Updated News From Kaup

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮೈಸೂರು ಒಡೆಯರ ಭೇಟಿ

Thumbnail
Posted On: 29 Apr 2022, 01:48 PM

ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮೈಸೂರು ಒಡೆಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಳದ ಪ್ರಮುಖರು ಉಪಸ್ಥಿತರಿದ್ದರು.

ಮಜೂರು : ಕಾಪು ತಾಲೂಕಿನ 52 ಕುಟುಂಬಕ್ಕೆ ರಂಜಾನ್ ಕಿಟ್ ವಿತರಣೆ

Thumbnail
Posted On: 27 Apr 2022, 06:05 PM

ಕಾಪು : ಮಲಬಾರ್ ಗೋಲ್ಡ್ & ಡೈಮಂಡ್ಸ್ ವತಿಯಿಂದ ಕಾಪು ತಾಲೂಕಿನ 52 ಕುಟುಂಬಕ್ಕೆ ರಂಜಾನ್ ಕಿಟ್ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಆರ್.ಕೆ ಗೆಸ್ಟ್ ಹೌಸ್ ಮಜೂರಿನಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಫಾರೂಕ್ ಮಲಬಾರ್ ಗೋಲ್ಡ್ & ಡೈಮಂಡ್ಸ್ ಕಳೆದ ಹತ್ತಾರು ವರ್ಷದಲ್ಲಿ ಜಾತಿ ಭೇದವಿಲ್ಲದೆ ಹತ್ತಾರು ಸಾಮಾಜಿಕ ಕೆಲಸ, ಬಡವರ ಉದ್ದಾರದ ಕೆಲಸವನ್ನು ಮಾಡುತ್ತಿದೆ. ಕೊರೊನದ ಸಂದರ್ಭದಲ್ಲಿ ಇಡೀ ಜಿಲ್ಲೆಯ 7000 ಕ್ಕೂ ಮಿಕ್ಕಿ ಬಡ ಕುಟುಂಬವನ್ನು ಗುರುತಿಸಿ ಅಕ್ಕಿ ಹಾಗೂ ಜಿನಸು ಕಿಟ್ ವಿತರಿಸಿದ್ದು ನಿಜಕ್ಕೂ ಶ್ಲಾಘನೀಯ ಅದಲ್ಲದೆ ಉಚಿತ ಮೆಡಿಸಿನ್ ಕಿಟ್, ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯಧನ ,ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅರ್ಧದಲ್ಲಿ ನಿಂತ ಮನೆ ಪೂರ್ತಿಗೊಳಿಸಲು ಸಹಾಯಧನ, ಪಬ್ಲಿಕ್ ಟಿವಿ ಮುಖಾಂತರ ಬಂದ ಮನವಿಗೆ 100 ಟ್ಯಾಬ್ ವಿತರಿಸಿ ಬಡಮಕ್ಕಳ ವಿದ್ಯೆಗೆ ಪ್ರೋತ್ಸಾಹ, ಜಾತಿ ಬೇದವಿಲ್ಲದೆ ಪ್ರತಿಯೊಂದು ಜಾತಿಯ ಹಬ್ಬದ ಆಚರಣೆ, ರಾಷ್ಟೀಯ ಮಟ್ಟದ ಎಲ್ಲಾ ಹಬ್ಬದ ಆಚರಣೆ ನಿಜಕ್ಕೂ ಇವರ ಕೆಲಸ ದೇವರು ಹಾಗೂ ಸಮಾಜ ಮೆಚ್ಚುವಂತಹದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ, ಕಾಪು ಸಮಾಜ ಸೇವಾ ವೇದಿಕೆ ಗೌರವಾಧ್ಯಕ್ಷ ದಿವಾಕರ ಬಿ ಶೆಟ್ಟಿ ಕಳತ್ತೂರು, ಚಂದ್ರನಗರ ಮಸ್ಜಿದ್ ಇ ನೂರ್ ಖತೀಬರಾದ ರಮೀಝ್ ಹನಫಿ, ಶರ್ಫುದ್ದಿನ್ ಶೇಖ್ ಮಜೂರು, ಬಿ.ಎ.ಫಕ್ರುದ್ದಿನ್ ಆಲಿ ಚಂದ್ರನಗರ, ಕಾಪು ಪುರಸಭೆ ಸದಸ್ಯ ನೂರುದ್ದಿನ್.ಅಹ್ಮದಿಮೋಹಲ್ಲ, ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಿಬ್ಬಂದಿ ಫಯಾಜ್ ಅಹ್ಮದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕಳಚಿತು ಕುಲಾಲ ಸಮುದಾಯದ ಹಿರಿಯ ಕೊಂಡಿ - ಬೋಳ ಸಂಜೀವ ಕುಲಾಲ್ ವಿಧಿವಶ

