Updated News From Kaup

ಯಕ್ಷಗಾನ ಸಮ್ಮೇಳನಕ್ಕೆ ರೋಹಿತ್ ಚಕ್ರತೀರ್ಥ ಆಯ್ಕೆ ಸರಿಯಾದುದ್ದಲ್ಲ : ಪ್ರವೀಣ್ ಎಂ ಪೂಜಾರಿ

Thumbnail
Posted On: 10 Feb 2023, 07:55 PM

ಉಡುಪಿ : ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ವಿಶಿಷ್ಟವಾದ ಸಾಂಸ್ಕೃತಿಕ ಪರಂಪರೆಯಿದೆ.ಅದನ್ನು ನೆನಪಿಸುವ ಮತ್ತು ಭವಿಷ್ಯಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಉಡುಪಿಯಲ್ಲಿ ಹಮ್ಮಿಕೊಂಡಿರುವ ಯಕ್ಷಗಾನ ಸಮ್ಮೇಳನ ಆಯೋಜನೆ ಅಭಿನಂದನಾರ್ಹವಾದುದು.ಆದರೆ ಇಂತಹ ಪ್ರತಿಷ್ಠಿತ ಕಾರ್ಯಕ್ರಮದ ದಿಕ್ಸೂಚಿ ಭಾಷಣಕ್ಕೆ ರೋಹಿತ್ ಚಕ್ರತೀರ್ಥರವರನ್ನು ಆಹ್ವಾನಿಸಿರುವುದು ಆಶ್ಚರ್ಯಕರವಾಗಿದೆ.ರೋಹಿತ್‌ರವರು ಪಠ್ಯಪುಸ್ತಕ ಸಮಿತಿಯಲ್ಲಿದ್ದಾಗ ಸುಧಾರಣಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ತೆಗೆದು ಹಾಕುವಂತಹ ದುಸ್ಸಾಹಸ ಮಾಡಿದವರು. ಇಂದಿಗೂ ಈ ವಿಷಯ ಸಮರ್ಪಕವಾಗಿ ಬಗೆಹರಿದಿಲ್ಲ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ತಿಳಿಸಿದ್ದಾರೆ. ಅಲ್ಲದೆ ರಾಷ್ಟ್ರ ಕವಿ ಕುವೆಂಪು ವಿರಚಿತ ನಾಡಗೀತೆಗೂ ಅವಮಾನ ಮಾಡಿದ್ದರು. ಇಷ್ಟೆಲ್ಲಾ ವಿವಾದಿತ ವ್ಯಕ್ತಿಯಾಗಿ ಹಾಗೂ ಯಕ್ಷಗಾನದಲ್ಲೂ ಏನೇನೂ ಸಾಧನೆ ಮಾಡಿಲ್ಲದ ರೋಹಿತ್ ಆಯ್ಕೆ ಯಾವ ಮಾನದಂಡದಲ್ಲಿ ಆಗಿದೆ ಎಂಬುದು ತಿಳಿಯುತ್ತಿಲ್ಲ.ಯಕ್ಷಗಾನದಲ್ಲಿ ಅವಿರತ ಸಾಧನೆ ಮಾಡಿದ ಕಲಾದಿಗ್ಗಜರು,ಯಕ್ಷ ವಿದ್ವಾಂಸರು ನಮ್ಮಲ್ಲಿರುವಾಗ ರೋಹಿತ್ ಆಹ್ವಾನವನ್ನು ತಿರಸ್ಕರಿಸುವುದು ಒಳ್ಳೆಯದು ಎಂದು ನಮ್ಮ ಅಭಿಪ್ರಾಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.11 : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ದ.ಕ.ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ; ಚಿಣ್ಣರ ಕಲರವ

