Updated News From Kaup

ಅಜ್ಜಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ ಅಜ್ಜಮ್ಮ ಟ್ರೋಫಿ - ಸಮಾರೋಪ ಸಮಾರಂಭ

Thumbnail
Posted On: 21 Apr 2022, 10:53 PM

ಉಡುಪಿ : ಅಜ್ಜಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಇದರ ಅಜ್ಜಮ್ಮ ಟ್ರೋಫಿಯ ಸಮಾರೋಪ ಸಮಾರಂಭವು ಬೀಡಿನಗುಡ್ಡೆ ಮಹಾತ್ಮಗಾಂಧಿ ಮೈದಾನದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಂಜು ಕೊಳ, ರಿಕೇಶ್ ಪಾಲನ್ ಕಡೆಕಾರ್, ಕೃಷ್ಣಮೂರ್ತಿ ಆಚಾರ್ಯ, ಜೀವನ್ ಪಾಳೆಕಟ್ಟೆ, ಅರವಿಂದ್ ಕೆಪಿ, ಗಂಗಾಧರ್ ಸುವರ್ಣ, ಸತೀಶ್ ಸಾಲಿಯಾನ್, ಸಬಿತಾ ಕೊರಗ ಪಾಲ್ಗೊಂಡರು. ಅಜ್ಜಮ್ಮ ಟ್ರೋಫಿಯ ಪ್ರಥಮ ಬಹುಮಾನ ಕರಾವಳಿ ಫ್ರೆಂಡ್ಸ್ ಮಲ್ಪೆ, ದ್ವಿತೀಯ ಬಹುಮಾನ ಜೈ ಮಾರುತಿ ಕಟಪಾಡಿ ಪಡೆದುಕೊಂಡರು. ರವಿ ಕಡಿಯಾಳಿ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ನ ಅಧ್ಯಕ್ಷರಾದ ಸುಹಾನ್ ಕಾಂಚನ್ ವಂದಿಸಿದರು.

ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನ ಪಣಿಯೂರು : ಶ್ರೀ ಧರ್ಮ ಜಾರಂದಾಯ ಹಾಗೂ ಪರಿವಾರ ದೈವಗಳ ವಾರ್ಷಿಕ ಸಿರಿ-ಸಿಂಗಾರದ ನೇಮ

Thumbnail
Posted On: 21 Apr 2022, 05:35 AM

ಕಾಪು : ಇಲ್ಲಿನ ಪಣಿಯೂರು ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದಲ್ಲಿ ಶ್ರೀ ಧರ್ಮ ಜಾರಂದಾಯ ಹಾಗೂ ಪರಿವಾರ ದೈವಗಳ ವಾರ್ಷಿಕ ಸಿರಿ-ಸಿಂಗಾರದ ನೇಮವು ಏಪ್ರಿಲ್ 21ರಂದು ಜರಗಲಿದೆ. ಬೆಳಿಗ್ಗೆ ಗಂಟೆ 12ರಿಂದ ಚಪ್ಪರ ಏರುವುದು, ಸಂಜೆ 5:30ಕ್ಕೆ ಭಂಡಾರ ಇಳಿಯುವುದು, ರಾತ್ರಿ ಗಂಟೆ 7: 30ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 9 ರಿಂದ ಸಿರಿ-ಸಿಂಗಾರದ ನೇಮ, ರಾತ್ರಿ ಗಂಟೆ 1ರಿಂದ ಶ್ರೀ ಧರ್ಮ ಜಾರಂದಾಯ ದೈವದ ಬಂಡಿ ಸವಾರಿ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಪು‌ ಮಂಡಲ ಬಿಜೆಪಿ ಯುವಮೋರ್ಚದಿಂದ ಯೋಧರ ಸನ್ಮಾನ

