Updated News From Kaup
ಜನಿವಾರ ಪ್ರಕರಣ : ವಿಶ್ವಕರ್ಮ ಒಕ್ಕೂಟದಿಂದ ಖಂಡನೆ
Posted On: 21 Apr 2025, 03:31 PM
ಕಾಪು : ಇತ್ತೀಚೆಗೆ ಸರಕಾರದ ವತಿಯಿಂದ ನಡೆಸಲಾದ ಸಿ.ಇ.ಟಿ. ಪರೀಕ್ಷೆಯ ವೇಳೆ ರಾಜ್ಯದ ವಿವಿಧ ಸ್ಥಳಗಳಲ್ಲಿ ವಿದ್ಯಾರ್ಥಿಗಳ ಜನಿವಾರ ಕಳಚಿದ ಹಾಗೂ ಕತ್ತರಿಸಿದ ಘಟನೆ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಮಾಡಿದ ಅಪಮಾನವಲ್ಲ, ಸಮಸ್ತ ಜನಿವಾರಧಾರಣೆ ಮಾಡುವ ಹಿಂದೂ ಸಮುದಾಯಗಳಿಗೆ ಮಾಡಿರುವ ಅವಮಾನವಾಗಿರುತ್ತದೆ. ಈ ಘಟನೆಯನ್ನು ಅವಿಭಜಿತ ದ. ಕ. ಮತ್ತು ಉಡುಪಿ ಜಿಲ್ಲಾ ವಿಶ್ವಕರ್ಮ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷರಾದ ಮಧು ಆಚಾರ್ಯ, ಮೂಲ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕಾನೂನಿನಡಿಯಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.
ಪತ್ರಕರ್ತ, ಸಾಮಾಜಿಕ ಹೋರಾಟಗಾರ ಕಿರಣ್ ಪೂಜಾರಿಯವರಿಂದ ಸೋಮವಾರ ಕುಂದಾಪುರ ತಾಲೂಕು ಆಫೀಸ್ ಎದುರಿಗೆ ಅರೆಬೆತ್ತಲೆ ಧರಣಿ
Posted On: 20 Apr 2025, 02:47 PM
ಉಡುಪಿ : ಪೋಲೀಸ್ ಹಾಗೂ ಪಂಚಾಯತ್ ಅಧಿಕಾರಿಯೊಬ್ಬರು ಕರ್ತವ್ಯಲೋಪ ಎಸಗಿ ತಮ್ಮ ಮೇಲೆ ದೌರ್ಜನ್ಯ ವೆಸಗಿದ್ದಾರೆ ಮತ್ತು ನ್ಯಾಯವಾದಿಯೊಬ್ಬರು ತಮಗೆ ಹಾಗೂ ತಮ್ಮ ಸಮಾಜಕ್ಕೆ ಅವಮಾನಿಸಿ ತಮ್ಮ ಮೇಲೆ ಸುಳ್ಳು ಪ್ರಕರಣಗಳು ದಾಖಲಿಸುವಂತೆ ಪೋಲಿಸರ ಮೇಲೆ ಒತ್ತಡ ಹೇರಿದ್ದಾರೆ. ಈ ಮೂವರ ವಿರುದ್ದ ಸೋಮವಾರ ಕುಂದಾಪುರ ತಾಲೂಕು ಆಫೀಸ್ ಎದುರಿಗೆ ಅರೆಬೆತ್ತಲೆ ಧರಣಿ ನಡೆಸಲಿದ್ದೇನೆ ಎಂದು ಪತ್ರಕರ್ತ ಹಾಗೂ ಬಿಲ್ಲವ ಹೋರಾಟಗಾರ ಕಿರಣ್ ಪೂಜಾರಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಬಿಲ್ಲವರ ಬಗ್ಗೆ ಲಘುವಾಗಿ ಮಾತನಾಡಿದ ಹಾಗೂ ತನಗೆ ನಿಂದನೆ ಮಾಡಿದ ತನ್ನ ಸಮಾಜದ ಬಗ್ಗೆ ಅವಮಾನಕರ ವಾಗಿ ನಿಂದಿಸಿ ಸುಳ್ಳು ಪ್ರಕರಣಗಳನ್ನು ಧಾಖಲಿಸುವಂತೆ ಒತ್ತಡ ಹೇರಿದ ಹಾಗೂ ಪ್ರಕರಣ ಒಂದರಲ್ಲಿ ತಹಸೀಲ್ದಾರ್ ಯಥಾ ಸ್ಥಿತಿ ಕಾಪಾಡಬೇಕು ಎಂದು 8 ಸಲ ಆದೇಶ ಮಾಡಿದರು ಅವರಿಗೂ ಅಗೌರವ ತೋರಿದ ಅಲ್ಲದೇ ಉಚ್ಚ ನ್ಯಾಯಾಲಯ ಮತ್ತು ವಿಶೇಷ ಭೂ ಕಬಳಿಕೆ ನ್ಯಾಯಾಲಯದಲ್ಲಿ ಕೇಸ್ ಇದ್ದರು ನ್ಯಾಯಾಂಗ ಉಲ್ಲಂಘನೆ ಮಾಡಿಸಿ ನ್ಯಾಯವಾದಿಯೊಬ್ಬರು ವಕೀಲ ವೃತ್ತಿಗೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಕರ್ತವ್ಯಕ್ಕೆ ಕಪ್ಪು ಚುಕ್ಕೆ ಮಾಡಿದ ನ್ಯಾಯವಾದಿಯೊಬ್ಬರನ್ನು ಬಾರ್ ಕೌನ್ಸಿಲ್ ನಿಂದ ಅಮಾನತು ಮಾಡಬೇಕು ಹಾಗೂ ಬಿಲ್ಲವ, ದಲಿತ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಪೋಲಿಸ್ ಅಧಿಕಾರಿಯೊಬ್ಬರು ತಮ್ಮ ಮೇಲೆ ಕುಂದಾಪುರದಲ್ಲಿ 2 ಮತ್ತು ಕೊಲ್ಲೂರನಲ್ಲಿ 1 ಸುಳ್ಳು ಕಂಪ್ಲೇಂಟ್ ಮಾಡಿಸಿ, ಉಚ್ಚ ನ್ಯಾಯಾಲಯ ಮತ್ತು ವಿಶೇಷ ಭೂ ಕಬಳಿಕೆ ನ್ಯಾಯಾಲಯದಲ್ಲಿ ಕೇಸ್ ಇದೆ. ಕೇಸು ದಾಖಲಿಸಿದವರ ಪರವಾಗಿ ಸತ್ಯ ಅಸತ್ಯೆಯನ್ನು ಅವಲೋಕಿಸದೆ, ದಲಿತ ಮಹಿಳೆಯರ ಮೇಲೆ ಸುಳ್ಳು ದೂರು ದಾಖಲಿಸಿ, ಅವರು ನೀಡಿದ ದೂರನ್ನು ದಾಖಲಿಸದೇ ಹಿಂದೆ ಕಳುಹಿಸಿದ್ದಾರೆ ಎಂದು ಆರೋಪಿಸಿ, ಇವರ ವಿರುದ್ಧ ಇಲಾಖಾ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ಗ್ರಾಮ ಆಡಳಿತ ಅಧಿಕಾರಿಯೊಬ್ಬರು ಸರಕಾರಿ ಜಾಗವನ್ನು ಒತ್ತುವರಿ ಮಾಡಿದ ಕೆಲವರ ಕೈಗೊಂಬೆ ಆಗಿ ಬಹುಪರಾಕ್ ಹೇಳುತ್ತಿದ್ದಾರೆ 8 ಬಾರಿ ತಹಸೀಲ್ದಾರ್ ಆದೇಶ ಉಲ್ಲಂಘನೆ ಮಾಡಿದರು ಸರಿಯಾದ ವರದಿ ನೀಡದೆ, ಪತ್ರಕರ್ತರು ಮಾಹಿತಿ ಕೇಳಿದಾಗ ಏನು ಮಾಡಲಿಕ್ಕೆ ಆಗುತ್ತೆ ಎಂದು ಅಗೌರವ ತೋರಿ, ಉಚ್ಚ ನ್ಯಾಯಾಲಯ ಮತ್ತು ವಿಶೇಷ ಭೂ ಕಬಳಿಕೆ ನ್ಯಾಯಾಲಯದಲ್ಲಿ ಕೇಸ್ ಇದ್ದರು ನ್ಯಾಯಾಂಗ ಉಲ್ಲಂಘನೆ ಬಗ್ಗೆ ಅರಿವು ಮೂಡಿಸದೆ ಸೂಕ್ತ ಕ್ರಮ ಕೈಗೊಳ್ಳದೆ, ಕರ್ತವ್ಯದಲ್ಲಿ ಲೋಪ, ಕರ್ತವ್ಯ ನಿರ್ಲಕ್ಷತನ, ಕರ್ತವ್ಯ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಅಮಾನತು ಮಾಡಬೇಕಾಗಿ ಅಗ್ರಹಿಸಿದ್ದಾರೆ. ಇವರೆಲ್ಲರ ವಿರುದ್ಧ ಸೋಮವಾರ ಕುಂದಾಪುರ ತಾಲೂಕು ಆಫೀಸ್ ಎದುರಿಗೆ ಅರೆಬೆತ್ತಲೆ ಧರಣಿ ನಡೆಸಲಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಮಾಹಿತಿಹಕ್ಕು ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದೆ. ಕಿರಣ ಪೂಜಾರಿಯವರಂತಹ ಅನೇಕ ಹೋರಾಟಗಾರರು ಸುಳ್ಳು ದೂರು ದಾಖಲಿಸಿಕೊಂಡು ದೌರ್ಜನ್ಯ ಅನುಭವಿಸುತ್ತಿದ್ದಾರೆ. ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಾಮಾಜಿಕ ಹೋರಾಟಗಾರರಿಗೆ, ಪತ್ರಕರ್ತರಿಗೆ, ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕಾಗಿದೆ.
