂಗನವಾಡಿ ಕಾರ್ಯಕರ್ತರಿಗೆ ಸನ್ಮಾನ

Thumbnail
Posted On: 08 Mar 2023, 01:34 PM

ಉದ್ಯಾವರ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಉದ್ಯಾವರ ಗ್ರಾಮದ 12 ಅಂಗನವಾಡಿ ಕಾರ್ಯಕರ್ತರಿಗೆ ಸಂಪಿಗೆನಗರದಲ್ಲಿರುವ ಪಲ್ಲೋಟೈನ್ ಸ್ನೇಹಾಲಯದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸ್ತ್ರೀ ಶಕ್ತಿಯ ಮೂಲಕ ಅಂಗನವಾಡಿ ಕಾರ್ಯಕರ್ತರು ಇನ್ನಷ್ಟು ಬಲಿಷ್ಠರಾಗುತ್ತಿದ್ದಾರೆ. ಪುರುಷ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ತಾಯಿಯ ಪ್ರೀತಿಯನ್ನು ಯಾವುದೇ ನಿರೀಕ್ಷೆಗಳಿಲ್ಲದೆ ಪುಟ್ಟ ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆಯರು ನೀಡುತ್ತಿದ್ದಾರೆ. ಮಹಿಳೆಯರನ್ನು ಗೌರವಿಸುವುದು ಕೇವಲ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತ್ರವಲ್ಲದೆ, ಪ್ರತಿದಿನ ಗೌರವಿಸುವಂತಾಗಬೇಕು ಎಂದರು. ಲಯನ್ಸ್ 317Cಯ ಪ್ರಾಂತೀಯ ಅಧ್ಯಕ್ಷೇ ಲ. ವಿಜಯ ಗೋಪಾಲ ಬಂಗೇರ ಎಂ.ಜೆ.ಎಫ್. ಮಾತನಾಡಿ, ಅಂಗನವಾಡಿ ಕಾರ್ಯಕರ್ತರಿಗೆ ಮೊದಲ ಬಾರಿಗೆ ಈ ಗ್ರಾಮದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಮೂಲಕ ಸನ್ಮಾನ ದೊರಕುವಂತಾಗಿದೆ. ಅಂಗನವಾಡಿ ಕಾರ್ಯಕರ್ತರ ಸೇವೆ ನಿಜಕ್ಕೂ ದೇವರು ಮೆಚ್ಚುವಂಥದ್ದು ಎಂದರು. ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಉದ್ಯಾವರ ಗ್ರಾಮದ ಒಟ್ಟು 12 ಅಂಗನವಾಡಿ ಕಾರ್ಯಕರ್ತರನ್ನು ಅಭಿನಂದಿಸಿ ಅವರ ಸೇವೆಯನ್ನು ಗೌರವಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಾಂತಿಯ ಅಧ್ಯಕ್ಷೆ ಲ. ವಿಜಯ ಗೋಪಾಲ ಬಂಗೇರ ಮತ್ತು ಪಲ್ಲೋಟೈನ್ ಸ್ನೇಹಲಯದ ಮುಖ್ಯಸ್ಥೆ ಧರ್ಮಭಗಿನಿ ಸಿ. ಲೀನಾ ಅವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಲಯನ್ಸ್ ವಲಯ ಅಧ್ಯಕ್ಷ ಲ. ಜಾನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಅಧ್ಯಕ್ಷ ಲಯನ್ ಅನಿಲ್ ಲೋಬೊ ಸ್ವಾಗತಿಸಿದರೆ, ಕಾರ್ಯಕ್ರಮದ ನಿರ್ದೇಶಕ ಲಯನ್ ಪದ್ಮನಾಭ ಶೈಣೈ ಧನ್ಯವಾದ ಸಮರ್ಪಿಸಿದರು. ಕಾರ್ಯದರ್ಶಿ ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.