Thumbnail
Posted On: 10 Feb 2023, 08:39 AM

ಮಂಗಳೂರು : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳ ಮತ್ತು ತಾಲೂಕು ಅಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಚಿಣ್ಣರ ಕಲರವ ಸಾಂಸ್ಕೃತಿಕ ಕಾರ್ಯಕ್ರಮ ಮಂಗಳೂರಿನ ಕದ್ರಿ ಬಾಲಭವನದಲ್ಲಿ ಫೆಬ್ರವರಿ11, ಶನಿವಾರ ನಡೆಯಲಿದೆ. ಈ ಮಹತ್ವಪೂರ್ಣ ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತ್ ಸ್ಕೌಟ್ ಮತ್ತು ಗೈಡ್ನ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ ರಾಜ್ ಕೆ. ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ದಕ್ಷಿಣಕನ್ನಡ ಜಿಲ್ಲಾ ನೂತನ ಅಧ್ಯಕ್ಷೆ ಹಾಗೂ ನ್ಯಾಯವಾದಿ ಪರಿಮಳ ಮಹೇಶ್ ರಾವ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಕನ್ನಡ ಉಪನ್ಯಾಸಕ ಎಸ್.ಪಿ. ಅಜಿತ್ ಪ್ರಸಾದ್, NSCDF ಅಧ್ಯಕ್ಷ ಗಂಗಾಧರ್ ಗಾಂಧಿ, KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಮತ್ತಿತರರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ದಕ್ಷಿಣ ಜಿಲ್ಲೆಯ ವಿವಿಧ ತಾಲೂಕಿನ ಅಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಂದ ಚಿಣ್ಣರ ಕಲರವ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ರಶ್ಮಿ ಸನಿಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಚ್.ಡಿ.ಕುಮಾರಸ್ವಾಮಿಯ ಬ್ರಾಹ್ಮಣ ವಿರೋಧಿ ಹೇಳಿಕೆ ಹಿಂದೂ ಸಮಾಜವನ್ನು ಒಡೆಯುವ ಹುನ್ನಾರ : ಶ್ರೀಶ ನಾಯಕ್ ಪೆರ್ಣಂಕಿಲ

Thumbnail
Posted On: 09 Feb 2023, 11:39 PM

ಉಡುಪಿ : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡುವ ಮೂಲಕ ಹಿಂದೂ ಸಮಾಜವನ್ನು ಒಡೆಯುವ ಹುನ್ನಾರ ಮಾಡಿದ್ದಾರೆ, ಅವರು ತಕ್ಷಣ ಸಮಸ್ತ ಹಿಂದೂ ಸಮಾಜ ಕ್ಷಮೆ ಕೇಳಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ ಆಗ್ರಹಿಸಿದ್ದಾರೆ. ಅರ್ಹತೆ ಇಲ್ಲದಿದ್ದರೂ ಸಂದರ್ಭದ ಅನಿವಾರ್ಯತೆಯಿಂದ ರಾಜ್ಯದ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರು ಬಿಜೆಪಿಯನ್ನು ಬೆಂಬಲಿಸುವ ಹಿಂದೂ ಸಮಾಜವನ್ನು ಒಡೆದು, ಅತಂತ್ರ ವಿಧಾನಸಭೆಯನ್ನು ಸೃಷ್ಟಿಸಿ ಮತ್ತೇ ತಾವು ಮುಖ್ಯಮಂತ್ರಿಯಾಗುವ ತಂತ್ರ ಹೆಣೆಯುತ್ತಿದ್ದಾರೆ. ಆದರೇ ಈ ಬಾರಿ ಹಿಂದೂ ಸಮಾಜ ಕಾಂಗ್ರೆಸ್ ಜೊತೆ ಜೆಡಿಎಸ್ ಪಕ್ಷವನ್ನೂ ನಿರ್ನಾಮ ಮಾಡಲಿದೆ. ಕುಮಾರಸ್ವಾಮಿ ಮುಂದೆಂದೂ ಈ ರಾಜ್ಯದ ಮುಖ್ಯಮಂತ್ರಿಯಾಗಲಾರರು ಎಂದವರು ಹೇಳಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಪ್ರಹ್ಲಾದ್ ಜೋಷಿ ಅವರನ್ನು ಅವಮಾನಿಸಿರುವ ಕುಮಾರಸ್ವಾಮಿ ಅವರ ಜಾತ್ಯಾತೀತ ಮುಖವಾಡ ಕಳಚಿಬಿದ್ದಿದೆ. ಜೋಷಿ ಅವರು ಪಕ್ಷನಿಷ್ಠೆ ದೇಶನಿಷ್ಠೆಯಿಂದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಅವರು ಅರ್ಹವಾಗಿಯೇ ರಾಜ್ಯದ ಮುಖ್ಯಮಂತ್ರಿಯಾದರೇ ಅದನ್ನು ತಡೆಯುವುದಕ್ಕೆ ಕುಮಾರಸ್ವಾಮಿಯಂತಹವರಿಂದ ಸಾಧ್ಯವಿಲ್ಲ. ಕುಮಾರಸ್ವಾಮಿ ಅವರು ರಾಜಕೀಯದಲ್ಲಿ ಉಳಿಯುವ ಆಸೆ ಇದ್ದರೇ ತಕ್ಷಣ ಬ್ರಾಹ್ಮಣ ಸಮುದಾಯವೂ ಸೇರಿದಂತೆ ಹಿಂದೂ ಸಮಾಜದ ಕ್ಷಮೆ ಕೇಳಬೇಕು, ಇಲ್ಲದಿದ್ದಲ್ಲಿ ಮುಂಬರುವ ಚುನಾವಣೆಯ ನಂತರ ಅನಿವಾರ್ಯವಾಗಿ ರಾಜಕೀಯದಿಂದ ನಿವೃತ್ತಿಯಾಗುವುದಕ್ಕೆ ಸಿದ್ಧರಾಬೇಕು ಎಂದು ಶ್ರೀಶ ನಾಯಕ್ ಎಚ್ಚರಿಸಿದ್ದಾರೆ.

