Updated News From Kaup
ಸುರತ್ಕಲ್ ಹತ್ಯೆ : 4 ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
Posted On: 28 Jul 2022, 10:19 PM
ಸುರತ್ಕಲ್ : ಬೆಳ್ಳಾರೆಯ ಹತ್ಯೆಯ ಬಳಿಕ ಇದೀಗ ಮತ್ತೊಂದು ಹತ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಲ್ಲಿ ನಡೆದಿದೆ. ಹತ್ಯೆಯಾದ ಯುವಕ ಪಾಝಿಲ್. ಬಟ್ಟೆ ಅಂಗಡಿಯ ಮುಂದೆ ನಿಂತ ಸಂದರ್ಭ ಹಲ್ಲೆಯಾಗಿದೆ. ಸಿಸಿ ಟಿವಿ ದೃಶ್ಯಾವಳಿಯಲ್ಲಿ 5 ಜನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಫಾಝಿಲ್ ಮೇಲೆ ಎರಗಿದ್ದಾರೆ. ಆಸ್ಪತ್ರೆಗೆ ಸೇರಿಸಿದರೂ ಯಾವುದೇ ಪ್ರಯೋಜನವಾಗದೆ ಫಾಝಿಲ್ ಮೃತರಾಗಿದ್ದಾರೆ. ಪ್ರೀತಿಯ ವಿಷಯ ಎಂದು ಹೇಳಲಾಗುತ್ತಿದೆಯಾದರೂ, ಪೋಲಿಸರು ತನಿಖೆ ಚುರುಕುಗೊಳಿಸಿದ್ದಾರೆ. ಅಹಿತಕಾರಿ ಘಟನೆ ನಡೆಯದಂತೆ ಬಜ್ಪೆ, ಪಣಂಬೂರು, ಮುಲ್ಕಿ, ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗಿನವರೆಗೆ ನಿಷೇಧಾಜ್ಞೆ ಜಾರಿಗೆ ಮಂಗಳೂರು ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ.
ಕಾಪು ಪೇಟೆಯಲ್ಲಿ ಬಸ್ಸಿನಡಿಗೆ ಬಿದ್ದ ವ್ಯಕ್ತಿ : ಕಾಲು ಮುರಿತ ; ಆಸ್ಪತ್ರೆಗೆ ದಾಖಲು
Posted On: 28 Jul 2022, 09:53 PM
ಕಾಪು : ಬಸ್ ನಿಲ್ದಾಣದಲ್ಲಿದ್ದ ವ್ಯಕ್ತಿ ನೇರವಾಗಿ ಬಸ್ನತ್ತ ಬಂದಿದ್ದು, ಚಾಲಕ ಬ್ರೇಕ್ ಹಾಕುವಷ್ಟರಲ್ಲಿ ಹಿಂಬದಿಯ ಚಕ್ರದಡಿಗೆ ಸಿಲುಕಿದ ಘಟನೆ ಜುಲೈ 28ರ ಸಂಜೆ ಕಾಪು ಪೇಟೆಯಲ್ಲಿ ನಡೆದಿದೆ. ಗಾಯಗೊಂಡ ವ್ಯಕ್ತಿ ಶಿರ್ವ ನಿವಾಸಿ ಬಾಲಕೃಷ್ಣ ಎಂದು ಗುರುತಿಸಲಾಗಿದ್ದು ಕೂಲಿ ಕಾರ್ಮಿಕರಾಗಿದ್ದರು. ಚಕ್ರದಡಿಗೆ ಸಿಲುಕಿದ ಗಾಯಾಳುವಿನ ಕಾಲು ಸಂಪೂರ್ಣ ಮುರಿತಕ್ಕೊಳಗಾಗಿದ್ದು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
1 ರಿಂದ 19 ವರ್ಷದೊಳಗಿನವರಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ
Posted On: 28 Jul 2022, 07:08 PM
ಉಡುಪಿ : ಆಗಸ್ಟ್ 10 ರಂದು ಜಿಲ್ಲೆಯ 1 ರಿಂದ 19 ವರ್ಷದೊಳಗಿನವರಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ವಿತರಿಸಲು ಅಗತ್ಯ ಸಿದತೆಗಳನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ, ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಕುರಿತು ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾನ್ಯವಾಗಿ ಜಂತುಹುಳುಗಳು ಮಣ್ಣಿನ ಮೂಲಕ ಜನರಿಗೆ ಹರಡುವಂತಹದ್ದಾಗಿದ್ದು, ಇದರ ಸೋಂಕಿನಿಂದಾಗಿ ಮನುಷ್ಯನಲ್ಲಿ ರಕ್ತಹೀನತೆ, ಅಪೌಷ್ಠಿಕತೆ, ದುರ್ಬಲ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಉಂಟಾಗುತ್ತದೆ. ಇದರ ನಿಯಂತ್ರಣಕ್ಕಾಗಿ ಸರ್ಕಾರ 19 