Updated News From Kaup
ಕಂಚಿನಡ್ಕ ಮಿಂಚಿನ ಬಾವಿ ಮೇಲ್ಛಾವಣಿ ವಿವಾದ : ಅವಶ್ಯಕತೆ ಬಿದ್ದರೆ ಕಂಚಿನಡ್ಕ ಚಲೋಗೆ ಸಿದ್ಧ ; ಮುಂದೆ ಇಲ್ಲಿಯ ಎರಡು ಶ್ರದ್ಧಾಕೇಂದ್ರಗಳ ಅಭಿವೃದ್ಧಿಗೆ ಸಿದ್ಧತೆ - ಯಶ್ಪಾಲ್ ಸುವರ್ಣ
Posted On: 01 Jun 2022, 07:29 AM
ಪಡುಬಿದ್ರಿ : ಕಾಪು ತಾಲೂಕಿನ ಪಡುಬಿದ್ರಿ ಬಳಿಯ ಕಂಚಿನಡ್ಕದಲ್ಲಿರುವ ಪ್ರಸಿದ್ಧ ಕಾರಣಿಕದ ಸ್ಥಳ ಬಬ್ಬುಸ್ವಾಮಿ ದೈವ ಮಾಯವಾದ ಮಿಂಚಿನ ಬಾವಿ ಶ್ರೀ ಬಬ್ಬುಸ್ವಾಮಿ ದೈವಸ್ಥಾನಕ್ಕೆ ತಗಡಿನ ಮೇಲ್ಛಾವಣಿ ಹಾಕುವ ಬಗೆಗೆ ಎಸ್ಡಿಪಿಐ ಬೆಂಬಲಿತ ಸ್ಥಳೀಯ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಡುಬಿದ್ರಿ ಠಾಣೆಯಲ್ಲಿ ದೈವಸ್ಥಾನದ ಆಡಳಿತ ಮಂಡಳಿ ಮತ್ತು ಆಕ್ಷೇಪವೆತ್ತಿದವರ ಜೊತೆಗಿನ ಸಭೆಯು ನಡೆದಿತ್ತು. ಆದರೆ ಇದು ಪ್ರಯೋಜನಕಾರಿಯಾಗಿರಲಿಲ್ಲ. ಮೇ. 31 ರಂದು ಕ್ಷೇತ್ರಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಹಿಂ.ಮೋರ್ಚಾದ ಪ್ರ.ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಮಾತನಾಡಿ ಶ್ರದ್ಧಾ ಭಕ್ತಿಯ ತಾಣವಾದ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ಶಕ್ತಿಗಳ ಈ ಕ್ಷೇತ್ರಕ್ಕೆ ಅಡ್ಡಿಪಡಿಸಲು ಯಾರಿಂದಲು ಸಾಧ್ಯವಿಲ್ಲ. ಈ ಕ್ಷೇತ್ರದ ಬೆಳವಣಿಗೆಗೆ ಅಡ್ಡಿಪಡಿಸಲು ಅವರು ಯಾರು ಎಂದು ಪ್ರಶ್ನಿಸಿದರು. ಸರಕಾರಿ ಜಾಗದಲ್ಲಿ ಮೇಲ್ಛಾವಣಿ ಬರುತ್ತದೆ ಎಂದು ಅವರು ದೂರುತ್ತಿದ್ದಾರೆ, ಸರ್ಕಾರಿ ಜಾಗದಲ್ಲಿ ಅತಿಕ್ರಮಣ ಮಾಡಿಕೊಂಡು ಇರುವ ಇತರೆ ಕಟ್ಟಡಗಳ ಬಗ್ಗೆಯು ಶೀಘ್ರದಲ್ಲೇ ನಾವು ಕಾರ್ಯಪ್ರವೃತ್ತರಾಗಲಿದ್ದೇವೆ. ಸಮಸ್ತ ಹಿಂದೂ ಸಮಾಜ ದಲಿತ ಸಮುದಾಯದ ಬೆಂಬಕ್ಕೆ ನಿಲ್ಲುತ್ತದೆ, ಅವಶ್ಯಕತೆ ಬಿದ್ದರೆ ಕಂಚಿನಡ್ಕ ಚಲೋ ಮಾಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು. ಮುಂದೆ ಕಂಚಿನಡ್ಕದಲ್ಲಿ ಎರಡು ಪವಿತ್ರ ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರಗಳ ಅಭಿವೃದ್ಧಿಯೊಂದಿಗೆ ಸನಾತನ ಹಿಂದೂ ಧರ್ಮದ ಪುನರುತ್ಥಾನ ನಡೆದು ಕಂಚಿನಡ್ಕ ವಿಜೃಂಭಿಸಲಿದೆ ಎಂದರು. ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಮುಖರಾದ ಲೋಕೇಶ್ ಕಂಚಿನಡ್ಕ, ದಿನೇಶ್ ಕೋಟ್ಯಾನ್, ಸದಾಶಿವ ಕೋಟ್ಯಾನ್, ವಸಂತ ಪಾದೆಬೆಟ್ಟು, ಸಂತೋಷ್ ನಂಬಿಯಾರ್, ಶಂಕರ್ ನಂಬಿಯಾರ್, ಸುಜಿತ್ ಕಂಚಿನಡ್ಕ, ಶಂಕರ ಪಾನರ, ಸುವಾಸ್ ಶೆಟ್ಟಿ, ಗೋವಿಂದ ಕಂಚಿನಡ್ಕ, ರಮೇಶ್ ಕಂಚಿನಡ್ಕ ಮೊದಲಾದವರು ಉಪಸ್ಥಿತರಿದ್ದರು.