Thumbnail
Posted On: 27 Apr 2022, 05:52 PM

ಕಾರ್ಕಳ : ಬೋಳ ಕುಲಾಲ ಸಂಘದ ಮಾಜಿ‌ ಅಧ್ಯಕ್ಷರು, ಹಿರಿಯರು, ಅನುಭವಿಗಳೂ ಆದ ಸಂಜೀವ ಕುಲಾಲ್ ಬೋಳ ಇವರು ಮುಂಬೈಯ ತಮ್ಮ ನಿವಾಸದಲ್ಲಿ ವಿಧಿವಶರಾದರು. ಇಳಿ ವಯಸಿನಲ್ಲೂ ಸದಾ ಲವಲವಿಕೆಯಿಂದ , ಉತ್ಸಾಹದಿಂದ ಸಮುದಾಯದ ಜನರು ದುರ್ಬಲರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಇಂದು ಬಂಧು ಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ಅಗಲುವಿಕೆ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದ್ದು, ಕುಲಾಲ ಸಂಘ (ರಿ ) ಕಾಪು ವಲಯವು ಮೃತರ ದಿವ್ಯ ಆತ್ಮಕ್ಕೆ ಚಿರಶಾಂತಿಯನ್ನು‌ ಕೋರಿದೆ.

ಮನೆ-ನಿವೇಶನ ರಹಿತ ಎಸ್ಸಿ ಕುಟುಂಬಗಳಿಗೆ ತ್ವರಿತ ನಿವೇಶನ ಹಂಚಿಕೆಗೆ ಕ್ರಮ : ಸಚಿವ ಕೋಟ ಶ್ರೀನಿವಾಸ ಪೂಜಾರಿ

Thumbnail
Posted On: 26 Apr 2022, 05:07 PM

ಉಡುಪಿ : ರಾಜ್ಯದಲ್ಲಿ ಮನೆ ನಿವೇಶನ ಹೊಂದಿರದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಕುಟುಂಬಗಳ ಪಟ್ಟಿಮಾಡಿ ಅವರಿಗೆ ತ್ವರಿತವಾಗಿ ನಿವೇಶನಗಳನ್ನು ಒದಗಿಸಲು ನಮ್ಮ ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ನಾಲ್ಕು ವಿಭಾಗಗಳ ಒಂದೊಂದು ಜಿಲ್ಲೆಯನ್ನು ಮಾದರಿಯಾಗಿ ಆಯ್ಕೆ ಮಾಡಲಾಗಿದೆ. ರಾಜ್ಯಾದ್ಯಂತ ಪರಿಶಿಷ್ಟ ಜಾತಿಯ ಮನೆ/ನಿವೇಶನ ರಹಿತ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಕುಟುಂಬಗಳಿಗೆ ಮನೆ ನಿವೇಶನಗಳನ್ನು ನೀಡಬೇಕು. ಈ ಮಹತ್ವದ ಕಾರ್ಯವನ್ನು ನಡೆಸಲು ಆರಂಭಿಕವಾಗಿ ನಾಲ್ಕು ವಿಭಾಗಗಳಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ನಾಲ್ಕು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ವಿಭಾಗದಲ್ಲಿ ಚಿತ್ರದುರ್ಗ, ಮೈಸೂರು ವಿಭಾಗದಲ್ಲಿ ಚಾಮರಾಜ ನಗರ, ಕಲಬುರ್ಗಿ ವಿಭಾಗದಲ್ಲಿ ರಾಯಚೂರು ಮತ್ತು ಬೆಳಗಾವಿ ವಿಭಾಗದಲ್ಲಿ ಹಾವೇರಿ ಜಿಲ್ಲೆಯಲ್ಲಿ ಇದನ್ನು ಪೈಲಟ್ ಆಗಿ ಅನುಷ್ಠಾನಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ರಾಜ್ಯದಲ್ಲೀಗ ಒಟ್ಟು 5.46 ಲಕ್ಷ ಕುಟುಂಬಗಳು ಮನೆ ನಿವೇಶನ ಹೊಂದಿಲ್ಲ. ಅವರಿಗೆ ಭೂಮಿ ಕೊಡುವುದು ಸರಕಾರದ ಜವಾಬ್ದಾರಿ. ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಆದ್ಯತೆಯಲ್ಲಿ ಶೀಘ್ರ ಮನೆ ಒದಗಿಸಲು, ಆಯ್ದ ಜಿಲ್ಲೆಗಳಲ್ಲಿ ಸರಕಾರಿ ಭೂಮಿ ಲಭ್ಯತೆ, ಮನೆ ನಿವೇಶನ ರಹಿತ ಪರಿಶಿಷ್ಟ ಜಾತಿ ಸಮುದಾಯದ ಕುಟುಂಬಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಬಳಿಕ ಪ್ರತೀ ಜಿಲ್ಲೆಗೂ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಿವೇಶನ ಒದಗಿಸಲು ಮಾರ್ಗಸೂಚಿಗಳಲ್ಲಿ ಸಡಿಲಿಕೆ ಮಾಡಿ, ಫಲಾನುಭವಿಗಳಿಗೆ ಅನುಕೂಲವಾಗುವಂತೆ ಕ್ರಮವಹಿಸಬೇಕೆಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಸಭೆಯಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಲಹೆಗಾರ ನಿವೃತ್ತ ಅಧಿಕಾರಿ ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಪಿ., ಆಯುಕ್ತ ರಾಕೇಶ್ ಕುಮಾರ್, ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ಬಸವರಾಜ್, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರ ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ್ ಎರ್ಮಾಳ್ ಆಯ್ಕೆ