ಪಡುಬಿದ್ರಿ : ಟ್ಯಾಂಕರ್ ಅಜಾಗರೂಕತೆ ಚಾಲನೆ ; ಸ್ಕೂಟಿಯಲ್ಲಿದ್ದ ದಂಪತಿಗಳು ಮೃತ್ಯು

Thumbnail
Posted On: 07 Mar 2023, 07:43 PM

ಪಡುಬಿದ್ರಿ : ಟ್ಯಾಂಕರ್ ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಮೂಲ್ಕಿ ಸೇತುವೆ ಮೇಲೆ ಇಂದು ಮಧ್ಯಾಹ್ನ ನಡೆದಿದೆ. ಮೃತರನ್ನು ತೀರ್ಥಹಳ್ಳಿಯ ಅಡಿಕೆ ವ್ಯಾಪಾರಿ ದಂಪತಿ ಅಕ್ಬರ್ ಬಾಷಾ(61) ಹಾಗೂ ಖತೀಜಾಬಿ(46) ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಶಾಂಭವಿ ನದಿಯ ಸೇತುವೆ ಮೇಲೆ ಈ ಘಟನೆ ನಡೆದಿದ್ದು ಟ್ಯಾಂಕರನ್ನು ಹೆಜಮಾಡಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಎದುರುಗಡೆಯಿಂದ ಸೇತುವೆಯ ಮೇಲೆ ಎಡ ಬದಿಯಲ್ಲಿ ಅಕ್ಬರ್ ಬಾಷಾರವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್‌ನ ಹಿಂಬದಿಗೆ ಡಿಕ್ಕಿ ಹೊಡೆದಿದ್ದು ಅಪಘಾತದಿಂದ ಸ್ಕೂಟರ್ ಸವಾರ ಅಕ್ಬರ್ ಬಾಷಾ ಹಾಗೂ ಸಹ ಸವಾರೆ ಖತೀಜಾಬಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತೀವ್ರರಕ್ತ ಗಾಯಗೊಂಡು ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರ್ವ : ಶ್ರೀ ಬಬ್ಬರ್ಯ ದೈವಸ್ಥಾನ ಮೂಡುಮಟ್ಟಾರು - ವಾರ್ಷಿಕ ನೇಮೋತ್ಸವ, ಮಹಾ ಅನ್ನಸಂತರ್ಪಣೆ

Thumbnail
Posted On: 07 Mar 2023, 05:16 PM

ಶಿರ್ವ : ಇಲ್ಲಿನ ಶ್ರೀ ಬಬ್ಬರ್ಯ ದೈವಸ್ಥಾನ ಮೂಡುಮಟ್ಟಾರು ದೈವಸ್ಥಾನದಲ್ಲಿ ಮಾರ್ಚ್ 8, ಬುಧವಾರ ಬೆಳಿಗ್ಗೆ ಗಂಟೆ 10ಕ್ಕೆ ಭಂಡಾರ ಇಳಿಯುವುದು, ಮಧ್ಯಾಹ್ನ 12ಕ್ಕೆ ದರ್ಶನ ಸೇವೆ, ಮಧ್ಯಾಹ್ನ ಗಂಟೆ 1ರಿಂದ ಮಹಾ ಅನ್ನಸಂತರ್ಪಣೆ, ರಾತ್ರಿ ಗಂಟೆ 8ಕ್ಕೆ ಶ್ರೀ ನಂದಿಗೋಣ ನೇಮೋತ್ಸವ, ರಾತ್ರಿ ಗಂಟೆ 9:30 ರಿಂದ ಶ್ರೀ ಬಬ್ಬರ್ಯ ದೈವದ ನೇಮೋತ್ಸವ ಜರಗಲಿದೆ. ಮಾಚ್೯ 9, ಗುರುವಾರ ಮಧ್ಯಾಹ್ನ ಗಂಟೆ 2 ರಿಂದ ನೀಚ ದೈವದ ನೇಮೋತ್ಸವ (ಕೊರಗಜ್ಜ) ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಟಪಾಡಿ‌‌‌ : ಸುಭಾಸ್ ನಗರದಲ್ಲಿ ನೂತನ ಬಾಲವನ ಉದ್ಘಾಟನೆ ; ಮಕ್ಕಳ ಆಟಿಕೆಗಳ ಕೊಡುಗೆ

