Updated News From Kaup

ಉಡುಪಿ : ಹೊಸ ಬದುಕು ಆಶ್ರಮವಾಸಿಗಳಿಗೆ ಅನ್ನದಾನ, ದಿನಸಿ ಸಾಮಗ್ರಿ, ಪರಿಕರಗಳ ಕೊಡುಗೆ

Posted On: 01-02-2025 04:03PM

ಉಡುಪಿ : ಉಡುಪಿಯ ಕಾರ್ತಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಹೊಸ ಬದುಕು ವೃದ್ಧಾಶ್ರಮದ ವಾಸಿಗಳಿಗೆ ಒಂದು ದಿನದ ಅನ್ನದಾನದ ಸೇವೆಯನ್ನು ಬೆಂಗಳೂರಿನ ಪದ್ಮ ರಾಮದಾಸ್ ರಾವ್ ದಂಪತಿಗಳ ಮದುವೆ ವಾರ್ಷಿಕೋತ್ಸವದ ಅಂಗವಾಗಿ ನೀಡಲಾಯಿತು.

ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಮೂರನೇ ಪಾತ್ರಿ ಸುಬ್ರಹ್ಮಣ್ಯ ರಾವ್ ರವರು ಮಾತನಾಡಿ, ದಾನ ಮಾಡುವವರಲ್ಲಿ ಜಾತಿ-ಕುಜಾತಿ ಎಂಬ ಬೇಧ ಭಾವವಿಲ್ಲ. ಅದರಲ್ಲೂ ಸಕಲ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಲೇಸು ಎಂಬಂತೆ ಸಕಲ ದಾನಗಳಲ್ಲಿ ಅನ್ನದಾನ ಶ್ರೇಷ್ಠವಾದದು. ಸ್ವಚ್ಛಂದ ಮನಸ್ಸಿನಿಂದ ಮಾಡುವ ದಾನದಲ್ಲಿ ದೇವರನ್ನು ಕಾಣಬಹುದು. ಯಾವುದೇ ದಾನ ನಮ್ಮ ಕೃೆಯಿಂದ ಮಾಡುವವನು ಪರಮೇಶ್ವರನೇ ಆಗಿರುತ್ತಾನೆ. ಯಾವುದೇ ಬೇಧ ಭಿನ್ನತೆ ಇಲ್ಲದೆ ಸಕಲ ಜಗತ್ತನ್ನು ಸಂರಕ್ಷಿಸುತ್ತಾನೆ ಎಂದರು.

ಫಲವಸ್ತು ಹಾಗು ಶಾಲುಗಳನ್ನು ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪ್ರಥಮ ಗುರಿಕಾರ ಗಿರೀಶ್ ರಾವ್, 60 ಕೆ.ಜಿ. ಅಕ್ಕಿಯನ್ನು ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಮೂರನೇ ಪಾತ್ರಿ ಸುಬ್ರಹ್ಮಣ್ಯ ರಾವ್ ಮತ್ತು ಮಹೇಂದ್ರರವರು, ಇಸೀ ಚಯರ್ ಗಳನ್ನು ಕಾಪು ಕಲ್ಯದ ದಿವಂಗತ ಕಮಲ ಶೇರಿಗಾರ್ತಿರವರ ನೆನಪಿಗಾಗಿ ಮಕ್ಕಳು ಹಾಗು ದಿನಸಿ ಸಾಮಾಗ್ರಿಗಳನ್ನು ಪಡುಬಿದ್ರಿ ಸುಶೀಲ್ ಕಾಂಚನ್ ರವರು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಪಡುಬಿದ್ರಿ ಬಾಲಪ್ಪ ಗರಿಕಾರರಾದ ನಟರಾಜ್ ರಾವ್, ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪ್ರಥಮ ಗುರಿಕಾರ ಗಿರೀಶ್ ರಾವ್, ಆಶ್ರಮದ ನಿತ್ಯ ದಾನಿಯಾದ ಸುಶೀಲಾ ರಾವ್ ಉಡುಪಿ, ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಪೂರ್ವ ಕಾರ್ಯದರ್ಶಿ ಪವನ್ ಸಾಲ್ಯಾನ್, ಶುಭಸಂತೋಷ್, ಹೊಸ ಬದುಕು ಸಂಸ್ಥೆಯ ನಿರ್ವಾಹಕರಾದ ವಿನಯಚಂದ್ರ, ರಾಜಶ್ರೀ ಉಪಸ್ಥಿತರಿದ್ದರು.