ಹಳೆಯ ಕೆರೆಗಳನ್ನು ಉಳಿಸಿದರೆ ಮುಂದಿನ ಜೀವ ಕುಲ ಉಳಿದೀತು : ಕಟ್ಟಿಂಗೇರಿ ಹೆಬ್ಬಾರ್
Posted On: 19 Apr 2025, 05:38 PM
ಕಾಪು : ಕೃಷಿ ಹಾಗೂ ಅಂತರ್ಜಲ ವೃದ್ಧಿಗೆ ಕೆರೆಗಳು ಪ್ರಮುಖ ಪಾತ್ರ ವಹಿಸುತ್ತವೆ. ನೀರಿನ ಶೇಖರಣೆಗೆ ಕೆರಗಳು ಅತೀ ಮುಖ್ಯ. ಜೀವಜಲ ಉಳಿಸುವುದು ಪುಣ್ಯದ ಕಾರ್ಯ. ಹಳೆಯ ಕೆರೆಗಳನ್ನು ಉಳಿಸಿದರೆ ಮುಂದಿನ ಜೀವ ಕುಲ ಉಳಿದೀತು ಎಂದು ರಾಜ್ಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪೂರ್ವ ಅಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ನುಡಿದರು. ಅವರು ಶನಿವಾರ ಬೆಳ್ಳೆ ಗ್ರಾ.ಪಂ.ವ್ಯಾಪ್ತಿಯ ಪಡುಬೆಳ್ಳೆ ಸಮೀಪ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ "ನಮ್ಮೂರು ನಮ್ಮ ಕೆರೆ" ಕಾರ್ಯಕ್ರಮದಲ್ಲಿ ಕುರುಡಾಯಿ ಕೆರೆಯ ಹೂಳೆತ್ತುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಮೂಲಕ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಹುಟ್ಟಿನಿಂದ ಸಾಯುವವರೆಗೆ ಮನುಷ್ಯರಿಗೆ ಏನೆಲ್ಲಾ ಅಗತ್ಯ ಇದೆಯೋ ಅದನ್ನೆಲ್ಲಾ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಸಾಕಾರಗೊಳಿಸಲಾಗುತ್ತಿದೆ. ಈಗಾಗಲೇ 800ಕ್ಕೂ ಅಧಿಕ ಕೆರಗಳ ಜೀರ್ಣೋದ್ದಾರ ಮಾಡಲಾಗಿದೆ ಎಂದರು. ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಮಾತನಾಡಿ, ಎಲ್ಲಾ ಜೀವರಾಶಿಗಳಿಗೂ ನೀರು ಅತ್ಯಂತ ಅಮೂಲ್ಯವಾಗಿದ್ದು ಅದನ್ನು ಪೂಜ್ಯರು ಮನಗಂಡು ಈ ಕಾರ್ಯವನ್ನು ಕೈಗೊಂಡಿದ್ದಾರೆ. ಇದಕ್ಕೆ ಸರ್ವರ ಸಹಕಾರ ಅತ್ಯಗತ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೀಶ್ ಶೆಟ್ಟಿ ಗ್ರಾ.ಪಂ.ಸದಸ್ಯ ಹಾಗೂ ಕುರುಡಾಯಿ ಕೆರೆ ಸಮಿತಿ ಬೆಳ್ಳೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಳ್ಳೆ ಗ್ರಾ.ಪಂ.ಅಧ್ಯಕ್ಷೆ ದಿವ್ಯಾ ಆಚಾರ್ಯ, ಉಪಾಧ್ಯಕ್ಷ ಶಶಿಧರ ವಾಗ್ಲೆ, ಜನಜಾಗೃತಿ ಸಮಿತಿ ಸದಸ್ಯೆ ಸುಜಾತಾ ಸುವರ್ಣ, ಜನಜಾಗೃತಿ ವೇದಿಕೆ ಪೂರ್ವಾಧ್ಯಕ್ಷ ನವೀನ್ ಅಮೀನ್ ಶಂಕರಪುರ, ಕೇಂದ್ರ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಪ್ರಮುಖರಾದ ಸ್ಯಾಮ್ಸನ್, ಶ್ರೀನಿಧಿ ಪ್ರಭು, ಗ್ರಾ.