ವರ್ಷದೊಳಗಿನವರಿಗೆ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆ ಅಲ್ಬೆಂಡೋಜೋಲ್ ಮಾತ್ರೆಯನ್ನು ವಿತರಿಸುತ್ತಿದೆ ಎಂದರು. ಜಂತಹುಳು ಭಾದೆಯಿಂದಾಗಿ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯ ಕುಗ್ಗಿ ಕ್ರಿಯಾಶೀಲತೆಯನ್ನು ಕುಂಠಿತಗೊಳಿಸುತ್ತದೆ, ವಿಶೇಷವಾಗಿ ಮಕ್ಕಳು ಜಂತುಹುಳು ಸೋಂಕಿನಿಂದಾಗಿ ದಣಿದಂತಾಗಿ ಅಥವಾ ಅನಾರೋಗ್ಯ ಪೀಡಿತರಾಗಿ ಶಾಲೆಗೆ ಗೈರು ಆಗುವ ಸಾಧ್ಯತೆಗಳಿರುತ್ತವೆ ಎಂದರು. ಜಂತುಹುಳು ನಿವಾರಣಾ ಮಾತ್ರೆಯನ್ನು ವಿತರಿಸಲು ಅಗತ್ಯ ಪ್ರಮಾಣದ ದಾಸ್ತಾನು ಇಟ್ಟುಕೊಳ್ಳುವುದರೊಂದಿಗೆ ಅಂಗನವಾಡಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಮೂಲಕ ಅವರ ಸಮ್ಮುಖದಲ್ಲಿ ಸೇವನೆ ಮಾಡಲು ಕ್ರಮ ಕೈಗೊಳ್ಳಬೇಕು, ಸಣ್ಣ ಮಕ್ಕಳಿದ್ದಲ್ಲಿ ಅವರುಗಳಿಗೆ ಮಾತ್ರೆಯನ್ನು ಪುಡಿ ಮಾಡುವುದರೊಂದಿಗೆ ಸೇವನೆಗೆ ನೀಡಬೇಕು ಎಂದರು. ಶಾಲಾ ಕಾಲೇಜುಗಳಿಂದ ಹೊರಗುಳಿದ 19 ವರ್ಷ ವಯೋಮಿತಿಯವರಿಗೆ ಅಂಗನವಾಡಿಗಳಲ್ಲಿ ಮಾತ್ರೆಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ಗುರುತಿಸಿ ನೀಡಬೇಕು ಎಂದ ಅವರು , ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಪ್ರಚಾರ ಪಡಿಸಿ ಅರ್ಹ ವ್ಯಕ್ತಿಗಳು ಇದರ ಪ್ರಯೋಜನ ಪಡೆಯುವಂತೆ ಕ್ರಮ ವಹಿಸಬೇಕು ಎಂದರು. ಒಂದೊಮ್ಮೆ ಆಗಸ್ಟ್ 10 ರಂದು ಕಾರಣಾಂತರಗಳಿಂದ ಮಾತ್ರೆ ಪಡೆಯಲು ಸಾಧ್ಯವಿಲ್ಲದಂತಹವರಿಗೆ ಆಗಸ್ಟ್ 17 ರಂದು ವಿತರಿಸಲು ಮುಂದಾಗಬೇಕು ಈ ಜಂತುಹುಳು ನಿವಾರಣಾ ಕಾರ್ಯಕ್ರಮದ ಯಶಸ್ವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ, ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳು ಸಹಕರಿಸಬೇಕೆಂದು ಸೂಚನೆ ನೀಡಿದರು. ಆಗಸ್ಟ್ 1 ರಿಂದ 15 ರ ವರೆಗೆ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳುವುದರ ಜೊತೆಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು 5 ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಓಆರ್ಎಸ್ ಪೊಟ್ಟಣಗಳ್ನು ನೀಡುವುದರ ಜೊತೆಗೆ ಅವುಗಳನ್ನು ತಯಾರಿಸುವ ವಿಧಾನವನ್ನೂ ಸಹ ತಿಳಿಸಲಿದ್ದಾರೆ ಎಂದರು. ಸ್ವಚ್ಛತೆಯನ್ನು ಕಾಪಾಡಿದ್ದಲ್ಲಿ ಮಾತ್ರ ಅತಿಸಾರ ಭೇಧಿಯಿಂದ ದೂರ ಉಳಿಯಲು ಸಾಧ್ಯ ಈ ಹಿನ್ನಲೆ ಶಾಲಾ ಮಕ್ಕಳಿಗೆ ಕೈಗಳನ್ನು ಸ್ವಚ್ಛಗೊಳಿಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಗುವುದು ಎಂದ ಅವರು ಪ್ರತಿಯೊಬ್ಬ ಸಾರ್ವಜನಿಕರೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಡಿಹೆಚ್ಓ ಡಾ.ನಾಗಭೂಷಣ ಉಡುಪ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಎಂ.ಜಿ .ರಾಮ ಹಾಗೂ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