Thumbnail
Posted On: 07 Mar 2023, 05:04 PM

ಕಟಪಾಡಿ : ರೋಟರಿ ಕ್ಲಬ್ ಶಂಕರಪುರ ಹಾಗೂ ಗ್ರಾಮ ಪಂಚಾಯತ್ ಕಟಪಾಡಿ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ) ನೂತನ ಬಾಲವನವನ್ನು ಸುಭಾಸ್ ನಗರದ ಅಂಗನವಾಡಿಯ ಬಳಿಯಲ್ಲಿ ನಿರ್ಮಿಸಲಾಯಿತು. ಕಾರ್ಯಕ್ರಮವನ್ನು ಮಕ್ಕಳ ಆಟಿಕೆಯ ದಾನಿಗಳಾದ ದಿವಂಗತ ಅಪ್ಪಿ ತೋಮಣಿ ಸುವರ್ಣ ''ಪಪ್ಪಾ ಅಮ್ಮ ಛಾಯಾ ಸುಭಾಸ್ನಗರ '' ಇವರ ಸ್ಮರಣಾರ್ಥ ಮಕ್ಕಳಾದ ಮಂಜುಳಾ ನಾಗರಾಜ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಎಸ್ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾದ ರೋಟರಿ ವಲಯ ಸೇನಾನಿ ಯಶೋಧರ ಶೆಟ್ಟಿ, ಗ್ರಾಮ ಆಡಳಿತ ಅಧಿಕಾರಿ ಡೇನಿಯಲ್ ಡೊಮ್ನಿಕ್ ಡಿಸೋಜಾ ಶುಭ ಹಾರೈಸಿದರು. ಅಂಗನವಾಡಿಯ ಶಿಕ್ಷಕಿಯಾದ ಕಾಂತಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿನ ಹೆಚ್ಚಿನ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಕಾಮಗಾರಿಯನ್ನು ನಡೆಸಿದ ಪ್ರಭಾಕರ್ ಪಾಲನ್, ಮಕ್ಕಳ ಆಟಿಕೆಯ ಕೆಲಸಗಳನ್ನು ನಿರ್ವಹಿಸಿದ ಮೊಹಮ್ಮದ್ ಸಾಧಿಕ್ ಇವರುಗಳನ್ನು ಗುರುತಿಸಲಾಯಿತು. ಸ್ಥಳೀಯರು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್ ಸ್ವಾಗತಿಸಿದರು. ವಿನ್ಸೆಂಟ್ ಸಲ್ದಾನ ಪ್ರಾರ್ಥಿಸಿದರು. ಅಂತೋನಿ ಡೇಸಾ ಪ್ರಸ್ತಾಪನೆಗೆಗೈದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತಾ ವೈ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ದಾನಿಗಳಾದ ಮಂಜುಳಾ ನಾಗರಾಜ್ ಇವರನ್ನು ಸನ್ಮಾನಿಸಲಾಯಿತು. ಚಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ : ಉದ್ದಿಮೆ ಆರಂಭಿಸದೆ, ಹೆಚ್ಚುವರಿ ಜಾಗ ಪಡೆದ ಕಂಪನಿಗಳ ಜಾಗವನ್ನು ಸರಕಾರ ಮರುವಶ/ಮರು ಹಂಚಿಕೆ ಮಾಡಬೇಕು - ಯೋಗೇಶ್ ವಿ ಶೆಟ್ಟಿ

