Updated News From Kaup
ಪಡುಬಿದ್ರಿ : ಯುವವಾಹಿನಿ ಘಟಕದ ಪದಗ್ರಹಣ
Posted On: 18 Sep 2022, 05:51 PM
ಪಡುಬಿದ್ರಿ : ಯುವವಾಹಿನಿ ಸಂಸ್ಥೆ ಹಲವಾರು ಸಮಾಜಮುಖಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಚುರ ಪಡಿಸುತ್ತಾ ಸಮಾಜದ ಅಭಿವೃದ್ಧಿಗಾಗಿ ದುಡಿಯುತ್ತಿರುವುದು ಸಂತಸವಾಗಿದೆ. ಪಡುಬಿದ್ರಿ ಘಟಕದ ಮುಂದಿನ ಕಾರ್ಯಕ್ರಮಗಳು ಶುಭವಾಗಲಿ ಎಂದು ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷರಾದ ಶೀನ ಪೂಜಾರಿ ಹೇಳಿದರು. ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ 2022-23 ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಮಾತನಾಡಿ, ಸಂಸ್ಥೆಯ ಪದವಿಯ ಕಾರ್ಯಾವಧಿ ಕೊನೆಯಾದಾಗ ಪದಾಧಿಕಾರಿಗಳು ಸಂತಸದಿಂದಿರದೆ ಹೊಸ ತಂಡಕ್ಕೆ ಬೆನ್ನೆಲುಬಾಗಿ ಮುಂದೆಯೂ ಸಹಕಾರ ನೀಡಿ ಹೊಸ ಕಾರ್ಯಯೋಜನೆ ನಿರ್ವಹಿಸಬೇಕು. ಹಳೆ ಬೇರು ಹೊಸ ಚಿಗುರು ಎಂಬ ಮಾತಿನಂತೆ ಪಡುಬಿದ್ರಿ ಯುವವಾಹಿನಿ ಘಟಕ ಕ್ರಿಯಾಶೀಲ ಘಟಕವಾಗಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರೊಂದಿಗೆ ಯುವವಾಹಿನಿಯ ಘಟಕಗಳಲ್ಲಿ ಪ್ರತಿಷ್ಟಿತವಾಗಿದೆ ಎಂದರು. ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ಮಾತನಾಡಿ ಯುವವಾಹಿನಿ ಶಿಸ್ತುಬದ್ಧ ವ್ಯವಸ್ಥೆ, ಸಮಯ ಪರಿಪಾಲನೆ ಸಂಸ್ಥೆಯ ಗರಿಮೆಯಾಗಿದೆ. ಸಮಾಜ ಚಿಂತನೆ ನಮ್ಮಲ್ಲಿರಲಿ. ಯುವವಾಹಿನಿಯ ನಿಯಮದಂತೆ ಒಂದು ವರ್ಷದ ಅಧಿಕಾರಾವಧಿಯಲ್ಲಿ ಸಾಧ್ಯವಾದಷ್ಟು ಕಾರ್ಯಕ್ರಮಗಳು ಜರಗಲಿ ಎಂದು ಶುಭ ಹಾರೈಸಿದರು. ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಶೈಕ್ಷಣಿಕ ಆರ್ಥಿಕ ಸಹಾಯ, ಕಲಿಕಾ ಪರಿಕರ ವಿತರಿಸಲಾಯಿತು. ಘಟಕಕ್ಕೆ ಸೇರ್ಪಡೆಗೊಂಡ ನೂತನ ಸದಸ್ಯರನ್ನು ಗೌರವಿಸಲಾಯಿತು. ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಮತ್ತು ಘಟಕದ ಅಧ್ಯಕ್ಷರಾದ ಯಶೋದರನ್ನು ಸನ್ಮಾನಿಸಲಾಯಿತು. ಅಧಿಕಾರ ಹಸ್ತಾಂತರ : ಘಟಕದ ಅಧ್ಯಕ್ಷರಾದ ಯಶೋದ ನಿಯೋಜಿತ ಅಧ್ಯಕ್ಷರಾದ ಶಾಶ್ವತ್ ರವರಿಗೆ ಮತ್ತು ಘಟಕದ ಕಾರ್ಯದರ್ಶಿ ವಿಧಿತ್ ನಿಯೋಜಿತ ಕಾರ್ಯದರ್ಶಿ ಡಾ| ಐಶ್ವರ್ಯ ಸಿ ಅಂಚನ್ ರವರಿಗೆ ಅಧಿಕಾರ ಹಸ್ತಾಂತರಿಸಿದರು. ಸಾಹಿತ್ಯ ಸೌರಭದ ಅಂಗವಾಗಿ ನಡೆದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಚಿತ್ರಾಕ್ಷಿ ಕೆ ಕೋಟ್ಯಾನ್, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಪಡುಬಿದ್ರಿ ಅಧ್ಯಕ್ಷರಾದ ಯಶೋದ ವಹಿಸಿ, ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ ಸುಜಿತ್ ಕುಮಾರ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ವಿಧಿತ್ ಕುಮಾರ್ ವರದಿ ವಾಚಿಸಿದರು. ಚಿತ್ರಾಕ್ಷಿ ಕೆ ಕೋಟ್ಯಾನ್ ನೂತನ ಪದಾಧಿಕಾರಿಗಳ ಪಟ್ಟಿ ವಾಚಿಸಿದರು. ಪ್ರಸಾದ್ ವೈ ಕೋಟ್ಯಾನ್ ಮತ್ತು ತೃಪ್ತಿ ಕಾರ್ಯಕ್ರಮ ನಿರೂಪಿಸಿದರು. ಡಾ| ಐಶ್ವರ್ಯ ಸಿ ಅಂಚನ್ ವಂದಿಸಿದರು.
ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ಒಕ್ಕೂಟ - ಅಭಾ ಕಾಡ್೯ ನೋಂದಾವಣೆ ಕಾರ್ಯಕ್ರಮ
Posted On: 18 Sep 2022, 04:52 PM
ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ಒಕ್ಕೂಟ ಇದರ ವತಿಯಿಂದ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ ಹಾಗೂ ಅಭಾ ಕಾರ್ಡ್ ಸಂಯೋಜನೆಯೊಂದಿಗೆ ಉಚಿತ ಹೊಸ ಆಯುಷ್ಮನ್ ಕಾರ್ಡ್ ನೋಂದಾವಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮಹಾದೇವಿ ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕಾಪು ಪುರಸಭೆಯ ಸದಸ್ಯರಾದ ಅನಿಲ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯಾದ ಜಯಂತಿ, ಕಾಪು ಒಕ್ಕೂಟದ ಅಧ್ಯಕ್ಷರಾದ ರಮಾ ಎಸ್ ಶೆಟ್ಟಿ, ವಲಯದ ಮೇಲ್ವಿಚಾರಕರಾದ ಮಮತಾ, ಕಾಪು ಒಕ್ಕೂಟದ ಅಧ್ಯಕ್ಷರಾದ ಸುಲೋಚನಾ ಬಂಗೇರ, ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರೇಮ ರಮೇಶ್ ರವರು ಸ್ವಾಗತಿಸಿದರು. ಉಷ ಉಮೇಶ್ ಕರ್ಕೆರ ವಂದಿಸಿದರು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ 1.26 ಕೋಟಿ ರೂ. ಲಾಭ ; ಶೇ. 25 ಡಿವಿಡೆಂಡ್
Posted On: 18 Sep 2022, 10:47 AM
ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.) 2021-22ನೇ ಸಾಲಿಗೆ ವಾರ್ಷಿಕ 1.26 ಕೋಟಿ ರೂ. ವ್ಯವಹಾರಿಕ ಲಾಭ ದಾಖಲಿಸಿದ್ದು, ಈ ಬಾರಿಯೂ ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಶನಿವಾರ ಪಡುಬಿದ್ರಿ ಸಹಕಾರ ಸಂಗಮದ ವೈ ಲಕ್ಷ್ಮಣ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ತಿಳಿಸಿದರು. ಸಂಘದ ಸಾಲ ವಸೂಲಾತಿಯು ಶೇ. 96.02ರಷ್ಟು ಆಗಿದೆ. ಸಂಘವು ಶತಕೋಟಿ ಠೇವಣಿ ಸಂಗ್ರಹಿಸಿದ್ದು, ಮುಂದಿನ ವರ್ಷದಲ್ಲಿ ಪಲಿಮಾರು ಹಾಗೂ ಹೆಜಮಾಡಿ ಶಾಖೆ ಗಳ ನವೀಕರಣದೊಂದಿಗೆ ಕಂಪ್ಯೂಟರೀಕೃತ ಶಾಖೆಗಳನ್ನಾಗಿಸಿ ಡಿಜಿಟಲೀಕೃತ ವ್ಯವಹಾರಗಳಿಗೆ ಒತ್ತು ನೀಡಲಾಗುತ್ತದೆ. ಹೆಜಮಾಡಿ ಯಲ್ಲೇ 1 ಕೋಟಿ ವೆಚ್ಚದಲ್ಲಿ ಗೋಡೌನ್ ನಿರ್ಮಿಸಲಾಗುವುದು. ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಧುನೀಕೃತ ಶವಾಗಾರಕ್ಕೆ 7.75 ಲಕ್ಷ ರೂ. ವೆಚ್ಚದಲ್ಲಿ 2 ಮೃತದೇಹಗಳನ್ನು ಇರಿಸಬಹುದಾದ ಶೀತಲೀಕರಣ ಯಂತ್ರವನ್ನು ಸಂಘ ನೀಡಲಿದೆ. ಪಡುಬಿದ್ರಿ ಸುತ್ತಮುತ್ತಲ ಸಾರ್ವಜನಿಕರ ಅನುಕೂಲಕ್ಕಾಗಿ ಮೃತ ದೇಹವನ್ನು ಕಾಪಿಡಲು ಶೀತಲೀಕೃತ ಯಂತ್ರವನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಸಂಘದ ವ್ಯವಹಾರ ಹೆಚ್ಚಿದಾಗ ಗ್ರಾಹಕರ ಸಾಲ ವಸೂಲಿಗೂ, ಶಾಖೆಗಳನ್ನು ಸಂದರ್ಶಿಸಲು ಉಪಯೋಗವಾಗುವಂತೆ 15 ಲಕ್ಷ ರೂ. ವೆಚ್ಚದ ವಾಹನ ಖರೀದಿಸಲಾಗಿದೆ. ಉಡುಪಿ ಜಿಲ್ಲೆಯ ಸಹಕಾರಿ ಯೂನಿಯನ್ ಕಟ್ಟಡಕ್ಕೆ 10 ಲಕ್ಷ ರೂ. ದೇಣಿಗೆ ಸಹಕಾರಿ ಸಂಘದ ಮೂಲಕ ನೀಡಲಾಗುವುದು ಎಂದು ತಿಳಿಸಿದರು. ಸಂಘದ ಉಪಾಧ್ಯಕ್ಷ ಗುರುರಾಜ ಪೂಜಾರಿ, ನಿರ್ದೇಶಕರಾದ ರಸೂಲ್ ವೈ ಜಿ, ಗಿರೀಶ್ ಪಲಿಮಾರ್, ಶಿವರಾಮ ಎನ್ ಶೆಟ್ಟಿ, ವಾಸುದೇವ ದೇವಾಡಿಗ, ಯಶವಂತ ಪಿ ಬಿ, ರಾಜಾರಾಮ್ ರಾವ್, ಮಾಧವ ಆಚಾರ್ಯ, ಸ್ಟೇನಿ ಕ್ವಾಡ್ರಸ್, ಸುಚರಿತ ಎಲ್ ಅಮೀನ್, ಕುಸುಮ ಎಂ. ಕರ್ಕೇರ, ಕಾಂಚನ, ಬಾಲಕೃಷ್ಣ ರಾವ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ವೈ ಸುಧೀರ್ ಕುಮಾರ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್. ವರದಿ ಮಂಡಿಸಿದರು. ಉಪಾಧ್ಯಕ್ಷ ಗುರುರಾಜ ಪೂಜಾರಿ ವಂದಿಸಿದರು.