ಐತಿಹಾಸಿಕ ಮಹತ್ವದ ಕಾಪು ಮಲ್ಲಾರು ಕೋಟೆಯಲ್ಲಿದ್ದ ಮಾರಿಯಮ್ಮನ ಮೂಲನೆಲೆ ನಿನ್ನಿಕೆರೆ ರಕ್ಷಣೆಗೆ ಸಾಮಾಜಿಕ ಕಾರ್ಯಕರ್ತ ಶ್ರೀರಾಮ ದಿವಾಣ ಆಗ್ರಹ
Posted On: 31 May 2022, 02:20 PM
ಕಾಪು : ಇತಿಹಾಸ ಪ್ರಜ್ಞೆಯ ಕೊರತೆಯ ಕಾರಣದಿಂದ, ಐತಿಹಾಸಿಕ ಮಹತ್ವದ ಸ್ಥಳಗಳನ್ನು ಉಳಿಸುವಲ್ಲಿ ಸರಕಾರ, ಪುರಾತತ್ವ ಇಲಾಖೆ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ನಿರಂತರವಾಗಿ ವಿಫಲವಾಗುತ್ತಾ ಬಂದಿವೆ. ಬುದ್ಧಿವಂತರ ಜಿಲ್ಲೆಗಳಾದ ಕರಾವಳಿ ಕರ್ನಾಟಕವೂ ಐತಿಹಾಸಿಕ ಮಹತ್ವದ ಸ್ಥಳಗಳನ್ನು, ಸ್ಮಾರಕಗಳನ್ನು ಉಳಿಸುವಲ್ಲಿ ಆಸಕ್ತಿ, ಕಾಳಜಿ, ಇಚ್ಛಾಶಕ್ತಿ ತೋರಿಸದಿರುವುದು ನಿಜಕ್ಕೂ ವಿಷಾದನೀಯ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಮಲ್ಲಾರು ಕೋಟೆ ಇದ್ದ ಸ್ಥಳದಲ್ಲಿ ಪ್ರಸ್ತುತ ಕೋಟೆ ನಾಶವಾಗಿ ಹೋಗಿದ್ದರೂ, ಕೋಟೆ ಇದ್ದ ಸ್ಥಳದಲ್ಲಿ ನಿನ್ನೆಯವರೆಗೂ ಇದ್ದ ಅಳಿದುಳಿದ ಅವಶೇಷಗಳಲ್ಲಿ ಒಂದಾದ ನಿನ್ನಿಕೆರೆ ಇಂದು ಇಲ್ಲವಾಗುತ್ತಿರುವುದು. ಅಂದರೆ, ನಿನ್ನಿಕೆರೆಯನ್ನು ಮುಚ್ಚಲಾಗುತ್ತಿದೆಯಲ್ಲ ಎಂದು ಬೇಸರವಿದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀರಾಮ ದಿವಾಣ ಹೇಳಿದರು. ಕಾಪುವಿನ ಪ್ರಸಿದ್ಧ ಮಾರಿಯಮ್ಮ ದೇವಿಯ ಮೂಲ ನೆಲೆ ಇದೇ ನಿನ್ನಿಕೆರೆ. ಕಾಪು ಮಾರಿಯಮ್ಮ ಮೊತ್ತಮೊದಲು ತನ್ನ ಇರವನ್ನು ತೋರಿಸಿಕೊಟ್ಟಿದ್ದು ಇದೇ ನಿನ್ನಿಕೆರೆಯಿಂದ. ಇದು ಈಗಾಗಲೇ ದಾಖಲಾದ ವಿಷಯಗಳಲ್ಲಿ ಒಂದು. ಕಳೆದ ವರ್ಷ ಈ ಐತಿಹಾಸಿಕ ಮಹತ್ವದ ನಿನ್ನಿಕೆರೆ, ಗಿಡಗಂಟಿಗಳಿಂದ ಸುತ್ತುವರಿಯಲ್ಪಟ್ಟಿತ್ತು. ಆದರೆ, ನಿನ್ನಿಕೆರೆಯನ್ನು ಉಳಿಸುವ ನಿಟ್ಟಿನಲ್ಲಿ ಕಾಪು ಗ್ರಾಮ ಪಂಚಾಯತ್ ಆಗಲಿ, ಇಲ್ಲಿನ ಜನಪ್ರತಿನಿಧಿಗಳಾಗಲೀ, ಸಂಘ ಸಂಸ್ಥೆಗಳಾಗಲೀ ಯಾವುದೇ ಒಂದು ಹೆಜ್ಜೆಯನ್ನು ಇರಿಸದೆ ನಿರ್ಲಕ್ಷಿಸಿದ್ದರು. ಈ ನಿರ್ಲಕ್ಷ್ಯದ ಕಾರಣ, ಇದೀಗ ನಿನ್ನಿಕೆರೆ ಮುಚ್ಚಿಹೋಗಿದೆ. ಅಂದರೆ, ಸ್ಥಳೀಯರು ಐತಿಹಾಸಿಕ ಮಹತ್ವದ ನಿನ್ನಿಕೆರೆಯನ್ನು ಮುಚ್ಚಿ ನಾಶಪಡಿಸಲಾಗುತ್ತಿದೆಯೇ ? ಮಲ್ಲಾರುವಿನಲ್ಲಿದ್ದುದು ಅಂತಿಂಥ ಕೋಟೆಯೇನೂ ಅಲ್ಲ. ಅತ್ಯಂತ ಮಹತ್ವದ ಐತಿಹಾಸಿಕ ಕೋಟೆಯಾಗಿತ್ತು ಮಲ್ಲಾರಿನ ಕೋಟೆ ಮತ್ತು ಕೆರೆ ಹಾಗೂ ಇಲ್ಲಿದ್ದ ಕೆಲವು ಐತಿಹಾಸಿಕ ವಸ್ತುಗಳು. ಇವುಗಳ ಪೈಕಿ ಕೆರೆಯೊಂದು ನಾಶದ ಅಂಚಿನಲ್ಲಿದ್ದರೆ, ಉಳಿದವುಗಳು ಈಗಾಗಲೇ ಸಂಪೂರ್ಣ ನಾಶವಾಗಿವೆ. ಮಲ್ಲಾರುವಿನ ಕೋಟೆ ಬರೋಬ್ಬರಿ ಹದಿನಾರು ಎಕರೆಗೂ ಅಧಿಕ ಸ್ಥಳದಲ್ಲಿ ವ್ಯಾಪಿಸಿತ್ತು. ಆದರೆ, ಇಂದು ಈ ಕೋಟೆಗೆ ಸಂಬಂಧಿಸಿದ ಒಂದೇ ಒಂದು ಕಲ್ಲು ಸಹ ನಮಗೆ ನೋಡಲು ಸಿಗುವುದಿಲ್ಲ. ಕೊಟೆಯೊಳಗಡೆ ಇದ್ದ ದಿಬ್ಬಗಳನ್ನು ನೆಲಸಮಗೊಳಿಸಲಾಗಿದೆ. ಮಾತ್ರವಲ್ಲ, ಇಲ್ಲಿದ್ದ ಕೆಲವೊಂದು ಐತಿಹಾಸಿಕ ವಸ್ತುಗಳನ್ನು ಕೂಡಾ ನಾಶಗೊಳಿಸಲಾಗಿದೆ. ಮಲ್ಲಾರಿನ ಕೋಟೆ, ವಿಜಯನಗರ ರಾಜರ ಆಡಳಿತ ಕಾಲದ್ದು ಎನ್ನುವುದೇ ಸಾಕು, ಈ ಕೋಟೆಯ ಮಹತ್ವವನ್ನು ಸಾರಿ ಹೇಳಲು. ಶಾಲಿವಾಹನ ಶಕ 1665ನೇ ರುಧಿರೋದ್ಗಾರಿ ಸಂವತ್ಸರದಲ್ಲಿ ಕಾಪು ಮರ್ದ ಹೆಗ್ಗಡೆ ಮಲ್ಲಾರಿನ ಕೋಟೆಯನ್ನು ಪುನರ್ನಿರ್ಮಿಸಿದ ಬಗ್ಗೆ ಮತ್ತು ಕಾಪು ಕಡಲ ಕಿನಾರೆಯಲ್ಲಿರುವ ಬೃಹತ್ ಬಂಡೆಯ ಮೇಲೆ ಕೋಟೆ ಇನ್ನೊಂದು ಕೋಟೆ (ಮನೋಹರಗಡ) ಕಟ್ಟಿಸಿದ ಬಗ್ಗೆ ಖ್ಯಾತ ಇತಿಹಾಸಕಾರರಾದ ಎಂ. ಗಣಪತಿ ರಾವ್ ಐಗಳ್ ಅವರ "ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ" ಗ್ರಂಥದಲ್ಲಿ ಉಲ್ಲೇಖವಿದೆ. 1740ರ ದಶಕದ ಅವಧಿಯಲ್ಲಿ ಕೆಳದಿ ಸಂಸ್ಥಾನದ ಅಧೀನಕ್ಕೆ ಒಳಪಟ್ಟ ಬಳಿಕ, ಈ ಕೋಟೆ ಬಸಪ್ಪ ನಾಯಕನ ಆಡಳಿತದಲ್ಲಿದ್ದರೆ, ಆನಂತರ ಟಿಪ್ಪು ಸುಲ್ತಾನ್ ಕಾಲದಲ್ಲಿ ಟಿಪ್ಪುವಿನ ಆಡಳಿತಕ್ಕೆ ಒಳಪಟ್ಟಿತ್ತು ಈ ಐತಿಹಾಸಿಕ ಮಲ್ಲಾರಿನ ಕೋಟೆ. ನಾಲ್ಕೈದು ದಶಕದ ಹಿಂದಿನವರೆಗೂ ಕೆಲವು ಶಾಲೆಗಳ ಶಿಕ್ಷಕರು ಮಕ್ಕಳನ್ನು ಇಲ್ಕಿಗೆ ಕರೆದುಕೊಂಡು ಬಂದು ಈ ಕೋಟೆಯನ್ನು ತೋರಿಸುತ್ತಿದ್ದರು ಎಂಬ ವಿಷಯವನ್ನು