Thumbnail
Posted On: 21 Apr 2022, 05:17 AM

ಕಾಪು : ಸ್ವಾತಂತ್ರ್ಯದ ಅಮ್ರತ ಮಹೋತ್ಸವದ ನಿಮಿತ್ತ ಕಾಪು‌ ಮಂಡಲ ಬಿಜೆಪಿ ಯುವಮೋರ್ಚ ವತಿಯಿಂದ ಏಪ್ರಿಲ್ 19ರಂದು ಅಧ್ಯಕ್ಷರಾದ ಸಚಿನ್ ಸುವರ್ಣ ಇವರ ನೇತೃತ್ವದಲ್ಲಿ ಯೋಧರನ್ನು ಸನ್ಮಾನಿಸುವ ಕಾರ್ಯಕ್ರಮ‌ ಜರಗಿತು. ಕಾಪು ಪುರಸಭಾ ವ್ಯಾಪ್ತಿಯಲ್ಲಿ 4 ಜನ ಯೋಧರನ್ನು ಗುರುತಿಸಿ ಅವರ ಮನೆಗೆ ತೆರಳಿ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಕಾಪು ಮಂಡಲ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಕಾಪು‌ ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಬಿಜೆಪಿ ಕಾಪು ಕ್ಷೇತ್ರ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಮಂಡಲ ಕಾರ್ಯದರ್ಶಿ ರಾಜೇಶ್ ಕುಂದರ್, ಪುರಸಭಾ ಸದಸ್ಯರುಗಳಾದ ಅನಿಲ್ ಕುಮಾರ್, ಅರುಣ್ ಶೆಟ್ಟಿ, ಯುವಮೋರ್ಚ ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳಾದ ಪ್ರವೀಣ್ ಕುಮಾರ್, ಯತೀಶ್ ಕೋಟ್ಯನ್, ಸೋನು ಪಾಂಗಳ,ಉದಯ್, ರಾಜ್, ವಿನಿಶ್, ಧೀರೇಶ್ ಮತ್ತಿತರರು ಉಪಸ್ಥಿತರಿದ್ದರು.