Thumbnail
Posted On: 07 Mar 2023, 04:31 PM

ಉಡುಪಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸರಕಾರದಿಂದ ಭೂಮಿ ಪಡೆದು ಪೂರ್ಣ ಕೈಗಾರಿಕೆಗಳನ್ನು ಸ್ಥಾಪಿಸದೆ / ವಿಸ್ತರಣೆ ಮಾಡದೆ ಇರುವ ಭೂಮಿಯನ್ನು ಸರಕಾರ ತನ್ನ ವಶಕ್ಕೆ ವಾಪಸು ಪಡೆಯಬೇಕು ಅಥವಾ ನೀಡಿಕೆಯಾದ ಭೂಮಿಯನ್ನು ಮರುಹಂಚಿಕೆ ಮಾಡಬೇಕು ಎಂದು ಉಡುಪಿ ಜಿಲ್ಲಾ ಜನತಾದಳ(ಜಾತ್ಯತೀತ)ದ ಜಿಲ್ಲಾಧ್ಯಕ್ಷರಾದ ಯೋಗೇಶ್ ವಿ ಶೆಟ್ಟಿ ಆಗ್ರಹಿಸಿದ್ದಾರೆ. ಸಾಧಾರಣ ಅಂದಾಜು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7599 ಎಕ್ರೆ ಮತ್ತು ಉಡುಪಿ ಜಿಲ್ಲೆಯಲ್ಲಿ 2719 ಎಕ್ರೆ ಸೇರಿ ಒಟ್ಟು 10318 ಎಕ್ರೆ ಕೈಗಾರಿಕೆ ವಿಸ್ತರಣೆ ಮಾಡದೆ ಖಾಲಿ ಜಾಗ ಇದ್ದು,ಹಲವಾರು ಕಂಪನಿಗಳಿಗೆ ವಿತರಣೆಯಾಗಿದ್ದು, ಅಂತೆಯೇ ರಾಜ್ಯದ ಇತರ ಜಿಲ್ಲೆಗಳಲ್ಲೂ ಅಂಕಿ ಅಂಶ ಇದೇ ರೀತಿಯಲ್ಲಿ ಇದೆ. ಕೈಗಾರಿಕೆಗಳು ಬೆಳೆಯಲಿ ಆರ್ಥಿಕ ಪ್ರಗತಿಗಾಗಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಲಿ ಎನ್ನುವ ಕಾರಣಕ್ಕೆ ಕೈಗಾರಿಕೆ ಸ್ಥಾಪಿಸುವರೇ ಸರಕಾರದಿಂದ ಭೂಮಿ ಕೊಡಲ್ಪಟ್ಟಿತ್ತು . ಆದರೂ ಕೆಲವು ಕೈಗಾರಿಕಾ ಸಂಸ್ಥೆಗಳು ಸಾಧಾರಣ 15 /30ವರ್ಷಗಳಿಂದ ವಿಸ್ತರಣೆ ಮಾಡಿದೆ ಹೆಚ್ಚುವರಿಯಾಗಿ ಜಾಗವನ್ನು ಹಾಗೆಯೇ ಉಳಿಸಿಕೊಂಡಿರುತ್ತದೆ. ಅಂತಹ ಜಾಗವನ್ನು ವಾಪಸು ಪಡೆದು, ಮರುಹಂಚಿಕೆಮಾಡಬೇಕೆಂದು ಸರಕಾರವನ್ನು ಒತ್ತಾಯ ಮಾಡುತ್ತಿದ್ದೇವೆ. ಪರಿಹಾರ ನೀಡದ ವಶಪಡಿಸಿ ಕೊಂಡಂತಹ ಜಾಗವನ್ನು ಸಹಾ ಕೂಡಲೇ ವಾಪಸ್ ಪಡೆದು ಐಟಿ ಹಬ್ ಮತ್ತು ಇತರ ಕೈಗಾರಿಕೆಗಳನ್ನು ಸ್ಥಾಪಿಸುವ ಆಸಕ್ತರಿಗೆ ಮರು ವಿತರಣೆ ಮಾಡಿ ಉದ್ಯೋಗ ಸೃಷ್ಟಿ ಮಾಡುವರೇ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ. ಅದೇ ರೀತಿ ಜಾಗ ನೀಡಿದವರಿಗೆ/ ಕುಟುಂಬಸ್ಥರಿಗೆ / ಸ್ಥಳೀಯರಿಗೆ ಉದ್ಯೋಗ ನೀಡುವರೆ ಸರಕಾರವನ್ನು ಒತ್ತಾಯ ಪಡಿಸುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿರ್ವ : ತಮ್ಮ ಭಾಷೆ, ಆರೋಗ್ಯದ ಬಗ್ಗೆ ಕೊರಗ ಸಮುದಾಯ ಮಹತ್ವ ನೀಡಬೇಕಾಗಿದೆ - ಪಾಂಗಾಳ ಬಾಬು ಕೊರಗ

