Updated News From Kaup
ಮಂಗಳೂರು : ವೃಷ್ಟಿ ಚಲನಚಿತ್ರದ ಪೋಸ್ಟರ್ ಬಿಡುಗಡೆ
Posted On: 07 Oct 2022, 07:24 PM
ಮಂಗಳೂರು : ವಾಗ್ಮಿ ಸಿನಿ ಕ್ರಿಯೇಷನ್ಸ್ ಅರ್ಪಿಸುವ ಸಾಧನಾ ಜಗದೀಶ್ ಶೆಟ್ಟಿ ನಿರ್ಮಾಣದ ಹೊಸ ಕನ್ನಡ ಚಲನಚಿತ್ರ ವೃಷ್ಟಿ ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಪ್ರಕಾಶ್ ನಾಥ ಮಂದಿರದಲ್ಲಿ ನಡೆಯಿತು. ಪ್ರಕಾಶ್ ನಾಥ ಮಂದಿರದ ಸುಮಂತ್ ರವರು ಪೋಸ್ಟರ್ ನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಧಾರ್ಮಿಕ ಮುಖಂಡ ನಾಗರಾಜ್ ಆಚಾರ್ಯ ಉಪಸ್ಥಿತಿ ಇದ್ದರು. ಈ ಮೊದಲು ಕನಸು ಮಾರಾಟಕ್ಕಿದೆ ಚಲನಚಿತ್ರ ಹಾಗೂ ವನಜಾ ವೆಬ್ ಸೀರಿಸ್, ಮಾಡಿದ ತಂಡವೇ ಈ ವೃಷ್ಟಿ ಚಲನಚಿತ್ರವನ್ನು ಚಿತ್ರೀಕರಿಸಿದ್ದು ನಿಶಿತ್ ಶೆಟ್ಟಿಯವರು ನಿರ್ದೇಶನ ಮಾಡಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆ ಕ್ಯಾಮರ ಕೈಚಳಕ ಈ ಚಿತ್ರದಲ್ಲಿದೆ. ಗಣೇಶ್ ನೀರ್ಚಾಲ್ ಸಂಕಲನ ಮಾಡಿದ್ದು, ಸಂಗೀತ ನಿರ್ದೇಶನವನ್ನು ಮಾನಸ ಹೊಳ್ಳರವರು ನಿರ್ವಹಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಯಶವಂತ್ ಬೆಳ್ತಂಗಡಿ,ಸಿಂಚನಾ ಪಿ.ರಾವ್, ವಿನಿಶಾ, ಕಾಮಿಡಿ ಕಿಲಾಡಿ ಖ್ಯಾತಿಯ ಪ್ರವೀಣ್ ಜೈನ್, ಯುವ ಶೆಟ್ಟಿ, ರಾಕೇಶ್ ಪೂಜಾರಿ, ಅನೀಶ್ ಪೂಜಾರಿ ಮುಂತಾದವರು ಅಭಿನಯಿಸಿದ್ದಾರೆ.