Thumbnail
Posted On: 26 Apr 2022, 02:43 PM

ಕಾಪು : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆಯಾದ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ್ ಎರ್ಮಾಳ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಪ್ರಧಾನ ಕಾರ್ಯದರ್ಶಿಯಾಗಿ ಪುಂಡಲೀಕ ಮರಾಠ, ಉಪಾಧ್ಯಕ್ಷರಾಗಿ ಹರೀಶ್ ಕಟಪಾಡಿ, ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್,ಜೊತೆ ಕಾರ್ಯದರ್ಶಿ ವಿಜಯ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಸಂತೋಷ ನಾಯ್ಕ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷರಾದ ಅಲೆವೂರು ರಾಜೇಶ್ ಶೆಟ್ಟಿ ನೂತನ ಪಧಾದಿಕಾರಿಗಳನ್ನು ಘೋಷಣೆ ಮಾಡಿದರು. ಕಾಪು ತಾಲೂಕು ನಿಕಟಪೂರ್ವ ಅಧ್ಯಕ್ಷ ರಾಕೇಶ್ ಕುಂಜೂರು, ನಿಕಟಪೂರ್ವ ಕಾರ್ಯದರ್ಶಿ ಶಫಿ ಉಚ್ಚಿಲ ಉಪಸ್ಥಿತರಿದ್ದರು.