ಮೇ 1 : ಉಡುಪಿಯ ಕೃಷ್ಣ ಮಠದ ರಾಜ್ಯಾಂಗಣದಲ್ಲಿ ರಾಜ್ಯ ಮಟ್ಟದ ಭಜನಾ ಕಮ್ಮಟ - ಗುರುವಂದನೆ

Thumbnail
Posted On: 21 Apr 2022, 05:07 AM

ಉಡುಪಿ : ಶ್ರೀ ಕ್ರಷ್ಣ ಮಠ ಪರ್ಯಾಯ ಶ್ರೀ ಕ್ರಷ್ಣಾಪುರ ಮಠ ಉಡುಪಿ, ಇದರ ಆಶ್ರಯದಲ್ಲಿ, ಮೋಹಿನಿ ಭಟ್ ಮಂಜೇಶ್ವರ ಮತ್ತು ಮಾಯಾ ಕಾಮತ್ ಈಶ್ವರ ನಗರ ಮಣಿಪಾಲ, ಶ್ರೀ ಮಹಾಮಾಯಾ ಭಜನಾ ಮಂಡಳಿ ಈಶ್ವರನಗರ ಮಣಿಪಾಲ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕರ್ವಾಲು, ಅಲೆವೂರು, ಪರಿವರ್ತನಾ ಫೌಂಡೇಶನ್ ಮಣಿಪಾಲ ಇದರ ಸಹಯೋಗದಲ್ಲಿ ರಾಜ್ಯ ಮಟ್ಟದ ಭಜನಾ ಕಮ್ಮಟ - ಗುರುವಂದನೆ ಮೇ 1 ರಂದು ಬೆಳಿಗ್ಗೆ 9ಗಂಟೆಗೆ ಉಡುಪಿಯ ಕೃಷ್ಣ ಮಠದ ರಾಜ್ಯಾಂಗಣದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಆಯೋಜಕರಿಂದ ಪರ್ಯಾಯ ಶ್ರೀ ಕ್ರಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಶ್ರೀಗಳಿಗೆ ನೀಡಲಾಯಿತು. ಭಜನಾ ಗುರುತಿಲಕ, ಗಾನಕಲಾ ರತ್ನ, ದಾಸಸಿಂಚನ ಕಾರ್ಯಕ್ರಮದ ಮೂಲಕ ಮನೆ ಮನೆಗಳಲ್ಲಿ ಭಕ್ತಿಯ ಕುಸುಮ ಅರಳಿಸುತ್ತಿರುವ ಎಮ್ ಎಸ್ ಗಿರಿಧರ್ ಇವರ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಎಮ್ ಎಸ್ ಗಿರಿಧರ್ ರವರು ದಾಸಸಿಂಚನದ ಮೂಲಕ ಸಾವಿರಕ್ಕೂ ಅಧಿಕ ಮನೆ ಮನೆ ಭೇಟಿ ಮಾಡಿ ಭಜನಾ ಕಾರ್ಯಕ್ರಮ ನಡೆಸಿರುವ ಸಾವಿರದ ಮೈಲಿಗಲ್ಲು ದಾಟಿದ ಸುಸಂದರ್ಭದಲ್ಲಿ ಅವರ ಶಿಷ್ಯೋತ್ತಮೆ ಮಾಯಾ ಕಾಮತ್ ಹಾಗೂ ಶಿಷ್ಯವೃಂದದವರೆಲ್ಲ ಸೇರಿ ಗೌರವಾರ್ಪಣೆ ಮಾಡುವ ಕಾರ್ಯಕ್ರಮ ಹಾಗೂ ಅವರಿಂದಲೇ ರಾಜ್ಯ ಮಟ್ಟದ ಭಜನಾ ಕಮ್ಮಟ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಐವತ್ತಕ್ಕೂ ಹೆಚ್ಚು ಭಜನಾ ಮಂಡಳಿಗಳು ತಮ್ಮ ಭಾಗವಹಿಸುವಿಕೆಯ ಕುರಿತು ಹೆಸರು ನೋಂದಾಯಿಸಿದ್ದು, ಸಾವಿರಕ್ಕೂ ಅಧಿಕ ಭಗವದ್ಭಕ್ತರನ್ನು ಒಗ್ಗೂಡಿಸಿ ನಾಮಸ್ಮರಣೆ ಮಾಡುವ ಬಹಳ ದೊಡ್ಡ ಯೋಜನೆ ಇದಾಗಿದ್ದು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ರೂವಾರಿ ಮಾಯಾ ಕಾಮತ್, ಕಾಪು ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಪರಿವರ್ತನಾ ಫೌಂಡೇಶನ್ ಅಧ್ಯಕ್ಷರಾದ ಮೋಹನ್ ಭಟ್, ಉದ್ಯಮಿಗಳಾದ ಐರೋಡಿ ಸಹನಶೀಲ ಪೈ, ವಿದ್ಯಾ ಮೋಹನ್ ಭಟ್ ಉಪಸ್ಥಿತರಿದ್ದರು.

ಪಂದ್ಯಕೂಟದಲ್ಲಿ ಸಂಗ್ರಹವಾದ ಮೊತ್ತದಿಂದ ಉಳಿತಾಯದ ಹಣದಲ್ಲಿ ಸರ್ಕಾರಿ ಶಾಲೆಗೆ ಕಂಪ್ಯೂಟರ್ ನೀಡಿದ ಟೀಮ್ ಡ್ಯೂಡ್

Thumbnail
Posted On: 21 Apr 2022, 04:48 AM

ಉಡುಪಿ : ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಟೀಮ್ ಡ್ಯೂಡ್ ಆಶ್ರಯದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ನಡೆದ ಪಂದ್ಯಕೂಟ ಏಪ್ರಿಲ್ 8 ಮತ್ತು 9ರಂದು ಡ್ಯೂಡ್ ಟ್ರೋಫಿ ಜರಗಿತು. ಪಂದ್ಯಕೂಟದಲ್ಲಿ ಸಂಗ್ರಹವಾದ ಮೊತ್ತದಿಂದ ಉಳಿತಾಯದ ಹಣದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೇರೂರು ಇಲ್ಲಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಕಂಪ್ಯೂಟರ್ ನೀಡಲಾಯಿತು. ಈ ಸಂದರ್ಭ ನಿತ್ಯಾನಂದ ಪೂಜಾರಿ, ಸಚಿನ್ ಪೂಜಾರಿ , ದೀಕ್ಷಿತ್ ಪೂಜಾರಿ, ರಾಘವೇಂದ್ರ ಶೆಟ್ಟಿಗಾರ್, ಡ್ಯೂಡ್ ಮಾಲಕರದ ಹನೀಫ್, ಸುಕೇಶ್ ಕುಂದರ್ ಉಪಸ್ಥಿತರಿದ್ದರು.