ಗ್ರಾಮದ ಹಿರಿಯರು ನೆನಪುಮಾಡಿಕೊಳ್ಳುತ್ತಾರೆ. ಟಿಪ್ಪು ಮರಣಾನಂತರ ಸಹಜವಾಗಿಯೇ ಕೋಟೆ ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿತು. ಟಿಪ್ಪು ಆಡಳಿತ ಕಾಲದಲ್ಲಿ ಕೊಟೆಯಲ್ಲಿದ್ದ ಐತಿಹಾಸಿಕ ಮಹತ್ವದ ಖಡ್ಗವೊಂದು ಇಂದಿಗೂ ಉಳಿದಿದ್ದು, ಇದು, ಮಲ್ಲಾರು ಕೋಟೆ ಬಳಿಯ "ಕಾಪು ಶ್ರೀ ಮಾರಿಯಮ್ಮ ದೇವಿಯ (ಶ್ರೀ ತ್ರಿಶಕ್ತಿ ಸನ್ನಿಧಿ) ಆದಿಸ್ಥಳದ ಮನೆಯಲ್ಲಿ "ಕೋಟೆ ಮಾರಿ" ಯೊಂದಿಗೆ ಗುಡಿಯಲ್ಲಿದೆ. "ಕೋಟೆ ಮಾರಿ" ನೆಲೆಯಾಗಿರುವ ಮೂಲ ಮನೆಯ ಗುಡಿಯೊಳಗೆ ಖಡ್ಗವೂ ಇದ್ದು, ಇದಕ್ಕೆ ವಾರ್ಷಿಕ ಆಯುಧ ಪೂಜೆಯ ದಿನದಂದು ಪೂಜೆಯನ್ನೂ ನಡೆಸಿಕೊಂಡು ಬರಲಾಗುತ್ತಿದೆ. ಕೋಟೆ ಮಾರಿ ಮತ್ತು ಟಿಪ್ಪು ಕಾಲದ ಖಡ್ಗ ಹೊರತುಪಡಿಸಿದರೆ ಉಳಿದಿರುವ ಇನ್ನೊಂದು ಐತಿಹಾಸಿಕ ಸ್ಮಾರಕವೆಂದರೆ, ಅದು ನಂದಿಕೆರೆ ಅಥವಾ ನಿನ್ನಿಕೆರೆ. ಈ ಕೆರೆಯನ್ನು ಪ್ರಸ್ತುತ ಪೂರ್ಣವಾಗಿ ಗಿಡಗಂಟಿ ಆವರಿಸಿರುವುದರಿಂದ, ಇಲ್ಲೊಂದು ಕೆರೆ ಇದೆ ಎನ್ನುವುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲದಂತಾಗಿದೆ. ಕೆರೆಯನ್ನು ಈಗ ನೇರವಾಗಿ ನೋಡಲು ಸಾಧ್ಯವಿಲ್ಲವಾದರೂ ಕೆರೆ ಇದೆ, ಉಳಿದಿದೆ. ಮಲ್ಲಾರು ಕೋಟೆಯ ಅತ್ಯಂತ ಮಹತ್ವದ ಐತಿಹಾಸಿಕ ಸ್ಮಾರಕವಾದ ಕೆರೆ ಹೀಗೆ ಇಷ್ಟಾದರೂ ಉಳಿದಿರುವುದು ಒಂದಷ್ಟು ಸಮಾಧಾನಕರ ವಿಷಯವೇ ಆಗಿದೆ. ಕಾಪು ಪುರಸಭೆ, ಜಿಲ್ಲಾಡಳಿತ, ಪುರಾತತ್ವ ಇಲಾಖೆ ಇನ್ನಾದರೂ ಈ ನಂದಿಕೆರೆ (ನಿನ್ನಿಕೆರೆ) ಯನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಉದ್ಯೋಗ ಖಾತರಿ ಯೋಜನೆಯ ಮೂಲಕವೋ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕವೋ, ಏನಾದರೂ ಮಾಡಿ ಈ ಕೆರೆಯನ್ನು ಉಳಿಸುವ ಮಹತ್ಕಾರ್ಯವನ್ನು ಜನಪ್ರತಿನಿಧಿಗಳು ಮಾಡಲೇಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಇಚ್ಛಾಶಕ್ತಿಯನ್ನು ಪ್ರದರ್ಶಿಸಲೇಬೇಕಾಗಿದೆ ಎಂದರು.