ಕಾಪು : ಬಟರ್ ಫ್ಲೈ ಗೆಸ್ಟ್ ಹೌಸ್ - ಸಮಾಜ ಸೇವಕ ಮೂಸ ಕುಚ್ಚಿಗುಡ್ಡೆಯವರಿಗೆ ಗೌರವ ಸನ್ಮಾನ

Thumbnail
Posted On: 09 Feb 2023, 07:07 PM

ಕಾಪು : ಚಂದ್ರನಗರ ಬಟರ್ ಫ್ಲೈ ಗೆಸ್ಟ್ ಹೌಸ್ ವತಿಯಿಂದ ಸಮಾಜ ಸೇವಕ ಅನಿವಾಸಿ ಭಾರತೀಯ ಕಾಪು ಮೂಲದ ಮೂಸ ಕುಚ್ಚಿಗುಡ್ಡೆಯವರಿಗೆ ಬಟರ್ ಫ್ಲೈ ಗೆಸ್ಟ್ ಹೌಸ್ ನ ನಿರ್ದೇಶಕ ಹಾಜಿ ಕೆ. ಉಮ್ಮರಬ್ಬ ಚಂದ್ರನಗರ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಟರ್ ಫ್ಲೈ ಗೆಸ್ಟ್ ಹೌಸ್ ನ ಆಡಳಿತ ನಿರ್ದೇಶಕ ಫಾರೂಕ್ ಚಂದ್ರನಗರ ಮೂಸ ಕುಚ್ಚಿಗುಡ್ಡೆಯವರು ತೆರೆಮರೆಯಲ್ಲಿ ಯಾವುದೇ ಪ್ರಚಾರವಿಲ್ಲದೆ ನಮ್ಮ ಕಾಪು ಕ್ಷೇತ್ರದಲ್ಲಿರುವ ಹಲವಾರು ಬಡವರನ್ನು ಗುರುತಿಸಿ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಕೊರೋಣ ಸಂದರ್ಭದಲ್ಲಿ ಸಾವಿರಾರು ಮನೆಗೆ ಅಕ್ಕಿ ಮತ್ತು ಪಡಿತರ ಕಿಟ್ ನೀಡಿದ್ದು ಅವರ ಸಮಾಜಮುಖಿ ಕೆಲಸ ನಿಜಕ್ಕೂ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಶರ್ಫುದ್ದಿನ್ ಶೇಕ್ ಮಜೂರು, ಸಾಹಿತಿ-ಚಿಂತಕ ಅಶ್ರಫ್ ಕರಂದಾಡಿ,ಮೊಹಮ್ಮದ್ ಸಾಬಿಲ್ ಕುಚ್ಚಿಗುಡ್ಡೆ,ಅಬ್ದುಲ್ ಇಲ್ಯಾಸ್ ಮಜೂರು, ಫೈಸಲ್ ಕರಂದಾಡಿ, ಸಮದ್ ಮಲ್ಲಾರ್,ಲುಕ್ಮನ್ ಮಜೂರು,ಶಂಶುದ್ಧಿನ್ ಕರಂದಾಡಿ,ಸಾದಿಕ್ ಸಾಹಿಲ್ ಫೇಬ್ರಿಕೇಟರ್ಸ್ ಕಾಪು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕಾಪು : ತಾಲೂಕು ಮುಸ್ಲಿಂ ಮುಖಂಡರಿಂದ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಕಾರ್ಯದರ್ಶಿಯಾಗಿ ಆಯ್ಕೆಯಾದ ಫಾರೂಕ್ ಚಂದ್ರನಗರರಿಗೆ ಸನ್ಮಾನ