ಏಣಗುಡ್ಡೆ : ಶ್ರೀ ಬ್ರಹ್ಮ ಬೈದೆರುಗಳ ಗರಡಿ ಪುನರ್ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ, ಕಾಲಾವಧಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Thumbnail
Posted On: 18 Apr 2022, 11:54 AM

ಕಟಪಾಡಿ : ಅವಳಿ ವೀರರಾದ ಕೋಟಿಚೆನ್ನಯರು ನೆಲೆಯೂರಿದ ಐತಿಹ್ಯದ ಕಟಪಾಡಿ ಏಣಗುಡ್ಡೆ ಗರಡಿಯ ಸಮಗ್ರ ಜೀರ್ಣೋದ್ಧಾರ ಪ್ರಕ್ರಿಯೆಯು ಸುಮಾರು 4.5 ಕೋಟಿ ವೆಚ್ಚದಲ್ಲಿ ನಿರ್ಮಿತವಾಗಿದ್ದು ಮೇ 7ರಿಂದ ಮೊದಲ್ಗೊಂಡು ಮೇ 23ರವರೆಗೆ ವಿವಿಧ ಧಾರ್ಮಿಕ ಕ್ರಿಯೆಗಳು ನಡೆಯಲಿವೆ ಎಂದು ಜೀಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ಚಂದ್ರ ಅಮೀನ್ ಹೇಳಿದರು. ಅವರು ಕಟಪಾಡಿ ಏಣಗುಡ್ಡೆ ಶ್ರೀ ಬ್ರಹ್ಮ ಬೈದೆರುಗಳ ಗರಡಿ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶಾಭಿಷೇಕ ಹಾಗೂ ಕಾಲಾವಧಿ ಜಾತ್ರಾ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಶಿಲಾ ದಾರು ಶಿಲ್ಪಗಳಿಂದ ಅಲಂಕರಿಸಲ್ಪಟ್ಟ ವೈಭವದಿಂದ ಕಂಗೊಳಿಸುವ ಶ್ರೀ ಬ್ರಹ್ಮ ಬೈದೆರುಗಳ ಮತ್ತು ಪರಿವಾರ ಶಕ್ತಿಗಳ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ಆಗಮೋಕ್ತ ವೈದಿಕ ವಿಧಿಗಳು ವೇದಮೂರ್ತಿ ಮನೋಜ್ ತಂತ್ರಿ ಶಿವಗಿರಿ ಮತ್ತು ವೇದಮೂರ್ತಿ ಮಹೇಶ್ ಶಾಂತಿ ಹೆಜಮಾಡಿ ಇವರ ನೇತೃತ್ವದಲ್ಲಿ ಗರಡಿಯ ಪೂಜಾ ಪೂಜಾರಿ ಇಂಪು ಪೂಜಾರಿ, ಜ್ಯೋತಿಷ್ಯ ಪ್ರವೀಣ ಮೋಹನ್ ಮಾಯಿಪ್ಪಾಡಿ, ವಾಸ್ತುತಜ್ಞ ಪ್ರಮೋದ್ ಕುಮಾರ್ ಕಾರ್ಕಳ ಉಪಸ್ಥಿತಿಯಲ್ಲಿ ತಂತ್ರಿವರೇಣ್ಯರು ಹಾಗೂ ವೇದಜ್ಞ ಋತ್ವಿಜರ ಸಹಕಾರದೊಂದಿಗೆ ನೆರವೇರಲಿದೆ. ಮೇ 6ರಂದು ನಾಗಪ್ರತಿಷ್ಠೆ, 7ರಂದು ಪ್ರಾಯಶ್ಚಿತ್ತಾದಿ ವೈದಿಕ ಪೂಜಾವಿಧಿಗಳು, 8ರಂದು