ಪಡುಬಿದ್ರಿ : ಬ್ಲೂಫ್ಲ್ಯಾಗ್ ಬೀಚ್ ನಿರ್ವಹಣೆ ಅಕ್ರಮ - ಜಿಲ್ಲಾಧಿಕಾರಿಗೆ ದೂರು
Posted On: 07 Oct 2022, 04:20 PM
ಪಡುಬಿದ್ರಿ : ಇಲ್ಲಿನ ಎಂಡ್ ಪಾಯಿಂಟ್ನಲ್ಲಿರುವ ಅಂತಾರಾಷ್ಟ್ರೀಯ ಮಾನ್ಯತೆಯ ಬ್ಲೂಫ್ಲ್ಯಾಗ್ ಬೀಚ್ನ ಬಹುತೇಕ ಉದ್ಯೋಗಿಗಳು ಗುರುವಾರ ಕರ್ತವ್ಯಕ್ಕೆ ಗೈರು ಹಾಜರಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬ್ಲೂಫ್ಲ್ಯಾಗ್ ಬೀಚ್ ನಿರ್ವಹಣೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ಕಳೆದ 15 ತಿಂಗಳುಗಳಿಂದ ಕೆಲಸದ ವಾತಾವರಣ ಹದಗೆಟ್ಟಿದೆ. ಬೋಟಿಂಗ್ಗೆ ನಕಲಿ ರಶೀದಿಗಳನ್ನು ಮುದ್ರಿಸಿ ಹಣ ವಸೂಲು ಮಾಡಲಾಗುತ್ತಿದೆ. ವಸೂಲಾದ ಹಣವು ಪ್ರವಾಸೋದ್ಯಮ ಇಲಾಖೆಯ ಖಾತೆಗೆ ಜಮೆಯಾಗದೆ ಓರ್ವರ ಖಾಸಗಿ ಖಾತೆಗೆ ಜಮೆಯಾಗುತ್ತಿದೆ. ಈ ಕುರಿತು ಈ ಹಿಂದೆಯೂ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಿಗೂ ದೂರು ನೀಡಿದ್ದರೂ, ಪ್ರಯೋಜನವಾಗಿಲ್ಲ ಎಂದು ಮನವಿಗೆ ಸಹಿ ಮಾಡಿರುವ ಅಲ್ಲಿನ 22 ಗುತ್ತಿಗೆ ಉದ್ಯೋಗಿಗಳು ದೂರಿದ್ದಾರೆ. ನಾವು 31 ಮಂದಿ ಉದ್ಯೋಗಿಗಳಿದ್ದು ಸೂಪರ್ವೈಸರ್ಗಳಿಬ್ಬರು ನಮಗೆ ಜೀವಭಯವನ್ನೂ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತಾಗಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಅವರಲ್ಲಿ ಮಾಧ್ಯಮದವರು ಪ್ರಶ್ನಿಸಿದಾಗ, ಕಳೆದ ಮೂರು ತಿಂಗಳುಗಳಿಂದ ಬ್ಲೂ ಫ್ಲ್ಯಾಗ್ ಬೀಚ್ನ ಕೆಲಸಗಾರರ ನಡುವೆ ಆಂತರಿಕ ಭಿನ್ನಾಭಿಪ್ರಾಯವು ಕಾಣಸಿಕೊಂಡಿರುವ ಪರಿಣಾಮ ಇದು. ಸ್ಥಳೀಯರಿಗೇ ಉದ್ಯೋಗ ನೀಡಿದ್ದು, ಮಾಸಿಕ ವೇತನವನ್ನೂ ಸಕಾಲದಲ್ಲಿ ಪಾವತಿಸಲಾಗುತ್ತಿದೆ. ಬೋಟಿಂಗ್, ಪ್ರವೇಶಾತಿಗಳಿಂದ ಬರುವ ಆದಾಯಗಳಿಗೆ ಕ್ರಮವತ್ತಾದ ರಶೀದಿಯನ್ನು ನೀಡಲಾಗುತ್ತಿದೆ. ಆಯಾಯ ದಿನ ಸಂಜೆಯ ವೇಳೆಗೆ ಲೆಕ್ಕಾಚಾರವಾಗಿ ಮರುದಿನವೇ ಪ್ರವಾಸೋದ್ಯಮ ಇಲಾಖೆಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಅಪಸ್ವರವೆತ್ತಿರುವ ಉದ್ಯೋಗಿಗಳು ಸೂಕ್ತ ದಾಖಲೆಗಳನ್ನು ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಲೋಬೋ ತಿಳಿಸಿದ್ದಾರೆ.