Thumbnail
Posted On: 06 Mar 2023, 08:32 PM

ಶಿರ್ವ : ನೆಲಮೂಲದ ಸಂಸ್ಕೃತಿಯ ಪ್ರತಿನಿಧಿಗಳಾದ ಕೊರಗರು ಇಂದು ಹೊರಗಿನವರಾಗಿ ಬಿಟ್ಟಿರುವುದು ಬೇಸರದ ಸಂಗತಿ. ಇಂದು ಎಲ್ಲಾ ರೀತಿಯ ಹಕ್ಕುಗಳಿದ್ದರೂ ಕೊರಗ ಸಮುದಾಯ ಹಿಂಜರಿಯುತ್ತಿದೆ. ಶಿಕ್ಷಣವೊಂದೇ ಬದಲಾವಣೆಗೆ ಸಹಕಾರಿ. ತಮ್ಮ ಭಾಷೆ ಮತ್ತು ಆರೋಗ್ಯದ ಬಗೆಯೂ ಮಹತ್ವ ನೀಡಬೇಕಾಗಿದೆ ಎಂದು ಕೊರಗ ಸಮುದಾಯದ ಹಿರಿಯ ಸಂಘಟಕ, ಸಾಹಿತಿ ಪಾಂಗಾಳ ಬಾಬು ಕೊರಗ ಹೇಳಿದರು. ಅವರು ಮಾಚ್೯ 5 ರಂದು ಮುಂಚಿಕಾಡು (ಪಾಂಬೂರು)ಕೊರಗರ ಬಲೆಪುವಿನಲ್ಲಿ ಬೆಳ್ಳೆ ಗ್ರಾಮ ಪಂಚಾಯತ್, ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕ ಮತ್ತು ಉಡುಪಿ ಜಿಲ್ಲಾ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕೊರ್ರೆನ ಕೊರಲ್ - ಕೊರಗರ ನೆಲಮೂಲ ಪರಂಪರೆ, ಭಾಷೆಯ ಹೊಳಹು ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು. ಕೊರಗರ ಬಲೆಪುವಿನ ಗುರಿಕಾರ ವಸಂತ ಅವರು ಕೊಳಲು ವಾದನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊರಗರ ಬಲೆಪುವಿನ ಕಮಲ ಮತ್ತು ಸುಂದರ ಟಿ. ತೀಪೆ ಪಟ್ನದು ಜೇನು ನೀಡಿ ಜೇನ ಹಬ್ಬ ನೆರವೇರಿಸಿದರು. ಮುಖ್ಯ ಅತಿಥಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು. ಈ ಸಂದರ್ಭ ಹಿರಿಯ ಸಂಘಟಕ, ಸಾಹಿತಿ ಪಾಂಗಾಳ ಬಾಬು ಕೊರಗ ಅವರನ್ನು ಸಮ್ಮಾನಿಸಲಾಯಿತು. ಬೆಳ್ಳೆ ಗ್ರಾ.ಪಂ. ಅಧ್ಯಕ್ಷರಾದ ಸುಧಾಕರ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ಜಿಲ್ಲಾ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ದೇವದಾಸ ಹೆಬ್ಬಾರ್, ಬೆಳ್ಳೆ ಗ್ರಾ.ಪಂ. ಸದಸ್ಯೆ ಅಮಿತಾ ವೇದಿಕೆಯಲ್ಲಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಕಾಪು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊರಗ ಸಮುದಾಯದ ಪ್ರಮುಖರು, ಬೆಳ್ಳೆ ಗ್ರಾಮ ಪಂಚಾಯತ್ ಅಧಿಕಾರಿ ವರ್ಗ, ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಬೆಳ್ಳೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ನೀಲಾನಂದ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು. ತಟ್ಟಿ ಕುಡುಪು, ಬುಟ್ಟಿ, ಡೋಲು, ಕೊಳಲು, ಹುರಿ ಹಗ್ಗದ ಮಾಹಿತಿಯನ್ನು ನೀಡಲಾಯಿತು. ಸಭಾಕಾರ್ಯಕ್ರಮದ ಬಳಿಕ ಡೋಲು-ಕೊಳಲು ವಾದನ, ಕೊರಗರ ಹಾಡು, ಕೊರಗರ ನೃತ್ಯ, ಅರಕಜಬ್ಬೆಯ ಕಥಾವಾಚನ, ಕೊರಗರ ದೊರೆ ಉಭಾಷಿಕನ ಇತಿಹಾಸದ ಪ್ರಾತ್ಯಕ್ಷಿಕೆ ನೀಡಲಾಯಿತು.