ಮೂಡಬೆಟ್ಟು ಚೌಟರ ಕಟ್ಟೆಯಿಂದ ಗರಡಿಗೆ ಹಸಿರು ಹೊರೆ ಕಾಣಿಕೆಯ ಭವ್ಯ ಮೆರವಣಿಗೆ, ಮೇ 9ರಂದು ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಜರಗಲಿದ್ದು ಮೇ 14ರವರೆಗೆ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಮೇ 19ರಂದು ಗರಡಿ ಪ್ರವೇಶದೊಂದಿಗೆ ವಾರ್ಷಿಕ ಜಾತ್ರಾ ಉತ್ಸವ ಆರಂಭ, 20ರಂದು ಧ್ವಜಾರೋಹಣ, ಅಗೆಲು ಸೇವೆ, 21 ರಂದು ಬೈದೇರುಗಳ ನೇಮೋತ್ಸವ, ರಾತ್ರಿ ಮಹಾ ಅನ್ನಸಂತರ್ಪಣೆ, 22 ಮಾಯಂದಾಲ್ ನೇಮ, ಪರಿವಾರ ಶಕ್ತಿಗಳ ನೇಮ, 23ರಂದು ಧ್ವಜಾವರೋಹಣ ಜರಗಲಿದೆ. ಮೇ 24 ರಂದು ಗರಡಿ ಬಾಕಿಮಾರು ಗದ್ದೆಯಲ್ಲಿ ಪಡು ಏಣಗುಡ್ಡೆ ಧೂಮಾವತಿ ದೈವದ ಸಿರಿ ಸಿಂಗಾರದ ನೇಮದೊಂದಿಗೆ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕ್ ಎನ್. ಪೂಜಾರಿ, ಗೌರವಾಧ್ಯಕ್ಷರಾದ ಗಂಗಾಧರ ಸುವರ್ಣ, ಪ್ರೇಮ್ ಕುಮಾರ್, ಕೋಶಾಧಿ ಕಾರಿ ಡಿ.ಜಿ. ಬಂಗೇರ, ಉಪಕೋಶಾಧಿಕಾರಿ ಚಂದ್ರಹಾಸ ಕೋಟ್ಯಾನ್, ಗರಡಿಯ ಪೂಜಾ ಪೂಜಾರಿ ಇಂಪು ಪೂಜಾರಿ, ಮುಂಬಯಿ ಸಮಿತಿಯ ಕಾರ್ಯದರ್ಶಿ ಸತೀಶ್ ಅಮೀನ್‌, ಗೌರವ ಸಲಹೆಗಾರರಾದ ಬಗ್ಗ ಪೂಜಾರಿ ಯಾನೆ ಉಮೇಶ್ ಕೋಟ್ಯಾನ್, ಕೋಟೆ ಗ್ರಾಪಂ ಅಧ್ಯಕ್ಷ ಕಿಶೋರ್ ಅಂಬಾಡಿ, ಕಾರ್ಯದರ್ಶಿಗಳಾದ ರಿತೇಶ್ ಕೋಟ್ಯಾನ್, ಕಾಮರಾಜ್ ಸುವರ್ಣ, ಸ್ಥಳವಂದಿಗರಾದ ಸುಂದರ ಪೂಜಾರಿ, ರಂಗ ಪೂಜಾರಿ, ಶೀನ ಪೂಜಾರಿ, ದಾಮೋದರ ಪೂಜಾರಿ, ಮೋಹನ್ ಪೂಜಾರಿ, ರಮೇಶ್ ಜತ್ತನ್, ಭೋಜ ಪೂಜಾರಿ, ಕೃಷ್ಣಪ್ಪ ಪೂಜಾರಿ, ಗರಡಿ ಜವನೆರ್ ಸಂಚಾಲಕ ಸುಧೀರ್ ರಾಜ್ ಪೂಜಾರಿ, ದೇವಾಡಿಗರ ಸಂಘದ ಅಧ್ಯಕ್ಷ ಮನೋಹರ್ ದೇವಾಡಿಗ, ಮೊಗವೀರ ಸಭಾ ಅಧ್ಯಕ್ಷ ಚಂದ್ರಶೇಖರ್ ಕಾಂಚನ್, ಪ್ರಮುಖರಾದ ಜಗನ್ನಾಥ್ ಕೋಟೆ, ಉದಯ ಶೆಟ್ಟಿ, ಆಶಾ ಅಂಚನ್, ಮಹೇಶ್ ಪೂಜಾರಿ ಉಪಸ್ಥಿತರಿದ್ದರು.