ಕಾಪು : ಬೀಚ್ ಸ್ವಚ್ಛತಾ ಅಭಿಯಾನ
Posted On: 17 Sep 2022, 10:31 PM
ಕಾಪು : ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಭಾರತೀಯ ಸ್ವಚ್ಛತಾ ಲೀಗ್ ದೇಸೀಕ್ರೂ ಸಂಘಟನೆ, ಜಿಪ್ಸಿಶನ್ ಸಂಸ್ಥೆಯಿಂದ ಪ್ರವಾಸೋದ್ಯಮ ಇಲಾಖೆ ವತಿಯಿಂದ ಶನಿವಾರ ಬೆಳಗ್ಗೆ ಕಾಪು ಲೈಟ್ ಹೌಸ್ ಬೀಚಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಕಾಪು ಪುರಸಭಾ ಅಧಿಕಾರಿ ವೆಂಕಟೇಶ್ ನಾವಡ ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರವಾದ ಕಾಪು ವಿನಲ್ಲಿ ವಿವಿಧ ಸಂಘಟನೆಗಳ ಆಯೋಜನೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕೇಂದ್ರ ಸರಕಾರದ ಯೋಜನೆ ಇದಾಗಿದ್ದು, ಇದರಲ್ಲಿ ನಾವು ಸಹಭಾಗಿ ಆಗುತ್ತಿದ್ದೇವೆ ಎಂದರು. ಈ ಸಂದರ್ಭ ಕಾಪು ಪುರಸಭಾ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.
ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆ ತೋರಿದ ಸೈಂಟ್ ಜೋನ್ಸ್ ಅಕಾಡೆಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆ
Posted On: 17 Sep 2022, 10:20 PM
ಕಟಪಾಡಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ, ಉಡುಪಿ ವಲಯ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಉಡುಪಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಉಡುಪಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2022-23 ಇವರ ಸಹಯೋಗದೊಂದಿಗೆ ಎಸ್ ವಿ ಎಸ್ ಶಾಲೆ ಕಟಪಾಡಿ ಇವರ ಆಶ್ರಯದಲ್ಲಿ ಅಚ್ಚಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಸೆಪ್ಟೆಂಬರ್ 9 ರಂದು ನಡೆಯಿತು. ಈ ಸ್ಪರ್ಧೆಯಲ್ಲಿ ಸೈಂಟ್ ಜೋನ್ಸ್ ಅಕಾಡೆಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸುಮಾರು 25 ಮಂದಿ ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಸಾಮೂಹಿಕ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಗಳಿಸಿರುತ್ತಾರೆ. ಶಾಲಾ ಸಂಚಾಲಕರಾದ ವಂ. ಗುರು ಫರ್ಡಿನಾಂಡ್ ಗೊನ್ಸಾಲ್ವಿಸ್, ಶಾಲಾ ಪ್ರಾಂಶುಪಾಲೆ ಪ್ರಿಯಾ ಕೆ ಡೆ'ಸಾ, ಶಾಲಾ ಸಂಯೋಜಕ ರಾದ ವಂ. ಗುರು ವಿಜಯ್ ಡಿಸೋಜ, ಶಿಕ್ಷಕ ವಿನಯ್ ಶೆಟ್ಟಿ, ಶಿಕ್ಷಕಿಯರಾದ ಅಸುಂತ ದಾಂತಿ, ಕೋಮಲಾಂಗಿ, ತನುಶ್ರೀ ಹಾಗೂ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಸೋಹನ್ ( ಜಾನಪದ ಗೀತೆ), ನಿಖಿಲ್ (ಗಝಲ್), ಆಲ್ಡ್ರಿನ್ (ಹಿಂದಿ ಭಾಷಣ), ಶ್ರೀಶಾಂತ್ (ಚಿತ್ರ ಕಲೆ), ಅದಿತಿ ( ಚರ್ಚಾ ಸ್ಪರ್ಧೆ) ಹಾಗೂ ಮೆಲ್ರಿಯ (ಭಾವಗೀತೆ) ಹಾಜರಿದ್ದರು.