ಮೈಸೂರು ದಸರಾದಲ್ಲಿ ಪ್ರಮಖ ಆಕರ್ಷಣೆಯಾದ ತುಳುನಾಡ ಕಂಗಿಲು
Posted On: 07 Oct 2022, 01:27 PM
ಕಾಪು : ವಿಶ್ವವಿಖ್ಯಾತ ಪಡೆದ ಮೈಸೂರು ದಸರಾದಲ್ಲಿ ತುಳುನಾಡ ಜಾನಪದ ಕಲೆಯಾದ ಕಂಗಿಲು ನೃತ್ಯ ಪ್ರಮುಖ ಆಕರ್ಷಣೆಯಾಗಿತ್ತು. ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡ ಕಂಗಿಲು ನೃತ್ಯದ ನೇತೃತ್ವವನ್ನು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುಚರಣ್ ಪೊಲಿಪು ವಹಿಸಿದ್ದರು. ಈ ತಂಡದಲ್ಲಿ ಕಾರ್ತಿಕ್ ಬಂಗೇರ ಪಡುಬಿದ್ರಿ, ವಿಖ್ಯಾತ್, ವರುಣ್. ಬಿ.ಕೋಟ್ಯಾನ್, ಕಿರಣ್ ಕಾಪು, ಅಂಕಿತ್ ನಾಯಕ್, ಸಂಧ್ಯ ನಾಯಕ್, ಪ್ರಥ್ವಿ ಹೆಗ್ಡೆ, ಅಂಬಿಕಾ ಸಾಗರ, ಆಕಾಶ್, ವಿನೋದ್, ಕಾರ್ತಿಕ್, ಪ್ರವೀಣ್, ದಿಲೀಪ್, ಅಶ್ವಥ್ ಕುಮಾರ್ (ಆಯುಷ್ ಗ್ರೂಪ್ ) ಭಾಗವಹಿಸಿದ್ದರು.
ಕಾಪು : ಶ್ರೀ ವೆಂಕಟರಮಣ ದೇವಳ - ಚಂಡಿಕಾ ಯಾಗ ಪೂರ್ಣಾಹುತಿ - ಮಹಾ ಸಮಾರಾಧನೆ ಸಂಪನ್ನ
Posted On: 06 Oct 2022, 11:24 AM
ಕಾಪು : ಇಲ್ಲಿನ ಶ್ರೀ ವೆಂಕಟರಮಣ ದೇವಳದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಒಂಬತ್ತು ದಿನ ನಿತ್ಯ ರಾತ್ರಿ ದುರ್ಗಾ ನಮಸ್ಕಾರ ಸೇವೆಯು ಜರಗಿ ವಿಜಯದಶಮಿ ದಿನದಂದು ಚಂಡಿಕಾ ಯಾಗ ಪೂರ್ಣಾಹುತಿ - ಮಹಾ ಸಮಾರಾಧನೆ ವಿಜೃಂಭಣೆಯಿಂದ ಜರಗಿತು. ವೇದಮೂರ್ತಿ ಕಮಲಾಕ್ಷ ಭಟ್ ಮಾರ್ಗದರ್ಶನ ದಲ್ಲಿ ವೇದಮೂರ್ತಿ ಶ್ರೀನಿವಾಸ ಭಟ್ ರವರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ, ಆಡಳಿತ ಮಂಡಳಿಯ ಸರ್ವಸದಸ್ಯರು ಹಾಗೂ ಊರ ಪರವೂರ ನೂರಾರು ಭಜಕರು ಪಾಲ್ಗೊಂಡರು.
ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತೃಶಕ್ತಿ, ದುರ್ಗಾವಾಹಿನಿ ಮೂಡುಬೆಳ್ಳೆ : 15ನೇ ವರ್ಷದ ಸತ್ಯನಾರಾಯಣ ಪೂಜೆ, ಶಾರದಾ ಪೂಜೆ, ಚಂಡಿಕಾಯಾಗ
Posted On: 06 Oct 2022, 11:18 AM
ಕಾಪು : ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತೃಶಕ್ತಿ ಹಾಗೂ ದುರ್ಗಾವಾಹಿನಿ ಮೂಡುಬೆಳ್ಳೆ ಘಟಕದ ವತಿಯಿಂದ ಅಕ್ಟೋಬರ್ 04, ಮಂಗಳವಾರ ಬೆಳ್ಳೆ ಗೀತಾ ಮಂದಿರದಲ್ಲಿ ವೇದಮೂರ್ತಿ ವಿಖ್ಯಾತ ಭಟ್ ಇವರ ನೇತೃತ್ವದಲ್ಲಿ 15ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಶಾರದಾ ಪೂಜೆ, ಮಹಾ ಚಂಡಿಕಾಯಾಗ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಮೂಡುಬೆಳ್ಳೆ ಘಟಕದ ಅಧ್ಯಕ್ಷರಾದ ಗೋಪಾಲಕೃಷ್ಣ ಪೈ, ಕಾರ್ಯದರ್ಶಿಯಾದ ಅಭಿಷೇಕ್ ಆಚಾರ್ಯ, ಭಜರಂಗದಳ ಸಂಯೋಜಕ್ ಮಿಥುನ್ ಪೂಜಾರಿ, ವಾಣಿ ಆಚಾರ್ಯ ಮಾತೃಶಕ್ತಿ ಪ್ರಮುಖ್, ದೀಪಾ ಶೆಟ್ಟಿ ದುರ್ಗಾವಾಹಿನಿ ಪ್ರಮುಖ್, ದೀಪಕ್ ಮೂಡುಬೆಳ್ಳೆ ಜಿಲ್ಲಾ ಸೇವಾಪ್ರಮುಖ್, ಸಂತೋಷ್ ಕುಮಾರ್ ಮೂಡುಬೆಳ್ಳೆ, ಕೃಷ್ಣಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ಉಚ್ಚಿಲ ದಸರಾಗೆ ತೆರೆ ; ಹೆಲಿಕಾಪ್ಟರ್ ಪುಷ್ಪವೃಷ್ಟಿ ; ಗಂಗಾರತಿಯೊಂದಿಗೆ ನವದುರ್ಗೆಯರ ಜಲಸ್ಥಂಭನ
Posted On: 06 Oct 2022, 11:10 AM
ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇಗುಲದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಪ್ರಥಮ ಬಾರಿಗೆ ಜರಗಿದ ದಸರಾ - 2022 ಶೋಭಾಯಾತ್ರೆಯು ನವದುರ್ಗೆಯರ ಮೂರ್ತಿ ಸಹಿತ 75ಕ್ಕೂ ಮಿಕ್ಕಿ ಸ್ತಬ್ಧ ಚತ್ರಗಳ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಸಾವಿರಾರು ಭಕ್ತರು ಈ ವೈಭವದ ಶೋಭಾಯಾತ್ರೆಗೆ ಸಾಕ್ಷಿಯಾದರು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಮೂಲಕ ದೇವಾಲಯ, ನವದುರ್ಗೆಯರ ಸಹಿತ ಸ್ಥಬ್ದ ಚಿತ್ರಗಳಿಗೆ ಪುಷ್ಪವೃಷ್ಟಿಗೈಯಲಾಯಿತು. ಶೋಭಾಯಾತ್ರೆಯಲ್ಲಿ ಸ್ತಬ್ಧ ಚಿತ್ರಗಳು, ಹುಲಿವೇಷ ತಂಡಗಳು, ದ್ವಿಚಕ್ರ ವಾಹನದಲ್ಲಿ ಸಾಗಿದ ಯುವಕರು, ಯುವಕರ ನೃತ್ಯದ ಮೂಲಕ ಮೆರುಗು ನೀಡಿತು. ಕೆಲವು ಕಡೆಗಳಲ್ಲಿ ರಸಮಂಜರಿ ಕಾರ್ಯಕ್ರಮದ ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಜನರು ಕಾದು ಕುಳಿತಿದ್ದರು. ಉಚ್ಚಿಲದಿಂದ ಪಡುಬಿದ್ರಿ ಮಾರ್ಗವಾಗಿ ಹೆಜಮಾಡಿ ಟೋಲ್ ಗೇಟಿಗೆ ತಲುಪಿ ಅಲ್ಲಿಂದ ನೇರವಾಗಿ ಕಾಪು ಲೈಟ್ ಹೌಸ್ ಸಮೀಪದ ಕಡಲಕಿನಾರೆಯಲ್ಲಿ ನವದುರ್ಗೆಯರಿಗೆ ಗಂಗಾರತಿ ಸಲ್ಲಿಸಿ ನವದುರ್ಗೆಯರ ಮೂರ್ತಿಯನ್ನು ಜಲಸ್ತಂಭನಗೊಳಿಸಲಾಯಿತು.