ಪಡುಬಿದ್ರಿ : ಬ್ರಹ್ಮಶ್ರೀ ನಾರಾಯಣಗುರು ಗುರುಮೂರ್ತಿ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಭಜನಾ ಕಾರ್ಯಕ್ರಮ ಸಂಪನ್ನ

Thumbnail
Posted On: 17 Apr 2022, 01:00 PM

ಪಡುಬಿದ್ರಿ : ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ ಗುರುಮೂರ್ತಿ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಶನಿವಾರ ನಾರಾಯಣಗುರು ಮಂದಿರದಲ್ಲಿ ಧಾರ್ಮಿಕ ಕಾರ್ಯ, ಭಜನಾ ಕಾರ್ಯಕ್ರಮ ಜರಗಿತು. ಪಡುಬಿದ್ರಿ ನಾರಾಯಣಗುರು ಮಹಿಳಾ ಮಂಡಳಿ, ಕಲ್ಲಟ್ಟೆ ಶ್ರೀ ಜಾರಂದಾಯ ಭಜನಾ ಮಂಡಳಿ, ಶ್ರೀ ದುರ್ಗಾ ಹೆಜಮಾಡಿ ಮಹಿಳಾ ಮಂಡಳಿ, ಗಾಯತ್ರಿ ಭಜನಾ ಮಹಿಳಾ ಮಂಡಳಿ ಪಾದೆಬೆಟ್ಟು, ಬ್ರಹ್ಮಶ್ರಿ ಭಜನಾ ಮಂಡಳಿ ಎರ್ಮಾಳು, ಅವರಾಲು ಭಜನಾ ಮಂಡಳಿ, ಉದಯಾದ್ರಿ ಮಹಿಳಾ ಭಜನಾ ಮಂಡಳಿ ಮತ್ತು ಶ್ರವಣ್ ಕುಮಾರ್ ತಂಡದಿಂದ ಕುಣಿತ ಭಜನಾ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ ಸುಧೀರ್ ಕುಮಾರ್, ಕಾರ್ಯದರ್ಶಿ ಲಕ್ಷ್ಮಣ್ ಡಿ ಪೂಜಾರಿ, ಕೋಶಾಧಿಕಾರಿ ಅಶೋಕ್ ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುಚರಿತ ಎಲ್. ಅಮೀನ್, ನಾರಾಯಣಗುರು ಸೇವಾದಳದ ದಳಪತಿ ಯೋಗೀಶ್ ಪೂಜಾರಿ ಮಾದುಮನೆ, ಅರ್ಚಕರಾದ ಚಂದ್ರಶೇಖರ ಶಾಂತಿ, ಯೋಗೀಶ್ ಶಾಂತಿ, ರವಿರಾಜ್ ಎನ್ ಕೋಟ್ಯಾನ್, ಉಮೇಶ್, ಲೀಲಾಧರ್, ವಿರೇಂದ್ರ, ರಮಾನಂದ, ಚಿತ್ರಾಕ್ಷಿ ಕೆ ಕೋಟ್ಯಾನ್, ಸುಗಂಧಿ, ಆನಂದ, ಬಿಲ್ಲವ ಸಂಘದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು, ಸೇವಾದಳದ ಸದಸ್ಯರು ಉಪಸ್ಥಿತರಿದ್ದರು.