ಸಾಹಿತ್ಯ ಬದುಕನ್ನು ಉತ್ತಮಗೊಳಿಸುತ್ತದೆ - ಗುರ್ಮೆ ಸುರೇಶ್ ಶೆಟ್ಟಿ

Thumbnail
Posted On: 25 Apr 2022, 08:55 PM

ಉಡುಪಿ : ಅನಾದಿ ಕಾಲದಿಂದಲೂ ತುಳುವರು ಭಾವನಾತ್ಮಕವಾದ ಬದುಕನ್ನು ಕಟ್ಟಿಕೊಂಡವರು, ಪ್ರಕೃತಿಯನ್ನು ಆರಾಧಿಸುತಿದ್ದವರು. ಆದರೇ ಇಂದು ಮನೆಗಳು ದೊಡ್ಡದಾಗಿವೆ, ಆದರೇ ಮನಸ್ಸುಗಳು ಚಿಕ್ಕದಾಗುತ್ತಿವೆ. ತುಳುವರಲ್ಲಿಯೂ ಕೌಟುಂಬಿಕ ಶಿಥಿಲತೆ ಕಾಣಲಾರಂಭಿಸಿದೆ ಎಂದು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ವಿಷಾದ ವ್ಯಕ್ತಪಡಿಸಿದರು. ಅವರು ಉಡುಪಿ ತುಳುಕೂಟದ 27ನೇ ವರ್ಷದ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪಡೆದ, ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಅಕ್ಷಯಾ ಆರ್. ಶೆಟ್ಟಿ ಅವರ ದೆಂಗ ಕಾದಂಬರಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಉತ್ತಮ ಸಾಹಿತ್ಯದಿಂದ ಬದುಕನ್ನು ಉತ್ತಮಗೊಳಿಸಲು ಸಾಧ್ಯವಿದೆ. ಕಾದಂಬರಿ ಎಂಬುದು ಜನರ ನಡುವಿನ ಮಾತು ಘಟನೆಗಳೇ ಆಗುತ್ತವೆ. ಆದ್ದರಿಂದ ತುಳುಕೂಟವು ತುಳು ಭಾಷೆಯಲ್ಲಿ ಕಾದಂಬರಿಗಳನ್ನು ಬರೆಯುವುದಕ್ಕೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾದುದು ಎಂದರು. ಪ್ರೊ. ಅಕ್ಷಯಾ ಆರ್. ಶೆಟ್ಟಿ ಅವರಿಗೆ ಜನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಅವರು ಪ್ರಶಸ್ತಿ ನೀಡಿ ಸನ್ಮಾನಿಸಿದರು. ಕಾದಂಬರಿಯನ್ನು ಡಾ.ನಿಕೇತನ ಅವರು ಪರಿಚಯಿಸಿದರು. ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ದಾನಿ ವಿಶ್ವನಾಥ ಶೆಣೈ, ಪ್ರ.ಕಾರ್ಯದರ್ಶಿ ಗಂಗಾಧರ ಕಿದಿಯೂರು, ಖಜಾಂಚಿ ಎಂ.ಜಿ.ಚೈತನ್ಯ, ಉಪಾಧ್ಯಕ್ಷೆ ಮನೋರಮಾ ಶೆಟ್ಟಿ ವೇದಿಕೆಯಲ್ಲಿದ್ದರು. ಕಾದಬಂರಿ ಪ್ರಶಸ್ತಿ ಸಮಿತಿ ಸಂಚಾಲಕಿ ತಾರಾ ಉಮೇಶ್ ಆಚಾರ್ಯ ಸ್ವಾಗತಿಸಿದರು, ಸರೋಜಾ ಯಶವಂತ್ ಮತ್ತು ರಶ್ಮಿ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಯಶೋಧಾ ಕೇಶವ್ ಮತ್ತು ವೇದಾವತಿ ಸಹಕರಿಸಿದರು.

ಕಾಪು : ಕಾಂಗ್ರೆಸ್ ವತಿಯಿಂದ ಸೌಹಾರ್ದ ಸಮಾರಂಭ ಹಾಗೂ ಇಫ್ತಾರ್ ಕೂಟ

Thumbnail
Posted On: 24 Apr 2022, 05:15 PM

ಕಾಪು : ಬ್ಲಾಕ್ ಕಾಂಗ್ರೆಸ್ ಸಮಿತಿ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಕಾಪು (ದ) ಇದರ ಸಹಯೋಗದೊಂದಿಗೆ ಸೌಹಾರ್ದ ಸಮಾರಂಭ ಹಾಗೂ ಇಫ್ತಾರ್ ಕೂಟವು ಏಪ್ರಿಲ್‌ 27ರ ಸಂಜೆ 4:30 ಕ್ಕೆ ಕಾಪುವಿನ ಕೊಪ್ಪಲಂಗಡಿಯ ಕಮ್ಯುನಿಟಿ ಹಾಲ್ ನಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್‌ 29 : ಶ್ರೀ ದೇವಿ ಭಜನಾ ಮಂಡಳಿ ಮಂಡೇಡಿ ಇನ್ನಂಜೆ - ವಾರ್ಷಿಕ ಭಜನಾ ಮಂಗಳೋತ್ಸವ

Thumbnail
Posted On: 24 Apr 2022, 05:03 PM

ಕಾಪು : ತಾಲೂಕಿನ ಮಂಡೇಡಿ ಇನ್ನಂಜೆಯ ಶ್ರೀ ದೇವಿ ಭಜನಾ ಮಂಡಳಿ ಇದರ ವಾರ್ಷಿಕ ಭಜನಾ ಮಂಗಳೋತ್ಸವ ಏಪ್ರಿಲ್‌ 29 ರಂದು ಜರಗಲಿದೆ. ಏಪ್ರಿಲ್ 29, ಶುಕ್ರವಾರದಂದು ಬೆಳಿಗ್ಗೆ ಗಂಟೆ 10ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಗಂಟೆ 12ಕ್ಕೆ ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 6ರಿಂದ ದೀಪ ಪ್ರತಿಷ್ಠೆಯೊಂದಿಗೆ ಭಜನೆ ಆರಂಭ, ರಾತ್ರಿ ಗಂಟೆ 12-30ಕ್ಕೆ ಭಜನಾ ಮಂಗಳೋತ್ಸವ ಜರಗಲಿದೆ. ಭಜನಾ ಮಂಗಳೋತ್ಸವದಲ್ಲಿ ಶ್ರೀ ದೇವಿ ಭಜನಾ ಮಂಡಳಿಯ ಮಹಿಳಾ ಸದಸ್ಯರು, ಮಂಡೇಡಿ, ಶಿಮಂತೂರು ಶ್ರೀ ಆದಿಜನಾರ್ದನ ಮಕ್ಕಳ ಕುಣಿತ ಭಜನಾ ಮಂಡಳಿ, ಮುಲ್ಕಿ, ಇನ್ನಂಜೆಯ ಯುವತಿ ಮಂಡಲ ಸದಸ್ಯರಿಂದ ಕುಣಿತ ಭಜನೆ, ಶ್ರೀ ಮಹಾಲಸ ನಾರಾಯಣಿ ಭಜನಾ ಮಂಡಳಿ ಶಿರ್ವ, ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಕರಂದಾಡಿ, ಶ್ರೀ ಸರಸ್ವತಿ ಭಜನಾ ಮಂಡಳಿ ಸರಸ್ವತಿನಗರ ಪಾಂಗಾಳ, ಶ್ರೀ ದೇವಿ ಭಜನಾ ಮಂಡಳಿ, ಮಂಡೇಡಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಟಪಾಡಿ ಟ್ರಾಫಿಕ್ ಸಮಸ್ಯೆ, ಮುಗಿಯದ ಗೋಳು, ಮುಕ್ತಿ ಎಂದು ?

Thumbnail
Posted On: 24 Apr 2022, 03:45 PM

ಕಟಪಾಡಿ : ಕಾಪು ತಾಲೂಕಿನ ಕಟಪಾಡಿ ಮುಖ್ಯ ಜಂಕ್ಷನ್ ನ ಟ್ರಾಫಿಕ್ ಸಮಸ್ಯೆಯು ವಾಹನ ಸವಾರರಿಗೆ ಮುಗಿಯದ ಗೋಳಾಗಿದೆ. ವಿಶೇಷ ದಿನಗಳಲ್ಲಿ ಇಲ್ಲಿ ಪ್ರತಿದಿನಕ್ಕಿಂತ ಅಧಿಕ ವಾಹನಗಳು ಓಡಾಟ ಕಾಣಬಹುದು ಅಂತಹ ಸಂದರ್ಭ ಟ್ರಾಫಿಕ್ ನಿವಾರಣೆಗೆ ಒಂದಷ್ಟು ಪೋಲಿಸರ ಅಗತ್ಯ ಈ ಸ್ಥಳದಲ್ಲಿದೆ. ಏಪ್ರಿಲ್‌ 24 ರಂದು ಮಧ್ಯಾಹ್ನದ ಸಮಯ ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ವಿವಿಧ ಕಾರ್ಯಕ್ರಮಗಳಿಗೆ ತೆರಳಬೇಕಿದ್ದ ಮಂದಿ ಸಕಾಲದಲ್ಲಿ ತಲುಪಲು ಹರಸಾಹಸ ಪಡಬೇಕಾಯಿತು. ನಾಲ್ಕು ಕಡೆಗಳಿಂದ ಬರುವ ವಾಹನಗಳಿಗೆ ಇಬ್ಬರು ಟ್ರಾಫಿಕ್ ‌ಪೋಲಿಸರು ಇದ್ದರೂ ಕೂಡಾ ವಾಹನ ದಟ್ಟನೆಯನ್ನು ಕಡಿಮೆ ಮಾಡಲು ಅಸಾಧ್ಯವಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರೇ ಮುಂದೆ ನಿಂತು ಟ್ರಾಫಿಕ್ ನಿಯಂತ್ರಣ ಮಾಡಿದ್ದಾರೆ. ಪ್ರತಿಷ್ಟಿತರು ಬರುವಾಗ ಟ್ರಾಫಿಕ್ ಸಮಸ್ಯೆಯನ್ನು ಕೂಡಲೇ ಬಗೆಹರಿಸುವ ಪೋಲಿಸರಿಗೆ ಇದೀಗ ಜನಸಾಮಾನ್ಯರ ಗೋಳು ಕಾಣುವುದಿಲ್ಲವೇ ? ಇಲಾಖೆಗಳು ಈ ಟ್ರಾಫಿಕ್ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.