ಪಡುಬಿದ್ರಿಯಲ್ಲಿ ಅನ್ಯಕೋಮಿನ ಯುವಕನಿಂದ ಬಾಲಕಿಗೆ ಲೈಂಗಿಕ ದೌರ್ಜನ್ಯ : ಪೋಕ್ಸೋ ಪ್ರಕರಣ ದಾಖಲು
Posted On: 28 Jul 2022, 06:40 PM
ಪಡುಬಿದ್ರಿ : ಅಪ್ರಾಪ್ತ ಬಾಲಕಿಯೋರ್ವಳನ್ನು ಸಾಮಾಜಿಕ ಜಾಲತಾಣದಲ್ಲಿ ಪುಸಲಾಯಿಸಿ ಆಕೆಗೆ ಲೈಂಗಿಕ ದೌರ್ಜನ್ಯ ನಡೆಸಿದ ಪಡುಬಿದ್ರಿ ಮೂಲದ ಅನ್ಯ ಧರ್ಮದ ಯುವಕನ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿ ಹೆಜಮಾಡಿ ಆಲಡೆ ಬಳಿಯ ಪ್ಲ್ಯಾಟ್ ನಿವಾಸಿ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅಪ್ರಾಪ್ತ ಬಾಲಕಿಗೆ ಜ್ಯೂಸ್, ಬಟ್ಟೆ, ತಿಂಡಿಯ ಆಶೆ ತೋರಿಸಿ, ಹೆಜಮಾಡಿ ಮಾಜಿ ಗ್ರಾ.ಪಂ. ಸದಸ್ಯನ ಕಾರನ್ನು ಬಳಸಿಕೊಂಡು, ಆಕೆಯನ್ನು ಪಡುಬಿದ್ರಿಯ ಅಬ್ಬೇಡಿ ಪ್ರದೇಶದ ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ದೌರ್ಜನ್ಯ ನಡೆಸಿದ್ದು, ಇದೀಗ ಅಟೋ ರಿಕ್ಷಾವೊಂದರಲ್ಲಿ ಆಕೆಯನ್ನು ಕುಳ್ಳಿರಿಸಿಕೊಂಡು ಕಂಚಿನಡ್ಕ ಪ್ರದೇಶದ ಇನ್ನೋರ್ವ ಅಪ್ರಾಪ್ತ ಬಾಲಕನನ್ನು ಸೇರಿಸಿಕೊಂಡು ಹೆಜಮಾಡಿಗೆ ಹೋಗುತ್ತಿದ್ದ ವೇಳೆ ಟೋಲ್ ಸಿಬ್ಬಂದಿಗಳು ಗಮನಿಸಿ ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೋಲಿಸರು ಅವರ ಬೆನ್ನಟ್ಟಿ ಆತ ವಾಸವಿರುವ ಪ್ಲ್ಯಾಟ್ ಗೆ ಹೋದಾಗ ಆಕೆಯನ್ನು ಆ ಕಟ್ಟಡದ ಮೂರನೇ ಮಹಡಿಯ ಮೇಲಿನ ನೀರಿನ ಟ್ಯಾಂಕ್ ಎಡೆಯಲ್ಲಿ ಬಚ್ಚಿಡಲಾಗಿತ್ತು. ಅಲ್ಲಿಂದ ಆಕೆಯನ್ನು ರಕ್ಷಿಸಿದ ಪೊಲೀಸರು ಠಾಣೆಗೆ ಕರೆತಂದು ವಿಚಾರಿಸಿದಾಗ ಸತ್ಯ ಬಯಲಾಗಿದೆ. ಈ ವಿಚಾರ ತಿಳಿಯುತ್ತಿದಂತೆ ಆಕ್ರೋಶಗೊಂಡ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆಯ ಬಳಿ ಸೇರಿ ಆತನನ್ನು ಬಂಧಿಸಿ ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದಾಗ ಪೊಲೀಸರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಸ್ಥಳಕ್ಕೆ ಆಗಮಿಸಿದ ಕಾಪು ವೃತ್ತ ನಿರೀಕ್ಷಕ ಪೂವಯ್ಯ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ, ಕಾನೂನಿನ ಅಡ್ಡಿಯಲ್ಲಿ ಯಾವ ರೀತಿಯ ಪ್ರಕರಣ ದಾಖಲಿಸಲು ಅವಕಾಶ ಇದೆಯೋ ಅದನ್ನು ಮಾಡಿಯೇ ಮಾಡುತ್ತೇವೆ ಎಂಬುದಾಗಿ ಭರವಸೆ ವ್ಯಕ್ತ ಪಡಿಸಿದಾಗ ಕಾರ್ಯಕರ್ತರು ತೆರಳಿದ್ದಾರೆ. ಪೊಲೀಸರು ಆಕೆಯ ಮನೆಮಂದಿಯನ್ನು ಕರೆಯಿಸಿ ಬಳಿಕ ಆಕೆ ನೀಡಿದ ದೂರಿನಂತೆ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಅಪ್ರಾಪ್ತ ಬಾಲಕನೊಂದಿಗೆ ಕಾರ್ಕಳ ರಸ್ತೆಯಲ್ಲಿ ಅಟೋ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಇಬ್ಬರನ್ನೂ ಅಟೋ ರಿಕ್ಷಾ ಸಹಿತ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಲಾದ ಕಾರನ್ನು ಕೂಡಾ ಸೀಜ್ ಮಾಡಲಾಗಿದೆ.