ಕಾಪು ಸಹಕಾರಿ ವ್ಯವಸಾಯಿಕಾ ಸಂಘದ ಅಧ್ಯಕ್ಷರಾಗಿ ಕಾಪು ದಿವಾಕರ ಶೆಟ್ಟಿ ಅವಿರೋಧ  ಆಯ್ಕೆ

Posted On: 30-01-2025 09:46PM

ಕಾಪು: ಕಾಪು ಸಹಕಾರಿ ವ್ಯವಸಾಯಿಕ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರಾಜ್ಯ ಹಾಲು ಮಹಾ ಮಂಡಲದ ನಿರ್ದೇಶಕ ಕಾಪು ದಿವಾಕರ ಶೆಟ್ಟಿಯವರು ಸತತ ಮೂರನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಯುವ ಸದಸ್ಯ ಸುಲಕ್ಷಣ್ ಎಲ್. ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಾಪು ಸಹಕಾರಿ ವ್ಯವಸಾಯಿಕ ಸಂಘದ ಭಾಸ್ಕರ ಸೌಧದಲ್ಲಿ ನಡೆದ ಚುನಾವಣೆಯಲ್ಲಿ  ಚುನಾವಣಾಧಿಕಾರಿಯಾಗಿ ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಸಿಬ್ಬಂದಿ ಕೆ.ಆರ್. ರೋಹಿತ್ ಕುಮಾರ್ ಆಯ್ಕೆ ಪ್ರಕ್ರಿಯೆ ನಡೆಸಿದರು.

ಈ ಸಂದರ್ಭ ಮಾತನಾಡಿದ ನಿಯೋಜಿತ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಕಳೆದ ಹತ್ತು ವರ್ಷಗಳಿಂದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದ ನನ್ನನ್ನು ಸದಸ್ಯರು ಒಮ್ಮತದಿಂದ ಅಧ್ಯಕ್ಷನಾಗಿ ಪುನರಾಯ್ಕೆ ಮಾಡಿ ಜವಾಬ್ದಾರಿ ನೀಡಿದ್ದಾರೆ. ಈ ಅವಕಾಶವನ್ನು ಸಂಘದ ಅಭಿವೃದ್ದಿಗೆ ಸಂಪೂರ್ಣ ತೊಡಗಿಸಿಕೊಳ್ಳುವ ಮೂಲಕ ನಿರ್ವಹಿಸುತ್ತೇನೆ ಎಂಬ ವಿಶ್ವಾಸವಿದೆ ಎಂದರು.

ನೂತನ ಆಡಳಿತ ಮಂಡಳಿಯ ಸದಸ್ಯರಾಗಿ ದಿನೇಶ್ ಎ. ಸಾಲ್ಯಾನ್, ಸದಾಶಿವ ಸೇರ್ವೆಗಾರ, ಅಬ್ದುಲ್ ರಜಾಕ್, ಸವಿತಾ ಐರಿನ್ ಕುಂದರ್, ಕವಿತಾ, ಭೋಜ ಎಸ್. ಅಮೀನ್, ಅರುಣ್ ಕುಮಾರ್, ಅನೂಪ್ ಕೆ., ಶ್ರೀಮತಿ ಅರುಣಾ ಆಯ್ಕೆಯಾಗಿದ್ದಾರೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಅರ್ಚನಾ ಶೆಟ್ಟಿ ಉಪಸ್ಥಿತರಿದ್ದರು.

ಕಾಪು‌ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಸ್ಕೌಟ್ಸ್ - ಗೈಡ್ಸ್ ದ್ವಿತೀಯ ಸೋಪಾನ ಪರೀಕ್ಷೆ