ಪಡುಬಿದ್ರಿ : ಗಣೇಶ ಚತುರ್ಥಿಯಿಂದ ಪೂಜಿಸಲ್ಪಟ್ಟು ವಿಜಯದಶಮಿಯಂದು ಜಲಸ್ಥಂಭನಗೊಂಡ ಬಾಲ ಗಣಪತಿ
Posted On: 05 Oct 2022, 08:31 PM
ಪಡುಬಿದ್ರಿ: ಗಣೇಶ ಚತುರ್ಥಿಯಿಂದ ಆರಂಭಗೊಂಡು ವಿಜಯದಶಮಿಯವರೆಗೆ ಪೂಜಿಸಲ್ಪಟ್ಟು ಅದೇ ದಿನ ಸಂಜೆ ಮೆರವಣಿಗೆಯ ಮೂಲಕ ಜಲಸ್ಥಂಬನಗೊಳ್ಳುವ ಬಾಲ ಗಣಪತಿ ದೇವಳದ ಗಣಪತಿ ವಿಸರ್ಜನಾ ಮೆರವಣಿಗೆ ಇಂದು ಜರಗಿತು. ಗಣೇಶ ಚತುರ್ಥಿಯಂದು ಮೊದಲ್ಗೊಂಡು ವಿಜಯದಶಮಿಯವರೆಗೆ ಪ್ರತಿನಿತ್ಯ ಸಂಜೆ ಪೂಜಾಕೈಂಕರ್ಯ ನಡೆಯುವುದು ಈ ಕ್ಷೇತ್ರದ ವಿಶೇಷವಾಗಿದೆ. ಇಲ್ಲಿ ಗಣಪತಿಗೆ ಹರಕೆಯ ರೂಪವಾಗಿ ರಂಗಪೂಜೆಯು ಪ್ರಮುಖವಾಗಿದೆ. ಪೂಜಾ ಸೇವೆಯ ಬಳಿಕ ಸಂಜೆಯ ಹೊತ್ತಿಗೆ ಗಣಪತಿ ಮೂರ್ತಿಯನ್ನು ಪಲ್ಲಕ್ಕಿಯ ಮೂಲಕ ಮೆರವಣಿಗೆಯಲ್ಲಿ ಕ್ಷೇತ್ರದಿಂದ ಹೊರಟು ಪೇಟೆಯ ಮೂಲಕ ಕೆಳಗಿನ ಪೇಟೆಗೆ ಬಂದು ಬೀಚ್ ರಸ್ತೆಯ ಮೂಲಕ ಕ್ರಮಿಸಿ ಮುಂದೆ ಸಮುದ್ರದಲ್ಲಿ ಜಲಸ್ಥಂಭನಗೊಂಡಿತು. ಈ ಸಂದರ್ಭದಲ್ಲಿ ಹುಲಿ ವೇಷದ ತಂಡ, ಭಜನಾ ಕುಣಿತ, ನಾಸಿಕ್ ಬ್ಯಾಂಡ್, ವೇಷಗಳು ಪ್ರಮುಖ ಆಕರ್ಷಣೆಯಾಗಿತ್ತು.
ಕೋತಲಕಟ್ಟೆ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ಸಂಪನ್ನ
Posted On: 05 Oct 2022, 12:28 PM
ಕಾಪು : ಇಲ್ಲಿನ ಶ್ರೀ ಮಹಾಕಾಳಿ ದೇವಸ್ಥಾನ ಕೋತಲಕಟ್ಟೆ ಇಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆದ 9 ದಿನಗಳ ಪೂಜಾ ವಿಧಿಯು ವಿಜೃಂಭಣೆಯಿಂದ ಜರಗಿ ಬುಧವಾರ ಸಂಪನ್ನಗೊಂಡಿತು.