ತಾಳಮದ್ದಳೆ ಸಪ್ತಾಹ : ಕೆ.ಎಲ್.ಕುಂಡಂತಾಯರಿಗೆ "ಪೆರ್ಲ ಕೃಷ್ಣ ಭಟ್ ಪ್ರಶಸ್ತಿ" ಪ್ರದಾನ
Posted On: 29 May 2022, 08:22 PM
ಉಡುಪಿ : ಇಲ್ಲಿಯ ಯಕ್ಷಗಾನ ಕಲಾಕೇಂದ್ರ (ರಿ) ಇವರು ಪರ್ಯಾಯ ಕೃಷ್ಣಾಪುರ ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ನಡೆಸಿದ ತಾಳಮದ್ದಳೆ ಸಪ್ತಾಹ - 2022 ರ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಜಾನಪದ ವಿದ್ವಾಂಸ , ಯಕ್ಷಗಾನ ವೇಷಧಾರಿ - ಅರ್ಥಧಾರಿ ಕೆ.ಎಲ್.ಕುಂಡಂತಾಯರಿಗೆ ಪಂಡಿತ ಪರಂಪರೆಯ ವಿದ್ವಾಂಸ ಪೆರ್ಲ ಕೃಷ್ಣ ಭಟ್ ನೆನಪಿನ "ಪೆರ್ಲ ಕೃಷ್ಣ ಭಟ್ ಪ್ರಶಸ್ತಿ"ಯನ್ನು ಪ್ರದಾನಿಸಿದರು. ಕರ್ಣಾಟಕ ಬ್ಯಾಂಕಿನ ಮಹಾಪ್ರಬಂಧಕ ರಾಜಕುಮಾರ್ ಪಿ.ಎಚ್., ಹೊನ್ನಾವರದ ಉದ್ಯಮಿ ಕೃಷ್ಣಮೂರ್ತಿ ಭಟ್ ಶಿವಾನಿ ಹಾಗೂ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಎಸ್.ವಿ.ಭಟ್ ಮತ್ತಿತರರು ಉಪಸ್ಥಿತರಿದ್ದರು.
ಮದುವೆ ಮಂಟಪದಿಂದ ಸಿನೆಮಾ ಮಂದಿರ - ಮದುವೆ ಪೋಷಾಕಿನಲ್ಲಿ ತುಳು ಸಿನಿಮಾ ವೀಕ್ಷಿಸಿದ ನೂತನ ವಧುವರರು
Posted On: 28 May 2022, 07:23 PM
ಉಡುಪಿ : ಮದುವೆ ಶಾಸ್ತ್ರ ಮುಗಿದ ಬಳಿಕ ಸಭಾಂಗಣದಿಂದ ಪೇಟ, ಬಾಸಿಂಗ, ಹಾರ ಸಹಿತ ಕೈ ಕೈ ಹಿಡಿದು ನೂತನ ವಧುವರ ಮತ್ತು ಅವರ ಗೆಳೆಯರು ಮಣಿಪಾಲದಲ್ಲಿ ಸಿನಿಮಾ ಮಂದಿರಕ್ಕೆ ತೆರಳಿ ತುಳು ಚಿತ್ರ ನೋಡಿ ಸಿನಿಮಾದ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸಿದರು. ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಮತ್ತು ತುಳು ಸಿನಿಮಾ ರಂಗದ ಯುವ ಸಿನಿಮಾಟೋಗ್ರಾಫರ್ ಭುವನೇಶ್ ಪ್ರಭು ಮಂಟಪದಿಂದ ನೇರವಾಗಿ ಮಣಿಪಾಲದ ಸಿನಿಮಾ ಮಂದಿರಕ್ಕೆ ತೆರಳಿ ರಾಜ್ ಸೌಂಡ್ ಆ್ಯಂಡ್ ಲೈಟ್ಸ್ ಸಿನಿಮಾ ವೀಕ್ಷಿಸಿದರು. ಚಿತ್ರತಂಡದಿಂದ ನೂತನ ವಧುವರು ಮತ್ತೊಮ್ಮೆ ಹಾರ ಬದಲಾಯಿಸಿ, ಕೇಕ್ ಕತ್ತರಿಸಿ, ಶುಭ ಹಾರೈಸಿದರು. ಈ ಸಂದರ್ಭ ವಧು ವರರ ಸಂಬಂಧಿಕರು, ಗೆಳೆಯರು ಜೊತೆಯಲ್ಲಿದ್ದರು.