ಮಾರ್ಚ್ 19 : ಹೆಬ್ರಿ ತಾಲೂಕು ನೂತನ ಕುಲಾಲ ಸಂಘದ ಉದ್ಘಾಟನೆ

Thumbnail
Posted On: 04 Mar 2023, 10:53 PM

ಕಾರ್ಕಳ : ತಾಲೂಕಿನ ಹೆಬ್ರಿಯ ನೂತನ ಕುಲಾಲ ಸಂಘದ ಉದ್ಘಾಟನೆ ಸಮಾರಂಭ ಮಾರ್ಚ್ 19 ರ ಬೆಳಿಗ್ಗೆ 9:30 ಕ್ಕೆ ಬಂಟರ ಭವನ ಹೆಬ್ರಿಯ ಶ್ರೀಮತಿ ಶೀಲಾ ಸುಭೋದ ಬಲ್ಲಾಳ್ ಸಭಾ ಭವನದಲ್ಲಿ ನಡೆಯಲಿದೆ ಎಂದು ಹೆಬ್ರಿ ತಾಲೂಕು ಕುಲಾಲ ಸಂಘದ ಅಧ್ಯಕ್ಷರು,ಪದಾಧಿಕಾರಿಗಳು, ಸರ್ವ ಸದಸ್ಯರು ಪ್ರಕಟಣೆ ನೀಡಿರುತ್ತಾರೆ.

ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆಯನ್ನು ಎದುರಿಸುತ್ತಿದ್ದೇನೆ : ವಿನಯಕುಮಾರ್ ಸೊರಕೆ