Thumbnail
Posted On: 09 Feb 2023, 06:18 PM

ಕಾಪು : ಕಾಪು ತಾಲೂಕು ಮುಸ್ಲಿಂ ಮುಖಂಡರಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಕ್ಕೆ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಫಾರೂಕ್ ಚಂದ್ರನಗರರಿಗೆ ಸನ್ಮಾನ ಕಾರ್ಯಕ್ರಮವನ್ನು ಬಟರ್ ಫ್ಲೈ ಗೆಸ್ಟ್ ಹೌಸ್ ನಲ್ಲಿ ನೂರಾರು ಗಣ್ಯರ ಸಮ್ಮುಖದಲ್ಲಿ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಪಿ.ಸಿ.ಸಿ ವಕ್ತಾರ ಅಬ್ದುಲ್ ಮುನೀರ್ ಫಾರೂಕ್ ಚಂದ್ರನಗರ ಕಾಂಗ್ರೆಸ್ ಪಕ್ಷದಲ್ಲಿ 18 ವರ್ಷದಿಂದ ಸಾಮಾನ್ಯ ಕಾರ್ಯಕರ್ತರಾಗಿ ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಹಲವಾರು ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಈ ಮೊದಲು 2 ಬಾರಿ ಕೆಪಿಸಿಸಿ ಅಲ್ಪ ಸಂಖ್ಯಾತ ಸದಸ್ಯರಾಗಿ ಇದೀಗ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ್ದು ಮುಂದೆಯೂ ಪಕ್ಷದಲ್ಲಿ ಇನ್ನು ಉತ್ತಮ ಕೆಲಸ ಮಾಡಿ ಅತ್ಯುನ್ನತ ಹಂತಕ್ಕೆ ತಲುಪಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕೋ-ಒರ್ಡಿನೆಟರ್ ಅಬ್ದುಲ್ ಅಝೀಜ್ ಹೆಜಮಾಡಿ, ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಅಧ್ಯಕ್ಷರಾದ ಶರ್ಫುದ್ದಿನ್ ಶೇಕ್ ಮಜೂರು, ಕಾಪು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ರಮೀಜ್ ಹುಸೈನ್ ಪಡುಬಿದ್ರೆ, ಕಾಪು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಯು.ಸಿ ಶೇಖಬ್ಬ, ಕಾಪು ಪುರಸಭೆ ಮಾಜಿ ಉಪಾಧ್ಯಕ್ಷರಾದ ಉಸ್ಮಾನ್ ಕೊಪ್ಪಲಂಗಡಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಕಾರ್ಯದರ್ಶಿ ಶಂಶುದ್ಧಿನ್ ಮಜೂರು, ಪೊಲಿಪು ಜಾಮಿಯಾ ಮಸ್ಜಿದ್ ಅಧ್ಯಕ್ಷ ಹೆಚ್. ಅಬ್ದುಲ್ಲ, ಕಾಂಗ್ರೆಸ್ ಮುಖಂಡ ಮನ್ಸೂರ್ ಮೆಕ್ಕಾಸ್ ಮೂಳೂರು, ಕಾಪು ಮುಸ್ಲಿಂ ಒಕ್ಕೂಟ ಅಧ್ಯಕ್ಷರಾದ ನಸೀರ್ ಕೊಂಬಗುಡ್ಡೆ, ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹಸನಬ್ಬ ಶೇಕ್, ಕಾಪು ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಮಿರ್ ಮೊಹಮ್ಮದ್, ಕಾಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಝುಬೈರ್ ಅಹ್ಮದ್ ಶಿರ್ವ, ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಇಮ್ರಾನ್ ಮಜೂರು, ಸಾಹಿತಿ-ಚಿಂತಕ ಅಶ್ರಫ್ ಕರಂದಾಡಿ, ಪಡುಬಿದ್ರೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಹಸನ್ ಕಂಚಿನಡ್ಕ, ಕಾಂಗ್ರೆಸ್ ಮುಖಂಡ ರೆಹ್ಮನ್ ಹೆಜಮಾಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ನಿರಂತರ್ ಉದ್ಯಾವರ : ಏಳು ದಿನದ ಬಹುಭಾಷ ನಾಟಕೋತ್ಸವಕ್ಕೆ ತೆರೆ