ರಿಕ್ಷಾ ಚಾಲಕ ಮಾಲಕರ ಸೌಹಾರ್ದ ಸಹಕಾರಿ (ನಿ.) ಉಡುಪಿ : ಮಹಾಸಭೆ
Posted On: 17 Sep 2022, 10:12 PM
ಉಡುಪಿ : ರಿಕ್ಷಾ ಚಾಲಕ ಮಾಲಕರ ಸೌಹಾರ್ದ ಸಹಕಾರಿ (ನಿ.) ಉಡುಪಿ ಇದರ 2021-22 ರ ಸಾಲಿನ ಮೊದಲ ವರ್ಷದ ಮಹಾಸಭೆಯು ಸೆಪ್ಟೆಂಬರ್ 17 ರಂದು ಉಡುಪಿಯ ಅಜ್ಜರಕಾಡಿನ ಪುರಭವನದಲ್ಲಿ ನಡೆಯಿತು. ಈ ಮಹಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಕೆ.ರಘುಪತಿ. ಭಟ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇದರ ನೂತನ ನಿರ್ದೇಶಕರಾದ ಎಸ್. ಕೆ.ಮಂಜುನಾಥ ರಿಕ್ಷಾ ಚಾಲಕರ ಮಾಲಕರ ಸೌಹಾರ್ದ ಭಾಗವಹಿಸಿದ್ದರು. ಸಹಕಾರಿ(ನಿ)ಯ ಅಧ್ಯಕ್ಷರಾದ ಸುರೇಶ್ ಅಮೀನ್ ಅಧ್ಯಕ್ಷತೆಯಲ್ಲಿ ನಡೆಯಿತು.2021-22ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಸಭೆಯಲ್ಲಿ ಮಂಜೂರು ಮಾಡಲಾಯಿತು. ಉಪಾಧ್ಯಕ್ಷರಾದ ಸಂತೋಷ್ ರಾವ್ ಕಾರ್ಕಳ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕುಲಾಲ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಸೊಸೈಟಿಯ ಉಪಾಧ್ಯಕ್ಷ ಸಂತೋಷ್ ರಾವ್, ನಿರ್ದೇಶಕರುಗಳಾದ ಜಗದೀಶ ಕೋಟ್ಯಾನ್, ಗೋಪಾಲ ಕೃಷ್ಣ ಶೆಟ್ಟಿ, ನಾಗರಾಜ ಕಿಣಿ, ನಾರಾಯಣ ಬಿ.ಕೆ. ರವೀಂದ್ರ ನಾಯಕ್,ಪ್ರಭಾಕರ ಶೆಟ್ಟಿ, ಲೋಕೇಶ ರಾವ್,ಅಶೋಕ ಶೆಟ್ಟಿ, ಟಿ.ಗೋಪಾಲಕೃಷ್ಣ ಕಾಮತ್, ಹರೀಶ್ ಕೋಟ್ಯಾನ್,ಶ್ಯಾಮ,ಸುದೇಶ್ ನಾಯ್ಕ್ ಸಹಕರಿಸಿದರು.ಈ ಬಾರಿಯ ಮಹಾಸಭೆಯ ಶೇರುದಾರರು,ಗ್ರಾಹಕರು, ಪಿಗ್ಮಿ ಏಜೆಂಟರು ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕುಲಾಲ್ ಇವರ ಬೀಳ್ಕೊಡುಗೆ ಸಮಾರಂಭ ನಡೆಯಿತು. ರವೀಶ್ ಕುಮಾರ್ ನೂತನ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡರು. ಸ್ವಪ್ನ.ಎಸ್.ಅಮೀನ್ ನಿರೂಪಣೆ ಮಾಡಿದರು. ಅಭಿಜಿತ್ ನಾಯ್ಕ್ ವಂದಿಸಿದರು.