ಪಂ.ಸದಸ್ಯರಾದ ಸಂತೋಷ್, ಪ್ರೇಮಾ, ವೆಂಕಟೇಶ್, ಅಮಿತಾ ಉಪಸ್ಥಿತರಿದ್ದರು. ಮೇಲ್ವಿಚಾರಕಿ ಗೀತಾ ನಿರೂಪಿಸಿದರು. ದೇವೇಂದ್ರ ನಾಯಕ್ ಸ್ವಾಗತಿಸಿದರು. ಸೇವಾ ಪ್ರತಿನಿಧಿಗಳಾದ ದಿವ್ಯಾ, ಮಲ್ಲಿಕಾ, ಲಕ್ಷ್ಮಿ, ಶೌರ್ಯ ಘಟಕದ ಸದಸ್ಯರು ಉಪಸ್ಥಿತರಿದ್ದರು.
ಏ.17, 18 : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ದೃಢ ಸಂಪ್ರೋಕ್ಷಣೆ
Posted On: 15 Apr 2025, 07:29 PM
ಕಾಪು : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ವಿದ್ವಾನ್ ಕೆ. ಜಿ ರಾಘವೇಂದ್ರ ತಂತ್ರಿಯವರ ಮಾರ್ಗದರ್ಶನದಲ್ಲಿ, ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಮತ್ತು ಪ್ರಧಾನ ಅರ್ಚಕರಾದ ಕಲ್ಯಾ ವೇದಮೂರ್ತಿ ಶ್ರೀನಿವಾಸ ತಂತ್ರಿಯವರ ಉಪಸ್ಥಿತಿಯಲ್ಲಿ ಏ.17, ಗುರುವಾರ ಮತ್ತು ಏ.18, ಶುಕ್ರವಾರ ಕಾಪು ಮಾರಿಯಮ್ಮನ ದೃಢ ಸಂಪ್ರೋಕ್ಷಣೆ ನಡೆಯಲಿದೆ. ಏ.17, ಗುರುವಾರ ಬೆಳಿಗ್ಗೆ ಗಂಟೆ 9 ಕ್ಕೆ ಪ್ರಾರ್ಥನೆ, ಪುಣ್ಯಾಹ, ನಾಂದಿ ಸಮಾರಾಧನೆ, ಮಾತೃಕಾ ಪೂಜೆ, ಗಣಯಾಗ, ನವಗ್ರಹ ಯಾಗ. ಸಂಜೆ ಗಂಟೆ 5 ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಾಯಂಕಾಲ 6.00ರಿಂದ ಸಪ್ತಶತಿ ಪಾರಾಯಣ, ದುರ್ಗಾ ನಮಸ್ಕಾರ ಪೂಜೆ, ಅಷ್ಟಾವಧಾನ ರಾತ್ರಿ 6.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ರಾತ್ರಿ 7.30 ಹಾಸ್ಯಮಯ ತುಳು ನಾಟಕ 'ಅಮ್ಮು.. ಅಮುಂಡರಾ...?' ಪ್ರದರ್ಶನಗೊಳ್ಳಲಿದೆ. ಏ.18, ಶುಕ್ರವಾರ ಬೆಳಿಗ್ಗೆ ಗಂಟೆ 7.30ರಿಂದ ಚತುಃಷಷ್ಠಿ, ಯೋಗಿನೀ ಮಂಡಲ ಪೂಜಾ, ಚತು:ಷಷ್ಠಿ ಯೋಗಿನೀ ಬಲಿ, ಚತುಃಷಷ್ಠಿ ಯೋಗಿನಿ ದೇವತಾ ಪಾಯಸಯಾಗ. ಪೂರ್ವಾಹ್ನ ಗಂಟೆ 11 ಕ್ಕೆ ಪೂರ್ಣಾಹುತಿ, ಪಂಚವಿಂಶತಿ ಕಲಶ ಆರಾಧನೆ, ಕಲಶಾಭಿಷೇಕ, ಪ್ರಸನ್ನ ಪೂಜಾ ಪೂರ್ವಾಹ್ನ ಗಂಟೆ 11.30 ಪ್ರಸಾದ ವಿತರಣೆ ಮತ್ತು ಅನ್ನಪ್ರಸಾದ ಇರಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಉಚ್ಚಂಗಿ ಸಹಿತ ಕಾಪು ಶ್ರೀ ಮಾರಿಯಮ್ಮ ದೇವಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಳದ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಕೆ ಪ್ರಕಾಶ್ ಶೆಟ್ಟಿ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟಕಲ್ಲು ಉಮಾನಾಥ ನಾಯಕ್ ನಿಧನ