Thumbnail
Posted On: 09 Feb 2023, 05:54 PM

ಉಡುಪಿ : ನಿರಂತರ್ ಸಂಘಟನೆಯ ನೇತೃತ್ವದಲ್ಲಿ ಐದನೇ ವರ್ಷದ ಪ್ರಯುಕ್ತ ಉದ್ಯಾವರದ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವಠಾರದಲ್ಲಿ ಏಳು ದಿನದ ಬಹುಭಾಷ ನಾಟಕೋತ್ಸವವು ಯಶಸ್ವಿಯಾಗಿ ಮುಕ್ತಾಯ ಕಂಡಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯವಾದಿ ಮತ್ತು ಖ್ಯಾತ ಲೇಖಕಿಯಾಗಿರುವ ವಿತಾಶ ರೋಡ್ರಿಗಸ್ (ಮುದ್ದು ತೀರ್ಥಹಳ್ಳಿ), ಪ್ರಸ್ತುತ ಕಾಲದಲ್ಲಿ ಜನ ನಾಟಕಗಳಿಗಿಂತ ಚಲನಚಿತ್ರದತ್ತ ಹೆಚ್ಚು ಆಕರ್ಷಿತರಾದರೂ, ನಾಟಕಗಳು ಇನ್ನಷ್ಟು ಬೆಳೆಯುತ್ತೇವೆ. ಚಲನಚಿತ್ರಗಳು ಎಷ್ಟು ಬೆಳೆದರು ಅಥವಾ ಜನಪ್ರಿಯತೆಯನ್ನು ಕಂಡರೂ ನಾಟಕದ ಜಾಗಕ್ಕೆ ಬರಲು ಸಾಧ್ಯವೇ ಇಲ್ಲ. ನಾಟಕಕ್ಕೆ ಅದರದೇ ಆದ ವರ್ಚಸ್ಸು ಇದೆ ಎಂದರು. ಉದ್ಯಾವರ ಚರ್ಚಿನ ಧರ್ಮ ಗುರುಗಳಾದ ವo. ಸ್ಟ್ಯಾನಿ ಬಿ ಲೋಬೊ ಮಾತನಾಡಿ, ಉದ್ಯಾವರದಲ್ಲಿ ಈ ನಾಟಕದ ಮೂಲಕ ಒಂದು ಹಬ್ಬವೇ ನಡೆಯಿತು. ಈ ಸಂಭ್ರಮದಲ್ಲಿ ನಾವೆಲ್ಲರೂ ಭಾಗಿಯಾದೆವು ಮತ್ತು ಈ ಸಂಭ್ರಮದ ಸಂದೇಶವನ್ನು ಸ್ವೀಕಾರ ಮಾಡಿದೆವು. ಉಡುಪಿ ಜಿಲ್ಲೆಯಲ್ಲಿ ಜನರನ್ನು ನಾಟಕದತ್ತ ಸೆಳೆಯವಲ್ಲಿ ನಿರಂತರ್ ಸಂಘಟನೆ ಯಶಸ್ವಿಯಾಗಿದೆ ಎಂದರು. ವಂ. ಲಿಯೋ ಪ್ರವೀಣ್ ಮಾತನಾಡಿ, ಏಳು ದಿನದ ನಾಟಕೋತ್ಸವದ ಮೂಲಕ ಕಲಾಭಿಮಾನಿಗಳಿಗೆ ನೀತಿ ಉಳ್ಳ ಜ್ಞಾನದ ಬಾಡೂಟ ಉಣ್ಣಿಸಿದ ಯಶಸ್ವಿಯ ದಿನ. ಮನೋರಂಜನೆಯ ಜೊತೆಗೆ ನೀತಿಯುಳ್ಳ ಪಾಠವನ್ನು ನಾಟಕದ ಮೂಲಕ ನಿರಂತರ್ ಸಂಘಟನೆ ಇಲ್ಲಿಯ ಜನತೆಗೆ ನೀಡಿದೆ ಎಂದರು. ಮುದ್ದು ತೀರ್ಥಹಳ್ಳಿ ನಾಮಾಂಕಿತ, ಉಚ್ಚ ನ್ಯಾಯಾಲಯದ ನ್ಯಾಯವಾದಿ ವಿತಾಶ ರೊಡ್ರಿಗಸ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಕುಲಪತಿ ಅ. ವo. ಡಾ. ರೋಷನ್ ಡಿಸೋಜಾ, ನಾಟಕದ ನಿರ್ದೇಶಕ ವಂ. ಆಲ್ವಿನ್ ಸೆರಾವೊ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲ. ಅನಿಲ್ ಲೋಬೊ, ಪ್ರಮುಖರಾದ ತಿಯಾದೋರ್ ಪಿರೇರಾ, ರೋನಾಲ್ಡ ಡಿಸೋಜಾ ಉಪಸ್ಥಿತರಿದ್ದರು. ನಿರಂತರ ಅಧ್ಯಕ್ಷ ರೋಷನ್ ಕ್ರಾಸ್ತಾ ಸ್ವಾಗತಿಸಿದರೆ, ಕಾರ್ಯದರ್ಶಿ ಒಲವಿರಾ ಮತಯಸ್ ಧನ್ಯವಾದ ಸಮರ್ಪಿಸಿದರು. ಸ್ಟೀವನ್ ಕುಲಾಸೋ ಮತ್ತು ಮೈಕಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಏಳು ದಿನದ ನಾಟಕೋತ್ಸವದಲ್ಲಿ ಐದು ಭಾಷೆಯ ನಾಟಕಗಳು ಪ್ರದರ್ಶನಗೊಂಡವು. ಸಭಾ ಕಾರ್ಯಕ್ರಮದಲ್ಲಿ ಆಯಾ ದಿನದ ನಾಟಕದ ಭಾಷೆಯ ಪ್ರಾರ್ಥನ ಗೀತೆಯನ್ನು ಹಾಡಲಾಗಿತ್ತು. ಪ್ರತಿ ದಿನ 500ಕ್ಕೂ ಅಧಿಕ ಕಲಾಭಿಮಾನಿಗಳು ನಾಟಕ ವೀಕ್ಷಣೆಯಲ್ಲಿದ್ದರೆ, ಕೊನೆಯ ದಿನ ಅದರ ಸಂಖ್ಯೆ 1,000 ಕ್ಕೆ ಸಮೀಪವಾಗಿತ್ತು.

ಕಾಪು : ಮಲ್ಲಾರಿನ ಪ್ರದೀಪ್ ಆರ್ ಭಂಡಾರಿಗೆ ಪಿಎಚ್ ಡಿ ಪದವಿ

Thumbnail
Posted On: 09 Feb 2023, 05:31 PM

ಕಾಪು : ತಾಲೂಕಿನ ಮಲ್ಲಾರು ಗ್ರಾಮದ ಪ್ರದೀಪ್ ಭಂಡಾರಿಗೆ ಮಂಗಳೂರು ವಿವಿಯ ಘಟಕ ಕಾಲೇಜಾದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದಲ್ಲಿ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರದೀಪ್ ಭಂಡಾರಿ ಪಾಲಿಸಿಸ್ ಅಂಡ್ ಪ್ರಾಕ್ಟಿಸಸ್ ಆಫ್ ಎಂಪ್ಲೊಯೀರೇಟೆನ್ಸನ್ ಮ್ಯಾನೇಜ್ಮೆಂಟ್ ಇನ್ ಟೆಲಿಕಾಂ ಸೆಕ್ಸರ್ ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿವಿ ಪಿಎಚ್ ಡಿ ಪದವಿ ನೀಡಿದೆ. ಪ್ರದೀಪ್ ಭಂಡಾರಿ ಮಲ್ಲಾರು ಗ್ರಾಮದ ದಿ. ರವೀಂದ್ರ ಭಂಡಾರಿ ಹಾಗೂ ದಿ. ಸುಜಯ ಭಂಡಾರಿಯವರ ಪುತ್ರರಾಗಿರುತಾರೆ. ಇವರು ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ. ಎಸ್ ಯಡಪಡಿತ್ತಾಯ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದು, ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಮಂಗಳೂರು ವಿಶ್ವವಿದ್ಯಾನಿಲಯದ 41ನೇ ಘಟಿಕೋತ್ಸವದಲ್ಲಿ ಪಿ ಎಚ್ ಡಿ ಪ್ರಮಾಣಪತ್ರವನ್ನು ಸ್ವೀಕರಿಸಲಿದ್ದಾರೆ.