ಕ್ರಿಯೇಟಿವ್ ಪಿ ಯು ಕಾಲೇಜಿನಲ್ಲಿ ಜಿ ಎಸ್ ಟಿ ಕುರಿತು ಮಾಹಿತಿ ಕಾರ್ಯಗಾರ
Posted On: 17 Sep 2022, 09:50 PM
ಕಾರ್ಕಳ : ಕ್ರಿಯೇಟಿವ್ ಪಿ ಯು ಕಾಲೇಜು ಕಾರ್ಕಳದ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಜಿ ಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಕುರಿತಾಗಿ ಮಾಹಿತಿ ಕಾರ್ಯಗಾರವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿನಯ್ ಹೆಗಡೆ, ಖ್ಯಾತ ತೆರಿಗೆ ಸಲಹೆಗಾರರು ಆಗಮಿಸಿ ಜಿ ಎಸ್ ಟಿ ಕುರಿತ ಮಾಹಿತಿಯನ್ನು ನೀಡಿದರು. ಜಿ ಎಸ್ ಟಿ ಎನ್ನುವುದು ʼಒಂದು ದೇಶ-ಒಂದು ತೆರಿಗೆʼ ಪರಿಕಲ್ಪನೆಯಲ್ಲಿರುವ ಪರೋಕ್ಷ ತೆರಿಗೆಯಾಗಿದ್ದು, ಈ ತೆರಿಗೆಯು ಪ್ರತಿ ಮೌಲ್ಯದ ಸೇರ್ಪಡೆಗೆ ವಿಧಿಸುವ ತೆರಿಗೆಯಾಗಿರುತ್ತದೆ. ಇಂದು ಜಿ ಎಸ್ ಟಿ ಎನ್ನುವುದು ಶ್ರೀಸಾಮಾನ್ಯನಿಗೆ ಯಾವುದೇ ಹೊರೆಯಾಗದೇ, ಅಗತ್ಯ ಸರಕುಗಳ (ಬಿಡಿ ಸರಕುಗಳ) ಮೇಲೆ ಯಾವುದೇ ಜಿ ಎಸ್ ಟಿಯನ್ನು ವಿಧಿಸದೇ ಇರುವುದು ಬಡವರಿಗೆ ಅನುಕೂಲವಾಗಿದೆ. ಎಲ್ಲಾ ಪರೋಕ್ಷ ತೆರಿಗೆಯನ್ನು ಒಂದೇ ಸೂರಿನಡಿಯಲ್ಲಿ ತಂದು ಕೇಂದ್ರ ಹಾಗೂ ರಾಜ್ಯಕ್ಕೆ ಸಮಪಾಲು ಕಂದಾಯವನ್ನು ನಿರ್ಧರಿಸುವ ತೆರಿಗೆಯು ದೇಶದ ಅಭಿವೃದ್ಧಿಗೆ ಪೂರಕವಾದುದು ಎಂದರು. ಜಿ ಎಸ್ ಟಿ ಹಂತಗಳು, ಜಿ ಎಸ್ ಟಿ ಐ ಎನ್ , ಇ-ವೆ ಬಿಲ್ಲ್ ಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ಒದಗಿಸಿದರು. ಕಾಲೇಜಿನ ಸಹ ಸಂಸ್ಥಾಪಕರಾದ ಗಣಪತಿ ಕೆ ಎಸ್, ಉಪನ್ಯಾಸಕರಾದ ರಾಘವೇಂದ್ರ ಬಿ ರಾವ್, ಉಮೇಶ್ ಮತ್ತು ಅಕ್ಷತಾ ಜೈನ್ ಪಾಲ್ಗೊಂಡಿದ್ದರು.
ಕಾಪು : ಇಬ್ಬರು ರಿಕ್ಷಾ ಚಾಲಕರಿಂದ ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಉಚಿತ ಸೇವೆ
Posted On: 17 Sep 2022, 09:03 PM
ಕಾಪು : ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಕಾಪುವಿನ ಇಬ್ಬರು ರಿಕ್ಷಾ ಚಾಲಕರು ಇಂದು ಉಚಿತ ಸೇವೆ ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಶನಿವಾರ ಕಾಪುವಿನ ರಿಕ್ಷಾ ಚಾಲಕರಾದ ಚಂದ್ರ ಮಲ್ಲಾರು ಹಾಗೂ ನಝೀರ್ ರವರು ಉಚಿತ ಆಟೋರಿಕ್ಷಾ ಸೇವೆ ನೀಡಿದರು. ಕಾರ್ಯಕ್ರಮಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್ ಚಾಲನೆ ನೀಡಿದರು. ಉಚಿತ ಸೇವೆಯು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7ರವರೆಗೆ ನಡೆಯಲಿದ್ದು, ಐದು ಕಿಲೋಮೀಟರ್ ವರೆಗೆ ಪ್ರಯಾಣಿಕರಿಗೆ ಉಚಿತ ಸೇವೆ ನೀಡಿದರು. ಈ ಸಂದರ್ಭ ಕಾಪು ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕಾರ್ಯದರ್ಶಿ ಗೋಪಾಲಕೃಷ್ಣರಾವ್, ಶಿಲ್ಪ ಜಿ ಸುವರ್ಣ, ಪುರಸಭಾ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
ಕಟಪಾಡಿ : ವಿದ್ಯಾರ್ಥಿಗೆ ಬಸ್ ಡಿಕ್ಕಿ ; ಆಸ್ಪತ್ರೆಗೆ ದಾಖಲು
Posted On: 16 Sep 2022, 07:05 PM
ಕಟಪಾಡಿ : ಶಾಲೆ ಬಿಟ್ಟು ಸೈಕಲ್ ನಲ್ಲಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಸ್ಸು ಡಿಕ್ಕಿಯಾದ ಘಟನೆ ಶುಕ್ರವಾರ ಸಂಜೆ ಘಟಿಸಿದೆ. ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಪೋಸಾರು ಜಂಕ್ಷನ್ ನಲ್ಲಿ ಸೈಕಲಿನಲ್ಲಿ ರಸ್ತೆ ದಾಟುತ್ತಿದ್ದಾಗ ಬಸ್ಸೊಂದು ಡಿಕ್ಕಿಯಾಗಿ ಬಾಲಕ ಗಂಭೀರ ಗಾಯಗೊಂಡಿದ್ದು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಬಾಲಕನನ್ನು ಕಟಪಾಡಿಯ ಎಸ್ವಿಎಸ್ ಶಾಲಾ 7 ನೇ ತರಗತಿಯ ವಿದ್ಯಾರ್ಥಿ ಪ್ರಥಮ್ ಶೆಣೈ ಎಂದು ಗುರುತಿಸಲಾಗಿದೆ. ಕಾಪು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಉಚ್ಚಿಲ ಅಪಘಾತ : ಅಪ್ಪ, ಮಗನ ಬಲಿ ಪಡೆದ ಲಾರಿಯ ಚಾಲಕ 16 ವರ್ಷದ ಬಾಲಕ !
Posted On: 16 Sep 2022, 05:11 PM
ಉಚ್ಚಿಲ : ಅಪ್ಪ ಮತ್ತು ಮಗನ ಸಾವಿಗೆ ಕಾರಣವಾಗಿ ಅಪಘಾತ ಎಸಗಿ ಪರಾರಿಯಾದ 14 ಚಕ್ರದ ಲಾರಿಯನ್ನು 16 ವರ್ಷದ ಬಾಲಕ ಚಲಾಯಿಸುತ್ತಿದ್ದ ಬಗ್ಗೆ ಆಘಾತಕಾರಿ ಸುದ್ದಿ ಪೋಲಿಸರಿಂದ ತಿಳಿದು ಬಂದಿದೆ. ರಾತ್ರಿ ಇಡೀ ಬಾಲಕ ಲಾರಿಯನ್ನು ಚಲಾಯಿಸಿದ್ದು, ಬಳಿಕ ಬಾಲಕನು ಡಿವೈಡರ್ ಮೇಲೆ ಲಾರಿಯನ್ನು ಹತ್ತಿಸಿ ಕಂಬಕ್ಕೆ ಢಿಕ್ಕಿ ಹೊಡೆದು ಸುಮಾರು ಒಂದೂವರೆ ಕಿ.ಮೀ. ಕ್ರಮಿಸಿದ ಬಳಿಕ ನಿಲ್ಲಿಸಿ ಚಾಲಕ ಶೇಖರ್ಗೆ ವಿಷಯವನ್ನು ತಿಳಿಸಿದ್ದ. ನಿದ್ದೆಯ ಮಂಪರಿನಲ್ಲಿದ್ದ ಬಾಲಕನಿಗೆ ತಾನು ರಸ್ತೆ ಬದಿಯಲ್ಲಿನ ಮಣ್ಣು ರಸ್ತೆಯಲ್ಲಿ ನಿಂತಿದ್ದ ತಂದೆ-ಮಗನಿಗೆ ಢಿಕ್ಕಿಯಾದ ಬಗ್ಗೆ ಅರಿವಿಗೇ ಬಂದಿರಲಿಲ್ಲ. ಚಾಲಕ ಶೇಖರ್ನನ್ನು ಬಂಧಿಸಿ ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಾಲಕನನ್ನು ಖಾಸಗಿ ಬಾಲ ಮಂದಿರಕ್ಕೆ ಕಳುಹಿಸಲಾಗಿದ್ದು, ಆತನ ತಂದೆಯ ಆಗಮನದ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ. ಚಾಲಕ ಶೇಖರ್ನ ಚಾಲನ ಪರವಾನಿಗೆಯನ್ನು ಹಾಗೂ ಗೂಡ್ಸ್ ಸಾಗಾಟದ ಏಜೆನ್ಸಿಯನ್ನೂ ರದ್ದು ಗೊಳಿಸಲು ಪೊಲೀಸರು ಕ್ರಮ ಕೈಗೊಂಡಿರುವುದಾಗಿ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಕಾಪು ಸಿಪಿಐ ಪೂವಯ್ಯ ತಿಳಿಸಿದ್ದಾರೆ. ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿನ ಉಚ್ಚಿಲದಲ್ಲಿ ಎರಡು ಕಿಲೋಮಿಟರ್ ಉದ್ದದ ಸರ್ವಿಸ್ ರಸ್ತೆಯ ಕಾಮಗಾರಿ ಮೂರು ವರ್ಷಗಳಿಂದ ಪೂರ್ತಿಯಾಗದೆ ಉಳಿದಿವೆ. ಇಲ್ಲಿ ಸಂಭವಿಸುವ ಯಾವುದೇ ಹೆದ್ದಾರಿ ಅಪಘಾತಗಳಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ನವಯುಗ ನಿರ್ಮಾಣ ಕಂಪೆನಿಯನ್ನೂ ಹೊಣೆಗಾರರನ್ನಾಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