Thumbnail
Posted On: 04 Mar 2023, 10:50 PM

ಉದ್ಯಾವರ : ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಜನಸೇವೆಯನ್ನು ಮಾಡಿದ್ದೇನೆ. ಅಧಿಕಾರ ಇದ್ದ ಅಥವಾ ಅಧಿಕಾರ ಇಲ್ಲದ ಸಮಯದಲ್ಲೂ ಜನರೊಂದಿಗೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಅಧಿಕಾರ ಇದ್ದಂಥ ಸಮಯದಲ್ಲಿ ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಪ್ರಸ್ತುತ ಚುನಾವಣೆ ನಾನು ಎದುರಿಸುತ್ತಿರುವ ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆಯಾಗಲಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಯಾವರದಲ್ಲಿ ಭಾವನಾತ್ಮಕವಾಗಿ ಮಾತನಾಡಿದರು. ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಾದರೂ, ಜನರು ಮತ್ತು ಕಾರ್ಯಕರ್ತರು ನನ್ನನ್ನು ಯಾವತ್ತೂ ಕೈ ಬಿಡಲಿಲ್ಲ. ಕ್ಷೇತ್ರದ ಮತದಾರರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ನನ್ನ ಮೇಲೆ ಇಟ್ಟ ನಂಬಿಕೆಗೆ ಯಾವುದೇ ಚ್ಯುತಿ ಬಾರದಂತೆ ಕೆಲಸ ಮಾಡಿದ್ದೇನೆ. ಪ್ರಸ್ತುತ ನಾನು ಮಾಜಿ ಶಾಸಕನಾದರೂ ಪ್ರತಿದಿನ ಎಂಬಂತೆ ಜನರು ನನ್ನ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳನ್ನು ನನ್ನ ಬಳಿ ತಿಳಿಸುತ್ತಿದ್ದಾರೆ ಮತ್ತು ಅದಕ್ಕೆ ನಾನು ಸ್ಪಂದಿಸುತ್ತಿದ್ದೇನೆ. ಹಿಂದುತ್ವದ ಹೆಸರೇಳಿ ಅಧಿಕಾರ ಪಡೆದಂತ ಬಿಜೆಪಿ ನಾಯಕರು ರಾಜ್ಯದ ವಿವಿಧ ದೇವಸ್ಥಾನಗಳನ್ನು ಕೆಡವಲು ಪ್ರಯತ್ನಿಸಿದರು. ನಂಜನಗೂಡಿನಲ್ಲಿ ಇತಿಹಾಸ ಪ್ರಸಿದ್ಧ ದೇವಸ್ಥಾನ ಕೆಡವಿದ ಬಳಿಕ ಜನರ ಪ್ರತಿಭಟನೆಗೆ ಹೆದರಿ ತನ್ನ ನಿರ್ಧಾರದಿಂದ ಬಿಜೆಪಿ ಹಿಂದಕ್ಕೆ ಸರಿದಿತ್ತು ಎಂದರು. ನನ್ನ ಅಧಿಕಾರದ ಸಮಯದಲ್ಲಿ ವಿವಿಧ ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಸರಕಾರದಿಂದ ದೊರಕುವ ಅನುದಾನ ಮತ್ತು ನನ್ನ ವೈಯುಕ್ತಿಕ ಸಹಾಯವನ್ನು ಮಾಡಿದ್ದೇನೆ. ಯಾವುದೇ ಸಂದರ್ಭದಲ್ಲಿ ನಾನು ರಾಜಕೀಯ ಮಾಡಿಲ್ಲ. ಕಳೆದ ಚುನಾವಣೆಯಲ್ಲಿ ನನಗೆ ಸೋಲಾದರೂ, ಮನೆಯಲ್ಲಿ ಕುಳಿತುಕೊಳ್ಳದೆ ಜನರೊಂದಿಗೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನವನ್ನು ನಿಷ್ಠೆಯಿಂದ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಆದ ಯೋಜನೆಗಳನ್ನು ಪ್ರಸ್ತುತ ಬಿಜೆಪಿ ಶಾಸಕರು ಉದ್ಘಾಟನೆ ಮಾಡುತ್ತಿದ್ದಾರೆ. ಅದೇ ಅವರ ಸಾಧನೆ. ಪ್ರಸ್ತುತ ರಾಜ್ಯದ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಸ್ಪಷ್ಟವಾಗಿದೆ. ಅಧಿಕಾರ ಇರಲಿ ಅಧಿಕಾರ ಇಲ್ಲದಿರಲಿ, ಜಾತಿ ಧರ್ಮವನ್ನು ನೋಡಿಲ್ಲ. ಪಕ್ಷಾತೀತವಾಗಿ ಕಾಪು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೋರಾಟ ಮಾಡಿದ್ದೇನೆ ಮತ್ತು ಜನರ ಸಹಕಾರದಿಂದ ಯಶಸ್ವಿಯಾಗಿದ್ದೇನೆ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣವಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಮುಂದೆ ನಡೆಯುವ ವಿಧಾನಸಭಾ ಚುನಾವಣೆಯು ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆ. ಕಪ್ಪು ಚುಕ್ಕೆ ಇಲ್ಲದ ನನ್ನ ರಾಜಕೀಯ ಜೀವನದ ಈ ಚುನಾವಣೆಗೆ ಮತದಾರರು ಆಶೀರ್ವದಿಸುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನ್ನಲ್ಲಿದೆ ಎಂದು ವಿನಯ್ ಕುಮಾರ್ ಸೊರಕೆ ತಿಳಿಸಿದರು.