ಉಚ್ಚಿಲ ದಸರಾ-2022 ಕ್ಷಣಗಣನೆ ; ಸ್ತಬ್ದ ಚಿತ್ರಗಳ ಅಂತಿಮ ಹಂತದ ತಯಾರಿ
Posted On: 05 Oct 2022, 12:05 PM
ಉಚ್ಚಿಲ : ನವರಾತ್ರಿಯ ಕೊನೆಯ ದಿನವಾದ ಇಂದು ಪ್ರಥಮ ಬಾರಿಗೆ ಶೋಭಾಯಾತ್ರೆಯ ವೈಭವಕ್ಕೆ ತಯಾರಿ ನಡೆಸುತ್ತಿರುವ ಶ್ರೀ ಮಹಾಲಕ್ಷ್ಮೀ ದೇಗುಲವು ಅಣಿಯಾಗುತ್ತಿದೆ. ಸಂಜೆ ವೇಳೆಗೆ ಶೋಭಾಯಾತ್ರೆಗೆ ಚಾಲನೆ ದೊರೆಯಲಿರುವ ಹಿನ್ನೆಲೆಯಲ್ಲಿ ಇದರ ಪೂರ್ವತಯಾರಿಯಾಗಿ 50ಕ್ಕೂ ಅಧಿಕ ಸ್ತಬ್ಧ ಚಿತ್ರಗಳು ಈಗಾಗಲೇ ದೇವಳದ ಸನಿಹದಲ್ಲಿದ್ದು ಅಂತಿಮ ಹಂತದ ತಯಾರಿಯಲ್ಲಿ ನಿರತರಾಗಿದ್ದಾರೆ.
ಉಚ್ಚಿಲ : ಶೋಭಾಯಾತ್ರೆಯ ಮೆರವಣಿಗೆಯ ಪೂರ್ವ ತಯಾರಿ ಬಗ್ಗೆ ಪೋಲಿಸ್ ಸಭೆ
Posted On: 05 Oct 2022, 11:31 AM
ಉಚ್ಚಿಲ : ನವರಾತ್ರಿ ಉತ್ಸವದ ಶೋಭಾಯಾತ್ರೆಯ ಮೆರವಣಿಗೆಯ ಪೂರ್ವ ತಯಾರಿ ಬಗ್ಗೆ ಕಾಪು ಪೋಲಿಸ್ ವೃತ್ತ ನಿರೀಕ್ಷಕರಾದ ಪೂವಯ್ಯ ನೇತೃತ್ವದಲ್ಲಿ ಪೋಲಿಸ್ ಅಧಿಕಾರಿಗಳಿಗೆ, ಪೊಲೀಸ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿಕೆ ಕಾರ್ಯ ಬುಧವಾರ ಉಚ್ಚಿಲದ ಮೊಗವೀರ ಸಭಾ ಭವನದಲ್ಲಿ ಜರಗಿತು. ಶೋಭಾಯಾತ್ರೆಯ ಕಾರ್ಯದಲ್ಲಿ 14 ಎಸೈ, 2 ಡಿವೈಎಸ್ಪಿ, 4 ಸಿಪಿಐ, 22 ಎಎಸೈ, 133 ರಷ್ಟು ಪಿಸಿಗಳು, 4 ಡಿ ಆರ್ ಪೋಲಿಸ್ ವಾಹನ, 1 ಕೆ ಎಸ್ ಪಿ ವಾಹನ, ಇದರ ಜೊತೆಗೆ 150 ಮಂದಿ ದೇವಳದಿಂದ ನೇಮಿಸಲ್ಪಟ್ಟ ಸ್ವಯಂ ಸೇವಕರು ಇಂದಿನ ಶೋಭಾಯಾತ್ರೆಯ ಬಂದೋಬಸ್ತ್ ಕಾರ್ಯದಲ್ಲಿ ತೊಡಗಲಿರುವರು. ಈ ಸಂದರ್ಭದಲ್ಲಿ ಡಿವೈಎಸ್ಪಿ ವಿಜಯ ಪ್ರಸಾದ್,ಡಿವೈಎಸ್ಪಿ ಸುಧಾಕರ್, ವೃತ್ತ ನಿರೀಕ್ಷಕರಾದ ಅಂತ ಪದ್ಮನಾಭ, ಪ್ರಮೋದ್ ಕುಮಾರ್, ಸಂಪತ್ , ಕೆ ಸಿ ಪೂವಯ್ಯ ಉಪಸ್ಥಿತರಿದ್ದರು.