Posted On: 30-01-2025 09:31PM

ಕಾಪು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಪು ಮತ್ತು ಉಡುಪಿ ಸ್ಥಳೀಯ ಸಂಸ್ಥೆಯ ದ್ವಿತೀಯ ಸೋಪಾನ ಪರೀಕ್ಷೆಯು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಗುರುವಾರದಂದು ನಡೆಯಿತು. ಕಾರ್ಯಕ್ರಮವನ್ನು ಭಾರತ್ ಸ್ಕೌಟ್ಸ್-ಗೈಡ್ಸ್ ಉಡುಪಿ ಜಿಲ್ಲಾ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿಯವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸ್ಕೌಟ್ ಚಳವಳಿಯು ಒಂದು ನಿರಂತರ ಪ್ರಕ್ರಿಯೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇವುಗಳಲ್ಲಿ ತೊಡಗಿಕೊಂಡಾಗ, ಸಾಮಾಜಿಕ ಜೀವನದಲ್ಲಿ ಪರಿಪೂರ್ಣರಾಗಿ ಮೂಡಿಬರುತ್ತಾರೆ. ದೇಶಭಕ್ತಿಯ ಜೊತೆಗೆ ಸುಂದರ ಭವಿಷ್ಯದ ನಿರ್ಮಾಣಕ್ಕೆ ಕಾರಣರಾಗುತ್ತಾರೆ. ಸ್ಕೌಟ್ ಪರೀಕ್ಷೆಯ ಜೊತೆಗೆ ಮುಂಬರುವ ಶಾಲಾ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಿ ಪ್ರತಿಭಾನ್ವಿತರಾಗಿ ಮೂಡಿಬನ್ನಿ ಎಂಬ ಸಂದೇಶವನ್ನು ನೀಡಿದರು.

ಕಾಪು ಸ್ಥಳೀಯ ಸಂಸ್ಥೆಯ ಗೌರವಾಧ್ಯಕ್ಷರಾದ ಡಾ. ಕೆ. ಪ್ರಶಾಂತ್ ಶೆಟ್ಟಿಯವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಪರೀಕ್ಷಾ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಸ್ಕೌಟ್ಸ್-ಗೈಡ್ಸ್ ನ ಉನ್ನತ ಗೌರವ-ಪುರಸ್ಕಾರಗಳನ್ನು ಪಡೆದು ಪ್ರತಿಭಾನ್ವಿತರಾಗಿ ಮೂಡಿ ಬರಲು ಸಹಕಾರಿ ಎಂದು ಶುಭ ಹಾರೈಸಿದರು. ಈ ಸಂದರ್ಭ ಭಾರತ್ ಸ್ಕೌಟ್ಸ್-ಗೈಡ್ಸ್ ಉಡುಪಿ ಜಿಲ್ಲಾ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿಯವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ ಶೇಖರ್, ದಂಡತೀರ್ಥ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್, ಜಿಲ್ಲಾ ಸಹಾಯಕ ಆಯುಕ್ತ ರಿತೇಶ್ ಶೆಟ್ಟಿ ಸೂಡ, ಉಡುಪಿ ಸ್ಥಳೀಯ ಸಂಸ್ಥೆಯ ಖಜಾಂಚಿ ರಮೇಶ್ ಅಂಬಾಡಿ, ಶಿಬಿರದ ನಾಯಕರಾದ ಉಮೇಶ್ ಕಾಂಚನ್, ದಂಡತೀರ್ಥ ವಿದ್ಯಾಸಂಸ್ಥೆಯ ಪ್ರಾಂಶುಪಾಲ ನೀಲಾನಂದ ನಾಯ್ಕ್, ಪ್ರಾಥಮಿಕ ವಿಭಾಗದ ಮುಖ್ಯಸ್ಥ ಗೇಬ್ರಿಯಲ್ ಮಸ್ಕರೇನ್ಹಸ್, ವಿದ್ಯಾಸಂಸ್ಥೆಗಳ ಶಿಕ್ಷಕ - ಶಿಕ್ಷಕಿಯರು ಹಾಗೂ ಸುಮಾರು 500 ಮಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಪು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಮರಿಯ ಅನಿತ ಮೆಂಡೋನ್ಸ ಸ್ವಾಗತಿಸಿದರು. ಉಡುಪಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶೇಖರ್ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್ ವಂದಿಸಿದರು.

ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನಿತರಾದ ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು

Posted On: 30-01-2025 06:01AM

ಪಡುಬಿದ್ರಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ಶಾಂತಿವನ ಟ್ರಸ್ಟ್ (ರಿ.) ಧರ್ಮಸ್ಥಳ ಇವರು ಆಯೋಜಿಸಿದ ರಾಜ್ಯಮಟ್ಟದ ಪ್ರಾರ್ಥನಾ ಶ್ಲೋಕಗಳ ಕಂಠಪಾಠ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕಾ ರಾವ್ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ.