ದೈವ ಕಾರ್ಣಿಕ ; ಮದುವೆ ಮನೆಯಲ್ಲಿ ಕಳೆದುಕೊಂಡ ಸರ ದೈವಸ್ಥಾನದೆದುರು ಪತ್ತೆ
Posted On: 28 May 2022, 04:31 PM
ಕಾಪು : ಕಳೆದುಕೊಂಡ ಚಿನ್ನದ ಸರ ದೈವ ಪ್ರಾರ್ಥನೆಯ ಬಳಿಕ ಮರಳಿ ಸಿಗುವ ಮೂಲಕ ತುಳುನಾಡಿನ ದೈವ ಶಕ್ತಿಯ ಮಹಿಮೆಗೆ ಪಣಿಯೂರು ನಾಂಜಾರು ಶ್ರೀ ಧರ್ಮ ಜಾರಂದಾಯನ ಸಾನಿಧ್ಯ ಸಾಕ್ಷಿಯಾಗಿದೆ. ಆರು ವರ್ಷಗಳ ಹಿಂದೆ ಸಮಗ್ರ ಜೀರ್ಣೋದ್ದಾರಗೊಂಡು ಹಲವಾರು ಪವಾಡಗಳಿಗೆ ಸಾಕ್ಷಿಯಾಗಿರುವ ಬೆಳಪು ಗ್ರಾಮದ ಪಣಿಯೂರು ರೈಲ್ವೈ ನಿಲ್ದಾಣದ ಬಳಿ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನವಿದೆ. ಮೇ 18ರಂದು ಪಡುಬಿದ್ರಿಯ ಮದುವೆ ಸಭಾಂಗಣದಲ್ಲಿ ಕಾಣೆಯಾಗಿದ್ದ ನಾಂಜಾರು ಸಾನದ ಮನೆಯ ಮಗುವೊಂದರ ಕುತ್ತಿಗೆಯಲ್ಲಿದ್ದ ಚಿನ್ನದ ಸರವು ಮೇ 27ರಂದು ಬೆಳಗ್ಗೆ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಮುಂಭಾಗದಲ್ಲಿ ಉರಿಯುತ್ತಿರುವ ಸಾಣಾದಿಗೆಗೆ ಸುತ್ತಿಕೊಂಡಂತೆ ಪತ್ತೆಯಾಗಿದ್ದು ಭಾರೀ ಅಚ್ಚರಿಗೆ ಕಾರಣವಾಗಿದೆ. ಮೇ23ರಂದು ಕ್ಷೇತ್ರದಲ್ಲಿ ನಡೆದ ಹೋಮ ಪಂಚಕಜ್ಜಾಯ ಸೇವೆಯ ದಿವಸ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಮಾಡಲಾಗಿತ್ತು. ಚಿನ್ನದ ಸರವು ಸಿಕ್ಕಿದರೆ ಧರ್ಮ ಜಾರಂದಾಯ ಬಂಟ ಪರಿವಾರ ಶಕ್ತಿಗಳಿಗೆ ಹೋಮ ಪಂಚಕಜ್ಜಾಯ ಸೇವೆ ನೀಡುವುದೆಂದು ತೀರ್ಮಾನಿಸಲಾಗಿತ್ತು. ಇದರಿಂದ ಕುಟುಂಬ ವರ್ಗ ಮತ್ತು ದೈವಸ್ಥಾನದ ಭಕ್ತ ವರ್ಗ ಸಂತಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಯುವನಾಯಕ ಫಾರೂಕ್ ಚಂದ್ರನಗರ ಮನೆಗೆ ಶಾಸಕ ಯು.ಟಿ ಖಾದರ್ ಭೇಟಿ
Posted On: 26 May 2022, 10:42 PM
ಕಾಪು : ಕರ್ನಾಟಕ ಸರಕಾರದ ವಿರೋದ ಪಕ್ಷದ ಉಪ ನಾಯಕ ಯು.ಟಿ ಖಾದರ್ ಕಾಂಗ್ರೆಸ್ ಯುವನಾಯಕ, ಕೆ.ಪಿ.ಸಿ.ಸಿ ಅಲ್ಪ ಸಂಖ್ಯಾತ ರಾಜ್ಯ ಸಂಯೋಜಕರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಮನೆಗೆ ಭೇಟಿ ನೀಡಿ ಪ್ರಸ್ತುತ ರಾಜಕೀಯ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಶಾಹಿನ್ ಎಜುಕೇಷನ್ ಟ್ರಸ್ಟ್ ಬೀದರ್ ಡಾ ಅಬ್ದುಲ್ ಖಾದಿರ್, ಬಿ.ಎ ಮೊಹಮ್ಮದ್ ಆಲಿ ಕಮ್ಮರಡಿ, ಉಮ್ಮರ್ ಯು.ಎಚ್, ಬಿ. ಎ ಫಕ್ರುದ್ದಿನ್ ಆಲಿ ಹಾಗೂ ಇನ್ನಿತರು ಉಪಸ್ಥಿತರಿದ್ದರು.