ಮೂಳೂರು ಹಿಂದು ರಕ್ಷಾ ವೆಲ್ಫೇರ್ ಟ್ರಸ್ಟ್ ವತಿಯಿಂದ ಕಷಾಯ ವಿತರಣೆ ; ಸರ್ವಧರ್ಮೀಯರ ಸಹಿತ ಸುಮಾರು 1,200ಕ್ಕೂ ಅಧಿಕ ಮಂದಿ ಸ್ವೀಕಾರ
Posted On: 28 Jul 2022, 06:27 PM
ಕಾಪು : ಮೂಳೂರು ಹಿಂದು ರಕ್ಷಾ ವೆಲ್ ಫೇರ್ ಟ್ರಸ್ಟ್ ನ ವತಿಯಿಂದ ಆಟಿ ಅಮಾವಾಸ್ಯೆಯ ಪ್ರಯುಕ್ತ ಜುಲೈ 28 ರಂದು ಹಾಲೆ ಮರದ ತೊಗಟೆಯ ಕಷಾಯವನ್ನು ಸಿದ್ಧಪಡಿಸಿ ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಲಾಯಿತು. ಹಿಂದು ರಕ್ಷಾ ವೆಲ್ಫೇರ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ. ಪಿ. ಮಾತನಾಡಿ, ತುಳುನಾಡ ಸಂಸ್ಕೃತಿಯಲ್ಲಿ ಆಟಿ ಅಮಾವಾಸ್ಯೆ ಆಚರಣೆಯು ಧಾರ್ಮಿಕವಾಗಿ, ವೈಜ್ಞಾನಿಕವಾಗಿ ಅತ್ಯಂತ ಮಹತ್ವವನ್ನು ಪಡೆದಿದೆ. ಆಟಿ ಅಮಾವಾಸ್ಯೆಯ ದಿನ ಹಾಲೆ ಮರದ ತೊಗಟೆಯಲ್ಲಿ ಔಷಧೀಯ ಗುಣಧರ್ಮ ಹೆಚ್ಚಾಗಿರುವದನ್ನು ಸಂಶೋಧನೆಯ ಮೂಲಕ ಧೃಢಪಡಿಸಿದೆ. ಈ ಧಾರ್ಮಿಕ ಆಚರಣೆಯನ್ನು ನಿರಂತರವಾಗಿರಿಸುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಿಂದ ಆಟಿ ಕಷಾಯ ವಿತರಿಸಿಕೊಂಡು ಬರಲಾಗುತ್ತಿದೆ ಎಂದರು. ಮೂಳೂರು ಪಡು ಹಳೆ ಭಜನಾ ಮಂದಿರ ಮತ್ತು ಮಹಾಲಕ್ಷ್ಮೀ ನಗರದ ಬಳಿ ಬೆಳಿಗ್ಗೆ 6ರಿಂದ ಕಷಾಯದ ವಿತರಣೆ ಮಾಡಲಾಗಿದ್ದು, ಸರ್ವಧರ್ಮೀಯರ ಸಹಿತ ಸುಮಾರು 1,200ಕ್ಕೂ ಅಧಿಕ ಮಂದಿ ಹಾಳೆ ಮರದ ತೊಗಟೆಯಿಂದ ತಯಾರಿಸಿದ ಮದ್ದನ್ನು ಸ್ವೀಕರಿಸಿದರು. ಕೈಪುಂಜಾಲು, ಕಾಪು, ಪೊಲಿಪು, ಎರ್ಮಾಳು, ಉಚ್ಚಿಲ, ಪಣಿಯೂರು, ಮೂಳೂರು ಮತ್ತಿತರ ಪ್ರದೇಶಗಳಿಂದ ಆಗಮಿಸಿ ಮದ್ದು ಪಡೆದುಕೊಂಡಿದ್ದಾರೆ. ಸ್ಥಳೀಯರಾದ ಸಂಜೀವ ಆರ್ ಅಮೀನ್ ಸಹಕಾರದೊಂದಿಗೆ ಟ್ರಸ್ಟ್ ನ ಸದಸ್ಯರು ಜೊತೆ ಸೇರಿ ಹಾಲೆ ಮರದ ಕೆತ್ತೆಯಿಂದ ಕಷಾಯವನ್ನು ಸಿದ್ಧಪಡಿಸಿದ್ದರು. ಮೂಳೂರು ಹಿಂದು ರಕ್ಷಾ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಚಂದ್ರಕಾಂತ್ ಕೆ. ಮೆಂಡನ್, ಗೌರವ ಸಲಹೆಗಾರ ಅಶೋಕ್ ಪುತ್ರನ್, ಉಪಾಧ್ಯಕ್ಷ ಪ್ರದೀಪ್ ಎಸ್. ಪುತ್ರನ್, ದಿನೇಶ್ ಪಾನಾರ, ಸಂಜೀವ ಅಮೀನ್, ಸುಖೇಶ್ ಡಿ,. ಪ್ರತೀಕ್ ಸುವರ್ಣ, ನಾಗೇಶ್, ಮಧುಕಿರಣ್ ಶ್ರೀಯಾನ್, , ಸುನಿಲ್ ಕರ್ಕೇರ, ಪತ್ರಕರ್ತರಾದ ಬಾಲಕೃಷ್ಣ ಪೂಜಾರಿ, ವಿಜಯ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಪಲಿಮಾರು : ಹೊಯಿಗೆ ಫ್ರೆಂಡ್ಸ್ ವತಿಯಿಂದ ಆಟಿ ಅಮವಾಸ್ಯೆಯ ಪ್ರಯುಕ್ತ ಕಷಾಯ ವಿತರಣೆ
Posted On: 28 Jul 2022, 06:10 PM
ಪಲಿಮಾರು : ಹೊಯಿಗೆ ಫ್ರೆಂಡ್ಸ್ ಹೊಯಿಗೆ (ರಿ.) ಪಲಿಮಾರು , ಸಂಸ್ಥೆಯ ವತಿಯಿಂದ ಆಟಿ ಅಮವಾಸ್ಯೆಯ ಪ್ರಯುಕ್ತ ಔಷಧೀಯ ಕಷಾಯ ವಿತರಿಸಲಾಯಿತು. ಪಲಿಮಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕರಾದ ಶ್ರೀ ಶ್ರೀನಿವಾಸ ಉಡುಪ, ಶರತ್ ಉಡುಪ, ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಜೆ ಸುವರ್ಣ , ಉಪಾಧ್ಯಕ್ಷರಾದ ರಿತೇಶ್ ದೇವಾಡಿಗ, ಕಾರ್ಯದರ್ಶಿ ಸತೀಶ ಕುಮಾರ್, ಶ್ರೀನಿತ್ ಸಂತೋಷ್ ದೇವಾಡಿಗ , ಲಕ್ಷ್ಮಣ ಪೂಜಾರಿ, ಶ್ರೀಜಿತ್, ಪ್ರಜ್ಞೇಶ್ ಉಪಸ್ಥಿತರಿದ್ದರು.
ತುಳುಕೂಟ ಬೆಂಗಳೂರಿನ ವತಿಯಿಂದ ಕಷಾಯ ಮತ್ತು ಮೆಂತೆ ಗಂಜಿ ವಿತರಣೆ
Posted On: 28 Jul 2022, 06:04 PM
ಉಡುಪಿ : ತುಳುಕೂಟ ಬೆಂಗಳೂರಿನ ವತಿಯಿಂದ ಪ್ರತಿ ವರುಷ ಬೆಂಗಳೂರಿನಲ್ಲಿ ವಾಸವಾಗಿರುವ. ತುಳುನಾಡಿನ ಜನರಿಗೆ ಅನಾದಿಕಾಲದಿಂದಲೂ ಆಚರಣೆಯಲ್ಲಿರುವ ಆಷಾಢ ಮಾಸದಲ್ಲಿ ಉಪಯೋಗಿಸುವ ಕಷಾಯ ಮತ್ತು ಮೆಂತೆ ಗಂಜಿ ವಿತರಣಾ ಕಾರ್ಯಕ್ರಮವು ಶೇಷಾದ್ರಿಪುರದಲ್ಲಿರುವ ಶ್ರೀ ರಾಘವೇಂದ್ರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತಳುಕೂಟ ಬೆಂಗಳೂರಿನ ಅಧ್ಯಕ್ಷರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಉಪಾಧ್ಯಕ್ಷ ರಾದ ಅಜಿತ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಸುಂದರ್ ರಾಜ್ ರೈ, ಕೋಶಾಧಿಕಾರಿ ಮಾಳ ಹರ್ಷೇಂದ್ರ ಜೈನ್, ಜೊತೆ ಕಾರ್ಯದರ್ಶಿ ಗಣೇಶ್ ಗುಜಾರಾನ್, ಮಹಿಳಾ ಸಮಿತಿಯ ಉಪಾಧ್ಯಕ್ಷೆ ಸೇವಾಂತಿ ಶೆಟ್ಟಿ, ಸುವರ್ಣ ಮಹೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಕೆ.ವಿ ರಾಜೇಂದ್ರ ಕುಮಾರ್, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ಕಾಂತಿ ಶೆಟ್ಟಿ, ಉಮೇಶ್ ಕುಮಾರ್ ರೈ, ಸುಧಾ ಪುತ್ತೂರಾಯ, ಪ್ರದೀಪ್, ಮೆಂಡೋಷ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಬಂಟರ ಸಂಘ ಬೆಂಗಳೂರು, ತುಳುವೆರೆಂಕುಲು ಬೆಂಗಳೂರು, ತುಳುವೆರ ಚಾವಾಡಿ, ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಮತ್ತು ಬೆಂಗಳೂರಿನ ಇನ್ನಿತರ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತಿ ಇದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ವಿದ್ಯಾರ್ಥಿಗಳಿಗೆ 500 ಗಿಡ ವಿತರಣೆ
Posted On: 28 Jul 2022, 05:53 PM
ಉಡುಪಿ : ವನಮಹೋತ್ಸವದಂತಹ ಕಾರ್ಯಕ್ರಮಗಳು ಕಾಟಾಚಾರಕ್ಕೆ ನಡೆಯದೆ, ನಾವು ನೆಡುವ ಪ್ರತಿ ಗಿಡವು ವೃದ್ಧಿಯಾಗುವಂತೆ ನೋಡಬೇಕು. ಪ್ರಕೃತಿಯಲ್ಲಿ ನಾವು ನೆಟ್ಟ ಗಿಡ ಮರವಾಗಿ ಬೆಳೆದಾಗ ಅದರಿಂದ ನಮಗೂ ನೆಮ್ಮದಿ ಸಿಗುತ್ತದೆ. ವನಮಹೋತ್ಸವದಂತಹ ಕಾರ್ಯಕ್ರಮಗಳು ಪವಿತ್ರ ಕಾರ್ಯಕ್ರಮವೆಂದು ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅ. ವಂ. ಫಾ. ಸ್ಟ್ಯಾನಿ ಬಿ ಲೋಬೋ ತಿಳಿಸಿದರು. ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ನೇತೃತ್ವದಲ್ಲಿ ಉದ್ಯಾವರ ಗ್ರಾಮದ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ 500 ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಗಿಡ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಂತ ಫ್ರಾನ್ಸಿಸ್ ಝೇವಿಯರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವನಮಹೋತ್ಸವ ಮತ್ತು ಗಿಡ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ, ಕಾರ್ಯಕ್ರಮದ ಪ್ರಾಯೋಜಕರು ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರು ಆಗಿರುವ ಯೋಗೀಶ್ ಕೋಟ್ಯಾನ್ ಮಾತನಾಡುತ್ತಾ, ತಾಪಮಾನ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಪರಿಸರವನ್ನು ಉಳಿಸಬಹುದು. ಮಾತ್ರವಲ್ಲದೆ ಕಾಲಕಾಲಕ್ಕೆ ಬೇಕಾದ ಗಾಳಿ ಮಳೆ ನಮಗೆ ದೊರಕುತ್ತದೆ. ವಿದ್ಯಾರ್ಥಿಗಳು ಇಂದು ಪಡಕೊಂಡ ಗಿಡಗಳನ್ನು ತಮ್ಮ ಮನೆಯ ಆವರಣದಲ್ಲಿ ಬೆಳೆಸಿ ಉತ್ತಮ ರೀತಿಯಲ್ಲಿ ಪೋಷಣೆ ಮಾಡಿ. ಮುಂದಿನ ದಿನಗಳಲ್ಲಿ ಒಳ್ಳೆಯ ಗಿಡ ಬೆಳೆಸಿದವರೆಗೆ ಪ್ರೋತ್ಸಾಹ ಧನ ನೀಡುತ್ತೇನೆ ಎಂದು ತಿಳಿಸಿದರು. ಸಂತ ಫ್ರಾನ್ಸಿಸ್ ಝೇವಿಯರ್ ಕನ್ನಡ ಪ್ರೌಢಶಾಲೆ, ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಸಂತ ಫ್ರಾನ್ಸಿಸ್ ಝೇವಿಯರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಈ ಸಂದರ್ಭದಲ್ಲಿ ಗಿಡ ವಿತರಣೆ ನಡೆಸಲಾಯಿತು. ವಿವಿಧ ಶಾಲಾ ಕಾಲೇಜುಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಗಿಡ ನೆಡುವುದರ ಮೂಲಕ ಮತ್ತು ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ಗಿಡ ನೀಡುವುದರ ಮೂಲಕ ವಾಗಿ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ವಲಯ ಉಡುಪಿ ಇದರ ಅರಣ್ಯ ಪ್ರೇರಕರಾಗಿರುವ ಪ್ರತ್ಯಕ್ಷ್ ಕಾಮತ್, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಲಯನ್ಸ್ ಜಿಲ್ಲಾ ಡೈರೆಕ್ಟರಿ ಎಡಿಟರ್ ಸ್ವಪ್ನಾ ಸುರೇಶ್, ವಲಯ ಎರಡರ ವಲಯಾಧ್ಯಕ್ಷ ಜೋನ್ ಫೆರ್ನಾಂಡಿಸ್, ಲಯನ್ಸ್ ಕ್ಲಬ್ ಸಂತೆಕಟ್ಟೆ ಅಧ್ಯಕ್ಷ ಪ್ರವೀಣ್ ಕರ್ವಾಲೋ, ಕ್ಯಾಬಿನೆಟ್ ಸದಸ್ಯ ಗೊಡ್ಫ್ರಿ ಡಿಸೋಜಾ, ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ವಿಜಯ ಕುಮಾರ್ ಉದ್ಯಾವರ, ಶಾಲಾ ಕಾಲೇಜು ಮುಖ್ಯೋಪಾಧ್ಯಾಯರು ಮತ್ತು ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಅನಿಲ್ ಲೋಬೊ ಸ್ವಾಗತಿಸಿದರೆ, ಕೋಶಾಧಿಕಾರಿ ರೋಶನ್ ಕ್ರಾಸ್ತಾ ಧನ್ಯವಾದ ಸಮರ್ಪಿಸಿದರು. ಕಾರ್ಯದರ್ಶಿ ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.
ಪ್ರವೀಣ್ ನೆಟ್ಟಾರು ಹತ್ಯೆ - ಉಡುಪಿ ಜಿಲ್ಲಾ ಜಾತ್ಯತೀತ ಜನತಾದಳ ಖಂಡನೆ
Posted On: 28 Jul 2022, 05:32 PM
ಕಾಪು : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಭಾಗದಲ್ಲಿ ಪ್ರವೀಣ್ ನೆಟ್ಟಾರು ಎಂಬ ಯುವಕನ ಕೊಲೆಯಾಗಿದೆ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಕಳೆದ ಹಲವಾರು ವರ್ಷಗಳಿಂದ ತಮ್ಮ ನಾಯಕರ ಮಾತುಗಳನ್ನು ಕೇಳಿ ಉದ್ರೇಕಗೊಂಡು ಕೆಲವು ಯುವಕರು ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಯಾವುದೇ ರಾಜಕಾರಣಿಗಳ ಮಕ್ಕಳು ಅಥವಾ ಶ್ರೀಮಂತರ ಮಕ್ಕಳು ಸಾಯುತ್ತಿಲ್ಲ ಬದಲಾಗಿ ಹಿಂದುಳಿದ ವರ್ಗದ ಯುವಕರು, ಬಡವರ ಮನೆಯ ಮಕ್ಕಳು ಈ ಕೋಮುಗಲಭೆಯ ಕಾರಣದಿಂದಾಗಿ ಸಾಯುತ್ತಿದ್ದಾರೆ ಎಂದು ಉಡುಪಿ ಜಿಲ್ಲೆಯ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿ ಪ್ರಕಟನೆಯ ಮೂಲಕ ತಿಳಿಸಿದ್ದಾರೆ. ಬಿಜೆಪಿ ನಾಯಕರಿಗೆ ತಮ್ಮ ಕಾರ್ಯಕರ್ತರನ್ನೇ ರಕ್ಷಣೆ ಮಾಡಲಿಕ್ಕೆ ಆಗ್ತಾ ಇಲ್ಲ. ಇನ್ನು ನಮ್ಮ ರಾಜ್ಯದ ಜನ ಸಾಮಾನ್ಯರ ರಕ್ಷಣೆ ಇವರು ಹೇಗೆ ಮಾಡಲು ಸಾಧ್ಯ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತುಹೋಗಿದೆ, ಬಿಜೆಪಿಯವರಿಗೆ ಅಧಿಕಾರ ಅನುಭವಿಸಲಿಕ್ಕೆ ಮಾತ್ರ ಗೊತ್ತಿದೆ, ಚಲಾಯಿಸಲು ಗೊತ್ತಿಲ್ಲ. ನಾನು ಎಲ್ಲಾ ಸಮುದಾಯದ ಯುವಕರಿಗೆ ಮನವಿಯನ್ನು ಮಾಡುತ್ತೇನೆ ನಿಮ್ಮ ನಿಮ್ಮ ನಾಯಕರ ಉದ್ರೇಕದ ಮಾತನ್ನು ಕೇಳಿ ನೀವು ಉದ್ರೇಕಗೊಂಡು ನಿಮ್ಮ ಜೀವವನ್ನು ಕಳೆದುಕೊಳ್ಳಬೇಡಿ, ಇನ್ನಷ್ಟು ವರ್ಷ ಬದುಕಿ ಬಾಳಬೇಕಾದ ಜೀವ ನಿಮ್ಮದು, ನಿಮ್ಮ ಜೀವನವನ್ನು ಕಟ್ಟಿಕೊಳ್ಳಿ ಎಂದು ಮನವಿಯನ್ನು ಮಾಡುತ್ತೇನೆ. ಕೊಲೆಯನ್ನು ಮಾಡಿದಂತಹ ಪಾತಕಿಗಳಿಗೆ ಉಗ್ರವಾಗಿ ಶಿಕ್ಷೆಯನ್ನು ನೀಡಬೇಕು, ಅವರಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಪಕ್ಷದ ಕಾರ್ಯಕರ್ತರಿಗೆ ರಕ್ಷಣೆಕೊಡದ ಬಿಜೆಪಿ ಯಾವ ಪುರುಷಾರ್ಥಕ್ಕೆ ಜನೋತ್ಸವ ಮಾಡುತ್ತೆ ? - ಕೃಷ್ಣಮೂರ್ತಿ ಆಚಾರ್ಯ
Posted On: 28 Jul 2022, 05:18 PM
ಉಡುಪಿ: ಬೆಳ್ಳಾರೆಯ ಪ್ರವೀಣ್ ನೆಟ್ಟಾರೆ ಹತ್ಯೆ ಪ್ರಕರಣ ಖಂಡನೀಯ. ಕರ್ನಾಟಕದ ಜನತೆಗೆ ಹಾಗೂ ಸ್ವತಃ ತಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆನೇ ರಕ್ಷಣೆ ಕೊಡುವ ಸಾಮರ್ಥ್ಯ ಇಲ್ಲದ ಬಿಜೆಪಿ ಸರ್ಕಾರ ಯಾವ ಮುಖ ಇಟ್ಕೊಂಡು ಜನೋತ್ಸವ ಮಾಡುತ್ತೆ..? ಈ ಬಿಜೆಪಿ ಸರ್ಕಾರ ಬಂದ ನಂತರ ದಿನದಿಂದ ದಿನ ಹಿಂದೂ ಮುಸ್ಲಿಂ ಸಹೋದರರುಗಳ ಹತ್ಯೆ ಮತ್ತಷ್ಟು ನಿರಂತರವಾಗಿ ಜಾಸ್ತಿ ಆಗ್ತಾನೆ ಇದೆ. ಹತ್ಯೆಯಾದ ಕುಟುಂಬಗಳಿಗೆ ಇನ್ನೂ ಸರಿಯಾಗಿ ನ್ಯಾಯ ಸಿಕ್ಕಿಲ್ಲ ಹೀಗಿರುವಾಗ ಬಿಜೆಪಿ ಯಾವ ಮುಖದಲ್ಲಿ ಜನೋತ್ಸವ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿಯ ಆಚಾರ್ಯ ಪ್ರಶ್ನಿಸಿದ್ದಾರೆ. ಒಂದು ಕಡೆ ಬಿಜೆಪಿ ಸರ್ಕಾರ ಕಾಂಟ್ರ್ಯಾಕ್ಟರುಗಳಿಂದ 40% ಕಮಿಷನ್ ಭ್ರಷ್ಟಾಚಾರ ಮಾಡುತ್ತಿದೆ. ಮತ್ತೊಂದು ಕಡೆ ಜನರಿಗೆ ನಿರಂತರವಾಗಿ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ, ಜಿಎಸ್ಟಿ ಏರಿಕೆ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಇಷ್ಟೆಲ್ಲ ಜನರಿಗೆ ತೊಂದರೆ ಕೊಟ್ಟು ಯಾವ ಮುಖ ಇಟ್ಟುಕೊಂಡು ಜನೋತ್ಸವ ಮಾಡುತ್ತಾರೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿಯೂ ಬಿಜೆಪಿ ಸರಕಾರ ವಿಫಲವಾಗಿದೆ, ಸರ್ಕಾರ ಬರಿ ಕಠಿಣ ಕ್ರಮ ಕಠಿಣ ಕ್ರಮ ಎನ್ನುತ್ತಾ ಬರಿ ಮಾತಿಗೆ ಮಾತ್ರ ಸೀಮಿತವಾಗಿದೆ ಹೊರತು ದುಷ್ಕರ್ಮಿಗಳ ದಾಳಿ ಮಾತ್ರ ಕಡಿಮೆ ಆಗಿಲ್ಲ. ಮುಂದುವರಿತಾನೆ ಇದೆ ಅಮಾಯಕರು ಮತ್ತಷ್ಟು ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಯಾವ ಮುಖ ಇಟ್ಕೊಂಡು ಜನೋತ್ಸವ ಮಾಡಲು ಹೊರಟಿದೆ. ಮೊದಲು ಅಮಾಯಕರ ಜನರ ರಕ್ಷಣೆಗೆ ಮುಂದಾಗಲಿ ದಿನಬಳಕೆ ವಸ್ತುಗಳ ನಿರಂತರ ಬೆಲೆ ಏರಿಕೆ ಕಡಿಮೆ ಮಾಡಲಿ ಜಿ ಎಸ್ ಟಿ ತೆರಿಗೆ ತಕ್ಷಣ ನಿಲ್ಲಿಸಿ. ಅದೇ ರೀತಿ ಪ್ರವೀಣ್ ನೆಟ್ಟಾರೆ ಕೊಲೆ ಖಂಡನೀಯ ಪ್ರಕರಣದ ಆರೋಪಿಗಳನ್ನು ಯಾವುದೇ ಜಾತಿ ಧರ್ಮ ಲೆಕ್ಕಿಸದೆ ತಕ್ಷಣ ಬಂಧಿಸಿ,ಕಾನೂನಿನ ಪ್ರಕಾರ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕಾಗಿದೆ ಅದೇ ರೀತಿ ಇತ್ತೀಚೆಗೆ ಬೆಳ್ಳಾರೆ ಪರಿಸರದಲ್ಲಿ ಮಸೂದ್ ಕೊಲೆ ಸಂಭವಿಸಿದೆ ಇದು ಅತ್ಯಂತ ಖಂಡನೀಯ. ಚುನಾವಣೆ ಸಂದರ್ಭ ಹಿಂದು ಮುಸ್ಲಿಮರ ಹತ್ಯೆಯನ್ನು ಮುಂದೆ ಇಟ್ಟು ಕೊಂಡು ರಾಜಕೀಯ ಬೇಳೆ ಬೇಯಿಸುವುದು ಬಿಜೆಪಿಗೆ ಚಾಲಿಯಾಗಿ ಹೋಗಿದೆ. ಪ್ರಕರಣದ ಆರೋಪಿಗಳು ಯಾರೇ ಆದರೂ ಪಕ್ಷಾತೀತವಾಗಿ ಯಾವುದೇ ಜಾತಿ ಧರ್ಮ ನೋಡದೆ ಸೂಕ್ತ ತನಿಖೆ ನಡೆಸಿ ಅವರಿಗೆ ಶಿಕ್ಷೆ ಆಗಬೇಕು ಇಂತಹ ಘಟನೆಗಳು ಪದೇ ಪದೇ ಮುಂದೆ ಯಾವತ್ತೂ ಆಗದಂತೆ ಕ್ರಮ ವಹಿಸಬೇಕೆಂದು ಮಾಧ್ಯಮದ ಮೂಲಕ ಸರಕಾರವನ್ನು ಆಗ್ರಹಿಸುತ್ತೇನೆ ಎಂದು ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಉಡುಪಿ ವಿಧಾನ ಸಭಾ ಕ್ಷೇತ್ರ ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.