ಪ್ರಬಂಧ ಸ್ಪರ್ಧೆಯಲ್ಲಿ ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮನ್ವಿತಾ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ.

ಧರ್ಮಸ್ಥಳದಲ್ಲಿ ನಡೆದ ಪುರಸ್ಕಾರ ಸಮಾರಂಭದಲ್ಲಿ ಈ ಇಬ್ಬರು ವಿದ್ಯಾರ್ಥಿನಿಯರು ಡಾ. ಡಿ.ವೀರೇಂದ್ರ ಹೆಗ್ಗಡೆ, ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ರಾಮಕೃಷ್ಣ ಮಠ, ಸಂಗೀತ ನಿರ್ದೇಶಕ ವಿ. ಮನೋಹರ್ ಮೊದಲಾದ ಗಣ್ಯರ ಸಮ್ಮುಖದಲ್ಲಿ ಪುರಸ್ಕಾರವನ್ನು ಪಡೆದರು.

ಕಾಪು : ಯೋಜನಾ ಪ್ರಾಧಿಕಾರಕ್ಕೆ ನಾಮನಿರ್ದೇಶಿತ ಸದಸ್ಯರಾಗಿ ಕಿರಣ್ ಆಳ್ವ ಆಯ್ಕೆ

Posted On: 30-01-2025 05:55AM

ಕಾಪು : ಕಾಪು ಪುರಸಭೆಯಿಂದ ಯೋಜನಾ ಪ್ರಾಧಿಕಾರಕ್ಕೆ ನಾಮನಿರ್ದೇಶಿತರಾಗಿ ಕಾಪು ಪುರಸಭೆಯ ಚುನಾಯಿತ ಸದಸ್ಯರಾದ ಕಿರಣ್ ಆಳ್ವರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಫೆ. 4 : ಕಾಪು  ಶ್ರೀ ಹೊಸ ಮಾರಿಗುಡಿಯಲ್ಲಿ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವಚಂಡೀಯಾಗ

Posted On: 29-01-2025 07:24PM

ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸಾನಿಧ್ಯ ವೃದ್ಧಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಫೆಬ್ರವರಿ 4ರ ಮಂಗಳವಾರ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವ ಚಂಡೀಯಾಗ ಜರಗಲಿದೆ ಎಂದು ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ರಘುಪತಿ ಭಟ್‌ ಹೇಳಿದ್ದಾರೆ. ಅವರು ಕಾಪುವಿನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ದೇವಸ್ಥಾನದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ, ಪ್ರಧಾನ ಆರ್ಚಕರಾದ ವೇದಮೂರ್ತಿ ಕಲ್ಯ ಶ್ರೀನಿವಾಸ ತಂತ್ರಿಯವರ ಉಪಸ್ಥಿತಿಯಲ್ಲಿ ನವ ಚಂಡೀಯಾಗದ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಫೆಬ್ರವರಿ 4ರಂದು ಬೆಳಿಗ್ಗೆ ನವಚಂಡೀಯಾಗ ಆರಂಭ, ಕಲ್ಲೋಕ್ತ ಪೂಜಾ, 11 ಗಂಟೆಗೆ ಪೂರ್ಣಾಹುತಿ, ಧಾರ್ಮಿಕ ಸಭಾ ಕಾರ್ಯಕ್ರಮ, ವಾಗೀಶ್ವರಿ ಪೂಜೆ, ಮಹಾಮಂಗಳಾರತಿ, ಮಹಾಪ್ರಸಾದ ವಿತರಣೆ ಹಾಗೂ ಮದ್ಯಾಹ್ನ 1 ರಿಂದ ಅನ್ನಪ್ರಸಾದ ವಿತರಣೆ ನಡೆಯಲಿದೆ. ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರ ನೇತೃತ್ವದಲ್ಲಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಮತ್ತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ ಹಾಗೂ ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್ ಉಪಸ್ಥಿತಿಯಲ್ಲಿ ಈ ಎಲ್ಲಾ ಕಾರ್ಯಕ್ರಮ ಕಾರ್ಯಕ್ರಮಗಳು ಜರಗಲಿವೆ.  ಆ ಪ್ರಯುಕ್ತ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ  ಸಚಿವರಾದ ಡಾ. ರಾಮಲಿಂಗ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಶಾಸಕರಾದ ಡಾ. ಮಂಜುನಾಥ್ ಭಂಡಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಆಯುಕ್ತರಾದ ವೆಂಕಟೇಶ್ ಐಎಎಸ್ ಗೌರವ ಉಪಸ್ಥಿತರಾಗಿ ಭಾಗವಹಿಸಲಿದ್ದಾರೆ. ನವದುರ್ಗಾ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳುವ ಉದ್ದೇಶದೊಂದಿಗೆ ಈಗಾಗಲೇ ಪುಸ್ತಕ ತೆಗೆದುಕೊಂಡು ಹೋಗಿ ಲೇಖನ ಬರೆಯುತ್ತಿರುವವರು ಜನವರಿ 30ರ ಒಳಗಾಗಿ ಪುಸ್ತಕವನ್ನು ದೇವಳಕ್ಕೆ ಸಮರ್ಪಿಸಿ, ಫೆಬ್ರವರಿ 4 ರಂದು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ನಡೆಯುವ ನವಚಂಡೀಯಾಗದ ಸಂಕಲ್ಪದಲ್ಲಿ ಭಾಗಿಯಾಗಬೇಕು.