ಪಡುಬಿದ್ರಿ : ಆದಿ ಮಾಯೆ ಆದಿಶಕ್ತಿ, ಅಣ್ಣಪ್ಪ ಪಂಜುರ್ಲಿ, ಕೊರಗಜ್ಜ ಕ್ಷೇತ್ರ ಜೀರ್ಣೋದ್ಧಾರದ ಲಕ್ಕಿಡಿಪ್ ಪುಸ್ತಕ ಬಿಡುಗಡೆ

Thumbnail
Posted On: 09 Feb 2023, 01:28 PM

ಪಡುಬಿದ್ರಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇತಿಹಾಸ ಪ್ರಸಿದ್ಧ ಪಡುಬಿದ್ರಿ ಆದಿ ಮಾಯೆ ಆದಿಶಕ್ತಿ ಹಾಗೂ ಅಣ್ಣಪ್ಪ ಪಂಜುರ್ಲಿ ಕೊರಗಜ್ಜ ದೈವಗಳ ಕ್ಷೇತ್ರದ ಜೀರ್ಣೋದ್ಧಾರದ ಪ್ರಯುಕ್ತ ಸೋಮವಾರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಬೊಬ್ಬರ್ಯ ಕಾಂತೇರಿ ಜುಮಾದಿ ಹಾಗೂ ಕಲ್ಕುಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ಜೀರ್ಣೋದ್ಧಾರದ ಪ್ರಯುಕ್ತ ಅದೃಷ್ಟ ಕೂಪನ್ ಟಿಕೆಟ್ ಇರುವ ಪುಸ್ತಕದ ಬಿಡುಗಡೆ ಕಾರ್ಯಕ್ರಮವನ್ನು ಬೊಬ್ಬರ್ಯ ಯುವ ಸೇವಾ ಸಮಿತಿಯ ಅಧ್ಯಕ್ಷರಾದ ವರದರಾಜ ಕಾಮತ್ ಅವರಿಗೆ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಡುಬಿದ್ರಿ ಹಾಗೂ ಕ್ಷೇತ್ರ ಧರ್ಮದರ್ಶಿಗಳಾದ ಸುಧಾಕರ್ ಮಡಿವಾಳ, ಬೊಬ್ಬರ್ಯ ಯುವ ಸೇವಾ ಸಮಿತಿ ಗೌರವಾಧ್ಯಕ್ಷರು ಕ್ಷೇತ್ರದ ಮುಕ್ಕಾಲ್ದಿ ಶೆಟ್ಟಿ ಬಾಲೆ ಹಾಗೂ ಜೀರ್ಣೋದ್ಧಾರ ಸಮಿತಿಯ ಸಂಘಟನ ಕಾರ್ಯದರ್ಶಿಯಾದ ವಿನೋದ್ ಶೆಟ್ಟಿ ದೊಡ್ಡನ ಗುಡ್ಡೆ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಚಿಂದ್ರ ಶೆಟ್ಟಿ, ಜೀರ್ಣೋದ್ಧಾರ ಮಹಿಳಾ ಸಮಿತಿ ಅಧ್ಯಕ್ಷರಾದ ಮಮತಾ ಪಿ ಶೆಟ್ಟಿ ಹಾಗೂ ಸರ್ವ ಸದಸ್ಯರು ಉಪಸ್ಥಿತಿ ಇದ್ದರು.

ಕಾಪು : ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯುವ ಛಾಯಾಗ್ರಹಕ ನಿಧನ

Thumbnail
Posted On: 09 Feb 2023, 12:37 PM

ಕಾಪು : ಇಲ್ಲಿನ ಪೊಲಿಪುವಿನ ನಿವಾಸಿ ಯುವ ಛಾಯಾಗ್ರಹಕ ಪ್ರೀತೇಶ್ ಪೂಜಾರಿಯವರು ಗುರುವಾರ ಬೆಳಿಗ್ಗೆ ನಾಲ್ಕು ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರೀತೇಶ್ ರವರು ನಾಲ್ಕು ದಿನದ ಹಿಂದೆ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ತೀವ್ರ ಗಾಯಗೊಂಡ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅವರನ್ನು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಗುರುವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಪ್ರೀತೇಶ್ ರವರು ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ. ಪ್ರೀತಿಶ್ ರವರು ಕಾಪು ಛಾಯಾಗ್ರಹಕ ಸಂಘದ ಅಜೀವ ಸದಸ್ಯರಾಗಿದ್ದು, ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಪ್ರೀತೇಶ್ ರವರು ತಂದೆ ತಾಯಿ ಹೆಂಡತಿ ಮಗಳು ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾಪು ಛಾಯಾಗ್ರಾಹಕ ಸಂಘದ ಅಧ್ಯಕ್ಷ ವಿನೋದ್ ಕಾಂಚನ್ ಮತ್ತು ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಟಪಾಡಿ : ಯುವಜನ ಸೇವಾ ಸಂಘ ಏಣಗುಡ್ಡೆ - ನೂತನ ಸಂಘದ ಉದ್ಘಾಟನೆ

Thumbnail
Posted On: 06 Feb 2023, 09:23 PM

ಕಟಪಾಡಿ : ಯುವಜನ ಸೇವಾ ಸಂಘ ಏಣಗುಡ್ಡೆ ಕಟಪಾಡಿ ಇದರ ನೂತನ ಸಂಘದ ಉದ್ಘಾಟನಾ ಸಮಾರಂಭವು ಫೆಬ್ರವರಿ 5 ರಂದು ಕಟಪಾಡಿಯ ತ್ರಿಶಾ ವಿದ್ಯಾಕಾಲೇಜ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಡಾ ಉದಯ ಕುಮಾರ್ ಶೆಟ್ಟಿ ಹಾಗೂ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜ್ ನ ಇಂದುರೀತಿ ಉದ್ಘಾಟಿಸಿದರು. ಇದರ ಪ್ರಯುಕ್ತ ಯುವಜನ ಸೇವಾ ಸಂಘದ ನೇತೃತ್ವದಲ್ಲಿ, ರಾ.ಸೇ. ಯೋಜನಾ ಘಟಕ ತ್ರಿಶಾ ವಿದ್ಯಾ ಕಾಲೇಜು,ಕಟಪಾಡಿ ಉಡುಪಿ,ರಕ್ತನಿಧಿ, ಜಿಲ್ಲಾ ಆಸ್ಪತ್ರೆ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಸಹಯೋಗದಿಂದ ರಕ್ತದಾನ ಶಿಬಿರ ಹಾಗೂ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಾಗಾರ ನಡೆಯಿತು. ಸಂಘದ ಅಧಿಕೃತ ಲೋಗೋವನ್ನು ಅರ್ಚಿಟೆಕ್ಟ್ ಪ್ರಮುಖ್ ರೈ ಹಾಗೂ ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕ ದಯಾನಂದ ಬಿಡುಗಡೆ ಗೊಳಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ರಕ್ತನಿಧಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ ವೀಣಾ ಕುಮಾರಿ, ವಿಜಯ್ ಕುಮಾರ್ ಉದ್ಯಾವರ ಆಡಳಿತಾಧಿಕಾರಿ ತ್ರಿಶಾ ವಿದ್ಯಾ ಕಾಲೇಜ್,ಜೈ ತುಲುನಾಡ್(ರಿ) ನ ರಾಜೇಶ್, ಸತ್ಯದ ತುಳುವೆರ್(ರಿ) ಉಡುಪಿ-ಮಂಗಳೂರು ನ ಪ್ರವೀಣ್ ಕುರ್ಕಾಲ್, ತ್ರಿಶಾ ವಿದ್ಯಾ ಕಾಲೇಜ್ ರಾ, ಸೇ ಯೋಜನಾಧಿಕಾರಿ ಸಂತೋಷ್. ಎ, ಶೆಟ್ಟಿ , ಜೂನಿಯರ್ ಫ್ರೆಂಡ್ಸ್ ಕೋರಂಗ್ರಪಾಡಿಯ ಚೇತನ್, ಸಂಗಮ್ ಫ್ರೆಂಡ್ಸ್ ನ ಜಯಕರ್ ಕುಂದರ್, ಗ್ರಾಮ ಒನ್ ಕೇಂದ್ರ ಕೋಟೆ ಇದರ ಸಹನಾ ಕುಂದರ್, ರತ್ನಾಕರ್ ಉಡುಪಿ, ಮಹೇಶ್ ಎನ್ ಅಂಚನ್ ಭಾಗವಹಿಸಿದ್ದರು. ಶಿಬಿರದಲ್ಲಿ ಒಟ್ಟು 82 ಯೂನಿಟ್ ಗಳಷ್ಟು ರಕ್ತವನ್ನು ಸಂಗ್ರಹಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರಮೋದ್ ವಹಿಸಿದ್ದರು, ಸಂಘದ ಕಾರ್ಯದರ್ಶಿ ಸಂತೋಷ್ ಎನ್. ಎಸ್ ಸ್ವಾಗತಿಸಿದರು. ಕುಮಾರಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಸನತ್ ಕೋಟ್ಯಾನ್ ವಂದಿಸಿದರು.