ಪ್ರಶಸ್ತಿ, ಡಾಕ್ಟರೇಟ್ ಪಡೆದ ಪತ್ರಕರ್ತರಿಗೆ ಅಭಿನಂದನೆ, ವರ್ಗಾವಣೆಗೊಂಡ, ನಿವೃತ್ತಿ ಹೊಂದಿದ ಪತ್ರಕರ್ತರಿಗೆ ಸನ್ಮಾನ, ಬೀಳ್ಕೊಡುಗೆ
Posted On: 26 May 2022, 10:34 PM
ಮಂಗಳೂರು : ಪತ್ರಿಕಾರಂಗವು ಸಾಮಾಜಿಕ ಪರಿವರ್ತನೆಯ ಅಸ್ತ್ರವಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮ ಕ್ಷೇತ್ರದ ಜವಾಬ್ದಾರಿ ಮಹತ್ತರವಾದುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಪ್ರಶಸ್ತಿ ಪಡೆದ, ಡಾಕ್ಟರೇಟ್ ಪದವಿ ಗಳಿಸಿದ, ವರ್ಗಾವಣೆಗೊಂಡ, ನಿವೃತ್ತಿ ಹೊಂದಿದ ಪತ್ರಕರ್ತರನ್ನು ಸನ್ಮಾನಿಸಿ ಅವರು ಮಾತನಾಡಿದರು. ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳ ಬಗ್ಗೆ ನನಗೆ ಪ್ರೀತಿ, ಗೌರವ ಇದೆ. ಏಕೆಂದರೆ, ಪತ್ರಿಕಾ ಪ್ರತಿನಿಧಿಗಳು ಸಾಮಾಜಿಕ ಕಳಕಳಿಯಿಂದ ಪ್ರತಿ ಬಾರಿ ನಮ್ಮಿಂದ ಮಾಹಿತಿ ಪಡೆದು ಸುದ್ದಿ ಪ್ರಕಟಿಸುತ್ತಾರೆ. ವಿಚಾರ ಮಂಥನ, ಕಾರ್ಯಾಂಗ ಸರಿದಾರಿಯಲ್ಲಿ ನಡೆಯಲು ಮಾಧ್ಯಮ ರಂಗ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಮೌಲ್ಯ ಇರುವ ಪತ್ರಕರ್ತರಿದ್ದಾರೆ. ಪತ್ರಕರ್ತರ ಸಂಘದಿಂದ ಸಾಧಕ ಪತ್ರಕರ್ತರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ ಎಂದರು. ರಾಜ್ಯ ಮಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೆಪುಣಿ, ಕಾಸರಗೋಡು ಪತ್ರಕರ್ತರ ಸಂಘದಿಂದ ಮೊಗರೋಡಿ ಗೋಪಾಲಕೃಷ್ಣ ಮೇಲಾಂಟ ದತ್ತಿಪ್ರಶಸ್ತಿ ಪಡೆದ ಮುಹಮ್ಮದ್ ಆರೀಫ್ ಪಡುಬಿದ್ರಿ, ಡಾಕ್ಟರೇಟ್ ಪದವಿ ಗಳಿಸಿದ ಸತೀಶ್ ಕೊಣಾಜೆ, ಚಂದ್ರಹಾಸ ಚಾರ್ಮಾಡಿ, ನಿವೃತ್ತಿ ಹೊಂದಿದ ಹಿಲರಿ ಕ್ರಾಸ್ತಾ, ಸ್ವಯಂ ನಿವೃತ್ತಿ ಪಡೆದ ಸುಭಾಶ್ ಸಿದ್ದಮೂಲೆ, ಸುಷ್ಮಿತಾ ಕೋಟ್ಯಾನ್, ವರ್ಗಾವಣೆಗೊಂಡ ಮಹೇಶ್ ಕನ್ನೇಶ್ವರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ವಾರ್ತಾಧಿಕಾರಿ ರವಿರಾಜ್ ಅತಿಥಿಯಾಗಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಸನ್ಮಾನಿತರ ವಿವರ ನೀಡಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕರಂಬಳ್ಳಿ ಗೋಪಾಲ್ ಶೆಟ್ಟಿ ನಿಧನ
Posted On: 26 May 2022, 10:24 PM
ಉಡುಪಿ :ದೈವಾರಾಧನೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಕರಂಬಳ್ಳಿ ಗೋಪಾಲ್ ಶೆಟ್ಟಿ ಇಂದು ನಿಧನರಾಗಿದ್ದಾರೆ. ಕರಂಬಳ್ಳಿ ಗೋಪಾಲ್ ಶೆಟ್ಟಿ ದೊಡ್ಡನಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಶೆಟ್ಟಿ ಬಾಲೆ ಹಾಗೂ ದೈವಸ್ಥಾನದ ಆಡಳಿತ ಮಂಡಳಿ ಟ್ರಸ್ಟಿ ಸದಸ್ಯರು, ಕಾಂಗ್ರೆಸ್ ಮುಖಂಡರು, ಮಣಿಪಾಲ ಮಾಜಿ ಮಂಡಳ ಪಂಚಾಯತ್ ಸದಸ್ಯರು, ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ದೊಡ್ಡನಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಹಲವಾರು ಸಂಘ ಸಂಸ್ಥೆಯ ಸದಸ್ಯರು, ದೈವಾರಾಧನೆ ಕ್ಷೇತ್ರದಲ್ಲಿ ಮದಿಪು ಹೇಳುವ ಮೂಲಕ ದೈವ ಚಾಕ್ರಿ ಮಾಡಿದವರಾಗಿದ್ದಾರೆ.
ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಕಾಪು ದಿವಾಕರ ಶೆಟ್ಟಿ
Posted On: 24 May 2022, 06:03 PM
ಕಾಪು : 2020-22ನೇ ಸಾಲಿನಲ್ಲಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಕೆಎಂಎಫ್ ಆಡಳಿತ ಮಂಡಳಿ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ ವಿವಿಧ ಸಹಕಾರ ಕ್ಷೇತ್ರಗಳಲ್ಲಿ ಸುದೀರ್ಘ ಅವಧಿಯಲ್ಲಿ ಕಾಪು ದಿವಾಕರ ಶೆಟ್ಟಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಕಾಪು ದಿವಾಕರ ಶೆಟ್ಟಿಯವರು 1981ರಲ್ಲಿ ಪೂರ್ಣ ಪ್ರಜ್ಞಾ ಸಂಧ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, 1987ರಲ್ಲಿ ಕಾಪು ಮಂಡಲ ಪಂಚಾಯತ್ ಸದಸ್ಯರಾಗಿ, 1993 ರಿಂದ 2001 ರವರೆಗೆ ಉಳಿಯಾರಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, 1990ರಲ್ಲಿ ಕೇಂದ್ರ ಸರ್ಕಾರದ ರೈಲ್ವೇ ಇಲಾಖೆಯ ದಕ್ಷಿಣ ರೈಲ್ವೇ ಸಲಹಾ ಸಮಿತಿಯ ಸದಸ್ಯರಾಗಿ, 1998 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ, 2014ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 1990ರಲ್ಲಿ ಉಳಿಯಾರಗೋಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಆರಂಭಿಸಿ ಪ್ರಸ್ತುತ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ಮಂಗಳೂರು, ಇಲ್ಲಿಗೆ ಅಂದಿನಿಂದಲೂ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದು, ಎರಡು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುತ್ತಾರೆ. ಮುಂದುವರೆದು, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿ ಸೇವೆಯನ್ನು ಮುಂದುವರಿಸಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು 2004ರಲ್ಲಿ "ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ "ಅತ್ಯುತ್ತಮ ಹೈನುಗಾರ ಪ್ರಶಸ್ತಿ-2009" ರಲ್ಲಿ ನೀಡಿ ಗೌರವಿಸಲಾಗಿದ್ದು, ಪ್ರಸ್ತುತ "ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಗರದ ರವೀಂದ್ರ ಕಲಾಕ್ಷೇತ್ರ ದಲ್ಲಿ ಮೇ 25ರಂದು ಸಂಜೆ 6.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಸ್ಟ್ರಿಂಗ್ ಆರ್ಟ್ ನಲ್ಲಿ 2022ನೇ ಸಾಲಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲಿಸಿದ ಬಂಟಕಲ್ಲಿನ ಪ್ರಿಯಾಂಕಾ
Posted On: 24 May 2022, 02:18 PM
ಕಾಪು : ಬಂಟಕಲ್ಲು 92ನೇ ಹೇರೂರಿನ ಯುವ ಕಲಾವಿದೆ ಕುಮಾರಿ ಪ್ರಿಯಾಂಕಾ ಆಚಾರ್ಯ ಅವರು ಸ್ಟ್ರಿಂಗ್ ಆರ್ಟ್ ನಲ್ಲಿ 2022ನೇ ಸಾಲಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ ಸಾಧನೆ ಮಾಡಿದ್ದಾರೆ. 37.8 × 38 ಇಂಚಿನ ಬೋರ್ಡ್ನಲ್ಲಿ 20 ವಿವಿಧ ಬಣ್ಣದ ತಂತಿಗಳನ್ನು ಬಳಸಿ 3/4 ಮತ್ತು 1 ಇಂಚಿನ ಮೊಳೆಗಳನ್ನು ಬಳಸಿ ವಿರಾಟ್ ವಿಶ್ವಕರ್ಮರ ಅತಿದೊಡ್ಡ ಸ್ಟ್ರಿಂಗ್ ಆರ್ಟ್ ಭಾವಚಿತ್ರಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆಯನ್ನು ಮಾಡಿದ್ದಾರೆ. ಇವರ ಸ್ಟ್ರಿಂಗ್ ಆರ್ಟ್ ನ್ನು ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ವಿಲಾಸ್ ನಾಯಕ್ ಕೂಡ ಮೆಚ್ಚಿದ್ದಾರೆ. ಸ್ಟ್ರಿಂಗ್ ಆರ್ಟ್ ನಲ್ಲಿ ಸುಮಾರು 150 ಕಲಾಕೃತಿಗಳನ್ನು ಮಾಡಿರುತ್ತಾರೆ. ರಂಗೋಲಿ ಬಿಡಿಸುವುದು, ಚಿತ್ರ ಬಿಡಿಸುವುದು ಈಕೆಯ ಹವ್ಯಾಸಗಳು. ಪ್ರಸ್ತುತ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಈಕೆ ಬಂಟಕಲ್ಲ್ ನ ಕೃಷ್ಣ ಆಚಾರ್ಯ ಮತ್ತು ಯಶೋದ ದಂಪತಿಗಳ ಪುತ್ರಿ.