ಸಂಕಲ್ಪಕ್ಕೆ ಕುಳಿತುಕೊಳ್ಳುವವರು ಬೆಳಿಗ್ಗೆ 9 ಗಂಟೆಗೆ ತಪ್ಪದೇ ಹಾಜರಿರಬೇಕು. ಲೇಖನ ಬರೆಯಲು ಇಚ್ಚಿಸುವ ಭಕ್ತರು ಆದಷ್ಟು ಶೀಘ್ರದಲ್ಲಿ ಲೇಖನ ಪುಸ್ತಕವನ್ನು ಪಡೆದು ಲೇಖನ ಬರೆದು ಶಿಲಾಸೇವೆ ಸಹಿತವಾಗಿ ಕಾಪುವಿನ ಅಮ್ಮನಿಗೆ ಸಮರ್ಪಿಸಲು ಅವಕಾಶವಿದೆ.  ಆ ಪ್ರಯುಕ್ತ 9 ಮತ್ತು ಅದಕ್ಕಿಂತ ಹೆಚ್ಚಿನ ಶಿಲಾಸೇವೆ ನೀಡುವ ಭಕ್ತರಿಗೆ “ಕಾಪುವಿನ ಅಮ್ಮನ ಮಕ್ಕಳು” ತಂಡಕ್ಕೆ ಸೇರ್ಪಡೆಗೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದೂ ರಘುಪತಿ ಭಟ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್‌ ವಿ. ಶೆಟ್ಟಿ, ಕೋಶಾಧಿಕಾರಿ ಕೆ ವಿಶ್ವನಾಥ್‌, ಉಪಾಧ್ಯಕ್ಷ ಹರಿಯಪ್ಪ ಕೋಟ್ಯಾನ್‌, ಸಂಚಾಲಕ ಸುವರ್ಧನ್‌ ನಾಯಕ್‌, ಮಹಿಳಾ ಪ್ರಧಾನ ಸಂಚಾಲಕಿ ಗೀತಾಂಜಲಿ ಎಂ ಸುವರ್ಣ, ಸಂಚಾಲಕಿ ಸಾವಿತ್ರಿ ಗಣೇಶ್‌, ಸಂಘಟನಾ ಕಾರ್ಯದರ್ಶಿ ಸಂದೀಪ್‌ ಕುಮಾರ್‌ ಮಂಜ ಉಪಸ್ಥಿತರಿದ್ದರು.     

ಫೆಬ್ರವರಿ 2 : ಕಾಂತಾವರ ಕುಲಾಲ ಸಂಘದ ಉದ್ಘಾಟನೆ

Posted On: 29-01-2025 07:04PM

ಕಾರ್ಕಳ : ತಾಲೂಕಿನ ಕಾಂತಾವರದಲ್ಲಿ ಕುಲಾಲ ಸಂಘ ಕಾಂತಾವರ ಇದರ ಉದ್ಘಾಟನೆಯು ಸಮುದಾಯದ ಹಿರಿಯರ ಕಿರಿಯರ ಜೊತೆಗೆ ಬೇಲಾಡಿ ಶ್ರೀ ಪುಂಡರೀಕ ವಿಷ್ಣುಮೂರ್ತಿ ದೇವಸ್ಥಾನದ ಅಂಗಳದಲ್ಲಿ ಫೆಬ್ರವರಿ 2 ರ ಭಾನುವಾರ ನಡೆಯಲಿದೆ.