ಉಂಡಾರು ದೇವಳಕ್ಕೆ ಇಂಟರ್‌ಲಾಕ್ ಸೌಲಭ್ಯ ಒದಗಿಸಿದ ಮಟ್ಟಾರು ರತ್ನಾಕರ ಹೆಗ್ಡೆಯವರಿಗೆ ಸೋದೆ ಶ್ರೀಗಳಿಂದ ಸನ್ಮಾನ

Thumbnail
Posted On: 17 Apr 2022, 12:11 PM

ಕಾಪು : ಉಂಡಾರು ಶ್ರೀ ವಿಷ್ಣುಮೂರ್ತಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭ ದೇವಳದ ಮುಂಭಾಗ ಇಂಟರ್‌ಲಾಕ್ ಸೌಲಭ್ಯ ಮಂಜೂರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆಯವರನ್ನು ಸೋದೆ ಮಠದ ಶ್ರೀಗಳಾದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಸನ್ಮಾನಿಸಿದರು. ಈ ಸಂದರ್ಭ ಲೀಲಾಧರ ಶೆಟ್ಟಿ ಕರಂದಾಡಿ, ಚಂದ್ರಹಾಸ ಗುರುಸ್ವಾಮಿ, ಅಣ್ಣಪ್ಪ ಸೌಂಡ್ಸ್ ನ ಉದಯ್ ಶೆಟ್ಟಿ, ಡಾ.ಗಣೇಶ್ ಶೆಟ್ಟಿ, ರವಿವರ್ಮ ಶೆಟ್ಟಿ ಇನ್ನಂಜೆ, ನವೀನ್ ಅಮೀನ್ ಶಂಕರಪುರ, ಮಾಲಿನಿ ಪಾರ್ಥ ಇನ್ನಂಜೆ, ದಿವೇಶ್ ಶೆಟ್ಟಿ ಇನ್ನಂಜೆ, ನಿತೇಶ್ ಸಾಲ್ಯಾನ್ ಕಲ್ಯಾಲು, ಆಶಾ ನಾಯಕ್, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

ಹಿಂದು ಜಾಗರಣ ವೇದಿಕೆ ಬೆಳಪು -ಪೈಯಾರು ಘಟಕದ ವತಿಯಿಂದ ಹನುಮ ಜಯಂತಿ ಆಚರಣೆ

Thumbnail
Posted On: 16 Apr 2022, 10:16 PM

ಕಾಪು : ತಾಲೂಕಿನ ಬೆಳಪು ಪಣಿಯೂರಿನ ಕಾನ ದೇವಸ್ಥಾನದಲ್ಲಿ ಹಿಂದು ಜಾಗರಣ ವೇದಿಕೆ ಬೆಳಪು -ಪೈಯಾರು ಘಟಕದ ವತಿಯಿಂದ ಹನುಮ ಜಯಂತಿ ಆಚರಿಸಲಾಯಿತು. ಈ ಸಂದರ್ಭ ರಾಮ ನಾಮ ಜಪ ಹಾಗೂ ಹನುಮಾನ್ ಚಾಲೀಸ ಪಠಣ ಕಾರ್ಯಕ್ರಮ ಜರಗಿತು.

ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳ ಇತ್ಯರ್ಥ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Thumbnail
Posted On: 16 Apr 2022, 07:02 PM

ಉಡುಪಿ : ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಜಿಲ್ಲೆಯ ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ತೆರಳಿ, ಅವರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ತಕ್ಷಣದಲ್ಲಿ ಸ್ಪಂದಿಸಿ, ಪರಿಹಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ನಿರ್ದೇಶನದಂತೆ ಪ್ರತೀ ತಿಂಗಳ 3 ನೇ ಶನಿವಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ, ಎಲ್ಲಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆಗಳನ್ನು ಅಲಿಸಿ, ಅವುಗಳಿಗೆ ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹಾರ ಒದಗಿಸಲಾಗುತ್ತಿದ್ದು, ಸಾರ್ವಜನಿಕರೂ ಹಲವು ವರ್ಷಗಳಿಂದ ಬಾಕಿ ಇರುವ ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದು ಸೂಕ್ತ ಪರಿಹಾರ ಪಡೆಯುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ಮಚ್ಚಟ್ಟು ಗ್ರಾಮದಲ್ಲಿ ಈ ಹಿಂದೆ ಎರಡು ಸರ್ಕಾರಿ ಬಸ್ಗಳನ್ನು ಓಡಿಸುತ್ತಿದ್ದು, ಹಲವು ದಿನಗಳಿಂದ ಈ ಸೇವೆ ಬಂದ್ ಆಗಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು, ಕೂಡಲೇ ಈ ಹಿಂದಿನಂತೆ ಬಸ್ಗಳನ್ನು ಓಡಿಸುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಈ ಬಗ್ಗೆ ಕೂಡಲೇ ಪರಿಶೀಲಿಸಿ, ಸಾರ್ವಜನಿಕರಿಗೆ ಸರ್ಕಾರಿ ಬಸ್ ಸೇವೆ ಒದಗಿಸುವಂತೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ತೊಂಬಟ್ಟು ಎಂಬಲ್ಲಿ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು, ಕೂಡಲೇ ಇದನ್ನು ಪೂರ್ಣಗೊಳಿಸುವಂತೆ ಸಾರ್ವಜನಿಕರು ಕೋರಿದರು. ಸಂಬಂಧಪಟ್ಟ ರಸ್ತೆ ನಿರ್ಮಾಣ ಮಾಡುತ್ತಿರುವ ಅನುಷ್ಠಾನ ಇಲಾಖೆಯ ಅಧಿಕಾರಿಗಳು ತಕ್ಷಣವೇ ಆ ಸ್ಥಳಕ್ಕೆ ತೆರಳಿ, ಅಲ್ಲಿನ ಸ್ಥಿತಿಗತಿ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಹಲವು ವರ್ಷಗಳಿಂದ ಕೋಟೇಶ್ವರದಲ್ಲಿ ವಾಸವಿದ್ದು, ತಮಗೆ ಚುನಾವಣಾ ಗುರುತು ಚೀಟಿ, ಆಧಾರ್ ಕಾರ್ಡ್ ಮತ್ತು ನಿವೇಶನ ಒದಗಿಸುವಂತೆ ಲಿಂಗತ್ವ ಅಲ್ಪ ಸಂಖ್ಯಾತರು ಮನವಿ ಸಲ್ಲಿಸಿದರು. ಆರ್.ಟಿ.ಸಿ ಯಲ್ಲಿನ ಬದಲಾವಣೆ ಸೇರಿದಂತೆ 30 ಕ್ಕೂ ಅಧಿಕ ಅರ್ಜಿಗಳ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಸಮಸ್ಯೆಗಳಿಗೆ ವಿಳಂಬಕ್ಕೆ ಅವಕಾಶ ನೀಡದೇ ತ್ವರಿತಗತಿಯಲ್ಲಿ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ 94 ಸಿ ಹಕ್ಕು ಪತ್ರ ವಿತರಣೆ, ಅಂಗವಿಕಲರ ಪೋಷಣಾ ಭತ್ಯೆ, ಎಂಡೋಸಲ್ಫಾನ್ ಪೀಡಿತರಿಗೆ ನೆರವು, ಅಕ್ರಮ-ಸಕ್ರಮ ಸಾಗುವಳಿ ಚೀಟಿ, ಇಂದಿರಾ ಗಾಂಧೀ ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷೆ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವತಿಯಿಂದ, ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಫಲಾನುಭವಿಗಳಿಗೆ ಉಚಿತವಾಗಿ ಅಕ್ಕಿ ವಿತರಿಸಲಾಯಿತು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಹಾಲಾಡಿ ಗ್ರಾ.ಪಂ.ಅಧ್ಯಕ್ಷೆ ಸಾಧು, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ಕಿರಣ್ ಗೌರಯ್ಯ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ರಾಘವೇಂದ್ರ ವಂದಿಸಿದರು.