Posted On: 15 Apr 2025, 07:19 PM
ಶಿರ್ವ : ಬಂಟಕಲ್ಲು ಪೊದಮಲೆ ನಿವೃತ್ತ ಶಿಕ್ಷಕ ದಿ.ರಾಮಚಂದ್ರ ನಾಯಕ್ರವರ ಪುತ್ರ ಉಮಾನಾಥ ನಾಯಕ್(62) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಮುಂಬಯಿ ದಹೀಸಾರ್ನಲ್ಲಿ ನಿಧನರಾದರು. ಸ್ವಂತ ಉದ್ಯಮ ನಡೆಸುತ್ತಿದ್ದ ಇವರು ಜನಾನುರಾಗಿಯಾಗಿದ್ದರು. ತಾಯಿ, ಪತ್ನಿ, ಮಗಳು, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.
ಪಲಿಮಾರು ಗ್ರಾಮ ಪಂಚಾಯತ್ : ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ
Posted On: 14 Apr 2025, 10:27 PM
ಪಲಿಮಾರು : ಪಲಿಮಾರು ಗ್ರಾಮ ಪಂಚಾಯತ್, ಶ್ರೀ ಮಹದೇಶ್ವರ ಭಜನ ಮಂಡಳಿ ಮತ್ತು ಮುಂಡಾಲ ಯುವ ವೇದಿಕೆ (ರಿ.) ಪಡುಬಿದ್ರಿ ವತಿಯಿಂದ ವಿಶ್ವರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಜನ್ಮದಿನಾಚರಣೆಯನ್ನು ಪಲಿಮಾರು ಗ್ರಾಮ ಪಂಚಾಯತ್ ನ ಬ್ರಹ್ಮಶ್ರೀ ನಾರಾಯಣ ಸಭಾಂಗಣದಲ್ಲಿ ಜರಗಿತು. ಈ ಸಂದರ್ಭದಲ್ಲಿ ಶೇ.100 ಶೈಕ್ಷಣಿಕ ಸಾಧನೆ ಮಾಡಿದ ಪಲಿಮಾರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಸಹಿತ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪಲಿಮಾರು ಪಂಚಾಯತ್ ಅಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷರಾದ ರಾಯೇಶ್ವರ ಪೈ , ಪಿಡಿಓ ಶಶಿಧರ್, ಮಹದೇಶ್ವರ ಮಂಡಳಿ ಸುಧಾಕರ್,ವಮುಂಡಾಲ ಯುವ ವೇದಿಕೆಯ ಅಧ್ಯಕ್ಷ ಮಂಜುನಾಥ್ ಕರ್ಕೇರ್, ಗ್ರಾ.ಪಂ ಸದಸ್ಯರು, ಸಂಘದ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಡುಬಿದ್ರಿ ಓಂಕಾರ್ ಕಲಾ ಸಂಗಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
Posted On: 14 Apr 2025, 09:55 PM
ಪಡುಬಿದ್ರಿ : ಪಡುಬಿದ್ರಿಯ ಓಂಕಾರ್ ಕಲಾ ಸಂಗಮದಲ್ಲಿ ನಡೆಯುತ್ತಿರುವ ರಜಾ-ಮಜಾ ಶಿಬಿರದಲ್ಲಿ ವಿಶ್ವರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆಯನ್ನು ಅಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕರಾದ ಶೇಖರ್ ಹೆಜ್ಮಾಡಿಯವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಅಂಬೇಡ್ಕರ್ ಚಿಂತನೆಗಳು ಮತ್ತು ಭಾರತದ ಸಂವಿಧಾನ ಬಗ್ಗೆ ರಜಾ- ಮಜಾ ಶಿಬಿರದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಲಾ ಸಂಗಮದ ಮುಖ್ಯಸ್ಥರಾದ ಗೀತಾ ಅರುಣ್ ದೀಪ ಪ್ರಜ್ವಲನೆ ಮಾಡಿದರು. ಶಿಬಿರಾರ್ಥಿ ಪುಟಾಣಿ ಜೃೆಷ್ಣವಿರವರ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಉದಯ ಕುಮಾರ್ ಭಟ್, ಅರುಣ್ ಕುಮಾರ್, ಸುಪ್ರೀತಾ ಕೋಟ್ಯಾನ್ ಪಾಂಗಳ, ಶ್ವೇತಾ ಪಾಂಗಳ ಉಪಸ್ಥಿತರಿದ್ದರು. ಸಂತೋಷ್ ಪಡುಬಿದ್ರಿ ಸ್ವಾಗತಿಸಿ, ದೀಪಾ ಕರ್ಕೇರ ವಂದಿಸಿದರು.
ಶೇ. 90 ರಷ್ಟು ಕ್ರಿಮಿನಲ್ ಪ್ರಕರಣಗಳು ಮಾದಕ ವ್ಯಸನಿಗಳಿಂದ ನಡೆಯುತ್ತಿದೆ : ಪ್ರಸನ್ನ ಎಮ್.ಎಸ್
Posted On: 14 Apr 2025, 07:26 AM
ಮುಲ್ಕಿ : ವಿವಿಧ ರೀತಿಯ ಮಾದಕ ವಸ್ತುಗಳು ಬಳಕೆಯಾಗುತ್ತಿದ್ದು, ಮಾದಕ ವಸ್ತುಗಳಿಗೆ ಅತೀ ಹೆಚ್ಚಾಗಿ ವಿದ್ಯಾರ್ಥಿಗಳು ಬಲಿಯಾಗುತಿದ್ದಾರೆ. ಅದರಲ್ಲಿಯೂ ಇಂಜಿನಿಯರ್ ಹಾಗೂ ವ್ಯೆದ್ಯಕೀಯ ವಿದ್ಯಾರ್ಥಿಗಳನ್ನು ಮಾದಕ ಮಾರಾಟಗಾರರು ಗುರಿಯಾಗಿಸಿದ್ದಾರೆ. ಶೇ. 90 ರಷ್ಟು ಕ್ರಿಮಿನಲ್ ಪ್ರಕರಣಗಳು ಮಾದಕ ವ್ಯಸನಿಗಳಿಂದ ನಡೆಯುತ್ತಿರುವುದು ಆಘಾತಕಾರಿದೆ. ನಮ್ಮ ರಾಜ್ಯ ಮಾದಕ ಮುಕ್ತ ರಾಜ್ಯವಾಗಲು ಎಲ್ಲರೂ ಸಹಕರಿಸಬೇಕು. ತಲಪಾಡಿಯಿಂದ ಶಿರೂರುವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗುವ ಅಪಘಾತದಿಂದ ಒಂದು ವರ್ಷಕ್ಕೆ ಆರುನೂರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದು ಬೇರೆ ಬೇರೆ ಕಾರಣದಿಂದ ಸಾವನ್ನಪ್ಪುವರ ಸಂಖ್ಯೆಗಿಂತ ದುಪ್ಪಟ್ಟು ಆಗಿದೆ. ಆದ್ದರಿಂದ ರಸ್ತೆ ನಿಯಮಗಳನ್ನು ತಮ್ಮ ಜೀವದ ರಕ್ಷಣೆಗಾಗಿ ಪಾಲಿಸಿ ಯಾವುದೇ ಅಧಿಕಾರಿಗಳ ಹೆದರಿಕೆಗೆ ಅಲ್ಲ ಎಂದು ಪಡುಬಿದ್ರಿ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಎಮ್ ಎಸ್ ಹೇಳಿದರು. ಅವರು ವಿಜಯ ಕಾಲೇಜು ಮುಲ್ಕಿ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ.,ರೆಡ್ ಕ್ರಾಸ್ , ರೋವಸ್೯ & ರೇಂಜರ್ ಸಂಯುಕ್ತಾಶ್ರಯದಲ್ಲಿ ರಚನ್ ಸಾಲ್ಯಾನ್ ನೇತೃತ್ವದ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಕರ್ನಾಟಕ ಇದರ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ನಡೆದ ಮಾದಕ ದ್ರವ್ಯ ವ್ಯಸನ ತಡೆಗಟ್ಟುವಿಕೆ ಮತ್ತು ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು. ಮುಲ್ಕಿ ಠಾಣಾಧಿಕಾರಿ ಅನಿತಾರವರು ಮಾತನಾಡಿ, ಹೆಚ್ಚಿನ ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಉಲ್ಲಂಘಿಸಿ, ವಾಹನ ಚಲಿಸುವುದು ಕಂಡು ಬರುತ್ತಿದೆ. ಇದರಿಂದ ಪ್ರತಿದಿನ ರಸ್ತೆ ಅಪಘಾತಗಳು ಜಾಸ್ತಿಯಾಗುತ್ತಿದೆ. ರಸ್ತೆ ದಾಟುವಾಗ ಕೂಡಾ ನಿಯಮಗಳನ್ನು ಪಾಲಿಸದಿರುವುದು, ಮಾದಕ ವಸ್ತುಗಳನ್ನು ಮತ್ತು ಮದ್ಯಪಾನ ಸೇವಿಸಿ ವಾಹನ ಚಲಾಯಿಸುವವರ ಸಂಖ್ಯೆ ಜಾಸ್ತಿ ಯಾಗಿದೆ. ಇಂತಹ ಚಟಗಳಿಗೆ ಬಲಿಯಾಗದೆ, ಶಿಸ್ತುಬದ್ಧವಾಗಿ ಬಾಳಿ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬೇಕೆಂದು ಹೇಳಿದರು. ಮುಲ್ಕಿ ವಿಜಯ ಕಾಲೇಜು ಪ್ರಾಂಶುಪಾಲ ಪ್ರೊ. ವೆಂಕಟೇಶ ಭಟ್ ಅಧ್ಯಕ್ಷತೆ ವಹಿಸಿದ್ದರು. ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಸಂಸ್ಥಾಪಕ ಡಾ.ಶಿವಕುಮಾರ್ ಕರ್ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಕರ್ನಾಟಕ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ , ರಾಗ್ ರಂಗ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿಶ್ವಾಸ್ ಅಮೀನ್, ಪಡುಬಿದ್ರಿ ರೋಟರಿ ಪೂರ್ವಾಧ್ಯಕ್ಷ ಸಂತೋಷ್ ಪಡುಬಿದ್ರಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಪದಾಧಿಕಾರಿಗಳಾದ ಶಶಾಂಕ್ ಸುವರ್ಣ, ಸೌಮಿಕ್ ಶ್ರೀಯಾನ್, ವಿಜೇತ್ ಆಚಾರ್ಯ, ಸಚಿನ್ ಕುಂದರ್, ಪ್ರತೀಕ್ ಶೆಟ್ಟಿ ಕಾರ್ಕಳ, ಶಶಾಂಕ್ ಆಚಾರ್ಯ, ಸುಜನ್ ಕೋಟ್ಯಾನ್ ಹೆಜ್ಮಾಡಿ, ಯಶ್ ಅಮೀನ್ ಹೆಜ್ಮಾಡಿ, ಅದಿತ್ಯ ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅರುಣಾ ಕುಮಾರಿ ಸ್ವಾಗತಿಸಿದರು. ಎನ್.ಎಸ್.ಎಸ್ ಸ್ವಯಂ ಸೇವಕ ಅಭಿಷೇಕ್ ವಂದಿಸಿದರು. ಲಾವಣ್ಯ ನಿರೂಪಿಸಿದರು.
ಮಹಿಳಾ ಮತ್ತು ಮಕ್ಕಳ ಸುರಕ್ಷಾ ವೇದಿಕೆ ಒಂತಿಬೆಟ್ಟು ಹಿರಿಯಡ್ಕ : ಪ್ರಥಮ ವಾರ್ಷಿಕೋತ್ಸವ
Posted On: 14 Apr 2025, 07:11 AM
ಬಂಟಕಲ್ಲು : ಮಹಿಳಾ ಮತ್ತು ಮಕ್ಕಳ ಸುರಕ್ಷಾ ವೇದಿಕೆ (ರಿ.) ಒಂತಿಬೆಟ್ಟು ಹಿರಿಯಡ್ಕ ಇದರ ಪ್ರಥಮ ವಾರ್ಷಿಕೋತ್ಸವ ಜರಗಿತು. ಈ ಸಂದರ್ಭ ಮಾತನಾಡಿದ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಕ್ಕಳಲ್ಲಿ ಧಾರ್ಮಿಕ ಶ್ರದ್ಧೆಯನ್ನು ಬೆಳೆಸುವಲ್ಲಿ ಮಾತೆಯರು ಮಹತ್ವದ ಪಾತ್ರವನ್ನು ವಹಿಸಬೇಕು. ರಾಮಾಯಣ, ಮಹಾಭಾರತ ನಮ್ಮ ಜೀವನದ ಉಸಿರಾಗಬೇಕು ಎಂದರು. ಗೀತಾ ನೃತ್ಯ ರೂಪಕ ಕಾರ್ಯಕ್ರಮ ನೀಡಿದ ಶ್ರೀ ಯತಿಗುರುರಾಯ ರೂಪಕ ತಂಡ 92ನೇ ಹೇರೂರು ಇದರ ನಿರ್ದೇಶಕಿಯಾಗಿರುವ ಅನಿತಾ ಉಮೇಶ್ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಿವಿಧ ಸಾಧಕರು ಉಪಸ್ಥಿತರಿದ್ದರು. ಹೇರೂರು ಮಾಧವಾಚಾರ್ಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಉತ್ತಮ ಮಾತುಗಾರನಾಗ ಬೇಕಾದರೆ ಉತ್ತಮ ಕೇಳುಗನಾಗಿರಬೇಕು : ರಾಘವೇಂದ್ರ ಪ್ರಭು ಕವಾ೯ಲು
Posted On: 14 Apr 2025, 07:04 AM
ಉಡುಪಿ : ಒಬ್ಬ ಉತ್ತಮ ಮಾತುಗಾರನಾಗ ಬೇಕಾದರೆ ಉತ್ತಮ ಕೇಳುಗನಾಗುವುದು ಅಷ್ಟೇ ಮುಖ್ಯ ಎಂದು ವ್ಯಕ್ತಿತ್ವ ವಿಕಸನ ತರಬೇತಿದಾರ ರಾಘವೇಂದ್ರ ಪ್ರಭು ಕವಾ೯ಲು ಹೇಳಿದರು. ಅವರು ಅಜ್ಜರಕಾಡು ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದಲ್ಲಿ ನಡೆದ ಮಕ್ಕಳ ಶಿಬಿರದಲ್ಲಿ ಮಾತನಾಡಿದರು. ನಮ್ಮ ವ್ಯಕ್ತಿತ್ವ ವಿಕಸನದಲ್ಲಿ ಪರಿಣಾಮಕಾರಿ ಸಂವಹನ ಕೌಶಲ್ಯ ಅತೀ ಮುಖ್ಯವಾಗಿದೆ. ಇಂದು ಉತ್ತಮ ಭಾಷಣಕಾರರಿಗೆ ಸಮಾಜದಲ್ಲಿ ಬೇಡಿಕೆ ಇದೆ. ನಾವೆಲ್ಲರೂ ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾಥಿ೯ಗಳು ಕೇವಲ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸುದ ರೊಂದಿಗೆ ವಿವಿಧ ರೀತಿಯ ಉತ್ತಮ ಹವ್ಯಾಸಗಳನ್ನು ರೂಢಿಸಬೇಕು ಎಂದರು. ಈ ಸಂದಭ೯ದಲ್ಲಿ ಬಿ.ಕೆ ಸುಮಾ ಮತ್ತು ಕೇಂದ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