ತಾಲೂಕಿನ ಸ್ವಜಾತಿ ಬಂಧುಗಳು, ಸ್ವಜಾತಿ ಬಾಂಧವರು ಭಾಗವಹಿಸಿ ಎಂದು ಕಾರ್ಯಕ್ರಮ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುವರು.

ಕಾಪು : ಎಸ್‌ಕೆಪಿಎ ಫೋಟೋಗ್ರಾಫಿ ಕಾರ್ಯಾಗಾರ

Posted On: 29-01-2025 09:42AM

ಕಾಪು : ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ ದ.ಕ., ಉಡುಪಿ ಜಿಲ್ಲೆ ವತಿಯಿಂದ ಕಾಪುವಿನ ಪ್ಯಾಲೆಸ್‌ ಗಾರ್ಡನ್‌ನಲ್ಲಿ ಮಂಗಳವಾರ ನಡೆದ ಗಿಂಬಲ್ಸ್‌ ಹಾಗೂ ರೀಲ್ಸ್‌ ಕಾರ್ಯಾಗಾರವನ್ನು ಎಸ್‌ಕೆಪಿಎ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನವನ್ನು ನಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು. ಈ ಕಾರ್ಯಾಗಾರದ ಮೂಲಕ ಕೌಶಲ್ಯವನ್ನು ಹೇಗೆ ವೃದ್ಧಿಸಬಹುದು, ಹೊಸ ಹೊಸ ತಂತ್ರಜ್ಞಾನದ ಬಳಕೆ ಹೇಗೆ ಬಳಸಬಹುದು ಎಂಬುದನ್ನು ಅರಿತು ತಮ್ಮ ವೃತ್ತಿ ಜೀವನದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಸಂಪನ್ಮೂಲ ವ್ಯಕ್ತಿಯಾಗಿ ಸುಮಂತ್‌ ಸುವರ್ಣ ಕಾರ್ಯಾಗಾರ ನಡೆಸಿಕೊಟ್ಟರು.

ಎಸ್‌ಕೆಪಿಎ ಜಿಲ್ಲಾ ಸಂಚಾಲಕ ಕರುಣಾಕರ್‌ ಕಾನಂಗಿ, ಉಪಾಧ್ಯಕ್ಷರಾದ ರಮೇಶ್‌ ಕಲಾಶ್ರೀ ಮತ್ತು ಪ್ರವೀಣ್‌ ಕೊರಿಯ, ಕಾಪು ವಲಯ ಅಧ್ಯಕ್ಷ ಸಚಿನ್‌ ಕುಮಾರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಛಾಯಾ ಕಾರ್ಯದರ್ಶಿ ರವಿ ಕೋಟ್ಯಾನ್‌ ಸ್ವಾಗತಿಸಿದರು. ಎಸ್‌ಕೆಪಿಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ್‌ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ನವಚಂಡೀಯಾಗಕ್ಕೆ ಪ್ರಸಾದ ಮೂಹೂರ್ತ

Posted On: 28-01-2025 08:03PM

ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸಾನಿಧ್ಯ ವೃದ್ಧಿ ಮತ್ತು ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ನವದುರ್ಗಾ ಲೇಖನ ಯಜ್ಞದ ನವಚಂಡೀಯಾಗವು ಫೆಬ್ರವರಿ 4 ರಂದು ನಡೆಯಲಿದೆ, ಆ ಪ್ರಯುಕ್ತ ಮಂಗಳವಾರ ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಮತ್ತು ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಇವರ ಉಪಸ್ಥಿತಿಯಲ್ಲಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರ ಮುಂದಾಳತ್ವದಲ್ಲಿ ಕುಂಕುಮ ಪ್ರಸಾದ ಮುಹೂರ್ತ ನೆರವೇರಿತು.

ನವದುರ್ಗಾ ಲೇಖನವನ್ನು ಬರೆದು ಅರ್ಪಿಸಿ, ನವಚಂಡೀಯಾಗದ ದಿನದಂದು ಸಂಕಲ್ಪದಲ್ಲಿ ಭಾಗಿಯಾಗಲಿರುವ ಭಕ್ತರಿಗೆ ನೀಡುವ ಕುಂಕುಮವನ್ನು ಮಾರಿಯಮ್ಮನಿಗೆ ಅರ್ಪಿಸಿ ಬ್ರಾಹ್ಮಣ ಸಂಘದ ಮಹಿಳೆಯರು ನಿರಂತರ ಲಕ್ಷ್ಮಿ ಶೋಭಾನೆಯೊಂದಿಗೆ ಕುಂಕುಮ ಪ್ರಸಾದವನ್ನು ಪ್ಯಾಕೆಟ್ ಗಳಿಗೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಕೋಶಾಧಿಕಾರಿ ಕೆ. ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಾಧವ ಆರ್ ಪಾಲನ್, ಶೇಖರ ಸಾಲ್ಯಾನ್, ಮನೋಹರ ರಾವ್, ಬ್ರಹ್ಮಕಲಶೋತ್ಸವ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷರಾದ ಬೀನಾ ವಾಸುದೇವ ಶೆಟ್ಟಿ, ನವದುರ್ಗಾ ಲೇಖನ ಯಜ್ಞದ ಮಹಿಳಾ ಸಮಿತಿಯ ಮುಖ್ಯ ಸಂಚಾಲಕರಾದ ಸಾವಿತ್ರಿ ಗಣೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ: ವಳಕಾಡು ಶಾಲಾ ಆವರಣದಲ್ಲಿ ಜೇನುನೊಣ ದಾಳಿ ವಿದ್ಯಾರ್ಥಿಗಳಿಗೆ ಗಾಯ

Posted On: 28-01-2025 07:59PM

ಉಡುಪಿ: ನಗರದ ವಳಕಾಡು ಶಾಲಾ ಆವರಣದಲ್ಲಿ ಜೇನುನೊಣ ದಾಳಿ ಮಾಡಿದ ಪರಿಣಾಮ 40 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಇಂದು ಮಧ್ಯಾಹ್ನ 3.30ರ ಸುಮಾರಿಗೆ ನಡೆದಿದೆ.

ಗಾಯಗೊಂಡ 40 ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿದ್ದು, ಇದರಲ್ಲಿ ಮೂರು ಮಕ್ಕಳನ್ನು ನಗರದ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಳ್ಳಲಾಗಿದೆ. ಒಬ್ಬರು ಪೋಷಕರು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 37 ಮಕ್ಕಳು ಹೊರರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಎಲ್ಲರೂ ಆರೋಗ್ಯಕರವಾಗಿದ್ದು, ಯಾರಿಗೂ ಯಾವುದೇ ಅಪಾಯ ಇಲ್ಲ ಎಂದು ಜಿಲ್ಲಾ ಸರ್ಜನ್ ಡಾ.ಅಶೋಕ್ ಕುಮಾರ್ ತಿಳಿಸಿದ್ದಾರೆ.

ವಳಕಾಡು ಸಂಯುಕ್ತ ಪ್ರೌಢ ಶಾಲಾ ಆವರಣದಲ್ಲಿ ಆಡುತ್ತಿದ್ದ ಪ್ರೌಢ ಶಾಲಾ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ, ಕಟ್ಟಡದಲ್ಲಿದ್ದ ಜೇನುಗೂಡಿಗೆ ಕಲ್ಲು ಎಸೆದಿದ್ದ ಎನ್ನಲಾಗಿದೆ. ಇದರಿಂದ ಜೇನುನೊಣಗಳು ಅಲ್ಲಿದ್ದ ಮಕ್ಕಳ ಮೇಲೆ ದಾಳಿ ನಡೆಸಿತ್ತೆನ್ನಲಾಗಿದೆ. ಇದರಿಂದ ಮಕ್ಕಳು ಬೊಬ್ಬೆ ಹಾಕಿ ಓಡಿ ಹೋಗಿದ್ದು, ಕೂಡಲೇ ಶಿಕ್ಷಕರು, ಪೋಷಕರು ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ.